Tuesday 27 February 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು: 427 ಕೀಳು ದೈವ- ಡಾ.ಲಕ್ಷ್ಮೀ ಜಿ ಪ್ರಸಾದ

ತುಳುನಾಡಿನಲ್ಲಿ ಎಷ್ಟು ದೈವಗಳಿಗೆ ಆರಾಧನೆ ಇದೆ ಎಂದು ಇದಮಿತ್ಥಂ ಉತ್ತರಿಸುವುದು ಕಷ್ಟದ ವಿಚಾರ
ತುಳು‌ಮಲೆಯಾಳ ಕೊಡವ ಕನ್ನಡ ಪರಿಸರದ ದೈವಗಳ ಪಟ್ಟಿಯನ್ನು ನಾನು ಮಾಡಿದ್ದು 1526 ಹೆಸರುಗಳು ಸಿಕ್ಕಿವೆ ಇದರಲ್ಲಿನ 1435 ದೈವಗಳ ಹೆಸರಿನ  ಪಟ್ಟಿ ಅಣಿಅರದಳ ಸಿರಿ ಸಿಂಗಾರ ಕೃತಿಯಲ್ಲಿ ಪ್ರಕಟವಾಗಿದೆ.1526.ಕೂಡ ಅಂತಿಮವಲ್ಲ .
ಕ್ಷೇತ್ರಕಾರ್ಯಕ್ಕೆ ಹೋದಂತೆಲ್ಲಾ ಹೊಸ ಹೊಸ ಹೆಸರುಗಳು ಸಿಕ್ಕುತ್ತಾ ಇವೆ‌.
ಫೇಸ್ ಬುಕ್ ಮೂಲಕ ಪರಿಚಿತರಾದ  ರಾಜ್ಬೇ ಕೆ ಶೆಟ್ಟಿ ಳಂಜೆಯವರು ಅವರ ಪರಿಸರದಲ್ಲಿ ಆರಾಧನೆ ಆಗುವ ಕೀಳು ಎಂಬ ಹೆಸರಿನ ದೈವದ ಬಗ್ಗೆ ತಿಳಿಸಿದ್ದಾರೆ.
ಕೀಳು ಎಂದರೆ ಇಲ್ಲಿ ತುಚ್ಛ ಕೆಳಮಟ್ಟ ಎಂಬರ್ಥವಲ್ಲ.ಕೇಳು ,ಕೀಳು ಇತ್ಯಾದಿ ಹೆಸರುಗಳು ತುಳುನಾಡಿನಲ್ಲಿ ಇದ್ದವು.ಪ್ರಸ್ತುತ ಅವುಗಳ ಮೂಲ ಅರ್ಥ ಕಳೆದುಹೋಗಿದೆ.
ಕೀಳು ಎಂಬುದು ಹೆಬ್ರಿ ಬೇಳಂಜೆ ಪರಿಸರದ ಓರ್ವ ಮಹಿಳೆಯ ಹೆಸರು.ಈಕೆ ಆ ಪರಿಸರದಲ್ಲಿ ವಾಸವಿದ್ದ ಕೂಸಾಳು ಎಂಬ ಸಮುದಾಯಕ್ಕೆ ಸೇರಿದವಳು.ಯಾವುದೋ ಕಾರಣಕ್ಕೆ ಮಾಯಕ ಹೊಂದಿ ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾಳೆ.
ಮಾಹಿತಿ ನೀಡಿದ ರಾಜ್ ಕೆ ಶೆಟ್ಟಿ ಬೇಳಂಜೆಯವರಿಗೆ ಧನ್ಯವಾದಗಳು
ಈ ಬಗ್ಗೆ ಹೆಚ್ಚಿನ ಮಾಹಿತಿ ಇದ್ದವರು ತಿಳಿಸಬೇಕಾಗಿ ಕೋರಿಕೆ - ಡಾ.ಲಕ್ಷ್ಮೀ ಜಿ ಪ್ರಸಾದ

Sunday 25 February 2018

ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು 425-426 ನೇತ್ರಾಣಿ ಜಟಗ/ ಜಟ್ಟಿಗ ಮತ್ತು ಹೊಗೆವಡ್ಡಿ ಜಟಗ ದೈವಗಳು© ಡಾ ಲಕ್ಷ್ಮೀ ಜಿ ಪ್ರಸಾದ

 


ಚಿತ್ರ ಕೃಪೆ - ಶ್ರೀ ಅನಂತ ನಾಯಕ್ ,ನೇತ್ರಾಣಿ ಗುಡ್ಡ ಮತ್ತು ಕುದುರೆ ಜಟ್ಟಿಗ, ನೇತ್ರಾಣಿ ಜಟ್ಟಿಗ ,ಕ್ಷೇತ್ರ ಪಾಲ ಮತ್ತು ಇತರ ಆರಾಧ್ಯ ಶಕ್ತಿಗಳು
ಸಾವಿರದೊಂದು ಗುರಿಯೆಡೆಗೆ, ತುಳುನಾಡ ದೈವಗಳು
ನೇತ್ರಾಣಿ ಜಟಗ ಮತ್ತು ಹೊಗೆವಡ್ಡಿ ಜಟಗ ದೈವಗಳು © ಡಾ.ಲಕ್ಷ್ಮೀ ಜಿ ಪ್ರಸಾದ
ರಾಣಿ ಚೆನ್ನ ಭೈರಾದೇವಿ ಉತ್ತರ ಭಾರತದಿಂದ ಗೊಂಡರ ಪಡೆಯನ್ನು ತನ್ನ ಕೋಟೆ ಹಾಗೂ ಅರಮನೆಯ ಕಾವಲಿಗಾಗಿ ಕರೆಸಿಕೊಂಡು ಬಂದು ಸಲಹಿದ್ದ ಬಗ್ಗೆ ಇತಿಹಾಸವು ತಿಳಿಸುತ್ತದೆ.ಗೊಂಡರು ಜಟಗರನ್ನು ಆರಾಧನೆ ಮಾಡುತ್ತಾರೆ.ಇವರು ಬಲಿಷ್ಠ ರಾದ ಜಟ್ಟಿಗಳೂ ಆಗಿದ್ದರು.
