Sunday 4 March 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು- 430 ಕುಂಡೋದರ ದೈವ - ಡಾ.ಲಕ್ಷ್ಮೀ ಜಿ ಪ್ರಸಾದ

ಬಾರಕೂರಿನ ದೇವ ಪಾಂಡ್ಯ ಸಮುದ್ರದ ವ್ಯಾಪಾರಕ್ಕಾಗಿ ಹಡಗನ್ನು ನಿರ್ಮಾಣ ಮಡುತ್ತಾನೆ.ಹಡಗಿನ ನಿರ್ಮಾಣಕ್ಕಾಗಿ‌ಕಡಿದ ಒಂದು ಮರದಲ್ಲಿ ಕುಂಡೋದರ ಎಂಬ ಭೂತ ವಾಸವಾಗಿರುತ್ತದೆ.ತಾನು ಇದ್ದ ಮರವನ್ನು ಕಡಿದುದಕ್ಕಾಗಿ ದೈವ ಕೋಪಗೊಳ್ಳುತ್ತದೆ.
ಹಡಗನ್ನು ಎಷ್ಟು ಪ್ರಯತ್ನ ಮಾಡಿದರೂ ಸಮುದ್ರಕ್ಕೆ ಇಳಿಸಲು ಸಾಧ್ಯವಾಗುವುದಿಲ್ಲ.ಆಗ ಚಿಂತಿಸುತ್ತಾ ಕುಳಿತ ದೇವ ಪಾಂಡ್ಯನಲ್ಲಿ  ನರಬಲಿಯನ್ನು ಕೇಳುತ್ತದೆ .

ಆಗ ತನ್ನ ಏಳು ಜನ ಮಕ್ಕಳಲ್ಲಿ ಒಬ್ಬನ್ನು ಬಲಿಕೊಡಲು ಸಿಧ್ದನಾಗುತ್ತಾನೆ
ಅದಕ್ಕೆ ಒಪ್ಪದ ಅವನ ಮಡದಿ‌ಮಕ್ಕಳನ್ನು ಕಟ್ಟಿಕೊಂಡು ತಂದೆ ಮನೆಗೆ ಹೋಗುತ್ತಾಳೆ
ಅಣ್ಣನ ಕಷ್ಟ ನೋಡಿದ ತಂಗಿ ತನ್ನ ಒಬ್ಬನೇ ಒಬ್ಬ ಮಗನನ್ನು ಬಲಿ ಕೊಡಲು ಹೇಳುತ್ತಾಳೆ ಮೊದಲಿಗೆ ಒಪ್ಪದೇ ಇದ್ದರೂ ನಂತರ ಅವ ಬಲವಂತಕ್ಕೆ ಅಳಿಯ ಜಯಪಾಂಡ್ಯನನ್ನು ಬಲಿಕೊಡಲು ಸಿದ್ಧನಾಗುತ್ತಾನೆ.
ಆಗ ಕುಂಡೋದರ ದೈವ ನರಬಲಿ ಬೇಡ ಎರಡು ಹನಿ ರಕ್ತ ಸಾಕು ಎನ್ನುತ್ತದೆ ಹಾಗೆ ಜಯಪಾಂಡ್ಯನ ಕಿರುಬೆರಳಿ‌ಇಂದ ಎರಡು ಹನಿ ರಕ್ತ ಬಲಿ ಕೊಡುತ್ತಾರೆ.
