Thursday 24 April 2014

ದಡವರಿಯದ ಮಕ್ಕಳಿಗೆ ಬೇಕು ಮಾರ್ಗ ದರ್ಶನ-ಡಾ.ಲಕ್ಷ್ಮೀ ಜಿ ಪ್ರಸಾದ (22 ಏಪ್ರಿಲ್ 2014 ರಂದು ಕನ್ನಡ ಪ್ರಭ ಪುಟ 6 ರಲ್ಲಿಪ್ರಕಟಿತ)




ಏಳು,ಎದ್ದೇಳು ಜಾಗೃತನಾಗು !ಇದು ಸ್ವಾಮಿ ವಿವೇಕಾನಂದರು ಯುವ ಜನತೆಗೆ ನೀಡಿದ ಸಂದೇಶ .ಈ ಸಂದೇಶವನ್ನು ಅವರು ನೀಡಿದಾಗ ಅವರಿನ್ನೂ  ಎಳೆಯ ಯುವಕ ರಾಗಿದ್ದರು .
ಆದರೆ ನಮ್ಮ ಇಂದಿನ ಯುವ ಜನಾಂಗದ ಮನೋ ಸ್ಥಿತಿ ಹೇಗಿದೆ ?ಓದ್ಕೋ ಹೋಗು ಅಂತ ಅಮ್ಮ ಬೈದರೆ ಆತ್ಮ ಹತ್ಯೆ ,ಅಪ್ಪ ಬೈಕ್ ತೆಗೆಸಿಕೊತ್ತಿಲ್ಲ ಅಂತ ಆತ್ಮ ಹತ್ಯೆ ಕೇಳಿದ ಶೂಸ್ ಕೊಡಿಸಿಲ್ಲ ಅಂತ ಆತ್ಮ ಹತ್ಯೆ ,ಸಿಗರೆಟ್ ಯಾಕೆ ಸೇದಿದ್ದು ಅಂತ ಮೇಷ್ಟ್ರು  ಕೇಳಿದ್ದಕ್ಕೆ ನೇಣು,,ಪರೀಕ್ಷೆ ಬರೆಯುವ ಮೊದಲು ಓದಿ ಆಗಿಲ್ಲ ಏನು ಮಾಡೋದು ಅಂತ ಸಾಯೋದು ,ಪರೀಕ್ಷೆಯಲ್ಲಿ ಫೈಲ್ ಆದರೆ ಅಂತ ಮೊದಲೇ ಸಾಯೋದು ,ಪರೀಕ್ಷೆಯಲ್ಲಿ ಫೈಲ್ ಆದರೆ ಸಾಯೋದು ,ಕಡಿಮೆ ಮಾರ್ಕ್ಸ್ ಬಂದ್ರೆ ಸಾಯೋದು ,ಓದಲು ಬೇಕಾದ ಕಾಲೇಜ್ ನಲ್ಲಿ ಸೀಟ್ ಸಿಕ್ಕಿಲ್ಲ ಅಂತ ಸಾಯೋದು ,ಕೆಲಸ ಸಿಗದಿದ್ರೂ ಸಾಯುವುದು ,ಪ್ರಮೋಷನ್ ಸಿಕ್ಕಿಲ್ಲಾಂತಾನೂ ಸಾಯೋದು ,ಕೆಲಸ ಹೋದರೂ ಸಾಯುವುದು ..ಹೀಗೆ ಹನುಮಂತನ ಬಾಲದ ಹಾಗೆ ಪಟ್ಟಿ  ಬೆಳೆಯುತ್ತಾ ಹೋಗುತ್ತದೆ.
ಯಾಕೆ ಹೀಗೆ ?ಇಂದಿನ ಯುವಕರ ಹತಾಶಾ ಮನೋಭಾವ ದೌರ್ಬಲ್ಯಕ್ಕೆ ಕಾರಣವೇನು ?ಇಂದಿನ ವಿಭಕ್ತ ಕುಟುಂಬಗಳಲ್ಲಿ ಯುವಕರಿಗೆ ಸಾಕಷ್ಟು ಆದರ ಸಾಂತ್ವನಗಳು ಸಿಗುತ್ತಿಲ್ಲವೇ ?ಹೆತ್ತವರ ಅತಿಯಾದ ಮಹತ್ವಾಂಕ್ಷೆಗಳಿಗೆ ಹದಿ ಹರೆಯದ ಯುವಕರು ಬಲಿಯಾಗುತ್ತಿದ್ದಾರೆಯೇ ?
ಇಂಜಿನಿಯರಿಂಗ್  ಮೆಡಿಕಲ್ ಓದದಿದ್ದರೆ ಬದುಕೇ ಇಲ್ಲ ,ಪರೀಕ್ಷೆಯಲ್ಲಿ ಫೇಲ್ ಆದರೆ ಬದುಕಿ ಪ್ರಯೋಜನ ಇಲ್ಲ ಎಂಬ ಮನೋ ಭಾವನೆ ಮೂಡಲು ಕಾರಣವೇನು ?ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದ ಮನೋಭಾವವೇಕೆ?
ಇಂಥಹ ಮನೋಭಾವ ಮೂಡಲು ಒಂದು ರೀತಿಯಲ್ಲಿ ಹೆತ್ತವರೇ ಕಾರಣ ಎಂದು ಹೇಳ ಬೇಕಾಗುತ್ತದೆ.
ಎಂಥಹ ಸಂದರ್ಭ ಬಂದರೂ ನಾವು ನಿಮ್ಮ ಜೊತೆಗೆ ಇರುತ್ತೇವೆ ಎಂಬ ಆಶ್ವಾಸನೆಯನ್ನು ಕೊಟ್ಟು ಸದಾ ಬದುಕಿನ ಬಗ್ಗೆ ಭರವಸೆಯನ್ನು  ಮೂಡಿಸುವ ಕಾರ್ಯವನ್ನ್ನು ಹೆತ್ತವರೇ ಮಾಡಬೇಕಾಗುತ್ತದೆ .ಆದರೆ ಈ ನಿಟ್ಟಿನಲ್ಲಿ ಹಲವರು ಸೋಲುತ್ತಿದ್ದಾರೆ ಎಂದೆನಿಸುತ್ತದೆ .ದಡವರಿಯದ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ಮಾಡಬೇಕು
ಈ ಬಗ್ಗೆ ಎರಡು ಕುಟುಂಬಗಳಲ್ಲಿನ ಇಬ್ಬರು ತಾಯಿ ಮಗಂದಿರ ಸಂಭಾಷಣೆಯನ್ನು ಉದಾಹರಿಸುವುದು ಸೂಕ್ತವೆನಿಸುತ್ತದೆ .
                                              ಸಂಭಾಷಣೆ -1
ತಾಯಿ :ಯಾಕೋ ಉಟಕ್ಕೆ ಬಂದಿಲ್ಲ ?ಏನು ಚಿಂತೆ ಮಾಡುತ್ತಿದ್ದಿ ?
ಮಗ : ನಾಳೆ ರಿಸಲ್ಟ್ ಬರುತ್ತೆ ಅದಕ್ಕೆ ಭಯ
ತಾಯಿ :ಅದಕ್ಯಾಕೆ ಚಿಂತೆ !ನೀನು ಹೇಗೂ ಚೆನ್ನಾಗಿಯೇ ಮಾಡಿದ್ದೀಯಲ್ಲ ?
ಮಗ :ಹೌದು ಆದರೂ ಒಳ್ಳೆ ಮಾರ್ಕ್ಸ್ ಬಾರದೆ ಇದ್ದರೆ ಏನು ಮಾಡುವುದು ?
ತಾಯಿ :ಬಾರದಿದ್ರೆ ಬಿಎಸ್ಸಿ ಗೆ ಸೇರ್ಕೋ ಮುಂದೆ ಎಂ ಎಸ್ಸಿನೋ ಬಿಎಡ್ ಮಾಡಿದ್ರೆ ಆಯ್ತು
ಮಗ ;ಅಕಸ್ಮಾತ್ ಫೈಲ್ ಆದ್ರೆ ?!
ತಾಯಿ:ಫೇಲ್ ಆಗಲಿಕ್ಕಿಲ್ಲ ,ಹಾಗೊಂದು ವೇಳೆ ಆದ್ರೆ ಏನಾಯಿತು ?! ಪುನಃ ಕಟ್ಟಿ ಪಾಸ್ ಮಾಡಿದ್ರೆ ಆಯಿತು
ಮಗ :ಹಾಗೂ ಆಗಿಲ್ಲಾಂತ ಆದ್ರೆ.. ?
ತಾಯಿ :ಯಾಕಷ್ಟು ಚಿಂತೆ ಮಾಡ್ತೀಯ ?ಹಾಗೂ ಓದೋಕೆ ಆಗಿಲ್ಲಾಂತ ಆದರೆ ಏನಾದರೂ ಅಂಗಡಿ-ಗಿನ್ಗಡಿ ಇತ್ಕೊಂದ್ರೆ ಆಯ್ತು !ಈಗ್ಯಾಕೆ ಚಿಂತೆ ?ಊಟಕ್ಕೆ ಬಾ ..
                                                  ಸಂಭಾಷಣೆ -2
ತಾಯಿ :ಊಟಕ್ಕೆ ಬಾರೋ
ಮಗ :ಬೇಡಮ್ಮ ಹಸಿವಿಲ್ಲ
ತಾಯಿ :ನಿನಗೆ ಮೊದಲಿನಿಂದಲೂ ಓದು ಓದು ಅಂತ ಹೇಳಿದ್ದೇನೆ .ಆಗ ಚೆನ್ನಾಗಿ ಓದದೆ ಸಮಯ ವ್ಯರ್ಥ ಮಾಡಿ ಈಗ ಚಿಂತೆ ಮಾಡಿ ಊಟ ಬಿಟ್ರೆ ಏನ್ಬಂತು ?!
ಮಗ :ಅದೇ ಚಿಂತೆ ಅಮ್ಮಾ ..ನಾಳೆ ಒಳ್ಳೆ ಮಾರ್ಕ್ಸ್ ಬಾರದಿದ್ರೆ ಏನು ಮಾಡೋದು ಅಂತ ..ಚಿಂತೆ ?!
ತಾಯಿ :ನನಗೊತ್ತಿಲ್ಲ,ಅಪ್ಪನ ಕೈಯಿಂದ ಮಂಗಳಾರತಿ ಮಾಡಿಸ್ಕೋ !ಚೆನ್ನಾಗಿ ಓದು ಅಂತ ಫೀಸ್ ಜಾಸ್ತಿ ಆದ್ರೂನು ಒಳ್ಳೆ ಕಾಲೇಜ್ ಗೆ ಹಾಕಿದ್ದೇವೆ.ಜೊತೆಗೆ ಕೋಚಿಂಗ್ ಗೆ ಬೇರೆ ಹೋಗಿದ್ದಿ ..ಇನ್ನು ಮಾರ್ಕ್ಸ್ ಕಡಿಮೆ ತೆಗೆದರೆ ಏನು ಮಾಡೋದು ..ಮುಂದೆ ಏನು ಮಾಡ್ತೀಯ ?ನನಗಂತೂ ಗೊತ್ತಾಗುತ್ತಿಲ್ಲ ..!!

