Friday 11 July 2014

ಫೇಸ್ ಬುಕ್ ನಲ್ಲಿ ಹೆಣ್ಣು ಮಕ್ಕಳ ಫೇಸ್ ಗಳು (11 ಜುಲೈ 2014 ರಂದು ಉದಯವಾಣಿ ಮಹಿಳಾ ಸಂಪದದಲ್ಲಿ ಪ್ರಕಟಿತ ಲೇಖನ )-ಡಾ.ಲಕ್ಷ್ಮೀ ಜಿ ಪ್ರಸಾದ

                                


ಅತ್ಯಾಚಾರಗಳಲ್ಲಿ ಆಕರ್ಷಣೆಯಿಂದ ನಡೆಯುವ ಅತ್ಯಾಚಾರ, ಮಾನಸಿಕ ಅಸ್ವಸ್ಥರಿಂದ ನಡೆಯುವ ಅತ್ಯಾಚಾರ, ಕುಡುಕರಿಂದ ನಡೆಯುವ ಅತ್ಯಾಚಾರ, ಪ್ರತೀಕಾರಕ್ಕಾಗಿ ನಡೆಯುವ ಅತ್ಯಾಚಾರ ಮೊದಲಾದ ವಿಧಗಳು ಇವೆ. ಪ್ರಸ್ಥುತ ವರದಿಯಲ್ಲಿ ಇರುವುದು ಮಾನಸಿಕ ದೌರ್ಬಲ್ಯಲ್ಯದಿಂದ ಆಗಿರುವುದು. ನಮ್ಮಲ್ಲಿ ಅತಿಹೆಚ್ಚು ಆಕರ್ಷಣೆಯಿಂದ ನಡೆಯುವ ಅತ್ಯಾಚಾರ ನಡೆಯುತ್ತವೆ. ಹೆಣ್ಣುಮಕ್ಕಳ ನಡೆ ಸರಿ ಇದ್ದರೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ದೇಶದ ಹೆಣ್ಣುಮಕ್ಕಳು ಎಷ್ಟು ಹಾದಿ ತಪ್ಪಿದರೂ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಅತ್ಯಾಚಾರ ನಡೆಯುತ್ತಿದೆ ಎಂದರೆ ನಮ್ಮ ಗಂಡುಮಕ್ಕಳು ನಿಜಕ್ಕೂ ಅಭಿನಂದಾರ್ಹರು.

ಕೋಲಾರದಲ್ಲಿ ಬೆನ್ನು ಬೆನ್ನಿಗೆ ಶಾಲಾ ವಿದ್ಯಾರ್ಥಿನಿಯರ ಮೇಲಾದ ಅತ್ಯಾಚಾರವನ್ನು ಖಂಡಿಸಿ ಫೇಸ್ ಬುಕ್ ನಲ್ಲಿ ಹಾಕಿದ ಪೋಸ್ಟ್ ಗೆ ಬಂದ ಒಂದು ಪ್ರತಿಕ್ರಿಯೆ ಇದು  !
“ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಯಾವುದು ತಿಳಿದಿದೆಯೇ ?ಇಲ್ಲವಾದಲ್ಲಿ  ಒಂದು ಕನ್ನಡಿ ತೆಗೆದು ಬಗ್ಗಿ ನೋಡಿ “ ಎಂಬ ಒಂದು  ಹಾಸ್ಯವನ್ನು  ಫೇಸ್ ಬುಕ್ ನಲ್ಲಿ ಓದಿ ನಗಾಡಿದ್ದೆ ಕೆಲ ದಿನಗಳ ಹಿಂದೆ .
ಮೇಲಿನ ಪ್ರತಿಕ್ರಿಯೆ ಓದಿದಾಗ " ಅದು ತಮಾಷೆಯಲ್ಲ ವಾಸ್ತವ ಜಗತ್ತಿನ ಅತ್ಯಂತ ಕ್ರೂರ ಪ್ರಾಣಿ ಮನುಷ್ಯನೇ ಖಂಡಿತಾ" ಎನ್ನಿಸಿತು .
ಅತ್ಯಾಚಾರದಂಥಹ ಅಕ್ಷಮ್ಯ. ಹೇಯ ,ಕ್ರೂರ ಕಾರ್ಯಕ್ಕೂ ಕೂಡ ಹೆಣ್ಣನ್ನೇ ಕಾರಣ ಮಾಡುವ ಹೃದಯ ದಾರಿದ್ರ್ಯತೆಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ.!
ಹೆಂಗಸರ ಬಗ್ಗೆ ಯಾಕೆ ಅವಜ್ಞೆ ಈ ಸಮಾಜಕ್ಕೆ? ..ನನಗೆ ಅರ್ಥವಾಗುತ್ತಿಲ್ಲ .

 “ಹೆಂಗಸರಿಗೆ ಮಾತನಾಡಲು ಬರುವುದಿಲ್ಲ “ ಎನ್ನುತ್ತಾರೆ ವಿಶ್ವವಿದ್ಯಾಲಯವೊಂದರ ನಿವೃತ್ತ ಕನ್ನಡ ಪ್ರೊಫೆಸ್ಸರ್ ಒಬ್ಬರು
“ಬ್ಯಾಟರಿಗೆ ಒಂದು ಪೊಸಿಟಿವ್ ಮತ್ತು ಒಂದು ನೆಗೆಟಿವ್ ತುದಿಗಳು ಇರುತ್ತವೆ ,ಹೆಂಗಸರಿಗೆ ನೆಗೆಟಿವ್ ತುದಿ ಮಾತ್ರ ಇರುತ್ತದೆ “ಎಂದು ತಮ್ಮ ಸಹೋದ್ಯೋಗಿಗಳು ಮಾತನಾಡಿಕೊಳ್ಳುವ ಬಗ್ಗೆ  ವೈದ್ಯ ಉಪನ್ಯಾಸಕರೊಬ್ಬರು ಹೇಳುತ್ತಾರೆ .
ಇತ್ತೀಚೆಗೆ ಭೇಟಿಯಾದ ಖ್ಯಾತ ವೈದ್ಯ ಚಿಂತಕರೊಬ್ಬರು ಸ್ತ್ರೀಯರ ಮೇಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತಾಡುತ್ತಾ ಅದಕ್ಕೆ ಸ್ತ್ರೀಯರ ವೇಷ ಭೂಷಣ ಕೂಡ ಕಾರಣ ಎಂದು ಹೇಳಿದರು !

