Sunday 18 February 2024

ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ

 




ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥ- ವೆಂಕಪ್ಪ ಬಂಗೇರ 


"ಕರಾವಳಿಯ ಸಾವಿರದೊಂದು ದೈವಗಳು"

ಡಾ. ಲಕ್ಷ್ಮೀ ಜಿ.ಪ್ರಸಾದ್ Lakshmi V  ಎಂಬ ಜನಪದ ವಿದುಷಿ ಬರೆದ ಒಂದು ಬೃಹದ್ ಗ್ರಂಥ. ಇದರಲ್ಲಿ ಸಾವಿರಾರು ದೈವಗಳ ಬಗ್ಗೆ ಅದ್ಭುತ ವಿವರಣೆಗಳು ಇವೆ.

ಮಾಯವಾಗುವುದು ಎಂದರೇನು? ಎಂಬುದಕ್ಕೆ ವೈಜ್ಞಾನಿಕ  (ಬ್ರಹ್ಮಾಂಡ ವಿಜ್ಞಾನ) ವಿವರಣೆ ನೀಡಿರುವುದು ಅದ್ಭುತವಾಗಿದೆ. ತುಳು ದೈವಗಳ ಬಗ್ಗೆ ನಂಬಿಕೆ, ಪ್ರೀತಿ, ಜಿಜ್ಞಾಸೆ ಉಳ್ಳವರಿಗೆ ಇದು ಬಹಳ ಪ್ರಯೋಜನ ಕಾರಿ ಗ್ರಂಥವಾಗಿದೆ. 

ಸಾವಿರಪುಟಗಳ ಸುಂದರ ಅದ್ಭುತ ವಿಮರ್ಶಾತ್ಮಕ ಗ್ರಂಥವಿದು. ದೈವ ಎಂಬುದು ಬರಿ ಕಾಲ್ಪನಿಕ ಕಥೆಗಳು ಅಲ್ಲ!! ಅದರ ಹಿಂದೆ ಸತ್ಯವಿದೆ, ವಿಸ್ಮಯವಿದೆ. ದೈವಗಳು ಸತ್ಯವೆಂದು ಅರಿವಾದರೆ ಪರಮಾತ್ಮನು ಕೂಡ ಸತ್ಯವೆಂದು ತಿಳಿಯುತ್ತದೆ. ಇಂದಿನ ಯುಗದಲ್ಲಿ ಆಸ್ತಿಕತೆಯನ್ನು ಹರಡುವುದು ಧರ್ಮಕಾರ್ಯವಾಗಿದೆ. ತಮ್ಮ ತನುಮನಧನಗಳ ತ್ಯಾಗ ಮಾಡಿ ಲೇಖಕಿಯವರು ಈ ಗ್ರಂಥವನ್ನು ರಚಿಸಿದ್ದಾರೆ. ಇದು ದೈವ ದೇವರ ಅನುಗ್ರಹದಿಂದ ಮೂಡಿಬಂದಿದೆ ಎಂದು ಇದನ್ನು ಓದುವಾಗ ತಿಳಿಯುತ್ತದೆ.

@ಅನುಸರಿಸುವರು Highlight ಮಾತೃಶ್ರೀ ಪ್ರಕಾಶನ ಪ್ರಕಾಶನ ಕರಾವಳಿಯ ಸಾವಿರದೊಂದು ದೈವಗಳು - ಡಾ.ಲಕ್ಷ್ಮೀ ಜಿ ಪ್ರಸಾ


ದ್

Saturday 17 February 2024

ಭೂತಾರಾಧನೆ ದೈವಾರಾಧನೆಗೆ ಅಪಚಾರ ಆಗುತ್ತಿದೆಯೇ? ಡಾ.ಲಕ್ಷ್ಮೀ ಜಿ ಪ್ರಸಾದ


 ಭೂತಾರಾಧನೆ/ ದೈವಾರಾಧನೆಗೆ  ಅಪಚಾರ ಆಗುತ್ತಿದೆಯೇ?

ಡಾ.ಲಕ್ಷ್ಮೀ ಜಿ ಪ್ರಸಾದ 

ಮೊದಲಿಗೆ ದೈವವನ್ನು ಕಾಡಿನ ಮರದ ಕೆಳಗೆ ಕಲ್ಲು ಹಾಕಿ ನಂಬುತ್ತಿದ್ದರು.ವರ್ಷಕ್ಕೊಮ್ಮೆ ಅಲ್ಲಿಗೆ ಹೋಗಿ ಕೋಲ ಕಟ್ಟಿ ಆರಾಧನೆ ಮಾಡುತ್ತಿದ್ದರು

ದೈವಗಳಿಗೆ ಮೂರ್ತ ರೂಪ/ ಮೂರ್ತಿಗಳು ಇರಲಿಲ್ಲ

ಈಗ ಊರು ನಡುವೆ ಮನೆ ಮುಂದೆ ಕೂಡ ದೈವಸ್ಥಾನಗಳ ನಿರ್ಮಾಣ ಆಗಿದೆ, ಮೂರ್ತಿಗಳ ಪ್ರತಿಷ್ಠಾಪನೆ ಕೂಡ ಆಗಿದೆ 


ಮೊದಲು ರಾತ್ರಿ ಮಾತ್ರ ಕೋಲ ಆಗುತ್ತಿತ್ತು,ಈಗ ನಡು ಮಧ್ಯಾಹ್ನ ಕೂಡ ಆಗುತ್ತಿದೆ


ಮೊದಲು ಅಡಿಕೆ ಹಾಳೆಯ ಮೊಗವನ್ನು ಸ್ಥಳದಲ್ಲಿಯೇ ತಯಾರು ಮಾಡಿ ಬಳಸುತ್ತಿದ್ದರು.ಕೇಪುಳ ಹೂ, ಪಾದೆ ಹೂವಿನಂತಹ ಕಾಡಿನಲ್ಲಿ ಸಿಗುವ ಹೂಗಳನ್ನು ಬಳಸುತ್ತಿದ್ದರು.ಆರತಿ ಮಾಡುವ ಪದ್ಧತಿ ಇರಲಿಲ್ಲ ಧೂಪ ಕರ್ಪೂರ ದ ಬಳಕೆ ಇರಲಿಲ್ಲ.ತೆಂಬರೆ ಹೊರತಾಗಿ ಬೇರೆ ವಾದ್ಯಗಳ ಬಳಕೆ ಇರಲಿಲ್ಲ .

ಸಂಪೂರ್ಣವಾಗಿ ತೆಂಗಿನ ತಿರಿಯ ಅಲಂಕಾರ ಇರುತ್ತಿತ್ತು.

ಆಯಾಯ ದೈವಗಳಿಗೆ ಅವರದ್ದೇ ಆದ ಮುಖವರ್ಣಿಕೆ ಇತ್ತು

ಯಕ್ಷಗಾನದ ನಾಟಕದ ದೇವ ದೇವತೆಗಳಂತೆ ವೇಷ ಭೂಷಣಗಳನ್ನು ಧರಿಸುತ್ತಿರಲಿಲ್ಲ.


ಈಗ ಕೆಲವು ದೈವಗಳ ಫೋಟೋ ನೋಡುವಾಗ ದೈವವಾ? ಯಕ್ಷಗಾನ/ ನಾಟಕದ ದೇವತೆಗಳು ಪಾತ್ರಗಳಾ ಎಂದು ತಿಳಿಯದಾಗಿದೆ . ಮೊದಲು ದೈವಗಳನ್ನು ಶಿವನ ಅಥವಾ ವಿಷ್ಣು ವಿನ ಅವತಾರ ಎಂದೋ ಅಂಶ ಎಂದೋ ಹೇಳುತ್ತಿರಲಿಲ್ಲ..ಈಗ ಎಲ್ಲ ದೈವಗಳೂ ಪುರಾಣ ದೇವತೆಗಳಾಗಿವೆ.ಉದಾ ತನ್ನಿ ಮಾನಿಗ ಆದಿ ಮಾಯೆಯಾಗಿ ಕೊರತಿ ಪಾರ್ವತಿ ದೇವಿಯಾಗಿ, ಉಳ್ಳಾಲ್ತಿ ದುರ್ಗೆಯ ಆಗಿ,ಪಿಲಿ ಭೂತ ವ್ಯಾಘ್ರ ಚಾಮುಂಡಿ ಯಾಗಿ, ಚಾಮುಂಡೇಶ್ವರಿ ಆಗಿ ಬೆರ್ಮೆರ್ ಬ್ರಹ್ಮ ಲಿಂಗೇಶ್ವರ ಆಗಿ ಸಮೀಕರಣಗೊಂಡಿದ್ದಾರೆ

ಇಲ್ಲಿ ಅವತಾರದ ಪರಿಕಲ್ಪನೆಯೇ ಇರಲಿಲ್ಲ..ಈಗ ಎಲ್ಲ ದೈವಗಳೂ ಅವತಾರ ಎತ್ತಿದ ಪುರಾಣ ದೇವತೆಗಳೇ ಆಗಿದ್ದಾರೆ. 

ಕಾಡಿನ ಮರದ ಅಡಿಯಲ್ಲಿ ಕಲ್ಲು ಹಾಕಿ ಆರಾಧಿಸಲ್ಪಡುತ್ತಿದ್ದ ದೈವಗಳಿಗೆ ಭವ್ಯವಾದ ಮಂದಿರಗಳು ನಿರ್ಮಾಣ ಆಗಿ  ಬ್ರಹ್ಮ ಕಲಶ ವೇದೋಕ್ತ ಹೋಮ ಹವನಗಳು ಸತ್ಯನಾರಾಯಣ ಪೂಜೆಗಳು ಆಗುತ್ತಿವೆ 


ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ ? 

ಈಗ ಅನೇಕ ಕಡೆ ದೈವಗಳು ಯಕ್ಷಗಾನ ಬಯಲಾಟದ ವೇಷಗಳಂತೆ ಕಾಣಿಸುತ್ತವೆ.ಪಾಡ್ದನಗಳನ್ನು ಹಾಡಲು ತಿಳಿದವರು ಸಂಖ್ಯೆ ತೀರಾ ಕಡಿಮೆ ಆಗಿದ್ದು ಬೆರಳೆಣಿಕೆಯಷ್ಟು ಮಂದಿ ಮಾತ್ರ ತಿಳಿದಿದ್ದಾರೆ

ಮೊದಲು ಪಾಡ್ದನ ಹಾಡುತ್ತಾ ಕುಣಿಯುತ್ತಿದ್ದರು ಸಿನಿಮಾ ಅಥವಾ ಇತರೆ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕುತ್ತಿರಲಿಲ್ಲ

ಈಗ ವಾದ್ಯಗಳಿಲ್ಲದೆ ಕೋಲವೇ ನಡೆಯುವುದಿಲ್ಲ.

ಸಾವಿರದೊಂದು ದೈವಗಳ ಕೋಲದಲ್ಲಿ ಪಾಡ್ದನ ಬಿಡಿ ಹತ್ತು ದೈವಗಳ ಹೆಸರನ್ನು ಕೂಡ ಹೇಳದೆಯೇ ಅರ್ಧ ಗಂಟೆಯಲ್ಲಿ ಮುಗಿಸುತ್ತಾರೆ.ಹತ್ತುದೈವಗಳ ಹೆಸರು ಕೂಡ ದೈವ ಕಟ್ಟುವವರಿಗಾಗಲೀ,ಮನೆಯವರಿಗೆ ಆಗಲೀ ಗೊತ್ತಿರುವುದಿಲ್ಲ 


ಇವೆಲ್ಲವೂ ಬದಲಾವಣೆಯಾ ಅಥವಾ ಅಪಚಾರವಾ? ತಿಳಿದವರು ಹೇಳಬೇಕು


ಇನ್ನು ದೈವಗಳು ಯಾರೊಬ್ಬರ ಸೊತ್ತಲ್ಲ.ದೈವಗಳ ಕಥೆಯನ್ನು ದೈವಗಳ ಪಾತ್ರವನ್ನು ಸಿನಿಮಾ,ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ತೋರಿಸಬಾರದು ಎನ್ನುವುದು ಸರಿಯಲ್ಲ.. ದೈವಗಳನ್ನು ಕೆಟ್ಟದಾಗಿ ತೋರಿಸಿ ಅವಹೇಳನ ಮಾಡಬಾರದು ಎಂದರೆ ಒಪ್ಪಿಕೊಳ್ಳಲೇ ಬೇಕಾದ ಮಾತು


ಮೊದಲು ಭಾಷಿಕವಾಗಿ ಮತ್ತು ಭೌಗೋಳಿಕವಾಗಿ ತುಳುನಾಡು ದ್ವೀಪ ಸದೃಶವಾಗಿತ್ತು.ಹಾಗಾಗಿ ಇಲ್ಲಿನ ದೈವದ ಆರಾಧನೆ ಹೊರಜಗತ್ತಿಗೆ ಹೆಚ್ಚು ತೆಗೆದುಕೊಂಡಿರಲಿಲ್ಲ

ಈಗ ಪರಿಚಯ ಆಗಿದೆ

ಹಾಗಾಗಿ ದೈವಗಳು ಪಾತ್ರವಾಗಿ ಇರುವ ಸಿನಿಮಾ, ಧಾರಾವಾಹಿಗಳು ಆರಂಭವಾಗಿವೆ

ಕಾಂತಾರ ಸಿನಿಮಾಕ್ಕೆ ಮೊದಲೇ ಅನೇಕ ಸಿನಿಮಾಗಳಲ್ಲಿ,ನಾಟಕ ಯಕ್ಷಗಾನ ಬಯಲಾಟಗಳಲ್ಲಿ ದೈವಗಳು ಪಾತ್ರಗಳು ಬಂದಿವೆ

ನಾನು ಪದವಿ ಓದುತ್ತಿದ್ದ ಕಾಲದಲ್ಲಿ ಎಂದರೆ ಮೂವತ್ತು ವರ್ಷಗಳ ಹಿಂದೆಯೇ ಛದ್ಮವೇಷ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ಕಾಲೇಜಿನಲ್ಲಿ ಭೂತಕೋಲವನ್ನು ಮಾಡಿದ್ದರು.ಆಗ ಈಗಿನಂತೆ ಮೊಬೈಲ್,face book , WhatsApp ಗಳು ಇರಲಿಲ್ಲ

ವಿರೋಧವೂ ಬಂದಿರಲಿಲ್ಲ


ದೈವಗಳನ್ನು ಅವಹೇಳನಕಾರಿಯಾಗಿ ದೈವದ ಪಾವಿತ್ರ್ಯಕ್ಕೆ ಧಕ್ಕೆಯಾಗದಂತೆ ಸಿನಿಮಾ ಧಾರಾವಾಹಿ, ನಾಟಕ, ಯಕ್ಷಗಾನ ಬಯಲಾಟಗಳಲ್ಲಿ ದೈವಗಳ ಪಾತ್ರವನ್ನು ತಂದರೆ ಅದು ದೈವಾರಾಧನೆಗೆ ಹೇಗೆ ಅಪಚಾರ ಆಗುತ್ತದೆ? ಎಂದು ನನಗಂತೂ ಗೊತ್ತಾಗುತ್ತಿಲ್ಲ

ಇನ್ನು ಕಾಂತಾರ ಸಿನಿಮಾಕ್ಕೆ ಸಂಬಂಧಿಸಿದಂತೆ ಶಿವನ ತಾಯಿ ಕೆಟ್ಟ ಪದಗಳನ್ನು ಬಳಸಿ ಬೈದಿದ್ದಾರೆ,ಹಿಡಿಸೂಡಿಯಲ್ಲಿ ಹೊಡೆದಿದ್ದಾರೆ.ದೈವ ಕಟ್ಟುವವರಿಗೆ ಹೀಗೆ ಮಾಡುವಂತಿಲ್ಲ‌ಇದು ಅಪಚಾರ ಎಂದು ದಯಾನಂದ ಕತ್ತಲಸಾರ್ ಹೇಳಿದ್ದು ನೋಡಿದೆ

ಕಾಂತಾರ ಸಿನಿಮಾದಲ್ಲಿ ಶಿವನ ಪಾತ್ರ ಮಾಡಿದ ರಿಷಭ್ ಶೆಟ್ಟಿಯವರು ದೈವವನ್ನು ಕಟ್ಟಿಲ್ಲ.ದೈವದ ಅಭಿನಯ ಮಾತ್ರ ಮಾಡಿದ್ದು.ಸಿನೇಮದ ಕಥೆಯಲ್ಲಿ ಕೂಡ ಶಿವ  ಬೇಜವಾಬ್ದಾರಿಯಿಂದ ಉಂಡಾಡಿ ಗುಂಡನಂತೆ ಇದ್ದಾಗ ತಾಯಿಯಿಂದ ಬೈಗುಳ ಪೆಟ್ಟು ತಿಂದಿರ್ತಾನೆ ,ಭೂತಕಟ್ಟಲು ದೀಕ್ಷೆ ಪಡೆದು ನಂತರವಲ್ಲ.ಹಾಗಾಗಿ ಇದು ಅರ್ಥ ರಹಿತ ಆರೋಪ.

ಕಾಂತಾರ ಸಿನಿಮಾದಲ್ಲಿ ಎಲ್ಲೂ  ದೈವಾರಾಧನೆಗೆ ಅಪಚಾರವಾಗಿಲ್ಲ.ಹಾಗಿರುವಾಗ ಕಾಂತಾರ ಫ್ರೀಕ್ವೆಲ್ ನಲ್ಲಿ ದೈವಾರಾಧನೆಯನ್ನು ತೋರಿಸಬಾರದು ಎನ್ನುವುದು ಸರಿಯಲ್ಲ..

ಭೂತಕೋಲದಲ್ಲಿ ಕೂಡ ಆಯಾಯ ದೈವಗಳ ಅಭಿನಯ ಇದೆ.ಇದೊಂದು ಧಾರ್ಮಿಕ ರಂಗಭೂಮಿ ಕೂಡ

ಇದನ್ನು  ಇತರ ಮಾಧ್ಯಮಗಳಲ್ಲಿ ಬಳಸಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ..ದೈವಗಳ ಪಾವಿತ್ರ್ಯಕ್ಕೆ, ಘನತೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಬಹುದು.ಒಂದೊಮ್ಮೆ ದೈವಗಳು ಅವಹೇಳನ ಇದ್ದರೆ ವಿರೋಧಿಸಬಹು ಅಷ್ಟೇ..ಅದು ಬಿಟ್ಟು ಮಾಡಬಾರದು ಎಂದು ತಾಕೀತು ಮಾಡುವ ಹಕ್ಕು ಯಾರಿಗೂ ಇಲ್ಲ.. ಅದನ್ನು ಕೇಳುವವರೂ ಇರಲಾರರು

ಇನ್ನು ವಿತ್ತಂಡ ವಾದ ಮಾಡುವುದಾದರೆ ದೈವ ಕಟ್ಟುವವರು ಇತರ ಕೆಲಸ ಮಾಡುವುದು ಸರಿಯಲ್ಲ.. ಅಲ್ಲಿ ಮೇಲಧಿಕಾರಿಗಳು ಬೈಯುದಿಲ್ಲವೇ? ಎನ್ನಬಹುದು ಅದೇ ರೀತಿಯಲ್ಲಿ ಮೈಕ್ ಹಿಡಿದು ಭಾಷಣ ಮಾಡುವುದೂ ಸರಿಯಲ್ಲ.ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಸರಿಯಲ್ಲ.ಎಂಎಲ್ಎ ಟಿಕೆಟ್ ಗಾಗಿ ಯಾರ್ಯಾರದೋ ಕೈಕಾಲು ಹಿಡಿಯುವುದು ಕೂಡ ಸರಿಯಲ್ಲ  ಉಗ್ರರಂತೆ ತುಳು ರಾಜ್ಯಕ್ಕಾಗಿ ಅಲ್ಲಲ್ಲಿ ಬಾಂಬ್ ಹಾಕಬೇಕು ಬೆಂಕಿ ಹಾಕಬೇಕು ಎಂದವರು ದೈವ ಕಟ್ಟುವುದೂ ಕೂಡ ಸರಿಯಲ್ಲ  ಎಂದು ವಿತ್ತಂಡ ವಾದ ಮಾಡಬಹುದು


ಈ ಹಿಂದೆ 2016 ರಲ್ಲಿ  ಹಿರಿಯರಾದ ಎಚ್ ಡಿ ಎಲ್ ರಾಯರು ದೈವಗಳ ಅಣಿ ಅರದಳ ವೇಷ ಭೂಷಣಗಳ ಸಾಕ್ಷ್ಯ ಚಿತ್ರ ಮಾಡಿ ಕಾರ್ಯಾಗಾರ ಮಾಡಿ ಪುಸ್ತಕ ಪ್ರಕಟಿಸಲು ಹೊರಟಾಗ ಕೂಡ ತೀವ್ರ ವಿರೋಧ ಬಂದಿತ್ತು.ಅವರದನ್ನೆಲ್ಲ ಲೆಕ್ಕಿಸದೆ ಕಾರ್ಯಾಗಾರ ಮಾಡಿ ಭೂತಾರಾಧನೆಯ ಅಣಿ ವೈವಿಧ್ಯಗಳ ,ವೇಷ ಭೂಷಣ ಗಳು ವಿವಿಧ ರೀತಿಯ ಮುಖ ವರ್ಣಿಕೆಗಳನ್ನು ಹಾಕಿಸಿ ಫೋಟೋ ತೆಗೆದು ದಾಖಲಿಸಿ ಪ್ರಕಟಿಸಿದೆ ಗ್ರಂಥ ಅಣಿ ಅರದಳ ಸಿರಿ ಸಿಂಗಾರ ಈಗ ಭೂತಾರಾಧನೆಯ ಪರಿಕರಗಳು ಕುರಿತಾಗಿ ಸಚಿತ್ರ ಮಾಹಿತಿ ಇರುವ ರೆಫರೆನ್ಸ್ ಗ್ರಂಥವಾಗಿದೆ


ಇದು ಹೀಗೆಯೇ ಮುಂದುವರೆದರೆ ದೈವಗಳ ಕೋಲದ ವೀಡಿಯೊ ಮಾಡಬಾರದು, ಫೋಟೋ ತೆಗೆಯಬಾರದು, ಭೂತ ಕಟ್ಟುವವರ ಹೊರತಾಗಿ ಇತರರು ಅಧ್ಯಯನ ಮಾಡಬಾರದು,ಪುಸ್ತಕ ಬರೆಯಬಾರದು, ಉಪನ್ಯಾಸ ನೀಡಬಾರದು, ಕೊನೆಗೆ ಹೊರಗಿನವರು ನೋಡಲೂ ಬಾರದು ಎಂದು ಹೇಳಿಯಾರು..


ಡಾ.ಲಕ್ಷ್ಮೀ ಜಿ ಪ್ರಸಾದ

Tuesday 13 February 2024

ಆತ್ಮ ಕಥೆಯ ಬಿಡಿ ಭಾಗಗಳು: ಆಲದ ಮರಗಳು ಇತರ ಗಿಡಗಳನ್ನು ತೊಳೆಯಲು ಬಿಡುವುದಿಲ್ಲ

 ರೇಡಿಯೋ ದಿನಾಚರಣೆಯ ಶುಭಾಶಯಗಳು.


ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.


ನನ್ನ ಬರವಣಿಗೆಯ ಆರಂಭಿಕ ದಿನಗಳಲ್ಲಿ ನನ್ನ ಬರವಣಿಗೆಯ ಅಭಿವ್ಯಕ್ತಿಗೆ ರೇಡಿಯೋ ಸಹಾಯ ಮಾಡಿದೆ‌..

 ಮಂಗಳೂರು ಆಕಾಶವಾಣಿಯಲ್ಲಿ ನನ್ನ ಮೂರು ನಾಲ್ಕು ಭಾಷಣಗಳು,ಐದಾರು ಕಥೆಗಳು ಪ್ರಸಾರವಾಗಿವೆ‌.

ಸಾರಂಗ್ ರೇಡಿಯೋ ಮೂಲಕ ನನಗೆ ತುಂಬಾ ಹತ್ತಿರವಾದವರು ವಿಕೆ ಕಡಬ .

ನನ್ನ ಬಗ್ಗೆ ಸಂದರ್ಶನ ಮಾಡಿ ನನಗೊಂದು ಅಸ್ತಿತ್ವವನ್ನು ಕಟ್ಟಿಕೊಟ್ಟವರು ವಿಕೆ ಕಡಬ

ಇನ್ನೊಂದು ಗಮ್ಮತ್ತಿದ ವಿಚಾರ ಹೇಳ್ತೇನೆ 

ಬಹುಶಃ 1997 ಜನವರಿ ಪೆಬ್ರವರಿ ಇರಬಹುದು.

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾತ್ಕಾಲಿಕವಾಗಿ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ ‌.ಸಮಯ ಸಿಕ್ಕಾಗೆಲ್ಲ‌ ಅಲ್ಲಲ್ಲಿ  ಉಚಿತ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ನಡೆಸುತ್ತಿದ್ದೆ‌.

ಒಂದಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಶಿಕಾರಿ ಪುರ ಕೃಷ್ಣ ಮೂರ್ತಿಯವರು ನಾನು ನಡೆಸುವ ಸಂಭಾಷಣಾ ಶಿಬಿರದ ಪಾಠಗಳ ಪಠ್ಯವನ್ನು ವಿಭಜಿಸಿ ಅರ್ಧ ಗಂಟೆಯ 52 ವಿಭಾಗಗಳನ್ನಾಗಿ ಮಾಡಿಕೊಡಲು ಹೇಳಿದರು‌.ಆಕಾಶವಾಣಿಗೆ ಬೇಕು ಎಂದರು ‌.ಸರಿ ಎಂದು ಎರಡು ಮೂರು ದಿನ ಕುಳಿತು 52 ಕಂತು ಅರ್ಧ ಗಂಟೆಗಾಗುವಷ್ಟು ಸಂಭಾಷಣೆ ಬರೆದು ಕೊಟ್ಟೆ.

ಇದಾಗಿ ಒಂದು ಮೂರು ನಾಲ್ಕು ತಿಂಗಳ ನಂತರ ಆಕಾಶವಾಣಿಯಲ್ಲಿ ಒಂದು ದಿನದ  ಸಂಸ್ಕೃತ ಪಾಠ ಮಾಡುವಂತೆ ಆಹ್ವಾನಿಸಿ ನನಗೆ ಪತ್ರ ಬಂದು ಪಾಠ .ಯಾವ ಅಂಶವನ್ನು ಹೊಂದಿರಬೇಕು ಎಂದು ಕೂಡ ತಿಳಿಸಿದ್ದರು.

ನಾನು ಇಬ್ಬರು ವಿದ್ಯಾರ್ಥಿಗಳಿಗೆ ಪಾಠ ಹೇಳಿ ಕೊಡುವ ಮಾದರಿಯಲ್ಲಿ ಬರೆದು ಅಭ್ಯಾಸ ಮಾಡಿಸಿ ರೆಕಾರ್ಡಿಂಗ್ ಗೆ ಹೋದೆ.

ಅಲ್ಲಿ ಶರಭೇಂದ್ರ ಸ್ವಾಮಿಯವರಲ್ಲಿ ಮಾತಿನ ನಡುವೆ ರೇಡಿಯೋ ಸಂಸ್ಕೃತ ಪಾಠದ ಪಠ್ಯವನ್ನು ನಾನು ತಯಾರಿಸಿ ಕೊಟ್ಟ ಬಗ್ಗೆ ಹೇಳಿದೆ.ಆಗ ನೋಡಬೇಕಿತ್ತು ಅವರ ಮುಖದಲ್ಲಿ ನನ್ನ ಬಗೆಗಿನ ಅಪನಂಬಿಕೆ..ನನ್ನನ್ನು ವಿಚಿತ್ರವಾಗಿ  ನೋಡುತ್ತಾ 

ಶಿಕಾರಿಪುರ ಕೃಷ್ಣ ಮೂರ್ತಿ,ಜಿ ಎನ್ ಭಟ್ ಮೊದಲಾದವರೆಲ್ಲ ಸೇರಿ ತಯಾರಿಸಿದ ಪಠ್ಯ ಇದು ಎಂದರು‌.

ಆಗ ಪಠ್ಯ ತಯಾರಿಸಿದ ನನ್ನ ಬಗ್ಗೆ ಒಂದಕ್ಷರವನ್ನು ಕೂಡ ಹೇಳದೆ ದೊಡ್ಡವರು ಅದರ ಕ್ರೆಡಿಟ್‌ ಅನ್ನು ತಾವೇ ಪಡೆದುಕೊಂಡಿದ್ದಾರೆ ಎಂದು ನನಗೆ ಅರ್ಥವಾಯಿತು.

ನಮ್ಮ ಬಗ್ಗೆ ಗೌರವ ಇಲ್ಲದ ಕಡೆ ತಿರುಗಿ ಕೂಡ ನೋಡದೆ ಇರುವ ಸ್ವಭಾವ ನನ್ನದು.ಹಾಗಾಗಿ ನಂತರ ಆಕಾಶವಾಣಿಗೆ ಬರೆಯುವುದನ್ನು ಬಿಟ್ಟು ಪತ್ರಿಕೆಗಳಿಗೆ ಬರೆಯಲಾರಂಭಿಸಿದೆ.ನಂತರ ಹಿಂತಿರುಗಿ ನೋಡಬೇಕಾದ ಸಂದರ್ಭ ಬರಲಿಲ್ಲ. ಇದಾಗಿ‌ ಸುಮಾರು ಇಪ್ಪತ್ತು ವರ್ಷಗಳ ನಂತರ ಡಾ.ಸದಾನಂದ ಪೆರ್ಲ ಅವರು ಕುವೆಂಪು ಸಾಹಿತ್ಯದಲ್ಲಿ ಪ್ರಕೃತಿ ವರ್ಣನೆ ಬಗ್ಗೆ ಆಕಾಶವಾಣಿಯಲ್ಲಿ ಮಾತನಾಡಲು ಕರೆದರು.ಆಗ ಹೋಗಿದ್ದೆ.ಅದಾದ ನಂತರ ಆ ಕಡೆ ಹೋಗಿಲ್ಲ.

ಆಲದ ಮರಗಳು ಇತರ ಮರಗಿಡಗಳನ್ನು ಬೆಳೆಯಲು ಬಿಡುವುದಿಲ್ಲ.

ಅಂದಿನಿಂದ ಇಂದಿನವರೆಗೂ ಅದೇ ಕಥೆ..

ನನ್ನ ಬ್ಲಾಗ್ ಬರಹಗಳನ್ನು ಓದಿ ಅನೇಕ ದೊಡ್ಡ ವಿದ್ವಾಂಸರು ಭಾಷಣ ಮಾಡುತ್ತಾರೆ. ಅದರೆ ಅಪ್ಪಿತಪ್ಪಿಯೂ ಆ ಬಗ್ಗೆ ಮೊದಲ ಬಾರಿಗೆ ಅಧ್ಯಯನ ಮಾಡಿ ಬರೆದ ನನ್ನ ಹೆಸರನ್ನು ಹೇಳುವುದಿಲ್ಲ ‌.ತಾವೇ ಅಧ್ಯಯನ ಮಾಡಿದವರಂತೆ ಮಾತನಾಡುತ್ತಾರೆ.

ಅಂದಿನಿಂದ ಇಂದಿನವರೆಗೂ ಅದೇ ಕಥೆ

ಉದಾಹರಣೆಗೆ ಇತ್ತೀಚೆಗೆ ಋತುಮಾನದಲ್ಲಿ ಡಾ.ಚಿನ್ನಪ್ಪ ಗೌಡರ ಸಂದರ್ಶನ  ನೋಡಿದೆ ‌ಅದರಲ್ಲಿ ಅವರು ತುಳುನಾಡಿನಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಭೂತಗಳಿಗೆ ಆರಾಧನೆ ಇದೆ ‌.ಒಂದು ಸಾವಿರಕ್ಕಿಂತ ಹೆಚ್ಚು ದೈವಗಳ ಪಟ್ಟಿ ಮಾಡಲಾಗಿದೆ ಎಂದಿದ್ದಾರೆ. ನಾನು ಪಟ್ಟಿ ಮಾಡುವ ತನಕ ಇವರೆಲ್ಲರೂ ತುಳುನಾಡಿನಲ್ಲಿ ನಾನ್ನೂರಷ್ಟು  ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಿದ್ದರು‌.ನಾನೇ ಕೇಳಿರುವೆ‌.ಹಲವಾರು ವರ್ಷಗಳ ಕಾಲ ಕಷ್ಟ ಪಟ್ಟು ನಾನು ಸಾವಿರಕ್ಕಿಂತ ಹೆಚ್ಚಿನ ದೈವಗಳ ಹೆಸರನ್ನು ಸಂಗ್ರಹ  ಪಟ್ಟಿಯನ್ನು ಮಾಡಿ ಅಣಿ ಅರದಳ ಸಿರಿ ಸಿಂಗಾರ ದಲ್ಲಿ  ಹಾಗು ಬ್ಲಾಗ್ ನಲ್ಲಿ ಹಾಕಿದ ನಂತರ ಇವರುಗಳು ಈಗ ಒಂದು ಸಾವಿರಕ್ಕಿಂತ ಹೆಚ್ಚು ದೈವಗಳಿಗೆ ಆರಾಧನೆ ಇದೆ ಎಂದು ಭಾಷಣ ಮಾಡುತ್ತಾರೆ ‌.ಆದರೆ ಆ ಪಟ್ಟಿಯನ್ನು ಮಾಡಿದವರ ಹೆಸರು ಹೇಳಲು ಹೋಗುವುದಿಲ್ಲ‌..ತಾವೇ ಮಾಡಿದವರಂತೆ ಪಟ್ಟಿ ಮಾಡಲಾಗಿದೆ ಎನ್ನುತ್ತಾರೆ...

Saturday 10 February 2024

ಕರಾವಳಿಯ ಸಾವಿರದೊಂದು ದೈವಗಳು - ರಘುಪತಿ ತ್ಹಾಮಣ್ಕರ




""ಡಾ. ಶ್ರೀಮತಿ ಲಕ್ಷ್ಮೀ ಪ್ರಸಾದ್ ರವರೆ.. 

ನೀವು ಬರೆದ ಕರಾವಳಿಯ ಸಾವಿರ ದೊಂದು ದೈವಗಳು ಎಂಬ ಬೃಹತ್  ಗ್ರಂಥ ತಲುಪಿದೆ.


.ನಮ್ಮ ಕರಾವಳಿಯ ಐತಿಹಾಸಿಕ ,ಸಾಂಸ್ಕೃತಿಕ ವಿಶ್ಲೇ ಷಣಾ ತ್ಮಕ  ನೋಟವುಳ್ಳ ದೈವಗಳ ಬಗ್ಗೆ  ಇನ್ನೂ  ಚಾಲ್ತಿ ಯಲ್ಲಿ ಇರುವ ಪ್ರಾಚೀನ ಸಂಸ್ಕೃತಿಯ ಅನಾವರಣ ಇಲ್ಲಿ ಇದೆ..ನಿಮ್ಮ ಸಂಶೋಧನಾ ಗ್ರಂಥಗಳ ಪಟ್ಟಿಯೇ ಈಗಲೇ 21 ದಾಟಿದ್ದು ಇನ್ನೂ ಐದು ಗ್ರಂಥಗಳ ರಚನೆಯಲ್ಲಿ 

ತೊಡಗಿದ್ದೀರೆಂದು ತಿಳಿಯಿತು . ಇವುಗಳೆಲ್ಲವನ್ನೂ ಇಂಗ್ಲಿಷ್ ಸಹಿತ ದೇಶದ ಎಲ್ಲಾ ಭಾಷೆ ಗಳಲ್ಲಿ ತರ್ಜುಮೆ ಯಾಗಿ ದೇಶದ ಹಾಗೂ ಪರದೇಶದ ಜನರೂ ಓದುವಂತೆ   ಆಗಲಿ ಎಂದು ಹಾರೈಸುವೆ .ನೀವು ಬರೆದ ಪುಸ್ತಕವನ್ನು ಪ್ರೀತಿಯಿಂದ ಎತ್ತಿಕೊಂಡ ಫೋಟೋ ವನ್ನು ಕಳುಹಿಸಿದ್ದೇನೆ.. 

- ರಘುಪತಿ ತಾಮ್ಹನ್ ಕರ್ ಮೈಸೂರು


 ಸ್ವತಃ ಲೇಖಕರೂ ಉತ್ತಮ ಗಾಯಕರೂ ಆಗಿರುವ ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಮ್ಯಾನೇಜರರಾದ ರಘುಪತಿ ತಾಮ್ಹನ್ ಕರ್ ಅವರು ಸದಾ ನನ್ನ ಅಧ್ಯಯನ ಮತ್ತು ಬರವಣಿಗೆಗೆ ಪ್ರೋತ್ಸಾಹ ಕೊಡುವವರು.


ಅವರು ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕವನ್ನು ತಗೊಂಡು ಓದಿ ಶುಭ ಹಾರೈಸಿದ್ದಾರೆ 

 ಧನ್ಯವಾದಗಳು ಸರ್ Raghupathi Thamankar- ಡಾ.ಲಕ್ಷ್ಷೀ ಜಿ ಪ್ರಸಾದ