ಹಡಗು ಸಮುದ್ರಕ್ಕೆ ಇಳಿದು ವ್ಯಾಪಾರದಲ್ಲಿ ದೆವ ಪಾಂಡ್ಯ ತುಂಬಾ ಲಾಭ ಗಳಿಸುತ್ತಾನೆ
 ಎಲ್ಲವನ್ನೂ ತನ್ನ  ತಂಗಿ ಮಗ ಅಳಿಯ ಜಯಪಾಂಡ್ಯನಿಗೆ ನೀಡುತ್ತಾನೆ
 ಅಲ್ಲಿಂದ ತುಳುನಾಡಿನಲ್ಲಿ ಅಳಿಯ ಕಟ್ಟು ಬಳಕೆಗೆ ಬಂತು
 ಕುಂಡೋದರ ಭೂತ ಒಲಿದ ಕಾರಣ ಜಯ ಪಾಂಡ್ಯ ನಿಗೆ ಭೂತಾಳ ಪಾಂಡ್ಯ ಎಂಬ ಹೆಸರು ಬಂತು
 ಕುಂಡೋದರ ದೈವ ಶಿವನ ಪ್ರಮಥ ಗಣ ಎಂಬ ನಂಬಿಕೆ ಇದೆ
ಕುಂಡೋದರ ದೈವಕ್ಕೆ ಕೋಲ ನೀಡಿ ಕೆಲವೆಡೆ ಆರಾಧಿಸುತ್ತಾರೆ
ಡಾ.ಗುರುರಾಜ ಭಟ್ ಅವರು ಜಯ ಪಾಂಡ್ಯ ಮಧುರೆಯ ರಾಜ ವಂಶದವನು.ಆತನ ತಂದೆ ಸೌಮ್ಯವೀರ ಪಾಂಡ್ಯ ತಾಯಿ ಸತ್ಯವತಿ.ಈಕೆ ದೇವ ಪಾಂಡ್ಯನ ತಂಗಿ ಎಂದು ಹೇಳಿದ್ದಾರೆ‌.ಜಯ ಪಾಂಡ್ಯನ ತಂದೆ ಸೌಮ್ಯ ವೀರ ಪಾಂಡ್ಯನು ಕುಂಡೋದರ ದೈವದ ಭಕ್ತನಾಗಿದ್ದನು.ಹಾಗಾಗಿ ದೈವ ಅವನ ಮಗ ಜಯ ಪಾಂಡ್ಯ ನನ್ನು ಅನುಗ್ರಹಿಸಿತು‌.ನರಬಲಿ ಬೇಡವೆಂದು ಹೇಳುತ್ತದೆ ಮತ್ತು ದೇವ ಪಾಂಡ್ಯ ನ ಎಲ್ಲ ಸಂಪತ್ತಿಗೆ ಜಯಪಾಂಡ್ಯನನ್ನು ಹಕ್ಕುದಾರನನ್ನಾಗಿಸಿ ಅಳಿಯ ಕಟ್ಟು ಪದ್ದತಿಯನ್ನು ಜಾರಿಗೆ ತರುವ ಹಾಗೆ ಮಾಡುತ್ತದೆ‌
"ಜಯ ಪಾಂಡ್ಯ/ಭೂತಾಳ ಪಾಂಡ್ಯನು ಕುಂಡೋದರ ದೈವದ ಸಹಾಯದಿಂದ ಸಿದ್ಧವರ್ಮನೆಂಬ ಅರಸನನ್ನು ಯುದ್ಧದಲ್ಲಿ ಸೋಲಿಸಿ ಬಾರಕೂರಿನ ಅರಸನಾದನು. ಇವನ ಸಂತತಿಯವರು ದೀರ್ಘಕಾಲ ಬಾ ರಕೂರಿನಲ್ಲಿ ಆಳ್ವಿಕೆ ಮಾಡುತ್ತಾರೆ ಇವನ ಕಾಲದಿಂದ ತುಳುನಾಡಿನಲ್ಲಿ ಅಳಿಯ ಸಂತಾನ ಪದ್ಧತಿ ಜಾರಿಗೆ ಬರುತ್ತದೆ. ಮುಂದೆ ಕುಂಡೋದರ ಭೂತ ಶಿವನ ಸಭಗೆ ಹೋಗಿ ಶಿವನಿಂದ ಉಜ್ಜಯಿನಿಯ ವಿಕ್ರಮಾದಿತ್ಯನ ಸಿಂಹಾಸನವನ್ನು ಕೇಳಿ ಪಡೆದು ಆ ಸಿಂಹಾಸನದಲ್ಲಿ ಭೂತಾಳಪಾಂಡ್ಯನಿಗೆ ಪಟ್ಟ ಕಟ್ಟುತ್ತದೆ. (ಕ್ರಿ.ಶ. 77-148) ಹಾಗೂ ಮುಂದೆ ಜಯಪಾಂಡ್ಯನು ಅಳಿಯ ಕಟ್ಟು ಕಟ್ಟಲೆಗನ್ನು ರಚಿಸುತ್ತಾನೆ. (ಗುರುರಾಜ ಭಟ್ :ಬಾರಕೂರು ಪು.41-44) ಭೂತಾಳಪಾಂಡ್ಯನು ಕುಂಡೋದರನಿಗೆ ಗುಡಿಯೊಂದನ್ನುಕಟ್ಟಿಸಿದನು......” ಎಂದು ಡಾ.ಗುರುರಾಜ ಭಟ್ ಹೇಳಿದ್ದಾರೆ.

