Wednesday 1 January 2014

ನಮ್ಮೂರಿನ ಪ್ರಸಿದ್ಧ ಜಾತ್ರೆ ಕೋಳ್ಯೂರಾಯನ- ಮಂಡಲ ಪೂಜೆ(c)ಡಾ.ಲಕ್ಷ್ಮೀ ಜಿ ಪ್ರಸಾದ








                                          ದೇವರ ದರ್ಶನ ಬಲಿ   -     ಚಿತ್ರ ಕೃಪೆ :ವಿಶ್ವೇಶ್ವರ ಭಟ್ ಮಾವೆ
                                                          ಚಿತ್ರ ಕೃಪೆ :ವಿಶ್ವೇಶ್ವರ ಭಟ್ ಮಾವೆ

ಮಂಡಲ ಪೂಜೆಗೆ ಹೋಯಕ್ಕು
ಕುಂಡೆ ಮಂಡೆ ಬಾಚಕ್ಕು ..

ಈ ಹವ್ಯಕ ಭಾಷೆಯ ಎರಡು ಸಾಲಿನ ಹಾಡು.   ನಮ್ಮ ಊರಿನ ಕೋಳ್ಯೂರಾಯನ- ಮಂಡಲ ಪೂಜೆ ಸಂಭ್ರಮದ ಸೂಚಕ !

ಕೋಳ್ಯೂರು ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಮಗೆ ಜನವರಿ ತಿಂಗಳ ಆರಂಭದಲ್ಲಿ ಬರುವ ಕೋಳ್ಯೂರಾಯನ- ಮಂಡಲ ಪೂಜೆ ನೆನೆದರೆ ರೋಮಾಂಚನ!ಎಲ್ಲರಿಗೆ ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಹೊಲಿಸಿದರೆ ನಮಗೆ ಕೊಳ್ಯುರಾಯನಕ್ಕೆ ಹೊಸ ಬಟ್ಟೆ ಬರುತ್ತಿತ್ತು .ನಮ್ಮ ಊರಿನವರಿಗೆ ಕೋಳ್ಯೂರು ಮಂಡಲ ಪೂಜೆಯೇ ದೊಡ್ಡ ಹಬ್ಬ. ಇದಕ್ಕೆ ಮೀರಿದ ಹಬ್ಬ ನಮಗೆ ಬೇರೆ ಇಲ್ಲ !copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಲಕ್ಷ ದೀಪೋತ್ಸವದಿಂದ ೪೮ ದಿನಗಳ ಮಂಡಲ ಪೂಜೆ ಆರಂಭ! ನಾವು ಕೂಡ ಅಲ್ಲಿಂದಲೇ ದಿನ ಲೆಕ್ಕ ಹಾಕುತ್ತಿದ್ದೆವು.ಇಡೀ ವರ್ಷ ಅಜ್ಜಿ ಅಜ್ಜ ತಂದೆ ತಾಯಿ ಕೊಟ್ಟ ಪುಡಿ ಕಾಸನ್ನು ಜಾತ್ರೆಗಾಗಿ ಜತನದಿಂದ ತೆಗೆದಿರಿಸುತ್ತಿದ್ದೆವು.ಸಂತೆಗೆ ಬರುತ್ತಿದ್ದ ಶೆಟ್ಟಿ ಐಸ್ ಕ್ರೀಂ ಗಾಗಿ ನಾವೆಲ್ಲಾ ಇಡೀ ವರ್ಷ ಕಾದಿರುತ್ತಿದ್ದೆವು !ಮಂಡಲ ಪೂಜೆ ಹತ್ತಿರವಾಗುತ್ತಿದ್ದಂತೆ ಸಂತೆ ಗದ್ದೆಗೆ ಒಂದೊಂದಾಗಿ ಸಂತೆ ಬಂದು ಬಿಡಾರ ಹೂಡುವುದನ್ನೂ ನೋಡುವುದು ಸಂಭ್ರಮವೇ !

