Wednesday 3 September 2014

see and say ಸರಣಿ -14 ತುಳು ನಾಡನ್ನು ಬೆಳಗಿದ ಅವಳಿ ವೀರರು :ಕೋಟಿ ಚೆನ್ನಯರು -ಡಾ.ಲಕ್ಷ್ಮೀ ಜಿ ಪ್ರಸಾದ




                                             chitra krupe :Jeevit shetty k
ತುಳುನಾಡನ್ನು ಬೆಳಗಿದ  ಅವಳಿ ವೀರರು :©ಡಾ.ಲಕ್ಷ್ಮೀ ಜಿ ಪ್ರಸಾದ( copy rights reserved)

 ಜೋಡು ನಂದಾ ದೀಪ ಬೆಳಗುನು ತುಳುವ ನಾಡುದ ಗುಂಡೊಡು ..ಹೌದು !ಡಾ .ಅಮೃತ ಸೋಮೆಶ್ವರರು ರಚಿಸಿದ ಹಾಡು ಇದು .ಇದು ಕೇವಲ ಹಾಡಲ್ಲ .ತುಳುವರ ಹೃದಯದ ಮಿಡಿತವಿದು !ಕೋಟಿ ಚೆನ್ನಯರೆಂಬ ಜೋಡು  ನಂದಾ ದೀಪಗಳು ತುಳುವರ ಮನೆ ಮನಗಳಲ್ಲಿ ಸದಾ ಬೆಳಗುತ್ತಿದೆ .ತುಳುನಾಡಿನ ಈ ಅಪ್ರತಿಮ ವೀರರ ಕುರಿತು ಸಮಗ್ರವಾಗಿ ಬರೆಯ ಹೊರಟರೆ ಅದು ದೊಡ್ಡ ಗ್ರಂಥವಾಗಿ ಬಿಡಬಹುದು !ಕೋಟಿ ಚೆನ್ನಯರ ಜೀವನ ಗಾಥೆ ಒಂದು ಮಹಾ ಕಾವ್ಯ. ಅದೊಂದು ಲಾವಣಿ ಚಕ್ರ. ಅದನ್ನು ಸಂಕ್ಷಿಪ್ತ ವಾಗಿ ಬರೆಯುವುದೂ ಒಂದು ಸವಾಲು! .ಕೋಟಿ ಚೆನ್ನಯರದು ಕೇವಲ ಕಟ್ಟು ಕಥೆಯಲ್ಲ ಅದು ತುಳುನಾಡಿನಲ್ಲಿ ನಡೆದ ವೀರರ ಕಥೆ. ಅವರ ಸ್ವಾಭಿಮಾನ, ಸ್ವಂತ ವ್ಯವಸಾಯ ಮಾಡುವ ಹಂಬಲ, ಶೌರ್ಯ ಸಾಹಸವನ್ನು ನೆನೆದಾಗ ಮನದುಂಬಿ ಬರುತ್ತದೆ.ಒಟ್ಟಿಗೆ  ಹುಟ್ಟಿ ಬೆಳೆದು ಅಸಾಮಾನ್ಯ ಸಾಹಸ ಮೆರೆದು ,ಎರಡು ಗುತ್ತು ಗಳ ಒಡೆತನ ಪಡೆದು ,ತಮ್ಮ ಆಶ್ರಯದಾತನಿಗೆ ಯುದ್ಧದಲ್ಲಿ ವಿಜಯವನ್ನು ತಂದು ಕೊಟ್ಟು   ಒಟ್ಟಿಗೆ  ಇಹಲೋಕವನ್ನು ತ್ಯಜಿಸಿ ತುಳುವರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲಸಿದ ಪರಿ ಅನನ್ಯವಾದುದು !
.ನಾನು ನನ್ನ ಪಿ ಎಚ್ ಡಿ ಸಂಶೋಧನಾ ಕ್ಷೆತ್ರ ಕಾರ್ಯಕ್ಕಾಗಿ ಪಂಜ ,ಪಡುಮಲೆ, ಎಣ್ಮೂರು, ಎಡಮಂಗಲ ಮೊದಲಾದ ಪ್ರದೇಶಗಳಲ್ಲಿ ಸುತ್ತುತ್ತಿದ್ದಾಗ ನಂಗೆ ಕೋಟಿ ಚೆನ್ನಯರದೆ ಗುನುಗು! .ಅರಸೊತ್ತಿಗೆಯ ಆ  ಕಾಲದಲ್ಲಿ ಅವರು ಅನ್ಯಾಯದ ವಿರುದ್ಧ ತೋರಿದ ಪ್ರತಿಭಟನೆ ,ಸ್ವಾಭಿಮಾನ ಸಾಹಸ ನೆನಪಾಗುತ್ತಿತ್ತು .”ತುಳುನಾಡ ಅವಳಿ ವೀರರು ಓಡಾಡಿದ ನೆಲ ಇದು” ಎಂದು ರೋಮಾಂಚನಗೊಂಡಿದ್ದೇನೆ . ಕೋಟಿ ಚೆನ್ನಯರ ಗರೋಡಿಗಳ ಫೋಟೋ ತೆಗೆಯುತ್ತಿದ್ದಾಗ ಉಂಟಾಗುತ್ತಿದ್ದ ಸಂತಸ ಅವರ ಸಮಾಧಿಯ ಫೋಟೋ  ತೆಗೆಯುವಾಗ ಇರಲಿಲ್ಲ . ಸಮಾಧಿಯ ಫೋಟೋ ತೆಗೆಯುವಾಗ ಏನೋ ದುಗುಡ ಕಾಡುತ್ತಿದ್ದುದು ಮಾತ್ರ ಸತ್ಯ. 
 ಕೋಟಿ ಚೆನ್ನಯರ ಮೂಲವನ್ನು ಅಲೌಕಿಕ ಜಗತ್ತಿಗೆ ಜೋಡಿಸುವ  ಕೋಟಿಚೆನ್ನಯ ಪಾಡ್ದನವು ಡೆನ್ನ-ಡೆನ್ನಾನ ಎಂಬ ಸೊಲ್ಲಿನ ನಂತರ ಬೆರ್ಮೆರ್ ಪುಟ್ಟಿನಾ ನಾಡ್, ಬೆರ್ಮರೆಬೆರಿಯೇ ...’ ‘ಬೆರ್ಮೆರ್ ಹುಟ್ಟಿದ ನಾಡು ಬೆರ್ಮೆರ ಶಕ್ತಿಯನ್ನು ಹೊಂದಿದ ನಾಡು, ಇದು ಬೈದ್ಯ ವೀರರು ಹುಟ್ಟಿದ ನಾಡುಎಂದು ತುಳುನಾಡಿನ ಬಗ್ಗೆ ಹೇಳುತ್ತದೆ. ಅನಂತರ ಬೆರ್ಮೆರ್ಉದಿಸಿದ ವಿಚಾರವನ್ನು ಈ ಪಾಡ್ದನ ವರ್ಣಿಸುತ್ತದೆ. ಬೆರ್ಮೆರ್ ಪುಟ್ಟಿನಾ ನಾಡ್‍ವುಂದ್ ಏಳ್ ಗಂಗೆದ ನಡುಟು ...”, “ಬೆರ್ಮೆರ್ ಹುಟ್ಟಿದ ನಾಡು ಇದು ಏಳು ಗಂಗೆಯ ನಡುವಿನಲ್ಲಿಎಂಬಲ್ಲಿ ನೀರು ಸುತ್ತಮುತ್ತ ಆವೃತವಾಗಿರುವ ಭೂಭಾಗದಲ್ಲಿ ಬೆರ್ಮೆರ್ಹುಟ್ಟಿದ ನಾಡು ಇದೆ ಎಂಬ ಸೂಚನೆ ಸಿಗುತ್ತದೆ. ಏಳು ಗಂಗೆಯ ನಡುವೆ ಎಮಲಗುಂಡ 10 ಇದೆ. ಏಳು ಅಂತಸ್ತಿನ ಎಮಲಗುಂಡದಲ್ಲಿ ಬೆರ್ಮೆರ್‍ಗೆ ಏಳು ಅಂಕಣದ ಸತ್ತಿಗೆ, ಭುಜಗಳಲ್ಲಿ ಮೂರು ಅಂತಸ್ತಿನಸತ್ತಿಗೆ ಇದೆ. ಬಲಭಾಗದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಬೆಳ್ಳಿಯ ಜನಿವಾರ, ಒಂದಾಳು ಉದ್ದದ ಹೂವಿನ ಜಲ್ಲಿ, ಗೇಣುದ್ದ ಬೀಸಣಿಗೆ, ಕುತ್ತಿಗೆಯಷ್ಟು ಉದ್ದದ ಕೇದಗೆ ಹೂವಿನ ಅಲಂಕಾರವಿದೆ. ಕಿವಿಗೆ ಕೇಂಜವ ಹಕ್ಕಿಯ ಆಕಾರದ ಆಭರಣ ಇದೆ. ಎದೆಯಲ್ಲಿ ಅಮೃತ ಕಲಶವಿದೆ. ಹೊಟ್ಟೆಯಲ್ಲಿ ಬಾಸಿಂಗವಿದೆ. ಬೆನ್ನಲ್ಲಿ ಭೀಮಾರ್ಜುನರನ್ನು ಹೊಂದಿದ್ದಾರೆ. ಮೊಣಕಾಲಿನವರೆಗೆ ಕಾವೇರಿ ಹರಿಯುವ ಇಂದ್ರಪರ್ವತ ಬೆರ್ಮೆರ್ಗೆ ಆಸನವಾಗಿದೆ. ಸೊಂಟದ ಸುತ್ತ ಸರ್ಪಾಭರಣ ಪಾದದಲ್ಲಿ ಪದ್ಮರೇಖೆಇದೆ. ಬೆರ್ಮೆರ್ ಅಣಿಗಂಗೆ, ಮಣಿಗಂಗೆ, ಪೇರುಗಂಗೆ, ಮಿಂಚಿಗಂಗೆ, ನೀರುಗಂಗೆ, ಬೆಳ್ಳಿಗಂಗೆ, ಕಂಚುಗಂಗೆ ಎಂಬ ಏಳು ಗಂಗೆಯನ್ನು, ನಾಲ್ಕು ಸಮುದ್ರವನ್ನು ನಿರ್ಮಿಸಿದರು.
ಬೆರ್ಮೆರ್‍ನ ಏಳು ಅಂಕಣ ಛತ್ರದ, ಒಂದು ಧ್ವಜದ ನೆರಳಿನಲ್ಲಿ ಹನ್ನೆರಡು ಬ್ರಹ್ಮಚಾರಿಗಳು ಹನ್ನೆರಡು ಕನ್ಯೆಯರು ಚಾಮರಾದಿ ಸೇವೆಗಳನ್ನು ಮಾಡುತ್ತಿದ್ದರು. ಬೆಳ್ಳಿಯ ಬೀಸಣಿಗೆ ಹಿಡಿದು ಗಾಳಿ ಹಾಕುತ್ತಿದ್ದರು. ಹೀಗೆ ವೈಭವದಿಂದ ಕಾಲ ಕಳೆಯುತ್ತಿರಲು ಬಾರದಂಥ ಬಿಸಿಲು ಬಂದು, ಭೀಕರವಾಗಿ ಮಳೆ ಬಂದು ನಿರ್ಮಾಣವಾಗಿದ್ದ ಹುಲ್ಲು, ಪೊದರು, ಮನುಷ್ಯ, ಪ್ರಾಣಿಗಳು ಎಲ್ಲರು ಕೊಚ್ಚಿಕೊಂಡು ಹೋದರು. ಆಗ ಸೂರ್ಯನಾರಾಯಣದೇವರು ಪುನಃ ಸೃಷ್ಟಿಗೆ ತೊಡಗುತ್ತಾರೆ.
ದಿಕ್ಪಾಲಕರನ್ನು ನೆನೆದು ಸೃಷ್ಟಿ ಜಪ ಮಾಡಲು ಆರಂಭಿಸುತ್ತಾರೆ. ದೇವರ ಎಡಭಾಗದಲ್ಲಿ ಎರಡು ಕೇಂಜವ ಹಕ್ಕಿಗಳನ್ನು ನಿರ್ಮಿಸಿದರು. ಕಲ್ಲು, ಹುಲ್ಲು, ಬೈಹುಲ್ಲಿನ ಗೂಡು, ಬಿದಿರು, ಮುಳ್ಳು ಎಲ್ಲವನ್ನು ಸೃಷ್ಟಿಸಿದರು. ಅಣ್ಣ-ತಂಗಿಯರಂತಿದ್ದ ಕೇಂಜವ ಪಕ್ಷಿಗಳು ಸಂತಾನದ ವರವನ್ನು ಸೂರ್ಯನಾರಾಯಣ ದೇವರಲ್ಲಿ ಕೇಳುತ್ತವೆ. ದೇವರ ಅನುಮತಿಯಂತೆ ಸತಿ-ಪತಿಗಳಾಗುತ್ತಾರೆ. ದೇವರ ಆಣತಿಯಂತೆ ಬಡಗು ದಿಕ್ಕಿನಲ್ಲಿರುವ ಸಾಗರದಲ್ಲಿ ಮಲ್ಲಿಗೆಯಿಂದ ಆವೃತವಾದ ಕೆರೆಯ ಮಧ್ಯದಲ್ಲಿರುವ ಅತ್ತಿಯಮರದ ಹೂವಿನ ಮಕರಂದವನ್ನು ತರಲು ಹೋಯಿತು. ಸೂರ್ಯ ಮುಳುಗುವ ಹೊತ್ತಿಗೆ ಮಕರಂದವನ್ನು ಹೀರಲು ಕೊಕ್ಕು ಹಾಕಿತು. ಸೂರ್ಯ ಮುಳುಗಿದ ಕ್ಷಣದಲ್ಲಿ ಹೂವು ಮುಚ್ಚಿಕೊಂಡಿತು. ಕೊಕ್ಕು ಹೂವಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಇತ್ತ ಹೆಣ್ಣು ಕೇಂಜವ ಹಕ್ಕಿ ಕೇಂಜವ ಬಾರದಿರಲು ಚಿಂತೆಯಾಗಿ ತನ್ನ ಪತಿ ಕ್ಷೇಮವಾಗಿ ಬಂದರೆ, ತಾನು ಇಡುವ ಮೊದಲ ಮೊಟ್ಟೆಯನ್ನು ನಮ್ಮನ್ನು ಸೃಷ್ಟಿಸಿದ ಸೂರ್ಯನಾರಾಯಣದೇವರಿಗೆ ನೀಡುತ್ತೇವೆಎಂದು ಹರಕೆ ಹೇಳಿಕೊಳ್ಳುತ್ತಾಳೆ. ಕೇಂಜವ ತಂದ ಮಕರಂದವನ್ನು ಸ್ವೀಕರಿಸಿದ ಕೇಂಜವದಿ ಗರ್ಭ ಧರಿಸುತ್ತದೆ. ಗರ್ಭಧಾರಣೆಯ ಹತ್ತನೆಯ ತಿಂಗಳಿನಲ್ಲಿ ಆನೆಯ ತಲೆಗಿಂತ ಚಿಕ್ಕದಾದ, ಕುದುರೆಯ ತಲೆಗಿಂತ ದೊಡ್ಡದಾದ ಮೊಟ್ಟೆಯನ್ನು ಇಡುತ್ತದೆ. ಆ ಮೊಟ್ಟೆಯನ್ನು ಹೇಳಿಕೊಂಡ ಹರಕೆಯಂತೆ ದೇವರಿಗೆ ಅರ್ಪಿಸುತ್ತಾರೆ. ದೇವರು ಅದನ್ನು ದಿಂಬಿನಂತೆ ಇರಲಿ ಎಂದು ಬದಿಗೆ ಇಟ್ಟು ಗಾಳಿ ರಥವೇರಿ ಸವಾರಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೊಂಚು ಹಾಕುತ್ತಿದ್ದ ನಾಗಗಳು ಮೊಟ್ಟೆಗೆ ನೋಟ ಇಟ್ಟು ಸ್ಪರ್ಶಿಸಿದಾಗ ಮೊಟ್ಟೆ ಒಡೆಯುತ್ತದೆ. ಸಿಡಿದ ತುಂಡುಗಳು ಮೇಲೆ ಆಕಾಶಕ್ಕೆ, ಕೆಳಗೆ ಪಾತಾಳಕ್ಕೆ ಉತ್ತರ ದಿಕ್ಕಿನಲ್ಲಿ ಜರ್ದೊರಿಯ ಮಗ ಜಂಬೂರಿಕುಮಾರನ ಮಡಿಲಿಗೆ ಬೀಳುತ್ತದೆ. ಅದು ಮುತ್ತು ಮಾಣಿಕ್ಯವಾಗಿ ಕಾಣಿಸುತ್ತದೆ. ಅದನ್ನು ಅವನು ಕಿವಿಯಲ್ಲಿಧರಿಸುತ್ತಾನೆ. ಸವಾರಿಗೆ ಹೋದ ದೇವರು ಹಿಂದಿರುಗಿ ಬಂದಾಗ, ಮೊಟ್ಟೆ ಒಡೆದ ವಿಚಾರ ತಿಳಿದು ಅದೆಲ್ಲಿದೆ ಎಂದು ಹುಡುಕುತ್ತಾರೆ. ಆಗ ಜಂಬೂರಿಕುಮಾರನ ಕಿವಿಯಲ್ಲಿದ್ದ ಮಾಣಿಕ್ಯ ಪುನಃ ಸಿಡಿದು ಮಣ್ಣಮುದ್ದೆಯಾಗಿ ಸಮುದ್ರಕ್ಕೆ ಬಿದ್ದು ಸಪ್ತಗಿರಿ ಪರ್ವತಕ್ಕಿಂತ ಹೆಚ್ಚು ಚಂದವಾಯಿತು. ತೆಂಕುದಿಕ್ಕಿನಲ್ಲಿ ಶೋಭಿಸುವ ಹೊಳೆಯಾಯಿತು. ಮಧ್ಯದಲ್ಲಿ ದ್ವೀಪ ಆಯಿತು. ಮೂಡುದಿಕ್ಕಿನಲ್ಲಿ ಘಟ್ಟ, ಪಡುವಣದಲ್ಲಿ ಸಮುದ್ರದ ನಡುವಿನ ಈ ಭಾಗವೇ ತುಳುನಾಡು.ಇದೇ ತುಳುನಾಡಿನಲ್ಲಿ ಕೋಟಿ ಚೆನ್ನಯರು ಮೆರೆದಾಡಿದ್ದಾರೆ