ಮೇಲಿನ ಎರಡೂ ಉದಾಹರಣೆಗಳಲ್ಲಿ ಪಿಯು ಓದುತ್ತಿರುವ ಹುಡುಗರು ಬುದ್ದಿವಂತರು !ಆದ್ರೆ ದುರದೃಷ್ಟವಶಾತ್ ಇಬ್ಬರ ರಿಸಲ್ಟ್ ಕೂಡಾ ಫೇಲ್ ಅಂತ ಬಂತು .ಮೊದಲನೆಯಾತ ಅತ್ತುಕೊಂಡು ಮನೆಗೆ ಬರ್ತಾನೆ.ಪುನರ್ ಮೌಲ್ಯಮಾಪನಕ್ಕೆ ಹಾಕಿ ಪಾಸಾಗುತ್ತಾನೆ.ಎರಡನೆಯ್ ಉದಾಹರಣೆಯ ಹುಡುಗನಿಗೆ ಮನೆಗೆ ಬರಲು ಭಯವಾಗುತ್ತದೆ.ಬೀಚ್ ಗೆ ಹೋಗಿ ವಿಷ ಕುಡಿದು ಸಾವಿಗೆ ಶರಣಾಗುತ್ತಾನೆ !
ಫೇಲ್ ಆದಾಗ .ಕೆಲಸ ಸಿಗದೇ ಇದ್ದಾಗ ,ಮನೆಯವರೇ ಆದರಿಸದೆ ಇದ್ದಾಗ ಹದಿಹರೆಯದ ಯುವ ಜನಾಂಗ ಇಂದು ಆತ್ಮ ಹತ್ಯೆಯತ್ತ ಮನ ಮಾಡುತ್ತಿದೆ !ತಾವು ಎಣಿಸಿದಂತೆ ಓದಿದರೆ ,ಕೆಲಸ ಸಿಕ್ಕರೆ ಮಾತ್ರ ಒಳ್ಳೆಯ ಬದುಕು ಇಲ್ಲವಾದರೆ ಬದುಕೇ ಬೇಡ ಎನ್ನುವ ಹತಾಶ ಮನೋಭಾವನೆ ಇದಕ್ಕೆ ಕಾರಣವಾಗಿದೆ.
ಡಾಕ್ಟರ್ ಇಂಜಿನಿಯರ್ ಆದ್ರೆ ಮಾತ್ರ ಬದುಕು ಎನ್ನುವ ತಪ್ಪು ಕಲ್ಪನೆ ಮನೆ ಮಾಡುವಲ್ಲಿ ಹೆತ್ತವರ ಮತ್ತು ಶಿಕ್ಷಕರ ಪಾತ್ರ ಹೆಚ್ಚಿನದು .ಶಿಕ್ಷಕರಿಗೆ ತಮ್ಮ ಘನೆತೆಯ ಉಳಿಕೆಗಾಗಿ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಬೇಕು .ಹೆತ್ತವರಿಗೆ ತಮ್ಮ ಮಹತ್ವಾಕಾಂಕ್ಷೆ  ಈಡೇರಿಕೆಗಾಗಿ ಮಕ್ಕಳು ಓದಬೇಕು ಅಂಕ ಗಳಿಸಬೇಕು !
ತರಗತಿ ಪರೀಕ್ಷೆಗಳಲ್ಲಿ ,ಪುರ ಸಿದ್ಧತೆ ಪರೀಕ್ಷೆಗಳಲ್ಲಿ ಅಂಕ ಕಡಿಮೆ ತೆಗೆದ ವಿದ್ಯಾರ್ಥಿಗಳನ್ನು ಬರ ಹೇಳಿ ಅವರ ಎದುರೆ ವಿದ್ಯಾರ್ಥಿಗಳಿಗೆ ಬೈದು ಅವಮಾನ ಮಾಡುವುದು ವಿದ್ಯಾರ್ಥಿಗಳಲ್ಲಿ ಹತಾಶ ಪ್ರವೃತ್ತಿಗೆ ಕಾರಣವಾಗುತ್ತದೆ.ಹೆತ್ತವರೂ ತಮ್ಮ ಮಕ್ಕಳ ಮೇಲೆ ಹರಿ ಹಾಯ್ದು ಬೀಳಲು ಇದೂ ಒಂದು ಕಾರಣವಾಗುತ್ತದೆ !
ಚಿಕ್ಕಂದಿನಲ್ಲಿ ಕೇಳಿದ್ದನ್ನೆಲ್ಲ ಕೊಡಿಸುವ ಹೆತ್ತವರು ಕೇಳಿದ್ದೆಲ್ಲ ಸಿಗಲೇ ಬೇಕು ಎಂಬ ಮನೋಭಾವನೆ ಬೆಳೆಯಲು ಕಾರಣವಾಗುತ್ತಾರೆ .ಆಗ ಒಂದೊಮ್ಮೆ ಕೇಳಿದ್ದು ಕೊಡದೆ ಇದ್ದಾಗ ,ಬಯಸಿದ್ದು ಸಿಗದೇ ಇದ್ದಾಗ ಅವರಿಗೆ ಅದನ್ನು ತಾಳಿಕೊಳ್ಳುವ ಶಕ್ತಿಯೇ ಇರುವುದಿಲ್ಲ.
ಇನ್ನು ಸಣ್ಣ ಪುಟ್ಟ ತಪ್ಪುಗಳನ್ನು ತುಂಟಾಟಗಳನ್ನು ದೊಡ್ಡದು ಮಾಡಿ ಹೆತ್ತವರನ್ನು ಬರ ಹೇಳಿ ಅವರ ಮುಂದೆ ಮಕ್ಕಳನ್ನು ನಿಂದಿಸುವ ಶಿಕ್ಷಕರ ಪ್ರವೃತ್ತಿ ಅನೇಕ ಅಪಾಯಕಾರಿ ವಿಷಯಗಳನ್ನು ಹುಟ್ಟು ಹಾಕುತ್ತವೆ.ಸಣ್ಣ ಪುಟ್ಟ ತಪ್ಪುಗಳಿಗೆ ಕರೆದು ಒಳ್ಳೆ ಮಾತಿನಲ್ಲಿ ಬುದ್ದಿ ಹೇಳುವುದು ,ಸಣ್ಣ ಪುಟ್ಟ ಶಿಕ್ಷೆ (ಎರಡು  ಪುಟ ಏನನ್ನಾದರೂ ಬರೆಯಲು ಹೇಳುವುದು ಇತ್ಯಾದಿ ವಿದ್ಯಾರ್ಥಿಗಳಿಗೆ ಸಹಾಯವಾಗುವ ಮಾದರಿಯ )ಇತ್ಯಾದಿಗಳನ್ನು ನಡಿ ಸರಿ ಪಡಿಸ ಬೇಕೇ ಹೊರತು ಸಣ್ಣ ಪುಟ್ಟ ವಿಚಾರಗಳನ್ನು ಶಿಸ್ತಿನ ನೆಪದಿಂದ ದೊಡ್ಡದು ಮಾಡಿದ್ರೆ ,ಹೆತ್ತ ವರನ್ನು ಬರ ಹೇಳಿದರೆ ಮಕ್ಕಳಿಗೆ ಈ ವಿಚಾರವನ್ನು ಹೆತ್ತವರಲ್ಲಿ ಹೇಳಲೇ ಭಯವಾಗುತ್ತದೆ ಅಂತ ಸಂದರ್ಭಗಳಲ್ಲಿ ಭಯ ಹಾಗೂ ಸೇಡು ತೀರಿಸುವ ಮೊನೋಭಾವದಿಂದ ತಮ್ಮ ಅಮೂಲ್ಯವಾದ ಬದುಕನ್ನು ನಾಶ ಮಾಡುವ ,ಕೊಂದು ಕೊಳ್ಳುವ ಅನೇಕ ನಿದರ್ಶನಗಳನ್ನು ನಾವು ಕಣ್ಣ ಮುಂದೆಯೇ ಕಾಣುತ್ತಾ ಇರುತ್ತೇವೆ,ದಿನವಹಿ ಪತ್ರಿಕೆಗಳಲ್ಲಿ ಇಂಥ ಪ್ರಕರಣಗಳು ವರದಿಯಾಗುವುದನ್ನು ಓದುತ್ತಿರುತ್ತೇವೆ.
