Sunday 25 February 2018

ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು 425-426 ನೇತ್ರಾಣಿ ಜಟಗ/ ಜಟ್ಟಿಗ ಮತ್ತು ಹೊಗೆವಡ್ಡಿ ಜಟಗ ದೈವಗಳು© ಡಾ ಲಕ್ಷ್ಮೀ ಜಿ ಪ್ರಸಾದ

 


ಚಿತ್ರ ಕೃಪೆ - ಶ್ರೀ ಅನಂತ ನಾಯಕ್ ,ನೇತ್ರಾಣಿ ಗುಡ್ಡ ಮತ್ತು ಕುದುರೆ ಜಟ್ಟಿಗ, ನೇತ್ರಾಣಿ ಜಟ್ಟಿಗ ,ಕ್ಷೇತ್ರ ಪಾಲ ಮತ್ತು ಇತರ ಆರಾಧ್ಯ ಶಕ್ತಿಗಳು
ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು
ನೇತ್ರಾಣಿ ಜಟಗ ಮತ್ತು ಹೊಗೆವಡ್ಡಿ ಜಟಗ ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ
ರಾಣಿ ಚೆನ್ನ ಭೈರಾದೇವಿ ಉತ್ತರ ಭಾರತದಿಂದ ಗೊಂಡರ ಪಡೆಯನ್ನು ತನ್ನ ಕೋಟೆ ಹಾಗೂ ಅರಮನೆಯ ಕಾವಲಿಗಾಗಿ ಕರೆಸಿಕೊಂಡು ಬಂದು ಸಲಹಿದ್ದ ಬಗ್ಗೆ ಇತಿಹಾಸವು ತಿಳಿಸುತ್ತದೆ.ಗೊಂಡರು ಜಟಗರನ್ನು ಆರಾಧನೆ ಮಾಡುತ್ತಾರೆ.ಇವರು ಬಲಿಷ್ಠ ರಾದ ಜಟ್ಟಿಗಳೂ ಆಗಿದ್ದರು.
ಹೊಗೆವಡ್ಡಿ ಮತ್ತು ನೇತ್ರಾಣಿ ಗುಡ್ಡದಲ್ಲಿ  ಜಟ್ಟಿಗ/ಜಟಗರ ಆರಾಧನೆ ಇದೆ. ಇವರಿಬ್ಬರು ಅಣ್ಣ ತಮ್ಮಂದಿರಾಗಿದ್ದು
ಹೊಗೆವಡ್ಡಿಯ ಜಟಗರಾಯ ಅಣ್ಣನೆಂದೂ ,ನೇತ್ರಾಣಿಯ ಜಟಗರಾಯ ತಮ್ಮನೆಂಬ ಐತಿಹ್ಯವಿದೆ.
ಹೊಗೆವಡ್ಡಿಯ ಜಟಗನಿಗೆ ಮಾಣಿ ಭದ್ರ ಎಂಬ ಹೆಸರು‌.ನೇತ್ರಾಣಿ ಜಟಗನಿಗೆ ವೀರ ಭದ್ರನೆಂದು ಹೆಸರು.
ಇವರಿಬ್ಬರೂ ಯುದ್ದ ವೀರರಾಗಿದ್ದರು.
ಕಾಸರ
ಸ್ಥಳೀಯ ಐತಿಹ್ಯದ ಪ್ರಕಾರ ಹೊಗೆವಡ್ಡಿ ಯ ಜಟಗ ನಿಜಾಮರ ಜೊತೆಗಿನ ಹೋರಾಟದಲ್ಲಿ ಮರಣವನ್ನಪ್ಪುತ್ತಾನೆ‌.ನೇತ್ರಾಣಿ ಜಟಗ ಮರಾಠರ ಜೊತೆಯ ಹೋರಾಟದಲ್ಲಿ ಮರಣವನ್ನಪ್ಪುತ್ತಾರೆ .
ಹೊಗೆವಡ್ಡಿ ಕೋಟೆಯಲ್ಲಿ ಕಾಸರಗೋಡು ತಿಮ್ಮಣ್ಣ ನಾಯಕನಿದ್ದಾಗ ಒಂದೆಡೆಯಿಂದ ನಿಜಾಮರು ಮತ್ತು ಮತ್ತೊಂದೆಡೆಯಿಂದ ಮರಾಠರು ಆಕ್ರಮಣ ಮಾಡುತ್ತಾರೆ. ಆಗ ಇವರಿಬ್ಬರು ಯುದ್ಧದಲ್ಲಿ ಸಾಯುತ್ತಾರೆ.
‌ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಇತಿಹಾಸದಲ್ಲಿ ಪೋರ್ಚುಗೀಸರು ಮತ್ತು ರಾಣಿಯ ನಡುವೆ ಯುದ್ಧವಾಗಿದ್ದು ಸ್ವತಃ ರಾಣಿಯೇ ಕತ್ತಿ ಹಿಡಿದು ಯುದ್ಧ ಮಾಡಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸುತ್ತಾಳೆ.ಆಗ ಗಾಯಗೊಂಡ ಅವಳು ಪೋರ್ಚುಗೀಸರ ನಡುವೆ ಸಿಕ್ಕು ಹಾಕಿಕೊಳ್ಳುತ್ತಾಳೆ.ಆಗ ಗೊಂಡರ ನಾಯಕ ವೀರಾವೇಶದಿಂದ ಹೋರಾಡಿ ರಾಣಿಯನ್ನು ರಕ್ಷಣೆ ಮಾಡಿ ಗಾಯ ಗೊಂಡ ಅವಳನ್ನು ಹೊತ್ತುಕೊಂಡು ನೇತ್ರಾಣಿ ಗುಡ್ಡಕ್ಕೆ ಬರುತ್ತಾನೆ.ಯುದ್ಧದಲ್ಲಿ ಗಾಯಗೊಂಡ ಅವಳು ಸಾಯುತ್ತಾಳೆ.ಆಗ ಅವಳ ರಾಜ್ಯದ ಒಡೆತನ ಅವಳ ತಂಗಿ ಚನ್ನ ಭೈರಾದೇವಿಗೆ ಸಿಗುತ್ತದೆ. ಅವಳು ಸುಮಾರು ಐವತ್ತನಾಲ್ಕುವರ್ಷಗಳ ಕಾಲ ಬಸದಿ ಕೇರಿ ಗೇರು ಸೊಪ್ಪೆ ಭಟ್ಕಳದಲ್ಲಿ ಆಳ್ವಿಕೆ ನಡೆಸುತ್ತಾಳೆ.ಕಾಳು ಮೆಣಸನ್ನು ಬೆಳೆದು ಮಾರಾಟ ಮಾಡಿ ಅಪಾರ ಸಂಪತ್ತನ್ನು ಗಳಿಸಿದ ಅವಳು ರಾಜ್ಯ ವಿಸ್ತರಣೆಯನ್ನು ಮಾಡುತ್ತಾಳೆ.ವಿಜಯ ನಗರ ಸಾಮ್ರಾಜ್ಯಕ್ಕೆ ಸಂವಾದಿಯಾದ ಸಾಮ್ರಾಜ್ಯವನ್ನು ಕಟ್ಟುತ್ತಾಳೆ.ಈ ಬಗ್ಗೆ ದೆಲ್ಲಾವೆಲ್ಲಾ ಬರೆದ ಪ್ರವಾಸಿ ಕಂಡ ಭಾರತದಲ್ಲಿ ಉಲ್ಲೇಖವಿದೆ.
‌ಅಕ್ಕನ  ವಯಸ್ಸಾದ ಗಂಡನನ್ನು ಮದುವೆಯಾದ ತಂಗಿ ಸಣ್ಣ ವಯಸ್ಸಿಗೆ ವಿಧವೆಯಾಗುತ್ತಾಳೆ.ನಂತರ ಗೊಂಡರ ನಾಯಕನನ್ನು ಸಂಪೂರ್ಣವಾಗಿ ನಂಬುತ್ತಾಳೆ.ಆದರೆ ಆತ ರಾಣಿಗೆ ಮೋಸ ಮಾಡಿ ಕೆಳದಿಯ ವೆಂಕಟಪ್ಪ ನಾಯಕನ ಜೊತೆ ಸೇರಿ ರಾಜ್ಯದ ಸಂಪತ್ತು ಎಲ್ಲಿದೆ ಎಂಬ ರಹಸ್ಯವನ್ನು ಹೇಳುತ್ತಾನೆ.ವೆಂಕಟಪ್ಪ ನಾಯಕ ಯುದ್ಧಕ್ಕೆ ಬಂದಾಗ ತನ್ನಲ್ಲಿರುವ ಸಮಪತ್ತನ್ನು ನೀಡುತ್ತೇನೆ ಎಂದು ತಿಳಿಸಿ ಪೋರ್ಚುಗೀಸರೊಡನೆ ಒಪ್ಪಂದ ಮಾಡಿ ಯುದ್ದಕ್ಕೆ ಸಹಾಯ ಯಾಚಿಸುತ್ತಾಳೆ.