Thursday 26 June 2014

ದಡವರಿಯದ ಮಕ್ಕಳಿಗೆ ಬೇಕು ಮಾರ್ಗದರ್ಶನ-ಡಾ.ಲಕ್ಷ್ಮೀ ಜಿ ಪ್ರಸಾದ (ಕನ್ನಡ ಪ್ರಭ ,22 ಏಪ್ರಿಲ್ 2014 ರಂದು ಪ್ರಕಟಿತ ಬರಹ )

                                 
 http://www.kannadaprabha.com/columns/%E0%B2%A6%E0%B2%A1%E0%B2%B5%E0%B2%B0%E0%B2%BF%E0%B2%AF%E0%B2%A6-%E0%B2%AE%E0%B2%95%E0%B3%8D%E0%B2%95%E0%B2%B3%E0%B2%BF%E0%B2%97%E0%B3%86-%E0%B2%AC%E0%B3%87%E0%B2%95%E0%B3%81-%E0%B2%AE%E0%B2%BE%E0%B2%B0%E0%B3%8D%E0%B2%97%E0%B2%A6%E0%B2%B0%E0%B3%8D%E0%B2%B6%E0%B2%A8/201889.html
ಇಂಜಿನಿಯರಿಂಗ್, ಮೆಡಿಕಲ್ ಓದದಿದ್ದರೆ ಬದುಕೇ ಇಲ್ಲ, ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕಿ ಪ್ರಯೋಜನ ಇಲ್ಲ ಎಂಬ ಮನೋಭಾವ ಮೂಡಲು ಕಾರಣವೇನು? ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದ ದುರ್ಬಲ ಮನಸ್ಥಿತಿಯೇಕೆ? ಇಂಥ ಮನೋಭಾವ ಮೂಡಲು ಒಂದು ರೀತಿಯಲ್ಲಿ ಹೆತ್ತವರೇ ಕಾರಣ ಎಂದು ಹೇಳಬೇಕಾಗುತ್ತದೆ."ಏಳು, ಎದ್ದೇಳು, ಜಾಗೃತನಾಗು" ಇದು ಸ್ವಾಮಿ ವಿವೇಕಾನಂದರು ಯುವ ಜನತೆಗೆ ನೀಡಿದ ಸಂದೇಶ. ಈ ಸಂದೇಶವನ್ನು ನೀಡಿದಾಗ ಅವರಿನ್ನೂ ಎಳೆಯ ಯುವಕರಾಗಿದ್ದರು.
ಆದರೆ ನಮ್ಮ ಇಂದಿನ ಯುವ ಜನಾಂಗದ ಮನಸ್ಥಿತಿ ಹೇಗಿದೆ? ಓದ್ಕೋ ಹೋಗು ಅಂತ ಅಮ್ಮ ಬೈದರೆ ಆತ್ಮಹತ್ಯೆ,ಅಪ್ಪ ಬೈಕ್ ತೆಗೆಸಿಕೊಡುತ್ತಿಲ್ಲ ಅಂತ ಆತ್ಮಹತ್ಯೆ, ಪರೀಕ್ಷೆಗೆ ಸರಿಯಾಗಿ ತಯಾರಿ ನಡೆಸಿಲ್ಲ ಅಂತ ಸಾಯೋದು,ಪರೀಕ್ಷೆಯಲ್ಲಿ ಫೇಲ್ ಆದರೆ ಅನ್ನುವ ಭಯದಿಂದ ಆತ್ಮಹತ್ಯೆ, ಪ್ರೇಮ ಮುರಿದುಬಿತ್ತು ಅಂತ ಆತ್ಮಹತ್ಯೆ... ಹೀಗೆ ಹನುಮಂತನ ಬಾಲದ ಹಾಗೆ ಈ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.ಇಂದಿನ ಯುವಕರ ಈ ದುರ್ಬಲ ಮನಸ್ಥಿತಿಗೆ ಕಾರಣವೇನು? ಇಂದಿನ ವಿಭಕ್ತ ಕುಟುಂಬಗಳಲ್ಲಿ ಯುವಕರಿಗೆ ಸಾಕಷ್ಟು ಆದರ, ಸಾಂತ್ವನ ಸಿಗುತ್ತಿಲ್ಲವೇ? ಹೆತ್ತವರ ಅತಿಯಾದ ಮಹತ್ವಾಂಕ್ಷೆಗಳಿಗೆ ಯುವಕರು ಬಲಿಯಾಗುತ್ತಿದ್ದಾರೆಯೇ? ಇಂಜಿನಿಯರಿಂಗ್, ಮೆಡಿಕಲ್ ಓದದಿದ್ದರೆ ಬದುಕೇ ಇಲ್ಲ,  ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕಿ ಪ್ರಯೋಜನ ಇಲ್ಲ ಎಂಬ ಮನೋಭಾವ ಮೂಡಲು ಕಾರಣವೇನು?
 ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದ ದುರ್ಬಲ ಮನಸ್ಥಿತಿಯೇಕೆ? ಇಂಥ ಮನೋಭಾವ ಮೂಡಲು ಒಂದು ರೀತಿಯಲ್ಲಿ ಹೆತ್ತವರೇ ಕಾರಣ ಎಂದು ಹೇಳಬೇಕಾಗುತ್ತದೆ.ಎಂಥ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂಬ ಆಶ್ವಾಸನೆಯನ್ನು ಕೊಟ್ಟು ಸದಾ ಬದುಕಿನ ಬಗ್ಗೆ ಭರವಸೆಯನ್ನು ಮೂಡಿಸುವ ಕಾರ್ಯವನ್ನುಹೆತ್ತವರೇ ಮಾಡಬೇಕಾಗುತ್ತದೆ. ಆದರೆ ಈ ನಿಟ್ಟಿನಲ್ಲಿ ಹಲವರು ಸೋಲುತ್ತಿದ್ದಾರೆ ಎಂದೆನಿಸುತ್ತದೆ.
ಸಂಭಾಷಣೆ: 1
ತಾಯಿ: ಯಾಕೋ ಊಟಕ್ಕೆ ಬಂದಿಲ್ಲ ಏನು ಚಿಂತೆ ಮಾಡುತ್ತಿದ್ದಿ?
 ಮಗ: ನಾಳೆ ರಿಸಲ್ಟ್ ಬರುತ್ತೆ ಅದಕ್ಕೇ ಭಯ.
ತಾಯಿ: ಅದಕ್ಯಾಕೆ ಚಿಂತೆ? ಹೇಗೂ ಚೆನ್ನಾಗಿಯೇ ಮಾಡಿದ್ದೀಯಲ್ಲ?
 ಮಗ: ಹೌದು ಆದರೂ ಒಳ್ಳೆ ಮಾರ್ಕ್ಸ್ ಬರದೇ ಇದ್ದರೆ, ಫೇಲ್ ಆದ್ರೆ ಏನು ಮಾಡೋದು?
ತಾಯಿ: ಫೇಲ್ ಆದ್ರೆ ಏನಾಯಿತು? ಪುನಃ ಕಟ್ಟಿ ಪಾಸ್ ಮಾಡು.. ಯಾಕಷ್ಟು ಚಿಂತೆ ಮಾಡ್ತೀಯ? ಹಾಗೂ ಓದೋಕೆ ಆಗ್ಲಿಲ್ಲ ಅಂದ್ರೆ ನಿನಗ್ಯಾವ ಕೆಲಸ ಇಷ್ಟಾನೋ ಅದನ್ನ ಮಾಡು. ಈಗ್ಯಾಕೆ ಚಿಂತೆ ಊಟಕ್ಕೆ ಬಾ...
ಸಂಭಾಷಣೆ: 2
ತಾಯಿ: ಊಟಕ್ಕೆ ಬಾರೋಮಗ: ಬೇಡಮ್ಮ ಹಸಿವಿಲ್ಲ
ತಾಯಿ: ನಿನಗೆ ಮೊದ್ಲಿಂದ್ಲೂ ಓದು ಓದು ಅಂತ ಹೇಳಿದೆ. ಆಗ ಸಮಯ ವ್ಯರ್ಥ ಮಾಡಿ ಈಗ ಚಿಂತೆ ಮಾಡಿ ಊಟ ಬಿಟ್ರೆ ಏನ್ಬಂತು? 
ಮಗ: ಅದೇ ಚಿಂತೆ ಅಮ್ಮಾ.. ನಾಳೆ ಒಳ್ಳೆ ಮಾರ್ಕ್ಸ್ ಬರದಿದ್ರೆ ಏನು ಮಾಡೋದು ಅಂತ ಭಯ...
 ತಾಯಿ: ನನಗೊತ್ತಿಲ್ಲ. ಅಪ್ಪನ ಕೈಯಿಂದ ಮಂಗಳಾರತಿ ಮಾಡಿಸ್ಕೋ, ಚೆನ್ನಾಗಿ ಓದು ಅಂತ ಫೀಸ್ ಜಾಸ್ತಿ ಆದ್ರೂನು ಒಳ್ಳೆ ಕಾಲೇಜ್‌ಗೆ ಹಾಕಿದ್ದೇವೆ. ಜೊತೆಗೆ ಕೋಚಿಂಗ್‌ಗೆ ಬೇರೇ ಹೋಗಿದ್ದಿ. ಮುಂದೆ ಏನು ಮಾಡ್ತೀಯೋ ನನಗಂತೂ ಚಿಂತೆ ಆಗಿದೆ.  
 
