Wednesday 4 September 2013

ಭೂತಗಳ ಅದ್ಭುತ ಜಗತ್ತಿನಲ್ಲಿ -ಬಾಕುಡರ ಸರ್ಪ ಕೋಲ


               
  ನನ್ನ  ಸಂಶೋಧನಾ ಕ್ಷೇತ್ರ ಕಾರ್ಯದಲ್ಲ್ಲಿ ನನಗೆ ಸಿಕ್ಕ ಅತಿ ಅಪರೂಪದ್ದೂ  ಅತ್ಯಂತ ಕುತೂಹಲಕಾರಿಯೂ  ರೋಮಾಂಚಕವೂ  ಆದದ್ದು ಬಾಕುಡರ ಸರ್ಪ ಕೋಲ .ಬಾಕುಡರ ಸರ್ಪ ಕೋಲ ದ ಬಗ್ಗೆ ಡಾ.ವೆಂಕಟರಾಜ ಪುಣಿಚಿತ್ತಾಯರು ತಮ್ಮ ತುಳು ನಡೆ ನುಡಿ ಕೃತಿಯಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದನ್ನು ನಾನು  ಓದಿದ್ದೆ . ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಅವರನ್ನೇ ಸಂಪರ್ಕಿಸಬೇಕಾಗಿತ್ತು .ಅವರ ಮನೆ ಕಾಸರಗೋಡು ಜಿಲ್ಲೆಯ ಪುಂಡೂರು ಎಂಬಲ್ಲಿದೆ ಎಂದು ಮಾಹಿತಿ ಸಿಕ್ಕಿತು .ದಾರಿ ಗೊತ್ತಿಲ್ಲದೆ ಇರುವ ಅಲ್ಲಿಗೆ ಒಬ್ಬಳಿಗೆ ಹೋಗಲು ಅಳುಕಾಯಿತು .ನನ್ನ ಸ್ನೇಹಿತೆ ಯುವ ಸಾಹಿತಿ ಅನುಪಮ ಪ್ರಸಾದ್ ಕುಂಬಳೆ ಸಮೀಪದಲ್ಲಿ ಇದ್ದಾರೆ
 ಅವರಲ್ಲಿ “ಪುಣಿಚಿತ್ತಾಯರ ಮನೆಗೆ ಹೋಗಿ ಬರುವನಾ?ಜೊತೆಗೆ ಬರುತ್ತೀರ  ? ಎಂದು ಕೇಳಿದೆ .ಹಿರಿಯ ಸಂಶೋಧಕರೂ ಸಾಹಿತಿಯೂ ಆಗಿದ್ದ ಅವರನ್ನು ಭೇಟಿ ಮಾಡಲು ಅನುಪಮಾರಿಗೂ ಆಸಕ್ತಿ ಇತ್ತು .ಒಂದು ದಿನ ಪುರುಸೊತ್ತು ಮಾಡಿಕೊಂಡು ಯಾವ್ಯಾವುದೋ ಬಸ್ ಹಿಡಿದುಕೊಂಡು ಅಲ್ಲಲ್ಲ್ಲಿ ವಿಚಾರಿಸಿಕೊಂಡು ಪುನ್ದೂರಿನ ಪುಣಿಚಿತ್ತಾಯರ ಮನೆಗೆ ಹೋದೆವು  !ಅದೃಷ್ಟವಶಾತ್ ನಾವು ಹತ್ತಿದ ಬಸ್ಸಿನಲ್ಲಿ ಪುಣಿಚಿತ್ತಾಯರ ಸಹೋದರರ ಮಗಳು ರಾಜಶ್ರೀ ನಮಗೆ ಸಿಕ್ಕು ನಮ್ಮ ಆತಂಕ ದೂರ ಆಗಿ ಅವರೊಂದಿಗೆ ಹೋದೆವು .ಪುಣಿಚಿತ್ತಾಯರ ಆರೋಗ್ಯ ಅಷ್ಟೊಂದು ಚೆನ್ನಾಗಿರಲಿಲ್ಲ .ಆದರೂ ಅವರು ನಮ್ಮ್ಮೊಂದಿಗೆ ಅನೇಕ ವಿಚಾರಗಳನ್ನು ಚರ್ಚಿಸಿದರು .ಅಮಗೆ ಅನೇಕ ವಿಷಯಗಳ ಕುರಿತು ಮಾಹಿತಿ ನೀಡಿದರು . ಅವರು ಕೂಡ ಬಾಕುಡರ ಸರ್ಪ ಕೋಲದ ರೆಕಾರ್ಡ್ ಮಾಡಿರಲಿಲ್ಲ .ಆದರೆ ಅದನ್ನು ನೋಡಿದ್ದರು .ತಾವು ನೋಡಿದ ವಿಚಾರವನ್ನು ವಿಶ್ಲೇಷಿಸಿ ಬರೆದಿದ್ದರು .ಬಾಕುಡರ ಸರ್ಪ ಕೋಲ  ಇಚಲನ್ಗೋಡು  ಹಾಗು ಇತರ ಕೆಲವು ಬಾಕುಡರ ಆರಾಧನ ತಾಣಗಳ ಕುರಿತು ಅವರು ಮಾಹಿತಿ ನೀಡಿದರು .ಅವರು ಆಗ ಕೇರಳ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು .ನಾನು ನಾಗಾರಾಧನೆ ಬಗ್ಗೆ ಅಧ್ಯಯನ ಮಾಡುವುದನ್ನು ಅರಿತು ಪೆರ್ಲದಲ್ಲಿ ನಡೆದ ರಾಷ್ಟೀಯ ತುಳು ಜಾನಪದ ಜಾತ್ರೆಯ ವಿಚಾರ ಸಂಕಿರಣದಲ್ಲಿ “ನಾಗ ಬೆಮ್ಮೆರೆ ಆರಾಧನೆ” ಎಂಬ ಪ್ರಬಂಧ ಮಂಡಿಸುವ ಅವಕಾಶವನ್ನು ನೀಡಿ ನನಗೆ ತುಂಬು ಬೆಂಬಲ ನೀಡಿದ್ದನ್ನು ನಾನೆಂದಿಗೂ ಮರೆಯಲಾರೆ .
 


ಅವರು ಹೇಳಿದಂತೆ ನಾನು ಇಚಲನ್ಗೋಡಿನ ಕೊಮಾರು ಚಾಮುಂಡಿ ದೈವಸ್ಥಾನದ ಮುಖ್ಯಸ್ತರನ್ನು ಸಂಪರ್ಕಿಸಿದೆ .೨೦೧೦ ರ ಮಾರ್ಚ್ ತಿಂಗಳಿನಲ್ಲಿ ಸರ್ಪ ಕೋಲ ಇತ್ತು . ರಾತ್ರಿ ನಡೆಯುವ ಕಾರಣ ನಮ್ಮ ಆತ್ಮೀಯರಾದ ಲಲಿತಕ್ಕ ಅವರನ್ನು ಕರೆದುಕೊಂಡು ನಾನು ಇಚಲಂಗೊಡಿಗೆ ಹೋಗಿ ಅಲ್ಲಿನ ವಿಶಿಷ್ಟ ನಾಗ ಭೂತಗಳ ಆರಾಧನೆ ಮತ್ತು ಅದಕ್ಕೆ ಸಂಬಂಧಿಸಿದ ಪಾಡ್ದನಗಳನ್ನೂ ರೆಕಾರ್ಡ್ ಮಾಡಿದೆ .ಐತಿಹ್ಯಗಳನ್ನು ಸಂಗ್ರಹಿಸಿದೆ ಅಲ್ಲಿ ಸುರೇಶ ಮಂಗಲ್ಪಾಡಿ ,ರತ್ನಾಕರ ಮಂಗಲ್ಪಾಡಿ ಹಾಗು ಸತೀಶ ಮಂಗಲ್ಪಾಡಿಯವರ ಸಹಕಾರ ಸಿಕ್ಕಿತು ,ಜೊತೆಗೆ ಸ್ಥಳೀಯ ಶಿಕ್ಷಕರಾದ ಹೊಳ್ಳರು  ಮತ್ತು ಅವರ ಮಡದಿ ಕೃಷ್ಣಕ್ಕ ಅವರ ಸಹಾಯವೂ ದೊರೆಯಿತು 

