Monday 18 November 2019

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು : 453-455 ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ- ಡಾ.ಲಕ್ಷ್ಮೀ ಜಿ ಪ್ರಸಾದ

ಈ ದೈವಗಳ ಹಿನ್ನೆಲೆ ಬಹಳ ವಿಶಿಷ್ಟವಾಗಿದೆ. ಪಾಲಾರ್ ಬೀಡಿನ ವೀರ ಪಾಟ ನಾಯರ್ ಮತ್ತು ಪಾಲಕುನ್ನತ್ ನ ಕೋಲೇಂದ್ರನಾಯರ್ ಇಬ್ಬರೂ ಬೇಟೆಯಾಡಲು ಬೆಟ್ಟಕ್ಕೆ ಹೋಗುತ್ತಾರೆ‌.
ಮಧ್ಯಾಹ್ನದ ಹೊತ್ತಿಗೆ ಹಸಿವಾಗುತ್ತದೆ‌.ಆಗ ಅವರು ಕರಿಂಕುಲಕ್ಕಲ್ ಮನೆಗೆ ಹೋಗಿ ಅಲ್ಲಿಯ ಮಹಿಳೆಯ ಬಳಿ ಆಹಾರ ಕೇಳುತ್ತಾರೆ‌.ಆಕೆ ಹಾಲು ನೀಡಿ ಅಹಾರ ತಯಾರಿಗೆ ಶುರುಮಾಡುತ್ತಾಳೆ‌.
ಈ ಇಬ್ಬರು ವೀರರು ಸ್ನಾನ ಮಾಡಲು ಸಮೀಪದ ಕೊಳಕ್ಕೆ ಹೋಗುತ್ತಾರೆ‌.ಅಲ್ಲಿ ಒಂದು ವಿಶಿಷ್ಟವಾದ ಮೀನನ್ನು ನೋಡುತ್ತಾರೆ. ಅದನ್ನು ಹಿಡಿಯಲು ಯತ್ನ ಮಾಡುತ್ತಾರೆ‌.ಎಷ್ಟು ಯತ್ನ ಮಾಡಿದರೂ ಇವರ ಕೈಗೆ ಆ ಮೀನು ಸಿಗುವುದಿಲ್ಲ. ಕೊನೆಯಲ್ಲಿ ಸುಸ್ತಾಗಿ ಹಿಂತಿರುಗುತ್ತಾರೆ‌
ಆಗ ಅವರಿಗೊಂದು ಅಚ್ಚರಿ ಕಾದಿರುತ್ತದೆ‌.ಆ ಮಹಿಳೆಯ ಬಳಿ ಆ ಮೀನು ಇರುತ್ತದೆ. ಅದನ್ನು ಮೂರು ತುಂಡು ಮಾಡಿ ಆಕೆ ಬೇಯಿಸುತ್ತಾಳೆ.ಆಗ ಆ ಮೀನಿನ ತುಂಡುಗಳು ಪಾತ್ರೆಯಿಂದ ಹೊರಕ್ಕೆ ನೆಗೆಯುತ್ತವೆ‌.ಆ ಮೀನಿನ ಎರಡು ತುಂಡುಗಳು ತೆಕ್ಕನ್ ಕರಿಯಾತನ್ ಮತ್ತು ಕನ್ನಕ್ಕೋರುಮಗನ್ ತೆಯ್ಯಂ ಗಳಾಗಿ ಬದಲಾದವು‌.
ಆ ಎರಡು ದೈವಗಳು ಒಂದು ನದಿಯ ಸಮೀಪ ಕುಳಿತಿರುತ್ತಾರೆ.ಅಗ ಓರ್ವ ಮಹಿಳೆ ಕಳ್ಳು ಮಾರುತ್ತಿರುತ್ತಾಳೆ‌.ಅವಳಲ್ಲಿ ಕಳ್ಳು ಕೇಳುತ್ತಾರೆ ‌ಮೊದಲಿಗೆ ಅವಳು ಕೊಡುವುದಿಲ್ಲ‌.ನಂತರಿವರ ದೈವಕಿ ಶಕ್ತಿಯನ್ನು ನೋಡಿ  ಸ್ವಲ್ಪ ಭಾಗ ಕಳ್ಳನ್ನು  ಕೊಡುತ್ತಾಳೆ‌.
ಇವೆಲ್ಲವನ್ನೂ ಒಬ್ಬ ಬಾಲಕ ನೋಡುತ್ತಾ ಇರುತ್ತಾನೆ‌.ಅವನು ಇವರ ಜೊತೆಯಲ್ಲಿ ಸೇರಲು ಬಯಸುತ್ತಾನೆ‌.ಆತ ಕೈಕೋಲನ್ ತೆಯ್ಯಂ ಆಗಿ ಇ ಎರಡು ದೈವಗಳೊಂದಿಗೆ ಆರಾಧನೆ ಪಡೆಯುತ್ತಾನೆ‌
ಕೈಕೋಲನ್ ದೈವಕ್ಕೆ ಸರಳವಾದ ವೇಷಭೂಷಣ ಇರುತ್ತದೆ‌‌.ಮೈಗೆ ಬಿಳಿಯ ಬಣ್ಣ ಹಚ್ಚುತ್ತಾರೆ‌.ಕೈಕೋಲನ್ ದೈವ ಈ ಎರಡು ಪ್ರಧಾನ ದೈವಗಳ ಸಹಾಯನಾಗಿ ಇರುತ್ತಾನೆ‌.ಇದು ಈ ದೈವಗಳ ಬಗೆಗಿನ ಪ್ರಚಲಿತ ಕಥಾನಕ.
ಆದರೆ ಇಲ್ಲೊಂದು ಅಪೂರ್ಣತೆ ಇದೆ‌.ಮೊದಲು ಬೇಟೆಗೆ ಹೋದ ಇಬ್ಬರು ವೀರರು ಏನಾದರು ? ಇವರೇನಾದರೂ ದುರಂತವನ್ನಪ್ಪಿ ಅಥವಾ ಇನ್ಯಾವದಾದರೂ ಕಾರಣಕ್ಕಾಗಿ ತೆಕ್ಕನ್ ಕರಿಯಾತನ್ ಮತ್ತು ಕನ್ನಿಕ್ಕೋರುಮಗನ್ ದೈವಗಳಾದರೆ ? ಅವರ ದುರಂತ ಮತ್ತು ದೈವತ್ವಕ್ಕೆ ಅಲೌಕಿಕತೆ ಸೇರಿ ವಿಶಿಷ್ಟವಾದ ಮೀನುಗಳ ಭಾಗಗಳಿಂದ ದೈವಗಳು ಉದಿಸಿದವೆಂಬ ಕಥೆ ಹರಡಿರುವ ಸಾಧ್ಯತೆ ಇದೆ.ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಹೆಚ್ಚಿನ ಮಾಹಿತಿ ಸಿಗಬಹುದು - ಡಾ.ಲಕ್ಷ್ಮೀ ಜಿ ಪ್ರಸಾದ
ಆಧಾರ : Theyyam calendar 


No comments:

Post a Comment