ಭೂತಾಳಪಾಂಡ್ಯನು ಕುಂಡೋದರನಿಗೆ ಮಹೀಶಾಸುರನೆಂಬ ಹೆಸರಿಟ್ಟು ಆತನಿಗೆ ಸಾವಿರ ಪಡಿ ಅಕ್ಕಿ ಸಹಸ್ರ ಪಡಿ ಅರಳು, ಸಾವಿರ ಸೀಯಾಳ, ಬಾಳೆಹಣ್ಣು, ಅಜ ಕುಕ್ಕುಟಗಳಿಂದ ಬಲಿಕೊಟ್ಟು ಭೂತ ರಾಜ ಕುಂಡೋದರನನ್ನು ಪ್ರಾರ್ಥಿಸುತ್ತಾರೆ. ಆಗ ಕುಂಡೋದರ ಭೂತ ಅಲ್ಲಿದ್ದ ಮನುಷ್ಯನ ಮೇಲೆ ಮೈತುಂಬಿ ಬಂದು ಅಳಿಯಕಟ್ಟನ್ನು ನಿರ್ದೇಶಿಸುತ್ತದೆ ಎಂದು ಸ್ಥಳೀಯ ಐತಿಹ್ಯದಿಂದ ತಿಳಿದು ಬರುತ್ತದೆ. ಇಲ್ಲಿ ಒಂದೆಡೆ ಮಹಾಬಲನೇ ಮಹಿಷಾಸುರ ಎಂದು ತಿಳಿದು ಬಂದರೆ, ಇನ್ನೊಂದೆಡೆ ಕುಂಡೋದರ ದೈವವೇ ಮಹಿಷಾಸುರನೆಂಬ ಹೆಸರನ್ನು ಪಡೆದಿರುವ ಬಗ್ಗೆ ತಿಳಿದು ಬರುತ್ತದೆ. ಭೂತಾಳಪಾಂಡ್ಯನ ತಂದೆ ಕುಂಡೋದರ ದೈವದ ಭಕ್ತನೆಂದೂ ಕುಂಡೋದರ ಶಿವನ ಪ್ರಮಥ ಗಣವೆಂದೂ ಹೇಳಲಾಗಿದೆ.
ಬಲಿಯೇಂದ್ರನಿಗೆ ಮಹೀಪಾಲಕನೆಂಬರ್ಥದಲ್ಲಿ ಮಹೀಶಾಸುರನೆಂಬ ಹೆಸರು ಇತ್ತು. ಕುಂಡೋದರ ದೈವವೂ ಮಹೀಶಾಸುರನೆಂಬ ಹೆಸರನ್ನು ಪಡೆದಿದೆ. ಆದ್ದರಿಂದ ಮೋಸ ಹೋದ ಬಲಿಯೇಂದ್ರನು ಮರಣಾನಂತರ ಕುಂಡೋದರ ದೈವವಾಗಿ ಆರಾಧಿಸಲ್ಪಟ್ಟಿರಬಹುದು ಎಂದು ಊಹಿಸಬಹುದು. ಅರಸು ಆರಾಧನೆ ಪದ್ಧತಿ ಬೆಳೆದು ಬಂದಿರುವ ತುಳುನಾಡಿನಲ್ಲಿ ಇದು ಅಸಹಜ ವಿಚಾರ ಎನಿಸುವುದಿಲ್ಲ.