ಕಾಸರಗೋಡು  ಜಿಲ್ಲೆಯ ಬಾಕುಡ ಸಮುದಾಯದವರ ವಿಶಿಷ್ಟವಾದ ನಾಗಾರಾಧನಾ ಪದ್ಧತಿ ಸರ್ಪ ಕೋಲ. ಇದನ್ನು ನಾಗನಲಿಕೆ, ಬೆರ್ಮರ್ ನಲಿಕೆ ಎಂದೂ ಕರೆಯುತ್ತಾರೆ. ಇಲ್ಲಿ ನಾಲ್ಕು ಶಕ್ತಿಗಳಿಗೆ ಆರಾಧಾನೆ ಮಾಡುತ್ತಾರೆ.ಈ ಸಂದರ್ಭದಲ್ಲಿ ಇಬ್ಬರು ನಾಗರಾಜರ ಹುಟ್ಟು ಮತ್ತು ಬಾಕುಡರ ಆರಾಧನೆ ಕುರಿತಾಗಿನ ಕಥೆಯನ್ನು  ಪಾದ್ದನದಲ್ಲಿ ಹೇಳುತ್ತಾರೆ .ಕೊಡೆಂಚಿರ್ ಎಂಬ ಪ್ರದೇಶ ಕುಂಬಳೆ -ಮಂಜೇಶ್ವರ ಸಮೀಪ ಇದೆ .ಇಲ್ಲಿ ಬಾಕುಡ  ಸಮುದಾಯದವರು ಇದ್ದಾರೆ . ಹಿಂದೆ ಕೊಡೆಂ ಚಿರ್ ನಲ್ಲಿ  ಹುತ್ತ ಒಂದು ಇತ್ತು . ಆ ಹುತ್ತದಲ್ಲಿ ಒಂದು ಹೆಣ್ಣು ಮಗು ಹುಟ್ಟುತ್ತದೆ . ಬೈಲ ಬಾಕುಡ  ಮತ್ತು ಬಾಕುಡೆತಿ ಗದ್ದೆ ಬದಿಯಲ್ಲಿ ಹೋಗುತ್ತಿರುವಾಗ ಮಗು ಅಳುವ ಸದ್ದನ್ನು ಕೇಳುತ್ತಾರೆ .ಆ ಅಳುವಿನ ಧ್ವನಿಯನು ಹಿಂಬಾಲಿಸಿಕೊಂಡು ಹೋಗುವಾಗ ಒಂದು ಹೆಣ್ಣು ಮಗು ಅಳುವುದು ಕಾಣಿಸುತ್ತದೆ .
              


ತುಳು :

ಪುನ್ಚೋಡುದು ಒಂಜಿ ಪೊಣ್ಣು ಬಾಲೆ ಬುಳುತ್ತೊಂದು ಬರ್ಪುಂಡು

ಬಾಲೆನು ಅಕುಳು ಕಂಡೆನಿ ಬುಡೆದಿ ಕೊಣಂದು ಬತ್ತೆರ್

ಆ ಬಾಲೆಗ್ ಅಕುಳು ಪುದರ್ ಒಲೆತ್ತೆರ್ ದೈಯಾರೆಂದು

ಕನ್ನಡ ಅನುವಾದ :

ಹುತ್ತದಿಂದ ಒಂದು ಹೆಣ್ಣು ಮಗು ಅಳುತ್ತಾ ಬರುತ್ತದೆ

ಮಗುವನ್ನು ಅವರು ಗಂಡ ಹೆಂಡತಿ (ಮನೆಗೆ )ಕರೆ ತಂದರು

ಆ ಮಗುವಿಗೆ ಅವರು ದೈಯಾರ್ ಎಂದು ಹೆಸರು ಕರೆದರು

ಆ ಬಾಕುಡ  ದಂಪತಿಗಳಿಗೆ ಮಕ್ಕಳಿರಲಿಲ್ಲ ,ದೇವರು ದಯಪಾಲಿಸಿದ ಮಗು ಎಂದು ಅದನ್ನು ಕರೆ ತಂದು ದೈಯಾರ್ ಎಂದು ಹೆಸರಿತ್ತು ಮುದ್ದಿನಿಂದ ಸಾಕಿದರು .ಆ ಮಗು ಚಿಕ್ಕದು ಹೋಗಿ ದೊಡ್ದವಳಾಗುತ್ತಾಳೆ.ಅವಳು ಯುವತಿ ಆದಾಗ ಅವಳು “ನಾನು ನೆತ್ತರಿನಲ್ಲಿ ಹುಟ್ಟಲಿಲ್ಲ .ನನಗೆ ಜನ್ಮ ಕೊಟ್ಟ ತಂದೆ ತಾಯಿಗಳಿಲ್ಲ.ಮರ ಹುಟ್ಟಿ ಮರ ಸಾಯುವ ಕಾಲ ಬಂದರೂ ನನ್ನ ಹೊಟ್ಟೆ ಯಲ್ಲಿ ಸಂತಾನವಾಗಲಿಲ್ಲ “ಎಂದು ದುಃಖಿಸುತ್ತಾಳೆ . ನಂತರ ಅವಳು ಅಲೌಕಿಕ ಗರ್ಭವನ್ನು ಧರಿಸುತ್ತ್ತಾಳೆ .

ಯಾನು ನೆತ್ತರುಡು ಪುಟ್ಟುದಿಜ್ಜಿ

ನೀರುಡು ಮಲ್ಲೇತುಜ್ಜಿ  

ಎಂಕು ಜನ್ಮ ಕೊರ್ನ ಅಪ್ಪೆ ಅಮ್ಮೆ ಇಜ್ಜಿ

ಮರ ಪುಟ್ಟುದು ಮರ ಸೈಪ್ಪುನ ಕಾಲ ಬತ್ತುಂಡತ್ತ

ಎನ್ನ ಬಂಜಿಡು ಕುಟುಂಬ ಸಂಸಾರ ಪುಟ್ಟೋ ಡು

ಪಂದಂಡ ಕಡೆಸನ್ ಬಂಜಿನಾಲ್ ಆಯಾಳು
ಒಂಬತ್ತು ತಿಂಗಳು ತುಂಬಿದ ನಂತರ ಅವಳಿಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತದೆ .ಅವಳು ಎರಡು ಸರ್ಪಗಳಿಗೆ ಜನ್ಮ ನೀಡಿ ಮರನವನ್ನಪ್ಪುತ್ತಾಳೆ . ಹೀಗೆ ಹುಟ್ಟಿದ ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರೆಂಬ ನಾಗರಾಜರು ಜನಿಸಿದರು ಎಂಬ ಕಥೆಯನ್ನು ಪಾದ್ದನದಲ್ಲಿ ಹೇಳುತ್ತಾರೆ


ಈ . ಕರಿಯ ಸಂಕಪಾಲ ಮತ್ತು ಬಿಳಿಯ ಸಂಕಪಾಲರು ಪಾತಾಳವನ್ನು ಒಡೆದು ಹೋದರು. ಪಾತಾಳ ಒಡೆದು ಹೋದವರು ಕರಿಯ ಸಂಕಪಾಲ ಹುತ್ತದಲ್ಲಿ, ‘ನಾಗಬೆರ್ಮರ್ಎಂದು ಹುಟ್ಟುತ್ತಾನೆ. ಬಿಳಿಯ ಸಂಕಪಾಲ ನಾಗಶಿಲೆಯಲ್ಲಿ ಪ್ರತ್ಯಕ್ಷವಾಗುತ್ತಾನೆ. ಹಾಗಾದರೆ ಇವರು ಯಾರು? ಇವರು ಸಾವಿರದ ಒಂದು ಗರುಡಾವತಾರದಲ್ಲಿ ಭೂಲೋಕದಲ್ಲಿ ನಾಗಬೆರ್ಮೆರ್‍ರೆಂದು ಅವತಾರವಾದರು. ಇವರು ಭೂಲೋಕದಲ್ಲಿ ರಾಮಾವತಾರ ಮುಗಿದಾಗ ಬಿಳಿಯ ಸಂಕಪಾಲ ಹಾಲಿನ ಕಡಲಲ್ಲಿ ಮಾಯವಾಗುತ್ತಾನೆ. ಕರಿಯ ಸಂಕಪಾಲನು ಹಾಲಿನ ಕಡಲಲ್ಲಿ ಮಾಯವಾಗುತ್ತಾನೆ.  ಕರಿಯ ಸಂಕಪಾಲ ಮಹಾವಿಷ್ಣು ಆಗಿ ಹಾಲಿನ ಕಡಲಿಗೆ ಇಳಿಯುತ್ತಾನೆ. ಬಿಳಿಯ ಸಂಕಪಾಲ ಲಕ್ಷ್ಮಣ ಆಗಿ ಆದಿಶೇಷನೆಂದು ಹಾಲಿನ ಕಡಲಿನಲ್ಲಿ ಮಾಯವಾಗುತ್ತಾನೆ ಎಂಬ ಕಥೆಯನ್ನು ಈ ಪಾಡ್ದನವು ಹೇಳುತ್ತದೆ.