 ಹತ್ತು ಇಪ್ಪತ್ತು ವರ್ಷಗಳ ಹಿಂದೆ 23-24 ವಯಸ್ಸಿನ ಮೇಲ್ಪಟ್ಟವರು ಮಾತ್ರ ಆತ್ಮ  ಹತ್ಯೆ ಮಾಡಿಕೊಳ್ಳುವುದು  ಇತ್ತು ,.ಆದರೆ ಈಗೀಗ ತೀರ ಚಿಕ್ಕ ವಯಸ್ಸಿನ ಮಕ್ಕಳೇ ದಕ್ಕೆ ಮುಂದಾಗುತ್ತಿದ್ದಾರೆ ಎನ್ನುವುದು ನಿಜಕ್ಕೂ ಆತಂಕದ ವಿಚಾರ !ಈಗ್ಗೆ ಒಂದು ವರ್ಷದ ಹಿಂದೆ ಮೂರನೆ ತರಗತಿಯಲ್ಲಿ ಓದುತ್ತಿದ್ದ ಎಂಟು ವರ್ಷದ ಹುಡುಗ ನೀರಿನ ಬಾಟಲಿನಲ್ಲಿ ಪೆಟ್ರೋಲ್ ತುಂಬಿ ತಂದು ಶಾಲೆಯಲ್ಲಿ ಮೈಗೆ ಪೆಟ್ರೋಲ್ ಸುರಿದು ಆತ್ಮ ಹತ್ಯೆ ಮಾಡಿಕೊಂಡ ದಾರುಣ ಘಟನೆಯನ್ನು ನಾವೆಲ್ಲಾ ಓದಿದ್ದೇವೆ .ನಾಲ್ಕನೇ ತರಗತಿ ಹುಡುಗನೊಬ್ಬ ತಂದೆ ಚಿಕೆನ್ ಬಿರಿಯಾನಿ ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ !ಮೊನ್ನೆ ಮೊನ್ನೆಯಷ್ಟೇ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯರು ಹೋಲಿ ಆಟ ವಾಡಿದ್ದಕ್ಕೆ ಹೆತ್ತವರನ್ನು ಕರೆತನ್ನಿ ಎಂದಾಗ ಮನೆಗೆ ಹೋಗದೆ ಸಾವಿಗೆ ಶರಣಾದದ್ದು ಎಲ್ಲರಿಗೆ ತಿಳಿದ ವಿಚಾರ .
ಸಣ್ಣ ಪುಟ್ಟ ಅವಮಾನವನ್ನೂ ಸೋಲನ್ನೂ ಎದುರಿಸಲು ಇಂದು ಅಸಮರ್ಥ ರಾಗುತ್ತಿದ್ದಾರೆ ಇಂದಿನ ಯುವ ಜನತೆ .ಯಾಕೆ ಹೀಗೆ ?ಇದಕ್ಕೇನು ಕಾರಣ ? ಒಂದು ಎರಡು ಮಕ್ಕಳಿರುವ ಕುಟುಂಬಗಳಲ್ಲಿ ಮಕ್ಕಳಿಗೆ ಕೇಳಿದ್ದೆಲ್ಲ ಸಿಗುವುದು ಹಾಗೂ ,ಅತಿಯಾದ ಕಾಳಜಿ ಯಿಂದಾಗಿ ಹೀಗಾಗುತ್ತಿದೆಯೇ ?ಮೊದಲು ತುಂಬಾ ಮಕ್ಕಳಿರುವ ಕುಟುಂಬಗಳಲ್ಲಿ ಹೊಂದಾಣಿಕೆ ಬೈಗಳು ಪೆಟ್ಟು ಎಲ್ಲವೂ ಇರುತ್ತಿತ್ತು .ಇದರಿಂದಾಗಿ ಹೊಂದಿ ಕೊಂಡು ಬಾಳಲು ,ಸಣ್ಣ ಪುಟ್ಟ ಬೈಗಳನ್ನು ಅಪಮಾನವನ್ನು ಎದುರಿಸುವ ಮನೋ ಸ್ಥೈರ್ಯ ಮಕ್ಕಳಲ್ಲಿ ತನ್ನಿಂತಾನಾಗಿಯೇ ಬೆಳೆಯುತ್ತಿತ್ತು .ಆದರೆ ಇಂದಿನ ಮಕ್ಕಳಿಗೆ ಅದನ್ನು ಹೇಳಿ ಕೊಡಬೇಕಾಗಿದೆ .
ಕೇಳಿದ್ದೆಲ್ಲವನ್ನು ಕೇಳಿದ ತಕ್ಷಣ ಕೊಡಿಸುವ ಅಭ್ಯಾಸವನ್ನು ಹೆತ್ತವರು ಮೊದಲು ಬಿಡಬೇಕು.ಕೇಳಿದ್ದೆಲ್ಲವೂ ಸಿಗಲು ಸಾಧ್ಯವಿಲ್ಲ ಬಯಸಿದಂತ ಬಾಳು ಸಿಗಲು ಸಾಧ್ಯವಿಲ್ಲ ,ಎಲ್ಲರೂ ಡಾಕ್ಟರ್ಸ್ ಇಂಜಿನಿಯರ್ಸ್ ಆಗಲು ಸಾಧ್ಯವಿಲ್ಲ ,ಬೈಕ್ ,ಕಾರು.ಮೊಬೈಲ್ ಗಳೇ ಬದುಕಲ್ಲ ಎಂಬ ಜೀವನದ ಸತ್ಯವನ್ನು ಇಂದಿನ ಯುಕರಿಗೆ ಮನಗಾಣಿಸಬೇಕು ,ಈ ನಿಟ್ಟಿನಲ್ಲಿ ಶಿಕ್ಷಕರ ಜವಾದ್ಬಾರಿ ತುಂಬಾ ದೊಡ್ಡದು