ಆಗ ನನಗಿದ್ದದು ದೇವರ ಬಗ್ಗೆ ತುಸು ಭಯ ಭಕ್ತಿ ಆದರೆ ಹೆಚ್ಚಿನ ಆಕರ್ಷಣೆ ಇದ್ದದ್ದು ಜಾತ್ರೆಯ ಸಂತೆಗೆ ಬರುವ ಐಸ್ ಕ್ರೀಂ ಮತ್ತು ದಂಬಾರ ತೊಟ್ಟಿಲು ಬಗ್ಗೆ .

ದೊಡ್ಡವರಾಗುತ್ತಾ ಬಂದಂತೆ ನಮ್ಮ ಊರಿನ ದೇವಾಲಯದ ಮಹತ್ವದ ಬಗ್ಗೆ ತಿಳಿದು ಬಂತು .ಇದೊಂದು ಅಪರೂಪದ ತ್ರಿಮೂರ್ತಿ ದೇವಾಲಯ.ಇಲ್ಲಿನ ಆಯನ /ಜಾತ್ರೆ ಕೂಡಾ ಬಹಳ ಪ್ರಸಿದ್ಧವಾದುದು.  
  
ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಶ್ರೀ ಶಂಕರ ನಾರಾಯಣ ದೇವರ ಅಯನ ಮಂಡಲ ಪೂಜೆ ಬಹಳ ಪ್ರಸಿದ್ಧವಾದುದು.೪೮ ದಿವಸಗಳ ಕಾಲದ ಮಂಡಲ ಪೂಜೆಯ ಕೊನೆಯ ದಿನ ದೇವರನ್ನು ತಲೆಯಲ್ಲಿ ಹೊತ್ತು ಕೊಂಡು  ಬರುವ  ದರ್ಶನ ಬಲಿ ನೋಡಲು ಭಾರೀ ಚಂದ.

ನಿನ್ನೆ (೩೧ -೧೨ ೨೦೧೩ )ಕಾಣಿಕೆ ಕಾಯಿ ಇಟ್ಟು ಸೇವೆ .ಇಂದು  ತುಲಾಭಾರ ಸೇವೆ ಇದೆ.ನಾಳೆ  (೨-೨ -೨೦೧೪ ) ಬಹಳ ವಿಜ್ರಂಭಣೆಯ ಉತ್ಸವ ಇದೆ.ಊರು ಪರ ಊರುಗಳಿಂದ ಸಾವಿರಾರು ಭಕ್ತರು ಬಂದು ದೇವೇರ ದರ್ಶನ ಬಲಿಯನ್ನು ಕಣ್ಣು ತುಂಬಾ ನೋಡಿ ಪುನೀತರಾಗುತ್ತಾರೆ.

ಈ ದೇವಸ್ಥಾನದ ತುಲಾ ಭಾರ ಸೇವೆ  ಬಹಳ ಪ್ರಸಿದ್ಧವಾದುದು.ಇದಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ.ಉಳ್ಳಾಲ್ತಿ ಭೂತವು ಕೋಳ್ಯೂರು ದೇವರಿಗೆ ಹರಿಕೆ ನೆನೆದು ಅಲೌಕಿಕ ನೆಲೆಯಲ್ಲಿ ಒಂದು ಗಂಡು ಮಗುವನ್ನು ಪಡೆಯುತ್ತದೆ.ಮುಂದೆ ಈತ ಬಂಟಾಲ್ವ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಕೂಟತ್ತಜೆ,ನಡಿಬೈಲು ,ಮೊದಲಾದೆಡೆ ಆರಾಧನೆ ಪಡೆಯುವ ವಿಚಾರ ಉಳ್ಳಾಲ್ತಿ ಭೂತದ ಬಗೆಗಿನ ಪಾದ್ದನದಲ್ಲಿದೆ.copy rights reserved (c)Dr Lakshmi G Prasad

