Tuesday 24 June 2014

ಲೆಕ್ಕಕ್ಕಿಲ್ಲದ ಯುಜಿಸಿ ನಿಯಮ, ಇಲ್ಲೇಕಿಲ್ಲ ಕ್ರಮ? - ಡಾ.ಲಕ್ಷ್ಮೀ ಜಿ ಪ್ರಸಾದ

                        

ಪ್ರಕಟ:ಕನ್ನಡ ಪ್ರಭ ,ಮಂಗಳವಾರ 24 ಜೂನ್ 2014

http://www.kannadaprabha.com/columns/ಲೆಕ್ಕಕ್ಕಿಲ್ಲದ-ಯುಜಿಸಿ-ನಿಯಮ-ಇಲ್ಲೇಕಿಲ್ಲ-ಕ್ರಮ/223688.html
ಕಳೆದ ಒಂದೆರಡು ವರ್ಷಗಳಿಂದ ವಿಶ್ವವಿದ್ಯಾಲಯಗಳ ಅವ್ಯಹಾರದ ಅಕ್ರಮ ನೇಮಕಗಳ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಎಲ್ಲೆಡೆ ನೇಮಕಾತಿ ಪೂರ್ವ ನಿರ್ಧರಿತವಾಗಿದ್ದು ನಾಮ್‌ಕೆವಾಸ್ಥೆ ಸಂದರ್ಶನ ನಾಟಕ ನಡೆಸಿ ತಮಗೆ ಬೇಕಾದವರನ್ನು ಆಯ್ಕೆ ಮಾಡುತ್ತಿರುವ ಬಗ್ಗೆ ಕೂಗು ಕೇಳಿ ಬರುತ್ತಾ ಇದೆ.ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕ, ಸಹಾಯಕ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕರ ಅರ್ಹತೆಯನ್ನು ಗುರುತಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಒಂದು ಮಾನದಂಡವನ್ನು, ಮಾರ್ಗದರ್ಶಿ ಸೂತ್ರಗಳನ್ನು 2010 ರಲ್ಲಿ ಜಾರಿಗೆ ತಂದಿದೆ.
 
 ವಿಶ್ವ ವಿದ್ಯಾಲಯಗಳಲ್ಲಿ ವಿವಿಧ ಹುದ್ದೆಗಳನ್ನು ತುಂಬುವಾಗ ಅಭ್ಯರ್ಥಿಯ ಆಯ್ಕೆಗೆ ಇದು ಮಾನದಂಡವಾಗಿರುತ್ತದೆ. ಇದನ್ನು ಶೈಕ್ಷಣಿಕ ನಿರ್ವಹಣಾ ಸೂಚ್ಯಂಕ (ಆ್ಛಛಜಜಟ್ಝ್ಛ ಠಜ್ಠಜ್ಟ್ಠಿಟಜಟ್ಛಿಜ ಐಟಿಜ್ಝ್ಛಛಡ್ಟ್ಠಿ) ಆಕಿಐ ಎಂದು ಕರೆದಿದ್ದಾರೆ. ಶೈಕ್ಷಣಿಕ ನಿರ್ವಹಣಾ ಸೂಚ್ಯಂಕಗಳ ಶೇ. 80 ಮತ್ತು ಸಂದರ್ಶನದ ಶೇ. 20 ಅಂಕಗಳನ್ನು ಸೇರಿಸಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕ ಮತ್ತು ಸಹ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆ ಮಾಡಬೇಕು ಎಂದು ಯುಜಿಸಿ ಹೇಳುತ್ತದೆ.
