Monday, 22 September 2025

ತುಳುವರ ಬೆರ್ಮೆರ್ ಸ್ವರೂಪ ಮತ್ತು ಪರಿಕಲ್ಪನೆ © ಡಾ.ಲಕ್ಷ್ಮೀ ಜಿ ಪ್ರಸಾದ್

 ತುಳುವರ     ಬೆರ್ಮೆರ್  ಸ್ವರೂಪ ಮತ್ತು ಪರಿಕಲ್ಪನೆ © ಡಾ.ಲಕ್ಷ್ಮೀ ಜಿ ಪ್ರಸಾದ್ 




ಕಾಂತಾರ ಅಧ್ಯಾಯ ಒಂದರ ದಂತ ಕಥೆಯ ಬೆರ್ಮೆ ಯಾರೆಂದು ಸಿನಿಮಾ ನೋಡುವ ಮೊದಲು ಹೇಳಲು ಸಾಧ್ಯವಿಲ್ಲ ಆದರೆ ತುಳುನಾಡಿನಲ್ಲಿ ಬೆರ್ಮೆರ್ ಒಂದು ವಿಶಿಷ್ಠವಾದ ಆರಾಧ್ಯ ಶಕ್ತಿ.ನಾಗನ ಜೊತೆಗೆ ಸಮನ್ವಯಗೊಂಡು ನಾಗ ಬ್ರಹ್ಮ ಎಂದು ಆರಾಧಿಸಲ್ಪಡುವ ಈ ಬೆರ್ಮೆರ್ ಗೆ ಹಲವು ಸ್ವರೂಪಗಳು ಪರಿಕಲ್ಪನೆಗಳೂ ಇವೆ .ನನ್ನ ಕ್ಷೇತ್ರ ಕಾರ್ಯ  ಅಧ್ಯಯನದ ಆಧಾರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ 

ನಾಗಾರಾಧನೆ ವಿಶ್ವ ವ್ಯಾಪಿಯಾದುದು .ಇದು ತುಳುನಾಡಿನ ಪ್ರಮುಖ ಆರಾಧನಾ  ಪದ್ಧತಿಯಾಗಿದೆ. ತುಳುನಾಡಿನಲ್ಲಿ ಪರಿಶಿಷ್ಟರಿಂದ ಹಿಡಿದು ಬ್ರಾಹ್ಮಣರವರೆಗೆ ಎಲ್ಲ ಜಾತಿ, ಸಮುದಾಯಗಳಲ್ಲಿ ವಿವಿಧ ಸಂಪ್ರದಾಯಗಳಲ್ಲಿ ವಿವಿಧ ರೀತಿಯಲ್ಲಿ ಬಹಳ ವೈಭವಯುತವಾಗಿ ಹಾಗೂ ಕಲಾತ್ಮಕವಾಗಿ ನಾಗಾರಾಧನೆ ನಡೆಯುತ್ತದೆ. ನಾಗಾರಾಧನೆಯು ವೈದಿಕ,ತಾಂತ್ರಿಕ ಮತ್ತು ಜನಪದ  ವಿಧಿವಿಧಾನಗಳಲ್ಲಿ ನಡೆಯುತ್ತದೆ. ನಾಗರಪಂಚಮಿ, ಅನಂತನ ವ್ರತ,  ನಾಗಪ್ರತಿಷ್ಠೆ, ಬ್ರಹ್ಮಚಾರಿ ಆರಾಧನೆ,  ಸರ್ಪ ಸಂಸ್ಕಾರ / ಶಾಕಾ ಸಂಸ್ಕಾರ       ನಾಗಪ್ರತಿಷ್ಠಾಪನೆ       ಬ್ರಹ್ಮ ಸಮಾರಾಧನೆ          ಸುಬ್ರಹ್ಮಣ್ಯ ಆರಾಧನೆ  ಬ್ರಹ್ಮಚಾರಿ ಆರಾಧನೆಗಳು ವೈದಿಕ ಮೂಲ ನಾಗ ಬ್ರಹ್ಮ  ಆರಾಧನಾ ಪ್ರಕಾರಗಳಾಗಿವೆ ನಾಗಮಂಡಲ,     ಢಕ್ಕೆಬಲಿ, ಆಶ್ಲೇಷಾಬಲಿ ನಾಗದರ್ಶನ, ತಂಬಿಲ, ಹಾಲಿಟ್ಟು ಸೇವೆ ತಾಂತ್ರಿಕ ಮೂಲಪ್ರಕಾರಗಳಾಗಿವೆ  ತನು ಎರೆಯುವುದು ಕಂಚಿಲು ಸೇವೆ  ಕದಿರು ಕಟ್ಟಿ ಸೇವೆ ನೀರು ಸ್ನಾನ ಕಾಡ್ಯನಾಟ ಪಾಣರಾಟ ಬಾಕುಡರ ಸರ್ಪಕೋಲ ,ಬೆರ್ಮರೆ ಸೇವೆ,ಮಡೆಸ್ನಾನ,ಪುಂಡಿಪಣವು,ಸ್ವಾಮಿ ಆರಾಧನೆ,ಬೆರ್ಮೆರೆ ಕೋಲ,ಕಂಬಳದ ನಾಗಬೆರ್ಮೆರ್ ಕೋಲ,ಗರಡಿಯಲ್ಲಿ ಬೆರ್ಮರ್ ಆರಾಧನೆ,ಆಲಡೆಗಳಲ್ಲಿ ಬೆರ್ಮರ್ ಆರಾಧನೆ,ಮುಗ್ಗೇರ್ಲು ಸಂಕೀರ್ಣದಲ್ಲಿ ಬೆರ್ಮೆರ ಆರಾಧನೆ,ಮೂರಿಳು ಆರಾಧನೆ,ಸರ್ಪಂತುಳ್ಳಲ್,ಸರ್ಪಂಕಳಿಗಳು ಜನಪದಮೂಲ ಪ್ರಕಾರಗಳು ಆಗಿವೆ

ಇಲ್ಲಿ ನಾಗನ ಜೊತೆಗೆ ಸಮನ್ವಯಗೊಂಡು ಬೆರ್ಮೆರ್ ನಾಗ ಬ್ರಹ್ಮ ನಾಗಿ ಆರಾಧನೆ ಪಡೆಯುತ್ತಾನೆ © ಡಾ.ಲಕ್ಷ್ಮೀ ಜಿ ಪ್ರಸಾದ್

  ತುಳುನಾಡಿನಲ್ಲಿ ನಾಗಬ್ರಹ್ಮ-ನಾಗಬೆರ್ಮೆರ್ ಎಂದೂ ಹೇಳುತ್ತಾರೆ. ತುಳುವರ ಬೆರ್ಮರ್ ತ್ರಿಮೂರ್ತಿಗಳಲ್ಲಿ ಒಬ್ಬನಾದ ಚತುರ್ಮುಖಬ್ರಹ್ಮನಲ್ಲ. ಆತ ಎಲ್ಲ ಭೂತಗಳ ಒಡೆಯ. ತುಳುನಾಡಿನ ಭೂತಗಳಿಗೆಲ್ಲ ಅವನು ಅಧ್ಯಕ್ಷ. ‘ಬೆರ್ಮರೆ ಬೀರ’ ಪಾಡ್ದನದಲ್ಲಿ ಆತನ ಜನನದ ಬಗ್ಗೆ ವಿವರವಿದೆ. ತುಳುವರ ಬೆರ್ಮೆರ್ ಯಾರೆಂಬ ಬಗ್ಗೆ ಸ್ಪಷ್ಟ ಆಧಾರ ಸಿಕ್ಕಿಲ್ಲ. ಈ ಬ್ರಹ್ಮನ ಬಗ್ಗೆ ಡಾ. ಸುಶೀಲಾ ಪಿ.ಉಪಾಧ್ಯಾಯರು - ‘ತುಳುವರ ಬೆರ್ಮ ತ್ರಿಮೂರ್ತಿಗಳಲೊಬ್ಬನಾದ ಬ್ರಹ್ಮನಲ್ಲ. ಜೈನ ಸಂಪ್ರದಾಯದಿಂದಾಗಿ ತುಳು ಸಂಸ್ಕ್ರತಿಯಲ್ಲಿ ಸೇರಿ ಹೋದ ಯಕ್ಷಬ್ರಹ್ಮನೋ ಅಥವಾ ನಾಗಬ್ರಹ್ಮನೋ ಅಥವಾ ತುಳುವರದ್ದೇ ಆದ ಇನ್ನೊಬ್ಬ ಬ್ರಹ್ಮನೋ ಇರಬೇಕು’ ಎಂದು ಹೇಳಿದ್ದಾರೆ. ಕೆಲವು ಪಾಡ್ದನಗಳಲ್ಲಿ ಬೆರ್ಮೆರ್ ಎಂದೂ, ಇನ್ನು ಕೆಲವು ಪಾಡ್ದನಗಳಲ್ಲಿ ಈತನನ್ನು ನಾಗಬೆರ್ಮೆರ್ ಎಂದೂ ಹೇಳಲಾಗಿದೆ. ‘ಬ್ರಹ್ಮ, ನಾರಾಯಣ, ಈಶ್ವರ ದೇವರುಗಳನ್ನು’ ಪಾಡ್ದನಗಳು ಉಲ್ಲೇಖಿಸುತ್ತವೆ ... ಪಾಡ್ದನಗಳ ಬ್ರಹ್ಮ ಚತುರ್ಮುಖ ಬ್ರಹ್ಮನಲ್ಲ” ಎಂದು ಡಾ. ಅಮೃತ ಸೋಮೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ. ನಾಗಾರಾಧನೆಯ ಬಗ್ಗೆ ಹೇಳುತ್ತಾ “ನಾಗನಂತೂ ಪ್ರತ್ಯೇಕ ರೀತಿಯಲ್ಲಿ ಆರಾಧನೆಗೊಳ್ಳುತ್ತಾನಲ್ಲದೆ ನಾಗಬ್ರಹ್ಮದೈವವಾಗಿಯೂ ಪ್ರಕಟನಾಗಿದ್ದಾನೆ. ನಾಗಬ್ರಹ್ಮನಿಗೆ ಸಂಬಂಧಿಸಿದ ಪಾಡ್ದನವೂ ಇದೆ” ಎಂದು ಡಾ. ಅಮೃತ ಸೋಮೇಶ್ವರ ಹೇಳಿದ್ದಾರೆ. . ಈ ಬಗ್ಗೆ ಡಾ. ವಿವೇಕ ರೈ ಅವರು “ಭೂತಾರಾಧನೆಗಿಂತ ಪೂರ್ವದ, ಭೂತಾರಾಧನೆಗೆ ಮೂಲಸ್ವರೂಪದ, ತುಳುನಾಡಿನಲ್ಲಿ ವಿಶಿಷ್ಟವಾದ ಒಂದು ಧಾರ್ಮಿಕ ಸ್ವರೂಪ ಪಾಡ್ದನಗಳಲ್ಲಿ ಕಾಣಿಸಿಕೊಂಡಿದೆ. ಅದು ಬ್ರಹ್ಮರ ಆರಾಧನೆ” ಎಂದು ಹೇಳಿದ್ದಾರೆ.


ನಾಗಬ್ರಹ್ಮನಿಗೆ ದೈವದ ರೂಪದಲ್ಲಿಯೂ ಆರಾಧನೆ ಇದೆ. ಇದನ್ನು ‘ನಾಗಬೆರ್ಮೆರ್ ಕೋಲ’ ಎನ್ನುತ್ತಾರೆ. ಬ್ರಹ್ಮನೊಂದಿಗೆ ಆರಾಧನೆ ಪಡೆಯುವ ರಕ್ತೇಶ್ವರಿ, ಗುಳಿಗ, ನಂದಿಗೋಣ ಮೊದಲಾದ ದೈವಗಳಿಗೆ ಕೂಡ ಕೋಲ, ತಂಬಿಲ ರೂಪದಲ್ಲಿ ಸೇವೆ ನಡೆಸುತ್ತಾರೆ. ಜೈನರ ಯಕ್ಷಬ್ರಹ್ಮ ಪಾಶ್ರ್ವನಾಥನ ರಕ್ಷಣೆಯ ಹೊಣೆಯನ್ನು ಹೊತ್ತಿರುವ ಯಕ್ಷ. ಯಕ್ಷಬ್ರಹ್ಮನು ಕುದುರೆಯೇರಿ ಕುಳಿತ ವೀರನಾಗಿ ಕಾಣಿಸುತ್ತಾನೆ. ಧರಣೇಂದ್ರ ಯಕ್ಷನಿಗೆ ನಾಗಸಂಬಂಧಿ ಕಥೆಯಿದೆ. ನಾಗಬ್ರಹ್ಮನು ಮೇಲ್ಭಾಗ ಪುರುಷನಾಗಿಯೂ ಕೆಳಭಾಗ ನಾಗರೂಪಿಯೂ ಆಗಿದ್ದಾನೆ. ಕೆಲವೆಡೆ ಒಂದು ಬದಿ ನಾಗನನ್ನು, ಇನ್ನೊಂದು ಬದಿಯಲ್ಲಿ ಪುರುಷರೂಪವನ್ನು ಕೆತ್ತಿರುವ ನಾಗಬ್ರಹ್ಮನ ಮೂರ್ತಿಗಳಿವೆ© ಡಾ.ಲಕ್ಷ್ಮೀ ಜಿ ಪ್ರಸಾದ್ 

ಪೀಟರ್ ಜೆ.ಕ್ಲಾಸ್ ಅವರು “ ‘ಬೆರ್ಮೆರ್’ ಒಬ್ಬ ವನದೇವತೆ. ಆತನ ಎರಡು ಮುಖಗಳು ರಾಜನ ಕರ್ತವ್ಯ ಮತ್ತು ಸಂಪದಭಿವೃದ್ಧಿಯನ್ನು ಸೂಚಿಸುತ್ತವೆ” ಎಂದು ಹೇಳಿದ್ದಾರೆ9. “ಕೆಲವೊಂದು ತುಳುನಾಡಿನ ಶಾಸನಗಳು ಬ್ರಹ್ಮನನ್ನು ದೇವರೆಂದು ಉಲ್ಲೇಖಿಸಿದ್ದು, ಆದರೆ ಬಹಳ ವಿಚಿತ್ರವೆನ್ನುವಂತೆ ಅವನ್ನು ಭೂತಗಳ ಸಾಲಿಗೆ ಸೇರಿಸಿವೆ. ನಾಗನನ್ನು ಬ್ರಹ್ಮನೊಂದಿಗೆ ಅವಿಭಾಜ್ಯವಾಗಿ ವಿಂಗಡಿಸಲಾಗಿದೆ” ಎಂದು ಡಾ. ಗುರುರಾಜಭಟ್ಟರು ಹೇಳಿದ್ದಾರೆ.

ಪಾಡ್ದನದಲ್ಲಿ ಏಕಸಾಲೆರ್ ಮತ್ತು ದೆಯ್ಯಾರ್ ದಂಪತಿಯ ಅತಿಮಾನುಷ ಶಕ್ತಿಯ ಮಗುವೇ ಬೆರ್ಮೆರ್..ಈತ ಘಟ್ಟದ ಮೇಲೆ ಹೋಗಿ ದೇವರ ಶರ್ಮಿಜ ಪಕ್ಷಿಗಳಿಗೆ ಬಾಣ ಬಿಟ್ಟು ಬೀಳಿಸುತ್ತಾನೆ ನಂತರ ಘಟ್ಟದ ಕೆಳಹೆ ಬಂದು  ಪದ್ಮಾ ಎಂಬ ನದಿಯನ್ನು ಎಡಭಾಗದಿಂದ ಬಕ್ಜೆ ತಿರುಗಿಸಿ ಬ್ರಹ್ಮ / ಬೆರ್ಮೆರ್ ಸುಬ್ರಹ್ಮಣ್ಯ ನಾಗಿ ನೆಲೆಯಾಗುತ್ತಾನೆ.ಇಲ್ಲಿ ಏಕಸಾಲೆರ್ ದಂಪತಿಯ ಮಗು ಹುಟ್ಟುವಾಗಲೇ ಚಕ್ರವರ್ತಿ ಯ ಲಕ್ಷಣಗಳನ್ನು ಹೊಂದಿರುತ್ತದೆ ಎಂಬುದು ಗಮನಾರ್ಹ ವಿಚಾರ © ಡಾ.ಲಕ್ಷ್ಮೀ ಜಿ ಪ್ರಸಾದ್

ಬೆಳ್ಮಣ್ಣಿನ ತಾಮ್ರಶಾಸನದಲ್ಲಿ “ಬ್ರಹ್ಮನಿಂದ ರಕ್ಷಿತವಾದ ಕುಲದಲ್ಲಿ ಅಭಿಮಾನವುಳ್ಳ ಶ್ರೀಮದಾಳುವರಸ . . . ಎಂದಿದ್ದು, ಬ್ರಹ್ಮ ಯಾವುದೋ ಒಂದು ಕುಲದ ಕುಲದೈವವಾಗಿದ್ದಿರಬೇಕು ಎಂಬರ್ಥ ಬರುತ್ತದೆ.


“ಅಳುಪರ ಅರಸೊತ್ತಿಗೆಯ ಕೊನೆಯವರೆಗೆ ಅಂದರೆ ಸುಮಾರು 14ನೇ ಶತಮಾನದ ಕೊನೆಯವರೆಗೆ ತುಳುವರ ಬ್ರಹ್ಮನು ವೈದಿಕ ಸ್ವರೂಪದ ಚತುರ್ಮುಖ ಬ್ರಹ್ಮನಾಗಿ ಈ ನೆಲದಲ್ಲಿ ಚಿತ್ರಿತವಾಗಿಲ್ಲ ಹಾಗೂ ನಾಗನು ಸುಬ್ರಹ್ಮಣ್ಯನೊಂದಿಗೆ ಸೇರ್ಪಡೆಗೊಂಡಿಲ್ಲ” ಎಂದು ಪೀಟರ್ ಜೆ.ಕ್ಲಾಸ್ ಹೇಳುತ್ತಾರೆ.


ಕುದುರೆಯ ಮೇಲೆ ಕುಳಿತ ಖಡ್ಗಧಾರಿಯಾದ, ತಲೆಯ ಮೇಲೆ ಕೊಡೆ ಹಿಡಿದುಕೊಂಡ ರಾಜಯೋಧನಾಗಿ ಚಿತ್ರಿತವಾಗಿರುವ ಬ್ರಹ್ಮನ ಸ್ವರೂಪದಲ್ಲಿ ಜೈನರ ಪ್ರಭಾವವಿದೆಯೆಂದು ಡಾ. ಗುರುರಾಜಭಟ್ಟರು ಅಭಿಪ್ರಾಯಪಟ್ಟಿದ್ದಾರೆ.


ಕೆಲವೆಡೆ ನಾಗಬ್ರಹ್ಮನ ಮೂರ್ತಿಯಲ್ಲಿರುವ ಬ್ರಹ್ಮನ ಆಕಾರ ಜಪಮಾಲೆಯನ್ನು ಧರಿಸಿ ಕೈಮುಗಿದು ಕುಳಿತ ಯೋಗಿಯದ್ದಾಗಿದೆ. ಇಲ್ಲಿ ನಾಥ ಪಂಥದ ಪ್ರಭಾವವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.


ಬಲಿಯೇಂದ್ರ ಪೂಜೆ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರನನ್ನು ತುಳುನಾಡಿನ ಮೂಲಪುರುಷನೆಂದು, ಭೂಮಿಪುತ್ರನೆಂದು ಭಾವಿಸುತ್ತಾರೆ. ನಾಗಬ್ರಹ್ಮ ಆರಾಧನೆಗೂ ಬಲಿಯೇಂದ್ರ ಆರಾಧನೆಗೂ ಸಂಬಂಧ ಇದೆ © ಡಾ.ಲಕ್ಷ್ಮೀ ಜಿ ಪ್ರಸಾದ್


ಬೆರ್ಮರ ತಾಣ ಅಥವಾ ನಾಗಬನದಲ್ಲಿನ ಬೆರ್ಮರ ಕಲ್ಲು, ನಾಗರಕಲ್ಲುಗಳು ಮಣ್ಣು, ಹುತ್ತದಿಂದ ಮುಚ್ಚಿ ಹೋದಾಗ ಅದನ್ನು ಅಗೆಯುವ ಧೈರ್ಯ ಇರುವುದಿಲ್ಲ. ಆಗ ಆರಾಧನೆಗಾಗಿ ಹೊಸ ಕಲ್ಲನ್ನು / ಪ್ರತಿಮೆಯನ್ನು ಪ್ರತಿಷ್ಠಾಪಿಸಬೇಕಾಗಿ ಬರುತ್ತದೆ. ಹಳೆಯ ರೂಪ ಕಾಣಿಸದಿದ್ದಾಗ, ಆಗಿನ ಕಾಲದಲ್ಲಿ ಪ್ರಚಲಿತವಿರುವ ನಂಬಿಕೆಯಂತೆ ಶಿಲ್ಪಗಳು, ಮೂರ್ತಿಗಳು ಕೆತ್ತಲ್ಪಡುವುದು ಸಾಮಾನ್ಯವಾದ ವಿಚಾರ. ಇದರಿಂದ ನಾಗನ ಹೆಡೆಯನ್ನು ಹೊಂದಿರುವ, ಸೊಂಟದ ಮೇಲ್ಭಾಗದಲ್ಲಿ ಮನುಷ್ಯರೂಪು, ಕೆಳಭಾಗದಲ್ಲಿ ಸರ್ಪಾಕಾರವನ್ನು ಹೊಂದಿರುವ ನಾಗಬ್ರಹ್ಮ ಶಿಲ್ಪಗಳು ರಚನೆಯಾಗಿರಬಹುದು.


ಆಲಡೆಗಳನ್ನು ಹೊಸತಾಗಿ ಕಟ್ಟುವ ಸಂಪ್ರದಾಯವಿಲ್ಲ. ಇದೇ ರೀತಿ ಬ್ರಹ್ಮಸ್ಥಾನವನ್ನು ಕೂಡ ಹೊಸತಾಗಿ ಕಟ್ಟುವುದಿಲ್ಲ. ಜೀರ್ಣೋದ್ಧಾರ ಮಾತ್ರ ಮಾಡುತ್ತಾರೆ. ಆದರೆ ನಾಗ ಬನಗಳನ್ನು, ಗರಡಿಗಳನ್ನು ಹೊಸತಾಗಿ ನಿರ್ಮಿಸುವ ಸಂಪ್ರದಾಯವಿದೆ. ಆದ್ದರಿಂದ ಪ್ರಾಚೀನ ನಾಗಬನಗಳಲ್ಲಿ ಮಾತ್ರ ನಾಗಬ್ರಹ್ಮನ ಆರಾಧನೆ ಇದೆ.


 


 


ಬೆರ್ಮೆರ್ ಸ್ವರೂಪ


ಬ್ರಹ್ಮ ಶಬ್ದ ಬೃಹತ್ ಧಾತುವಿನಿಂದ ಹುಟ್ಟಿದ್ದು, ಇದರ ಅರ್ಥ ಅಗಾಧವಾದದ್ದು, ವಿಶಾಲವಾದದ್ದು ಎಂದಾಗಿದೆ. ತುಳುವಿನ ಬೆರ್ಮೆರ್ ವೈದಿಕ ಸಂಸ್ಕøತಿಯ ಚತುರ್ಮುಖ ಬ್ರಹ್ಮನಲ್ಲ. ಆದರೂ ಆತನ ಸ್ವರೂಪ ಬೃಹತ್ತಾದುದೇ ಆಗಿದೆ. “ ‘ಬೆರ್ಮೆರ್‍ಗ್’ ಪೂಪೂಜನ ಕರಿತ್‍ದ್ ಮರಕ್ಕ್ ಆಲಂಗಿ ಆಯುಸ್ ಕಾಯ್ಪುನಗ ತರೆಪೋಂಡು ಕಾಟೇಸ್ರೋಗು ಕಡೆ ಪೋಂಡು ಕೋಟೇಸ್ರೂಗು” (ಕ) “ಬೆರ್ಮರ ಹೂಪೂಜೆ ಆದಾಗ ಮರಕ್ಕೆ ಬಳ್ಳಿ ಹಾಕಿ ಕಾಯಿಸುವಾಗ ತಲೆ ಕಾಟೇಶ್ವರಕ್ಕೆ ಹೋಯಿತು. ಕಡೆ (ಕಾಲು) ಕೋಟೇಶ್ವರಕ್ಕೆ ಹೋಯಿತು” ಎಂಬಲ್ಲಿ ಬೆರ್ಮೆರ್‍ನ ಬೃಹತ್ತತೆಯ ಅರಿವಾಗುತ್ತದೆ. ರಕ್ತೇಶ್ವರಿ ಪಾಡ್ದನದಲ್ಲಿ “ಮಂಗ್ಲೂರ್‍ಡ್ದ್ ಬಾರ್ಕೂರು ಮುಟ್ಟ, ಬಾರ್ಕೂರುಡ್ಡ್ ಮಂಗ್ಲೂರ್ ಮುಟ್ಟ ಅಡ್ಡ ಲೆಕ್ಕೆಸಿರಿ, ನೀಟ ಬೆರ್ಮೆರ್, ನೀರ್‍ಡ್ ಕನ್ಯಲು ಉದ್ಯ ಬೆಂದೆರ್ (ಕ) “ಬಾರಕೂರಿನಿಂದ ಮಂಗಳೂರಿನವರೆಗೆ ಮಂಗಳೂರಿನಿಂದ ಬಾರಕೂರಿನವರೆಗೆ ಅಡ್ಡಕ್ಕೆ ರಕ್ತೇಶ್ವರಿ, ನೀಟಕ್ಕೆ ಬೆರ್ಮರು, ನೀರಿನಲ್ಲಿ ಕನ್ಯೆಯರು ಉದ್ಭವವಾದರು” ಎಂಬಲ್ಲಿ ಕೂಡ ಬೆರ್ಮೆರ್‍ನ ಅಗಾಧತೆ ವ್ಯಕ್ತವಾಗುತ್ತದೆ


ತುಳುವರ  ಬೆರ್ಮೆರ್  ಒಂದೇ ಏಕ ರೂಪಿ ಅಲ್ಲ . ಬೆರ್ಮೆರ್ ಭೂತ ,ಕಳೆಂಜ ಬೆರ್ಮೆರ್ ,ಭೂತ ಬ್ರಹ್ಮ ,ಬ್ರಹ್ಮ ಯಕ್ಷ ,ನಾಗ ಭೂತ ,ನಾಗ ಮಂಡಲದ,ನಾಗ ಯಕ್ಷ ,ಕೊಳನಾಗ  ಯಕ್ಷ ಬ್ರಹ್ಮ ,ನಾಗ ಬ್ರಹ್ಮ ಮೊದಲಾದವುಗಳು ಈತನ ನಾನಾ ಸ್ವರೂಪಗಳಾಗಿವೆ © ಡಾ.ಲಕ್ಷ್ಮೀ ಜಿ ಪ್ರಸಾದ್ 


 


ಬೆರ್ಮೆರ್ ಭೂತದ ಸ್ವರೂಪ


ಕಂಬಳದಲ್ಲಿ ಆರಾಧನೆಯಾಗುವ ಬೆರ್ಮೆರ್ ಮುಖವರ್ಣಿಕೆ ಬಹಳ ಸರಳವಾಗಿರುತ್ತದೆ. ಮುಖಕ್ಕೆ ಹಳದಿ ಬಣ್ಣ, ಹಣೆಯಲ್ಲಿ ‘ಯು’ ಆಕಾರದ ಬಿಳಿನಾಮ, ಕೆನ್ನೆಗೆಮುದ್ರೆ ಇರುತ್ತದೆ. ಕಂಬಳದಲ್ಲಿ ಆರಾಧನೆಯಾಗುವಾಗ ಹಿಡಿಯುವ ಬಿಲ್ಲು ಬಾಣವನ್ನು ಕೂಡ ತೆಂಗಿನ ಕಡ್ಡಿ ಹಾಗೂ ಪಾಂದೇವುನಿಂದ (ನಾರು) ತಯಾರಿಸಿರುತ್ತಾರೆ. ತಲೆಪಟ್ಟ ಮುಡಿ, ಎಲ್ಲವನ್ನು ತೆಂಗಿನ ತಿರಿಯಿಂದ ತಯಾರಿಸಿರುತ್ತಾರೆ. ಕಂಬಳದಲ್ಲಿ ಆರಾಧನೆಯಾಗುವಾಗ ಕಾಲಿಗೆ ಗಗ್ಗರ ಇರುವುದಾದರೂ ಗಗ್ಗರದೆಚ್ಚಿ ಇರುವುದಿಲ್ಲ. ಕಾಲಿಗೆ ಅಡಿಕೆಹಾಳೆಯಿಂದ ತಯಾರಿಸಿದ ಕಾಲುಕಟ್ಟನ್ನು ಬಳಸುತ್ತಾರೆ.