ಆದರೆ ರಾಜ್ಯದಲ್ಲಿ ನೂರಾರು ಬಾವಿಗಳಲ್ಲಿ ಅಡಗಿಸಿ ಇಟ್ಟ ಸಂಪತ್ತನ್ನು ನೋಡಿದ ಪೋರ್ಚುಗೀಸರು ಅದನ್ನು ಬೇರೆಡೆಗೆ ಸಾಗಿಸುವಲ್ಲಿ ಗಮನ ಹರಿಸುತ್ತಾರೆ ಯುದ್ಧದಲ್ಲಿ ಸರಿಯಾದ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಪರಿಣಾಮವಾಗಿ ವೆಂಕಟಪ್ಪ ನಾಯಕ ಭಟ್ಕಳವನ್ನು ವಶಪಡಿಸಿಕೊಳ್ಳುತ್ತಾನೆ.ಆದರೆ ಅದಕ್ಕಿಂತ ಮೊದಲೇ ಸಂಪತ್ತನ್ನು ಬೇರೆಡೆ ಸಾಗಿಸಿದ್ದು ಅದು ಪೋರ್ಚುಗೀಸರ ವಶವಾಗಿತ್ತು.ಗೊಂಡರ ನಾಯಕ ಜಟ್ಟಿಗ ತೋರಿಸಿದ ಬಾವಿಗಳು ಖಾಲಿಯಾಗಿದ್ದವು.ಇದರಿಂದ ಕೋಪಗೊಂಡ ವೆಂಕಟಪ್ಪ ನಾಯಕ ಗೊಂಡರ ನಾಯಕನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲುತ್ತಾನೆ.
‌ಗೊಂಡರು ಚೌಂಡಿ( ಚಾಮುಂಡಿ ?) ಮತ್ತು ಜಟಗರನ್ನು ಆರಾಧನೆ ಮಾಡುತ್ತಾರೆ.
‌ತುಳುನಾಡಿನ ಚಾಮುಂಡಿ ದೈವದ ವೃತ್ತಾಂತದಲ್ಲಿ ಚಾಮುಂಡಿಗೆ ದ್ರೋಹ ಮಾಡಿದಾತ ಜತ್ತಿಂಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ.
‌ಚಾಮುಂಡಿ ಯಾರೆಂಬ ಬಗ್ಗೆ ಇದಮಿತ್ತಂ ಎಂಬ ಮಾಹಿತಿ ಇಲ್ಲ.ಭೀಮುರಾಯರ ಕೆರೆಯಲ್ಲಿ ತಾವರೆ ಹೂವಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಚಾಮುಂಡಿ ಎಂಬ ಹೆಸರು ಪಡೆದ ಬಗ್ಗೆ ಶಾರದಾ ಜಿ ಬಂಗೇರ ಅವರು ಹಾಡಿದ ಪಾಡ್ದನದಲ್ಲಿದೆ.
‌ಇಲ್ಲಿ ರಾಣಿ ಚೆನ್ನ ಭೈರಾದೇವಿ ಮತ್ತು ಚೌಂಡಿ(ಚಾಮುಂಡಿ?) ಯನ್ನು ಸಮೀಕರಿಸಿ ಅಕೆಗೆ ದ್ರೋಹ ಮಾಡಿದ ಗೊಂಡರ ನಾಯಕ ಜಟಗನೆ ಜತ್ತಿಂಗ,ಜಟ್ಟಿಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ ಎಂದು ಡಾ.ಕೆ ಎನ್ ಗಣೇಶಯ್ಯ ಅಭಿಪ್ರಾಯ ಪಟ್ಟಿದ್ದಾರೆ.
‌ರಾಣಿ ಚೆನ್ನ ಭೈರಾದೇವಿಯ ನಂತರದ ಕಾಲದಲ್ಲಿ ಎಂದರೆ ಕೆಳದಿಯ ವೆಂಕಪ್ಪ ನಾಯಕನ ವಂಶದಲ್ಲಿ ಕೆಳದಿಯ ರಾಣಿ ಚೆನ್ನಮ್ಮ ಅಳ್ವಿಕೆ ನಡೆಸುತ್ತಾಳೆ.ಆಗ ಚೆನ್ನಮ್ಮಳ ಮಹಾ ಪ್ರಧಾನಿ ವೀರ ತಿಮ್ಮಣ್ಣ ನಾಯಕ ಹೊಗೆವಡ್ಡಿ ಕೋಟೆಯನ್ನು ಕಟ್ಟಿಸಿ ಅ ಪರಿಸರದಲ್ಲಿ ರಕ್ಷಣೆ ಮಾಡುತ್ತಾನೆ.ಆ ಸಮಯದಲ್ಲಿ ಕೂಡ ರಾಣಿ ಚೆನ್ನಭೈರಾದೇವಿ ಕರೆಸಿದ ಗೊಂಡರ ವಂಶದವರು ಕೆಳದಿಯ ಜೊತೆಯಲ್ಲಿ ಇರುತ್ತಾರೆ.ಆಗ ಯುದ್ಧದಲ್ಲಿ ಇಬ್ಬರು ಅಥವಾ ಒಬ್ಬ ಗೊಂಡರ ನಾಯಕ ಮರಣವನ್ನಪ್ಪಿ ದೈವತ್ವ ಪಡೆದು ಹೊಗೆವಡ್ಡಿ ಜಟ್ಟಿಗ ದೈವವಾಗಿ ಆರಾಧನೆ ಪಡೆಯುತ್ತಾನೆ.ಆತನ ಹೆಸರು ಮಾಣಿ ಜಟ್ಟಿಗ ಎಂದಿರುವ ಕಾರಣ ಆತ ನೇತ್ರಾಣಿ ಜಟ್ಟಿಗನಿಗಿಂತ ಕಿರಿಯವನಾಗಿರಬಹುದು.ನೇತ್ರಾಣಿಯಲ್ಲಿ ಆರಾಧನೆ ಪಡೆಯುವ ಕುದುರೆ ಜಟ್ಟಿಗ ರಾಣಿ ಚೆನ್ನ ಭೈರಾದೇವಿಗೆ ದ್ರೋಹ ಮಾಡಿ ದುರಂತವನಗನಪ್ಪಿದ ವೀರನೇ ಇರಬೇಕು. ದುರಂತ ಮತ್ತು ದೈವತ್ವ ತುಳುವ ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಾಣಬರುವ ವಿದ್ಯಮಾನವಾಗಿದೆ.ಅಂತೆಯೇ ಅತ ಕೂಡ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
‌ಹೊಗೆವಡ್ಡಿ  ಕೋಟೆಯ ತಿಮ್ಮಣ್ಣ ನಾಯಕ ದೈವವಾಗಿ ಆರಾಧನೆ ಪಡೆಯುತ್ತಾನೆ. ಅವನ ಕಾಲದಲ್ಲಿಯೇ ಯುದ್ದದಲ್ಲಿ ದುರಂತವನ್ನಪ್ಪಿದ ಗೊಂಡರ ನಾಯಕ ಕೂಡ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ
‌ನೇತ್ರಾಣಿ ಗುಡ್ಡದಲ್ಲಿ ನೇತ್ರಾಣಿ ಜಟ್ಟಿಗನಲ್ಲದೆ ಕಿದುರೆ ಜಟ್ಟಿಗ ಎಂಬ ಹೆಸರಿನ ದೈವಕ್ಕೂ ಆರಾಧನೆ ಇದೆ. ಬಹುಶಃ ಆತ ಮರಾಠರ ಜೊತೆಯಲ್ಲಿ ಹೋರಾಡಿದ ಗೊಂಡರ ನಾಯಕನಿರಬಹುದು.
‌ಈ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ © ಡಾ.ಲಕ್ಷ್ಮೀ ಜಿ ಪ್ರಸಾದ
‌ಆಧಾರ ಗ್ರಂಥಗಳು
‌ಬಳ್ಳಿಕಾಳ ಬೆಳ್ಳಿ -  ಐತಿಹಾಸಿಕ ಕಾದಂಬರಿ© ಡಾ.ಕೆ ಎನ್ ಗಣೇಶಯ್ಯ
‌ಭೂತಗಳ ಅದ್ಭುತ ಜಗತ್ತು - © ಡಾ ಲಕ್ಷ್ಮೀ ಜಿ ಪ್ರಸಾದ
‌ತುಳುನಾಡಿನ ಅಪೂರ್ವ ಭೂತಗಳು © ಡಾ.ಲಕ್ಷ್ಮೀ ಜಿ ಪ್ರಸಾದ
‌ಹೊಗೆವಡ್ಡಿ ಕ್ಷೇತ್ರ ಮಹಾತ್ಮೆ © ಶ್ರೀ ಅನಂತ ನಾಯಕ
‌ಮತ್ತು ಕಾಸರಗೋಡು ತಿಮ್ಮಣ್ಣ ನಾಯಕನ ವಂಶಜರಾದ ಅನಂತ ನಾಯಕ ಅವರು ಮೌಖಿಕವಾಗಿ ತಿಳಿಸಿದ ಐತಿಹ್ಯಗಳು ಮತ್ತು ಮಾಹಿತಿಗಳು 