ಮೇಲಿನ ಎರಡೂ ಉದಾಹರಣೆಗಳಲ್ಲಿ ಪಿಯು ಓದುತ್ತಿರುವ ಹುಡುಗರು ಬುದ್ಧಿವಂತರು ಆದರೆ ದುರದೃಷ್ಟವಶಾತ್ ಇಬ್ಬರ ರಿಸಲ್ಟ್ ಕೂಡಾ ಫೇಲ್ ಅಂತ ಬಂತು. ಮೊದಲನೆಯಾತ ಅತ್ತುಕೊಂಡು ಮನೆಗೆ ಬರ್ತಾನೆ. ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಾನೆ. ಎರಡನೆಯ ಹುಡುಗನಿಗೆ ಮನೆಗೆ ಬರಲು ಭಯವಾಗುತ್ತದೆ. ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ
.ಡಾಕ್ಟರ್ ಇಂಜಿನಿಯರ್ ಆದ್ರೆ ಮಾತ್ರ ಬದುಕು ಎನ್ನುವ ತಪ್ಪು ಕಲ್ಪನೆ ಮನೆ ಮಾಡುವಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕರಿಗೆ ತಮ್ಮ ಘನೆತೆಯ ಉಳಿವಿಗಾಗಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಬೇಕು , ಹೆತ್ತವರಿಗೆ ತಮ್ಮ ಮಹತ್ವಾಕಾಂಕ್ಷೆಯ ಈಡೇರಿಕೆಗಾಗಿ ಮಕ್ಕಳು ಓದಬೇಕು, ಅಂಕ ಗಳಿಸಬೇಕು... ಇನ್ನೂ ಕೆಲವು ಕುಟುಂಬಗಳಲ್ಲಿ ಚಿಕ್ಕಂದಿನಲ್ಲಿ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರು ಮಕ್ಕಳಲ್ಲಿ ಕೇಳಿದ್ದೆಲ್ಲ ಸಿಗಲೇಬೇಕು ಎಂಬ ಮನೋಭಾವನೆ ಬೆಳೆಯಲು ಕಾರಣರಾಗುತ್ತಾರೆ.
 ಆಗ ಒಂದೊಮ್ಮೆ ಕೇಳಿದ್ದು ಕೊಡದೆ ಇದ್ದಾಗ, ಬಯಸಿದ್ದು ಸಿಗದೇ ಇದ್ದಾಗ ಮಕ್ಕಳಿಗೆ ಅದನ್ನು ತಾಳಿಕೊಳ್ಳುವ ಶಕ್ತಿಯೇ ಇರುವುದಿಲ್ಲ.ಇನ್ನು ಸಣ್ಣ ಪುಟ್ಟ ತಪ್ಪುಗಳನ್ನು ತುಂಟಾಟಗಳನ್ನು ದೊಡ್ಡದು ಮಾಡಿ ಹೆತ್ತವರನ್ನು ಬರ ಹೇಳಿ ಅವರ ಮುಂದೆ ಮಕ್ಕಳನ್ನು ನಿಂದಿಸುವ ಶಿಕ್ಷಕರ ಪ್ರವೃತ್ತಿಯೂ ಅಪಾಯಕಾರಿಯಾಗಬಲ್ಲದು. ಸಣ್ಣ ಪುಟ್ಟ ತಪ್ಪುಗಳಿಗೆ ಕರೆದು ಒಳ್ಳೆ ಮಾತಿನಲ್ಲಿ ಬುದ್ದಿ ಹೇಳುವುದು, ಸಣ್ಣ ಪುಟ್ಟ ಶಿಕ್ಷೆ (ಎರಡು ಪುಟ ಏನನ್ನಾದರೂ ಬರೆಯಲು ಹೇಳುವುದು ಇತ್ಯಾದಿ ವಿದ್ಯಾರ್ಥಿಗಳಿಗೆ ಸಹಾಯವಾಗುವ ಮಾದರಿಯ) ನೀಡಿ ಸರಿಪಡಿಸಬೇಕೇ ಹೊರತು ಸಣ್ಣ ಪುಟ್ಟ ವಿಚಾರಗಳನ್ನು ಶಿಸ್ತಿನ ನೆಪದಿಂದ ದೊಡ್ಡದು ಮಾಡಿದರೆ, ಹೆತ್ತವರನ್ನು ಬರ ಹೇಳಿ ಅವರಿಂದಲೂ ಛೀಮಾರಿ ಹಾಕಿಸಿದರೆ ಮಕ್ಕಳಿಗೆ ಮುಂದೆ ಇಂಥ ವಿಚಾರವನ್ನು ಹೆತ್ತವರಲ್ಲಿ ಹೇಳಲೇ ಭಯವಾಗುತ್ತದೆ ಅಂತ ಸಂದರ್ಭಗಳಲ್ಲಿ ಭಯ ಹಾಗೂ ಸೇಡು ತೀರಿಸುವ ಮನೋಭಾವದಿಂದ ತಮ್ಮ ಅಮೂಲ್ಯವಾದ ಬದುಕನ್ನು ನಾಶಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ.