ಬೆರ್ಮೆರ್ ಗೆ ದೊಡ್ಡ ಮೀಸೆ  ಅಣಿ ಇದ್ದು ಅರಸೊತ್ತಿಗೆಯ ಪ್ರತೀಕವಾಗಿ ಬಿಲ್ಲು ಬಾಣಗಳ ಆಯುಧವಿದೆ‌.ಎಂಟೂ ದಿಕ್ಕುಗಳಿಗೆ ಬಾಣ ಪ್ರಯೋಗಿಸುವ ಬೆರ್ಮೆರ್ ಅರಸ ಅಥವಾ  ಚಕ್ರವರ್ತಿಯಾಗಿರುವುದರ ಸಂಕೇತವಾಗಿದೆ  © ಡಾ.ಲಕ್ಷ್ಮೀ ಜಿ ಪ್ರಸಾದ್ 

ಜಾಲಾಟ ಹಾಗೂ ಮುಗೇರ್ಲು ಕೋಲದ ಬೆರ್ಮೆರಿನ ಮುಖವರ್ಣಿಕೆ ಸ್ವಲ್ಪ ವಿಶಿಷ್ಟವಾಗಿರುತ್ತದೆ. ಇಲ್ಲಿ ಬೆರ್ಮರ್‍ಗೆ ದಪ್ಪನಾದ ಮೀಸೆಕಟ್ಟು ಇರುತ್ತದೆ. ಹುಬ್ಬುಗಳನ್ನು ಕಪ್ಪುಗೊಳಿಸಿ ಕಣ್ಣಿನ ಕೆಳಭಾಗದಲ್ಲಿ ಕಪ್ಪು ಮತ್ತು ಕೆಂಪುಬಣ್ಣದ ರೇಖೆಗಳನ್ನು ಪರಸ್ಪರ ಸಂಧಿಸುವಂತೆ ಎಳೆಯುತ್ತಾರೆ. ಹಣೆಯಲ್ಲಿ ‘ಯು’ ಆಕಾರದ ಬಿಳಿನಾಮವಿರುತ್ತದೆ. ನಾಮ ಅಂಚಿನ ಗೆರೆಗಳು ಕಪ್ಪಿದ್ದು ಮಧ್ಯಕ್ಕೆ ಕೆಂಪುಬಣ್ಣವನ್ನು ತುಂಬುತ್ತಾರೆ. ಕಪ್ಪು ಅಂಚಿನ ಗೆರೆಗಳನ್ನು ಹೊರಮೈಗೆ ಬಿಳಿಗೆರೆಯನ್ನು ಎಳೆಯುತ್ತಾರೆ. ಈ ಉದ್ದ ನಾಮದ ಆಚೀಚೆಗೆ ಸಣ್ಣ ‘ಯು’ ಅಕ್ಷರವನ್ನು ಹಿಂದುಮುಂದಾಗಿ ಬರೆಯುತ್ತಾರೆ. ಹಣೆಯ ಬಣ್ಣಗಾರಿಕೆಯಲ್ಲಿ ಸಮತೋಲನ ಸಾಧಿಸುತ್ತಾರೆ. ಮೂಗಿನ ಮೇಲೆ ಕಣ್ಣುಗಳ ನಡುವೆ ಕೆಂಪು ತ್ರಿಕೋನಾಕೃತಿ ಇರುತ್ತದೆ. ಕಪ್ಪು ಮೀಸೆಯನ್ನು ಕಪ್ಪುಬಣ್ಣದಿಂದ ಚಿತ್ರಿಸಿ ತುಟಿಯನ್ನು ಕೆಂಪು ಮಾಡುತ್ತಾರೆ. ಹಣೆಯ ನಾಮಕ್ಕೆ ಸಂವಾದಿಯಾಗಿ ಗದ್ದದಲ್ಲಿಯೂ ಕೆಂಪು, ಕಪ್ಪು, ಬಿಳಿ ಬಣ್ಣಗಳಿಂದ ಕೂಡಿದ ‘ಯು’ ರೀತಿಯ ರಚನೆ ಇರುವುದರಿಂದ ಮುಖವರ್ಣಿಕೆಯಲ್ಲಿ ಸಮತೋಲನವಿದೆ. ಒಟ್ಟಿನಲ್ಲಿ “ಇಡಿಯ ಮುಖವನ್ನು ಹಣೆ, ಗಲ್ಲ ಮತ್ತು ಗದ್ದ ಎಂದು ವಿಭಜಿಸಿ ತೋರಿಸುವುದಲ್ಲಿ ಈ ಬಣ್ಣಗಳ ಗೆರೆಗಳ ವಿನ್ಯಾಸವು ಹಿಡಿದಿರುವ ರೀತಿ ಗಮನ ಸೆಳೆಯುತ್ತದೆ” ಎಂದು ಡಾ. ಚಿನ್ನಪ್ಪಗೌಡ ಹೇಳಿದ್ದಾರೆ. ಪ್ರದೇಶದಿಂದ ಪ್ರದೇಶಕ್ಕೆ, ಭೂ ಮಾಧ್ಯಮರಿಂದ ಭೂತಮಾಧ್ಯಮರಿಗೆ ಈ ವಿನ್ಯಾಸವು ತುಸು ಭಿನ್ನ ಭಿನ್ನವಾಗಿರುತ್ತದೆ. ಆದರೆ ‘ಯು’ ಆಕಾರದ ಬಿಳಿನಾಮ, ಮೂಗು, ಕೆನ್ನೆಯ ಮೇಲಿನ ಆಕೃತಿಗಳು ಸಮಾನವಾಗಿರುತ್ತವೆ. ಸಾಮಾನ್ಯವಾಗಿ ಬೆರ್ಮೆರೆ ಭೂತಕ್ಕೆ, ಡಾಬು, ಮುದ್ರೆ, ಕೊರಳು ಸರಪಳಿ, ಎದೆಹಾರ, ಎದೆಪದಕ, ತಲೆ ಮಣಿ, ತಲೆಪಟ್ಟಿ, ಭುಜ ಕಿರೀಟ, ತಲೆಪಟ್ಟ, ಕೆಬಿನ, ಎದೆಹಾರ ಹಾಗು ನಾಗಾಭರಣಗಳು ಇರುತ್ತವೆ. ಬೆರ್ಮೆರ ಭೂತಕ್ಕೆ ಮುಖವಾಡ ಇಡುವ ಪದ್ಧತಿ ಎಲ್ಲೂ ಕಾಣಿಸುವುದಿಲ್ಲ.© ಡಾ.ಲಕ್ಷ್ಮೀ ಜಿ ಪ್ರಸಾದ್


 ಕಳೆಂಜ ಬೆರ್ಮೆರ್


ತುಳುನಾಡಿನಲ್ಲಿ ಆಟಿಕಳೆಂಜನ ಕುಣಿತ ಬಹಳ ಪ್ರಸಿದ್ಧವಾದುದು. ಕಳೆಂಜನನ್ನು ಬೆರ್ಮೆರ್ ಮಾಣಿ ಎಂದೂ, ಕಲೆಂಜ ಬೆರ್ಮೆರ್ ಎಂದೂ, ಬೆರ್ಮೆರ್ ಎಂದೂ ಕರೆಯುತ್ತಾರೆ. ಈತನನ್ನು ಬೆರ್ಮೆರ್‍ನ ಪ್ರತಿನಿಧಿ ಎಂದೂ ಹೇಳುತ್ತಾರೆ. “ತುಳುನಾಡಿನ ಪ್ರಾಚೀನ ಆರಾಧ್ಯದೈವವಾದ ಬೆರ್ಮೆರ್‍ನ ಪ್ರತಿನಿಧಿಯಾದ ಕಳೆಂಜನು ಆಟಿತಿಂಗಳಿನಲ್ಲಿ ಊರಿಗೆ ಹಬ್ಬದ ಮಾರಿಬೀದಿಯನ್ನು ಕಳೆಯುವುದಕ್ಕಾಗಿಯೇ ಬರುವುದೇ ‘ಆಟಿ ಕಳೆಂಜ’ ಎಂದು ಗುರುತಿಸಬಹುದು” ಎಂದು ಡಾ. ಅಭಯ ಕುಮಾರ ಕೌಕ್ರಾಡಿ ಹೇಳಿದ್ದಾರೆ.


ಈತನಿಗೆ ಕೇಪುಲ ಗಿಡದ ಕೋಲಿನಿಂದ ಮಾಡಿದ ಮುಡಿ (ಕಿರೀಟ)ವಿದೆ. ಮೈಕೈಗಳಿಗೆ ಬಿಳಿಬಣ್ಣದ ಸೇಡಿಯನ್ನು ಬಳಿದು, ಕಿಬ್ಬೊಟ್ಟೆಯಿಂದ ಎದೆಯವರೆಗೆ ಕೆಂಪುಬಣ್ಣದಲ್ಲಿ ಗುಣಿಸು (x) ಚಿಹ್ನೆಯ ಆಕಾರವನ್ನು ಬಿಡಿಸುತ್ತಾರೆ. ಸೊಂಟಕ್ಕೆ ತೆಂಗಿನ ತಿರಿ, ಮುಖಕ್ಕೆ ತೆಂಗಿನ ನಾರಿನಲ್ಲಿ ಮಾಡಿದ ಮೀಸೆ ಮತ್ತು ಗಡ್ಡ ಇರುತ್ತದೆ. ಕೈಯಲ್ಲಿ ಉದ್ದದ ಪನೆಛತ್ರ ಮತ್ತು ದುಡಿ ಇರುತ್ತದೆ. ಆತನ ರೂಪದ ವರ್ಣನೆ ಹೀಗಿದೆ:


ತುಳು:   ಬಿರ್ಮರೆ ಮಾನಿಯಾಂಡ ಕಲೆಂಜ ಮುಡಿದೀವೊನು


     ಮುದಿ ದೀವೊನು ಕಲೆಂಜ ಸತ್ತಿಗೆ, ಪತ್ತೊನು


     ಸತ್ತಿಗೆ ಪತ್ತೊನು ಕಲೆಂಜ ಸವಲೆಯ ಬೀಜೆಮಾನು


     ಸವಲೋ ಬೀಜೋನು ಬೀರ ತಿತೊನು


     ಕಲೆಂಜ ಕಲೆಂಜ ಕಲೆಂಜ ಬೆರ್ಮರ್


ಕನ್ನಡ:   ಬೆರ್ಮರ ಪ್ರತಿನಿಧಿಯಾದರೆ ಕಲೆಂಜ ಕಿರೀಟ ಇರಿಸಿಕೋ


     ಕಿರೀಟ ಇಟ್ಟುಕೋ ಕಲೆಂಜ ಛತ್ರ ಹಿಡಿದುಕೋ


     ಛತ್ರ ಹಿಡಿದುಕೋ ಕಲೆಂಜ ಚಾಮರ ಹಿಡಿದುಕೋ


     ಚಾಮರ ಬೀಸಿಕೋ ಕಲೆಂಜ ಬಿರುದು ಕರೆಸಿಕೋ


     ಕಲೆಂಜ ಕಲೆಂಜ ಕಲೆಂಜ ಕಲೆಂಜ ಬಿರ್ಮೆರ್


ಇಲ್ಲಿ ಕಲೆಂಜನನ್ನು ಬೆರ್ಮರ್ ಮಾಣಿ ಎಂದು ಹೇಳಿದ್ದರೂ ಕಿರೀಟ ಇಟ್ಟುಕೋ, ಸತ್ತಿಗೆ ಹಿಡಿ, ಚಾಮರ ಬೀಸಿಕೋ, ಇತ್ಯಾದಿ ಅರಸುವಿಗೆ ಉಚಿತವಾದ ವರ್ಣನೆಗಳನ್ನು ಮಾಡಿದೆ.


ಆಟಿಕಲೆಂಜನು ಋತುಮತಿಯಾಗದ ಹುಡುಗಿಯ ತಲೆಗೆ, ಗರ್ಭಿಣಿಯಾಗದ ಹೆಂಗಸಿನ ತಲೆಗೆ, ದನ ಕರು ಹಾಕದಿದ್ದರೆ ಅದರ ತಲೆಗೆ, ಮರ ಕಾಯಿ ಬಿಡದಿದ್ದರೆ ಅದರ ಬುಡಕ್ಕೆ ನೀರು ಹೊಯ್ಯುವ ಪದ್ಧತಿ ಇದೆ. ಇಲ್ಲಿ ಕಲೆಂಜ ಸಂತಾನವನ್ನು ನೀಡುವ ಶಕ್ತಿಯಾಗಿ ಕಾಣಿಸುತ್ತಾನೆ. ಬೆರ್ಮರ್ ಕೂಡ ಫಲೀಕರಣದ ದೇವತೆ. ಮುಗೇರ್ಲು ಕೋಲದ ಆರಂಭದಲ್ಲಿ ಬೆರ್ಮೆರ್ ಸಂಧಿಯನ್ನು ಹೇಳುತ್ತಾರೆ. ಆ ಸಂಧಿಯಲ್ಲಿ ವರ್ಣಿಸಿರುವಂತೆ ಬೆರ್ಮೆರ್‍ನ ಸತ್ತಿಗೆ, ಚಾಮರ, ಕಿರೀಟಗಳು ಇವೆ. ಈ ಬಗ್ಗೆ ಡಾ. ಅಭಯ ಕುಮಾರ ಕೌಕ್ರಾಡಿ ಅವರು “ಈ ಸಂಧಿ ಬೆರ್ಮೆರ್ ಸ್ವರೂಪವನ್ನು ತಿಳಿಸಿದರೂ, ಈ ರೀತಿಯ ಬಿರ್ಮೆರ್ ಮೂರ್ತಿಯನ್ನು ತುಳುನಾಡಿನಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದರೆ ತುಳುನಾಡಿನ ಆಟಿತಿಂಗಳಿನಲ್ಲಿ ಬರುವ ಕಲೆಂಜನನ್ನು ಮುಗೇರರು ಬಿರ್ಮೆರ್ ಮಾನಿ ಎಂದು ಕರೆಯುತ್ತಾರೆ. ಅವನ ಸ್ವರೂಪವು ಸುಮಾರಾಗಿ ಈ ಸಂಧಿಯಲ್ಲಿ ಚಿತ್ರಿತವಾಗಿರುವಂತೆಯೇ ಕಂಡುಬರುತ್ತದೆ. ಹೀಗೆ ದಕ್ಷಿಣ ಕನ್ನಡದ ಒಂದು ವಿಶಿಷ್ಟ ಪ್ರಾಚೀನ ಆರಾಧನ ದೈವವೇ ಈ ಬಿರ್ಮೆರ್ ಎಂದು ನಿರ್ಧರಿಸಬಹುದಾಗಿದೆ” ಎಂದು ಹೇಳಿದ್ದಾರೆ.


 


ಭೂತಬ್ರಹ್ಮ


ಉಳ್ಳಾಲವನ್ನು 1623ರಲ್ಲಿ ಸಂದರ್ಶಿಸಿದ ಪಿಯತ್ರೋ ತಾನು ಕಂಡ ಬೆರ್ಮೆರ್ ವಿಗ್ರಹವನ್ನು ಹೀಗೆ ವರ್ಣಿಸಿದ್ದಾರೆ. “ ... ಅಲ್ಲಿ ಚೊಕ್ಕವಾಗಿ ಕಟ್ಟಿದ ಒಂದು ಸಣ್ಣ ಗುಡಿ ಇತ್ತು. .... ಇದರ ಒಳಗೆ ಭೂತದ (Devil) ವಿಗ್ರಹವಿತ್ತು. ವಿಗ್ರಹವನ್ನು ಬಿಳಿಯ ಕಲ್ಲಿನಿಂದ ಮಾಡಿದ್ದರು. ಕಲ್ಲನ್ನು ಗೆಯ್ದಿರಲಿಲ್ಲ. ವಿಗ್ರಹ ಒಂದು ಆಳು ಪ್ರಮಾಣಕ್ಕಿಂತ ದೊಡ್ಡದಾಗಿತ್ತು. ನಮ್ಮ ರೀತಿಯಲ್ಲಿ ವಿಗ್ರಹಕ್ಕೆ ಬಣ್ಣ ಹಚ್ಚಿ, ಒಬ್ಬ ಸುಂದರ ಯುವಕನಂತೆ ಕಾಣುವ ಹಾಗೆ ಮಾಡಿದ್ದರು. ತಲೆಯ ಮೇಲೆ ಕಿರೀಟವಿತ್ತು. ನಾಲ್ಕು ಕೈಗಳಿದ್ದವು. ಬಲಕೈಯಲ್ಲಿ ಚಕ್ರಾಕಾರದ ಏನೋ ಒಂದಿತ್ತು. ಇನ್ನೊಂದು ಕೈಯಲ್ಲಿ ಕಠಾರಿ ಇತ್ತು. ವಿಗ್ರಹದ ಕಾಲಗಳ ಮಧ್ಯೆ ಉದ್ದನೆಯ ಗಡ್ಡ ಬಿಟ್ಟ ಬೆತ್ತಲೆ ಮನುಷ್ಯನ ವಿಗ್ರಹವಿತ್ತು. ಅದರ ಕೈಗಳು ನೆಲಕ್ಕೆ ಊರಿದ್ದವು, ಪ್ರಾಣಿಯೊಂದು ನಡೆಯುವ ರೀತಿಯಲ್ಲಿ. ಇದರಮೇಲೆ ಭೂತ ಕುಳಿತು ಸವಾರಿ ಮಾಡುತ್ತಿರುವಂತೆ ಕಾಣುತ್ತಿತ್ತು. ವಿಗ್ರಹದ ಬಲಭಾಗದಲ್ಲಿ ದೊಡ್ಡ ಮರವೊಂದರ ಒಣಗಿದ ಬುಡ ಕಾಣಿಸುತ್ತಿತ್ತು. ಇಲ್ಲಿ ಭೂತದ ತೊಂದರೆ ಕಾಣಿಸುತ್ತಿತ್ತು. ಈ ತೊಂದರೆಯ ನಿವಾರಣೆಗಾಗಿ ರಾಣಿ ಇಲ್ಲಿ ಗುಡಿ ಕಟ್ಟಿಸಿ ಬ್ರಿಮೋರ್ (Brimor) ಎಂಬ ವಿಗ್ರಹವನ್ನು ಸ್ಥಾಪನೆ ಮಾಡಿಸಿದ್ದಾಳೆ. ಬ್ರಿಮೋರ್ ಎಂಬ ಭೂತ ಬಹಳ ದೊಡ್ಡ ಭೂತವಂತೆ, ಸಾವಿರಾರು ಭೂತಗಳಿಗೆ ಒಡೆಯನಂತೆ, ನನ್ನ ಈ ಊಹೆ ಸರಿ ಎಂದು ಆಮೇಲೆ ಇಲ್ಲಿಯವರು ಹೇಳಿದರು. ಈ ವಿಗ್ರಹಕ್ಕೆ ಬುತೋ (Buto-ಭೂತ) ಎಂದು ಹೆಸರು”.


ಇದು ಭೂತಬ್ರಹ್ಮನ ಕಲ್ಪನೆಯನ್ನು ಕೊಡುತ್ತದೆ. ಭೂತಬ್ರಹ್ಮನ ಕಲ್ಪನೆಯನ್ನು ಹೊಂದುವಂತಹ ಇನ್ನೊಂದು ವಿಗ್ರಹ ಉಡುಪಿಯ ವೀರಭದ್ರ ದೇವಾಲಯದಲ್ಲಿ ಇದೆ 


ಇಂದಿಗೂ ದೇವರ ಉತ್ಸವ ಮೂರ್ತಿಯನ್ನು ತಲೆಯಲ್ಲಿ ಹೊತ್ತುಕೊಂಡು ಬಲಿ ಬರುವವರನ್ನು ಬ್ರಹ್ಮವಾಹನ ಎಂದು ಕರೆಯುತ್ತಾರೆ.


 ಬ್ರಹ್ಮಯಕ್ಷ


ಶೀತಲನಾಥನ ಯಕ್ಷ ಬ್ರಹ್ಮಯಕ್ಷ. ಬ್ರಹ್ಮಯಕ್ಷ ಸಾಮಾನ್ಯವಾಗಿ ಕುದುರೆ ಏರಿ ಕುಳಿತು ಖಡ್ಗ ಹಿಡಿದು ವೀರನಂತೆ ಚಿತ್ರಿಸಲ್ಪಟ್ಟಿದ್ದಾನೆ. ಆದರೆ ಬಾಹುಬಲಿಯ ಮೂರ್ತಿ ಎದುರಿನ ಮಾನಸ್ತಂಭದ ತುದಿಯಲ್ಲಿ ಕುಳಿತ ಭಂಗಿಯ ಶಾಂತಮುದ್ರೆಯ ಬ್ರಹ್ಮಯಕ್ಷನ ಮೂರ್ತಿ ಇದೆ. ಕಾರ್ಕಳ ಶೀತಲನಾಥ ಗುಡಿಯ ಬ್ರಹ್ಮಯಕ್ಷನಿಗೆ ಆರು ಕೈಗಳಿದ್ದು, ಈ ಮೂರ್ತಿ ನಿಂತ ಭಂಗಿಯಲ್ಲಿದೆ. ಉಜಿರೆ ಬಸದಿಯಲ್ಲಿ ಬ್ರಹ್ಮಯಕ್ಷನ ಉದ್ಭವ ಶಿಲೆ ಇದೆ. ಇಲ್ಲಿ ಈತನದು ನಿರಾಕಾರನಾಗಿದ್ದರೂ ಬೆಳ್ಳಿರೇಖುಗಳಿಂದ ಪುರುಷರೂಪ ನೀಡಲಾಗಿದೆ. ಅನೇಕ ಬಸದಿಗಳಲ್ಲಿ ಒಂದು ಉರುಟಾದ ಕಲ್ಲನ್ನು ಬ್ರಹ್ಮಯಕ್ಷ ಎನ್ನುತ್ತಾರೆ. ಇದರಿಂದಾಗಿ ಆರಂಭದಲ್ಲಿ ಬ್ರಹ್ಮಯಕ್ಷನಿಗೆ ಸ್ಪಷ್ಟ ರೂಪವಿರಲಿಲ್ಲ. ಕಾಲಾಂತರದಲ್ಲಿ ಕುದುರೆ ಏರಿದ ವೀರನಾಗಿ ಚಿತ್ರಿಸಲಾಗಿದೆ ಎಂದು ತಿಳಿಯುತ್ತದೆ. ಯಕ್ಷಬ್ರಹ್ಮನ ಪ್ರಭಾವದಿಂದಾಗಿ ಗರೊಡಿಗಳ ಬೆರ್ಮೆರ್ ಕುದುರೆ ಏರಿದ ವೀರನಂತೆ ಚಿತ್ರಿಸಲ್ಪಟ್ಟಿರಬಹುದು.


ನಾಗಭೂತ


     ಅರಿಬೈಲು, ಚೌಕಾರು ಗುತ್ತುಗಳಲ್ಲಿ ಕಂಬಳಕೋರಿಯಂದು ಪೂಕರೆ ಹಾಕುವಾಗ ನಾಗಭೂತಕ್ಕೆ ಕೋಲವಿದೆ. ನಾಗಭೂತದ ಮುಖವರ್ಣಿಕೆ ಸರಳವಾಗಿದ್ದು, ಕಪ್ಪುಬಣ್ಣದ ಮೇಲೆ ಹಳದಿ ನಾಗಚಿಹ್ನೆಗಳನ್ನು ಬರೆಯುತ್ತಾರೆ. ತಲೆಗೆ ನಾಗನ ಹೆಡೆಯ ಆಕಾರದ ಮುಡಿಯನ್ನು ಹಿಡಿಯುತ್ತಾರೆ. ಚೌಕಾರುಗುತ್ತು ಹಾಗೂ ಅರಿಬೈಲಿನಲ್ಲಿ ನಾಗಭೂತದ ಮುಡಿಯಲ್ಲಿ ಮೂರು ಹೆಡೆಗಳಿವೆ. ಇಚ್ಲಂಗೋಡಿನ ಕೃಷ್ಣಸರ್ಪಕೋಲದಲ್ಲಿ ಮೂರು ಹೆಡೆಯ ಮುಖವಾಡ ಧರಿಸುತ್ತಾರೆ.