ಇದೆ ಸಂದರ್ಭದಲ್ಲಿ ಹೇಳುವ ಇನ್ನೊಂದು ಪಾದ್ದನದಲ್ಲಿ ಬಾಕುಡ ಸಮುದಾಯಕ್ಕೆ ಭೂಮಿ ಒಡೆತನ ಸಿಕ್ಕಿದ ಕಥಾನಕವಿದೆ
ಆದಿಯಲ್ಲಿಯೇ ಬೈಲಬಾಕುಡರಿಗೆ ನಾಗಬೆರ್ಮರ್ಕುಲದೈವ, ಆದಿಕಾಲದಲ್ಲಿ ಭೂಮಿಯ ಒಡೆಯರಾದ ಬಾಕುಡರು ಭೂಮಿಯ ಮಣ್ಣು ಹಿಡಿದು ಪ್ರಮಾಣ ಮಾಡಿ ಸರ್ವನಾಶಕ್ಕೆ ಕಾರಣರಾಗುತ್ತಾರೆ. ಹಿಂದಿನ ಕಾಲದಲ್ಲಿ ಹಿರಿಯರ ಕಾಲದಲ್ಲಿ ರೇಣುಕಾದೇವಿಯ ಮಗ ತಾಯಿಯ ತಲೆ ಕಡಿದ ಪಾಪವಿಮೋಚನೆಗಾಗಿ ಸಮುದ್ರವನ್ನು ಭೂಮಿ ಮಾಡಿ ಭೂಮಿದಾನ ಕೊಡುತ್ತಾನೆ. ಹೀಗೆ ಆದಿಯಲ್ಲಿ ಬೈಲಬಾಕುಡರಿಗೆ ಭೂದಾನ ಸಿಕ್ಕ ಭೂಮಿ. ಭೂದಾನ ಸಿಕ್ಕಾಗ ಬಾಕುಡರು ತುಂಡು ಅರಸರಾಗಿದ್ದರು. ಮೇಲಿನ ಜಾತಿಯವರಿಗೆ ಇವರು ಚಿತ್ರಹಿಂಸೆ ಕೊಡುತ್ತಿದ್ದರು. ಆಗಅವರು ಈ ಅರಸರನ್ನು ನಾಶ ಮಾಡಬೇಕೆಂದು ಸೋಮೇಶ್ವರದ ಕಡೆಯಿಂದ, ನೀಲೇಶ್ವರದ ಕಡೆಯಿಂದ ದೊಡ್ಡ ಮಂತ್ರವಾದಿಗಳನ್ನು ಕರೆಸಿ ಮಂಜೇಶ್ವರದ ಆರು ಗ್ರಾಮದೊಳಗೆ ಬಾಕುಡರ ಕುಲದೈವ ಸರ್ಪವನ್ನು ಸರ್ವನಾಶ ಮಾಡುವುದಕ್ಕಾಗಿ ದೊಡ್ಡ ಮಾರಣಹೋಮ ಮಾಡುತ್ತಾರೆ. ಎಲ್ಲ ಅರಸರನ್ನು ಓಲೆ ಕೊಟ್ಟು ಹೋಮಕ್ಕೆ ಕರೆದರು. ಅಡ್ಡ 12 ಕೋಲು, ಉದ್ದ 12 ಕೋಲು ಇರುವ ದೊಡ್ಡ ಹೋಮಕುಂಡದಲ್ಲಿ ಏಳು ರಾತ್ರಿ ಎಂಟು ಹಗಲುಗಳ ಕಾಲ ಹೋಮ ತಂತ್ರ ಮಾಡಿದರು. ಪರ್ವತದಷ್ಟು ಹೊಗೆ ಎದ್ದಿತು. ಆಕಾಶದೆತ್ತರಕ್ಕೆ ಬೆಂಕಿ ಉರಿಯಿತು. ಹೋಮದ ಬಿಸಿಗೆ ನಾಲ್ಕು ಮೂಲೆಯ ಕಬ್ಬಿಣ ಮೆದುವಾಗಿ ಹಣ್ಣುತೊಂಡೆಯಂತೆ ಆಯಿತು. ಆಗ ಆ ಬಿಸಿಗೆ ಭೂಲೋಕದಲ್ಲಿರುವ ಸರ್ಪಜಂತುಗಳು ಬಿಸಿ ಕಬ್ಬಿಣದ ಸರಳನ್ನು ಹತ್ತಿ ಹೋಮದೊಳಗೆ ಬಿದ್ದವು. ಕುಲದೈವದ ಸಹಾಯವಿಲ್ಲದೆ ನಿಸ್ಸಹಾಯಕರಾಗಿದ್ದ ರಾಜರುಗಳನ್ನು ಅಗ್ನಿಕುಂಡಕ್ಕೆ ಹಾಕಿದರು. ಆಗ ದೊಡ್ಡ ಆದಿಶೇಷ ಹಾಗೂ ಸಣ್ಣ ಮಹಾಶೇಷ ಭೂಮಿ ಒಡೆದು ಬರುತ್ತಾರೆ. ಆಗ ಮಂತ್ರವಾದಿಗಳು, ತಂತ್ರಿಗಳು, ನೂಲು ಹಾಕಿದ ಬ್ರಾಹ್ಮಣರು ಕೈಮುಗಿದು ಬೇಡಿಕೊಂಡರು. ನಾವು ಮಾಡಿದ ಪಾಪಕ್ಕೆ ನಾಗಬೆರ್ಮೆರ್ ಪ್ರತ್ಯಕ್ಷವಾಗಿದ್ದಾರೆ. ಅವರಿಗೆ ನಾಗತಂಬಿಲ, ನಾಗಮಂಡಲ ಕೊಟ್ಟು ನಾವು ಮಾಡಿದ ಪಾಪಕ್ಕೆ ಪರಿಹಾರ ಮಾಡುತ್ತೇವೆಎಂದು ಬೇಡಿಕೊಳ್ಳುತ್ತಾರೆ. ಅದಕ್ಕಿಂತಲೂ ದೊಡ್ಡ ಪಾಪಕ್ಕೆ, ಆದಿಯಿಂದಲೇ ಬೈಲಬಾಕುಡರ ದೊಡ್ಡ ಪಾಪಕ್ಕೆ ನಿಮಗೆ ಬೇಕಾದ ಪರಿಹಾರ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಸಾವಿರದೊಂದು ಗರುಡಾವತಾರ ಆಗುವವರೆಗೆ ಕೋಲ, ತಂಬಿಲ ಕೊಡಬೇಕು, ಬೈಲಬಾಕುಡರ ಕುಲದೈವವನ್ನು ನೆನೆದರೆ ನೆನೆದಲ್ಲಿ ನಾಗಬೆರ್ಮರು ಅವರಿಗೆ ಒಲಿಯುತ್ತಾರೆಎಂದು ಹೇಳಿ ನಾಗಬೆರ್ಮೆರ್ ಕಲ್ಲಿನಲ್ಲಿ ಉದ್ಭವವಾಗುತ್ತಾರೆ.ಬಾಕುಡರ ಸರ್ಪಾರಾಧನೆಗೆ ಸಂಬಂಧಿಸಿದಂತೆ ಸಿಕ್ಕ ಇನ್ನೊಂದು ಪಾಡ್ದನದ ಪಾಠ ದಲ್ಲಿ  ತುಸು ಬೇರೆ ರೀತಿಯ ಕಥಾನಕವಿದೆ