 ಪ್ರಕಟಿತ ಸಂಶೋಧನಾ ಕೃತಿಗಳಿಗೆ ಸಂಶೋಧನಾ ಲೇಖನಗಳಿಗೆ, ಸಂಶೋಧನಾ ಪ್ರಬಂಧ ಮಂಡನೆಗೆ, ಸಂಶೋಧನಾ ಪ್ರಾಜೆಕ್ಟ್‌ಗಳಿಗೆ, ಸಂಶೋಧನಾ ಮಾರ್ಗದರ್ಶನಗಳಿಗೆ, ಆಹ್ವಾನಿತ ಉಪನ್ಯಾಸಗಳಿಗೆ, ಪರೀಕ್ಷಾ ಕಾರ್ಯಗಳಿಗೆ, ಪಾಠ ಪ್ರವಚನಗಳಿಗೆ ಬೇರೆ ಬೇರೆ ಸೂಚ್ಯಂಕಗಳು ಇವೆ. ಕೆಲವಕ್ಕೆ ಅಂಕಗಳ ಮಿತಿ ಎಂದರೆ ಗರಿಷ್ಠ ಅಂಕಗಳು ಇವೆ. ಸಂಶೋಧನಾ ಕೃತಿಗಳು, ಲೇಖನಗಳು, ಸಂಪ್ರಬಂಧ ಮಂಡನೆಗಳು, ಸಂಶೋಧನಾ ಪ್ರಾಜೆಕ್ಟ್‌ಗಳು ಮತ್ತು ಮಾರ್ಗದರ್ಶನಗಳಿಗೆ ಗರಿಷ್ಠ ಮಿತಿ ಇರುವುದಿಲ್ಲ.
 ಆದರೆ ವಿಶ್ವವಿದ್ಯಾಲಯಗಳ ಆಯ್ಕೆ ಸಮಿತಿಗಳಿಗೆ ಈ ಮಾನದಂಡವನ್ನು ದಂಡ(ವ್ಯರ್ಥ) ಮಾಡುವ ಕಲೆ ಕರಗತವಾಗಿರುತ್ತದೆ.ಆದ್ದರಿಂದಲೇ ವಿಶ್ವವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ.ಯುಜಿಸಿಯ ನಿಯಮಾವಳಿಗಳು, ಮಾರ್ಗದರ್ಶಕ ಸೂತ್ರಗಳಂತೆ ಮೂರು ಮುಖ್ಯವಾದ ವರ್ಗಗಳು ಇವೆ. ಇವುಗಳಿಗನುಗುಣವಾಗಿ ಯುಜಿಸಿಯು ಅಂಕಗಳನ್ನು ನಿಗದಿ ಪಡಿಸಿದೆ. ಪಾಠ ಮತ್ತು ಮೌಲ್ಯ ಮಾಪನಕ್ಕೆ ಸಂಬಂಧಿಸಿದ ದಕ್ಷತೆ- ಈ ವಿಭಾಗಕ್ಕೆ ಗರಿಷ್ಟ ಅಂಕಮಿತಿ 125. 
 ಈ ಅಂಕಗಳನ್ನು ನಾಲ್ಕು  ಉಪ ವಿಭಾಗಗಳಲ್ಲಿ ಹಂಚಿದೆ. ಉಪನ್ಯಾಸ, ಪ್ರಯೋಗ, ಟುಟೋರಿಯಲ್, ಕಾಂಟ್ಯಾಕ್ಟ್ ಕ್ಲಾಸ್‌ಗಳಿಗೆ ಒಟ್ಟಾರೆಯಾಗಿ ಗರಿಷ್ಠ ಅಂಕಗಳು 50. ಯುಜಿಸಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಕ್ಲಾಸ್‌ಗಳನ್ನು ತೆಗೆದುಕೊಂಡಿದ್ದಲ್ಲಿ ಗಂಟೆಗೆ 2 ಅಂಕಗಳಂತೆ ಗರಿಷ್ಠ 10 ಅಂಕಗಳು. ಜ್ಞಾನ ಪ್ರಸಾರ/ ಹಂಚುವಿಕೆ ಮತ್ತು ವಿಧಾನಗಳು (ಂಜಝ್ಟಿಜ್ಟಟ್ಟ್ಜಣ)ಗೆ ಗರಿಷ್ಟ ಅಂಕಗಳು 20. ಪಾಠ ಮಾಡುವ  ವಿಧಾನಗಳು, ಹೊಸ ಮಾದರಿಗಳ ಆವಿಷ್ಕಾರ ಮತ್ತು ಬಳಕೆ, ಮೊದಲಾದವುಗಳಿಗೆ ಒಂದು ಕೋರ್ಸ್‌ಗೆ 5 ಅಂಕಗಳಂತೆ ಗರಿಷ್ಠ 20 ಅಂಕಗಳು.