Sunday 12 November 2023

ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ -ಡಾ.ಲಕ್ಷ್ಮೀ ಜಿ ಪ್ರಸಾದ್

 ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ


                     ಪ್ರಸ್ತಾವನೆ 


ಪಾಡ್ದನಗಳ  ಕಣಜ ಎಂದೇ ಕರೆಯ ಬಹುದಾದ ಶ್ರೀಮತಿ ಶಾರದಾ ಜಿ  ಬಂಗೇರ ಚಿಕ್ಕಂದಿನಿಂದಲೇ ತುಳು ಜಾನಪದ ಸಂಸ್ಕೃತಿಯೆಡೆಗೆ ಆಕರ್ಷಿತರಾದವರು ,ಎಲೆ ಮರೆಯ ಕಾಯಿ ಅಲ್ಲ ಪರಿ ಪಕ್ವವಾದ ಹಣ್ಣು .


ಬಂಟ್ವಾಳದಲ್ಲಿ ನಡೆದ ಅಂತರ ರಾಜ್ಯ ದ್ರಾವಿಡ ಜಾನ ಪದ  ಜಾತ್ರೆಯಂದು ನನಗೆ ಪರಿಚಿತರಾದ ಅಪೂರ್ವ ತುಳು ಜಾನ ಪದ ಕಲಾವಿದೆ ಇವರು .ನನಗೆ ಪುದ ಎನ್ನುವ ದೈವದ ಮಾಹಿತಿ ಬೇಕಾಗಿದ್ದು ಇವರಲ್ಲಿ ಪುದ ಅನ್ನುವ ಪಾಡ್ದನ ಏನಾದರೂ ನಿಮಗೆ ತಿಳಿದಿದೆಯೇ ?ಎಂದು ನಾನು ಕೇಳಿದಾಗ ಪುದ ಎನ್ನುವ ಕವಿತೆ ತಮಗೆ ತಿಳಿದಿದೆ ಎಂದು ಹೇಳಿದರು .ಅದೊಂದು ಕವಿತೆಯನ್ನು ರೆಕಾರ್ಡ್ ಮಾಡುವ ಉದ್ದೇಶದಿಂದ ನಾನು ಅವರ ಫೋನ್ ನಂಬರ್ ತೆಗೆದುಕೊಂಡು ಅನಂತರ ಅವರನ್ನು ಸಂಪರ್ಕಿಸಿದೆ .ಅದೇ ವರ್ಷ ನಮ್ಮ ಬೆಳ್ಳಾರೆ ಕಾಲೇಜಿನ ಆಟಿ ಆಯನ ಕಾರ್ರ್ಯಕ್ರಮಕ್ಕೆ ಅತಿಥಿಯಾಗಿ  ಆಹ್ವಾನಿಸಿದೆವು .ಆ ಸಂದರ್ಭದಲ್ಲಿ ಅವರ ಅಗಾಧ ಜಾನ ಪದ ಸಂಪತ್ತಿನ ಪರಿಚಯವಾಯಿತು ನನಗೆ .ನಂತರ  ನನಗೆ ಬೇಕಾದ ಪಾಡ್ದನಗಳನ್ನು ,ಹಾಡುಗಳನ್ನು ನಾನು ರೆಕಾರ್ಡ್ ಮಾಡಿ ಕೊಂಡೆ .ಕೆಲವು ಮಿತಿಗಳ ಕಾರಣದಿಂದ ಅವರ ಎಲ್ಲ ಮೌಖಿಕ ಸಾಹಿತ್ಯವನ್ನು ದಾಖಲಿಸಲು ಸಾಧ್ಯವಾಗಿಲ್ಲ. ಆದರೆ ಮುಂದೆ ಆ ನಿಟ್ಟಿನಲ್ಲಿ ಕೆಲಸವಾಗ ಬೇಕೆಂದು ಬಯಸುತ್ತೇನೆ 


 ನಮ್ಮ ಒಲುಮೆಯ ಸರಳ ಸಜ್ಜನಿಕೆಯ ಶಾರದಕ್ಕ ಚಿಕ್ಕಂದಿನಲ್ಲಿ ಗದ್ದೆಯ ಕೆಲಸ ಮಾಡುವ ಸಂದರ್ಭದಲ್ಲಿ ನೇಜಿ ಹಾಡುಗಳನ್ನು ,ಪಾಡ್ದನಗಳನ್ನೂ ಕಟ್ಟಲು ಕಲಿತವರು.ಮಣಿ ನಾಲ್ಕೂರಿನ ಶ್ರೀ ಗಂಗಾಧರ ಬಂಗೇರರನ್ನು ಕೈ ಹಿಡಿದು ನಾದಾ ಮಣಿ ನಾಲ್ಕೂರು ಎಂಬ ಪ್ರತಿಭಾವಂತ ಮಗನನ್ನೂ ,ಇಬ್ಬರು ಸುಸಂಸ್ಕೃತ ಹೆಣ್ಣು ಮಕ್ಕಳನ್ನೂ ಪಡೆದು ಸಂತೃಪ್ತ ಜೀವನವನ್ನು ನಡೆಸುತ್ತಿರುವವರು.ವೃತ್ತಿಯಲ್ಲಿ ಅಂಗನವಾಡಿ ಸಹಾಯಕಿಯಾಗಿದ್ದ ಇವರು ತಮಗೆ ಬೆಂಬಲ ನೀಡಿದ ಮೇಲಧಿಕಾರಿಗಳನ್ನು ಮನಸಾ ನೆನೆಯುತ್ತಾರೆ 


ಬಾಲ್ಯದಲ್ಲಿ ತಮ್ಮ  ಪಕ್ಕದ ಮನೆ ಅಜ್ಜಿ ಯಿಂದ  ಅನೇಕ ಪಾಡ್ದನಗಳನ್ನು ಕಲಿತೆ ಎಂದಿವರು ಹೇಳುತ್ತಾರೆ .ಇವರ ಸ್ಮರಣ ಶಕ್ತಿ ,ಪಾಡ್ದನ ಕಟ್ಟುವ ಸೃಜನ ಶೀಲತೆ ,ಅದಮ್ಯ ಉತ್ಸಾಹ ,ತುಳು ಸಂಸ್ಕೃತಿ ಎಡೆಗಿನ ತುಡಿತ ನಿಜಕ್ಕೂ ಶ್ಲಾಘನೀಯವಾದುದು , ಅನುಕರಣೀಯವಾದುದು


ಇವರು ಸುಮಾರು ೧೦೦ -೧೧೦ ಪಾಡ್ದನಗಳನ್ನೂ ,ಅಷ್ಟೇ ಸಂಖ್ಯೆಯ ಅಥವಾ ಅದಕ್ಕೂ ಹೆಚ್ಚಿನ ಸಂಖ್ಯೆಯ ತುಳು ಪದಗಳನ್ನೂ (ಕವಿತೆಗಳನ್ನೂ )ಹಾಡ ಬಲ್ಲರು .ಅನೇಕ ಉರಲ್ ಗಳನ್ನೂ ತಿಳಿದಿದ್ದಾರೆ .ಜೊತೆಗೆ ಇವೆಲ್ಲವನ್ನೂ ಸುಶ್ರಾವ್ಯವಾಗಿ ಸುಮಧುರ ಕಂಠದಿಂದ ಮಧುರವಾಗಿ ಹಾಡುತ್ತಾರೆ ಕೂಡಾ .


ಇವರ ಈ ತನಕ ಬೇರೆಲ್ಲೂ ದಾಖಲಾಗದ ,ಮುದ್ರಣ ಗೊಳ್ಳದ ಬಾಲೆ ಮಧುರಗೆ  ,ಕರಿಯ ಕನ್ಯಾ ಮದನು,ಜಾಯಿಲ ಬಂಗೇತಿ,ಬಾಲೆ ಪದ್ಮಕ್ಕೆ ,ಚಂದ ಬಾರೀ ರಾಧೆಗೋಪಾಲ ,ಚಾಮುಂಡಿ ,ಈಶ್ವರ ದೇವರ ಪಾಡ್ದನ ,ಬಾಲೆ ರಂಗಮೆ ,ಅಬ್ಬಿನ ಬಂಗಾರು, ಬಾಲೆ ಜೆವು ಮಾಣಿಗ,ನಾಗ ಸಿರಿ ಕನ್ನಗೆ ಮೊದಲಾದ ಪಾಡ್ದನಗಳು ನನ್ನ ಪಾಡ್ದನ ಸಂಪುಟ ಮತ್ತು ಚಂದ ಬಾರಿ ರಾಧೆ ಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು ಕೃತಿಯಲ್ಲಿ ದಾಖಲಾಗಿವೆ .ಇವರ ಅನೇಕ ಕವಿತೆಗಳು ನನ್ನ ತುಳು ಜನ ಪದ ಕವಿತೆಗಳು ಕೃತಿಯಲ್ಲಿ ಮುದ್ರಣ ಗೊಂಡಿವೆ 




ಶ್ರೀಮತಿ ಶಾರದಾ ಜಿ. ಬಂಗೇರರ ಪಾಡ್ದನಗಳು © ಡಾ.ಲಕ್ಷ್ಮೀ ಜಿ ಪ್ರಸಾದ್


ಚಂದ ಬಾರಿ ರಾಧೇ ಗೋಪಾಲ ಒಂದು ಅನನ್ಯ ಚಿಂತನೆಯ ಒಳಗನ್ನು ತೋರುವ ವಿಶಿಷ್ಟ ಪಾಡ್ದನ .ವೈದಿಕ ಸಂಪ್ರದಾಯಕ್ಕಿಂತ ಭಿನ್ನವಾದ ಶ್ರೀ ಕೃಷ್ಣನ ಪರಿಕಲ್ಪನೆ ಇಲ್ಲಿದೆ .ಮಧುರಗೆ ಮದುಮಗಳು ಪಾಡ್ದನವು ಜುಮಾದಿ ದೈವದ ಕಾರನಿಕವನ್ನು ಹೇಳುವುದರೊಂದಿಗೆ ಮದುವೆಯಾಗುವ ಮೊದಲು ಹೆಣ್ಣು ಮಕ್ಕಳು ಮೈ ನೆರೆದರೆ ಕಣ್ಣು ಕಟ್ಟಿ ಕಾಡಿಗೆ ಬಿಡುತ್ತಿದ್ದ ಅನಿಷ್ಟ ಪರಂಪರೆಯನ್ನೂ ಆ ಸಂದರ್ಭದಲ್ಲಿ ಹೆತ್ತವರೂ ,ಆ ಹೆಣ್ಣು ಮಗುವೂ ಅನುಭವಿಸುವ ಕಷ್ಟ ಕಾರ್ಪಣ್ಯಗಳನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ .ಜಾಯಿಲ ಬಂಗೆತಿ ಪಾಡ್ದನವು ಅಶುಭ ಗಳಿಗೆಯಲ್ಲಿ ಮೈ ನೆರೆದ ಹೆಣ್ಣು ಮಗಳನ್ನು ಮನೆಯಿಂದ ಹೊರ ಹಾಕುವ ವಿಚಾರವನ್ನು ತಿಳಿಸುತ್ತಲೇ ಮಕರಂದ ಪೊಂಜೋವಿನ ಉದಾರತೆಯನ್ನು ತಿಳಿಸುತ್ತೆದೆ .ಬಾಲೆ ರಂಗಮೆ ಬಲಾತ್ಕಾರವಾಗಿ ವಿವಾಹವಾಗಲು ಯತ್ನಿಸಿದ ಭೈರರಸನನ್ನು ಉಪಾಯದಿಂದ ಸಾಯಿಸುವ ಕಥೆ ಇದೆ .ಮೂಲ್ಕಿಯ ವೀರರಾದ ಕಾಂತ ಬಾರೆ ಬೂದ ಬಾರೆಯರ ತಾಯಿ ಎಂದು ಪರಿಗಣಿಸಲ್ಪಟ್ಟಿರುವ ಅಬ್ಬಿನ ಬಂಗಾರು ಎಂಬ ಹೆಣ್ಣು ಮಗಳ ಜಾಣ್ಮೆ ದಿಟ್ಟತನವನ್ನು ಅಬ್ಬಿನ ಬಂಗಾರು ಪಾಡ್ದನ ಪರಿಚಯಿಸುತ್ತದೆ .ಹೀಗೆ ಜೀವನದ ಬೇರೆ ಬೇರೆ ಮಜಲುಗಳನ್ನು ಏಳು ಬೀಳುಗಳ ಕಥಾ ವಸ್ತುಗಳನ್ನು ಇವರ ಪಾದ್ದನಗಳಲ್ಲಿ ಕಾಣ ಬಹುದು.


1.ಚಾಮುಂಡಿ ಪಾಡ್ದನ


 


ಚಾಮುಂಡಿ ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ, ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ? ಎಂಬ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ. ಚಾಮುಂಡಿ ದೈವದ ಆರಾಧನೆಯ ಸಂದರ್ಭದಲ್ಲಿ ಅದರ ಪ್ರಸರಣ ಕಾರಣಿಕರ ಕುರಿತಾದ ಪಾಡ್ದನವನ್ನು ಹೇಳುತ್ತಾರೆ. ಚಾಮುಂಡಿ ಭೂತದ ಹುಟ್ಟಿನ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.


ಚಾಮುಂಡಿ ದೈವದ ಹುಟ್ಟಿನ ಕುರಿತಾದ ಒಂದು ಪಾಡ್ದನದ ಭಾಗವನ್ನು ಪಾಡ್ದನಗಾರ್ತಿ ಶ್ರೀಮತಿ ಶಾರದಾ ಜಿ.ಬಂಗೇರ ಅವರಿಂದ ನಾನು ಸಂಗ್ರಹಿಸಿದ್ದು ಅದರ ಪ್ರಕಾರ ಚಾಮುಂಡಿ ಭೂತ ಮೂಲತಃ ಚಾಮುಂಡಿ ಎಂಬ ಹೆಸರಿನ ಹುಡುಗಿ. ಈ ಪಾಡ್ದನದಲ್ಲಿ ಎಡದಲ್ಲಿ ಎಡಮಲೆ, ಬಲದಲ್ಲಿ ಬಲಮಲೆ, ನಡುವಿನಲ್ಲಿ ನಡುಮಲೆ ಇದೆ. ಇದರಲ್ಲಿ ಭೀಮರಾಯ ಭಟ್ಟರ ಸಂಪಿಗಾನ ತೋಟವಿದೆ. ಒಂದು ದಿನ ಭೀಮರಾಯ ಭಟ್ಟರು ಸ್ನಾನಕ್ಕೆಂದುಸಂಪಿಗಾನ ತೋಟದ ನಡುವಿನಲ್ಲಿರುವ ತಾವರೆಯ ಕೊಳಕ್ಕೆ ಬರುತ್ತಾರೆ. ಅಲ್ಲಿಒಂದು ಬಿಳಿಯ ತಾವರೆ ಹೂ ಭೀಮರಾಯ ಭಟ್ಟರ ಮಡಿಲಿಗೆ ಬಂದು ಬೀಳುತ್ತದೆ. ತಮ್ಮ ಉತ್ತರೀಯದಲ್ಲಿ ಆ ಬಿಳಿಯ ತಾವರೆ ಹೂವನ್ನು ಕಟ್ಟಿಕೊಂಡು ಬಂದ ಭೀಮುರಾಯ ಭಟ್ಟರು ದೇವರ ಕೋಣೆಗೆ ತಂದುದೇವರಿಗೆ ಅರ್ಪಿಸುತ್ತಾರೆ. ಆಗ ಆ ಬಿಳಿಯ ತಾವರೆ ಹೂ ಒಂದು ಹೆಣ್ಣು ಮಗುವಾಗುತ್ತದೆ. ಮಕ್ಕಳಿಲ್ಲದೆ ಕೊರಗುತ್ತಿದ್ದ ಭೀಮುರಾಯ ಭಟ್ಟರಿಗೆ ಬಹಳ ಸಂತೋಷ ವಾಗುತ್ತದೆ. ಆ ಮಗುವಿಗೆ `ಚಾಮುಂಡಿ’ ಎಂದು ಹೆಸರಿಟ್ಟು ಸಾಕುತ್ತಾರೆ. ಮುಂದೆ `ಚಾಮುಂಡಿ’ ಎಂಬ ಹೆಸರುಳ್ಳ ಮಗುವೇ ದೈವತ್ವವನ್ನು ಪಡೆದು ಚಾಮುಂಡಿ ಭೂತವಾಗಿ ಆರಾಧನೆ ಹೊಂದುತ್ತಾಳೆ. ಆದರೆ ಅವಳು ಹೇಗೆ ದೈವತ್ವವನ್ನು ಪಡೆದಳು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.