ಅಣ್ಣಪ್ಪ ರಾಜ್ಯದಲ್ಲಿ ನಾರಾಯಣದೇವರು ಇದ್ದರು. ಅವರ ಹೆಂಡತಿ ಮುಂಗುಡೆ ದೆಯ್ಯಾರು. ಆ ದಂಪತಿಗಳಿಗೆ ಬಹುಕಾಲ ಮಕ್ಕಳಾಗುವುದಿಲ್ಲ. ಮುಂಗುಡೆ ದೈಯಾರು ನನ್ನಂತ ಹೆಂಗಸರು ತಿಂಗಳು ತಿಂಗಳು ಮೀಯುತ್ತಾರೆ. ಬಸುರಿಯಾಗಿ ವರ್ಷದೊಳಗೆ ಹೆರುತ್ತಾರೆ. ನಾನು ಮೀಯುವುದು, ಮೀನು ಮಿಂದ ಹಾಗೆ ಆಯ್ತಲಎಂದು ದುಃಖಿಸುತ್ತಾಳೆ. ಆಕೆಯ ದುಃಖ ದೇವರಿಗೆ ಕೇಳಿಸುತ್ತದೆ. ಅವಳು ಮೈನೆರೆಯುತ್ತಾಳೆ. ನಾಲ್ಕನೆಯ ದಿನ ಎಣ್ಣೆ ಅರಸಿನ, ಸೀಗೆ ಹುಡಿ ತೆಗೆದುಕೊಂಡು ಹೊಳೆಗೆ ಸ್ನಾನ ಮಾಡಲು ಹೋಗುತ್ತಾಳೆ. ಅಲ್ಲಿ ಕಲ್ಲಿನ ಮೇಲೆ ಕುಳಿತು ಅಯ್ಯೋಎಂದು ಮರುಗುತ್ತಾಳೆ. ಮೀನುಗಳಿಗಾದರೂ ಮಕ್ಕಳು ಮರಿಗಳಾಗುತ್ತವೆ ನನಗೆ ಮಕ್ಕಳಾಗಲಿಲ್ಲಎಂದು ದುಃಖಿಸುತ್ತಾಳೆ. ಸ್ವಲ್ಪ ಅಕ್ಕಿ, ವೀಳ್ಯದೆಲೆ, ಅಡಿಕೆಗಳನ್ನು ಒಂದು ಕುಡಿ ಬಾಳೆ ಎಲೆಯಲ್ಲಿಟ್ಟು ಹರಕೆಯಾಗಿ ಸಂಕಲ್ಪಿಸಿ ನೀರಮೇಲೆ ಬಿಡುತ್ತಾಳೆ. ಆಕೆಗೆ ಶುಭಲಕ್ಷಣ ಕಾಣಿಸುತ್ತದೆ. ಸಂತೋಷದಿಂದ ಮಿಂದು ಬರುತ್ತಾಳೆ. ಮುಂದಿನ ತಿಂಗಳು ನೀರು ನಿಲ್ಲುತ್ತದೆ. ಆಕೆ ಬಸುರಿಯಾದ ವಿಚಾರ ಊರಿನಲ್ಲಿ ಗೊತ್ತಾಗುತ್ತದೆ. ಏಳನೆಯ ತಿಂಗಳಿನಲ್ಲಿ ಸೊಸೆಗೆ ಹೊಟ್ಟೆಯ ಬಯಕೆ, ಬಾಯಿಯ ಆಸೆ ತೀರಿಸಲು ಕಡುವು ಸಮ್ಮಾನ, ಸಿಹಿ ಹೊದಳು ಸಮ್ಮಾನವಾಗುತ್ತದೆ. ಹತ್ತನೆ ತಿಂಗಳಲ್ಲಿ ಅವಳಿಗೆ ಹೆರಿಗೆ ನೋವು ಕಾಣಿಸಿಕೊಳ್ಳುತ್ತದೆ. ಒಂದು ಬೇನೆ ಬಂದಾಗ ಒಂದು ಮಾಲೆ ಹಾವಿನ ಮೊಟ್ಟೆಗಳು, ಎರಡನೆ ಬೇನೆ ಬಂದಾಗ ಎರಡು ಮಾಲೆ ತತ್ತಿಗಳು ಹೀಗೆ ಆರನೆಯ ಬೇನೆಯಲ್ಲಿ ಅರುವತ್ತಾರು ಕೋಟಿ ಹೆಡೆಯ ಬೊಳಿಯ ಸಂಕಪಾಲನೆಂಬ ಸರ್ಪ ಹುಟ್ಟುತ್ತದೆ. ಏಳನೆಯ ಬೇನೆಯಲ್ಲಿ ಎಪ್ಪತ್ತೇಳು ಕೋಟಿ ಹೆಡೆಯ ಕರಿಯ ಸಂಕಪಾಲ ಹುಟ್ಟುತ್ತದೆ. ನಾರಾಯಣ ದೇವರು ಕರಿಯ ಸಂಕಪಾಲನನ್ನು ಕರೆದು ನೀನು ಭೂಲೋಕ, ಪಾತಾಳ ಲೋಕಗಳ ಅಧಿಪತಿಯಾಗಿ ನಾಗರಾಜನೆಂಬ ಖ್ಯಾತಿಯಿಂದ ಜೀವಿಸುಎನ್ನುತ್ತಾರೆ. ಒಂದು ದಿನ ಕರಿಯ ಸಂಕಪಾಲನು ಪಾತಾಳದಿಂದ ಮೇಲಕ್ಕೆ ತಲೆಯೆತ್ತಿ ನನಗೆ ಬೇಕಾದ ವ್ಯಕ್ತಿ ಎಲ್ಲಿರಬಹುದು?” ಎಂದು ನೋಡುತ್ತಾನೆ. ಅವನಿಗೆ ಕೊಡೆಂಚಿರ್‍ನಲ್ಲಿರುವ ಪಳ್ಳೀತೊಕುರು ಬಾಕುಡತಿಕಾಣಿಸುತ್ತಾಳೆ. ಆಕೆಯ ಹುಟ್ಟೂರು ನಾರ್ಯ. ಆಕೆಗೆ ನೇಲ್ಯ ಸಂಕರಮೆ ಮತ್ತು ಎಲ್ಯ ಸಂಕರಮೆ ಎಂಬ ಸಹೋದರರು ಇರುತ್ತಾರೆ. ಕರಿಯ ಸಂಕಪಾಲನು ಪಳ್ಳಿತೋಕುರು ಬಾಕುಡತಿಯಲ್ಲಿ ಹೆದರಬೇಡ ನನ್ನನ್ನು ನಂಬು, ಕೋಲ ನಡೆಸಿ ನನ್ನ ಆರಾಧನೆ ಮಾಡುಎನ್ನುತ್ತಾನೆ. ಹಾಗೆಯೇ ಆಕೆ ಕೊಡೆಂಚಿರ್‍ನಲ್ಲಿ ಸ್ಥಾನ ಕಟ್ಟಿಸಿ ಕಾಳಿಂಗಸರ್ಪವನ್ನು ಆರಾಧಿಸುತ್ತಾಳೆ. ಅಂದಿನಿಂದ ಬಾಕುಡರಲ್ಲಿ ಸರ್ಪಾರಾಧನೆ ಬೆಳೆದು ಬಂತು.
ಮುಂದೊಂದು ದಿನ ಪಳ್ಳಿ ತೋಕುರು ಬಾಕುಡೆದಿ ಚಾಪೆ ಹೆಣೆಯುತ್ತಿದ್ದಾಗ, ಅದಕ್ಕೆ ಸರ್ಪದ ಹೆಡೆಯಾಕಾರ ಬರತೊಡಗುತ್ತದೆ. ಎಷ್ಟೆಷ್ಟು ಸರಿಯಾಗಿ ಹೆಣೆದರೂ ಹೆಡೆಯ ಆಕಾರನ್ನು ಹೋಗಲಾಡಿಸಲು ಆಗುವುದಿಲ್ಲ. ಆಕೆಗೆ ದುಃಖವಾಯಿತು. ಮಾರಲು ಹೋದರೆ ನಾಗನ ಹೆಡೆ ಆಕಾರವಿರುವ ಚಾಪೆಯನ್ನು ಯಾರು ಕೊಂಡುಕೊಳ್ಳುವುದಿಲ್ಲ. ಕೊನೆಗೆ ಅವಳು ಉರ್ಮಿ ಹೊಳೆಗೆ ಬರುತ್ತಾಳೆ. ದೇವರೇ ನನ್ನನ್ನು ಮಾಯಕ ಮಾಡಿಎಂದು ಪ್ರಾರ್ಥಿಸುತ್ತಾಳೆ. ದೇವರು ಆಕೆಯನ್ನು ಮಾಯಕ ಮಾಡಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತಾನೆ.
ಒಟ್ಟಿನಲ್ಲಿ ಬಾಕುಡ ಸಮುದಾಯದವರು  ಇಬ್ಬರು  ನಾಗರಾಜರು ,ಅವರ ತಾಯಿ ದೈಯಾರ್ ಮತ್ತು ಅವರನ್ನು ಆರಾಧಿಸಿದ ಪಲ್ಲಿ ತೊಕುರು ಬಾಕುಡೆತಿಯನ್ನು ಇಲ್ಲಿ ನೆಲ್ಯನ್ನೆರ್, ಎಲ್ಯನ್ನೆರ್, ನೆಲ್ಯಕ್ಕೆರ್, ಎಲ್ಯಕ್ಕೆರ್ ಎಂದು ಆರಾಧಿಸುತ್ತಾರೆ  
1. ಎಲ್ಯಣ್ಣೇರ್ (ಚಿಕ್ಕಣ್ಣ) : ಈತನು ನಾಗ ಸ್ವರೂಪಿಯಾಗಿದ್ದು ಇತನಿಗೆ 30-40 ಅಡಿ ಎತ್ತರದ ನಾಗಮುಡಿಯನ್ನು ಹಿಡಿಯುತ್ತಾರೆ. ಬಿಳಿಯ ಸಂಕಪಾಲನೆಂಬ ನಾಗರಾಜನನ್ನೇ ಎಲ್ಯಣ್ಣೇರ್ ಎಂದು ಕರೆದು ಭೂತದ ನೆಲೆಯಲ್ಲಿ ಆರಾಧಿಸುತ್ತಾರೆ.
2. ನೇಲ್ಯಣ್ಣೇರ್ (ದೊಡ್ಡಣ್ಣ) : ನಾಗರಾಜರಲ್ಲಿ ಹಿರಿಯನಾದ ಕರಿಯ ಸಂಕಪಾಲನನ್ನು ನೇಲ್ಯಣ್ಣೇರ್ (ದೊಡ್ದಣ್ಣ) ಎಂದು ಕರೆದು ದೈವದ ನೆಲೆಯಲ್ಲಿ ನೇಮ ನೀಡಿ ಆರಾಧಿಸಲಾಗುತ್ತದೆ.
3. ನೇಲ್ಯಕ್ಕೇರ್ (ದೊಡ್ದಕ್ಕ) : ಬಿಳಿಯ ಸಂಕಪಾಲ ಹಾಗೂ ಕರಿಯ ಸಂಕಪಾಲರ ತಾಯಿಯನ್ನೇ ನೇಲ್ಯಕ್ಕೇರ್ ಎಂದು ಆರಾಧಿಸುತ್ತಾರೆ. ನೇಲ್ಯಕ್ಕೇರನ್ನು ದೊಡ್ಡ ಉಳ್ಳಾಲ್ತಿ ಎಂದೂ ಕರೆಯುತ್ತಾರೆ.
 4. ಎಲ್ಯಕ್ಕೇರ್ (ಚಿಕ್ಕಕ್ಕ) : ಕೊಡೆಂಚಿರ್‍ನಲ್ಲಿ ನಾಗರಾಜರನ್ನು ಆರಾಧಿಸಿ ಕೊನೆಗೆ ನಾಗರಾಜರ ಸೇರಿಗೆಗೆ ಸಂದು ಹೋದ ಪಳ್ಳಿತೋಕುರು ಬಾಕುಡೆತಿಯನ್ನು ಎಲ್ಯಕ್ಕೇರ್ ಎಂದು ಭೂತತ್ವಕ್ಕೇರಿಸಿ ಆರಾಧಿಸುತ್ತಾರೆ. ಎಲ್ಯಕ್ಕೇರನ್ನು ಚಿಕ್ಕ ಉಳ್ಳಾಲ್ತಿ ಎಂದೂ ಕರೆಯುತ್ತಾರೆ. ನೇಲ್ಯಕ್ಕೇರ್ ಮತ್ತು ಎಲ್ಯಕ್ಕೇರ್ ಅನ್ನು ನಾಗಯಕ್ಷಿಗಳು ಎಂದು ತುಳು ಜಾನಪದ ವಿದ್ವಾಂಸರಾದ ಡಾ ವೆಂಕಟರಾಜ ಪುಣಿಂಚಿತ್ತಾಯರು ಅಭಿಪ್ರಾಯ ಪಟ್ಟಿದ್ದಾರೆ.