ಯಾವ ಕ್ಷೆತ್ರವನ್ನೂ ಆಯ್ಕೆ ಮಾಡಿದರೂ ಕೂಡಾ ಪ್ರತಿಭೆ ಪ್ರಾಮಾಣಿಕತೆ ಪರಿಶ್ರಮಗಲಿ ಇರುವ ಕಡೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಬೇಕು ನಾನಾ ಕಾರಣಗಳಿಂದ ಉನ್ನತ ಶಿಕ್ಷಣ ದೊರೆಯದೆ ಇರಬಹುದು.ಕೆಲಸ ಸಿಗದಿರಬಹುದು .ಎಣಿಸಿದ್ದು ಈಡೇರದೆ ಇರಬಹುದು .ಅವಮಾನ ಎದುರಾಗ ಬಹುದು.ಆದರೆ ಇದಕ್ಕೆ ಆತ್ಮ ಹತ್ಯೆ ಪರಿಹಾರವಲ್ಲ ,ಸತತ ಪ್ರಯತ್ನದಿಂದ ಉದ್ಯೋಗವನ್ನು ಶಿಕ್ಷಣವನ್ನು ಗಳಿಸ ಬಹುದು .ಎಂದು ವಿದ್ಯಾರ್ಥಿಗಳ ಮನಸನ್ನು ಗಟ್ಟಿ ಮಾಡ ಬೇಕು .
ಅವಮಾನವನ್ನು ಎದುರಿಸುವ ಮನೋಭಾವವನ್ನು ಬೆಳೆಸಬೇಕು.ಇಂದು ಅವಮಾನ ಮಾಡಿದವರ ಮುಂದೆಯೇ ನಾನು ಒಳ್ಳೆಯ ಸ್ಥಾನ ಮಾನ ಪಡೆದು ತಲೆಯೆತ್ತಿ ನಡೆಯುವ ಹಾಗೆ ಬದುಕುತ್ತೇನೆ ಎಂಬ ದೃಢತೆಯನ್ನು ಮೂಡಿಸಬೇಕು .
ಫೇಲಾಗುವುದು,ಕಡಿಮೆ ಅಂಕ ಬಂದಿರುವುದು ,ಮೊದಲಾದ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡುತ್ತಿದ್ದರೂ ಈ ಕುರಿತು ಸಮಾಜ ಎಚ್ಚತ್ತು ಕೊಂಡಿಲ್ಲ.
ತಮ್ಮ ಮಕ್ಕಳು ಮಹಾನ್ ಬುದ್ದಿವಂತ ಎಂದೇ ಹೆತ್ತವರು ಸದಾ ಭಾವಿಸುತ್ತಾರೆ.ಆದರೆ ಶಿಕ್ಷಕರಿಗೆ ಮಕ್ಕಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ ಆದ್ದರಿಂದ ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವ,ಜೀವನ್ಮುಖಿ ಉತ್ಸಾಹವನ್ನು ಚಿಗುರಿಸುವ  ಜವಾಬ್ದಾರಿಯನ್ನೂ ಶಿಕ್ಷಕರು ವಹಿಸಬೇಕಾಗಿದೆ .
ಮೊದಲಿಗೆ ಎಸ್ ಎಸ್ ಎಲ್ ಸಿ ,ಪಿ ಯು ಸಿ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಲದ್ದು ಕೋಪ ಅಸಹನೆ ಕಾಡುವ ವಯಸ್ಸು ಜೊತೆಗೆ ಪರೀಕ್ಷೆಯ ಒತ್ತದೆ ,ಬಯಸಿದ್ದೆಲ್ಲಾ ಸಿಗಬೇಕೆಂಬ ಕೆಚ್ಚು ! ಈ ವಯಸ್ಸಿಗೆ ಸೋಲನ್ನು ಸ್ವೀಕರಿಸುವುದು ಅವರಿಗೆ ಬಹಳ ಕಷ್ಟ ಎನಿಸುತ್ತದೆ .ಆದ್ದರಿಂದ ಈ ಹಂತದಲ್ಲಿ ಯೇ ವಿದ್ಯಾರ್ಥಿಗಳಿಗೆ ನಿರಂತರ ಸಲಹೆ ಆಪ್ತ ಸಮಾಲೋಚನೆಗಳ ಅಗತ್ಯವಿರುತ್ತದೆ .ಎಂಥಹ ಸಮಯ ಬಂದರೂ ನಾವು ನಿಮ್ಮ ಜೊತೆಗೆ ಇದ್ದೇವೆ ಎನ್ನುವ ಭರವಸೆಯನ್ನು ಮೂಡಿಸಬೇಕಾಗಿದೆ
ಈ ನಿಟ್ಟಿನಲ್ಲಿ ಪ್ರಾಣಾಯಾಮ ,ಯೋಗ ಧ್ಯಾನಗಳು ಸಹಾರಿ ಜೊತೆಗ್ ನೈತಿಕ ಶಿಕ್ಷ ಣ ಕೂಡ ಸಹಕಾರಿಯಾಗಬಲ್ಲದು !ಎಲ್ಲಕ್ಕಿಂತ ಹೆಚ್ಚು ಗುರು ಶಿಷ್ಯರ ನಡುವಿನ ಆತ್ಮೀಯತೆ ವಿದ್ಯಾರ್ಥಿಗಳಲ್ಲಿ ಜೀವನೋತ್ಸಾಹದ ಸೆಲೆ ಹುಟ್ಟಿಸುವಲ್ಲಿ ಅತ್ಯಂತ ಪ್ರಯೋಜನಕಾರಿ .ಈ ನಿಟ್ಟಿನಲ್ಲಿ ನಾವು ಯತ್ನಿಸಬೇಕಾಗಿದೆ .
ಒಂದು ಸಣ್ಣ ಜ್ಯೋತಿಯನ್ನು ಆರಿ ಹೋಗದಂತೆ ಗಾಳಿಗೆ ಕೈ ಅಡ್ಡ ಹಿಡಿದು ರಕ್ಷಿಸಿದರೆ ಆ ಜ್ಯೋತಿಯಿಂದ ನೂರಾರು ದೀಪಗಳನ್ನು ಬೆಳಗ ಬಹುದು ಅಲ್ಲವೇ ?ಆದ್ದರಿಂದ ಇಂದೇ ಎಚ್ಚತ್ತುಕೊಳ್ಳೋಣ.ದಡವರಿಯದ ಅಲೆಗಲಾಗಿರುವ ಯುವ ಜನಾಂಗಕ್ಕೆ ದಾರಿ ದೀಪವಾಗೋಣ!
  ಡಾ.ಲಕ್ಷ್ಮೀ ಜಿ ಪ್ರಸಾದ