ಕೇಂಜವ ಪಕ್ಷಿಗಳು  ಇಟ್ಟ ಎರಡನೆಯ ಮೊಟ್ಟೆ ಸಮುದ್ರಕ್ಕೆ ಜಾರಿ ಬೀಳುತ್ತದೆ .ಅದು ನಿಂಬೆ ಹಣ್ಣಾಗಿ  ತೇಲಿಕೊಂಡು ಬರುವಾಗ ಸಂಕಮಲೆಯ ಪೆಜನಾರ ಎಂಬ ಬ್ರಾಹ್ಮಣನ ಕೈಗೆ ಸಿಗುತ್ತದೆ .ಅದನ್ನು ಮನೆಗೆ ಕೊಂಡು ಹೋಗಿ ಇಡುವಾಗ ಒಂದು ಹೆಣ್ಣು ಮಗುವಾಗಿ ಅಳುತ್ತದೆ .ಮಕ್ಕಳಿಲ್ಲದ ಓಪೆತ್ತಿ- ಪೆಜನಾರ ದಂಪತಿಗಳು ಈ ಹೆಣ್ಣು ಮಗುವನ್ನು ಕೇದಗೆ ಎಂಬ ಹೆಅಸರಿತ್ತು ಮುದ್ದಿನಿಂದ ಸಾಕುತ್ತಾರೆ .ಇವಳು ೮-೧೦ ವರ್ಷವಾಗುತ್ತಾ ಬರಲು ಅವಳು ಋತುಮತಿಯಾಗುತ್ತಾಳೆ. ಆಗ ಬ್ರಾಹ್ಮಣರಲ್ಲಿ ವಿವಾಹಕ್ಕೆ ಮೊದಲು ಹುಡುಗಿ ಋತು ಮತಿಯರಾದರೆ ಅವರನ್ನು ಕಣ್ಣು ಕಟ್ಟಿ ಬೆತ್ತಲಾಗಿಸಿ ಕಾಡಿನಲ್ಲಿ ಬಿಟ್ಟು ಬರುವ ಸಂಪ್ರದಾಯವಿತ್ತು .ಆದ್ದರಿಂದ ಪೆಜನಾರ್ ಕದಾ ತಾವು ಮುದ್ದಿನಿಂದ ಸಾಕಿದ ಮಗಳನ್ನು ಬೇರೆ ದಾರಿ ತೋಚದೆ ಸಂಬಂಧಿ ಕರ ಮದುವೆಗೆ ಹೋಗೋಣ ಎಂದು ನಂಬಿಸಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ.
ಸಂಕ ಮಲೆತ್ ತೊಟಕ ಬೆರನ್ದೀನ್ ಮದಿಮಾಲ್ ಆಯಿನೆಕ್ಕ್
ಕಣ್ಣುಗ್ ಕುಂಟು ಕಟ್ದು ಕಾದ್ಗು ಬುಡ್ತೆರ್
ಅಪಗ ಸಾಯಿನ ಬೈದ್ಯೆ ಇನ್ಪಿನಾಯೆ ಈನ್ದುದ ಬೇಲೆಗ್  ಪೋತೆ
ಆ ಹೊತ್ತಿನಲ್ಲಿ ಸಾಯನ ಬೈದ್ಯ ಮುರ್ತೆಯ ಕೆಲಸಕ್ಕಾಗಿ ಕಾಡಿಗೆ ಬರುತ್ತಾನೆ .ಇನ್ನು ಬೆಳಕು ಸರಿಯಾಗಿ ಮೂಡಿರಲಿಲ್ಲ . ಅವನು ಮರ ಹತ್ತಿ ಕೊಯ್ಯುವಾಗ ಅದರ ಕಸ ಈ ಹುಡುಗಿಯ ತಲೆ ಮೇಲೆ ಬೀಳುತ್ತದೆ .ಆಗ ಅವಳು ನೀನು ಗಂಡಸಾದರೆ ನನ್ನ ಅಣ್ಣ ಹೆಂಗಸಾದರೆ ನನ್ನ ಅಕ್ಕ ಎಂದು ಹೇಳುತ್ತಾಳೆ . ಈ ಎಳೆಯ ಹುಡುಗಿಯನ್ನು ನೋಡುವಾಗ ಸಾಯನ ಬೈದ್ಯನಿಗೆ ತನ್ನ ಮುದ್ದಿನ ತಂಗಿ ದೇಯಿ ಬೈದ್ಯೆತಿಯ ನೆನಪಾಗುತ್ತದೆ . ದೇಯಿ ಬೈದ್ಯೆತಿಯನ್ನು ಸಂನದರಲ್ಲಿಯೇ ಕಾಂತ ಬೈದ್ಯನಿಗೆ ಮಾಡುವೆ ಮಾಡಿ ಕೊಟ್ಟಿರುತ್ತಾನೆ ಅಣ್ಣ ಸಾಯನ ಬೈದ್ಯ .ಆದರೆ ಅವಳು ಚಿಕ್ಕ ವಯಸ್ಸಿನಲ್ಲಿಯೇ ಹೆರಿಗೆ ಸಮಯದಲ್ಲಿ ಮರನವನ್ನಪ್ಪಿರುತ್ತಾಳೆ .ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಈ ಹುಡುಗಿ ಕೇದಗೆಯ ಮೇಲೆ ಅನುಕಂಪ ಪ್ರೀತಿ ಹುಟ್ಟಿ ಸಾಯನ ಬೈದ್ಯ ಅವಳ ಕೈಕಾಲು ಕಣ್ಣು ಬಿಚ್ಚಿ ತನ್ನ ಮುಂಡಾಸಿನ ಬಟ್ಟೆಯನ್ನು ಅವಳಿಗೆ ಹೊದೆಸಿ  ತನ್ನ ಮನೆಗೆ ಕರೆದೊಯ್ಯುತ್ತಾನೆ .ತನ್ನ ತಂಗಿಯ ಹೆಸರಿತ್ತು ಅವಳನ್ನು ಸಾಕಿ ಸಲಹುತ್ತಾನೆ .ಕಾಡಿನಿಂದ ತಂದ ಅನಾಥ ಹುದುಗಿಯನ್ನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲವೋ ಏನೋ !ವಯಸ್ಸಾಗಿರುವ ತನ್ನ ತಂಗಿಯ ಗಂಡ ಕಾಂತು ಬೈದ್ಯನಿಗೆ ಇವಳನ್ನು ಮಾಡುವೆ ಮಾಡಿ ಕೊಡುತ್ತಾನೆ .ಅವನು ಮದುವೆಯಾಗುವಾಗಲೇ ತನಗೆ ವಯಸ್ಸಾಯಿತು ಮುಂದೆ ಹುಟ್ಟುವ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ?ಎಂದು ಕೇಳಿದಾಗ ಆ ಜವಾಬ್ದಾರಿ ನನಗಿರಲಿ ಎಂದು ಹೇಳಿ ಆತನನ್ನು ಒಪ್ಪಿಸುತ್ತಾನೆ ಸಾಯನ ಬೈದ್ಯ !ಆದ್ದರಿಂದಲೇ ಇಡೀ ತುಳುಜನಪದ  ಸಾಹಿತ್ಯದಲ್ಲಿ ಸಾಯನ ಬೈದ್ಯನ ಪಾತ್ರ ಸದಾ ದೇದೀಪ್ಯಮಾನವಾಗಿದೆ .
ಮುಂದೆ ದೇವಿ ಬೈದ್ಯೆತಿ ಗರ್ಭಿಣಿಯಾಗುತ್ತಾಳೆ
ಇತ್ತ ಪಡುಮಲೆ ಬಲ್ಲಾಳರಿಗೆ ಬೇಟೆಗೆ ಹೋಗುವ ಕನಸು ಬೀಳುತ್ತದೆ .ಅದರಂತೆ ಅವರು ನಾಗ ಬ್ರಹ್ಮರನ್ನು ನೆನೆದು ಕಾಣಿಕೆ ತೆಗೆದು ಇಟ್ಟು ಬೇಟೆಗೆ ಹೋಗುತ್ತಾರೆ ಅನೇಕ ಪ್ರಾಣಿಗಳನ್ನು ಬೇಟೆಯಾಡಿ ಅವುಗಳನ್ನು ಸಲ್ಲ ಬೇಕಾದವರಿಗೆ ಅವರವರ ಸ್ಥಾನ ಮರ್ಯಾದೆಗನುಗುಣವಾಗಿ ಹಂಚುತ್ತಾರೆ.ಬೇಟೆಯಾಡಿ ಹಿಂದೆ ಬರುವಾಗ ಬಲ್ಲಾಳರ ಕಾಲಿಗೆ ಕಾಸರಕನ ಮುಳ್ಳು ತಾಗುತ್ತದೆ
ಕಾವೆರುದ ಮುಳ್ಳು ಕಂತುಂಡು ನಚ್ಚೋ ಬೆನ್ನಗ
ರಾಮ ರಾಮ ಕಾಲನೆ ...ಯೇ ..
ಏರ್ ಯಾ ಮಂದೆ ಯಾನ್ ಬಾಲೂಜಿ ಬದುಕುಜಿ
ಅಂದ ಮಂದೆ ಕೆನ್ದೆರೋ ....ಯೇ
ಯಾತನೆಯಿಂದ ಬಲ್ಲಾಳರು ನಾನು ಸತ್ತು ಹೋಗುವೆ ಬದುಕಲಾರೆ ಎಂದು ನೋವಿನಿಂದ ಕೂಗಿ ನರಳುತ್ತಾರೆ . ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಕೊಂಡು ಸೇವಕರು ಅರಮನೆಗೆ ಕರೆತರುತ್ತಾರೆ .ಅರಮನೆಯ ವೈದ್ಯರು ಊರ ಪರ ಊರ ವೈದ್ಯರು ಔಷಧ ಉಪಚಾರ ಮಾಡುತಾರೆ .ಆದರೆ ಬಲ್ಲಾಳರ ಕಾಲಿಗಾದ ಗಾಯ ನಂಜು ಏರಿ ಇಡಿ ಶರೀರ ವ್ಯಾಪಿಸಿ ಅವರು ಬದುಕುಳಿಯುವುದು  ಕಷ್ಟ ಎಂಬ ಹಂತಕ್ಕೆ ತಲಪುತ್ತಾರೆ . ಆಗ ಅಲ್ಲಿ ಯಾರೋ ದೇಯಿ ಬೈದ್ಯೆತಿ ಒಳ್ಳೆಯ ಮದ್ದು ಕೊಡುತ್ತಾಳೆ ಎಂದು ಅರಸ ಬಲ್ಲಾಳನಿಗೆ ಹೇಳುತ್ತಾರೆ .ಬಲ್ಲಾಳ ಕೂಡಲೇ ದೇಯಿ ಬೈದ್ಯೆತಿಯನ್ನು ಬರಹೇಳುತ್ತಾನೆ.ಆಗ ಅವಳು ಏಳು ತಿಂಗಳು ತುಂಬಿದ ಗರ್ಭಿಣಿ .ಮೊದಲು ಬರಲು ಒಪ್ಪ ದಿದ್ದರು ನಂತರ ಅರಸನ ನೋವನ್ನು ದೀನ ಅವಸ್ಥೆಯನ್ನೂ ನೋಡಿ ಔಷಧ ಕೊಡಲು ಒಪ್ಪುತ್ತಾಳೆ .
ಏಲ್ ಪೊರ್ತುಗು  ಕಾಡದಾಲ್ ಏಲ್ ಕೊಡಿ ಮರ್ದು
ದೇಯಿ ತರ್ಪದೋಲು ..ಯೇ ..
ಕಲ್ಲುದಾ ಗುರಿಟ್ಟು ಪಾದಿಯೋಲೆ ಮರ್ದು ಕುತ್ತುದು ಪೊಡಿ ಮಲ್ದೋಲೆ
ಬೋಲ್ಲಿದಾ ಕರಡಿಗೆಡ್ ...ಯೇ ..
