Sunday 20 November 2016

ಭೂತಾರಾಧನೆಗೊಂದು ಸಮೃದ್ಧ ಬ್ಲಾಗ್ --ಭೂತಗಳ ಅದ್ಭುತ‌ ಜಗತ್ತು - ಪುನೀತ್ ಸಿದ್ಧ ಕಟ್ಟೆ

ಪುನೀತ್‌ ಎಂ.ಸಿದ್ದಕಟ್ಟೆ ತುಳುನಾಡಿನ ಸಂಸ್ಕೃತಿ ಮಾಹಿತಿ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿದಾಗ ಮಾಹಿತಿ ಸಿಗುವುದು ಬಹು ಕಡಿಮೆ. ಈ ಕೊರತೆ ನೀಗಿಸಲು ಭೂತಾರಾಧನೆಯ ಅದ್ಭುತ ಜಗತ್ತಿನ ಬ್ಲಾಗ್‌ ತುಳು ಸಂಸ್ಕೃತಿಯಲ್ಲಿನ ಸಾಕಷ್ಟು ವಿಚಾರ ಅನಾವರಣಗೊಳಿಸಿದೆ. ತುಳು ಸಂಸ್ಕೃತಿ ಬಗ್ಗೆ ಅಧ್ಯಯನ ಮಾಡಿ 2 ಡಾಕ್ಟರೇಟ್‌ ಪಡೆದ ಡಾ.ಲಕ್ಷ್ಮೀ ಜಿ.ಪ್ರಸಾದ್‌ ಈ ಅತ್ಯಪರೂಪದ ಬ್ಲಾಗ್‌ನ ರೂವಾರಿ. ಹಲವು ವರ್ಷಗಳಿಂದ ತುಳು ನಾಡಿನ ಭೂತಗಳ ಇತಿಹಾಸ, ಹಿನ್ನೆಲೆ, ಆರಾಧನೆ ಸ್ವರೂಪ ಒಳಗೊಂಡ ವಿಚಾರ ನಿರಂತರ ಸಂಶೋಧನೆ ಮಾಡಿ, ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ವಿಚಾರಗಳ 590 ಬರಹÜ ಬ್ಲಾಗ್‌ನಲ್ಲಿವೆ. ಈ ಸಂಶೋಧನಾ ಬ್ಲಾಗ್‌ ಜನಪ್ರಿಯವಾಗಿದ್ದು, ತುಳುನಾಡಿನ ಜನತೆಗೆ ಮಾತ್ರ ಸೀಮಿತವಾಗಿಲ್ಲ. ದೇಶ-ವಿದೇಶಗಳ 1.70 ಲಕ್ಷ ಕ್ಕಿಂತ ಹೆಚ್ಚಿನ ಬ್ಲಾಗ್‌ ಓದುಗರನ್ನು ಹೊಂದಿದೆ!. ಇಂಗ್ಲಿಷ್‌ನಲ್ಲೂ ಮಾಹಿತಿ: ಭೂತಾರಾಧನೆಯ ಉಪಯುಕ್ತ ಮಾಹಿತಿಯೊಂದಿಗೆ ಸಂಬಂಧಿಸಿದ ಫೋಟೊ, ಜಾನಪದ, ಮಹಿಳೆಯರ ಬದುಕು, ನಾನಾ ಭಾಷೆಯ ಸಾಹಿತ್ಯಗಳ ಬರಹ ಬ್ಲಾಗ್‌ನಲ್ಲಿದೆ. ದೇಶ-ವಿದೇಶಗಳ ಅನೇಕ ಸಂಶೋಧಕರು, ಅಧ್ಯಯನಕಾರರು ಮಾಹಿತಿ ಪಡೆದಿದ್ದಾರೆ. ಅನೇಕ ಕನ್ನಡೇತರ ವಿದ್ವಾಂಸರ, ಜನರ ಕೋರಿಕೆಯಂತೆ ಇತ್ತೀಚೆಗೆ ತುಳುನಾಡಿನ ಭೂತಾರಾಧನೆ ಕುರಿತ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಕೂಡ ಆರಂಭಿಸಿದ್ದಾರೆ. ಡಾ.ಲಕ್ಷ್ಮಿ ಜಿ.ಪ್ರಸಾದ್‌ ಸಂಶೋಧನೆಯಲ್ಲಿ ಕಂಡುಕೊಂಡ ಅಪರೂಪದ ವಿಚಾರಗಳನ್ನು ಜನಸಾಮಾನ್ಯರಿಗೂ ಭೂತಗಳ ಅದ್ಭುತ ಜಗತ್ತು ಬ್ಲಾಗ್‌ ಮೂಲಕ ತಿಳಿಸುವಂತೆ ಮಾಡುತ್ತಿದ್ದು, ಭೂತಾರಾಧನೆಯಲ್ಲಿ ಅಡಕವಾಗಿರುವ ಇತಿಹಾಸದ ಎಳೆಗಳನ್ನು ಪತ್ತೆ ಮಾಡಿದ್ದಾರೆ. ಈ ತನಕ ಗೊತ್ತಿರದ 400ಕ್ಕೂ ಹೆಚ್ಚಿನ ದೈವಗಳ ಅಧ್ಯಯನ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಇಂತಹ ಹಲವಾರು ವಿಚಾರಗಳು ಬ್ಲಾಗ್‌ನಲ್ಲಿದೆ. ತುಳುನಾಡಿನ ಸಂಸ್ಕೃತಿ ಖಜಾನೆ: ಡಾ. ಲಕ್ಷ್ಮೀ ಜಿ.