ತುಳುನಾಡಿನಲ್ಲಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ 


ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಜಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ `ಚಾಮುಂಡಿ’ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿವೆ.© ಡಾ.ಲಕ್ಷ್ಮೀ ಜಿ ಪ್ರಸಾದ್




2.ಚಂದಬಾರಿ ರಾಧೆ ಗೋಪಾಲ

© ಡಾ.ಲಕ್ಷ್ಮೀ ಜಿ ಪ್ರಸಾದ್

ಪುರಾಣದ ಕಲ್ಪನೆಗಿಂತ ಭಿನ್ನವಾಗಿ, ತುಳು ಜಾನಪದ ಪಾಡ್ದನಗಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲುಪ, ಲಂಪಟ ಎಂಬಂತೆ ಚಿತ್ರಿಸಿರುವುದು ತುಳು ಜನಪದರಲ್ಲಿದ್ದ ನಿಂದಾಸ್ತುತಿಯ ಹೊಳಹನ್ನು ನೀಡುತ್ತದೆ. ದೇವರನ್ನು ಕೂಡ ತಮ್ಮ ಲ್ಲೇ ಒಬ್ಬನಂತೆ ಪರಿಭಾವಿಸುವ ಮುಗ್ಧ ಸ್ವಾತಂತ್ರ್ಯ ಜನಪದರಿಗಷ್ಟೇ ಇರಲು ಸಾಧ್ಯವೇನೋ....


ತುಳು ಜನಪದ ಸಾಹಿತ್ಯದಲ್ಲಿ ಅದರಲ್ಲಿಯೂ ವಿಶೇಷವಾಗಿ ಪಾಡ್ದನಗಳಲ್ಲಿ ಈಶ್ವರ,ಕೃಷ್ಣ ಮೊದಲಾದ ದೇವರುಗಳ ಉಲ್ಲೇಖವಿದೆ. ಇಲ್ಲಿ ದೇವರುಗಳು ಪುರಾಣದ ಕಲ್ಪನೆಗಿಂತ ಭಿನ್ನವಾಗಿ ಚಿತ್ರಿಸಲ್ಪಟ್ಟಿದ್ದಾರೆ. ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಶ್ರೀಕೃಷ್ಣ ಪ್ರಧಾನ ಪಾತ್ರವಾಗಿದ್ದಾನೆ. ನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಕೃಷ್ಣನ ಪ್ರಸ್ತಾಪವಿದೆ. ಇಲ್ಲೆಲ್ಲ ಶ್ರೀಕೃಷ್ಣನನ್ನು ಮಹಾತ್ಮನನ್ನಾಗಿ ಚಿತ್ರಿಸಿಲ್ಲ, ಈ ಪಾಡ್ದನಗಳಲ್ಲಿ ಶ್ರೀಕೃಷ್ಣನನ್ನು ಸ್ತ್ರೀಲೋಲನಾಗಿ, ವಿಷಯಲಂಪಟನಂತೆ, ಕಳ್ಳರ ಕಳ್ಳನಂತೆ ಚಿತ್ರಿಸಲಾಗಿದೆ.


ಪುರಾಣದ ಪರಿಕಲ್ಪನೆಯಲ್ಲಿ ಶ್ರೀಕೃಷ್ಣ-ರಾಧೆಯರು ರಾಧೆಯರು ಅನುಪಮ ಪ್ರೇಮಿಗಳು. ಕೃಷ್ಣನಿಗೆ ಒಲಿದ ರಾಧೆ ತಾನಾಗಿಯೇ ಕೃಷ್ಣನೆಡೆಗೆ ಬಂದಂತೆ ಕತೆ ಪುರಾಣಗಳಲ್ಲಿದೆ. ಆದರೆ ಚಂದಬಾರಿ ರಾಧೆ ಸಿರಿಕೃಷ್ಣಕತೆ ಪಾಡ್ದನದಲ್ಲಿ ಶ್ರೀಕೃಷ್ಣನು ರಾಧೆಯನ್ನು ಮೋಸದಿಂದ ವಶಪಡಿಸಿಕೊಂಡ ಕಥಾನಕವಿದೆ. ಚಂದಬಾರಿಯನ್ನು ಶ್ರೀಕೃಷ್ಣನಿಗೆಕೊಟ್ಟು ಮದುವೆ ಮಾಡಿಕೊಟ್ಟಿರುವುದರಿಂದ ರಾಧೆಗೆ ತನಗೋರ್ವ ಅಕ್ಕಇರುವುದು ತಿಳಿದಿರುವುದಿಲ್ಲ. ಒಂದು ದಿನ ರಾಧೆ ತನ್ನ ಪತಿ ಗೋಪಾಲನಲ್ಲಿ ನನಗೆ ಯಾರು ಸಂಬಂಧಿಕರು ಇಲ್ಲವೇ? ಎಂದು ಪ್ರಶ್ನಿಸುತ್ತಾಳೆ.


ಆಗ ಗೋಪಾಲನ್ನು `ನಿನಗೆ ಚಂದಬಾರಿ ಎಂಬ ಅಕ್ಕ ಇದ್ದಾಳೆ. ಅವಳಿಗೆ ಮೇಲಿನ ಮಿರಿಲೋಕದ ಶ್ರೀಕೃಷ್ಣನೊಂದಿಗೆ ಮದುವೆಯಾಗಿದೆ’ ಎಂದು ಹೇಳುತ್ತಾನೆ.


ತನಗೆ ಅಕ್ಕ ಇದ್ದಾಳೆಂಬ ತಿಳಿದಾಗ ಸಂತಸಗೊಂಡರಾಧೆ, ಆಕೆಯನ್ನು ನೋಡಬೇಕು ಎಂದು ಹಠ ಮಾಡುತ್ತಾಳೆ. ಆಗ ಗೋಪಾಲ, ನಿನ್ನ ಭಾವ ಶ್ರೀಕೃಷ್ಣನಿಗೆ ಒಳ್ಳೆಯ ಗುಣಗಳಿಲ್ಲ, ಹೋಗಬೇಡ ಎನ್ನುತ್ತಾನೆ.


ಆದರೆ ರಾಧ ಹಠ ಮಾಡಿ ಊಟ ತಿಂಡಿ ಸ್ನಾನಾದಿಗಳನ್ನು ತ್ಯಜಿಸುತ್ತಾಳೆ. ಆಗ ಮನ ಕರಗಿದ ಗೋಪಾಲ ದಂಡಿಗೆ ಸಿದ್ಧಪಡಿಸಿ ಕಳುಹಿಸಿಕೊಡುತ್ತಾನೆ.


ಮೇಲು ಮಿರಿಲೋಕದಲ್ಲಿ ಕಂಬಳ ಗದ್ದೆಯ ಕಟ್ಟಹುಣೆಯಲ್ಲಿ ದಂಡಿಗೆ ಬರುವುದನ್ನು ನೋಡಿದ ಶ್ರೀಕೃಷ್ಣ ದಂಡಿಗೆ ಬರುತ್ತಿರುವ ಬಗ್ಗೆ ಹೇಳಿದಾಗ ಚಂದಬಾರಿಗೆ ಬರುತ್ತಿರುವುದು ತನ್ನ ತಂಗಿ ರಾಧೆ ಎಂದು ತಿಳಿಯುತ್ತದೆ. ಆಗ ಅವಳು ``ಅವಳು ನನ್ನ ತಂಗಿ ರಾಧೆ. ಅವಳು ಬರಲಿ, ಅವಳ ತಂಟೆಗೆ ಹೋಗಬೇಡಿ’’ ಎಂದು ಕೇಳಿಕೊಳ್ಳುತ್ತಾಳೆ.


ರಾಧೆಯನ್ನು ಪ್ರೀತಿಯಿಂದ ಬರಮಾಡಿಕೊಂಡ ಚಂದಬಾರಿ ಕೈಕಾಲು ತೊಳೆಯಲು ಮುತ್ತಿನ ಕೆರೆಗೆ ಕಳುಹಿಸುತ್ತಾಳೆ. ಅಲ್ಲಿ ಶ್ರೀಕೃಷ್ಣ ತಾವರೆ ಹೂವಾಗಿ ಬಂದು ರಾಧೆಯ ಮಡಲಿಗೆ ಬಿದ್ದು ತನ್ನ ನಿಜರೂಪ ತೋರಿದಾಗ ಕೃಷ್ಣನ ಕುರಿತು ಮೊದಲೇ ತಿಳಿದಿದ್ದ ರಾಧೆ ಅವನನ್ನು ಬೈದು, ಅವನಿಂದ ತಪ್ಪಿಸಿಕೊಂಡು ಅಕ್ಕನಿರುವಲ್ಲಿಗೆ ಬರುತ್ತಾಳೆ.


ಅಕ್ಕ-ತಂಗಿ ಅಕ್ಕಪಕ್ಕ ಕುಳಿತುಆತ್ಮೀಯತೆಯಿಂದ ಮಾತನಾಡಿ ಬೇಸರ ಕಳೆಯುತ್ತಾರೆ. ಸಂಜೆಯಾಗುತ್ತಲೇ ತಂಗಿ ರಾಧೆಯು ಅಕ್ಕನನ್ನು ತನ್ನ ಮನೆಗೆ ಬರುವಂತೆ ಆಹ್ವಾನಿಸಿ ತನ್ನ ಮನೆಗೆ ಹಿಂದಿರುಗುತ್ತಾಳೆ.


ಇತ್ತ ಶ್ರೀಕೃಷ್ಣ ಚಂದಬಾರಿಯ ಒಂದು ಸೀರೆಯನ್ನು ಉಟ್ಟು ಚಂದಬಾರಿಯ ವೇಷವನ್ನು ಧರಿಸುತ್ತಾನೆ. ಅಕ್ಕನ ದಾರಿಯನ್ನುಕಾಯುತ್ತಿದ್ದ ರಾಧೆ ಚಂದಬಾರಿ ರೂಪದಲ್ಲಿ ಬಂದ ಶ್ರೀಕೃಷ್ಣನನ್ನು ಅಕ್ಕನೆಂದೇ ಭಾವಿಸಿ ಸ್ವಾಗತಿಸಿ ಸತ್ಕಾರ ಮಾಡುತ್ತಾಳೆ. ರಾತ್ರಿ ಊಟ ಮಾಡಿ ಏಳು ಮಾಳಿಗೆಯ ಉಪ್ಪರಿಗೆಯ ಮೇಲೆ ಹೋಗಿ ರಾಧೆ ಮತ್ತು ಚಂದಬಾರಿ ರೂಪದಲ್ಲಿರುವ ಶ್ರೀಕೃಷ್ಣ ಮಲಗಲು ಹೋಗುತ್ತಾರೆ. ತಂಗಿರಾಧೆ ಅಕ್ಕನಲ್ಲಿ ಕಥೆ ಹೇಳೆಂದು ಹೇಳುವಾಗ ನನಗೆ ಕಥೆಗಿತೆ ತಿಳಿದಿಲ್ಲ. ನಾನು ನನ್ನ ದೇವರುಶ್ರೀಕೃಷ್ಣ ನಾಮಸ್ಮರಣೆ ಮಾತ್ರ ಮಾಡುವುದು ಎಂದು ಚಂದಬಾರಿ ರೂಪ ಧರಿಸಿದ ಶ್ರೀಕೃಷ್ಣ ಹೇಳುತ್ತಾನೆ. ಹಾಗಾದರೆ ಅದನ್ನೇ ಹೇಳು ಎಂದು ರಾಧೆ ಹೇಳುತ್ತಾಳೆ. ಆಗ ನಾನು ಹೇಳುವುದಿಲ್ಲ. ನಾನು ಹೇಳಿದರೆ ನಿನ್ನ ಭಾವ ಇಲ್ಲಿ ಪ್ರತ್ಯೇಕ್ಷವಾಗುತ್ತಾನೆ ಎಂದುಚಂದಬಾರಿ ರೂಪದ ಶ್ರೀಕೃಷ್ಣ ಹೇಳುತ್ತಾನೆ. ತೊಂದರೆ ಇಲ್ಲ. ಅದನ್ನೇ ಹೇಳು ಎಂದು ರಾಧೆ ಹೇಳಿದಾಗ ಚಂದಬಾರಿ ರೂಪದ ಶ್ರೀಕೃಷ್ಣ.ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾನೆ. ಕೂಡಲೇ ತನ್ನ ನಿಜ ರೂಪವನ್ನು ತೋರುತ್ತಾನೆ. ಆ ಬಳಿಕ ಏಳು ರಾತ್ರಿ ಏಳು ಹಗಲು ರಾಧೆ ಮತ್ತು ಕೃಷ್ಣ ಜೊತೆಯಾಗಿ ಇರುತ್ತಾರೆ. ಇತ್ತ ಚಂದಬಾರಿ ತನ್ನ ಪತಿ ಶ್ರೀಕೃಷ್ಣ ಎಲ್ಲಿಗೆ ಹೋದನೆಂದು ಹುಡುಕುತ್ತಾ ರಾಧೆಯ ಮನೆಗೆ ಬರುತ್ತಾಳೆ. ಗೋಪಾಲನೂ ಮೇಲು ಮಾಳಿಗೆಯಲ್ಲಿ ಅಕ್ಕ ತಂಗಿ ಏಳು ರಾತ್ರಿ ಏಳು ಹಗಲು ಏನು ಮಾಡುತ್ತಿದ್ದಾರೆ ಎಂದು ಸಂಶಯ ತಾಳುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಆಗರಾಧೆ ಮತ್ತು ಶ್ರೀಕೃಷ್ಣ ದೇವರು ಮಾಳಿಗೆ ಇಳಿದು ಬರುತ್ತಾರೆ. ಗೋಪಾಲನಲ್ಲಿ ಶ್ರೀಕೃಷ್ಣ ದೇವರು ರಾಧೆ ಎಂಜಲಾಗಿದ್ದಾಳೆ. ಅವಳು ನಿನಗೆ ಬೇಕೆ? ನಾನು ಕೊಂಡು ಹೋಗಲೇ? ಎಂದು ಕೇಳುತ್ತಾನೆ. ಗೋಪಾಲ, ರಾಧೆ ತನಗೆ ಬೇಡ, ನೀನೇ ಕರಕೊಂಡು ಹೋಗು ಎನ್ನುತ್ತಾನೆ.


ಮುಂದೆ ಚಂದಬಾರಿ ಹಾಗೂ ರಾಧೆಯರನ್ನು ಕರೆದುಕೊಂಡು ಶ್ರೀಕೃಷ್ಣ ಮೇಲಿನ ಮಿರಿಲೋಕಕ್ಕೆ ಬರುತ್ತಾನೆ. ಅಲ್ಲಿ ರಾಧೆ, ಚಂದಬಾರಿ ಹಾಗೂ ಶ್ರೀಕೃಷ್ಣ ಸಂಸಾರ ನಡೆಸುತ್ತಾ ಇರುತ್ತಾರೆ. ಎಂದುಶ್ರೀಮತಿ ಶಾರದಾ ಜಿ. ಬಂಗೇರ ಅವರು ಹೇಳಿದ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಹೇಳಿದೆ.