ಇಲ್ಲಿ ತುಲಾ  ಭಾರದ ತೊಲೆಯನ್ನು ಕಟ್ಟುವಾಗ ನಡಿಬೈಲು ಗುತ್ತಿನ ಮೇಲಾಂಟರಿಗೆ ವಿಶೇಷ ಗೌರವ ಇದೆ.ಹಿಂದೊಮ್ಮೆ ತುಲಾ ಭಾರ ಸೇವೆ ನಡೆಯುತಿರುವಾಗ ತೊಲೆಯ ದಡೆ   ಮುರಿದು ಹೋಯಿತಂತೆ.ಆಗ ಅಲ್ಲಿಯೇ ಇದ್ದ ಮೇಲಾಂಟರು ತೊಲೆಗೆ ಹೆಗಲು ಕೊಟ್ಟು ಅಪಾಯವನ್ನು ತಪ್ಪಿಸಿದರಂತೆ.ಅದಕ್ಕಾಗಿ ಅವರ ಕುಟುಂಬಕ್ಕೆ ಇಂದಿಗೂ ಗೌರವ ಇದೆ.
ಬಾಲೇಡ ರಂಗಮೆ ಪಾಡ್ದನ ,ಪರ್ನ್ದೆದಿ ಪಾದ್ದನಗಳಲ್ಲಿ ಕೋಳ್ಯೂರು ದೇವರಿಗೆ ತುಲಾಭಾರ ಹರಿಕೆ ಒಪ್ಪಿಸುವ ಬಗ್ಗೆ ಉಲ್ಲೇಖಗಳಿವೆ.

ಈ ದೇವಾಲಯಕ್ಕೆ ಹಾಗೂ ಊರಿಗೆ ಕೋಳ್ಯೂರು ಎಂಬ ಹೆಸರು ಬಂದ ಬಗ್ಗೆ ಒಂದು ಐತಿಹ್ಯ ಪ್ರಚಲಿತ ಇದೆ.ಇಲ್ಲಿ ದೇವಾಲಯಕ್ಕೆ ಬಾವಿ ತೋಡುವಾಗ ಸುಲಭಕ್ಕೆ ನೀರು ಸಿಗಲಿಲ್ಲ.ಕೊನೆಗೂ ಒಂದು ಬೆಳಗ್ಗಿನ ಜಾವ ಕೋಳಿಯೊಂದು ಕೊಕ್ಕೋ ಕೋ ಎಂದು ಕೂಗಿದಂತೆ ಸದ್ದು ಆಯಿತು ಆಗ ನೀರು ಸಿಕ್ಕಿತು ಅಂತ ಈ ಐತಿಹ್ಯವು ತಿಳಿಸುತ್ತದೆ.ಆದರೆ ಈ ಉರಿನಲ್ಲಿ ಸಾಲು ಸಾಲಾಗಿ ಗೋಳಿ ಮರಗಳು ಇವೆ.ಆದ್ದರಿಂದ ಗೋಳಿಯೂರು ಎಂಬುದು ಕಾಲಾಂತರದಲ್ಲಿ ಕೋಳ್ಯೂರು ಆಯಿತೆಂದು ವಿದ್ವಾಂಸರು ಅಭಿಪ್ರಾಯಿಸಿದ್ದಾರೆ..copy rights reserved (c)Dr Lakshmi G Prasad
.
ಇಲ್ಲಿ ಶಂಕರ ನಾರಾಯಣ ಮತ್ತು ಬ್ರಹ್ಮ ಎಂಬ ತ್ರಿಮೂರ್ತಿ ದೇವರುಗಳು ಉದ್ಭವಿಸಿದ್ದು ,ಇಲ್ಲಿ ಮೂಲದಲ್ಲಿ ಉದ್ಭವ ಲಿಂಗ ಇದೆ.ಬ್ರಹ್ಮನಿಗೆ ಆರಾಧನೆ ಇಲ್ಲದ ಕಾರಣ ಗಣಪತಿಯನ್ನು ಆರಾಧಿಸುತ್ತಾರೆ.ಡಿನ ನಿತ್ಯವೂ ಓರ್ವ ಬ್ರಾಹ್ಮಣನಿಗೆ ಉಣ ಬಡಿಸಿ ಸಮಾರಾಧನೆ ಎಂಬ ಸೇವೆಯನ್ನು ಬ್ರಹ್ಮನಿಗೆ ಮಾಡಲಾಗುತ್ತದೆ.ತುಳು ನಾಡಿನ ಅಧಿ ದೈವ ಬೆರ್ಮೆರ್ ಗೆ ಬ್ರಹ್ಮ ಸಮಾರಾಧನೆ ಎಂಬ ಸೇವೆ ಇರುವುದನ್ನು ಇಲ್ಲಿ ನೆನೆಪು ಮಾಡಿಕೊಳ್ಳ ಬಹುದು.  