ಬೆಳಗ್ಗಿನ ಜಾವ ಏಳು ಮಲೆಗೆ ಜನರನ್ನು ಕಳುಹಿಸಿ ದೇಯಿ ಬೈದ್ಯೆತಿ ಏಳು ಮುಷ್ಟಿಯಷ್ಟು ಔಷಧದ ಗಿಡದ ಚಿಗುರನ್ನು ತರಿಸಿ ಕುಟ್ಟಿ ಪುಡಿ ಮಾಡಿ ಬೆಳ್ಳಿ ಕರಡಿಗೆಗೆ ತುಂಬಿ ದಂಡಿಗೆ ಏರಿ ಅರಮನೆಗೆ ಬರುತ್ತಾಳೆ .ಒಳ ಬರಲು ಅಳುಕಿದ ಅವಳಲ್ಲಿ “ನೀನು ಕೊಟ್ಟ ಮದ್ದಿನಿಂದ ನಾನು ಬದುಕಿದರೆ ಇನ್ನು ಹತ್ತು ಹದಿನಾರು ಕಾಲ ಪಟ್ಟವನ್ನು ಆಳುವೆ ,ಸಲ್ಲುವ ಕಾಣಿಕೆಯನ್ನು ನಿನಗೆ ಕೊಡುವೆ ಎಂದು ಹೇಳುವರು . ದೇಯಿ ಬೈದ್ಯೆತಿ ಅನೇಕ ದಿನಗಳ ತನಕ ಅಲ್ಲಿದ್ದುಕೊಂಡು ಬಲ್ಲಾಳನ ಕಾಲಿನ ಗಾಯಕ್ಕೆ ಔಷಧಿ ಹಾಕಿ ಉಪಚಾರ ಮಾಡುತ್ತಾಳೆ .ನಿಧಾನವಾಗಿ ಗಾಯ ಮಾಗಿ ಅರಸ ಗುಣ ಮುಖನಾಗುತ್ತಾನೆ .ಆಗ ದೇಯಿ ಬೈದ್ಯೆತಿ ತನ್ನ ಮನೆಗೆ ಹೊರಡುತ್ತಾಳೆ .ತನಗೆ ಬರಬೇಕಾದ ಕಾಣಿಕೆಯನ್ನು ನೆನಪಿಸುತ್ತಾಳೆ .ಆಗ ಅರಸ ನೋವಿನ ಭರದಲ್ಲಿ ನಾನು ಏನೋ ಹೇಳಿರಬಹುದು .ಈಗ ಏನಾದರು ಕೊಡಬೇಕಾದರೆ ಮಂತ್ರಿ ಬುದ್ಯಂತ ಬರಬೇಕು ಎಂದು ಹೇಳಿದನು ಆಗ ಕೋಪಗೊಂಡ ದೇಯಿ ಬೈದ್ಯೆತಿ ಏನು ಬೇಡ ಎಂದು ಹೇಳಿ ಹೊರಡುತ್ತಾಳೆ ಆಗ ರಾಜನ ಕಾಲಿನ ಗಾಯ ಮತ್ತೆ ಉಲ್ಬಣಿಸುತ್ತದೆ .ಆಗ ರಾಣಿ ಬಂದು ಪ್ರಾರ್ಥಿಸಲು ದೇಯಿ ಬೈದ್ಯೆತಿ ಮತ್ತೆ ಅವನನ್ನು ಗುಣಪಡಿಸುತ್ತಾಳೆ .ಆಗ ಬಲ್ಲಾಳರು ದೇಯಿ ಬೈದ್ಯೆತಿಗೆ ಆಭರಣಗಳನ್ನು ಪಟ್ಟೆ ಸೀರೆ ರವಕೆ ,ಸೊಂಟದ ಪಟ್ಟಿ ಮೊದಲಾದವುಗಳನ್ನು ನೀಡಿ “ಇನ್ನು ಉಳಿದದ್ದನ್ನು ನಿನ್ನ ಗರ್ಭದಲ್ಲಿರುವ ಮಗುವಿಗೆ ಕೊಡುವೆನು ಹೆಣ್ಣು ಹುಟ್ಟಿದರೆ ಅವಳಿಗೆ ಚಿನ್ನ ಬೆಳ್ಳಿ ಬೇಕಾದ್ದನ್ನು ಕೊಡುವೆನು ಗಂಡು ಮಗು ಹುಟ್ಟಿದರೆ ಅವರು ವಿದ್ಯೆ ಕಲ್ತು ದುಡಿದು ತಿನ್ನಲು ನನ್ನ ಬೀಡಿಗೆ ಬಂದರೆ ವ್ಯವಸಾಯ ಮಾಡಲು ಕಂಬಳ ಗದ್ದೆ ನೀಡುವೆನು “ಎಂದು ಮಾತು ಕೊಡುತ್ತಾರೆ .
ಪೊನ್ನ ಬಾಲೆ ಈ ಪೆದಿಯಾಂದ ಈ
ನಿಕ್ಕು ಕಾರಿನ ನಡವಳಿಕೆ ಕೊರ್ಪೆಯಾನ್
ಆಣ್ ಬಾಲೆನ್ ಪೆದ್ದಿಯಾಂದ ಈ
ಬೆನ್ದುನ್ಪಿ ಯಿದ್ದೋ ಬುದ್ದಿಲ ತೆರಿನ್ದಾದೆ ...ಯೇ
ಎನ ಬೂಡುಗು ಬತ್ತೆರಾದ್ ಡಾದೇ
ಬೆನೆರೆ ಕಂಬುಲ ಯಾನ್ ಕೊರ್ಪೆನ್ದೆರ್ ..ಯೇ..
ಮು0ದೆ ಒಂದೆರಡು ದಿನಗಳಲ್ಲಿಯೇ ದೇಯಿ ಬೈದ್ಯೆ ತಿ ಎರಡು ಗಂಡು ಮಕ್ಕಳಿಗೆ ಜನ್ಮ ಕೊಡುತ್ತಾಳೆ . ಈ ಅವಳಿ ಮಕ್ಕಳೇ ಮುಂದೆ ತುಳುನಾಡಿನ ವೀರರಾಗಿ ನಾಡನ್ನು ಬೆಳಗುವರು ಬಲ್ಲಾಳರು ಹುಟ್ಟಿದ ಮಕ್ಕಳಿಗೆ ಕೋಟೇಶ್ವರ ದೇವರನ್ನು ನೆನೆದು ಕೋಟಿ ಎಂದು ಚೆನ್ನ ಕೇಶವನನ್ನು ನೆನೆದು ಚೆನ್ನಯ ಎಂದು ಹೆಸರಿಡುವರು .ಮಕ್ಕಳು ತಾಯಿಯ ಹಾಲು ಕುಡಿವ ಕಾಲದಲ್ಲಿಯೇ ತಾಯಿ ದೇಯಿ ಬೈದ್ಯೆತಿ ಸಾಯುತ್ತಾಳೆ .ಮಕ್ಕಳು ಬಟ್ಟಲಿನಲ್ಲಿ ಅಣ್ಣ ತಿನ್ನುವ ವಯಸ್ಸಿನಲ್ಲಿ ತಂದೆ ಕಾಂತನ ಬೈದ್ಯ ಸಾಯುತ್ತಾನೆ . ಈ ಮಕ್ಕಳನ್ನು ಸೋದರ ಮಾವ ಸಾಯನ ಬೈದ್ಯ ಸಾಕಿ ಸಲಹುತ್ತಾರೆ . ಪರಾಕ್ರಮಿಗಳಾಗಿ ಬೆಳೆವ ಇವರು ಅಂಗ ಸಾಧನೆಗಾಗಿ ಗುರುಗಳನ್ನು ಹುಡುಕಿಕೊಂಡು ನಾನಯರ ಗರೋಡಿಗೆ ಹೋಗಿ ನಾನ ವಿಧದ ವಿದ್ಯೆಯನ್ನು ಕಲಿಯುತ್ತಾರೆ .ಆತ ಆಡುವಾಗ ಮಂತ್ರಿ ಬುದ್ಯಂತನ ಮಕ್ಕಳನ್ನು ಸೋಲಿಸುತ್ತಾರೆ .
ದೊಡ್ದವರಾಗಲು ಬಲ್ಲಾಳನಲ್ಲಿಗೆ ಹೋಗಿ ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಕಂಬಳ ಗದ್ದೆಯನ್ನು ಕೊಡುವಂತೆ ಕೇಳುತ್ತಾರೆ .ಆಗ ರಾಜ ಮ0ತ್ರಿ ಬುದ್ಯಂತನಲ್ಲಿ ಕೇಳಿ ಎಂದು ಹೇಳುತ್ತಾನೆ . ಇವರು ಬರುವುದನ್ನು ದೂರದಿಂದ ನೋಡಿದ ಬುದ್ಯಂತ ಕಾರಣವನ್ನು ಊಹಿಸಿ ಅಡಗಿ ಕುಳಿತು ತಾನು ಇಲ್ಲ ಎಂದು ಹೇಳಲು ಮಡದಿಗೆ ತಿಳಿಸಿದನು .ಮಡದಿ ಹಾಗೇ ಹೇಳುತ್ತಾಳೆ ಆಗ ಕೋಟಿ ಚೆನ್ನಯರು ”ಬುದ್ಯಂತರು ಬಂದಾಗ “ಕೋಟಿ ಚೆನ್ನಯರು ಕಂಬಳಕ್ಕೆ ಪ್ರಥಮ ಕಾಣಿಕೆ ಇಟ್ಟಿದ್ದಾರೆ” ಎಂದು ಹೇಳಲು ಹೇಳಿ ಕಾಣಿಕೆ ಇಟ್ಟು ಬರುತ್ತಾರೆ .ಆ ತನಕ ತಾನು ಅನುಭವಿಸುತ್ತಿದ್ದ ಕಂಬಳ ಗದ್ದೆ ಇನ್ನು ಕೋಟಿ ಚೆನ್ನಯರ ಪಾಲಾಗುತ್ತದೆ ಎಂದು ಹೊಟ್ಟೆ ಕಿಚ್ಚಿನಿಂದ ಅವರು ಇಟ್ಟ ಕಾಣಿಕೆಯನ್ನು ಎಸೆದು ಕೆಟ್ಟ ಮಾತು ಆಡುತ್ತಾನೆ .ನಂತರ ಪೆರ್ಮಲೆ ಬಲ್ಲಾಳ ಇವರಿಗೆ ಕೆಳಗಿನ ಕಂಬಳಗದ್ದೆಯನ್ನು ಕೊಡುತ್ತಾನೆ . ಇವರು ವ್ಯವಸಾಯಕ್ಕೆ ಬೇಕಾದ ಎಲ್ಲ ಸಲಕರಣೆಗಳ ಸಿದ್ಧ ಮಾಡುತ್ತಾರೆ .ಇವರ ಗದ್ದೆ ಉಳುಮೆ ಆಗದಂತೆ ,ಕಂಬಳ ಕೋರಿ ಆಗದಂತೆ ತಡೆಯಲು ಬುದ್ಯಂತ ನಾನ ಷದ್ಯಂತ್ರಗಳನ್ನು ಮಾಡುತ್ತಾನೆ .ಬುದ್ಯಂತರು ಕಂಬಳ ಕೋರಿ ಮಾಡುವಂದೆ ಇವರು ಕೂಡಾ ಮಾಡಲು ನಿರ್ಧರಿಸುತ್ತಾರೆ .ಆಗ ಆ ದಿನ ಕಂಬಳ ಮಾಡಿದರೆ ಜಾಗ್ರತೆ ಎಂದು ಇವರನ್ನು ಬುದ್ಯಂತ ಹೆದರಿಸುತ್ತಾನೆ . ಅವನ ಬೆದರಿಕೆಗೆ ಸೊಪ್ಪು ಕಾಕದ ಕೋಟಿ ಚೆನ್ನಯರು ಅದೇ ದಿನ ಕಂಬಳ ಕೋರಿಗೆ ಸಿದ್ಧತೆ ನಡೆಸುತ್ತಾರೆ . ಆ ದಿನ ಕೋಟಿ ಚೆನ್ನಯರ ಗದ್ದೆಗೆ ಕೋಣಗಳನ್ನು ಇಳಿಸಿದಾಗ ಬುದ್ಯಂತರು ಅವರ ಕಂಬಳ ಗದ್ದೆಗೆ ಹಾರಿ ಗದ್ದೆಯಲ್ಲಿ ಹೂತಿದ್ದ ದರಿಗುಂಟ ವನ್ನು ಕಿತ್ತು ಕೋಣದ ನೆತ್ತಿಗೆ ಹೊಡೆಯಲು ಹೋಗುವರು. ಕೋಟಿಚೆನ್ನಯರು “ಒಡೆಯ ಬುದ್ದಿವಂತರೆ ಕೋಣಗಳಿಗೆ ಹೊಡೆಯಬೇಡಿ ಪಡುಮಲೆ ರಾಜ್ಯದಲ್ಲಿ ಕಾಡಿ ಬೇಡಿ ತಂದಿದ್ದೇವೆ ,ನಿಮಗೆ ಕೋಪ ಇದ್ದಾರೆ ನಮ್ಮ ಮೇಲೆ ತೀರಿಸಿ “ಎಂದು ಹೇಳಿ ತಡೆಯುತ್ತಾರೆ .ನಂತರ ಬುದ್ಯಂತ ಮತ್ತು ಕೋಟಿ ಚೆನ್ನಯರ ಎರಡೂ ಕಂಬಳ ಗದ್ದೆಗಳಿಗೆ ಬಿತ್ತನೆ ಕಾರ್ಯ ನಡೆಯುತ್ತದೆ .ಬುದ್ಯಂತರು ಬಿತ್ತನೆ ಮಾಡಿ ಮೂರನೇ ದಿನ ನೀರು ಬಿಡಿಸಲೆಂದು ಬೆಳಗ್ಗಿನ ಜಾವ ಕಂಬಳ ಗದ್ದೆಗೆ ಬರುತ್ತಾರೆ , ಆಗ ಅವ್ರಿಗೆ ಕೋಟಿ ಚೆನ್ನಯರ ಗದ್ದೆಯಲ್ಲಿ ಬೀಜ ಚೆನ್ನಾಗಿ ಮೊಳೆತದ್ದು ಕಾಣಿಸುತ್ತದೆ .ಅವರ ಮೇಲೆ ಅಸೂಯೆಯಿಂದ ಆ ಗದ್ದೆಯ ಬೆಳೆಯನ್ನು ನಾಶ ಮಾಡಲೆಂದು ಕಾಡಿನಿಂದ ಬದಿಯಲ್ಲಿ ಹರಿದು ಹೋಗುವ ನೀರಿಗೆ ಒಡ್ಡು ಕಟ್ಟಿ ಕೋಟಿ ಚೆನ್ನಯರ ಗದ್ದೆಗೆ ರಭಸದಿಂದ ಹರಿಯುವ ಹಾಗೆ ಮಾಡಿ ಆಗ ತಾನೇ ಮೊಳಕೆ ಯೋಡೆದಿದ್ದ ಬತ್ತಿದ ಬೀಜ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಹಾಗೆ ಮಾಡಿದನು.
ಕಾಡ್ ದ ಬೊಲ್ಲೊಗು ಅಡ್ಡ ಕಟ್ ದೇರ್ ,ನೀರ್ ಪೋಪಿ ಸರದ್ ನ್
ಬುಡ್ತೆರ್ ನಡುಪುನಿ ಆನೆ ಬರಕೆದ ಕಣಿ ಕಡ್ತೆರ್ ಕಂಬಳಗ್ ಒಡ ದೇರ್ –ಅಯ್ಯಲ
ಬಿತ್ತು ಬುರುನಾಡೆಗ್ ಮುವಳ ಬಿತ್ತು ಬೂರುನಾಡೆ ಪಾರು ಪೊಯ್ಯ  ಗುರಿ ಗುಂಪು
ಮುಟ್ಟದೆರ್ ಬುಲೆ ಸೇಟ್ಟ ದೆರ್ ಗಾಸಿ ಮಲ್ತೆರ್ 
ಪದ್ಮ ಕಟ್ಟೆಡು ಕುಲ್ಲುದೆರ್ ಗೆಂದಾರೆಗ್ ಒರಗ್ ದೇರ್ (ಸಂ :ದಾಮೋದರ ಕಲ್ಮಾಡಿ )
ಅಲ್ಲಿಗೆ ಕೋಟಿ   ಬಂದು ಬುದ್ಯಂತ  ಬೆಳೆ  ನಾಶಮಾಡಿದ್ದನ್ನೂ ನೋಡಿ ಕೋಪದಿಂದ”ನಮ್ಮ ಬೆಳೆಯನ್ನು ಹಾಳು ಮಾಡಿದ್ದೀರಿ ,ಮಳೆಗಾಲದಲ್ಲಿ ಉಣ್ಣಬೇಕಾದ ಅನ್ನವನ್ನು ಹಾಳು ಮಾಡಿದ್ದೀರಿ ,ನಾನಾಗಿದ್ದಕ್ಕೆ ಇಷ್ಟು ಸಹಿಸಿಕೊಂಡೆ ನನ್ನ ತಮ್ಮ ಬಂದಿದ್ದರೆ ಅನಾಹುತವಾಗುತ್ತಿತ್ತು “ಎಂದು ಹೇಳುತ್ತಾನೆ . ಆಗ ಬುದ್ಯಂತ ಅವರನ್ನು ಹೀನಾಯಮಾನವಾಗಿ ನಿಂದಿಸುತ್ತಾನೆ .ಆಗ ಅಲ್ಲಿಗೆ ಬಂದ ಚೆನ್ನಯ ವಂದಿಸಿ ಗೌರವ  ಸೂಚಿಸಿದಾಗಲೂ ಅವನಿಗೆ ಅವಮಾನ ಮಾಡುತ್ತಾನೆ ಬುದ್ಯಂತ .ಅವನ ಮೇಲೆ ಆವೇಶದಿಂದ ಹಾರಿ ಹೊಡೆಯಲು ಹೋಗುವಾಗ ಬುದ್ಯಂತ ಓಡಿ ಹೋಗುತ್ತಾನೆ .ಅವನನ್ನು ಅಡ್ಡ ಕಟ್ಟಿದ ಕೋಟಿ  ಹಿಡಿದು ನಿಲ್ಲಿಸುತ್ತಾನೆ .ಅವರೊಳಗೆ ಹೋರಾಟ ಆಗಿ ಬುದ್ಯ೦ತ ಕಂಬಳದ ನೀರಿಗೆ ಮಗುಚಿ ಬೀಳುತ್ತಾನೆ .ಅವನನ್ನು ಬಡಿದು ಸಾಯಿಸಿ ಅವನೇ ಮಾಡಿದ ನೀರ ದಾರಿಗೆ ಅಡ್ಡ ಮಲಗಿಸಿ ಬುದ್ಯಂತರ ಮನೆಗೆ ಹೋಗಿ ಅವನ ಹೆಂಡತಿಯಲ್ಲಿ ಗದ್ದೆಗೆ ಹೋಗಿ ನೋಡುವಂತೆ ತಿಳಿಸುತ್ತಾರೆ