ಇದೇ ರೀತಿನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಶ್ರೀಕೃಷ್ಣನನ್ನು ಸ್ತ್ರೀಲೋಲುಪನಂತೆ ಚಿತ್ರಿಸಲಾಗಿದೆ. ತುಳು ಜನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಶ್ರೀಕೃಷ್ಣನ ಪರಿಕಲ್ಪನೆ ವಿಶಿಷ್ಟವಾಗಿ ಮೂಡಿ ಬಂದಿದೆ. ದಾಸವರೇಣ್ಯರ ನಿಂದಾಸ್ತುತಿಗಳಂತೆ ಇವು ಕೂಡ ತುಳು ಜನಪದರ ನಿಂದಾಸ್ತುತಿಗಳೇ ಇರಬಹುದು.




     3. ಮಧುರಗೆ ಮದುಮಗಳು


ಮದುವೆಗಿಂತ ಮೊದಲು ಮೈನೆರೆದ ಹೆಣ್ಣು ಮಕ್ಕಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದ ವಿಚಾರ ದೇಯಿ ಬೈದೆತಿ ಪಾಡ್ದನದಲ್ಲಿದೆ. ಅಂತಹ ಪದ್ಧತಿಯ ಕುರಿತು ರಚಿಸಲ್ಪಟ್ಟ ಪಾಡ್ದನವಿದು. ಏಳು ಜನ ಅಕ್ಕ ತಂಗಿಯರಲ್ಲಿ ಮಧುರಗೆ ಹಿರಿಯವಳು. ಆರು ಜನ ತಂಗಿಯರಿಗೆ ಚಿಕ್ಕಂದಿನಲ್ಲಿಯೇ ಮದುವೆಯಾಗುತ್ತದೆ. ಮಧುರಗೆ ಮದುವೆಯಾಗದೆ ಉಳಿದಾಗ ಆರು ಜನ ತಂಗಿಯರು ಹಾಗೂ ಮನೆ ಮಂದಿ ಒಟ್ಟಾಗಿ ಚರ್ಚಿಸಿ “ಅವಳ ಕಣ್ಣು ಕಟ್ಟಿ ಕಾಡಿಗೆ ಬಿಡಬೇಕು” ಎಂದು ನಿಶ್ಚಯಿಸುತ್ತಾರೆ. ದೊಡ್ಡಪ್ಪನ ಮಗನಿಗೆ ನೂಲ ಮದುವೆ(ಉಪನಯನ) ಎಂದು ಹೇಳಿ ಅವಳನ್ನು ಅಲಂಕರಿಸಿ ಕರೆದುಕೊಂಡು ಹೋಗುವಾಗ ಕಾಡಿನಲ್ಲಿ ಬಿಟ್ಟು ತಂದೆ ಹಿಂದಿರುಗುತ್ತಾರೆ. ಅವಳ ತಾಯಿ ‘ತನ್ನ ಮಗಳನ್ನು ಒಂದು ನೆಲೆಗೆ ಮುಟ್ಟಿಸುವಂತೆ’ ದೈವಗಳಲ್ಲಿ ಪ್ರಾರ್ಥಿಸುತ್ತಾಳೆ.


ಜುಮಾದಿ ದೈವವು ಮೂರ್ತೆ ತೆಗೆಯುವ ಬೈದ್ಯನ ರೂಪದಲ್ಲಿ ಬಂದು ಅವಳನ್ನು ಕರೆದೊಯ್ದು ಕದ್ರಿಯ ಬಂಗೇರ ಅರಸನಿಗೆ ಒಪ್ಪಿಸುತ್ತದೆ. ಆತ ಅವಳನ್ನು ಮದುವೆಯಾಗುತ್ತಾನೆ. ಇಲ್ಲಿ ಮಧುರಗೆಯ ಕಥೆ ಸುಖಾಂತವಾಗಿದೆಯಾದರೂ ಮದುವೆಯಾಗದ ಹೆಣ್ಣು ಮಕ್ಕಳನ್ನು ಕಾಡಿನಲ್ಲಿ ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ ಬಿಡುತ್ತಿದ್ದ ಅನಿಷ್ಟ ಪದ್ಧತಿಯ ಕುರಿತು ತಿಳಿಸುತ್ತದೆ. ವಾಸ್ತವಿಕ ನೆಲೆಯಲ್ಲಿ ಹೇಳುವುದಾದರೆ ಕಾಡಿನ ದಾರಿಯಲ್ಲಿ ಬಂದ ಯಾರೋ ಕರುಣಾಳು ವ್ಯಕ್ತಿಗಳು ಅವಳನ್ನು ಕರೆದುಕೊಂಡು ಹೋಗಿ ಒಳ್ಳೆಯ ವರನನ್ನು ಹುಡುಕಿ ಮದುವೆ ಮಾಡಿಸಿರಬಹುದು. ಕಾಲಾಂತರದಲ್ಲಿ ಜುಮಾದಿಯ ಮಹಿಮೆ ಸೇರಿರಬಹುದು.


ಭಾರತ ದೇಶದಾದ್ಯಂತ ಪ್ರಚಲಿತವಿದ್ದ ಸತಿ ಪದ್ಧತಿಯ ಬಗ್ಗೆ ತುಳು ಪಾಡ್ದನಗಳು ಮೌನ ತಾಳಿವೆ. ಇದರಿಂದ ಸತಿಪದ್ಧತಿ ತುಳುನಾಡಿನಲ್ಲಿ ಅಷ್ಟಾಗಿ ಪ್ರಚಲಿತವಿರಲಿಲ್ಲ. ಇಂಥದೊಂದು ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಇರಲಿಲ್ಲ ಎಂದು ಹೇಳಿಕೊಳ್ಳಬಹುದಾದರೂ, ಅದಕ್ಕಿಂತಲೂ ಕ್ರೂರವಾದ ಮದುವೆಯಾಗದ ಹೆಣ್ಣು ಮಕ್ಕಳನ್ನು ಬೆತ್ತಲಾಗಿಸಿ ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ ಕಾಡಿನಲ್ಲಿ ಬಿಡುತ್ತಿದ್ದ ಅನಿಷ್ಟ ಪದ್ಧತಿ ತುಳುನಾಡಿನಲ್ಲಿ ಪ್ರಚಲಿತವಿತ್ತು ಎನ್ನುವುದಕ್ಕೆ ಈ ಪಾಡ್ದನ ಸಾಕ್ಷಿಯಾಗಿದೆ.© ಡಾ.ಲಕ್ಷ್ಮೀ ಜಿ ಪ್ರಸಾದ್




4. ಜಾಯಿಲ ಬಂಗೇತಿ

© ಡಾ.ಲಕ್ಷ್ಮೀ ಜಿ ಪ್ರಸಾದ್

ಮದುವೆಯಾಗದ ಹೆಣ್ಣು ಮಕ್ಕಳನ್ನು ನಮೆಯಲ್ಲಿರಿಸಿಕೊಳ್ಳಬಾರದು ಎಂಬ ನಂಬಿಕೆ ಇದ್ದಂತೆ ಅಶುಭಗಳಿಗೆಯಲ್ಲಿ ಮೈನೆರೆದ ಹೆಣ್ಣು ಮಕ್ಕಳನ್ನು ಕೂಡ ಮನೆಯಲ್ಲಿರಿಸಿಕೊಳ್ಳಬಾರದು ಎಂಬ ನಂಬಿಕೆಯಿದ್ದು ಅದರ ಸುತ್ತ ಈ ಪಾಡ್ದನವು ಹೆಣ್ಣೆಯಲ್ಪಟ್ಟಿದೆ. ಕನರಾಯ ಬಂಗೇರರ ಮುದ್ದಿನ ಸೊಸೆ ಜಾಯಿಲ ಬಂಗೇತಿ. ಅತ್ತೆ ಮುಂಡ್ಯಗಳಿಗೆ ಜಾಯಿಲ ಬಂಗೇತಿ ಬಗ್ಗೆ ಪ್ರೀತಿ ಆದರಗಳು ಇರಲಿಲ್ಲ. ಅದಕ್ಕೆ ಸರಿಯಾಗಿ ಜಾಯಿಲ ಬಂಗೇತಿ ಮಂಗಳವಾರ ಅಮವಾಸ್ಯೆಯ ಫಲದಲ್ಲಿ ಪುಷ್ಪವತಿಯಾಗುತ್ತಾಳೆ. ಆಗ ಅತ್ತೆ ಮುಂಡ್ಯಗ ‘ಅಶುಭ ಗಳಿಗೆಯಲ್ಲಿ ಮೈನೆರೆದ’ ಹೆಣ್ಣನ್ನು ಮನೆಯಲ್ಲಿರಿಸಿಕೊಳ್ಳಬಾರದು. ಹಾಗೆ ಒಂದು ವೇಳೆ ಇರಿಸಿಕೊಂಡರೆ ಬೀಡಿಗೆ ಕೊಟ್ಟು ಗುದ್ದಲಿ ಬೀಳುತ್ತದೆ. ಸರ್ವನಾಶವಾಗುತ್ತದೆ ಎಂದು ಹೇಳುತ್ತಾಳೆ. ಶಾಸ್ತ್ರದಲ್ಲಿ ಕೂಡ ಹಾಗೆ ಹೇಳಿದೆ ಎನ್ನುತ್ತಾರೆ ಕನರಾಯ ಬಂಗೇರರು. ಮುಂಡ್ಯಗ ಜಾಯಿಲ ಬಂಗೇತಿಯನ್ನು ಮನೆಯಿಂದ ಹೊರಹಾಕುವಾಗ ಬಂಗೇರರು ದುಃಖಿಸಿದರಾದರೂ ಅವಳನ್ನು ತಡೆಯುವುದಿಲ್ಲ.


ಮುಂದೆ ಜತುರಂಗದ ಬೀಡಿನ ಒಡತಿಯು ಕರುಣೆಯಿಂದ ಜಾಯಿಲ ಬಂಗೇತಿಗೆ ಆಶ್ರಯ ಕೊಡುತ್ತಾಳೆ. ಅವಳ ಮಗ ಬೊಳ್ಳಿಲ್ಲ ಕುಮಾರ ಜಾಯಿಲ ಬಂಗೇತಿಯನ್ನು ಮದುವೆಯಾಗುತ್ತಾನೆ. ಜಾಯಿಲ ಬಂಗೇತಿಯ ಕಥೆ ಜತುರಂದ ಬೀಡಿನ ಒಡತಿಯ ಅಂತಃಕರಣದ ಕಾರಣದಿಂದ ಸುಖಾಂತವಾಗಿರುವುದಾದರೂ ಶಾಸ್ತ್ರದ ಹೆಸರಿನಲ್ಲಿ, ಸಂಪ್ರದಾಯದ ಹೆಸರಿನಲ್ಲಿ ಸ್ತ್ರೀಯ ಮೇಲೆ ಆಗುತ್ತಿದ್ದ ಶೋಷಣೆಯನ್ನು ಈ ಪಾಡ್ದನವು ತಿಳಿಸುತ್ತದೆ.




5. ಕರಿಯ ಕನ್ಯಾ ಮದನು


ಏಳು ಮಂದಿ ಕಬ್ಬೀರರ ಮುದ್ದಿನ ತಂಗಿ ಮದನು. ಅವಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಅವಳು ಚೊಚ್ಚಲ ಬಸುರಿಯಾದಾಗ ಅವಳ ಸೀಮಂತಕ್ಕೆ ಸಮುದ್ರಕ್ಕೆ ಹೋಗಿ ಮುತ್ತುಗಳನ್ನು ತರುತ್ತಾರೆ ಅವಳ ಏಳು ಜನ ಅಣ್ಣಂದಿರು. ಸೀಮಂತ ಮುಗಿಸಿ ತಮ್ಮ ಮನೆಗೆ ಕರೆ ತರಲು ಅಣ್ಣಂದಿರು ಹೋಗುತ್ತಾರೆ. ಏಳು ಜನ ಅಣ್ಣಂದಿರು ಅವಳನ್ನು ಕರೆತರುತ್ತಾರೆ. ಕದ್ರಿಯ ಸಮೀಪಕ್ಕೆ ಬಂದಾಗ ಮಧ್ಯಾಹ್ನವಾಗುತ್ತದೆ.© ಡಾ.ಲಕ್ಷ್ಮೀ ಜಿ ಪ್ರಸಾದ್

 ಕಲ್ಲು ಜೋಡಿಸಿ, ಒಲೆ ಹೂಡಿ, ಸೌದೆ ಉರಿಸಿ, ಅಕ್ಕಿ ಬೇಯಿಸಿ, ಅಡುಗೆ ಮಾಡಿಟ್ಟು, ಸ್ನಾನ ಬರುವಾಗ ಏಳು ಜನ ಕಬ್ಬೀರರು ಹೋಗುತ್ತಾರೆ. ಸ್ನಾನ ಮಾಡಿ ಬರುವಾಗ ಮುಂದೆ ತಂಗಿಗೆ ಸುಖಪ್ರಸವವಾಗಲಿ ಎಂದು ಬೇಡಿಕೊಳ್ಳಲು ಕದ್ರಿ ದೇವಾಲಯಕ್ಕೆ ಹೋಗುತ್ತಾರೆ. ಅಲ್ಲಿ ತೆಪ್ಪಂಗಾಯಿ, ಗುಬ್ಬಿ ಕಾಳಗ ಸೂಳೆಯರ ಮೇಳ ಮೊದಲಾದ ಸಾಹಸದ ಆಟಗಳು ಇರುತ್ತವೆ. ಇವರು ಎಲ್ಲದರಲ್ಲಿ ಗೆಲ್ಲುತ್ತಾರೆ. ಆಗ ಕದ್ರಿಯ ಅರಸ ಅಸೂಯಯಿಂದ ಅವರನ್ನು ಬಂಧಿಸಿ ಸೆರೆಮನೆಯಲ್ಲಿ ಕೂಡ ಹಾಕುತ್ತಾನೆ. ತುಂಬು ಗರ್ಭಿಣಿ ಮದನು ಬಂದು ಅಣ್ಣಂದಿರನ್ನು ಬಿಡುವಂತೆ ಕೇಳಿಕೊಂಡರೂ ಬಿಡುವುದಿಲ್ಲ. ಆಗ ಅವಳು ‘ನೀನು ನನ್ನ ಅಣ್ಣಂದಿರನ್ನು ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗ ಮುಂದೆ ನಿನ್ನನ್ನು ಸೋಲಿಸಿ ಮಾವಂದಿರನ್ನು ಬಿಡಿಸುತ್ತಾನೆ’ ಎಂದು ಹೇಳಿ ಅಲ್ಲಿಂದ ಬಂದು ಕಾಡಿನಲ್ಲಿ ವಾಸಿಸುತ್ತಾಳೆ. ಒಂದು ಗಂಡು ಮಗುವಿಗೆ ಜನ್ಮವೀಯುತ್ತಾಳೆ. ಆ ಮಗುವನ್ನು ತೆಕ್ಕಿ ಎಲೆಯಲ್ಲಿ ಮಲಗಿಸಿ ಸಮುದ್ರದಲ್ಲಿ ತೇಲಿಬಿಡುತ್ತಾಳೆ. ಆ ಮಗು ಮರಕಾಲರ ಕೈಗೆ ಸಿಕ್ಕುತ್ತದೆ. ಅವರು ಆ ಮಗುವನ್ನು ಸಂತಾನವಿಲ್ಲದ ನಂದಾರ ಅರಸನಿಗೆ ಕೊಡುತ್ತಾರೆ. ಆ ಮಗು ರಾಜನ ದತ್ತು ಮಗುವಾಗಿ ಬೆಳೆಯುತ್ತಾನೆ. ಮುಂದೊಂದು ದಿನ ಬೆಳೆದು ದೊಡ್ಡವನಾದ ನಂತರ ಕಾಡಿಗೆ ಬಂದಾಗ ಮರಕಾಲರ ಸಹಾಯದಿಂದ ತನ್ನ ತಾಯಿಯ ಗುರುತು ಹಿಡಿಯುತ್ತಾನೆ. ಕದ್ರಿಯ ಅರಸರನ್ನು ಸೋಲಿಸಿ ತನ್ನ ಮಾವಂದಿರನ್ನು ಬಿಡಿಸಿಕೊಂಡು ಬರುತ್ತಾನೆ. ಅಪ್ರತಿಮ ವೀರರನ್ನು, ಸಾಹಸಿಗಳನ್ನು ಕಂಡರೆ ಅವರ ಮೇಲೆ ಮತ್ಸರ ಪಟ್ಟು ರಾಜರುಗಳು ತೊಂದರೆ ಕೊಡುವ ವಿಚಾರ ಅನೇಕ ಪಾಡ್ದನಗಳಲ್ಲಿ ಉಕ್ತವಾಗಿದೆ. ಇಂಥಹ ವೀರರನ್ನು ಹೀಗೆಯೇ ಬಿಟ್ಟರೆ ಮುಂದೊಂದು ದಿನ ತಮ್ಮ ಅಧಿಕಾರಕ್ಕೆ ಕುತ್ತು ಬಂದೀತೆಂಬ ಭಯದಿಂದ ಅವರನ್ನು ನಾಶಕ್ಕೆ ಯತ್ನಿಸುವ ವಿಚಾರ ಕರಿಮಲೆ ಜುಮಾದಿ, ಹಳ್ಳತ್ತಾಯ, ಕಲ್ಕುಡ ಕಲ್ಲುರ್ಟಿ ಮೊದಲಾದ ಪಾಡ್ದನಗಳಲ್ಲಿದೆ.