ಹೊಗೆವಡ್ಡಿ ಮತ್ತು ನೇತ್ರಾಣಿ ಗುಡ್ಡದಲ್ಲಿ  ಜಟ್ಟಿಗ/ಜಟಗರ ಆರಾಧನೆ ಇದೆ. ಇವರಿಬ್ಬರು ಅಣ್ಣ ತಮ್ಮಂದಿರಾಗಿದ್ದು
ಹೊಗೆವಡ್ಡಿಯ ಜಟಗರಾಯ ಅಣ್ಣನೆಂದೂ ,ನೇತ್ರಾಣಿಯ ಜಟಗರಾಯ ತಮ್ಮನೆಂಬ ಐತಿಹ್ಯವಿದೆ.
ಹೊಗೆವಡ್ಡಿಯ ಜಟಗನಿಗೆ ಮಾಣಿ ಭದ್ರ ಎಂಬ ಹೆಸರು‌.ನೇತ್ರಾಣಿ ಜಟಗನಿಗೆ ವೀರ ಭದ್ರನೆಂದು ಹೆಸರು.
ಇವರಿಬ್ಬರೂ ಯುದ್ದ ವೀರರಾಗಿದ್ದರು.
ಕಾಸರ
ಸ್ಥಳೀಯ ಐತಿಹ್ಯದ ಪ್ರಕಾರ ಹೊಗೆವಡ್ಡಿ ಯ ಜಟಗ ನಿಜಾಮರ ಜೊತೆಗಿನ ಹೋರಾಟದಲ್ಲಿ ಮರಣವನ್ನಪ್ಪುತ್ತಾನೆ‌.ನೇತ್ರಾಣಿ ಜಟಗ ಮರಾಠರ ಜೊತೆಯ ಹೋರಾಟದಲ್ಲಿ ಮರಣವನ್ನಪ್ಪುತ್ತಾರೆ .
ಹೊಗೆವಡ್ಡಿ ಕೋಟೆಯಲ್ಲಿ ಕಾಸರಗೋಡು ತಿಮ್ಮಣ್ಣ ನಾಯಕನಿದ್ದಾಗ ಒಂದೆಡೆಯಿಂದ ನಿಜಾಮರು ಮತ್ತು ಮತ್ತೊಂದೆಡೆಯಿಂದ ಮರಾಠರು ಆಕ್ರಮಣ ಮಾಡುತ್ತಾರೆ. ಆಗ ಇವರಿಬ್ಬರು ಯುದ್ಧದಲ್ಲಿ ಸಾಯುತ್ತಾರೆ.