ತುಳುನಾಡಿನ ಹೆಚ್ಚಿನ ದೇವಾಲಯಗಳಿಗೂ ಅಲ್ಲಿನ ಮೂಲ ನಿವಾಸಿಗಳಿಗೂ ಅವಿನ ಭಾವ ಸಂಬಂಧ ಇರುವಂತೆ ಇಲ್ಲಿಯೂ ಅಂತಹ ಒಂದು ಐತಿಹ್ಯ ಪ್ರಚಲಿತ ಇದೆ.ಈ ಊರಿಗೆ ಬೇಟೆಯಾಡುತ್ತಾ ಬಂದ ಕುರವ ಕುರತ್ತಿಯರು (ಕೊರಗ ಸಮುದಾಯದ ಗಂಡು ಮತ್ತು ಹೆಣ್ಣು ) ದೇವರ ಗುಡ್ಡದ ಬಳಿಯಲ್ಲಿ ನೆಲೆಯಾದರು .ಒಂದು ಡಿನ ದೇವರ ಗುಡ್ಡದಲ್ಲಿರುವ ದೇವರ ಕೆರೆಯಲ್ಲಿ ಒಂದು ಆಮೆ ಕಾಣಿಸಿಕೊಳ್ಳುತ್ತದೆ.ದೇವರ ಕೆರೆಯಲ್ಲಿ ಮೀನು ,ಆಮೆ ಮೊದಲಾದವುಗಳನ್ನು ಹಿಡಿಯಬಾರದು ಎಂಬ ನಿಷೇಧ ಇತ್ತು .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಆದರೆ ಇದನ್ನು ಮೀರಿದ ಕೊರತಿ (ಕೊರಗ ಸಮುದಾಯದ ಹೆಂಗಸು )ಆಮೆಯ ಮೇಲೆ ಕತ್ತಿಯಿಂದ ಬಡಿಯುತ್ತಾಳೆ.ಆಗ ಅಲ್ಲಿ ತುಂಬಾ ರಕ್ತ ಹರಿಯುತ್ತದೆ.ಕೊರತಿ ಮಗುಚಿ ಬೀಳುತ್ತಾಳೆ.ಮುಂದೆ ಆವಳ ದುರ್ಗಾ ದೇವಸ್ಥಾನದ ಸಂನಿಧಿಯಿಂದ ಎದ್ದು ನಿಂತು ಕೋಳ್ಯೂರು ದೇವಸ್ಥಾನದ ಮೇಲಿನ ಭಾಗದಲ್ಲಿರುವ ಸಂತೆ ಗದ್ದೆಯಲ್ಲಿ ನಿಲ್ಲುತ್ತಾಳೆ..copy rights reserved (c)Dr Lakshmi G Prasad

ಆಗ ಅವಳನ್ನು ನೋಡಿದ ಶಂಕರ ನಾರಾಯಣ ದೇವರು “ನೀನು ನನ್ನ ಅಂಗಳವನ್ನು ಗುಡಿಸಿಕೊಂಡು ಕೋಳ್ಯೂರು ದೇವಳದಲ್ಲಿ ಇರು” ಎನ್ನುತ್ತಾರೆ.ಹಾಗೆ ಅವಳು ಸತ್ಯಂಗಳದ ಕೊರತಿ ಎಂಬ ಹೆಸರಿನಲ್ಲಿ ದೈವತ್ವ ಪಡೆದು ಕೋಳ್ಯೂರು ದೇವಸ್ಥಾನದ ಕೆಳಭಾಗದಲ್ಲಿ ನೆಲೆಯಾಗುತ್ತಾಳೆ.
 ಸತ್ಯನ್ಗಳದ ಕೊರತಿ