 ಇಂಥ ಅನೇಕ ನಿದರ್ಶನಗಳನ್ನು ನಾವು ನೋಡುತ್ತಲೇ ಇರುತ್ತೇವೆ.ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಇಂಥ ಪರಿಸ್ಥಿತಿ ಇರಲಿಲ್ಲ. ಆದರೆ ಈಗೀಗ ತೀರ ಚಿಕ್ಕ ವಯಸ್ಸಿನ ಮಕ್ಕಳೇ ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಎನ್ನುವುದು ನಿಜಕ್ಕೂ ಆತಂಕದ ವಿಚಾರ. ಈಗ್ಗೆ ಒಂದು ವರ್ಷದ ಹಿಂದೆ ಮೂರನೇ ತರಗತಿಯಲ್ಲಿ ಓದುತ್ತಿದ್ದ, ಎಂಟು ವರ್ಷದ ಹುಡುಗ ನೀರಿನ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ತಂದು ಶಾಲೆಯಲ್ಲಿ ಮೈಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ನಾವೆಲ್ಲಾ ಓದಿದ್ದೇವೆ. ನಾಲ್ಕನೇ ತರಗತಿ ಹುಡುಗನೊಬ್ಬ ತಂದೆ ಚಿಕನ್ ಬಿರಿಯಾನಿ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
ಮೊನ್ನೆ ಮೊನ್ನೆಯಷ್ಟೇ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯರು ಹೋಲಿ ಆಟವಾಡಿದ್ದಕ್ಕೆ ಹೆತ್ತವರನ್ನು ಕರೆತನ್ನಿ ಎಂದಾಗ, ಮನೆಗೆ ಹೋಗದೇ ಸಾವಿಗೆ ಶರಣಾದದ್ದು ಎಲ್ಲರಿಗೂ ತಿಳಿದ ವಿಚಾರ.ಸಣ್ಣ ಪುಟ್ಟ ಅವಮಾನವನ್ನೂ, ಸೋಲನ್ನೂ ಎದುರಿಸಲು ಇಂದು ಅಸಮರ್ಥರಾಗುತ್ತಿದ್ದಾರೆ ಇಂದಿನ ಮಕ್ಕಳು ಮತ್ತು ಯುವ ಜನತೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳಿರುತ್ತಿದ್ದವು. ತುಂಬಾ ಮಕ್ಕಳಿರುವ ಕುಟುಂಬಗಳಲ್ಲಿ ಹೊಂದಾಣಿಕೆ, ಬೈಗಳು, ಪೆಟ್ಟು ಎಲ್ಲವೂ ಇರುತ್ತಿತ್ತು. ಇದರಿಂದಾಗಿ ಹೊಂದಿ ಕೊಂಡು ಬಾಳಲು, ಸಣ್ಣ ಪುಟ್ಟ ಬೈಗಳನ್ನು ಅಪಮಾನವನ್ನು ಎದುರಿಸುವ ಮನೋಸ್ಥೈರ್ಯ ಮಕ್ಕಳಲ್ಲಿ ತನ್ನಿಂತಾನಾಗಿಯೇ ಬೆಳೆಯುತ್ತಿತ್ತು. ಆಗೆಲ್ಲ ತಮಗೆ ಕೇಳಿದ್ದು ಸಿಗಲಿಲ್ಲ ಎಂದರೆ ಮಕ್ಕಳು ಒಂದೈದು ನಿಮಿಷ ಅತ್ತು ಮರೆತುಬಿಡುತ್ತಿದ್ದವೇ ಹೊರತು, ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ.
 ಕೇಳಿದ್ದೆಲ್ಲವನ್ನೂ ತಕ್ಷಣ ಕೊಡಿಸುವ ಅಭ್ಯಾಸವನ್ನು ಹೆತ್ತವರು ಮೊದಲು ಬಿಡಬೇಕು. ಮಕ್ಕಳಷ್ಟೇ ಅಲ್ಲ, ತಾವು ಬಯಸಿದ್ದೆಲ್ಲವೂ ಸಿಗಲು ಸಾಧ್ಯವಿಲ್ಲ. ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗಲು ಸಾಧ್ಯವಿಲ್ಲ, ಅದರ ಹೊರತಾಗಿಯೂ ಬದುಕಿದೆ ಎನ್ನುವುದನ್ನು ಪೋಷಕರು, ಬೈಕ್, ಕಾರು, ಮೊಬೈಲ್‌ಗಳಷ್ಟೇ ಬದುಕಲ್ಲ ಎನ್ನುವುದನ್ನು ಮಕ್ಕಳು ಅರ್ಥಮಾಡಿಕೊಳ್ಳಬೇಕು. ಯಾವ ಕ್ಷೆತ್ರವೇ ಇರಲಿ. ಪ್ರತಿಭೆ, ಪ್ರಾಮಾಣಿಕತೆ, ಪರಿಶ್ರಮಗಳು ಇರುವ ಕಡೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದನ್ನು ಪೋಷಕರು ಅರ್ಥಮಾಡಿಕೊಂಡು ಮಕ್ಕಳಿಗೂ ಮನದಟ್ಟು ಮಾಡಿಕೊಡಬೇಕು. 