ಪರೀಕ್ಷಾ ಕಾರ್ಯಗಳಿಗೆ ಸಂಬಂಧಿಸಿದಂತೆ ಮೇಲ್ವಿಚಾರಣೆ, ಸ್ಕ್ವಾಡ್, ಮೌಲ್ಯ ಮಾಪನ ಇತ್ಯಾದಿಗಳಿಗೆ ಗರಿಷ್ಠ 25 ಅಂಕಗಳು.ನಂತರದಲ್ಲಿ ಸಹಪಠ್ಯ- ಪೂರಕ ಪಠ್ಯ ಚಟುವಟಿಕೆಗಳಿಗೆ ಈ ಮೇಲಿನಂತೆಯೇ ಮೂರು ಉಪ ವಿಭಾಗಗಳಲ್ಲಿ ಅಂಕ ನೀಡಲಾಗುತ್ತದೆ. ಕ್ಷೇತ್ರಕಾರ್ಯ, ಸಾಂಸ್ಕೃತಿಕ ಕಾರ್ಯ, ಕಾಲೇಜು ಪತ್ರಿಕೆ ಹಾಗೂ ಸಭೆಗಳ ನಿರ್ವಹಣೆ, ರೇಡಿಯೋ ಟಾಕ್‌ಗಳು ಹೀಗೆ ಬಹಳಷ್ಟು ಸಂಗತಿಗಳನ್ನು ಉಪವಿಭಾಗವು ಒಳಗೊಂಡಿದೆ. ಇವೆಲ್ಲ ಒಟ್ಟುಗೂಡಿಸಿ ಈ ವಿಭಾಗದಲ್ಲಿ ಗರಿಷ್ಠ 50 ಅಂಕಗಳ ಮಿತಿ ಇದೆ
 .ಈ ಎರಡು ಮುಖ್ಯ ವಿಭಾಗಗಳಲ್ಲಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುವ ಹೆಚ್ಚಿನವರು ಗರಿಷ್ಠ ಅಂಕಗಳನ್ನು ಗಳಿಸಿರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಥವಾ ಸರಕಾರೀ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿ ಸೇರಿ ಸಾಕಷ್ಟು ಅನುಭವ ಗಳಿಸಿದ ಮೇಲಷ್ಟೇ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುತ್ತಾರೆ ಹೆಚ್ಚಿನವರು. ಉಪನ್ಯಾಸಕರಾದ ಮೇಲೆ ಪರೀಕ್ಷಾ ಕಾರ್ಯಗಳು, ಪಾಠ ಪ್ರವಚನಗಳು, ಸಹಪಠ್ಯ ಕಾರ್ಯಗಳು, ಃಖಖ ಹೀಗೆಲ್ಲ ತೊಡಗಿಕೊಳ್ಳುವುದು ಅನಿವಾರ್ಯ ಕೂಡಾ. ಹಾಗಾಗಿ ಈ ಅಂಕಗಳು ಹೆಚ್ಚು ಕಡಿಮೆ ಎಲ್ಲರಿಗೂ ಒಂದೇ ತೆರನಾಗಿ ಇರುತ್ತವೆ.ಮೂರನೆಯದಾಗಿ ಸಂಶೋಧನೆ ಹಾಗೂ ಪ್ರಕಟಣೆಗಳು ಮತ್ತು ಶೈಕ್ಷಣಿಕ ಕೊಡುಗೆಗಳನ್ನು ಲೆಕ್ಕ ಹಾಕಲಾಗುತ್ತದೆ. ಐದು ಉಪವಿಭಾಗಗಳಲ್ಲಿ ಲೆಕ್ಕ ಹಾಕುವ ಇಲ್ಲಿನ ಅಂಕಗಳಿಗೆ ಮಿತಿ ಇರುವುದಿಲ್ಲ. ಹೆಚ್ಚು ಸಂಶೋಧನೆ ಮತ್ತು ಪ್ರಕಟಣೆ ಮಾಡಿದವರಿಗೆ ಹೆಚ್ಚು ಅಂಕಗಳು ದೊರೆಯುತ್ತವೆ. 
