Sunday 21 September 2014

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ ಸಾವಿರದೊಂದು ಗುರಿಯೆಡೆಗೆ-ಡಾ.ವಾಮನ ನಂದಾವರ ,ಹಿರಿಯ ಸಂಶೋಧಕರು

ಬರ್ನೆಲ್ ಮೇನ್ನರ್ ತೋರಿಸಿದ ಹಾದಿಯಲ್ಲಿ
                                                                    ಸಾವಿರದೊಂದು ಗುರಿಯೆಡೆಗೆ
ಡಾ. ಲಕ್ಷ್ಮೀ ವಿ. ಅವರ ‘ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ವು ಡಾ. ಎಸ್. ನಾಗರಾಜು ಅವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ 2009ರ ಸಾಲಿನ ಪಿಎಚ್.ಡಿ. ಪದವಿಗಾಗಿ, ಬೆಂಗಳೂರಿನ ಬಿ. ಎಂ. ಶ್ರೀ ಸ್ಮಾರಕ ಪ್ರತಿಷ್ಠಾನದ ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನ ಕೇಂದ್ರದ ಮೂಲಕ ಸಲ್ಲಿಸಿದ ಸಂಪ್ರಬಂಧವಾಗಿದೆ. ಜನಪದ ಸಂಸ್ಕೃತಿ ಸಂಶೋಧನೆಯಲ್ಲಿ ಇದೊಂದು ಮಹತ್ವದ ಮಹಾ ಪ್ರಬಂಧವಾಗಿದ್ದು ಇದೀಗ ಅದು ಪ್ರಕಟವಾಗಿ ಬರುತ್ತಿರುವುದು ಅತ್ಯಂತ ಶ್ಲಾಘನೀಯವಾದುದು.
ಇದರಲ್ಲಿ ಹತ್ತು ಅಧ್ಯಾಯಗಳು ಮತ್ತು ಅನುಬಂಧದ ಪುಟಗಳಿವೆ. ಪ್ರಸ್ತಾವನೆಯ ಮೊದಲನೆಯ ಅಧ್ಯಾಯಲ್ಲಿ ತುಳುನಾಡಿನ ಭೌಗೋಳಿಕ ಎಲ್ಲೆಗಳ ಮತ್ತು ತುಳುನಾಡಿನ ಸಂಸ್ಕೃತಿಯ ಕುರಿತು ಹೇಳಲಾಗಿದೆ. ಈ ಕ್ಷೇತ್ರದಲ್ಲಿ ಈ ತನಕ ನಡೆದಿರುವ ಕೆಲಸ, ಅಧ್ಯಯನದ ವ್ಯಾಪ್ತಿ, ಉದ್ದೇಶ, ವಿಧಾನಗಳ ಕುರಿತು ತಿಳಿಸಲಾಗಿದೆ. ನಾಗಬ್ರಹ್ಮ ಪರಿಕಲ್ಪನೆಯ ಎರಡನೆಯ ಅಧ್ಯಾಯದಲ್ಲಿ ತುಳುವರ ಆರಾಧ್ಯ ದೈವ ಬೆರ್ಮೆರ್ ಪ್ರಾಚೀನತೆ, ಸ್ವರೂಪ, ಮಹತ್ವ, ಬೆರ್ಮೆರ್ ಪದದ ಅರ್ಥ ಪರಿಕಲ್ಪನೆ, ಬೆರ್ಮೆರ್ ಸೃಷ್ಟಿಯ ಮೂಲ ಮತ್ತು ವೈಶಿಷ್ಟ್ಯ, ಸೃಷ್ಟಿಕರ್ತ ಬೆರ್ಮೆರ್, ಆಲಡೆ ಮತ್ತು ಗರಡಿ ಬೆರ್ಮೆರ್, ಭೂತಬ್ರಹ್ಮ, ಯಕ್ಷಬ್ರಹ್ಮ ಮತ್ತು ನಾಗಬ್ರಹ್ಮ ಪರಿಕಲ್ಪನೆಯ ಮೂರ್ತಿಗಳು ಮೊದಲಾದುವುಗಳ ಕುರಿತು ಸಾಕಷ್ಟು ಅಧ್ಯಯನ ನಡೆದಿದೆ. ಭೂತಾರಾಧನೆಯ ಪ್ರಾಚೀನತೆಗೆ ಕಾರ್ಕಳದ ಕಾಂತೇಶ್ವರ ದೇವಾಲಯದ ಕ್ರಿ.ಶ. 1379ರ ಶಾಸನದಲ್ಲಿರುವ ‘ದೈವಕ್ಕೆ ತಪ್ಪಿದವರು’ ಎಂದಿರುವ ದಾಖಲೆಯನ್ನು ಅಧ್ಯಯನಕಾರರು ಇಲ್ಲಿ ಉಲ್ಲೇಖಿಸಿದ್ದಾರೆ.
ನಾಗಬ್ರಹ್ಮ ಸೇರಿಗೆಯ ಮೂರನೆಯ ಅಧ್ಯಾಯದಲ್ಲಿ ಆಲಡೆ ಸಂಕೀರ್ಣದ ದೈವಗಳಾದ ಬ್ರಹ್ಮ ಲಿಂಗೇಶ್ವರ, ರಕ್ತೇಶ್ವರಿ, ನಾಗ, ನಂದಿಗೋಣ, ಉಲ್ಲಾಯ, ಖಡ್ಗೇಶ್ವರಿ, ಸಿರಿಗಳು, ಕುಮಾರ, ಪಂಜುರ್ಲಿ, ಅಡ್ಕತ್ತಾಯ, ಧೂಮವತಿ, ಗೆಜ್ಜೆಕತ್ತಿರಾವಣ, ಬ್ರಹ್ಮಸ್ಥಾನದಲ್ಲಿ ಆರಾಧನೆಗೊಳ್ಳುವ ದೈವಗಳಾದ ಬೆರ್ಮೆರ್, ನಂದಿಗೋಣ, ರಕ್ತೇಶ್ವರಿ, ನಾಗ, ಭೈರವ, ಗರಡಿ ಸಂಕೀರ್ಣದ ದೈವಗಳಾದ ಬ್ರಹ್ಮ, ಕೋಟಿಚೆನ್ನಯ, ಕಿನ್ನಿದಾರು, ಮಾಯಂದಾಲ್, ಕುಜುಂಬಕಾಂಜ, ಒಕ್ಕುಬಲ್ಲಾಳ, ಜೋಗಿಪುರುಷ, ಶಕ್ತಿ ದೇವತೆಗಳು, ಮುಗೇರ್ಲು ಸಂಕೀರ್ಣ ದೈವಗಳಾದ ಎಣ್ಮೂರು ದೆಯ್ಯು, ಕೆಲತ ಪೆರ್ನಲೆ, ತನ್ನಿಮಾಣಿಗ ದೈವಗಳಬಗೆಗೆ ಅಧ್ಯಯನ ನಡೆದಿದೆ. ಇಲ್ಲಿ ಡಾ. ಲಕ್ಷ್ಮೀ ವಿ. ಅವರು ಪ್ರಾದೇಶಿಕ ವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ಗುರುತಿಸಿದ್ದಾರೆ. ಮುದ್ದ ಕಳಲ ಮತ್ತು ಮಾನ್ಯಲೆ ಪೆರ್ನಲೆ ಎನ್ನುವುದು ಎಣ್ಮೂರು ದೆಯ್ಯು ವೀರರಿಗಿರುವ ಪ್ರಾದೇಶಿಕ ಹೆಸರುಗಳು.
ನಾಗಬ್ರಹ್ಮ ಆರಾಧನಾ ಪ್ರಕಾರಗಳ ನಾಲ್ಕನೆಯ ಅಧ್ಯಾಯದಲ್ಲಿ ವೈದಿಕ ಮೂಲ ಪ್ರಕಾರಗಳನ್ನು ಮತ್ತು ತಾಂತ್ರಿಕ ಮೂಲ ಪ್ರಕಾರಗಳನ್ನು, ಜನಪದ ಮೂಲ ಪ್ರಕಾರಗಳನ್ನು ದಾಖಲಿಸುತ್ತಾ ಸರ್ಪ ಸಂಸ್ಕಾರ, ನಾಗಪ್ರತಿಷ್ಟಾಪನೆ, ಬ್ರಹ್ಮ ಸಮಾರಾಧನೆ, ಸುಬ್ರಹ್ಮಣ್ಯ, ಮೂರಿಳು, ಸರ್ಪಂತುಳ್ಳಲ್, ಸರ್ಪಂಕಳಿ ಮೊದಲಾದ ಮೂವತ್ತೊಂದು ವಿಧದ ಆರಾಧನಾ ವೈವಿಧ್ಯ ಲೋಕವನ್ನು ಪರಿಚಯಿಸಿರುವುದು ಈ ಅಧ್ಯಯಯನದ ಹೆಚ್ಚುಗಾರಿಕೆ. ವೇದೇತಿಹಾಸ ಪುರಾಣಗಳ ನಾಗಬ್ರಹ್ಮ ಎಂಬ ಐದನೆಯ ಅಧ್ಯಾಯದಲ್ಲಿ ನಾಗ-ಗರುಡಾವತಾರ, ಜರತ್ಕಾರು ವಿವಾಹ ಮೊದಲಾದುವುಗಳನ್ನು ಚರ್ಚಿಸಿದ್ದಾರೆ.
ತುಳು ಜನಪದ ಸಾಹಿತ್ಯದ ನಾಗಬ್ರಹ್ಮ ಎನ್ನುವ ಆರನೆಯ ಅಧ್ಯಾಯದಲ್ಲಿ ಸಿರಿ ಪಾಡ್ದನದಲ್ಲಿ ಬರುವ ಲಂಕೆ ಲೋಕನಾಡಿನ ಬೆರ್ಮೆರ್, ಕೋಟಿಚೆನ್ನಯ ಪಾಡ್ದನದಲ್ಲಿ ಬರುವ ಬೆರ್ಮೆರ್, ಮುಗೇರ್ಲು ಪಾಡ್ದನದಲ್ಲಿ ಬರುವ ಬೆರ್ಮೆರ್ ಮೊದಲಾದ ಬ್ರಹ್ಮರ ಪರಿಕಲ್ಪನೆಗಳ ಕುರಿತು ಅಧ್ಯಯನ ನಡೆಸಿದ್ದಾರೆ.
ಅಧ್ಯಾಯ ಏಳರಲ್ಲಿ ಕಂಬಳದ ಪ್ರಾಚೀನತೆ, ಕಂಬಳ ಪದದ ನಿಷ್ಪತ್ತಿ, ಕಂಬಳದ ಮಹತ್ವ ಮೌಖಿಕ ಪರಂಪರೆಯಲ್ಲಿ ಕಂಬಳ, ಕಂಬಳದ ಪ್ರಕಾರಗಳು, ಕಂಬಳದಲ್ಲಿ ದೈವಾರಾಧನೆ ಮೊದಲಾದುವುಗಳ ಕುರಿತ ಅಧ್ಯಯನವಿದೆ.
ಅಧ್ಯಾಯ ಎಂಟರಲ್ಲಿ ಕಂಬಳಕೋರಿ ನೇಮ ಮತ್ತು ಆ ಹೊತ್ತು ಅಲ್ಲಿ ನಡೆಯುವ ‘ಒಂದು ಕುಂದು ನಲುವತ್ತು ದೈವಗಳು’, ಕಿನ್ನಿಮಾಣಿ ಪೂಮಾಣಿ, ಕೋಮರಾಯ, ಬಬ್ಬರ್ಯ, ಪಂಜುರ್ಲಿ, ಕಲ್ಕುಡ-ಕಲ್ಲುರ್ಟಿ, ರಕ್ತೇಶ್ವರಿ ಮೊದಲಾದ ದೈವಗಳ ವೈವಿಧ್ಯ ವೈಶಿಷ್ಟ್ಯಗಳ ನಿರೂಪಣೆಯಿದೆ.
ಬೆರ್ಮೆರ್ ಆರಾಧನೆಯ ಮೇಲೆ ಇತರ ಸಂಪ್ರದಾಯಗಳ ಪ್ರಭಾವ ಎನ್ನುವ ಒಂಬತ್ತನೆಯ ಅಧ್ಯಾಯದಲ್ಲಿ ಬೆರ್ಮೆರ್ ಆರಾಧನೆಯ ಮೇಲೆ ಯಕ್ಷಾರಾಧನೆಯ ಪ್ರಭಾವ, ಬ್ರಹ್ಮಯಕ್ಷ-ಬೆರ್ಮೆರ್, ಅರಸು ಆರಾಧನೆ, ವೀರ ಆರಾಧನೆ, ನಾಥ ಸಂಪ್ರದಾಯ ಮತ್ತು ನಾಗ ಬ್ರಹ್ಮ ಹಾಗು ಇವುಗಳ ಮೇಲೆ ಬೇರೆ ಬೇರೆ ಸಂಪ್ರದಾಯಗಳ ಪ್ರಭಾವಗಳ ವಿವರಗಳನ್ನು ನೀಡಿದ್ದಾರೆ.
ಹತ್ತನೆಯ ಅಧ್ಯ್ಯಾಯ ಉಪಸಂಹಾರದಲ್ಲಿ ತಮ್ಮ ಅಧ್ಯಯನದ ನಿಲುವನ್ನು ಮಂಡಿಸಿ ಸಮರ್ಥನೆ ನೀಡಿದ್ದಾರೆ. ಪೆರಿಯಾರ್>ಬೆರ್ಮೆರ್> ಬೆರ್ಮೆ>ಬ್ರಮ್ಮೆ>ಬ್ರಹ್ಮ ಆಗಿರಬಹುದಾದುದನ್ನು ಗುರುತಿಸುವ ಕೆಲಸ ಆಗಬೇಕಾಗಿದೆ.
ಮಹಾಬಲಿ, ಬಲೀಂದ್ರ, ಮಹಿಷಾಸುರ, ಭರಮ, ಸುಬ್ರಹ್ಮಣ್ಯ, ಸುಬ್ಬಯ, ಕಾಡ್ಯನಾಟದ ಸ್ವಾಮಿ, ಮಡಿಕೆಯಲ್ಲಿ ಬೆರ್ಮೆರ್, ಕಾಳಭೈರವ, ಕುಂಡೋದರ ಭೂತ, ತುಳುನಾಡನ್ನು ಆಳಿದ ಪ್ರಾಚೀನ ಅರಸ, ಪೆರುಮಾಳ, ಪುರಾತನ ಹಿರಿಯ, ಬೆರ್ಮೆರ್ ರಾಜನಾಗಿದ್ದನೇ ?, ‘ಒಂಜಿಕುಂದು ನಲ್ಪ, ಸಾರತ್ತೊಂಜಿ ದೈವೊಲು ಇದೊಂದು ನೆಲೆ, ಸ್ತರ, ಪರಿಪೂರ್ಣತೆಯ ಹಂತ. ಅದು 39 ಏಕೆ? 1001 ಏಕೆ? ಅಧ್ಯಯನ ಆಗಬೇಕು.
ಡಾ. ಲಕ್ಷ್ಮೀ ವಿ. ತಮ್ಮ ಅಧ್ಯಯನದ ಕ್ಷೇತ್ರಕಾರ್ಯ ವಿವರಗಳನ್ನು ಸಮಗ್ರವಾಗಿ ನೀಡಿದ್ದಾರೆ. ವಿಸ್ತೃತ ಓದಿನ ಆಕರ ಸೂಚಿಯನ್ನು ಮುಂದಿಟ್ಟಿದ್ದಾರೆ. ಸಾಕಷ್ಟು ನೆರಳು ಬೆಳಕಿನ ವರ್ಣಚಿತ್ರಗಳನ್ನು ಹಾಗೂ 38 ಆಚರಣೆಗಳ ಆಡಿಯೋ-ವೀಡಿಯೋ ಸಂಗ್ರಹ ಮಾಹಿತಿ ಒದಗಿಸಿದ್ದಾರೆ. ನಾಗ ಬೆರ್ಮೆರ್ ಪಾಡ್ದನದ ಮೂರು ಪಾಠಗಳನ್ನು ಹಾಗು ಕಂಬಳ ಸಂಬಂಧಿ ‘ಈಜೊ ಮಂಜೊಟ್ಟಿ ಗೋಣ’ಪಾಡ್ದನಪಠ್ಯ ಸಂಗ್ರಹಿಸಿ ಅದರ ಕನ್ನಡ ಅನುವಾದವನ್ನೂ ಕೊಟ್ಟಿದ್ದಾರೆ. ಪೂಕರೆ ನೇಮ ಒಂದೆಡೆಯಲ್ಲ ಕೋಳ್ಯೂರು, ನಡಿಬೈಲು, ಅನಂತಾಡಿ, ಬಂಟ್ವಾಳದ ಬೀರೂರು, ಕೊಡ್ಲಮೊಗರು, ಅರಿಬೈಲು, ಕಾಸರಗೋಡಿನ ಚೌಕಾರು(ಅದೂ ಮೂರು ದಿನಗಳಲ್ಲಿ ಒಂದೇ ಊರಲ್ಲಿ). ಹಾಗೆಯೇ ನಿಡಿಗಲ್ ಲೋಕನಾಡು ಮೊದಲಾದ ಹತ್ತು ಹದಿನಾಲ್ಕು ಬ್ರಹ್ಮ ಆಲಡೆಗಳನ್ನು ಸಂದರ್ಶನ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಹತ್ತಾರು ಗರೊಡಿಗಳನ್ನು ಭೇಟಿಮಾಡಿದ್ದಾರೆ. ಹೀಗೆ ಆಸಕ್ತಿ, ಕುತೂಹಲ ಮತ್ತು ಹುಡುಕಾಟದ ಬೆನ್ನು ಹತ್ತುವ ಚಪಲದ ನೆಲೆಗಳನ್ನು ಮೀರಿ ಡಾ. ಲಕ್ಷ್ಮೀ ಅವರು ತಮ್ಮ ಅಧ್ಯಯನದ ಒಳನೋಟಗಳನ್ನು ನೀಡುವ ಪ್ರಯತ್ನ ನಡೆಸಿದ್ದಾರೆ.
ಅರಸು ಆರಾಧನೆ, ಪಿತೃ ಆರಾಧನೆ, ಭೂತಾರಾಧನೆ, ನಾಗಾರಾಧನೆ, ಯಕ್ಷಾರಾಧನೆ ಹಾಗೂ ಬಲೀಂದ್ರ ಅರಾಧನೆಗಳ ಸಮನ್ವಯ ನಾಗಾರಾಧನೆಯಲ್ಲಿ ಕಾಣಿಸುತ್ತದೆ ಎನ್ನುವ ನಿಲುವು ತಳೆದಿದ್ದಾರೆ. ಇಲ್ಲೆಲ್ಲ ಎಲ್ಲೂ ಬೆರ್ಮೆರ್ ಯಾರು ಏನು, ನಾಗ ಬೆರ್ಮೆರ್ ಯಾರು? ಭೂತಗಳ ಅಧಿಪತಿಯೇ ? ಎಂದೆಲ್ಲ ಅಂತಿಮ ನಿಲುವಿಗೆ ಅವರು ಬಂದಿಲ್ಲ. ಅದು ದೋಷ ಅಲ್ಲ, ಸಂಶೋಧನೆಯ ಗುಣ.ಅವಸರಿಸದಿರುವುದು ಚರ್ಚೆಗಳಿಗೆ ಆಹ್ವಾನ ನೀಡಿದಂತೆ. 