Friday 18 April 2014

ನಾನೂ ಕಲಿತೆ ಜೀವನ ಪಾಠ!





ಹೌದು ಸುಮಾರು 16 ವರ್ಷ ಮೊದಲು ಏಪ್ರಿಲ್ ತಿಂಗಳಿನ ಮೂರನೇ ಶುಕ್ರವಾರದಂದು ಮಂಗಳ ವಾರಪತ್ರಿಕೆಯ ಎರಡನೇ ಮುಖ ಪುಟದಲ್ಲಿ ಬಂದ ಕಲಿಸಿದೆ ಕಲಿತೆ ಅಂಕಣದ ನನ್ನ ಲೇಖನ ,ನಾನು ಇಲ್ಲಿ ಮೊದಲ ಬಾರಿಗೆ ನನ್ನ ಹೆಸರನ್ನು ಲಕ್ಷ್ಮೀ ಜಿ ಪ್ರಸಾದ ಸರವು ಎಂದು ಬದಲಾಯಿಸಿ ಹಾಕಿದ್ದೆ ಏನೋ ಕನಸಿನಿಂದ !

ಅದಕ್ಕೂ ಮೊದಲು ನನ್ನ ಒಂದು ಕಥೆ ಪ್ರಕಟವಾಗಿತ್ತು .ಅದರಲ್ಲಿ ನಾನು ನನ್ನ ನಿಜ ಹೆಸರನ್ನೇ ಲಕ್ಷ್ಮಿ ವಿ ಎಂದು ಹಾಕಿದ್ದೆ .ಜೊತೆಗೆ ಅದೇ ಸಮಯದಲ್ಲಿ ನನ್ನ ಸಂಸ್ಕೃತ ಎಂ ಎ ಫಲಿತಾಂಶ ಬಂದಿದ್ದು ಅದನ್ನು ನಮ್ಮ ಕಾಲೇಜ್ ನವರು ಫೋಟೋ ಒಂದಿಗೆ ಪತ್ರಿಕೆಯಲ್ಲಿ ಹಾಕಿದ್ದರು ಅಲ್ಲೆಲ್ಲ ನನ್ನ ಹೆಸರು ದಾಖಲೆಯಲ್ಲಿ ಇರುವಂತೆ ಲಕ್ಷ್ಮೀ ವಿ ಎಂದೇ ಹಾಕಿದ್ದರು !
ಇದಕ್ಕೆ ನಮ್ಮ ಊರಿನ ಅನೇಕ ಮಹಾನೀಯರಿಂದ ಕಾಮೆಂಟ್ಸ್ ಬಂದಿತ್ತು ಅವಳು ಮದುವೆ ಆದಮೇಲೂ ತಂದೆ ಮನೆಯ ಹೆಸರು /ಇನಿಶಿಯಲ್ ಹಾಕುತ್ತಿದ್ದಾಳೆ ಎಂದು !
ಅದಕ್ಕಾಗಿ ಈ ಸಮಸ್ಯೆಯೇ ಬೇಡ ಎಂದು ಈ ಬಾರಿ ಈ ಲೇಖನ ಕಳುಹಿಸುವಾಗ ಲಕ್ಷ್ಮೀ ಜಿ ಪ್ರಸಾದ ಸರವು ಎಂದು ನಮ್ಮ ಮನೆ ಹೆಸರು ಸೇರಿಸಿಯೇ ಹಾಕಿದ್ದೆ !ಪ್ರಕಟವಾದರೆ ನಮ್ಮ ಮನೆಯಲ್ಲಿ ಹಾಗೂ ಊರಿನವರು ಕುಶಿ ಪಟ್ಟು ಬೆಂಬಲಿಸಿಯಾರು ಎಮ ಕನಸಿನಲ್ಲಿ !!
ಅಂತೂ ಈ ಲೇಖನ ನನ್ನ ಫೋಟೋ ಒಂದಿಗೆ ಪ್ರಕಟವಾಯಿತು .ಮಂಗಳ ವಾರ ಪತ್ರಿಕೆಯನ್ನು ನಮ್ಮ ಉರಿನಲ್ಲಿ ತುಂಬಾ ಜನರು ಆಗ ಓದುತ್ತಿದ್ದರು .
ಈ ಲೇಖನ ಪ್ರಕಟವಾಗಿ ನಮ್ಮ ಕೈಗೆ ಸಿಕ್ಕ ಶುಕ್ರವಾರದ ದಿನ ನಮ್ಮ ಮನೆಯಲ್ಲಿ ದುರ್ಗಾ ಪೂಜೆ ಇತ್ತು !ಹಾಗಾಗಿ ನನ್ನ ಲೇಖನ ಓದಿದವರು ಈ ಬಗ್ಗೆ ಮೆಚ್ಚುಗೆ ಸೂಚಿಸಿಯಾರು ಎಂದು ಮನಸಿನಲ್ಲೇ ಮಂಡಿಗೆ ಮೇದಿದ್ದೆ ಕೂಡಾ !

ನಮ್ಮ ಮನೆಯಲ್ಲಿ ಕೂಡಾ ಪ್ರತಿ ಶುಕ್ರವಾರ ಮಂಗಳ ಪತ್ರಿಕೆಯನ್ನು ಎಳೆದಾಡಿಕೊಂಡು ಎಲ್ಲರೂ ಓದುತ್ತಿದ್ದರು !

ಆದರೆ ನನ್ನ ಲೇಖನ ಪ್ರಕಟವಾಗಿ ಬಂದ ಶುಕ್ರವಾರ ಆ ಪತ್ರಿಕೆ ಹೊರಗೆ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ !ಯಾರೂ ಓದಲೇ ಇಲ್ಲ !ನೋಡಿದವರೆಲ್ಲ ಅದನ್ನು ಅಲ್ಲೇ ಅಡಗಿಸಿ ಇತ್ತು ಬಿಡುತ್ತಿದ್ದರು !ಬೇರೆಯವರ ಕಣ್ಣಿಗೆ ಇನ್ನು ಬೀಳದೆ ಇರಲಿ ಎಂದು !

ಹೌದು ಆಗ ನಾನೂ ಕಲಿತೆ !ಇವರುಗಳಿಗೆ ನನ್ನ ಹೆಸರಿನದ್ದು ಸಮಸ್ಯೆ ಅಲ್ಲ !ಸೊಸೆಯಾಗಿ ಇರುವವಳು ಸ್ವಂತ ಅಸ್ತಿತ್ವವನ್ನು ಪಡೆಯುವುದೇ ನಮ್ಮ ಮನೆಯವರಿಗೆ ಸಂಬಂಧಿಕರಿಗೆ ಊರಿನವರಿಗೆ ಇಷ್ಟವಿಲ್ಲದ ವಿಚಾರ ಎಂದು !
ಮನೆ ಸೊಸೆ ರಾಂಕ್ ತೆಗೆದರೆ ,ಆಕೆಯ ಲೇಖನ ಬಂದರೆ ಅದನ್ನು ಕಂಡು ಕರುಬುವ ಮನಸ್ಥಿತಿ ಗೆ ಏನು ಹೇಳುವುದು ?ನನ್ನ ಪತಿ ಪ್ರಸಾದ ರ ನಿರಂತರ ಬೆಂಬಲ ಇಲ್ಲದೆ ಇರುತ್ತಿದ್ದರೆ ನನ್ನ ಪರಿಸ್ಥಿತಿ ಯಾವರುಗಳ ನಡುವೆ ಹೇಗಿರುತ್ತಿತ್ತು ಎಂದು ಊಹಿಸಲು ಕೂಡಾ ಭಯವಾಗುತ್ತದೆ

ಇದು 15 ವರ್ಷ ಹಿಂದಿನ ನಮ್ಮ ಹಳ್ಳಿಯ ಕಥೆ ಈಗಲೂ ಏನೂ ಸುಧಾರಣೆ ಆಗಿರುವುದು ನನಗಂತೂ ಗೊತ್ತಿಲ್ಲ !
ಇದನ್ನೆಲ್ಲಾ ನೋಡುವಾಗ ಹಳ್ಳಿ ಹುಡುಗರಿಗೆ ಹುಡುಗಿ ಕೊಡಲು ಹಿಂದೇಟು ಹಾಕುವ ಹೆತ್ತವರ ಭಯದಲ್ಲಿ ಒಂದಿನಿತು ವಾಸ್ತವತೆ ಸತ್ಯಾಂಶ ಇದೆ ಎಂದೆನಿಸುದಿಲ್ಲವೆ ?