Sunday 18 February 2018

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು - 424 ಬ್ರಾಣ ಭೂತ© ಡಾ.ಲಕ್ಷ್ಮೀ ಜಿ ಪ್ರಸಾದ


ಬ್ರಾಹ್ಮಣರು ತುಳುನಾಡಿನ ಮೂಲ ನಿವಾಸಿಗಳಲ್ಲ.ಇವರು ಹೊರಗಿನಿಂದ ಬಂದವರು.ಆದರೂ ತುಳುವ ಮಣ್ಣಿನಲ್ಲಿ ನೆಲೆಸಿದಾಗ ಇಲ್ಲಿ ಆರಾಧನೆ ಪಡೆಯುವ ಮಣ್ಣಿನ ಸತ್ಯಗಳು ಎಂದು ಕರೆಸಿಕೊಳ್ಳುವ ಭೂತಗಳನ್ನು ತಮ್ಮ ಆರಾಧ್ಯ ದೇವತೆಗಳಾದ ರಾಮ ಕೃಷ್ಣ, ಶಿವ, ವಿಷ್ಣು ,ದುರ್ಗೆಯರ ಜೊತೆಗೆ ಆರಾಧನೆ ಮಾಡುತ್ತಾ ಬಂದಿದ್ದಾರೆ. ತುಳುನಾಡ ದೈವಗಳ ಕಥಾನಕ ತಿಳಿಯದ ಕಾಲದಲ್ಲಿ ಇವರನ್ನು ಶಿವಗಣಗಳು ,ವಿಷ್ಣು ಗಣಗಳು,ದೇವಿಯ ಅವತಾರ ಎಂದು ತಪ್ಪಾಗಿ ಅರ್ಥೈಸಿರುವುದೂ ಇದೆ.
ತುಳುನಾಡ ದೈವಗಳಲ್ಲಿ ಹೆಚ್ಚಿನವವರು ಮಾನವ ಮೂಲದವರು‌.ಪ್ರಧಾನ ದೈವಗಳ ಆಗ್ರಹಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ಆಯಾಯ ದೈವಗಳ ಸೇರಿಗೆಗೆ ಸಂದು ದೈವತ್ವ ಪಡೆದು ಸೇರಿಗೆ ದೈವವಾಗಿ  ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವು ಕಡೆ ಕಾಣಿಸಿಕೊಂಡಿದೆ.
ಹೀಗೆಯೇ ತುಳುನಾಡಿನಲ್ಲಿ ನೆಲೆ ನಿಂತ ಅನೇಕ ಬ್ರಾಹ್ಮಣರು ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾರೆ. ಹಿರಿಯಡ್ಕದಲ್ಲಿ ವೀರಭದ್ರನನ್ನು ಪ್ರತಿಷ್ಟಾಪಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ಅದೇ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ. ಸೂರಂಬೈಲು ಸಮೀಪ ಕಾರಿಂಜೇಶ್ವರ ದೇವಾಲಯ ನಿರ್ಮಿಸಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ಕೂಡ ಅದೇ ಹೆಸರಿನ ದೈವವಾಗಿ ನೆಲೆಸಿದ್ದಾನೆ.ಹಾಗೆಯೇ ಭಟ್ಟಿ ಭೂತ,ಬ್ರಾಣ ಬೂತ ಮತ್ತು ಮಾಣಿ ಭೂತ,ಮರ್ಲು ಮಾಣಿ,ಓಪೆತ್ತಿ ಮದಿಮಾಳ್,ಮುಂಡೆ ಬ್ರಾಂದಿ,ಬ್ರಾಹ್ಮಣತಿ ಭೂತ/ ಬಾಲಜ್ಜಿ,ಇಲ್ಲತ್ತಮ್ಮ,ಮುಕಾಂಬಿ ಗುಳಿಗ ಕಚ್ಚೆ ಭಟ್ಟ,ಬ್ರಾಣ ಕುಲೆ,ಬ್ರಾಣ ಭೂತ ,ಚೆಂಬೆರ್ಪುನ್ನಾಯೆ ಮೊದಲಾದವರು ಕಾರಣಾಂತರಗಳಿಂದ ದೈವತ್ವ ಪಡೆದು ತುಳುನಾಡಿನ ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಣಿಕ್ಕಳ,ಬಜತ್ತೂರು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬ್ರಾಣ ಭೂತ ಎಂಬ ಇನ್ನೊಂದು ಬ್ರಾಹ್ಮಣ ಮೂಲದ ದೈವಕ್ಕೆ ಆರಾಧನೆ ಇದೆ. ಈತ ಮೂಲತಃ ಓರ್ವ ಅರ್ಚಕ.ಬಹಳ ದೈವ ಭಕ್ತಿ ಇದ್ದವರು‌ಇವರ ಭಕ್ತಿಗೆ ಒಲಿದು ಅಲ್ಲಿನ  ಪ್ದೈರಧಾನ ದೈವಗಳು ಆತನನ್ನು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸುತ್ತಾರೆ.ಆತ ದೈವತ್ವ ಪಡೆದು ಬ್ರಾಣ ಭೂತವಾಗಿ ಆರಾಧನೆ ಪಡೆಯುತ್ತಾನೆ.
ಪಾಡ್ಯಂತಾಯ, ಪಂಬೆತ್ತಾಯ,ನಾಗಬೆರ್ಮೆರ್ ಗಳಿಗೆ ಈ ಪರಿಸರದಲ್ಲಿ ಆರಾಧನೆ ಇದೆ. ಇವರ ಆರಾಧನೆ ನಡೆಯುವಾಗ ಬ್ರಾಣ ಭೂತಕ್ಕೂ ಕೋಲ ಕೊಟ್ಟು ಆರಾಧನೆ ಸಲ್ಲಿಸುತ್ತಾರೆ.
ಬಿಳಿ ಕಚ್ಚೆ ಹಾಕಿ ಜನಿವಾರ ಧರಿಸಿ ಕೈಯಲ್ಲಿ ಒಂದು ಬೀಸಣಿಗೆ ಹಿಡಿದ ಸಹಜ ಅಲಂಕಾರ ಈ ದೈವಕ್ಕೆ ಇರುತ್ತದೆ.ಈ ದೈವ ತುಳು ಬ್ರಾಹ್ಮಣರ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸುತ್ತದೆ.ಸ್ವಲ್ಪ ಹಾಸ್ಯದ ಅಭಿವ್ಯಕ್ತಿ ಕೂಡ ಇರುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಮಣಿಕ್ಕಳ ಮುರಳೀಧರ ರಾವ್ ಅವರಿಗೆ ಧನ್ಯವಾದಗಳು