ಜನಪದ ಸಂಸ್ಕೃತಿಯ ಅಧ್ಯಯನಾಂಶಗಳನ್ನು ಸೋಜಿಗಪಡುವ ಹಾಗೆ ಒಂದೆಡೆ ರಾಶಿ ಹಾಕಿ ಸಂಶೋಧನಾ ಸಾಧ್ಯತೆಗಳನ್ನು ತೆರೆದು ತೋರಿಸಿದ್ದಾರೆ.ಇದೇ ಕಾಲಕ್ಕೆ ಇಲ್ಲಿ ಡಾ. ಲಕ್ಷ್ಮೀ ಅವರಿಗೆ ತಮ್ಮ ಸಂಪ್ರಬಂಧದ ಸಂರಚನೆಗೆ ಬೇಕಾದ ಚೌಕಟ್ಟು ಈ ಮೊದಲೇ ಸಿದ್ಧವಾಗಿತ್ತು ಎನ್ನುವ ಇನ್ನೊಂದು ಬಹು ಮುಖ್ಯವಾದ ಅಂಶದ ಕಡೆಗೆ ಗಮನ ಕೊಡಬೇಕಾಗಿದೆ.
ನೂರಕ್ಕೂ ಹೆಚ್ಚು ಕಥೆ, ವೈಚಾರಿಕ ಲೇಖನಗಳು, ಅಂಕಣ ಬರಹಗಳು ಮೊದಲಾದ ಸಾಹಿತ್ಯ ಮತ್ತು ಸಂಶೋಧನ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಡಾ. ಲಕ್ಷ್ಮಿ ವಿ. ಅವರು ಅರಿವಿನಂಗಳದ ಸುತ್ತ(ಶೈಕ್ಷಣಿಕ ಬರೆಹಗಳು), ಮನೆಯಂಗಳದಿ ಹೂ(ಕಥಾಸಂಕಲನ), ದೈವಿಕ ಕಂಬಳ ಕೋಣ (ತುಳು ಜಾನಪದ ಸಂಶೋಧನೆ), ಸುಬ್ಬಿ ಇಂಗ್ಲೀಷ್ ಕಲ್ತದು(ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ), ತುಂಡುಭೂತಗಳು: ಒಂದು ಅಧ್ಯಯನ, ಕನ್ನಡ-ತುಳು ಜನಪದ ಕಾವ್ಯಗಳಗಳಲ್ಲಿ ಸಮಾನ ಆಶಯಗಳು, ತುಳು ಪಾಡ್ದನಗಳಲ್ಲಿ ಸ್ತ್ರೀ, ಪಾಡ್ದನಸಂಪುಟ, ತುಳುವ ಸಂಸ್ಕಾರಗಳು ಮತ್ತು ವೃತ್ತಿಗಳು ಎಂಬ ಐದು ಕೃತಿಗಳನ್ನು ಏಕಕಾಲಕ್ಕೆ ಪ್ರಕಟಿಸುವ ಸಾಹಸ ಮಾಡಿದವರು.
 

ಹಾಗೆಯೇ ಮುಂದಿನ ಸರದಿಯಲ್ಲಿ, ತುಳುನಾಡಿನ ಅಪೂರ್ವ ಭೂತಗಳು, ಬೆಳಕಿನೆಡೆಗೆ ಸಂಶೋಧನಾ ಲೇಖನಗಳು. ತುಳು ಜನಪದ ಕವಿತೆಗಳು ಚಂದಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು, ಕಂಬಳ ಕೋರಿ ನೇಮ(ತುಳು ಜಾನಪದ ಸಂಶೋಧನೆ) ಮತ್ತೊಂದು ಕಂತಿನ ಐದು ಪುಸ್ತಕಗಳನ್ನು ಪ್ರಕಟಿಸುವ ಧೈರ್ಯ ಮಾಡಿದವರು. ಹೀಗೆ ಒಟ್ಟು ಹದಿನಾಲ್ಕು ಕೃತಿಗಳು (ಮತ್ತೆ ಐದು ಕೃತಿಗಳು ಅಚ್ಚಿನಲ್ಲಿವೆ) ಇವರ ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷನಾತ್ಮಕ ಅಧ್ಯಯನಕ್ಕೆ ದೊಡ್ಡ ಗಂಟಿನ ಮೊದಲ ಬೌದ್ಧಿಕ ಬಂಡವಾಳವಾಗಿರುವುದು ನಿಜ.
 

ವಾಸ್ತವವಾಗಿ ಭೌತಿಕ ಶರೀರಕ್ಕೆ ಎರಡೆರಡು ಕೈಕಾಲುಗಳು ಹೇಗೋ, ಹಾಗೆ ಇವರು ಗಟ್ಟಿಯಾಗಿದ್ದಾರೆ. ಹಾಗೆಯೇ ಅಂಗೈಗೆ ಐದು ಬೆರಳುಗಳ ಹಾಗೆ ಒಂದು ಹಿಡಿಗೆ ಹದವಾಗಿದ್ದಾರೆ. ಹೇಗೆ ಅಂಗೈಗೆ ಐದು ಬೆರಳುಗಳ ಸಂಯೋಜನೆಯ ಸಹಕಾರ ಒಂದು ಹಿಡಿತಕ್ಕೆ ಕಾರಣವಾಗುವುದೋ ಹಾಗೆ ಇಲ್ಲಿ ಒಂದೊಂದು ಹಿಡಿಯಷ್ಟು ಕೆಲಸಗಳು ಸಾಧ್ಯವಾಗಿದೆ. ಇದು ನಿಜಕ್ಕೂ ಈ ಹೆಣ್ಣುಮಗಳ ಸಾಹಸವೇ ಸರಿ. ಇಂತಹ ಸಂಶೋಧನೆಯ ಮತ್ತು ಗ್ರಂಥಗಳ ಪ್ರಕಟಣೆಯ ಕೆಲಸಗಳಿಗೆ ಕೇವಲ ಅಧ್ಯಯನ ಆಸಕ್ತಿ ಮಾತ್ರ ಇದ್ದರೆ ಸಾಕಾಗುವುದಿಲ್ಲ ಜೊತೆಗೆ ಉತ್ಸಾಹ ಮತ್ತು ಛಲಗಳ ಮನೋಧರ್ಮದ ದೃಢ ಸಂಕಲ್ಪವೂ ಬೇಕು. ಜೊತೆಗೆ ಧೈರ್ಯವೂ ಬೇಕು. ಇರುವ ಮತ್ತು ಸಿಗುವ ಅವಕಾಶಗಳ ಸದುಪಯೋಗಕ್ಕಾಗಿ ಅವರ ಮನಸ್ಸು ಸದಾ ತುಡಿಯುತ್ತಲೂ ಇರಬೇಕು. ಇಲ್ಲದೆ ಹೋದರೆ ಬೌದ್ಧಿಕ ರಂಗದಲ್ಲಿ ಅಧ್ಯಯನ ಸಾಧನೆಯ ಉತ್ಪನ್ನಗಳು, ಸಾರಸ್ವತಲೋಕದಲ್ಲಿ ಸಾಧನೆಗಳು ಲಭ್ಯವಿರುವುದಿಲ್ಲ.
 

ತರಗತಿಯಲ್ಲಿ ಕಲಿಸುವ ಜೊತೆಯಲ್ಲೇ ಅಧ್ಯಾಪನ. ಪ್ರಾಧ್ಯಾಪನ ಕಾಯಕದಲ್ಲಿ ಕಲಿಯುವ ಅವಕಾಶಗಳೂ ಹೇರಳ. ಇಂತಹ ಸಂದರ್ಭಗಳನ್ನು ಹಗುರವಾಗಿ ಕಾಣದೆ ಲಕ್ಷ್ಮೀಯಂತಹವರು ಗಂಭೀರವಾಗಿ ತೆಗೆದುಕೊಳ್ಳವುದರಿಂದಲೇ ಈ ತರದ ಕೆಲಸಗಳು ಸಾಧನೆಯಾಗಿ ಪರಿವರ್ತನೆಗೊಳ್ಳುತ್ತವೆ. ಇಲ್ಲಿ ಕೆಲಸ ಮತ್ತು ಬಿಡುವು ಪರಸ್ಪರ ಹೊಂದಾಣಿಕೆಯಲ್ಲೇ ಸಾಗುತ್ತಿರುತ್ತವೆ. ಹಾಗಿದ್ದಾಗಲೇ ಕಟ್ಟುವ ಕೆಲಸ ನಡೆದು ಉತ್ಪನ್ನದ ಸಾಧನೆಯಾಗಿ ಸಿದ್ಧಿಸುತ್ತದೆ. ಹೀಗೆ ಒಂದೊಂದು ಹಂತಗಳಲ್ಲಿ ಒಂದೊಂದು ಹಿಡಿಯಷ್ಟು ಹೊತ್ತಗೆಗಳನ್ನು ಪ್ರಕಟಿಸಿ ಇವರು ನಿಜ ಅರ್ಥದಲ್ಲಿ ಪ್ರಕಟವಾಗಿದ್ದಾರೆ ಮತ್ತು ಈ ವರೆಗೆ ಅಧ್ಯಯನ ನಡೆಯದ ಕ್ಷೇತ್ರಗಳಲ್ಲಿ ಸಾಕಷ್ಟು ಕೈಯಾಡಿಸಿದ್ದಾರೆ.
 

ಯಾವಾಗ ಇಂತಹ ಕೈಯಾಡಿಸುವ ಕೆಲಸ ಸಾಧ್ಯವಾಗುತ್ತದೆ ಎಂದರೆ ಅಲ್ಲೆಲ್ಲ ಹಾಗೆಯೇ ಅಧ್ಯಯನ - ಸಂಶೋಧನ ಕ್ಷೇತ್ರಕಾರ್ಯಗಳಲ್ಲಿ ಕಾಲಾಡಿಸುವ ಕಾಯಕವೂ ನಡೆಯುತ್ತಿರಬೇಕಾಗುತ್ತದೆ. ಇದು ಇವರಿಂದ ಬಹುಪಾಲು ಸಾಧ್ಯವಾಗಿದೆ.
ಈಗಿನ ಕಾಸರಗೋಡು ಜಿಲ್ಲೆಯ ಕೋಳ್ಯೂರು ಎಂಬ ಸಾಂಸ್ಕೃತಿಕ ಹಳ್ಳಿಯಲ್ಲಿ ಹುಟ್ಟಿಬಳೆದ ಇವರು ಬಾಲ್ಯದಿಂದಲೇ ಸ್ಥಳೀಯ ಸಂಸ್ಕೃತಿಯ ಸೊಗಡಿನ ಜಾಡಿನಲ್ಲಿ ಅನುಭವಗಳನ್ನು ಮೈಗೂಡಿಸಿಕೊಂಡವರು. ವಿಜ್ಞಾನ ಪದವೀಧರೆಯಾಗಿ ಮುಂದಿನ ಅಧ್ಯಯನಗಳಲ್ಲಿ ಸಂಸ್ಕೃತ, ಕನ್ನಡ, ಹಿಂದಿ ಹೀಗೆ ಮೂರು ಸ್ನಾತಕೋತ್ತರ ಪದವಿಗಳನ್ನು ಹೇಗೆ ಮತ್ತು ಏಕೆ ಪಡೆಯಲು ಸಾಧ್ಯವಾಯಿತು? ಅಷ್ಟು ಮಾತ್ರವಲ್ಲ, ರಾಷ್ಟ್ರಭಾಷಾ ಪ್ರವೀಣ, ಎಂ.ಫಿಲ್, ಪಿಎಚ್.ಡಿ. ಕನ್ನಡದಲ್ಲಿ ಎರಡನೆಯ ಪಿಹೆಚ್. ಡಿ. ಮುಂದೆ ಎನ್.ಇ. ಟಿ(ಕನ್ನಡ) ಯು.ಜಿ.ಸಿ.ಗಳಂತಹ ಶೈಕ್ಷಣಿಕ ಅರ್ಹತೆಗಳನ್ನು ಪಡೆದುಕೊಳ್ಳವ ದಾರಿಗಳನ್ನೂ ಹೇಗೆ ಏಕೆ ಕಂಡುಕೊಂಡರು ಎಂಬುದು ಕುತೂಹಲದ ವಿಷಯವಾಗಿದೆ.


 ಇವರಿಗೆ ತಮ್ಮ ಅಪೇಕ್ಷೆಯ ಗುರಿಯೆಡೆಗೆ ತುಡಿಯುವ ಹಾಗೆ ಮುಂದೆ ಸಾಗುವ ಜ್ಞಾನದಾಹದ ಅದಮ್ಯ ಉತ್ಸಾಹದ ಜೊತೆಯಲ್ಲೇ ಚೈತನ್ಯದ ಸಿದ್ಧಿಯೂ ಇರುವುದು ಇಲ್ಲಿ ಸ್ಪಷ್ಟವಿದೆ. ‘ಅರಿವಿನಂಗಳದ ಸುತ್ತ’ ಮತ್ತು ‘ಮನೆಯಂಗಳದಿ ಹೂ’ ಎನ್ನುವ ಮೊದಲ ಎರಡು ಕೃತಿಗಳ ಶೀರ್ಷಿಗಳೇ ಇವರ ಮುನ್ನೋಟದ ಸುಳುಹುಗಳನ್ನು ಮೂಡಿಸುತ್ತವೆ.
 