‌ಮೆಣಸಿನ ರಾಣಿ ಚೆನ್ನ ಭೈರಾದೇವಿಯ ಇತಿಹಾಸದಲ್ಲಿ ಪೋರ್ಚುಗೀಸರು ಮತ್ತು ರಾಣಿಯ ನಡುವೆ ಯುದ್ಧವಾಗಿದ್ದು ಸ್ವತಃ ರಾಣಿಯೇ ಕತ್ತಿ ಹಿಡಿದು ಯುದ್ಧ ಮಾಡಿ ಪೋರ್ಚುಗೀಸರನ್ನು ಹಿಮ್ಮೆಟ್ಟಿಸುತ್ತಾಳೆ.ಆಗ ಗಾಯಗೊಂಡ ಅವಳು ಪೋರ್ಚುಗೀಸರ ನಡುವೆ ಸಿಕ್ಕು ಹಾಕಿಕೊಳ್ಳುತ್ತಾಳೆ.ಆಗ ಗೊಂಡರ ನಾಯಕ ವೀರಾವೇಶದಿಂದ ಹೋರಾಡಿ ರಾಣಿಯನ್ನು ರಕ್ಷಣೆ ಮಾಡಿ ಗಾಯ ಗೊಂಡ ಅವಳನ್ನು ಹೊತ್ತುಕೊಂಡು ನೇತ್ರಾಣಿ ಗುಡ್ಡಕ್ಕೆ ಬರುತ್ತಾನೆ.ಯುದ್ಧದಲ್ಲಿ ಗಾಯಗೊಂಡ ಅವಳು ಸಾಯುತ್ತಾಳೆ.ಆಗ ಅವಳ ರಾಜ್ಯದ ಒಡೆತನ ಅವಳ ತಂಗಿ ಚನ್ನ ಭೈರಾದೇವಿಗೆ ಸಿಗುತ್ತದೆ. ಅವಳು ಸುಮಾರು ಐವತ್ತನಾಲ್ಕುವರ್ಷಗಳ ಕಾಲ ಬಸದಿ ಕೇರಿ ಗೇರು ಸೊಪ್ಪೆ ಭಟ್ಕಳದಲ್ಲಿ ಆಳ್ವಿಕೆ ನಡೆಸುತ್ತಾಳೆ.ಕಾಳು ಮೆಣಸನ್ನು ಬೆಳೆದು ಮಾರಾಟ ಮಾಡಿ ಅಪಾರ ಸಂಪತ್ತನ್ನು ಗಳಿಸಿದ ಅವಳು ರಾಜ್ಯ ವಿಸ್ತರಣೆಯನ್ನು ಮಾಡುತ್ತಾಳೆ.ವಿಜಯ ನಗರ ಸಾಮ್ರಾಜ್ಯಕ್ಕೆ ಸಂವಾದಿಯಾದ ಸಾಮ್ರಾಜ್ಯವನ್ನು ಕಟ್ಟುತ್ತಾಳೆ.ಈ ಬಗ್ಗೆ ದೆಲ್ಲಾವೆಲ್ಲಾ ಬರೆದ ಪ್ರವಾಸಿ ಕಂಡ ಭಾರತದಲ್ಲಿ ಉಲ್ಲೇಖವಿದೆ.
‌ಅಕ್ಕನ  ವಯಸ್ಸಾದ ಗಂಡನನ್ನು ಮದುವೆಯಾದ ತಂಗಿ ಸಣ್ಣ ವಯಸ್ಸಿಗೆ ವಿಧವೆಯಾಗುತ್ತಾಳೆ.ನಂತರ ಗೊಂಡರ ನಾಯಕನನ್ನು ಸಂಪೂರ್ಣವಾಗಿ ನಂಬುತ್ತಾಳೆ.ಆದರೆ ಆತ ರಾಣಿಗೆ ಮೋಸ ಮಾಡಿ ಕೆಳದಿಯ ವೆಂಕಟಪ್ಪ ನಾಯಕನ ಜೊತೆ ಸೇರಿ ರಾಜ್ಯದ ಸಂಪತ್ತು ಎಲ್ಲಿದೆ ಎಂಬ ರಹಸ್ಯವನ್ನು ಹೇಳುತ್ತಾನೆ.ವೆಂಕಟಪ್ಪ ನಾಯಕ ಯುದ್ಧಕ್ಕೆ ಬಂದಾಗ ತನ್ನಲ್ಲಿರುವ ಸಮಪತ್ತನ್ನು ನೀಡುತ್ತೇನೆ ಎಂದು ತಿಳಿಸಿ ಪೋರ್ಚುಗೀಸರೊಡನೆ ಒಪ್ಪಂದ ಮಾಡಿ ಯುದ್ದಕ್ಕೆ ಸಹಾಯ ಯಾಚಿಸುತ್ತಾಳೆ.ಆದರೆ ರಾಜ್ಯದಲ್ಲಿ ನೂರಾರು ಬಾವಿಗಳಲ್ಲಿ ಅಡಗಿಸಿ ಇಟ್ಟ ಸಂಪತ್ತನ್ನು ನೋಡಿದ ಪೋರ್ಚುಗೀಸರು ಅದನ್ನು ಬೇರೆಡೆಗೆ ಸಾಗಿಸುವಲ್ಲಿ ಗಮನ ಹರಿಸುತ್ತಾರೆ ಯುದ್ಧದಲ್ಲಿ ಸರಿಯಾದ ರೀತಿಯಲ್ಲಿ ಸಹಾಯ ಮಾಡುವುದಿಲ್ಲ. ಪರಿಣಾಮವಾಗಿ ವೆಂಕಟಪ್ಪ ನಾಯಕ ಭಟ್ಕಳವನ್ನು ವಶಪಡಿಸಿಕೊಳ್ಳುತ್ತಾನೆ.ಆದರೆ ಅದಕ್ಕಿಂತ ಮೊದಲೇ ಸಂಪತ್ತನ್ನು ಬೇರೆಡೆ ಸಾಗಿಸಿದ್ದು ಅದು ಪೋರ್ಚುಗೀಸರ ವಶವಾಗಿತ್ತು.ಗೊಂಡರ ನಾಯಕ ಜಟ್ಟಿಗ ತೋರಿಸಿದ ಬಾವಿಗಳು ಖಾಲಿಯಾಗಿದ್ದವು.ಇದರಿಂದ ಕೋಪಗೊಂಡ ವೆಂಕಟಪ್ಪ ನಾಯಕ ಗೊಂಡರ ನಾಯಕನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲುತ್ತಾನೆ.