ಕೋಲಾರದಲ್ಲಿ ಅತ್ಯಾಚಾರಕ್ಕೊಳಗಾದ ಶಾಲಾ ಬಾಲಕಿಯರು ಅಶ್ಲೀಲ ಬಟ್ಟೆ ತೊಟ್ಟಿದ್ದರೆ? ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಉಜಿರೆಯ ವಿದ್ಯಾರ್ಥಿನಿ ಸೌಜನ್ಯ ಆಗಲಿ ,ಸೌಮ್ಯ ಭಟ್ ಆಗಲಿ ಯಾರು ಕೂಡ ಕಾಮಪ್ರಚೋದಕವಾದ ವೇಷ ಭೂಷಣ ಹೊಂದಿರಲಿಲ್ಲ.ಮೂರು ತಿಂಗಳ ಹಸುಳೆ ಯಿಂದ ಹಿಡಿದು ಎಂಬತ್ತು ವರ್ಷದ ಅಜ್ಜಿಯನ್ನು ಬಿಡದೆ ಅತ್ಯಾಚಾರ ಮಾಡಿದ್ದಾರೆ
ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯರು ಯಾರೂ ತುಂಡು ಬಟ್ಟೆ ಧರಿಸಿರಲಿಲ್ಲ ಎನ್ನುವುದು ವಾಸ್ತವ ..ಇಷ್ಟಿದ್ದೂ ಸುಶಿಕ್ಷಿತರಾದ ಮಂದಿ ಕೂಡ ಅತ್ಯಾಚಾರಕ್ಕೆ ಹೆಣ್ಣನ್ನೇ ಬೊಟ್ಟು ಮಾಡುತ್ತಾರೆ .

ಇತ್ತೀಚೆಗೆ ಫೇಸ್ ಬುಕ್  ಗುಂಪು ಒಂದರಲ್ಲಿ ಯಾರೋ ಒಬ್ಬರು ಅತ್ಯಾಚಾರಕ್ಕೆ ಯಾರು ಕಾರಣ ?ಹೆಣ್ಣು ಅಥವಾ ಗಂಡು ಎಂದು ಪ್ರಶ್ನೆ ಕೇಳಿದ್ದರು .ಅದಕ್ಕೆ ಅನೇಕ ಮಂದಿ ಹೆಣ್ಣೇ ಕಾರಣ ಎಂದಿದ್ದರೆ ,ಕೆಲ ಮಂದಿ ಇಬ್ಬರೂ ಕಾರಣ ಎಂದಿದ್ದರು .ಗಂಡಿನ ವಿಕೃತ ಮನಸು ಕಾರಣ ಎಂದು ಒಬ್ಬರೂ ಹೇಳಿರಲಿಲ್ಲ.ಬಹುಶ ಇದನ್ನೇ ಪುರುಷ ಪ್ರಧಾನ ಸಮಾಜ ಎನ್ನುವುದು ಇರಬೇಕು .ಗಂಡಿನ ಅಕ್ಷಮ್ಯ ಅಪರಾಧಗಳಿಗೆ ಕೂಡಾ ಹೆಣ್ಣನ್ನು ಹೊಣೆ ಮಾಡುವುದು ಇದರ ಲಕ್ಷಣ ಇರಬೇಕು.

ಇದೇ ರೀತಿ ಒಂದೆರಡು ತಿಂಗಳ ಹಿಂದೆ  ಇನ್ನೊಂದು ಫೇಸ್ ಬುಕ್ ಗುಂಪು ಒಂದರಲ್ಲಿ ಹಾಕಿದ್ದ ಒಂದು ಪೋಸ್ಟ್  ಗಮನ ಸೆಳೆಯಿತು .ಅದು ಕಾಸರಗೋಡು ಪರಿಸರದಲ್ಲಿ ಹುಡುಗಿಯರು ಲವ್ / ಮತಾಂತರದ ಜಾಲಕ್ಕೆ ಬೀಳುವ ಬಗ್ಗೆ ಬಂದ ವಾರ್ತಾ ಪತ್ರಿಕೆಯೊಂದರ ಭಾಗ ಆಗಿತ್ತು .ಇತ್ತೀಚಿಗೆ ಲವ್/ಮತಾಂತರದ ಜಾಲಕ್ಕೆ ಸಿಲುಕಿದ ಯುವತಿಯನ್ನು ಹುಡುಕಿ ಹಿಂದೆ ಕರೆದು ಕೊಂಡು ಬಂದಿದ್ದರು .ಆ ಯುವತಿ ಯಾವ ರೀತಿ ಜಾಲ ಬೀಸುತ್ತಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದು ಅದರಲ್ಲಿ ಇತ್ತು .ಆರಂಭದಲ್ಲಿ ಯುವತಿಯರ ಸ್ನೇಹಿತರ ಮೂಲಕ ಪರಿಚಯ ಮಾಡಿಕೊಂಡು ಮಾದಕ ಪದಾರ್ಥಗಳನ್ನು ಸೇರಿಸಿದ ಸಿಹಿ ತಿಂಡಿ ಚಾಕೋಲೆಟ್ ಗಳನ್ನು ನೀಡುತ್ತಾರೆ .ಆ ಚಾಕೋಲೆಟ್ ಗೆ ಮಾದಕ ವಸ್ತು ಸೇರಿಸಿರುವುದರಿಂದ ಇವರು ಅದಕ್ಕೆ ಅಡಿಕ್ಟ್ ಆಗುತ್ತಾರೆ .ಅವರು ಕೊಡುವ  ಮಾದಕ ವಸ್ತುವಿಗಾಗಿ ಸ್ನೇಹ ಮುಂದುವರಿಯುತ್ತದೆ .ಮತ್ತೆ ಐ ಪ್ಯಾಡ್ ಗಳನ್ನು ಕೊಟ್ಟು ಮನ ಪರಿವರ್ತನೆ ಮಾಡುತ್ತಾರೆ ಇತ್ಯಾದಿ ಮಾಹಿತಿ ಅದರಲ್ಲಿತ್ತು .