ಜನಪದ ಸಂಸ್ಕೃತಿಯಲ್ಲಿ ಅಧ್ಯಯನ ಮಾಡಬಹುದಾದ ಜನಪದ ಅಂಶ(ಈoಟಞ Iಣems)ಗಳಿರುತ್ತವೆ. ಅವನ್ನು ಗಮನಿಸಿ ಗುರುತಿಸಿಕೊಳ್ಳುವ ಮನಸ್ಸು ಅಧ್ಯಯನಕಾರರಿಗೆ ಇರಬೇಕಾಗುತ್ತದೆ. ಹಾಗೆ ನೋಡಿದಾಗ ಗಮನಿಸುವುದು ಮತ್ತು ಗುರುತಿಸುವುದಕ್ಕೆ ಬಹಳಷ್ಟು ಅಂತರವಿರುತ್ತದೆ. ಸಾಮಾನ್ಯವಾಗಿ ಅಂತಹ ಅಂಶಗಳನ್ನು ಎಲ್ಲರೂ ಗಮನಿಸುತ್ತಾರೆ. ಆದರೆ ಗುರುತಿಸುವ ಮನಸ್ಸು ಎಲ್ಲರಿಗಿರುವುದಿಲ್ಲ. ಸಂಶೋಧಕನೊಬ್ಬನ ಕಣ್ಣಿಗೆ ಅಂತಹ ಆಂಶವೊಂದು ಬಿದ್ದಾಗ ಅದು ಅಧ್ಯಯನ ವಸ್ತುವಾಗುತ್ತದೆ. ‘ಮನಸ್ಸಿದ್ದರೆ ಮಾರ್ಗ’ ಎನ್ನುವ ಹಾಗೆ ಇಂತಹ ಜನಪದ ಅಂಶಗಳು ಸಂಶೋಧಕರಿಗೆ ಅಧ್ಯಯನ ವಸ್ತುಗಳಾಗಿ ಆ ಕುರಿತು ಮತ್ತೆ ಆ ಕಡೆಗೆ ಆಸಕ್ತಿ ತಳೆದು ಆಯಾ ವಿಷಯಗಳ ಕುರಿತು ಮಾಹಿತಿ ಪಡೆಯುವ ಸಂಗ್ರಹಕಾರ್ಯ ಮೊದಲಾಗುತ್ತದೆ. 
‘ಜಾತೆ’್ರಯಂತಹ ಸಂದರ್ಭದಲ್ಲಿ ‘ಪಲ್ಲಕಿ’ ಒಂದು ಜನಪದ ಅಂಶವಾದರೆ ‘ಅಡ್ಡಪಲ್ಲಕಿ’ ಎನ್ನುವುದು ಇನ್ನೊಂದು ಜನಪದ ಅಂಶವಾಗುವುದು. ನಮ್ಮನ್ನು ನಾವು ಗಂಭೀರವಾಗಿ ತೊಡಗಿಸಿಕೊಳ್ಳಬೇಕಾದ್ದೇ ಇಲ್ಲಿ.
ಹಾಗಾಗಿ ಡಾ. ಲಕ್ಷ್ಮೀ ವಿ. ಅವರ ಬರವಣಿಗೆಯಲ್ಲಿ ವ್ಯಾಪಕವಾದ ಕ್ಷೇತ್ರಕಾರ್ಯವನ್ನು ಕಾಣಲು ಸಾಧ್ಯವಾಗುತ್ತದೆ. ದಾರಿಯಲ್ಲಿ ಹೋಗಿಬರುತ್ತಿರಬೇಕಾದರೆ ಗಮನಕ್ಕೆ ಬರುವ ಒಂದು ಕಲ್ಲು ಅವರಿಗೆ ಜನಪದ ಅಂಶವಾಗಿ ಅಧ್ಯಯನಾಸಕ್ತಿಗೆ ಕಾರಣವಾಗುತ್ತದೆ.
ಹಾಗಾಗಿಯೇ ತುಳುವರ ಆರಾಧನೆಯ ಸಾರತ್ತೊಂಜಿ ದೈವಗಳಿಗೆ(ಸಾವಿರದೊಂದು ದೈವಗಳಿಗೆ) ಹೊಸ ಭಾಷ್ಯ ಬರೆಯಲು ಅರ್ಹತೆಗಳಿಸಿಕೊಂಡಿದ್ದಾರೆ. ಎ. ಮೇನ್ನರ್(1897) ನೀಡಿರುವ ಭೂತಗಳ ಸಂಖ್ಯೆ: 133. ಡಾ. ಬಿ. ಎ. ವಿವೇಕ ರೈ(1885) ನೀಡಿರುವ ಸಂಖ್ಯೆ: 274, ಡಾ.ಕೆ. ಚಿನ್ನಪ್ಪ ಗೌಡರು(1990) ನೀಡಿರುವ ಪರಿಷ್ಕೃತ ಪಟ್ಟಿಯಂತೆ: 360 ರಘುನಾಥ ಎಂ. ವರ್ಕಾಡಿ(2011) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ ಪುನಾರಚಿಸಿದ ಹೊಸ ಪಟ್ಟಿಯಲ್ಲಿ 407 ದೈವಗಳನ್ನು ಹೆಸರಿಸಿದ್ದಾರೆ. ಇವೆಲ್ಲವನ್ನೂ ಮೀರಿ ನಿಲ್ಲುವ ಯಾದಿಯೊಂದು ಡಾ. ಲಕ್ಷ್ಮೀ ವಿ. ಅವರಿಂದ ಸಾಧ್ಯವಾಗಿದೆ. ಇದರ ಸಾಧ್ಯತೆಗೆ ಎರಡು ಉದಾಹರಣೆಗಳನ್ನು ಅವರ ಮಾಹಿತಿ ಕೋಶದಿಂದಲೇ ಎತ್ತಿಕೊಳ್ಳಬಹುದು. ಈ ಶೋಧಕಿ ಕಂಡುಕೊಂಡ ‘ಉರವ’, ‘ಎರುಬಂಟೆ’, ‘ಅಕ್ಕ ಬೋಳಾಂಗ’, ‘ಅಜ್ಜ ಬಳಯ’ ಮೊದಲಾದ 50ರಷ್ಟು ಅಪೂರ್ವ ಭೂತಗಳು ಅವರ ಸಾಧನೆಯ ಫಲವಾಗಿವೆ. ಹಾಗೆಯೇ ‘ಕುಕ್ಕೆತ್ತಿ-ಬಳ್ಳು’, ‘ಪರವ ಭೂತ’, ‘ಕನ್ನಡ ಬೀರ’, ‘ಕುಂಡ-ಮಲ್ಲು’, ‘ಕುಲೆಮಾಣಿಗ’, ‘ಅಚ್ಚು ಬಂಗೇತಿ’ ಮೊದಲಾದ 82ರಷ್ಟು ತುಂಡು ಭೂತಗಳು ಈ ಸಾಧಕಿಯ ಸೇರಿಗೆಯಲ್ಲಿವೆ. ಇದು ಹೇಗೆ ಸಾಧ್ಯವಾಯಿತು ಎಂದು ಅಚ್ಚರಿ ಪಡಬೇಕಾಗಿಲ್ಲ. ಬಾಸೆಲ್ ಮಿಶನ್ ಪರಂಪರೆಯ ಬರ್ನೆಲ್, ಮೇನ್ನರ್ಮೊಕದಲಾದವರು ತೋರಿಸಿಕೊಟ್ಟ ಹಾದಿಯಿದೆ.
1872, ಮಾರ್ಚ್ ತಿಂಗಳ23ನೆಯ ತಾರಿಕಿನಂದು ತೊಡಗಿ ನಾಲ್ಕು ದಿವಸ ಮಂಗಳೂರಿನ ದೂಮಪ್ಪ ಎಂಬವರ ಮನೆಯಲ್ಲಿನಡೆದ ಇಲ್ಲೆಚ್ಚಿದ ನೇಮ(ಮನೆಯಲ್ಲಿ ನಡೆಯುವ ವಿಶಿಷ್ಟ ದೈವಾರಾಧನೆ)ವನ್ನು ನೋಡಿ ಅಧ್ಯಯನ ಮಾಡಿರುವ ಪರಂಪರೆಯದು. ಹಾಗೆ ಎ.ಸಿ ಬರ್ನೆಲ್ ನಡೆಸಿದ ಅಧ್ಯಯನದ ಫಲವಾಗಿ ಖಿhe ಆeviಟ ತಿoಡಿshiಠಿ oಜಿ ಣhe ಖಿuಟuvಚಿs(ಎ.ಸಿ ಬರ್ನೆಲ್: 1894-1897) ಈ ಸಂಶೋಧನ ಪ್ರಬಂಧ ಮಾಲಿಕೆಯಲ್ಲಿ ಪ್ರಮುಖ ಭೂತಗಳ ಒಂದು ಪಟ್ಟಿಯಿದೆ. ಈ ಪಟ್ಟಿಯನ್ನು ಸಿದ್ಧಮಾಡಿ ಗ್ರಂಥದಲ್ಲಿ ಸೇರಿಸಿದವರು ಎ. ಮೇನ್ನರ್. ಈ ಪಟ್ಟಿಯಲ್ಲಿ 133 ಭೂತಗಳ ಹೆಸರುಗಳಿವೆ. ಡಾ. ಬಿ. ಎ. ವಿವೇಕ ರೈ(1985) ಅವರ ‘ತುಳು ಜನಪದ ಸಾಹಿತ್ಯ’ ಕೃತಿಯಲ್ಲಿ274(ಪು.35-38) ಭೂತಗಳ ಹೆಸರುಗಳಿವೆ. ಡಾ. ಕೆ. ಚಿನ್ನಪ್ಪ ಗೌಡ ಕೆ.(1990)ಅವರ ಭೂತಾರಾಧನೆ ಜಾನಪದೀಯ ಅಧ್ಯಯನ ಗ್ರಂಥದಲ್ಲಿ 360 ಭೂತಗಳ ಪರಿಷ್ಕೃತ ಪಟ್ಟಿಯಿದೆ(ಪು.34-39). ‘ಸಾವಿರದೊಂದು ಭೂತಗಳ ಬೆನ್ನು ಹಿಡಿದಾಗ’ ಎನ್ನುವ ಲೇಖನದಲ್ಲಿ ರಘುನಾಥ ಎಂ. ವರ್ಕಾಡಿ(2011, ಪು.65-79) ಅವರ ‘ಕಡಂಬಾರ ಮಲ್ರಾಯೆ’ ಕೃತಿಯಲ್ಲಿ 407 ಭೂತಗಳ ಹೆಸರುಗಳು ದಾಖಲಾಗಿವೆ. ಈ ಲೆಕ್ಕಾಚಾರ ತೀರ ಈಚೆಗಿನದು.
ನಾನು ನನ್ನ ಜನಪದ ಸುತ್ತಮುತ್ತ ಕೃತಿಯಲ್ಲಿ ದಾಖಲಿಸಿರುವಂತೆ ಮತ್ತು ಕಂಡುಕೊಂಡಂತೆ ‘ಕಂಡಿಗೆತ್ತಾಯ’(ಬಜ್ಪೆ-ಕೊಳಂಬೆ), ‘ನಡ್ಡೊಡಿತ್ತಾಯ’(ಕಾರಿಂಜೆ), ‘ಮುಕುಡಿತ್ತಾಯಿ’ ಈ ಮೂರು ಭೂತಗಳ ಹೆಸರುಗಳು ಈಗಾಗಲೇ ಮಾಡಿರುವ ಪಟ್ಟಿಯಲ್ಲಿ ಇಲ್ಲ. ಹಾಗಾಗಿ ಅವು ಸೇರಿದಾಗ: 407+3=410 ಭೂತಗಳ ಲೆಕ್ಕ ಸಿಗುತ್ತದೆ.
ತುಳುವರು ಸಾವಿರದೊಂದು(ಸಾರತ್ತೊಂಜಿ) ಭೂತಗಳನ್ನು ನಂಬಿಕೊಂಡು ಬಂದ ಪರಂಪರೆಯವರು. ಇಲ್ಲೀಗ 133 ಭೂತಗಳ ಈ ಸಂಖ್ಯೆ ಹೆಚ್ಚಾಗುತ್ತಿರುವುದೆಂದರೆ ಭೂತಗಳ ಸಂತಾನ ಅಭಿವೃದ್ಧಿಯಾಗಿದೆ ಎಂದರ್ಥವಲ್ಲ. ಒಂದಾನೊಂದು ಕಾಲದಲ್ಲಿ ಸಾವಿರದೊಂದು ದೈವಗಳನ್ನು ನಂಬಿಕೊಂಡು ಬರುತಿದ್ದರೂ ಕಾಲಕ್ರಮೇಣ ಈ ನಂಬಿಕೆ ಸಡಿಲಾಗಿ ಅವುಗಳ ಸಂಖ್ಯೆ ಜನಮಾನಸದ ನೆನಪಿನಲ್ಲಿ ಕಡಿಮೆಯಾಗಿರಬಹುದು. 


ಅಧ್ಯಯನ ಮತ್ತು ಸಂಶೋಧನೆಗಳಿಂದಾಗಿ ಅವುಗಳ ಹೆಸರುಗಳು ಮತ್ತೆ ಬೆಳಕಿಗೆ ಬಂದುವು. ಹಾಗೆ ಇದೀಗ ಡಾ. ಲಕ್ಷ್ಮೀ ವಿ. ಅವರ ಈ ಸ್ವರೂಪದ ಶೋಧನೆಯಿಂದಾಗಿ 132 ದೈವಗಳು ನಮ್ಮ ತಿಳುವಳಿಕೆಯ ಮಜಲಿಗೆ ಬಂದಿವೆ. ಆಗ 410+132=542 ಎಂದಾಗುವುದು. ಇನ್ನು ಮುಂದೆ ಅವುಗಳ ಲೆಕ್ಕಕೊಡುವಾಗ 542ಕ್ಕಿಂತ ಕುಂದು ಬರಬಾರದು. ಶೋಧನೆಗೆ ಇನ್ನೂ ಎಡೆಯಿದೆ. ಸಾವಿರದೊಂದು ಗುರಿಯೆಡೆಗೆ ಸಾಗುವ ಹಾದಿಯಿದೆ.
‘ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ: ಒಂದು ವಿಶ್ಲೇಷಣಾತ್ಮಕ ಅಧ್ಯಯನ’ ವಿಷಯದಲ್ಲಿ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದ ತಮ್ಮ ಸಂಪ್ರಬಂಧವನ್ನು ಪರಿಷ್ಕರಿಸಿ ಪ್ರಕಟಿಸಿರುವ ಡಾ. ಲಕ್ಷ್ಮೀ ವಿ. ಅವರನ್ನು ನಾನು ಹಾರ್ದಿಕವಾಗಿ ಅಭಿನಂದಿಸುತ್ತಿದ್ದೇನೆ.
 

                                                                    ಡಾ. ವಾಮನ ನಂದಾವರ, ಮಂಗಳೂರು,

Friday 12 September 2014

ಜೈನ ಮುಸ್ಲಿಂ ಬಾಂಧವ್ಯ ಬೆಸೆದ ಬಬ್ಬರ್ಯ ಭೂತ-ಡಾ.ಲಕ್ಷ್ಮೀ ಜಿ ಪ್ರಸಾದ



ತುಳು ನಾಡಿನ ಪ್ರಸಿದ್ಧ ಭೂತ ಬಬ್ಬರ್ಯ ಮೂಲತ ಮುಸ್ಲಿಂ ಮೂಲದ ದೈವತ .ಈತನ ತಂದೆ  ಮಾದವ ಸುಲಿಕಲ್ಲ ಬ್ಯಾರಿ ಸಮುದ್ರ ತೀರದಲ್ಲಿ ಉಪ್ಪು ಮೆಣಸಿನ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದ ಈತನ ತಾಯಿ ಜೈನರ ಹುಡುಗಿ
 ಮುಹಮ್ಮದ್ >ಮೊಮ್ಮದ್ >ಮಾದವ ಆಗಿರಬೇಕೆಂದು ಡಾ.ಅಮೃತ ಸೋಮೇಶ್ವರರು ಅಭಿಪ್ರಾಯ ಪಟ್ಟಿದ್ದಾರೆ 

  .ಒಂದು ದಿನ ಕಡಲು ಉಕ್ಕ್ಕಿ ಮಾದವ ಸುಲಿಕಾಲ ಬ್ಯಾರಿಯ   ಅಂಗಡಿ ಮುಗ್ಗಟ್ಟು ಎಲ್ಲ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗುತ್ತದೆ .ಆಗ ಅವನು ತಲೆಯಲ್ಲಿ ಮೆಣಸು ಬೆಲ್ಲ ಕಟ್ಟು ಹೊತ್ತುಕೊಂಡು ಊರೂರು ತಿರುಗುತ್ತ ವ್ಯಾಪಾರ ಮಾಡುತ್ತಾ ಇದ್ದ .
ಹೀಗೆ ವ್ಯಾಪಾರ ಮಾಡುತ್ತಾ ಮಲಯ ದೇಶಕ್ಕೆ ಬರುತ್ತ್ತಾನೆ ಅಲ್ಲಿ ಮುತ್ತು ಸೆಟ್ಟಿ ,ರತನ್ ಸೆಟ್ಟಿ ಮೊದಲಾದ ಏಳು ಜನ ಜೈನ ಸಹೋದರರು ಇದ್ದರು .ಆ  ಜೈನ ಮಡಸ್ತಾನದ ಏಳು ಜನ ಅಣ್ಣಂದಿರಿಗೆ ಒಬ್ಬಳು ತಂಗಿ. ಅವಳನ್ನು ಮದುವೆಯಾದವರೆಲ್ಲ ಅದೇ ರಾತ್ರಿ ಸಾಯುತ್ತಾರೆ. ಇರುವ ಒಬ್ಬ ತಂಗಿಯ ಬದುಕು ಹೀಗಾಯ್ತಲ್ಲ? ಎಂಬ ಚಿಂತೆಯಲ್ಲಿರುವಾಗ ವ್ಯಾಪಾರಕ್ಕೆಂದು ಬಂದ  ಈ ಮುಸ್ಲಿಂ ಹುಡುಗ ಸುಲಿಕಲ್ಲ ಮಾಧವ ಬ್ಯಾರಿ ಇವರ ದುಃಖದ ಕಾರಣವನ್ನು ಕೇಳುತ್ತಾನೆ. ನಮ್ಮ ತಂಗಿಯನ್ನು ಮದುವೆಯಾದವರಿಗೆ ಅರ್ಧರಾಜ್ಯ ಕೊಡುತ್ತೇವೆಎಂದು ಅಣ್ಣಂದಿರು ಹೇಳುತ್ತಾರೆ. 

ಮಾಧವ ಬ್ಯಾರಿ ನಾನು ಪ್ರಯತ್ನ ಮಾಡುತ್ತೇನೆ ಎಂದ. ಒಂದು ದೊಡ್ಡ ಮನುಷ್ಯರೂಪವನ್ನು ಅಕ್ಕಿಯಲ್ಲಿ ಕಡೆದು ಮಾಡುತ್ತಾರೆ. ಆ ಅಕ್ಕಿಯ ಮನುಷ್ಯ ರೂಪವನ್ನು ರಾತ್ರಿ ಮಲಗುವಾಗ ಅವಳ ಜೊತೆಯಲ್ಲಿ ಮಲಗಿಸಿದರು. ಮಧ್ಯರಾತ್ರಿಯ ಹೊತ್ತು ಅವಳ ಮೂಗಿನಿಂದ ಎರಡು ಸರ್ಪಗಳು ಹೊರಬಂದು ಮಲಗಿದ್ದ ಬೊಂಬೆಯನ್ನು ಕಚ್ಚುತ್ತವೆ. ಆಗ ಬದಿಯಲ್ಲೇ ಅಡಗಿ ನಿಂತಿದ್ದ ಬ್ಯಾರಿ ತನ್ನ ಕತ್ತಿಯಿಂದ ಸರ್ಪಗಳನ್ನು ತುಂಡರಿಸುತ್ತಾನೆ. ಮೊದಲು ಕೊಟ್ಟ ಮಾತಿನಂತೆ ಅವನಿಗೆ ಅರ್ಧ ರಾಜ್ಯ ಹಾಗೂ ತಂಗಿಯನ್ನು ಕೊಡುತ್ತಾರೆ. (C).ಡಾ.ಲಕ್ಷ್ಮೀ ಜಿ ಪ್ರಸಾದ

ಆದರೆ ಆತ ಮದುವೆಗೆ ಒಪ್ಪುವುದಿಲ್ಲ. ಅವಳು ಚಂದ್ರನಾಥ ದೇವರ ಕೆರೆಗೆ ಸ್ನಾನಕ್ಕೆ ಹೋಗುತ್ತಾಳೆ. ಕೆರೆಯಿಂದ ಮೇಲೆ ಬರುವಾಗ ಮಾಯದ ಬಸಿರನ್ನು ಪಡೆಯುತ್ತಾಳೆ. ಬಬ್ಬರ್ಯನನ್ನು ಹೆರುತ್ತಾಳೆ. ಅವನಿಗೆ ಮಸೀದಿಯಲ್ಲಿ ಬಪ್ಪ ಎಂದು ಹೆಸರಿಡುತ್ತಾರೆ  ಆಗ ಜೈನರಿಗೂ ಮುಸ್ಲಿಮರಿಗೂ ವಿವಾದ ಉಂಟಾಗಿ ಅವರು ಊರು ಬಿಟ್ಟು ಹೋಗುವ ಕಾಲ ಬರುತ್ತದೆ. ಅಮಾವಾಸ್ಯೆಯ ದಿನ ಚಂದ್ರನನ್ನು ಕಂಡರೆ ಊರು ಬಿಟ್ಟು ಹೋಗುತ್ತೇವೆ ಎಂದು ಜೈನರು ಹೇಳುತ್ತಾರೆ. ನಾವು ಚಂದ್ರನನ್ನು ಕಂಡರೆ ಚಂದ್ರನನ್ನು ನಂಬುತ್ತೇವೆ ಎನ್ನುತ್ತಾರೆ ಮುಸ್ಲಿಮರು. ಚಂದ್ರ ಕಾಣಿಸಿದ್ದರಿಂದ ಜೈನರು ಚಂದ್ರನನ್ನು ತುಳಿದು ಊರುಬಿಟ್ಟು ಹೋಗುತ್ತಾರೆ. ಮುಸ್ಲಿಮರು ಚಂದ್ರನನ್ನು ನಂಬಿದರು. 