ಮನೆಗೆ ಬಂದಾಗ ಮಾವ ಸಾಯನ ಬೈದ್ಯನಿಗೆ ಎಲ್ಲವು ಅರ್ಥವಾಗುತ್ತದೆ .ಇನ್ನು ಆ ಉರಿನಲ್ಲಿ ಅವರಿರುವುದು ಅಪಾಯ ಎಂದರಿತ ಮಾವ ಸಾಯ ಬೈದ್ಯ “ನೀವು ಬಲ್ಲಾಳನಿಗೆ ಕೊಡಲು ಸಾಧ್ಯವಾಗದಂತಹ ವಸ್ತು ಗಳನ್ನು ಕೇಳಿ.ಕೊಡದಿದ್ದಾಗ ಅದೇ ನೆಪ ಮಾಡಿ ದೂರ ಹೊರತು ಹೋಗಿ “ಎಂದು  ಸೂಚಿಸುತ್ತಾರೆ .ಅಂತೆಯೇ ಕೋಟಿ ಚೆನ್ನಯರು ಬಲ್ಲಾಳನಲ್ಲಿಗೆ ಹೋಗಿ “ನೀವು ಕಂಬಳ ಗದ್ದೆ ಕೊಟ್ಟಿದ್ದೀರಿ ಆದರೆ ಬೇಕಾದ ಸಲಕರಣೆಗಳನ್ನು ಕೊಟ್ಟಿಲ್ಲ ಎಂದು ಹೇಳಿದರು ಆಗ ಬಲ್ಲಾಳ್ ನಿಮಗೆ ಏನು ಬೇಕು ಎಂದು ಕೇಳುತ್ತಾನೆ ಆಗ “ಬೀಡಿನ ಮು೦ಬಾಗದಲ್ಲಿರುವ ಸಣ್ಣ ಗೆಂದ ದೊಡ್ಡ ಗೆಂದ ತೆಂಗಿನ ಮರಗಳಲ್ಲಿ ಒಂದನ್ನು ಕೊಡಿ ಎಂದು ಕೇಳುವರು ಅದನ್ನು ಬಿಟ್ಟು ಬೇರೆ ಕೇಳಿ ಎಂದು ಬಲ್ಲಾಳ ಹೇಳಿದಾಗ ಸಣ್ಣ ತುಂಬಾ ದೊಡ್ಡ ತುಂಬಾ ಮಜಲು ಗದ್ದೆಗಳಲ್ಲಿ ಒಂದನ್ನು ಕೇಳುತ್ತಾರೆ .ಅದನ್ನು ಬಲ್ಲಾಳ ಕೊಡುವುದಿಲ್ಲ .ಆಗ “ಬೀಡಿನ ಹಟ್ಟಿಯಲ್ಲಿರುವ ಕಿನ್ನಿ ಕಾಳಿ ದೊಡ್ಡ ಕಾಳಿ ಹಸುಗಳಲ್ಲಿ ಒಂದನ್ನು ಕೊಡಿ” ಎಂದು ಕೋಟಿ ಚೆನ್ನಯರು ಕೇಳಿದರು   ಆಗ ಬಲ್ಲಾಳ “ನೀವು ನನ್ನ ಸ್ವಾರ್ಥಕ್ಕಾಗಿ ಆಶ್ರಯದಲ್ಲಿದ್ದೀರಿ ಪ್ರೀತಿಯಿಂದ ಸಾಕಿದೆ .ಆದರೆ ಅದಕ್ಕಾಗಿ ನನ್ನ ಹನ್ನೆರಡು ರಾಣಿಯರಲ್ಲಿ ಇಬ್ಬರನ್ನು ಕೊಡಬೇಕೆಂದರೆ ಕೊಡಲು ಸಾಧ್ಯವೇ ?ಎಂದು ಬಲ್ಲಾಳರು ಹೇಳಿದಾಗ ಕೋಟಿ ಚೆನ್ನಯರು “ತಾಯಿಯನ್ತಿರುವ ರಾಣಿಯರನ್ನು ನಮಗೆ ಕಟ್ಟುತ್ತೀರಲ್ಲ್ಲ .ಇಂದಿಗೆ ನಾವು ನೀವು ಎರಡಾಯಿತು ಸಂಬಂಧ ಕಡಿಯಿತು “ಎಂದು ಹೇಳಿ 5 ವೀಳ್ಯದೆಲೆ ಇಟ್ಟು  ಬಂದರು   . ಆ ಹೊತ್ತಿಗೆ ಬುದ್ಯಂತ ಸಾವಿನ ಸಮಾಚಾರವು ಬಲ್ಲಾಳನಿಗೆ ತಿಳಿಯಿತು .ಬುದ್ಯಂತ ಸತ್ತರೆ ಸಾಯಲಿ ನೀವು ಹೋಗ ಬೇಡಿ ಎಂದು ಬಲ್ಲಾಳ ಕೋಟಿ ಚೆನ್ನಯರಲ್ಲಿ ಕೇಳಿಕೊಳ್ಳುತ್ತಾನೆ .ಆದರೆ ಕೋಟಿ ಚೆನ್ನಯರು ಹಿಂದೆ ತಿರುಗಿ ನೋಡದೆ ಚಾವಡಿ ಇಳಿದು ಹೋಗುತ್ತಾರೆ .
ಅಲ್ಲಿಂದ ಅವರು ತಮ್ಮ ಅಕ್ಕ ಕಿನ್ನಿದಾರುವನ್ನು ಭೇಟಿ ಮಾಡುತ್ತಾರೆ .ಮುಂದೆ ಚಂದುಗಿಡಿಯ ಕುತಂತ್ರದಿಂದಾಗಿ ಪಂಜದ ಕೇಮರ ಬಲ್ಲಾಳ ಅವರನ್ನು ಬಂಧಿಸುತ್ತಾನೆ .ಅಲ್ಲಿಂದ ಅವರು ಬೆರ್ಮೆರ್ ಸಹಾಯದಿಂದ ತಪ್ಪಿಸಿಕೊಂಡು ಎನ್ಮೂರಿಗೆ ಬಂದು ಅಲ್ಲಿನ ಬಲ್ಲಾಳನ ಆಶ್ರಯದಲ್ಲಿ ಎರಡು ಗುತ್ತುಗಳು ಅಂದರೆ  ಕರ್ಮಿಲಜೆ ಮತ್ತು ನೆಕ್ಕಿಲಜೆಗುತ್ತುಗಳನ್ನು ಪಡೆದು ವ್ಯವಸಾಯ ಮಾಡಿಕೊಂಡು ಇರುತ್ತಾರೆ  .ಅವರು ಕೇಮಲಕ್ಕೆ ಹೋಗಿ ತಾಯಿ ಬೆರ್ಮೆರ್ ಗೆ ಹೇಳಿದ ಹರಿಕೆಯನ್ನು ತೀರಿಸುತ್ತಾರೆ.
ಒಂದು ದಿನ ಅವರು ಬೇಟೆಗೆ ಹೋಗುತ್ತಾರೆ ಕೋಟಿ  ಒಂದು ಹಂದಿಗೆ ಬಾಣ ಬಿಟ್ಟ ಆ ಹಂದಿ  ಪಂಜ-ಎನ್ಮೂರುಗಳ ಗಡಿಯಲ್ಲಿ ಸತ್ತು ಬೀಳುತ್ತದೆ .ಇದರಿಂದ ವಿವಾದ ಉಂಟಾಗಿ ಪಂಜದ ಬಲ್ಲಾಳರು ಯುದ್ಧಕ್ಕೆ ಬರುತ್ತಾರೆ .ಘೋರ ಯುದ್ಧ ನಡೆಯುತ್ತದೆ ಚಂದುಗಿಡಿ ಬಿಟ್ಟ ಬಾಣ ಒಂದು ಚೆನ್ನಯನ  ಕಾಲಿಗೆ ತಾಗುತ್ತದೆ.ಅವನು ಅಣ್ಣನಲ್ಲಿ “ಪಂಜದ ಪಡೆ ನಾಯಿ ಒಂದು ಕಾಲಿಗೆ ಕಚ್ಚಿತು ಎಂದು ಹೇಳುತ್ತಾನೆ .ಆಗ ಕೋಟಿಯು “ಕಣ್ಣಿಂದ ನೋಡ ಬೇಡ ಕೈಯಿಂದ ಹಿಡಿಯಬೇಡ ಒಳಗಿನಿಂದ ತೆಗೆದು ಹೊರಗೆ ಕೊಡಹು ಎಂದು ಹೇಳುತ್ತಾನೆ .ಅದರಂತೆ ಚೆನ್ನಯ ಕಾಲನ್ನು ಕೊಡಹಿದಾಗ ಒಂದು ಗದ್ದೆಯ ಜನ ಪೂರ್ತಿ ನಾಶವಾದರು .
ಯುದ್ಧದಲ್ಲಿ ಕೋಟಿ ಚೆನ್ನಯರು ಚಂದು ಗಿಡಿಯನ್ನು ಕೊಲ್ಲುತ್ತಾರೆ .ಆಗ ಪಂಜದ ಸೈನ್ಯ ಸೋತು ಶರಣಾಗುತ್ತದೆ . ಈ ಸಂದರ್ಭದಲ್ಲ್ಲಿ ಪಂಜದ ಕೆಮರ ಬಲ್ಲಾಳನ ಜುಟ್ಟು ಹಿಡಿದು ಕೋಟಿ ಬಗ್ಗಿಸುತ್ತಾನೆ ಆಗ ಕೋಟಿಯ ಬಲ ಮರ್ಮಾಂಗಕ್ಕೆ ಬಾಣ ಒಂದು ಬಂದು ನಾಟಿತು .ಅದನ್ನು ಪಡುಮಲೆ ಬಲ್ಲಾಳನೆ ಬಿಟ್ಟಿರುತ್ತಾನೆ
ಮರ್ಮಾಂಗಕ್ಕೆ ಬಾಣ ನಾಟಿರುವುದರಿಂದ ತನ್ನ ಅಂತ್ಯ ಸಮೀಪಿಸಿದೆ ಎಂದು ಕೋಟಿಗೆ ತಿಳಿಯಿತು .ಅಣ್ಣನನ್ನು ಅಪ್ಪಿಕೊಂಡ ಚೆನ್ನಯ “ಹುಟ್ಟಿನ ಅಮೇ ಒಂದಾಗಿರುವಾಗ ನಮಗೆ ಸಾವಿನ ಸೂತಕ ಎರಡಾಗುವುದೇ ?! ಎಂದು ಉದ್ಗರಿಸಿದನು ಕೋಟಿ ಯು   ತಮ್ಮನ್ನು ಸಾಕಿದ ಬಲ್ಲಾ ಳನೆಡೆಗೆ ನೋಡಿ “ತಮಗೆ ಜಾತಿ ಭೇದ ನೋಡದೆ ಗರೋಡಿ ಕಟ್ಟಿ ಆರಾಧಿಸುತ್ತಾ ಬನ್ನಿ ನಿಮಗೆ ರಕ್ಷಣೆ ಕೊಡುತ್ತೇವೆ,ನೆನೆಸಿದಲ್ಲಿ ನೆಲೆಯಾಗುತ್ತೇವೆ ,ನ್ಯಾಯಕ್ಕೆ ಇಂಬು ಕೊಡುತ್ತೇವೆ ,ಬೆಳೆಗೆ ರಕ್ಷಣೆ ಕೊಡುತ್ತೇವೆ “ಎಂದು ಹೇಳಿ ವೀರ ಮರಣವನ್ನಪ್ಪುತ್ತಾನೆ .ಆಗ ಚೆನ್ನಯ “ನಮಗೆ ಹೆತ್ತ ಸೂತಕ ಒಂದೇ ಆಗಿತ್ತು ಈಗ ಸತ್ತ ಸೂತಕ ಎರಡಾಗ ಬೇಕೇ ನಾನು ಕೂಡ ನಿನ್ನ ಜೊತೆ ಬರುತ್ತೇನೆ “ಎಂದು ಹೇಳಿ ದಂಬೆ ಕಲ್ಲಿಗೆ ತಲೆಯನ್ನು ಅಪ್ಪಳಿಸಿ ಅಣ್ಣನನ್ನು ಅನುಸರಿಸುತ್ತಾನೆ .ಹೀಗೆ ವೀರ ಮರಣ ವನ್ನಪ್ಪುವ ಸ್ವಾಭಿಮಾನಿಗಳೂ ಅತುಲ ಪರಾಕ್ರಮಿಗಳೂ ಆದ ಅವಳಿ ಸಹೋದರರಾದ ಕೋಟಿ ಚೆನ್ನಯರು ಆರಾಧ್ಯ    ಶಕ್ತಿಗಳಾಗಿ ತುಳುನಾಡನ್ನು ಬೆಳಗುತ್ತಿದ್ದಾರೆ .
 ಇತಿಹಾಸದ ದೃಷ್ಟಿಯಿಂದ   ಪಂಜದ ಕೆಮರ ಬಲ್ಲಾಳ .ಪಡುಮಲೆ ಬಲ್ಲಾಳರ ಉಲ್ಲೇಖ  ಇಲ್ಲಿ ಬಹಳ ಮುಖ್ಯವಾದುದು .ಈ ಆಧಾರಗಳಿಂದ ಕೋಟಿ ಚೆನ್ನಯರ ಕಾಲವನ್ನು ಸುಮಾರು ೧೬ ನೆ ಶತಮಾನ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ
ಪಂಜದ ಕೂತ್ಕುಂಜದಲ್ಲಿರುವ ಗೆಳತಿ ಮಂಗಳ ಗೌರಿಯ ಅಣ್ಣ ನಮ್ಮನ್ನು ಕೋಟಿ ಚೆನ್ನಯರ ಆದಿ ಗರೋಡಿ ಹಾಗು ಸಮಾಧಿ ಇರುವೆಡೆಗೆ ಕರೆದುಕೊಂಡು ಹೋಗಿದ್ದರು .ಎತ್ತರದ ಗುಡ್ಡದ ತುದಿಯಲ್ಲಿ ಆದಿ ಗರೋಡಿ ಇದೆ ತುಸು ದೂರದಲ್ಲಿ ಕೋಟಿ ಚೆನ್ನಯರ ಸಮಾಧಿ ಇದೆ .ಕೋಟಿ ಚೆನ್ನಯರ ಸುರಿಯವನ್ನು ಹಾಕಿರುವ ಒಂದು ಮುಚ್ಚಿದ ಬಾವಿ ಅಲ್ಲಿದೆ.ಸುತ್ತ ಮುತ್ತ ಕಾಡು ಇರುವ ನಿರ್ಜನ ತಾಣ  ಇದು.  ಹೋಗುವಾಗ ನಾವೆಲ್ಲಾ ಬಹಳ ಸಂಭ್ರಮದಲ್ಲಿ ಹೋಗಿದ್ದೆವು .ಹೋಗುತ್ತಾ ಕೋಟಿ ಚೆನ್ನಯರ ವೀರ ಗಾಥೆಯನ್ನು ನಾನು ಹೇಳಿದೆ .ಕೋಟಿ ಚೆನ್ನಯರ ಸಮಾಧಿ ನೋಡಿ ಹಿಂದೆ ಬರುವಾಗ ಏಕೋ ಏನೋ ನಮ್ಮೆ ಕಣ್ಣಂಚು ತೇವಗೊಂಡಿತ್ತು .ಮನಸ್ಸು ಭಾರವಾಗಿತ್ತು. ಕೋಟಿಚೆನ್ನಯರು  ಬೆಳೆದ ಅವರ ಮಾವ  ಸಾಯನ ಮನೆ ಗೆಜ್ಜೆ ಗಿರಿ ನಂದನ ಹಿತ್ತಿಲು ,ಪಡುಮಲೆ ಬಲ್ಲಾಳನ ಅರಮನೆಯ ಅವಶೇಷ ,ದೇಯಿ ಬೈದ್ಯೆತಿ ಹುಟ್ಟಿದ ಕೂವೆ ತೋಟ ಮನೆ ಮತ್ತು ಅದರ ವಾರಸು ದಾರರು ಮತ್ತು ಅಕ್ಕ ಕಿನ್ನಿದಾರುವಿನ ದೋಲದ ಮನೆ ,ಕೋಟಿಚೆನ್ನಯರು ನೀರು ಕುಡಿದ ಬಾವಿ ,ಅವರ ಪ್ರತೀಕ ವಾಗಿರುವ ಎರಡು ತಾಳೆ ಮರಗಳು ಈಗ ಕೂಡ ಇವೆ © ಡಾ.ಲಕ್ಷ್ಮೀಜಿ ಪ್ರಸಾದ(ಸೂಕ್ತ ಚಿತ್ರ ಒದಗಿಸಿದ ಜೀವಿತ್ ಶೆಟ್ಟಿ ಮಂಗಳೂರು ಇವರಿಗೆ ಧನ್ಯವಾದಗಳು ) copy rights reserved
ಆಧಾರ : ಕೋಟಿ ಚೆನ್ನಯ ಪಾಡ್ದನ ಸಂ ಮೋಹನ್ ಕುಮಾರ್
ಗರೊಡಿಗಳ ಸಾಂಸ್ಕೃತಿಕ ಅದ್ಯಯನ: ಡಾ.ಬನ್ನಂಜೆ ಬಾಬು ಅಮೀನ್ 
ಭೂತಾರಾಧನೆಗ- ಒಂದು ಜಾನಪದೀಯ ಅಧ್ಯಯನ ( ಪಿಎಚ್ ಡಿ ಮಹಾ ಪ್ರಬಂಧ) ಡಾ.ಚಿನ್ನಪ್ಪ ಗೌಡ 