Tuesday 6 February 2018

ಸಾವಿರದೊಂದು ಗುರಿಯೆಡೆಗೆ- ತುಳುನಾಡ ದೈವಗಳು 423 ಉಂರ್ದರ ಪಂಜುರ್ಲಿ© ಡಾ.ಲಕ್ಷ್ಮೀ ಜಿ ಪ್ರಸಾದ


ಸಾವಿರದೊಂದು ಗುರಿಯೆಡೆಗೆ -ತುಳುನಾಡ ದೈವಗಳು ಉಂರ್ದರ ಪಂಜುರ್ಲಿ © ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ತಿಂಗಳ ಹದಿನಾಲ್ಕರಂದು ಆಮಂತ್ರಣ ಹಬ್ಬಕ್ಕೆ ಅತಿಥಿಯಾಗಿ ಬರುವಂತೆ ಶೇಖರ್ ಬೆಳಾಲ್ ಅವರು ಆಹ್ವಾನಿಸಿದಾಗ ಆ ಪರಿಸರದಲ್ಲಿನ ದೈವಗಳ ಕುರಿತಾಗಿ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಒಟ್ಟಿಗೆ ಮಾಡಬೇಕೆಂದು ಪೂರ್ವ ತಯಾರಿ ಮಾಡಿಕೊಂಡು ಹೊರಟೆ.ಸಮೀಪದ ನಾರಾವಿಯಲ್ಲಿ ಶಿಕ್ಷಕರಾಗಿರುವ ನಮ್ಮ ಸಂಬಂಧಿಕರಾದ ಶಿವ ಶಂಭು ಭಟ್ ಅವರಿಂದಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು.
ಅವರೊಂದಿಗೆ ಸ್ಥಳೀಯ ಭೂತ ಕಟ್ಟುವ ಕಲಾವಿದರಾದ ವಿಠಲ ನಾರಾವಿ ಅವರ ಮನೆಗೆ ಹೋದಾಗ ವಿಠಲ ಹಾಗೂ ಅವರ ಅತ್ತೆಯವರು ಸಾಕಷ್ಟು ಮಾಹಿತಿ ನೀಡಿದರು.ಉಂರ್ದರ ಪಂಜುರ್ಲಿ, ಹಲೇರ ಪಂಜುರ್ಲಿ, ಸೂಕತ್ತೆರಿ ,ಮರ್ಲು ಮೈಯೊಂದಿ ಮೊದಲಾದ ದೈವಗಳ ಮಾಹಿತಿ ನೀಡಿದರು.
ಮೂಡಬಿದಿರೆಯ ಸಮೀಪದ ಪಡು ಮಾರ್ನಾಡಿನಲ್ಲಿ ಉದಿಪನವಾದ ಭೂತ ಉಂರ್ದರ ಪಂಜುರ್ಲಿ. ಉಂರ್ದರ ಪಂಜುರ್ಲಿ ಪಂಜುರ್ಲಿ ಭೂತವಲ್ಲ.ಪಂಜುರ್ಲಿ ಯ ಸೇರಿಗೆಗೆ ಸಂದ ದೈವವಿದು.
ಪಡು ಮಾರ್ನಾಡಿನಲ್ಲಿ ಇಬ್ಬರು ಅಕ್ಕತಂಗಿಯರು ಇದ್ದರು.ಅವರಿಗೆ ಒಬ್ಬೊಬ್ಬ ಮಗಂದಿರು ಇದ್ದರು.ಅವರ ಹಿರಿಯರಿಂದ ಬಂದ ಆಸ್ತಿಯಲ್ಲಿ ಜಾಗದ ಭೂತವಾಗಿ ಪಂಜುರ್ಲಿ ದೈವ ಇತ್ತು. ಅವರ ಮಕ್ಕಳ ಕಾಲದಲ್ಲಿ ಆಸ್ತಿ ಎರಡು ಪಾಲಾಯಿತು.ಆಗ ಇಬ್ಬರು ಅಣ್ಣತಮ್ಮಂದಿರು ಉಂರ್ದರ ಬೆರ್ಮು ಮತ್ತು ನರಸಿಂಹ ಪಕಳೆ(?) ಪಂಜುರ್ಲಿ ದೈವ ತಮಗೆ ಬೇಕು ಎಂದು ಹಠ ಹಿಡಿದರು‌.ಊರವರು ಸೇರಿ ರಾಜಿ ಪಂಚಾಯತಿಗೆ ಮಾಡಿ ಇಬ್ಬರೂ ಒಟ್ಟಿಗೆ ಸೇರಿ ಆರಾಧನೆ ಮಾಡಿ ಎಂದು ತಿಳುವಳಿಕೆ ನೀಡಿದರು‌.ಆದರೆ ಈ ಅಣ್ಣ ತಮ್ಮಂದಿರು ಅದನ್ನು ಒಪ್ಪದೆ ಪಂಜುರ್ಲಿ ದೈವಕ್ಕೆ ಇನ್ನೊಬ್ಬನ ತಲೆ ಉರುಳಿದರೆ ದೈವಕ್ಕೆ ಕೊಡಿ ಏರಿಸಿ ಉತ್ಸವ ನೀಡಿ ಆರಾಧನೆ ಮಾಡುತ್ತೇನೆ ಎಂದು ಇಬ್ಬರು ಕೂಡ ಹರಿಕೆ ಹೇಳಿದರು.ಪರಿಣಾಮವಾಗಿ ದೈವ  ಇಬ್ಬರನ್ನೂ ಮಾಯ ಮಾಡಿ ಪಡುಮಾರ್ನಾಡಿನ ಬಾವಿಗೆ ಬೀಳುವಂತೆ ಮಾಡಿತು.ಹಾಗೆ ಮಾಯವಾದ ಅಣ್ಣ ತಮ್ಮಂದಿರು ಪಂಜುರ್ಲಿ ದೈವದ ಸೇರಿಗೆಗೆ ಸಂದು ಉಂರ್ದರ ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ.ಇವರು ಮಾಯವಾಗಿ ಬಂದು ಬಿದ್ದ ಬಾವಿ ಈಗಲೂ ಪಡುಮಾರ್ನಾಡಿನಲ್ಲಿ ಇದೆ
‌ ಉಂರ್ದರ ಪಂಜುರ್ಲಿ ದೈವಕ್ಕೆ ಪುಂಚಾಡಿ ಬರ್ಕೆಯಲ್ಲಿ ಆರಾಧನೆ ಇರುವ ಬಗ್ಗೆ ಸಂಕೇತ್ ಪೂಜಾರಿಯವರು ತಿಳಿಸಿದ್ದಾರೆ.( nammabillavaru.com) ಮಾಳ ಹುರ್ಕಟ್ಟೆ ಕೇರ ಕುಟುಂಬದಲ್ಲಿ ನಡೆದ ಉಂರ್ದರ ಪಂಜುರ್ಲಿ ಕೋಲದ ವೀಡಿಯೋ ಅನ್ನು ವಿಶ್ವನಾಥ ಸಾಲಿಯಾನ್ ಅವರು ಯು ಟ್ಯೂಬ್ ನಲ್ಲಿ ಹಾಕಿದ್ದಾರೆ

ಮಾಹಿತಿ ನೀಡಿದ ವಿಠಲ ನಾರಾವಿ ಮತ್ತು ಕ್ಷೇತ್ರ ಕಾರ್ಯದಲ್ಲಿ ತುಂಬು ಬೆಂಬಲ ನೀಡಿದ ಶಿವ ಶಂಭು ಭಟ್  ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಚಿತ್ರ ಕೃಪೆ - ಸಂಕೇತ್ ಪೂಜಾರಿ
ಚಿತ್ರ ಕೃಪೆ - ವಿಶ್ವನಾಥ ಸಾಲಿಯಾನ್ 

Friday 26 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ



ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 422 ಕಲಂದನ್ ಮುಕ್ರಿ ದೈವ/ತೆಯ್ಯಂ


