![](https://blogger.googleusercontent.com/img/b/R29vZ2xl/AVvXsEgTp7j7sA9Qle9531Gb1iMaIAOJL1edsozZDJ5FE_RAO6KYN1lqqA84QDduD8bkLxJilzGLXlSeFPeYdL-QV-8pQcAToiqNI2N8onbrTs0i5LZCRBgc8vuvW8gt6oRUbdtUYlMr0_NDuK2A/s280-rw/karubgolu+krishnamohan+perla.png)
ಕರಂಗೋಲುಕುಣಿತ ಚಿತ್ರ ಕೃಪೆ :ಕೃಷ್ಣ ಮೋಹನ ಪೆರ್ಲ
copy rights reserved
ಭತ್ತದ ನೈಸರ್ಗಿಕ ಬೇಸಾಯದ ಒಂದು ಹುಲ್ಲಿನ ಕ್ರಾಂತಿ ಖ್ಯಾತಿಯ ಜಪಾನಿನ ವಿಜ್ಞಾನಿ ಮಸನೋಬ ಪುಕುವೋಕ ಅಜ್ಜನನ್ನು ನೆನಪಿಸುವ ಕಾನದ ಮತ್ತು ಕಟದರು ಘಟ್ಟದ ಮೇಲಿಂದ ಕರಂಗೋಲು/ಭತ್ತದ ಅತಿಕಾರೆ ಬೆಳೆಯನ್ನು ತುಳುನಾಡಿಗೆ ತಂದ ಸಾಂಸ್ಕೃತಿಕ ವೀರರು .ಕರಂಗೋಲು ಕುಣಿತ ಇವರ ನೆನಪಿನಲ್ಲಿ ನಡೆಯುವ ತುಳು ಆರಾಧನಾ ಜನಪದ ಕುಣಿತ .
ಬೊಮ್ಮಿ ಎಂಬ ಒಂದು ಗುತ್ತಿನಲ್ಲಿ ಸುಬ್ಬಿ ಎಂಬ ಹೆಸರಿನ ಹುಡುಗಿ ಇದ್ದಳು.ಅವಳು ಒಂದು ದಿನ ಗುಡ್ಡದಲ್ಲಿ ಸೊಪ್ಪು ಹೆರೆಯುವಾಗ ಅವಳಿಗೆ ಒಂದು ಮಗು ಸಿಗುತ್ತದೆ .ಅದನ್ನು ಮಡಿಲಲ್ಲಿ ಕಟ್ಟಿಕೊಂಡು ಬಂದು ತನ್ನ ಒಡೆಯನಿಗೆ ಅವಳು ತಂದುಕೊಡುತ್ತಾಳೆ.ಇನ್ನು ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದ ಆತ ಆ ಮಗುವನ್ನು ಅವಳೇ ಸಾಕುವಂತೆ ವ್ಯವಸ್ಥೆ ಮಾಡುತ್ತಾನೆ.
ಅವಳು ತನ್ನ ಅಣ್ಣಂದಿರಾದ ಪಾಂಬಲಜ್ಜ ಪೂಂಬಲ ಕರಿಯರ ಸಹಾಯದಿಂದ ಆ ಹೆಣ್ಣು ಮಗುವನ್ನು ಸಾಕುತ್ತಾಳೆ .ಬೆಳ್ಳನೆ ಹೊಳೆಯುತ್ತಾ ಇದ್ದ ಆ ಮಗುವಿಗೆ ಬೊಳ್ಳೆ ಎಂದು ಹೆಸರು ಹಿಡಿದು ಕರೆಯುತ್ತಾರೆ.
ಮುಂದೆ ಅವಳನ್ನು ಕಂಗು ಹಿತ್ತಿಲು ಕಾಂತಣ ಬೈದ್ಯನ ಹೆಂಡತಿ ದೇಯಿ ಸಾಕುತ್ತಾಳೆ.ತುಸು ದೊಡ್ಡವಳಾದ ಮೇಲೆ ಮದುವೆ ಮಾಡುತ್ತಾರೆ .