 
 ಸತ್ಯನ್ಗಳದ ಕೊರತಿ ಸ್ಥಾನ
ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಇನ್ನೊಂದು ಕುತೂಹಲ ಕಾರಿ ಐತಿಹ್ಯ ಪ್ರಚಲಿತವಿದೆ.ತುಂಬಾ ಹಿಂದೆ ಆ ಉರಿನಲ್ಲ್ಲಿ ತೋಳಂ ಭಟ್ಟ ಎನ್ನುವ ಮಾಂತ್ರಿಕ ಶಕ್ತಿಯ ವ್ಯಕ್ತಿ ಇದ್ದನಂತೆ.ಅಲ್ಲಿ ದೇವಸ್ಥಾನಕ್ಕೆ ಒಂದು ಪರ್ಲಂಗು ದೂರದ ಗುಡ್ಡದ ಮೇಲೆ ಇರುವ ಕೆರೆಯೊಂದರ ಬಳಿ ಕುಳಿತು ಸಿದ್ದಿ ಮಾಡುತ್ತಿದ್ದರು.ಆತ ತನ್ನ ಮಂತ್ರ ಶಕ್ತಿಯಿಂದ ದೇವಸ್ಥಾನದ ಬಲಿ ಹೊರಡದಂತೆ ಅಡ್ಡಿ ಪಡಿಸುತ್ತಾನೆ.copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

ಆಗ ಆತನನ್ನು ಎಳೆದು ತರುವಂತೆ ದೇವರ ಅಪ್ಪಣೆ ಆಯಿತು.ಹಾಗೆ ಆತನನ್ನು ಜನರು  ಎಳೆದು ತರುತ್ತಾರೆ .ಆತ ಬರಲು ಒಪ್ಪದೆ ಪ್ರತಿಭಟಿಸುತ್ತಾನೆ.ಅವನಿಗೆ ಎರಡು ಏಟು ಕೊಟ್ಟು ಎಳೆದು ತರುವಾಗ ದಾರಿ ಮಧ್ಯೆ ಪೊಸಳಿಕೆ ಎನ್ನುವ ಜಾಗದ ಸಮೀಪ ಬರುವಾಗ ಮರಣವನ್ನಪುತ್ತಾನೆ.

ಮರಣಾನಂತರವೂ ಆತನ ಉಪದ್ರ ಕಾಣಿಸಿದಾಗ ಆತನ ಒಂದು ಕಂಚಿನ ಪ್ರತಿಮೆ ಮಾಡಿ ಗಣಪತಿ ದೇವರ ಗುಡಿಯಲ್ಲಿಡುತ್ತಾರೆ .ಈ ವಿಗ್ರಹವು ಬಿಲ್ಲು ಬಾಣ ಹಿಡಿದ ಯೋಧನ ಭಾವವನ್ನು ಸೂಚಿಸುವ ಸುಂದರ ವಿಗ್ರಹ ಆಗಿತ್ತು.ಇದನ್ನು ಸುಮಾರು ೨೦ ವರ್ಷಗಳ ಹಿಂದೆ  ಪುನರ್ ಪ್ರತಿಷ್ಟ ಬ್ರಹ್ಮ ಕಲಶದ ಸಂದರ್ಭದಲ್ಲಿ ಜಲ ವಿಸರ್ಜನೆ ಮಾಡಿದ್ದಾರೆ.