 ಬಬ್ಬರ್ಯ ನೀನು ಏನು ಮಾಡುತ್ತಿ? ಎಂದು ಕೇಳಿದಾಗ ಬಬ್ಬರ್ಯ ನೀವು ಮುಂದಿನಿಂದ ಹೋಗಿ, ನಾನು ಹಿಂದಿನಿಂದ ಬರುತ್ತೇನೆ ಎಂದು ಹೇಳುತ್ತಾನೆ. ದೇವರ ವರ ಪಡೆದು ಬರುತ್ತೇನೆ ಎಂದು ಹೇಳುತ್ತಾನೆ. ಮುಂದೆ ಹಡಗು ಕಟ್ಟಿಸಿ ಸಮುದ್ರಕ್ಕೆ ಇಳಿಸಿ ದುರಂತವನ್ನಪ್ಪುತ್ತಾನೆ
 ಬಬ್ಬರ್ಯ ಭೂತದ ಪಾಡ್ದನದ ಇನ್ನೊಂದು ಪಾಠದ ಪ್ರಕಾರ ಆ ಹುಡುಗಿಯನ್ನು ಮದುವೆಯಾಗಿ ಮಸೀದಿಗೆ ಕರೆ ತಂದು ಬೊಲ್ಯ ಬೀಬಿ ಫಾತಿಮಾ ಎಂದು ಹೆಸರಿಸುತ್ತಾನೆ .ನಂತರ ಅವಳು ಗರ್ಭ ಧರಿಸುತ್ತಾಳೆ .ಒಂಬತ್ತು ತಿಂಗಳಾಗುವಾಗ  ಆ ಮಗು ಬಂಗಾರದ ದುಂಬಿಯಾಗಿ ತಾಯಿಯ ಬಲದ ಮೊಲೆಯನ್ನು ಒಡೆದು ಹೊರ ಬರುತ್ತಾನೆ . 

ಅಂತು ಅವಳು ಹೇಗೋ ಒಂದು ಗಂಡು ಮಗುವಿಗೆ ಜನ್ಮ ಕೊಡುತ್ತಾಳೆ  ಮುಂದೆ.ಸಾಹಸಿಯಾದ ಆ ಹುಡುಗ ಬಪ್ಪ ತನ್ನ ಓರಗೆ ಹುಡುಗರನ್ನು ಆಟದಲ್ಲಿ ಸೋಲಿಸುತ್ತಾನೆ .ಆಗ ಸೋತ ಹುಡುಗರು ಹಾದರಕ್ಕೆ “ಹುಟ್ಟಿದ ಮಗು ಒಳ್ಳೆಯದು ತುಳುವ ಹಲಸಿನ ಹಣ್ಣಿನ ಬೀಜ ಒಳ್ಳೆಯದು “ಎಂದು ಇವನನ್ನು ಗೇಲಿ ಮಾಡಿ ನಗುತ್ತಾರೆ 
ಆಗ ಅಲ್ಲಿಂದ ಬಂದು ಅವನು ಒಂದು ಕೋಟೆ ಕಟ್ಟಿ ಅದನ್ನು ಮಾಯ ಮಾಡುತ್ತಾನೆ. . ಬಬ್ಬರ್ಯ  ವ್ಯಾಪಾರ ಮಾಡುವ ಮತ್ತು ಹಡಗು ಕಟ್ಟಿಸುವ ವಿಚಾರ ಪಾಡ್ದನದಲ್ಲಿದೆ.
                ನನ ಇಂಚ ಕುಲ್ಲುಂಡ ಜೈತ್ ಬರಾಂದ್
                ಅಂಗಾಡಿ ದಿಡೋಡು ಯಾಪಾರ ಮಲ್ಪೊಡುಂದೆ
                ಕಡಲ ಬರಿಟ್ ಮಡಲ್‍ದ ಅಂಗಾಡಿ ಕಟ್ಯೆ
                ಯಾಪಾರ ಮಲ್ತೊಂಡೆ
                ಪಣವು ಎಚ್ಚೊಂಡು ಬತ್ತ್‍ಂಡ್‍ಯೆ
                ಅಪಗಾಂಡ ಪಣ್ಪೆ ಬಬ್ಬರಿಯೆ
                ಎಂಕ್ ಪಡಾವುದ ಬೇಲೆ ಪತ್ತೊಡು
                ಪಡಾವುದ ಯಾಪಾರ ಮಲ್ಪೊಡು
ಕನ್ನಡ ರೂಪ :
                ಇನ್ನು ಹೀಗೆ ಕುಳಿತರ ಏನೂ ಬರದು
                ಅಂಗಡಿ ಇಡಬೇಕು ವ್ಯಾಪಾರ ಮಾಡಬೇಕೆಂದ
                ಕಡಲಿನ ಬದಿಯಲ್ಲಿ ತೆಂಗಿನ ಗರಿಯಿಂದ ಅಂಗಡಿ ಕಟ್ಟಿದ
         ವ್ಯಾಪಾರ ಮಾಡಿದ
       ದುಡ್ಡು ತುಂಬಿಕೊಂಡು ಬಂದಿತು
       ನನಗೆ ಹಡಗಿನ ಕೆಲಸ ಹಿಡಿಯಬೇಕು
        ಹಡಗಿನ ವ್ಯಾಪಾರ ಮಾಡಬೇಕು


ಅಲ್ಲಿಂದ ಮಲಯ ದೇಶಕ್ಕೆ ಬರುತ್ತಾನೆ ಅಲ್ಲಿ ಒಂದು ಬಿಳಿಯ ಬಣ್ಣದ ಶಾಂತಿ ಮರ ಕಾಣಿಸುತ್ತದೆ ಅದನ್ನು ನೋಡಿ ಇದರಿಂದ ಹಡಗು ಕಟ್ಟಿಸಬೇಕೆಂದು ಕೊಳ್ಳು ತ್ತಾನೆ  ಅದಕಾಗಿ ಆಚಾರಿಗಳನ್ನು ಕರೆಸುತ್ತಾನೆ
     ಆ ವೊಂಜಿ ಮರನು ಕಡ್ಪೊಡಾಂಡೆ
                ಮರೊನು ಕಡ್ಪೆರೆ ಮಲೆನಾಡ್ ತಚ್ಚವೆ
                ತುಳುನಾಡ ಆಚಾರ್ಲೆನು ಲೆಪ್ಪುಡಾಯೆರ್
                ಮರತ್ತಡೆ ಪೋದು ತೂಪೆರ್ ಆಚಾರಿಳ್ 
                ನೆಲಪೂಜಿಯೆರ್ ದೇಬೆರೆಗ್ ದಿಡ್ಯೆರ್
                ಆನೆ ಬಾರಸದ ಗಡಿ ಪಾಡ್ಯೆರ್”79
                ಆ ಒಂದು ಮರವನ್ನು ಕಡಿಯಬೇಕೆಂದ
                ಮರವನ್ನು ಕಡಿಯಲು ಮಲೆನಾಡ ತಚ್ಚವೆ
                ತುಳುನಾಡ ಆಚಾರಿಗಳನ್ನು ಕರೆಸಿದರು
                ಮರದ ಹತ್ತಿರಕ್ಕೆ ಹೋಗಿ ನೋಡುತ್ತಾರೆ ಬಡಗಿಗಳು
                ಆನೆ ಗಾತ್ರದ ಗಾಯ ಮಾಡುತ್ತಾರೆ
ನಂತರ ಬಡಗಿಗಳು ಹಡಗನ್ನು ನಿರ್ಮಿಸಿದರು ಎಂದು ಪಾಡ್ದನದಲ್ಲಿ ಹೇಳಿದೆ. ಕೆಲವೆಡೆ ಹಡಗು ತಯಾರಿಯ ಮರ ಕಡಿಯಲು ಮರಕಾಲರನ್ನು ಬರಹೇಳಿದರೆಂದು ಹೇಳಿದೆ. ಮುಗೇರರು, ಮರಕಾಲರು ಹಾಗೂ ಮೊಗವೀರರು ಒಂದೇ ವರ್ಗದವರು ಎಂದು ವಿವೇಕ ರೈ ಅಭಿಪ್ರಾಯಪಟ್ಟಿದ್ದಾರೆ.(C).ಡಾ.ಲಕ್ಷ್ಮೀ ಜಿ ಪ್ರಸಾದ

     ಇನ್ನೊಂದು ಪಾದ್ದನದಲ್ಲಿ      ತ್ರೇತಾಯುಗದ ರಾಮದೇವರ ಕಿರೀಟ, ಕೃಷ್ಣನ ಚಕ್ರ, ಜಗದೀಶ್ವರನ ತ್ರಿಶೂಲ, ದೇವೇಂದ್ರನ ವಜ್ರಾಯುಧ ಹಿಡಿದುಕೊಂಡು ಮಾಯಕದ ಹಡಗನ್ನು ಬ್ರಹ್ಮರು ನಿರ್ಮಾಣ ಮಾಡಿದರು ಎಂದು ಹೇಳಿದೆ
  ಆ ಹಡಗು ನೀರಿಗಿಳಿಯುವ ಮುನ್ನ  ಬಪ್ಪ ತನ್ನ ತಂದೆತಾಯಿರನ್ನು ಕಂಡು “ಇಂದಿನ ತನಕ ನಾನು ಜೋಗದಲ್ಲಿ ನಿಮ್ಮ ಮಗನಾಗಿದ್ದೆ .ಇಂದು ಜೋಗ ಬಿಟ್ಟು ಮಾಯಕಕ್ಕೆ ಸಂದು  ಬಿಡುತ್ತೇನೆ ಎಂದು ಹೇಳುತ್ತಾನೆ. ಆ ಹಡಗಿನಲ್ಲಿ ಕುಳಿತು ಮೂಳೂರ ಕರಿಯಕ್ಕೆ ಬರುವಾಗ ಬಿರುಗಾಳಿ ಏಳುತ್ತದೆ. ಹಡಗಿನಲ್ಲಿದ್ದ ಹಾಯಿ ಹರಿಯುತ್ತದೆ. ಕೊಂಬು ತುಂಡಾಗುತ್ತದೆ. ಹಡಗು ಬದಿಗೆ ಬರುವಾಗ ಮುಳೂರಿನ ಮುನ್ನೂರು ಜನ, ಕಾಪುವಿನ ಸಾವಿರ ಜನ ಕೂಡಿ ಹತ್ತಿರ ಹೋಗುವಾಗ, ಕಣ್ಣಿಗೆ ಕಂಡರೂ ಕೈಗೆ ಸಿಗುವುದಿಲ್ಲ. ಬಬ್ಬರ್ಯ ಹಡಗನ್ನು ಪಡುಗಂಗೆಗೆ ಕಳುಹಿಸುತ್ತಾನೆ. ಮಾಯದಲ್ಲಿ ಬಂದು ಮೂಳೂರು ಉಳ್ಳಂಗಾಯ ಕಟ್ಟೆಯಲ್ಲಿ ಜೋಗದಲ್ಲಿ ಆಗುತ್ತಾನೆ. ಸೊಲ್ಮೆ ಸಂದಾಯ ಮಾಡುತ್ತಾನೆ. ನೀನು ಯಾರಿಗೆ ಸೊಲ್ಮೆ ಸಂದಾಯ ಮಾಡುವುದು ಎಂದು ಕೇಳಲು ನನ್ನನ್ನು ಬಿಟ್ಟು ಉಳ್ಳಾಯ ರಾಯಭಾರಿ ಇದ್ದಾನೆ. ಅವನಿಗೆ ನಾನು ರಾಜ್ಯಭಾರಿ ನಾನು ನಿಮ್ಮನ್ನು ಅನುಗ್ರಹ ಮಾಡಲು ಬಂದ ಶಕ್ತಿ ಎನ್ನುತ್ತಾನೆ. ಪೊಂಗ ಬೈದ್ಯನಿಗೆ ಅಭಯ ಕೊಟ್ಟು ಒಂದು ತೊಟ್ಟು ಕಳ್ಳು ಬೀಳುವಲ್ಲಿ ಸಾವಿರ ತೊಟ್ಟು ಬೀಳುವ ಹಾಗೆ ಮಾಡುತ್ತಾನೆ.

 ಈ ಗುಟ್ಟನ್ನು ಅವನು ಅವನ ಹೆಂಡತಿಗೆ ಹೇಳಿದ ನಂತರ ಒಂದು ತೊಟ್ಟು ಕೂಡ ಬೀಳುವುದಿಲ್ಲ. ಕೊನೆಗೆ ಪೊಂಗ ಬೈದ್ಯನನ್ನು ನೀರಿನಲ್ಲಿ ಮುಳುಗಿಸುತ್ತಾನೆ. ಅವನ ಹೆಂಡತಿ ಮೂಳೂರಿನ ಮುನ್ನೂರು ಒಕ್ಕಲು, ಕಾಪುವಿನ ಸಾವಿರ ಒಕ್ಕಲು ಕೂಡಿಸಿ ದೇವರಾದರೆ ದೇವಸ್ಥಾನ, ಬ್ರಹ್ಮರಾದರೆ ಬ್ರಹ್ಮಸ್ಥಾನ, ಭೂತಗಳಾದರೆ, ಭೂತಸ್ಥಾನ ಕಟ್ಟಿಸುತ್ತೇನೆ. ನನ್ನ ಗಂಡನನ್ನು ಉಳಿಸಿಕೊಡಬೇಕು ಎಂದು ಪ್ರಾರ್ಥನೆ ಮಾಡುತ್ತಾಳೆ. ಆಗ ಪೊಂಗ ಬೈದ್ಯ ನೀರಿನಿಂದ ಎದ್ದು ಬರುತ್ತಾನೆ. ಪ್ರಾರ್ಥನೆ ಪ್ರಕಾರ ಬ್ರಹ್ಮಗುಂಡ ಮತ್ತು ಕೊಂಬಿನ ಮರ ಸ್ಥಾಪನೆ ಮಾಡುತ್ತಾರೆ. 

ಊರಿನ ಜನ ಸೇರಿ ಧ್ವಜಸ್ತಂಭ ಮಾಡಿಸುತ್ತಾರೆ. ಆಗ ಬಬ್ಬರ್ಯ ಜೋಗ ಬರುತ್ತಾನೆ. ನಾನು ದೇವರಾಗಿ ನಿಮಗೆ ಅನುಗ್ರಹ ಮಾಡುತ್ತೇನೆ ಎನ್ನುತ್ತಾನೆ. ನಾಗಬ್ರಹ್ಮ ಉಳ್ಳಾಯ ಬಬ್ಬರ್ಯ ನಾನು. ಅಂಕೋಲಕ್ಕೆ ಹೋಗಿ ಲಿಂಗರೂಪದಿಂದ ಮೂಡಿ ಬರುತ್ತೇನೆ. ಅಲ್ಲಿ ಆದಿನಾಥ ಎಂದು ಕರೆಸಿಕೊಂಡು ನೀಲೇಶ್ವರಕ್ಕೆ ಹೋಗಿ ನೀಲಕಂಠನೆಂದು ಕರೆಸಿಕೊಂಡಿದ್ದೇನೆಎಂದು ಹೇಳುತ್ತಾನೆ.
ಜೈನರಿಗೆ ಬಬ್ಬರ್ಯ ಮನೆದೈವ. ಕರಾವಳಿಯಲ್ಲಿ ಬಬ್ಬರ್ಯ ಕುಲದೈವ. ಬಬ್ಬರ್ಯ ಬೆರ್ಮರಂತೆ ಸಸ್ಯಾಹಾರಿ. ಮಾಂಸಾಹಾರ ಇಲ್ಲ. ಹಾಲು ಮತ್ತು ಸೀಯಾಳ ಆತನ ಆಹಾರ. ದೇವಸ್ಥಾನದಲ್ಲಿ ಬಬ್ಬರ್ಯ ಕ್ಷೇತ್ರಪಾಲನೆಂದು ಪಾಡ್ದನ ತಿಳಿಸುತ್ತದೆ. ಇಲ್ಲಿ ಬಬ್ಬರ್ಯ ಮತ್ತು ಬೆರ್ಮರ್ ಒಬ್ಬನೇ ಎಂಬಂತೆ ವರ್ಣಿಸಲಾಗಿದೆ.
ವಾಸ್ತವದಲ್ಲಿ ಆತ  ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಹಡಗು ಮುರಿದು ದುರಂತಕ್ಕೀದಾಗಿರ ಬಹುದು ಅಥವಾ ಕಡಲು ಗಳ್ಳರ ದಾಳಿಗೆ ಸಿಲುಕಿ ದುರಂತವನ್ನಪ್ಪಿರಬಹುದು .ದುರನತವನ್ನಪ್ಪಿದ ಅಸಾಮಾನ್ಯ ಶೂರರು ಭೂತಗಳಾಗಿ ಆರಾಧಿಸಲ್ಪಡುವುದು ತುಳು ಸಂಸ್ಕೃತಿಯಲ್ಲಿ ಸಾಮಾನ್ಯವಾದ ವಿಚಾರವಾಗಿದೆ .ಅಂತೆಯೇ ಬಪ್ಪ ಬ್ಯಾರಿ  ಬಬ್ಬರಿ ಭೂತ ವಾಗಿ ಆರಾಧಿಸಲ್ಪಟ್ಟಿರ ಬಹುದು (C).ಡಾ.ಲಕ್ಷ್ಮೀ ಜಿ ಪ್ರಸಾದ