Wednesday 16 April 2014

ನನ್ನ ಮೊದಲ ಕೃತಿ –ಅರಿವಿನಂಗಳದ ಸುತ್ತ



 ನನ್ನ 20 ಕೃತಿಗಳಲ್ಲಿ ಮೊದಲಿನದ್ದು ಅರಿವಿನಂಗಳದ ಸುತ್ತ ಎಂಬ ಶೈಕ್ಷಣಿಕ ಬರಹಗಳ ಸಂಕಲನ .ಇದು 2006 ರಲ್ಲಿ ಪ್ರಕಟವಾಗಿದೆ.ವಿಜಯ ಕರ್ನಾಟಕ ,ಹೊಸ ದಿಗಂತ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಶಿಕ್ಷಣ ಸಂಬಂಧಿ ಲೇಖನಗಳಲ್ಲಿ ಹದಿನೈದನ್ನು ಆಯ್ದು ಒಟ್ಟು ಮಾಡಿ “ಅರಿವಿನಂಗಳದ ಸುತ್ತ”ಕೃತಿಯಲ್ಲಿ ಪ್ರಕಟಿಸಲಾಗಿದೆ.

ಬರೆಯುವ ಓದುವ ಅಭಿನಯಿಸುವ ಉತ್ಸಾಹ ನನಗೆ ಚಿಕ್ಕಂದಿನಿಂದಲೂ ಇತ್ತು ,ನನ್ನ ನೇರ ನಡೆ, ನುಡಿ ,ವೇಗ ,ಅತ್ಯುತ್ಸಾಹ ಅನೇಕರಿಗೆ  ಅಹಂಕಾರ ಎನಿಸಿದ್ದೂ ಇದೆ!

ಯಾಕೆ ಹೀಗೆ ಅಂತ ನನಗೆ ಗೊತ್ತಾಗುತ್ತಿರಲಿಲ್ಲ !ಇತ್ತೀಚಿಗೆ ಒಂದೊಂದೇ ಬದುಕಿನ ಸತ್ಯಗಳು ಅರಿವಾಗ ತೊಡಗಿವೆ !!ಬೇರೆಯವರ ಗೆಲುವನ್ನು ತಮ್ಮ ಸೋಲು ಎಂದು ಭಾವಿಸುವ ಅನೇಕ ಮಂದಿ ಇದ್ದಾರೆ.ಇಂಥವರಿಂದ ಮುಂದೆ ಸಾಗುವ ಉತ್ಸಾಹ ಇರುವ ನನ್ನಂಥವರಿಗೆ ಸಮಸ್ಯೆಗಳು ಎದುರಾಗುತ್ತವೆ .ಆದರೆ ಬರೆಯದೆ ಇರಲು ನನಗೆ ಸಾಧ್ಯವಾಗುತ್ತಿಲ್ಲ! .

ಸುತ್ತುಮುತ್ತಲಿನ ಆನೇಕ  ವಿಚಾರಗಳು ಮನಸ್ಸಿಗೆ ತೀರಾ ತಟ್ಟಿದಾಗ ನನಗೆ ಬರೆಯುವ ಹುರುಪು ಹುಟ್ಟುತ್ತದೆ .ನಾನು ವರ್ಷದಿಂದ ಸುಮಾರು 18 ವರ್ಷಗಳಿಂದ (1996 ನೇ ಇಸವಿಯಿಂದ ) ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದೇನೆ .

ಪ್ರಾಥಮಿಕ ಶಾಲೆಯಿಂದ ಆರಂಭಿಸಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜ್ ,ಪದವಿ ಕಾಲೇಜ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದೇನೆ .ಸ್ವಲ್ಪ ಸಮಯ ಪ್ರಾಂಶುಪಾಲೆಯಾಗಿಯೂ ಕಾರ್ಯ ನಿರ್ವಹಿಸಿದ್ದೇನೆ .
ಈ ಎಲ್ಲ ಸಂದರ್ಭಗಳಲ್ಲಿ ನಾನು ನೋಡಿದ ,ಮನಸಿಗೆ ತಾಗಿದ ವಿಚಾರಗಳನ್ನು ಪತ್ರಿಕೆಗಳಿಗೆ ಬರೆಯ ತೊಡಗಿದೆ.

ನನ್ನ ಮೊದಲ ಪ್ರಕಟಿತ ಲೇಖನ “ನಿಮಗೆಂಥ ಶಿಕ್ಷಕರು ಬೇಕು ?” ಇದು 05 ಸೆಪ್ಟೆಂಬರ್ 2001 ರಂದು ಶಿಕ್ಷಕ ದಿನಾಚರಣೆಯಂದು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಲೇಖನ ಬರೆಯಲು ,ಪತ್ರಿಕೆಗಳಿಗೆ ಕಳುಹಿಸಲು ಪ್ರೋತ್ಸಾಹ ನೀಡಿದವರು ನಾನು ಆಗ ಕೆಲಸ ಮಾಡುತ್ತಿದ್ದ ಚಿನ್ಮಯ ವಿದ್ಯಾ ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಕುಂತಲಾ ಸಾಂತ್ರಾಯ ಹಾಗೂ ಹಿರಿಯ ಸಹೋದ್ಯೋಗಿಗಳಾಗಿದ್ದ ಶ್ರೀಮತಿ ಅರುಣಾ ,ಶ್ರೀಮತಿ ಶೈಲಜಾ ,ಶ್ರೀಮತಿ ಲೇನೆಟ್ ಮೊದಲಾದವರು.
ನಾವೆಲ್ಲಾ ಒಂದೇ ದೋಣಿಯ ಪಯಣಿಗರಾಗಿದ್ದೆವು!ತಲೆಗೆಳೆದರೆ ಕಾಲಿಗೆ ಬರುವುದಿಲ್ಲ ,ಕಾಲಿಗೆಳೆದರೆ ತಲೆಗೆ ಬರುವುದಿಲ್ಲ ಎಂಬ ಪರಿಸ್ಥಿತಿ ಎಲ್ಲರದ್ದು !ಆದರೆ ನಾವಿಲ್ಲಿ ಅತ್ಯಂತ ಸಂತಸದಿಂದ ಇದ್ದೆವು ಹೇಳುದು ಕೂಡಾ ನನಗೆ ಸ್ಮರಣೀಯ ವಿಚಾರ

ಇದೊಂದು ಅನೇಕ ಶಾಲೆಯ ವಿದ್ಯಾರ್ಥಿಗಳನ್ನು ಪ್ರಶ್ನಿಸಿ ಅವರು ನೀಡಿದ ಉತ್ತರಗಳನ್ನು ಪ್ರಸಕ್ತ ಸಂದರ್ಭದ ಎದುರು ಇಟ್ಟುಕೊಂಡು ವಿವೇಚಿಸಿದ ಲೇಖನ .ಅನೇಕ ವಿದ್ಯಾರ್ಥಿಗಳು “ನಮಗೆ ನಗು ನಗುತ್ತ ಹಸನ್ಮುಖಿಗಳಾಗಿರುವ ಶಿಕ್ಷಕರು ಬೇಕು ಎಂದು ಹೇಳಿದ್ದರು .
ಶಿಕ್ಷಕರಿಂದ ತಾಳ್ಮೆ ,ನಗುಮುಖ ,ಸ್ನೇಹ ,ಪ್ರೀತಿ ,ನಿಸ್ಪಕ್ಷಪಾತ ದೃಷ್ಟಿ ಗಳೇ ಮೊದಲಾದ ಗುಣಗಳನ್ನು ವಿದ್ಯಾರ್ಥಿಗಳು ನಿ ರೀಕ್ಷಿಸುತ್ತಾರೆ.

