Saturday 20 June 2020

ಸಾವಿರದೊಂದು ಗುರಿಯನ್ನು: ತುಳುನಾಡ ದೈವಗಳು : 472-475 ಮಾವಿಲತಿ ಮಾಪಿಳ್ಳೆ ಮತ್ತು ಚೋಟಿಯನ್ ಅಂಬು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ


ಮಾಪಿಳ್ಳೆ ,ಮಾವಿಲತಿ ಮತ್ತು ಚೋಟು ಅಂಬು ದೈವಗಳು
ಈ ದೈವಗಳಿಗೆ   ಕೇರಳ ಕಾಸರಗೋಡಿನ ಮಲೆಯಾಳ ಪರಿಸರದಲ್ಲಿ ಆರಾಧನೆ ಇದೆ.
ಅಯರ್ ನಾಡಿ‌ನ ಅನ್ನ ಪೂರ್ಣೇಶ್ವರಿ ಅಮ್ಮನಿಗೆ ಕೋಲತ್ತನಾಡು ಹೋಗಬೇಕು ಎಂದು ಕನಸಿನಲ್ಲಿ ಕಾಣಿಸಿಕೊಳ್ಳುತ್ತದೆ‌.ಹಾಗೆ ಅವರು ಹಡಗು ಸಿದ್ದ ಪಡಿಸಿ ತನ್ನ ಕೊಂಕಣಿ, ಮಾವಿಲ ಮೊದಲಾದ ಸಾವಿರ ಮಕ್ಕಳನ್ನು ಕೂಡಿಕೊಂಡು ಹಡಗಿನಲ್ಲಿ ಪ್ರಯಾಣ ಮಾಡುತ್ತಾರೆ‌‌.ಹಡಗು ಬಿರುಗಾಳಿಗೆ ಸಿಕ್ಕಿ ಎಲ್ಲರೂ ಚೆಲ್ಲಾಪಿಲ್ಲಿ ಆಗಿ ಹರಡಿ ಹೋಗುತ್ತಾರೆ‌
ಇವರಲ್ಲಿ ಕರಕತಿರಿ ಚೋಟಿಯಾನ ಅಂಬು ತನ್ನ ಮಡದಿ ಜೊತೆಗೆ ಪ್ರಯಾಣ ಮಾಡುತ್ತಾ ದುರ್ಗಮ  ಪರ್ವತ ಪ್ರದೇಶಕ್ಕೆ ಬರುತ್ತಾನೆ‌.ಅಲ್ಲಿ ಮಾವಿಲ ಕಣ್ಣನ್ನ ಪರಿಚಯವಾಗಿ ಅವನು ಕೆಲಸ ಮಾಡುತ್ತಿದ್ದ ದೈವತಾರ್ ತಂಬುರಾಟ್ಟಿಯ ಬಳಿ ಕೆಲಸ ಮಾಡುತ್ತಾನೆ‌
ಇವರಿಬ್ಬರಿಗೂ ತಂಬುರಾಟ್ಟಿ ವೇತನ ಕೊಡುವುದಿಲ್ಲ.
ಆಗ ಅವರಿಬ್ಬರೂ ಅಲ್ಲಿ ಕೆಲಸ ಬಿಟ್ಟು ಮೀನು ಹಿಡಿದಯ ಮಾರಾಟ ಮಾಡಿ ಬದುಕುತ್ತಾರೆ.
ಒಂದು ದಿನ ಚೋಟಿಯನ್ ಅಂಬು ಹಿಡಿದ ಮೀನನ್ನು ಮಾರಲು ಇಬ್ಬರೂ ಹೋಗುತ್ತಾರೆ ಬರುವಾಗ ಮದ್ಯಪಾನ ಮಾಡಿ ಬೀಳುತ್ತಾರೆ‌.ಪರಸ್ಪರ ಜಗಳ ಮಾಡುತ್ತಾರೆ‌.ಅವರ ಹೊಡೆದಾಟದಲ್ಲಿ ಚೋಟಿಯನ್ ಅಂಬು ಸಾಯ್ತಾನೆ‌‌.ನಂತರ ಮಾವಿಲ ಕಣ್ಣನ್ ಚೋಟಿಯನ್ ಅಂಬುವಿನ‌ ಮಡದಿಯನ್ನು ಮದುವೆ ಆಗುತ್ತಾನೆ.
ಒಂದು ದಿನ ಕಣ್ಣನ್ ಹೊರಗೆ ಹೋಗಿರುವಾಗ ತೆಂಗಿನ ಕಾಯಿ ವ್ಯಾಪಾರಿ ಮಮ್ಮು ಮಾಪಿಳ್ಳ ಎಂಬವನು ಬಂದು ಅವನ ಹೆಂಡತಿಯನ್ನು ಮರುಳು ಮಾಡುತ್ತಾನೆ‌.ನಂತರ ರಾತ್ರಿ ಬರಲೇ ಎಂದು ಕೇಳಿದಾಗ ಅವಳು ಒಪ್ಪುತ್ತಾಳೆ‌
ರಾತ್ರಿ ಅವರು ಜೊತೆಯಲ್ಲಿ ಮಲಗಿರುವ ಸಮಯದಲ್ಲಿ ದೈವ ಕಣ್ಣನ್ ನ ಕನಸಿನಲ್ಲಿ ಬಂದು ಈ ವಿಚಾರ ತಿಳಿಸುತ್ತದೆ‌
ಮನೆಗೆ ಬಂದು ಮಂತ್ರ ಶಕ್ತಿಯಿಂದ ಬಾಗಿಲು ತೆರದು ಒಳಗೆ ಹೋಗಿ ಜೊತೆಯಲ್ಲಿ ಮಲಗಿರುವ ತನ್ನ ಹೆಂಡತಿ ಮತ್ತು ಮಮ್ಮು ಮಾಪಿಳ್ಳೆ ಯನ್ನು ಕೊಲ್ಲುತ್ತಾನೆ‌
ನಂತರ ಅವರಿಬ್ಬರೂ ಉಗ್ರ ಶಕ್ತಿಗಳಾಗಿ ಜನರ ಮೈಮೇಲೆ ಬರುತ್ತಾರೆ.ನಂತರ ಮಾಪಿಳ್ಳೆ, ಮಾವಿಲತಿ ಮತ್ತು ಚೋಟಿಯನ್ ಅಂಬು ಮೂವರಿಗೂ ಕೋಲ ಕೊಟ್ಟು ಶಾಂತವಾಗಿಸಿ ಆರಾಧನೆ ಮಾಡುತ್ತಾರೆ‌.
ಆಧಾರ : Thayyam: JJ Pallath 1995