Monday 1 September 2014

ಪಾಠ ಪುಸ್ತಕದಲ್ಲಿರುವುದನ್ನು ಬೋಧಿಸುವುದಷ್ಟೇ ಶಿಕ್ಷಕರ ಕೆಲಸವೇ ?-ಡಾ.ಲಕ್ಷ್ಮೀ ಜಿ ಪ್ರಸಾದ



ಮೊನ್ನೆ ಅಗಸ್ಟ್ 15 ರಂದು ದಕ್ಷಿಣ ಕನ್ನಡ ಜಿಲ್ಲೆಯ  ಸುಳ್ಯ ರೈತಾಪಿ ಜನರ ಸ್ವಾತಂತ್ರ್ಯ ಹೋರಾಟದ ಕುರಿತಾದ ಲೇಖನ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಯಿತು . ಕಲ್ಯಾಣ ಸ್ವಾಮಿ ವಶಪಡಿಸಿಕೊಂಡ ಬ್ರಿಟಿಷರ ಖಜಾನೆಯ ಫೋಟೋ  ಕೂಡ ಪ್ರಕಟವಾಗಿತ್ತು .
ಅದನ್ನು ಓದಿದ ನನ್ನ ಅನೇಕ ಬೆಳ್ಳಾರೆ, ಸುಳ್ಯ ಸುತ್ತು ಮುತ್ತಲಿನ ಫೇಸ್ ಬುಕ್ ಗೆಳೆಯರು "ನಾನು ಬೆಳ್ಳಾರೆಯಲ್ಲಿ ಓದಿದ್ದು ,ನನಗೆ  ಬಂಗಲೆ ಗುಡ್ಡೆ ಹೆಸರು ಗೊತ್ತಿತ್ತು. ಆದರೆ ಅದೊಂದು ಕೋಟೆ ಆಗಿತ್ತು. ಅದಕ್ಕೆ ಇಷ್ಟೊಂದು ಐತಿಹಾಸಿಕ ಹಿನ್ನೆಲೆ ಮತ್ತು ಮಹತ್ವ ಇದೆ ಎಂದು ಗೊತ್ತಿರಲಿಲ್ಲ. ಕಲ್ಯಾಣ ಸ್ವಾಮಿಯ ಕಾಟುಕಾಯಿ ಬಗ್ಗೆ ನಮ್ಮ ಇತಿಹಾಸ  ಪಾಠ ಪುಸ್ತಕದಲ್ಲಿ ಎರಡು ಸಾಲಿನ ವಿವರಣೆ ಇತ್ತು  .ನಮಗೆ  ಪಾಠ ಮಾಡಿದ ಶಿಕ್ಷಕರೂ ಅಷ್ಟನ್ನೇ ಹೇಳಿದ್ದರೆ ಹೊರತು ಅಲ್ಲಿರುವ ಬಂಗ್ಲೆ ಗುಡ್ಡೆ ಮತ್ತು ಅದರ ಮೇಲಿರುವ ಸಣ್ಣ ಕಟ್ಟಡ ಕಲ್ಯಾಣ ಸ್ವಾಮಿಯ ವಶಪಡಿಸಿಕೊಂಡದ್ದು ಎಂಬುದನ್ನು ಹೇಳಿರಲಿಲ್ಲ "ಎಂದು ಹೇಳಿದರು.
ಅವರ ಮಾತು ಕೇಳಿ ನನಗೇನೂ ಆಶ್ಚರ್ಯ ಆಗಲಿಲ್ಲ . ಇದು ಒಂದು ಉದಾಹರಣೆ ಅಷ್ಟೇ . ಹೆಚ್ಚಿನ ಶಾಲಾ ಕಾಲೇಜುಗಳ  ಶಿಕ್ಷಕರಿಗೆ/ಉಪನ್ಯಾಸಕರಿಗೆ  ಸ್ಥಳೀಯ ಇತಿಹಾಸದ ಬಗ್ಗೆ ಮಾಹಿತಿ ಮಾಹಿತಿ ತಿಳಿದಿಲ್ಲ .ತಿಳಿದವರಿಗೂ ವಿದ್ಯಾರ್ಥಿಗಳಿಗೆ ತಿಳಿಸಿ ಕೋಟೆ,ಕೊತ್ತಲ ಕೆರೆಗಳ ಬಳಿಗೆ ವಿದ್ಯಾರ್ಥಿಗಳನ್ನು ಕರೆದು ಕೊಂಡು ಹೋಗಿ ತೋರಿಸುವ ಬಗ್ಗೆ ಆಸಕ್ತಿ ಇಲ್ಲ .
ಯಾಕೆಂದರೆ ಸ್ಥಳೀಯ ಇತಿಹಾಸ ಪಾಠ ಪುಸ್ತಕದಲ್ಲಿ ಇರುವುದಿಲ್ಲ .”ಪಾಠ ಪುಸ್ತಕದಲ್ಲಿರುವುದನ್ನು ಮಾತ್ರ ಪಾಠ ಮಾಡಿ ಮುಗಿಸಿ ಪ್ರಶ್ನೆ ಉತ್ತರಗಳನ್ನು ನೀಡಿ ಬಾಯಿ ಪಾಠ ಮಾಡಿಸುವುದು ,ಉತ್ತಮ ಫಲಿತಾಂಶ ನೀಡುವುದು ಮಾತ್ರ ಶಿಕ್ಷಕರ ಜವಾಬ್ದಾರಿ”ಎಂಬ ಭಾವನೆ ಎಲ್ಲೆಡೆ ಇದೆ .ಪೋರ್ಷನ್  ಕವರ್ ಮಾಡುವ ಶಿಕ್ಷಕರೇ ಹೆಚ್ಚಿನವರಾಗಿದ್ದಾರೆ.
ಶಿಕ್ಷಕರ ಕುರಿತಾದ ಅನೇಕ ಹಾಸ್ಯಗಳು ಪ್ರಚಲಿತವಿವೆ .“ಈಗಿನ ಶಿಕ್ಷರಿಗೆ ಎರಡೇ ಎರಡು ಬುಕ್ ಗಳ ಪರಿಚಯ ಇರೋದು .ಒಂದು ಚೆಕ್ ಬುಕ್ ಇನ್ನೊಂದು ಪಾಸ್ ಬುಕ್” ಎನ್ನುವುದು ಕೂಡ ಇದರಲ್ಲಿ ಒಂದು .  ಇದನ್ನು ಫೇಸ್ ಬುಕ್ ನಲ್ಲಿ ಯಾರೋ ಹಾಕಿದ್ದು ಇತ್ತೀಚೆಗೆ ಅದನ್ನು  ಓದಿದ ನೆನಪಿದೆ  .ಮೇಲ್ನೋಟಕ್ಕೆ ಇದು ಉತ್ಪ್ರೇಕ್ಷೆ ಎಂದೆನಿಸಿದರೂ ಇದರಲ್ಲಿ ತುಸು ವಾಸ್ತವವೂ ಅಡಗಿದೆ ಎನ್ನುವುದು ಒಪ್ಪತಕ್ಕ ವಿಚಾರವೇ ಆಗಿದೆ .
 ದೂರದ ಹಂಪಿ .ಬಾದಾಮಿ ,ಪಟ್ಟದ ಕಲ್ಲುಗಳ ಪುಸ್ತಕದಲ್ಲಿನ  ಇತಿಹಾಸವನ್ನು ಓದಿ ವಿವರಿಸುವವರು ಹತ್ತಿರದ ವಿಚಾರಗಳನ್ನು ಹೇಳುವುದಿಲ್ಲ ಯಾಕೆಂದರೆ ಹೇಳಬೇಕಿದ್ದರೆ ಅಧ್ಯಯನ ಮಾಡಬೇಕಾಗುತ್ತೆ !ಈ ರೀತಿ ಯಾರೂ ಅಧ್ಯಯನ ಮಾಡದಿರುವ ಕಾರಣ ಅಲ್ಲೊಬ್ಬರು ಇಲ್ಲೊಬ್ಬರು ಇಂತಹ ವಿಚಾರಗಳನ್ನು ಹೇಳಿದರೆ ಅದು ಇತರರಿಗೆ ಒಂದು ತಮಾಷೆಯ, ಆಡಿಕೊಳ್ಳುವ ವಿಷಯ ಆಗಿರುತ್ತದೆ !!
ಎರಡು ವರ್ಷದ ಹಿಂದೆ  ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಪೆರುವಾಜೆಯಲ್ಲಿ ಸುಮಾರು 1400 ವರ್ಷಕ್ಕಿಂತ ಪ್ರಾಚೀನ ಬುದ್ಧನ ವಿಗ್ರಹ ಮತ್ತು ಇತರ ಕೆಲವು ವಿಗ್ರಹಗಳು ಪತ್ತೆಯಾಗಿದ್ದವು .ಅದು ಈಗ ಉಪ್ಪಿನಂಗಡಿ ಹೊಳೆಯಲ್ಲಿ ಜಲ ಸಮಾಧಿ ಆಗಿದೆ .ಎಲ್ಲಾ ಕಡೆ ಇಂಥ ಅಪರೂಪದ ವಿಗ್ರಹಗಳು, ಪ್ರಾಚೀನ ಪಳೆಯುಳಿಕೆಗಳು ಕಳೆದು ಹೋಗುತ್ತಿವೆ . ಇದಕ್ಕೆ ಶಿಕ್ಷದಲ್ಲಿನ ಆನ್ವಯಿಕತೆಯ ಕೊರತೆಯೇ ಮುಖ್ಯ ಕಾರಣವಾಗಿದೆ . ಇಂತಹ ಪ್ರಾಚೀನ ವಿಗ್ರಹಗಳ ಪ್ರಾಮುಖ್ಯತೆಯೇ ಯಾರಿಗೂ ತಿಳಿದಿಲ್ಲ .ತಿಳಿದವರಿಗೂ ಇದರ ಸಂರಕ್ಷಣೆಯ ಉಸಾಬರಿ ಬೇಕಾಗೂ ಇಲ್ಲ ಎನ್ನುವುದು ಶೋಚನೀಯ ವಿಚಾರ !
ಅಜಂತಾ ಎಲ್ಲೋರಾ, ಹರಪ್ಪ ಮೊಹೆಂಜೆದಾರೋ ಬಗ್ಗೆ ಪಾಠ ಮಾಡುವವರು ಸ್ಥಳೀಯ ಪ್ರಾಚ್ಯಾವಶೇಷಗಳ ಸಂರಕ್ಷಣೆ ಬಗ್ಗೆಯೂ ಕಾಳಜಿ ವಹಿಸುತ್ತಿದ್ದರೆ, ಇದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರೆ ,ತಾವೂ ಈ ಕಾರ್ಯಕ್ಕೆ ಕೈ ಜೋಡಿಸಿದರೆ ,ಸ್ಥಳೀಯ ವಿದ್ಯಾರ್ಥಿಗಳು ಇವನ್ನು  ನೀರು ಪಾಲು ಮಾಡಲು ಬಿಡಲಾರರು  ಅಲ್ಲವೇ ?
ಪಾಠ ಮಾಡಿದ್ದನ್ನು ಶಿಕ್ಷಕರು ಅನುಸರಿಸಿದರೆ ಮಾತ್ರ ಇದು ಸಾಧ್ಯ .


ಈಗ ಶಿಕ್ಷಣ  ಎಂದರೆ ಪಾಠ ಪುಸ್ತಕದಲ್ಲಿರುವುದನ್ನು ಇದ್ದ ಹಾಗೆಯೇ ಹೇಳುವುದು ಪರೀಕ್ಷೆಗೆ ಏನು ಪ್ರಶ್ನೆ ಬರುತ್ತೆ ?ಅಂತ ಅದನ್ನೇ ಬಾಯಿ ಪಾಠ ಮಾಡಿಸುವುದು ,ಒಳ್ಳೆಯ ಫಲಿತಾಂಶ ತರುವುದು ಅಷ್ಟೇ .ಇದನ್ನೂ ಸರಿಯಾಗಿ ಮಾಡದ ಅನೇಕ ಶಿಕ್ಷಕರು ಕೂಡ ಇದ್ದಾರೆ ಎನ್ನುವುದು ಕೂಡ ಚಿಂತನೀಯ ವಿಚಾರ !
ಶಿಕ್ಷಕರು ಪರಿಸರ ಮಾಲಿನ್ಯದ ಬಗ್ಗೆ ಗಂಟೆ ಗಟ್ಟಲೆ ಕೊರೆದು ಪಾಠ ಮಾಡುತ್ತಾರೆ .ಪರಿಸರ ಮಾಲಿನ್ಯದ ಕುರಿತು ಜಾಥಾ ,ಮೆರವಣಿಗೆ ,ಭಾಷಣ ,ವಿವಿಧ  ಸ್ಪರ್ಧೆಗಳನ್ನು ಮಾಡುತ್ತಾರೆ ಆದರೆ ಶಾಲಾ ,ಕಾಲೇಜ್ ಆವರಣದಲ್ಲೇ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ತಟ್ಟೆ ಲೋಟಗಳನ್ನು ಬಳಸಿ ಬಿಸಾಡುತ್ತಾರೆ  ! ಮತ್ತೆ ಬಳಸಬಹುದಾದ ಸ್ಟೀಲ್  ಪರಿಕರಗಳನ್ನೇಕೆ ಉಪಯೋಗಿಸಬಾರದು ?ಮಣ್ಣಿನಲ್ಲಿ ಸೇರುವ, ಪರಿಸರಕ್ಕೆ ಹಾನಿಕರವಲ್ಲದ ಅಡಿಕೆಯ ಹಾಳೆಯಿಂದ ತಯಾರಿಸಿದ ತಟ್ಟೆಗಳನ್ನೇಕೆ ಬಳಸ ಬಾರದು ಎಲ್ಲೆಡೆ? ಶಾಲಾ ಕಾಲೇಜ್ ಆವರಣಕ್ಕೆ ಹೊಂದಿಕೊಂಡಿರುವ ಮರಗಿಡಗಳನ್ನು ವಿನಾ ಕಾರಣ ಕಡಿಯುವಾಗಲೂ ಸುಮ್ಮನಿರುತ್ತಾರೆ !ಇನ್ನು ಮರ ಗಿಡ ಬೆಳೆಸುವ ಬಗ್ಗೆ ಪಾಠ ಮಾಡುವುದರಿಂದ ಏನು ಪ್ರಯೋಜನವಾದೀತು ?!