ಹೌದು ವಿದ್ಯಾರ್ಥಿಗಳು ಹಾಗೆ ಬಯಸುವುದರಲ್ಲಿ ತಪ್ಪಿಲ್ಲ ,ಶಿಕ್ಷಕ ಹಾಗೆ ಇರಬೇಕಾದ್ದು ಕೂಡಾ .
ಒಳ್ಳೆಯ ಮತ್ತು ಕೆಟ್ಟ ಶಿಕ್ಷಕರ ಗುಣಾವಗುಣಗಳನ್ನು ಚರ್ಚಿಸುತ್ತಾ “ಸರಿಯಾಗಿ ವೇತನ ಸೌಲಭ್ಯಗಳು ಇಲ್ಲದೆ ಇದ್ದಾಗ ಅತ್ಯಧಿಕ ಕೆಲಸದ ಒತ್ತಡ ಹಾಕಿದಾಗ ಇಂಥ ಒಳ್ಳೆಯ ಗುಣಗಳು ಶಿಕ್ಷಕರಲ್ಲಿ ಇರಲು ಸಾಧ್ಯವೇ’ ಎಂಬ ಪ್ರಶ್ನೆಯನ್ನು ಈ ಲೇಖನದಲ್ಲಿ ಎತ್ತಿದೆ.ಈ ಪ್ರಶ್ನೆಗೆ ಅಂದು ಮಾತ್ರವಲ್ಲ ಇಂದಿಗೂ ಉತ್ತರ ಸಿಕ್ಕಿಲ್ಲ

ಇಲ್ಲಿ ನಾನು ಹೇಳ ಹೊರಟಿದ್ದು ಆನುದಾನ ರಹಿತ ಶಾಲೆಯ ಶಿಕ್ಷಕರ ಬಗ್ಗೆ .ಅನುದಾನ ರಹಿತ ಶಾಲೆಗಳು ಲಕ್ಷಗಟ್ಟಲೆ ಡೊನೇಷನ್ ಶುಲ್ಕ ವನ್ನು ವಿದ್ಯಾರ್ಥಿಗಳ ಹೆತ್ತವರಿಂದ ಪಡೆಯುತ್ತವೆ.ಆದರೆ ಶಿಕ್ಷಕರಿಗೆ ಮಾತ್ರ ಒಳ್ಳೆಯ ವೇತನ ಹಾಗೂ ಇತರ ಸೌಲಭ್ಯಗಳನ್ನು ಕೊಡುವುದಿಲ್ಲ .ಅನುದಾನ ರಹಿತ ಶಿಕ್ಷಣ ಸಂಸ್ಥೆ ತೆರೆಯುವ ಮುನ ಅನುಮತಿ ಪಡೆಯುವಾಗ 

ಸರಕಾರೀ ನಿಯಮದಂತೆ ಶಿಕ್ಷಕರಿಗೆ ಎಲ್ಲ ಸೌಲಭ್ಯಗಳನ್ನು ಕೊಡುತ್ತೇವೆ ಎಂದು ಮುಚ್ಚಳಿಕೆ ಬರೆದು ಕೊಟ್ಟಿರುತ್ತವೆ.ಆದರೆ ಅದು ಕಾರ್ಯ ರೂಪಕ್ಕೆ ಬರುವುದೇ ಇಲ್ಲ ! ಈ ಬಗ್ಗೆ ಅನುಮತಿ ಕೊಟ್ಟ ಸರಕಾರ ಯೋಚಿಸುವುದಿಲ್ಲ .ಶಿಕ್ಷಕರಿಗೆ ಪ್ರಶ್ನಿಸಲು ಧೈರ್ಯ ಇರುವುದಿಲ್ಲ !ಉಸಿರೆತ್ತಿದರೆ ಕೆಲಸದಿಂದ ತೆಗೆದು ಹಾಕಿದರೂ ಹಾಕಬಹುದು!ಹೇಳಲಾಗುವುದಿಲ್ಲ!
ಇನ್ನು  ಡೊನೇಷನ್ ಕೊಡುವ ಹೆತ್ತವರು ಇದು ನಮ್ಮ ಸಮಸ್ಯೆ ಅಲ್ಲ ಎಂಬಂತೆ ಸುಮ್ಮನಿರುತ್ತಾರೆ.ಇದರಿಂದಾಗಿ ಇಂದು ಶಿಕ್ಷಕರಾಗಲು ಪ್ರತಿಭಾವಂತರು ಮುಂದೆ ಬರುತ್ತಿಲ್ಲ .ಸರಕಾರೀ ಕೆಲಸ ಸಿಕ್ಕರೆ ಆಯಿತು !ಸಿಗದಿದ್ದರೆ ಇವರು ಜೀವನ ಇಡೀ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಜೀತದಾಳುಗಳಂತೆ ದುಡಿಯಬೇಕಾಗುತ್ತದೆ !ಪ್ರತಿಭಾವಂತರು ಶಿಕ್ಷಣ ಕ್ಷೇತ್ರಕ್ಕೆ ಬಾರದೆ ಇದ್ದಾಗ ಶಿಕ್ಷಣದ ಗುಣ ಮತ್ತ ತೀವ್ರವಾಗಿ ಕುಸಿಯುತ್ತದೆ.ಇದರಿಂದಾಗಿ ಪೋರ್ಶನ್ ಕವರ್ ಮಾಡುವ ಶಿಕ್ಷಕರು ಎಲ್ಲೆಡೆ ಸೃಷ್ಟಿಯಾಗುತ್ತಿದ್ದಾರೆ.

ಪ್ರೌಢ ಶಾಲಾ ಶಿಕ್ಷಕರಿಗೆ  ವಾರಕ್ಕೆ 26-27 ಅವಧಿಗಳನ್ನು ಸರಕಾರ ನಿಗಧಿ ಪಡಿಸಿದೆ.ಆದರೆ ಖಾಸಗಿ ಶಾಲೆಗಳಲ್ಲಿ ವಾರಕ್ಕೆ 36-38 ಅವಧಿ ಪಾಠ ಮಾಡಬೇಕಾಗುತ್ತದೆ !ಅನಂತರ ಮೌಲ್ಯ ಮಾಪನ ಸೇರಿದಂತೆ ಇತರ ಕಾರ್ಯಗಳನ್ನು ಮನೆಗೆ ತಂದು ಮಾಡಬೇಕಾಗುತ್ತದೆ.ಈ ರೀತಿಯ ಅತಿಯಾದ ದುಡಿತದಿಂದಾಗಿ ಶಿಕ್ಷಕರು ಧ್ವನಿ ಸಂಬಂಧಿತ ಹಾಗೂ ಇತ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಾರೆ !
ಇಂಥ ವಿಚಾರಗಳನ್ನು ನಿಮಗೆಂಥ ಶಿಕ್ಷಕರು ಬೇಕು ?ಲೇಖನದಲ್ಲಿ ಚರ್ಚಿಸಲಾಗಿದೆ .

“ದಡವರಿಯದ ಅಲೆಗಳು “ ಸಣ್ಣ ಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದೆ ಸಾವಿನತ್ತ ಮುಖ ಮಾಡುತ್ತಿರುವ ಯಾವ ಜನಾಂಗದ ಬಗ್ಗೆ ,ಅವರಿಗೆ ದೊರೆಯಬೇಕಾದ ಸೂಕ್ತ ಸಾಂತ್ವನ ಮಾರ್ಗ ದರ್ಶನದ ಬಗ್ಗೆ ಚರ್ಚಿಸಿದ ಬರಹ .