ನಾನಾ ಕಾರಣಗಳಿಂದ ಉನ್ನತ ಶಿಕ್ಷಣ ದೊರೆಯದೆ ಇರಬಹುದು. ಕೆಲಸ ಸಿಗದಿರಬಹುದು. ಎಣಿಸಿದ್ದು ಈಡೇರದೆ ಇರಬಹುದು. ಅವಮಾನ ಎದುರಾಗಬಹುದು. ಆದರೆ ಇದಕ್ಕೆ ಆತ್ಮಹತ್ಯೆ ಪರಿಹಾರವಲ್ಲ.ತಮ್ಮ ಮಕ್ಕಳು ಮಹಾನ್ ಬುದ್ಧಿವಂತರು ಎಂದೇ ಹೆತ್ತವರು ಸದಾ ಭಾವಿಸುತ್ತಾರೆ. ಆದರೆ ಶಿಕ್ಷಕರಿಗೆ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ, ಆದ್ದರಿಂದ ಅವರಲ್ಲಿ ಆತ್ಮವಿಶ್ವಾಸ ಮೂಡಿಸುವ, ಜೀವನ್ಮುಖಿ ಉತ್ಸಾಹವನ್ನು ಚಿಗುರಿಸುವ  ಜವಾಬ್ದಾರಿಯನ್ನೂ ಶಿಕ್ಷಕರು ವಹಿಸಿಕೊಳ್ಳಬೇಕಾಗಿದೆ.
ಮೊದಲೇ ಎಸ್‌ಎಸ್‌ಎಲ್‌ಸಿ, ಪಿಯುಸಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಹದಿಹರೆಯದವರು. ಕೋಪ ಅಸಹನೆ ಉಕ್ಕಿ ಹರಿಯುವ ವಯಸ್ಸು. ಜೊತೆಗೆ ಪರೀಕ್ಷೆಯ ಒತ್ತಡ, ಬಯಸಿದ್ದೆಲ್ಲಾ ಸಿಗಬೇಕೆಂಬ ಕೆಚ್ಚು, ಈ ವಯಸ್ಸಿಗೆ ಸೋಲನ್ನು ಸ್ವೀಕರಿಸುವುದು ಅವರಿಗೆ ಬಹಳ ಕಷ್ಟ ಎನಿಸುತ್ತದೆ. ಆದ್ದರಿಂದ ಈ ಹಂತದಲ್ಲಿಯೇ ಅವರಿಗೆ ನಿರಂತರ ಸಲಹೆ, ಆಪ್ತ ಸಮಾಲೋಚನೆಗಳ ಅಗತ್ಯವಿರುತ್ತದೆ. ಎಂಥ ಸಮಯ ಬಂದರೂ ನಾವು ನಿಮ್ಮ ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ಅವರಲ್ಲಿ ಶಿಕ್ಷಕರು ಮತ್ತು ಪೋಷಕರು ಮೂಡಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಪ್ರಾಣಾಯಾಮ, ಯೋಗ ಧ್ಯಾನಗಳು ಸಹಕಾರಿ. ಜೊತೆಗೆ ನೈತಿಕ ಶಿಕ್ಷಣ ಕೂಡ ಸಹಕಾರಿಯಾಗಬಲ್ಲದು. ಎಲ್ಲಕ್ಕಿಂತ ಹೆಚ್ಚು ಗುರು-ಶಿಷ್ಯರ ನಡುವಿನ ಆತ್ಮೀಯತೆ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹದ ಸೆಲೆ ಹುಟ್ಟಿಸುವಲ್ಲಿ ಅತ್ಯಂತ ಪ್ರಯೋಜನಕಾರಿ.ಇನ್ನೇನು ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶಗಳು ಬರಲಿವೆ. ಪ್ರತಿ ವರ್ಷ ಫಲಿತಾಂಶದ ಸಮಯದಲ್ಲಿ ಫೇಲ್ ಆದವರು ನಿರೀಕ್ಷಿತ ಅಂಕ ಗಳಿಸದೇ ಇದ್ದವರು ಹತಾಶೆಗೆ ಒಳಗಾಗಿ ಸಾವಿನತ್ತ ಮುಖ ಮಾಡುವುದನ್ನು ನೋಡುತ್ತಾ ಇದ್ದೇವೆ. 