ಈತನನ್ನು ಎಲ್ಯ ಬಬ್ಬರ್ಯ, ಮಲ್ಲ ಬಬ್ಬರ್ಯ ,ಬಾಕಿಲು ಬಬ್ಬರ್ಯ ಇತ್ಯಾದಿ ಹೆಸರಿನಿಂದ ಕೋಲ ನೀಡಿ ಆರಾಧಿಸುತ್ತಾರೆ ಬಬ್ಬರ್ಯ ಮುಸ್ಲಿಂ ಮೂಲವನ್ನು ಹೊಂದಿದ್ದರೂ ಆತನ ಆರಾಧನೆಯಲ್ಲಿ ಮಾಂಸಾಹಾರ ನಿಷಿದ್ಧ . ಬಬ್ಬರ್ಯನಿಗೆ ಸಪ್ಪೆ ಹಾಗು ಬೆಲ್ಲದ ಕಡುಬನ್ನು ಆಹಾರವಾಗಿ ನೀಡುತ್ತಾರೆ .ಬಹುಶ ಆತನ ತಾಯಿ ಜೈನ ಸ್ತ್ರೀಯಾಗಿದ್ದರಿಂದ ಬಪ್ಪ ಕೂಡ ಜೈನರಂತೆ ಸಸ್ಯಾಹಾರಿಯಾಗಿದ್ದಿರ ಬಹುದು. ಅಥವಾ ಈತನ ಆರಾಧನೆಯನ್ನು ಆತನ ತಾಯಿಯ ಕಡೆಯವರು ಆರಂಭಿಸಿರಬಹುದು .ತುಳುನಾಡಿನಲ್ಲಿ ಭೂತಾರಾಧನೆಯ ಬೆಳವಣಿಗೆಯಲ್ಲಿ ಜೈನರ ಪ್ರೋತ್ಸಾಹ ಗಣನೀಯವಾದದ್ದು ಎಂಬುದನ್ನು ಗಮನಿಸಿದರೆ ಈ ಊಹೆಗೆ ಬಲ ಸಿಗುತ್ತದೆ . ಏನೇ ಆದರು ಬಬ್ಬರ್ಯನ ಆರಾಧನೆ  ಜೈನರನ್ನು ಮತ್ತು ಮುಸ್ಲಿಮರನ್ನು ಬೆಸೆದು ಸಾಮರಸ್ಯಕ್ಕೆ ಭದ್ರ ಬುನಾದಿ ಹಾಕಿದೆ ಎಂಬುದರಲ್ಲಿ ಎರಡು ಮಾತಿಲ್ಲ
ಆಧಾರ ಗ್ರಂಥಗಳು
1 ಡಾ.ಅಮೃತ ಸೋಮೇಶ್ವರ –ತುಳು ಪಾಡ್ದನ ಸಂಪುಟ   
2 ಡಾ.ಚಿನ್ನಪ್ಪ ಗೌಡ –ಭೂತಾರಾಧನೆ –ಒಂದು ಜಾನಪದೀಯ ಅಧ್ಯಯನ
3 ಡಾ.ಬಿ ಎ ವಿವೇಕ ರೈ-ತುಳು ಜನಪದ ಸಾಹಿತ್ಯ
4 ಡಾ.ಲಕ್ಷ್ಮೀ ಜಿ ಪ್ರಸಾದ –ಭೂತಗಳ ಅದ್ಭುತ ಜಗತ್ತು



 ಡಾ.ಲಕ್ಷ್ಮೀ ಜಿ ಪ್ರಸಾದ
ಕನ್ನಡ ಉಪನ್ಯಾಸಕರು

Wednesday 3 September 2014

see and say ಸರಣಿ -14 ತುಳು ನಾಡನ್ನು ಬೆಳಗಿದ ಅವಳಿ ವೀರರು :ಕೋಟಿ ಚೆನ್ನಯರು -ಡಾ.ಲಕ್ಷ್ಮೀ ಜಿ ಪ್ರಸಾದ




                                             chitra krupe :Jeevit shetty k
ತುಳುನಾಡನ್ನು ಬೆಳಗಿದ  ಅವಳಿ ವೀರರು :©ಡಾ.ಲಕ್ಷ್ಮೀ ಜಿ ಪ್ರಸಾದ( copy rights reserved)