ಕಳೆದ ಒಂದು ವಾರದಿಂದ ಒಂದು ಮುಸ್ಲಿಂ ಸ್ವರೂಪದ ದೈವ ಇಬ್ಬರು ಮುಸ್ಲಿಂ ರೀತಿಯ ವೇಷ ಧರಿಸಿದ ಪಾತ್ರಿಗಳ ಜೊತೆ ಕೋಲಾಟವಾಡುವ ವೀಡಿಯೋ ಹರಿದಾಡುತ್ತಾ ಇತ್ತು.ಅನೇಕರು ಅದನ್ನು ಕಳಹಿಸಿ ಈ ದೈವ ಯಾವುದೆಂದು ಕೇಳಿದ್ದರು. ಆಲಿ ಭೂತ ,ಯೋಗ್ಯೆರ್ ನಂಬೆಡಿ ,ಮುಕ್ರಿ ಪೋಕ್ಕರ್,ಬಪ್ಪುರಿಯನ್  ಸೇರಿದಂತೆ ಅನೇಕ ಮುಸ್ಲಿಂ ತೆಯ್ಯಂ ಗಳಿಗೆ ಆರಾಧನೆ ಇರುವುದು ನನಗೆ ತಿಳಿದಿತ್ತಾದರೂ ಈ ತೆಯ್ಯಂ ಯಾರೆಂದು ಗುರುತಿಸಲು ಆಗಿರಲಿಲ್ಲ.ಕೆಲವರು ಅದನ್ನು ಆಲಿ ಭೂತ ಎಂದು ತಪ್ಪಾಗಿ ಗುರುತಿಸಿದ್ದು ತಿಳಿದು ಅದು ಆಲಿ ಭೂತವಲ್ಲ ಎಂದು ತಿಳಿಸಿದ್ದೆ.ಅದು ಮುಕ್ರಿ ಪೋಕ್ಕೆರ್ ದೈವ ಇರಬಹುದು ಎಂದು ಹೇಳಿದ್ದೆ.ವಾಟ್ಸಪ್ ಗ್ರೂಪೊಂದರಲ್ಲಿ ಚಂದ್ರಹಾಸ ಶೆಟ್ಟಿಯವರು ಅದನ್ನು ಮಾಪಿಳ್ಳೆ ದೈವ ಎಂದು ಗುರುತಿಸಿದ್ದರು‌.ಹಾಗಾಗಿ ನಾನು ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಸಂಗ್ರಹಕ್ಕಾಗಿ ಕುಂಞಿರಾಮನ್ ಸೇರಿದಂತೆ ಅನೇಕ ಹಿರಿಯರನ್ನು ಸಂಪರ್ಕಿಸಿದೆ‌.ಅದರ ಮಾಹಿತಿ ನೀಡಿದ ಕುಂಞಿರಾಮನ್ ಅವರು ಕಲಂದನ್ ಮುಕ್ರಿ ಎಂಬ ಹೆಸರಿನ ಮುಸ್ಲಿಂ ಮೂಲದ ದೈವಕ್ಕೆ ಆರಾಧನೆ ಇರುವ ಬಗ್ಗೆ ತಿಳಿಸಿದರು.
ಮಾಪ್ಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಹುಡುಕುತ್ತಿರುವುದನ್ನು ತಿಳಿದ ಸ್ನೇಹಿತರಾದ ಶ್ಯಾಮ್ ಅವರು ಒಂದು ಮಲೆಯಾಳ ಬರಹವನ್ನು ಕಳಹಿಸಿ ಅದರಲ್ಲಿ ಮಾಪಿಳ್ಳೆ ತೆಯ್ಯಂ ಬಗ್ಗೆ ಮಾಹಿತಿ ಇದೆ ಎಂದು ಅವರ ಸ್ನೇಹಿತರು ಹೇಳಿದ್ದನ್ನು ತಿಳಿಸಿದರು.ನನಗೆ ಮಲೆಯಾಳ ಭಾಷೆ ಅರ್ಥವಾಗುವುದಾದರೂ ಓದಲು ತಿಳಿದಿಲ್ಲ. ಹಾಗಾಗಿ ನಾನು ಅದನ್ನು ಗೂಗಲ್ ಟ್ರಾನ್ಸಲೇಶನ್ ಮೂಲಜ ಇಂಗ್ಲಿಷ್ ಗೆ ಅನುವಾದಿತ ರೂಪ ಪಡೆದೆ.ಆಗ ಅದು ಕಲಂದನ್ ಮುಕ್ರಿ ತೆಯ್ಯಂ ಬಗೆಗಿನ  ಮಲೆಯಾಳ ವಿಕಿಪೀಡಿಯ ಮಾಹಿತಿ ಎಂದು ತಿಳಿಯಿತಾದರೂ ಗೂಗಲ್ ಅನುವಾದದಲ್ಲಿ ಸಾಕಷ್ಟು ಪ್ರಮಾಣದಲ್ಲಿ ತಪ್ಪುಗಳು ಇದ್ದ ಕಾರಣ ಕಥಾನಕ ಪೂರ್ತಿಯಾಗಿ ಅರ್ಥ ಆಗಲಿಲ್ಲ.
ಆಗ ಅದನ್ನು  ಮಲೆಯಾಳ ಬಲ್ಲ ಯುವ ಸಂಶೋಧಕರಾದ ಶಂಕರ್ ಕುಂಜತ್ತೂರಿಗೆ ಕಳಹಿಸಿ ಅನುವಾದ ಮಾಡಿ ಕೊಡಲು ಕೇಳಿದೆ.ಅವರು ಅದರ ಸಂಗ್ರಹ ಅನುವಾದ ಮಾಡಿ ನೀಡಿದರು.
ಈ ದೈವದ/ ತೆಯ್ಯಂ ನ ಸಂಕ್ಷಿಪ್ತ ಕಥಾನಕ ಹೀಗಿದೆ.
ಕಾಸರಗೋಡು ಜಿಲ್ಲೆಯ ಕಂಪಲ್ಲೂರು ಗ್ರಾಮದಲ್ಲಿ ಕಂಪಲ್ಲೂರು ಕೋಟ್ಟಯಿಲ್ ಎಂಬ ಪ್ರಾಚೀನ ತರವಾಡು ಮನೆ ಇದೆ.ಇದು ನಾಯರ್ ಸಮುದಾಯದವರ ತರವಾಡು ಆಗಿದ್ದು ಅವರಿಗೆ ಕೊಡಗಿನಿಂದ ಕಾಸರಗೋಡು ತನಕ ಹದಿನೈದು ಸಾವರ ಎಕರೆಗಳಷ್ಟು ಭೂಮಿ ಇತ್ತು.ಇಲ್ಲಿ ಬೆಳೆ ಬೆಳೆಯುತ್ತಾ ಇದ್ದರು.ಈ ತರವಾಡಿನ ರಕ್ಷಣೆಯನ್ನು ಕರಿಚಾಮುಂಡಿ ದೈವ ಮಾಡುತ್ತಾ ಇತ್ತು.
ಸೈನುದ್ದೀನ್ ಮತ್ತು ಅವರ ಕುಟುಂಬದ ಸದಸ್ಯರು ಈ  ಈ ಪ್ರದೇಶಕ್ಕೆ ಬರುತ್ತಾರೆ.ಆಗ ಈ ಕೋಟ್ಟಯಿಲ್ ತರವಾಡಿನ ನಾಯರ್‌ಗಳು ಅವರಿಗೆ ಸಹಾಯ ಮಾಡುತ್ತಾರೆ. ಅವರ ಧರ್ಮದ ಪಾಲನೆಗಾಗಿ ಒಂದು ಶೆಡ್ ಹಾಕಿ ಪ್ರಾರ್ಥನೆಗೆ ವ್ಯವಸ್ಥೆ ಮಾಡುತ್ತಾರೆ.
ಸೈನುದ್ದೀನ್ ಮತ್ತು ಅವರ ಕುಟುಂಬದವರು ಮತ್ಸ್ಯ ಬೇಟೆಗಾಗಿ ಮತ್ತು ವ್ಯಾಪಾರಕ್ಕಾಗಿ ಪುಲಿಂಗಾಟ್ ನದಿಯನ್ನು ಗೇಣಿಗೆ ಪಡೆಯುತ್ತಾರೆ.ಅವರಿಗೆ ಒಂದು ಮಸೀದಿಯನ್ನು ತರವಾಡಿನ ನಾಯರ್‌ಗಳು ಕಟ್ಟಿಸಿಕೊಡುತ್ತಾರೆ.
ಆ ಮಸೀದಿಯಲ್ಲಿ ಉರೂಸ್ ಗೆ ದಿನ ನಿಶ್ಚಯ ಮಾಡುವ ಮೊದಲೇ ಮಸೀದಿಯ ಮುಖ್ಯಸ್ಥರು ತರವಾಡು ಮನೆಗೆ ಬಂದು ದೈವದಲ್ಲಿ ಉರೂಸ್ ಹಬ್ಬದ ನೇತೃತ್ವ ( ಅಧ್ಯಕ್ಷತೆ)ವಹಿಸುವಂತೆ ಪ್ರಾರ್ಥನೆ ಮಾಡಿ ಅರಶಿನ ಗಂಧ ಪ್ರಸಾದ ಕೊಂಡೊಯ್ಯುತ್ತಾ ಇದ್ದರು.ಈಗಲೂ ಅಲ್ಲಿ ಈ ಪದ್ಧತಿ ಇದೆ.ಅವರು ತರವಾಡಿನ ರಕ್ಷಕ ದೈವ ಕರಿಚಾಮುಂಡಿ ದೈವಕ್ಕೆ ನಿಷ್ಠರಾಗಿ ಗೌರವ ತೋರುತ್ತಿದ್ದರು.ಹಾಗಾಗಿ ಅಲ್ಲಿನ ಮಸೀದಿಯ ಮುಖ್ಯಸ್ಥ ಕಲಂದನ್ ಮುಕ್ರಿಗೆ  ಕರಿ ಚಾಮುಂಡಿ ದೈವ   ಮರಣಾನಂತರ ದೈವತ್ವ ನೀಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.
ಕಲಂದನ್ ಮುಕ್ರಿ ದೈವವನ್ನು ಹಿಂದು ಪಾತ್ರಿಗಳು ಕಟ್ಟುತ್ತಾರೆ. ಒಂದು  ಬಿಳಿ‌ಲುಂಗಿಯ ಮೇಲೆ ,ಸೊಂಟಕ್ಕೆ ಕಟ್ಟಿದ ಕೆಂಪು ಶಾಲು ,ತಲೆಗೆ ಕೆಂಪು ಬಟ್ಟೆಯ ರುಮಾಲು ಹಾಗೂ ಬಿಳಿಯ ಗಡ್ಡದ  ಮಾನವ ಸಹಜವಾ ಅಲಂಕಾರ ,ವೇಷಭೂಷಣ ಈ ದೈವಕ್ಕೆ ಮಾಡುತ್ತಾರೆ.
ಮಾಹಿತಿ ಮೂಲ : ಮಲೆಯಾಳ ವಿಕಿಪೀಡಿಯ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಶ್ಯಾಮ್, ಅನುವಾದ ಮಾಡಿದ ಶಂಕರ್ ಕುಂಜತ್ತೂರು,ಮಾಹಿತಿ ನೀಡಿದ ಕುಂಞಿರಾಮನ್ ಮಾಸ್ತರ್ ಅವರುಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ
- ಡಾ.ಲಕ್ಷ್ಮೀ ಜಿ ಪ್ರಸಾದ

ಅಜ್ಜಿ ಭೂತ © ಡಾ.ಲಕ್ಷ್ಮೀ ಜಿ ಪ್ರಸಾದ

*ಅಜ್ಜಿ ಬೂತ*🙏

*(ಮಾಯೊದ ಬೊಲ್ಪು💫*)👏

ಸುಳ್ಯ ತಾಲೂಕುದ ಮಡಪ್ಪಾಡಿ, ಕಂದ್ರಪ್ಪಾಡಿ, ವಾಲ್ತಾಜೆ ಇಂಚಿತ್ತಿನ ಪ್ರದೇಸೊಡು ಬಾರೀ ಕಾರನಿಕೊಡು ಮೆರೆಪಿನ ದೈವೋ ಸುಬ್ಬಜ್ಜಿ ಭೂತ. ಸುಬ್ಬಜ್ಜಿ, ಸಬ್ಬಜ್ಜಿ, ಸಬ್ಬಕ್ಕ ಇಂಚಿತ್ತಿನ ಬೇತೆ ಬೇತೆ ಪುದರ್‌ಡ್ ಅಜ್ಜಿ ಭೂತೊದ ಆರಾಧನೆ ಮಲ್ಪುವೆರ್.