ಈಗಂತೂ ಪಾಠ ಪುಸ್ತಕದಲ್ಲಿ ದಲ್ಲಿ ಎಲ್ಲೆಡೆ ಭ್ರಷ್ಟಾಚಾರದ ಕುರಿತು ,ಗ್ರಾಹಕ ಹಕ್ಕುಗಳ ಕುರಿತು ಮಾಹಿತಿ ವಿಸ್ತೃತವಾಗಿ ಇರುತ್ತದೆ .ಪಕ್ಕದ ನೆಮ್ಮದಿ ಕೇಂದ್ರದವರು ಆದಾಯ ಪ್ರಮಾಣ ಪತ್ರ ಕೊಡಬೇಕಾದರೆ 100 ರೂ ವಸೂಲಿ ಮಾಡುವುದು ಗೊತ್ತಿದ್ದರೂ ಎಲ್ಲರೂ ಜಾಣ ಮೌನ ವಹಿಸುತ್ತಾರೆ .ಲಂಚ ಕೊಡ ಬಾರದು ಮತ್ತು ತೆಗೆದು ಕೊಳ್ಳ ಬಾರದು” ಎಂದು ಪಾಠ ಮಾಡುವ ಶಿಕ್ಷಕರು  ಕಾರ್ಯ ರೂಪಕ್ಕೆ ಯಾವುದನ್ನೂ ತರುವುದಿಲ್ಲ !ತರಲು ಸಹಾಯ ಮಾಡುವುದೂ ಇಲ್ಲ .ಪಕ್ಕದಲ್ಲಿರುವ ನಂದಿನಿ ಬೂತಿನಲ್ಲಿ ಹಾಲಿಗೆ ನಮೂದಿಸಿದ ಬೆಲೆಗಿಂತ ಎರಡು  ರೂ ಹೆಚ್ಚು ತೆಗೆದು ಕೊಂಡರೂ ಮಾತನಾಡದೆ ಕೊಡುವ ಶಿಕ್ಷಕರು ಗ್ರಾಹಕ ಹಕ್ಕುಗಳ ಬಗ್ಗೆ ಏನು ಪಾಠ ಹೇಳಿದರೂ  ಅದು ಕಾರ್ಯ ರೂಪಕ್ಕೆ ಬರಲು ಸಾಧ್ಯವೇ ?
ಇದರ ಪರಿಣಾಮವೇನಾಗುತ್ತಿದೆ ಗೊತ್ತೇ ?ವಿದ್ಯಾರ್ಥಿಗಳಿಗೆ ತಾವು ಕಲಿತ ವಿಷಯಗಳ ಆನ್ವಯಿಕತೆ ಬಗ್ಗೆ  ತಿಳಿದೇ ಇರುವುದಿಲ್ಲ .ಇದು ಕೇವಲ ಬಾಯಿ ಪಾಠ ಮಾಡಿ ಅಂಕಗಳಿಕೆಗೆ ನೆರವಾಗುತ್ತವೆ ಅಷ್ಟೇ !
ಇದಕ್ಕೊಂದು ಉದಾಹರಣೆ ನೆನಪಾಗುತ್ತಿದೆ.
ಇತ್ತೀಚೆಗೆ ನನಗೆ ಒಬ್ಬ ನರ್ಸ್ ಅವರ ಪರಿಚಯ ಆಯಿತು .ಅವರು ಹೇಳಿದ ಒಂದು ವಿಚಾರ ಕೇಳಿ ನನಗೆ ಆಶ್ಚರ್ಯವಾಯಿತು .
ತುಂಬಾ ಬಡ ಮನೆಯ ಹುಡುಗಿ. ಆದರೆ ಪ್ರತಿಭಾವಂತೆ . ಪಿಯುಸಿಯಲ್ಲಿ 90 % ಅಂಕಗಳನ್ನು ಗಳಿಸಿದ್ದರು .ಅನಂತರ ಬೇಗ ಉದ್ಯೋಗ ದೊರೆಯುತ್ತದೆ ಎಂಬ ಕಾರಣಕ್ಕೆ ನರ್ಸಿಂಗ್  ತರಬೇತಿ ಪಡೆದು ಒಂದು ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು .ಅಲ್ಲಿ ಕೆಲಸಕ್ಕೆ ಸೇರುವ ಮುನ್ನ ಅಂಚೆ ಇಲಾಖೆಯಲ್ಲಿ ಪೋಸ್ಟ್ ಮಾಸ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು . ಕೆಲಸಕ್ಕೆ ಸೇರಿದ ತುಸು ಸಮಯದಲ್ಲಿಯೇ ಸಂದರ್ಶನಕ್ಕೆ ಆಹ್ವಾನ ಬಂತು .ಪೋಸ್ಟ್ ಮಾಸ್ಟರ್ ಹುದ್ದೆಯು  ಪಿ.ಯು.ಸಿಯಲ್ಲಿ ಪಡೆದ ಅಂಕಗಳ ಮೇಲೆ ಸಿಗುತ್ತದೆ .ಇದಕ್ಕೆ ಬೇರೆ ಏನೂ ಅರ್ಹತೆ ಅಥವಾ ಅರ್ಹತಾ ಪರೀಕ್ಷೆ ಇರುವುದಿಲ್ಲ .ಸಂದರ್ಶನಕ್ಕೆ ಹೋಗುವಾಗ  ಮೂಲ ಅಂಕ ಪಟ್ಟಿಗಳನ್ನು ಕೊಂಡೊಯ್ಯಲೇ ಬೇಕು ತಾನೇ .
ಈ ಯುವತಿ ನರ್ಸ್ ಕೆಲಸಕ್ಕೆ ಸೇರುವಾಗ ಅವರ ಮೂಲ ಪ್ರಮಾಣ ಪತ್ರಗಳನ್ನು ಆ ಆಸ್ಪತ್ರೆಯ ಯಜಮಾನರು ತೆಗೆದು ಇಟ್ಟುಕೊಂಡಿದ್ದರು .
ಇವರು “ನನಗೆ ಸಂದರ್ಶನಕ್ಕೆ ಬಂದಿದೆ .ನನಗೆ ಅಂಕ ಪಟ್ಟಿಗಳನ್ನು ಕೊಡಿ ”ಎಂದರೆ ಅವರು “ಕೆಲಸಕ್ಕೆ ಸೇರಿ ಆರು ತಿಂಗಳ ಕಾಲ  ಕೆಲಸ ಬಿಡುವಂತಿಲ್ಲ.
ನೀನು ಬಾಂಡ್ ಗೆ ಸಹಿ ಮಾಡಿದ್ದಿ ,ಅಂಕ ಪಟ್ಟಿ ಕೊಡಲು ಆಗುವುದಿಲ್ಲ”ಎಂದು ಹೇಳಿ ಅಂಕ ಪಟ್ಟಿಗಳನ್ನು ಕೊಡಲು ನಿರಾಕರಿಸಿದರು.ಹಾಗಾಗಿ ಈ ಬುದ್ಧಿವಂತ ಯುವತಿಗೆ  ಸಂದರ್ಶನಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ.
ಖಂಡಿತವಾಗಿಯೂ ದೊರೆಯಬಹುದಾಗಿದ್ದ ಒಳ್ಳೆಯ ಕೆಲಸ ಕೈ ತಪ್ಪಿ ಹೋಯಿತು.
ಆಗ ನಾನು ಆ ಯುವತಿಯಲ್ಲಿ “ಸಂದರ್ಶನ ಆಗಿ ಕೆಲಸಕ್ಕೆ ಹಾಜರಾಗಲು ಆದೇಶ ಬರುವಾಗ ಆರೇಳು ತಿಂಗಳು ಕಳೆಯುತ್ತದೆ .ಅಲ್ಲದೆ ಕೆಲಸ ಬಿಡಬಾರದು ಎಂದು ಮಾತ್ರ ಬಾಂಡ್ ಇರುವುದು ತಾನೇ ?ಸಂದರ್ಶನಕ್ಕೆ ಹಾಜರಾಗಲು ಅಂಕ ಪಟ್ಟಿ ಕೊಡದಿದ್ದರೆ ಕೂಡಲೇ  ಪೊಲೀಸರಿಗೆ ದೂರು ಕೊಟ್ಟು ಅಂಕ ಪಟ್ಟಿ ಪಡೆದು ಸಂದರ್ಶನಕ್ಕೆ ಹಾಜರಾಗ ಬಹುದಿತ್ತಲ್ಲ?ಒಂದು ವೇಳೆ ಆರು ತಿಂಗಳ ಒಳಗೇ ನೇಮಕಾತಿ ಆದೇಶ ಬಂದರೆ ದಂಡ ಕಟ್ಟಿ ಆ  ಕೆಲಸ ಬಿಟ್ಟು ಸಿಕ್ಕ ಹೊಸ ಕೆಲಸಕ್ಕೆ ಹೋಗಬಹುದಿತ್ತು ಅಲ್ವ ?” ಎಂದು  ಕೇಳಿದೆ.
 “ಹೌದಾ ಮೇಡಂ, ನನಗೆ ಈ ಬಗ್ಗೆ ಗೊತ್ತಿರಲಿಲ್ಲ”ಎಂದು ಅವರು ತುಂಬಾ ಖೇದದಿಂದ ,ಕಣ್ಣಲ್ಲಿ ನೀರು ತಂದುಕೊಂಡು ತಿಳಿಸಿದರು. ಒಳ್ಳೆಯ ಕೆಲಸ ಸಿಕ್ಕುವ ಅವಕಾಶ ತಪ್ಪಿ ಹೋದ ಬಗ್ಗೆ ಅವರಿಗೆ ಅಪಾರ ನೋವಿತ್ತು .ಮಾನವ ಹಕ್ಕು ,ಗ್ರಾಹಕ ಹಕ್ಕು ,ಮಕ್ಕಳ ಹಕ್ಕು ,ಪೌರರ ಹಕ್ಕು ,ಕರ್ತವ್ಯ ಇತ್ಯಾದಿಗಳನ್ನು ಬಾಯಿ ಪಾಠ ಮಾಡಿ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳಿಗೆ ಅದರ ಆನ್ವಯಿಕತೆಯ ಅರಿವಿಲ್ಲದಿರುವುದಕ್ಕೆ ಈ ವೃತ್ತಾಂತ ಸಾಕ್ಷಿಯಾಗಿದೆ.
ಇದೆಲ್ಲ ಕಲಾ ತರಗತಿಗಳಿಗೆ ಸಂಬಂಧಿಸಿದ್ದು ಎಂದಾದರೆ ವಿಜ್ಞಾನದ ಪರಿಸ್ಥಿತಿ ಏನೂ ಇದರಿಂದ ಭಿನ್ನವಾಗಿಲ್ಲ .ವಿದ್ಯುತ್ ಬಗ್ಗೆ ,ಎಲೆಕ್ಟ್ರಾನಿಕ್ಸ್ ಬಗ್ಗೆ ಪಾಠ ಕೇಳುವ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಫ್ಯೂಸ್  ಹೋದರೆ ಹಾಕಲು ಬರುವುದಿಲ್ಲ ,ಫ್ಯಾನ್ ನಂತಹ ಸುಲಭೋಪಯೋಗಿ ವಸ್ತುಗಳನ್ನು ಜೋಡಿಸಲು ಬರುವುದಿಲ್ಲ .ಯಾಕೆಂದರೆ ಪ್ರಾಯೋಗಿಕತೆ ಪಾಠ ದಲ್ಲಿ ಇಲ್ಲವೇ ಇಲ್ಲ . ಅನೇಕ ವಿಜ್ಞಾನದ ಶಿಕ್ಷಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ !ಮತ್ತೆ ಮಕ್ಕಳಿಗೆ ಹೇಗೆ ತಿಳಿಯುತ್ತದೆ ?
ಇತ್ತೀಚೆಗೆ ಇನ್ಸ್ಪೈರ್ ಅವಾರ್ಡ್ ಗೆ ತೀರ್ಪುಗಾರರಾಗಿ ಹೋಗಿದ್ದವರೊಬ್ಬರು "ಅಲ್ಲಿ ಇದ್ದ ಹೆಚ್ಚಿನ ವಿಜ್ಞಾನ ಮಾದರಿಗಳು ಅಂಗಡಿಯಿಂದ ಖರೀದಿಸಿ ತಂದವುಗಳಾಗಿದ್ದವು ಮತ್ತು ಹೆಚ್ಚು ಕಡಿಮೆ ಎಲ್ಲರದೂ ಒಂದೇ ಮಾದರಿಯ ಉಪಕರಣಗಳು ,ಸ್ವಂತಿಕೆ ಎಂಬುದು ಕಾಣಿಸುತ್ತಲೇ ಇಲ್ಲ "ಎಂದು ಹೇಳಿದ  ಬಗ್ಗೆ ಓದಿದ್ದು ನೆನಪಿಗೆ ಬರುತ್ತಿದೆ .