ಇದಕ್ಕೆ ಕೆಲವರು ನೀಡಿದ ಪ್ರತಿಕ್ರಿಯೆ ದಿಗ್ಭ್ರಮೆ ಗೊಳಿಸಿತ್ತು !ಒಬ್ಬರು ಹೀಗೆ ಆಗುವುದಕ್ಕೆ ಹೆಣ್ಣು ಮಕ್ಕಳಿಗೆ ಅತಿಯಾದ ಸ್ವಾತಂತ್ರ್ಯ ನೀಡಿದ್ದು ಕಾರಣ ,ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರ ಬರುವ ಅವಕಾಶ ಇರಲಿಲ್ಲ .ಈಗ ಇವರಿಗೆ ಅಂತ ಸ್ವಾತಂತ್ರ್ಯ ನೀಡಿದ್ದು ತಪ್ಪು ಎಂದು ಹೇಳಿದರೆ ಇನ್ನೊಬ್ಬರು ಮದುವೆ ವಯಸ್ಸನ್ನು 14 ವರ್ಷಕ್ಕೆ ಇಳಿಸ ಬೇಕು ಎಂದು ಅಭಿಪ್ರಾಯಿಸಿದರು .
ಇನ್ನೊಬ್ಬರು ನನ್ನ ಮೂರು ವರ್ಷದ ಮೊಮ್ಮಗ ಕೂಡಾ ಬೇರೆಯವರು ಕೊಟ್ಟ ತಿಂಡಿ ತೀರ್ಥ ತಿನ್ನುವುದಿಲ್ಲ .ಈ ಹುಡುಗಿಯರಿಗೆ ಅಷ್ಟು ಬುದ್ಧಿ ಇಲ್ಲವೇ ಎಂದು ವಾದಿಸಿದರು! ಮತ್ತೊಬ್ಬರು ಹೆಣ್ಣು ಮಕ್ಕಳನ್ನು ಕೆಟ್ಟ ಭಾಷೆಯಲ್ಲಿ ಬೈದು “ಹೆಣ್ಣು ಮಕ್ಕಳ ಸೊಂಟ ಮುರಿದು ಮನೆಯಲ್ಲಿ ಕೂಡಿ ಹಾಕ ಬೇಕು” ಎಂದು ಹೇಳಿದರು !ಅವಳನ್ನು ಹಿಂದೆ ಕರೆದು ಕೊಂಡು  ಬಂದದ್ದೇಕೆ ?ಅಲ್ಲಿಯೇ ಸಾಯಲಿ ಎಂದು ಬಿಡ ಬೇಕು ಎಂದು ಇನ್ನೊಬ್ಬರು ಹೇಳಿದರು .ಅನೇಕರಿಗೆ  ಇದು ಹಾಸ್ಯದ ವ್ಯಂಗ್ಯದ ವಸ್ತು ಆಯಿತು !

ಯಾರೋ ಒಬ್ಬರು ಫೇಸ್ ಬುಕ್ ಗುಂಪಿನಲ್ಲಿ ಕುಕ್ಕರ್ ಸಿಡಿದು ಗಾಯಗೊಂಡ ಓರ್ವ  ಮಹಿಳೆಯ ಚಿತ್ರ ಹಾಕಿದ್ದರು .ಅದಕ್ಕೆ ಪ್ರತಿಕ್ರಿಯಿಸಿದ ಅನೇಕರು ಈಗಿನ ಹುಡುಗಿಯರು ಅಮ್ಮಂದಿರಿಗೆ ಅಡುಗೆಗೆ ಸಹಾಯ ಮಾಡುವುದಿಲ್ಲ ,ಶೋಕಿ ಡ್ರೆಸ್ ಹಾಕಿಕೊಂಡು ತಿರುಗಾಡುತ್ತಾರೆ  ಇತ್ಯಾದಿಯಾಗಿ  ಅಸಂಬದ್ಧ ಕಾಮೆಂಟ್  ಮಾಡಿದ್ದರು !ಯಾರೊಬ್ಬರೂ ಅದನ್ನು ಪ್ರಶ್ನಿಸಲೂ ಇಲ್ಲ,ಹುಡುಗಿಯರನ್ನು ದೂಷಿಸಲು ಕಾರಣಕ್ಕಾಗಿ ಕಾಯುತ್ತಿರುತ್ತಾಯೇ  ನಮ್ಮ ಸಮಾಜ ಮಂದಿ?! ಎಂದು ಇದನ್ನು ಓದುವಾಗ ಅನ್ನಿಸಿತು .