ಅಜ್ಜಿ ಬೂತೊದ ಕೋಲ ಆಕರ್ಷಕ. ಯಕ್ಷಗಾನದ ಸ್ತ್ರೀ ವೇಷೊಗುಲಾ ಉಂದೆಕ್ಕ್ ಲಾ ಸಾಮ್ಯತೆ ಉಂಡು. ಅಜ್ಜಿ ಬೂತೊದ ಕೋಲೊಡು ಕೋಪ ರೌದ್ರತೆ ಆರ್ಭಟ ಇಜ್ಜಿ. ಮೋಕೆ, ಪ್ರಶಾಂತ ಅಭಿನಯ ಲಕ್ಕ್‌ದ್ ತೋಜುಂಡು. ಈ ದೈವೊದ ಪಾಡ್ದನ ತುಳುಟ್ಟು ಉಂಡು. ಆಂಡ ನುಡಿಗಟ್ಟ್ ಕನ್ನಡ. ಬಹುಷ: ಅಜ್ಜಿ ಬೂತೊದ ಮೂಲ ಪೊಣ್ಣು ಕನ್ನಡತಿ ಆದುಪ್ಪೊಡು.
ಅಜ್ಜಿ ಬೂತೊಲಾ ಉಲ್ಲಾಕುಳು ದೈವೊಲಾ ಒಟ್ಟುಗು ಗಟ್ಟ ಜತ್ತ್‌ದ್ ಬನ್ನಗ ಕೂಜಿಲೆನ್ ಲೆತೊಂದು ದೆಂಜಿ ಪತ್ತ್ಯೆರೆ ಬರ್ಪಲ್ ಪನ್ಪಿನ ನಂಬಿಕೆ ಉಂಡು. ಬಳ್ಪದ ತ್ರಿಶೂಲಿನಿ ದೇವಸ್ಥಾನೊಗು ಸಮ್ಮಂದಪಟ್ಟ್‌ನ ಐತಿಹ್ಯೊಡು ಅಜ್ಜಿ ಬೂತೊದ ಬಗ್ಗೆ ಪನೀತ್ ಮಾಹಿತಿ ಉಂಡು. ಉಲ್ಲಾಕುಳು ದೈವೊ ಬನ್ನಗ ಬಳ್ಪ ದೇವಸ್ಥಾನೊಡು ಒಂಜಿ ಪೊಣ್ಣ ರೂಪೊದ ಬೊಣ್ಚಿ ತೋಜುಂಡು. ಆ ಶಕ್ತಿದ ಒಟ್ಟುಗು ಉಲ್ಲಾಕುಳು ಕುದುರೆಡ್ ಕುಲ್ಲುದು ಪೋನಗ ಜನ ತೆಲಿಪುವೆರ್. ಅಪಗ ನಾಚಿಕೆ ಆದ್ ಒಂಜಿ ಗುಹೆಕ್ ನೂರಿಯೆರ್. ಆ ಪೊಣ್ಣ ಶಕ್ತಿಯೇ ಬೊಕ್ಕ ಅಜ್ಜಿ ಬೂತೊ ಪಂಡ್‌ದ್ ಪುದರಾಪುಂಡು.ಸುಳ್ಯದ ಕಾಯರ್ತೋಡಿ ಜಾಲಾಟೊಡು ಸಬ್ಬಕ್ಕ ಎಡ್ತೆರ್/ಸಬ್ಬಡ್ತೆರ್ ಪನ್ಪಿನ ಒಂಜಿ ದೈವೊಗು ಆರಾಧನೆ ಉಂಡು. ಮೂಲತಃ ಅಂಗಯಿ ಗೌಡೆರೆ ಮಗಲ್ ಸಬ್ಬಕ್ಕ ದೇಂಗೋಡಿ ತರವಾಡ್ ಇ್ಲ್ಗ್ ಮದಿಮೆ ಆದ್ ಬರ್ಪಲ್. ಒಂಜಿ ದಿನ ಇಲ್ಲದ ಪೊಂಜೊವೆಲೆನ ಒಟ್ಟುಗು ತಪ್ಪು ಕನಯೆರೆ ಪೂಮಲೆ ಕಾಡ್‌ಗ್ ಪೋಪಲ್. ತಪ್ಪು ಪಿರೆದ್ ತರೆಟ್ ತುಂಬೊಂದು ಬನ್ನಗ ಸಬ್ಬಕ್ಕ ಅಕೇರಿಗ್ ಒರ್ತಿಯೆ ಒರಿಪಲ್. ಅಪಗ ಏರೋ ಬತ್ತ್‌ದ್ ಆಲೆನ ತರೆಕ್ ತಪ್ಪುದ ಕಟ್ಟ ತುಂಬಾವೆರ್. ಗುಡ್ಡೆದ ಮಿತ್ತ್ ಬಲಾಂದ್ ಲೆಪ್ಪುವೆರ್. ಆ ಪೊರ್ತುಡು ಸಬ್ಬಕ್ಕ ಮಾಯ ಆದ್ ಉಳ್ಳಾಕುಲೆನ ಬಲತ್ತ ಭಾಗೊಡು ಉಂತುವಲ್ ಪನ್ಪಿನ ಕತೆ ಉಂಡು.

ಅಜ್ಜಿ ಬೂತೊದ ಒಟ್ಟುಗು ರಡ್ಡ್ ಕೂಜಿಲ್ ದೈವೊಲೆಗ್ ಆರಾಧನೆ ನಡಪುಂಡು. ಕೂಜಿಲೆನ ಕೋಲ ಆನಗ ಅಲ್ಪ ಕೋಟೆ ಕಟ್ಟುವೆರ್. ಕೋಟೆ ಕಡಿದ್ ಪೋಂಡ ಅಕುಲು ಪಿರ ಬರ್ಪುಜೆರ್ ಪನ್ಪಿನ ನಂಬಿಕೆ ಉಂಡು. ಅಕುಲು ತೋಟೊಗು ಪೋದು ಬಜ್ಜೈ, ಬೊಂಡ ಕನಪಿನ ಕ್ರಮ ಉಂಡು. ಅಕುಲೆನ್ ಗಂಡ ಗಣಕುಲುಂದ್ ಲೆಪ್ಪುವೆರ್. ಉಂದೆನ್ ಮಾತಾ ತೂನಗ ಮೂಲತಃ ಕೂಜಿಲ್ ಲೂಟಿ ಮಲ್ಪೆರೆ ಬತ್ತಿನ ಅರಸುಲೆನ ಸೈನಿಕೆರ್ ಪಂಡ್‌ದ್ ತೆರಿದ್ ಬರ್ಪುಂಡ್. ಸಾರತ್ತೊಂಜಿ ಬೂತೊಲೆಡ್ ಒಂಜಿ ಆದುಪ್ಪುನ 'ಡೆಂಜಿ ಪುಕ್ಕೆ' ಪನ್ಪಿನ ದೈವೊಲ ಕೂಜಿಲ್ ದೈವೊಲೇ ಆದುಪ್ಪು. ದಾಯೆಗ್ ಪಂಡ ಗಂಡ ಗಣಕುಲೆಗ್ ಡೆಂಜಿ ಬೊಕ್ಕ ಕುಡುತ್ತ ಕೊದ್ದೆಲ್ ಮಲ್ತ್‌ದ್ ಬಳಸುನ ಸಂಪ್ರದಾಯ ಕೆಲವು ಕಡೆಟ್ ಉಂಡು. ಅಜ್ಜಿ ಬೂತ ಕೂಜಿಲೆನ ಒಟ್ಟುಗು ಡೆಂಜಿ ಪತ್ತ್ಯೆರೆ ಬರ್ಪುನ ಬಗ್ಗೆ ಪಾಡ್ದನೊಡು ಮಾಹಿತಿ ಉಂಡು.ಅದ್ಯಯನೊದ ಬೊಲ್ಪುಡು
ಅಜ್ಜಿ ದೈವೊದ ಬಗ್ಗೆ ಅಧ್ಯಯನ ನಡಪೊಡು. ಪೂಮಲೆ ಕಾಡ್‌ಡ್ ಸಬ್ಬಕ್ಕನ್ ಮಿತ್ತ್ ಬಲ ಪಂಡ್‌ದ್ ಪಂಡಿನೆ ಏರ್? ಪೊಸ ಮದಿಮಾಲ್ ಸಬ್ಬಕ್ಕನ್ ಇಲ್ಲದಕುಲು ಕಾಡ್‌ಡ್ ಬುಡ್ಡು ಬತ್ತಿನೆ ದಾಯೆಗ್? ಏರೋ ಕಾಡ್‌ಡ್ ಸಬ್ಬಕ್ಕಗ್ ಉಪದ್ರ ಕೊರಿಯೆರಾ? ಅಪಗ ದುರಂತ ಆದ್ ಸಬ್ಬಕ್ಕನೇ ಸುಬ್ಬಜ್ಜಿ ಅಜ್ಜಿ ಬೂತ ಆದ್ ದೈವತ್ವ ಪಡೆಯೆರಾ? ಅತ್ತ್‌ಂಡ ಆ ಊರುದ ಅರಸು ಅತ್ತ್‌ಂಡ ಏರೋ ಬಲಾಡ್ಯೆರ್ ಸಬ್ಬಕ್ಕನ್ ಒಯ್ತಂದು ಪೋಯೆರಾ? ಏರೋ ಮಲ್ತಿನೆನ್, ಉಲ್ಲಾಕುಲು ದೈವೊದ ಮಿತ್ತ್ ಪಾಡ್ದ್ ದೈವೊನೇ ಮಾಯ ಮಲ್ತ್‌ನೆ ಪಂಡೆರಾ? ಈ ಸಮಗ್ರ ವಿಚಾರೊಲೆನ್ ಅಧ್ಯಯನ ಮಲ್ಪೊಡಾಯಿನ ಅಗತ್ಯ ಉಂಡು.

*©ಡಾ*. *ಲಕ್ಚ್ಮೀ ಜಿ. ಪ್ರಸಾದ, ಉಪನ್ಯಾಸೆಕೆರ್*,

ನಾನು ಲಕ್ಷ್ಮೀ ಪೋದ್ದಾರ್ ಆದ ಕಥೆ

ನಾನು ಲಕ್ಷ್ಮೀ ಪೋದ್ದಾರ್ ಆದ ಕತೆ...
ಲಕ್ಷ್ಮೀ ಪೊದ್ದಾರ್ c/o ಲಕ್ಷ್ಮಿ ಪ್ರಸಾದ್ © ಜಿ ಎನ್ ಮೋಹನ್
Posted by Avadhi

ಡಾ ಕೆ ಎನ್ ಗಣೇಶಯ್ಯ ಅವರು ನಿಮಗೆ ಗೊತ್ತು.. ಅವರ ಬರವಣಿಗೆಯ ಶೈಲಿಯೂ ಗೊತ್ತು

ಕನ್ನಡಕ್ಕೆ ಹೊಸದೇ ಆದ ಬರವಣಿಗೆಯ ತಂತ್ರ ಪರಿಚಯಿಸಿದ ಹೆಮ್ಮೆ ಅವರದ್ದು

ನಾಗೇಶ್ ಹೆಗಡೆ ಅವರ ಶಹಭಾಷ್ ಗಿರಿಯಿಂದಾಗಿ ಹೊಸದೇ ಶೈಲಿಯೊಂದನ್ನು ರೂಢಿಸಿಕೊಂಡ ಗಣೇಶಯ್ಯ ಅವರು ಹೇಗೆ ಬರೆಯುತ್ತಾರೆ ಎನ್ನುವುದಕ್ಕೆ ಒಂದು ಉದಾಹರಣೆ ಇಲ್ಲಿದೆ.