Wednesday 17 June 2020

ಚೀ‌ನೀ ಭೂತಗಳು- ಡಾ.ಲಕ್ಷ್ಮೀ ಜಿ ಪ್ರಸಾದ

ಚೀನೀ ಭೂತಗಳು :© ಡಾ.ಲಕ್ಷ್ಮೀ ಜಿ ಪ್ರಸಾದ
ತುಳುನಾಡಿನಲ್ಲಿ ದೈವತ್ವ ಪಡೆದವರೆಲ್ಲ ಸದ್ಧರ್ಮಿಗಳು ಸಾತ್ವಿಕರೆಂದು ಹೇಳುವಂತಿಲ್ಲ" ಎಂದು ನನ್ನ ತುಂಡು ಭೂತಗಳು - ಒಂದು ಅಧ್ಯಯನ ಕೃತಿಗೆ ಬರೆದ ಮುನ್ನುಡಿಯಲ್ಲಿ ಡಾ.ಅಮೃತ ಸೋಮೇಶ್ವರ ಅವರು ಹೇಳಿದ್ದಾರೆ .

ಕೆಲವರು ದ್ರೋಹ ಮಾಡಿ  ದೈವಗಳ ಆಗ್ರಹಕ್ಕೆ ತುತ್ತಾಗಿ ಮಾಯವಾಗಿ ದೈವಗಳಾಗಿದ್ದಾರೆ‌
ಚೀನೀ ಭೂತಗಳು  ವಾಸ್ತವದಲ್ಲಿ ಅಂದು ಕೂಡ ಉಂಡ ಮನೆಗೆ ದ್ರೋಹ ವೆಸಗಿದವರೇ ಆಗಿದ್ದಾರೆ‌ ಈ ದೈವಗಳ  ಕುರಿತಾಗಿ ಇರುವ ಐತಿಹ್ಯ ಹೀಗಿದೆ:
ಒಂದು ಆಷಾಢ ತಿಂಗಳಿನಲ್ಲಿ ಒಂದು ದಿನ ಒಂದು ಚೀನೀ ಹಡಗು ದಾರಿ ತಪ್ಪಿ ಬಸರೂರಿನ ಕಡಲ ತೀರಕ್ಕೆ ಬರುತ್ತದೆ.ಅವರಲ್ಲಿ ಆಹಾರ ಸಾಮಗ್ರಿ ಇಂದನಗಳು ಮುಗಿದಿರುತ್ತದೆ.ಹಾಗಾಗಿ ಸಹಾಯ ಕೇಳಿಕೊಂಡು ಅವರು ಊರೊಳಗೆ ಬರ್ತಾರೆ. ಬಸ್ರೂರಿನ ಜನರು ಅವರಿಗೆ ಊಟ ತಿಂಡಿ ಅಹಾರ ನಿಡಿ ಸತ್ಕರಿಸುತ್ತಾರೆ.ನಂತರ ಸರಿಯಾದ ದಾರಿ ತಿಳಿಸುತ್ತಾರೆ. ಮುಂದಿನ ಪಯಣಕ್ಕೆ ಬೇಕಾದಷ್ಟು ಇಂದನ  ಅಹಾರ ಸಾಮಗ್ರಿಗಳನ್ನು ಕೂಡ ಕೊಡುತ್ತಾರೆ‌.ಹಿಂದಿರುಗಿ ಹಡಗಿನೆಡೆಗೆ ಹೋಗುವ ಮಾರ್ಗದಲ್ಲಿ ತುಳುವರ ಆರಾಧ್ಯ ದೈವ ಪಂಜುರ್ಲಿ ಯ ಕೋಲ ಆಗುತ್ತಿರುತ್ತದೆ..ಆಗ ಐದು ಜನ ಚೀನೀ ವ್ಯಕ್ತಿಗಳು ಗರೊಡಿಯಲ್ಲಿ ಆರಾಧಿಸಲ್ಪಡುವ ಪಂಜುರ್ಲಿ ದೈವವನ್ನು ಅಪಹಾಸ್ಯ ಮಾಡಿ ನಗಾಡುತ್ತಾರೆ.ಉಂಡ ಮನೆಗೆ ದ್ರೋಹ ಮಾಡುತ್ತಾರೆ‌ ಆಗ ಕೋಪಗೊಂಡ ದೈವ ಪಂಜುರ್ಲಿ ಅವರನ್ನು ರಕ್ತಕಾರಿ ಸಾಯುವಂತೆ ಮಾಡುತ್ತದೆ.ನಂತರ ಅವರ ಮನೆ ಮಂದಿ ಪಂಜುರ್ಲಿ ದೈವದಲ್ಲಿ ಕ್ಷಮೆ ಕೇಳುತ್ತಾರೆ‌.