ಇಂಥಹದ್ದೇ ಒಂದು ಎಲ್ಲೋ ನಡೆದಿರಬಹುದಾದ ಘಟನೆಯನ್ನು ಆಧರಿಸಿ ಈ ಪಾಡ್ದನವು ರಚಿತವಾಗಿದೆ. ಇದರಲ್ಲಿ ಕೆಲವು ಅಲೌಕಿಕ ವಿಚಾರಗಳು ಕೂಡ ಸೇರಿಕೊಂಡಿವೆ.© ಡಾ.ಲಕ್ಷ್ಮೀ ಜಿ ಪ್ರಸಾದ್


 6 ನಾಗಸಿರಿ ಕನ್ಯಗೆ© ಡಾ.ಲಕ್ಷ್ಮೀ ಜಿ ಪ್ರಸಾದ್


ತುಳು ಪಾಡ್ದೆನಗಳಲ್ಲಿ ಈಶ್ವರ ಕೃಷ್ಣ ಮೊದಲಾದ ಪೌರಾಣಿಕ ದೇವರುಗಳು ಲೌಕಿಕ ನೆಲೆಯ ಅರಸರಂತೆ ಚಿತ್ರಿಸಲ್ಪಟ್ಟಿದ್ದಾರೆ. ಪಾಡ್ದನಗಳಲ್ಲಿ ಅರಸರಲ್ಲಿದ್ದಿರಬಹುದಾದ ದರ್ಪ, ಅಹಮಿಕೆ, ಸ್ತ್ರೀ ವ್ಯಾಮೋಹಗಳು ಈಶ್ವರ, ಕೃಷ್ಣ ಮೊದಲಾದ ದೇವರುಗಳಿಗೆ ಹೇಳಲ್ಪಟ್ಟಿವೆ. ಅಂತೆಯೇ ನಾಗಸಿರಿ ಕನ್ಯಗೆ ಪಾಡ್ದನದಲ್ಲಿ ಬರುವ ಸಿರಿಕೃಷ್ಣ ದೇವರು ತಮ್ಮನ ಹೆಂಡತಿಯ ಮೇಲೆ ಕಣ್ಣು ಹಾಕುವ ಕೆಟ್ಟ ವ್ಯಕ್ತಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಸತ್ಯದಲ್ಲಿ ಹುಟ್ಟಿದ ನಾಗಸಿರಿ ಸಾಮಾನ್ಯ ಹೆಂಗಸರಂತೆ ನೀರು ತರಲು ಹೋಗುತ್ತಾಳೆ. ಶ್ರೀಕೃಷ್ಣ ದೇವರು ಅವಳ ಮೇಲೆ ಆರೋಪ ಹೊರಿಸಿದಾಗ ಕುದಿಯುವ ಎಣ್ಣೆಯಲ್ಲಿ ಮುಳುಗಿ ತನ್ನ ಪ್ರಾತಿವೃತ್ಯವನ್ನು ಪ್ರಮಾಣಿಸಿದ ನಂತರ ಕೂಡ ಸರ್ಪಗಳಿರುವ ಪೆಟ್ಟಿಗೆಗೆ ಕೈ ಹಾಕಿಸಿ ಪರೀಕ್ಷಿಸಬೇಕೆಂದು ಶ್ರೀಕೃಷ್ಣ ಹೇಳಿದಾಗ ‘ಈ ಜನ್ಮದ ಬಗ್ಗೆ ರೋಸಿ ಹೋಗುವ ನಾಗಸಿರಿ ಕಾಳೀಂಗ ಸರ್ಪದ ಹತ್ತಿರ ತನ್ನನ್ನು ಕಚ್ಚಿ ಸಾಯಿಸುವಂತೆ’ ಪ್ರಾರ್ಥಿಸುತ್ತಾಳೆ. ಸರ್ಪ ಅವಳನ್ನು ಕಚ್ಚುತ್ತದೆ. ಅವಳು ಕಾಯ ಬಿಟ್ಟು ಕೈಲಾಸ ಸೇತುತ್ತಾಳೆ. ಇಲ್ಲಿ ನಾಗಸಿರಿಯಲ್ಲಿ ಲೌಕಿಕತೆ ಹಾಗೂ ಅಲೌಕಿಕತೆ ಎರಡು ಕೂಡ ಸೇರಿಕೊಂಡಿವೆ. ಶ್ರೀಕೃಷ್ಣ ಕೇರೆ ಹಾವಾಗಿ ಬಂದಾಗ ಕಾಗೆಯ ರೂಪವನ್ನು ಧರಿಸಿ ನಾಗಸಿರಿ ಕುಕ್ಕಲು ಹೋಗುತ್ತಾಳೆ. ಮುಂದೆ ಉಣುವಾಗಿ ಹಸುವಿನ ಕೆಚ್ಚಲಲ್ಲಿ ಅಡಗಿ ಕುಳಿತುಕೊಳ್ಳುತ್ತಾಳೆ. ಆಗ ಕೋಳಿಯಾಗಿ ಬಂದ ಶ್ರೀಕೃಷ್ಣನನ್ನು ಗಿಡುಗನಾಗಿ ಹಿಡಿಯಲು ಹೋಗುತ್ತಾಳೆ. ಇಷ್ಟೆಲ್ಲ ಮಹಿಮೆಯನ್ನು ತೋರುವ ನಾಗಸಿರಿ ಹಾದರದ ಆರೋಪಕ್ಕೆ ಸಿಲುಕಿ ಸಾಮಾನ್ಯ ಹೆಣ್ಣು ಮಕ್ಕಳಂತೆ ಸತ್ಯ ಪ್ರಮಾಣ ಮಾಡಬೇಕಾಗುತ್ತದೆ. ಸತ್ಯವನ್ನು ತೋರಿಸಿದ ನಂತರವೂ ತಾನಾಗಿಯೇ ಸರ್ಪವನ್ನು ಪ್ರಾರ್ಥಿಸಿ ಸಾವನ್ನು ತಂದುಕೊಳ್ಳುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ನಾಗಸಿರಿ ಕನ್ಯಗೆಯ ಪಾಡ್ದನದಲ್ಲಿ ಸೇರಿಕೊಂಡಿರುವ ಅಲೌಕಿಕ ವಿಚಾರಗಳನ್ನು ಕೈ ಬಿಟ್ಟರೆ ‘ನಾಗಸಿರಿ ಒಬ್ಬ ರಾಜನ ಹೆಂಡತಿ, ರಾಜನ ಅಣ್ಣ ಅವಳ ಮೇಲೆ ಕಣ್ಣು ಹಾಕುತ್ತಾನೆ. ಅವಳು ದಕ್ಕದಿದ್ದಾಗ ಅವಳ ಮೇಲೆ ಹಾದರದ ಆರೋಪವನ್ನು ಮಾಡುತ್ತಾನೆ. ಆದ್ದರಿಂದ ಕುದಿಯುವ ಎಣ್ಣೆಯಲ್ಲಿ ಮುಳುಗಿ, ಜೀವಂತ ಸರ್ಪವನ್ನು ಕೈಯಲ್ಲಿ ಹಿಡಿದು ಸತ್ಯಪ್ರಮಾಣ ಮಾಡಬೇಕಾಗಿ ಬಂದು ಅದರಲ್ಲಿ ಮರಣವನ್ನಪ್ಪಿರಬಹುದು ಅಥವಾ ತನ್ನ ಮೇಲೆ ಬಂದ ಆರೋಪದಿಂದಾಗಿ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಹೇಳಬಹುದು.


ನಾಗಸಿರಿ ಕನ್ಯಗೆ ಪಾಡ್ದನಕ್ಕೆ ಪಾಠಾಂತರಗಳು ಪ್ರಚಲಿತವಿದ್ದು ಒಂದು ಪಾಠದಲ್ಲಿ ನಾಗಸಿರಿ ಕನ್ಯಗೆಗೆ ತೊಂದರೆ ಕೊಟ್ಟಾತನನ್ನು ಅಣ್ಣ ಸೂರ್ಯ ಭಾರೀ ನಾಗರಾಜ ದೇವರೆಂದು ಹೇಳಿದೆ. ನಾಗಸಿರಿಯ ಮರಣಾನಂತರ ಕೂಡ ಆಕೆಯ ಶವಕ್ಕೆ ಸರಿಯಾದ ಸಂಸ್ಕಾರ ಮಾಡದಂತೆ ಅಣ್ಣ ಭಾರೀ ಸೂರ್ಯ ನಾಗರಾಜ ದೇವರು ತಡೆಯುತ್ತಾನೆ. ಆಗ ನಾಗಸಿರಿಯು ಅವಳ ತಂಗಿ ರೂಪ ಧರಿಸಿ ಸಂಸ್ಕಾರವನ್ನು ಮಾಡುವಂತೆ ಮಾಡಿ ಬೊಜ್ಜದಂದು ಅಣ್ಣ ನಾಗರಾಜನಿಗೆ ಉಪಾಯವಾಗಿ ಕಂದಡಿ ಹಾವಿನ ವಿಷ ಉಣಬಡಿಸಿ ಆತನನ್ನು ಕೊಂದು ದ್ವೇಷ ತೀರಿಸಿಕೊಳ್ಳುತ್ತಾಳೆ.




7 . ಅಬ್ಬಿನ ಬಂಗಾರು


ಎದ್ದಾಡಿ ಎಣ್ಮೆದಡಿ ಬೀಡಿನಲ್ಲಿ ಎಮ್ಮೆ ಮೇಯಿಸಿಕೊಂಡು, ಎಳ್ಳಿನ ಗದ್ದೆಯನ್ನು ಕಾಯುವ ಹುಡುಗಿ ಅಬ್ಬಿನ ಬಂಗಾರಿ. ಬಲು ಧೈರ್ಯಸ್ಥೆ, ಚತುರಮತಿ ಹುಡುಗಿ. ಕುದುರೆಯ ಮೇಲೆ ಸವಾರಿ ಮಾಡುತ್ತ ಎಳ್ಳಿನ ಗದ್ದೆಯನ್ನು ಹಾಳು ಮಾಡಿದ ಕುಂದಯ ನಂದಾರನನ್ನು ಜೋರು ಮಾಡುತ್ತಾಳೆ. ಆಗ ಏಳೆಲೆ ಕೂಡ ಮೂಡದ ಎಳ್ಳಿನ ಸಸಿಯಲ್ಲಿ ಎಣ್ಣೆ ಎಲ್ಲಿದೆ? ಎಂದು ಇವಳನ್ನು ಕೇಳುತ್ತಾನೆ. ಆಗ “ಏಳೆಲೆ ಮೂಡಿದ ಎಳ್ಳಿನ ಸಸಿಯಲ್ಲಿ ಬೇರಿನಲ್ಲಿ ಎಣ್ಣೆ ಇದೆ” ಎಂದು ಉತ್ತರಿಸುವ ಅಬ್ಬಿನ ಬಂಗಾರು ‘ನಿನ್ನ ತಾಯಿ ಮದುಮಗಳಾದಾಗ ನೀನೆಲ್ಲಿದ್ದೆ? ಎಂದು ಪ್ರತಿ ಪ್ರಶ್ನೆಯನ್ನು ಹಾಕುತ್ತಾಳೆ. ಉತ್ತರ ತಿಳಿಯದೆ ಮಂಕಾಗಿ ತನ್ನ ತಂದೆಯಲ್ಲಿ ಕೇಳಿದಾಗ, ಕುಂದಯ ನಂದಾರನ ತಂದೆ ನಂದಾರ ಅರಸರಿಗೂ ಗೊತ್ತಿರಲಿಲ್ಲ. ಕೊನೆಗೆ ಹೇಳಿ ‘ನಿನ್ನನ್ನು ನಾನು ಮದುವೆಯಾದರೆ ಏನು ಮಾಡುತ್ತಿ?’ ಎಂದು ಕೇಳುತ್ತಾನೆ. ಆಗ ಅವಳ ತುಸು ಕೂಡ ಅಳುಕದೆ ‘ಮೂರು ವರ್ಷದೊಳಗೆ ಮೂರು ಮಕ್ಕಳನ್ನು ಹೆತ್ತು ಆಡಿಸುತ್ತೇನೆ’ ಎಂದುತ್ತರಿಸುತ್ತಾಳೆ. ಇಷ್ಟು ಪೊಗರಿರುವ ಹುಡುಗಿಯ ಮಾತನ್ನು ಸುಳ್ಳು ಮಾಡಿ, ಅವಳನ್ನು ಸೋಲಿಸುವುದಕ್ಕಾಗಿಯೇ ಆಖೆಯನ್ನು ಮದುವೆಯಾಗುತ್ತಾನೆ ಕುಂದಯ ಹೊರಬಾರದಂತೆ ವ್ಯವಸ್ಥೆ ಮಾಡಿ, ಕಾಳಗಕ್ಕೆಂದು ಹೊರ ರಾಜ್ಯಕ್ಕೆ ಹೋಗುತ್ತಾನೆ. ಅಬ್ಬಿನ ಬಂಗಾರು ಹೆಗ್ಗಣದ ಸಹಾಯದಿಂದ ತೂತು ಕೊರೆದು ಹೊರಬಂದು ಹೂಮಾರುವ ಹೆಣ್ಣಿನ ವೇಷದಿಂದ ಬಂದು, ವಯ್ಯಾರ ಮಾಡಿ ಕುಂದಯ ನಂದಾರನನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು, ಅವನೊಂದಿಗೆ ಮೂರು ವರ್ಷ ಕಳೆಯುತ್ತಾಳೆ. ಒಂದು ಹೆಣ್ಣು ಹಾಗೂ ಎರಡು ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಇಷ್ಟಾದರೂ ತಾನು ಅಬ್ಬಿನ ಬಂಗಾರು ಎಂದು ಗೊತ್ತಾಗದಂತೆ ಜಾಗ್ರತೆ ವಹಿಸುತ್ತಾಲೆ. ಮೂರು ವರ್ಷದ ಗಡು ಮುಗಿಯುತ್ತಾ ಬರಲು ಕುಂದಯ ನಂದಾರನ ಮುದ್ರೆ ಉಂಗುರ, ಬಂಗಾರಿನ ನೇಗಿಲು, ಬೆಳ್ಳಿಯ ಸುಣ್ಣದ ಅಂಡೆಗಳನ್ನು ಉಪಾಯವಾಗಿ ಕೇಳಿ ಪಡೆದುಕೊಂಡು ಬಂದು, ನೆಲಮಾಳಿಗೆಯನ್ನು ಸೇರುತ್ತಾಳೆ. ತನ್ನ ಮಾರು ವೇಷ ಕಳಚಿ ನಿಜರೂಪದಿಂದ ಮಕ್ಕಳನ್ನು ಆಟವಾಡಿಸುತ್ತಿರುತ್ತಾಳೆ. ಮೂರ ವರ್ಷ ಕಳೆದು ‘ಅಬ್ಬಿನ ಬಂಗಾರನ್ನು ಸೋಲಿಸಿದ್ದೇನೆ’ ಎಂದು ಗರ್ವದಿಂದ ಕುಂದಯ ನಂದಾರ ನೆಲಮಾಳಿಗೆಯ ಬಾಗಿಲು ತೆರೆದು ಒಳಗೆ ಬಂದರೆ ಅಲ್ಲಿ ಅಬ್ಬಿನ ಬಂಗಾರು ತನ್ನ ಮೂರು ಮಕ್ಕಳೊಂದಿಗೆ ಆಡುತ್ತಿರುತ್ತಾಳೆ. ಮಡದಿಯ ಜಾಣ್ಮೆಯನ್ನು ಮೆಚ್ಚಿ ಮಡದಿ ಮಕ್ಕಳೊಂದಿಗೆ ಬಾಳುತ್ತಾನೆ ಕುಂದಯ ನಂದಾರ. ಅವರಿಗೆ ಹುಟ್ಟಿದ ಅವಳಿ ಗಂಡು ಮಕ್ಕಳೇ ಮುಂದೆ ಕಾಂತಾಬಾರೆ ಬೂದಾ ಬಾರೆಯರೆಂಬ ಪ್ರಸಿದ್ಧ ವೀರರಾಗುತ್ತಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಹೆಣ್ಣೊಬ್ಬಳ ಜಾಣ್ಮೆಯನ್ನು ಕುರಿತು ಕಟ್ಟಲ್ಪಟ್ಟ ಪಾಡ್ದನವಿದು. ಹೆಣ್ಣನ್ನು ಹೇಗಾದರೂ ಸೋಲಿಸಬೇಕೆಂಬ ಗಂಡಿನ ಪ್ರವೃತ್ತಿ ಈ ಪಾಡ್ದನದಲ್ಲಿ ಕಾಣಿಸಿಕೊಂಡಿದೆ.








