Saturday 16 April 2022

ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ ಆ ಒಂದು ತೀರ್ಪಿನ ಬಗ್ಗೆ ನನಗೆ ಈವತ್ತಿಗೂ ಪಶ್ಚಾತ್ತಾಪವಿದೆ

 ನನಗೂ ಆತ್ಮವಿದೆ .ಅದಕ್ಕೂ ಒಂದು ಕಥೆ ಇದೆ

ಆ ಒಂದು ತೀರ್ಪಿನ ಬಗ್ಗೆ ನನಗೆ ಈವತ್ತಿಗೂ ಪಶ್ಚಾತ್ತಾಪವಿದೆ 

ನಾನು ಚಿಕ್ಕಂದಿನಲ್ಲಿ ಹೈಪರ್ ಆಕ್ಟೀವ್.ಎಲ್ಲ ಸ್ಪರ್ದೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸುತ್ತಿದ್ದೆ.ಬಹುಮಾನಗಳನ್ನೂ ಪಡೆದು ಸ್ವರ್ಗ ಸಿಕ್ಕಂತೆ ಸಂಭ್ರಮಿಸುತ್ತಿದ್ದೆ.ಮನೆಗೆ ಬಂದವರಿಗೆ ಹೊಓದವರಿಗೆ ಎಲ್ಲರಿಗೂ ಸರ್ಟಿಫಿಕೇಟ್ ಗಳನ್ನು ತೋರಿಸಿ ಅವರಿಂದ ಮೆಚ್ಚುಗೆ ಮಾತುಗಳನ್ನು ಪಡೆದು(ಬಲವಂತವಾಗಿ ?ನನ್ನ  ಕಿರಿ ಕಿರಿ ತಾಳಲಾಗದೇ )  ಬಹಳ ಖುಷಿ ಪಡುತ್ತಿದ್ದೆ.

ಬಹುಮಾನವನ್ನು ಪಡೆಯಲು ವೇದಿಕೆ ಏರುವಾಗ ನನಗೆ ಚಂದ್ರಲೋಕಕ್ಕೆ ಹೋಗುವಷ್ಟು ಉತ್ಸಾಹ ಇರುತ್ತಿತ್ತು.ನಂತರ ಬಹುಮಾನ ಪಡೆದು ಸಭೆಯಿಂದ ಚಪ್ಪಾಳೆ ಸದ್ದನ್ನು ಕೇಳಿ ಬಹಳ ನಲಿವಿನಿಂದ ಇಳಿದು ಬರುತ್ತಿದ್ದೆ

ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನಕ್ಕೆ ಬಂದಾಗ ನಾನು ಶಿಕ್ಷಕಿಯಾದೆ.ಸಹಜವಾಗಿ ನಾನಾ ಸ್ಪರ್ಧೆಗಳಿಗೆ ತೀರ್ಪುಗಾರಳಾಗಿ ಭಾಗಹಿಸಿದೆ

ಅಲ್ಲೆಲ್ಲ ನಾನು ಬಹಳ ಎಚ್ಚರಿಕೆಯಿಂದ ನಿಷ್ಪಾಕ್ಷಿಕವಾಗಿ ತೀರ್ಪು ನೀಡಿರುವೆ.

ಆದರೆ ಒಂದೆಡೆ ಮಾತ್ರ ನಾನು ತುಸು ತಪ್ಪು ಮಾಡಿ ಒಂದು ವಿದ್ಯಾರ್ಥಿನಿಯ ಪರ ಹೆಚ್ಚು ಅಂಕ ನೀಡಿ ಗೆಲ್ಲಿಸಬೇಕಿತ್ತು ಎನಿಸಿತ್ತು.ಹಾಗೆ ಮಾಡದ್ದಕ್ಕೆ ನನಗೆ ಇಂದಿಗೂ ಪಶ್ಚಾತ್ತಾಪವಿದೆ.

ಸಮಾನತೆಗೆ ಭಿನ್ನ ಭಿನ್ನವಾದ ಮಾನದಂಡಗಳಿವೆ.ಒಂದು ತಾಯಿ ತನ್ನ ಎರಡು ವರ್ಷದ ಮಗುವಿಗೆ ಒಂದು ರೊಟ್ಟಿಯನ್ನೂ ಎಂಟು ವರ್ಷದ ಮಗುವಿಗೆ ಎರಡು ರೊಟ್ಟಿಗಳನ್ನೂ ಕೊಡುತ್ತಾಳೆ.ಅದುಮಕ್ಕಳ ನಡುವೆ ಅಸಮಾನತೆ ತೋರಿದಂತೆ ಆಗುವುದಿಲ್ಲ.