                   

 5. ಕೃಷ್ಣಸರ್ಪ : ಕರಿಯ ಸಂಕಪಾಲನನ್ನು ಅಣ್ಣ ನಾಗರಾಜನೆಯ ಭಾವಿಸಿದ್ದು, ಆತನನ್ನು ಕೃಷ್ಣಸರ್ಪದ ರೂಪದಲ್ಲಿ ಬಾಕುಡ ಜನಾಂಗದವರು ಆರಾಧಿಸುತ್ತಾರೆ. ಇಲ್ಲಿ ಭೂತಮಾಧ್ಯಮರು ಮೂರು ಹೆಡೆಯ ನಾಗನನ್ನು ದ್ಯೋತಿಸುವ ಅಡಿಕೆ ಹಾಳೆಯಿಂದ ತಯಾರಿಸಿದ ಮುಖವಾಡವನ್ನು ಬಾಯಿಯಲ್ಲಿ ಕಚ್ಚಿ ಹಿಡಿದು ಹಾವಿನಂತೆ ತೆವಳುತ್ತಾ ಕುಕ್ಕಂಬಿಲಕ್ಕೆ ಬರುತ್ತಾರೆ. ಇಲ್ಲಿ ಒಬ್ಬರು ಭೂತಮಾಧ್ಯಮರು ಕೃಷ್ಣಸರ್ಪ ಪಾತ್ರಧಾರಿಯ ಮೇಲೆ ಅಕ್ಕಿ ಕಾಳನ್ನು ಎರಚಿ ಕೃಷ್ಣಸರ್ಪ ಸಿಡಿದೇಳುವಂತೆ, ಬುಸುಗುಟ್ಟುವಂತೆ ಮಾಡುತ್ತಾರೆ. ಕೊನೆಯಲ್ಲಿ ಕೃಷ್ಣಸರ್ಪ ಸೋತು ಶರಣಾಗುವ ಅಭಿನಯ ಇರುತ್ತದೆ. ಇದನ್ನು ಮರಿಕ್ಕಳಗಾವುನೆ ಎಂದು ಕರೆಯುತ್ತಾರೆ. ಇದು ಕೃಷ್ಣಸರ್ಪದ ಕೋಲವಾಗಿದೆ.ಇದು ಬಹಳ ಆಕರ್ಷಕವಾಗಿದೆ .ಅತ್ಯಂತ ರೋಮಾಂಚನಕಾರಿ ಕೂಡಾ ! ಈ ನಡುವೆ ಕುಡನ್ಗೆರ್ /ಕುಂಡನ್ಗೆರ್ ಎಂಬ ಹಾಸ್ಯದ ಅಭಿವ್ಯಕ್ತಿ ಇರುತ್ತದೆ  .ಇದೊಂದು ಅಪರೂಪದ ಜಾನಪದ ಅಭಿವ್ಯಕ್ತಿ ಕೂಡಾ !ಇಂತಹ ಅದ್ಭುತ ವಿಚಾರಗಳು ,ರೋಮಾಂಚನಕಾರಿ ವಿಷಯಗಳು ಇರುವ ಕಾರಣವೋ ಏನೋ ನನಗೆಂದೂ ನಾಗ ಹಾಗೂ ಭೂತಗಳ ಕುರಿತಾದ ಕ್ಷೇತ್ರ ಕಾರ್ಯವಾಗಲಿ ,ಮಾಹಿತಿ ಸಂಗ್ರಹವಾಗಲೀ ಯಾವುದೂ ಕೂಡ ಎಂದೂ ಬೇಸರ ಹುಟ್ಟಿಸಲೇ ಇಲ್ಲ !.
              
           
            
                            ಕುಂಡಂಗೆರ್ /ಕುಡನ್ಗೆರ್
          

Saturday 31 August 2013

ತುಳು ಜನಪದರ ಸಿರಿ ಕೃಷ್ಣ


                ತುಳುನಾಡು ವಿಶಿಷ್ಟ ಸಂಸ್ಕೃತಿಯ ನೆಲೆವೀಡು. ಪಾಡ್ದನಗಳು ಇಲ್ಲಿನ ಸಂಸ್ಕೃತಿಯ ಅಭಿವ್ಯಕ್ತಿ ಮಾಧ್ಯಮದ ಕಾರ್ಯವನ್ನು ನಿರ್ವಹಿಸುತ್ತವೆ. ತುಳುವರ ನಂಬಿಕೆ ಆಗುಹೋಗುಗಳು ನೋವು ನಲಿವುಗಳು ಪಾಡ್ದನಗಳ ಮೂಲಕ ಹೊರಹೊಮ್ಮುತ್ತವೆ. ಕೊರಗ ತನಿಯ ಕೋಟೆದ ಬಬ್ಬು ಬಬ್ಬರ್ಯ, ಗುಳಿಗ ಮೊದಲಾದ ಭೂತಗಳು ತುಳುವರ ಆರಾಧ್ಯ ದೈವಗಳು. ಆದರೆ ಇಲ್ಲಿ ವೈದಿಕ ದೇವರುಗಳಾದ ರಾಮ ,ಕೃಷ್ಣ,ಈಶ್ವರ ,ಗಣಪತಿ,ಲಕ್ಷ್ಮಿ ಪಾರ್ವತಿ  ಮೊದಲಾದವರ  ಆರಾಧನೆ ಕೂಡಾ ಇದೆ .ಈ ವೈದಿಕ  ದೇವರುಗಳ ಕುರಿತಾಗಿ ಪಾಡ್ದನಗಳು ಕೂಡಾ ಇವೆ ,ಭೂತಗಳ ಕುರಿತಾದ ಐತಿಹ್ಯಗಳು ,ಕಥಾನಕಗಳು ಸಿಕ್ಕಿವೆ . ಇದರಲ್ಲಿ ವೈದಿ ಕ ದೇವರುಗಳ ಕುರಿತಾದ ಕಥಾನಕಗಳಲ್ಲಿ  ಬಹಳ ವೈಶಿಷ್ಟ್ಯಗಳಿವೆ.
ತುಳು ಜನಪದ ಸಾಹಿತ್ಯದಲ್ಲಿ ಅದರಲ್ಲಿಯೂ ವಿಶೇಷವಾಗಿ ಪಾಡ್ದನಗಳಲ್ಲಿ ಈಶ್ವರ, ಕೃಷ್ಣ ಮೊದಲಾದ ದೇವರುಗಳ ಉಲ್ಲೇಖವಿದೆ. ಇಲ್ಲಿ ದೇವರುಗಳು ಪುರಾಣದ ಕಲ್ಪನೆಗಿಂತ ಭಿನ್ನವಾಗಿ ಚಿತ್ರಿಸಲ್ಪಟ್ಟಿದ್ದಾರೆ.ನನ್ನ ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ನನಗೆ ಸಿಕ್ಕ ಪಾಡ್ದನಗಳಲ್ಲೇ ಅತ್ಯಂತ ಅಪೂರ್ವವಾದುದು ,ವಿಶಿಷ್ಟ ವಾದುದು ಚಂದಬಾರಿ ರಾಧೇ ಗೋಪಾಲ ಪಾಡ್ದನ .ಬಂಟ್ವಾಳದ ಮಣಿನಾಲ್ಕುರಿನ ಶ್ರೀಮತಿ ಶಾರದಾ ಜಿ ಬಂಗೇರರು ಈ ಪಾಡ್ದನವನ್ನು ಹಾಡಲು ತಿಳಿದಿದ್ದು, ನನ್ನ ವಿನಂತಿಯ ಮೇರೆಗೆ ಇದನ್ನು ಹಾಡಿದ್ದು, ನಾನು ರೆಕಾರ್ಡ್ ಮಾಡಿ ಲಿಪ್ಯಂತರ ಗೊಳಿಸಿ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ್ದೇನೆ ಕೂಡಾ. ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಶ್ರೀಕೃಷ್ಣ ಪ್ರಧಾನ ಪಾತ್ರವಾಗಿದ್ದಾನೆ. ನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಕೃಷ್ಣನ ಪ್ರಸ್ತಾಪವಿದೆ. ಇಲ್ಲೆಲ್ಲ ಶ್ರೀಕೃಷ್ಣನನ್ನು ಮಹಾತ್ಮನನ್ನಾಗಿ ಚಿತ್ರಿಸಿಲ್ಲ. ಈ ಪಾಡ್ದನಗಳಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲನಾಗಿ, ವಿಷಯಲಂಪಟನಂತೆ, ಕಳ್ಳರ ಕಳ್ಳನಂತೆ ಚಿತ್ರಿಸಲಾಗಿದೆ.
ಪುರಾಣದ ಪರಿಕಲ್ಪನೆಯಲ್ಲಿ ಶ್ರೀಕೃಷ್ಣ-ರಾಧೆಯರು ರಾಧೆಯರು ಅನುಪಮ ಪ್ರೇಮಿಗಳು. ಕೃಷ್ಣನಿಗೆ ಒಲಿದ ರಾಧೆ ತಾನಾಗಿಯೇ ಕೃಷ್ಣನೆಡೆಗೆ ಬಂದಂತೆ ಪುರಾಣಗಳಲ್ಲಿದೆ. ಆದರೆ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಶ್ರೀಕೃಷ್ಣನು ರಾಧೆಯನ್ನು ಮೋಸದಿಂದ ವಶಪಡಿಸಿಕೊಂಡ ಕಥಾನಕವಿದೆ. ಚಂದಬಾರಿಯನ್ನು ಶ್ರೀಕೃಷ್ಣನಿಗೆ ಕೊಟ್ಟು ಮದುವೆ ಮಾಡಿರುತ್ತಾರೆ. ಚಂದಬಾರಿ, ರಾಧೆಯರನ್ನು ಬಾಲ್ಯದಲ್ಲಿಯೇ ಮದುವೆ ಮಾಡಿಕೊಟ್ಟಿರುವುದರಿಂದ ರಾಧೆಗೆ ತನಗೋರ್ವ ಅಕ್ಕ ಇರುವುದು ತಿಳಿದಿರುವುದಿಲ್ಲ. ಒಂದು ದಿನ ರಾಧೆ ತನ್ನ ಪತಿ ಗೋಪಾಲನಲ್ಲಿ ನನಗೆ ಯಾರು ಸಂಬಂಧಿಕರು ಇಲ್ಲವೇ? ಎಂದು ಪ್ರಶ್ನಿಸುತ್ತಾಳೆ.
ಕುಟುಂಬ ಸಂಸಾರ ಇಜ್ಜೀಯ ಗೋಪಾಲ
ಬಂಧುಲ ಬಳಗೆಂಕ್ ಇಜ್ಜೀಯೆ ಗೋಪಾಲ
ಒರಿ ಅಪ್ಪೆಗ್ ಒರ್ತಿಯೇ ಮಗುಳುಯೇ ಗೋಪಾಲ
ಲೆಂದುದು ನನ ಬೇಕ ಕೇಂಡಾಳು ರಾಧೆ ಆಳ್
ಕನ್ನಡ ರೂಪ :
ಕುಟುಂಬ ಸಂಸಾರ ನನಗಿಲ್ಲವೇ ಗೋಪಾಲ
ಬಂಧು ಬಳಗವು ನನಗಿಲ್ಲವೇ ಗೋಪಾಲ
ಒಬಳು ತಾಯಿಗೆ ಒಬ್ಬಳೇ ಮಗಳೇ ಗೋಪಾಲ
ಎಂದು ಇನ್ನು ಬೇಗ ಕೇಳಿದಳು ರಾಧೆ ಅವಳು 