ಇದನ್ನೆಲ್ಲ ಓದಿದ, ಗಮನಿಸಿದ ಸಹೃದಯರೊಬ್ಬರು “ನಾವು ನಮಗೆ ಹೆಣ್ಣು ಮಗಳು ಬೇಕೇ ಬೇಕು ಎಂದು ದೇವರಿಗೆಲ್ಲ ಹರಿಕೆ ಹಾಕಿ ಹಂಬಲಿಸಿ ಮಗಳನ್ನು ಪಡೆದೆವು .ಈಗ ಅನ್ನಿಸುತ್ತದೆ .ಅದು ತಪ್ಪಾಯಿತು ಎಂದು .ಹೆಣ್ಣು ಹೆತ್ತ ತಪ್ಪಿಗೆ ನಾವು ಏನೆಲ್ಲಾ ಅನುಭವಿಸ ಬೇಕು.ಹೆಣ್ಣು ಮಕ್ಕಳನ್ನು ರಕ್ಷಣೆ ಯೇ ಒಂದು ಸವಾಲು .ಹೆಣ್ಣು ಮಕ್ಕಳಿಗೆ ಏನಾದರು ಆದರೆ ಎಲ್ಲ ಕಡೆಯಿಂದಲೂ ಮಾತು ಕೇಳಬೇಕು ”ಎಂದು ಖೇದದಿಂದ ಹೇಳಿದರು .

ಒಂದೆಡೆ ಆರು ತಿಂಗಳ ಮಗುವಿನ ಮೇಲೆ ಅತ್ಯಾಚಾರ ,ಇನ್ನೊಂದೆಡೆ ಎಲ್ ಕೆ ಜಿ ಮಗುವಿನ ಮೇಲೆ ಶಾಲಾ ವಾಹನ ಚಾಲಕನಿಂದ ಅತ್ಯಾಚಾರ .ಶಾಲೆಯಲ್ಲಿ ಶಿಕ್ಷಕರೇ  ಲೈಂಗಿಕ ಕಿರು ಕುಳ  ಕೊಟ್ಟ ವಿಚಾರಗಳು ಕೇಳಿ ಬರುತ್ತಿವೆ .
ಮುಂದೆ ಹೇಗೋ ಓದಿ ಕೆಲಸಕ್ಕೆ ಸೇರಿದರೆ ಸಹೋದ್ಯೋಗಿಗಳಿಂದ ಮೇಲಧಿಕಾರಿಗಳಿಂದ  ಕಿರು ಕುಳ ,ಲಿಂಗ ತಾರ ತಮ್ಯ !ಮನೆಯಿಂದ ಕಾಲು ಹೊರಗಿಟ್ಟರೆ ಕಾಮುಕರ ಕಾಟ .ಹೆಣ್ಣು ಮಕ್ಕಳಿಗೆ ಮನೆ ಕೂಡ ಸುರಕ್ಷಿತ ತಾಣ ಅಲ್ಲ .ಮಗಳನ್ನೇ ಅತ್ಯಾಚಾರ ಮಾಡುವ ತಂದೆ, ಚಿಕ್ಕಪ್ಪ, ಮಾವಂದಿರು,ಕೆಲಸದವರು  .ಆರು ತಿಂಗಳ ಮಗು ಎಂದು ನೋಡದೆ ಎಂಬತ್ತೈದು ವರ್ಷದ ಅಜ್ಜಿ ಎಂದು ಬಿಡದೆ ಎಲ್ಲ ವಯೋಮಾನದ ಹೆಂಗಸರನ್ನು ಅತ್ಯಾಚಾರ ಮಾಡಿ ಕೊಂದು ಬಿಸಾಡುವುದು ಅಲ್ಲಲ್ಲಿ ಕಂಡು ಬರುತ್ತಿದೆ !

ಒಂದೆಡೆ ಲೈಂಗಿಕ ದೌರ್ಜನ್ಯ ,ಲಿಂಗ ತಾರತಮ್ಯದ ಪಿಶಾಚಿಗಳು ಕಾಡಿದರೆ ಇನ್ನೊಂದೆಡೆ ಲವ್/ಮತಾಂತರದ ಜಾಲ . ಹಾಡು ಹಗಲೇ ಅಪಹರಿಸಿ ಅತ್ಯಾಚಾರ ಮಾಡಿ ಕೊಂದು ಬಿಸಾಡಿದರೂ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸದ ದುರ್ಬಲ ಕಾನೂನು ವ್ಯವಸ್ಥೆ .ದೂರು ಕೊಡಲು ಹೋದವರನ್ನೇ ಅಪರಾಧಿಗಳಂತೆ ಕಾಡುವ ವ್ಯವಸ್ಥೆ ಎಂಬ ಅವ್ಯವಸ್ಥೆ !
 ಇದೆಲ್ಲಕ್ಕೂ  ಹೆಣ್ಣು ಮಕ್ಕಳನ್ನೂ ಅವರ ಹೆತ್ತವರನ್ನೂ ಹೊಣೆ ಮಾಡುವ ಸಮಾಜ ! 

ದೆಹಲಿಯ ಹುಡುಗಿಯ ವಿಚಾರದಲ್ಲಿ “ಅಣ್ಣಾ ಅಂತ ಬೇಡಿ ಕೊಳ್ಳ ಬೇಕಿತ್ತು ,ಅವಳು ಪ್ರತಿಭಟಿಸ ಬಾರದಿತ್ತು” .”ಅವಳು ಪ್ರತಿಭಟಿಸಿದ ಕಾರಣ ಅವಳನ್ನು ಕೊಂದು ಹಾಕಿದರು” .”ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಗೆ ಹೋಗುವ ಕಾರಣವೇ ಹೀಗೆ ಆಗುವುದು .ನನ್ನ ಮಗಳನ್ನು ನಾನು ಹೊರಗೆ ಅಲೆಯಲು ಬಿಡುವುದಿಲ್ಲ .ಅಲೆಯಲು ಹೋಗಿ ರಾತ್ರಿ ಮಾಡಿ ಬಂದರೆ ಮನೆಗೆ ಸೇರಿಸುತ್ತಿರಲಿಲ್ಲ “ಇತ್ಯಾದಿ ನಾನಾ ಮಾತುಗಳು ಆಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ .

 ಹೆಣ್ಣುಮಕ್ಕಳು ಮೈ ಕೈ ಕಾಣುವ ವೇಷ ಭೂಷಣ ಧರಿಸುವುದೇ ಇದಕ್ಕೆ ಕಾರಣ .ಗಂಡಸರ ಮನಸ್ಸು ಇಂಥ ವೇಷ ಭೂಷಣಗಳಿಂದ ಉತ್ತೇಜನ ಗೊಳ್ಳುತ್ತದೆ .ಹೆಣ್ಣು ಮಕ್ಕಳಿಗೆ ಬೇಗ ಮದುವೆ ಮಾಡಬೇಕು .ಇಲ್ಲದಿದ್ದರೆ ಹೀಗೇ ಆಗುವುದು .ಹೆಣ್ಣು ಮಕ್ಕಳನ್ನು ತಂದೆ ತಾಯಂದಿರು ಹದ್ದು ಬಸ್ತಿನಲ್ಲಿ ಇಡದ ಕಾರಣ ಹೀಗೆ ಆಗುವುದು ಇತ್ಯಾದಿ ಮಾತುಗಳು ಜನರಿಂದ 

ತಮ್ಮ ಮಗಳಿಗೆ ಅನ್ಯಾಯವಾಗಿದೆ ಎಂದು ಸೌಜನ್ಯಾಳ ತಂದೆ ತಾಯಿ ಹೇಳಿದರೆ ಆ ಬಗ್ಗೆ ಮಾತನಾಡುವುದೇ ಅಶ್ಲೀಲತೆ, ನಾಚಿಗೆ ಕೇಡು ಎಂದು ಮಹಿಳಾ ಸಾಹಿತಿ ಯೊಬ್ಬರು ಹೇಳಿದ ವಿಚಾರ ಎಲ್ಲರಿಗೂ ತಿಳಿದದ್ದೇ ಆಗಿದೆ.
ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳನ್ನು ಸಾಮಾನ್ಯವಾಗಿ ಸಾಕಷ್ಟು ಶಿಕ್ಷಣ ಪಡೆದವರೇ ಬಳಸುತ್ತಾರೆ.ಆದರೆ ಫೇಸ್ ಬುಕ್ ನಂತಹ  ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕೂಡಾ  ಹೆಣ್ಣು ಮಕ್ಕಳ ಅವಹೇಳನ ಸಹಿಸಲು ಆಗುವುದಿಲ್ಲ !

ಯಾವಾಗಲೋ ನಮ್ಮ ದೇಶಕ್ಕೆ  ವಿದೇಶಿ ಮಹಿಳೆಯರು ಬಂದಿದ್ದಾಗ ಸೀರೆ ಉಟ್ಟು ತೆಗೆಸಿದ  ಫೋಟೋ ಹಾಗೂ   ಕಾಲೇಜ್ ಕ್ಯಾಂಪಸ್ ನಲ್ಲೋ ಅಥವಾ ಫಲಿತಾಂಶದ ದಿನವೋ ಎಲ್ಲೋ ಒಂದು ಕಡೆ ಒಂದಷ್ಟು ಕುಶಿಯಿಂದ ಸಂಭ್ರಮಿಸುತ್ತಿರುವ ಹುಡುಗಿಯರ ಗುಂಪಿನ ಫೋಟೋ ಅನ್ನು ಎಲ್ಲಿಂದಲೋ ನಕಲು ಮಾಡಿ ಅವರ ಅನುಮತಿ ಪಡೆಯದೇ ಹಾಕಿ ಅವರಿಗೆ(ವಿದೇಶೀಯರಿಗೆ ) ನಮ್ಮ   ಸಂಸ್ಕೃತಿ ಬೇಕು ಇವರಿಗೆ ?(ಆ ಹುಡುಗಿಯರಿಗೆ ) ಎಂದು ಪ್ರಶ್ನಾರ್ಥಕವಾಗಿ ಹಾಕಿ ಶೇರ್ ಮಾಡಿ ಹೆಣ್ಣು ಮಕ್ಕಳನ್ನು ಅವಮಾನಿಸುವುದು ಸಾಮಾನ್ಯ ವಿಚಾರ !ಇಷ್ಟಕ್ಕೂ ಹೀಗೆ ಕೇಳುವವರು ಪುರಾತನ ಭಾರತೀಯ ಸಂಸ್ಕೃತಿಯ ಅನುಸಾರ ಕಚ್ಚೆ ಹಾಕಿ ಜುಟ್ಟು ಬಿಟ್ಟು ಕಿವಿಗೆ ಮತ್ತು ಜುಟ್ಟಿಗೆ ಹೂ ಮುಡಿದ ಗಂಡಸರಲ್ಲ .ಆಧುನಿಕ ಪ್ಯಾಂಟ್ ಶರ್ಟ್ ,ಆಧುನಿಕ ಕೇಶ ಶೈಲಿಯ ವೇಷ ಭೂಷಣ ಹಾಗೂ  ಬದುಕನ್ನು ಅನುಸರಿಸುತ್ತಿರುವ ಇಂದಿನ ಯುವಕರು .