ನಾನು ಈ ವಿಧದ ಮಾನದಂಡವೊಂದನ್ನು ಅದೊಂದು ಸ್ಪರ್ಧೆಯಲ್ಲಿ ಅನುಸರಿಬೇಕಿತ್ತು 


ಅದು ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿನ ಚಿನ್ಮಯ ಶಾಲೆಯಲ್ಲಿ ನಡೆದ ಘಟನೆ.ಆಗ ಚಿನ್ಮಯ ಶಾಲೆ ಮಂಗಳೂರಿನಲ್ಲಿ ಬಹಳ ಖ್ಯಾತಿಯನ್ನು ಪಡೆದಿತ್ತು.ಅಲ್ಲಿ ಸೀಟು ಸಿಗುವುದು ಸುಲಭದ್ದಾಗಿರಲಿಲ್ಲ.ಪಠ್ಯ ಮತ್ತು ಪಠ್ಯೇತರ ಚಟುವಟಿಗೆ ಎರಡರಲ್ಲೂ ಚಿನ್ಮಯ ವಿದ್ಯಾ ಸಂಸ್ಥೆ ಬಹಳ ಕ್ರಿಯಾಶೀಲವಾಗಿತ್ತು.ಬಹಳ ಕ್ರಿಯಾಶೀಲರಾದ ಶಿಕ್ಷಕರ ದಂಡು ಅಲ್ಲಿತ್ತು

ಒಂದು ವರ್ಷ ಒಂಬತ್ತನೆಯ ತರಗತಿಗೆ ಓರ್ವ ವಿಶಿಷ್ಟ ಚೇತನಳಾದ ವಿದ್ಯಾರ್ಥಿನಿಯ ದಾಖಲಾತಿ ಆಗಿತ್ತು.ಹುಟ್ಟಿನಿಂದ ಅವಳಿಗೆ ನ್ಯೂನತೆ ಇರಲಿಲ್ಲ.ಸುಮಾರು ಹತ್ತರ ವಯಸದಸಿನಲ್ಲಿ ಗಂಟಲಿನ ಮೈನರ್ ಸರ್ಜರಿ ಆದಾಗ ಸೋಂಕು ತಗುಲಿ ಅವಳಿಗೆ ವಾತ ( arthritis) ಉಂಟಾಗಿತ್ತು.ಬಹಳ ಜಾಣ ವಿದ್ಯಾರ್ಥಿನಿ

ಆದರೆ ವಾತದಿಂದಾಗಿ ಅಕ್ಷರಗಳು ಮುದ್ದಾಗಿರಲಿಲ್ಲ

ಇಡೀ ದೇಹದಲ್ಲಿ ಎಲ್ಲ ಗಂಟುಗಳಲ್ಲಿ ಅಪಾರವಾದ ನೋವಿತ್ತು ಅವಳಿಗೆ.ಹಾಗಾಗಿ ಬರೆಯುವುದೂ ಸಾಹಸದ ವಿಚಾರವೇ.ಅದರೆ ಅವಳು ತುಂಬಾ ಜಾಣೆ ಎಂದು ಗೊತ್ತಿದ್ದ ಕಾರಣ ಅವಳ ಬರವಣಿಗೆಯನ್ನು ಕೊರಕಲಾಗಿದ್ದರೂ ಓದಿ ಅಂಕ ಕೊಡುತ್ತಿದ್ದೆವು. ಹಾಗಾಗಿ ಉತ್ತಮ ಅಂಕಗಳು ಸಿಗುತ್ತಿತ್ತು.ಆದರೆ ಪಬ್ಲಿಕ್ ಪರೀಕ್ಷೆಯಲ್ಲಿ ಅವಳಿಗೆ ಒಳ್ಳೆಯ ಅಂಕಗಳು ಬರಲು ಕಷ್ಟವಿತ್ತು