8. ಬಾಲೆ ರಂಗಮೆ

© ಡಾ.ಲಕ್ಷ್ಮೀ ಜಿ ಪ್ರಸಾದ್

ಮೇದಾರನ ತಂಗಿ ರಂಗಮೆ. ಕದ್ರಿ ಕೋಳ್ಯೂರು ದೇವಾಲಯಗಳಿಗೆ ಹರಿಕೆ ಸಲ್ಲಿಸಲು ರಂಗಮೆ ಹೋಗುವಾಗ ದಾರಿಯಲ್ಲಿ ಸಿಕ್ಕ ಬೈರರ ಕೇರಿಯ ಭೈರವರಸ ಆಕೆಯನ್ನು ಮೋಹಿಸಿ ಮದುವೆಯಾಗು ಎಂದು ಪೀಡಿಸುತ್ತಾನೆ. ಆಗ ಹರಿಕೆ ಕೊಟ್ಟು ಹಿಂದೆ ಬರುವಾಗ ನಾನು ಇದೇ ದಾರಿಯಲ್ಲಿ ಬರುತ್ತೇನೆ, ಮದುವೆಯಾಗುವುದಾದರೆ ನನ್ನ ಅಣ್ಣನಲ್ಲಿ ಬಂದು ಕೇಳು ಎಂದು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಮುಂದೆ ಭೇಟಿಯಾಗುವ ಕದ್ರಿಯ ಅರಸ ಹೇಳಿದಂತೆ ಹಿಂದೆ ಬರುವಾಗ ಬೇರೆ ದಾರಿಯಲ್ಲಿ ಬರುತ್ತಾಳೆ.


ಅವಳು ಬರುವುದನ್ನು ಕಾದು ಕುಳಿತ ಭೈರವರಸ ಅವಳು ಬಾರದಿದ್ದಾಗ, ಅವಳ ಅಣ್ಣನನ್ನು ಬರ ಹೇಳಿ ‘ರಂಗಮೆಯನ್ನು ಮದುವೆ ಮಾಡಿಕೊಡು’ ಎಂದು ಹೇಳುತ್ತಾನೆ. ಮೇದಾರ ಅದಕ್ಕೆ “ಕೆಳಜಾತಿಯ ಭೈರವ ಕೇರಿಯ ಭೈರವರಸನಿಗೆ ಹೆಣ್ಣು ಕೊಡಲಾರೆ” ಎಂದುತ್ತರಿಸುತ್ತಾನೆ. ಆಗ ಮುಳ್ಳಿನ ಮಂಚಕ್ಕೆ ಕಟ್ಟಿ, ಉರಿ ಮೂಡೆ ಹಾಕಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ಹಿಂಸೆ ತಾಳಲಾರದೆ ತಂಗಿಯನ್ನು ಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ.


ರಂಗಮೆ ಭೈರವರಸನ ಕೈಯಿಂದ ಪಾರಾಗಲು ಉಪಾಯವೊಂದನ್ನು ಹೂಡುತ್ತಾಳೆ. ಭೈರವರಸನ ದಿಬ್ಬಣ ಬಂದಾಗ ‘ತನಗೆ ತೀವ್ರ ಹೊಟ್ಟೆನೋವು ಮಾಳಿಗೆಯಿಂದ ಕೆಳಗೆ ಇಳಿದು ಬರಲಾರೆ ಆದ್ದರಿಂದ ದಂಡಿಗೆಯ ಕೊಂಬಿಗೆ ಧಾರೆ ಎರೆಯಿರಿ’ ಎಂದು ಹೇಳುತ್ತಾಳೆ. ಅಂತೆಯೇ ದಂಡಿಗೆಯ ಕೊಂಬಿಗೆ ಧಾರೆ ಎರೆದು ಮದುವೆಯ ಶಾಸ್ತ್ರ ಮುಗಿಸುತ್ತಾರೆ. ದಿಬ್ಬಣದೊಂದಿಗೆ ಹಿಂದಿರುಗುತ್ತಾರೆ. ಮರುದಿನವೇ ತಂಗಿಯನ್ನು ಕರೆದೊಯ್ಯುವಂತೆ ಮೇದಾರ ಭೈರವರಸನಿಗೆ ಓಲೆ ಕಳುಹಿಸುತ್ತಾನೆ. ಮಡದಿಯನ್ನು ಕರೆದೊಯ್ಯಲೆಂದು ಬಂದಾಗ ಅಲ್ಲೊಂದು ಕಾಷ್ಠ ಉರಿಯುತ್ತಾ ಇರುತ್ತದೆ. ‘ರಂಗಮೆ ಹೊಟ್ಟೆ ನೋವಿನಿಂದ ಸತ್ತಿದ್ದಾಳೆ’ ಎಂದು ಅಲ್ಲಿದ್ದ ಜನರು ಹೇಳುತ್ತಾರೆ. ಆಗ ರಂಗಮೆಯ ಮೇಲಿನ ವ್ಯಾಮೋಹದಿಂದ ಬುದ್ಧಿಶೂನ್ಯನಾದ ಭೈರವರಸ ಅದೇ ಚಿತೆಗೆ ಹಾರಿ ಸಾಯುತ್ತಾನೆ. ರಂಗಮೆ ಸತ್ತಿರುವುದಿಲ್ಲ. ಹೆಣ್ಣುನಾಯಿಯ ಶವವನ್ನಿಟ್ಟು ಕಾಷ್ಠ ಉರಿಸಿರುತ್ತಾರೆ. ಭೈರವರಸ ಸತ್ತ ನಂತರ ರಂಗಮೆ ಕದ್ರಿಯ ಅರಸನನ್ನು ಮದುವೆಯಾಗುತ್ತಾಳೆ.

© ಡಾ.ಲಕ್ಷ್ಮೀ ಜಿ ಪ್ರಸಾದ್

ಹೆಣ್ಣು ಮಕ್ಕಳಿಗೆ, ಅವರ ಮನೆವರಿಗೆ ಇಷ್ಟವಿಲ್ಲದಿದ್ದರೂ ಕೂಡ ಬಲಿಷ್ಟರು, ಅರಸರುಗಳು ಬಲಾತ್ಕಾರವಾಗಿ ಕೊಂಡೊಯ್ದು ಮದುವೆಯಾಗುತ್ತಿದ್ದುದರ ಕುರಿತು ಈ ಪಾಡ್ದನವು ತಿಳಿಸುತ್ತದೆ. ಇಲ್ಲಿ ರಂಗಮೆಯ ಜಾಣ್ಮೆಯಿಂದಾಗಿ ಭೈರವರಸ ಸತ್ತು ಹೋಗುತ್ತಾನೆ. ರಂಗಮೆ ತಾನಿಷ್ಟ ಪಟ್ಟ ಕದ್ರಿಯ ಅರಸನನ್ನು ವಿವಾಹವಾಗುತ್ತಾಳೆ. ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಡಾ. ಕಮಲಾಕ್ಷ ಅವರು ಸಂಗ್ರಹಿಸಿದ್ದು, ಅದರಲ್ಲಿ ಕಥಾನಯಕಿಯನ್ನು ದೈಯಕ್ಕು ಎಂದು ಹೇಳಿದ್ದು, ಈಕೆ ಎಣ್ಮೂರು ಗುತ್ತಿನ ದಾರಾಮು ಪೊಣ್ಣೋವಿನ ಮಗಳೆಂದು ಹೇಳಲಾಗಿದೆ. ಬಂಟ್ವಾಳ ಪೇಟೆಗೆ ಹೋಗಿಬರುವಾಗ ಬೈಲೂರ ಬಂಗ ತೊಂದರೆ ಕೊಡುತ್ತಾನೆ. ದೈಯಕ್ಕುವನ್ನು ಮದುವೆ ಮಾಡಿ ಕೊಡು ಎಂದು ದಾರಾಮುವಿನಲ್ಲಿ ಕೇಳುತ್ತಾನೆ. ಆಗ ದಾರಾಮು “ಆಸ್ತಿಯಲ್ಲಿ ನೀನು ಮೇಲಿದ್ದರೂ ಜಾತಿಯಲ್ಲಿ ನೀನು ಕೀಳು ನೀನು ಭೈರ, ಆದ್ದರಿಂದ ಹೆಣ್ಣು ಕೊಡಲಾರೆ” ಎನ್ನುತ್ತಾಳೆ. ಆಗ ಆಕೆಯನ್ನು ನಾನಾ ವಿಧವಾಗಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ದೈಯಕ್ಕು ಅವನಿಗೆ ಯುದ್ಧಾಹ್ವಾನ ನೀಡುತ್ತಾಳೆ. ಸ್ವತಃ ಕತ್ತಿ ಹಿಡಿದು ಯುದ್ಧ ಮಾಡಿ ಆತನನ್ನು ಕೊಲ್ಲುತ್ತಾಳೆ ದೈಯಕ್ಕು.


ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಶ್ರೀ ರಾಮನಾಯ್ಕ ಸಂಗ್ರಹಿಸಿದ್ದಾರೆ. ಈ ಪಾಡ್ದನದಲ್ಲಿ ದೈಯಕ್ಕು ಮಗಳಿಗೆ ಮದುವೆಯಾಗೆಂದು ಕಾಡುವವನು ಚಿಪ್ಪೋಲಿ ಬಂಗ. ಅವಳ ಸೋದರ ಮಾವನನ್ನು ಕಟ್ಟಿ ಹಾಕಿ ಕೊಡಬಾರದ ಕಷ್ಟ ಕೊಡುತ್ತಾನೆ. ಮಾವನ ಕಷ್ಟ ನೋಡಲಾರದೆ ಮದುವೆಗೆ ಒಪ್ಪಿಗೆಕೊಡುತ್ತಾಲೆ ದೈಯಕ್ಕು ಮಗಳು. ಮದುವೆಯ ಸಂದರ್ಭದಲ್ಲಿ ಧಾರೆ ಆಗುವ ಹೊತ್ತಿಗೆ ತಾನು ತಂದಿದ್ದ ಕತ್ತಿಯಿಂದ ಚಿಪ್ಪೋಲಿ ಬಂಗನ ಕೈಯನ್ನು ದೈಯಕ್ಕು ಮಗಳು ಕತ್ತರಿಸುತ್ತಾಳೆ.


ಈ ಮೂರು ಕೂಡ ಒಂದೇ ಆಶಯವನ್ನು ಹೊಂದಿದ್ದು ಒಂದೇ ಪಾಡ್ದನದ ಭಿನ್ನ ಭಿನ್ನ ಪಾಠಗಳಂತೆ ಕಾಣಿಸುತ್ತವೆ. ಮದುವೆಯಾಗೆಂದು ಕಾಡಿ ಬಲಾತ್ಕರಿಸಿದ ರಾಜನೊಬ್ಬನನ್ನು ಹೆಣ್ಣು ಮಗಳೊಬ್ಬಳು ಎದುರಿಸಿ ಉಪಾಯವಾಗಿ ಆತನನ್ನು ಕೊಂದ ಘಟನೆ ಎಲ್ಲೋ ನಡೆದಿದ್ದು, ಅದನ್ನು ಕೇಂದ್ರವಾಗಿಸಿ ಈ ಪಾಡ್ದನಗಳು ಕಟ್ಟಲ್ಪಟ್ಟಿವೆ. ಬೀರುಕಲ್ಕುಡನ ಕೈಕಾಲುಗಳನ್ನು ಕಡಿಸಿದ ಭೈರವರಸನ ಕ್ರೌರ್ಯ ತುಳುನಾಡಿನಲ್ಲಿ ಜನರಿಗೆ ತಿಳಿದಿರುವ ವಿಚಾರವೇ ಆಗಿದೆ. ಆದ್ದರಿಂದಲೇ ಏನೋ ಕಾಟ ಕೊಟ್ಟು ಸಾವಿಗೀಡಾದ ವ್ಯಕ್ತಿಯನ್ನು ಈ ಪಾಡ್ದಗಳಲ್ಲಿ ಭೈರವರಸ ಎಂದೇ ಹೇಳಲಾಗಿದೆ. ಬೀರು ಕಲ್ಕುಡನಿಗೆ ಕಾರ್ಕಳದ ಭೈರವರಸ ಮಾಡಿದ ಅನ್ಯಾಯವನ್ನು ತುಳುವ ಜನಪದರು ಎಂದಿಗೂ ಕ್ಷಮಿಸುವುದಿಲ್ಲ. ಆದ್ದರಿಮದಲೇ ಪಾಡ್ದನಗಾರರು ಪಾಡ್ದನಗಳಲ್ಲಿ ಕೆಟ್ಟ ವ್ಯಕ್ತಿಯೊಂದಿಗೆ ಭೈರವರಸವನ್ನು ಸಮೀಕರಿಸಿದ್ದಾರೆ ಎಂದು ಡಾ|| ಅಮೃತ ಸೋಮೇಶ್ವರ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಪಾಡ್ದನದಲ್ಲಿ ಭೈರವರಸ ಸ್ತ್ರೀ ಲೋಲುಪನಂತೆ, ಕ್ರೂರಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಅವನನ್ನು ಉಪಾಯದಿಂದ ಸಾಯುವಂತೆ ಮಾಡುವ ರಂಗಮೆ ಮೆಚ್ಚುಗೆಗೆ ಪಾತ್ರವಾಗುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್




9 ಬಾಲೆ ಪದ್ಮಕ್ಕೆ

© ಡಾ.ಲಕ್ಷ್ಮೀ ಜಿ ಪ್ರಸಾದ್

ಕನರಾಯ ಬೀಡಿನ ಬಂಗೇರರ ಮಡದಿ ಬಾಲೆ ಪದ್ಮಕ್ಕೆ ಚೊಚ್ಚಲ ಬಸುರಿಯಾಗಿದ್ದಾಗ ಬಂಗೇರರಿಗೆ ಕಾಳಗವೊಮದು ಒದಗಿ ಬರುತ್ತದೆ. ಅವನು ದಂಡಿಗೆ ಹೋಗಲು ಹೊರಟು ನಿಂತಾಗ ತಾನು ಕೂಡ ಬರುತ್ತೇನೆ ಎಂದು ಹಠಮಾಡಿ ಅವನ ಜೊತೆಗೆ ದಂಡಿಗೆ ಮಡದಿ ಬಾಲೆ ಪದ್ಮಕ್ಕೆ ಬರುತ್ತಾಳೆ. ಅವರು ಹೊರಡುವಾಗ ಕನರಾಯ ಬಂಗೇರರ ತಾಯಿ ದೈವಗಳಲ್ಲಿ “ಇಬ್ಬರು ಹೋಗಿ ಮೂವರಾಗಿ ಬರುವಂತೆ ಅನುಗ್ರಹಿಸುವಂತೆ” ಬೇಡುತ್ತಾರೆ.