ಇನ್ನು  ಫೇಸ್ ಬುಕ್ ನಂತ ಸಾಮಾಜಿಕ ಜಾಲಗಳಲ್ಲಿ ಹೆಣ್ಣು ಮಕ್ಕಳ  ಅಕೌಂಟ್ ಅನ್ನು ಹ್ಯಾಕ್ ಮಾಡಿ ಅಲ್ಲಿಂದ ಅವರ ಫೋಟೋ ಕದ್ದು ಅದನ್ನು ಕೆಟ್ಟದಕ್ಕೆ ಬಳಸಿ ಆ ಹೆಣ್ಣು ಮಕ್ಕಳ ಬದುಕನ್ನು ಹಾಳು ಗೆಡವುವ ಅನೇಕ ದುಷ್ಟರು ಇದ್ದಾರೆ .ಇಂಥಹಾದ್ದೆ ಕಾರಣಕ್ಕೆ ಜೀವ ಕಳೆದು ಕೊಂಡ ಯುವತಿಯೊಬ್ಬಳ ಫೋಟೋ ಹಾಕಿ “ಹೆಣ್ಣು ಮಕ್ಕಳೇ ಎಚ್ಚರ .ಯಾರು ಹೆಣ್ಣು ಮಕ್ಕಳು ಫೇಸ್ ಬುಕ್ ನಂಥ ಸಾಮಾಜಿಕ ತಾಣಗಳಲ್ಲಿ  ಮುಖ ತೋರಿಸ ಬೇಡಿ !”ಎಂದು ಬರೆದು ಶೇರ್ ಮಾಡಿರುವುದು ಅಲ್ಲಲ್ಲಿ ಕಂಡು ಬರುತ್ತದೆ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇರುವಂತೆ ತೋರಿಸಿ ಕೊಂಡು ಅದನ್ನು ಸಾವಿರಾರು ಮಂದಿ ಶೇರ್ ಮಾಡುತ್ತಾರೆ .ಆದರೆ ಒಬ್ಬನೇ ಒಬ್ಬ ವ್ಯಕ್ತಿ ಕೂಡಾ “ಹೆಣ್ಣು ಮಕ್ಕಳ ಅಕೌಂಟ್  ನಿಂದ ಕದ್ದು ಅವರ ಫೋಟೋ ತೆಗೆದು ದುರುಪಯೋಗ ಮಾಡ ಬೇಡಿ .ಹೆಣ್ಣು ಮಕ್ಕಳು ನಮ್ಮಂತೆ ಮನುಷ್ಯರು ಅವರಿಗೆ ಎಲ್ಲರಂತೆ ಬದುಕುವ ಹಕ್ಕಿದೆ .ಅವರ ಫೋಟೋಗಳನ್ನು ದುರುಪಯೋಗ ಮಾಡಬೇಡಿ ಎಂದು ಸಂದೇಶ ನೀಡಿದ್ದು ನನ್ನ ಗಮನಕ್ಕೆ ಬಂದಿಲ್ಲ .

ಹೆಂಗಸರು ಸಾಮಾಜಿಕ ಅಂತರ್ಜಾಲ ತಾಣಕ್ಕೆ ಬಂದರೆ ಸಾಕು ಹಾಯ್  ಹಲೋ  ಕಾಫಿ ಆಯ್ತಾ ? ತಿಂಡಿ ಆಯ್ತಾ ?ಅಂತ ವ್ಯರ್ಥವಾಗಿ ಮಾತನಾಡಿ ಕಾಡುವರು  ಅನೇಕರು ! ಕೆಟ್ಟ ಮೆಸೇಜ್ /ಚಿತ್ರಗಳನ್ನು ಕಳುಹಿಸಿ ಕಾಡುವ ಪ್ರೇತಗಳೂ ಇವೆ ಈ
ಎಲ್ಲ ಶೆಲ್ಯಾಣತ್ತು ಕೇಳುವಾಗ ನಿಜವಾಗಿಯೂ ಯಾರಿಗಾದರೂ ಹೆಣ್ಣು ಮಗು ಬೇಕು ಎಂದೆನಿಸಲು ಸಾಧ್ಯವೇ ?!
ಖಂಡಿತಾ ಇಲ್ಲ .ಆದರೆ ಇದರ ಪರಿಣಾಮ ಏನಾದೀತು ಎಂದು ಆಲೋಚಿಸಿದರೆ ವಿಷಾದವಾಗುತ್ತದೆ !!

 ಹೌದು! “ಹೆಣ್ಣು ಮಕ್ಕಳಿಗೆ ತಾಯಿಯ ಗರ್ಭ ಕೂಡ ಸುರಕ್ಷಿತವಲ್ಲ “
 ನಮ್ಮ ಉಪರಾಷ್ಟ್ರ ಪತಿಗಳಾಗಿದ್ದ ಕೆ ಆರ್ ನಾರಾಯಣ್ ಹೇಳಿರುವುದು ನಿಜ .ಹೆಣ್ಣು ಮಕ್ಕಳನ್ನು ತಾತ್ಸಾರದಿಂದ ನೋಡಿ ವರದಕ್ಷಿಣೆ ,ಶೋಷಣೆ ಮಾಡಿದ್ದಲ್ಲದೆ ಹೆಣ್ಣು ಮಗುವನ್ನು ತಾಯಿಯ ಗರ್ಭದಲ್ಲಿರುವಾಗಲೇ ಚಿವುಟಿ ಹಾಕಿದ್ದರಿಂದ ಈಗಾಗಲೇ ಗಣನೀಯವಾಗಿ ಕುಸಿದಿದೆ.2011 ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ಪ್ರತಿ ಸಾವಿರ ಗಂಡುಗಳಿಗೆ  978  ಹೆಂಗಸರು ಇದ್ದಾರೆ .ಆದರೆ ಮಕ್ಕಳ  ಅಂಕಿ ಅಂಶ ಪರಿಗಣಿಸಿದಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ 948  ಹೆಣ್ಣು ಮಕ್ಕಳು ಇದ್ದಾರೆ 