ಬೊಳ್ಳೆ ಮತ್ತು ದೇಯಿ ಇಬ್ಬರೂ ಒಂದೇ ದಿನ ಋತುಮತಿಯರಾಗುತ್ತಾರೆ.ಇಬ್ಬರೂ ತೊಟ್ಟಿಲ ಕೆರೆಯಲ್ಲಿ ಸ್ನಾನ ಮಾಡುತ್ತಾರೆ .ಪೆರುವೆಲ್ ಮೀನುಗಳಿಗೆ ಬೆಳ್ತಿಗೆ ಅಕ್ಕಿ ಹಾಕುತ್ತಾರೆ.ಹರಕೆ ಹೇಳುತ್ತಾರೆ.ಇದರಿಂದಾಗಿ ಗರ್ಭವತಿಯರಾಗುತ್ತಾರೆ. ದೇಯಿ ಹೆಣ್ಣು ಮಗು ಹಡೆಯುತ್ತಾಳೆ .ಅವಳೇ ಕೋಟಿ ಚೆನ್ನಯರ ಅಕ್ಕ ಕಿನ್ನಿದಾರು .
ಬೊಳ್ಳೆ ಅವಳಿ ಮಕ್ಕಳನ್ನು ಪ್ರಸವಿಸುತ್ತಾಳೆ.ಅವರಿಗೆ ಕಾನದ ,ಕಟದ ಎಂದು ಹೆಸರಿಡುತ್ತಾರೆ.ಮುಂಡೆ ಇವರು ಬೆಳೆದು ವಿದ್ಯೆ ಕಲಿತು ಅಸಮಾನ್ಯ ವೀರರಾಗುತ್ತಾರೆ.
ಮುಂದೆ ಮುದ್ದ ಕಳಲರನ್ನು ಭೇಟಿಯಾಗುತ್ತಾರೆ .ಅಲ್ಲಿ ಹೋರಾಡಿ ಕಾರಣಿಕ ತೋರುತ್ತಾರೆ.
ಮುಂಡೆ ಘಟ್ಟದ ಮೇಲಿನಿಂದ ಕರಂಗೋಲು .ಅತಿಕಾರೆ ಭತ್ತದ ತಳಿಯನ್ನು ತಂದು ತುಳುನಾಡಿನಲ್ಲಿ ಬೇಸಾಯ ಮಾಡಲು ಹೊರಡುತ್ತಾರೆ.
ಘಟ್ಟದ ಮೇಲಿನಿಂದ ಅತಿಕಾರೆ ಭತ್ತವನ್ನು ತರುವಾಗ ಚಾಮುಂಡಿ ತಡೆಯುತ್ತಾಳೆ.ಅವಳ ಜೊತೆ ಹೋರಾಡಿ ಗೆಲ್ಲುತ್ತಾರೆ.ಅವರ ಶೌರ್ಯಕ್ಕೆ ಮೆಚ್ಚಿ ಚಾಮುಂಡಿ ಅವರಿಗೆ ಯೋಧ ಕತ್ತಿಗಳನ್ನು ನೀಡುತ್ತಾಳೆ,
ಮುಂದೆ ಅವರು ಎನ್ಮೂರಿಗೆ ಬಂದು ಕೋಟಿ ಚೆನ್ನಯರಲ್ಲಿ ಹೋರಾಡುತ್ತಾರೆ.ಮುಂದೆ ನಾಲ್ವರೂ ಸಾಹಸಿಗಳು ರಾಜಿ ಮಾಡಿ ಕೊಳ್ಳುತ್ತಾರೆ .ಒಟ್ಟಾಗಿ ಸಂಚರಿಸುವಾಗ ಮುದ್ದ ಕಳಲ ರನ್ನೂ ಭೇಟಿ ಮಾಡುತ್ತಾರೆ .ಕಾನದ ಕಟದ ತಮ್ಮ ಸಾಮರ್ಥ್ಯದಿಂದ ಕಲ್ಲಿನ ಸೆಲೆಯಿಂದ ನೀರು ತೆಗೆದು ಕಾರಣಿಕ ತೋರುತ್ತಾರೆ.