‌ಗೊಂಡರು ಚೌಂಡಿ( ಚಾಮುಂಡಿ ?) ಮತ್ತು ಜಟಗರನ್ನು ಆರಾಧನೆ ಮಾಡುತ್ತಾರೆ.
‌ತುಳುನಾಡಿನ ಚಾಮುಂಡಿ ದೈವದ ವೃತ್ತಾಂತದಲ್ಲಿ ಚಾಮುಂಡಿಗೆ ದ್ರೋಹ ಮಾಡಿದಾತ ಜತ್ತಿಂಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ.
‌ಚಾಮುಂಡಿ ಯಾರೆಂಬ ಬಗ್ಗೆ ಇದಮಿತ್ತಂ ಎಂಬ ಮಾಹಿತಿ ಇಲ್ಲ.ಭೀಮುರಾಯರ ಕೆರೆಯಲ್ಲಿ ತಾವರೆ ಹೂವಾಗಿ ಹುಟ್ಟಿ ಹುಡುಗಿಯಾಗಿ ಬದಲಾಗಿ ಚಾಮುಂಡಿ ಎಂಬ ಹೆಸರು ಪಡೆದ ಬಗ್ಗೆ ಶಾರದಾ ಜಿ ಬಂಗೇರ ಅವರು ಹಾಡಿದ ಪಾಡ್ದನದಲ್ಲಿದೆ.
‌ಇಲ್ಲಿ ರಾಣಿ ಚೆನ್ನ ಭೈರಾದೇವಿ ಮತ್ತು ಚೌಂಡಿ(ಚಾಮುಂಡಿ?) ಯನ್ನು ಸಮೀಕರಿಸಿ ಅಕೆಗೆ ದ್ರೋಹ ಮಾಡಿದ ಗೊಂಡರ ನಾಯಕ ಜಟಗನೆ ಜತ್ತಿಂಗ,ಜಟ್ಟಿಗ ಎಂಬ ಹೆಸರಿನ ದೈವವಾಗಿ ಚಾಮುಂಡಿ ಜೊತೆಯಲ್ಲಿ ಆರಾಧನೆ ಪಡೆಯುತ್ತಾನೆ ಎಂದು ಡಾ.ಕೆ ಎನ್ ಗಣೇಶಯ್ಯ ಅಭಿಪ್ರಾಯ ಪಟ್ಟಿದ್ದಾರೆ.
‌ರಾಣಿ ಚೆನ್ನ ಭೈರಾದೇವಿಯ ನಂತರದ ಕಾಲದಲ್ಲಿ ಎಂದರೆ ಕೆಳದಿಯ ವೆಂಕಪ್ಪ ನಾಯಕನ ವಂಶದಲ್ಲಿ ಕೆಳದಿಯ ರಾಣಿ ಚೆನ್ನಮ್ಮ ಅಳ್ವಿಕೆ ನಡೆಸುತ್ತಾಳೆ.ಆಗ ಚೆನ್ನಮ್ಮಳ ಮಹಾ ಪ್ರಧಾನಿ ವೀರ ತಿಮ್ಮಣ್ಣ ನಾಯಕ ಹೊಗೆವಡ್ಡಿ ಕೋಟೆಯನ್ನು ಕಟ್ಟಿಸಿ ಅ ಪರಿಸರದಲ್ಲಿ ರಕ್ಷಣೆ ಮಾಡುತ್ತಾನೆ.ಆ ಸಮಯದಲ್ಲಿ ಕೂಡ ರಾಣಿ ಚೆನ್ನಭೈರಾದೇವಿ ಕರೆಸಿದ ಗೊಂಡರ ವಂಶದವರು ಕೆಳದಿಯ ಜೊತೆಯಲ್ಲಿ ಇರುತ್ತಾರೆ.ಆಗ ಯುದ್ಧದಲ್ಲಿ ಇಬ್ಬರು ಅಥವಾ ಒಬ್ಬ ಗೊಂಡರ ನಾಯಕ ಮರಣವನ್ನಪ್ಪಿ ದೈವತ್ವ ಪಡೆದು ಹೊಗೆವಡ್ಡಿ ಜಟ್ಟಿಗ ದೈವವಾಗಿ ಆರಾಧನೆ ಪಡೆಯುತ್ತಾನೆ.ಆತನ ಹೆಸರು ಮಾಣಿ ಜಟ್ಟಿಗ ಎಂದಿರುವ ಕಾರಣ ಆತ ನೇತ್ರಾಣಿ ಜಟ್ಟಿಗನಿಗಿಂತ ಕಿರಿಯವನಾಗಿರಬಹುದು.ನೇತ್ರಾಣಿಯಲ್ಲಿ ಆರಾಧನೆ ಪಡೆಯುವ ಕುದುರೆ ಜಟ್ಟಿಗ ರಾಣಿ ಚೆನ್ನ ಭೈರಾದೇವಿಗೆ ದ್ರೋಹ ಮಾಡಿ ದುರಂತವನಗನಪ್ಪಿದ ವೀರನೇ ಇರಬೇಕು. ದುರಂತ ಮತ್ತು ದೈವತ್ವ ತುಳುವ ಸಂಸ್ಕೃತಿಯಲ್ಲಿ ಅಲ್ಲಲ್ಲಿ ಕಾಣಬರುವ ವಿದ್ಯಮಾನವಾಗಿದೆ.ಅಂತೆಯೇ ಅತ ಕೂಡ ದೈವತ್ವ ಪಡೆದು ಆರಾಧನೆ ಪಡೆಯುತ್ತಾನೆ.