ಮುಂದೆ ದಾರಿ ಮಧ್ಯದಲ್ಲಿ ಬಾಲೆ ಪದ್ಮಕ್ಕೆಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತದೆ. ಕಾಡಿನ ನಡುವೆ ಇರುವ ಅರಮನೆಯ ಒಡತಿ ಅವಳನ್ನು ಆರೈಕೆ ಮಾಡುತ್ತಾಳೆ. ಬಾಲೆ ಪದ್ಮಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಕನರಾಯ ಬಂಗೇರ ಹೆಂಡತಿ ಮತ್ತು ಮಕ್ಕಳನ್ನು ಅಲ್ಲಿಯೇ ಬಿಟ್ಟು ಕಾಳಗಕ್ಕೆ ಹೋಗುತ್ತಾನೆ. ಏಳೆಂಟು ವರ್ಷ ಕಳದು ಯುದ್ಧವನ್ನು ಗೆದ್ದು ಹಿಂದೆ ಬರುವಾಗ ಮಡದಿ ಮಕ್ಕಳನ್ನು ಕರೆತರಲು ಹೋಗುತ್ತಾರೆ. ಅವರ ಮಡದಿ ಮಕ್ಕಳಿಗೆ ಏಳು ವರ್ಷವಾದಾಗ ತೆಂಗಿನ ಗರಿ ತಲೆಗೆ ಬಿದ್ದು ಮರಣವನ್ನಪ್ಪಿರುತ್ತಾರೆ. ಇಬ್ಬರು ಮಕ್ಕಳೊಂದಿಗೆ ಕನರಾಯ ಬಂಗೇರರು ಬೀಡಿಗೆ ಬರುತ್ತಾರೆ.


ಅವರ ತಾಯಿ ದೈವದಲ್ಲಿ ಅರಿಕೆ ಮಾಡಿದ್ದಂತೆ ಇಬ್ಬರು ಹೋಗಿ ಮೂವರಾಗಿ ಬಂದಿರುತ್ತಾರೆ. ಮಡದಿ ಬಾಲೆ ಪದ್ಮಕ್ಕೆ ಅವಳಿ ಮಕ್ಕಳನ್ನು ಹೆತ್ತ ಕಾರಣ ಕನರಾಯ ಬಂಗೇರ ಸೇರಿ ಅವರು ನಾಲ್ವರಾಗುತ್ತಾರೆ. ಆದರೆ ದೈವದ ಎದುರು ಅರಿಕೆ ಮಾಡಿದ್ದು ‘ಇಬ್ಬರು ಹೋಗಿ ಮೂವರು ಬರಲೆಂದು’, ಆದ್ದರಿಂದ ಬಾಲೆ ಪದ್ಮಕ್ಕೆ ಸಾಯುತ್ತಾಳೆ ಎಂಬ ಆಶಯ ಇಲ್ಲಿದೆ.


 


 10 ಬಾಲೆ ಜೇವು ಮಾಣಿಗ


ಆಟದಲ್ಲಿ ಕೂಡ ಸೋಲೊಪ್ಪಿಕೊಳ್ಳದ ಗಂಡಿನ ಅಹಮಿಕೆಯ ಕಾರಣದಿಂದ ದುರಂತವನ್ನಪ್ಪಿದ ಹೆಣ್ಣು ಮಗಳೊಬ್ಬಳ ಕುರಿತಾದ ಕಥಾನಕವಿದು. ಬಾಲೆಜೇವು ಮಾಣಿಗ ತುಸು ಮೇಲರಿಮೆ ಇರುವ ಹೆಣ್ಣು ಮಗಳು. ಅವಳ ಗಂಡ ಪರಿಮಾಳೆ ಬಲ್ಲಾಳ ದಬ್ಬಾಳಿಕೆ ಸ್ವಭಾವದವನು. ಪರಿಮಾಳೆ ಬಲ್ಲಾಳ ಮತ್ತು ಬಾಲೆಜೇವು ಮಾಣಿಗ ಚೆನ್ನಮಣೆ ಆಡುತ್ತಾರೆ. ಬಾಲೆ ಜೇವು ಮಾಣಿಗ ಸತತವಾಗಿ ಮೂರು ಆಟಗಳನ್ನು ಗೆಲ್ಲುತ್ತಾಳೆ. ಆಗ ಬಲ್ಲಾಳ ‘ಬಾಯಾರಿಕೆಯಾಗುತ್ತದೆ ನೀರು ತಾ’ ಎನ್ನುತ್ತಾನೆ. ಆಗ ಅವಳು ‘ನಾನು ಒಳಗೆ ಹೋದರೆ ಮಣೆ ತಿರುಗಿಸಿ ಆಟ ಕೆಡಿಸುತ್ತೀರಿ ನೀವು’ ಎಂದು ಹೇಳುತ್ತಾಳೆ. ಆಗ ಬಲ್ಲಾಳ ಇಲ್ಲ ನಾನು ಹಾಗೆ ಮಾಡುವುದಿಲ್ಲ ಎಂದು ಹೇಳಿದರೂ ಅವಳು ಒಳಗೆ ಹೋದಾಗ ಚೆನ್ನಮಣೆಯನ್ನು ತಿರುಗಿಸಿ ಇಟ್ಟು ಮೋಸ ಮಾಡುತ್ತಾನೆ.


ಆಟದಲ್ಲಿ ಕೂಡ ಪ್ರಾಮಾಣಿಕಕತೆಯಿಲ್ಲದೆ ಮೋಸ ಮಾಡಿದ ಗಂಡನ ಕುರಿತು ಅವಳಿಗೆ ಅಸಾಧ್ಯ ಸಿಟ್ಟು ಬರುತ್ತದೆ. ಅವಳು ಚಿನ್ನೆ ಮಣೆಗೆ ತುಳಿದು ಅದನ್ನು ಕವುಚಿ ಹಾಕುತ್ತಾಳೆ. ಆಗ ಪರಿಮಾಳೆ ಬಲ್ಲಾಳ ಚೆನ್ನೆ ಮಣೆಯನ್ನೆತ್ತಿ ಬಾಲೆಜೇವು ಮಾಣಿಗಳ ತಲೆಗೆ ಹೊಡೆದು ಅವಳನ್ನು ಸಾಯಿಸುತ್ತಾನೆ.


ಈ ಪಾಡ್ದನದ ಅನೇಕ ಪಾಠಾಂತರಗಳು ಪ್ರಚಲಿತವಿವೆ. ಅವುಗಳಲ್ಲಿ ಬಲ್ಲಾಳ ಮಾಣಿಗಳಿಗೆ ಹೊಡೆದು ಬಡಿದು ಮಾಡುತ್ತನಾದರೂ ಅವಳ ಸಾವು ಜುಮಾದಿಯ ಆಗ್ರದಿಂದಾಗುತ್ತದೆ ಎಂದು ಹೇಳಲಾಗಿದೆ. ಪ್ರಸ್ತುತ ಸಂಪುಟದಲ್ಲಿರುವ ಬಾಲೆಜೇವು ಪಾಡ್ದನದಲ್ಲಿ ಬಾಲೆಜೇವು ಮಾಣಿಗಳ ಸಾವಿಗೆ ಬಲ್ಲಾಲನ ದುಡುಕು ಪ್ರವೃತ್ತಿ ಆಟದಲ್ಲಿ ಕೂಡ ಸೋಲೊಪ್ಪಿಕೊಳ್ಳದ ಅಹಮಿಕೆ, ಹೆಂಡತಿಯ ಮೇಲೆ ಕೈ ಮಾಡುವ ಕ್ರೌರ್ಯವೇ ಕಾರಣವಾಗಿದೆ. ಯಾವುದೇ ಅಲೌಕಿಕ ಶಕ್ತಿಯ ಉಲ್ಲೇಖ ಈ ಪಾಡ್ದನದಲ್ಲಿ ಇಲ್ಲ. ಆದ್ದರಿಂದ ಇದು ವಾಸ್ತವಕ್ಕೆ ಸಮೀಪವಾಗೆದೆ ಎಂದು ಹೇಳಬಹುದು.




 ಶ್ರೀಮತಿ ಶಾರದಾ ಜಿ. ಬಂಗೇರರÀ ಕವಿತೆಗಳು


ಇವರ ಕವಿತೆಗಳು ಸರಳವಾದುದು ,ಸುಶ್ರಾವ್ಯವಾಗಿ ಹಾಡಲು ಸೂಕ್ತವಾದವುಗಳು.ತುಳು ಜನಪದ ಕವಯಿತ್ರಿಯರು  ಕಂಡ ಪ್ರಕೃತಿ ಗಿಡ ಮರ ಹೂ ಹಣ್ಣು, ಆಭರಣಗಳು ,ಮನೆಗೆ ಬೇಕಾದ ಅಡುಗೆ ವಸ್ತುಗಳು ಮೊದಲಾದವುಗಳ ಸುತ್ತ ಹೆಣೆದ ಕವಿತೆಗಳು ಇವು .ನವುರು ಪ್ರೇಮವನ್ನು ನಿವೇದಿಸುವ ಕವಿತೆಯೂ ಇದೆ  ಸಂವಾದ ರೂಪದ ಹಾಡುಗಳೂ ಅನೇಕ ಇವೆ .ಇವು ಭಾಷೆ ಬೇರೆ ಬೇರೆಯಾದರೂ ಭಾವ ಒಂದೇ ಎಂಬದನ್ನು ಸಾರುತ್ತವೆ.  






1 ಪುಕ್ಕೇದಿ


ಪುಕ್ಕೇದಿ ಮತ್ತು ಕೋಡಂಗರು ಬಲ್ಲಾಳನ ಮನೆ ಕೆಲಸದ ಆಳುಗಳು. ಪುಕ್ಕೇದಿಯ ಮೇಲೆಮೋಹಗೊಳ್ಳುವ ಬಲ್ಲಾಳ ಪುಕ್ಕೇದಿಗೆ ವಿಷಮಿಶ್ರಿತ ಹುಳಿಯನ್ನು ನೀಡಿ, ಕೆಸುವಿನ ಸೊಪ್ಪು ಕ್ಯೊದುಕೊಂಡು ಹೋಗಿ ಕೋಡಂಗನಿಗೆ ಅಡಿಗೆ ಮಾಡಿ ಬಡಿಸಲು ಹೇಳುತ್ತಾನೆ. ಬಲ್ಲಾಳನ ಹುನ್ನಾರ ತಿಳಿಯದ ಮುಗ್ಧೆ ಪುಕ್ಕೇದಿ ಆ ಹುಳಿಯನ್ನು ಉಪಯೋಗಿಸಿ ಅಡುಗೆ ಮಾಡಿ ಕೋಡಂಗನಿಗೆ ಬಡಿಸುತ್ತಾಳೆ. ಕೋಡಂಗ ಸಾಯುತ್ತಾನೆ. ಇದನ್ನು ಬಲ್ಲಾಳನಿಗೆ ಪುಕ್ಕೇದಿ ತಿಳಿಸಿದಾಗ ಅವಳನ್ನು ಮನೆ ಒಳಗೆ ಬರಲು ಹೇಳುತ್ತಾನೆ ಬಲ್ಲಾಳ. ಆಗ ಅದು ಬಲ್ಲಾಳ ಮಾಡಿದಕೃತ್ಯ ಎಂದುತಿಳಿಯುವ ಪುಕ್ಕೇದಿ ಪರತಿ ಮಂಗಣೆಯಂತೆಯೇ ಸಮಯ ಪ್ರಜ್ಞೆ ಮರೆದು ಬಲ್ಲಾಳನ ಸಮಸ್ತ ಸಂಪತ್ತನ್ನು ಕೋಡಂಗನ ಚಿತೆಗೆ ಹಾಕಿಸಿ, ಕೊನೆಗೆ ತಾನು ಕೂಡ ಕಾಷ್ಯಕ್ಕೆ ಸಾಯುವುದರ ಮೂಲಕ ಬಲ್ಲಾಳನ ಮೇಲೆ ಪ್ರತಿಕಾರ ಮಾಡುತ್ತಾಳೆ.


2 ರಾಮಚಂದಿರ ಮರಲ ನಿಮ್ರ್ಯಾರೇ


ದಾಸವರೇಣ್ಯರು ಬಾಲಕೃಷ್ಣನ ಬಾಲಲೀಲೆಗಳನ್ನು ನಾನಾ ವಿಧವಾಗಿ ವರ್ಣಿಸಿ ಸ್ತುತಿಸಿ ಧನ್ಯತೆಯನ್ನು ಪಡೆದಿದ್ದಾರೆ. ಕೃಷ್ಣನ ತುಂಟಾಟಗಳನ್ನು ವರ್ಣಿಸುತ್ತಾ ಆ ಕುರಿತು ಗೋಪಮ್ಮನಿಗೆ ದೂರು ಹೇಳಿದ ಗೊಲ್ಲರ ಹುಡುಗಿಯರಿಗೆ ಒಡೆದ ಬಳೆಯ ಬದಲಿಗೆ ಹೊಸ ಬಳೆಯನ್ನು,ಹರಿದ ಸೀರೆಯ ಬದಲಿಗೆ ಹೊಸ ಸೀರೆ ಕೊಡುವೆನು ಎಂದು ಗೋಪಮ್ಮ ಹೇಳುವ ವಿಚಾರ ಇಲ್ಲಿ ವಿಶಿಷ್ಟವಾಗಿ ಮೂಡಿ ಬಂದಿದೆ. ಅಂತೆಯೇ ಎಲ್ಲ ತುಂಟಾಟಗಳನ್ನು ಮಾಡಿದ ಕೃಷ್ಣನ ಮೇಲೆ ದೂರು ಹೇಳಲು ಬಂದ ಗೋಪಿಕಾ ಸ್ತ್ರೀಯರು ತೊಟ್ಟಿಲಲ್ಲಿ ಬಗ್ಗಿ ನೋಡುವಾಗ ಬಾಲಕೃಷ್ಣ ನಗುತ್ತಿರುತ್ತಾನೆ ಎಂದಿಲ್ಲಿ ಕವಿತೆಯ ಮೂಲಕ ಬಾಲಕೃಷ್ಣನ ಲೀಲೆಗಳನ್ನು ಜನಪದ ಕವಿಗಳು ವರ್ಣಿಸಿದ್ದಾರೆ.




2 ಬಂಗರಾಳ್ವಾಗ


ನೀರಿಗೆಂದು ಹೋಗುವ ಹೆಣ್ಣು ಮಗಳಿಗೆ ದಾರಿಯಲ್ಲಿ ಕಾಮುಕನೊಬ್ಬ ಸಿಕ್ಕಿತೊಂದರೆ ಕೊಟ್ಟಾಗ, ಆತನಿಗೆರಡೇಟು ಕೊಟ್ಟು ಓಡಿಸುವ ಧೈರ್ಯ ಸಾಹಸವನ್ನು ತೋರುವ ಕಥಾನಕ ಬಂಗರಾಳ್ವಾಗ ಎಂಬ ಸಣ್ಣ ತುಳು ಕವಿತೆಯಲ್ಲಿದೆ.