 ಜೋಡು ನಂದಾ ದೀಪ ಬೆಳಗುನು ತುಳುವ ನಾಡುದ ಗುಂಡೊಡು ..ಹೌದು !ಡಾ .ಅಮೃತ ಸೋಮೆಶ್ವರರು ರಚಿಸಿದ ಹಾಡು ಇದು .ಇದು ಕೇವಲ ಹಾಡಲ್ಲ .ತುಳುವರ ಹೃದಯದ ಮಿಡಿತವಿದು !ಕೋಟಿ ಚೆನ್ನಯರೆಂಬ ಜೋಡು  ನಂದಾ ದೀಪಗಳು ತುಳುವರ ಮನೆ ಮನಗಳಲ್ಲಿ ಸದಾ ಬೆಳಗುತ್ತಿದೆ .ತುಳುನಾಡಿನ ಈ ಅಪ್ರತಿಮ ವೀರರ ಕುರಿತು ಸಮಗ್ರವಾಗಿ ಬರೆಯ ಹೊರಟರೆ ಅದು ದೊಡ್ಡ ಗ್ರಂಥವಾಗಿ ಬಿಡಬಹುದು !ಕೋಟಿ ಚೆನ್ನಯರ ಜೀವನ ಗಾಥೆ ಒಂದು ಮಹಾ ಕಾವ್ಯ. ಅದೊಂದು ಲಾವಣಿ ಚಕ್ರ. ಅದನ್ನು ಸಂಕ್ಷಿಪ್ತ ವಾಗಿ ಬರೆಯುವುದೂ ಒಂದು ಸವಾಲು! .ಕೋಟಿ ಚೆನ್ನಯರದು ಕೇವಲ ಕಟ್ಟು ಕಥೆಯಲ್ಲ ಅದು ತುಳುನಾಡಿನಲ್ಲಿ ನಡೆದ ವೀರರ ಕಥೆ. ಅವರ ಸ್ವಾಭಿಮಾನ, ಸ್ವಂತ ವ್ಯವಸಾಯ ಮಾಡುವ ಹಂಬಲ, ಶೌರ್ಯ ಸಾಹಸವನ್ನು ನೆನೆದಾಗ ಮನದುಂಬಿ ಬರುತ್ತದೆ.ಒಟ್ಟಿಗೆ  ಹುಟ್ಟಿ ಬೆಳೆದು ಅಸಾಮಾನ್ಯ ಸಾಹಸ ಮೆರೆದು ,ಎರಡು ಗುತ್ತು ಗಳ ಒಡೆತನ ಪಡೆದು ,ತಮ್ಮ ಆಶ್ರಯದಾತನಿಗೆ ಯುದ್ಧದಲ್ಲಿ ವಿಜಯವನ್ನು ತಂದು ಕೊಟ್ಟು   ಒಟ್ಟಿಗೆ  ಇಹಲೋಕವನ್ನು ತ್ಯಜಿಸಿ ತುಳುವರ ಮನೆ ಮನಗಳಲ್ಲಿ ಶಾಶ್ವತವಾಗಿ ನೆಲಸಿದ ಪರಿ ಅನನ್ಯವಾದುದು !
.ನಾನು ನನ್ನ ಪಿ ಎಚ್ ಡಿ ಸಂಶೋಧನಾ ಕ್ಷೆತ್ರ ಕಾರ್ಯಕ್ಕಾಗಿ ಪಂಜ ,ಪಡುಮಲೆ, ಎಣ್ಮೂರು, ಎಡಮಂಗಲ ಮೊದಲಾದ ಪ್ರದೇಶಗಳಲ್ಲಿ ಸುತ್ತುತ್ತಿದ್ದಾಗ ನಂಗೆ ಕೋಟಿ ಚೆನ್ನಯರದೆ ಗುನುಗು! .ಅರಸೊತ್ತಿಗೆಯ ಆ  ಕಾಲದಲ್ಲಿ ಅವರು ಅನ್ಯಾಯದ ವಿರುದ್ಧ ತೋರಿದ ಪ್ರತಿಭಟನೆ ,ಸ್ವಾಭಿಮಾನ ಸಾಹಸ ನೆನಪಾಗುತ್ತಿತ್ತು .”ತುಳುನಾಡ ಅವಳಿ ವೀರರು ಓಡಾಡಿದ ನೆಲ ಇದು” ಎಂದು ರೋಮಾಂಚನಗೊಂಡಿದ್ದೇನೆ . ಕೋಟಿ ಚೆನ್ನಯರ ಗರೋಡಿಗಳ ಫೋಟೋ ತೆಗೆಯುತ್ತಿದ್ದಾಗ ಉಂಟಾಗುತ್ತಿದ್ದ ಸಂತಸ ಅವರ ಸಮಾಧಿಯ ಫೋಟೋ  ತೆಗೆಯುವಾಗ ಇರಲಿಲ್ಲ . ಸಮಾಧಿಯ ಫೋಟೋ ತೆಗೆಯುವಾಗ ಏನೋ ದುಗುಡ ಕಾಡುತ್ತಿದ್ದುದು ಮಾತ್ರ ಸತ್ಯ. 
 ಕೋಟಿ ಚೆನ್ನಯರ ಮೂಲವನ್ನು ಅಲೌಕಿಕ ಜಗತ್ತಿಗೆ ಜೋಡಿಸುವ  ಕೋಟಿಚೆನ್ನಯ ಪಾಡ್ದನವು ಡೆನ್ನ-ಡೆನ್ನಾನ ಎಂಬ ಸೊಲ್ಲಿನ ನಂತರ ಬೆರ್ಮೆರ್ ಪುಟ್ಟಿನಾ ನಾಡ್, ಬೆರ್ಮರೆಬೆರಿಯೇ ...’ ‘ಬೆರ್ಮೆರ್ ಹುಟ್ಟಿದ ನಾಡು ಬೆರ್ಮೆರ ಶಕ್ತಿಯನ್ನು ಹೊಂದಿದ ನಾಡು, ಇದು ಬೈದ್ಯ ವೀರರು ಹುಟ್ಟಿದ ನಾಡುಎಂದು ತುಳುನಾಡಿನ ಬಗ್ಗೆ ಹೇಳುತ್ತದೆ. ಅನಂತರ ಬೆರ್ಮೆರ್ಉದಿಸಿದ ವಿಚಾರವನ್ನು ಈ ಪಾಡ್ದನ ವರ್ಣಿಸುತ್ತದೆ. ಬೆರ್ಮೆರ್ ಪುಟ್ಟಿನಾ ನಾಡ್‍ವುಂದ್ ಏಳ್ ಗಂಗೆದ ನಡುಟು ...”, “ಬೆರ್ಮೆರ್ ಹುಟ್ಟಿದ ನಾಡು ಇದು ಏಳು ಗಂಗೆಯ ನಡುವಿನಲ್ಲಿಎಂಬಲ್ಲಿ ನೀರು ಸುತ್ತಮುತ್ತ ಆವೃತವಾಗಿರುವ ಭೂಭಾಗದಲ್ಲಿ ಬೆರ್ಮೆರ್ಹುಟ್ಟಿದ ನಾಡು ಇದೆ ಎಂಬ ಸೂಚನೆ ಸಿಗುತ್ತದೆ. ಏಳು ಗಂಗೆಯ ನಡುವೆ ಎಮಲಗುಂಡ 10 ಇದೆ. ಏಳು ಅಂತಸ್ತಿನ ಎಮಲಗುಂಡದಲ್ಲಿ ಬೆರ್ಮೆರ್‍ಗೆ ಏಳು ಅಂಕಣದ ಸತ್ತಿಗೆ, ಭುಜಗಳಲ್ಲಿ ಮೂರು ಅಂತಸ್ತಿನಸತ್ತಿಗೆ ಇದೆ. ಬಲಭಾಗದಲ್ಲಿ ಬಂಗಾರದ ಜನಿವಾರ, ಎಡಭಾಗದಲ್ಲಿ ಬೆಳ್ಳಿಯ ಜನಿವಾರ, ಒಂದಾಳು ಉದ್ದದ ಹೂವಿನ ಜಲ್ಲಿ, ಗೇಣುದ್ದ ಬೀಸಣಿಗೆ, ಕುತ್ತಿಗೆಯಷ್ಟು ಉದ್ದದ ಕೇದಗೆ ಹೂವಿನ ಅಲಂಕಾರವಿದೆ. ಕಿವಿಗೆ ಕೇಂಜವ ಹಕ್ಕಿಯ ಆಕಾರದ ಆಭರಣ ಇದೆ. ಎದೆಯಲ್ಲಿ ಅಮೃತ ಕಲಶವಿದೆ. ಹೊಟ್ಟೆಯಲ್ಲಿ ಬಾಸಿಂಗವಿದೆ. ಬೆನ್ನಲ್ಲಿ ಭೀಮಾರ್ಜುನರನ್ನು ಹೊಂದಿದ್ದಾರೆ. ಮೊಣಕಾಲಿನವರೆಗೆ ಕಾವೇರಿ ಹರಿಯುವ ಇಂದ್ರಪರ್ವತ ಬೆರ್ಮೆರ್ಗೆ ಆಸನವಾಗಿದೆ. ಸೊಂಟದ ಸುತ್ತ ಸರ್ಪಾಭರಣ ಪಾದದಲ್ಲಿ ಪದ್ಮರೇಖೆಇದೆ. ಬೆರ್ಮೆರ್ ಅಣಿಗಂಗೆ, ಮಣಿಗಂಗೆ, ಪೇರುಗಂಗೆ, ಮಿಂಚಿಗಂಗೆ, ನೀರುಗಂಗೆ, ಬೆಳ್ಳಿಗಂಗೆ, ಕಂಚುಗಂಗೆ ಎಂಬ ಏಳು ಗಂಗೆಯನ್ನು, ನಾಲ್ಕು ಸಮುದ್ರವನ್ನು ನಿರ್ಮಿಸಿದರು.
ಬೆರ್ಮೆರ್‍ನ ಏಳು ಅಂಕಣ ಛತ್ರದ, ಒಂದು ಧ್ವಜದ ನೆರಳಿನಲ್ಲಿ ಹನ್ನೆರಡು ಬ್ರಹ್ಮಚಾರಿಗಳು ಹನ್ನೆರಡು ಕನ್ಯೆಯರು ಚಾಮರಾದಿ ಸೇವೆಗಳನ್ನು ಮಾಡುತ್ತಿದ್ದರು. ಬೆಳ್ಳಿಯ ಬೀಸಣಿಗೆ ಹಿಡಿದು ಗಾಳಿ ಹಾಕುತ್ತಿದ್ದರು. ಹೀಗೆ ವೈಭವದಿಂದ ಕಾಲ ಕಳೆಯುತ್ತಿರಲು ಬಾರದಂಥ ಬಿಸಿಲು ಬಂದು, ಭೀಕರವಾಗಿ ಮಳೆ ಬಂದು ನಿರ್ಮಾಣವಾಗಿದ್ದ ಹುಲ್ಲು, ಪೊದರು, ಮನುಷ್ಯ, ಪ್ರಾಣಿಗಳು ಎಲ್ಲರು ಕೊಚ್ಚಿಕೊಂಡು ಹೋದರು. ಆಗ ಸೂರ್ಯನಾರಾಯಣದೇವರು ಪುನಃ ಸೃಷ್ಟಿಗೆ ತೊಡಗುತ್ತಾರೆ.
ದಿಕ್ಪಾಲಕರನ್ನು ನೆನೆದು ಸೃಷ್ಟಿ ಜಪ ಮಾಡಲು ಆರಂಭಿಸುತ್ತಾರೆ. ದೇವರ ಎಡಭಾಗದಲ್ಲಿ ಎರಡು ಕೇಂಜವ ಹಕ್ಕಿಗಳನ್ನು ನಿರ್ಮಿಸಿದರು. ಕಲ್ಲು, ಹುಲ್ಲು, ಬೈಹುಲ್ಲಿನ ಗೂಡು, ಬಿದಿರು, ಮುಳ್ಳು ಎಲ್ಲವನ್ನು ಸೃಷ್ಟಿಸಿದರು. ಅಣ್ಣ-ತಂಗಿಯರಂತಿದ್ದ ಕೇಂಜವ ಪಕ್ಷಿಗಳು ಸಂತಾನದ ವರವನ್ನು ಸೂರ್ಯನಾರಾಯಣ ದೇವರಲ್ಲಿ ಕೇಳುತ್ತವೆ. ದೇವರ ಅನುಮತಿಯಂತೆ ಸತಿ-ಪತಿಗಳಾಗುತ್ತಾರೆ. ದೇವರ ಆಣತಿಯಂತೆ ಬಡಗು ದಿಕ್ಕಿನಲ್ಲಿರುವ ಸಾಗರದಲ್ಲಿ ಮಲ್ಲಿಗೆಯಿಂದ ಆವೃತವಾದ ಕೆರೆಯ ಮಧ್ಯದಲ್ಲಿರುವ ಅತ್ತಿಯಮರದ ಹೂವಿನ ಮಕರಂದವನ್ನು ತರಲು ಹೋಯಿತು. ಸೂರ್ಯ ಮುಳುಗುವ ಹೊತ್ತಿಗೆ ಮಕರಂದವನ್ನು ಹೀರಲು ಕೊಕ್ಕು ಹಾಕಿತು. ಸೂರ್ಯ ಮುಳುಗಿದ ಕ್ಷಣದಲ್ಲಿ ಹೂವು ಮುಚ್ಚಿಕೊಂಡಿತು. ಕೊಕ್ಕು ಹೂವಿನಲ್ಲಿ ಸಿಕ್ಕಿ ಹಾಕಿಕೊಂಡಿತು. ಇತ್ತ ಹೆಣ್ಣು ಕೇಂಜವ ಹಕ್ಕಿ ಕೇಂಜವ ಬಾರದಿರಲು ಚಿಂತೆಯಾಗಿ ತನ್ನ ಪತಿ ಕ್ಷೇಮವಾಗಿ ಬಂದರೆ, ತಾನು ಇಡುವ ಮೊದಲ ಮೊಟ್ಟೆಯನ್ನು ನಮ್ಮನ್ನು ಸೃಷ್ಟಿಸಿದ ಸೂರ್ಯನಾರಾಯಣದೇವರಿಗೆ ನೀಡುತ್ತೇವೆಎಂದು ಹರಕೆ ಹೇಳಿಕೊಳ್ಳುತ್ತಾಳೆ. ಕೇಂಜವ ತಂದ ಮಕರಂದವನ್ನು ಸ್ವೀಕರಿಸಿದ ಕೇಂಜವದಿ ಗರ್ಭ ಧರಿಸುತ್ತದೆ. ಗರ್ಭಧಾರಣೆಯ ಹತ್ತನೆಯ ತಿಂಗಳಿನಲ್ಲಿ ಆನೆಯ ತಲೆಗಿಂತ ಚಿಕ್ಕದಾದ, ಕುದುರೆಯ ತಲೆಗಿಂತ ದೊಡ್ಡದಾದ ಮೊಟ್ಟೆಯನ್ನು ಇಡುತ್ತದೆ. ಆ ಮೊಟ್ಟೆಯನ್ನು ಹೇಳಿಕೊಂಡ ಹರಕೆಯಂತೆ ದೇವರಿಗೆ ಅರ್ಪಿಸುತ್ತಾರೆ. ದೇವರು ಅದನ್ನು ದಿಂಬಿನಂತೆ ಇರಲಿ ಎಂದು ಬದಿಗೆ ಇಟ್ಟು ಗಾಳಿ ರಥವೇರಿ ಸವಾರಿಗೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಹೊಂಚು ಹಾಕುತ್ತಿದ್ದ ನಾಗಗಳು ಮೊಟ್ಟೆಗೆ ನೋಟ ಇಟ್ಟು ಸ್ಪರ್ಶಿಸಿದಾಗ ಮೊಟ್ಟೆ ಒಡೆಯುತ್ತದೆ. ಸಿಡಿದ ತುಂಡುಗಳು ಮೇಲೆ ಆಕಾಶಕ್ಕೆ, ಕೆಳಗೆ ಪಾತಾಳಕ್ಕೆ ಉತ್ತರ ದಿಕ್ಕಿನಲ್ಲಿ ಜರ್ದೊರಿಯ ಮಗ ಜಂಬೂರಿಕುಮಾರನ ಮಡಿಲಿಗೆ ಬೀಳುತ್ತದೆ. ಅದು ಮುತ್ತು ಮಾಣಿಕ್ಯವಾಗಿ ಕಾಣಿಸುತ್ತದೆ. ಅದನ್ನು ಅವನು ಕಿವಿಯಲ್ಲಿಧರಿಸುತ್ತಾನೆ. ಸವಾರಿಗೆ ಹೋದ ದೇವರು ಹಿಂದಿರುಗಿ ಬಂದಾಗ, ಮೊಟ್ಟೆ ಒಡೆದ ವಿಚಾರ ತಿಳಿದು ಅದೆಲ್ಲಿದೆ ಎಂದು ಹುಡುಕುತ್ತಾರೆ. ಆಗ ಜಂಬೂರಿಕುಮಾರನ ಕಿವಿಯಲ್ಲಿದ್ದ ಮಾಣಿಕ್ಯ ಪುನಃ ಸಿಡಿದು ಮಣ್ಣಮುದ್ದೆಯಾಗಿ ಸಮುದ್ರಕ್ಕೆ ಬಿದ್ದು ಸಪ್ತಗಿರಿ ಪರ್ವತಕ್ಕಿಂತ ಹೆಚ್ಚು ಚಂದವಾಯಿತು. ತೆಂಕುದಿಕ್ಕಿನಲ್ಲಿ ಶೋಭಿಸುವ ಹೊಳೆಯಾಯಿತು. ಮಧ್ಯದಲ್ಲಿ ದ್ವೀಪ ಆಯಿತು. ಮೂಡುದಿಕ್ಕಿನಲ್ಲಿ ಘಟ್ಟ, ಪಡುವಣದಲ್ಲಿ ಸಮುದ್ರದ ನಡುವಿನ ಈ ಭಾಗವೇ ತುಳುನಾಡು.ಇದೇ ತುಳುನಾಡಿನಲ್ಲಿ ಕೋಟಿ ಚೆನ್ನಯರು ಮೆರೆದಾಡಿದ್ದಾರೆ
ಕೇಂಜವ ಪಕ್ಷಿಗಳು  ಇಟ್ಟ ಎರಡನೆಯ ಮೊಟ್ಟೆ ಸಮುದ್ರಕ್ಕೆ ಜಾರಿ ಬೀಳುತ್ತದೆ .ಅದು ನಿಂಬೆ ಹಣ್ಣಾಗಿ  ತೇಲಿಕೊಂಡು ಬರುವಾಗ ಸಂಕಮಲೆಯ ಪೆಜನಾರ ಎಂಬ ಬ್ರಾಹ್ಮಣನ ಕೈಗೆ ಸಿಗುತ್ತದೆ .ಅದನ್ನು ಮನೆಗೆ ಕೊಂಡು ಹೋಗಿ ಇಡುವಾಗ ಒಂದು ಹೆಣ್ಣು ಮಗುವಾಗಿ ಅಳುತ್ತದೆ .ಮಕ್ಕಳಿಲ್ಲದ ಓಪೆತ್ತಿ- ಪೆಜನಾರ ದಂಪತಿಗಳು ಈ ಹೆಣ್ಣು ಮಗುವನ್ನು ಕೇದಗೆ ಎಂಬ ಹೆಅಸರಿತ್ತು ಮುದ್ದಿನಿಂದ ಸಾಕುತ್ತಾರೆ .ಇವಳು ೮-೧೦ ವರ್ಷವಾಗುತ್ತಾ ಬರಲು ಅವಳು ಋತುಮತಿಯಾಗುತ್ತಾಳೆ. ಆಗ ಬ್ರಾಹ್ಮಣರಲ್ಲಿ ವಿವಾಹಕ್ಕೆ ಮೊದಲು ಹುಡುಗಿ ಋತು ಮತಿಯರಾದರೆ ಅವರನ್ನು ಕಣ್ಣು ಕಟ್ಟಿ ಬೆತ್ತಲಾಗಿಸಿ ಕಾಡಿನಲ್ಲಿ ಬಿಟ್ಟು ಬರುವ ಸಂಪ್ರದಾಯವಿತ್ತು .ಆದ್ದರಿಂದ ಪೆಜನಾರ್ ಕದಾ ತಾವು ಮುದ್ದಿನಿಂದ ಸಾಕಿದ ಮಗಳನ್ನು ಬೇರೆ ದಾರಿ ತೋಚದೆ ಸಂಬಂಧಿ ಕರ ಮದುವೆಗೆ ಹೋಗೋಣ ಎಂದು ನಂಬಿಸಿ ಕಾಡಿನಲ್ಲಿ ಬಿಟ್ಟು ಬರುತ್ತಾರೆ.
ಸಂಕ ಮಲೆತ್ ತೊಟಕ ಬೆರನ್ದೀನ್ ಮದಿಮಾಲ್ ಆಯಿನೆಕ್ಕ್
ಕಣ್ಣುಗ್ ಕುಂಟು ಕಟ್ದು ಕಾದ್ಗು ಬುಡ್ತೆರ್
ಅಪಗ ಸಾಯಿನ ಬೈದ್ಯೆ ಇನ್ಪಿನಾಯೆ ಈನ್ದುದ ಬೇಲೆಗ್  ಪೋತೆ