ಚಂದ್ರಾವಳಿ , ಶ್ರೀ ಕೃಷ್ಣ ,ಮತ್ತು ರಾಧೆ –ಚಂದ್ರಾವಳಿ ವಿಲಾಸ ಆಗ ಗೋಪಾಲನು ‘ನಿನಗೆ ಚಂದಬಾರಿ ಎಂಬ ಅಕ್ಕ ಇದ್ದಾಳೆ. ಅವಳಿಗೆ ಮೇಲಿನ ಮಿರಿಲೋಕದ ಶ್ರೀಕೃಷ್ಣನೊಂದಿಗೆ ಮದುವೆಯಾಗಿದೆ’   ಎಂದು ಹೇಳುತ್ತಾನೆ.
ಏರ್ಯ ರಾಧೆಯೆ  ಕೇಂಡಾ
ನಿನ್ನಡ ಪಳಿಂದು ಪಂಡುಂಡ ಉಳ್ಳಾಲು ಚಂದಬಾರಿ
ಮಿತ್ತುಲ ಮಿರಿಬಾರಿ ಲೋಕೊಡು ಸಿರಿಕೃಷ್ಣ ದೇವರೆಗು
ಕಂಡನಿ ಅಡತ್ತಾಳು ಲೆಂದುದು ಪಂಡೆರು ಗೋಪಾಲ
ಕನ್ನಡ ರೂಪ :
ಏನೇ ರಾಧೆ ಕೇಳಿದೆಯ
ನಿನ್ನ ಅಕ್ಕ ಎಂದು ಹೇಳಿದರೆ ಇದ್ದಾಳೆ ಚಂದ ಬಾರಿ
ಮೇಲಿನ ಮೀರಿ ಭಾರಿ ಲೋಕದಲ್ಲಿ ಶ್ರೀ ಕೃಷ್ಣ ದೇವರನ್ನು
ಗಂಡನಾಗಿ ಪಡೆದು ಎಂದು ಹೇಳಿದರು ಗೋಪಾಲ

ತನಗೆ ಅಕ್ಕ ಇದ್ದಾಳೆಂದು ತಿಳಿದಾಗ ಸಂತಸಗೊಂಡ ರಾಧೆ, ಆಕೆಯನ್ನು ನೋಡಬೇಕು ಎಂದು ಹಠ ಮಾಡುತ್ತಾಳೆ. ಆಗ ಗೋಪಾಲ, ನಿನ್ನ ಭಾವ ಶ್ರೀಕೃಷ್ಣನಿಗೆ ಒಳ್ಳೆಯ ಗುಣಗಳಿಲ್ಲ, ಹೋಗಬೇಡ ಎನ್ನುತ್ತಾನೆ.
ಆಯೇ ಉಳ್ಳೇಗೆ ರಾಧೆಯೇ ಕೇಂಡಾನ
ಅಂಗಡಿ ಅಂಗಡಿ ಪೋಪೇಗೆ ಪಂರ್ದುದ ಚೋಲಿ
ಪೆಜ್ಯೇಲ ಪಂರ್ದು ಕಂಡುದು ಕೈಲುಡ್
ಪೆಟ್ಟುಲ ತಿನ್ಪೇಂದು ಪಣ್ಪೇರು
ಪೋವಡ ರಾಧೆಯಿ ಪೋವಡ ರಾಧೆಯೇ
ಕಾಂಡೆನೆ ತೂಯಿನೆನು ಬಯ್ಯೊಗು ಬುಡಯೆಗೆ ರಾಧೆ
ಪೊಣ್ಣುದ ಮರ್ಲೆಗೆ ಕೋರಿದ ಜೀರೆಗೆÀ
 


ಕಳುವರೆ ಕಳುವೆ ಕೃಷ್ಣೇಂದ್ ಪಣ್ಪೇರು ಗೋಪಾಲೆ
ಕನ್ನಡ ರೂಪ :
ಅವನು ಇದ್ದಾನಂತೆ ರಾಧೆ ಕೇಳಿದೆಯ
ಅಂಗಡಿ ಅಂಗಡಿ ಹೋಗುತ್ತಾನಂತೆ ,ಹಣ್ಣಿನ ಸಿಪ್ಪೆ
ಹೆಕ್ಕುವವನು ಹಣ್ಣು ಕದ್ದು ಬಾಲೆ ಗೊನೆಯಲ್ಲಿ
ಪೆಟ್ಟು ಕೂಡ ತಿನ್ನುತ್ತಾನೆಂದು ಹೇಳುತ್ತಾರೆ
ಹೋಗ ಬೇಡ ರಾಧೆ ಹೋಗ ಬೇಡ ರಾಧೆಯೇ
ಬೆಳಿಗ್ಗೆ ನೋಡಿದ್ದನ್ನು ಸಂಜೆಗೆ  ಬಿಡನಂತೆ ರಾಧೆ
ಹೆಣ್ಣಿನ ಮರ್ಲ ಕೋಳಿಯ ಹುಚ್ಚಿನವನು
ಚಂದ್ರಾವಳಿ  ವಿಲಾಸ ಯಕ್ಷಗಾನದಲ್ಲಿ  ರಾಧೆಯ ರೂಪು ತಳೆದ ಶ್ರೀ ಕೃಷ್ಣ, ಳ್ಳರ ಕಳ್ಳ ಕೃಷ್ಣ ಎಂದು ಹೇಳುತ್ತಾರೆ ಗೋಪಾಲ

ಆದರೆ ರಾಧೆ ಹಠ ಮಾಡಿ, ಊಟ ತಿಂಡಿ ಸ್ನಾನಾದಿಗಳನ್ನು ತ್ಯಜಿಸುತ್ತಾಳೆ. ಆಗ ಮನ ಕರಗಿದ ಗೋಪಾಲ ದಂಡಿಗೆ ಸಿದ್ದಪಡಿಸಿ ಕಳಹಿಸಿ ಕೊಡುತ್ತಾನೆ.
ಮೇಲು ಮಿರಿಲೋಕದಲ್ಲಿ ಕಂಬಳ ಗದ್ದೆಯ ಕಟ್ಟಹುಣಿಯಲ್ಲಿ ದಂಡಿಗೆ ಬರುವುದನ್ನು ನೋಡಿದ ಶ್ರೀಕೃಷ್ಣ ದಂಡಿಗೆ ಬರುತ್ತಿರುವ ಬಗ್ಗೆ ಹೇಳಿದಾಗ ಚಂದಬಾರಿಗೆ ಬರುತ್ತಿರುವುದು ತನ್ನ ತಂಗಿ ರಾಧೆ ಎಂದು ತಿಳಿಯುತ್ತದೆ. ಆಗ ಅವಳು ``ಅವಳು ನನ್ನ ತಂಗಿ ರಾಧೆ. ಅವಳು ಬರಲಿ, ಅವಳ ತಂಟೆಗೆ ಹೋಗಬೇಡಿ’’ ಎಂದು ಕೇಳಿಕೊಳ್ಳುತ್ತಾಳೆ.