``ಬಂಗರಾಳ್ವಾಗ’’ ಎಂಬ ಧೈರ್ಯಸ್ಥ ಹುಡುಗಿ ನೀರು ತರಲೆಂದು ಹೋಗುತ್ತಾಳೆ. ದಾರಿಯಲ್ಲಿ ಒಂದು ಬೇಲಿಯ ದ್ವಾರದಲ್ಲಿ ದೇರೆ ಮುಂಡೋರಿ ಎಂಬಾತ ಅಡ್ಡಗಟ್ಟುತ್ತಾನೆ. ಆಗ ಅವಳು `ದಾರಿ ಬಿಡು ತಡಮೆಯನ್ನು ತೊಲಗಿಸು ದೇರೆ ಮುಂಡೋರಿ’ ಎಂದು ಹೇಳುತ್ತಾಳೆ. `ದಾರಿ ಬಿಡಲು ತಡಮೆ ತೆಗೆಯಲು ನಿನ್ನ ಹತ್ತಿರ ಒಂದು ಮಾತನಾಡಬೇಕು’ ಎಂದು ದೇರೆ ಮುಂಡೋರಿ ಹೇಳುತ್ತಾನೆ. ಅವನಿಂದ ಹೇಗೋ ತಪ್ಪಿಸಿಕೊಂಡು ಹೋಗಿ ನೀರು ತರುತ್ತಾಳೆ. ಬಂಗರಾಳ್ವಾಗ ನೀರು ತೆಗೆದುಕೊಂಡು ಹಿಂದೆ ಬರುವಾಗ ಅವನು ಪುನಃ ದಾರಿಗಡ್ಡ ನಿಂತು ನನ್ನನ್ನು ಮದುವೆಯಾಗುತ್ತೀಯಾ? ಎಂದು ಕೇಳುತ್ತಾನೆ. ಆಗಲೂ ಹೇಗೋ ತಪ್ಪಿಸಿಕೊಂಡು ಹೋಗುತ್ತಾಳೆ ಬಂಗರಾಳ್ವಾಗ. ಮರುದಿನ ಅವಳು ನೀರಿಗೆ ಹೋದಾಗ ಪುನಃ ಅದೇ ದೇರೆ ಮುಂಡೋರಿ ದಾರಿಗಡ್ಡ ನಿಂತು `ನಿನ್ನೆ ಹೇಳಿದ ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ’ ಎಂದು ಹೇಳುತ್ತಾನೆ. ಆಗ ಬಂಗರಾಳ್ವಾಗ `ನಾನೀಗ ಬೊಬ್ಬೆ ಹಾಕುತ್ತೇನೆ’ ಎಂದು ಹೆದರಿಸುತ್ತಾಳೆ. ಆಗಲೂ ದೇರೆ ಮುಂಡೋರಿ ದಾರಿ ಬಿಡುವುದಿಲ್ಲ. ಆಗ ಅವನು ಅವಳ ಕೈ ಹಿಡಿದು ಬಳೆ ಒಡೆದು ಹಾಕುತ್ತಾನೆ. `ನಿನ್ನನ್ನು ಬಿಟ್ಟರೆ ನನಗೆ  ಬೇರೆ ಹೆಣ್ಣು ಸಿಗುವುದಿಲ್ಲ’ ಎಂದುಹೇಳುತ್ತಾನೆ. ಆಗ ಬಂಗರಾಳ್ವಾಗ ಬೊಬ್ಬೆ ಹಾಕುತ್ತಾಳೆ. ಅವಳ ಬೊಬ್ಬೆ ಕೇಳಿ ಊರಿನ ಜನರೆಲ್ಲ ಓಡಿ ಬಂದು ದೇರೆ ಮುಂಡೋರಿಗೆ ಏಟು ಹಾಕಿ ಅವನನ್ನು ಓಡಿಸುತ್ತಾರೆ. ಆದರೆ ಮರುದಿವಸ ಪುನಃ ಅವಳನ್ನು ದಾರಿಯಲ್ಲಿ ಅಡ್ಡಗಟ್ಟಿ ತೊಂದರೆ ಮಾಡುತ್ತಾನೆ. ದೇರೆ ಮುಂಡೋರಿ, ಇನ್ನು ರಕ್ಷಣೆಗಾಗಿ ಬೇರೆಯವರನ್ನು ನಂಬಿ ಪ್ರಯೋಜನವಿಲ್ಲ ಎಂದರಿತ ಬಂಗರಾಳ್ವಾಗ `ದಾರಿ  ಬಿಡು ತಡಮೆ ತೊಲಗಿಸು’ ಎಂದವಳೇ ತಾನು ಹಿಡಿದ ಕೊಡವನ್ನು ಎತ್ತಿ ಅವನ ಮೇಲೆ ಹೊಡೆಯುತ್ತಾಳೆ. ಆಗ ಓಡಿಹೋಗುತ್ತಾನೆ ದೇರೆ ಮುಂಡೋರಿ, `ಊರಿಗೆ ಬಂದ ಮಾರಿ ಅತ್ತ ಹೋಯಿತು’ ಎಂದು ಹೇಳಿ ಬಂಗರಾಳ್ವಾಗ ಮನೆಗೆ ಬರುತ್ತಾಳೆ. ಮುಂದೆಂದೂ ಬೇರೆ ಮುಂಡೋರಿ ಅವಳ ಸುದ್ದಿಗೆ ಬರುವುದಿಲ್ಲ.


ತೊಂದರೆ ಕೊಟ್ಟವನಿಗೆ ಎರಡೇಟು ಕೊಟ್ಟು ಓಡಿಸುವ ಧೈರ್ಯವನ್ನು ತೋರುವ ತುಳು ನಾಡಿನ ಹೆಣ್ಣು ಮಗಳು ಬಂಗರಾಳ್ವಾನ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.


 4ರಾದು


ತುಳುನಾಡು ಹೆಣ್ಣು ಮಕ್ಕಳ ದಿಟ್ಟತನಕ್ಕೆಸಾಕ್ಷಿಯಾಗಿ ನಿಲ್ಲುವ ಪಾತ್ರ ರಾದುವಿನದು. ಶಾರದಾ ಜಿ. ಬಂಗೇರ ನಿರೂಪಿಸಿದ ಚಿಕ್ಕದೊಂದು ತುಳು ಕವಿತೆ ರಾದು.


ಹಾಡಿನಲ್ಲಿ ಹೇಳಿರುವಂತೆ ರಾದು ಬಹಳ ಒಳ್ಳೆಯ ಹೆಣ್ಣು ರಾದು ಅತ್ತೆಗೆ ಮೆಚ್ಚಿನ ಸೊಸೆ ಕೂಡ ನಾವು ಹೋಗುತ್ತೇವೆ’ ಎಂದು ರಾದು ಕೇಳಿದಾಗ ಹಾಗೆ ಯಾಕೆ ಹೇಳುತ್ತಿ ಮಗ ಎಂದುಅತ್ತೇ ಕೇಳುತ್ತಾರೆ. ಆಗ ಅವಳು ``ನಿಮ್ಮ ಮೊಮ್ಮಗ ಅಚ್ಯುತನಿಗೆ ಆಟವಾಡಲೆಂದು ಬುಗುರಿ ತರಲು ಹೋಗುವಾಗ ವಾಸ ಇಲ್ಲದ ಮನೆಯಲ್ಲಿ ನಿಮ್ಮ ಮಗ ಬಂಗೇರ ಮತ್ತು ನಡೆತೆಗೆಟ್ಟ ಹೆಣ್ಣು ಒಟ್ಟಿಗೆ ಇದ್ದರು. ನಾನು ಅಲ್ಲಿಗೆ ಹೋದದಕ್ಕೆ ನಿಮ್ಮ ಮಗ ಕೈಸೋಲುವಷ್ಟು ಹೊಡೆದರು. ಕಾಲು ಸೋಲುವಷ್ಟು ತುಳಿದರು. ಆದ್ದರಿಂದ ನಾನು ಮತ್ತು ಮಗ ಅಚ್ಯುತ ನನ್ನ ತವರಿಗೆ ಹೋಗುತ್ತೇನೆ’ ಎಂದು ಹೇಳುತ್ತಾಳೆ.


ಇಲ್ಲಿ ರಾದುವಿನ ದೃಢನಿರ್ಧಾರ ಪ್ರಕಟವಾಗುತ್ತದೆ. ತವರಿಗೆ ಹೊರಟ ಸೊಸೆಯಲ್ಲಿ ಅತ್ತೆ `ಹಾಗೆ ಹೋದರೆ ರಾದು ನೀನು ಮತ್ತೆ ಯಾವಾಗ ಬರುವೆ?’ ಎಂದು ಕೇಳುತ್ತಾರೆ. ಆಗ `ನಿಮ್ಮ ಮಗ ಸತ್ತಾಗ ಬಾರದಿದ್ದರೆ ಬೊಜ್ಜುಕ್ಕಾದರೂ ಬರುತ್ತೇನೆ’ ಎಂದು ಹೇಳುತ್ತಾರೆ ರಾದು. ಆದರೆ ಆ ಕ್ಷಣಕ್ಕೆ ಅವಳ ಕಣ್ಣಿನಲ್ಲಿ ನೀರು ಬರುತ್ತದೆ.


ತನ್ನ ಸಂಸಾರ ಹಾಳಾದ ಬಗ್ಗೆ ರಾದುವಿಗೆ ದುಃಖವಾಗುತ್ತದೆ. ಆದರೂ ಬೇರೆ ಹೆಣ್ಣಿನ ಸಹವಾಸ ಮಾಡಿದ್ದಲ್ಲದೆ ಅದನ್ನು ನೋಡಿದ್ದಕ್ಕಾಗಿ ಹೊಡೆದ ತುಳಿದ ಗಂಡನ ಜೊತೆ ಸಂಸಾರ ಮಾಡಲು ಅವಳ ಸ್ವಾಭಿಮಾನ ಒಪ್ಪುವುದಿಲ್ಲ. ಮಗನ ಕೈ ಹಿಡಿದು ಇಳಿದು ಹೋಗಿಯೇ ಬಿಡುತ್ತಾಳೆ ರಾದು. ಗಂಡನಾದವನು ಮಾಡುವ ಶೋಷಣೆಯ ಚಿತ್ರಣ ಇಲ್ಲಿದೆ. ತಪ್ಪುದಾರಿ ಹಿಡಿದು ತನ್ನ ಮೇಲೆ ದೌರ್ಜನ್ಯವೆಸಗಿದ ಗಂಡನನ್ನು ತಿರಸ್ಕರಿಸಿ ಹೊರ ನಡೆಯುವ ಧೈರ್ಯವನ್ನು ತೋರುತ್ತಾಳೆ ರಾದು.




5 ಕಲ್ಜಿಗದ ಕಥೆಪಣ್ಣೆ ನಲಿಪು ತೂಕ ಮಾದಿರ


ಆಧುನಿಕ ಹಾಡಿನ ಗತಿಯನ್ನು ಹೊಂದಿರುವ ಈ ಕವಿತೆ ಕಲಿಯುಗದ ಎಂದರೆ ಆಧುನಿಕತೆಯ ಈ ಸಮಯದ ಜೀವನವನ್ನರು ನಿರೂಪಿಸುತ್ತದೆ. ಕಳ್ಳು ಗಂಗಸರ ದೂರವಾಯಿತು. ಶ್ರೀಮಂತರ ದೊಡ್ಡಸ್ತಿಕೆ ಹೊರಟು ಹೋಯ್ತು. ಜೊತೆಗೆ ಗಾಂಧೀಜಿಯ ಪಟಹಾರಿಹೋಯಿತು. ಎಂಬಲ್ಲಿ ಸತ್ಯ. ಪ್ರಾಮಾಣಿಕತೆ ಕೂಡ ಮರೆಯಾಗುತ್ತಿದೆ ಎಂಬುದು ಸೂಚನೆ ಈ ಕವಿತೆಯಲ್ಲಿದೆ.




6 ಓ ಬೇಲೆ ಸೋಬಾನೆ ಪಂಡೋಂದು ಬಲ್ಲೆಯ


ಮದುವೆಯಂಥಹ ಶುಭ ಕಾರ್ಯಕ್ರಮಕ್ಕೆ ಹೆಣ್ಣು ಮಕ್ಕಳು ಹೋಗುವಾಗ ಮಾಡಿಕೊಳ್ಳುವ ಅಲಂಕಾರದ ವರ್ಣನೆ ಈ ಕವಿತೆಯಲ್ಲಿದೆ. ತಲೆ ಬಾಚಿ ಹೂ ಮುಡಿಯುವಲ್ಲಿಂದ ಕಾಲ ಉಂಗುರದ ತನಕ ಮುಡಿಯುವ, ತೊಟ್ಟುಕೊಳ್ಳುವ ಹೂ, ಆಭರಣಗಳ ವರ್ಣನೆ ಮಾಡುತ್ತಾ ಕವಿತೆಯನ್ನು ಬೆಳೆಸಿದ್ದಾರೆ.




7 ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಪಯ್ಯು ಎಂಬ ಬಾಲಕ ಹುಟ್ಟಿದ ತೆಂಕು ರಾಜ್ಯದ ವರ್ಣನೆಯನ್ನು ವಿಸ್ತರಿಸುವುದರೊಂದಿಗೆ ಪಯ್ಯು ಹುಟ್ಟಿದ ನಂತರ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥನಾದಾಗ ಸೋದರ ಮಾವ ಆತನನ್ನು ಸಾಕುತ್ತಾನೆ. ಸೋದರ ಮಾವ ಮಗುವಿಗೆ ವಿವಿಧ ಆಭರಣಗಳನ್ನು ಹಾಕಿ ಸಂತೋಷ ಪಡುತ್ತಾನೆಂದು ಈ ಕವಿತೆಯಲ್ಲಿ ಹೇಳಿದೆ. ಎಳೆಯ ಮಗುವಿಗೆ ಹಾಕುವ ಆಭರಣಗಳನ್ನು ಒಂದೊಂದಾಗಿ ಹೇಳುತ್ತಾ ಕವಿತೆಯನ್ನು ವಿಸ್ತರಿಸಿದ್ದಾನೆ.




 8 ಬಾರುಂಡು ಬಳ್ಳುಂಡು ಬಂಗಾಡಿಡೇ


`ಬತ್ತ ಇದೆ. ಬಳ್ಳಿ ಇದೆ. ಬಂಗಾಡಿಯಲ್ಲಿ.’ `ನೀರಿದೆ ನೆರಳಿದೆ ನೇರೆಂಗಿಯಲ್ಲಿ’ ಎಂದು ಎರಡು ಬೀಡುಗಳ ಕುರಿತು ಹೇಳುತ್ತಾ, ನೇರೆಂಗಿ ಬೀಡಿಗೆ ಹೋಗುವಾಗ ಏನನ್ನೆಲ್ಲ ಧರಿಸಬೇಕು ಎಂಬುದನ್ನು ಈ ಕವಿಕೆಯಲ್ಲಿ ವಿವರಿಸಲಾಗಿದೆ. ತನ್ನಲ್ಲಿರುವ ಬಳೆ, ಬೆಂಡೋಲೆ, ಪಟ್ಟೆಸೀರೆ, ಉಂಗುರ ಮೊದಲಾದ ಆಭರಣಗಳನ್ನು ಹೇಳುತ್ತಾ ಸಾಗುವ ಈ ಕವಿತೆಯಲ್ಲಿ ತುಳುವ ಸ್ತ್ರೀಯರ ಅಲಂಕಾರ ಸಾಮಗ್ರಿಗಳ ವಿವರಣೆ ಸಿಗುತ್ತದೆ. ಆಕರ್ಷಕವಾದ ರಾಗ ಸಂಯೋಜನೆ ಇದಕ್ಕಿದೆ.