ನಾಗಮಂಡಲದ ನಾಗ ಯಕ್ಷ ,ಕೊಳನಾಗ ,ಬ್ರಹ್ಮ ಯಕ್ಷ


ನಾಗಮಂಡಲ, ಢಕ್ಕೆಬಲಿ/ಬ್ರಹ್ಮಮಂಡಲಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ವೈಭವದ ಆಚರಣೆ. ಮೂಲತಃ ಢಕ್ಕೆಬಲಿ, ನಾಗಮಂಡಲಗಳು ಒಂದೇ ಅಲ್ಲ. ಆದರೆ ಈಗ ಇವುಗಳ ಆಚರಣೆ ಹೆಚ್ಚು ಕಡಿಮೆ ಒಂದೇ ರೀತಿ ಇದೆ.


ದೇವರ ಆರಾಧನೆಯಲ್ಲಿ ಹನ್ನೊಂದು ಪ್ರತೀಕಗಳನ್ನು ಪುರಾಣಗಳಲ್ಲಿ ಹೇಳಿವೆ. ಅದರಲ್ಲಿ ಮಂಡಲ ಒಂದು ಪ್ರತೀಕ. ಮಂಡಲದ ಮಧ್ಯದಲ್ಲಿ ನಾಗನನ್ನು ಪೂಜಿಸುವುದು ನಾಗಮಂಡಲದ ಉದ್ದೇಶ. ಈ ಪೂಜಾವಿಧಿ ಯಾವಾಗಿನಿಂದ ಆರಂಭವಾಯಿತು ಎಂಬ ಬಗ್ಗೆ ಖಚಿತವಾದ ಆಧಾರವಿಲ್ಲ. “ಕ್ರಿ.ಶ.1458ರ ಬಾರಕೂರಿನ ಶಾಸನದಲ್ಲಿ ‘ಮಂಡಲ ಭಂಡಾರಿ’ ಎಂದು ಬರುತ್ತದೆ. ಬಹುಶಃ ನಾಗಮಂಡಲ ಸೇವೆಯನ್ನು ನಡೆಸಿಕೊಟ್ಟ ಭಂಡಾರಿಯನ್ನು ಕುರಿತು ಈ ಶಾಸನ ಪ್ರಸ್ತಾಪಿಸಿದ್ದಿರಬೇಕು. ಹೀಗಾಗಿ 500 ವರ್ಷಗಳಿಂದೀಚೆಗೆ ನಾಗಮಂಡಲ ನಡೆದುಬರುತ್ತಿದೆ” ಎಂದು ಖಚಿತವಾಗಿ ಹೇಳಬಹುದು ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.


ನಾಗಮಂಡಲ ಸಂತಾನ ಬಯಕೆ ಹಾಗೂ ‘ಕುಷ್ಟರೋಗ ನಿವಾರಣೆಗಾಗಿ ನಡೆಸುವ ಒಂದು ನಾಗಾರಾಧನಾ ಪದ್ಧತಿ, ಇದೊಂದು ಫಲವಂತಿಕೆಯ ಆಚರಣೆ. ಇದನ್ನು ಮಾನವ ಶಾಸ್ತ್ರಜ್ಞರು ಫಲವಂತಿಕೆಯ ಆಚರಣೆ ಎಂದು ಹೇಳಿದ್ದಾರೆ. ಇದು ತಂತ್ರ ಮೂಲದಿಂದ ಹುಟ್ಟಿಕೊಂಡ ಆರಾಧನೆ ಎಂದು ಕಾ.ವೆಂ. ರಾಜಗೋಪಾಲ ಅವರು ಅಭಿಪ್ರಾಯ ಪಟ್ಟಿದ್ದಾರೆ. ನಾಗಮಂಡಲಕ್ಕೆ ಪೂರ್ವಭಾವಿಯಾಗಿ ನಾಗತಂಬಿಲ, ಆಶ್ಲೇಷಾಬಲಿ, ಶಾಕಾಸಂಸ್ಕಾರ, ಹಾಲಿಟ್ಟು ಸೇವೆ, ನಾಗದರ್ಶನ ಮೊದಲಾದ ವಿಧಿಗಳನ್ನು ನೆರವೇರಿಸುತ್ತಾರೆ.


ಸಾಮಾನ್ಯವಾಗಿ ಬೆಟ್ಟು ಗದ್ದೆ ಅಥವಾ ಸಮತಟ್ಟಾದ ವಿಶಾಲವಾದ ಬಯಲು ಪ್ರದೇಶದ ಮಧ್ಯೆ ಸುಮಾರು 2-3 ಅಡಿ ಎತ್ತರದಲ್ಲಿ 20 ಕೋಲು ಚೌಕಾಕಾರದ ವೇದಿಕೆಯನ್ನು ನಿರ್ಮಿಸುತ್ತಾರೆ. ರಂಗದ ನಡುವೆ ಕಂಬ, ಅದರ ಸುತ್ತ ಚಪ್ಪರ, ಚಪ್ಪರದ ಸುತ್ತ ರೇಷ್ಮೆ ವಸ್ತ್ರದಿಂದ ಅಲಂಕರಿಸುತ್ತಾರೆ. ತಾವ್ರಿಮಿಟ್ಟಿ (ತಾವರೆ ಮೊಗ್ಗು), ತಾವರೆಹೂ, ಗಿಳಿ ಮುಂತಾದ ರಚನೆಗಳನ್ನು ಮೇಲ್‍ಗಟ್ಟಿನಿಂದ ನೇತು ಹಾಕುತ್ತಾರೆ.


ಜಂಗಮ ಸೊಪ್ಪಿನಿಂದ ತಯಾರಿಸಿದ ಹಸಿರು ಹುಡಿ, ಭತ್ತದ ಹೊಟ್ಟಿನ ಕರಿಯ ಕಪ್ಪು ಹುಡಿ, ಬೆಳ್ತಿಗೆ ಅಕ್ಕಿಯ ಹಡಿ, ಬಿಳಿ ಹುಡಿ, ಅರಸಿನ ಹಾಗೂ ಸುಣ್ಣದ ಮಿಶ್ರಣದಿಂದ ತಯಾರಿಸಿದ ಕುಂಕುಮ ಹಾಗೂ ಅರಸಿನ ಹುಡಿಗಳಿಂದ ಮಂಡಲದ ಮಧ್ಯಭಾಗದಲ್ಲಿ ಏಳು ಹೆಡೆಯ ಸರ್ಪ, ಮರಿನಾಗ, ಬ್ರಹ್ಮ, ಯಕ್ಷ, ಗಣಪತಿಯರನ್ನು ಬರೆಯುತ್ತಾರೆ. ರಂಗದ ನಾಲ್ಕು ದಿಕ್ಕಿಗೆ ಎಣ್ಣೆಯ ದೊಂದಿಗಳನ್ನು ಕಟ್ಟುತ್ತಾರೆ. ಇದರ ಸುತ್ತ ನಾಗಪಾತ್ರಿ ಹಾಗೂ ವೈದ್ಯರು ನರ್ತಿಸುತ್ತಾರೆ.


ನಾಗಮಂಡಲದ ಸುತ್ತ ನೃತ್ಯದಲ್ಲಿ ಪ್ರಧಾನ ಪಾತ್ರ ವಹಿಸುವವರು ಇಬ್ಬರು, ಒಬ್ಬರು ನಾಗಪಾತ್ರಿ. ನಾಗಪಾತ್ರಿ ಮುಂಗೈಗೆ ಕಡಗ, ಮೈಗೆ ಕೆಂಪುಬಟ್ಟೆ, ಕೆದರಿದ ಕೂದಲು, ಕೊರಳಿನಲ್ಲಿ ನಾಗನ ಚಿಹ್ನೆಯ ಪದಕವಿರುವ ಹಾರವನ್ನು ಧರಿಸಿರುತ್ತಾರೆ. ಕೈ ತುಂಬ ಹಿಡಿದಿರುವ ಹಿಂಗಾರಗಳನ್ನು ಮುಖಕ್ಕೆ ಆಗಾಗ್ಗೆ ತಿಕ್ಕಿಕೊಳ್ಳುತ್ತಾ ಇರುತ್ತಾರೆ. ಇನ್ನೊಂದು ಪ್ರಧಾನ ಪಾತ್ರ ವೈದ್ಯರದು. ವೈದ್ಯರು ಅರ್ಧನಾರಿ ವೇಷವನ್ನು ಧರಿಸಿರುತ್ತಾರೆ. ಯಕ್ಷಗಾನ ಬಡಗುತಿಟ್ಟಿನ ಸ್ತ್ರೀವೇಷವನ್ನು ಹೋಲುವ ಇವರು ಕೆಂಪುಬಣ್ಣದ ಚೌಕುಳಿಸೀರೆ, ಕಾಲಿಗೆ ಗೆಜ್ಜೆ, ಎದೆಗೆ ತೋಳಿಲ್ಲದ ರವಿಕೆ, ಕೊರಳಿಗೆ ಗುಂಡುಸರ, ಸೊಂಟಕ್ಕೆ ಬೆಳ್ಳಿಪಟ್ಟಿ, ಕೈಗೆ ಚಿನ್ನದ ಕಡಗ, ತಲೆಗೆ ಮುಂಡಾಸು, ಜರಿರುಮಾಲು ಧರಿಸುತ್ತಾರೆ. ಹಾಡುವ ಹಿಮ್ಮೇಳದ ಮೂರು ಜನ ವೈದ್ಯರು ಬಿಳಿಧೋತರವನ್ನು ಕಚ್ಚೆ ಹಾಕಿ ಉಟ್ಟು, ಬಿಳಿ ಅಂಗಿ ತೊಟ್ಟಿರುತ್ತಾರೆ. ನಾಗಮಂಡಲದ ವೇದಿಕೆಯ ಮಧ್ಯಭಾಗದಲ್ಲಿ ರಚಿಸಿದ ಚಿತ್ತಾರದ ಸುತ್ತ ಪಾತ್ರಿ ಮತ್ತು ವೈದ್ಯರು ನರ್ತಿಸುತ್ತಾರೆ. ನಾಗನನ್ನು ಮೈತುಂಬಿಕೊಂಡ ಪಾತ್ರಿ ಕ್ರೋಧದಿಂದ ಸುತ್ತಿ ಸುಳಿದು ಮುಖವನ್ನು ಗಂಟಿಕ್ಕಿಕೊಂಡು ಹೂಂಕರಿಸುತ್ತ ನಾಗರ ಹಾವಿನಂತೆ ತಲೆಯನ್ನು ಹಿಂದೆಮುಂದೆ ಆಡಿಸುತ್ತಾ, ನಾಲಿಗೆಯನ್ನು ಆಗಾಗ ಹೊರಚಾಚುತ್ತಾ, ಬುಸುಗುಟ್ಟುತ್ತಾನೆ. ಅನಂತರ ಅರ್ಧನಾರಿರೂಪದಲ್ಲಿರುವ ವೈದ್ಯನ ಭಕ್ತಿಗೆ ಒಲಿದು ತಣಿದು ಮಣಿಯುತ್ತಾನೆ. ಈ ಕುಣಿತದಲ್ಲಿ ಅನೇಕ ಭಾವರಸಗಳ ಅಭಿವ್ಯಕ್ತಿ ಇದೆ. ಎಂಟು (8) ಬರೆದ ಆಕಾರದಲ್ಲಿ ನರ್ತಿಸುವ  ಇವರ ನರ್ತನ ಮನಮೋಹಕವಾಗಿರುತ್ತದೆ 


 ಕೊಳನಾಗ: ಏಳು ಹೆಡೆಯ ದೊಡ್ಡ ಸರ್ಪದ ಚಿತ್ರಣಕ್ಕೆ ಕೊಳನಾಗ, ಗುಳಿಕ, ಅಥವಾ ಕಾಡ್ಯ ಎನ್ನುತ್ತಾರೆ.


 ನಾಗಯಕ್ಷ :


 ಕೊಳನಾಗನ ಸಮೀಪದಲ್ಲಿಯೇ ಕೇವಲ ಹೆಡೆಯಂತೆ ಕಾಣುವ ಒಂದು ರೂಪಕ್ಕೆ ಎರಡು ಕಣ್ಣುಗಳನ್ನು ಚಿತ್ರಿಸುತ್ತಾರೆ. ಇದರ ಆಕಾರ ಶಂಖವನ್ನು ಹೋಲುತ್ತದೆ. ಇದನ್ನು ಕೆಲವರು ಮರಿನಾಗ ಎಂದರೆ ಕೆಲವರು ನಾಗಯಕ್ಷಿ (ಯಕ್ಷೆ) ಎನ್ನುತ್ತಾರೆ.


 ಬ್ರಹ್ಮ ಯಕ್ಷ :


ಕೊಳನಾಗನ ಎಡಭಾಗದಲ್ಲಿ ಕೆಳಗೆ ಒಂದು ವಿಶಿಷ್ಟ ಮಾನವಾಕೃತಿಯನ್ನು ಚಿತ್ರಿಸುತ್ತಾರೆ. ಇದಕ್ಕೆ ಕೈ ಕಾಲುಗಳಿಲ್ಲ. ಗಂಡುರೂಪ, ಮೀಸೆ ಇದೆ. ಹೊರಚಾಚಿದಂತಿರುವ ಹಲ್ಲುಗಳು, ಹಾಗೂ ಎರಡು ಕೋರೆ ಹಲ್ಲುಗಳಿವೆ. ತಲೆಗೆ ಚೂಪಾದ ಟೊಪ್ಪಿಗೆಯನ್ನು ಧರಿಸಿದಂತೆ ಕಾಣುತ್ತದೆ. ಇದನ್ನು ವೈದ್ಯರು ಬ್ರಹ್ಮಯಕ್ಷ ಎನ್ನುತ್ತಾರೆ. ತುಳುವರು ಬೆರ್ಮೆರ್ ಎನ್ನುತ್ತಾರೆ.


ನಾಗಬ್ರಹ್ಮ ಸಮನ್ವಯ


ನಾಗಬ್ರಹ್ಮನ ಆರಾಧನೆ ತುಳುನಾಡಿನಲ್ಲಿ ಪರಂಪರಾಗತವಾಗಿ ಬಂದ ಜಾನಪದ ನಂಬಿಕೆ. ಇಲ್ಲಿ ಸತ್ತ ನಾಗನನ್ನು ಯಾರಾದರೂ ನೋಡಿದರೆ, ಆತನು ಅದನ್ನು ಸಂಸ್ಕಾರ ಮಾಡಬೇಕೆಂಬ ನಂಬಿಕೆ ಇದೆ. ಶಾಸ್ತ್ರೋಕ್ತವಾಗಿ ಅಂತ್ಯೇಷ್ಟಿ ಸಂಸ್ಕಾರದ ಹಕ್ಕು ಸತ್ತ ವ್ಯಕ್ತಿಯ ಕುಟುಂಬ ಗೋತ್ರ ಹಾಗೂ ವಂಶದವರಿಗೆ ಇರುತ್ತದೆ. ಆದ್ದರಿಂದ ತುಳುನಾಡಿನ ಜನರು ನಾಗವಂಶದವರಿರಬೇಕು. “ಇಲ್ಲಿ ದಕ್ಷಿಣ, ಉತ್ತರ ಕನ್ನಡ, ಕರಾವಳಿ ಪ್ರದೇಶಕ್ಕೆ ನಾಗರಖಂಡವೆಂದು ಹೆಸರಿತ್ತು. ಇಲ್ಲಿ ನಾಗರೆಂಬ ಆದಿವಾಸಿಗಳು ವಾಸಿಸುತ್ತಿದ್ದರು. ಸರ್ಪಕುಲಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚಾರಣೆಯಾಗುತ್ತಿದ್ದಿರಬೇಕು” ಎಂದು ಗೋವಿಂದ ಪೈ ಹೇಳಿದ್ದಾರೆ.


ತುಳುನಾಡಿನಲ್ಲಿ ನಾಗಮಂಡಲದಲ್ಲಿ ಬಿಡಿಸಲಾಗುವ ಕೈಕಾಲುಗಳಿಲ್ಲದ ತಲೆಯ ಚಿತ್ರವನ್ನು ‘ಬ್ರಹ್ಮಯಕ್ಷ’ ಎನ್ನಲಾಗುವುದು. ಈ ಬ್ರಹ್ಮಯಕ್ಷ, ವೈದಿಕರ ಚತುರ್ಮುಖಬ್ರಹ್ಮನಲ್ಲ. ತುಳುವರು ಹೇಳುವ ಬೆರ್ಮರ್ ಇದೆಂದೂ, ಇದನ್ನು ಸಂತಾನದ ಅಧಿದೇವತೆ ಎಂದು ಹೇಳಲಾಗುತ್ತದೆ” ಎಂದು ಪ್ರೊ. ಎ.ವಿ. ನಾವಡ ಹೇಳಿದ್ದಾರೆ.


“ತುಳುನಾಡಿನ ಜನತೆ ತನ್ನ ಪೂರ್ವಜರನ್ನು ಸ್ಮರಿಸುವುದಕ್ಕೂ ನಾಗಬ್ರಹ್ಮನ ಕಲ್ಪನೆಗೂ ಸಂಬಂಧವಿದ್ದಂತಿದೆ” ಎಂದು ಬನ್ನಂಜೆ ಬಾಬು ಅಮೀನ್ ಅಭಿಪ್ರಾಯಪಟ್ಟಿದ್ದಾರೆ.


ತುಳುನಾಡಿನ ನಾಗಬನಗಳಲ್ಲಿನ ನಾಗಶಿಲ್ಪಗಳಲ್ಲಿ ಕೆಲವು ನಾಗಬ್ರಹ್ಮನ ಪರಿಕಲ್ಪನೆಯನ್ನು ಅಭಿವ್ಯಕ್ತಿಸುತ್ತವೆ. ಎಣ್ಮೂರಿನ ಆದಿ ಗರಡಿಯ ಸಮೀಪದಲ್ಲಿರುವ ನಾಗಶಿಲ್ಪದಲ್ಲಿ ತಂಬೂರಿ ಹಿಡಿದ ನಾಗಬ್ರಹ್ಮನಿದ್ದಾನೆ. ಉಜಿರೆಯ ಕೇಲಂಗಿಮನೆಯ ಪ್ರಾಚೀನ ನಾಗಬನದಲ್ಲಿ ಸೊಂಟದ ಮೇಲ್ಭಾಗದ ಮನುಷ್ಯಾಕೃತಿಯ ತಲೆಯ ಸುತ್ತ ನಾಗಹೆಡೆಗಳಿರುವ ಸೊಂಟದ ಕೆಳಭಾಗದಲ್ಲಿ ಸರ್ಪಾಕೃತಿ ಇರುವನಾಗಶಿಲ್ಪವಿದೆ  ನಿಡಿಗಲ್ಲು ಆಲಡೆಯಲ್ಲಿ ಮೇಲ್ಭಾಗ ಮನುಷ್ಯ, ಕೆಳಭಾಗದಲ್ಲಿ ನಾಗಾಕಾರ ಶಿಲ್ಪದ ಒಂದು ಬದಿಯಲ್ಲಿದ್ದರೆ, ಹಿಂಬದಿಯಲ್ಲಿ ನಾಗಮಂಡಲದ ಪವಿತ್ರ ಬಂಧದ ರಚನೆಯಿದೆ. ಅನಂತಾಡಿ ನಾಗಬನದಲ್ಲಿ ನಾಗನಿಗೆ ಸಾಮಾನ್ಯ ಒಂದು ಕಲ್ಲು ಇದೆ. ಆದರೆ ಬ್ರಹ್ಮರೆಂದು ಹಳೆಯ ಮಣ್ಣಿನ ಮಡಿಕೆಗಳಿವೆ. ಚೌಕಾರುಗುತ್ತಿನಲ್ಲಿ ಬೆರ್ಮೆರ್ ಎಂದು ಒಂದು ಮುರಕಲ್ಲನ್ನು ಆರಾಧಿಸುತ್ತಾರೆ ಕವತ್ತಾರು ಆಲಡೆಯಲ್ಲಿ ನಾಗನಿಗೆ ಸಣ್ಣಮಂಟಪ ಇದೆ. ಇದರ ಒಳಗೆ ಹೆಡೆ ತೆರೆದ ನಾಗಶಿಲ್ಪವಿದೆ. ಅಲ್ಲಿಯೇ ಪಕ್ಕದಲ್ಲಿ ಬೆರ್ಮರ ಮಾಡ ಇದೆ. ಇದರ ಒಳಗೆ ಒಂದು ಚೌಕಾಕಾರದ ಮುರಕಲ್ಲು ಇದೆ. ಇದನ್ನೇ ‘ಬ್ರಹ್ಮ’ ಎಂದು ಹೇಳುತ್ತಾರೆ. © ಡಾ.ಲಕ್ಷ್ಮೀ ಜಿ ಪ್ರಸಾದ್


ಹೀಗೆ ಕೆಲವೆಡೆ ನಾಗನ ಕಲ್ಲುಗಳು, ಕೆಲವೆಡೆ ನಾಗಶಿಲ್ಪಗಳು, ಇನ್ನು ಕೆಲವೆಡೆ ನಾಗಬ್ರಹ್ಮ ಶಿಲ್ಪಗಳು ಆರಾಧನೆಗೊಳ್ಳುತ್ತವೆ. ಕೆಲವೆಡೆ ಬ್ರಹ್ಮರಿಗೆ ತೆಂಗಿನಕಾಯಿ ಮೂಲಕ ಸಂಕಲ್ಪವಿದ್ದರೆ, ಕೆಲವೆಡೆ ‘ಬ್ರಹ್ಮ’ರಿಗೆ ಕಲ್ಲುಗಳು ಇವೆ. ಗರಡಿಗಳಲ್ಲಿ ಬ್ರಹ್ಮರ ಮೂರ್ತಿಗಳಿವೆ. ಇಲ್ಲಿ ನಾಗಬೆರ್ಮೆರ್ ಎಂದು ಹೇಳುವುದಿಲ್ಲ. ಆಲಡೆಗಳಲ್ಲಿ ಬ್ರಹ್ಮಲಿಂಗೇಶ್ವರ ಎನ್ನುತ್ತಾರೆ.

ಬೆರ್ಮೆರ್ ಕಾಲಾಂತರದಲ್ಲಿ ಬ್ರಹ್ಮ ಲಿಂಗೇಶ್ವರನಾಗಿ ಆರಾಧನೆ ಪಡೆದಿದ್ದಾನೆ.ಬ್ರಹ್ಮ ಲಿಂಗೇಶ್ವರ ಎಂಬ ಹೆಸರು ಆಗಮ ಶಾಸ್ತ್ರದಲ್ಲಿ ಮೊದಲು ಇರಲಿಲ್ಲ ಎಂದು ವಿದ್ವಾಂಸರಾದ ಹಿರಣ್ಯ ವೆಂಕಟೇಶ್ವರ ಭಟ್ ಅವರು ತಿಳಿಸಿದ್ದಾರೆ 


 ಆದರೂ ಆಲಡೆಗಳಲ್ಲಿ ಆದಿ ಆಲಡೆ, ಆದಿಬ್ರಹ್ಮಸ್ಥಾನಗಳಲ್ಲಿ ಹುತ್ತದ ಬೆರ್ಮರ ಆರಾಧನೆ ಇದೆ. ಕೆಲವು ಬ್ರಹ್ಮಸ್ಥಾನಗಳಲ್ಲಿ ಹಾಗೂ ಗರಡಿಗಳಲ್ಲಿ ಕೇವಲ ಬ್ರಹ್ಮಗುಂಡ ಮಾತ್ರ ಇರುತ್ತದೆ. “ಕಲ್‍ಡ್‍ನಾಗೆ ಪುಂಚೊಡು ಸರ್ಪ ಗುಂಡೊಡು ಬೆರ್ಮೆರ್. ಕಲ್ಲಿನಲ್ಲಿ ನಾಗ, ಹುತ್ತದಲ್ಲಿ ಸರ್ಪ, ಗುಂಡದಲ್ಲಿ ಬೆರ್ಮೆರ್ ನೆಲೆಯಾಗುತ್ತಾರೆ ಎಂದು ಹೇಳಿದೆ. “ಆ ನಾಗೆರ್ಲೆನ್ ಬೆರ್ಮೆರೆನ್ ನಿರ್ಮಿಯೆರ್ ದೇವೆರ್ ಎಡದಿಕ್ಕುಡು ಬೆರ್ಮೆರ್ ಬಲದಿಕ್ಕುಡು ...” (ಆ ನಾಗಗಳನ್ನು ಬೆರ್ಮೆರನ್ನು ನಿರ್ಮಿಸಿದರು, ದೇವರ ಎಡದಿಕ್ಕಿನಲ್ಲಿ ಬೆರ್ಮರ್ ಬಲದಿಕ್ಕಿನಲ್ಲಿ ... ) ಎಂಬ ಪಾಡ್ದನದ ಹೇಳಿಕೆಯಲ್ಲಿ ನಾಗ ಮತ್ತು ಬೆರ್ಮರ್ ಬೇರೆ ಬೇರೆ ಎರಡು ಶಕ್ತಿಗಳು ಎಂದು ಹೇಳಲಾಗಿದೆ.


ಕಾಪು ಬ್ರಹ್ಮಲಿಂಗೇಶ್ವರದೇವರ ಗರ್ಭಗುಡಿಯ ಎಡಭಾಗದ ಮೂಲ ಬ್ರಹ್ಮಸ್ಥಾನವೆಂದು ಕರೆಯಲ್ಪಡುವ ಬನದಲ್ಲಿ ಬ್ರಹ್ಮನ ಉದ್ಭವ ಶಿಲೆ ಇದೆ. ಇಲ್ಲಿ ನಾಗಶಿಲೆ ಇಲ್ಲ.