‌ಹೊಗೆವಡ್ಡಿ  ಕೋಟೆಯ ತಿಮ್ಮಣ್ಣ ನಾಯಕ ದೈವವಾಗಿ ಆರಾಧನೆ ಪಡೆಯುತ್ತಾನೆ. ಅವನ ಕಾಲದಲ್ಲಿಯೇ ಯುದ್ದದಲ್ಲಿ ದುರಂತವನ್ನಪ್ಪಿದ ಗೊಂಡರ ನಾಯಕ ಕೂಡ ದೈವತ್ವ ಪಡೆದು ಆರಾಧನೆ ಹೊಂದುತ್ತಾನೆ
‌ನೇತ್ರಾಣಿ ಗುಡ್ಡದಲ್ಲಿ ನೇತ್ರಾಣಿ ಜಟ್ಟಿಗನಲ್ಲದೆ ಕಿದುರೆ ಜಟ್ಟಿಗ ಎಂಬ ಹೆಸರಿನ ದೈವಕ್ಕೂ ಆರಾಧನೆ ಇದೆ. ಬಹುಶಃ ಆತ ಮರಾಠರ ಜೊತೆಯಲ್ಲಿ ಹೋರಾಡಿದ ಗೊಂಡರ ನಾಯಕನಿರಬಹುದು.
‌ಈ ಬಗ್ಗೆ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ © ಡಾ.ಲಕ್ಷ್ಮೀ ಜಿ ಪ್ರಸಾದ
‌ಆಧಾರ ಗ್ರಂಥಗಳು
‌ಬಳ್ಳಿಕಾಳ ಬೆಳ್ಳಿ -  ಐತಿಹಾಸಿಕ ಕಾದಂಬರಿ© ಡಾ.ಕೆ ಎನ್ ಗಣೇಶಯ್ಯ
‌ಭೂತಗಳ ಅದ್ಭುತ ಜಗತ್ತು - © ಡಾ ಲಕ್ಷ್ಮೀ ಜಿ ಪ್ರಸಾದ
‌ತುಳುನಾಡಿನ ಅಪೂರ್ವ ಭೂತಗಳು © ಡಾ.ಲಕ್ಷ್ಮೀ ಜಿ ಪ್ರಸಾದ
‌ಹೊಗೆವಡ್ಡಿ ಕ್ಷೇತ್ರ ಮಹಾತ್ಮೆ © ಶ್ರೀ ಅನಂತ ನಾಯಕ
‌ಮತ್ತು ಕಾಸರಗೋಡು ತಿಮ್ಮಣ್ಣ ನಾಯಕನ ವಂಶಜರಾದ ಅನಂತ ನಾಯಕ ಅವರು ಮೌಖಿಕವಾಗಿ ತಿಳಿಸಿದ ಐತಿಹ್ಯಗಳು ಮತ್ತು ಮಾಹಿತಿಗಳು 

Sunday 18 February 2018

ಸಾವಿರದೊಂದು ಗುರಿಯೆಡೆಗೆ : ತುಳುನಾಡ ದೈವಗಳು - 424 ಬ್ರಾಣ ಭೂತ© ಡಾ.ಲಕ್ಷ್ಮೀ ಜಿ ಪ್ರಸಾದ


ಬ್ರಾಹ್ಮಣರು ತುಳುನಾಡಿನ ಮೂಲ ನಿವಾಸಿಗಳಲ್ಲ.ಇವರು ಹೊರಗಿನಿಂದ ಬಂದವರು.ಆದರೂ ತುಳುವ ಮಣ್ಣಿನಲ್ಲಿ ನೆಲೆಸಿದಾಗ ಇಲ್ಲಿ ಆರಾಧನೆ ಪಡೆಯುವ ಮಣ್ಣಿನ ಸತ್ಯಗಳು ಎಂದು ಕರೆಸಿಕೊಳ್ಳುವ ಭೂತಗಳನ್ನು ತಮ್ಮ ಆರಾಧ್ಯ ದೇವತೆಗಳಾದ ರಾಮ ಕೃಷ್ಣ, ಶಿವ, ವಿಷ್ಣು ,ದುರ್ಗೆಯರ ಜೊತೆಗೆ ಆರಾಧನೆ ಮಾಡುತ್ತಾ ಬಂದಿದ್ದಾರೆ. ತುಳುನಾಡ ದೈವಗಳ ಕಥಾನಕ ತಿಳಿಯದ ಕಾಲದಲ್ಲಿ ಇವರನ್ನು ಶಿವಗಣಗಳು ,ವಿಷ್ಣು ಗಣಗಳು,ದೇವಿಯ ಅವತಾರ ಎಂದು ತಪ್ಪಾಗಿ ಅರ್ಥೈಸಿರುವುದೂ ಇದೆ.