ಆ ಹೊತ್ತಿನಲ್ಲಿ ಸಾಯನ ಬೈದ್ಯ ಮುರ್ತೆಯ ಕೆಲಸಕ್ಕಾಗಿ ಕಾಡಿಗೆ ಬರುತ್ತಾನೆ .ಇನ್ನು ಬೆಳಕು ಸರಿಯಾಗಿ ಮೂಡಿರಲಿಲ್ಲ . ಅವನು ಮರ ಹತ್ತಿ ಕೊಯ್ಯುವಾಗ ಅದರ ಕಸ ಈ ಹುಡುಗಿಯ ತಲೆ ಮೇಲೆ ಬೀಳುತ್ತದೆ .ಆಗ ಅವಳು ನೀನು ಗಂಡಸಾದರೆ ನನ್ನ ಅಣ್ಣ ಹೆಂಗಸಾದರೆ ನನ್ನ ಅಕ್ಕ ಎಂದು ಹೇಳುತ್ತಾಳೆ . ಈ ಎಳೆಯ ಹುಡುಗಿಯನ್ನು ನೋಡುವಾಗ ಸಾಯನ ಬೈದ್ಯನಿಗೆ ತನ್ನ ಮುದ್ದಿನ ತಂಗಿ ದೇಯಿ ಬೈದ್ಯೆತಿಯ ನೆನಪಾಗುತ್ತದೆ . ದೇಯಿ ಬೈದ್ಯೆತಿಯನ್ನು ಸಂನದರಲ್ಲಿಯೇ ಕಾಂತ ಬೈದ್ಯನಿಗೆ ಮಾಡುವೆ ಮಾಡಿ ಕೊಟ್ಟಿರುತ್ತಾನೆ ಅಣ್ಣ ಸಾಯನ ಬೈದ್ಯ .ಆದರೆ ಅವಳು ಚಿಕ್ಕ ವಯಸ್ಸಿನಲ್ಲಿಯೇ ಹೆರಿಗೆ ಸಮಯದಲ್ಲಿ ಮರನವನ್ನಪ್ಪಿರುತ್ತಾಳೆ .ಕಣ್ಣು ಕಟ್ಟಿ ಕಾಡಿಗೆ ಬಿಟ್ಟ ಈ ಹುಡುಗಿ ಕೇದಗೆಯ ಮೇಲೆ ಅನುಕಂಪ ಪ್ರೀತಿ ಹುಟ್ಟಿ ಸಾಯನ ಬೈದ್ಯ ಅವಳ ಕೈಕಾಲು ಕಣ್ಣು ಬಿಚ್ಚಿ ತನ್ನ ಮುಂಡಾಸಿನ ಬಟ್ಟೆಯನ್ನು ಅವಳಿಗೆ ಹೊದೆಸಿ  ತನ್ನ ಮನೆಗೆ ಕರೆದೊಯ್ಯುತ್ತಾನೆ .ತನ್ನ ತಂಗಿಯ ಹೆಸರಿತ್ತು ಅವಳನ್ನು ಸಾಕಿ ಸಲಹುತ್ತಾನೆ .ಕಾಡಿನಿಂದ ತಂದ ಅನಾಥ ಹುದುಗಿಯನ್ನ್ನು ಯಾರೂ ಮದುವೆಯಾಗಲು ಮುಂದೆ ಬರಲಿಲ್ಲವೋ ಏನೋ !ವಯಸ್ಸಾಗಿರುವ ತನ್ನ ತಂಗಿಯ ಗಂಡ ಕಾಂತು ಬೈದ್ಯನಿಗೆ ಇವಳನ್ನು ಮಾಡುವೆ ಮಾಡಿ ಕೊಡುತ್ತಾನೆ .ಅವನು ಮದುವೆಯಾಗುವಾಗಲೇ ತನಗೆ ವಯಸ್ಸಾಯಿತು ಮುಂದೆ ಹುಟ್ಟುವ ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ?ಎಂದು ಕೇಳಿದಾಗ ಆ ಜವಾಬ್ದಾರಿ ನನಗಿರಲಿ ಎಂದು ಹೇಳಿ ಆತನನ್ನು ಒಪ್ಪಿಸುತ್ತಾನೆ ಸಾಯನ ಬೈದ್ಯ !ಆದ್ದರಿಂದಲೇ ಇಡೀ ತುಳುಜನಪದ  ಸಾಹಿತ್ಯದಲ್ಲಿ ಸಾಯನ ಬೈದ್ಯನ ಪಾತ್ರ ಸದಾ ದೇದೀಪ್ಯಮಾನವಾಗಿದೆ .
ಮುಂದೆ ದೇವಿ ಬೈದ್ಯೆತಿ ಗರ್ಭಿಣಿಯಾಗುತ್ತಾಳೆ
ಇತ್ತ ಪಡುಮಲೆ ಬಲ್ಲಾಳರಿಗೆ ಬೇಟೆಗೆ ಹೋಗುವ ಕನಸು ಬೀಳುತ್ತದೆ .ಅದರಂತೆ ಅವರು ನಾಗ ಬ್ರಹ್ಮರನ್ನು ನೆನೆದು ಕಾಣಿಕೆ ತೆಗೆದು ಇಟ್ಟು ಬೇಟೆಗೆ ಹೋಗುತ್ತಾರೆ ಅನೇಕ ಪ್ರಾಣಿಗಳನ್ನು ಬೇಟೆಯಾಡಿ ಅವುಗಳನ್ನು ಸಲ್ಲ ಬೇಕಾದವರಿಗೆ ಅವರವರ ಸ್ಥಾನ ಮರ್ಯಾದೆಗನುಗುಣವಾಗಿ ಹಂಚುತ್ತಾರೆ.ಬೇಟೆಯಾಡಿ ಹಿಂದೆ ಬರುವಾಗ ಬಲ್ಲಾಳರ ಕಾಲಿಗೆ ಕಾಸರಕನ ಮುಳ್ಳು ತಾಗುತ್ತದೆ
ಕಾವೆರುದ ಮುಳ್ಳು ಕಂತುಂಡು ನಚ್ಚೋ ಬೆನ್ನಗ
ರಾಮ ರಾಮ ಕಾಲನೆ ...ಯೇ ..
ಏರ್ ಯಾ ಮಂದೆ ಯಾನ್ ಬಾಲೂಜಿ ಬದುಕುಜಿ
ಅಂದ ಮಂದೆ ಕೆನ್ದೆರೋ ....ಯೇ
ಯಾತನೆಯಿಂದ ಬಲ್ಲಾಳರು ನಾನು ಸತ್ತು ಹೋಗುವೆ ಬದುಕಲಾರೆ ಎಂದು ನೋವಿನಿಂದ ಕೂಗಿ ನರಳುತ್ತಾರೆ . ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತು ಕೊಂಡು ಸೇವಕರು ಅರಮನೆಗೆ ಕರೆತರುತ್ತಾರೆ .ಅರಮನೆಯ ವೈದ್ಯರು ಊರ ಪರ ಊರ ವೈದ್ಯರು ಔಷಧ ಉಪಚಾರ ಮಾಡುತಾರೆ .ಆದರೆ ಬಲ್ಲಾಳರ ಕಾಲಿಗಾದ ಗಾಯ ನಂಜು ಏರಿ ಇಡಿ ಶರೀರ ವ್ಯಾಪಿಸಿ ಅವರು ಬದುಕುಳಿಯುವುದು  ಕಷ್ಟ ಎಂಬ ಹಂತಕ್ಕೆ ತಲಪುತ್ತಾರೆ . ಆಗ ಅಲ್ಲಿ ಯಾರೋ ದೇಯಿ ಬೈದ್ಯೆತಿ ಒಳ್ಳೆಯ ಮದ್ದು ಕೊಡುತ್ತಾಳೆ ಎಂದು ಅರಸ ಬಲ್ಲಾಳನಿಗೆ ಹೇಳುತ್ತಾರೆ .ಬಲ್ಲಾಳ ಕೂಡಲೇ ದೇಯಿ ಬೈದ್ಯೆತಿಯನ್ನು ಬರಹೇಳುತ್ತಾನೆ.ಆಗ ಅವಳು ಏಳು ತಿಂಗಳು ತುಂಬಿದ ಗರ್ಭಿಣಿ .ಮೊದಲು ಬರಲು ಒಪ್ಪ ದಿದ್ದರು ನಂತರ ಅರಸನ ನೋವನ್ನು ದೀನ ಅವಸ್ಥೆಯನ್ನೂ ನೋಡಿ ಔಷಧ ಕೊಡಲು ಒಪ್ಪುತ್ತಾಳೆ .
ಏಲ್ ಪೊರ್ತುಗು  ಕಾಡದಾಲ್ ಏಲ್ ಕೊಡಿ ಮರ್ದು
ದೇಯಿ ತರ್ಪದೋಲು ..ಯೇ ..
ಕಲ್ಲುದಾ ಗುರಿಟ್ಟು ಪಾದಿಯೋಲೆ ಮರ್ದು ಕುತ್ತುದು ಪೊಡಿ ಮಲ್ದೋಲೆ
ಬೋಲ್ಲಿದಾ ಕರಡಿಗೆಡ್ ...ಯೇ ..
ಬೆಳಗ್ಗಿನ ಜಾವ ಏಳು ಮಲೆಗೆ ಜನರನ್ನು ಕಳುಹಿಸಿ ದೇಯಿ ಬೈದ್ಯೆತಿ ಏಳು ಮುಷ್ಟಿಯಷ್ಟು ಔಷಧದ ಗಿಡದ ಚಿಗುರನ್ನು ತರಿಸಿ ಕುಟ್ಟಿ ಪುಡಿ ಮಾಡಿ ಬೆಳ್ಳಿ ಕರಡಿಗೆಗೆ ತುಂಬಿ ದಂಡಿಗೆ ಏರಿ ಅರಮನೆಗೆ ಬರುತ್ತಾಳೆ .ಒಳ ಬರಲು ಅಳುಕಿದ ಅವಳಲ್ಲಿ “ನೀನು ಕೊಟ್ಟ ಮದ್ದಿನಿಂದ ನಾನು ಬದುಕಿದರೆ ಇನ್ನು ಹತ್ತು ಹದಿನಾರು ಕಾಲ ಪಟ್ಟವನ್ನು ಆಳುವೆ ,ಸಲ್ಲುವ ಕಾಣಿಕೆಯನ್ನು ನಿನಗೆ ಕೊಡುವೆ ಎಂದು ಹೇಳುವರು . ದೇಯಿ ಬೈದ್ಯೆತಿ ಅನೇಕ ದಿನಗಳ ತನಕ ಅಲ್ಲಿದ್ದುಕೊಂಡು ಬಲ್ಲಾಳನ ಕಾಲಿನ ಗಾಯಕ್ಕೆ ಔಷಧಿ ಹಾಕಿ ಉಪಚಾರ ಮಾಡುತ್ತಾಳೆ .ನಿಧಾನವಾಗಿ ಗಾಯ ಮಾಗಿ ಅರಸ ಗುಣ ಮುಖನಾಗುತ್ತಾನೆ .ಆಗ ದೇಯಿ ಬೈದ್ಯೆತಿ ತನ್ನ ಮನೆಗೆ ಹೊರಡುತ್ತಾಳೆ .ತನಗೆ ಬರಬೇಕಾದ ಕಾಣಿಕೆಯನ್ನು ನೆನಪಿಸುತ್ತಾಳೆ .ಆಗ ಅರಸ ನೋವಿನ ಭರದಲ್ಲಿ ನಾನು ಏನೋ ಹೇಳಿರಬಹುದು .ಈಗ ಏನಾದರು ಕೊಡಬೇಕಾದರೆ ಮಂತ್ರಿ ಬುದ್ಯಂತ ಬರಬೇಕು ಎಂದು ಹೇಳಿದನು ಆಗ ಕೋಪಗೊಂಡ ದೇಯಿ ಬೈದ್ಯೆತಿ ಏನು ಬೇಡ ಎಂದು ಹೇಳಿ ಹೊರಡುತ್ತಾಳೆ ಆಗ ರಾಜನ ಕಾಲಿನ ಗಾಯ ಮತ್ತೆ ಉಲ್ಬಣಿಸುತ್ತದೆ .ಆಗ ರಾಣಿ ಬಂದು ಪ್ರಾರ್ಥಿಸಲು ದೇಯಿ ಬೈದ್ಯೆತಿ ಮತ್ತೆ ಅವನನ್ನು ಗುಣಪಡಿಸುತ್ತಾಳೆ .ಆಗ ಬಲ್ಲಾಳರು ದೇಯಿ ಬೈದ್ಯೆತಿಗೆ ಆಭರಣಗಳನ್ನು ಪಟ್ಟೆ ಸೀರೆ ರವಕೆ ,ಸೊಂಟದ ಪಟ್ಟಿ ಮೊದಲಾದವುಗಳನ್ನು ನೀಡಿ “ಇನ್ನು ಉಳಿದದ್ದನ್ನು ನಿನ್ನ ಗರ್ಭದಲ್ಲಿರುವ ಮಗುವಿಗೆ ಕೊಡುವೆನು ಹೆಣ್ಣು ಹುಟ್ಟಿದರೆ ಅವಳಿಗೆ ಚಿನ್ನ ಬೆಳ್ಳಿ ಬೇಕಾದ್ದನ್ನು ಕೊಡುವೆನು ಗಂಡು ಮಗು ಹುಟ್ಟಿದರೆ ಅವರು ವಿದ್ಯೆ ಕಲ್ತು ದುಡಿದು ತಿನ್ನಲು ನನ್ನ ಬೀಡಿಗೆ ಬಂದರೆ ವ್ಯವಸಾಯ ಮಾಡಲು ಕಂಬಳ ಗದ್ದೆ ನೀಡುವೆನು “ಎಂದು ಮಾತು ಕೊಡುತ್ತಾರೆ .
ಪೊನ್ನ ಬಾಲೆ ಈ ಪೆದಿಯಾಂದ ಈ
ನಿಕ್ಕು ಕಾರಿನ ನಡವಳಿಕೆ ಕೊರ್ಪೆಯಾನ್
ಆಣ್ ಬಾಲೆನ್ ಪೆದ್ದಿಯಾಂದ ಈ
ಬೆನ್ದುನ್ಪಿ ಯಿದ್ದೋ ಬುದ್ದಿಲ ತೆರಿನ್ದಾದೆ ...ಯೇ
ಎನ ಬೂಡುಗು ಬತ್ತೆರಾದ್ ಡಾದೇ
ಬೆನೆರೆ ಕಂಬುಲ ಯಾನ್ ಕೊರ್ಪೆನ್ದೆರ್ ..ಯೇ..
ಮು0ದೆ ಒಂದೆರಡು ದಿನಗಳಲ್ಲಿಯೇ ದೇಯಿ ಬೈದ್ಯೆ ತಿ ಎರಡು ಗಂಡು ಮಕ್ಕಳಿಗೆ ಜನ್ಮ ಕೊಡುತ್ತಾಳೆ . ಈ ಅವಳಿ ಮಕ್ಕಳೇ ಮುಂದೆ ತುಳುನಾಡಿನ ವೀರರಾಗಿ ನಾಡನ್ನು ಬೆಳಗುವರು ಬಲ್ಲಾಳರು ಹುಟ್ಟಿದ ಮಕ್ಕಳಿಗೆ ಕೋಟೇಶ್ವರ ದೇವರನ್ನು ನೆನೆದು ಕೋಟಿ ಎಂದು ಚೆನ್ನ ಕೇಶವನನ್ನು ನೆನೆದು ಚೆನ್ನಯ ಎಂದು ಹೆಸರಿಡುವರು .ಮಕ್ಕಳು ತಾಯಿಯ ಹಾಲು ಕುಡಿವ ಕಾಲದಲ್ಲಿಯೇ ತಾಯಿ ದೇಯಿ ಬೈದ್ಯೆತಿ ಸಾಯುತ್ತಾಳೆ .ಮಕ್ಕಳು ಬಟ್ಟಲಿನಲ್ಲಿ ಅಣ್ಣ ತಿನ್ನುವ ವಯಸ್ಸಿನಲ್ಲಿ ತಂದೆ ಕಾಂತನ ಬೈದ್ಯ ಸಾಯುತ್ತಾನೆ . ಈ ಮಕ್ಕಳನ್ನು ಸೋದರ ಮಾವ ಸಾಯನ ಬೈದ್ಯ ಸಾಕಿ ಸಲಹುತ್ತಾರೆ . ಪರಾಕ್ರಮಿಗಳಾಗಿ ಬೆಳೆವ ಇವರು ಅಂಗ ಸಾಧನೆಗಾಗಿ ಗುರುಗಳನ್ನು ಹುಡುಕಿಕೊಂಡು ನಾನಯರ ಗರೋಡಿಗೆ ಹೋಗಿ ನಾನ ವಿಧದ ವಿದ್ಯೆಯನ್ನು ಕಲಿಯುತ್ತಾರೆ .ಆತ ಆಡುವಾಗ ಮಂತ್ರಿ ಬುದ್ಯಂತನ ಮಕ್ಕಳನ್ನು ಸೋಲಿಸುತ್ತಾರೆ .
ದೊಡ್ದವರಾಗಲು ಬಲ್ಲಾಳನಲ್ಲಿಗೆ ಹೋಗಿ ತಮ್ಮ ತಾಯಿಗೆ ಕೊಟ್ಟ ಮಾತಿನಂತೆ ಕಂಬಳ ಗದ್ದೆಯನ್ನು ಕೊಡುವಂತೆ ಕೇಳುತ್ತಾರೆ .ಆಗ ರಾಜ ಮ0ತ್ರಿ ಬುದ್ಯಂತನಲ್ಲಿ ಕೇಳಿ ಎಂದು ಹೇಳುತ್ತಾನೆ . ಇವರು ಬರುವುದನ್ನು ದೂರದಿಂದ ನೋಡಿದ ಬುದ್ಯಂತ ಕಾರಣವನ್ನು ಊಹಿಸಿ ಅಡಗಿ ಕುಳಿತು ತಾನು ಇಲ್ಲ ಎಂದು ಹೇಳಲು ಮಡದಿಗೆ ತಿಳಿಸಿದನು .ಮಡದಿ ಹಾಗೇ ಹೇಳುತ್ತಾಳೆ ಆಗ ಕೋಟಿ ಚೆನ್ನಯರು ”ಬುದ್ಯಂತರು ಬಂದಾಗ “ಕೋಟಿ ಚೆನ್ನಯರು ಕಂಬಳಕ್ಕೆ ಪ್ರಥಮ ಕಾಣಿಕೆ ಇಟ್ಟಿದ್ದಾರೆ” ಎಂದು ಹೇಳಲು ಹೇಳಿ ಕಾಣಿಕೆ ಇಟ್ಟು ಬರುತ್ತಾರೆ .ಆ ತನಕ ತಾನು ಅನುಭವಿಸುತ್ತಿದ್ದ ಕಂಬಳ ಗದ್ದೆ ಇನ್ನು ಕೋಟಿ ಚೆನ್ನಯರ ಪಾಲಾಗುತ್ತದೆ ಎಂದು ಹೊಟ್ಟೆ ಕಿಚ್ಚಿನಿಂದ ಅವರು ಇಟ್ಟ ಕಾಣಿಕೆಯನ್ನು ಎಸೆದು ಕೆಟ್ಟ ಮಾತು ಆಡುತ್ತಾನೆ .ನಂತರ ಪೆರ್ಮಲೆ ಬಲ್ಲಾಳ ಇವರಿಗೆ ಕೆಳಗಿನ ಕಂಬಳಗದ್ದೆಯನ್ನು ಕೊಡುತ್ತಾನೆ . ಇವರು ವ್ಯವಸಾಯಕ್ಕೆ ಬೇಕಾದ ಎಲ್ಲ ಸಲಕರಣೆಗಳ ಸಿದ್ಧ ಮಾಡುತ್ತಾರೆ .ಇವರ ಗದ್ದೆ ಉಳುಮೆ ಆಗದಂತೆ ,ಕಂಬಳ ಕೋರಿ ಆಗದಂತೆ ತಡೆಯಲು ಬುದ್ಯಂತ ನಾನ ಷದ್ಯಂತ್ರಗಳನ್ನು ಮಾಡುತ್ತಾನೆ .ಬುದ್ಯಂತರು ಕಂಬಳ ಕೋರಿ ಮಾಡುವಂದೆ ಇವರು ಕೂಡಾ ಮಾಡಲು ನಿರ್ಧರಿಸುತ್ತಾರೆ .ಆಗ ಆ ದಿನ ಕಂಬಳ ಮಾಡಿದರೆ ಜಾಗ್ರತೆ ಎಂದು ಇವರನ್ನು ಬುದ್ಯಂತ ಹೆದರಿಸುತ್ತಾನೆ . ಅವನ ಬೆದರಿಕೆಗೆ ಸೊಪ್ಪು ಕಾಕದ ಕೋಟಿ ಚೆನ್ನಯರು ಅದೇ ದಿನ ಕಂಬಳ ಕೋರಿಗೆ ಸಿದ್ಧತೆ ನಡೆಸುತ್ತಾರೆ . ಆ ದಿನ ಕೋಟಿ ಚೆನ್ನಯರ ಗದ್ದೆಗೆ ಕೋಣಗಳನ್ನು ಇಳಿಸಿದಾಗ ಬುದ್ಯಂತರು ಅವರ ಕಂಬಳ ಗದ್ದೆಗೆ ಹಾರಿ ಗದ್ದೆಯಲ್ಲಿ ಹೂತಿದ್ದ ದರಿಗುಂಟ ವನ್ನು ಕಿತ್ತು ಕೋಣದ ನೆತ್ತಿಗೆ ಹೊಡೆಯಲು ಹೋಗುವರು. ಕೋಟಿಚೆನ್ನಯರು “ಒಡೆಯ ಬುದ್ದಿವಂತರೆ ಕೋಣಗಳಿಗೆ ಹೊಡೆಯಬೇಡಿ ಪಡುಮಲೆ ರಾಜ್ಯದಲ್ಲಿ ಕಾಡಿ ಬೇಡಿ ತಂದಿದ್ದೇವೆ ,ನಿಮಗೆ ಕೋಪ ಇದ್ದಾರೆ ನಮ್ಮ ಮೇಲೆ ತೀರಿಸಿ “ಎಂದು ಹೇಳಿ ತಡೆಯುತ್ತಾರೆ .ನಂತರ ಬುದ್ಯಂತ ಮತ್ತು ಕೋಟಿ ಚೆನ್ನಯರ ಎರಡೂ ಕಂಬಳ ಗದ್ದೆಗಳಿಗೆ ಬಿತ್ತನೆ ಕಾರ್ಯ ನಡೆಯುತ್ತದೆ .ಬುದ್ಯಂತರು ಬಿತ್ತನೆ ಮಾಡಿ ಮೂರನೇ ದಿನ ನೀರು ಬಿಡಿಸಲೆಂದು ಬೆಳಗ್ಗಿನ ಜಾವ ಕಂಬಳ ಗದ್ದೆಗೆ ಬರುತ್ತಾರೆ , ಆಗ ಅವ್ರಿಗೆ ಕೋಟಿ ಚೆನ್ನಯರ ಗದ್ದೆಯಲ್ಲಿ ಬೀಜ ಚೆನ್ನಾಗಿ ಮೊಳೆತದ್ದು ಕಾಣಿಸುತ್ತದೆ .ಅವರ ಮೇಲೆ ಅಸೂಯೆಯಿಂದ ಆ ಗದ್ದೆಯ ಬೆಳೆಯನ್ನು ನಾಶ ಮಾಡಲೆಂದು ಕಾಡಿನಿಂದ ಬದಿಯಲ್ಲಿ ಹರಿದು ಹೋಗುವ ನೀರಿಗೆ ಒಡ್ಡು ಕಟ್ಟಿ ಕೋಟಿ ಚೆನ್ನಯರ ಗದ್ದೆಗೆ ರಭಸದಿಂದ ಹರಿಯುವ ಹಾಗೆ ಮಾಡಿ ಆಗ ತಾನೇ ಮೊಳಕೆ ಯೋಡೆದಿದ್ದ ಬತ್ತಿದ ಬೀಜ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಹಾಗೆ ಮಾಡಿದನು.