ಪಡುಪೆರಾರದ ಬ್ರಹ್ಮಬಲವಾಂಡಿ ದೇವಸ್ಥಾನದ ಮೂಲಬ್ರಹ್ಮಸ್ಥಾನವೆಂದು ಹೇಳುವ ಬನದಲ್ಲಿ ಬ್ರಹ್ಮನ ಉದ್ಭವವಾದ ಕಲ್ಲು ಇದೆ. ಇಲ್ಲಿ ನಾಗನಿಗೆ ಅಸ್ತಿತ್ವವಿಲ್ಲ. ಅಲ್ಲಿ ಸ್ವಲ್ಪ ದೂರದಲ್ಲಿರುವ ನಾಗಬನ ಇತ್ತೀಚೆಗೆ ನಿರ್ಮಿಸಲ್ಪಟ್ಟುದು ಎಂದು ಅಲ್ಲಿಯವರು ಹೇಳುತ್ತಾರೆ. ಅಲ್ಲಿನ ತಂತ್ರಿಗಳ ಪ್ರಕಾರ ಅಲ್ಲಿಯ ‘ಬ್ರಹ್ಮ’ ಭೂತಬ್ರಹ್ಮ, ನಾಗಬ್ರಹ್ಮನಲ್ಲ.


ಕೋಟಿಚೆನ್ನಯರ ಪಾಡ್ದನದ ಆದಿಯಲ್ಲಿ ಬರುವ ಬೆರ್ಮರ ವರ್ಣನೆ ಅಲೌಕಿಕವಾದುದು ಆಗಿದೆ. ಆದರೆ ಆ ಬೆರ್ಮರಿಗೆ ನಾಗನ ಹೆಡೆ ಇರುವ ಬಗ್ಗೆಯಾಗಲಿ ನಾಗಬ್ರಹ್ಮ ಶಿಲ್ಪಗಳಲ್ಲಿರುವಂತೆ, ಸೊಂಟದಿಂದ ಕೆಳಭಾಗ ಸರ್ಪಾಕಾರ ಇರುವ ಬಗ್ಗೆಯಾಗಲೀ ವರ್ಣನೆ ಇಲ್ಲ. ಒಂದೆರಡು ಪಾಡ್ದನಗಳಲ್ಲಿ ಕೋಟಿಚೆನ್ನಯರಿಗೆ ಕೆಮ್ಮಲೆಯಲ್ಲಿ ಕಾಣಿಸಿದ ಬೆರ್ಮರ್ ಕುದುರೆಏರಿದ ವೀರನಾಗಿ ಚಿತ್ರಿತನಾಗಿದ್ದಾನೆ. ಹೆಚ್ಚಿನ ಪಾಡ್ದನಗಳಲ್ಲಿ ವೀಳ್ಯದೆಲೆಯಷ್ಟು ತೆಳುವಾಗಿ, ತೆಂಗಿನಮರದಷ್ಟು ಎತ್ತರವಾಗಿ, ಆಲದಷ್ಟು ಅಗಲವಾಗಿ, ಅಡಿಕೆಯಷ್ಟು ಉರುಟಾಗಿ ಕಾಣಿಸಿದ ಬ್ರಹ್ಮನ ವರ್ಣನೆ ಇದೆ. ಇಲ್ಲಿ ಬ್ರಹ್ಮನಿಗೆ ಮನುಷ್ಯನ ಆಕಾರವನ್ನು ಸೂಚಿಸಿಲ್ಲ. ಆದರೆ ಮೊದಲು ಬೆರ್ಮರ ಉದೀಪನದ ಸಂದರ್ಭದಲ್ಲಿ ವರ್ಣಿಸಲ್ಪಟ್ಟ ಬ್ರಹ್ಮನಿಗೆ ಏಳುತಲೆಯ ಸತ್ತಿಗೆ, ಹಾಗೂ ಜನಿವಾರಗಳನ್ನು ಹೇಳಿದ್ದು ಇದು ರಾಜಪುರುಷನನ್ನು ಸೂಚಿಸುತ್ತದೆ. ಎಡದಲ್ಲಿ ಕರಿಯ ಸಂಕಮಾಲ, ಬಲಬದಿಯಲ್ಲಿ ಬಿಳಿಯ ಸಂಕಮಾಲ ಇರುವ ಬಗ್ಗೆ ಹೇಳಿದೆ. ಕರಿಯ ಸಂಕಮಾಲ ಮತ್ತು ಬಿಳಿಯ ಸಂಕಮಾಲರನ್ನು ಸರ್ಪಗಳೆಂದೂ, ನಾಗರಾಜರೆಂದೂ ಪರಿಗಣಿಸಲಾಗಿದೆ. ಈ ವರ್ಣನೆಯನ್ನು ಕಪ್ಪು ಶಂಖಗಳ ಹಾಗೂ ಬಿಳಿ ಶಂಖಗಳ ಮಾಲೆ ಎಂದೂ ಕೆಲವರು ಅರ್ಥೈಸಿದ್ದಾರೆ.


ಕಂಡೇವು ಬೀಡಿನ ಬನದಲ್ಲಿ ಕರಿಯ ಸಂಕಪಾಲ ಹಾಗೂ ಬಿಳಿಯ ಸಂಕಪಾಲರ ನಾಗಬನಗಳಿವೆ. ತುಳುನಾಡಿನ ಕೆಲವೆಡೆ ಸಂಕಪಾಲ ಸುಬ್ರಹ್ಮಣ್ಯ ದೇವಾಲಯಗಳಿವೆ. ಏನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಗರ್ಭಗುಡಿಯಲ್ಲಿ ಒಂದು ಹುತ್ತ ಅದರ ಎದುರು ಒಂದು ನಾಗಪ್ರತಿಮೆ ಇಟ್ಟು ಶಂಖಪಾಲ ಸುಬ್ರಹ್ಮಣ್ಯನೆಂದು ಪೂಜಿಸುತ್ತಾರೆ. ಇಲ್ಲಿ ನಾಗಪ್ರತಿಮೆ ‘ಶಂಖಪಾಲ’ನನ್ನು ಪ್ರತಿನಿಧಿಸುತ್ತದೆ. ಎಡಬಲಗಳಲ್ಲಿ ಸಂಕಪಾಲರಿರುವ ವರ್ಣನೆ ಎಲ್ಲ ಪಾಡ್ದನಗಳಲ್ಲಿ ಕಾಣಿಸುವುದಿಲ್ಲ. ಸಂಕಮಾಲ/ಸಂಕಪಾಲರ ಪ್ರಸ್ತಾಪವಿರುವಲ್ಲಿ ಕೂಡ ಬೆರ್ಮೆರ್ ಮತ್ತು ಸಂಕಪಾಲರು ಬೇರೆ ಬೇರೆ ಎಂಬ ಚಿತ್ರಣವಿದೆ. ಬೆರ್ಮರ್ ಎಡಬಲದಲ್ಲಿ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರಿದ್ದಾರೆ ಎಂಬ ವರ್ಣನೆ ಇದೆಯೇ ಹೊರತು ನಾಗಬೆರ್ಮರ್ ತಾದಾತ್ಯ್ಮವಿಲ್ಲ.


ಸಿರಿಯ ಪಾಡ್ದನದಲ್ಲಿ ಬೆರ್ಮರ ಸ್ವರೂಪದ ಬಗ್ಗೆ ಮಾಹಿತಿ ಸಿಗುವುದಿಲ್ಲ. ಕಾಡಿನಲ್ಲಿರುವ ಬೆರ್ಮರನ್ನು ತಂದು ಏಳದೆ ಗುಂಡ ನಿರ್ಮಿಸುವ ಬಗ್ಗೆ ಮಾತ್ರ ಹೇಳಲಾಗಿದೆ. 

ಏಕಸಾಲೆರ್ ದೆಯ್ಯಾಋ ದಂಪತಿಯ ಮಗನಾಗಿ ಹುಟ್ಟುವ ಬೆರ್ಮೆರ್ ಗೆ ಚಕ್ರವರ್ತಿಯ ವಿಶಿಷ್ಟ ಲಕ್ಷಣಗಳಿವೆ 

ಲಿ ಬೆರ್ಮರಿಗೆ ರಾಜಪುರುಷನ ವರ್ಣನೆ ಇದೆ 


ಬೆರ್ಮರ ಪ್ರಸ್ತಾಪವಿರುವ ಪಾಡ್ದನಗಳಲ್ಲಿ ಸಿರಿಪಾಡ್ದನ ಪ್ರಾಚೀನವಾದುದು.


ಇದರಿಂದ ಸಿರಿಪಾಡ್ದನದ ಕಾಲದಲ್ಲಿ ಬೆರ್ಮೆರಿಗೆ ಪುರುಷ ರೂಪದ ಪರಿಕಲ್ಪನೆ ಇರಲಿಲ್ಲ ಎಂದು ತಿಳಿಯುತ್ತದೆ. ಬೆರ್ಮರಿಗೆ ಗುಂಡ ಕಟ್ಟುವ ಸಂಪ್ರದಾಯ ಬಹುಶಃ ಈ ಕಾಲದಲ್ಲಿ ಆರಂಭವಾಗಿರಬೇಕು. ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಕಟ್ಟಿರುವ ಪ್ರಸ್ತಾಪ ಈ ಪಾಡ್ದನದಲ್ಲಿದೆ. ಕಾಡಿನಲ್ಲಿ ‘ಬೆರ್ಮೆರ್’ ಯಾವ ರೂಪದಲ್ಲಿ ಇದ್ದ? ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕಾಡಿನಲ್ಲಿ ಪಾಳು ಬಿದ್ದ ಬ್ರಹ್ಮಸ್ಥಾನದ ಸ್ಥಳದಿಂದ ಮಣ್ಣನ್ನು ತಂದು ಗುಂಡದೊಳಗೆ ಪ್ರತಿಷ್ಠಾಪಿಸಿರಬಹುದೇ? ಇಂದಿಗೂ ಕೋಳ್ಯೂರು ಬೈಲಿನಲ್ಲಿ ಪೂಕರೆಯ ದಿನ ಒಂದು ಮುಷ್ಠಿ ಮಣ್ಣನ್ನು ಹಿಂಗಾರದೊಂದಿಗೆ ಬಾಳೆಕುಡಿಯ ಮೇಲಿಟ್ಟು ಗಣಪತಿ ಎಂದು ಸಂಕಲ್ಪಿಸುತ್ತಾರೆ. ಇಲ್ಲಿಬ್ರಹ್ಮರನ್ನು ‘ಗಣಪತಿ’ ಎಂದು ಹೇಳುತ್ತಾರೆ ಎಂದು ಅಲ್ಲಿನ ಹಿರಿಯರಾದ ನಾರಾಯಣಭಟ್ಟರು ಹೇಳುತ್ತಾರೆ. ಕೋಳ್ಯೂರಿನ ಶಂಕರನಾರಾಯಣ ದೇವಸ್ಥಾನ ಬ್ರಹ್ಮ-ವಿಷ್ಣು-ಶಿವರೆಂಬ ತ್ರಿಮೂರ್ತಿಗಳ ದೇವಸ್ಥಾನವಾಗಿದೆ. ಇಲ್ಲಿ ಬ್ರಹ್ಮನ ಬದಲಿಗೆ ಗಣಪತಿಯನ್ನೇ ಆರಾಧಿಸುವ ಪದ್ಧತಿಯಿದೆ.


ಬ್ರಹ್ಮಸ್ಥಾನಗಳು ಕಾಡಿನಲ್ಲಿ ಇರುತ್ತವೆ. ವರ್ಷದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಆರಾಧಿಸುತ್ತಾರೆ. ಬೆರ್ಮೆರ ಕಲ್ಲುಗಳು ಬನದಲ್ಲಿ ಇರುತ್ತದೆ. ಕಾಲಾಂತರದಲ್ಲಿ ಕಲ್ಲುಗಳ ಮೇಲೆ ಹುತ್ತ ಬೆಳೆದಾಗ, ಹುತ್ತವನ್ನು ಕೀಳುವ ಧೈರ್ಯ ಯಾರಿಗೂ ಇರುವುದಿಲ್ಲ. ಕವತ್ತಾರು ಆಲಡೆಯಲ್ಲಿ ಬ್ರಹ್ಮಲಿಂಗೇಶ್ವರ ಗರ್ಭಗುಡಿಯ ಎದುರು ಭಾಗದಲ್ಲಿ ಬ್ರಹ್ಮದೇವರ ಸಣ್ಣಗುಡಿಯೊಂದಿದ್ದು ಅದರಲ್ಲಿ ಬ್ರಹ್ಮರ ಪ್ರತೀಕವಾಗಿ ಒಂದು ಚೌಕಾಕಾರದ ಮುರಕಲ್ಲು ಇದೆ. ಇದರ ಮೇಲೆ ಈಗ ಹುತ್ತ ಬೆಳೆಯುತ್ತಿದ್ದು, ಈ ಹುತ್ತವನ್ನು ಕೀಳಬಾರದು ಎಂದು ಅಲ್ಲಿನ ಅರ್ಚಕರು ಹೇಳುತ್ತಾರೆ.


ಕಾಲಾಂತರದಲ್ಲಿ ಹೀಗೆ ಬೆಳೆದ ಹುತ್ತಗಳು ನಾಗನ ಆವಾಸಸ್ಥಳಗಳಾಗುತ್ತವೆ. ತುಳುನಾಡಿನಲ್ಲಿ ನಾಗಾರಾಧನೆ ಪ್ರಚಲಿತವಿದೆ. ಇದರ ಪ್ರಭಾವದಿಂದಾಗಿ ಬ್ರಹ್ಮಸ್ಥಾನದ ಹುತ್ತಗಳಲ್ಲಿ ಬೆರ್ಮೆರ್ ಜೊತೆಗೆ ನಾಗನ ಆರಾಧನೆ ಪ್ರಾರಂಭವಾಯಿತು. ಕಾಲಾಂತರದಲ್ಲಿ ನಾಗ ಮತ್ತು ಬೆರ್ಮೆರ್ ನಡುವಿನ ಅಂತರ ಅಳಿಸಿಹೋಗಿ ನಾಗಬ್ರಹ್ಮರಿಗೆ ಏಕಾತ್ಮತೆ ಉಂಟಾಗಿದೆ ಎನ್ನಬಹುದು

© ಡಾ.ಲಕ್ಷ್ಮೀ ಜಿ ಪ್ರಸಾದ


ಕನ್ನಡ ಉಪನ್ಯಾಸಕರು


ಸರ್ಕಾರಿ  ಪದವಿ ಪೂರ್ವ ಕಾಲೇಜು ಬೆಂಗಳೂರು


ಮೊಬೈಲ್ :9480516684


E mail: samagramahithi@gmail.com


Blog:http://laxmipras.blogspot.com


 


(ಲೇಖಕರ ಕಿರು ಪರಿಚಯ

ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಖ್ಯಾತಿಯ ಲೇಖಕಿ ಡಾ.ಲಕ್ಷ್ಮೀ ಜಿ ಪ್ರಸಾದ್


ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ -ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ವಿಷಯದಲ್ಲಿ ಹಂಪಿ ವಿಶ್ವ ವಿದ್ಯಾಲಯದಿಂದ ಪಿಎಚ್. ಡಿ ಪದವಿ ಪುರಸ್ಕೃತ ಹಾಗೂ ಕನ್ನಡ ,ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಕಾಸರಗೋಡಿನ ಕೋಳ್ಯೂರು ಮೂಲದ ಗಡಿನಾಡ ಕನ್ನಡತಿ ಡಾ.ಲಕ್ಷ್ಮೀ ಜಿ ಪ್ರಸಾದ ಈಗ ತಮ್ಮ ಎರಡನೆಯ ಪಿಎಚ್.ಡಿ ಪದವಿಗಾಗಿ ಸಂಶೋಧನಾ ಮಹಾ ಪ್ರಬಂಧಕ್ಕಾಗಿ  ದ್ರಾವಿಡ ವಿಶ್ವ ವಿದ್ಯಾಲಯದಿಂದ ಎರಡನೇ ಪಿಎಚ್ ಡಿ ಪದವಿ ಪಡೆದಿದ್ದಾರೆ  ,ಕರಾವಳಿಯ ಸಾವಿರದೊಂದು ದೈವಗಳ ಗ್ರಂಥ ಸೇರಿದಂತೆ 25 ಪುಸ್ತಕಗಳು ಮತ್ತು ಆರು ನೂರಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ )


ತುಳುವರ ಅಧಿದೈವ ಬೆರ್ಮೆರ್ 

ಚಿತ್ರ ಕೃಪೆ: ಶಶಾಂಕ್ ನೆಲ್ಲಿತ್ತಾಯ

ನನ್ನ ಮೊದಲ ಪಿಎಚ್ ಡಿ ಥೀಸಿಸ್ ತುಳುನಾಡಿನ ನಾಗ ಬ್ರಹ್ಮ ( ಬೆರ್ಮೆರ್ ) ಮತ್ತು ಕಂಬಳ- ಒಂದು ವಿಶ್ಲೇಷಣಾತ್ಮಕ ನೋಟ

ಬೆರ್ಮೆರ್ ಕುರಿತಾಗಿ ಸಂಕ್ಷಿಪ್ತ ಮಾಹಿತಿ ಈ ಹಿಂದೆ ಚಿತ್ರಲೋಕ ಯು ಟ್ಯೂಬ್ ನಲ್ಲಿ ನಾನು ನೀಡಿದ್ದು ಇದೆ

https://youtu.be/Zj4TW1BVzxg?si=yRKnftjnCo3azYko

.

Monday, 26 May 2025

ನಮ್ಮ ಹೆಮ್ಮೆಯ ಓದುಗರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ #ನಮ್ಮಹೆಮ್ಮೆಯಓದುಗರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬೆಳ್ತಂಗಡಿ ಮೂಲದ ಅಶೋಕ್ ಅವರು ನಮ್ಮ ಮನೆಗೆ ಬಂದು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಎರಡು ಪ್ರತಿಗಳನ್ನು ತಗೊಂಡು ಹೋಗಿದ್ದಾರೆ ನಮಗೆ ಓದುಗರದೇ ಶ್ರೀ ರಕ್ಷೆ..

 


ನಮ್ಮ ಹೆಮ್ಮೆಯ ಓದುಗರು  ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್  #ನಮ್ಮಹೆಮ್ಮೆಯಓದುಗರು  ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಬೆಳ್ತಂಗಡಿ ಮೂಲದ ಅಶೋಕ್ ಅವರು ನಮ್ಮ ಮನೆಗೆ ಬಂದು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಎರಡು ಪ್ರತಿಗಳನ್ನು ತಗೊಂಡು ಹೋಗಿದ್ದಾರೆ  ನಮಗೆ ಓದುಗರದೇ ಶ್ರೀ ರಕ್ಷೆ..

Saturday, 24 May 2025

ನಮ್ಮ ಹೆಮ್ಮೆಯ ಓದು ಮಿತ್ರರು ವಿನಯ್ ಭಾಗವತ್ ಮತ್ತು ಪಾವನಾ ಭಾಗವತ್

 ನಮ್ಮ ಹೆಮ್ಮೆಯ ಓದು ಮಿತ್ರರು 

ವಿನಯ್ ಭಾಗವತ್ ಮತ್ತು ಪಾವನಾ ಭಾಗವತ್


 

ಭೂಮಿ‌ ಉರುಟಾಗಿದೆ ..ಬದುಕಿನ ಕೆಲವು ಅಚ್ಚರಿಗಳ ಬಗ್ಗೆ ಸೋಜಿಗ ಉಂಟಾಗುತ್ತದೆ.

ಬರಹಗಾರರಿಗೆ ಸಹೃದಯಿ ಓದುಗರು ಬಹಳ ಆಪ್ತರು..ಇದಕ್ಕೆ ನಾನು ಕೂಡ ಹೊರತಲ್ಲ.ಇಂದು ಯುವ ಜನತೆ ಪುಸ್ತಕ ಕಡೆಗೆ ತಿರುಗಿಯೂ ನೋಡುದಿಲ್ಲ ಎಂಬ ಮಾತಿದೆ.ಆದರೆ ಇದನ್ನು ಪೂರ್ತಿಯಾಗಿ ಒಪ್ಪಲಾಗದು 

 ಒಳ್ಳೆಯ ಪುಸ್ತಕವನ್ನು  ಓದುವವವರೂ ಇದ್ದಾರೆ ಎಂಬುದು ಸಮಾಧಾನದ ವಿಚಾರ ..

ಅದಿರಲಿ.ಈಗ ವಿಷಯಕ್ಕೆ ಬರುವೆ

ನನ್ನ ಅಣ್ಣನ ಒಂದು ಸೈಟ್ ಕೆಂಗೇರಿ ಶ್ರೀಧರ ಗುಡ್ಡದ ಸಮೀಪದ ಇದೆ.ಇದರ ಇ ಖಾತೆ ಮಾಡಿಸಲು ಸೈಟಿನ GPS location taged photo ಬೇಕಾಗಿತ್ತು .ಹಾಗೆ ಅಣ್ಣ ಕೊಟ್ಟ ಲೊಕೇಶನ್ ಆಧರಿಸಿ ಅ ಪರಿಸರಕ್ಕೆ ಮೊನ್ನೆ ಹೋಗಿದ್ದೆ.

ಆದರೆ ನಮಗೆ ಸೈಟ್ ಯಾವುದು ಎಂದು ಗೊತ್ತಾಗಲಿಲ್ಲ.ಅಣ್ಣ ಅಲ್ಲಿನ ವಿನಯ ಭಾಗವತ್ ಎಂಬವರ ನಂಬರ್ ಕೊಟ್ಟಿದ್ದು ಅವರಿಗೆ ಕರೆ ಮಾಡಿದೆ 

ಅವರ ಮನೆ ಪಕ್ಕದ ಸೈಟ್ ಅಣ್ಣಂದು.ಅವರು ಕರೆ ಮಾಡಿದಾಗ ಮಾಹಿತಿ ಕೊಟ್ಟರು.ಅವರ ಮನೆಗೆ ಹೋದೆ ಅವರು ಮತ್ತು ಅವರ ಮಡದಿ ಪಾವನಾ ಅವರು ಹೊರಗಡೆ ಹೋಗಿದ್ದರು. ಹಿರಿಯರಾದ ಅವರ ತಂದೆ ತಾಯಿಯರು ಇದ್ದರು.ಅವರಲ್ಲಿ ಮಾತನಾಡಿ ಜ್ಯೂಸ್ ಕುಡಿದು ಅಣ್ಣನ ಸೈಟಿನ GPS location taged photo ತಗೊಂಡು ಹಿಂದೆ ಬಂದಿದ್ದೆ

ನಂತರ ಆ ಪರಿಸರದ ಸೈಟ್ ನ ಟ್ಯಾಕ್ಸ್ ಎಲ್ಲಿ ಕಟ್ಟುದು  ಎಂಬ ಮಾಹಿತಿಯನ್ನು ವಿನಯ ಭಾಗವತ್ ಅವರಿಗೆ ವಾಟ್ಸಪ್  ಮೆಸೇಜ್ ಮೂಲಕ ಕೇಳಿದ್ದೆ  .

 ಫೋನ್ ಮಾಡಿದಾಗ ನಾನು ಲಕ್ಷ್ಮೀ ಜಿ ಪ್ರಸಾದ್, ಕೃಷ್ಣ ಭಟ್ ಅವರ ತಂಗಿ ಎಂದು ಹೇಳಿದ್ದೆ 

ವಾಟ್ಸಪ್ ನೋಡಿದಾಗ  ಬಹುಶಃ DP ಯಲ್ಲಿ ನನ್ನ ಅಧ್ಯಯನ ಕುರಿತಾದ ಒಂದು ಲೇಖನ ಇದೆ ಅದನ್ನು ಗಮನಿಸಿದಾಗ ಅವರ ಮಡದಿ ಪಾವನಾ ಅವರಿಗೆ ನಾನು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕದ ಲೇಖಕಿ ಲಕ್ಷ್ಮೀ ಜಿ ಪ್ರಸಾದ್ ಎಂದು ಗೊತ್ತಾಯಿತು

ಪಾವನಾ ಅವರು ಕನ್ನಡ ಎಂಎ ಪದವೀಧರರಾಗಿದ್ದು  ಅಲ್ಲಿಯೇ ಸಮೀಪದ ಚಿನ್ಮಯ ವಿದ್ಯಾಲಯದಲ್ಲಿ ಶಿಕ್ಷಕಿ ಆಗಿದ್ದು  ಒಳ್ಳೆಯ ಪುಸ್ತಕಗಳನ್ನು ಓದುವ ಸದಭಿರುಚಿ ಹೊಂದಿದ್ದಾರೆ . ಅಂತೆಯೇ ಎರಡು ವರ್ಷಗಳ ಮೊದಲು ಮಂಗಳೂರಿಗೆ ಹೋಗಿದ್ದಾಗ ಅಲ್ಲಿನ ಪುಸ್ತಕ ಮಳಿಗೆಯಿಂದ ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥವನ್ನು ಖರೀದಿಸಿ ಓದಿದ್ದರು.

ಇದು ತಿಳಿದ ನಂತರ ಕರೆ ಮಾಡಿದ್ದರು,ನನಗೂ ಬಹಳ ಖುಷಿ ಆಯಿತು  ಸುಮಾರು ಹೊತ್ತು ಮಾತನಾಡಿದೆವು 

ನಂತರ ಅವರ ಅಭಿಪ್ರಾಯವನ್ನು ಬರೆದು ಕಳುಹಿಸಿದ್ದು ಅದನ್ನು ಇಲ್ಲಿ ಹಾಕಿದ್ದೇನೆ 


ನಾನು   ಡಾ. ಲಕ್ಷ್ಮಿ ಜಿ. ಪ್ರಸಾದ್   ರವರು ಬರೆದಂತಹ   "ಕರಾವಳಿಯ ಸಾವಿರದೊಂದು ದೈವಗಳು" ಪುಸ್ತಕವನ್ನು  ಖರೀದಿಸಿ ಓದಿರುವೆ. ಇದರಲ್ಲಿ ದೈವಗಳ  ಬಗ್ಗೆ ಸವಿವರವಾದ ಮಾಹಿತಿ, ಅವುಗಳ ಇತಿಹಾಸ, ಚಿತ್ರಗಳೊಂದಿಗೆ  ಪರಿಪೂರ್ಣವಾಗಿ ಮೂಡಿ ಬಂದಿದೆ. ಹಾಗೆಯೇ, ಈ ಪುಸ್ತಕವನ್ನು ಓದುವಾಗ ಲೇಖಕರು  ದೈವಗಳ  ಪರಿಶೋಧನೆಯಲ್ಲಿ ಪಟ್ಟಂತಹ ಪರಿಶ್ರಮ, ದೈವಗಳ ಬಗ್ಗೆ ಅವರಿಗಿರುವ  ಆಸಕ್ತಿ ತಿಳಿದು ಬರುತ್ತದೆ ಹಾಗೂ  ಓದುಗರಿಗೆ ಈ ಪುಸ್ತಕವನ್ನು ಓದುವಾಗ  ಎಲ್ಲೂ ಸಹ ಬೇಜಾರಾಗದಂತೆ  ಸಚಿತ್ರದೊಂದಿಗೆ ಬರೆದಿಟ್ಟು ಕೊಟ್ಟಿದ್ದಾರೆ.  ಇಂತಹ ಒಳ್ಳೆಯ ಪುಸ್ತಕವನ್ನು ಕನ್ನಡನಾಡಿಗೆ  ನೀಡಿದಂತಹ  ಲೇಖಕರಾದ ಡಾ. ಲಕ್ಷ್ಮಿ ಜಿ. ಪ್ರಸಾದ್ ನನಗೆ ಬಗ್ಗೆ ಹೆಮ್ಮೆ ಅನ್ನಿಸಿತು. 