ನಮ್ಮ ಮಕ್ಕಳಿಗೆ ನೆಲೆ ಇಲ್ಲದಾಯಿತು ಎಂದು ಅಳುತ್ತಾರೆ.ಆಗ ಪಂಜುರ್ಲಿ ದೈವ ಅವರಿಗೆ ಅಭಯ ನೀಡಿ,ನಿಮ್ಮ ಮಕ್ಕಳಿಗೆ ನನ್ನ ಜೊತೆಯಲ್ಲಿ ನೆಲೆ ಕೊಡಿತ್ತೇನೆ ಎಂದು ಹೇಳಿ ಆ ಐದು ಚೀನೀಯರನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ .ದ್ರೋಹವೆಸಗಿದ ಚೀನೀ ವ್ಯಕ್ತಿಗಳ ಹಾಗೂ ಸ್ಥಳೀಯರ ನಡುವೆ ಸಂಘರ್ಷ ನಡೆದು ಚೀನೀ ವ್ಯಕ್ತಿಗಳು ದುರಂತಕ್ಕೊಳಗಾಗಿ ಕಾಲಾಂತರದಲ್ಲಿ ದೈವತ್ವಕ್ಕೇರಿ ಆರಾಧನೆಯನ್ನು ಹೊಂದಿರುವ ಸಾಧ್ಯತೆ ಇದೆ.
ಈ ಬಗ್ಗೆ ಪರಶುರಾಮ ಕುಲಕರ್ಣಿಯವರು ಚೀನಿ ಭೂತಗಳು;
ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಒಂದೇ ಆಗಿದ್ದ ಸಂದರ್ಭದಲ್ಲಿ, ಬ್ರಿಟೀಶ ಆಡಳಿತ ಪ್ರಾರಂಭದ ಅವಧಿಯಲ್ಲಿ, ಚೀನಾ ದೇಶದಿಂದ ‘ಗಡಿಪಾರು ಶಿಕ್ಷೆ’
ವಿಧಿಸಲ್ಪಟ್ಟ  ಐದು ಜನ ಚೀನೀಯರನ್ನು , ಇಲ್ಲಿನ ಕರಾವಳಿಯಲ್ಲಿ ಇಳಿಸಿ ಹಡಗು  ಹೋಗುತ್ತದೆ. ಅಲ್ಲಿ ಮಾಡಿದ ಅಪರಾಧ, , ಅವರು ಬದುಕಲಿಕ್ಕಾಗಿ ಇಲ್ಲಿಯೂ ಅಪರಾಧ ಮಾಡಿ ಶಿಕ್ಷೆಗೆ ಒಳಗಾಗಿರಬಹುದು. ಆದರೆ ‘ನಿರ್ಗತಿಕ”ರಾಗಿದ್ದವರು ‘ಸತ್ತು’ ದೆವ್ವವಾಗಿ ಕಾಡಬಾರದೆನ್ನುವ ಜನಸಮುದಾಯದ ವಿಶ್ವಾಸ, ಆ ಐದೂ ಜನರಿಗೆ “ಭೂತ’ಗಳನ್ನಾಗಿಸಿರಬೇಕು. ಸೂರ್ಯನಾಥ ಕಾಮತರು ಸಂಪಾದಿಸಿದ ‘  ಉತ್ತರ ಕನ್ನಡ ಗೆಝೆಟಯೀಯರ” ಗಮನಿಸಿ.
ಅದೇ ರೀತಿಯಲ್ಲಿ ಕುಮಟಾದ (ಗುಡಿಗಾರ ಗಲ್ಲಿಯ)ಭೂಮಿತಾಯಿ ದೇವಸ್ಥಾನದಲ್ಲಿಯೂ ಓರ್ವ ಚೀನೀ ಹೆಸರಿನ ಶಿಲಾಸ್ಥಾನವೊಂದಿದೆ. ಅದಕ್ಕೂ ಉಪದೇವತೆಗಳ ಹಂತದಲ್ಲಿ ಆರಾಧನೆ ನಡೆಯುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ

 ಈ ಬಗ್ಗೆ ಅಧ್ಯಯನವಾಗ ಬೇಕಾಗಿದೆ.

ಉಡುಪಿ ಜಿಲ್ಲೆಯ ಬಸ್ರೂರಿನಲ್ಲಿರುವ ಗರೊಡಿಯಲ್ಲಿ ಐದು ಚೀನೀ ಭೂತಗಳಿಗೆ ಆರಾಧನೆ ಇದೆ ಇವರ ಮರದ ಉರುಗಳು ಕೂಡ ಇಲ್ಲಿ ಇವೆ. "ಇವು ಚೀನೀಯರ ಹಾಗೆ ವಿಶಿಷ್ಟವಾದ ಟೋಪಿಯನ್ನು ಧರಿಸಿದ ಮೂರ್ತಿಗಳು .ಈಗ ಇವು ಅಲ್ಲಿನ ಶಾರದಾ ಕಾಲೇಜಿನಲ್ಲಿ ಇವೆ "ಎಂದು ಕನರಾಡಿ ವಾದಿರಾಜ ಭಟ್ ಹೇಳಿದ್ದಾರೆ.ಅದರೆ ನಾನು ನಂತರ ವಿಚಾರಿಸಿದಾಗ ಅವು ಎಲ್ಲಿವೆ ಎಂದು ಪತ್ತೆಯಾಗಲಿಲ್ಲ.
ಬಸರೂರು ಗರೊಡಿಯಲ್ಲಿ ಐದು ಸ್ತ್ರೀ ರೂಪಿ ದೈವಗಳಿಗೆ ಆರಾಧನೆ ಇದೆ. ಅವರಿಗೆ ಚಿನಿಕಾರ ದೈವಗಳೆಂದು ಕರೆಯುತ್ತಾರೆ.    ಚೀನಿಕಾರ ದೈವ ಅಥವಾ ಚೀನೀ ಬೂತಗಳು ಎಂದು ಇವರನ್ನು ಕರೆದು  ದೀಪ ನೀರು ಇಟ್ಟು ಸಾಂಕೇತಿಕವಾಗಿ ಉಪದೈವಗಳ ನೆಲೆಯಲ್ಲಿ  ಆರಾಧನೆ ಮಾಡುತ್ತಾರೆ 
copy rights reserved©ಡಾ.ಲಕ್ಷ್ಮೀ ಜಿ ಪ್ರಸಾದ

ಚೀನಿ ಭೂತಗಳ ಬಗ್ಗೆ ಪ್ರೊ |ಕನರಾಡಿ ವಾದಿರಾಜ  ಭಟ್ಟರು ಮಾಹಿತಿ ನೀಡಿದ್ದಾರೆ, ಚಿನಿಕಾರ ದೈವಗಳ ಚಿತ್ರ ಒದಗಿಸಿದ ಮಹೇಶ್ ಬೋಳೂರು ಅವರಿಗೆ ,ಮಾಹಿತಿ ನೀಡಿದ ವಾದಿರಾಜ ಭಟ್ ಅವರಿಗೆ ಧನ್ಯವಾದಗಳು