ಈ ಬಗ್ಗೆ ನಾವೆಲ್ಲಾ ಮೊದಲೇ ಎಚ್ಚೆತ್ತುಕೊಳ್ಳೋಣ. ಫಲಿತಾಂಶಕ್ಕೆ ಒಂದೆರಡು ದಿನ ಮೊದಲೇ ಶಿಕ್ಷಕರು ಹೆತ್ತವರು ಮತ್ತು ವಿದ್ಯಾರ್ಥಿಗಳನ್ನು ಸೇರಿಸಿ ಒಂದು ಸಮಾಲೋಚನೆ ನಡೆಸಿದರೆ ಒಳ್ಳೆಯದು. ಎಂಥ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇದ್ದೇವೆ, ಒಂದು ಸಣ್ಣ ಪರೀಕ್ಷೆಯಲ್ಲಿನ ಸೋಲು ದೊಡ್ಡ ವಿಷಯವೇನಲ್ಲ. ಅದನ್ನು ಮುಂದೆ ಗೆಲುವಾಗಿ ಹೇಗೆ ಮಾರ್ಪಡಿಸಲು ಸಾಧ್ಯ ಎಂಬ ಬಗ್ಗೆ ಮಾಹಿತಿ ನೀಡಿದರೆ ಹತಾಶ ಮನಸ್ಸುಗಳಿಗೆ ಸಮಾಧಾನ ನೀಡಲು ಸಾಧ್ಯ. ಒಂದು ಸಣ್ಣ ದೀಪವನ್ನು ಆರಿ ಹೋಗದಂತೆ ಗಾಳಿಗೆ ಕೈ ಅಡ್ಡ ಹಿಡಿದು ರಕ್ಷಿಸಿದರೆ ಆ ದೀಪದಿಂದ ನೂರಾರು ದೀಪಗಳನ್ನು ಬೆಳಗಬಹುದು ಅಲ್ಲವೇ? ಆದ್ದರಿಂದ ಇಂದೇ ಎಚ್ಚತ್ತುಕೊಳ್ಳೋಣ. ದಡವರಿಯದ ಅಲೆಗಳಾಗಿರುವ  ಮಕ್ಕಳಿಗೆ ದಾರಿ ದೀಪವಾಗೋಣ.- ಡಾ .ಲಕ್ಷ್ಮೀ. ಜಿ. ಪ್ರಸಾದ  ಉಪನ್ಯಾಸಕರು
ಕಾಮೆಂಟ್ಸ್ 