ತುಳುನಾಡ ದೈವಗಳಲ್ಲಿ ಹೆಚ್ಚಿನವವರು ಮಾನವ ಮೂಲದವರು‌.ಪ್ರಧಾನ ದೈವಗಳ ಆಗ್ರಹಕ್ಕೆ ಅಥವಾ ಅನುಗ್ರಹಕ್ಕೆ ಪಾತ್ರರಾದವರು ಆಯಾಯ ದೈವಗಳ ಸೇರಿಗೆಗೆ ಸಂದು ದೈವತ್ವ ಪಡೆದು ಸೇರಿಗೆ ದೈವವಾಗಿ  ಆರಾಧನೆ ಪಡೆಯುವ ವಿದ್ಯಮಾನ ತುಳುನಾಡಿನ ಹಲವು ಕಡೆ ಕಾಣಿಸಿಕೊಂಡಿದೆ.
ಹೀಗೆಯೇ ತುಳುನಾಡಿನಲ್ಲಿ ನೆಲೆ ನಿಂತ ಅನೇಕ ಬ್ರಾಹ್ಮಣರು ದೈವತ್ವ ಪಡೆದು ಆರಾಧನೆ ಪಡೆಯುತ್ತಿದ್ದಾರೆ. ಹಿರಿಯಡ್ಕದಲ್ಲಿ ವೀರಭದ್ರನನ್ನು ಪ್ರತಿಷ್ಟಾಪಿಸಿದ ಅಡ್ಕತ್ತಾಯ ಎಂಬ ಬ್ರಾಹ್ಮಣ ಅದೇ ಹೆಸರಿನ ದೈವವಾಗಿ ಆರಾಧನೆ ಪಡೆಯುತ್ತಾನೆ. ಸೂರಂಬೈಲು ಸಮೀಪ ಕಾರಿಂಜೇಶ್ವರ ದೇವಾಲಯ ನಿರ್ಮಿಸಿದ ಕಾರಿಂಜೆತ್ತಾಯ ಎಂಬ ಬ್ರಾಹ್ಮಣ ಕೂಡ ಅದೇ ಹೆಸರಿನ ದೈವವಾಗಿ ನೆಲೆಸಿದ್ದಾನೆ.ಹಾಗೆಯೇ ಭಟ್ಟಿ ಭೂತ,ಬ್ರಾಣ ಬೂತ ಮತ್ತು ಮಾಣಿ ಭೂತ,ಮರ್ಲು ಮಾಣಿ,ಓಪೆತ್ತಿ ಮದಿಮಾಳ್,ಮುಂಡೆ ಬ್ರಾಂದಿ,ಬ್ರಾಹ್ಮಣತಿ ಭೂತ/ ಬಾಲಜ್ಜಿ,ಇಲ್ಲತ್ತಮ್ಮ,ಮುಕಾಂಬಿ ಗುಳಿಗ ಕಚ್ಚೆ ಭಟ್ಟ,ಬ್ರಾಣ ಕುಲೆ,ಬ್ರಾಣ ಭೂತ ,ಚೆಂಬೆರ್ಪುನ್ನಾಯೆ ಮೊದಲಾದವರು ಕಾರಣಾಂತರಗಳಿಂದ ದೈವತ್ವ ಪಡೆದು ತುಳುನಾಡಿನ ದೈವಗಳಾಗಿ ಆರಾಧನೆ ಪಡೆಯುತ್ತಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಣಿಕ್ಕಳ,ಬಜತ್ತೂರು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಬ್ರಾಣ ಭೂತ ಎಂಬ ಇನ್ನೊಂದು ಬ್ರಾಹ್ಮಣ ಮೂಲದ ದೈವಕ್ಕೆ ಆರಾಧನೆ ಇದೆ. ಈತ ಮೂಲತಃ ಓರ್ವ ಅರ್ಚಕ.ಬಹಳ ದೈವ ಭಕ್ತಿ ಇದ್ದವರು‌ಇವರ ಭಕ್ತಿಗೆ ಒಲಿದು ಅಲ್ಲಿನ  ಪ್ದೈರಧಾನ ದೈವಗಳು ಆತನನ್ನು ಮಾಯ ಮಾಡಿ ತಮ್ಮ ಸೇರಿಗೆಗೆ ಸೇರಿಸುತ್ತಾರೆ.ಆತ ದೈವತ್ವ ಪಡೆದು ಬ್ರಾಣ ಭೂತವಾಗಿ ಆರಾಧನೆ ಪಡೆಯುತ್ತಾನೆ.