   ಹೀಗೆ  ಇವರಿಂದ  ಆಸಕ್ತಿದಾಯಕವಾದ ಮಾಹಿತಿಗಳು ಇನ್ನು ಹೆಚ್ಚು ಹೆಚ್ಚು ಓದುಗರಿಗೆ ದೊರಕುವಂತಾಗಲಿ ಎಂದು ಆಶಿಸುತ್ತೇನೆ.

- ಪಾವನಾ ಭಾಗವತ್

Sunday, 18 May 2025

ನಮ್ಮ ಹೆಮ್ಮೆಯ ಓದುಗ ಮಿತ್ರರು - ನೀತಾ ಶೆಟ್ಟಿ


 

ನಮ್ಮ ಹೆಮ್ಮೆಯ ಓದುಗ ಮಿತ್ರರಲ್ಲಿ ಎಳೆಯ ವಯಸ್ಸಿನವರಾದ ನೀತಾ ಶೆಟ್ಟಿ ,ಈ ವರ್ಷ ಪಿಯುಸಿ ಓದಿ ಸಿಇಟಿ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿನಿ..
ಇಂದಿನ ಯುವಕರಿಗೆ ಓದುವ ಹವ್ಯಾಸ ಇಲ್ಲ ಎಂಬುದು ಬರಹಗಾರರ ಕೊರಗು..ಸದಾ ಮೊಬೈಲ್ ರೀಲ್ ಗೇಮ್ ಗಳನ್ನು ಆಡುವ ಯುವಕರ ನಡುವೆ ನೀತಾ ಶೆಟ್ಟಿ ವಿಶಿಷ್ಟರಾಗಿ ಕಾಣಿಸುತ್ತಾರೆ.
ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್

Friday, 16 May 2025

ನಮ್ಮ ಹೆಮ್ಮೆಯ ಓದುಗ ಮಿತ್ರರು ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ ಈವತ್ತು ನಮ್ಮ ಮನೆಗೆ ಪುಸ್ತಕಕ್ಕಾಗಿ ಬಂದರು ಭೂತಾರಾಧನೆ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಿದೆವು

 ನವೀನ್ ಶೆಟ್ಟಿ ಸಿನಿಮಾ ಎಡಿಟರ್ 

ನಮ್ಮ ಹೆಮ್ಮೆಯ ಓದುಗ ಮಿತ್ರರು

ಮಾಯ ಮತ್ತು ಜೋಗದ ಬೆಳಕಿನಲ್ಲಿ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾದ್ 


ಈವತ್ತು ನಮ್ಮ ಮನೆಗೆ ಪುಸ್ತಕಕ್ಕಾಗಿ ಬಂದರು ಭೂತಾರಾಧನೆ ಇನ್ನಿತರ ವಿಚಾರಗಳ ಬಗ್ಗೆ  ಚರ್ಚಿಸಿದೆವು



Sunday, 6 April 2025

ಹೌಂದೇರಾಯ ಆರಾಧಿಸಿದ ಪಂಜುರ್ಲಿ

 ಹೌಂದೇರಾಯನ ವಾಲಗ ಎಂಬ ಜನಪದ ಕುಣಿತ ಒಂದು ಉಡುಪಿ ಕುಂದಾಪುರ ಕಡೆ ಪ್ರಚಲಿತವಿದೆ .ಈತ ಓರ್ವ ಅರಸ ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ .ಈ ಕುಣಿತ ಬಗ್ಗೆ 

ಹೌಂದೇರಾಯನ ಕುಣಿತಕ್ಕೆ ಪ್ರಾಚೀನ ಇತಿಹಾಸವಿದೆ. ಹೌಂದೇರಾಯ ಎಂಬ ತುಂಡರಸ ಜೈನರಾಜರಿಗೆ ಸಾಮಂತನಾಗಿ ಬಾರಕೂರು ಸಂಸ್ಥಾನ ಆಳುತ್ತಿದ್ದ. ಆತನ ಆಳ್ವಿಕೆ ಜನಪರವಾಗಿತ್ತು. ಕಲಾಪ್ರಿಯನಾದ ಆತನಿಗೆ ಹೊಗಳಿಕೆ ಅಂದ್ರೆ ತುಂಬಾ ಇಷ್ಟ. ಆತನ ಹೊಗಳುವಿಕೆಗೆ ಬುದ್ಧಿವಂತ ಕರಾವಳಿ ಜನ ರೂಪಿಸಿದ ಕುಣಿತವೇ ಹೌಂದೇರಾಯನ ಕುಣಿತ. ಹೊಗಳಿಕೆಯ ಹಾಡು ನತ್ಯ ನೋಡಿದ ಹೌಂದೇರಾಯ ಇದನ್ನು ಕಡ್ಡಾಯಗೊಳಿಸಿದ. ರಾಜನನ್ನು ದೇವರೆಂದು ಕಾಣುವ ಜನರಿಂದಾಗಿ ಹೌಂದೇರಾಯನ ಕಾಲಾನಂತರವು ಕಲಾಪ್ರಕಾರ ಮುಂದುವರಿದುಕೊಂಡು ಬಂತು. ಹೌಂದೇರಾಯನ ಓಲಗ ಎಂದು ಸಹ ಕರೆಯಲ್ಪಡುವ ಈ ಹಾಡು-ನತ್ಯದಲ್ಲಿ 6 ಭಾಗಗಳಿವೆ. ಓಲಗ ಸಂಧಿ, ಬ್ಯಾಂಟಿ ಸಂಧಿ(ಬೇಟೆಯ ಹಾಡು), ಕೋಡಂಗಿ ಸಂಧಿ, ಶಿವರಾಮ ಸಂಧಿ, ಕೋಲಾಟದ ಸಂಧಿ, ಅರ್ಪಿತ ಸಂಧಿ ಎಂದು ವಿಂಗಡಿಸಲಾಗಿದೆ. ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಈ ಅಪರೂಪದ ಕಲಾಪ್ರಕಾರ ಈಗ ಅವಸಾನದ ಅಂಚಿನಲ್ಲಿದೆ. ಇದನ್ನು ಉಳಿಸಿ ಬೆಳೆಸೆಬೇಕೆಂಬ ಆಶಯದಿಂದ ಸಂಸ್ಥೆಯನ್ನು ಹುಟ್ಟು ಹಾಕಿದ್ದೇವೆ. ಯೂತ್ ಹಾಸ್ಟೆಲ್ಸ್ ಆಫ್ ಇಂಡಿಯಾ ನಡೆಸಿದ ಐಲ್ಯಾಂಡ್ ಎಕ್ಸ್‌ಪಿಡಿಶನ್ 2009ರಲ್ಲಿ ಹೌಂದೇರಾಯನ ಕುಣಿತ ಪ್ರದರ್ಶನಗೊಂಡು ಸಾರ್ವತ್ರಿಕ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಗುರುಮಾರುತಿ ಹೌಂದೇರಾಯನ ಜಾನಪದ ನತ್ಯ ತಂಡದ ಅಧ್ಯಕ್ಷರಾದ ಗುಂಡು ಪೂಜಾರಿ ಹೇಳುತ್ತಾರೆ.

 

 ಈ ಹೌಂದೇರಾಯ  ಅರಸನಿಗೆ ಸಂಬಂಧಿಸಿದಂತೆ ಐತಿಹ್ಯವೊಂದು ಪಂಜುರ್ಲಿ ದೈವದ ಮೂಲಕ್ಕೆ  ಸಂಬಂಧಿಸಿ ಪ್ರಚಲಿತವಿದೆ.

ಉಡುಪಿ ಜಿಲ್ಲೆಯಲ್ಲಿ ಸೂರಾಲು ಅರಮನೆ ಈಗಲೂ ಇದೆ.ಇಲ್ಲಿಗೆ ಸಂಬಂಧಿಸಿದಂತೆ ಕಪ್ಪಣ್ಣ ಸ್ವಾಮಿ ಎಂಬ ದೈವಕ್ಕೂ ಈ ಪರಿಸರದಲ್ಲಿ ಆರಾಧನೆ ಇದೆ 

ಸೂರಾಲಿನಲ್ಲಿ ಸುರಪುರ ಅರಸರ ಒಂದು ಕವಲು ಸ್ಥಳೀಯವಾಗಿ ಆಡಳಿತ ನಡೆಸುತ್ತಿತ್ತು.ಇತಿಹಾಸದಲ್ಲಿ ಇವರನ್ನು ತೊಳಹರು ಎಂದು ಗುರುತಿಸಲಾಗಿದೆ 

 

ಸುರಪುರದ ಅರಸರು ತಿರುಪತಿಯನ್ನು ರಕ್ಷಣೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದರು
ಸುರಪುರ ಅರಸರ ಒಂದು ಕವಲು ಸುರಾಲ ಅರಸರಾಗಿದ್ದರು  .ಸುರಾಲಿನ ಅರಸರಲ್ಲಿ ಹೌಂದೇರಾಯನೆಂಬಾತ ತಿರುಪತಿಯ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತಿದ್ದನು

ಈ ಅರಸನ  ಕಾಲದಲ್ಲಿ ನಡೆದ    ವಿದ್ಯಮಾನವಿದು

 ಒಂದು ದಿನ ಹೌಂದೆರಾಯ ತಿರುಪತಿಯಿಂದ ಸುರಾಲಿಗೆ ಬರುತ್ತಾನೆ  

.ದಾರಿಮಧ್ಯೆ ವಿಶ್ರಾಂತಿಗಾಗಿ ಬೀಡು ಬಿಟ್ಟಿದ್ದಾಗ ಒಂದು ಬಿಳಿ ಹಂದಿಮರಿ ಕಾಣಿಸುತ್ತದೆ .ಹೌಂದೆರಾಯ ಮತ್ತವನ ಪರಿವಾರದವರು ಅದನ್ನು ಬೇಟೆಯಾಡಿ ಕೊಂದು ತಿನ್ನುತ್ತಾರೆ.

ನಂತರ ಅವರಿಗೆ ಅನೇಕ ಅನಿಷ್ಟಗಳಾಗುತ್ತದೆ.ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಾರೆ 

.ಆಗ ಜ್ಯೋತಿಷರಲ್ಲಿ ಕೇಳಿದಾಗ ಆ ಬಿಳಿ ಹಂದಿ ಮರಿಯು ವರಾಹ ರೂಪಿ ವಿಷ್ಣುವಿನ ಅಂಶವನ್ನು ಪಡೆದಿದ್ದ ದೈವಿಕ ಶಕ್ತಿ.

 

ಅದನ್ನು ಕೊಂದದ್ದು ತಪ್ಪು.ಅದರ ಪರಿಹಾರಾರ್ಥವಾಗಿ ದೇವಾಲಯ ಕಟ್ಟಿಸಿ ಆರಾಧಿಸಬೇ ು ಎಂದು ಕಂಡು ಬರುತ್ತದೆ.ಹಾಗೆ 

ಹೌಂದೆ ರಾಯ ಸುರಾಲಿಗೆ ಬಂದ ನಂತರ ಮರವಂತೆಯಲ್ಲಿ ವರಾಹ ರೂಪಿ ದೇವರನ್ನು ಪ್ರತಿಷ್ಠಾಪಿಸಿ  ಆರಾಧನೆ ಮಾಡುತ್ತಾನೆ ಎಂಬ ಐತಿಹ್ಯವನ್ನು ಶ್ರೀವತ್ಸ ಪ್ರದ್ಯುಮ್ನ ಅವರು ತಿಳಿಸಿದ್ದಾರೆ.

ಹೌಂದೇರಾಯ ಓರ್ವ ತುಂಡರಸನಾಗಿದ್ದು ಜೈನರಸರ ಸಾಮಂತನಾಗಿ ಬಾರಕೂರನ್ನು ಆಳ್ವಿಕೆ ಮಾಡುತ್ತಿದ್ದ ಎಂಬ ಐತಿಹ್ಯವಿದೆ 

ಈತ ತಿರುಪತಿಗೆ ಹೋಗಿ ಹಿಂತಿರುಗಿ ಬರುವಾಗ ಈ ಘಟನೆ ನಡೆದಿರಬಹುದು.

ಪ್ರಸ್ತುತ ಮರವಂತೆಯಲ್ಲಿ ಒಂದು ವರಾಹ ದೇವಸ್ಥಾನ ಇದೆ ಇದನ್ನು ಓರ್ವ ಮಹಾರಾಜ ಯಾವುದೋ ಹತ್ಯೆಯ ದೋಷ ಪರಿಹಾರಕ್ಕಾಗಿ ಕಟ್ಟಿಸಿದ ಆದ್ದರಿಂದ ಇದನ್ನು ಮಹಾರಾಜ ಸ್ವಾಮಿ ವರಾಹ ದೇವಸ್ಥಾನ ಎಂದು ಕರೆಯುತ್ತಾರೆ 

ಬಹುಶಃ ಹಂದಿ ಮರಿಯ ಹತ್ಯೆ ಯ ನಂತರ ದೋಷಗಳು ಕಾಣಿಸಿದ್ದು ಅದರ ಪರಿಹಾರಕ್ಕಾಗಿ ಕಟ್ಟಿಸಿದ್ದು ಇರಬಹುದು 

 

 

ಪುರಾಣ ಮೂಲದ ಕಥಾನಕದಲ್ಲಿ ಈಶ್ವರ ದೇವರು ಹಂದಿ ಮರಿಯನ್ನು ಬೇಟೆ ಆಡಿದ ಕಥೆ ಇದೆ .ಕಾಂತಾರ ಪಂಜುರ್ಲಿ ಕಥೆಯಲ್ಲೂ ಹಂದಿ ಮರಿಯನ್ನು ಕೊಂದ ಕಥಾನಕ ಇದೆ ಸುರ ಪುರದ ಹೌಂದೇ ರಾಯನ ಕಥಾನಕದಲ್ಲು ಹಂದಿ ಬೇಟೆಯ ಕಥೆ ಇದೆ 

ಹಂದಿ ಮರಿಯನ್ನು ಕೊಂದ ನಂತರ ಕಷ್ಟಗಳು ಎದುರಾಗಿ ನಂತರ ಅದನ್ನು ದೈವವಾಗಿ ಆರಾಧನೆ ಮಾಡುದು ಕಂಡು ಬರುತ್ತದೆ 

ಡಾ.ಲಕ್ಷ್ಮೀ ಜಿ ಪ್ರಸಾದ 

ಲೇ : ಕರಾವಳಿಯ ಸಾವಿರದೊಂದು ದೈವಗಳು

Mobile  9480516684

ಹೌಂದೇರಾಯ ಆರಾಧಿಸಿದ ಪಂಜುರ್ಲಿ ಅಲ್ಲದೆ ಅನೇಕ ಪಂಜುರ್ಲಿ ದೈವಗಳಿವೆ

ನನಗೆ ಸಿಕ್ಕ ಪಂಜುರ್ಲಿ ಗಳ ಹೆಸರು ಮತ್ತು ಕಾಂತಾರ ಪಂಜುರ್ಲಿ ಯ ಕಥಾನಕವನ್ನು ನಾನು ಇಲ್ಲಿ ನೀಡಿರುವೆ

1 ಅಂಗಣತ್ತಾಯ ಪಂಜುರ್ಲಿ                   

 2 ಅಂಬುಟಾಡಿ ಪಂಜುರ್ಲಿ            ‌‌‌‌‌‌        

3 ಅಂಬೆಲ ಪಂಜುರ್ಲಿ 

4 ಅಣ್ಣಪ್ಪ ಪಂಜುರ್ಲಿ                        

5  ಅಬ್ಬಕ್ಕ ಪಂಜುರ್ಲಿ                            

6 ಅಬ್ಬೇಡಿ ಪಂಜುರ್ಲಿ.

7 ಅನಿತ್ತ ಪಂಜುರ್ಲಿ                   ‌‌‌‌‌‌           

8 ಅರದ್ದರೆ ಪಂಜುರ್ಲಿ    ‌‌‌‌                       

9 ಅಲೇರ ಪಂಜರ್ಲಿ.

10 ಉಂರ್ದರ ಪಂಜುರ್ಲಿ                  

 ‌11 ಉಡ್ಪಿದ ಪಂಜುರ್ಲಿ                          

12 ಉಬಾರ ಪಂಜುರ್ಲಿ

13  ಉರಿಮರ್ಲೆ ಪಂಜುರ್ಲಿ                    

14 ಎಣ್ಮಡಿತ್ತಾಯ ಪಂಜುರ್ಲಿ. ‌‌‌‌‌‌                   

 15 ಐನೂರ ಪಂಜುರ್ಲಿ 

16 ಒರ್ತೆ? ವರ್ತೆ ಪಂಜುರ್ಲಿ                                

17 ಒರಿ ಪಂಜುರ್ಲಿ   ‌‌‌‌‌‌                         ‌   ‌ ‌    ‌‌‌‌ 

 18 ಒರಿ ಮರ್ಲೆ ಪಂಜುರ್ಲಿ

19 ಒರಿ ಬಂಟೆ ಪಂಜುರ್ಲಿ 

 20  ಕಟ್ಟೆದಲ್ತಾಯ ಪಂಜುರ್ಲಿ. 

22 ಕಡಬದ ಪಂಜುರ್ಲಿ

22  ಕಡೆಕ್ಕಾರ ಪಂಜುರ್ಲಿ

 23 ಕರ್ಪುದ ಪಂಜುರ್ಲಿ  

25 ಕಲ್ಲುರ್ಟಿ ಪಂಜುರ್ಲಿ 

24 ಕಲ್ಯದ ಪಂಜುರ್ಲಿ 

26 ಕಾಡಬೆಟ್ಟುದ ಪಂಜುರ್ಲಿ

 27 ಕಾಡ್ಯ ಪಂಜುರ್ಲಿ

28 ಕುಂಜಿರಂಗರ ಪಂಜುರ್ಲಿ

29 ಕುಕ್ಕುಡು ಬೈದಿನ ಪಂಜುರ್ಲಿ 

30 ಕುಕ್ಕುಲ ಪಂಜುರ್ಲಿ

31  ಕುಂತಾ/ ಟಾಳ ಪಂಜುರ್ಲಿ 

32  ಕುಡುಮೊದ ಪಂಜುರ್ಲಿ 

33 ಕುಪ್ಪೆ ಪಂಜುರ್ಲಿ

34  ಕುಪ್ಪೆಟ್ಟು  ಪಂಜುರ್ಲಿ. 

 35  ಕುಮಾರೆ ಪಂಜುರ್ಲಿ  

 36 ಕೂಳೂರು ಪಂಜುರ್ಲಿ‌

  37 ಕೆಂಪರ್ನ ಪಂಜುರ್ಲಿ

 38 ಕೆಂಪೆರ್ಲ ಪಂಜುರ್ಲಿ 

  39  ಕೊಡ ಪಂಜುರ್ಲಿ

40 ಕೆಂಪೊಡಿ ಪಂಜುರ್ಲಿ 

41_ಕೊರಗ ಪಂಜುರ್ಲಿ

42  ಕೊರಿಯೆಲ ಪಂಜುರ್ಲಿ 

43  ಕೊಟ್ಯದ ಪಂಜುರ್ಲಿ

 44 ಕೋಟೆ ಪಂಜುರ್ಲಿ 

45ಕೋಡಿ ಪಂಜುರ್ಲಿ 

46ಕೋರೆದಾಂಡ್ ಪಂಜುರ್ಲಿ

47  ಗುತ್ತಿ ಪಂಜುರ್ಲಿ  

48  ಗೂಡು ಪಂಜುರ್ಲಿ.

 49 ಗ್ರಾಮ ಪಂಜುರ್ಲಿ

40   ಗಿಡಿರಾವಂತ ಪಂಜುರ್ಲಿ  

51 ಚಾವಡಿದ ಪಂಜುರ್ಲಿ 

52ಜಾಗೆದ ಪಂಜುರ್ಲಿ

53 ಜಾಲುದ ಪಂಜುರ್ಲಿ

‌54 ಜುಂಬುರ್ಲಿ 

55  ಜೋಡು ಪಂಜುರ್ಲಿ

 56 ತೆಳಾರ ಪಂಜುರ್ಲಿ ‌

57 ದಾಸಪ್ಪ ಪಂಜುರ್ಲಿ

‌58ದೆಂದೂರ ಪಂಜುರ್ಲಿ

59  ದೇವರ ಪೂಜಾರಿ ಪಂಜುರ್ಲಿ‌

 60 ನಾಂಜ ಪಂಜುರ್ಲಿ‌

61ನಾಗ ಪಂಜುರ್ಲಿ

62  ನಾಡ ಪಂಜುರ್ಲಿ

 63 ನೆಲಕ್ಕೈ ಪಂಜುರ್ಲಿ. 

64ಪಂಜಣತ್ತಾಯ ಪಂಜುರ್ಲಿ

65 ಪಂಜಿಕ್ಕಲ್ಲು ಪಂಜುರ್ಲಿ

‌‌66 ಪಂಜುರ್ಲಿ ಗುಳಿಗ

 67ಪಟ್ಟದ ಪಂಜುರ್ಲಿ.

68 ಪಣಂಬೂರು ಪಂಜುರ್ಲಿ

 ‌69 ಪ್ರಧಾನಿ ಪಂಜುರ್ಲಿ

 ‌70ಪಾತಾಳ ಪಂಜುರ್ಲಿ

71 ಪಾರೆಂಕಿ ಪಂಜುರ್ಲಿ  

72 ಪೊಟ್ಟ ಪಂಜುರ್ಲಿ  

73 ಬಗ್ಗು ಪಂಜುರ್ಲಿ

74ಬಂಟ ಪಂಜುರ್ಲಿ‌ 

75ಬಡ್ಡಗುಡ್ಡೆದ ಪಂಜುರ್ಲಿ

 76 ಬೂಡು ಪಂಜುರ್ಲಿ

77 ಬೋಳಾರ ಪಂಜುರ್ಲಿ‌‌

78 ಬೈಕಾಡ್ತಿ ಪಂಜುರ್ಲಿ  

79 ಬೈಲ ಪಂಜುರ್ಲಿ‌

80  ಭಂಡಾರದ ಪಂಜುರ್ಲಿ‌

 81 ಮಟ್ಟಾರು  ಪಂಜುರ್ಲಿ

  82 ಮನ ಪಂಜುರ್ಲಿ

83  ಮನಿಪ್ಪನ ಪಂಜುರ್ಲಿ‌

 84 ಮರಾಠ ಪಂಜುರ್ಲಿ  

85 ಮಿಂಚು ಕಣ್ಣಿನ ಪಂಜುರ್ಲಿ

86 ಮಿತ್ತೊಟ್ಟಿ ಪಂಜುರ್ಲಿ  

87ಮುಗೇರ ಪಂಜುರ್ಲಿ 

88 ಮುಳ್ಳು ಪಂಜುರ್ಲಿ

89  ಮೂಡ್ಕೆರಿ ಪಂಜುರ್ಲಿ  

90 ಮೈಯಾರ್ಗೆ ಪಂಜುರ್ಲಿ

 91 ರಕ್ತ ಪಂಜುರ್ಲಿ

92 ರುದ್ರ ಪಂಜುರ್ಲಿ 

93  ಲತ್ತಂಡೆ ಪಂಜುರ್ಲಿ

 ‌94  ವರ್ಣರ ಪಂಜುರ್ಲಿ

95  ವಿಷ್ಣು ಪಂಜುರ್ಲಿ ‌

96  ಶಗ್ರಿತ್ತಾಯ ಪಂಜುರ್ಲಿ  

97ಸ್ಪಟಿಕದ ಪಂಜುರ್ಲಿ

98  ಸಾನದ ಪಂಜುರ್ಲಿ

 99ಸಾರಾಳ ಪಂಜುರ್ಲಿ 

100  ಸುಳ್ಳಮಲೆ ಪಂಜುರ್ಲಿ

101ಸೇಮಿಕಲ್ಲ ಪಂಜುರ್ಲಿ

‌‌102  ಹುಮ್ಮದ ಪಂಜುರ್ಲಿ  

 103 ಕಾಂತಾರ ಪಂಜುರ್ಲಿ 

 


 

ಅನೇಕರು ಪಂಜುರ್ಲಿ ದೈವದ ಮೂಲದ  ಮಾಹಿತಿಯನ್ನು ಕೇಳ್ತಿದ್ದಾರೆ.ಮೂಲ ಪಂಜುರ್ಲಿ ಯಾವುದೆಂದು ಕೇಳಿದ್ದಾರೆ.ಅದಕ್ಕೆ ಉತ್ತರಿಸುವ ಯತ್ನ ಇಲ್ಲಿ ಮಾಡಿದ್ದೇನೆ.