Even I vouch the information shared by Dr.Lakshmi.G.Prasad.Present day education is such that all the educational institutions are focusing only on result,rank,prestige at the cost of students future.Apart from academic education,students must also be trained,taught in some other areas like personality development courses,how to face the life boldly,how to concentrate,meditations etc.Children are vulnerable.Correcting and showing them correct path is rest on the shoulders of teachers,parents.Periodic counselling to be arrnaged.Basically parents and teachers are held responsible in moulding the children's future.




very much useful information regarding youth ,we should give protection to them ,Thank you Madam Laxmi prasad for good article

Avatar



ತುಂಬಾ ಉಪಯುಕ್ತ ಮಾಹಿತಿ ಸಕಾಲದಲ್ಲಿ ಸಮಾಜವನ್ನು ಎಚ್ಚರಿಸಿದ್ದಕಾಗಿ ಧನ್ಯವಾದಗಳು ಇನ್ನು ಇಂಥಹ ಚಿಂತನೀಯ ಬರಹಗಳು ಪ್ರಕಟವಾಗಲಿ




ಉತ್ತಮ ಲೇಖನ , ಪೋಷಕರು ತಪ್ಪದೆ ಓದ ಬೇಕಾದ ಲೇಖನ . ಧನ್ಯವಾದಗಳು




An eye opening article ,all parents and teacher should read and follow the guideline given by Dr Lakshmi g prasad





ಲೇಖನ ತುಂಬಾ ಚೆನ್ನಾಗಿದೆ ಇಂದಿನ ಮಕ್ಕಳಿಗೆ ಗೊತ್ತು ಗುರಿಯಿಲ್ಲ ಇವರಿಗೆ ಸೂಕ್ತ ಮಾರ್ಗ ದರ್ಶನದ ಅಗತ್ಯವಿದೆ ಬಹುಶ ಎಲ್ಲ ಶಿಕ್ಷಕರು /ಉಪನ್ಯಾಸಕರು ದ.ಲಕ್ಷ್ಮೀ ಜಿ ಪ್ರಸಾದ ಮೇಡಂ ತರ ಚಿಂತಿಸಿದರೆ ಮಕ್ಕಳ ಬಗ್ಗೆ ಕಾಳಜಿ ವಹಿಸಿದರೆ ಮಕ್ಕಳು ಆತ್ಮ ಹತ್ಯೆಯತ್ತ ಮನಸು ಮಾಡಲಾರರು ಇಷ್ಟು ಒಳ್ಳೆ ಬರಹ ನೀಡಿದ್ದಕ್ಕೆ ಮಾಡಮ್ ಹಾಗು kannada ಪ್ರಭಕ್ಕೆ ಧನ್ಯವಾದಗಳು