ಕಾಡ್ ದ ಬೊಲ್ಲೊಗು ಅಡ್ಡ ಕಟ್ ದೇರ್ ,ನೀರ್ ಪೋಪಿ ಸರದ್ ನ್
ಬುಡ್ತೆರ್ ನಡುಪುನಿ ಆನೆ ಬರಕೆದ ಕಣಿ ಕಡ್ತೆರ್ ಕಂಬಳಗ್ ಒಡ ದೇರ್ –ಅಯ್ಯಲ
ಬಿತ್ತು ಬುರುನಾಡೆಗ್ ಮುವಳ ಬಿತ್ತು ಬೂರುನಾಡೆ ಪಾರು ಪೊಯ್ಯ  ಗುರಿ ಗುಂಪು
ಮುಟ್ಟದೆರ್ ಬುಲೆ ಸೇಟ್ಟ ದೆರ್ ಗಾಸಿ ಮಲ್ತೆರ್ 
ಪದ್ಮ ಕಟ್ಟೆಡು ಕುಲ್ಲುದೆರ್ ಗೆಂದಾರೆಗ್ ಒರಗ್ ದೇರ್ (ಸಂ :ದಾಮೋದರ ಕಲ್ಮಾಡಿ )
ಅಲ್ಲಿಗೆ ಕೋಟಿ   ಬಂದು ಬುದ್ಯಂತ  ಬೆಳೆ  ನಾಶಮಾಡಿದ್ದನ್ನೂ ನೋಡಿ ಕೋಪದಿಂದ”ನಮ್ಮ ಬೆಳೆಯನ್ನು ಹಾಳು ಮಾಡಿದ್ದೀರಿ ,ಮಳೆಗಾಲದಲ್ಲಿ ಉಣ್ಣಬೇಕಾದ ಅನ್ನವನ್ನು ಹಾಳು ಮಾಡಿದ್ದೀರಿ ,ನಾನಾಗಿದ್ದಕ್ಕೆ ಇಷ್ಟು ಸಹಿಸಿಕೊಂಡೆ ನನ್ನ ತಮ್ಮ ಬಂದಿದ್ದರೆ ಅನಾಹುತವಾಗುತ್ತಿತ್ತು “ಎಂದು ಹೇಳುತ್ತಾನೆ . ಆಗ ಬುದ್ಯಂತ ಅವರನ್ನು ಹೀನಾಯಮಾನವಾಗಿ ನಿಂದಿಸುತ್ತಾನೆ .ಆಗ ಅಲ್ಲಿಗೆ ಬಂದ ಚೆನ್ನಯ ವಂದಿಸಿ ಗೌರವ  ಸೂಚಿಸಿದಾಗಲೂ ಅವನಿಗೆ ಅವಮಾನ ಮಾಡುತ್ತಾನೆ ಬುದ್ಯಂತ .ಅವನ ಮೇಲೆ ಆವೇಶದಿಂದ ಹಾರಿ ಹೊಡೆಯಲು ಹೋಗುವಾಗ ಬುದ್ಯಂತ ಓಡಿ ಹೋಗುತ್ತಾನೆ .ಅವನನ್ನು ಅಡ್ಡ ಕಟ್ಟಿದ ಕೋಟಿ  ಹಿಡಿದು ನಿಲ್ಲಿಸುತ್ತಾನೆ .ಅವರೊಳಗೆ ಹೋರಾಟ ಆಗಿ ಬುದ್ಯ೦ತ ಕಂಬಳದ ನೀರಿಗೆ ಮಗುಚಿ ಬೀಳುತ್ತಾನೆ .ಅವನನ್ನು ಬಡಿದು ಸಾಯಿಸಿ ಅವನೇ ಮಾಡಿದ ನೀರ ದಾರಿಗೆ ಅಡ್ಡ ಮಲಗಿಸಿ ಬುದ್ಯಂತರ ಮನೆಗೆ ಹೋಗಿ ಅವನ ಹೆಂಡತಿಯಲ್ಲಿ ಗದ್ದೆಗೆ ಹೋಗಿ ನೋಡುವಂತೆ ತಿಳಿಸುತ್ತಾರೆ
ಮನೆಗೆ ಬಂದಾಗ ಮಾವ ಸಾಯನ ಬೈದ್ಯನಿಗೆ ಎಲ್ಲವು ಅರ್ಥವಾಗುತ್ತದೆ .ಇನ್ನು ಆ ಉರಿನಲ್ಲಿ ಅವರಿರುವುದು ಅಪಾಯ ಎಂದರಿತ ಮಾವ ಸಾಯ ಬೈದ್ಯ “ನೀವು ಬಲ್ಲಾಳನಿಗೆ ಕೊಡಲು ಸಾಧ್ಯವಾಗದಂತಹ ವಸ್ತು ಗಳನ್ನು ಕೇಳಿ.ಕೊಡದಿದ್ದಾಗ ಅದೇ ನೆಪ ಮಾಡಿ ದೂರ ಹೊರತು ಹೋಗಿ “ಎಂದು  ಸೂಚಿಸುತ್ತಾರೆ .ಅಂತೆಯೇ ಕೋಟಿ ಚೆನ್ನಯರು ಬಲ್ಲಾಳನಲ್ಲಿಗೆ ಹೋಗಿ “ನೀವು ಕಂಬಳ ಗದ್ದೆ ಕೊಟ್ಟಿದ್ದೀರಿ ಆದರೆ ಬೇಕಾದ ಸಲಕರಣೆಗಳನ್ನು ಕೊಟ್ಟಿಲ್ಲ ಎಂದು ಹೇಳಿದರು ಆಗ ಬಲ್ಲಾಳ್ ನಿಮಗೆ ಏನು ಬೇಕು ಎಂದು ಕೇಳುತ್ತಾನೆ ಆಗ “ಬೀಡಿನ ಮು೦ಬಾಗದಲ್ಲಿರುವ ಸಣ್ಣ ಗೆಂದ ದೊಡ್ಡ ಗೆಂದ ತೆಂಗಿನ ಮರಗಳಲ್ಲಿ ಒಂದನ್ನು ಕೊಡಿ ಎಂದು ಕೇಳುವರು ಅದನ್ನು ಬಿಟ್ಟು ಬೇರೆ ಕೇಳಿ ಎಂದು ಬಲ್ಲಾಳ ಹೇಳಿದಾಗ ಸಣ್ಣ ತುಂಬಾ ದೊಡ್ಡ ತುಂಬಾ ಮಜಲು ಗದ್ದೆಗಳಲ್ಲಿ ಒಂದನ್ನು ಕೇಳುತ್ತಾರೆ .ಅದನ್ನು ಬಲ್ಲಾಳ ಕೊಡುವುದಿಲ್ಲ .ಆಗ “ಬೀಡಿನ ಹಟ್ಟಿಯಲ್ಲಿರುವ ಕಿನ್ನಿ ಕಾಳಿ ದೊಡ್ಡ ಕಾಳಿ ಹಸುಗಳಲ್ಲಿ ಒಂದನ್ನು ಕೊಡಿ” ಎಂದು ಕೋಟಿ ಚೆನ್ನಯರು ಕೇಳಿದರು   ಆಗ ಬಲ್ಲಾಳ “ನೀವು ನನ್ನ ಸ್ವಾರ್ಥಕ್ಕಾಗಿ ಆಶ್ರಯದಲ್ಲಿದ್ದೀರಿ ಪ್ರೀತಿಯಿಂದ ಸಾಕಿದೆ .ಆದರೆ ಅದಕ್ಕಾಗಿ ನನ್ನ ಹನ್ನೆರಡು ರಾಣಿಯರಲ್ಲಿ ಇಬ್ಬರನ್ನು ಕೊಡಬೇಕೆಂದರೆ ಕೊಡಲು ಸಾಧ್ಯವೇ ?ಎಂದು ಬಲ್ಲಾಳರು ಹೇಳಿದಾಗ ಕೋಟಿ ಚೆನ್ನಯರು “ತಾಯಿಯನ್ತಿರುವ ರಾಣಿಯರನ್ನು ನಮಗೆ ಕಟ್ಟುತ್ತೀರಲ್ಲ್ಲ .ಇಂದಿಗೆ ನಾವು ನೀವು ಎರಡಾಯಿತು ಸಂಬಂಧ ಕಡಿಯಿತು “ಎಂದು ಹೇಳಿ 5 ವೀಳ್ಯದೆಲೆ ಇಟ್ಟು  ಬಂದರು   . ಆ ಹೊತ್ತಿಗೆ ಬುದ್ಯಂತ ಸಾವಿನ ಸಮಾಚಾರವು ಬಲ್ಲಾಳನಿಗೆ ತಿಳಿಯಿತು .ಬುದ್ಯಂತ ಸತ್ತರೆ ಸಾಯಲಿ ನೀವು ಹೋಗ ಬೇಡಿ ಎಂದು ಬಲ್ಲಾಳ ಕೋಟಿ ಚೆನ್ನಯರಲ್ಲಿ ಕೇಳಿಕೊಳ್ಳುತ್ತಾನೆ .ಆದರೆ ಕೋಟಿ ಚೆನ್ನಯರು ಹಿಂದೆ ತಿರುಗಿ ನೋಡದೆ ಚಾವಡಿ ಇಳಿದು ಹೋಗುತ್ತಾರೆ .
ಅಲ್ಲಿಂದ ಅವರು ತಮ್ಮ ಅಕ್ಕ ಕಿನ್ನಿದಾರುವನ್ನು ಭೇಟಿ ಮಾಡುತ್ತಾರೆ .ಮುಂದೆ ಚಂದುಗಿಡಿಯ ಕುತಂತ್ರದಿಂದಾಗಿ ಪಂಜದ ಕೇಮರ ಬಲ್ಲಾಳ ಅವರನ್ನು ಬಂಧಿಸುತ್ತಾನೆ .ಅಲ್ಲಿಂದ ಅವರು ಬೆರ್ಮೆರ್ ಸಹಾಯದಿಂದ ತಪ್ಪಿಸಿಕೊಂಡು ಎನ್ಮೂರಿಗೆ ಬಂದು ಅಲ್ಲಿನ ಬಲ್ಲಾಳನ ಆಶ್ರಯದಲ್ಲಿ ಎರಡು ಗುತ್ತುಗಳು ಅಂದರೆ  ಕರ್ಮಿಲಜೆ ಮತ್ತು ನೆಕ್ಕಿಲಜೆಗುತ್ತುಗಳನ್ನು ಪಡೆದು ವ್ಯವಸಾಯ ಮಾಡಿಕೊಂಡು ಇರುತ್ತಾರೆ  .ಅವರು ಕೇಮಲಕ್ಕೆ ಹೋಗಿ ತಾಯಿ ಬೆರ್ಮೆರ್ ಗೆ ಹೇಳಿದ ಹರಿಕೆಯನ್ನು ತೀರಿಸುತ್ತಾರೆ.
ಒಂದು ದಿನ ಅವರು ಬೇಟೆಗೆ ಹೋಗುತ್ತಾರೆ ಕೋಟಿ  ಒಂದು ಹಂದಿಗೆ ಬಾಣ ಬಿಟ್ಟ ಆ ಹಂದಿ  ಪಂಜ-ಎನ್ಮೂರುಗಳ ಗಡಿಯಲ್ಲಿ ಸತ್ತು ಬೀಳುತ್ತದೆ .ಇದರಿಂದ ವಿವಾದ ಉಂಟಾಗಿ ಪಂಜದ ಬಲ್ಲಾಳರು ಯುದ್ಧಕ್ಕೆ ಬರುತ್ತಾರೆ .ಘೋರ ಯುದ್ಧ ನಡೆಯುತ್ತದೆ ಚಂದುಗಿಡಿ ಬಿಟ್ಟ ಬಾಣ ಒಂದು ಚೆನ್ನಯನ  ಕಾಲಿಗೆ ತಾಗುತ್ತದೆ.ಅವನು ಅಣ್ಣನಲ್ಲಿ “ಪಂಜದ ಪಡೆ ನಾಯಿ ಒಂದು ಕಾಲಿಗೆ ಕಚ್ಚಿತು ಎಂದು ಹೇಳುತ್ತಾನೆ .ಆಗ ಕೋಟಿಯು “ಕಣ್ಣಿಂದ ನೋಡ ಬೇಡ ಕೈಯಿಂದ ಹಿಡಿಯಬೇಡ ಒಳಗಿನಿಂದ ತೆಗೆದು ಹೊರಗೆ ಕೊಡಹು ಎಂದು ಹೇಳುತ್ತಾನೆ .ಅದರಂತೆ ಚೆನ್ನಯ ಕಾಲನ್ನು ಕೊಡಹಿದಾಗ ಒಂದು ಗದ್ದೆಯ ಜನ ಪೂರ್ತಿ ನಾಶವಾದರು .
ಯುದ್ಧದಲ್ಲಿ ಕೋಟಿ ಚೆನ್ನಯರು ಚಂದು ಗಿಡಿಯನ್ನು ಕೊಲ್ಲುತ್ತಾರೆ .ಆಗ ಪಂಜದ ಸೈನ್ಯ ಸೋತು ಶರಣಾಗುತ್ತದೆ . ಈ ಸಂದರ್ಭದಲ್ಲ್ಲಿ ಪಂಜದ ಕೆಮರ ಬಲ್ಲಾಳನ ಜುಟ್ಟು ಹಿಡಿದು ಕೋಟಿ ಬಗ್ಗಿಸುತ್ತಾನೆ ಆಗ ಕೋಟಿಯ ಬಲ ಮರ್ಮಾಂಗಕ್ಕೆ ಬಾಣ ಒಂದು ಬಂದು ನಾಟಿತು .ಅದನ್ನು ಪಡುಮಲೆ ಬಲ್ಲಾಳನೆ ಬಿಟ್ಟಿರುತ್ತಾನೆ
ಮರ್ಮಾಂಗಕ್ಕೆ ಬಾಣ ನಾಟಿರುವುದರಿಂದ ತನ್ನ ಅಂತ್ಯ ಸಮೀಪಿಸಿದೆ ಎಂದು ಕೋಟಿಗೆ ತಿಳಿಯಿತು .ಅಣ್ಣನನ್ನು ಅಪ್ಪಿಕೊಂಡ ಚೆನ್ನಯ “ಹುಟ್ಟಿನ ಅಮೇ ಒಂದಾಗಿರುವಾಗ ನಮಗೆ ಸಾವಿನ ಸೂತಕ ಎರಡಾಗುವುದೇ ?! ಎಂದು ಉದ್ಗರಿಸಿದನು ಕೋಟಿ ಯು   ತಮ್ಮನ್ನು ಸಾಕಿದ ಬಲ್ಲಾ ಳನೆಡೆಗೆ ನೋಡಿ “ತಮಗೆ ಜಾತಿ ಭೇದ ನೋಡದೆ ಗರೋಡಿ ಕಟ್ಟಿ ಆರಾಧಿಸುತ್ತಾ ಬನ್ನಿ ನಿಮಗೆ ರಕ್ಷಣೆ ಕೊಡುತ್ತೇವೆ,ನೆನೆಸಿದಲ್ಲಿ ನೆಲೆಯಾಗುತ್ತೇವೆ ,ನ್ಯಾಯಕ್ಕೆ ಇಂಬು ಕೊಡುತ್ತೇವೆ ,ಬೆಳೆಗೆ ರಕ್ಷಣೆ ಕೊಡುತ್ತೇವೆ “ಎಂದು ಹೇಳಿ ವೀರ ಮರಣವನ್ನಪ್ಪುತ್ತಾನೆ .ಆಗ ಚೆನ್ನಯ “ನಮಗೆ ಹೆತ್ತ ಸೂತಕ ಒಂದೇ ಆಗಿತ್ತು ಈಗ ಸತ್ತ ಸೂತಕ ಎರಡಾಗ ಬೇಕೇ ನಾನು ಕೂಡ ನಿನ್ನ ಜೊತೆ ಬರುತ್ತೇನೆ “ಎಂದು ಹೇಳಿ ದಂಬೆ ಕಲ್ಲಿಗೆ ತಲೆಯನ್ನು ಅಪ್ಪಳಿಸಿ ಅಣ್ಣನನ್ನು ಅನುಸರಿಸುತ್ತಾನೆ .ಹೀಗೆ ವೀರ ಮರಣ ವನ್ನಪ್ಪುವ ಸ್ವಾಭಿಮಾನಿಗಳೂ ಅತುಲ ಪರಾಕ್ರಮಿಗಳೂ ಆದ ಅವಳಿ ಸಹೋದರರಾದ ಕೋಟಿ ಚೆನ್ನಯರು ಆರಾಧ್ಯ    ಶಕ್ತಿಗಳಾಗಿ ತುಳುನಾಡನ್ನು ಬೆಳಗುತ್ತಿದ್ದಾರೆ .
 ಇತಿಹಾಸದ ದೃಷ್ಟಿಯಿಂದ   ಪಂಜದ ಕೆಮರ ಬಲ್ಲಾಳ .ಪಡುಮಲೆ ಬಲ್ಲಾಳರ ಉಲ್ಲೇಖ  ಇಲ್ಲಿ ಬಹಳ ಮುಖ್ಯವಾದುದು .ಈ ಆಧಾರಗಳಿಂದ ಕೋಟಿ ಚೆನ್ನಯರ ಕಾಲವನ್ನು ಸುಮಾರು ೧೬ ನೆ ಶತಮಾನ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ
ಪಂಜದ ಕೂತ್ಕುಂಜದಲ್ಲಿರುವ ಗೆಳತಿ ಮಂಗಳ ಗೌರಿಯ ಅಣ್ಣ ನಮ್ಮನ್ನು ಕೋಟಿ ಚೆನ್ನಯರ ಆದಿ ಗರೋಡಿ ಹಾಗು ಸಮಾಧಿ ಇರುವೆಡೆಗೆ ಕರೆದುಕೊಂಡು ಹೋಗಿದ್ದರು .ಎತ್ತರದ ಗುಡ್ಡದ ತುದಿಯಲ್ಲಿ ಆದಿ ಗರೋಡಿ ಇದೆ ತುಸು ದೂರದಲ್ಲಿ ಕೋಟಿ ಚೆನ್ನಯರ ಸಮಾಧಿ ಇದೆ .ಕೋಟಿ ಚೆನ್ನಯರ ಸುರಿಯವನ್ನು ಹಾಕಿರುವ ಒಂದು ಮುಚ್ಚಿದ ಬಾವಿ ಅಲ್ಲಿದೆ.ಸುತ್ತ ಮುತ್ತ ಕಾಡು ಇರುವ ನಿರ್ಜನ ತಾಣ  ಇದು.  ಹೋಗುವಾಗ ನಾವೆಲ್ಲಾ ಬಹಳ ಸಂಭ್ರಮದಲ್ಲಿ ಹೋಗಿದ್ದೆವು .ಹೋಗುತ್ತಾ ಕೋಟಿ ಚೆನ್ನಯರ ವೀರ ಗಾಥೆಯನ್ನು ನಾನು ಹೇಳಿದೆ .ಕೋಟಿ ಚೆನ್ನಯರ ಸಮಾಧಿ ನೋಡಿ ಹಿಂದೆ ಬರುವಾಗ ಏಕೋ ಏನೋ ನಮ್ಮೆ ಕಣ್ಣಂಚು ತೇವಗೊಂಡಿತ್ತು .ಮನಸ್ಸು ಭಾರವಾಗಿತ್ತು. ಕೋಟಿಚೆನ್ನಯರು  ಬೆಳೆದ ಅವರ ಮಾವ  ಸಾಯನ ಮನೆ ಗೆಜ್ಜೆ ಗಿರಿ ನಂದನ ಹಿತ್ತಿಲು ,ಪಡುಮಲೆ ಬಲ್ಲಾಳನ ಅರಮನೆಯ ಅವಶೇಷ ,ದೇಯಿ ಬೈದ್ಯೆತಿ ಹುಟ್ಟಿದ ಕೂವೆ ತೋಟ ಮನೆ ಮತ್ತು ಅದರ ವಾರಸು ದಾರರು ಮತ್ತು ಅಕ್ಕ ಕಿನ್ನಿದಾರುವಿನ ದೋಲದ ಮನೆ ,ಕೋಟಿಚೆನ್ನಯರು ನೀರು ಕುಡಿದ ಬಾವಿ ,ಅವರ ಪ್ರತೀಕ ವಾಗಿರುವ ಎರಡು ತಾಳೆ ಮರಗಳು ಈಗ ಕೂಡ ಇವೆ © ಡಾ.ಲಕ್ಷ್ಮೀಜಿ ಪ್ರಸಾದ(ಸೂಕ್ತ ಚಿತ್ರ ಒದಗಿಸಿದ ಜೀವಿತ್ ಶೆಟ್ಟಿ ಮಂಗಳೂರು ಇವರಿಗೆ ಧನ್ಯವಾದಗಳು ) copy rights reserved
ಆಧಾರ : ಕೋಟಿ ಚೆನ್ನಯ ಪಾಡ್ದನ ಸಂ ಮೋಹನ್ ಕುಮಾರ್
ಗರೊಡಿಗಳ ಸಾಂಸ್ಕೃತಿಕ ಅದ್ಯಯನ: ಡಾ.ಬನ್ನಂಜೆ ಬಾಬು ಅಮೀನ್ 
ಭೂತಾರಾಧನೆಗ- ಒಂದು ಜಾನಪದೀಯ ಅಧ್ಯಯನ ( ಪಿಎಚ್ ಡಿ ಮಹಾ ಪ್ರಬಂಧ) ಡಾ.ಚಿನ್ನಪ್ಪ ಗೌಡ