ಅವಳು ಚಿನ್ಮಯ ಶಾಲೆಗೆ ಸೇರಿದ ವರ್ಷ ಅತವಾ ಮರು ವರ್ಷ  ಯಾವುದೋ ಸಂಘಟನೆಯೊಂದು ನಮ್ಮಲ್ಲಿ ಭಗವದ್ಗೀತೆ ? ಕುರಿತಾದ ಭಾಷಣ ಪ್ರಬಂಧ ಕಂಟಪಾಠ ಸ್ಪರ್ದೆ ಏರ್ಪಡಿಸಿತ್ತು.ಇಲ್ಲಿ ಪ್ರಥಮ ಸ್ಥಾನ ಬಂದವರು ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದರು.ದ್ವಿತೀಯ ತೃತೀಯ ಸ್ತಾನ ಪಡೆದವರಿಗೆ ಒಂದು ಸಣ್ಣ ಬಹುಮಾನ ಮತ್ತು ಸರ್ಟಿಫಿಕೇಟ್ ಕೊಡುತ್ತೇವೆ ಎಂದಿದ್ದರು

ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ಆ ವಿದ್ಯಾರ್ಥಿನಿಯೂ ಭಾಗವಹಿಸಿದ್ದಳು.ಅವಳಿಗೆ ಶಾಲೆಯೊಳಗಿನ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸಲು ಸಾಧ್ಯವಿತ್ತು.ಹೊರಗಡೆ ನಡೆಯುವ ಸ್ಪರ್ಧೆಗಳಿಗೆ ಹೋಗಲು ಅವಳ ಶಾರೀರಿಕ ಸಮಸ್ಯೆ ತೊಡಕಾಗಿತ್ತು.ಹಾಗಾಗಿ ಶಾಲೆಯಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದಳು

ಚಿನ್ಮಯ ಶಾಲೆ ನಾನು ಮೊದಲೇ ತಿಳಿಸಿದಂತೆ ಅಗಿನ ಕಾಲಕ್ಕೆ ಬಹಳ ಪ್ರಸಿದ್ದವಾದದ್ದು.ಬಹಳ ಪ್ರತಿಭಾವಂತ ವಿದ್ಯಾರ್ಥಿಗಳು ಇಲ್ಲಿದ್ದರು.ಇಲ್ಲಿನ ಮಕ್ಕಳು ತಾಲೂಕು,ಜಿಲ್ಲಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಬರುತ್ತಿದ್ದರು.ಹಾಗಾಗಿ ಶಾಲೆಯೊಳಗೆ ನಡೆಯುವ ಸ್ಪರ್ಧೆಗಳಲ್ಲಿ ಕೂಡ ಬಹುಮಾನ ಪಡೆಯುವದ್ದು ಸುಲಭದ್ದಾಗಿರಲಿಲ್ಲ.ಹಾಗಾಗಿ ಆ ವಿದ್ಯಾರ್ಥಿನಿಗೆ ಅದು ತನಕ ಬಹುಮಾನ ಬಂದಿರಲಿಲ್ಲ

ಆದಿನ  ಭಾಷಣ ಸ್ಪರ್ಧೆಗೆ ಮೂವರು ತೀರ್ಪುಗಾರರಲ್ಲಿ ನಾನೂ ಒಬ್ಬಳಾಗಿದ್ದೆ

ಆ ದಿನ ಈ ಹುಡುಗಿ ಕೂಡ ಚೆನ್ನಾಗಿ ಭಾಷಣ ಮಾಡಿದ್ದಳು.ನಾನು ನೀಡಿದ ತೀರ್ಪಿನಲ್ಲಿ ಇವಳಿಗೆ ಮೂರನೆಯ ಸ್ಥಾನವಿತ್ತು.ಮೂವರೂ ನೀಡಿದ ಅಂಕಗಳನ್ನು ಒಟ್ಟು ಮಾಡಿದಾಗ ಇವಳಿಗೆ ಮತ್ತು ಇನ್ನೊಬ್ಬಳಿಗೆ ಸಮಾನ ಅಂಕ ಬಂದು ಇಬ್ಬರಿಗೂ  ಮೂರನೆಯ ಸ್ಥಾನ ಬಂತು.