ಒಂದು ದಿನ ಕಾನದ ಕಟದ ಹೊಳೆಯಲ್ಲಿ ಮೀನು ಹಿಡಿಯಲು ಹೋಗುತ್ತಾರೆ.ಮೀನು ಹಿಡಿಯುವ ಉತ್ಸಾಹದಲ್ಲಿ ಅಣ್ಣ ನೀರಿಗೆ ಹಾರುತ್ತಾನೆ .ಅಣ್ಣ ಬಾರದೆ ಇರುವುದನ್ನು ಗಮನಿಸಿದ ತಮ್ಮನೂ ನೀರಿಗೆ ಹಾರುತ್ತಾನೆ .ಇಬ್ಬರೂ ದುರಂತವನ್ನಪ್ಪುತ್ತಾರೆ .ನೀರಿನಿಂದ ಪಂಜುರ್ಲಿ ಭೂತ ಎದ್ದು ಬರುತ್ತದೆ ಪಂಜುರ್ಲಿಯ ಜೊತೆ ಕಾನದ ಕಟದ ಋ ಮಾಯವಾಗುತ್ತಾರೆ .
ದುರಂತ ಮತ್ತು ದೈವತ್ವ ತುಳು ಸಂಸ್ಕೃತಿಯ ಒಂದು ವೈಶಿಷ್ಟ್ಯತೆ .ವೀರಾರಾಧನೆ ತುಳು ನಾಡಿನಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಪ್ರಚಲಿತವಿರುವ ವಿದ್ಯಮಾನ .ಸಾಹಸಿಗಳಾದ ಕಾನದ ಕಟದರ ಆಕಸ್ಮಿಕ ಅಥವಾ ಉದ್ದೇಶ ಪೂರ್ವಕವಾದ ಕುತಂತ್ರದಿಂದಾದ ದುರಂತ ವನ್ನಪ್ಪಿ ಮುಂಡೆ ಜನಮಾನಸದಲ್ಲಿ ನೆಲೆಸಿ ದೈವತ್ವ ಪಡೆದು ಆರಾಧಿಸಲ್ಪಡುತ್ತಾರೆ.
ಹಿಂದಿನ ಕಾಲದಲ್ಲಿ ಬೇಸಾಯ ಮಾಡಲು ಎಲ್ಲರಿಗೆ ಅವಕಾಶ ಇರಲಿಲ್ಲ .ಈ ಸಾಹಸಿ ಸಹೋದರರು ಅದಕ್ಕಾಗಿ ಘಟ್ಟದಿಂದ ಭತ್ತದ ಬೀಜವನ್ನು ತಂದು ಕಾಡು ಕಡಿದು ಗದ್ದೆ ಮಾಡಿ ಸಾಹಸದಿಂದ ಬೇಸಾಯ ಮಾಡಿದ್ದಿರಬೇಕು.ಈ ಸಂದರ್ಭದಲ್ಲಿ ಅವರು ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿರಬೇಕು .ಚಾಮುಂಡಿ ದೈವ ತಡೆಯಿತು ಎಂಬಲ್ಲಿ ಈ ಬಗ್ಗೆ ಸುಳಿವು ಸಿಗುತ್ತದೆ .
ಹಾಗಾಗಿ ಅವರನ್ನು ಉದ್ದೇಶಪೂರ್ವಕವಾಗಿ ಯಾರಾದರೂ ದುರಂತವನ್ನಪ್ಪುವಂತೆ ಮಾಡಿರಬಹುದು .ಅಥವಾ ಹೊಳೆಯಲ್ಲಿ ಮುಳುಗಿ ಆಕಸ್ಮಿಕವಾಗಿ ಮರಣನ್ನಪ್ಪಿರಬಹುದು.
ಇದಕ್ಕೆ ಮುಂದೆ ಪಂಜುರ್ಲಿ ದೈವದ ಕಾರಣಿಕ ಸೇರಿ ಅವರು ಪಂಜುರ್ಲಿ ದೈವದ ಸೇರಿಗೆಗೆ ಸಂದು ಮಾಯವಾಗಿ ದೈವತ್ವ ಪಡೆದರು ಎಂಬ ಕಥಾನಕ ಸೇರಿರಬಹುದು.