ಪ್ರಸಾದ್‌ ಮೂಲತಃ ಕಾಸರಗೋಡಿನ ಕೋಳ್ಯೂರಿನವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರಕಾರಿ ಪಪೂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಇವರ ಸುಮಾರು 20ಕ್ಕೂ ಅಧಿಕ ಪ್ರಕಟಿತ ಪುಸ್ತಕಗಳು, 200ಕ್ಕೂ ಅಧಿಕ ಶೈಕ್ಷ ಣಿಕ,ವೈಚಾರಿಕ, ಸಂಶೋಧನ್ಮಾಕ ಬರಹಗಳು ರಾಜ್ಯದ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟವಾಗಿವೆ. ಡಾ. ಲಕ್ಷ್ಮೀ ಜಿ.ಪ್ರಸಾದ್‌ ಕನ್ನಡ, ಸಂಸ್ಕೃತಿ ಮತ್ತು ಹಿಂದಿ ಎಂಎ ಪದವಿ ಪಡೆದಿದ್ದಾರೆ. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ -ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನೆ ಮಹಾಪ್ರಬಂಧ ರಚಿಸಿ ಹಂಪಿ ಕನ್ನಡ ವಿವಿಯಲ್ಲಿ ಡಾಕ್ಟರೇಟ್‌ ಗಳಿಸಿದ್ದಾರೆ. ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದ್ರಾವಿಡ ವಿವಿಯಿಂದ 2ನೇ ಡಾಕ್ಟರೇಟ್‌ ಗಳಿಸಿದ್ದಾರೆ. 150 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ರಾಜ್ಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಬ್ಲಾಗ್‌ ಬರಹಗಳು ಕನ್ನಡ, ಇಂಗ್ಲಿಷ್‌ನಲ್ಲಿವೆ. 590 ಲೇಖನಗಳಿವೆ. ಕನ್ನಡ ಜನಪ್ರಿಯ ಬ್ಲಾಗ್‌ಗಳಲ್ಲಿ ಮುಂಚೂಣಿಯಲ್ಲಿದೆ. ಮಹಿಳೆಯರ ಬದುಕು, ಜಾನಪದ, ನಾನಾ ಭಾಷೆ ಸಾಹಿತ್ಯಗಳ ಬರಹಗಳೂ ಇದೆ. ಈ ಬ್ಲಾಗ್‌ ಮೂಲಕ ತುಳುನಾಡಿನ ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ಹಲವಾರು ವಿಚಾರ ಪಡೆಯಬಹುದು. ಬ್ಲಾಗ್‌ ಬರಹಗಳು ತನ್ನದೇ ಆದ ಓದುಗರನ್ನು ಹೊಂದಿದೆ. -ಡಾ. ಲಕ್ಷ್ಮೀ ಜಿ.ಪ್ರಸಾದ್‌

No comments:

Post a Comment