ಇತ್ತೀಚಿಗೆ ಹೊರಬಂದ ‘ಬಳ್ಳಿಕಾಳ ಬಳ್ಳಿ’ ಕೃತಿಯಲ್ಲಿ ತುಳು ಸಂಸ್ಕೃತಿಯ ಸಂಶೋಧಕಿ ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಪಾತ್ರ ಬದಲಾಗಿರುವ ರೀತಿ ನೋಡಿ.


ಡಾ ಲಕ್ಷ್ಮಿ ಜಿ ಪ್ರಸಾದ್ ಹೇಳುತ್ತಾರೆ-

ನಾನೆಂದೂ ಕಾದಂಬರಿ ಬರೆದಿಲ್ಲ

ಆದರೆ ಖ್ಯಾತ ಸಾಹಿತಿ ಕಾದಂಬರಿಗಾರ ಕೃಷಿ ವಿಜ್ಞಾನಿ ಡಾ.ಗಣೇಶಯ್ಯ ಅವರ ಪತ್ತೆದಾರಿ ಶೈಲಿಯ ಐತಿಹಾಸಿಕ ಕಾದಂಬರಿ “ಬಳ್ಳಿ ಕಾಳ ಬಳ್ಳಿ”ಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಬಂದಿದ್ದೇನೆ

ಇಲ್ಲಿ ನನ್ನ ಪಾತ್ರ ಲಕ್ಷ್ಮೀ ಪೊದ್ದಾರ್ ಎಂಬ ತುಳು ಜಾನಪದ ಸಂಶೋಧಕಿಯದು

ನಾನು ಎಂದಾದರು ಒಂದು ದಿನ ಒಂದು ಕತೆ ಕಾದಂಬರಿಯ ಪಾತ್ರವಾಗಬಹುದು ಕನಸಲ್ಲಿ ಕೂಡ ಊಹಿಸಿರಲಿಲ್ಲ .

ನಾನು ಗಣೇಶಯ್ಯ ಅವರನ್ನು ಭೇಟಿಯಾಗಿದ್ದಾಗ ನನ್ನ ಪಾತ್ರ ಅವರ ಕಾದಂಬರಿಯಲ್ಲಿ ಬರುತ್ತೆ ಎಂದಾಗ ಒಂದೆಡೆ ತುಳುವಿನಿಂದ ಕನ್ನಡಕ್ಕೆ ಒಂದು ಪದ್ಯವನ್ನು ಅನುವಾದ ಮಾಡಿಕೊಡುವ ಚಿಕ್ಕ ಪಾತ್ರ ಇರಬಹುದು ಎಂದುಕೊಂಡಿದ್ದೆ

ಆದರೆ ಇಲ್ಲಿ ಲಕ್ಷ್ಮೀ ಪೋದ್ದಾರ್ ಗೆ ಪ್ರಮುಖ ಪಾತ್ರವಿದೆ

ನಾನು ಭೂತಾರಾಧನೆ ಬಗ್ಗೆ ಹೇಳುವ ವಿಚಾರಗಳನ್ನು ಲಕ್ಷ್ಮಿ ಪೋದ್ದಾರ್ ಮೂಲಕ ಕವಿ ಜನತೆಯ ಎದುರು ಇಟ್ಟಿದ್ದಾರೆ ಭೂತಾರಾಧನೆಯಲ್ಲಿ ಅಡಕವಾಗಿರುವ ಐತಿಹಾಸಿಕ ವಿಚಾರಗಳು ಕೂಡ ಕಾದಂಬರಿಗೆ ಆಕರವಾಗಬಲ್ಲವು ಎಂಬುದನ್ನು ಅವರು ತೋರಿಸಿಕೊಟ್ಟಿದಾರೆ.

ಅದಕ್ಕಾಗಿ ಗಣೇಶಯ್ಯ ಅವರಿಗೆ ಧನ್ಯವಾದಗಳು

ಈ ಹಿಂದೆ ಡಾ .ಅಮೃತ ಸೋಮೇಶ್ವರ ಅವರು ತುಳುವರ ಪಾಡ್ದನ ಹಾಗೂ ಭೂತಾರಾಧನೆ ಕುರಿತು ತಿಳಿಸಲು ನಾಟಕ ಕಾದಂಬರಿ ಕಥೆಗಳನ್ನು ರಚಿಸಿ ಜನರ ಮುಂದಿಡಬೇಕು ಎಂದು ಹೇಳಿದ್ದರು.

ಈಜೋ ಮಂಜೊಟ್ಟಿ ಗೋಣ ಪಾಡ್ದನ ಹಾಗೂ ಉರವ, ಎರಡು ಬಂಟ ದೈವಗಳ ಕಥಾನಕವನ್ನು ಆಧರಿಸಿ ನಾನು ಒಂದು ಸಣ್ಣ ನಾಟಕ ಬರೆದಿದ್ದು ನಮ್ಮ ವಿದ್ಯಾರ್ಥಿಗಳ ಮೂಲಕ ಪ್ರದರ್ಶನ ಮಾಡುವ ಯತ್ನ ಮಾಡಿದ್ದೆ

ಆದರೆ ಇವೆಲ್ಲ ತುಳು ಸಂಸ್ಕೃತಿ ಯ ಅರಿವಿರುವವರಿಗೆ‌ ಮಾತ್ರ ಸ್ಪಷ್ಟವಾಗಿ ಅರ್ಥವಾಗಲು ಸಾಧ್ಯ ಯಾಕೆಂದರೆ ಅಲ್ಲಿ‌ ತುಳುವಿನ ಭೂತ‌ಪದಕ್ಕೆ‌ಇರುವ ಅರ್ಥ ಆರಾಧನಾ ಸ್ವರೂಪದ ಬಗ್ಗೆ ಹೇಳಿಲ್ಲ ಬಹುಶಃ ‌ಮೊದಲ ಬಾರಿಗೆ ತುಳುನಾಡಿನ ಭೂತಾರಾಧನೆ ಬಗ್ಗೆ ಕನ್ನಡ ‌ಕಾದಂಬರಿಯಲ್ಲಿ ಈ ರೀತಿಯ ಮಾಹಿತಿಯನ್ನು ನೀಡಿದವರು ಡಾ. ಗಣೇಶಯ್ಯ ಅವರೇ ಇರಬೇಕು

ಈ ಕಾದಂಬರಿಯಲ್ಲಿ ಚೌಂಡಿ ಮತ್ತು ಜಟ್ಟಿಗ/ ಜತ್ತಿಂಗ ದೈವಗಳ ಕಥಾನದಲ್ಲಿ ಚೆನ್ನ ಭೈರಾದೇವಿಯ ಇತಿಹಾಸದ ಎಳೆಯನ್ನು ಕಂಡುಕೊಂಡದ್ದು ಅವರ ತೀವ್ರ ವಿಚಕ್ಷಣಾ ಗುಣಕ್ಕೆ ಸಾಕ್ಷಿಯಾಗಿದೆ

ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಕುರಿತಾಗಿ ಸಾಕಷ್ಟು ಇತಿಹಾಸದ ಮಾಹಿತಿ ಇದೆ. ನಿಧಿ ಶೋಧದ ಕಥಾನಕ ಬಿಟ್ಟರೆ ಉಳಿದೆಲ್ಲವೂ ಅದರಲ್ಲಿ ಇರುವುದು ನಡೆದು ಹೋದ ಸತ್ಯ ಘಟನೆಗಳು
http://avadhimag.com/2017/01/04/%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae%e0%b3%80-%e0%b2%aa%e0%b3%8a%e0%b2%a6%e0%b3%8d%e0%b2%a6%e0%b2%be%e0%b2%b0%e0%b3%8d-co-%e0%b2%b2%e0%b2%95%e0%b3%8d%e0%b2%b7%e0%b3%8d%e0%b2%ae/

**** ಬಳ್ಳಿಕಾಳ ಬೆಳ್ಳಿ *****

ಚರಿತ್ರಕಾರರೂ, ಚರಿತ್ರೆಯೂ ಮರೆತ ಗೇರುಸೊಪ್ಪೆಯ " ಕಾಳುಮೆಣಸಿನ ರಾಣಿ " ಚೆನ್ನಭೈರಾದೇವಿಯ ಚರಿತೆ.