ಅಲೌಕಿಕ ನೆಲೆಯನ್ನು ಬಿಟ್ಟು ವಾಸ್ತವಿಕ ನೆಲೆಯಲ್ಲಿ ಯೋಚಿಸುವಾಗ ಈತನಾರೆಂಬ ಸಂಶಯ ಉಂಟಾಗುತ್ತದೆ .ಸೂರಾಲಿನ ಕ್ರಿ ಶ ೧೪೩೫ ರ ಡಿಸೆಂಬರ್ ನಾಲ್ಕರಂದು ಬರೆಸಲಾದ ದೇವರಾಯನ  ಶಾಸನ ದಲ್ಲಿ ಸುಂಕಗಳನ್ನು ವಸೂಲಿ ಮಾಡುವ ಅಧಿಕಾರವನ್ನು ತೊಳಹ ಶಂಕರ ನಾಯಕನಿಗೆ ವಹಿಸಿದ್ದ್ದು ತಿಳಿದು ಬರುತ್ತದೆ.ಹೀಗೆ ಸುಂಕ ವಸೂಲಿಗೆ ನಿಯೋಜಿಸಿದ ತೊಳಹರ ಭಟ ಈತನಿರ ಬಹುದೇ ?ಈ ಬಗ್ಗೆ ಅಧ್ಯಯನ ನಡೆದರೆ ತಿಳಿಯ ಬಹುದು copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ.
 
ತೋಳಂಬಟ್ಟನ  ಕವಣೆ ಕಲ್ಲು


                                                       

ತೋಳಂಭಟ್ಟ ತನ್ನ ಕವಣೆಯಲ್ಲಿ ಸಿಕ್ಕಿಸಿ ಬಿಸಾಡುವ ಕಲ್ಲು ಎಂದು ಪರಿಗಣಿಸಲ್ಪಡುವ ಒಂದು ಗುಂಡಗಿನ ಕಲ್ಲು ಈಗಲೂ ದೇವಸ್ಥಾನದ ಎದುರು ಕೆಳಭಾಗದಲ್ಲಿ ಇದೆ.
ಮಂದ್ರಾಯ ಭೂತಕ್ಕೆ  ಇಲ್ಲಿನ ಗ್ರಾಮ ದೈವವಾಗಿ ದೇವಸ್ಥಾನದ ಲ್ಲಿ ಆರಾಧನೆ ಇದೆ.ಮಂದ್ರಾಯ ಭೂತದ ಮಾಹಿತಿ ಈ ತನಕ ಲಭ್ಯವಾಗಿಲ್ಲ.ಮಂದ್ರಾಯ ದೈವದೊಂದಿಗೆ ಮಲರಾಯ ,ದುಗ್ಗಲಾಯ,ಜುಮಾದಿ ,ಪಿಲಿಚಾಂಡಿ ಭೂತಕ್ಕೆ ಆರಾಧನೆ ಇದೆ.ಈ ದೈವಗಳ ನೇಮ ೮-೧-೨೦೧೪ ರಂದು ನಡೆಯಲಿದೆ ಕೋಳ್ಯೂರು ಆಯನ –ಮಂಡಲ ಪೂಜೆಯ ನಿಮಿತ್ತ ದೇವಸ್ಥಾನಕ್ಕೆ ಚಪ್ಪರ ಹಾಕುವಾಗ ಮೊದಲಿಗೆ ಮಂದ್ರಾಯ ನೇಮ ಆಗುವ ಜಾಗಕ್ಕೆ ಸಾಂಕೇತಿಕವಾಗಿ ಕೊಬೆ ಇಟ್ಟು ,ನಂತರ ದೇವಾಲಯಕ್ಕೆ ಚಪ್ಪರ ಹಾಕುತ್ತಾರೆ.ಇದು ಮಂದ್ರಾಯ ದೈವದ ಪ್ರಾಧಾನ್ಯತೆಯನ್ನು ಸೂಚಿಸುತ್ತದೆ .copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ


ಕೋಳ್ಯೂರು ದೇವಳಕ್ಕೆ ಸಂಬಂಧಿಸಿದ ಕಂಬಳ ಗದ್ದೆಯಲ್ಲಿ ಉರವ ,ಮತ್ತು ನಾಗ ಬ್ರಹ್ಮ ಭೂತಗಳಿಗೆ ಆರಾಧನೆ ಇದೆ(ಈಗ ಈ ಗದ್ದೆ ವಾರಾಣಸಿ  ಶ್ರೀವೇ .ಮೂ ನಾರಾಯಣ ಭಟ್ಟರ ಕುಟುಂಬಕ್ಕೆ ಸೇರಿದೆ ). ಇಲ್ಲಿ ಕೂಡ ಒಂದು ಐತಿಹ್ಯ ಪ್ರಚಲಿತ ಇದೆ.