ಪಾಡ್ಯಂತಾಯ, ಪಂಬೆತ್ತಾಯ,ನಾಗಬೆರ್ಮೆರ್ ಗಳಿಗೆ ಈ ಪರಿಸರದಲ್ಲಿ ಆರಾಧನೆ ಇದೆ. ಇವರ ಆರಾಧನೆ ನಡೆಯುವಾಗ ಬ್ರಾಣ ಭೂತಕ್ಕೂ ಕೋಲ ಕೊಟ್ಟು ಆರಾಧನೆ ಸಲ್ಲಿಸುತ್ತಾರೆ.
ಬಿಳಿ ಕಚ್ಚೆ ಹಾಕಿ ಜನಿವಾರ ಧರಿಸಿ ಕೈಯಲ್ಲಿ ಒಂದು ಬೀಸಣಿಗೆ ಹಿಡಿದ ಸಹಜ ಅಲಂಕಾರ ಈ ದೈವಕ್ಕೆ ಇರುತ್ತದೆ.ಈ ದೈವ ತುಳು ಬ್ರಾಹ್ಮಣರ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸುತ್ತದೆ.ಸ್ವಲ್ಪ ಹಾಸ್ಯದ ಅಭಿವ್ಯಕ್ತಿ ಕೂಡ ಇರುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ
ಮಾಹಿತಿ ಸಂಗ್ರಹದಲ್ಲಿ ಸಹಾಯ ಮಾಡಿದ ಮಣಿಕ್ಕಳ ಮುರಳೀಧರ ರಾವ್ ಅವರಿಗೆ ಧನ್ಯವಾದಗಳು

Tuesday 6 February 2018

ಸಾವಿರದೊಂದು ಗುರಿಯೆಡೆಗೆ- ತುಳುನಾಡ ದೈವಗಳು 423 ಉಂರ್ದರ ಪಂಜುರ್ಲಿ© ಡಾ.ಲಕ್ಷ್ಮೀ ಜಿ ಪ್ರಸಾದ


ಸಾವಿರದೊಂದು ಗುರಿಯೆಡೆಗೆ -ತುಳುನಾಡ ದೈವಗಳು ಉಂರ್ದರ ಪಂಜುರ್ಲಿ © ಡಾ.ಲಕ್ಷ್ಮೀ ಜಿ ಪ್ರಸಾದ
ಕಳೆದ ತಿಂಗಳ ಹದಿನಾಲ್ಕರಂದು ಆಮಂತ್ರಣ ಹಬ್ಬಕ್ಕೆ ಅತಿಥಿಯಾಗಿ ಬರುವಂತೆ ಶೇಖರ್ ಬೆಳಾಲ್ ಅವರು ಆಹ್ವಾನಿಸಿದಾಗ ಆ ಪರಿಸರದಲ್ಲಿನ ದೈವಗಳ ಕುರಿತಾಗಿ ಕ್ಷೇತ್ರ ಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಒಟ್ಟಿಗೆ ಮಾಡಬೇಕೆಂದು ಪೂರ್ವ ತಯಾರಿ ಮಾಡಿಕೊಂಡು ಹೊರಟೆ.ಸಮೀಪದ ನಾರಾವಿಯಲ್ಲಿ ಶಿಕ್ಷಕರಾಗಿರುವ ನಮ್ಮ ಸಂಬಂಧಿಕರಾದ ಶಿವ ಶಂಭು ಭಟ್ ಅವರಿಂದಾಗಿ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಾಧ್ಯವಾಯಿತು.
ಅವರೊಂದಿಗೆ ಸ್ಥಳೀಯ ಭೂತ ಕಟ್ಟುವ ಕಲಾವಿದರಾದ ವಿಠಲ ನಾರಾವಿ ಅವರ ಮನೆಗೆ ಹೋದಾಗ ವಿಠಲ ಹಾಗೂ ಅವರ ಅತ್ತೆಯವರು ಸಾಕಷ್ಟು ಮಾಹಿತಿ ನೀಡಿದರು.ಉಂರ್ದರ ಪಂಜುರ್ಲಿ, ಹಲೇರ ಪಂಜುರ್ಲಿ, ಸೂಕತ್ತೆರಿ ,ಮರ್ಲು ಮೈಯೊಂದಿ ಮೊದಲಾದ ದೈವಗಳ ಮಾಹಿತಿ ನೀಡಿದರು.
ಮೂಡಬಿದಿರೆಯ ಸಮೀಪದ ಪಡು ಮಾರ್ನಾಡಿನಲ್ಲಿ ಉದಿಪನವಾದ ಭೂತ ಉಂರ್ದರ ಪಂಜುರ್ಲಿ. ಉಂರ್ದರ ಪಂಜುರ್ಲಿ ಪಂಜುರ್ಲಿ ಭೂತವಲ್ಲ.ಪಂಜುರ್ಲಿ ಯ ಸೇರಿಗೆಗೆ ಸಂದ ದೈವವಿದು.