ಕುಂಡ ಎಂದರೆ ಮಣ್ಣಿನ ಮಡಿಕೆ. ಬೆರ್ಮೆರರ್ನ್ನು ಮಣ್ಣಿನ ಮಡಿಕೆಗಳ ಮೂಲಕ ಆರಾಧಿಸುವ ಕ್ರಮ ಪ್ರಚಲಿತವಿದೆ. ಅನಂತಾಡಿಯ ನಾಗಬ್ರಹ್ಮಸ್ಥಾನದಲ್ಲಿ ‘ಬೆರ್ಮೆರ್’ ಎಂದು ಹಳೆಯ ಮಣ್ಣಿನ ಮಡಿಕೆಗಳನ್ನು ಆರಾಧಿಸುತ್ತಾರೆ. ಚೌಕಾರುಗುತ್ತಿಯಲ್ಲಿ ಮಣ್ಣಿನ ಮಡಿಕೆಗಳನ್ನು ಮೂರಿಳು ಎಂದು ಆರಾಧಿಸುತ್ತಾರೆ. ಗರಡಿಗಳಲ್ಲಿ, ಆಲಡೆಗಳಲ್ಲಿ ಹಾಗೂ ಇತರೆಡೆಗಳಲ್ಲಿ ಬ್ರಹ್ಮಲಿಂಗ ಅಥವಾ ಬ್ರಹ್ಮರ ಮೂರ್ತಿಗಳು ಇಲ್ಲದಿರುವಲ್ಲಿ ಬೆರ್ಮರನ್ನು ಮಣ್ಣಿನ ಕಲಶದಲ್ಲಿ ಸಂಕಲ್ಪಿಸಿ ಆರಾಧಿಸುತ್ತಾನೆ. ಕಂಡೇವು ಬೀಡಿನಲ್ಲಿ ಉಳ್ಳಾಯ ದೈವವು ಸಮುದ್ರದಿಂದ ಮಣ್ಣಿನ ಕಲಶದಲ್ಲಿ ಉದ್ಭವಿಸಿ ಮೇಲೆ ಬಂದಿದೆ ಎಂದು ಹೇಳುತ್ತಾರೆ.
ನಾಗಬ್ರಹ್ಮ ಆರಾಧನೆಯ ಒಂದು ಪ್ರಕಾರವಾಗಿರುವ ಕಾಡ್ಯನಾಟದಲ್ಲಿ ಮಣ್ಣಿನ ಕಲಶವನ್ನು ಪೂಜಿಸಲಾಗುತ್ತದೆ. ತುಳುವಿನಲ್ಲಿ ಕಡ್ಯ ಎಂದರೆ ಮಣ್ಣಿನ ಮಡಿಕೆ ಅಥವಾ ಕಲಶ. ಕಾಡ್ಯ ಎಂದರೆ ಕಡ್ಯದಲ್ಲಿ ಇರುವ ನಾಗಬ್ರಹ್ಮ ಎಂದರ್ಥವನ್ನು ಮಾಡಲು ಸಾಧ್ಯವಿದೆ.
ಬ್ರಹ್ಮಮಂಡಲ ಅಥವಾ ಢಕ್ಕೆ ಬಲಿಯಲ್ಲಿ ‘ಬ್ರಹ್ಮ’ನದೆಂದು ಹೇಳಲಾಗುವ ಮನುಷ್ಯಮುಖದ ಆಕಾರವು ಹಿಂದೂಶಿಷ್ಟ ದೇವದೇವತೆಗಳಂತೆ ಸೌಮ್ಯವಾಗಿರದೆ, ಅಸುರ ಪರಿಕಲ್ಪನೆಗೆ ಅನುಗುಣವಾಗಿ ತೆರೆದ ಬಾಯಿ, ಇಣುಕುವ ಕೋರೆ ಹಲ್ಲುಗಳು, ದೊಡ್ಡ ಕಣ್ಣುಗಳನ್ನು ಹೊಂದಿದೆ. ಇದು ‘ಬೆರ್ಮೆರ್’ನ ಅಸುರ ಮೂಲವನ್ನು ಸೂಚಿಸುತ್ತದೆ ಈ ರೂಪ ಬಲಿಯ ರೂಪವನ್ನು ಹೋಲುತ್ತದೆ.