ರಾಧೆಯನ್ನು ಪ್ರೀತಿಯಿಂದ ಬರಮಾಡಿಕೊಂಡ ಚಂದಬಾರಿ ಕೈಕಾಲು ತೊಳೆಯಲು ಮುತ್ತಿನ ಕೆರೆಗೆ ಕಳುಹಿಸುತ್ತಾಳೆ. ಅಲ್ಲಿ ಶ್ರೀಕೃಷ್ಣ ತಾವರೆ ಹೂವಾಗಿ ಬಂದು ರಾಧೆಯ ಮಡಿಲಿಗೆ ಬಿದ್ದು ತನ್ನ ನಿಜರೂಪ ತೋರಿದಾಗ, ಕೃಷ್ಣನ ಕುರಿತು ಮೊದಲೇ ತಿಳಿದಿದ್ದ ರಾಧೆ ಅವನನ್ನು ಬೈದು, ಅವನಿಂದ ತಪ್ಪಿಸಿಕೊಂಡು ಅಕ್ಕನಿರುವಲ್ಲಿಗೆ ಬರುತ್ತಾಳೆ.
ಅಕ್ಕ-ತಂಗಿ ಅಕ್ಕಪಕ್ಕ ಕುಳಿತು ಆತ್ಮೀಯತೆಯಿಂದ ಮಾತನಾಡಿ ಬೇಸರ ಕಳೆಯುತ್ತಾರೆ. ಸಂಜೆಯಾಗುತ್ತಲೇ ತಂಗಿ ರಾಧೆಯು ಅಕ್ಕನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.
ಇತ್ತ ಶ್ರೀಕೃಷ್ಣ ಚಂದಬಾರಿಯ ಒಂದು ಸೀರೆಯನ್ನು ಉಟ್ಟು ಚಂದಬಾರಿಯ ವೇಷವನ್ನು ಧರಿಸುತ್ತಾನೆ.
ಸಾವಿರ ಸಾರತ್ತೋಂಜಿ ಕೈಕಂಜಿ ಗೋವಳೆನು ಸೇರೊಂದು
ಯಾನೊಂಜಿ ಪೊಣ್ಣನ ವೇಷನು ಪಾಡುವೆಯ ಜೋಕುಳೆ
ಚಂದಬಾರಿನ ಒಂಜಿಲ ಸೀರೆನು ಕೊಣತ್ತುದು
ಚಂದಬಾರಿನ ಒಂಜಿಲ ಸೀರೆನು ಕೊಣತ್ತುದು
ದುತ್ತುಲ ಐತೊನು ಮಣ್ತೊಂಡು ಪಿದಾಡುವೆರು ಸಿರಿಕೃಷ್ಣಲ
ಕನ್ನಡ ರೂಪ
ಸಾವಿರ ಸಾವಿರದೊಂದು ಹಸುಗಳನ್ನು ಗೋಪಾಲಕರನ್ನು ಸೇರಿಸಿಕೊಂಡು
ನಾನೊಂದು ಹೆಣ್ಣಿನ ವೇಷ ಹಾಕುವೆ ಮಕ್ಕಳೇ
ಚಂದ ಬಾರಿಯ ಒಂದು ಸೀರೆ ತಂದು
ಚಂದ ಬಾರಿಯ ಒಂದು ಸೀರೆ ತಂದು
ಉಟ್ಟುಕೊಂಡು ಅಲಂಕಾರ ಮಾಡಿಕೊಂಡು ಹೊರಡುವರು ಶ್ರೀ ಕೃಷ್ಣ

ಅಕ್ಕನ ದಾರಿಯನ್ನು ಕಾಯುತ್ತಿದ್ದ ರಾಧೆ ಚಂದಬಾರಿ ರೂಪದಲ್ಲಿ ಬಂದ ಶ್ರೀಕೃಷ್ಣನನ್ನು ಅಕ್ಕನೆಂದೇ ಭಾವಿಸಿ ಸ್ವಾಗತಿಸಿ ಸತ್ಕಾರ ಮಾಡುತ್ತಾಳೆ. ರಾತ್ರಿ ಊಟ ಮಾಡಿ ಏಳು ಮಾಳಿಗೆಯ ಉಪ್ಪರಿಗೆಯ ಮೇಲೆ ಹೋಗಿ ರಾಧೆ ಮತ್ತು ಚಂದಬಾರಿ ರೂಪದಲ್ಲಿರುವ ಶ್ರೀಕೃಷ್ಣ ಮಲಗಲು ಹೋಗುತ್ತಾರೆ. ತಂಗಿ ರಾಧೆ ಅಕ್ಕನಲ್ಲಿ ಕಥೆ ಹೇಳೆಂದು ಹೇಳುವಾಗ ನನಗೆ ಕಥೆಗಿತೆ ತಿಳಿದಿಲ್ಲ. ನಾನು ನನ್ನ ದೇವರು ಶ್ರೀಕೃಷ್ಣ ನಾಮಸ್ಮರಣೆ ಮಾತ್ರ ಮಾಡುವುದು ಎಂದು ಚಂದಬಾರಿ ರೂಪ ಧರಿಸಿದ ಶ್ರೀಕೃಷ್ಣ ಹೇಳುತ್ತಾನೆ. ಹಾಗಾದರೆ ಅದನ್ನೇ ಹೇಳು ಎಂದು ರಾಧೆ ಹೇಳುತ್ತಾಳೆ. ಆಗ ನಾನು ಹೇಳುವುದಿಲ್ಲ, ನಾನು ಹೇಳಿದರೆ ನಿನ್ನ ಭಾವ ಇಲ್ಲಿ ಪ್ರತ್ಯಕ್ಷವಾಗುತ್ತಾನೆ ಎಂದು ಚಂದಬಾರಿ ರೂಪದ ಶ್ರೀಕೃಷ್ಣ ಹೇಳುತ್ತಾನೆ. ತೊಂದರೆ ಇಲ್ಲ ಅದನ್ನೇ ಹೇಳು ಎಂದು ರಾಧೆ ಹೇಳಿದಾಗ ಚಂದಬಾರಿ ರೂಪದ ಶ್ರೀಕೃಷ್ಣ ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾನೆ. ಕೂಡಲೇ ತನ್ನ ನಿಜ ರೂಪವನ್ನು ತೋರುತ್ತಾನೆ. ಆ ಬಳಿಕ ಏಳು ರಾತ್ರಿ, ಏಳುಹಗಲು ರಾಧೆ ಮತ್ತು ಕೃಷ್ಣ ಜೊತೆಯಾಗಿ ಇರುತ್ತಾರೆ. ಇತ್ತ ಚಂದಬಾರಿ ತನ್ನ ಪತಿ ಶ್ರೀಕೃಷ್ಣ ಎಲ್ಲಿಗೆ ಹೋದನೆಂದು ಹುಡುಕುತ್ತಾ ರಾಧೆಯ ಮನೆಗೆ ಬರುತ್ತಾಳೆ. ಗೋಪಾಲನೂ ಮೇಲು ಮಾಳಿಗೆಯಲ್ಲಿ ಅಕ್ಕ ತಂಗಿ ಏಳು ರಾತ್ರಿ ಏಳು ಹಗಲು ಏನು ಮಾಡುತ್ತಿದ್ದಾರೆ ಎಂದು ಸಂಶಯ ತಾಳುತ್ತಾನೆ.
ಆಗ ರಾಧೆ ಮತ್ತು ಶ್ರೀಕೃಷ್ಣ ದೇವರು ಮಾಳಿಗೆ ಇಳಿದು ಬರುತ್ತಾರೆ. ಗೋಪಾಲನಲ್ಲಿ ಶ್ರೀಕೃಷ್ಣ ದೇವರು ರಾಧೆ ಎಂಜಲಾಗಿದ್ದಾಳೆ. ಅವಳು ನಿನಗೆ ಬೇಕೇ? ನಾನುಕೊಂಡು ಹೋಗಲೇ? ಎಂದು ಕೇಳುತ್ತಾನೆ. ಗೋಪಾಲ, ರಾಧೆ ತನಗೆ ಬೇಡ. ನೀನೇ ಕರಕೊಂಡು ಹೋಗು ಎನ್ನುತ್ತಾನೆ.
ನಾಯಿ ಮುಟ್ಟಿಮಡೆ ಉಂಡು ಬಿಸಲೆ ಉಂಡು ಗೋಪಾಲ
ನಿಕ್ಕು ಬೋಡಾ ಯಾನಾಂಡ ಕೊಂಡೋವೊಡ
ಪಂಡೇರ ಸಿರಿಕೃಷ್ಣನುಲಾ ದೇವೇರ
ಏರ‍್ಯೆ ಅಣ್ಣಯೆ ಕೃಷ್ಣಕೇಂಡಾನ
ಎಂಕುಲ ಬೋಡ್ಚಿ ಬೋಡ್ಚಿ ಕೊಂಡೋದು
ಪೋಲಾಂದು ಪಂಡೇರು ಗೋಪಾಲೆ
ಕನ್ನಡ ರೂಪ :
ನಾಯಿ ಮುಟ್ಟದ ಎಂಜಲು ಉಂಟು ಮಡಿಕೆ ಉಂಟು ಗೋಪಾಲ
ನಿನಗೆ ಬೇಕಾ ನಾನಾದರೂ ಕೊಂಡು ಹೋಗ ಬೇಕ
ಹೇಳಿದರು ಶ್ರೀ ಕೃಷ್ಣ ಕೂಡ ದೇವರೆಯೇ
ಯಾರಯ್ಯ ಅಣ್ಣ ಕೃಷ್ಣ ಕೇಳಿದೆಯ
ನನಗೆ ಬೇಡ ಬೇಡ ಕೊಂಡು ಹೋಗು
ಎಂದು ಹೇಳಿದರು ಗೋಪಾಲ