ಪಡು ಮಾರ್ನಾಡಿನಲ್ಲಿ ಇಬ್ಬರು ಅಕ್ಕತಂಗಿಯರು ಇದ್ದರು.ಅವರಿಗೆ ಒಬ್ಬೊಬ್ಬ ಮಗಂದಿರು ಇದ್ದರು.ಅವರ ಹಿರಿಯರಿಂದ ಬಂದ ಆಸ್ತಿಯಲ್ಲಿ ಜಾಗದ ಭೂತವಾಗಿ ಪಂಜುರ್ಲಿ ದೈವ ಇತ್ತು. ಅವರ ಮಕ್ಕಳ ಕಾಲದಲ್ಲಿ ಆಸ್ತಿ ಎರಡು ಪಾಲಾಯಿತು.ಆಗ ಇಬ್ಬರು ಅಣ್ಣತಮ್ಮಂದಿರು ಉಂರ್ದರ ಬೆರ್ಮು ಮತ್ತು ನರಸಿಂಹ ಪಕಳೆ(?) ಪಂಜುರ್ಲಿ ದೈವ ತಮಗೆ ಬೇಕು ಎಂದು ಹಠ ಹಿಡಿದರು‌.ಊರವರು ಸೇರಿ ರಾಜಿ ಪಂಚಾಯತಿಗೆ ಮಾಡಿ ಇಬ್ಬರೂ ಒಟ್ಟಿಗೆ ಸೇರಿ ಆರಾಧನೆ ಮಾಡಿ ಎಂದು ತಿಳುವಳಿಕೆ ನೀಡಿದರು‌.ಆದರೆ ಈ ಅಣ್ಣ ತಮ್ಮಂದಿರು ಅದನ್ನು ಒಪ್ಪದೆ ಪಂಜುರ್ಲಿ ದೈವಕ್ಕೆ ಇನ್ನೊಬ್ಬನ ತಲೆ ಉರುಳಿದರೆ ದೈವಕ್ಕೆ ಕೊಡಿ ಏರಿಸಿ ಉತ್ಸವ ನೀಡಿ ಆರಾಧನೆ ಮಾಡುತ್ತೇನೆ ಎಂದು ಇಬ್ಬರು ಕೂಡ ಹರಿಕೆ ಹೇಳಿದರು.ಪರಿಣಾಮವಾಗಿ ದೈವ  ಇಬ್ಬರನ್ನೂ ಮಾಯ ಮಾಡಿ ಪಡುಮಾರ್ನಾಡಿನ ಬಾವಿಗೆ ಬೀಳುವಂತೆ ಮಾಡಿತು.ಹಾಗೆ ಮಾಯವಾದ ಅಣ್ಣ ತಮ್ಮಂದಿರು ಪಂಜುರ್ಲಿ ದೈವದ ಸೇರಿಗೆಗೆ ಸಂದು ಉಂರ್ದರ ಪಂಜುರ್ಲಿ ಎಂಬ ಹೆಸರಿನಲ್ಲಿ ಆರಾಧನೆ ಪಡೆಯುತ್ತಾರೆ.ಇವರು ಮಾಯವಾಗಿ ಬಂದು ಬಿದ್ದ ಬಾವಿ ಈಗಲೂ ಪಡುಮಾರ್ನಾಡಿನಲ್ಲಿ ಇದೆ
‌ ಉಂರ್ದರ ಪಂಜುರ್ಲಿ ದೈವಕ್ಕೆ ಪುಂಚಾಡಿ ಬರ್ಕೆಯಲ್ಲಿ ಆರಾಧನೆ ಇರುವ ಬಗ್ಗೆ ಸಂಕೇತ್ ಪೂಜಾರಿಯವರು ತಿಳಿಸಿದ್ದಾರೆ.( nammabillavaru.com) ಮಾಳ ಹುರ್ಕಟ್ಟೆ ಕೇರ ಕುಟುಂಬದಲ್ಲಿ ನಡೆದ ಉಂರ್ದರ ಪಂಜುರ್ಲಿ ಕೋಲದ ವೀಡಿಯೋ ಅನ್ನು ವಿಶ್ವನಾಥ ಸಾಲಿಯಾನ್ ಅವರು ಯು ಟ್ಯೂಬ್ ನಲ್ಲಿ ಹಾಕಿದ್ದಾರೆ

ಮಾಹಿತಿ ನೀಡಿದ ವಿಠಲ ನಾರಾವಿ ಮತ್ತು ಕ್ಷೇತ್ರ ಕಾರ್ಯದಲ್ಲಿ ತುಂಬು ಬೆಂಬಲ ನೀಡಿದ ಶಿವ ಶಂಭು ಭಟ್  ಅವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.
ಚಿತ್ರ ಕೃಪೆ - ಸಂಕೇತ್ ಪೂಜಾರಿ
ಚಿತ್ರ ಕೃಪೆ - ವಿಶ್ವನಾಥ ಸಾಲಿಯಾನ್