 

ಪಂಜುರ್ಲಿ ಎಂಬುದು ಒಂದು ದೈವವಲ್ಲ.ಪಂಜುರ್ಲಿ ಹೆಸರಿನಲ್ಲಿ ಅನೇಕ ಶಕ್ತಿಗಳಿಗೆ ಆರಾಧನೆ ಇದೆ 

 

ಆಯಾಯ ಪ್ರದೇಶಕ್ಕೆ ಹೊಂದಿಕೊಂಡು ಅಣ್ಣಪ್ಪ ಪಂಜುರ್ಲಿ, ಮಲಾರ ಪಂಜುರ್ಲಿ, ಒರ್ತೆ  ಪಂಜುರ್ಲಿ, ವರ್ಣಾರ ಪಂಜುರ್ಲಿ, ಪೊಟ್ಟ  ಪಂಜುರ್ಲಿ ಇತ್ಯಾದಿ ಹೆಸರುಗಳನ್ನು ಪಡೆದು ಆರಾಧನೆ ಪಡೆಯುತ್ತದೆ

ಆದರೆ ಪಂಜುರ್ಲಿ ಎಂಬ ಒಂದು ಹೆಸರು ಇದ್ದ ಮಾತ್ರಕ್ಕೆ ಎಲ್ಲವೂ ಪಂಜುರ್ಲಿ ಆರಾಧನೆ ಎಂದು ಹೇಳಲು ಸಾಧ್ಯವಿಲ್ಲ .ಪಂಜುರ್ಲಿ ಎಂಬ ಹೆಸರು ಇದ್ದರೂ ಅದೇ ಹೆಸರಿನಲ್ಲಿ ಬೇರೆ ಬೇರೆ ದೈವಗಳಿಗೆ ಆರಾಧನೆ ನಡೆಯುತ್ತಿರುವುದು ಕಂಡು ಬರುತ್ತಿದೆ. ಉದಾಹರಣೆಗೆ ಹೇಳುದಾದರೆ ಅಣ್ಣಪ್ಪ   ಪಂಜುರ್ಲಿ ದೈವವಲ್ಲ ಪಂಜುರ್ಲಿ ಸೇರಿಗೆಗೆ ಸಂದ ಅಣ್ಣಪ್ಪ ಎಂಬಾತನೇ ಅಣ್ಣಪ್ಪ ದೈವವಾಗಿ ನೆಲೆ ನಿಂತಿದ್ದಾನೆ. ಸೇಮಿ ಕಲ್ಲ ಪಂಜುರ್ಲಿಕೂಡ ಪಂಜುರ್ಲಿ ದೈವವಲ್ಲ ಸಿರಿಯ ಶಾಪಕ್ಕೆ ಒಳಗಾಗಿ ದೈವತ್ವ ಪಡೆದಾತ ಸೇಮಿ ಕಲ್ಲ ಪಂಜುರ್ಲಿ ಎಂದು ಆರಾಧಿಸಲ್ಪಡುತ್ತಿರುವುದು ಕಂಡು ಬರುತ್ತಿದೆ. ಹೀಗೆ ಒಂದೇ ಪಂಜುರ್ಲಿ ಎಂಬಹೆಸರಿನಲ್ಲಿ ಅನೇಕ ದೈವಗಳು ಆರಾಧನೆ ಪಡೆಯುತ್ತಿವೆ.

 

ನೂರ ಮೂರು  ಪಂಜುರ್ಲಿ  ದೈವಗಳ ಹೆಸರುಗಳು ಸಿಕ್ಕಿವೆ. ಇವೆಲ್ಲ ಒಂದೇ ದೈವ ಪಂಜುರ್ಲಿಯ ಭಿನ್ನ ಭಿನ್ನ ಹೆಸರುಗಳಲ್ಲ. ಕೆಲವು ಪಂಜುರ್ಲಿಯ ಪ್ರಾದೇಶಿಕ ಹೆಸರುಗಳು. ಹಲವಾರು ಪಂಜುರ್ಲಿ ದೈವದ ಸೇರಿಗೆಗೆ ಸಂದ ದೈವಗಳು.ಅಣ್ಣಪ್ಪ ಪಂಜುರ್ಲಿ‌,ಉಂರ್ದರ ಪಂಜುರ್ಲಿ, ತೇಳಾರ ಪಂಜುರ್ಲಿ ,ಕುಪ್ಪೆಟ್ಟು ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ‌ ,ಶಗ್ರಿತ್ತಾಯ ಪಂಜುರ್ಲಿ ಮೊದಲಾದವು ಪಂಜುರ್ಲಿ ದೈವ ಹೆಸರುಗಳಲ್ಲ. ಇವು  ಕಾರಣಾಂತರಗಳಿಂದ ಪಂಜುರ್ಲಿ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧನೆ ಪಡೆಯುವ ದೈವಗಳು‌.

 

ಇಪ್ಪತ್ತು ಪಂಜುರ್ಲಿ ದೈವಗಳ ಮಾಹಿತಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಲ್ಲಿದೆ 103 ಪಂಜುರ್ಲಿ ದೈವಗಳ ಹೆಸರು ಸಿಕ್ಕಿದೆ 

 

ತುಳುನಾಡಿನ ಕೆಲವು ಭೂತಗಳು ಪ್ರಾಣಿ ಮೂಲ ವನ್ನು ಹೊಂದಿವೆ. ಜಗತ್ತಿನಾದ್ಯಂತ ಪ್ರಾಣಿಗಳ ಆರಾಧನೆ (totemic/ totemism/worship ) ಪ್ರಚಲಿತವಿದೆ. ಕ್ರೂರ ಪ್ರಾಣಿಗಳಿಂದ ಪ್ರಾಣ ರಕ್ಷಣೆಗಾಗಿ  ಹಾಗೂ  ಬೆಳೆ ರಕ್ಷಣೆಗಾಗಿ, ಪ್ರಾಣಿ ಆರಾಧನೆ ಪ್ರಾರಂಭವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.

ಪಂಜುರ್ಲಿ ಭೂತ ಮೂಲತಃ ಪ್ರಾಣಿ ಮೂಲ ದೈವ .ಇದು ವಿಶ್ವದೆಲ್ಲೆಡೆ ಇರುವ ಟೊಟಾಮಿಕ್ ವರ್ಶಿಪ್ 

ತುಳುನಾಡಿನಹೆಚ್ಚಿನ ಭಾಗವನ್ನು ಪಶ್ಚಿಮ ಘಟ್ಟ ಆವರಿಸಿಕೊಂಡಿದೆ. ಆದ್ದರಿಂದ ಇಲ್ಲಿ ಸಹಜವಾಗಿಯೇ ಹಂದಿಗಳ ಕಾಟ ಹೆಚ್ಚು. ಬೆಳೆಯನ್ನು ಹಾಳು ಮಾಡುವ ಹಂದಿಗಳಿಂದ ರಕ್ಷಣೆ ಪಡೆಯುವ ಸಲುವಾಗಿ ಪಂಜುರ್ಲಿ (ಪಂಜಿ(ಹಂದಿ ) ಕುರ್ಲೆ (ಮರಿ ) ಆರಾಧನೆ ಪ್ರಾರಂಭವಾಗಿದೆ.

 

ತುಳುನಾಡಿನ ಭೂತಾರಾಧನೆ ಮೇಲೆ ಪುರಾಣಗಳು ಅಪಾರವಾದ ಪ್ರಭಾವವನ್ನು ಬೀರಿವೆ. ಆದ್ದರಿಂದ ಹೆಚ್ಚಿನ ದೈವ ಕಥಾನಕಗಳು ಪುರಾಣದ ಕಥೆಗಳೊಂದಿಗೆ ಪುರಾಣದ ದೇವರುಗಳೊಂದಿಗೆ ತಳಕು ಹಾಕಿಕೊಂಡಿದೆ. ಅಂತೆಯೇ ಪಂಜುರ್ಲಿ ಭೂತಕ್ಕೆ ಕೂಡ  ಪುರಾಣ ಮೂಲದ ಕಥಾನಕ ಸೇರಿಕೊಂಡಿದೆ 

 

ಕಾಂತಾರ ಪಂಜುರ್ಲಿ 

 

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರದಲ್ಲಿ ಕಾಂತಾರೇಶ್ವರ ದೇವಾಲಯ ಇದೆ ಇಲ್ಲಿ ದೇವರ ಬಲ ಭಾಗದಲ್ಲಿ ನೆಲೆಯಾಗಿರುವ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಇದೆ ಹಾಗಾಗಿ ಎರಡು ಮೊಗಗಳು ಇವೆ 

ಕಾಂತಾರ ಪಂಜುರ್ಲಿ ಕುರಿತು ವಿಶಿಷ್ಟ ಕಥಾನಕ ಇದೆ.

ಕಾಂತಾರೊಡು ಕಾಂತಾವರ ದೇವೆರೆ

ಬಲಭಾಗೊಡು ಕಲ್ಲ ಪಂಜಿಯಾದ್ ಉದ್ಯಬೆಂದೆ
ದೇವೆರೆಗ್ ರಥ ಇಜ್ಜಿಂದ್ ತೆರಿದು
ಪುತ್ತಿಗೆ ಸೋಮನಾಥೇಶ್ವರ ದೇವೆರೆನಾಡೆ ಪೋದೆ
ಸೋಮನಾಥೇಶ್ವರ ದೇವೆರೆ ರಥನು ಕೊಣತ್ತೆ
ಕಾಂತಾವರೊಡು ಕಾಂತೇಶ್ವರ ದೇವೆರೆನ
ರಥೋತ್ಸವದ ಪೊರ್ಲುನು ತೂವೊಂಡೆ


ಕನ್ನಡ ಅನುವಾದ 
ಕಾಂತಾರದಲ್ಲಿ ಕಾಂತಾವರ ದೇವರ
ಬಲ ಭಾಗದಲ್ಲಿ ಕಲ್ಲ ಹಂದಿಯಾಗಿ ಉದಿಸಿದೆ
ದೇವರಿಗೆ ರಥ ಇಲ್ಲವೆಂದು ತಿಳಿದು
ಪುತ್ತಿಗೆ ಸೋಮನಾಥ ದೇವರಲ್ಲಿಗೆ ಹೋದೆ
ಸೋಮನಾಥ ದೇವರ ರಥವನ್ನು ತಂದು
ಕಾಂತಾವರದಲ್ಲಿ ಕಾಂತೇಶ್ವರ ದೇವರ
ರಥೋತ್ಸವದ ಚೆಲುವನ್ನು ನೋಡಿಕೊಂಡೆ ..

ಕಾರ್ಕಳ ತಾಲೂಕಿನ ಕಾಂತಾವರದ ಕಾಂತಾರೇಶ್ವರ ದೇವರ ಬಲಭಾಗದಲ್ಲಿ  ಮಾಯವಾಗಿ    ಕಲ್ಲ ಹಂದಿಯಾಗಿ ನಿಂತ  ಕಾಂತಾರ ಪಂಜುರ್ಲಿ ದೈವದ ಬಗ್ಗೆ ವಿಶಿಷ್ಟವಾದ ಐತಿಹ್ಯವಿದೆ.ಈ ಪಾಡ್ದನದ ಕಥೆಯನ್ನು ಶೇಖರ ಪರವರು ತಿಳಿಸಿದ್ದಾರೆ
ಕಾರ್ಕಳ ತಾಲೂಕಿನ ಕಾಂತಾವರವನ್ನು ಆಡುಮಾತಿನಲ್ಲಿ ಕಾಂತಾರ ಎನ್ನುತ್ತಾರೆ.ಕಾಂತಾರ ಎಂದರೆ ಕಾಡು ಎಂದರ್ಥ ಮೊದಲು ಈ ಪ್ರದೇಶ ಕಾಡು ಆಗಿತ್ತು .ಈಗಲೂ ಇದು ಹಳ್ಳಿಯಾಗಿ ಉಳಿದಿದೆ
ಇಲ್ಲಿಗೆ ಸಮೀಪದಲ್ಲಿ ಕೊಂಚಾಡಿ ಎಂಬಲ್ಲಿ ಪ್ರತಿವರ್ಷ ಪಂಜುರ್ಲಿ ದೈವದ ಕೋಲ ನಡೆಯುತ್ತದೆ .
ಒಂದು ವರ್ಷ ಕೋಲ ನೋಡಲು ಕುರಿ ಗುತ್ತಿನ ಹಿರಿಯರು ಹೋಗುತ್ತಾರೆ.ಕೋಲ ನೋಡಿ ಹಿಂತಿರುಗುವಾಗ ದೈವವು ಓರ್ವ ಬ್ರಾಹ್ಮಣ ಮಾಣಿಯ ರೂಪದಲ್ಲಿ ಹಿಂಬಾಲಿಸುತ್ತದೆ.ಮನೆ ಸಮೀಪಿಸಿದಾಗ ಕಾಣದಾಗುತ್ತದೆ.ನಂತರ ಕುರಿ ಗುತ್ತಿನ ಹಿರಿಯರ  ಕನಸಿನಲ್ಲಿ ಕಾಣಿಸಿಕೊಂಡು ತನ್ನನ್ನು ಆರಾಧಿಸಬೇಕೆಂದು ಹೇಳುತ್ತದೆ.
ಎಚ್ಚರಗೊಂಡ ನಂತರ ಅವರು ತನಗೆ ದೈವವನ್ನು ಪಾಲಿಸಲು ಸಾಧ್ಯವಿಲ್ಲ.ಹಾಗಾಗಿ ಕಾಂತಾವರ ದೇವರಲ್ಲಿ ಜಾಗ ಕೇಳು ಎಂದು ಅರಿಕೆ ಮಾಡುತ್ತಾರೆ.ದೈವವು ಕಾಂತಾವರ ದೇವರ ಬಲಿ ಹೋಗದಂತೆ ದಕ್ಷಿಣ ದಿಕ್ಕಿನಲ್ಲಿ ತಡೆಯುತ್ತದೆ

.ನಂತರ ದೇವಾಲಯದ ಒಳಬಾಗದಲ್ಲಿ ಒಂದು ಹಂದಿ ಮರಿಯಾಗಿ ಕಾಣಿಸಿಕೊಳ್ಳುತ್ತದೆ.ಈ ಹಂದಿಮರಿಯನ್ನು ಸಾಕಲು ಒಂದು ಮೊಯಿಲಿಗಳ ಕುಟುಂಬಕ್ಕೆ ನೀಡುತ್ತಾರೆ.ಅ ಹಂದಿಮರಿ ದಟ್ಟ ಪುಷ್ಟವಾಗಿ ಬೆಳೆಯುತ್ತದೆ.ಅಕ್ಕ ಪಕ್ಕದವರ ಗದ್ದೆಗೆ ಹೋಗಿ ಕದ್ದು ಬೆಳೆಯನ್ನು ತಿಂದು ಹಾಳು ಮಾಡುತ್ತದೆ.ಆಗ ಕೋಪಗೊಂಡ ಮೊಯಿಲಿಯವರ ಕುಟುಂಬದವರು ಆ ಹಂದಿಮರಿಯನ್ನು ಕೊಂದು ತಿನ್ನುತ್ತಾರೆ.ಆಗ ಕೋಪಗೊಂಡ ದೈವವು ಎಂಟು ಜನ ಮೊಯಿಲಿ ಕಟುಂಬದ ಸಹೋದರರನ್ನು ಕೊಲ್ಲುತ್ತದೆ
ನಂತರ ಊರವರೆಲ್ಲ ಸೇರಿ ಕಾಂತಾವರ ದೇವರ ಬಲಭಾಗದಲ್ಲಿ ಸ್ಥಾನ ಕಟ್ಟಿಸಿ ದೈವಕ್ಕೆ ಕೋಲ ಕೊಟ್ಟು ಆರಾಧಿಸಿ ಕೋಪವನ್ನು ತಣಿಸುತ್ತಾರೆ.
ಹಾಗೆ ಇಲ್ಲಿ ಹಂದಿಮರಿಯ ರೂಪದಲ್ಲಿ ಕಾಣಿಸಿಕೊಂಡ ದೈವ ಕಾಂತಾರ ಪಂಜುರ್ಲಿ ಎಂದು ಕರೆಸಿಕೊಳ್ಳುತ್ತದೆ.ತಾನು ಕಲ್ಲ ಪಂಜಿ/ ಹಂದಿಯಾಗಿ ಕಾಂತಾವರ ಬಲ ಭಾಗದಲ್ಲಿ ನಿಂತೆ ಎಂದು ದೈವ ನುಡಿಯುತ್ತದೆ.

 

ಇಲ್ಲಿ ಆರಾಧಿಸಲ್ಪಡುವ ದೈವ ಅಣ್ಣಪ್ಪ ಪಂಜುರ್ಲಿ ಎಂದು ಇಲ್ಲಿನ ತಂತ್ರಿಗಳಾದ ಕೃಷ್ಣ ಮೂರ್ತಿ ಭಟ್ ತಿಳಿಸಿದ್ದಾರೆ.ಇಲ್ಲಿನ ಚಿತ್ರವನ್ನವರು ಕಳುಹಿಸಿದ್ದು ಅದರಲ್ಲಿ ಎರಡು ಹಂದಿಯ ಮೊಗಗಳಿವೆ.
ಹಾಗಾಗಿ ಇಲ್ಲಿ ಎರಡು ಪಂಜುರ್ಲಿ ದೈವಗಳಿಗೆ ಆರಾಧನೆ ಆಗುತ್ತಿದ್ದು ಕಾಲಾಂತರದಲ್ಲಿ ಒಂದರಲ್ಲಿಯೇ ಎರಡೂ ಶಕ್ತಿಗಳು ಸಮನ್ವಯಗೊಂಡಿರುವುದು ತಿಳಿದು ಬರುತ್ತದೆ 


ಒಂದು ಅಣ್ಣಪ್ಪ ದೈವವಾದರೆ  ಇನ್ನೊಂದು ಯಾವುದೆಂಬ ಸಂದೇಹ ಉಂಟಾಗುತ್ತದೆ.ಇಲ್ಲಿ ನುಡಿಗಟ್ಟಿನಲ್ಲಿ ದೈವವು ತಾನು ಕಲ್ಲ ಪಂಜಿಯಾಗಿ ನಿಂತೆ ಎಂದಿದೆ.ಆದರೆ ಇಲ್ಲಿ ಕಲ್ಲಿನ ಮೂರ್ತಿ ಇಲ್ಲ.
ಬಹುಶಃ ಅಕ್ಕ ಪಕ್ಕದ ಗದ್ದೆಗೆ ಹೊಕ್ಕು ಹಾನಿ ಮಾಡುವ ಕಳ್ಳ ಹಂದಿಯ ರೂಪದಲ್ಲಿ ಕಾಣಿಸಿಕೊಂಡ ದೈವ 

.ಕಳುವೆ ಪಂಜಿ > ಕಳ್ಳ ಪಂಜಿ ಎಂಬುದೇ ಮೂಲ ಅರ್ಥ ಕಳೆದು ಹೋದಾಗ ಆಡು ಮಾತಿನಲ್ಲಿ    ಕಲ್ಲ ಪಂಜಿ ಎಂದಾಗಿದೆ 

  ಡಾ.ಲಕ್ಷ್ಮೀ ಜಿ ಪ್ರಸಾದ್,

ಆಧಾರ  ಕರಾವಳಿಯ ಸಾವಿರದೊಂದು ದೈವಗಳು ,

 

ಪಂಜುರ್ಲಿ ದೈವದ ಮೂಲಕ್ಕೆ ಸಂಬಂಧಿಸಿದ ಎಲ್ಲ ಕಥಾನಕಗಳಲ್ಲಿಮೂ ಬೇಟೆ ಮತ್ತು ಹಂದಿ ಮರಿ ಸಾಯುವ ಕಥೆ ಇದೆ ಸತ್ತ ನಂತರ ಉಪದ್ರ ಕಾಣಿಸುತ್ತದೆ ಹಾಗಾಗಿ ಅದು ದೈವಿಕ ಶಕ್ತಿ ಎಂದು ತಿಳಿದು ಆರಾಧನೆ ಮಾಡುತ್ತಾರೆ 

ಹಾಗಾಗಿ ಇದು ಮೂಲ ಃ ಟೊಟಾಮಿಕ್ ವರ್ಶಿಪ್ ಎಂದರೆ ಪ್ರಾಣಿ ಮೂಲ ಆರಾಧನೆ ಆಗಿದೆ 

ನಂತರ ಈ ದೈವದ ಸೆರಿಗೆಗೆ ಸಂದವರೂ ಪಂಜುರ್ಲಿ ಹೆಸರಿನೊಂದಿಗೆ ಆರಾಧನೆ ಪಡೆಯುಯ್ತಾರೆ.ಅಣ್ಣಪ್ಪ ಪಂಜುರ್ಲಿ,ದೇವರ ಪೂಜಾರಿ ಪಂಜುರ್ಲಿ ಉಂರ್ದರ ಪಂಜುರ್ಲಿ ಮೊದಲಾದ ದೈವಗಳು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಾಧನೆ ಪಡೆಯುವ ಶಕ್ತಿ ಗಳಾಗಿದ್ದಾರೆ 

 

 

ಕಾಂತಾರ ಫ್ರೀಕ್ವೆಲ್ ನಲ್ಲಿ ಕಾಂತಾರ ಪಂಜುರ್ಲಿ ಯ ಉದ್ಭವದ ಕಥೆ ಹೇಳ್ತಾರಂತೆ ,ಈ ಪಂಜುರ್ಲಿಯ ಕಥೆ ಏನು ಎಂದು ನನ್ನಲ್ಲಿ ಅನೇಕರು ಕೇಳಿದ್ದಾರೆ 

ದೈವಗಳಿಗೆ ಸಂಬಂಧಿಸಿದಂತೆ ಅನೇಕ ಕಥಾನಕಗಳು ಐತಿಹ್ಯಗಳು ಪ್ರಚಲಿತವರುತ್ತದೆ ಹಾಗಾಗಿ ರಿಷಭ್ ಶೆಟ್ಟಿಯವರು ಯಾವ ಕಥೆ ತೋರಿಸುತ್ತಾರೆ ಎಂದು ಹೇಳಲಾಗದು.

ಪಂಜುರ್ಲಿ ದೈವದ ಕುರಿತಾಗಿ ಅನೇಕ ಕಥಾನಕಗಳು ಇವೆ ‌ಆ ಕಥಾನಕಗಳಲ್ಲಿ ಕಾಂತಾರ ಪಂಜುರ್ಲಿ ಎಂಬ ದೈವದ ಕಥೆಯೂ ಇದೆ ಒಂದೊಂದಾಗಿ ಬರೆದು ತಿಳಿಸುವೆ


 

 

 1 ಗಣಾಮಣಿ ಮಂಜುರ್ಲಿ 

ಕೈಲಾಸ ಪರ್ವತದಲ್ಲಿ ಈಶ್ವರದೇವರು ಬೇಟೆಗೆ ಹೊರಡುವಾಗ ಪಾರ್ವತಿ ದೇವಿಯೂ ಹೊರಡುತ್ತಾರೆ. ಗಂಡಸರು ಹೋಗುವಲ್ಲಿ ಹೆಂಗಸರು ಬರಬಾರದು ಎಂದು ಹೇಳಿದರೂ ಪಾರ್ವತಿ ದೇವಿ ಹಠಮಾಡುತ್ತಾಳೆ. ಆಗ ಈಶ್ವರದೇವರು “ನೀನು ನೋಡಿದ್ದನ್ನು ನೋಡಿದೆ ಎನ್ನಬಾರದು ಕೈ ತೋರಿ ಕೇಳಬಾರದು” ಎಂಬ ಶರತ್ತು ವಿಧಿಸಿ ಕರೆದೊಯ್ಯುತ್ತಾರೆ. ಕಾಡಿನಲ್ಲಿ ಗುಜ್ಜಾರ ಮತ್ತು ಕಾಳಿ ಎಂಬ ಎರಡು ಹಂದಿಗಳ ಐದು ಮರಿಗಳು ಈಶ್ವರನ ನಂದನ ಕೆರೆಯಲ್ಲಿ ಹೊರಳಾಡುತ್ತಿರುತ್ತವೆ. ಈಶ್ವರ ಗುಜ್ಜಾರನಿಗೆ ಬಾಣ ಬಿಡುತ್ತಾನೆ. ಕಾಳಿ ಓಡುತ್ತದೆ. ಆ ಐದು ಮರಿಗಳಲ್ಲಿ ಒಂದನ್ನು ಹಠ ಮಾಡಿ ಪಾರ್ವತಿ ಕೈಲಾಸಕ್ಕೆ ತೆಗೆದುಕೊಂಡು ಹೋಗಿ ಪ್ರೀತಿಯಿಂದ ಸಾಕುತ್ತಾರೆ. ಅದನ್ನು ಮಾಳಿಗೆಯಲ್ಲಿ ದುಂಡು ಸಂಕೋಲೆಯಲ್ಲಿ ಕಟ್ಟಿ ಹಾಕುತ್ತಾರೆ. ಕೈಲಾಸದಲ್ಲಿ ಒಂದು ಸಮಾರಾಧನೆಯ ದಿವಸ ಈ ಹಂದಿಮರಿ ಬಿಡಿಸಿಕೊಂಡು ಊಟದ ಎಲೆಗಳಿಗೆ ಬಾಯಿ ಹಾಕುತ್ತದೆ. ಈಶ್ವರ ದೇವರಿಗೆ ಸಿಟ್ಟು ಬಂದು ‘ನೀನು ಕೈಲಾಸದಲ್ಲಿರಬಾರದು. ಭೂಮಿಗಿಳಿದು ದೈವವಾಗಿರಬೇಕು’ ಎಂದು ವರ ಕೊಡುತ್ತಾರೆ. 

ಬ್ರಾಹ್ಮಣರೂಪದಲ್ಲಿ ಭೂಮಿಗಿಳಿದು, ಗಣಾಮಣಿಯಾಗಿ, ಘಟ್ಟ ಇಳಿದು ನೆಲ್ಯಾಡಿ ಬೀಡಿಗೆ ಬರುತ್ತಾನೆ.ಅಣ್ಣಪ್ಪ ಪಂಜ ರ್ಲಿ ಎಂಬ ಹೆಸರಿನಲ್ಲಿ ಆರಾಧಾನೆ ಪಡೆಯುತ್ತದೆ ಇದು ಪಂಜುರ್ಲಿಯ ಪುರಾಣ ಮೂಲ ಕಥೆ. 