ಈಗಾಗಲೇ ಲಕ್ಷಾಂತರ ಮಂದಿ ಹೆಣ್ಣು ಮಕ್ಕಳು ಕಡಿಮೆಯಾಗಿದ್ದಾರೆ ! ಹೆಣ್ಣಿನ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ .
ಇದರ ಪರಿಣಾಮ ಸಮಾಜದ ಮೇಲೆ ಈಗಾಗಲೇ ಕಾಣಿಸಿಕೊಂಡಿದೆ .ವಿಶೇಷವಾಗಿ ಒಂದು ಸಮುದಾಯದಲ್ಲಿ ಕನ್ಯೆಯರ ಬರ ಕಾಣಿಸಿಕೊಂಡಿದೆ .ಇದರಿಂದಾಗಿ ಹಳ್ಳಿಯಲ್ಲಿರುವ ಕೃಷಿಕ ಹುಡುಗರಿಗೆ ,ಸಣ್ಣ ಪುಟ್ಟ ಅಂಗಡಿ ಇಟ್ಟು ಬದುಕುವವರಿಗೆ ,ಸಣ್ಣ ಪುಟ್ಟ ಕೆಲಸದಲ್ಲಿ ಇರುವವರಿಗೆಮದುವೆಯಾಗಲು  ಹುಡುಗಿಯರು ಸಿಗುತ್ತಿಲ್ಲ .ತಂದೆ ತಾಯಂದಿರು ತಮ್ಮ ಮಗಳಿಗೆ ಒಳ್ಳೆಯ ಕೆಲಸದಲ್ಲಿರುವ ಪೇಟೆಯಲ್ಲಿರುವ ಸ್ಥಿತಿಗತಿ ಇರುವ ಹುಡುಗರು ಸಿಗುವಾಗ ಹಳ್ಳಿಯಲ್ಲಿ ಇರುವ ,ಸರಿಯಾದ ಉದ್ಯೋಗ ಆರ್ಥಿಕ ಭದ್ರತೆ ಇಲ್ಲದಿರುವ ಹುಡುಗರಿಗೆ ಕೊಡುತ್ತಾರೆಯೇ ?ಕೊಡ ಬೇಕು ಎಂದು ಹೇಳುವುದು ಸರಿಯಲ್ಲ ಅದು ಅವರ ಇಷ್ಟ . ಈ ಬಗ್ಗೆ ಹಳ್ಳಿ ಹುಡುಗರನ್ನು ಮದುವೆಯಾಗಲು ಹುಡುಗಿಯರು ಮುಂದಾಗದ ಬಗ್ಗೆ ಯಾವಾಗಲೂ ಸಾಮಜಿಕ ತಾಣಗಳಲ್ಲಿ ದೂಷಣೆಯ ಮಾತುಗಳು ಆಗಾಗ ಕೇಳಿ ಬರುತ್ತವೆ

ಹುಡುಗರಿಗೆ ಹುಡುಗಿ ಸಿಗದೇ ಇರುವುದಕ್ಕೆ ತಂದೆ ತಾಯಿ ಕೊಡದೇ ಇರುವುದು ಕಾರಣ ಅಲ್ಲ ,ಹುಡುಗರಿಗೆ ಹುಡುಗಿ ಸಿಗದ್ದಕ್ಕೆ ಗಂಡು ಹೆಣ್ಣಿನ ಅನುಪಾತ ಕುಸಿದದ್ದೇಮುಖ್ಯವಾದ  ಕಾರಣ. ತೀರಾ ಇತ್ತೀಚೆಗಿನವರೆಗೂ  ಅಂದರೆ ಹದಿನೈದು ವರ್ಷ ಹಿಂದಿನ ತನಕವೂ   ಕನ್ಯೆಯರ ಕೊರತೆ ಇರುವ ಆ ಸಮುದಾಯದಲ್ಲಿ  ವರ ದಕ್ಷಿಣೆ ತೆಗೆದುಕೊಳ್ಳುತ್ತಿದ್ದರು .ಅದರಲ್ಲೂ ತುಸು ಕಪ್ಪು ಇದ್ದು ಹೆಚ್ಚು ಓದಿರದ ಹುಡುಗಿಗೆ ಮದುವೆಯಾಗ ಬೇಕಿದ್ದರೆ ಕೈ ತುಂಬಾ ವರದಕ್ಷಿಣೆ ನೀಡ ಬೇಕಿತ್ತು ಆದ್ರೆ ಈಗ ಹೆಣ್ಣಿನ ಸಂಖ್ಯೆ ಕಡಿಮೆ ಆದ ಕಾರಣ ವರದಕ್ಷಿಣೆ  ಈಗ ಆ ಸಮುದಾಯದಲ್ಲಿ ಇಲ್ಲವೇ ಇಲ್ಲ .ಇಲ್ಲಿ ನಿದಾನಕ್ಕೆ ವಧೂ  ದಕ್ಷಿಣೆ ಪದ್ಧತಿ ಆರಂಭವಾದರೂ ಆದೀತು! ಆದರೆ .ಇಷ್ಟಾಗಿದ್ದರೂ ಇನ್ನೂ ಕೂಡ ಜನರು ಎಚ್ಚತ್ತು ಕೊಂಡಿಲ್ಲ .ಹೆಣ್ಣಿನ ಶೋಷಣೆ ನಿಂತಿಲ್ಲ .