ಕೋಳ್ಯೂರು ಕಂಬಳ ಗದ್ದೆಯಲ್ಲಿ  ಪೂಕರೆ ಕಂಬಳ ಇತ್ತು..ಒಂದು ವರ್ಷ ಕೋಳ್ಯೂರು ಕಂಬ ಗದ್ದೆಯಲ್ಲಿ ಪೂ ಕರೆಯಂದು ಕೋಣಗಳನ್ನು ಓಡಿಸುವಾತ  ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ.ಆಗ ಕೋಣಗಳು ಅಲ್ಲಿಯೇ ಕಲ್ಲಾದವು.ಓಡಿಸುವಾತ ಓಡಿ ಹೋಗಿ ಗದ್ದೆ ಬಳಿಯ ತೋಡಿನ ನೀರ ಗುಂಡಿಗೆ ಹಾರಿ ಮಾಯವಾಗುತ್ತಾನೆ.ಅಂದು ಆತನ ಮುಟ್ಟಾಳೆ ಬಿದ್ದ ಜಾಗ ಎಂಬಲ್ಲಿ ಈಗ ೪ ಅಡಿ ಎತ್ತರ ನಾಲ್ಕಡಿ ಅಗಲದ ಮಣ್ಣಿನ ದಿಬ್ಬ ಇದೆ .ಈ ದಿಬ್ಬದ ಒಳಗೆ ಕಲ್ಲುಗಳು ಇವೆ


ಗದ್ದಯಲ್ಲಿ ಕೋಣಗಳು ಮಲಗಿದಂತೆ ಕಾಣುವ ಎರಡು ಕಲ್ಲುಗಳಿದ್ದು  ಅದನ್ನು ಎರು ಮಾಜಿನ ಕಲ್ಲು (ಕೋಣ ಮಾಯವಾದ ಕಲ್ಲು )ಎಂದು ಕರೆಯುತ್ತಾರೆ..copy rights reserved (c)Dr Lakshmi G Prasad


 





ಇಲ್ಲಿ ಈ ಬಗೆ ಪಾಡ್ದನ ಇಲ್ಲದಿದ್ದರೂ ಈಜೋ ಮಂಜೊಟ್ಟಿ ಗೋಣ ಪಾಡ್ದನದ ಕಥಾನಕ ಇದನ್ನೇ ಹೇಳುತ್ತದೆ.
ಹೀಗೆ ಮಾಯವಾದ ಮೂಲದ ಮಾಣಿ ಮತ್ತು ಕೋಣ ಉರವ ಮತ್ತು ಎರು ಬಂಟ ದೈವಗಳಾಗಿ ಆರಾಧನೆ ಪಡೆಯುತ್ತಾರೆ.
                                                           ಎರುಬಂಟ ದೈವ
                                                           ಉರವ
  

ತೋಳಂಭಟ್ಟನ ಕುರಿತಾದ ಪ್ರಚಲಿತವಿರುವ ಮಹತ್ವದ  ಐತಿಹ್ಯವನ್ನು ತಿಳಿಸಿದ ಶ್ರೀ ಆನಂದ ಕಾರಂತ ರಿಗೆ ( ಕಾರಂತ ಮಾವಂಗೆ ) ಕೃತಜ್ಞತೆಗಳು  copy rights reserved(c)ಡಾ.ಲಕ್ಷ್ಮೀ ಜಿ ಪ್ರಸಾದ

2 comments:

  1. ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ:- ರಾಜಾರಾಮ ಶೆಟ್ಟಿ ಉಪ್ಪಳ

    ReplyDelete