ಒಬ್ಬ ಡಾಕ್ಟರ / ಇಂಜಿನಿಯರ್ ನ ಮೊದಲ ತಿಂಗಳ ಸಂಬಳ ಅವರಿಗೆ
ಪಾಠ ಮಾಡಿದ ಮೇಷ್ಟ್ರಿನ ಸರ್ವಿಸ್ ಕೊನೆಯ ಸಂಬಳ ದಷ್ಟಿರುತದೆ. ಅದಕ್ಕೆ ಮಕ್ಕಳ ಪೋಷಕರು ನೀನು ಡಾಕ್ಟರ / ಇಂಜಿನಿಯರ್ ಹಾಗು ಅಂತ ಒತ್ತಡ ಹಾಕುವುದು .
ಮನುಷ್ಯನ ಅಂತಸ್ತು ನೋಡಿ ಬೆಲೆ ಕೊಡುವ ಜನ ಇರುವ ವವರೆಗೂ ಮತ್ತು ದುಡಿಮ ಗೆ ಮತ್ತು ಶ್ರಮಕ್ಕೆ ತಕ್ಕ ಬೆಲೆ, ಅರ್ಥಿಕ ಸಮಾನತೆ ಸಿಗುವವರಿಗೂ ಮದ್ಯಮ ವರ್ಗದ ಈ ತೊಳಲಾಟ ಇದ್ದೆ ಇರುತದೆ.





ಯಾವ ಕಾಲದಲ್ಲಿ ಇದ್ದೀರಾ ಡಾಕ್ಟರ ಇಂಜಿನಿಯರ್ ಆದ ಎಲ್ಲರಿಗೂ ಈ ಒಂದು ಭಾಗ್ಯ ಇರುವುದಿಲ್ಲ. ಕೇವಲ IIT AIIMS ನಂಥ ಪ್ರತಿಸ್ಥಿಥ ವಿದ್ಯಾಸಂಸ್ಥೆಗಳಲ್ಲಿ ಓದಿದರೆ ಮಾತ್ರ ಇಂಥ ಭಾಗ್ಯ. ಇಲ್ಲವಾದಲ್ಲಿ ಶಿಕ್ಷಕರ ಮೊದಲ ಸಂಬಳವೇ ಇಂಜಿನಿಯರ್ಗಳ ಸಂಬಳಕ್ಕಿಂತ ವಾಸಿಯೇನ್ನಬಹುದು.
ಅದು ಅಲ್ಲದೆ ಹಣ ನೋಡಿ ಉದ್ಯೋಗ ಸೇರಿದವರ ಅರೋಗ್ಯ ಮತ್ತು ಜೀವನ ಮಟ್ಟ ಹೇಗಿದೆ ಎಂಬುದು ನಾವೆಲ್ಲಾ ಕಣ್ಣಾರೆ ನೋಡಿದ್ದೇವೆ

1 comment:

  1. ಪ್ರತಿಭೇಗೆ ಬೆಲೆ ಇಲ್ಲ. ಬದುಕಿಗೆ ಅಥ‍್ವಿಲ್ಲ. ವೀರಪ್ಪಾ ಮೊಯಲಿಯವರ ರಾಮಾಯಣ ಓದಿದಿರಾ ಎಂದು ಕೇಳಿದರೆ... ಯಾರೂ ಓದಿಲ್ಲ ಅಂತಾರೆ! ಆದರೆ ಅವರಿಗೆ ಸರಸ್ವತಿಸಂಮಾನ... ನಿಮ್ಮಂಥವರಿಗೆ???

    ReplyDelete