.ಈಗ ಎಲ್ಲ ಕ್ಷೇತ್ರದಲ್ಲು ಹೆಣ್ಣು  ಮಕ್ಕಳು ಮುಂದುವರಿಯುತ್ತಿದ್ದಾರೆ .ಅವರಿಗೆ ಶಿಕ್ಷಣ ಸಿಗುವಂತೆ ಮಾಡುತ್ತಿದ್ದಾರೆ .ಹೆಣ್ಣು ಮಕ್ಕಳಿಗೂ ಗಂಡು ಮಕ್ಕಳಿಗೆ ಸಮಾನವಾದ ಸ್ಥಾನ ಮಾನ ಸಿಗುತ್ತಾ ಇದೆ ಆದ್ದರಿಂದ ಇನ್ನು ಹೆಣ್ಣು ಮಕ್ಕಳ ಸಂಖ್ಯೆ ಕುಸಿಯಲಾರದು ಎಂದು ತುಸು ನಿರಾಳತೆ ಇತ್ತು !
ಆದರೆ ಆ ನಿರಾಳತೆ ಹೆಚ್ಚು ಸಮಯ ಇರಲಿಕ್ಕಿಲ್ಲ .ಅಂದು ವರದಕ್ಷಿಣೆ ಶೋಷಣೆ ,ಬಡತನ ದಿಂದಾಗಿ ಹೆಣ್ಣು ಮಗು ಬೇಡ eega ಎಅತ್ಯಾಚಾರ ಕಿರುಕುಳಗಳ ಕಾರಣಕ್ಕೆ ಹೆಣ್ಣು ಮಗು ಬೇಡ ಎನಿಸಿದ್ದರೆ ಅದರಲ್ಲಿ ಆಶ್ಚರ್ಯ ಏನೂ ಇಲ್ಲ.

ಇಂದು ಎಲ್ಲೆಡೆ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ,ಕೊಲೆ ,ಲೈಂಗಿಕ ಕಿರುಕುಳ ,ಲಿಂಗ ತಾರತಮ್ಯ , ಲವ್ /ಮತಾಂತರದ  ಜಾಲ ಮೊದಲಾದ ಕಾರಣಕ್ಕೆ ಹೆಣ್ಣು ಮಗು  ಭಾರ ಎನಿಸುತ್ತಿದೆ .ಆದ್ದರಿಂದ ಎಲ್ಲರೂ ಎಚ್ಚತ್ತು ಕೊಳ್ಳ ಬೇಕಾಗಿದೆ .ಹೆಣ್ಣು ಮಕ್ಕಳ ಸುರಕ್ಷಿತತೆ ಬಗ್ಗೆ ಆಲೋಚಿಸ ಬೇಕು .ಅತ್ಯಾಚಾರ ಮಾಡಿದವರಿಗೆ ,ಕಿರುಕುಳ ನೀಡುವವರಿಗೆ  .ಮತಾಂತರದ ಜಾಲದ ಮೂಲಕ ಹೆಣ್ಣು ಮಕ್ಕಳನ್ನು ಖೆಡ್ಡಾಕ್ಕೆ ಬೀಳಿಸುವವರಿಗೆ, ಶೀಘ್ರವಾಗಿ ಶಿಕ್ಷೆ  ಸಿಗುವಂತೆ ಮಾಡ ಬೇಕು .ಜೊತೆಗೆ ಸಮಾಜದಲ್ಲಿಯೂ ಈ ಬಗ್ಗೆ ಜಾಗೃತಿ ಮೂಡಿಸ ಬೇಕು

ಅತ್ಯಾಚಾರಿಗಳಿಗೆ ಬಲವಾದ ಶಿಕ್ಷೆ  ಶೀಘ್ರವಾಗಿ ಆಗಬೇಕು ,ಜೊತೆಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸಬೇಕು ",ಹೆಣ್ಣು ಭೋಗದ ವಸ್ತುವಲ್ಲ ,ಅವಳಿಗೂ ಎಲ್ಲರಂತೆ ಬದುಕುವ ಸ್ವಾತಂತ್ರ್ಯವಿದೆ" ಎಂಬುದನ್ನು ಮನಗಾಣಿಸಬೇಕು.
ಶಾಲೆಗೆ ಹೋಗಿ ಬರುವ ಹೆಣ್ಣುಮಕ್ಕಳಿಗೆ  ಈ ಬಗ್ಗೆ ತಿಳುವಳಿಕೆ ನೀಡಬೇಕು .ಒಬ್ಬೊಬ್ಬರೇ ಓಡಾಡದೆ ಗುಂಪಿನಲ್ಲಿ ಹೋಗಿ ಬರುವಂತೆ ತಿಳುವಳಿಕೆ ನೀಡಬೇಕು

ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹೆಣ್ಣು ಮಕ್ಕಳ ಅವಹೇಳನ ನಿಲ್ಲಿಸಬೇಕು.
ಹೆಣ್ಣು ಮಕ್ಕಳ ಮೇಲಿನ ಯಾವುದೇ ತರದ ದೌರ್ಜನ್ಯವನ್ನು ,ಜಾತಿ ಮತ,ಪಂಥ ,ಧರ್ಮ , ಪಕ್ಷ ಎಂಬ ಭೇದವಿಲ್ಲದೆ ಒಗ್ಗಟ್ಟಾಗಿ ವಿರೋಧಿಸ ಬೇಕು .ಪಕ್ಕದ ಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೂ ಹರಡಬಹುದು ಎಂಬುದನ್ನು ನಾವು ಮರೆಯಬಾರದು .

ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು
ಸರ್ಕಾರಿ ಪಿಯು ಕಾಲೇಜು
ಬೆಳ್ಳಾರೆ ,ಸುಳ್ಯ

No comments:

Post a Comment