 

ಇದೇ ಕಥೆ ಯ ಇನ್ನೊಂದು ಪಾಠ ಹೀಗಿದೆ 

ಪಾರ್ವತಿ ದೇವಿಯು ಕಾಡಿನಿಂದ ತಂದು ಸಾಕಿದ ಹಂದಿ ಗುಜ್ಜಾರ ಬಹಳ ಬಲಿಷ್ಠ ವಾಗಿ ಬೆಳೆಯುತ್ತದೆ.ಕಟ್ಟಿ ಹಾಕಿದ ಸಂಕೋಲೆ ಕಡಿದುಕೊಂಡು ಊರವರ ತೋಟಕ್ಕೆ ನುಗ್ಗಿ ಬೆಳೆ ಹಾಳು ಮಾಡುತ್ತದೆ.ಆಗ ಊರವರು ಬಂದು ದೂರು ಹೇಳುತ್ತಾರೆ ಆಗ ಈಶ್ವರ ದೇವರು ಈ ಹಂದಿ ಮರಿಯನ್ನು ಬೇಟೆ ಆಡಲು ಹೋಗುತ್ತಾರೆ.ಎಷ್ಟೇ ಯತ್ನ ಮಾಡಿದರೂ ಅದು ಸಿಗುವುದಿಲ್ಲ.ಕೊನೆಗೆ ತಾನಾಗಿ ಬಂದು ಈಶ್ವರ ಧಳದೇವರ ಪಾದಕ್ಕೆ ಶರಣಾಗುತ್ತದೆ ಆಗ ಈಶ್ವರ ದೇವರು ಅದರ ಮೇಲೆ ಬಾಣ ಬಿಡುತ್ತಾರೆ 

ಆಗ ಅದು ನೋವಿನಿಂದ ಅತ್ತುಕೊಂಡುಪಾರ್ವತಿ ದೇವಿಯ ಬಳಿ ಬಂದು ಪ್ರಾಣ ಬಿಡುತ್ತದೆ.ಆಗ ಪಾರ್ವತಿ ದೇವಿ ದುಃಖ ಪಡುತ್ತಾರೆ ಆಗ ಈಶ್ವರ ದೇವರು ಆ ಹಂದಿ ಮರಿಗೆ ಜೀವ ಕಲೆ ಕೊಟ್ಟು ಗಣಾಮಣಿ ಯಾಗಿ ಭೂಲೋಕಕ್ಕೆ ಹೋಗಿ ಧರ್ಮ ರಕ್ಷಣೆ ಮಾಡು ಎಂದು ಹೇಳುತ್ತಾನೆಹಾಗೆ ಆ ಹಂದಿ ಮರಿ ಪಂಜುರ್ಲಿ ದೈವವಾಗಿ ಘಟ್ಟ ಇಳಿದು ತುಳುನಾಡಿಗೆ ಬಂದು  ದುಷ್ಟರನ್ನು ಶಿಕ್ಷಿಸಿ ಶಿಷ್ಟರ ರಕ್ಷಣೆ ಮಾಡಿ ಆರಾಧನೆಯನ್ನು ಪಡೆಯುತ್ತದೆ

 

ಅಣ್ಣಪ್ಪ ಪಂಜುರ್ಲಿ 
                                                    
              ತುಳು ನಾಡಿನಲ್ಲಿ ಅಣ್ಣಪ್ಪ ಬಹಳ ಪ್ರಸಿದ್ಧವಾದ ದೈವತ .ಅಣ್ಣಪ್ಪ ದೈವದ ಕುರಿತಾದ ಪಾಡ್ದನಗಳು ಲಭ್ಯವಿವೆ ಆದ್ರೆ ಅವುಗಳ ಸಮರ್ಪಕ ಅಧ್ಯಯನ ಇನ್ನೂ ಆಗಿಲ್ಲ .ಪಾಡ್ದನದ ಕಥಾನಕ ಹೀಗಿದೆ .
ದೇವಪುರದಲ್ಲಿ ದೇವ ಚಂದ್ರ ಬಾಳಿದ ಕಾಲದಲ್ಲಿ ಮೂಡನಕ್ಕೆಸೂರ್ಯನಾರಾಯಣ ದೇವರು ,ಪಡುವಣಕ್ಕೆ ಚಂದ್ರ ನಾಲ್ಕು ದಿಕ್ಕಿನಲಿ ನಾರಾಯಣ ದೇವರು ಮೂರೂ ಲೋಕದಲ್ಲಿ ಈಶ್ವರ ದೇವರು ಉದಿಸಿದ ಕಾಲದಲ್ಲಿ ನಾಲ್ಕು ಮಠ ಉಂಟಾಯಿತು .ನಾಲ್ಕು ಮಠಕ್ಕೆ ಒಬ್ಬ ಜೋಗಿ ಭಿಕ್ಷೆ ಬೇಡಿಕೊಂಡು ಇದ್ದನು .ನಾಲ್ಕು ಮಠಕ್ಕೆ ಮೀರಿದ ಸತ್ಯದರ್ಮ ಎಲ್ಲಿದೆ ಎಂದು ನೋಡಲು ನಾಲ್ಕು ಮಠ ಬಿಟ್ಟು ಮೂಡಣ ಕುಡುಮಕ್ಕೆ ಬರುತ್ತಾನೆ .ಅಲ್ಲಿ ಹಿಂದಿನ ನೆಲ್ಯಾಡಿ ಬೀಡು ಇತ್ತು ಅಲ್ಲಿ ಬಿರ್ಮಣ ಬಲ್ಲಾಳ ಅಮ್ಮು ಬಲ್ಲಾಳ್ತಿ ಇದ್ದರು .ಹನ್ನೆರಡು ವರ್ಷದ ಆಪತ್ತಿನಲ್ಲಿ ನಡೆಯಲು ನಿಲ್ಲಲೂ ಆಗದು ಬಿರ್ಮಣ ಬಲ್ಲಾಳರಿಗೆ .ಆಗ ತುಳಸಿ ಮಂಟಪದಲ್ಲಿ ನಿಂತ ಜೋಗಿ ಜಗನಂದ ಪುರುಷನು ಅಯ್ಯಾ ಅಮ್ಮು ಬಲ್ಲಾಳ್ತಿ ನನಗೆ ದಾನ ಕೊಡಿರಿ ಎಂದು ಕರೆದು ಹೇಳುತ್ತಾನೆ .
ಆಗ ಬಿರ್ಮಣ ಬಲ್ಲಾಳರಿಗೆ ಎದ್ದು ನಿಲ್ಲಲಾಗುವುದಿಲ್ಲ ಏನು ದಾನ ಕೊಡಲಿ ಎಂದು ಅಮ್ಮು ಬಲ್ಲಾಳ್ತಿ ಹೇಳಲು ನನಗೆ ದಾನ ಕೊಡಿ ಆಗ ನಿಮ್ಮ ಕಷ್ಟ ಕಳೆಯುತ್ತದೆ ಎಂದು ಹೇಳುತ್ತಾನೆ .ಅಂತೆ ಅವಳು ಅವನಿಗೆ ದಾನ ಕೊಡುತ್ತಾಳೆ.ಬಿರ್ಮಣ ಬಲ್ಲಾಳರ ಆಪತ್ತು ದೂರವಾಗಿ ಎದ್ದು ಬಂದು ಯಾರಯ್ಯ  ನೀನು? ಎಂದು ಕೇಳಲು “ಇದೊಂದು ಬೀಡಿನಲ್ಲಿ ದಾನ ಧರ್ಮ ನಡೆಯಬೇಕು ,ನಿಮ್ಮ ಧರ್ಮಕ್ಕೆ ನಾನು ಇಲ್ಲಿ ನಿಲ್ಲುವೆ ಎಂದು ಜೋಗಿ ಜಗನಂದ ಪುರುಷ ಹೇಳುತ್ತಾನೆ .

ಹೀಗೆ ಅಲ್ಲಿ ದಾನ ಧರ್ಮ ನಡೆಯುತ್ತಿರುವಾಗ ನಡು ಮಧ್ಯಾಹ್ನದ ಹೊತ್ತಿಗೆ  ಕಾಶಿ ಕದ್ರಿ ಮಠದಿಂದ ನಾಲ್ಕು ಒಕ್ಕಲು ಇಬ್ಬರು ಭಟ್ಟರು ಬರುತ್ತಾರೆ .ಇದೊಂದು ಬೀಡಿನಲ್ಲಿ ದಾನ ಧರ್ಮ ನಮ್ಮ ಅತಿಥ್ಯ ಸ್ವೀಕರಿಸಬೇಕು ಎಂದು ಹೇಳುವಾಗ ಮಧ್ಯಾಹ್ನ ದೇವರಿಗೆ ಪೂಜೆ ಆಗದೆ ನಾವು ಊಟ ಮಾಡಲಾರೆವು ,ದೇವರ ಶಿವ ಲಿಂಗ ಇಲ್ಲದೆ ನಾವು ಊಟ ಮಾಡೆವು ಎಂದು ಹೇಳುತ್ತಾರೆ .
ಅಯ್ಯಯೋ ದೋಷವೇ ಅಯ್ಯಯ್ಯೋ ಪಾಪವೇ ನಾನು ದೇವರನ್ನು ಎಲ್ಲಿಂದ ತರುವುದು ಎಂದು ದುಃಖಿಸಲು ಜೋಗಿ ಜಗನಂದ ಪುರುಷನು ನೀವು ಕೈಗೆ ನೀರು ಕೊಡಿರಿ ,ಎಲೆ ಹಾಕಿರಿ ಅಷ್ಟರಲ್ಲಿ ನಾನು ದೇವರನ್ನು ತರುವೆ ಎಂದು ಗಿಡುಗನ ರೂಪ ತಾಳಿ ಕದ್ರಿಗೆ ಬರುತ್ತಾನೆ .
ಅಲ್ಲಿ ಕದ್ರಿ ಮಂಜುನಾಥನಲ್ಲಿ ನಾನಿರುವ ಕುಡುಮಕ್ಕೆ ಬರಬೇಕು ಎಂದು ಕೇಳಿದಾಗ ಆತ ಬರುವುದಿಲ್ಲ ಎನ್ನುತಾನೆ .ಆಗ ಕೋಪ ಗೊಂಡ ಜೋಗಿ ಪುರುಷ ದೇವರ ಅರ್ಧ ಭಾಗ ಶಿವಲಿಂಗದಲ್ಲಿ ಹಿಡಿದು “ಅಯ್ಯಾ ಸ್ವಾಮಿ ಕೇಳಿರಿ ಅರ್ಧ ಜೀವ ಕದ್ರಿಯಲ್ಲಿ ಉಳಿದರ್ಧ ಮೂಡಣ ಕುಡುಮಕ್ಕೆ ಬರಬೇಕು ಎಂದು ಹೇಳಿ ದೇವರನ್ನು ತೆಗೆದುಕೊಂಡು ಕುಡುಮಕ್ಕೆ ತರುತ್ತಾನೆ ,ಇಲ್ಲಿ ದೇವರು ನಾನು ಬರಲಾರೆ ಆದ್ರೆ ನನ್ನ ಒಂದು ನಕ್ಷತ್ರ ಲಿಂಗ ಏಳನೆಯ ಕೆರೆಯಲ್ಲಿದೆ ಅಲ್ಲಿಂದ ತೆಗೆದುಕೊಂಡು ಆಣತಿ ಇಡುತ್ತಾನೆ ಅಲ್ಲಿಂದ ಮುಳುಗು ಹಾಕಿ ತೆಗದುಕೊಂಡು ಕುಡುಮಕ್ಕೆ ಹೋಗುತ್ತಾನೆ ಎಂಬ ಪಾಟಾಂತರ ಇದೆ
ಮುಂದೆ ಆತ ಅಣ್ಣಪ್ಪ ದೈವವಾಗಿ ಧರ್ಮವನ್ನು ನೆಲೆ ಗೊಳಿಸುತ್ತಾನೆ .
ಹೆಚ್ಚಾಗಿ ಅಣ್ಣಪ್ಪ ಪಂಜುರ್ಲಿಯೊಂದಿಗೆ ಸಮನ್ವಯ ಗೊಂಡು ಆರಾಧಿಸಲ್ಪಡುತ್ತಾನೆ.
ಅಲೌಕಿಕ ನೆಲೆಯನ್ನು ಹೊರತು ಪಡಿಸಿದರೆ ಅಣ್ಣಪ್ಪ ಯಾರು ?ಎಂಬ ಪ್ರಶ್ನೆಗೆ ಇದಮಿತ್ಥಂ ಎಂಬ ಉತ್ತರ ಸಿಗುವುದಿಲ್ಲ .
ಅನಾರೋಗ್ಯದಿಂದ ಆಶಕ್ತರಾಗಿದ್ದ ಬಲ್ಲಾಳರಲ್ಲಿ ನೆಲೆ ಪಡೆದ ಜೋಗಿ ಪುರುಷ ನಂತರ ಅವರಿಗೆ ಎಲ್ಲ ಕಾರ್ಯಗಳಲ್ಲಿಯೂ ಬಲ ಗೈ ಬಂಟನಂತೆ ಸಹಾಯಕನಾಗಿರ ಬಹುದು.ತ ಮ್ಮ ನೆಚ್ಚಿನ ಸಹಾಯಕ ನಾಥ ಸಂಪ್ರದಾಯದ ಅನುಯಾಯಿಯಾಗಿರುಅವ ಅಣ್ಣಪ್ಪನಿಗಾಗಿಯೇ ಆತನ ಇಷ್ಟ ದೈವ ಕದಿರೆಯಮಂಜುನಾಥನನ್ನು ಇಲ್ಲೂ ಪ್ರತಿಷ್ಟಾಪಿಸಿರ ಬಹುದು .
ಕನ್ನಡ ಯಾನೆ ಪುರುಷ ಭೂತ ಪಾದ್ದನದಲ್ಲಿ ಇಬ್ಬರು ಜೋಗಿ ಪುರುಷರು (ಜೋಗಿ ಜಗನಂದ ಪುರುಷರು )ಕಲ್ಲೆಂಬಿ ಪೆರ್ಗಡೆ ಬೀದಿಗೆ ಹೋಗಿ ಕಾರಣಿಕ ತೋರುವ ವಿಚಾರ ಇದೆ .ಇವರಿಬ್ಬರು ಉಲ್ಲಾಕುಳುಗಳ ಪ್ರಧಾನಿ ಎಂಬಂತೆ ಆರಧಿಸಲ್ಪಡುತ್ತಾರೆ.
ನೆಲ್ಯಾಡಿ ಜೈನ ಬೀಡು .ಅವರಲ್ಲಿ ಶಿವನನ್ನು ಆರಾಧಿಸುವ ಸುವ ಸಂಪ್ರದಾಯವಿಲ್ಲ .ಹಾಗಿದ್ದರೂ ಅಲ್ಲಿ ಪ್ರಸಿದ್ಧವಾದ ಶಿವನ /ಮಂಜುನಾಥನ ದೇವಾಲಯವಿದೆ .ಇದನ್ನು ಕಟ್ಟಿಸಿದವರಾರು?ಅಥವ ಅದಕ್ಕೆ ಪ್ರೇರಣೆ ಯಾರು ?ಎಂದು ಯೋಚಿಸಿದಾಗ “ಜೋಗಿಗಳು ಶೈವ ಮತಾವಲಂಭಿಗಳು ,ಪಾದ್ದನದಲಿ ಕೂಡ ಜೋಗಿ ಪುರುಷ ತಂದದ್ದೆಂದು ಇದೆಯಾದ್ದರಿಂದ ಆ ಜೋಗಿ ಪುರುಷಣೆ ಇದಕ್ಕೆ ಕಾರಣ ಕರ್ತ  ಅಥವಾ ಪ್ರೇರಕ ಆಗಿರಬಹುದು.ಮಂಜು ನಾಥ ಎಂಬ ಹೆಸರು ಕೂಡಾ ನಾಥ ಸಂಪ್ರದಾಯದ ಮತ್ಸ್ಯೆಂದ್ರ ನಾಥನನನ್ನು ದ್ಯೋತಿಸುತ್ತದೆ ಎಂದು ಕದವ ಶಂಭು ಶರ್ಮ ,ಡಾ.ಎಸ್ ನಾಗರಾಜು ಮೊದಲಾದ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ .ದೇವಸ್ಥಾನವನ್ನು ಕಟ್ಟಿಸಿದ ಮಹತ್ಕಾರ್ಯ ಮಾಡಿದವರು ದೈವತ್ವವನ್ನು ಪಡೆದು ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಂಡು ಬರುವ ವಿಚಾರ /ಕಾರಿಂಜೆತ್ತಾಯ,ಚೆನ್ನಿಗರಾಯ ,ಅಚ್ಚು ಬಂಗೇತಿ,ಅಡ್ಕತ್ತಾಯ ಮೊದಲಾದವರು ದೇವಾಲಯ ಕಟ್ಟಿಸಿದ ಕಾರಣದಿಂದಲೇ ದೈವಾನುಗ್ರಹ ಪಡೆದು ದೈವಿಕತೆಯನ್ನು ಪಡೆದು ಆರಾಧಿಸಲ್ಪಡುತ್ತಿದ್ದಾರೆ.
ಅದೇ ರೀತಿ ಜೋಗಿ ಪುರಷ ಕೂಡ  ಅಣ್ಣಪ್ಪ ಎಂಬ ಹೆಸರಿನಲ್ಲಿ ದೈವತ್ವವನ್ನು ಪಡೆದಿರಬಹುದು.ಇದಲ್ಲದೆ ಅಣ್ಣಪ್ಪ ಮೂಲತಃ ಒಬ್ಬ ಸ್ಥಾನಿಕ ಬ್ರಾಹ್ಮಣ ಎಂಬ ಐತಿಹ್ಯ ಕೂಡ ಇದೆ.ಬಲ್ಲಾಳರಿಗೆ ಬಲ ಗೈಯಂತೆ/ ಮನೆಮಗನಂತೆ ಇದ್ದ  ಕೃಷ್ಣ ಭಟ್ಟ ಎಂಬಾತನನ್ನು ಹೊಟ್ಟೆಕಿಚ್ಚಿನಿಂದ ಯಾರೋ  ಅವಲಕ್ಕಿಯೊಂದಿಗೆ ಪೀಲೆಯನ್ನು ಬೆರೆಸಿ ನೀಡಿದರು .ದುರಂತವನ್ನಪ್ಪಿದ .ಆತನಿಗೆ ಕೂಡ ಅಣ್ಣಪ್ಪ ದೈವದೊಂದಿಗೆ ಆರಾಧನೆ ಇದೆ ಎಂಬ ಐತಿಹ್ಯ ಇರುವ ಬಗ್ಗೆ ಹಿರಿಯರಾದ ಶ್ರೀ ಆನಂದ ಕಾರಂತ ,ಶ್ರೀ ಪರಮೇಶ್ವರ ಭಟ್ ಮೊದಲಾದವರು ತಿಳಿಸಿದ್ದಾರೆ .ಕೃಷ್ಣ ಭಟ್ ಓರ್ವ ವೀರ ಸಂನ್ಯಾಸಿ ಅಣ್ಣಪ್ಪ ದೈವವನ್ನು ಜಲ ಸ್ಥಂಭನ ಮಾಡುವಾಗ ದುರಂತವನ್ನಪ್ಪಿದವರು .ಆತನೇ ಅಣ್ಣಪ್ಪ ದೈವವೇ ಅಥವಾ ಆತ ಅಣ್ಣಪ್ಪ ದೈವದ ಸನ್ನಿಧಿಗೆ ಸೇರಿರುವ ದೈವತವೆ ಎಂಬ ಬಗ್ಗೆ ಮಾಹಿತಿ ಇಲ್ಲ.ಅಣ್ಣಪ್ಪ ದೈವ ಕಾಯಂಬಾಡಿ ಕೃಷ್ಣ ಭಟ್ರೆಗ್ ಅಮೃತ ಪಡಿ ಸಂದುದುಂಡಾ ಎಂದು ಕೇಳುವ ಪದ್ದತಿ ಇದೆ ಎಂದು ಪರಮೇಶ್ವರ ಭಟ್ಟರು ತಿಳಿಸಿದ್ದಾರೆ ಹಾಗಾಗಿ ಅಣ್ಣಪ್ಪ ಮತ್ತು ಕೃಷ್ಣ ಭಟ್ಟರು ಬೇರೆ ಬೇರೆ ಇರುವ ಸಾಧ್ಯತೆ ಇದೆ ಧರ್ನಸ್ಥಳದಲ್ಲಿ ಕೃಷ್ಣ ಭಟ್ಟರನ್ನು ಆರಾಧಿಸುತ್ತಾರೆ ಅವರಿಗೊಂದು ಗುಡಿ ಇದೆ ಎಂದು ಹೇಳುತ್ತಾರೆ .

 ಸ್ಥಾನಿಕ ಬ್ರಾಹ್ಮಣರಲ್ಲಿ  ಅಣ್ಣಪ್ಪಯ್ಯ ಎಂಬ ವೀರ ಸಂನ್ಯಾಸಿ ಇದ್ದರು.ಕಾಲಾಂತರದಲ್ಲಿ ಅವರನ್ನು ಸ್ಥಾನಿಕ ಬ್ರಾಹ್ಮಣರು ಅಣ್ಣಪ್ಪ ಪಂಜುರ್ಲಿ ,ಇಷ್ಟ ದೇವತೆ ಸತ್ಯ ದೇವತೆ ಎಂಬ ಹೆಸರುಗಳಲ್ಲಿ ಆರಾಧನೆ ಮಾಡುತ್ತಾರೆ ಎಂಬ ಕಥಾನಕವೂ ಪ್ರಚಲಿತವಿದೆ 
ಧರ್ಮಸ್ಥಳದಲ್ಲಿ ಅಣ್ಣಪ್ಪ ಬೆಟ್ಟಕ್ಕೆ ಸ್ತ್ರೀಯರಿಗೆ ಪ್ರವೇಶವಿಲ್ಲ .ಬಹುಶ ಇದರ ಅನುಸರಣೆಯೋ ಏನೋ ?ಕೆಲವೆಡೆ ಅಣ್ಣಪ್ಪ ದೈವದ ನೇಮಕ್ಕೆ ಸ್ತ್ರೀಯರಿಗೆ ನಿಷೇಧ ಇದೆ ಆದರೆ ಕೆಲವೆಡೆ ಗಳಲ್ಲಿ ಅಣ್ಣಪ್ಪ ದೈವದ ಕೋಲ ಆಗುವಾಗ ಸ್ತ್ರೀಯರಿಗೆ ಪ್ರವೇಶ ಇದೆ .
ಜಾನಪದ ಕಥಾನಕಗಳು ಮೌಖಿಕ ಸಂಪ್ರದಾಯದಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವಾಗ ಅನೇಕ ಪಾಠ ಭೇದ ಗಳು  ಉಂಟಾಗುತ್ತವೆ ,ಅದರಲ್ಲಿನ ಮೂಲ ಆಶಯ ವನ್ನು ಗುರುತಿಸಿ ಅಧ್ಯಯನ ಮಾಡಬೇಕಾಗಿದೆ .
ಆಧಾರ ಗ್ರಂಥಗಳು
1.ಡಾ,ಅಮೃತ ಸೋಮೇಶ್ವರ .ತುಳುಜಾನಪದ ಕೆಲವು ನೋಟಗಳು ,
                              ಮತ್ತು ತುಳು ಪಾಡ್ದನ ಸಂಪುಟ
2 ಡಾ..ವಿವೇಕ ರೈ,ತುಳುಜನಪದ ಸಾಹಿತ್ಯ (ಪಿಎಚ್,ಡಿ ಮಹಾ ಪ್ರಬಂಧ ).
                               ಮತ್ತು ಪುಟ್ಟು ಬಳಕೆಯ ಪಾಡ್ದನಗಳು
3 ಡಾ.ಚಿನ್ನಪ್ಪ ಗೌಡ ,ಭೂತಾರಾಧನೆ –ಒಂದು ಜಾನಪದೀಯ ಅಧ್ಯಯನ
4 ಡಾ.ಗಣೇಶ ಅಮೀನ್ ಸಂಕಮಾರ್ ,ನುಡಿಸಿಂಗಾರ
5 ಕಡವ ಶಂಭು ಶರ್ಮ  ನಾಥ ಸಂಪ್ರದಾಯ
5ಮೌಖಿಕ ಮಾಹಿತಿಗಳು ನೀಡಿದವರು 1 ಪರಮೇಶ್ವರ ಭಟ್ (ಸು 70 ವರ್ಷ ),ಕೆಯ್ಯೂರು2  ಶ್ರೀ ಆನಂದ ಕಾರಂತ (ಸು 75 ವರ್ಷ ) ಕೋಳ್ಯೂರು

ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ವಿನಂತಿ

ಒರಿ ಮರ್ಲ ಪಂಜುರ್ಲಿ 
ಧರ್ಮಸ್ಥಳದಲ್ಲಿ ಅಣ್ಣಪ್ಪ ದೈವದ ಪರಿವಾರ ದೈವ ಉರಿಮರ್ಲ. ಈ ದೈವವನ್ನು ಒರಿಮರ್ಲೆ (ಒಬ್ಬ ಮರುಳ) ಎಂದು ಕೂಡ ಕರೆಯುತ್ತಾರೆ.ನ್ಯಾಯಾನ್ಯಾಯದ ಪ್ರಶ್ನೆಯನ್ನು ಪರಿಹರಿಸಲು ಸಾಧ್ಯವಾಗದೆ ಇದ್ದಾಗ ಜನರು ದೇವರ ಮೊರೆ ಹೋಗುತ್ತಾರೆ .ಅನ್ಯಾಯಕ್ಕೊಳಗಾದವರು "ನ್ಯಾಯಾನ್ಯಾಯವನ್ನು ದೇವರು ನೋಡಿಕೊಳ್ಳಲಿ" ಎಂದು ಹರಿಕೆ ಹೇಳಿಕೊಳ್ಳುತ್ತಾರೆ  
 ಧರ್ಮಸ್ಥಳ ಮಂಜುನಾಥ ದೇವರಿಗೆ ಆಣೆ ಹಾಕುವುದು ಎಂಬ ಪದ್ಧತಿ ಪ್ರಚಲಿತ ಇದೆ .ಮಂಜುನಾಥ ಒಂದು ಆಣೆಯನ್ನು ಕೂಡಾ ಬಿಡಲಾರ ಎಂಬ ನಂಬಿಕೆ ಜನರಿಗಿದೆ.
ಧರ್ಮಸ್ಥಳದ ಮಂಜುನಾಥ ದೇವರ ಮೇಲೆ ಆಣೆ ಇಟ್ಟು ತಪ್ಪಿ ನಡೆದು, ವಾಕ್ ದೋಷಕ್ಕೆ ಒಳಗಾದವರಿಗೆ ಹುಚ್ಚು ಹಿಡಿಸಿ ಧರ್ಮಸ್ಥಳಕ್ಕೆ ಕರೆತರುವ ಕಾರ್ಯವನ್ನು ಉರಿಮರ್ಲ ದೈವ ಮಾಡುತ್ತದೆ. ಈ ದೈವಕ್ಕೆ ಎರಡು ಬೆಳ್ಳಿಯ ಕಣ್ಣು ಹಾಗೂ ಮೂಗು ಇರುವ ವಿಶಿಷ್ಟ ಮುಖವಾಡವಿದೆ. ಈ ದೈವವನ್ನು ಸ್ತ್ರೀರೂಪಿ ಎಂದು ಭಾವಿಸಲಾಗಿದೆ. ಈ ದೈವದ ಪಾಡ್ದನ, ಐತಿಹ್ಯಗಳು ಲಭ್ಯವಾಗಿಲ್ಲ.
ಆದರೆ ಒರಿ ಮರ್ಲ ಎಂದರೆ ಒಬ್ಬ ಹುಚ್ಚ ಎಂಬ ಅರ್ಥವನ್ನು ನೋಡುವಾಗ ವಾಸ್ತವದಲ್ಲಿ ಒಬ್ಬ ಮಾನಸಿಕ ಅಸ್ವಸ್ಥ (ಮರ್ಲ ?!) ಕಾರಣಾಂತರಗಳಿಂದ ದುಂತವನ್ನಪ್ಪಿ ದೈವತ್ವವನ್ನು ಪಡೆದು ಪಂಜುರ್ಲಿ ದೈವದ ಸೇರಿಗೆಗೆ ಸಂದು ಆರಧಿಸಲ್ಪತ್ತಿರುವ ಸಾಧ್ಯತೆ ಇದೆ ಎಂದು ತೋರುತ್ತದೆ .ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗದ ಕರಣ ಏನೊಂದೂ ಹೇಳುವುದು ಕಷ್ಟಕರ .ಈ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯವಿದೆ .

ಸೇಮಿ ಕಲ್ಲ ಪಂಜುರ್ಲಿ 

 


 

                                                ಚಿತ್ರ ಕೃಪೆ :ಧರ್ಮ ದೈವ


ಹೆಸರಿನಲ್ಲಿ ಪಂಜುರ್ಲಿ ಎಂದು ಇದ್ದರೂ ಕ್ಷೇಮಕಲ್ಲ /ಸೇಮಿ ಕಲ್ಲ ಪಂಜುರ್ಲಿ, ಪಂಜುರ್ಲಿ ದೈವವಲ್ಲ .ಪಂಜುರ್ಲಿಯ ಸೇರಿಗೆ ದೈವ ಕೂಡ ಅಲ್ಲ
ಪ್ರಧಾನ ದೈವದ ಸೇರಿಗೆಯಾಗಿ ಅನೇಕ ದೈವಗಳಿಗೆ ಆರಾಧನೆ ಇರುತ್ತದೆ .ಸಾಮಾನ್ಯವಾಗಿ ಸೇರಿಗೆ ದೈವಗಳು ಪ್ರಧಾನ ದೈವದ ಆಗ್ರಹ ಅಥವಾ ಅನುಗ್ರಹ ಪಡೆದು ದೈವತ್ವ ಪಡೆದ ಶಕ್ತಿಗಳಾಗಿರುತ್ತವೆ
ಹೀಗೆ ಸತ್ಯನಾಪುರದ ಸಿರಿಯ ಆಗ್ರಹಕ್ಕೆ ತುತ್ತಾಗೆ ದೈವತ್ವ ಪಡೆದ ದೈವ ಕ್ಷೇಮಿಕಲ್ಲ ಪಂಜುರ್ಲಿ .ಸತ್ಯನಾಪುರದ ರಾಜ ಬೆರ್ಮ ಆಳ್ವನಿಗೆ ಹುಟ್ಟಿದ ಮಗು ಸಾಯುತ್ತದೆ. ಹೆಂಡತಿಯೂ ಸಾಯುತ್ತಾಳೆ. ಬೇರೆ ಸಂತಾನವಿಲ್ಲದ ವೃದ್ಧ ಅರಸ ಬೆರ್ಮ ಆಳ್ವನಿಗೆ ‘ಮುಂದೆ ತನ್ನ ರಾಜ್ಯಕ್ಕೆ ದಿಕ್ಕಿಲ್ಲ’ ಎಂದು ಚಿಂತೆಯಾಗಿ ದುಃಖಿಸುತ್ತಾನೆ. ಅವನ ಕಣ್ಣೀರು ಅವನ ಕುಲದೈವ ಲಂಕೆಲೋಕನಾಡಿನ ಬೆರ್ಮರ ಪಾದಕ್ಕೆ ಸಂಪಿಗೆ ಹೂವಿನ ರಾಶಿಯಾಗಿ ಬೀಳುತ್ತದೆ.

ಆಗ ಬೆರ್ಮೆರ್ ಬಡಬ್ರಾಹ್ಮಣನ ರೂಪ ಧರಿಸಿ, ಬೆರ್ಮ ಆಳ್ವನಲ್ಲಿಗೆ ಬಂದು ‘ಲಂಕೆಲೋಕನಾಡಿನ ಆದಿ ಆಲಡೆ, ಕಾಡು-ಪೊದೆ ಬಳ್ಳಿಯಿಂದ ಸುತ್ತುವರಿದು ಪಾಳು ಬಿದ್ದಿದೆ. ಅದರ ಜೀರ್ಣೋದ್ಧಾರ ಮಾಡಿದರೆ ನಿನ್ನ ಸಮಸ್ಯೆ ಸರಿಹೋಗುತ್ತದೆ’ ಎಂದು ಹೇಳುತ್ತಾನೆ. ಅಂತೆಯೇ ಬೆರ್ಮ ಆಳ್ವ ಹೋಗಿ ಲಂಕೆಲೋಕನಾಡಿನ ‘ಬೆರ್ಮೆರ’ ಪ್ರಾರ್ಥನೆಯನ್ನು ಮಾಡಿ ಕಾಡಿನಲ್ಲಿರುವ ಬೆರ್ಮೆರನ್ನು ತಂದು ಏಳದೆ ಗುಂಡ ಗುಡಿ ಕಟ್ಟಿಸುತ್ತೇನೆ ಎಂದು ಹರಿಕೆ ಹೇಳುತ್ತಾನೆ. ಆಗ ಪ್ರಸಾದರೂಪದಲ್ಲಿ ಸಿಕ್ಕ ಹಿಂಗಾರದ ಹಾಳೆಯ ಮೇಲಿನ ಗಂಧದ ಗುಳಿಗೆ ಹೆಣ್ಣುಮಗುವಾಗುತ್ತದೆ.
ಆ ಮಗುವನ್ನು ದೇವರ ವರವೆಂದು ಭಾವಿಸಿ ಬೆರ್ಮ ಆಳ್ವ ಆ ಮಗುವಿಗೆ ‘ಬಾಲೆಕ್ಕೆ ಸಿರಿ’ ಎಂದು ಹೆಸರಿಟ್ಟು ಸಾಕುತ್ತಾನೆ. ಮುಂದೆ ಬಸ್ರೂರು ಬತ್ತಕೇರಿ ಅರಮನೆಯ ಕಾಂತುಪೂಂಜರ ಜೊತೆ ಅವಳ ಮದುವೆಯಾಗುತ್ತದೆ. ಮುಂದೆ ಕಾಂತುಪೂಂಜ ಸೂಳೆ ಸಿದ್ದುವಿನ ಸಹವಾಸ ಮಾಡುತ್ತಾನೆ. ಸಿರಿ ಗರ್ಭಿಣಿಯಾಗುತ್ತಾಳೆ. ಅವಳ ಸೀಮಂತಕ್ಕೆ, ತೆಗೆದ ಸೀರೆಯನ್ನು ಸೂಳೆ ಸಿದ್ದು ಉಟ್ಟು ನೆರಿಗೆ ಹಾಳು ಮಾಡುತ್ತಾಳೆ. ಈ ಬಗ್ಗೆ ಬೆರ್ಮೆರ್ ಸಿರಿಗೆ ಸೂಚನೆ ನೀಡಿರುತ್ತಾರೆ.

 ಆದ್ದರಿಂದ ಆ ಸೀರೆಯನ್ನು ತಿರಸ್ಕರಿಸಿ ತನ್ನ ಅಜ್ಜ ತಂದ ಸೀರೆಯನ್ನು ಉಡುತ್ತಾಳೆ. ಎಲ್ಲರ ಎದುರು ತನ್ನ ಮರ್ಯಾದೆ ತೆಗೆದಳೆಂದು ಕಾಂತುಪೂಂಜ ಸಿರಿಯೊಡನೆ ಕೋಪಿಸುತ್ತಾನೆ. ಮುಂದೆ ಅವಳು ಮಗುವನ್ನು ಹೆತ್ತಾಗಲೂ ನೋಡಲು ಬರುವುದಿಲ್ಲ. ಬೆರ್ಮ ಆಳ್ವ ಸತ್ತಾಗಲೂ ಬರುವುದಿಲ್ಲ. ಕಾಂತುಪೂಂಜನ ಪಿತೂರಿಯಿಂದಾಗಿ ಬೆರ್ಮ ಆಳ್ವನ ಅರಮನೆ, ರಾಜ್ಯ ದಾಯಾದಿಗಳ ಪಾಲಾಗುತ್ತದೆ.
 ಸಿರಿ ತನ್ನ ಮಗು ಕುಮಾರ ಹಾಗೂ ಕೆಲಸದ ಹೆಂಗಸು ದಾರುವಿನೊಂದಿಗೆ ಬಸ್ರೂರು ಬತ್ತಕೇರಿ ಅರಮನೆಗೆ ಬಂದು ಬರ (ವಿಚ್ಛೇದ)ವನ್ನು ಕೇಳುತ್ತಾಳೆ. ಮುಂದೆ ಅರಮನೆ ಉರಿದು ಹೋಗುವಂತೆ ಶಾಪ ಕೊಟ್ಟು ಅಲ್ಲಿಂದ ದೇಶಾಂತರ ಹೋಗುತ್ತಾಳೆ
ಸಂಜೆ ಹೊತ್ತು ಕಂತುವುದರ ಒಳಗೆ ತನ್ನ ರಾಜ್ಯದ ಗದುಯನ್ನು ದಾಟಿ ಹೋಗಬೇಕೆಂದು ಕಾಂತು ಪೂಂಜ ಹೇಳುತ್ತಾನೆ .
ಅಂತೆಯೇ ದಾರುವಿನೊಂದಿಗೆ ತೊಟ್ಟಿಲ ಮಗುವನ್ನು ಹಿಡಿದುಕೊಂಡು ಬರುವಾಗ ದಾರಿಯಲ್ಲಿ ಗಾಳಿ ಕೊಂತ್ಯಮ್ಮ ದೇವರು ಸಿಗುತ್ತಾರೆ .
ಸಿರಿಗೆ ರಸ ಬಾಲೆ ಹಣ್ಣು ಹಾಲು ತಂದು ಕೊಡುತ್ತಾಳೆ .ಮತ್ತೆ ಅವಳಲ್ಲಿ ನನ್ನ ಮಗ ವೀರ ಭದ್ರ ಕುಮಾರ ಬರುವ ಮೊದಲು ಇಲ್ಲಿಂದ ಹೋಗು ಅವನು ಕಂಡರೆ ನಿನ್ನನ್ನು ಬಿಡಲಾರ ,ಅವನು ಸಿಕ್ಕರೆ ಅವನನ್ನು ನಿನ್ನ ಮಗನ ಹಾಗೆ ಭಾವಿಸಿ ಅವನ ತಪ್ಪನ್ನು ಕ್ಷಮಿಸಬೇಕು ಎಂದು ಹೇಳುತ್ತಾರೆ .ಆಯಿತು ಎಂದು ಹೇಳುತ್ತಾಳೆ ಸಿರಿ
ಅಲ್ಲಿಂದ ಮುಂದೆ ಹೋಗುವಾಗ ವೀರ ಭದ್ರ ಕುಮಾರ ಹಿಮ್ಬಾಲಿಸ್ಕೊಂದು ಬಂದು ಅಡ್ಡ ಕಟ್ಟುತ್ತಾನೆ .ಅವಳತಲೆ ಕೂದಲಿಗೆ ಕೈ ಹಾಕುತ್ತಾನೆ .ಆಗ


ಓ ಮುಟ್ಟಡ ಮುಟ್ಟಡ ಪಂಡೆರ್ ಬಾಲೆಕ್ಕೆ ಸಿರಿಯೇ
ಓ ಪನ್ನಲ ಪತ್ತಿನಕೇಂಡಿಜೆ ಪಂಡೆರ್ ಆರಾಂಡ ಆನಿಗಯ್ ಯೇ
ಓ ಒಲಿಪ್ಪಾಲ ಉದೆಟ್ ಲ ನೆದಿಪ್ಪಾಲ ಕಲ್ಲುಲ ಪಾದೆಲ ನೆಗೆಪ್ಪುಲಾಯೆ

ನನ್ನನ್ನು ಮುಟ್ಟ ಬೇಡ ಮುಟ್ಟ ಬೇಡ ಎಂದು ಸಿರಿ ಹೇಳುತ್ತಾಳೆ .ಅವಳ ಮಾತನ್ನು ಲಕ್ಷಿಸದೆ ಮುಂದುವರಿದ ಅವನಿಗೆ ಶಾಪ ಕೊಟ್ಟು ಹೊಳೆಯಲ್ಲಿ ಪಾದೆ ಕಲ್ಲಾಗುವಂತೆಮಾಡುತ್ತಾಳೆ .ಮುಂದೆ ಅವನ ತಾಯಿಗೆ ಕೊಟ್ಟ ಮಾತು ನೆನಪಾಗಿ ಆತನಿಗೆ ದೈವತ್ವ ನೀಡಿ ಕ್ಷೇಮ ಕಲ್ಲು ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆ ಎಂದು ಹೇಳುತ್ತಾಳೆ .

ಹೀಗೆ ಸಿರಿರ್ಯ ಅನುಗ್ರಹದಿಂದ ದೈವತ್ವ ಪಡೆದ ವೀರ ಭದ್ರ ಕುಮಾರ ಕ್ಷೇಮ ಕಲ್ಲ ಪಂಜುರ್ಲಿ ದೈವವಾಗಿ ನೆಲೆ ನಿಲ್ಲುತ್ತಾನೆ .

ಡಾ.ಲಕ್ಷ್ಮೀ ಜಿ ಪ್ರಸಾದ 

ಲೇ : ಕರಾವಳಿಯ ಸಾವಿರದೊಂದು ದೈವಗಳು 

ಮಬೈಲ್ 9480516684:

 

 

Thursday, 20 March 2025

ದೊಡ್ಡವರ ದಾರಿ :76 : ಉದಾರಿ ದಕ್ಷ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ ..

 ದೊಡ್ಡವರ ದಾರಿ : ಉದಾರಿ ದಕ್ಷ ಪ್ರಿನ್ಸಿಪಾಲ್  ಸಿಸ್ಟರ್ ನತಾಲಿಯಾ ಡಿ ಸೋಜ 

ಇಲ್ಲಿ ಜಡೆಗಳು ಜಗಳವಾಡುವುದಿಲ್ಲ

ಜಗ ಮೆಚ್ಚುವಂತೆ ಕೆಲಸ ಮಾಡುತ್ತವೆ..



ಕಳೆದ ಇಪ್ಪತ್ತು ದಿನಗಳಿಂದ ನನಗೆ ಬೆಂಗಳೂರಿನ ಜ್ಯೋತಿ ನಿವಾಸ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸ್ಪೆಷಲ್ ಇನ್ವಿಜಿಲೇಟರ್ಸ್ ಸ್ಕ್ವಾಡ್ ಆಗಿ ಕರ್ತವ್ಯ..

ಇದು ಬಹಳ ದೊಡ್ಡ ಶಿಕ್ಷಣ ಸಂಸ್ಥೆ. ಪಿಯು ವಿಭಾಗದಲ್ಲಿಯೇ 2000 ವಿದ್ಯಾರ್ಥಿಗಳಿದ್ದಾರೆ.ಇಲ್ಲಿ ಅನೇಕ ಬಡ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಾರೆ ,ಬಡ ವಿದ್ಯಾರ್ಥಿನಿಯರಿಗೆ ಊಟ ತಿಂಡಿ ಕೂಡ ಉಚಿತವಾಗಿ ಕೊಡುವ ವ್ಯವಸ್ಥೆ ಇದೆ 

ಇಲ್ಲಿನ  ವಿದ್ಯಾರ್ಥಿಗಳಿಗೆ ಇದು ಪರೀಕ್ಷಾ ಕೇಂದ್ರವಲ್ಲ.ಬೇರೆ ಬೇರೆ ಕಾಲೇಜುಗಳ ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳಿಗೆ ಇಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದವು.

ಇದು ಸಿಸ್ಟರ್ಸ್ ನಡೆಸುವ ಮಹಿಳಾ  ಕಾಲೇಜು..ಹೆಚ್ಚಿನ ಉದ್ಯೋಗಿಗಳು ಕೂಡ ಮಹಿಳೆಯರೇ..ಇಲ್ಲಿನ  ಶಿಸ್ತು,ಸ್ವಚ್ಛತೆ, ಅಚ್ಚುಕಟ್ಟುತನ ಯಾರೂ ಕೂಡ ಮೆಚ್ಚಬೇಕಾದ್ದೇ..

ಅಷ್ಟು ದೊಡ್ಡ ಕಾಲೇಜಾದರೂ ಒಂದಿನಿತು ಗಲಭೆ ಇಲ್ಲ..ಸಿಟ್ಟು ಸೆಡವುಗಳಿಲ್ಲ..

ಚೀಫ್ ಎಕ್ಸಾಮಿನರ್ ಆಗಿರುವ ಪ್ರಿನ್ಸಿಪಾಲ್ ಸಿಸ್ಟರ್ ನತಾಲಿಯಾ ಡಿ ಸೋಜ  ಸಣ್ಣ ವಯಸ್ಸಿನವರು ಆದರೆ ಅವರ ನಿರ್ವಹಣಾ ಸಾಮರ್ಥ್ಯ ಅಸಾಧಾರಣವಾದುದು.ಹಾಗಾಗಿ ಪರೀಕ್ಷಾ ಕಾರ್ಯ ಯಾವುದೊಂದು ಸಣ್ಣ ಗೊಂದಲ ಸಮಸ್ಯೆ ಇಲ್ಲದೇ ನಡೆಯಿತು.

ಸದಾ ನಗು ಮುಖದಿಂದ ತಾಳ್ಮೆಯಿಂದ ಇರುವ ಅವರ ನಡೆ ನುಡಿ ನಿಜಕ್ಕೂ ಅನುಕರಣೀಯವಾಗಿದೆ ,ಇವರು ಫ್ರೆಂಚ್ ಭಾಷಾ ತಜ್ಞರೂ,ಪ್ರೆಂಚ ಉಪನ್ಯಾಸಕರೂ , ಸ್ತ್ರೀವಾದಿಗಳೂ ಆಗಿದ್ದಾರೆ .ಅನೇಕ ಪ್ರಬಂಧ ಗಳನ್ನು ಮಂಡಿಸಿದ್ದಾರೆ.ಸ್ತ್ರೀ ಸಂಬಂಧಿ ವಿಷಯದಲ್ಲಿ ಪಿ ಎಚ್ ಡಿ ಮಾಡ್ತಾ ಇದ್ದಾರೆ.

ಈವತ್ತು ಅಲ್ಲಿನ ಮೂವರು ಉಪನ್ಯಾಸಕಿಯರ ಹುಟ್ಟು ಹಬ್ಬ ಇತ್ತು ಅವರಿಗೆ ಶುಭ ಹಾರೈಸಿ ಉಡುಗೊರೆ ಯನ್ನು ಬಹಳ ಪ್ರೀತಿಯಿಂದ ಕೊಟ್ಟಿದ್ದಾರೆ.ಅದೇ ರೀತಿ ಅಲ್ಲಿನ ಕನ್ನಡ ಉಪನ್ಯಾಸಕಿ ಧನ ಲಕ್ಷ್ಮೀ ಯವರಿಗೆ ಅವರಿಗೆ ಒಂದು ಸಂಸ್ಥೆ ( ಹೆಸರು ಮರೆತೆ ) ಯಿಂದ ಉತ್ತಮ ಶಿಕ್ಷಕಿ ಪ್ರಶಸ್ತಿ ದೊರೆತಿತ್ತು.ಅದನ್ನು ಪಡೆದು ಅವರು ಕಾಲೇಜಿಗೆ ಬಂದಾಗ ಸ್ವತಃ ಪ್ರಾಂಶುಪಾಲರು ಅವರನ್ನು ಮುಕ್ತವಾಗಿ ಅಭಿನಂದಿಸಿ ನಮ್ಮ ಉಪನ್ಯಾಸಕಿ ಎಂದು ಹೆಮ್ಮೆ ಪಟ್ಟದ್ದನ್ನು ನಾನು ಕಣ್ಣಾರೆ ನೋಡಿದೆ .ತಮ್ಮ ಕೈ ಕೆಳಗಿನ ಅಧಿಕಾರಿಗಳನ್ನು ಮೆಚ್ಚಿ ಹೆಮ್ಮೆ ಪಡುವ ಉದಾರತೆ ಎಷ್ಟು ಪ್ರಾಂಶುಪಾಲರಿಗೆ  ಇದೆ ?  ನಮ್ಮ ಬ್ಯಾಟರಾಯನಪುರ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ದಯಾನಂದ ಸ್ವಾಮಿ ಬಿ ಎಂ ಎಸ್ ಅವರಿಗೆ ಇಂತಹ ಉದಾರತೆ ಇದೆ .ಇವರನ್ನು ಬಿಟ್ಟರೆ ಇಂತಹ ಉದಾತ್ತ ಮನೋಭಾವವನ್ನು ನಾನು ಕಂಡದ್ದು ಸಿಸ್ಟರ್ ನತಾಲಿಯಾ ಅವರಲ್ಲಿಯೇ..

ಅಲ್ಲಿನ ಎಲ್ಲ ಉದ್ಯೋಗಿಗಳ ಬಗ್ಗೆ ಕೂಡ ಅವರಿಗೆ ಅಪಾರ ಪ್ರೀತಿ ಅಭಿಮಾನ.‌.ಅದನ್ನು ಅವರ ನಡೆ ನುಡಿ ಆತ್ಮೀಯತೆ ತುಳುಕುವ ಕಣ್ಣಗಳಲ್ಲಿ ನಾವು ಕಾಣಬಹುದು. 

ಈವತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮುಗಿದವು.ನಾವು ಹಾಜರಾತಿ ಪ್ರಮಾಣ ಪತ್ರ ತಗೊಂಡು ಹೊರಡುವಾಗ   ಬೇಡ ಎಂದರೂ ಶಾಲು ಹೊದೆಸಿ ಸನ್ಮಾನಿಸಿ ಬಹಳ ಪ್ರೀತಿಯಿಂದ ಬೀಳ್ಕೊಟ್ಟರು 

ಎರಡು ಜಡೆಗಳು ಸೇರಿದರೆ ಜಗಳ ಆಗುತ್ತದೆ ಎಂಬ ನುಡಿಯನ್ನು ಈ ಮಹಿಳಾ  ಕಾಲೇಜಿನ ಪ್ರಿನ್ಸಿಪಾಲ್ ಉಪನ್ಯಾಸಕಿಯರು ಮತ್ತು ಮಹಿಳಾ ಸಿಬ್ಬಂದಿಗಳು ಸುಳ್ಳು ಎಂದು ಸಾಧಿಸಿ ತೋರಿಸಿದ್ದಾರೆ

ಇಲ್ಲಿ ಚೀಫ್ ಎಕ್ಸಾಮಿನರ್ (  ಪ್ರಿನ್ಸಪಾಲ್ ಸಿಸ್ಟರ್  ನತಾಲಿಯಾ ಡಿ ಸೋಜ  ,ಜಾಯಿಂಟ್ ಚೀಫ್ ಎಕ್ಸಾಮಿನರ್ ( ರಾಜಮ್ಮ ವಾಣಿಜ್ಯ ಶಾಸ್ತ್ರ ಉಪನ್ಯಾಸಕರು ರಾಣಿ ಸರಳಾದೇವಿ ಕಾಲೇಜು) Answer paper bundle custodian ( ಪ್ರೀತಿ ,ಅರ್ಥ ಶಾಸ್ತ್ರ ಉಪನ್ಯಾಸಕರು ಜ್ಯೋತಿ ನಿವಾಸ್ ಕಾಲೇಜು) ಸ್ಪೆಷಲ್ ಸ್ಕ್ವಾಡ್ ( ನಾನು) ಎಲ್ಲರೂ ಮಹಿಳೆಯರೇ ಆಗಿದ್ದು ಈ ಕೇಂದ್ರದಲ್ಲಿ  ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು  ಯಾವುದೇ ಒಂದು ಕಪ್ಪು ಚುಕ್ಕೆ ಇರದಂತೆ ನಿರ್ವಹಿಸಿದ ಬಗ್ಗೆ ನಮಗೆ ಹೆಮ್ಮೆ ಇದೆ .ಇದರ ಮೂಲ ಕಾರಣ ಕರ್ತರು ಜ್ಯೋತಿ ನಿವಾಸ ಪಿಯು ಕಾಲೇಜಿನ ಪ್ರಾಂಶುಪಾಲರಾದ ಸಿಸ್ಟರ್ ನತಾಲಿಯಾ( ಕುಳಿತವರಲ್ಲಿ ಎಡದಿಂದ ಮೊದಲಿನವರು)ಇನ್ನೋರ್ವ ಸಿಸ್ಟರ್ ( ಹೆಸರು ಕೇಳಲು ಮರೆತೆ) ಆಫೀಸ್ ನಲ್ಲಿ ಬಹಳ ಜವಾಬ್ದಾರಿ ಯಿಂದ ಕೆಲಸ ಮಾಡುತ್ತಿದ್ದು ನಮ್ಮನ್ನು ಬಹಳ ಪ್ರೀತಿ ಆತ್ಮೀಯತೆಯಿಂದ ನಡೆಸಿಕೊಂಡಿದ್ದಾರೆ.ಎಲ್ಲ ಉಪನ್ಯಾಸಕಿಯರೂ,ಉಪನ್ಯಾಸಕರೂ  ಇತರ ಸಿಬ್ಬಂದಿಗಳು ಕೂಡ ಬಹಳ ಸೌಜನ್ಯತೆ ತೋರಿದ್ದಾರೆ