ಕನ್ನಡ ಮಾಧ್ಯಮದಲ್ಲಿ ವಿಜ್ಞಾನ ಶಿಕ್ಷಣ ಬಹು ಚರ್ಚಿತ ಬರಹ ,ಅಕ್ಕ ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ ,ತಮಿಳ್ ನಾಡು ,ಕೇರಳಗಳಲ್ಲಿ ಅವರವರ ರಾಜ್ಯ ಭಾಷೆಗಳಲ್ಲಿ ಪದವಿ ಪೂರ್ವ ಶಿಕ್ಷಣ ದೊರೆಯುತ್ತದೆ .ಇಲ್ಲಿ ವಿಜ್ಞಾನ ಶಿಕ್ಷಣ ಕೂಡಾ ಅವರ ಭಾಷೆಯಲ್ಲಿಯೇ ಇರುತ್ತದೆ.ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ವಿಜ್ಞಾನ ಶಿಕ್ಷಣ ಕನ್ನಡದಲ್ಲಿ ಸಿಗುತ್ತಿಲ್ಲ ಇದರಿಂದಾಗಿ ಗ್ರಾಮೀಣ ಕನ್ನಡ ಮಾಧ್ಯಮದ ಮಕ್ಕಳು ಉನ್ನತ ವಿಜ್ಞಾನ ಶಿಕ್ಷಣದಿಂದ  ವಂಚಿತರಾಗುವ ಬಗ್ಗೆ ಚರ್ಚಿಸಿದೆ .ಹತ್ತನೇ ತರಗತಿಯಲ್ಲಿ ವಿಜ್ಞಾದಲ್ಲಿ ಅತ್ಯುತ್ತಮ ಅಂಕ ಗಳಿಸುವ ಕನ್ನಡ ಮಾಧ್ಯಮದ ಅನೇಕ ಮಕ್ಕಳು ಪಿಯು ನಲ್ಲಿ ವಿಜ್ಞಾನದಲ್ಲಿ ಅನುತ್ತೀರ್ಣರಾಗುವುದು ಎಲ್ಲೆಡೆ ಕಾಣಿಸುತ್ತಿದೆ.ಇದಕ್ಕೆ ಇಂಗ್ಲಿಷ್ ಭಾಷೆಯ ತೊಡಕು ಕಾರಣವಾಗಿದೆ .ಈ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಈ ಲೇಖನದ ನಂತರ ಹಂಪಿ ವಿಶ್ವ ವಿದ್ಯಾಲಯವು ಕನ್ನಡ ಮಾಧ್ಯಮದಲ್ಲಿ ಪಿಯು ವಿಜ್ಞಾನದ ಪಾಠ ಪುಸ್ತಕವನ್ನು ಹೊರ ತಂದಿತಾದರೂ ಇದನ್ನು ಇಂಗ್ಲಿಷ್ ಭ್ರಮೆಯ ಖಾಸಗಿ ಕಾಲೇಜ್ ಗಳು ಬಿಡಿ !ಸರ್ಕಾರಿ ಕಾಲೇಜ್ ಗಳ ಅಧ್ಯಾಪಕರುಗಳಲ್ಲಿ  ನೋಡಿದವರು ಬೆರಳೆಣಿಕೆಯಷ್ಟು ಮಂದಿ ಇದ್ದಾರೆ ಅಷ್ಟೇ !

ಇದರಲ್ಲಿನ ಒಂದು ಮಹತ್ವದ ಲೇಖನ “ಅವನತಿಯ ಹಾದಿಯಲ್ಲಿ ಉನ್ನತ ವೈದ್ಯಕೀಯ ಶಿಕ್ಷಣ “ ಇಂದಿಗೂ ಅತ್ಯಂತ ಪ್ರಸ್ತುತವಾಗಿಯೇ ಇದೆ.ಹೆಚ್ಚಿನ ಮೆಡಿಕಲ್ ಕಾಲೇಜ್ ಗಳು ಖಾಸಗಿ ಹಿಡಿತದಲ್ಲಿವೆ.ಇವು ಸರಕಾರಕ್ಕೆ ಕೊಡುವ ಸೀಟ್ಗಳು ತೀರ ಕಡಿಮೆ ,ಸಾಮಾನ್ಯ ವರ್ಗದ ಖಾಸಗಿ ಕಾಲೇಜ್ಗಳು 30 % ಅಲ್ಪ ಸಂಖ್ಯಾತರ ಕಾಲೇಜ್ 20% ಸೀಟ್ ಗಳನ್ನು ಸರಕಾರಕ್ಕೆ ಬಿಟ್ಟುಕೊಡಬೇಕು ಎನ್ನುವ ನಿಯma ಇದೆ .ಆದರೆ ಅದನ್ನೂ ಸರಿಯಾಗಿ ಕೊಡುತ್ತಿಲ್ಲ .ಯಾವುದಾದರೂ ಬೇಡಿಕೆ ಇಲ್ಲದ ಪಾರಾ ಮೆಡಿಕಲ್ ಸೀಟ್ ಅನ್ನು ಕೊಟ್ಟು ಕಣ್ಣೋರಸುವ ನಾಟಕ ಮಾಡುತ್ತಿವೆ .ಬಹಳ ಬೇಡಿಕೆಯ ಜೆನರಲ್ ಮೆಡಿಸಿನ್ ,ಒಪ್ತೊಮಾಲಜಿ ,ಹಾರ್ಟ್ ಸರ್ಜರಿ ಮೊದಲಾದ ಬೇಡಿಕೆ ಇರುವ ಮಹತ್ವದ ವಿಭಾಗಗಳಲ್ಲಿ ಪ್ರತಿಭಾವಂತರಿಗೆ ಅವಕಾಶವೇ ಸಿಗುವುದಿಲ್ಲ !

ಎಲ್ಲ ಸೀಟ್ ಗಳು ಉಳ್ಳವರ ಪಾಲಾಗುತ್ತದೆ.ಮತ್ತು ಇದನ್ನು ಪಡೆಯುದಕ್ಕಾಗಿ ಕೋಟಿಗಟ್ಟಲೆ ದುಡ್ಡು ಕೊಡಬೇಕಾಗುತ್ತದೆ .ಕೋಟಿಗಟ್ಟಲೆ ಖರ್ಚು ಮಾಡಿದ ನಂತರ ಅದನ್ನು ಹಿಂದೆ ಪಡೆಯಲು ವೈದ್ಯರುಗಳು ಅಡ್ಡದಾರಿಯನ್ನು ಹಿಡಿಯುವುದು ಅನಿವಾರ್ಯವಾಗುತ್ತದೆ ಎಂಬಿತ್ಯಾದಿ ವಿಚಾರಗಳನ್ನಿಲ್ಲಿ ಚರ್ಚಿಸಿದೆ.

ಪರೀಕ್ಷೆಗಳು ಬರುತ್ತಿವೆ ,ಆರಂಭಿಕ ಹಂತದಲ್ಲಿ ಇಂಗ್ಲಿಷ್ ಶಿಕ್ಷಣ,ಶಿಕ್ಷಕ ಈಗ ಲಾಟರಿ ಮಾರಾಟಗಾರ ,ಮಕ್ಕಳ ಗಣತಿ ಶಿಕ್ಷಕರಿಗೆ ತಿಥಿ ಇತ್ಯಾದಿ ಹದಿನೈದು  ಸಕಾಲಿಕ ಬರಹಗಳು ಈ ಕೃತಿಯಲ್ಲಿವೆ.ಇದರಲ್ಲಿನ ಎಲ್ಲ ಶೈಕ್ಷಣಿಕ ಲೇಖನಗಳೂ ವಿಜಯ ಕರ್ನಾಟಕ ,ಹೊಸದಿಗಂತ ಮತ್ತು ಮಂಗಳ ಪತ್ರಿಕೆಗಳಲ್ಲಿ ಪ್ರಕಟವಾದವುಗಳೇ ಆಗಿವೆ .ಈ ಚಿಂತನೆಗಳು ಇಂದಿಗೂ ಪ್ರಸ್ತುತವೇ ಆಗಿವೆ ಕೂಡಾ 

ಮೊದಲ ಕೃತಿ ಪ್ರಕಟಣೆಯ ಸಂಭ್ರಮದ ಜೊತೆಗೆ ಪ್ರಕಟಣೆಯ ಒಳ ಹೊರಗಿನ ತುಸು ಪರಿಚಯ ಇಲ್ಲಿ ಆಯಿತು!ಪುಸ್ತಕ ಪ್ರಕಟಣೆ ಸೇರಿದಂತೆ ನಮ್ಮ ಯಾವುದೇ ಕಾರ್ಯಕ್ಕೂ ಎಲ್ಲಿಂದಲೂ ಬೆಂಬಲ ಸಿಗುವುದಿಲ್ಲ .ನಮ್ಮ ಅಸ್ತಿತ್ವಕ್ಕಾಗಿ ನಾವೇ ಹೋರಾಡ ಬೇಕು,"ನಮ್ಮ ತಲೆಗೆ ನಮ್ಮ ಕೈ  ಎನ್ನುವ ಜೀವನದ ಮೊದಲ ಪಾಠ ಕೂಡಾ ನನಗೆ ಜೊತೆಯಲ್ಲಿಯೇ ದೊರೆಯಿತು !.