ಸುಮಾರು  ಒಂದೂವರೆ ವರ್ಷದ ಹಿಂದೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ನನಗೆ ರೈಲಿನಲ್ಲಿ ಡಾ .ಶಶಿಕಲಾ ಎಂಬ ನಿವೃತ್ತ ಮುಖ್ಯೋಪಾಧ್ಯಾಯಿನಿಯವರು ಮಾತಿಗೆ ಸಿಕ್ಕಿದ್ದರು .ನಮ್ಮ ಮಾತುಗಳು ಇಂದಿನ ಹಾದಿ ತಪ್ಪುತ್ತಿರುವ ಯುವ ಜನಾಂಗ,  ಭ್ರಷ್ಟಾಚಾರ ,ಭಯೋತ್ಪಾದನೆ ,ನೀರಿನ ಕೊರತೆ ,ಇತ್ಯಾದಿ ಹತ್ತು ಹಲವು ಕ್ಷೇತ್ರಗಳಲ್ಲಿ ಹಂಚಿ ಹರಿದಾಡಿದವು.
ಮಾತಿನ ಕೊನೆಗೆ ಅವರು ಒಂದು ಮಾತು ಹೇಳಿದರು. "ನಮ್ಮ ದೇಶದ ಹೆಚ್ಚಿನ ಸಮಸ್ಯೆಗಳಿಗೂ ಮುಖ್ಯ ಕಾರಣ ಶಿಕ್ಷಕರು .ಇವರು ಸರಿಯಾಗಿ ಪಾಠ ಮಾಡಿ ತಾವು ಪಾಠ ಮಾಡಿದ್ದನ್ನು ತಾವೇ ಮೊದಲಿಗೆ ಅನುಸರಿಸಿ ವಿದ್ಯಾರ್ಥಿಗಳು ಅನುಸರಿಸುವ ಹಾಗೆ ಮಾಡಿದ್ದರೆ ಹೆಚ್ಚಿನ ಸಮಸ್ಯೆಗಳು ಪರಿಹಾರವಾಗುತ್ತಿದ್ದವು "ಎಂದು .ಇದು ಸ್ವಲ್ಪ ಉತ್ಪ್ರೇಕ್ಷೆ ಎಂದೆನಿಸಿದರೂ ಅವರು ಹೇಳಿದ್ದರಲ್ಲಿ ವಾಸ್ತವತೆಯ ಕಟು ಸತ್ಯ ಅಡಗಿದೆ ಎನ್ನುವುದನ್ನು ಅಲ್ಲಗೆಳೆಯುವಂತಿಲ್ಲ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ .

ಪಟ್ಟಿಮಾಡ ಹೋದರೆ ಅನೇಕ ಕುಂದು ಕೊರತೆಗಳು ಇರಬಹುದು,
ಸಂಪನ್ಮೂಲಗಳ ಕೊರತೆ ಇರಬಹುದು .ಆದರೆ ಇರುವಷ್ಟನ್ನು ಬಳಕೆ ಮಾಡಿ ಅನ್ವಯ ಮಾಡುವುದಕ್ಕೆ ಏನಡ್ಡಿ ?
ಇತ್ತೀಚಿಗೆ ಒಂದು ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಹೋದೆ .ಅಲ್ಲಿ ಸಿಮೆಂಟಿನಿಂದ ರಚಿಸಿದ  ಸುಸಜ್ಜಿತ ರಂಗ ವೇದಿಕೆ ಇತ್ತು .ಆದರೆ ಅದಕ್ಕೆ ಒಂದು ಅಡ್ಡಲಾಗಿ ಸೀರೆಯನ್ನು ಕಟ್ಟಿಯಾದರೂ ಒಂದು ತೆರೆ/ಪರದೆಯ ವ್ಯವಸ್ಥೆ ಮಾಡಿರಲಿಲ್ಲ .ಅಲ್ಲಿ ಮೈಕ್ ಇತ್ತು, ಆದರೆ ಅದನ್ನು ಒಂದು ಸ್ಟಾಂಡ್ ಗೆ ಕಟ್ಟಿರಲಿಲ್ಲ .ನಾಟಕ ಸ್ಪರ್ಧೆಯಲ್ಲಿ ಅಭಿನಯಿಸುವಾಗ ಮಕ್ಕಳು, ಇರುವ ಒಂದು ಮೈಕ್ ಅನ್ನು ಒಬ್ಬರಿಗೊಬ್ಬರ ಕೈಗೆ  ನೀಡಿ ಅಭಿನಯಿಸಬೇಕಾಯಿತು !ಅಲ್ಲಿಗೆ ಬಂದಿದ್ದ  ವಿದ್ಯಾರ್ಥಿಗಳಲ್ಲಿ ಒಂದಿನಿತೂ ಶಿಸ್ತು ಇರಲಿಲ್ಲ .ಅವರಿಗೆ ಅಲ್ಲಿ  ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಇರಲಿಲ್ಲ. “ವಿದ್ಯಾರ್ಥಿಗಳನ್ನು ಹತೋಟಿಗೆ ತರುವ ಯತ್ನವನ್ನೇ ಶಿಕ್ಷಕರು ಮಾಡಿರಲಿಲ್ಲ” ಅನ್ನುವುದು ಶೋಚನೀಯ ವಿಚಾರ.
ರಂಗ ಕಲೆಗಳಾದ ನಾಟಕ, ನೃತ್ಯ ,ಛದ್ಮವೇಷ ಮೊದಲಾದವುಗಳನ್ನು ತರಗತಿಯ ಒಳಗೆ ಮಾಡಿಸಿ ಬಹುಮಾನ ಕೊಟ್ಟರೆ ಏನು ಪ್ರಯೋಜನವಾದೀತು ?ಸಣ್ಣ ತರಗತಿ ಒಳಗೆ ಸ್ಪರ್ಧಿಗಳು ಮಾತ್ರ ಇದ್ದು ನಡೆಯುವ ಸ್ಪರ್ಧೆಗಳಲ್ಲಿ ,ಚಂದದ ಅಭಿನಯಕ್ಕೆ ,ಸುಂದರ ಕುಣಿತಕ್ಕೆ ಚಪ್ಪಾಳೆ ತಟ್ಟುವವರೇ ಇರುವುದಿಲ್ಲ !ವಿದ್ಯಾರ್ಥಿ -ಪ್ರೇಕ್ಷಕರು ಇಲ್ಲದೆಯೇ ನಡೆಸುವ ಶುಷ್ಕ ಸ್ಪರ್ಧೆಯಿಂದ ಪ್ರತಿಭಾ ವಿಕಸನ ಸಾಧ್ಯವೇ ?ಪ್ರತಿಭಾ ಕಾರಂಜಿ ಸ್ಪರ್ದೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಯಲ್ಲಿ ಮಾತ್ರವಲ್ಲ ನೋಡುವ ವಿದ್ಯಾರ್ಥಿಯಲ್ಲಿ ಕೂಡ ಮಿಂಚಿನೋಪಾದಿಯಲ್ಲಿ ಉತ್ಸಾಹ ಸಂಚಾರವಾದರೆ ಮಾತ್ರ ಅದು ಸಾರ್ಥಕವಾಗುತ್ತದೆ .ಎಲ್ಲೆಡೆ ಪ್ರತಿಭಾ ಸಿಂಚನವಾಗುತ್ತದೆ.
ಹಾಗಂತ “ಎಲ್ಲೆಡೆ ಹೀಗೆ ಇದೆ, ಎಲ್ಲ ಶಿಕ್ಷಕರೂ ಹೀಗೆ ಇದ್ದಾರೆ” ಎಂದು ಹೇಳುವಂತಿಲ್ಲ .ಅನೇಕ ಕ್ರಿಯಾಶೀಲ ಶಿಕ್ಷಕರು ಇದ್ದಾರೆ. ಆದರೆ ಅಂಥವರ ಸಂಖ್ಯೆ ಕಡಿಮೆ ಇದ್ದು ಅವರಿಗೆ ಸೂಕ್ತ ಬೆಂಬಲದ ಕೊರತೆ ಕೂಡ ಇದೆ .ಇಂಥವರ ಸಂಖ್ಯೆ ಹೆಚ್ಚಾಗಬೇಕಿದೆ ,ಅವರಿಗೆ ಸೂಕ್ತ ಬೆಂಬಲ ಕೂಡ ದೊರೆಯಬೇಕಿದೆ .

ಇಂದಿನ ಶಿಕ್ಷಣದಲ್ಲಿ  ಆನ್ವಯಿಕತೆಯ ಕೊರತೆ ತುಂಬಾ ಇದೆ . ಇದನ್ನು ಹೋಗಲಾಡಿಸಬೇಕಾದ ಅಗತ್ಯ ಖಂಡಿತಾ ಇದೆ .
“ ಒಬ್ಬ ತಂತ್ರಜ್ಞ ತಪ್ಪು ಮಾಡಿದ ತಪ್ಪಿನಿಂದ ಒಂದು ಕಟ್ಟಡ ಕುಸಿದು ಬೀಳಬಹುದು.ಒಬ್ಬ ನ್ಯಾಯವಾದಿಯ ಬೇಜವಾಬ್ದಾರಿತನದಿಂದ ಒಬ್ಬ ಅಪರಾಧಿ ತಪ್ಪಿಸಿಕೊಳ್ಳಬಹುದು .ಆದರೆ ಅಧ್ಯಾಪಕರ ತಪ್ಪಿನಿಂದ ದೇಶವೇ ಕುಸಿದು ಹೋಗಬಹುದು” ಎಂಬ ಮಾತೊಂದು ಸವಕಳಿ ಎನಿಸುವಷ್ಟು ಪ್ರಯೋಗಗೊಳ್ಳುತ್ತದೆ.
ಆದರೆ ಇದನ್ನೇ ನಾವು “ಅಧ್ಯಾಪಕರ ಒಪ್ಪಿನಿಂದ ದೇಶವೇ ಎದ್ದು ನಿಲ್ಲ ಬಹುದು “ಎಂದೂ ಧನಾತ್ಮಕವಾಗಿ ಹೇಳಬಹುದು ಅಲ್ಲವೇ ?ಒಬ್ಬ ಶಿಕ್ಷಕ ತನ್ನ ಕಾಲಾವಧಿಯಲ್ಲಿ ಏನಿಲ್ಲವೆಂದರೂ ನಾಲ್ಕು ,ಐದು  ಸಾವಿರ ಮಂದಿ ವಿದ್ಯಾರ್ಥಿಗಳನ್ನು ಪಡೆಯುತ್ತಾರೆ .ಹಸಿ ಮಣ್ಣಿನ ಗೋಡೆಯಂತಿರುವ  ಹದಿಹರೆಯದ ಯುವ ಜನಾಂಗಕ್ಕೆ ಸೂಕ್ತ ಮಾರ್ಗ ದರ್ಶನ ನೀಡಿ ಪ್ರಜ್ಞಾವಂತರನ್ನಾಗಿ ರೂಪಿಸುವುದು ಅಸಾಧ್ಯವಾದ ಕಾರ್ಯವೇನಲ್ಲ .
ಆದರೆ ಇಂದು ಕೆಲವು ಶಿಕ್ಷಕರೇ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ,ಅಕ್ರಮಗಳಲ್ಲಿ ಭಾಗಿಯಾಗಿರುವ ಬಗ್ಗೆ ಅಲ್ಲಲ್ಲಿ ಸುದ್ದಿಗಳು ಕೇಳಿ ಬರುತ್ತಿವೆ
ಆದ್ದರಿಂದ  ಶಿಕ್ಷಕರಾದವರು ನುಡಿದಂತೆ ನಡೆದು, ತಾವು ಪಾಠ ಮಾಡಿದ ನೈತಿಕ ,ವೈಜ್ಞಾನಿಕ ವಿಚಾರಗಳನ್ನು ಅನ್ವಯ ಮಾಡಿ ತೋರಿಸಿದರೆ  ಮಾತ್ರ ಪ್ರಜ್ಞಾವಂತ ಯುವಜನಾಂಗವನ್ನು   ರೂಪಿಸಲು ಸಾಧ್ಯವಾಗಬಹುದು. ಅತ್ಯಾಚಾರ ,ಭ್ರಷ್ಟಾಚಾರ ,ಭಯೋತ್ಪಾದನೆ,ಮೂಢನಂಬಿಕೆ .ಜಾತೀಯತೆ  ಮೊದಲಾದ ಅನಿಷ್ಟಗಳನ್ನು ದೂರ ಮಾಡಲು ,ರಾಷ್ಟ್ರೀಯ ಭಾವೈಕ್ಯತೆ ,ದೇಶ ಭಕ್ತಿ,ಪರ ಧರ್ಮ ಸಹಿಷ್ಣುತೆ ,ಪರಸ್ಪರ ಗೌರವ ,ಸ್ವಯಂ ಶಿಸ್ತು ,ಭ್ರಾತೃತ್ವ ,ಸಮಾನತೆ ,ಸೃಜನ ಶೀಲತೆ ,ಸ್ವಂತಿಕೆ,ವಿಮರ್ಶೆ ,ಸಂಶೋಧನಾ ಸಾಮರ್ಥ್ಯಗಳನ್ನು ಬೆಳೆಸಲು , ಶಿಕ್ಷಣದಲ್ಲಿನ ವಿಚಾರಗಳ ಅನ್ವಯಿಕತೆ ಅತ್ಯಗತ್ಯವಾಗಿದೆ .
-ಡಾ.ಲಕ್ಷ್ಮೀ ಜಿ ಪ್ರಸಾದ
ಉಪನ್ಯಾಸಕರು ,ಬೆಳ್ಳಾರೆ
ಇ ಮೇಲ್:samagramahithi@gmail.com

Wednesday 20 August 2014

see and say ಸರಣಿ -13 ಭೂತಾರಾಧನೆ -ಅಪರೂಪದ ಭೂತ ಕುಂಟಲ್ದಾಯ:ಡಾ.ಲಕ್ಷ್ಮೀ ಜಿ ಪ್ರಸಾದ



ಚಿತ್ರ ಕೃಪೆ :ಧರ್ಮ ಚಾವಡಿ ನಮ್ಮ ತುಳುನಾಡು
ಮಾನವ ಸಹಜ ಅಲಂಕಾರದಲ್ಲಿರುವ ಕುಂಟಲ್ದಾಯ ಬಹಳ ಅಪರೂಪದ ದೈವತ .ಎಲ್ಲ ಭೂತಗಳಿಗೆ ಇರುವಂತೆ ತೆಂಗಿನ ತಿರಿಯ ಅಲಂಕಾರವಾಗಲಿ ಮುಡಿ ಜಕ್ಕೆಲಣಿ ಗಳಾಗಲಿ ಈ ದೈವಕ್ಕೆ ಇರುವುದಿಲ್ಲ .ಮುಗವೂ ಇಲ್ಲ .ಆಯುಧ ಇರುಸುವ ಭಂಡಾರ ,ಮಾಡ ಕೂಡಾ ಇಲ್ಲ .ಬೇರೆ ಪ್ರಧಾನ ದೈವದ ಸೇರಿಗೆ ದೈವವಾಗಿ ಆರಾಧನೆ ಹೊಂದುವುದಾದರು ಬಹಳ ಕಾರಣಿಕ ಎಂಬ ನಂಬಿಕೆ ಜನರದ್ದು
(C).ಡಾ.ಲಕ್ಷ್ಮೀ ಜಿ ಪ್ರಸಾದ
ಈ ದೈವಕ್ಕೆ ಮೂರ್ತೆದಾರರ ಕತ್ತಿಯೇ ಆಯುಧ .ಇದು ಆತನ ಮಾನವ ಮೂಲದ ವೃತ್ತಿಯನ್ನು ಸೂಚಿಸುತ್ತದೆ.ಮೂಲತಃ ಈತ ಮೂರ್ತೆದಾರ ಎಂದರೆ ಬೈದ್ಯ ಸಮುದಾಯಕ್ಕೆ ಸೇರಿದ ಅನಾಥ ಬಾಲಕ

ಸಾಮನ್ಯವಾಗಿ ವಾರ್ಷಿಕ ಕೋಲ ಈತನಿಗೆ ಎಲ್ಲೂ ಇರುವುದಿಲ್ಲ .ಕೆಲವೆಡೆ ಈತನನ್ನು ಹನ್ನೆರಡು ವರ್ಷಗಳಿಗೊಮ್ಮೆ ಕೋಲ ಕೊಟ್ಟು ಆರಾಧಿಸಿದರೆ ಕೆಲವೆಡೆ ಐದು ವರ್ಷಕ್ಕೊಮ್ಮೆ ಆರಾಧನೆ ಇದೆ ಬಂಟ್ವಾಳ ,ಪುತ್ತೂರು ತಾಲೂಕುಗಳಲ್ಲಿ ಒಂದೆರಡು ಕಡೆ ಮಾತ್ರ ಈತನಿಗೆ ಆರಾಧನೆ ಇದೆ
ಈತನ ಕೋಲದಲ್ಲಿ ದೈವವು ಕತ್ತಿಯಲ್ಲಿ ಕೈಕಾಲು ಮೈಗೆ ಕಡಿದು ಕೊಂಡು ಮೈಯಿಡೀ ಗಾಯ ಮಾಡಿಕೊಳ್ಳುವ ಸಂಪ್ರದಾಯವಿದೆ .ಇದು ಮೂಲತಃ ಸಾತ್ರ ನಾಡು ಎಂಬ ಅನಾಥ ಬಾಲಕನಿಗೆ ಆತನ ಅತ್ತೆ ಮಾವ ಬಡಿದು ಹೊಡೆದು ಹಿಂಸೆ ಕೊಟ್ಟಿರುವುದರ ಪ್ರತೀಕ
ತಂದೆ ತಾಯಿಯ ರನ್ನು ಕಳೆದು ಕೊಂಡ ಅನಾಥ ಮಗು ಸಾತ್ರ ನಾಡುವನ್ನು ಸೋದರ ಮಾವ ಪ್ರೀತಿಯಿಂದಲೇ ಸಾಕುತ್ತಾನೆ .ಆದರೆ ಹೆಂಡತಿಯ ಚಾಡಿ ಮಾತುಗಳನ್ನು ಕೇಳಿದ ಮಾವ ಒಂದಿನ ಮರ ಹತ್ತಿದ ಅಳಿಯ ಸಾತ್ರ ನಾಡುವನ್ನು ಹಿಡಿದು ಕೆಳಗೆಳೆದು ಕೆಡವುತ್ತಾನೆ .ಹೀಗೆ ದುರಂತವನ್ನಪ್ಪಿದ ಸಾತ್ರ ನಾಡು ಮುಂದೆ  ದೈವತ್ವ ಪಡೆದು ಕುಂಟಲ್ದಾಯ ದೈವವಾಗಿ ನೆಲೆ ನಿಲ್ಲುತ್ತಾನೆ .(C).ಡಾ.ಲಕ್ಷ್ಮೀ ಜಿ ಪ್ರಸಾದ
ಅನಾಥ ಮಕ್ಕಳ ಬಗ್ಗೆ ಈ  ದೈವಕ್ಕೆ ಅಪಾರ ಕರುಣೆ .ಬಿದ್ದು ಕೈಕಾಲು ಮುರಿದು ,ಉಳುಕು ಬಿದ್ದವರು ಈ ದೈವಕ್ಕೆ ಜಾರಿಕೆ ಹೇಳಿಕೊಂಡರೆ ಬೇಗ ಗುಣವಾಗುತ್ತದೆ ಎಂಬ ನಂಬಿಕೆ ಇದೆ ಅದೇ ರೀತಿ ವಾತ, ಪಕ್ಷವಾತ ಆದಾಗ ಕೂಡ ಈ ದೈವಕ್ಕೆ ಹರಿಕೆ ಹೇಳಿ ನಡೆದು ಕೊಳ್ಳುತ್ತಾರೆ

ಈತ ಮರ ಹತ್ತಿದಾಗ ಎಳೆದು ಹಾಕಿರುವುದರ ಸೂಚಕವಾಗಿ ಇಂದಿಗೂ ಈ ದೈವ ಒಂದು ತಾಳೆ  ಮರ ಹತ್ತುವ ಸಂಪ್ರದಾಯ ವಿದೆ
ಈ ಬಗ್ಗೆ ನವೀನ ಕುಮಾರ್ ಮರಿಕೆ ಅವರು ಸಾಕಷ್ಟು ಅಧ್ಯಯನ ಮಾಡಿದ್ದು ಈ ದೈವದ ಪೂರ್ಣ ಪಾಡ್ದನ ಸಂಗ್ರಹ ಮಾಡಿದ್ದಾರೆ ,ಅವರ ಕತ್ತಲಿನಿಂದ ಎಂಬ ಕೃತಿಯಲ್ಲಿ ಈ ದೈವದ ಬಗ್ಗೆ ವಿಸ್ತೃತ ಮಾಹಿತಿ ಇದೆ
ಡಾ.ಲಕ್ಷ್ಮೀ ಜಿ ಪ್ರಸಾದ
ಸಂಶೋಧಕರು ಮತ್ತು ಉಪನ್ಯಾಸಕರು
ಸರ್ಕಾರಿ ಪದವಿಪೂರ್ವ ಕಾಲೇಜ್, ಬೆಳ್ಳಾರೆ
ಸುಳ್ಯ ತಾ ,ದಕ್ಷಿಣ ಕನ್ನಡ ಜಿಲ್ಲೆ