ಇಬ್ಬರಲ್ಲಿ ಒಬ್ಬಳನ್ನು ಆಯ್ಕೆ ಮಾಡಿ ತೃತೀಯ ಬಹುಮಾನ ಘೋಷಣೆ ಮಾಡಬೇಕಿತ್ತು.ಆಗ ನಾನು ಈ ವಿದ್ಯಾರ್ಥಿನಿಗೆ ತೃತೀಯ ಬಹುಮಾನ ಕೊಡುವ ಎಂದೆ.ಆದರೆ ಇನ್ನಿಬ್ಬರು ತೀರ್ಪುಗಾರರು " ಬೇಡ..ಇನ್ನೊಬ್ಬಳಿಗೆ ಕೊಡುವ ಎಂದರು.ಬಹುಮತಕ್ಕೆ ಮನ್ನಣೆ ಬಂತು.ನನಗೇನೂ ಮಾಡಲಾಗದ ಪರಿಸ್ಥಿತಿ

ಆ ಇನ್ನೊಬ್ಬಹುಡುಗಿ ರಾಜ್ಯ ಮಟ್ಟದಲ್ಲಿ ಬಹುಮಾನ ಪಡೆದವಳು.ಅದಕ್ಕೆ ಮೊದಲೇ ಅನೇಕ ಸ್ಪರ್ಧೆಗಳಲ್ಲಿ ಗೆದ್ದವಳೇ ಆಗಿದ್ದಳು

ಅವಳಿಗೆ ಇದೊಂದು ಬಹುಮಾನ ಬಾರದೇ ಇದ್ದಾಗ ಒಂದೆರಡು ದಿನ ಬರಲಿಲ್ಲ ಅನ್ನುವ ನೋವು ಕಾಡ್ತಿತ್ತು ಅಷ್ಟೇ

ಆ ಮೂರನೆಯ ಬಹುಮಾನವನ್ನು ನಾವು  ಶಾರೀರಿಕ  ಸಮಸ್ಯೆ ಇದ್ದ ವಿದ್ಯಾರ್ಥಿನಿಗೆ ಕೊಟ್ಟಿದ್ದರೆ ಆ ಬಹುಮಾನ ಪಡೆದು ಅವಳು ತುಂಬಾ ಸಂಭ್ರಮ ಪಡುತ್ತಿದ್ದಳು.ಬದುಕಿರುವ ತನಕವೂ ಆ ಸರ್ಟಿಫಿಕೇಟನ್ನು ನೋಡಿ ತನ್ನ ಗೆಲುವಿನ ರೋಮಾಂಚನವನ್ನು ಅನುಭವಿಸುತ್ತಿದ್ದಳು.ಅವಳು ಸದಾ ಸ್ಪರ್ಧೆಗಳಲ್ಲಿ ಗೆಲ್ಲುವವಳಾಗಿದ್ದು ಇದೂ ಬಂದಿದ್ದರೆ ಹತ್ತರಲ್ಲಿ ಹನ್ನೊಂದು ಆಗುತ್ತಿತ್ತು ಇನ್ನೊಬ್ಬಳಂತೆ

ಆದರೆ ನನಗೆ ತಿಳಿದಂತೆ ಅವಳಿಗೆ ಅದು ತನಕ ಯಾವುದರಲ್ಲೂ ಬಹುಮಾನ ಬಂದಿರಲಿಲ್ಲ.ಇಬ್ಬರಿಗೆ ಸಮಾನ ಅಂಕ ಬಂದು ಮೂರನೆಯ ಸ್ಥಾನ ಸಿಕ್ಕಾಗ ನಾವು ಇಬ್ಬರಿಗೂ ಬಹುಮಾನ ಪ್ರಮಾಣ ಪತ್ರ ನಿಡಬೇಕೆಂದು ಗಟ್ಟಿಯಾಗಿ ನಿಲ್ಲಬೇಕಿತ್ತು. ಅದೂ ಮಾಡಲಿಲ್ಲ

ಅಪರೂಪಕ್ಕೆ ತೃತೀಯ ಸ್ಥಾನ ಪಡೆದ ಮತ್ತು ಇತರೆಡೆ ಹೊಗಲಾಗದ ಈ ಹುಡುಗಿಗೇ ಆ ತೃತೀಯ ಬಹುಮಾನವನ್ನು ಕೊಡಿಸಬೇಕಿತ್ತು