ಈ ಮೂರನೇ ವರ್ಗದಡಿಯಲ್ಲಿ ಬರುವ ಐದೂ ಉಪವಿಭಾಗಗಳ ಸಂಶೋಧನಾತ್ಮಕ ಚಟುವಟಿಕೆಗಳಿಗೆ ಯಾವುದೇ ಗರಿಷ್ಠ ಮಿತಿಯನ್ನು ಯುಜಿಸಿ ನಿಗದಿ ಪಡಿಸಿಲ್ಲ. ಪ್ರಾಧ್ಯಾಪಕ ಸಹಪ್ರಾಧ್ಯಾಪಕ ಹುದ್ದೆಗಳ ಆಯ್ಕೆಗೆ ಈ ಮೂರೂ ವರ್ಗಗಳಲ್ಲಿ ಕನಿಷ್ಠ ಅಂಕಗಳು ಇರಲೇ ಬೇಕು ಎಂದು ಯುಜಿಸಿ ತಾಕೀತು ಮಾಡಿದೆ. ಮೊದಲ ಎರಡು ವರ್ಗಗಳ ಗರಿಷ್ಠ ಅಂಕ 175.ಸಹಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 400 ಶೈಕ್ಷಣಿಕ ನಿರ್ವಹಣಾ ಸೂಚ್ಯಂಕಗಳನ್ನು ಪಡೆಯಬೇಕಾಗಿದ್ದು, ಅದನ್ನು 30 ಅಂಕಗಳು ಎಂದು ಪರಿಗಣಿಸಿ ಅನಂತರದ ಹೆಚ್ಚಿನ ಪ್ರತಿ ಹದಿನೈದು ಸೂಚ್ಯಂಕಗಳಿಗೆ ಒಂದು ಅಂಕದಂತೆ ಕನಿಷ್ಠ ಮೂವತ್ತು ಅಂಕಗಳಿಗೆ ಸೇರುತ್ತಾ ಹೋಗುತ್ತದೆ. 
ಈ ಅಂಕಗಳು ಅಲ್ಲದೆ ಶೈಕ್ಷಣಿಕ ಸಾಧನೆಗಳಿಗೆ ಬೇರೆಯೇ ಅಂಕಗಳಿವೆ. ಹಾಗಾದರೆ ಈಗ ಯೂನಿವರ್ಸಿಟಿಗಳಲ್ಲಿ ನಡೆಯುವುದೇನು? 2010ಕ್ಕೂ ಮೊದಲು ನೇಮಕದ ವಿಷಯದಲ್ಲಿ ಯುಜಿಸಿಯಿಂದ ಸ್ಪಷ್ಟ ನಿರ್ದೇಶನಗಳು ಇರಲಿಲ್ಲ. ಆದರೂ 2010ರ ನಂತರ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ತುಮುಕೂರು ವಿಶ್ವವಿದ್ಯಾಲಯ, ಗುಲ್ಬರ್ಗ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ನಡೆದ ನೇಮಕಾತಿಯಲ್ಲಿ ಯುಜಿಸಿ ನಿಗದಿ ಪಡಿಸಿದ ಮಾರ್ಗದರ್ಶಕ ಸೂತ್ರಗಳನ್ನು ಉಲ್ಲಂಘಿಸಿ ಅಕ್ರಮ ನೇಮಕಾತಿ ಮಾಡಿದ್ದಾರೆ.
 
ಉದಾಹರಣೆಗೆ ಮಂಗಳೂರು ವಿವಿಯಲ್ಲಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಹುದ್ದೆಯ ಸಂದರ್ಶನದಲ್ಲಿ ಪ್ರಕಟಿತ ಸಂಶೋಧನಾ ಕೃತಿಗಳಿಗೆ ಗರಿಷ್ಠ 20 ಅಂಕಗಳನ್ನು ನಿಗದಿಪಡಿಸಿದ್ದರು. ಒಂದು ಸಂಶೋಧನಾ ಕೃತಿಗೆ ಐದು ಅಂಕಗಳಂತೆ ಗರಿಷ್ಠ 20 ಅಂಕಗಳು ದೊರೆಯುತ್ತವೆ. ಕೇವಲ ನಾಲ್ಕು ಕೃತಿ ಬರೆದವರೂ 20 ಅಂಕ ಗಳಿಸುತ್ತಾರೆ. ಇಪ್ಪತ್ತು ಸಂಶೋಧನಾ ಕೃತಿಗಳನ್ನು ಪ್ರಕಟಿಸಿದವರಿಗೂ 20 ಅಂಕಗಳು. ಇದು ಇಲ್ಲಿಗೆ ನಿಲ್ಲುವುದಿಲ್ಲ. ಈ ಅಂಕಗಳು ಕೇವಲ ಸಂಶೋಧನಾ ಕೃತಿಗಳಿಗೆ ಮಾತ್ರ ಸಿಗುತ್ತವೆ. 
ಆದರೆ ಮಂಗಳೂರು ವಿವಿಯಲ್ಲಿ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿರುವ ಸಾಮಾನ್ಯ ಅಭ್ಯರ್ಥಿಯ ಎರಡು ಸಂಶೋಧನಾ ಕೃತಿಗಳು ಮಾತ್ರ ಪ್ರಕಟವಾಗಿದ್ದು ಅದರಲ್ಲೊಂದು ಪಿಎಚ್‌ಡಿ ಪ್ರಬಂಧವಾಗಿದೆ ಇದಕ್ಕೆ ಶೈಕ್ಷಣಿಕ ವಿಭಾಗದಲ್ಲಿ ಪಿಎಚ್‌ಡಿಗೆ 10 ಅಂಕಗಳು ಕೊಟ್ಟಿದ್ದು ಮತ್ತೊಮ್ಮೆ ಇಲ್ಲಿ ಅದಕ್ಕೆ ಅಂಕಗಳು ಸಿಗುವುದಿಲ್ಲ. ನಿಯಮಾವಳಿ ಪ್ರಕಾರ ಆ ಅಭ್ಯರ್ಥಿಗೆ ಸಂಶೋಧನಾ ವಿಭಾಗದ 20 ಅಂಕಗಳಲ್ಲಿ ಐದು ಅಂಕಗಳು ಮಾತ್ರ ಕೊಡಬೇಕಿತ್ತು. ಆದರೆ ಅವರಿಗೆ ಅಂಕಗಳನ್ನು ನೀಡಿ ಗರಿಷ್ಠ 20 ಅಂಕಗಳನ್ನು ನೀಡಿದ್ದಾರೆ. 
ಇದೇ ವಿಭಾಗದಲ್ಲಿ 1 ಸಿ ವರ್ಗದ ಮೀಸಲಿನ ಅಡಿಯಲ್ಲಿ ಆಯ್ಕೆ ಆದ ಅಭ್ಯರ್ಥಿಯ ಒಂದೇ ಒಂದು ಕೃತಿ ಕೂಡಾ ಪ್ರಕಟವಾಗಿಲ್ಲ. ಆ ಅಭ್ಯರ್ಥಿಗೆ ಸಂಶೋಧನಾ ವಿಭಾಗದ 20 ಅಂಕಗಳಲ್ಲಿ ಸೊನ್ನೆ ಅಂಕ ಬಂದಿರುತ್ತದೆ. ಆದರೂ ಆ ಅಭ್ಯರ್ಥಿಗೆ ಸಂದರ್ಶನದಲ್ಲಿ ಗರಿಷ್ಠ ಅಂಕಗಳನ್ನು ನೀಡಿದ್ದಾರೆ. ಸಂದರ್ಶನದಲ್ಲಿ ಗರಿಷ್ಠ ಅಂಕ ನೀಡಿದ್ದರೂ ಸಂಶೋಧನೆಯಲ್ಲಿ ಸೊನ್ನೆ ಅಂಕ ಇರುವ ಕಾರಣ ಇವರಿಗಿಂತ ಹೆಚ್ಚು ಒಟ್ಟು ಅಂಕಗಳು ಬೇರೆ ಅಭ್ಯರ್ಥಿಗಳಿಗೆ ಬಂದಿದೆ. ಆದರೂ ಕಡಿಮೆ ಅಂಕ ಇದ್ದಾಗಲೂ ಅದೇ ಅಭ್ಯರ್ಥಿಯ ಆಯ್ಕೆ ಆಗಿದೆ. ಬೇರೆ ವಿಭಾಗಳಲ್ಲಿಯೂ ಸಂಶೋಧನಾ ವಿಭಾಗದಲ್ಲಿ ಸಂಶೋಧನಾ ಪ್ರಬಂಧ ಮಂಡನೆ, ಪ್ರಕಟಣೆಗಳು ಇಲ್ಲದೆ ಇದ್ದಾಗಲೂ ಅವರಿಗೆ ಗರಿಷ್ಠ ಅಂಕಗಳನ್ನು ನೀಡಲಾಗಿದೆ. ಸಂದರ್ಶನದಲ್ಲಿಯೂ ಹೆಚ್ಚಿನ ಅಂಕಗಳನ್ನು ನೀಡಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. 
ಆ ಬಗ್ಗೆ ಕೇಳಿದರೆ ಅಂಕಗಳನ್ನು ನಿರ್ಧರಿಸುವಲ್ಲಿ ಆಯ್ಕೆ ಕಮಿಟಿಯ ತೀರ್ಮಾನವೇ ಅಂತಿಮ ಎನ್ನುವ ಸಿದ್ಧ ಉತ್ತರ ಸಿಗುತ್ತದೆ. ಆಯ್ಕೆ ಕಮಿಟಿಯ ಬೇಕಾಬಿಟ್ಟಿ ಅಂಕಗಳನ್ನು ಕೊಡುವ ಹಾಗಿದ್ದರೆ ಯುಜಿಸಿ ಮಾರ್ಗ ದರ್ಶಕ ಸೂತ್ರಗಳ ಅಗತ್ಯವೇನಿದೆ? 
ಇದೀಗ 2006-07ರಲ್ಲಿ ಮೈಸೂರು ವಿವಿ ಮಾಡಿದ 135 ಬೋಧಕ ಹುದ್ದೆಗಳ ನೇಮಕಾತಿಯನ್ನು ಸರ್ಕಾರ ರದ್ದು ಪಡಿಸಿದ ಆದೇಶ ನೀಡಿ  ತಡವಾಗಿಯಾದರೂ ಒಂದು ದಿಟ್ಟ ಹೆಜ್ಜೆಯನ್ನು ಇಟ್ಟಿದೆ. 
ಅದೇ ರೀತಿ ಮಂಗಳೂರು, ಬೆಳಗಾವಿ ಸೇರಿದಂತೆ 2010 ರಲ್ಲಿ ಯುಜಿಸಿ ಸ್ಪಷ್ಟ ನಿಯಮಾವಳಿಯನ್ನು ತಂದ ನಂತರವೂ ಆದ ಅಕ್ರಮ ನೇಮಕವನ್ನು ರದ್ದುಪಡಿಸಿಬೇಕಲ್ಲದೇ ಯುಜಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮ ಎಸಗಿದ ಆಯ್ಕೆ ಸಮಿತಿಯ ಸದಸ್ಯರು, ಉಪಕುಲಪತಿ ಹಾಗೂ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮ ತೆಗೆದು ಕೊಳ್ಳಬೇಕು. ಹಾಗಾದಾಗ ಮಾತ್ರ ಮುಂದಿನ ನೇಮಕಗಳು ಪಾರದರ್ಶಕವಾಗಲು ಸಾಧ್ಯ. -ಡಾ.ಲಕ್ಷ್ಮೀ ಜಿ ಪ್ರಸಾದ ಕನ್ನಡ ಉಪನ್ಯಾಸಕಿ

2 comments:

  1. Replies
    1. ಹೌದು ,ಅನ್ಯಾಯದ ವಿರುದ್ಧ ಪ್ರತಿಭಟನೆ ಹೋರಾಟ ಒಂದೇ ದಾರಿ

      ಓದಿ ಅಭಿಪ್ರಾಯಿಸಿದ್ದಕ್ಕೆ ಧನ್ಯವಾದಗಳು ದಾಕ್ಟರ್, Savinaya Kumar

      Delete