ಕುಂಡೋದರ ಎಂಬುದಕ್ಕೆ ಕುಂಡದ ಹಾಗೆ ಅರ್ಥಾತ್ ಮಣ್ಣಿನ ಮಡಿಕೆಯ ಹಾಗೆ ಹೊಟ್ಟೆಯನ್ನು ಹೊಂದಿರುವವನು ಎಂದು ಅರ್ಥವಿದೆ. ಢಕ್ಕೆಬಲಿಯಲ್ಲಿ ಚಿತ್ರಿಸುವ ಬ್ರಹ್ಮನ ಹೊಟ್ಟೆ ದೊಡ್ಡದಾಗಿ ಇರುತ್ತದೆ. ಈ ಅರ್ಥದಲ್ಲಿಯೂ ಕುಂಡೋದರ ಮತ್ತು ಬೆರ್ಮೆರ್ ಒಂದೇ ಎಂದೂ ಹೇಳಬಹುದು.
ಇನ್ನು ಬ್ರಹ್ಮಕಲಶವೆಂಬ ಮಣ್ಣಿನ ಮಡಿಕೆಗಳು ಎಲ್ಲಾ ದೇವಸ್ಥಾನಗಳಲ್ಲೂ ಬಳಕೆಯಾಗುತ್ತದೆ.
ಕುಂಡೋದರನನ್ನು ಭೂತರಾಜನೆಂದೂ ಭೂತಗಳ ಅಧಿಪತಿ ಎಂದೂ ಭೂತಗಳ ಅಧ್ಯಕ್ಷನೆಂದೂ ಭೂತಾಳ ಪಾಂಡ್ಯನ ಕಥೆಯಲ್ಲಿ ವರ್ಣಿಸಲಾಗಿದೆ. ‘ಬೆರ್ಮೆರ್’ ಕೂಡ ಭೂತರಾಜನೆಂದೂ, ಭೂತಗಳ ಅಧ್ಯಕ್ಷನೆಂದೂ ಪಾಡ್ದನಗಳು ವರ್ಣಿಸುತ್ತವೆ.
ಆದ್ದರಿಂದ ತುಳುನಾಡಿನ ಮೂಲದೈವ ಬೆರ್ಮೆರ್ ಹಾಗೂ ಕುಂಡೋದರ ಒಂದೇ ಎಂದು ಹೇಳಬಹುದು. ಕುಂಡೋದರ ದೈವಕ್ಕಿರುವ ಮಹೀಶಾಸುರ ಎಂಬ ಅಭಿದಾನ, ಮಹಾಬಲಿಗೆ ಇರುವ ಮಹೀಶಾಸುರನೆಂಬ ಬಿರುದು, ಇವುಗಳಿಂದ ಬಲಿಯೇಂದ್ರನೇ ಹಿರಿಯ ಎಂಬರ್ಥದಲ್ಲಿ ‘ಬೆರ್ಮೆರ್’ ಎಂದು ಆರಾಧನೆ ಹೊಂದಿರುವ ಸಾಧ್ಯತೆ ಇದೆ.


ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ ಗ್ರಂಥಗಳು
ಬಾರಕೂರು - ಡಾ.ಗುರುರಾಜ ಭಟ್
ಅಳಿಯ ಕಟ್ಟು ಮತ್ತು ಬಾರ್ಕೂರು - ಒಂದು ಅಧ್ಯಯನ © ಡಾ‌ಇಂದಿರಾ ಹೆಗಡೆ
http://tuluculture.blogspot.in/2014/11/blog-post_1.html?m=1
ಭೂತಾಳ ಪಾಂಡ್ಯನ ಕುರಿತಾದ ಪ್ರಚಲಿತ ಐತಿಹ್ಯಗಳು
ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಒಂದು ವಿಶ್ಲೇಷಣಾತ್ಮಕ ಅಧ್ಯಯನ- ಡಾ.ಲಕ್ಷ್ಮೀ ಜಿ ಪ್ರಸಾದ




http://laxmipras.blogspot.in/2018/03/430.html?m=1

No comments:

Post a Comment