ಅದು ಏನೇ ಇದ್ದರೂ ಅತಿಕಾರೆ ಭತ್ತದ ಬೆಳೆಯನ್ನು ತುಳುನಾಡಿಗೆ ಪರಿಚಯಿಸಿ ತುಳುನಾಡಿನಲ್ಲಿ ಭತ್ತದ ಬೇಸಾಯದ ಪ್ರವರ್ತಕರಾಗಿರುವ ಕಾನದ ಕಟದರು ಪ್ರಾತಃ ಸ್ಮರಣೀಯರಾಗಿದ್ದಾರೆ ಎಂಬುದಂತೂ ಎಲ್ಲರೂ ಒಪ್ಪಲೇ ಬೇಕಾದ ವಿಚಾರವಾಗಿದೆ .
ಇವರ ನೆನಪಿನಲ್ಲಿಯೇ ಕರಂಗೋಲು ಕುಣಿತ ತುಳುನಾಡಿನಲ್ಲಿ ಬಳಕೆಗೆ ಬಂದಿದೆ.ಕರಂಗೋಲು ಮತ್ತು ಕಂಗೀಲು ಎರಡು ಕೂಡಾ ಸುಗ್ಗಿಯ ಭತ್ತದ ಬೇಸಾಯಕ್ಕೆ ಸಂಬಂಧಿಸಿದ್ದಾಗಿದೆ
![](https://blogger.googleusercontent.com/img/b/R29vZ2xl/AVvXsEjIWsWh2s7fC8SwZpV2jRzfQ_fIhH5Dm6BS4Ifb-5TU_cN9xZgIN6oWww7vJGQH8bKqKLMt0J3CJ7FbpNT2gCkFrJJH-kuCB0t_k4rJ2pJrlF1uHhcN6pQsPj3F0eAuxAs9asIw-6vvQv_9/s280-rw/karngolu+nalike++kangeelu+kunith-prachet+shetty.png)
ಕಂಗೀಲು ಕುಣಿತ ಚಿತ್ರ ಕೃಪೆ :ಪ್ರಚೇತ ಶೆಟ್ಟಿ
ಆಧಾರ ಗ್ರಂಥ :ಡಾ.ವಾಮನ ನಂದಾವರ -ಕೋಟಿ ಚೆನ್ನಯ -ಒಂದು ಜಾನಪದೀಯ ಅಧ್ಯಯನ (ಪಿಎಚ್.ಡಿ ಸಂಶೋಧನಾ ಮಹಾ ಪ್ರಬಂಧ ).ಕರಂಗೋಲು ಎರಡೂ ಅತಿಕಾರ ಬೆಳೆಯನ್ನು ತುಳುನಾಡಿಗೆ ತಂದ ಕಾನದ ಕಟದರ ನೆನಪಿನಲ್ಲಿ ಭಿನ್ನ ಭಿನ್ನ ಸಮುದಾಯದವರು ಮಾಡುವ ಕುಣಿತ ,ನೆಕ್ಕಿ ಸೊಪ್ಪನ್ನು ಕೈಯಲ್ಲಿ ಹಿಡಿದು ಮೈಗೆ ಬಿ ಳಿ ಚುಕ್ಕೆ ಹಾಕಿ ,x ಗುರುತು ಅಡ್ಡ ಗೆರೆಗೆರೆ ತಲೆಗೆ ಮುಂಡಾಸು ಕಟ್ಟಿ ಕರಂಗೋಲು ನೃತ್ಯವನ್ನು ಮಾಡುವುದು ಸಂಪ್ರದಾಯ .ಈಗ ವೇಷ ಭೂಷಣ ಕುಣಿತ ಹಾಡುಗಳಲ್ಲಿ ಪ್ರಾದೇಶಿಕವಾಗಿ ಅನೇಕ ಭಿನ್ನತೆಗಳಿವೆ ಕರಂಗೋಲು ಚಿತ್ರ ಹಾಕಿದ್ದಕ್ಕೆ ಧನ್ಯವಾದಗಳು Krishnamohan Perla ಈ ಬಗ್ಗೆ ಹೆಚ್ಚಿನ ಮಾಹಿತಿಗೆ http://suddinews.com/sullia/2012/12/18/25702/
No comments:
Post a Comment