ಮುಂದೆ ಚಂದಬಾರಿ ಹಾಗೂ ರಾಧೆಯರನ್ನು ಕರೆದುಕೊಂಡು ಶ್ರೀಕೃಷ್ಣ ಮೇಲಿನ ಮಿರಿಲೋಕಕ್ಕೆ ಬರುತ್ತಾನೆ. ಅಲ್ಲಿ ರಾಧೆ, ಚಂದಬಾರಿ ಹಾಗೂ ಶ್ರೀಕೃಷ್ಣ ಸಂಸಾರ ನಡೆಸುತ್ತಾ ಇರುತ್ತಾರೆ ಎಂದು ಶ್ರೀಮತಿ ಶಾರದಾ ಜಿ. ಬಂಗೇರ ಅವರು ಹೇಳಿದ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಹೇಳಿದೆ.
ದಾಸರ ನಿಂದಾ ಸ್ತುತಿಗಳಂತೆ ಇದು ತುಳುವರ ನಿಂದಾ ಸ್ತುತಿ ಇರಬಹುದು .ಅಥವಾ ತಮಗೆ ಕಿರುಕುಳ ಕೊಡುತ್ತಿರುವ ಒಡೆಯ ಜಮೀನ್ದಾರ ರಾಜ ಹೀಗೆ ಯಾರನ್ನೋ ಕೃಷ್ಣನನ್ನು ನೆಪವಾಗಿಸಿಕೊಂಡು ತೆಗೆಳಿ  ತಮ್ಮ ಪ್ರತಿಭಟನೆಯನ್ನು ತೋರಿರಬಹುದು ತುಳುವ ಪಾದ್ದನಗಾರ್ತಿಯರು.ನಾಗ ಸಿರಿ ಕನ್ಯಗೆ ಪಾದ್ದನದಲ್ಲಿ ಕೂಡ ಶ್ರೀ ಕೃಷ್ಣನನ್ನು ತಮ್ಮನ ಮಡದಿ, ಸುಂದರಿಯಾದ ನಾಗ ಕನ್ಯಗೆ ಯನ್ನು ತಮ್ಮ ರೂಪದಲ್ಲಿ ಬಂದು ವಶಪಡಿಸಿಕೊಳ್ಳಲು ಯತ್ನಿಸುವ ,ಹಾವಾಗಿ ,ಹಲ್ಲಿಯಾಗಿ ನಾನಾ ರೂಪ ಧರಿಸಿ ಅವಳನ್ನು ಕಾಡಿ ,ವಶ ಪಡಿಸಿಕೊಳ್ಳಲು ಸಾಧ್ಯವಾಗದೆ ಇದ್ದಾಗ ಅವಳ ಮೇಲೆ ವೃಥಾ ಕಳಂಕ ಹೊರಿಸಿ ಅವಳು ಸತ್ಯ ಪ್ರಮಾಣ ಮಾಡುವಂತೆ ಮಾಡುವ ಕೆಟ್ಟ ವ್ಯಕ್ತಿಯಂತೆ  ಚಿತ್ರಿಸಿದೆ.
ಅನೇಕ ಹೆಂಡತಿಯರನ್ನು ಹೊಂದಿರುವ ,ಸೆರೆ ಸಿಕ್ಕ ರಾಜರ ಮನೆಯ ಹೆಣ್ಣು ಮಕ್ಕಳನ್ನು ಬಲಾತ್ಕಾರವಾಗಿ ಕೊಂಡೊಯ್ಯುವ ರಾಜರ ಕುರಿತಾದ ತಮ್ಮ ಪ್ರತಿರೋಧವನ್ನು ತುಳು ಜಾನಪದರು ಈ ರೀತಿ ತೋರಿರುವ ಸಾಧ್ಯತೆ ಇದೆ .ಶ್ರೀ ಕೃಷ್ಣನ ಹೆಸರನ್ನೇ ಹೊಂದಿರುವ ತುಳು ವಂಶದ ಅರಸ ಶ್ರೀ ಕೃಷ್ಣ ದೇವರಾಯನಿಗೂ ಎರಡು ಹೆಂಡಿರು ಇದ್ದರು !ಈತನ ಕುರಿತೆನಾದರೂ ತುಳು ಜನಪದರಿಗೆ ಅಸಮಧಾನವಿತ್ತೆ ?!ಕೃಷ್ಣನನ್ನು ನೆಪವಾಗಿತ್ತು ಕೊಂಡು ಈತನನ್ನೆನಾದರೂ  ಆಕ್ಷೇಪಿಸಿದರೆ ತುಳುವರು ?ಅಥವಾ ದಾಸವರೇಣ್ಯರ ನಿಂದಾ ಸ್ತುತಿಗಳಂತೆ ಇದು ತುಳು ಜನಪದರ ನಿಂದಾ ಸ್ತುತಿಯ ವೈಖರಿಯೇ ?ಈ ಬಗ್ಗೆ ಸಮಗ್ರ ಅಧ್ಯಯನ ನಡೆದರೆ ತುಳುವರಲ್ಲೇಕೆ ಶ್ರೀ ಕೃಷ್ಣನಿಗೆ ಈ ರೀತಿಯ ಚಿತ್ರಣವಿದೆ ಎಂದು ತಿಳಿಯಬಹುದು.
ಲೇಖಕಿಯ ಜೊತೆ ಶಾರದಾ ಜಿ. ಬಂಗೇರ ಚಂದ್ರಾವಳಿ  ವಿಲಾಸ ಎಂಬ ಯಕ್ಷಗಾನ ಪ್ರಸಂಗದ ಕಥೆಯು ಈ ಪಾಡ್ದನದ ಕಥೆಯನ್ನು ಹೋಲುತ್ತದೆ. ಅದರಲ್ಲಿ ರಾಧೆ ಕೃಷ್ಣನ ಮಡದಿ ಚಂದ್ರಾವಳಿ  ರಾಧೆಯ ಅಕ್ಕ .ಅವಳನ್ನು ರಾಧೆಯ ರೂಪ ಧರಿಸಿ ಇದೇ ರೀತಿ ವಶ ಪಡಿಸಿಕೊಳ್ಳುತ್ತಾನೆ ಶ್ರೀ ಕೃಷ್ಣ .ಈ ಯಕ್ಷಗಾನ ಪ್ರಸಂಗದ ಕಥೆಗೆ ಯಾವುದೇ ಪುರಾಣದಲ್ಲಿ ಅಧಾರ ಸಿಗುವುದಿಲ್ಲ .ಬಹುಷ ಪಾಡ್ದನದ ಈ ಕಥೆಯೇ ಆ ಯಕ್ಷಗಾನ ಪ್ರಸಂಗಕ್ಕೆ ಮೂಲ ವಾಗಿರುವ ಸಾಧ್ಯತೆ ಇದೆ .ರಾಧಾ ಕೃಷ್ಣರ ಪವಿತ್ರ ಪ್ರೇಮದ ಸಾಂಪ್ರದಾಯಿಕ ಪರಿಕಲ್ಪನೆಗೆ ಧಕ್ಕೆ ಯಾಗದಂತೆ ರಾಧೆಯ ಬದಲು ಚಂದ್ರಾವಳಿಯನ್ನು ವಶಪಡಿಸಿಕೊಂಡಂತೆ ಮೂಲ ಕಥೆಯಲ್ಲಿ ತುಸು ಬದಲಾವಣೆ ಮಾಡಿ ಕೊಂಡು ಚಂದ್ರಾವಳಿ ವಿಲಾಸ ಪ್ರಸಂಗವನ್ನುರಚಿಸಿರುವ ಸಾಧ್ಯತೆ ಇದೆ. ಧ್ವಜಪುರ ನಾಗಪ್ಪಯ್ಯನವರು ಏನೇ ಆದರು ಈ ಪಾಡ್ದನದ ಬಗ್ಗೆ  ಅಧ್ಯಯನ ನಡೆದರೆ ಹೆಚ್ಚಿನ ಮಾಹಿತಿ ತಿಳಿಯಬಹುದು(ಚಂದ್ರಾವಳಿ ವಿಲಾಸ ಯಕ್ಷಗಾನದ ಫೋಟೋಗಳನ್ನು ನೀಡಿದ ರಾಧಾ ಕೃಷ್ಣ ಭಟ್ k ಇವರಿಗೆ ಧನ್ಯವಾದಗಳು )