 ಸತ್ಯ ಸಂಗತಿಗಳ ಜೊತೆ ಡಾ ll ಕೆ. ಎನ್ ಗಣೇಶಯ್ಯನವರ ಅದ್ಭುತ ಕಲ್ಪನಾಲಹರಿಯಲ್ಲಿ ಮೂಡಿಬಂದ ಅತ್ಯುತ್ತಮ ಕಾದಂಬರಿ

ಇತ್ತೀಚಿನ ದಿನಗಳಲ್ಲಿ ನಾನು ಓದಿದಂತಹ ಒಂದು ಅತ್ಯುತ್ತಮ ಸಂಶೋಧನಾತ್ಮಕ ಕೃತಿ.......ಪ್ರಾರಂಭದಿಂದ ಹಿಡಿದು ಕೊನೆಯ ತನಕವೂ ಕುತೂಹಲ ಕೆರಳಿಸುತ್ತಾ, ಜೊತೆಗೆ ಅತ್ಯುಪಯುಕ್ತ ಮಾಹಿತಿಗಳನ್ನುಕೂಡಾ ನೀಡುತ್ತಾ ಸಾಗಿದ ಕಾದಂಬರಿಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದೆ.

ಸಾಗರ, ಗೇರುಸೊಪ್ಪೆ,ಹೊನ್ನಾವರ, ಭಟ್ಕಳ, ಮುರುಡೇಶ್ವರ, ಗೇರುಸೊಪ್ಪೆಯ ನಗರಬಸದಿಕೇರಿಯ ಚತುರ್ಮುಖ ಬಸದಿ, ಅಳ್ಳಂಕಿಯ ಹೈಗುಂದ, ನೇತ್ರಾಣಿಗುಡ್ಡಗಳನ್ನು ಸುತ್ತಿ ಬಳಸಿಕೊಂಡು ಸಾಗುವ ಕಥೆ , ಗಣೇಶಯ್ಯನವರ ವಿಶಿಷ್ಟ ಶೈಲಿಯಲ್ಲಿ , ಅವರ ಹಿಂದಿನ ಕೃತಿಗಳಾದ " ಕನಕ ಮುಸುಕು" " ಕರಿಸಿರಿಯಾನ " ಕೃತಿಗಳಂತೇ ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ,  ನಡುವೆ  ನಾವರಿಯದ ಸಂಶೋಧನಾತ್ಮಕ ವಿವರಗಳನ್ನು ನೀಡುತ್ತಾ, ಓದುಗರನ್ನು ಚಿಂತನೆಗೆ ಹಚ್ಚುತ್ತಾ ಸಾಗುತ್ತದೆ.
ಇದರ ಜೊತೆಗೆ " ಭೂತಗಳ ಅದ್ಭುತ ಜಗತ್ತಿನ" ತುಳುನಾಡ ಭೂತಗಳ ಬಗೆಗೆ ಸಂಶೋಧನೆ ನಡೆಸಿ ಖ್ಯಾತರಾದ ಡಾ.ಲಕ್ಷ್ಮಿ.ಜಿ ಪ್ರಸಾದ ( Lakshmi V ) ಅವರೂ ಕೂಡಾ ಕಥೆಯಲ್ಲಿ ಒಂದು ಪಾತ್ರವೇ ಆಗಿ ಓದುಗರಿಗೆ ಹಲವಾರು ವಿಷಯಗಳ ಬಗೆಗೆ ಪರಿಚಯಿಸುತ್ತಾ ಸಾಗುತ್ತಾರೆ. ಅವರ ಪಾತ್ರ ಚಿತ್ರಣವೂ ಕೂಡಾ ಕಥೆಯಲ್ಲಿ ಹಾಸುಹೊಕ್ಕಾಗಿ ಅದ್ಭುತವಾಗಿ ಮೂಡಿಬಂದಿದೆ.

ನಮ್ಮೂರಿನ ಬಗೆಗೆ ನಾವರಿಯದ ವಿವರಗಳ ವಿಶಿಷ್ಟ ಕೃತಿ... ಮನಸ್ಸಿಗೆ ಮುದ ನೀಡಿತು.

ಗಣೇಶಯ್ಯನವರ ಕೃತಿಗಳ ಬಗೆಗೆ ಹೇಳುವುದಕ್ಕಿಂತ ಅದನ್ನು ಓದಿಯೇ ಆಸ್ವಾದಿಸಬೇಕು.....

ಉತ್ತಮವಾದಂತಹ ಕೃತಿ......ಕೊಂಡು ಓದಿ.... !
- ಗಣೇಶ್ ಭಟ್
https://m.facebook.com/story.php?story_fbid=1356393794395471&id=100000745909480

Thursday 25 January 2018

ಸಾವಿರದೊಂದು ಗುರಿಯೆಡೆಗೆ, ತುಳು ನಾಡ ದೈವಗಳು 421 ಮಾಪ್ಪಿಳ್ಳ ಚಾಮುಂಡಿ © ಡಾ.ಲಕ್ಷ್ಮೀ ಜಿ ಪ್ರಸಾದ



ಚಿತ್ರ ಕೃಪೆ: folkstudioin.blogspot. com

ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 421 ಮಾಪ್ಪಿಳ್ಳ ಚಾಮುಂಡಿ © ಡಾ.ಲಕ್ಷ್ಮೀ ಜಿ ಪ್ರಸಾದ
ಮಾಪ್ಪಿಳ್ಳ ಚಾಮುಂಡಿ ಯನ್ನು ಕೋಲ್ತಾಯಿಲ್ ತರವಾಡು ಕುಟುಂಬದವರು ಕೋಲ ಕಟ್ಟಿಸಿ ಆರಾಧನೆ ಮಾಡುತ್ತಾರೆ.ಹೆಸರೇ ತಿಳಿಸುವಂತೆ ಈ ದೈವ ಮೂಲತಃ ಮುಸ್ಲಿ ಮಹಿಳೆ.
ದೈವಗಳು ಎದ್ದು ನಿಂತಾಗ ಗಮನಿಸದೆ ಗೌರವಿಸದೆ ಅವರಷ್ಟಕ್ಕೆ ಇದ್ದವರನ್ನು ದೈವಗಳು ಮಾಯಮಾಡಿ ತನ್ನ ಸೇರಿಗೆಗೆ ಸಲ್ಲಿಸುವ ವಿಚಾರ ತುಳು ನಾಡಿನ ಅನೇಕ ದೈವಗಳ ವೃತ್ತಾಂತಗಳಲ್ಲಿ ಇದೆ.ಭಾಗಮಂಡಲದಿಂದ ದೈವ ಬರುವಾಗ ದಾರಿಯಲ್ಲಿ ಬತ್ತ ಬಡಿಯುತ್ತಾ ಇದ್ದ ಮುಸ್ಲಿಂ ಮಹಿಳೆಯನ್ನು ತನ್ನ ಸೇರಿಗೆಗೆ ಸೇರಿಸಿಕೊಂಡ ಬಗ್ಗೆ ಮಾಪುಲ್ತಿ ಧೂಮಾವತಿ ದೈವದ ವೃತ್ತಾಂತದಿಂದ ತಿಳಿದು ಬರುತ್ತದೆ.ಅದೇ ರೀತಿಯಲ್ಲಿ ಉಳ್ಳಾಕುಲು ನೇಮವಾಗುವಾಗ ದಾರಿ ಬಿಡದ ತೊಟ್ಟಿಲು ಮಗುವನ್ನು ಕರೆದೊಯ್ಯುತ್ತಿದ್ದ ದಂಪತಿಗಳನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಂಡ ಬಗ್ಗೆ ಮಾಪುಲೆ ಮಾಪುಲ್ತಿ ದೈವಗಳ ಬಗೆಗಿನ ಐತಿಹ್ಯದಿಂದ ತಿಳಿದುಬರುತ್ತದೆ.
ಅದೇ ರೀತಿಯ ಐತಿಹ್ಯ ಮಾಪ್ಪಿಳ್ಳ ಚಾಮುಂಡಿ ದೈವದ ಬಗ್ಗೆ ಪ್ರಚಲಿತವಿದೆ.
ಚಾಮುಂಡಿ ದೈವ ಎದ್ದು ನಿಂತು ಆವೇಶಕ್ಕೆ ಒಳಗಾಗಿದ್ದಾಗ ಓರ್ವ ಮುಸ್ಲಿಂ ಮಹಿಳೆ ಪ್ರಾರ್ಥನೆಗೆ ಕರೆ ಕೊಟ್ಟು ನಮಾಜ್ ಮಾಡುತ್ತಾಳೆ
ಆಗ ಅವಳ ಮೇಲೆ ದೃಷ್ಟಿ ಹಾಯಿಸಿದ ದೈವ ಅವಳನ್ನು ಮಾಯ ಮಾಡಿ ತನ್ನ ಸೇರಿಗೆಗೆ ಸಂದಾಯ ಮಾಡಿಕೊಳ್ಳುತ್ತದೆ.ಅವಳು ಮುಂದೆ ದೈವತ್ವ  ಪಡೆದು ಮಾಪ್ಪಿಳ್ಳ ಚಾಮುಂಡಿ ಎಂಬ ಹೆಸರಿನಲ್ಲಿ ದೈವವಾಗಿ ಆರಾಧನೆ ಪಡೆಯುತ್ತಾಳೆ.ಈ ದೈವಕ್ಕೆ ಪ್ರತಿವರ್ಷ ತುಲಾಮಾಸದ ಹನ್ನೊಂದನೇ ದಿನ ರಾತ್ರಿ ಕೋಲ ನೀಡಿ ಆರಾಧಿಸುತ್ತಾರೆ
ಮಾಹಿತಿ ಮೂಲ-  ಹಿರಿಯರಾದ ಕುಂಞಿರಾಮನ್,ಎನ್ ಕೃಷ್ಣನ್  ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1