ಎರಡೂ ಆಗದ ಬಗ್ಗೆ ನನಗೆ ನಂತರ ಬಹಳ ಕೊರಗು ಉಂಟಾಗಿತ್ತು

ಈಗಲೂ ನಾನಾ ಸಂಘ ಸಂಸ್ಥೆಗಳು ನನ್ನನ್ನು ನಾನಾ ಸ್ಪರ್ಧೆಗಳ ತೀರ್ಪುಗಾರಳಾಗಿ ಆಹ್ವಾನಿಸುತ್ತಿದ್ದು ನಾನು ತೀರ್ಪುಗಾರಳಾಗಿ ಬಾಗವಹಿಸುತ್ತೇನೆ.ಅತ್ಯಂತ ನಿಷ್ಪಾಕ್ಷಿಕವಾಗಿ ತೀರ್ಪು ನೀಡುತ್ತೇನೆ.ಕೆಲವಿಮ್ಮೆ ನಮ್ಮ ಆತ್ಮೀಯರೇ ಸ್ಪರ್ಧಿಗಳಾಗಿರುತ್ತಾರೆ. ಆಗಲೂ ನನ್ನ ತೀರ್ಪು ಪ್ರತಿಭೆಯ ಪರವೇ ಆಗಿರುತ್ತದೆ

ಆದರೆ ಆ ದಿನ ಚಿನ್ಮಯ ಶಾಲೆಯಲ್ಲಿ ನಾನು ಆ ವಿದ್ಯಾರ್ಥಿನಿಗೆ ತುಸು ಹೆಚ್ಚು ಅಂಕ ಕೊಡಬೇಕಿತ್ತೆನಿಸುತ್ತದೆ.

ಆಗ ಅವಳಿಗೆ ಮೂರನೆಯ ಬಹುಮಾನ ಬರುತ್ತಿತ್ತು ಎಂದೆನಿಸುತ್ತದೆ.ಆದರೆ ತೀರ್ಪುಗಾರಳಾಗಿ ನಾನು ಅವತ್ತು ಮಾಡಿದ್ದು ಸರಿ..ಅವಳಿಗಿಂತ ಚೆನ್ನಾಗಿ ಭಾಷಣ ಮಾಡಿದ ಇಬ್ಬರಿಗೆ ಇವಳಿಗಿಂತ ಹೆಚ್ಚು ಅಂಕ ನೀಡಿದ್ದೆ.ಅದು ಸರಿಯಾದುದೇ.ಆದರೆ ಇಬ್ಬರಿಗೆ ಮೂರನೆಯ ಬಹುಮಾನ ಕೊಡಲು ಅಸಾಧ್ಯ ಎಂದಾದಾಗ ನಾನು ಈ ಹುಡುಗಿಗೆ ತುಸು ಹೆಚ್ಚು ಅಂಕ ಕೊಡುತ್ತಿದ್ದರೆ ಅವಳಿಗೆ ಮುರನೆಯ ಬಹುಮಾನ ಬರ್ತಿತ್ತು ಇನ್ನೊಬ್ಬಳಿಗೆ ನಾಲ್ಕನೆಯ ಸ್ಥಾನ ಬರ್ತಿತ್ತು ಎಂದೆನಿಸಿತ್ತು

ಅಥವಾ ಇಬ್ಬರಿಗೂ ಸಮಾನ ಅಂಕ ಲಭಿಸಿದ ಮೂರನೆಯ ಸ್ಥಾನದಲ್ಲಿದ್ದ  ಕಾರಣ ಇಬ್ಬರಿಗೂ ತೃತೀಯ ಬಹುಮಾನ ಕೊಡಲೇಬೇಕೆಂದು ಪಟ್ಟು ಹಿಡಿಯಬೇಕಿತ್ತು ಎಂದೆನಿಸುತ್ತದೆ

ಅದರೇನು ಮಾಡಲಿ..ಅದು ಘಟಿಸಿ ಸುಮಾರು ಇಪ್ಪತ್ತು ವರ್ಷಗಳೇ ಕಳೆದವು.ಆ ಹುಡುಗಿಯ ಬದುಕಿನಲ್ಲಿ ಪವಾಡ ಸದೃಶ ಘಟನೆ ಸಂಭವಿಸಿ ಅವಳು ಪೂರ್ತಿ ಗುಣಮುಖಳಾಗಿ ಎಲ್ಲರಂತೆ ಓಡಾಡುತ್ತಾ ಸುಖವಾಗಿ ನೂರು ಕಾಲ ಬದುಕಲಿ ಎಂದು ಹಾರೈಸುವೆ.


1 comment: