Thursday 7 November 2013

ತುಳು ನಾಡಿನ ಕಂಬಳ -ಪ್ರಾಚೀನತೆ ಮತ್ತು ಐತಿಹ್ಯಗಳು(C)ಡಾ.ಲಕ್ಷ್ಮೀ ಜಿ ಪ್ರಸಾದ



   

                                           ಚಿತ್ರ ಕೃಪೆ::ಜಯ ಪ್ರಕಾಶ್ ಪ್ರಭು ,ಶಿರ್ವ
                                                      ಚಿತ್ರ ಕೃಪೆ -ಶ್ರೀ ಮಧುಸೂದನ ಶೆಟ್ಟಿ

copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ ತುಳುನಾಡಿನ ಜನಪದ ಆಚರಣೆಗಳಲ್ಲಿ ಕಂಬಳ ವಿಶಿಷ್ಟವಾದುದು. ತುಳುನಾಡು ಅಂದ ತಕ್ಷಣ ಎಲ್ಲರಿಗೆ   ನೆನಪಾಗುವುದು ಕಂಬಳದ  ವಿಚಾರ. ಸಾಮಾನ್ಯವಾಗಿ ಕೆಸರುಗದ್ದೆಯಲ್ಲಿ ಕೋಣಗಳ ಓಟದ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ. ಆದರೆ ಇದು ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ. ಇದೊಂದು ಧಾರ್ಮಿಕ ಹಾಗೂ ಫಲವಂತಿಕೆಯ ಆಚರಣೆಯೂ ಆಗಿದೆ.ಇದರಲ್ಲಿ ನಾಗಾರಾಧನೆ ಮತ್ತು ಭೂತಾರಾಧನೆಗಳು ಸೇರಿಕೊಂಡಿವೆ.ಇದೊಂದು ವೈಭವದ ಆಚರಣೆ ಕೂಡ.ಕಂಬಳಕ್ಕೆ ಅದರದ್ದೇ ಆದ ಸಾಂಸ್ಕೃತಿಕ ,ಸಾಮಾಜಿಕ ,ಧಾರ್ಮಿಕ ಮಹತ್ವ ಇದೆ .ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಬಹುಮಾನ ಪಡೆಯುವುದು ಒಂದು ಪ್ರತಿಷ್ಠೆಯ ವಿಚಾರ ಕೂಡ  .ಕಂಬಳದ ಓಟದ ಕೋಣಗಳನ್ನು ಸಾಕುವುದು ಒಂದು ಘನತೆ ,ಅವುಗಳನ್ನು ಸಾಕಲು ಸಾಕಷ್ಟು ಆರ್ಥಿಕ ಬಲ ಕೂಡ ಬೇಕು .ನಾನು ಚಿಕ್ಕಂದಿನಲ್ಲೇ ಕಂಬಳವನ್ನು ನೋಡಿದ್ದೆ .ಅದೊಂದು ಬಹಳ ಆಕರ್ಷಕವಾದ ಕೋಣಗಳ ಓಟ .ಕೋಣಗಳನ್ನು ಚೆನ್ನಾಗಿ ಅಲಂಕರಿಸಿ  ಕೊಂಬು ವಾಲಗದೊಂದಿಗೆ ಮೆರವಣಿಗೆ ಮಾಡಿ ಕಂಬಳ ಗದ್ದೆಯ ಬಳಿ  ಕರೆ ತರುತ್ತಾರೆ .ಚೆನ್ನಾಗಿ ಎಳೆದ ಕೋಣಗಳ ಮೈ ಮಿರಮಿರನೆ ಮಿಂಚುತ್ತದೆ .ಅವುಗಳು ಕೂಡ ಅತ್ಯುತ್ಸಾಹದಿಂದ ಬದಿಯಲ್ಲಿರುವ ಮರವನ್ನು ಕೊಂಬಿನಿಂದ ತಿವಿಯುತ್ತವೆ .ನೆಲದ ಮಣ್ಣನ್ನು ಗೋರಿ ತಲೆ ಹಣೆಯ ಮೇಲೆ ಮೆತ್ತಿಕೊಳ್ಳುತ್ತವೆ ಇವುಗಳನ್ನು ಹಿಡಿತದಲ್ಲಿರಿಸುವುದು ಕೂಡ ಒಂದು ಕಲೆ .ಇವುಗಳ ಮೂಗಿಗೆ ಬಳ್ಳಿ ಸುರಿದು ಮೂಗು ದಾರ ಹಾಕುತ್ತಾರೆ .ಇಲ್ಲವಾದಲ್ಲಿ ಇವನ್ನು ಹಿಡಿತದಲ್ಲಿಟ್ಟು ಕೊಳ್ಳಲು ಸಾಧ್ಯವಿಲ್ಲ .ಕೋಣಗಳನ್ನು ಓಡಿಸುವಾತ ಕೂಡ ಕಿರುಗಚ್ಚೆ ಹಾಕಿ ತಲೆಗೆ ರುಮಾಲು ಸುತ್ತಿ ತಯಾರಾಗಿರುತ್ತಾರೆ ಕೋಣಗಳು ಓದಿಕೊಂಡು ಬರುವಾಗ ಜನರ ಬೊಬ್ಬೆ  ಕೇಕೆ ಆನಂದಗಳನ್ನು ನೋಡಿಯೇ ಸವಿಯಬೇಕು .ಕೆಲವೊಮ್ಮೆ ಓಡಿಸುವಾತನ ಹಿಡಿತಕ್ಕೆ ಸಿಕ್ಕದೆ ಯರ್ರಾಬಿರ್ರಿ ಓಡುವ ಕೋಣಗಳು ನೋಡಲು ಸೇರಿದ ಜನರ ಕಡೆ ಓಡಿ  ಬಂದು ಜನರನ್ನು ದಿಕ್ಕಾಪಾಲಾಗಿ ಓಡಿಸುವುದೂ ಕೂಡಾ ಉಂಟು!ಕೋಣಗಳು ಓಡುವಾಗ ನೀರು ಎತ್ತರಕ್ಕೆ ಚಿಮ್ಮುವುದನ್ನು ನೋಡುವುದು ಒಂದು ವಿಶಿಷ್ಟ ಅನುಭವನ್ನು ಕೊಡುತ್ತದೆ . ವಂಡಾರು ಕಂಬಳ ,ಪುತ್ತೂರು ದೇವರ ಕಂಬಳ ,ಕದ್ರಿ ಕಂಬಳ ,ಕೊಕ್ಕಡದ ಕಂಬಳ ಮೊದಲಾದ ಕಂಬಳಗಳ ಉಲ್ಲೇಖ ಅನೇಕ ತುಳು ಜಾನಪದ ಹಾಡುಗಳಲ್ಲಿ ದೊರೆಯುತ್ತದೆ ಅನೇಕ ಶಾಸನಗಳಲ್ಲೂ ಕಂಬಳದ ಉಲ್ಲೇಖಗಳಿವೆ  .ತುಳು ನಾಡಿನಲ್ಲಿ ಕಂಬಳದ ಆಚರಣೆ ಸುಮಾರು ೮೦೦-೯೦೦  ವರ್ಷಗಳ ಹಿಂದಿನಿಂದಲೇ ನಡೆದುಕೊಂಡು  ಬಂದಿದೆcopy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
.1. ಕಂಬಳದ ಪ್ರಾಚೀನತೆ
. ತುಳುನಾಡಿನ ಕಂಬಳ ಹಾಗೂ ಕಂಬಳ ಗದ್ದೆಗಳ ಬಗ್ಗೆ ಅನೇಕ ಶಾಸನಗಳಲ್ಲಿ ಉಲ್ಲೇಖಗಳು ಸಿಗುತ್ತವೆ. 
ಉಡುಪಿ ತಾಲೂಕಿನ ಕೆಂಜೂರಿನ ಸಮೀಪದ ಕರ್ಜೆ ಎಂಬಲ್ಲಿ ದೊರಕಿದ ಆಳುಪ ರಾಣಿ ಬಲ್ಲಮಹಾದೇವಿಗೆ ಸಂಬಂಧಿಸಿದ ಶಾಸನದಲ್ಲಿ ಕಂಬಳದ ಉಲ್ಲೇಖವಿದೆ. ಸುಗ್ಗಡಿಯ ಕಂಬಳಕ್ಕೆ ಎರಡು ಎತ್ತು ಕರೆತರಬಹುದುಎಂದು ಇದರಲ್ಲಿ ಉಲ್ಲೇಖವಿದೆ.1 ಇದರ ಕಾಲ ಕ್ರಿ.ಶ.1200 (ಶಕ ವರ್ಷ 1281). ಕಂಬಳ ಆಚರಣೆಯು ಸುಗ್ಗಿ ಬೆಳೆಯ ಬಿತ್ತನೆಯ ಸಮಯದಲ್ಲಿ ನಡೆಯುತ್ತದೆ. ಕುಂದಾಪುರ ಕನ್ನಡದಲ್ಲಿ ಸುಗ್ಗಿ ಅಗೇಡಿ ಎಂದರೆ ಸುಗ್ಗಿಯ ನೇಜಿ ಬಿತ್ತುವ ಜಾಗ. ಸುಗ್ಗಿ ಅಗೇಡಿ > ಸುಗ್ಗೇಡಿ > ಸುಗ್ಗಾಡಿ ಎಂದು ಪ್ರಯೋಗವಾಗಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಕ್ರಿ.ಶ.ಹನ್ನೆರಡನೆಯ ಶತಮಾನದಲ್ಲಿಯೇ ಸುಗ್ಗಿಯ ಕಾಲದಲ್ಲಿ ಕಂಬಳ ನಡೆಯುತ್ತಿದ್ದದನ್ನು ಶಾಸನದ ಹೇಳಿಕೆ ಸಮರ್ಥಿಸುತ್ತದೆ. ಇದರಿಂದ ಕಂಬಳ ಕನಿಷ್ಠ ಎಂಟುನೂರು ವರ್ಷಗಳಿಂದ ಆಚರಿಸಲ್ಪಡುತ್ತಾ ಬಂದಿದೆ ಎಂದು ಸ್ಪಷ್ಟವಾಗುತ್ತದೆ. ಕ್ರಿ.ಶ.1402ರ ಬಾರಕೂರು ಶಾಸನದಲ್ಲಿ ಆ ಗದ್ದೆಯ ಕೆಳಗಿನ ಕಂಬಳ ಬಗ್ಗೆಎಂದು ಉಲ್ಲೇಖವಿದೆ.2 ಕ್ರಿ.ಶ.1421ರ ಬಾರಕೂರು ಶಾಸನದಲ್ಲಿ ದೇವರು ಸಾವಂತನ ಕಂಬಳ ಗದ್ದೆಯ ಮೇಲೆಎಂದು ಕಂಬಳಗದ್ದೆಯನ್ನು ಉಲ್ಲೇಖಿಸಲಾಗಿದೆ.3 ಕ್ರಿ.ಶ.1424ರ ಬಾರಕೂರು ಶಾಸನದಲ್ಲಿ ಹೊತ್ತಾಗಿ ಮಾಡಿದ ಕಂಬಳ ಗದ್ದೆಎಂದಿದೆ.4 ಕ್ರಿ.ಶ.1437ರ ಉಡುಪಿ ಶಾಸನವು ಮೂಲವಾಗಿ ಕೊಡಬಾಳು ಕಂಬಳ ಗದ್ದೆ ಕೊಯಿಲ್ ಹದಿನಾರುಎಂದಿದೆ.5 ಕ್ರಿ.ಶ.1482ರ ಕೊಲ್ಲೂರು ಶಾಸನದಲ್ಲಿ ಅವರಿಗೆ ಒಬ್ಬ ಬಾಳು ಕಂಬಳ ಗದ್ದೆಎಂದು ಉಲ್ಲೇಖವಿದೆ.6 ಕ್ರಿ.ಶ.1521ರ ಬಾರಕೂರು ಶಾಸನದಲ್ಲಿ ಕಂಬಳ ಗದ್ದೆಯಲಿ ನಡುಹುಣಿಎಂದು ಉಲ್ಲೇಖಿಸಿದೆ.7 ಕ್ರಿ.ಶ.1676ರ ಸುಬ್ರಹ್ಮಣ್ಯದ ಕಲ್ಲುಮಾಣೆರು ಶಂಕರದೇವಿ ಬಲ್ಲಾಳ್ತಿಯ ಹೆಸರಿನಲ್ಲಿರುವ ಶಾಸನದಲ್ಲಿ ನನ್ನ ಕಂಬಲ ಗದ್ದೆಯಿಂದ ನಡೆಸಬಹುದುಎಂಬಲ್ಲಿ ಕಂಬಳಗದ್ದೆಯ ಉಲ್ಲೇಖವಿದೆ.87.2. ಕಂಬಳ ಪದದ ನಿಷ್ಪತ್ತಿ
ಕಂಪ ಎಂಬುದಕ್ಕೆ ಕೆಸರು ಎಂಬರ್ಥವಿದೆ. ಆದ್ದರಿಂದ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಪ+ಪೊಲ>ಕಂಬುಲ ಆಯಿತು ಎಂದು ಹೇಳುತ್ತಾರೆ.9 ಕಳ ಎಂಬುದಕ್ಕೆ ಸ್ಪರ್ಧೆಯ ವೇದಿಕೆ, ಕಣ ಎಂಬರ್ಥವಿರುವುದರಿಂದ ಕಂಪದ ಕಳ>ಕಂಬಳ ಆಗಿರಬಹುದು ಎಂದು ಅಮೃತ ಸೋಮೇಶ್ವರ ಹಾಗು ಬಿ.ಎ. ವಿವೇಕ ರೈ ಹೇಳಿದ್ದಾರೆ. ಕಂಬಳ ಗದ್ದೆಯಲ್ಲಿ ಕೊನೆಗೆ ಪೂಕರೆಎಂಬ ಕಂಬವನ್ನು ನೆಡುವುದರಿಂದ ಕಂಬದ ಕಳ>ಕಂಬಳ ಆಗಿರಬಹುದು ಎಂದು ಚಿತ್ತರಂಜನ ಶೆಟ್ಟಿಯವರು ಹೇಳಿದ್ದಾರೆ.
ಸಾಮಾನ್ಯವಾಗಿ ಗದ್ದೆಗಳ ಸಾಲಿನಲ್ಲಿ ಕೊನೆಯದಾದ, ಅತ್ಯಂತ ಕೆಳಗಿನ ಗದ್ದೆಗೆ ತುಳುವಿನಲ್ಲಿ ಕಂಬಳ ಎನ್ನುತ್ತಾರೆ. ಕೊನೆಯಲ್ಲಿರುವ ಗದ್ದೆಯಾದ ಕಾರಣ ಇದರಲ್ಲಿ ಸಾಮಾನ್ಯವಾಗಿ ಕೆಸರು ಜಾಸ್ತಿ. ಆದ್ದರಿಂದ ತುಳುವಿನಲ್ಲಿ ಕಂಪದ ಕಂಡ (ತುಳುವಿನಲ್ಲಿ ಗದ್ದೆಗೆ ಕಂಡ ಎನ್ನುತ್ತಾರೆ) ಕಂಬಳ ಆಗಿರಬಹುದು. ಭಾಷಾಶಾಸ್ತ್ರದ ದೃಷ್ಟಿಯಿಂದ ನೋಡಿದಾಗ ಳ>ಡಗಳು ಹಲವೆಡೆ ಪರಸ್ಪರ ಬದಲಾಗಿರುವುದು ಕಂಡುಬರುತ್ತದೆ. ಉದಾ: ಇಡಾ>ಇಳಾ, ಮಾಡ>ಮಾಳ ತುಳುಕನ್ನಡದಲ್ಲಿ, ಉದಾ: ಕುಂಬಳ>ಕುಂಬುಡ, ಕೆಂಪು ಕುಂಬಳ>ಕೆಂಬುಡೆ. ಅದೇ ರೀತಿ ಎರಡನೇ ಪದದ ಮೊದಲ ಅಕ್ಷರ ಲುಪ್ತವಾಗುವುದು ಕೂಡ ಸಾಮಾನ್ಯ. ಉದಾ: ಗೆಜ್ಜೆ+ಕತ್ತಿ>ಗೆಜ್ಜೆತ್ತಿ. ಆದ್ದರಿಂದ ಕಂಪಕಂಡ>ಕಂಬಡ>ಕಂಬಳ ಎಂಬ ನಿಷ್ಪತ್ತಿ ಹೆಚ್ಚು ಹೊಂದುತ್ತದೆ ಎನ್ನಬಹುದು.copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
.3. ಕಂಬಳದ ಮಹತ್ವ
ತುಳುನಾಡಿನಲ್ಲಿ ಕಂಬಳ ಎನ್ನುವುದು ಘನತೆಯ ವಿಚಾರವಾಗಿತ್ತು. ಅರಸರು ನಡೆಸಲೇ ಬೇಕಾದ ಆಚರಣೆಯಾಗಿತ್ತು. ಕಂಬಳಕ್ಕೆ ಸಂಬಂಧಿಸಿದಂತೆ ಅನೇಕ ಹೋರಾಟಗಳು ನಡೆದಿವೆ ಎಂದು ಐತಿಹ್ಯಗಳಿಂದ ತಿಳಿದುಬರುತ್ತದೆ.
ಸಾಮಾನ್ಯವಾಗಿ ಕಂಬಳಎಂದರೆ ಕೋಣಗಳ ಓಟದ ಸ್ಪರ್ಧೆಎಂದು ಜನರು ಭಾವಿಸುತ್ತಾರೆ. ಆದರೆ ಕಂಬಳ ಎಂದರೆ ಕೇವಲ ಕೋಣಗಳ ಓಟದ ಸ್ಪರ್ಧೆಯಲ್ಲ ಕೇವಲ ಕೋಣಗಳ ಓಟದ ಸ್ಪರ್ಧೆ ಮಾತ್ರ ಅದಾಗಿದ್ದರೆ ಕಂಬಳಕ್ಕೆ ಇಷ್ಟು ಮಹತ್ವ ಇರುತ್ತಿರಲಿಲ್ಲ. ಕಂಬಳಕ್ಕೆ ಸಂಬಂಧಿಸಿದಂತೆ ಹೋರಾಡುವ ಅಗತ್ಯವೂ ಇರುತ್ತಿರಲಿಲ್ಲ.
ಕಂಬಳ ಒಂದು ವಿಶಿಷ್ಟ ಜನಪದ ಆಚರಣೆ. ತುಳುನಾಡಿನಲ್ಲಿ ತುಂಬ ಮಹತ್ವವನ್ನು ಪಡೆದ ಆಚರಣೆಯಾಗಿದೆ. ಈ ಬಗ್ಗೆ ಡಾ. ಪುರುಷೋತ್ತಮ ಬಿಳಿಮಲೆಯವರು ಕಂಬಳ ಕೇವಲ ಓಟದ ಕೋಣಗಳ ಸ್ಪರ್ಧೆಯೂ ಅಲ್ಲ. ಜನಪದರ ಮನೋರಂಜನೆಯ ಸಾಮಾಗ್ರಿಯೂ ಅಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ, ರಾಜಕೀಯ ಆಯಾಮವುಳ್ಳ ಫಲವಂತಿಕೆಯ ಆಚರಣೆ ಎಂಬುದು ಖಚಿತವಾಗುತ್ತದೆಎಂದು ಹೇಳಿದ್ದಾರೆ.10
4. ಮೌಖಿಕ ಪರಂಪರೆ ಹಾಗೂ ಐತಿಹ್ಯಗಳುcopy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
ಅನೇಕ ತುಳು ಪಾಡ್ದನಗಳಲ್ಲಿ ಕೂಡ ಕಂಬಳದ ಉಲ್ಲೇಖಗಳಿವೆ. ಕಂಬಳಕ್ಕೆ ಸಂಬಂಧಿಸಿದಂತೆ ಈಜೋ ಮಂಜೊಟ್ಟಿಗೋಣವೆಂಬ ಪಾಡ್ದನ ತುಳುನಾಡಿನಲ್ಲಿ ಪ್ರಚಲಿತವಿದೆ. ಬಲಿಯೇಂದ್ರ ಪಾಡ್ದನದಲ್ಲಿಯೂ ಕಂಬಳದ ಉಲ್ಲೇಖವಿದೆ. ಧೂಮಾವತಿ ದೈವದ ಪಾಡ್ದನದಲ್ಲಿ ಗಿಡಾವು ಗೋಣ ಕಂಜಿಲುಎಂದು ಕಂಬಳದಲ್ಲಿ ಓಡಿಸುವ ಕೋಣಗಳ ಬಗ್ಗೆ ವಿವರಣೆ ಇದೆ. ಕೋಟಿ-ಚೆನ್ನಯ ಮತ್ತು ಮಂತ್ರಿ ಬುದ್ಯಂತನ ನಡುವೆ ದ್ವೇಷ ಬೆಳೆಯಲು ಕಂಬಳ ಆಚರಣೆಯ ವಿವಾದವೇ ಮೂಲಕಾರಣ ಆಗಿರುವುದನ್ನು ಕೋಟಿ-ಚೆನ್ನಯ್ಯ ಪಾಡ್ದನ ತಿಳಿಸುತ್ತದೆ. ಕಾಸರಗೋಡಿನ ಪುಳ್ಕೂರು ಬಾಚ ಎಂಬ ಜಟ್ಟಿ ಕಂಬಳಕೋಣಗಳೊಂದಿಗೆ ಏಕಾಂಗಿಯಾಗಿ ಹೋರಾಡಿ, ಕೋಣಗಳನ್ನು ಹಿಡಿತಕ್ಕೆ ತೆಗೆದುಕೊಂಡು ಜನರನ್ನು ರಕ್ಷಿಸಿದನೆಂಬ ಕಥೆ ಪ್ರಚಲಿತವಿದೆ. ಕಾಂತಾಬಾರೆ-ಬೂದಾಬಾರೆ ಎಂಬ ವೀರರು ಕಟಪಾಡಿ ಕಂಬಳವನ್ನು ಕಾಲಿನಿಂದ ಒದ್ದು ವಕ್ರಗೊಳಿಸಿದರೆಂಬ ಸ್ಥಳೀಯ ಐತಿಹ್ಯವಿದೆ.
ಪೂಕರೆ ಕಂಬದ ವಿಚಾರದಲ್ಲಿ ಯುದ್ಧವಾಗುತ್ತಿದ್ದಿರುವಂತೆ ತೋರುತ್ತದೆ. ದಂಡಿಗೆ ಹೋದ ಒಡೆಯರು ಗೆದ್ದು ಬರುವಾಗ ಪೂಕರೆ ಕಂಬವನ್ನು ತಂದರೆಂದು ಹೇಳುವ ಉರಲ್ ಒಂದನ್ನು ಸುಂದರ ಕೇನಾಜೆಯವರು ಸಂಗ್ರಹಿಸಿದ್ದಾರೆ.
        ಉರಲ್ (ತುಳು)
ನಮೊನ ಉಲ್ಲಾಯ ದಂಡ್‍ಗು ಪೋತೆರ್
ದಂಡ್‍ಡ್ದ್ ಬನ್ನಗ ಗಿಂಡೆದ ನೀರು
ಕುಡ್ಪುಡು ಕಾಯಿ
ಬಟ್ಟಲ್ಡ್ ಪೇರು
ಕೊರೈಡ್ ಸುಣ್ಣೋ
ಬಂಡಿಡ್ ಪೂಕರೆ
ಕೊಂಡೊದು ಬರ್ವೆರೆ ಉಲ್ಲಾಯೆ
ಆಯೆರ್‍ಗ್ ಪೋನಗ ಆಜಿಕಟ್ಟು ಬಡು
ಈಯೆರೆಗ್ ಬನ್ನಗ ಮೂಜಿಕಟ್ಟು ಬಡು
ಕಂಪಕಂಡೊಡು ಗುಂಪು ಬಲಿಪಡ
ಪೊಯ್ಯಕಂಡೊಡು ಪೊಯ್ಯ ಬಲಿಪಡ
ಮೆಲ್ಲಪೋ ಮೆಲ್ಲ ಬಲ
                       ಓ ... ಓ ... ಓ...copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಅನುವಾದ
ನಮ್ಮ ಯಜಮಾನರು ದಂಡಿಗೆ ಹೋಗಿದ್ದಾರೆ
ದಂಡಿನಿಂದ ಬರುವಾಗ ಗಿಂಡೆಯಲ್ಲಿ ನೀರು
ಎಸರು ತಟ್ಟೆಯಲ್ಲಿ ಕಾಯಿ
ಬಟ್ಟಲಿನಲ್ಲಿ ಹಾಲು
ಮರಿಗೆಯಲ್ಲಿ ಸುಣ್ಣ
ಬಂಡಿಯಲ್ಲಿ ಪೂಕರೆ
ತೆಗೆದುಕೊಂಡು ಬರುತ್ತಾರೆ
ಆ ಕಡೆ ಹೋಗುವಾಗ ಆರು ಕಟ್ಟು ಬೆತ್ತ
ಈ ಕಡೆ ಬರುವಾಗ ಮೂರು ಕಟ್ಟು ಬೆತ್ತ
ಕೆಸರುಗದ್ದೆಯಲ್ಲಿ ಗುಂಪು ಓಡಬೇಡ
ಹೊಯ್ಗೆ ಗದ್ದೆಯಲ್ಲಿ ಹೊಯ್ಯೋ (?) ಓಡಬೇಡ
ಮೆಲ್ಲಗೆ ಹೋಗು ಮೆಲ್ಲಗೆ ಬಾ
ಓ .... ಓ .... ಓ ....
ಒಡೆಯನ ಅಂತಸ್ತಿಗೆ ಅನುಗುಣವಾಗಿ ಗಣೆ ಹಾಕುವುದು ಕೂಡ ಪೂಕರೆ ಒಡೆತನದ ಸೂಚಕವಾಗಿದೆ ಎಂಬುದನ್ನು ಸಮರ್ಥಿಸುತ್ತದೆ.copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ
ಪಣಂಬೂರಿನ ಪೂಕರೆ ಕಂಬಳ ತರಲು ಮುಲ್ಕಿಯಿಂದ ಹೋದ ಪ್ರಸಂಗ ಹಾಗೂ ಮಂಜಣ್ಣ ಪೂಕರೆ ಕಂಬವನ್ನು ಕಿತ್ತು ತಂದ ಐತಿಹ್ಯವು ಅಗೋಳಿ ಮಂಜಣ್ಣಎಂಬ ಹೆಸರಿನಲ್ಲಿ ಪ್ರಚಲಿತವಿದೆ. ಪೇರೂರಿನಲ್ಲಿ ಪೂಕರೆ ಕಂಬ ಕಳೆದುಹೋದ ಮೇಲೆ ಪೂಕರೆ ಕಂಬ ಹಾಕುವ ಆಚರಣೆ ನಿಂತುಹೋಯಿತು ಎಂಬ ಐತಿಹ್ಯವಿದೆ. ಕೋಳ್ಯೂರು ಮತ್ತು ಕಳಿಯೂರು, ಕಾಸರಗೋಡು ಜಿಲ್ಲೆಯ ಅಕ್ಕಪಕ್ಕದ ಎರಡು ಗ್ರಾಮಗಳು. ಕಳಿಯೂರಿನಲ್ಲಿ ಪೂಕರೆ ಕಂಬಳವೂ, ಕೋಳ್ಯೂರಿನಲ್ಲಿ ಬಾಳೆ ಕಂಬಳವೂ ನಡೆಯುತ್ತಿತ್ತು. ಒಂದು ವರ್ಷ ಕೋಳ್ಯೂರು ಕಂಬಳದಲ್ಲಿ ಮೂಲದ ಮಾಣಿ ಕೋಣಗಳನ್ನು ಅಡ್ಡಕ್ಕೆ ಓಡಿಸುವ ಬದಲು ನೀಟಕ್ಕೆ ಓಡಿಸುತ್ತಾನೆ. ಆಗ ಕೋಣಗಳು ಅಲ್ಲಿಯೇ ಮಾಯವಾಗುತ್ತವೆ. ಮೂಲದ ಮಾಣಿ ಓಡಿ ಹೋಗಿ ಗದ್ದೆಯ ಬದಿಯ ತೊರೆಗೆ ಹಾರುತ್ತಾನೆ. ಆ ಜಾಗಕ್ಕೆ ರೆಂಜೆಗುಂಡಿಎನ್ನುತ್ತಾರೆ. ಓಡುವಾಗ ಆತನ ಮುಟ್ಟಾಳೆ ಒಂದು ಕಡೆ ಬೀಳುತ್ತದೆ. ಆ ಜಾಗವನ್ನು ಮುಟ್ಟಾಳೆಕಲ್ಲು ಎನ್ನುತ್ತಾರೆ. ಕೋಣಗಳು ಮಾಯವಾದ ಜಾಗ ಎಂಬಲ್ಲಿ ಕೋಣಗಳು ಮಲಗಿರುವಂತೆ ಕಾಣುವ ಎರಡು ಬಂಡೆಗಲ್ಲುಗಳಿವೆ. ಈ ಕಲ್ಲನ್ನು ಎರುಮಾಜಿನಕಲ್ಲು (ಕೋಣ ಮಾಯವಾದ ಕಲ್ಲು) ಎನ್ನುತ್ತಾರೆ. ಕಂಬಳಸಂಬಂಧಿ ಈಜೋಮಂಜೊಟ್ಟಿಗೋಣ ಪಾಡ್ದನವು ಸತ್ಯದ ಕಂಬಳಕ್ಕೆ ಇಳಿದ ರೆಂಜಲಡಿಬರಿಕೆಯ ಮೂಲದ ಮಾನಿ ಬಬ್ಬು ಹಾಗೂ ಕೋಣಗಳು ಮಾಯವಾದಕಥೆಯನ್ನು ಹೇಳುತ್ತವೆ. ಹೀಗೆ ಕೋಣಗಳು ಮಾಯವಾದ ಮರುದಿವಸ ನೋಡುವಾಗ ಕಳಿಯೂರಿನ ಪೂಕರೆ ಕಂಬ ಕೋಳ್ಯೂರು ಕಂಬಳಗದ್ದೆಯಲ್ಲಿ ಬಂದು ಬಿದ್ದಿತ್ತು. ಅಂದಿನಿಂದ ಕೋಳ್ಯೂರು ಕಂಬಳಗದ್ದೆಯಲ್ಲಿ ಬಾಳೆ ಹಾಗೂ ಪೂಕರೆ ಕಂಬ ಎರಡೂ ಹಾಕುವ ಪದ್ಧತಿ ಬಂತು ಎಂಬ ಐತಿಹ್ಯವಿದೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಅಂದಿನಿಂದ ಕೋಳ್ಯೂರು ಕಂಬಳದಂದು ಗದ್ದೆಗೆ ಕೋಣಗಳನ್ನು ಇಳಿಸುವುದಿಲ್ಲ. ಬದಲಿಗೆ ಎತ್ತುಗಳನ್ನು ಇಳಿಸುತ್ತಾರೆ. ಕೊಕ್ಕಡ ಕಂಬಳಕ್ಕೆ ಸೆಗಣಿ ಹಾಕಬಾರದು ಎಂದಿದೆ. ಅರಿಬೈಲು ಕಂಬಳ ಗದ್ದೆಯಲ್ಲಿ ಜೊಳ್ಳು ಭತ್ತ ಬಿತ್ತಿದರೂ ಬೆಳೆ ಬೆಳೆಯುತ್ತದೆ ಎಂಬ ನಂಬಿಕೆ ಇದೆ. ವಂಡಾರು ಕಂಬಳ ಗದ್ದೆಯ ಸುತ್ತ ಬದುವಿನ ಸುತ್ತ ಬೆಳ್ತಿಗೆ ಅಕ್ಕಿ ಉದುರಿಸಿದರೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ವಂಡಾರು ಕಂಬಳದ ದಿನ ಕೋಟೇಶ್ವರದ ನೀರು ಕೆಂಪಗಾಗುತ್ತಿತ್ತು ಎಂಬ ಸ್ಥಳ ಐತಿಹ್ಯವಿದೆ. ವಂಡಾರು ಕಂಬಳದಲ್ಲಿ ಹಿಂದೆ ನರಬಲಿ ಕೊಡುವ ಪದ್ಧತಿ ಇತ್ತೆಂಬ ಬಗ್ಗೆ ಒಂದು ಐತಿಹ್ಯ ಪ್ರಚಲಿತವಿದೆ: ಪೂಕರೆ ಕಂಬಳದ ಹಿಂದಿನ ದಿವಸವೇ ಊರವರು ನೆಂಟರಿಷ್ಟರು ಬಂದಿರುತ್ತಾರೆ. ರಾತ್ರಿ ಮಲಗಿದಾಗ ನೆಂಟರ ಹುಡುಗರಲ್ಲಿ ಇಬ್ಬರ ಕಾಲಿಗೆ ಬಳ್ಳಿ ಕಟ್ಟುತ್ತಿದ್ದರು. ಕಾಲಿಗೆ ಬಳ್ಳಿ ಕಟ್ಟಿರುವ ಹುಡುಗರಿಬ್ಬರನ್ನು ಎತ್ತಿ ತೆಗೆದುಕೊಂಡು ಹೋಗಿ ಕಂಬಳ ಗದ್ದೆಯ ಸಮೀಪದ ಬಾವಿಗೆ ಹಾಕುತ್ತಿದ್ದರು. ಒಂದು ವರ್ಷ ತನ್ನ ಕಾಲಿಗೆ ಕಟ್ಟಿದ್ದ ಬಳ್ಳಿಯನ್ನು ಬಿಚ್ಚಿ ಆ ಮನೆಯ ಯಜಮಾನನ ಮಗನ ಕಾಲಿಗೆ ಒಬ್ಬ ಹುಡುಗ ಕಟ್ಟುತ್ತಾನೆ. ರಾತ್ರಿಯಲ್ಲಿ ಇದು ತಿಳಿಯದ ಕೆಲಸದವರು ಬಳ್ಳಿ ಕಟ್ಟಿದ್ದ ಯಜಮಾನನ ಮಗನನ್ನೇ ಹೊತ್ತುಕೊಂಡು ಹೋಗಿ ಬಾವಿಗೆ ಹಾಕುತ್ತಾರೆ. ಮರುದಿವಸ ಬೆಳಗ್ಗೆ ಮನೆಯ ಯಜಮಾನನಿಗೆ ಈ ವಿಚಾರ ಗೊತ್ತಾಗುತ್ತದೆ. ಅಂದಿನಿಂದ ನರಬಲಿಯ ಬದಲು ಕೋಳಿಯನ್ನು ಬಲಿ ಕೊಡುತ್ತಿದ್ದರು ಎಂಬ ಐತಿಹ್ಯವಿದೆ. ಈಗ ಸಾಂಕೇತಿಕವಾಗಿ ಕುರ್ದಿನೀರನ್ನು ಗದ್ದೆಗೆ ಎರೆಯುತ್ತಾರೆ. ಆ ಬಾವಿಯ ಮೇಲೆ ಕಲ್ಲಿನ ಚಪ್ಪಡಿಯನ್ನು ಎಳೆದಿದ್ದಾರೆ. ಆ ಬಾವಿಯನ್ನೇ ಸಿರಿಗಳ ಬಾವಿಎಂದು ಕರೆಯುತ್ತಾರೆ. ಕಂಬಳಗಳಲ್ಲಿ ಅತಿದೊಡ್ಡ ಕಂಬಳ ಗದ್ದೆ ಇದಾಗಿದೆ. ಎರಡು ಮೂರು ದಶಕಗಳ ಹಿಂದೆ ಇಲ್ಲಿ ವಾರಗಟ್ಟಲೆ ಕೋಣಗಳ ಓಟದ ಸ್ಪರ್ಧೆ ನಡೆಯುತ್ತಿತ್ತು. ಹೆಚ್ಚಿನ ಎಲ್ಲಾ ಪೂಕರೆ ಕಂಬಳ ಗದ್ದೆಗೆ ಸಂಬಂಧಿಸಿದಂತೆ ಒಂದು ಸಮಾನ ಆಶಯವುಳ್ಳ ಐತಿಹ್ಯ ಪ್ರಚಲಿತವಿದೆ. ಕಂಬಳ ಕೋರಿಯ ಮೊದಲು ಈ ಗದ್ದೆಗಳಲ್ಲಿ ಕುರುಂಟು ಎಳೆಯುವುದಿಲ್ಲ. ರಾತ್ರಿ ಸಂಕಪಾಲನೆಂಬ ಸರ್ಪ ಬಂದು ಈ ಕೆಲಸ ಮಾಡುತ್ತದೆ ಎಂಬ ಐತಿಹ್ಯ ಹೆಚ್ಚಿನ ಗದ್ದೆಗಳಲ್ಲಿ ಪ್ರಚಲಿತವಿದೆ.
ಕಂಬಳದ ಆಚರಣೆಯಲ್ಲಿ ಮೂರು ಮುಖ್ಯ ಅಂಶಗಳಿವೆ. ಮೊದಲನೆಯದು ಕೋಣಗಳ ಓಟದ ಸ್ಪರ್ಧೆಗೆ ಸಂಬಂಧಿಸಿದ ಅಂಶ. ಎರಡನೆಯದು ಫಲವಂತಿಕೆಯ ಆಚರಣೆಗೆ ಸಂಬಂಧಿಸಿದೆ. ಮೂರನೆಯದು ನಾಗ ಹಾಗೂ ಇತರ ದೈವಗಳ ಆರಾಧನೆಗೆ ಸಂಬಂಧಿಸಿದೆ.copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

Sunday 3 November 2013

ತುಳು ನಾಡಿನ ಭೂತವಾಗಿ ಆರಾಧಿಸಲ್ಪಡುವ ಹನುಮಂತ (C)ಡಾ.ಲಕ್ಷ್ಮೀ ಜಿ ಪ್ರಸಾದ


                                                                                     

copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ ಸುಮಾರು ೨೦ ವರ್ಷ ಮೊದಲೇ ಹನುಮಂತ  ಭೂತದ ಹೆಸರನ್ನು ನಾನು ಎಲ್ಲೋ ಯಾವುದೋ ಒಂದು ಪುಸ್ತಕದಲ್ಲಿ ಓದಿದ್ದೆ ಎಲ್ಲಿ ಯಾವ  ಪುಸ್ತಕ ಎಂದು ಈಗ ನೆನಪಾಗುತ್ತಾ ಇಲ್ಲ .ಅಂದಿನಿಂದ ನಂಗೆ ಹನುಮಂತ ಭೂತ ವನ್ನು ನೋಡಬೇಕು ಎಂಬ ಕುತೂಹಲ ಇತ್ತು .ಮುಂದೆ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ ಎಂಬ ವಿಷಯದಲ್ಲಿ ಸಂಶೋಧನಾ ಪ್ರಬಂಧ ಕ್ಕಾಗಿ ಅನೇಕ ಪ್ರದೇಶಗಳಲ್ಲಿ ಕಂಬಳ ಮತ್ತು ಕಂಬಳ ಕೋರಿ ನೇಮಗಳನ್ನು ರೆಕಾರ್ಡ್ ಮಾಡುತ್ತಾ ಇದ್ದೆ .ಇದೆ ಸಂದರ್ಭದಲ್ಲಿ ಡಾ. ಇಂದಿರಾ ಹೆಗಡೆಯವರ “ಬಂಟರು ಒಂದು ಸಮಾಜೋ ಸಾಸ್ಕೃತಿಕ ಅಧ್ಯಯನ “ಎಂಬ ಸಂಶೋಧನಾತ್ಮಕ ಕೃತಿಯಲ್ಲಿ ಇಳನ್ತಾಜೆಯಲ್ಲಿ ಹನುಮಂತನಿಗೆ ಕೋಲ ನೀಡಿ ಆರಾಧಿಸುತ್ತಾರೆ ಎಂಬುದನ್ನು ಓದಿ ನಂಗೆ ಹನುಮಂತನ ಕೋಲ ನೋಡಲೇ ಬೇಕೆಂಬ ಆಸೆ ಆಯಿತು. ಜೊತೆಗೆ ಅದನ್ನು ರೆಕಾರ್ಡ್ ಮಾಡಿ ಆ ಬಗ್ಗೆ ವಿಶ್ಲೇಷಿಸಿ  ನನ್ನ ಸಂಪ್ರಬಂಧದಲ್ಲಿ ಸೇರಿಸಿದರೆ ಸಂಪ್ರಬಂಧದ ತೂಕ ಹೆಚ್ಚಾಗುತ್ತದೆ ! ಆದ್ದರಿಂದ ಇರನ್ತಾಜೆ ಎಂಬ ಪ್ರದೇಶ ಎಲ್ಲಿದೆ ಎಂದು ವಿಚಾರಿಸತೊಡಗಿದೆ .ಪುತ್ತುರಿನಲ್ಲಿರುವ ನಮ್ಮ ಹತ್ತಿರದ ನೆಂಟರಾದ ಜಿ ಕೆ ಪ್ರಸನ್ನ ಅವರು ಇಳನ್ತಾಜೆಯ ದಿವಾಕರ ರೈ ಅವರ ಸಂಪರ್ಕ ಸಂಖ್ಯೆಯನ್ನು ಸಂಪಾದಿಸಿ ಕೊಟ್ಟರು .ನಾನು ದಿವಾಕರ ರೈ ಅವರನ್ನು ಸಂಪರ್ಕಿಸಿದಾಗ ಅವರು ಹನುಮಂತನ ನೇಮ ಅಲ್ಲಿ ಆಗುತ್ತಿದ್ದುದನ್ನು ಹೇಳಿ ಅನೇಕ ವರ್ಷಗಳಿಂದ ಈ ನೇಮ ನಿಂತು ಹೋಗಿದೆ, ಈ ವರ್ಷ ಹನುಮಂತನ ಗುಡಿ ಕಟ್ಟಿ ಜೀರ್ಣೋದ್ದಾರ ಮಾಡುತ್ತಾರೆ .ಆಗ ಕಂಬಳ ಕೋರಿ ಸಮಯದಲ್ಲಿ ಹನುಮಂತನಿಗೆ ಹಿಂದಿನ ಸಂಪ್ರದಾಯದಂತೆ ನೇಮ ನೀಡಿ ಆರಾಧಿಸುತ್ತಾರೆ ಎಂದು ಮಾಹಿತಿ ನೀಡಿದರು.ಇದಾಗಿ ಸುಮಾರು ೨ ವರ್ಷ ಕಳೆದುವು. ಇಳನ್ತಾಜೆಯಲ್ಲ್ಲಿ ಹನುಮಂತನ ಕೋಲ ನಡೆಯುವ ಬಗ್ಗೆ ಮಾಹಿತಿ ಏನು ಬರಲಿಲ್ಲ .ಇಷ್ಟಾಗುವಾಗ ನನ್ನ ಪಿ ಎಚ್ ಡಿ ಮಹಾ ಪ್ರಬಂಧವನ್ನು ಹಂಪಿ ವಿಶ್ವ  ವಿದ್ಯಾಲಯಕ್ಕೆ ಸಲ್ಲಿಸುವ ಕೊನೆಯ ದಿನಾಂಕ ಹತ್ತಿರ ಬಂತು. ಹಾಗಾಗಿ ಇಳನ್ತಾಜೆಯಲಿ ಹನುಮಂತನಿಗೆ ನೇಮ ಇರುವುದನ್ನು ಉಲ್ಲೇಖ ಮಾತ್ರ ಮಾಡಿ ನನ್ನ ಪ್ರಬಂಧವನ್ನು        ಯುನಿವೆರ್ಸಿಟಿಗೆ ಸಲ್ಲಿಸಿದೆ .ಅದೇ ಸಮಯದಲ್ಲಿ ನಾನು ಪ್ರವೇಶ ಪರೀಕ್ಷೆಯ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜ್ ಗೆ  ಆಯ್ಕೆಯಾಗಿ ಕನ್ನಡ ಉಪನ್ಯಾಸಕಿಯಾಗಿ ಬೆಳ್ಳಾರೆಗೆ ಬಂದೆ .ಇಲ್ಲಿ ಸೇರಿದ ತುಸು ಸಮಯಕ್ಕೆ ನಮಗೆ ಹಾಸನದಲ್ಲಿ ತರಬೇತಿ ಕಾರ್ಯಾಗಾರವೊಂದನ್ನು ಆಯೋಜಿಸಿದ್ದು ಅದರಲ್ಲಿ ಭಾಗವಹಿಸಲು ನಾನು ಅಲ್ಲಿಗೆ ಹೋದೆ .ಅದೇ ದಿನ ಕರ್ನಾಟಕ ತುಳು ಅಕಾಡೆಮಿಯ ಅಧ್ಯಕ್ಷರಾಗಿದ್ದ ಪಾಲ್ತಾಡಿ ರಾಮಕೃಷ್ಣ ಆಚಾರ್ ಫೋನ್ ಮಾಡಿ “ನವೆಂಬೆರ್ ೧ ರಂದು ಇಳನ್ತಾಜೆಯಯಲ್ಲಿ ಹನುಮಂತನ ನೇಮ ಇದೆ. ಅಲ್ಲಿ ತುಳು ಕಾರ್ಯಕ್ರಮವನ್ನು ಹಮ್ಮಿ ಕೊಂಡಿದ್ದೇವೆ ಮುಖ್ಯ ಅತಿಥಿಯಾಗಿ ಬನ್ನಿ” ಎಂದು ಆಹ್ವಾನಿಸಿದರು . ಆದರೆ ನಾನು ತರಬೇತಿ ಕರ್ಯಾಗಾರದಲ್ಲಿದ್ದ ಕಾರಣ ಈ ಕಾರ್ಯಕ್ರಮಕ್ಕೆ ಬರಲು ನಮ್ಮ ತರಬೇತಿ ಸಂಯೋಜಕರ ಅನುಮತಿ ಬೇಕಾಗಿತ್ತು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ . ಆದ್ದರಿಂದ “ನನಗೆ ಬರಲು ಸಾಧ್ಯವಿಲ್ಲ” ಎಂದು ತಿಳಿಸಿದೆ. ಜೊತೆಗೆ ನನ್ನ ಸ್ನೇಹಿತರೊಬ್ಬರು ಹನುಮಂತನ ಬಗ್ಗೆ ವಿಶೇಷ ಅಧ್ಯಯನ ಮಾಡಿರುವ ಬಗ್ಗೆ ತಿಳಿಸಿದೆ .ನನ್ನ ಸೂಚನೆಯಂತೆ ಆ ಬಗ್ಗೆ ಅಧ್ಯಯನ ಮಾಡಿದ  ಬೆಂಗಳೂರಿನ ವಿಜಯ ಕಾಲೇಜ್ ಕನ್ನಡ ಉಪನ್ಯಾಸಕರಾದ ಮಂಜುನಾಥ್ ಅವರನ್ನೇ ಮುಖ್ಯ ಅತಿಥಿಯಾಗಿ  ಆಹ್ವಾನಿಸಿದರು . ಆದರೆ “ಹನುಮಂತನ ನೇಮ ನೋಡಲು ನಂಗೆ ಸಾಧ್ಯವಾಗುತ್ತಾ ಇಲ್ಲವಲ್ಲ” ಎಂಬ ನೋವು ತುಂಬಾ ಕಾಡುತ್ತಿತ್ತು! .ಎಷ್ಟೋ ಸಮಯದಿಂದ ಹನುಮಂತನ ಕೋಲ ರೆಕಾರ್ಡ್ ಮಾಡಬೇಕೆಂದು ಕಾದಿದ್ದೆ . copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಅಂತು ಕೋಲ ಏರ್ಪಡಾದಾಗ ನಂಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಕೊರಗು ನನ್ನನ್ನು  ಹಗಲು ರಾತ್ರಿ ಕಾಡುತ್ತಿತ್ತು . ನಾನು ಆ ದೇವರಿಗೆ ಕೈ ಮುಗಿದು ಪ್ರಾರ್ಥಿಸಿದೆ .ಆಶ್ಚರ್ಯ ! ನೇಮಕ್ಕೆ ಎರಡು ದಿವಸ ಮೊದಲು ನಮ್ಮ ತರಬೇತಿಯ ರಾಜ್ಯ ಸಂಯೋಜಕರಾದ ಶ್ರೀ ಗೋಪಣ್ಣ ಅವರು ನಮ್ಮ ಹಾಸನದ ಕೇಂದ್ರಕ್ಕೆ ಬಂದಿದ್ದು ನನ್ನನ್ನು ಕರೆದು ನಿಮಗೆ ಏನೋ ರಿಸರ್ಚ್ ರೆಕಾರ್ಡ್ ಮಾಡುವುದಕ್ಕೆ ಹೋಗ ಬೇಕಾಗಿದೆಯೇ ?ಎಂದು ವಿಚಾರಿಸಿದರು !ಹೌದೆಂದು ಹೇಳಿ ವಿಷಯ ತಿಳಿಸಿದೆ. ಅದು ಕೂಡ ಅಧ್ಯಯನವೇ ಹೋಗಿ ಬನ್ನಿ ಎಂದು ನಂಗೆ ಹೋಗಿ ಬರಲು ಅವರು ಅನುಮತಿ ನೀಡಿದರು!ಅವರಿಗೆ ಅಕಸ್ಮಾತ್ ಆಗಿ ಭೇಟಿ ಆಗಿದ್ದ ಮಂಜುನಾಥ್ ಅವರು ವಿಷಯ ತಿಳಿಸಿದ್ದರಂತೆ !ಅಂತು ಇಂತೂ ನಾನು ಹನುಮಂತನ ಕೋಲವನ್ನು ರೆಕಾರ್ಡ್ ಮಾಡಿದೆ .ಅಂದಿನ ವೇದಿಕೆಯಲ್ಲಿ ನನಗೆ ಗೊತ್ತಿರುವ ವಿಚಾರವನ್ನು ಹಂಚಿಕೊಂಡೆ.ಹನುಮಂತ ಪೌರಾಣಿಕ ದೇವತೆಯಾಗಿ ಪ್ರಸಿದ್ಧನಾಗಿದ್ದಾನೆ .ಆದರೆ ಜನಪದ ದೈವವಾಗಿಯೂ ಆತನಿಗೆ ಎಲ್ಲೆಡೆ ಆರಾಧನೆ ಇದೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

      ರಾಮನ ಬಂಟ ಹನುಮಂತನ ಕಥೆಯನ್ನು ಕೇಳದೆ ಇರುವವರು ಅಪರೂಪ .ರಾಮಾಯಣದಲ್ಲಿ ರಾಮನಿಗೆ ಸುಗ್ರೀವನ ಸಖ್ಯವನ್ನು ಮಾಡಿಸಿದಾತ ಈತ .ಮುಂದೆ ಸಮುದ್ರಾ ಲಂಘನ ಮಾಡಿ ಲಂಕೆಗೆ ಹೋಗಿ ಸೀತೆಯನ್ನು ಪತ್ತೆ ಹಚ್ಚಿ ಬಂದು ರಾಮನಿಗೆ ಸುದ್ದಿ ಕೊಡುವವನು ಹನುಮಂತ .ಸಮುದ್ರಕ್ಕೆ ಸೇತುವೆ ಕಟ್ಟುವಲ್ಲಿ ಈತನ ಪಾತ್ರ ಬಹಳ ಮಹತ್ವದ್ದು .ರಾಮ ರಾವಣರ ಯುದ್ಧದ ಸಂದರ್ಭದಲ್ಲಿ ಮೂರ್ಛೆ ಹೋದ ಲಕ್ಷ್ಮ ಣ ನನ್ನು ಹಿಮಾಲಯಕ್ಕೆ ಹೋಗಿ ಸಂಜೀವನಿ ಬೆಟ್ಟವನ್ನು ಹೊತ್ತು ತಂದು ಬದುಕಿಸುವ ಮಹತ್ಕಾರ್ಯ ಮಾಡಿದವನು ಹನುಮಂತ .ಮುಂದೆ ತ್ರೇತಾ ಯುಗದಲ್ಲೂ ಶರಸೇತು ನಿರ್ಮಾಣ ಹಾಗೂ ಸೌಗಂಧಿಕಾ ಪುಷ್ಪ ತರುವ ಸಂದರ್ಭಗಳಲ್ಲಿ ಹನುಮಂತನ ಶಕ್ತಿಯನ್ನು ನಾವು ಮನಗಾಣುತ್ತೇವೆ .ಇಲ್ಲೆಲ್ಲಾ ಹನುಮಂತ ಪುರಾಣ ಮೂಲ ದೇವತೆಯಾಗಿ ಕಂಡು ಬರುತ್ತಾನೆ . ಅಂಜನಾದೇವಿ ಎಂಬಾಕೆಯ ಮಗನಾದ್ದರಿಂದ ಹನುಮಂತನಿಗ. ಆಂಜನೇಯಎಂಬ ಹೆಸರು ಬಂತು.  ಅಂಜನಾದೇವಿ ಕುರುಡಿ. ಗಿಡದ ಕೆಳಗೆ ಕೈ ತೆರೆದು ಕುಳಿತು, ಕೈಯಲ್ಲಿ ಬಿದ್ದುದನ್ನು ಸ್ವೀಕರಿಸುತ್ತಿದ್ದಳು.ಆಕಾಶಯಾನವಲ್ಲಿದ್ದ ವಾಯುದೇವನು ಉಗುಳಲು, ಅದು ಅಂಜನಾದೇವಿಯ ಕೈಯಲ್ಲಿ ಬಿದ್ದಿತು. ಅದನ್ನೇ ಸೇವಿಸಿದಳು. ಅದರಿಂದ ಗರ್ಭ ನಿಂತು ಮಾರುತಿ ಜನಿಸಿದನುಎಂಬ ಜನಪದ ನಂಬಿಕೆ ಕೂಡ ಪ್ರಚಲಿತವಿದೆ  ಆದರೆ ಅಂಜನಎಂದರೆ ಬಯಕೆಗಪ್ಪಎಂಬ ಅರ್ಥವಿದೆ. ಹನುಮಂತನ ಮೂರ್ತಿಗೆ ಎಣ್ಣೆ ಸವರಿ, ಜಿಗುಟಾದ ಕಪ್ಪು ಮಸಿ ಮೆತ್ತಿಕೊಂಡಿರುತ್ತದೆ. ಅವನಿಗೆ ಹರಕೆ. ಹೊತ್ತು, ಪ್ರಸಾದವೆಂದು ಈ ಕಪ್ಪು ಸಂಕೇತಗಳು ಬಳಕೆಯಾಗುತ್ತವೆ. ಕರಿಯದಾರ, ಕಪ್ಪು ಮಸಿ, ಕರಿಯಮಣಿಗಳು, ಕಣ್ಣಿನ ಕಾಡಿಗೆ, ಹನುಮಂತನ ಮೂರ್ತಿ ಇರುವ ಕಪ್ಪು ಬಿಲ್ಲೆ-ಇತ್ಯಾದಿಗಳು. ಹೀಗೆ ತಮ್ಮ ಬಯಕೆಯನ್ನು ಈಡೇರಿಸುವ ಈ ಕಪ್ಪು ನಿಶಾನೆಯ ದೇವರನ್ನು ಆಂಜನೇಯಅಂದರೆ-ಬಯಕೆಗಪ್ಪುಳ್ಳವನು’-ಎಂಬರ್ಥ ಬರುವಂತೆ ಹೆಸರಿಟ್ಟು ಕರೆದಿರಲೂ ಬಹುದಾಗಿದೆ. ರೂಢಿಯಲ್ಲಿ ಕರಿಹನುಮಎಂಬ ಮಾತೂ ಕೇಳುತ್ತೇವೆ.

ಈತ ಗಾಳಿದೇವರು-ಮರುತನಿಗೆ ಹುಟ್ಟಿದುದರಿಂದ ಮಾರುತಿ ಎಂಬ ಹೆಸರು ಬಂದಿದೆ ಎನ್ನಲಾತ್ತದೆ. ಆದರೆ ಈತನಲ್ಲಿ ಅಂತರಿಕ್ಷದಲ್ಲಿ ಹಾರಾಡುವ ವಿಲಕ್ಷಣ ಶಕ್ತಿ ಇರುವುದೆಂದು ಕಲ್ಪನೆಯಿರುವುದರಿಂದ ಮಾರುತಿಎಂಬ ಹೆಸರು ಬಂದಿರಲೂ ಸಾಧ್ಯವಿದೆ.ಆದರೆ ನಿಜವಾಗಿಯೂ ಹನುಮಂತ ಪುರಾಣ ಮೂಲ ದೇವತೆಯೇ ?ಎಂಬುದೊಂದು ಪ್ರಶ್ನೆ .ಯಾಕೆಂದರೆ ಹನುಮಂತನ ಆರಾಧನೆ /ಮಂಗನ ಆರಾಧನೆ ಜಗತ್ತಿನ ಹಲವೆಡೆಗಳಲ್ಲಿ ಕಂಡು ಬರುತ್ತದೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

 ಟಾಗೊ  ಮತ್ತು ಆಫ್ರೀಕಾಗಳ ಕೆಲವು ಹಳ್ಳಿಗಳ ಜನರು ಹನುಮಂತ(ಮಂಗ ?) ದೇವರಿಗೆ ದಿನಾಲು ನೈವೇದ್ಯ ಅರ್ಪಿಸುತ್ತಾರೆ. ಇದರಿಂದ ತಮ್ಮ ಬಯಕೆ ಈಡೇರುತ್ತದೆಂದು ಅವರು ನಂಬುತ್ತಾರೆ. ಕುನಾಮರು ಮತ್ತು ಬಾರಿ  ಜನಗಳು ಕೂಡ ಹನುಮಂತನನ್ನು ಪೂಜಿಸುತ್ತಾರೆ.ಹನುಮಂತನು ಬಹು ಪೂರ್ವಕಾಲದಿಂದಲೆ ಸಂತಾನವನ್ನು ನೀಡುವ  ಕೊಡುವ ದೇವರೆಂದು ಎಂದು ಜನಪದರು ನಂಬಿ ಆರಾಧಿಸುತ್ತಾರೆ . ಈ  ನಂಬುಗೆ ಜಾವಾ ದೇಶದ ಜನಾಂಗಗಳಲ್ಲೂ ಇದೆಯೆಂದು ತಿಳಿದು ಬರುತ್ತದೆ. ನಮ್ಮಲ್ಲಿ-ನಡುರಾತ್ರಿ ಬೆತ್ತಲೆಯಾಗಿ ಹನುಮಂತ ದೇವರಿಗೆ ಪೂಜೆ ಸಲ್ಲಿಸಿದರೆ, ಮಕ್ಕಳಾಗತ್ತವೆ ಎಂಬ ಜನಪದ ನಂಬಿಕೆಯಿದೆ:

 ಒಬ್ಬ ರಾಣಿ ಬಂಜೆಯಾಗಿರುತ್ತಾಳೆ .ಬಂಜೆ ಹೆಂಡತಿ ತನಗೆ ಬೇಡ ಎಂದು ರಾಜ  ಆಕೆಯನ್ನು ಊರ ಹೊರಗೆ ಮನೆ ಕಟ್ಟಿ ಇಡುತ್ತಾನೆ. ರಾನಿಗೊನು ಮಂಗ ಸಹಾಯ ಮಾಡುತ್ತದೆ ಸಹಾಯಕ ಮಂಗವು-ರಾಣಿ ಗರ್ಭಿಣಿ ಯಾಗಿದ್ದಾಳೆಂದು  ಸುದ್ದಿ ಹರಡಿಸುತ್ತದೆ  ಒಂಬತ್ತು ತಿಂಗಳಾದ ನಂತರ ಕೂಸಿನ ಜಡೆ ತೆಗೆಯಲು ಪರಸಿ ಹೊರಡುತ್ತದೆ. ಕಣಕದ ಗೊಂಬೆಯೊಂದನ್ನು ನಿರ್ಮಿಸಿ, ಕುಂಚಿಗೆಯಲ್ಲಿ ಸುತ್ತಿಕೊಂಡು ಮಂಗವೂ ಹೊರಡುತ್ತದೆ. ಮುಂದೆ, ಒಂದುಹನುಮಂತನ ಗುಡಿಯಲ್ಲಿ ಮೂರುತಿಯ ಮುಂದೆ ಗೊಂಬೆಯಿಟ್ಟು ತಾನು ಬಹಿರ್ದೆಸೆಗೆ ಹೋಗಿ ಬರುವವರೆಗೆ ಗೊಂಬೆಯನ್ನು ನಿಗಾಮಾಡಲು ಹನುಮಂತನಿಗೆ ತಾಕೀತು ಮಾಡಿ ಹೋಗುತ್ತದೆ. ತಿರುಗಿ ಬರುವುದರಲ್ಲಿ ಗೊಂಬೆ ಕಾಣದೆ, ಹನುಮಂತನೇ ನುಂಗಿರಬಹುದೆಂದು, ಅವನ ಮೇಲೆ ಅಪಾದನೆ ಹೊರಿಸಿ ತನ್ನಕೂಸು ತನಗೆ ಕೊಡದಿದ್ದರೆ ಹೊಸಲನ್ನು ಮುಖಕ್ಕೆ ಬಳಿಯುವದಾಗಿ ಹೆದರಿಸುತ್ತದೆ.ಹನುಮಂತನು ಹೆದರಿ-ಜೀವವಿರುವ ಕೂಸನ್ನೇ ಉಗುಳುತ್ತಾನೆ ಅಥವಾ ಅವನು ಉಗುಳಿದ ಉಗುಳೇ ಕೂಸಾಗಿ ಮಾರ್ಪಾಡುತ್ತದೆ.ಎಂದು  ಒಂದು ಜಾನಪದ ಕಥೆಯಲ್ಲಿ ಹೇಳಿದೆ.  ಒಬ್ಬಳು ತನಗೆ ಗಂಡುಮಗು ಜನಿಸಿದರೆ ಅಪ್ಪಳ ತುಪ್ಪಳಏರಿಸುವದಾಗಿ ಹನುಮಂತನಿಗೆ ಹರಕೆ ಹೊರುತ್ತಾಳೆ. ಅವಳಿಗೆ ಗಂಡು ಮಗು ಜನಿಸುತ್ತದೆ.ಎಂಬ ಕಥೆ ಕೂಡ ಪ್ರಚಲಿತವಿದೆ

ಹನುಮಂತ ಶನಿಯನ್ನು ಗೆದ್ದವನು : ಶನಿಯು ಎಲ್ಲ ದೇವರುಗಳನ್ನು ಕಾಡಿ, ಗೆ‌ದ್ದು ನಾಳೆ ತನ್ನಲ್ಲಿಗೆ ಬರುವುದಾಗಿ ಹನುಮಂತನಿಗೆ ಸೂಚನೆ ಕೊಡುತ್ತಾನೆ. ಮರುದಿನ ಆತನ ತಲೆಯ ಮೇಲೆ ಬಂದು ಕುಳಿತುಕೊಳ್ಳುತ್ತಾನೆ. ಹನುಮಂತನು ತನ್ನ ಬಾಲದಿಂದ ಗುಡ್ಡವನ್ನೇ ಎತ್ತಿ ಸಾವಕಾಶವಾಗಿ ಶನಿಯ ತಲೆಯ ಮೇಲೆ ಇಡುತ್ತಾನೆ. ಗುಡ್ಡದ ಭಾರವನ್ನು ತಾಳದ ಶನಿ ಹನುಮಂತನಿಗೆ ಶರುಣು ಬರುತ್ತಾನೆ. ಹನುಮಂತನು ತನಗೆ, ತನ್ನ ಭಕ್ತರಿಗೆ ಕಾಡಬಾರದೆಂಬ ಕರಾರಿನ ಮೇಲೆ ಶನಿಯನ್ನು ಬಿಟ್ಟು ಬಿಡುತ್ತಾನೆ.ಆದ್ದರಿಂದ ಹನುಮಂತನ ಪೂಜೆ ಮಾಡಿದರೆ ಶನಿಯ ಕಾಟ ಇರುವುದಿಲ್ಲ ಎಂದು ಜನಪದರು ನಂಬುತ್ತಾರೆ . ಹೆಣ್ಣಮಕ್ಕಳು ಹನುಮಪ್ಪನಿಗೆ ಪೂಜೆ ಮಾಡಿದರೆ ಬೇಗ ಮದುವೆ  ಆಗುತ್ತದೆ ಎಂದು ನಂಬಿ ಆರಾಧಿಸುತ್ತಾರೆ . : ಸೋದರಳಿಯ ಅಥವಾ ಸೋದರ ಸೊಸೆಗೆ ಮೊದಲಿಗೆ ಮೇಲಿನ ಹಲ್ಲು ಹೊರಟರೆ-ಹನುಮಂತನ ಗುಡಿಯಲ್ಲಿ ಒಂದು ಆಚರಣೆ ನಡೆಯುತ್ತದೆ. ಸೋದರ ಮಾವನು ಮೇಲಿನ ಹಲ್ಲು ಹೊರಟ ಕೂಸಿಗಾಗಿ ಅಂಗಿ, ಟೊಪ್ಪಿಗೆ ಅಲ್ಲದೆ ಒಂದು ಸಣ್ಣ ಬೆಳ್ಳಿ ಬಟ್ಟಲನ್ನು ಒಯ್ಯುತ್ತಾನೆ. ಗುಡಿಯ ಬಾಗಿಲಿಗೆ ಪರದೆ ಹಾಕುತ್ತಾರೆ. ಮಗು ಒಳಗೆ ಇರುತ್ತದೆ. ಸೋದರಮಾವ ಹೊರಗಿರುತ್ತಾನೆ. ಪೂಜಾರಿ-ಸೋದರಮಾವನ ತಂದ ಬೆಳ್ಳಿ ಬಟ್ಟಲಿನಿಂದ ಮಗುವಿನ ಹಲ್ಲಿಗೆ ಗೀರಿ ರಕ್ತ ತೆಗೆದು ತಂದು ಸೋದರಮಾವನ ಹಣೆಗೆ ಹಚ್ಚುತ್ತಾನೆ. ನಂತರ ಕೂಸಿನ ಮುಖ ನೋಡುತ್ತಾನೆ. ಅಲ್ಲಿಯವರೆಗೆ ಅಂಥ ಮಗುವಿನ ಮುಖ ಸೋದರಮಾವ ನೋಡಬಾರದು ಎಂಬ ನಂಬಿಕೆಯಿದೆ. ಇನ್ನು ಯಾವುದೇ ಶುಭ ಕಾರ್ಯಕ್ಕೆ ಬೀಗರು ಊರಿಗೆ ಬಂದರೆ ಮೊದಲು ಇಳಿದುಕೊಳ್ಳುವುದು ಹನುಮಂತನ ಗುಡಿಯಲ್ಲಿ ಅಲ್ಲಿಂದ ಅವರಿಗೆ ಮೆರವಣಿಗೆಯಲ್ಲಿ ಕರೆತರುತ್ತಾರೆ. ಮದುವೆಗೆ ಬಂದ ಬೀಗರಂತೂ ಹನುಮನ ಗುಡಿಯಲ್ಲಿ ಇಳಿಯಲೇ ಬೇಕು. ಅಲ್ಲಿಯೇ ಬೀಗರ ಬೇಟಿ ನಡೆಯುವುದು. ಹೀಗೆ ಹನುಮಂತನು ನಮ್ಮ ದಿನನಿತ್ಯದ ಜೀವನ-ಸಂಸ್ಕೃತಿಯೊಂದಿಗೆ ತನ್ನ ಸಂಬಂಧವನ್ನು ನಿರಂತರವಾಗಿ ಗಟ್ಟಿಗೊಳಿಸಿಕೊಳ್ಳುತ್ತಲೇ ಇದ್ದಾನೆ ಎಂದು ವೀರಣ್ಣ ದಂಡೆ ಅಭಿಪ್ರಾಯ ಪಟ್ಟಿದ್ದಾರೆ . ಚಳಿ ಬನ್ನಿಗಿಡದಲ್ಲಿ ವಾಸವಾಗಿರುತ್ತದೆ. ದಸರೆಗೆ ಬನ್ನಿಮುಡಿದು ಬರುವವರೊಂದಿಗೆ ಹನುಮಂತನ ಗುಡಿಗೆ ಬರುತ್ತದೆ. ಅಲ್ಲಿಯೇ ದೀಪಾವಳಿಯ ವರೆಗೆ ಕುಳಿತಿದ್ದು, ದೀಪಾವಳಿ ಪಾಡ್ಯದ ನಸುಕಿನಲ್ಲಿ ಅಗಸನು ಊರಲ್ಲಿ ಆರುತಿ ಬೆಳಗಲು ಬರುವುದಕ್ಕಿಂತ ಮುಂಚೆ ಹನುಮಂತನಿಗೆ ಆರುತಿ ಬೆಳಗಿ ಬರುತ್ತಾನೆ. ಚಳಿಯು ಈ ಅಗಸನ ಕಂಬಳಿಯಲ್ಲಿ ಕುಳಿತುಕೊಂಡು ಮನೆ ಮನೆ ಸೇರುತ್ತದೆ-ಎಂಬ ನಂಬಿಕೆಯಿದೆ. ಹಿಂದುಗಳು ಅನೇಕ ಪ್ರಾಣಿಲಾಂಛನ ಹೊತ್ತ ದೇವರುಗಳನ್ನು ಪೂಜಿಸುತ್ತಾರೆ. ಹನುಮಂತ, ಗಣೇಶ, ನಾಗ ಇತ್ಯಾದಿ. ಇಂಥವುಗಳಲ್ಲಿ ಅತಿ ಪ್ರಮುಖ ಹಾಗೂ ಪ್ರಾಚೀನನೆಂದರೆ ಹನುಮಂತ ದೇವರು. ಅವನ ದೊಡ್ಡಸ್ತಿಕೆಯನ್ನು ನಂತರ ಭಕ್ತಿ ಪಂಥದಲ್ಲಿ-ಮಧ್ಯಕಾಲೀನ ಹಿಂದೂ ಧರ್ಮದಲ್ಲಿ ಕಾಣಿಸಲಾಗಿದೆ. ಅವನನ್ನು ರಾಮನ ಸೇವಕನಂತೆ ಬಣ್ಣಿಸಲಾಗಿದೆ. ಆದರೆ ಭಾರತದಾದ್ಯಂತ ಜನಪದರ ನಂಬಿಕೆ ಯಂತೆ ಅವನು ಕೇವಲ ಒಬ್ಬ ಸೇವಕನಾಗಿ, ಭಕ್ತನಾಗಿ ಕಾಣುವುದಕ್ಕಿಂತ ಹೆಚ್ಚಿಗೆ, ಬಂಜೆಗೆ ಮಕ್ಕಳು ಕೊಡುವ ದೇವರಾಗಿ ಕಾಣುತ್ತಾನೆcopy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

 ವೈದಿಕರು ರಾಮಾಯಣದಲ್ಲಿ ಹನುಮಂತನನ್ನು ರಾಮನ ಕೇವಲ ಭಕ್ತನನ್ನಾಗಿ, ಸ್ವಾಮಿಕಾರ್ಯ ನಿರ್ವಹಿಸಲು ಕಂಕಣಬದ್ಧನಾಗಿ ನಿಂತ ಸೇವಕನನ್ನಾಗಿ ಚಿತ್ರಿಸುತ್ತಾರೆ. ಹಾಗೆಯೇ ವೀರಶೈವರು ಹನುಮಂತನ ಲಿಂಗಧಾರಣ ಪ್ರಸಂಗವನ್ನು ನಿರೂಪಿಸುತ್ತಾರೆ. ಏನೆಲ್ಲ ಸೇವೆ ಮಾಡಿದರೂ ತಾನು ಬಯಸಿದ ಅನುಗ್ರಹವನ್ನು ರಾಮನಿಂದ ಕೊಡಲಾಗಲಿಲ್ಲವೆಂಬ ನಿರಾಶೆಯಿಂದ ಹನುಮಂತನು ವೀರಭದ್ರನಿಂದಲಿಂಗದೀಕ್ಷೆ ಪಡೆದು ಮುಕ್ತಿ ಹೊಂದಿದನೆಂದು ವೀರಶೈವ ಪುರಾಣಗಳು ವರ್ಣಿಸುತ್ತವೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಇಲ್ಲಿ ರಾಮನನ್ನು ಕಡೆಗಣಿಸಿ, ತಮ್ಮ ದೇವರಿಂದ ಹನುಮಂತನಿಗೆ ದೀಕ್ಷೆ ಕೊಡಿಸಿ, ಅವನನ್ನು ತಮ್ಮ ದೇವರ ಬಳಗದಲ್ಲಿ ಕೂರಿಸಲು ವೀರಶೈವರು ಪ್ರಯತ್ನಿಸಿರುವುದು ಎದ್ದು ಕಾಣುತ್ತದೆ. ಇನ್ನು ಇಸ್ಲಾಂ ಕಟ್ಟು ಕಥೆಗಳನ್ನು ನೋಡಿದರೆ, ಅವರು-ಮೌಲಾಲಿಯಿಂದ ಹನುಮಂತನು ಸೋಲನ್ನುನುಭವಿಸಿದ ಕಥೆಯನ್ನು ಬಣ್ಣಿಸುತ್ತಾರೆ. ಈ ಬಗ್ಗೆ ”ನನಗೆ ದೊರೆತ ಒಂದು ರಿವಾಯತ ಹಾಡಿನ ಸಾರಾಂಶ ಹೀಗಿದೆ: ಹನುಮಂತನು ಎರಡು ಗುಡ್ಡಗಳ ಮಧ್ಯವಾಸವಾಗಿ, ಬೈಗು-ಬೆಳಗು ತಾಲೀಮ ಮಾಡುತ್ತಿದ್ದನು. ಶಕ್ತಿಯಲ್ಲಿ ತನ್ನ ಸಮನಾದವರು ಯಾರೂ ಇಲ್ಲವೆಂದು ಗರ್ವಪಡುತ್ತಿದ್ದನು. ಒಂದು ದಿನ ಮೌಲಾಲಿ ತಿರುಗಾಡುತ್ತ ಆ ಗುಡ್ಡದೆಡೆಗೆ ಬರುವನು. ಹನುಮಂತನ ಪರಿಚಯವಾಗುವುದು. ತಾನು ಮೌಲಾಲಿಯನ್ನು ಮೀರಿಸಲೆಂದೆ ಇಷ್ಟೆಲ್ಲ ಶ್ರಮ ಪಡುತ್ತಿರುವುದಾಗಿ ಹನುಮಂತನು ಹೇಳುವನು. ಆಗ ಮೌಲಾಲಿಯು, ತಾನು ಮೌಲಾಲಿಯ ಸೇವಕನೆಂದೂ, ಮೊದಲು ತನ್ನೊಂದಿಗೆ ಗೆದ್ದು ನಂತರ ಮೌಲಾಲಿಯೊಂದಿಗೆ ಕುಸ್ತಿಯಾಡಬಹುದೆಂದೂ ಹೇಳುವನು. ಇಬ್ಬರಿಗೂ ಕುಸ್ತಿ ಪ್ರಾರಂಭವಾಗುತ್ತದೆ. ಮೌಲಾಲಿಯು ಹನುಮಂತನ ಕಪಾಳಕ್ಕೆ ಏಟುಕೊಡುತ್ತಾನೆ.ತತ್ಪಣಾಮವಾಗಿ ಅವನ ಮುಸುಡಿ ಊದಿಕೊಳ್ಳುತ್ತದೆ.ಮುಖ ಎಡಕ್ಕೆ ತಿರುಗಿಕೊಳ್ಳುತ್ತದೆ. ಹನುಮಂತ ಮೌಲಾಲಿಗೆ ಶರಣು ಹೋಗುತ್ತಾನೆ. ಈ ಮೇಲಿನ ವಿವರಗಳನ್ನು ಗಮನಿಸುವಾಗ  ಬ್ರಾಹ್ಮಣರು, ವೀರಶೈವರು ಮತ್ತು ಮುಸ್ಲಿಮರು ಹನುಮಂತನು ನನ್ನ ತನ್ನವನೆಂದು, ಖೊಟ್ಟಿ ಸಾಕ್ಷಿಗಳನ್ನು ನಿರ್ಮಿಸಿ, ಅವನ ಚರಿತ್ರೆಯನ್ನು ಮಸುಕುಗೊಳಿಸಿದ್ದಾರೆ. ತಮ್ಮ ತಮ್ಮ ದೇವರ ಅಡಿಗಳಲ್ಲಿ ಹಾಕಿ, ಸೇವಕನೆಂದು ಬಣ್ಣಿಸಲು ಹೆಣಗಾಡಿದ್ದಾರೆ ಎಂಬುದು ನಮಗೆ ಹೊಳೆಯುತ್ತದೆ. ಆದುದರಿಂದ ಹನುಮಂತನ ನಿಜವಾದ ವೃತ್ತಾಂತ ಬೇರೆ ಏನೋ ಇದ್ದು, ಅವನು ರಾಮನಿಗಾಗಲಿ, ವೀರಭದ್ರನಿಗಾಗಲಿ ಇಲ್ಲವೆ ಮೌಲಾರಿಗಾಗಲಿ ಸಂಬಂಧಿಸಿದವನಿರಲಿಕ್ಕಿಲ್ಲ ಎಂಬ ಅನುಮಾನ ಬರುತ್ತದೆ. ಹೀಗಿರುವುದರಿಂದ ಹನುಮಂತನು ಈ ಮೂವರಿಗೂ ಸಂಬಂಧಿಸಿರದೆ, ಇವರೆಲ್ಲರಿಗಿಂತ ಪೂರ್ವದಲ್ಲಿ ಯಾವುದೋ ಜನಾಂಗದಿಂದ ಪೂಜೆಗೊಳ್ಳುತ್ತಲಿರುವ ಪ್ರಬಲ ದೇವರಾಗಿದ್ದಾನೆಂದು ತೋರುತ್ತದೆ. ನಂತರ ತಮ್ಮ ತಮ್ಮ ದೇವರ ಪ್ರಾಬಲ್ಯ, ಪ್ರಸಾರ ಹೆಚ್ಚಿಸಲು-ಹನುಮಂತನನ್ನು ಅನ್ಯಾಯಕ್ಕೊಳಮಾಡಿದ್ದಾರೆ, ಅತ್ತಿತ್ತ ಎಳೆದಾಡಿದ್ದಾರೆಂದು ಅನಿಸುತ್ತದೆ “ಎಂದು ವೀರಣ್ಣ ದಂಡೆಯವರು ಅಭಿಪ್ರಾಯ ಪಟ್ಟಿದ್ದಾರೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

ಅವನು ಒಕ್ಕಲಿಗರಿಂದ ಪೂಜೆಗೊಳ್ಳುವ ದೈವವಾಗಿ, ಅವರ ಬೆಳೆಯನ್ನು ಕಾಪಾಡುವ ದೈವವಾಗಿ ತೋರುತ್ತಾನೆ ಎಂದು ವೀರಣ್ಣ ದಂಡೆ ಅಭಿಪ್ರಾಯ ಪಡುತ್ತಾರೆ .ಹನುಮಂತನು ಉಳುವವರ ದೇವನಾಗಿದ್ದು, ಅವರ ಫಲ ಕಾಪಾಡುವ ದೈವವಾಗಿದ್ದಾನೆ ಎಂದು ಜನಪದರು ನಂಬುತ್ತಾರೆ .ಒಕ್ಕಲಿಗರು ಹನುಮಂತನನ್ನು ಕರಿಬಂಟ ಎಂದು ಕರೆದು ಆರಾಧಿಸುತ್ತಾರೆ

 ಮದನ ಮನಗಿಸಬೇಕು ಮಂಡಲ ಬರಿಬೇಕು

ಸುತ್ತ ಕರಿಬಂಟ ಕಟ್ಟಬೇಕು

ಒಕ್ಕಲಿಗರು ಜೋಳದ ರಾಶಿಯ ಸಮಯದಲ್ಲಿ ಹಂತಿ ಮುಗಿದು, ಮದನ ಮನಗಿಸಿದ ನಂತರ, ಜೋಳದ ರವದಿಯನ್ನು ಸುಟ್ಟು, ಆ ಕರುಕಿನಿಂದ ಕಣದಲ್ಲಿ ಮಂಡಲ ಬರೆಯುತ್ತಾರೆ. ಅರ್ಧಚಂದ್ರಾಕೃತಿಯ ಹಾಗೂ ’+’ ಈ ಚಿನ್ಹೆಯ ಗುರುತು ಹಾಕುತ್ತಾರೆ. ಇದನ್ನು ಕರಿಬಂಟಎಂದು ಕರೆಯುತ್ತಾರೆ. ಕರಿಹನುಮ ನಿನ್ನ ರೂಪ ಬರದೇವು ಬಂಡಿಯ ಮ್ಯಾಲ

ಸಗರ ಶಾಪುರದ ಕರಿಹನುಮ ನಿನನಾಮ

ಬರದೇವು ನಮ್ಮ ಕಣದಾಗ

ಎಂಬ ನಡಿ ಅದಕ್ಕೆ ಸಾಕ್ಷಿಯಾಗಿಯೂ ಇದೆ. ದುಷ್ಟಶಕ್ತಿಯನ್ನು ಸಂಹಾರ ಮಾಡುವವನೂ, ಚೆಲುವನ್ನು ಕೆಡದಂತೆ ಕಾಪಾಡುವವನೂ, ಬಲವನ್ನೂ ಫಲವನ್ನೂ ಕೊಡುವವನೂ ಆದ ಹನುಮಂತನ ಮೇಲೆ ನಂಬುಗೆ ಇಟ್ಟ ಜನ, ಅವನನ್ನು ತಮ್ಮ ಕಣದಲ್ಲಿ ಸಂಕೇತ ತಂದು ಜವಾಬುದಾರಿಯನ್ನು ಹೊರಿಸಿದರುಎಂದು ವೀರಣ್ಣ ದಂಡೆ ಹೇಳಿದ್ದಾರೆ .

ಹನುಮಂತನಿಗೆ ಕೋಳಿ ಹಾಗು ಕುರಿಗಳ ಬಲಿ ಕೊಟ್ಟು ಆರಾಧಿಸುವ ಪದ್ಧತಿ ಕೂಡ ಜನಪದರಲ್ಲಿ ಇದೆ ಎಂದು ಮಂಜುನಾಥ್  ಅವರು ತಿಳಿಸಿದ್ದಾರೆ .ಹನುಮಂತ ಮೈಯಲ್ಲಿ ಬಂದು ಆದೇಶ ಕೊಡುತ್ತಾನೆ ಎಂದು ಜನ ನಂಬುತ್ತಾರೆ.ತುಳು ನಾಡಿನಲ್ಲಿ ಹನುಮಂತನ ಆರಾಧನೆ ರಾಮನ ಬಂಟ ,ಶಕ್ತಿಯನ್ನು ನೀಡುವಾತ ಭಯವನ್ನು ದೂರಮಾಡುವ ದೇವರು ಎಂಬ ಪರಿಕಲ್ಪನೆ ಇದೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

.ಆದರೂ ಪುತ್ತೂರು ತಾಲೂಕಿನ ಇಳನ್ತಾಜೆಯಲ್ಲಿ ಹನುಮಂತನಿಗೆ ವೈದಿಕ ಪರಿಕಲ್ಪನೆಗೆ ಭಿನ್ನವಾಗಿ ಹನುಮಂತನನ್ನು ಭೂತವಾಗಿ ಪರಿಗಣಿಸಿ ಹನುಮಂತನಿಗೆ ಕೋಲ ನೀಡಿ ಆರಾಧಿಸುವ ಪದ್ದತಿ ಬಳಕೆಯಲ್ಲಿದೆ .

 ಭೂತಾರಾಧನೆ ತುಳುನಾಡಿನ ವಿಶಿಷ್ಟ ಸಂಸ್ಕೃತಿ. ಭಯವನ್ನುಂಟು ಮಾಡುವ ಹುಲಿ, ಹಂದಿ, ಸರ್ಪ ಮೊದಲಾದ ಪ್ರಾಣಿಗಳು ಕೂಡ ಇಲ್ಲಿ ದೈವತ್ವಕ್ಕೇರಿ ಆರಾಧಿಸಲ್ಪಡುತ್ತವೆ. ಪಿಲಿ ಭೂತ, ಪಂಜುರ್ಲಿ, ನಾಗಭೂತ ಮೊದಲಾದ ದೈವಗಳು ಪ್ರಾಣಿ ಮೂಲ ದೈವಗಳಾಗಿವೆ. ಅನೇಕ ಪುರಾಣ ಮೂಲ ದೈವಗಳಿಗೂ ಇಲ್ಲಿ ಆರಾಧನೆ ಇದೆ. ಚಾಮುಂಡಿ, ವಿಷ್ಣುಮೂರ್ತಿ, ಗುಳಿಗ ಮೊದಲಾದ ದೈವಗಳಿಗೆ ಪುರಾಣ ಕತೆಗಳ ಸಂಬಂಧವಿದೆ. ಅಸಹಜ ಮರಣವನ್ನಪ್ಪಿದ ಅಮಾನುಷ ವೀರರು ಕೂಡ ಇಲ್ಲಿ ದೈವತ್ವಕ್ಕೇರಿ ಆರಾಧಿಸಲ್ಪಡುವುದು ಸಾಮಾನ್ಯವಾದ ವಿಚಾರವೇ ಆಗಿದೆ. ವರ್ಣ ತಾರತಮ್ಯವನ್ನು ಪ್ರಶ್ನಿಸಿರುವ ಮೂಲದ ಮಾಣಿ ಬಬ್ಬು ಹಾಗೂ ಕೊರಗರ ಹೈದ ತನಿಯ ಉರವ ಹಾಗೂ ಕೊರಗ ತನಿಯ ದೈವಗಳಾಗಿ ಆರಾಧಿಸಲ್ಪಡುತ್ತಿದ್ದಾರೆ. ಕೋಟಿ-ಚೆನ್ನಯ, ಮುಗೇರ್ಲು, ಕೋಟೆದ ಬಬ್ಬು ಕುಂಟಲ್ದಾಯ, ಕನ್ನಡ ಬೀರ ಮೊದಲಾದ ಅನೇಕ ದೈವಗಳು ಜನಸಾಮಾನ್ಯರಾಗಿ ಹುಟ್ಟಿ ಬದುಕಿ ದುರಂತವನ್ನಪ್ಪಿ ದೈವತ್ವಕ್ಕೇರಿದ ದೈವಗಳಾಗಿವೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

ಪ್ರಧಾನ ದೈವಗಳಿಗೆ ಪಾಡ್ದನವಿರುತ್ತದೆ. ಪ್ರಧಾನ ದೈವಗಳೊಂದಿಗೆ ಅನೇಕ ಪರಿವಾರ ದೈವಗಳಿಗೆ ಆರಾಧನೆ ಇರುತ್ತದೆ. ಪರಿವಾರ ದೈವಗಳಿಗೆ ಪ್ರತ್ಯೇಕವಾದ ಪಾಡ್ದನಗಳು ಇರುವುದಿಲ್ಲ. ಕನ್ನಡ ಬೀರ, ಪೆÇೀತಾಳ, ಬಂಟ, ಪುದ, ಕುಲೆ ಪೆರ್ಗಡೆ ಮೊದಲಾದ ಸೇರಿಗೆಯ ದೈವಗಳ ಪಾಡ್ದನವಾಗಲೀ, ಹಿನ್ನೆಲೆಯಾಗಲೀ ಲಭ್ಯವಾಗುವುದಿಲ್ಲ. ಸೇರಿಗೆಯ ದೈವಗಳು ಸಾಮಾನ್ಯವಾಗಿ ಮಾತನಾಡುವುದಿಲ್ಲ. ಈ ದೈವಗಳಿಗೆ ಕಟ್ಟು ಕಟ್ಟಳೆಯಂತೆ ಸಂಕ್ಷಿಪ್ತ ರೂಪದಲ್ಲಿ ಆರಾಧನೆ ಇರುತ್ತದೆ. ಸೇರಿಗೆಯ ದೈವಗಳಿಗೆ ದರ್ಶನವಾಗಲೀ, ಅಣಿಯಾಗಲೀ, ಗಗ್ಗರದೆಚ್ಚಿಯಾಗಲೀ ಇರುವುದಿಲ್ಲ. ವೇಷ ಭೂಷಣ ಕೂಡ ಸರಳವಾಗಿರುತ್ತದೆ. ಇಂಥಹ ಸೇರಿಗೆಯ ದೈವಗಳು ಹೆಚ್ಚಾಗಿ ಮನುಷ್ಯ ಮೂಲದ ಲಕ್ಷಣವನ್ನು ತೋರುತ್ತದೆ.

ಇಳನ್ತಾಜೆಯ  ಹನುಮಂತ ಭೂತಕ್ಕೆ ಇಂತಹ ಸೇರಿಗೆ ದೈವದ  ಲಕ್ಷಣ ಇದೆ.ಆದರೆ ಇಲ್ಲಿ ಹನುಮಂತ ಸೇರಿಗೆ ದೈವವಲ್ಲ . ಈತ ಇಲ್ಲಿ ಪ್ರಧಾನ ದೈವ . ಆದರೂ  ಇತರ ದೈವಗಳಿಗಿಂತ ಭಿನ್ನ. ತುಳುನಾಡಿನ  ಎಲ್ಲ ದೈವಗಳಿಗಿಂತ ವಿಶಿಷ್ಟವಾದ ದೈವ ಹನುಮಂತ ಅಥವಾ ಆಂಜನೇಯ ಸ್ವಾಮಿ. ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಕೌಡಿಚ್ಚಾರು ಸಮೀಪದ ಇಳಂತಾಜೆಯಲ್ಲಿ ಹನುಮಂತನಿಗೆ ನೇಮ ಅಥವಾ ಕೋಲದ ರೂಪದಲ್ಲಿ ಆರಾಧನೆ ನಡೆಯುತ್ತಿದೆ. ಹದಿನಾಲ್ಕು ವರ್ಷಗಳ ಹಿಂದೆ ಈ ಆರಾಧನೆ ಕಾರಣಾಂತರಗಳಿಂದ ನಿಂತು ಹೋಗಿತ್ತು. ಆದರೆ 2009ರ ನವೆಂಬರ ತಿಂಗಳಿನ ಮೊದಲ ದಿನಾಂಕದಂದು ಹನುಮಂತನ ಕೋಲವು ಇಳಂತಾಜೆ ಪ್ರಮೋದ ರೈ ಹಾಗೂ ಅವರ ಸಹೋದರರ ಸಹಭಾಗಿತ್ವದಲ್ಲಿ ಇಳಂತಾಜೆಯಲ್ಲಿ ಪುನಃ ಆರಂಭವಾಗಿರುವುದು ತುಳುನಾಡಿನ ಸೌಭಾಗ್ಯವೇ ಸರಿ.ನಾನು ಅಂದು ಅಲ್ಲಿಗೆ ಹೋಗಿ ಹನುಮಂತನ ನೇಮವನ್ನು ರೆಕಾರ್ಡ್ ಮಾಡಿದೆ !ಇಲ್ಲಿ ಇಳನ್ತಾಜೆ ಕುಟುಂಬದ ಪ್ರಮೋದ್ ಕುಮಾರ ರೈ ,ಸುಧಾಕರ ರೈ ,ದಿವಾಕರ ರೈ ಮೊದಲಾದವರು ನಂಗೆ ಪೂರ್ಣ ಸಹಕಾರ ಇತ್ತದ್ದನ್ನು ನಾನು ಎಂದಿಗೂ ಮರೆಯಲಾರೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

 ಹನುಮಂತನಿಗೆ ಭೂತದ ರೂಪದಲ್ಲಿ ಆರಾಧನೆ ಇಳನ್ತಾಜೆ ಯಲ್ಲಿ ಮಾತ್ರ ಇದೆ ಎಂದು ನಾನು ಭಾವಿಸಿದ್ದೆ .ಆದರೆ ಇತ್ತೀಚಿಗೆ ಕಳಸದಲ್ಲಿ ಕೂಡ ಶ್ರೀ ವೀರ ಹನುಮಂತ ದೈವಕ್ಕೆ ನೇಮೋತ್ಸವ ಇದೆ ಎಂದು ತಿಳಿದು ಬಂತು ಆದರೆ ಹನುಮಂತ ಭೂತದ ಆರಾಧನೆ ಇತರ ಭೂತಗಳಿಗಿಂತ ತುಸು ಭಿನ್ನ ವಾಗಿ ಇದೆ . ಹನುಮಂತ ಮೈಮೇಲೆ ಬಂದು ಆವೇಶಗೊಂಡು ನುಡಿಕೊಡುವ ಸಂಪ್ರದಾಯ ಕರ್ನಾಟಕದ ಅನೇಕೆಡೆಗಳಲ್ಲಿ ಪ್ರಚಲಿತವಿದೆ. ಆದರೆ ಇಳಂತಾಜೆಯ ಆಂಜನೇಯ ನೇಮದಲ್ಲಿ ಹನುಮಂತ ಮೌನಿ. ಇತರ ದೈವಗಳಂತೆ ಆವೇಶವಿಲ್ಲ. ಸಿರಿ ಮುಡಿ ಇರುವುದಿಲ್ಲ. ತೆಂಗಿನ ತಿರಿಯ ಅಲಂಕಾರವಿಲ್ಲ. ಗಗ್ಗರವಿಲ್ಲ. ಅಣಿ ಇಲ್ಲ. ಆಯುಧವೂ ಇಲ್ಲ.

ಹನುಮಂತನ ನೇಮವನ್ನು ನಡೆಸುವ ಮನೆಯ ಯಜಮಾನ ಮತ್ತು ಭೂತ ಕಟ್ಟುವ ವ್ಯಕ್ತಿ  ೧೫ ದಿನಗಳ ಕಾಲ ಕಾಲ ವ್ರತಾಚರಣೆಯ ವಿಧಿ ನಿಯಮಗಳನ್ನು ಅನುಸರಿಸ ಬೇಕಾಗುತ್ತದೆ  ಹನುಮಂತ ಭೂvವನ್ನು ಕಟ್ಟುವ À ಮಾಧ್ಯಮನಿಗೆ ಹಿಂದಿನ ದಿವಸವೇ ಕಲಶ ಸ್ನಾನವಿರುತ್ತದೆ.ಕೊಭೂತದ ಕೋಲ ಡ ಹಿಂದಿನ ದಿವಸ ಊರಿನ ದೇವಸ್ಥಾನದಲ್ಲ್ಲಿ ಕಲಶ ಸ್ನಾನ ಮಾಡಿ ಬಳಿಕ ಹನುಮಂತ ಭೂತದ ಗುಡಿಗೆ ಬಂದು ನಮಸ್ಕಾರ ಮಾಡಿ ,ಕೋಲ ನೀಡುವ ಮನೆಯ ಹಿರಿಯರ ಪಾದಕ್ಕೆ ವಂದಿಸಿ ಅವರಾನತಿ ಪಡೆದು ಫಲಾಹಾರ ಸ್ವೀಕರಿಸುವ ವಿಧಿ ಇದೆ  ಕಲಶ ಸ್ನಾನದ ನಂತರ ಈತ ಸಂಪೂರ್ಣ ಮೌನವ್ರತವನ್ನು ಆಚರಿಸಬೇಕಾಗುತ್ತದೆ. ಆರಾಧನೆ ನಡೆಸುವ ಮನೆಯ ಯಜಮಾನ ಕೂಡ ಮೌನ ವ್ರತವನ್ನು ಪಾಲಿಸಬೇಕಾಗುತ್ತದೆ.  ಹನುಮಂತ ಭೂತ ಮಾಧ್ಯಮ ಕಲಶ ಸ್ನಾನದ ನಂತರ  ಮನೆಯ ಯಜಮಾನನ ಗದ್ದೆಯ ಸಮೀಪದ ತೊರೆಯೊಂದರ ಸಮೀಪದ ಕಲ್ಲಿನಲ್ಲಿ ಹಸಿ ಮಡಲಿನ ಮೇಲೆ ಮೌನವಾಗಿ ಕುಳಿತಿರ ಬೇಕು  .ಭೂತದ ವೇಷ ಕಟ್ಟುವುದು ಕೂಡ ಇಲ್ಲಿಯೇ . copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದತಲೆಗೊಂದು ನೆರೆತ ಕೂದಲಿನ ಅಲಂಕಾರ, ಸೊಂಟಕ್ಕೊಂದು ಬಾಲ, ಮೈಗೆ ಕಪ್ಪು ಬಣ್ಣ ಹಚ್ಚಿ, ಅನೇಕ ಬಿಳಿ ಚುಟ್ಟಿಗಳನ್ನು ಇಡುವಲ್ಲಿಗೆ ಹನುಮಂತ ದೈವದ ಅಲಂಕಾರ ಪೂರ್ಣವಾಗುತ್ತದೆ. ಮೈಮೇಲೆ ಅನೇಕ ಬಿಳಿ ಚುಟ್ಟಿಗಳಿರುವ ಕಾರಣದಿಂದಲೋ ಏನೋ ಈತನನ್ನು ಇಲ್ಲಿ ಸಾರ ಪುಳ್ಳಿದಾರ್ಎಂದೇ ಕರೆಯುತ್ತಾರೆ. ತುಳುನಾಡಿನ ದೈವಗಳು ಭೂತದ ಕೋಲದ ಕೊನೆಯಲ್ಲಿ ಭಕ್ತರಿಗೆ ಅರಸಿನ ನೀಡಿ ಅಭಯದ ನುಡಿ ಕೊಡುತ್ತವೆ .ಆದರೆ ಹನುಮಂತ ಭೂತ ಇಲ್ಲಿ ಅಭಯವನ್ನು ಸಂಜ್ಞೆಯ ಮೂಲಕ ನೀಡುತ್ತದೆ .ಈತನಿಗೆ ಸೀಯಾಳ ,ಬಾಲೆ ಹಣ್ಣುಗಳನ್ನು ಆವಾರ (ನೈವೇದ್ಯ ) ನೀಡುತ್ತಾರೆ . ಹನುಮಂತ ಭೂತಕ್ಕೆ ಬಂದ ಹರಿಕೆಯ ವಸ್ತುಗಳಾದ ಅಡಿಕೆಯ ಗೊನೆ ಬಾಳೆಗೊನೆ ಸೀಯಾಳ ಮೊದಲಾದವುಗಳನ್ನು ತಲೆಯ ಮೇಲಿನಿಂದ ಹಿಂಭಾಗಕ್ಕೆ ಎಸೆಯುತ್ತಾರೆ .ಈ ಭೂತಕ್ಕೆ ಪಾಡ್ದನ ಹೇಳುವುದಿಲ್ಲ ಆದ್ದರಿಂದ ಹನುಮಂತ ಭೂತದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವುದಿಲ್ಲ .ಹನುಮಂತ ಭೂತ ಕಟ್ಟಿದ ವ್ಯಕ್ತಿ ಗದ್ದೆಗೆ ಬಾಗಿರುವ ಮರವೊಂದನ್ನು ಏರಿ ಅಲ್ಲಿಂದ ಎಲೆಗಳನ್ನು ಕಿತ್ತು ಹಾಕುವ ಸಂಪ್ರದಾಯ ಇಲ್ಲಿದೆ .ಆಂಜನೇಯ ಸ್ವಾಮಿ/ಹನುಮಂತ ಭೂತ ಎಷ್ಟು ಎಲೆಗಳನ್ನು ಕಿಟ್ಟು ಹಾಕುತ್ತದೆಯೋ ಅಷ್ಟು ಪ್ರಮಾಣದ ಬತ್ತ ಬೆಳೆಯುತ್ತದೆ ಎಂಬ ನಂಬಿಕೆ ಇದೆ .ಹನುಮಂತ ಕೋಲ ನಡೆಸುವ ಇಳನ್ತಾಜೆ ಕುಟುಂಬದವರಿಗೆ ಹನುಮಂತ  ಕುಲ ದೈವವಲ್ಲ. ಪಿಲಿ(ಹುಲಿ) ಭೂತ ಇವರ ಕುಲ ದೈವ .ಆದರು ಇವರು ಹನುಮನ್ತನನ್ನು ಅನನ್ಯ ಭಕ್ತಿಯಿಂದ ಆರಾಧಿಸುತ್ತಾರೆ copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

ಈ ದೈವವನ್ನು ಹನುಮಂತ ಅಥವಾ ಆಂಜನೇಯ ಎಂದು ಹೇಳುವ ಬದಲು ಸಾರಪುಳ್ಳಿದಾರ್ಎಂದು ಕರೆಯುವುದು ತುಸು ಗಮನಾರ್ಹವಾದ ವಿಚಾರವಾಗಿದೆ.

ಈ ದೈವ ನಿಜವಾಗಿಯೂ ರಾಮಾಯಣದಲ್ಲಿ ಉಕ್ತವಾದ ಹನುಮಂತನೆಯೆ?ಅಥವಾ ಜನಪದರ ದೈವತವೆ? ಈತ ಪುರಾಣ ಮೂಲ ದೈವವಾಗಿದ್ದರೆ ಇತರ ಪುರಾಣ ಮೂಲ ದೈವಗಳಂತೆ ವೈಭವದ ವೇಷ ಭೂಷಾದಿಗಳನ್ನು, ಆಚರಣೆಗಳನ್ನೇಕೆ ಹೊಂದಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ. ಇಳಂತಾಜೆ ಕುಟುಂಬದ ಕುಲದೈವ ಪಿಲಿ ಭೂತ ಆಗಿದ್ದರೂ ಕೂಡ ಆಂಜನೇಯನನ್ನು ಆರಾಧಿಸುತ್ತಾರೆ. ತುಳುನಾಡಿನಲ್ಲಿ ಯಾವ ಕುಟುಂಬಕ್ಕೂ ಆಂಜನೇಯ ಕುಲದೈವವಲ್ಲ. ಪುರಾಣೋಕ್ತ ಹನುಮಂತ ಉತ್ತಮ ವಾಗ್ಮಿ, ಕೆಲವೆಡೆಗಳಲ್ಲಿ ಹನುಮಂತ ಮೈಯಲ್ಲಿ ಬಂದು ನುಡಿ ಕೊಡುವ ಸಂಪ್ರದಾಯ ಪ್ರಚಲಿತವಿದೆ. ಹನುಮಂತನಿಗೆ ಪುಳ್ಳಿಗಳು ಕೂಡ ಇಲ್ಲ. ಆದರೆ ಇಲ್ಲಿಯ ಹನುಮಂತ ಬಂಟ ದೈವದಂತೆ ಮೌನಿ. ಈತನಿಗೆ ಮೈ ತುಂಬ ಪುಳ್ಳಿಗಳ ಚಿತ್ತಾರವಿದೆ. ಈ ದೈವದ ವೇಷ ಭೂಷಣಗಳು ಮಾನವ ಮೂಲದ ಕೆಳ ವರ್ಗದಲ್ಲಿ ಹುಟ್ಟಿ ದೈವತ್ವಕ್ಕೇರಿದ ದೈವಗಳನ್ನು ಹೋಲುತ್ತದೆ. ಈ ದೈವವು ಪೂಕರೆ ಕಂಬಳದ ಗದ್ದೆಯ ಬದಿಯಲ್ಲಿರುವ ಮರವೊಂದನ್ನು ಹತ್ತಿ ರೆಂಬೆಗಳನ್ನು ಎಲೆಗಳನ್ನು ಕಿತ್ತು ಹಾಕುವ ಸಂಪ್ರದಾಯ ಇಲ್ಲಿ ಪ್ರಚಲಿತವಿದೆ. ಈ ಕಾರ್ಯವು ಮೂಲದ ಕೆಲಸಗಾರನ ಕಾರ್ಯವಾಗಿದ್ದು ಈ ದೈವ ಮೂಲದ ಕೆಲಸಗಾರನನ್ನು ನೆನಪಿಸುತ್ತದೆ. copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಈಜೋ ಮಂಜೊಟ್ಟಿ ಪಾಡ್ದನ ಹಾಗೂ ಕಂಬಳಗಳ ಐತಿಹ್ಯಗಳಲ್ಲಿ ಮೂಲದ ಮಾಣಿ ಇಳಿಯಬಾರದ ಸತ್ಯದ ಕಂಬಳಕ್ಕೆ ಇಳಿದು ಮಾಯವಾಗಿ ದೈವತ್ವಕ್ಕೇರುವ ಕಥಾನಕವಿದೆ. ಅಂತೆಯೇ ಇರಂತಾಜೆಯಲ್ಲಿ ಕೂಡ ಅಂಥಹದ್ದು ಏನಾದರೂ ಸಂಭವಿಸಿರಬಹುದೇ? ಮೂಲದ ಕೆಲಸಗಾರ ಮರದಿಂದ ಸೊಪ್ಪು ಕಡಿಯುವಾಗ ಬಿದ್ದು ಅಥವಾ ಇನ್ನೇನಾದರೂ ಕಾರಣಕ್ಕೆ ದುರಂತವನ್ನಪ್ಪಿ ದೈವತ್ವಕ್ಕೇರಿರಬಹುದೇ? ಮರಹತ್ತಿ ಎಲೆಗಳನ್ನು ಕೀಳುವ ಕಾರಣ ಆ ದೈವವನ್ನು ಹನುಮಂತನೆಂದು ಪರಿಭಾವಿಸಿರುವ ಸಾಧ್ಯತೆ ಇಲ್ಲದಿಲ್ಲ..ಅಥವಾ ಇತರೆಡೆಗಳಲ್ಲಿ ಹನುಮಂತ ಜನಪದ ದೇವತೆಯಾಗಿರುವಂತೆ ಇಲ್ಲಿ ಕೂಡ ಈತ ತುಳು ಜನಪದ ಸಂಪ್ರದಾಯದಂತೆ ಭೂತದ ರೂಪದಲ್ಲಿ ಆರಾಧಿಸಲ್ಪಡುತ್ತಿರಬಹುದು copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದ

ಓ ಗಾಳಿಗಪ್ಪಾ ಪೋಪುಂದೋ ಗಾಳಿದ ಇಲ್ಲೂ (ಗೋಳಿದ ಗೆಲ್ಲೂ )

ಓ ಜಾಲುದಪ್ಪಾ ನೈಪ್ಪುಲೇ ಜಾಲುದಾ ದಿಕ್ಕ

ಕನ್ನಡ ಅನುವಾದ :

ಓ ಗಾಳಿಗಪ್ಪ ಹೋಗುತ್ತದೆ ಗಾಳಿಯ ಮನೆಗೆ (ಗೋಳಿಯ ಗೆಲ್ಲಿಗೆ )

ಓ ಅಂಗಳದವನು ಕುಣಿಯಿರಿ ಅಂಗಳದ ದಿಕ್ಕ

ಎಂಬ ಉರಲ್ ತುಳುವರಲಿ ಪ್ರಸಿದ್ಧವಿದೆ. ಇಲ್ಲಿ ಹೇಳುವ ಗಾಳಿಗಪ್ಪ ದೇವರು ಯಾರೆಂದು ತಿಳಿದಿಲ್ಲ ಬಹುಶ ಹನುಮಂತನೇ ಗಾಳಿಗಪ್ಪ ಇರುವ ಸಾಧ್ಯತೆ ಇದೆ ..ಸುಳ್ಯ ತಾಲೂಕಿನ ಮಡಪ್ಪಾಡಿಯಲ್ಲಿ ಜಂಗ ಬಂಟ ಎಂಬ ವಿಶಿಷ್ಟ ಭೂತದ ಆರಾಧನೆ ಇದೆ .ಈತನನ್ನು ಕೂಡ ಹನುಮಂತನ ಅವತಾರ ಎಂದು ಜನರು ನಂಬುತ್ತಾರೆ .copy rights reserved (C)ಡಾ.ಲಕ್ಷ್ಮೀ ಜಿ ಪ್ರಸಾದಏನೇ ಆದರು ಇಲ್ಲಿ ಹನುಮಂತ ಭೂತ ಗದ್ದೆಯ ಬೆಳೆಯ ರಕ್ಷಣೆ ಮಾಡುವ ದೈವ .ಜನರಿಗೆ ರಕ್ಷಣೆಯನ್ನು ಕೊಡುವ ಪ್ರಿಯ  ದೈವತವಾಗಿ ಆರಾಧಿಸಲ್ಪಡುತ್ತಾನೆ .ಕಳಸದಲ್ಲಿ ಶ್ರೀ ವೀರ ಹನುಮಂತ ದೈವಕ್ಕೆ ನೇಮೋತ್ಸವ ಇದೆ ಎಂಬ ಮಾಹಿತಿ ಫೇಸ್ ಬುಕ್ (ಧರ್ಮ ದೈವ )ಮೂಲಕ ಸಿಕ್ಕಿದೆ