9 ಪಕ್ಕಿಗುಲೋ ಪಕ್ಕಿಗುಲು ರಾಮಸ್ವಾಮಿ ಪಕ್ಕಿಗುಲು


ಪ್ರಕೃತಿಯ ಹೂ, ಹಣ್ಣು, ಕಾಯಿ, ಮೃಗ, ಪಕ್ಷಿಗಳೆಲ್ಲ ದೇವರ ಮಕ್ಕಳು ಎಂಬ ನಂಬಿಕೆ ಜನಪದರದ್ದು, ಅಂತೆಯೇ ಸೌತೆ, ಅಲಸಂದೆ, ಬೇಂಡೆ, ಬದನೆ, ಹೀರೆ, ಸೊರೆ ಮೊದಲಾದ ತರಕಾರಿ ಗಿಡ ಬಳ್ಳಇಗಳು ಹೂವಿನ ರಸವನ್ನು ಹೀರಲು ಬರುವ ಪಕ್ಷಿಗಳನ್ನು ರಾಮ ಸ್ವಾಮಿಯ ದೇವರ ಪಕ್ಷಿಗಳೆಂದು ಕರೆದು ವರ್ಣಿಸಿದ್ದಾರೆ. ತುಳು ಜನಪದ ಕವಿಗಳು ತುಳುವರು ಬೆಳೆಯುವ ಬೇರೆ ಬೇರೆ ತರಕಾರಿಗಳ ಹೆಸರುಗಳನ್ನು ಹೇಳುತ್ತಾ ಕವಿತೆಯನ್ನು ಬೆಳೆಸುತ್ತಾ ಸಾಗಿದ್ದಾರೆ. ತುಳುವ ಜನಪದ ಕವಿಗಳು ಇದಕ್ಕೆ ಸುಶ್ರಾವ್ಯವಾದ ರಾಗವನ್ನು ಸಂಯೋಜಿಸಿದ್ದಾರೆ. ಜನಪದ ಹಾಡುಗಾರರು




10 ಬತ್ತುಂಡು ಮರ ಆಯಾಲೇ


ಹಿಂದಿಯ `ಆಯಾ’ (ಬಂತು) ಎಂಬ ಪದವನ್ನು ಸೇರಿಸಿಕೊಂಡು ಬಂತು ಮರ ಆಯಾ (ಬಂತು)ಲೇ ಎಳೆಯಿರಿ ಯುವಕರೆ ಓ ಎಂಬ ಸೊಲ್ಲಿನೊಂದಿಗೆ ಸಾಗುವ ಈ ಕವಿತೆಯಲ್ಲಿ ತುಳುನಾಡಿನಲ್ಲಿ ಬೆಳೆಯುವ ಮರಗಳ ವರ್ಣನೆ ಇದೆ. ಮರ ಎಳೆಯುವಾಗ ಹೇಳುವ ಮಾತುಗಳನ್ನು ಇಲ್ಲಿ ಕವಿತೆಯಾಗಿ ನಿರೂಪಿಸಿದ್ದಾರೆ. ತುಳು ಜನಪದ ಕವಿಗಳು, ಮಾವು, ಬೇಂಗ, ಹೊನ್ನೆ, ಹಲಸು, ತೆಂಗು, ತಾಳೆ, ನೇರಳೆ, ದಡ್ಡಾಲ, ಸಾಗುವಾನಿ, ಹೊಂಗೆ, ಈಂದು, ಹೊಂಗಾರೆ, ಕಲ್ಮಾರು, ಉಪ್ಪಳಿಗೆ ಮೊದಲಾದ ತುಳುನಾಡಿನಲ್ಲಿ ಬೆಳೆಯುವ ತಮಗೆ ಪರಿಚಿತವಾದ ಮರಗಳ ಹೆಸರನ್ನು ಒಂದೊಂದಾಗಿ ಹೇಳುತ್ತಾ ಕವಿತೆಯನ್ನು ಬೆಳೆಸುತ್ತಾ ಸಾಗಿದ್ದಾರಿಲ್ಲಿ ತುಳು ಜನಪದರು.


11 ಪುದಾ ಪುದಾ ಓ ಪುದಾ ದೇವರೆ ಜಾಲ ಪುದಾ

© ಡಾ.ಲಕ್ಷ್ಮೀ ಜಿ ಪ್ರಸಾದ್

ಪುದ ಎಂದರೆ ಪಾರಿವಾಳ ಎಂದರ್ಥ. ಇಲ್ಲಿ ಪುದ ಸ್ತ್ರೀಸಹಜ ಅಲಂಕಾರವನ್ನು ನೋಡಿಕೊಳ್ಳುವ ವಿಷಯವಾಗಿ ವಿವರಣೆ ಇದೆ. ಪುದ ಎಂಬ ದೈವ್ಯಕ್ಕೆ ಅನೇಕ ಪ್ರದೇಶಗಳಲ್ಲಿ ಆರಾಧನೆ ಇದೆ. ಕಾಸರಗೊಡು ಪರಿಸರದಲ್ಲಿ ಕುಂಬಳಕೋರಿಯ ನಿಮಿತ್ತ `ಒಂಜಿ ಕಮ್ಮಿ ನಲ್ಪ’ ದೈವಗಳಿಗೆ ಸಮೂಹದಲ್ಲಿ ಆರಾಧನೆ ಇದೆ. ಇಲ್ಲಿ ಎಲ್ಲ ಮೂವತ್ತೊಂಬತ್ತು ದೈವಗಣ ಹೆಸರುಹೇಳಿ ನೇಮ ಇರುವುದಿಲ್ಲ. ಆ ಕುಟುಂಬ ಹಾಗೂ ಗ್ರಾಮದ ಪ್ರಧಾನ ದೈವಗಳಿಗೆ ಪ್ರತ್ಯೇಕವಾಗಿ ನೇಮ ಮಾಡುತ್ತಾರೆ. ಇತರ ದೈವಗಳಿಗೆ ಸಮೂಹದಲ್ಲಿ ಆರಾಧನೆ ಸಲ್ಲಿಸುತ್ತಾರೆ. ಒಂಜಿ, ಕಮ್ಮಿ ನಲ್ಪ ದೈವಗಳ ಆರಾಧನೆ ಆರಂಭದಲ್ಲಿ ಪುದ ಎಂಬ ದೈವಕ್ಕೆ ಆರಾಧನೆ ಇರುತ್ತದೆ. ಪುದ ದೈವದ ವೇಷಭೂಷಣ ಬಹಳ ಸರಳವಾದುದು. ಮೈಗೆ ತೆಂಗಿನ ತಿರಿಯ ಅಲಂಕಾರ ಆರಂಭದಲ್ಲಿ ಪುದ ಎಂಬ ದೈವಕ್ಕೆ ಆರಾಧನೆ ಇರುತ್ತದೆ. ಪುದ ದೈವದ ವೇಷಭೂಷಣ ಬಹಳ ಸರಳವಾದುದು. ಮೈಗೆ ತೆಂಗಿನ ತಿರಿಯ ಅಲಂಕಾರ, ತಲೆಗೊಂದು ವಿಶಿಷ್ಟವಾದ ತೆಂಗಿನ ತಿರಿಯಿಂದ ತಯಾರಿಸಿದ ತಲೆ ಪಟ್ಟಿ ಇರುತ್ತದೆ. ಪುದ ಎಂದರೆ ಪಾರಿವಾಳ ಎಂದರ್ಥ ಪಾರಿವಾಳವೊಂದು ದೈವವಾಯಿತೆ? ದೈವ ಹೇಗಾಯಿತು? ದೈವ ಯಾಕಾಯಿತು? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವುದಿಲ್ಲವಾದರೂ ಕೆಲವು ವಿಚಾರಗಳು ತಿಳಿದು ಬರುತ್ತವೆ.


``ಓ ಬೊಳ್ಳೇ ಪುಟ್ಟುಂಡೇ ಬೊಟ್ಟುದ ಮಿತ್ತು


ಓ ಪುದಾ ಪುಟ್ಟುಂಡೇ ಪುತ್ತೂರ್ದಾ ಬೂಡುಡು


ಓ ಕಂಚೀ ನಲಿಪ್ವ್ಯಾರ ಗಗ್ಗರ ಪಾಡ್ಯೇರು


ರಟ್ಟೇ ನಲಿಪ್ವ್ಯಾರ ಪಾವಡೆ ಪಾಡ್ಯೇರು’’


ಎಂಬ ಸಾಲುಗಳ ಈಜೋ ಮಂಜೊಟ್ಟೆ ಗೋಣ ಪಾಡ್ದನದಲ್ಲಿದೆ (ದೈವಿಕ ಕಂಬಳ ಕೋಣ- ಪುಟ 27, ಲಕ್ಷ್ಮೀ ಜಿ.ಪ್ರಸಾದ್) ಈ ಪಾಡ್ದನದ ಪ್ರಕಾರ ಕೋಣ ಬೊಳ್ಳ ಮುಂದೆ ದೈವವಾಗುತ್ತಾನೆ. ಈ ಬೊಳ್ಳನ ಜೊತೆಯಲ್ಲಿ ಪುದದ ಪ್ರಸ್ತಾಪ ಬರುತ್ತದೆ ಇಲ್ಲಿ. ಆನಂತರ ಪುದಕ್ಕೆ ಗಗ್ಗರವನ್ನೂ ಬೊಳ್ಳನಿಗೆ ಪಾವಡೆ ಹಾಕಿದ ಬಗ್ಗೆ ಪಾಡ್ದನವು ತಿಳಿಸುತ್ತದೆ.


ಪುದ ಹುಟ್ಟಿದ್ದು ಪುತ್ತೂರಿನ ಬೀಡಿನಲ್ಲಿ ಎಂದಿಲ್ಲಿ ಹೇಳಲಾಗಿದೆ. ``ಪುದ’’ ಎಂಬ ಹೆಸರಿನ ಕವಿತೆಯೊಂದು ಪ್ರಚಲಿತವಿದೆ. ಇದರಲ್ಲಿ ದೇವರ ಜಾಲಪುದವು ತೆಂಕಾಯಿ ಸಿರಿಪದೊಳಿಗೆಯಲ್ಲಿ ತಲೆ ಬಾಚಿ ಅಲಂಕಾರ ಮಾಡುವ ವಿಚಾರವಿದೆ.


ಹೀಗೆ ಹೆಣ್ಣೊಬ್ಬಳು ಸೀರೆ ಉಡುವ, ಹೂ ಮುಡಿವ, ಬಳೆ ಇಟ್ಟು ಅಲಂಕಾರ ಮಾಡುವುದನ್ನು ವರ್ಣಿಸುತ್ತದೆ ಪುದ ಕವಿತೆ ಇದರ ಇನ್ನೊಂದು ಪಾಠದಲ್ಲಿ ``ಪುದ ಪುದಾ ಪುದಲೆಕ್ಕ ಸಾಂಕಿ ಪುದಾ’’ ಎಂದು ಹೇಳಿದೆ. ಇಲ್ಲಿ ಪುದ ಅಂದರೆ ಪಾರಿವಾಳದಂತೆ ಜೋಪಾನವಾಗಿ ಸಾಕಿದ ಹೆಣ್ಣು ಮಗಳು ಪುದ ಎಂಬ ಅರ್ಥ ಕಾಣಿಸುತ್ತದೆ. ಪುದ ಕವಿತೆಯನ್ನು ಹೇಳಿದ ಪಾಡ್ದನಗಾರ್ತಿ ಶಾರದಾ ಜಿ. ಬಂಗೇರ ಅವರು ``ದೇವರ ಪಾರಿವಾಳಗಳು ತೆಂಕು ಮನೆಯ ಸಿರಿಪದೊಳಿಗೆಯಲ್ಲಿ ಗೂಡು ಕಟ್ಟಿ ಮೊಟ್ಟೆ ಇಡುತ್ತವೆ. ಮೊಟ್ಟೆ ಒಡೆದು ಓರ್ವ ಹೆಣ್ಣು ಮಗಳು ಹೊರಗೆ ಬರುತ್ತಾಳೆ. ಅವಳು ಋತುಮತಿಯಾದಾಗಿನ ಆಚರಣೆಗಾಗಿ ಅವಳು ಅಲಂಕರಿಸಿಕೊಳ್ಳುವ ಸಂದರ್ಭವನ್ನು ಕವಿತೆಯಲ್ಲಿ ಹೇಳಿದ್ದೇನೆ’’ ಎಂದು ಹೇಳಿದ್ದಾರೆ. ``ಪುದ ಒಂದು ಹೆಣ್ಣು ಮಗುವಾಗುತ್ತದೆ. ಆ ಹೆಣ್ಣು ಮಗಳೇ ಮುಂದೆ ಕೊರಗ ತನಿಯನಿಗೆ ಜನ್ಮ ಕೊಡುವವಳು. ಕೊರಗ ತನಿಯನ ತಾಯಿ ಮೈರೆ ಆರಂಭದಲ್ಲಿ ಪಾರಿವಾಳವಾಗಿದ್ದು ನಂತರ ಹೆಣ್ಣಾಗಿರುವ ಬಗ್ಗೆ ಕೊರಗ ತನಿಯ ಪಾಡ್ದನದ ಒಂದು ಪಾಠದಲ್ಲಿ ವಿವರವಿದೆ’’ ಎಂದು ಡಾ|| ಅಮೃತ ಸೋಮೇಶ್ವರರು ಹೇಳಿದ್ದಾರೆ (ತುಳು ಪಾಡ್ದನ ಸಂಪುಟ-ಪುಟ 58). ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೊರಗ ತನಿಯನ ತಾಯಿ ಮೈರೆಯೇ ಪುದ ಎಂಬ ಹೆಸರಿನಲ್ಲಿ ಆರಾಧನೆ ಹೊಂದಿರಬಹುದು ಎಂದು ಹೇಳಬಹುದು.


ದೈವತ್ವಕ್ಕೇರಿದ ಮೈರೆಯು (ಪುದ) ಅಲಂಕಾರ ಮಾಡಿಕೊಳ್ಳುವ ರೀತಿಯಲ್ಲಿ ಇಲ್ಲಿ ವರ್ಣಿಸಲಾಗಿದೆ. ತುಳುನಾಡಿನ ಹೆಣ್ಣು ಮಕ್ಕಳು ಮಾಡಿಕೊಳ್ಳುವ ಅಲಂಕಾರ ವರ್ಣನೆಯೇ ಇಲ್ಲಿ ಕವಿತೆಯಾಗಿ ಮೂಡಿಬಂದಿದೆ.


12ಕೋಡೆಂಕ್ಳು ಬೈದಾಯೇ ಓ ಉಳ್ಳಾರೇ

© ಡಾ.ಲಕ್ಷ್ಮೀ ಜಿ ಪ್ರಸಾದ್

ಪಂಜಿಕಲ್ಲು ಮಾಗಣೆಯ ಒಡೆಯರ ಉದಾರತೆಯನ್ನು ಪ್ರಸ್ತುತ ಪಡಿಸುವ ಈಕವಿತೆಗೆ ತುಳುವ ಜನಪದರು ಸುಶ್ರಾವ್ಯವಾದ ರಾಗ ಸಂಯೋಜನೆಯನ್ನು ಮಾಡಿದ್ದಾರೆ. ನಿನ್ನೆ ನಾವು ಪಂಜಿಕಲ್ಲು ಮಾಗಣೆಗೆ ಬಂದಿದ್ದೇವೆ. ನಮ್ಮ ಎಣ್ಣೆ ಹಾಕದ ತಲೆಯನ್ನು ಒಡೆಯ ನೋಡಿರಬೇಕು. ಅಂತೆಯೇ ಎಣ್ಣೆದಾನ ನೀಡಿದ್ದಾರೆ. ಊಟವಿಲ್ಲದೆ ಸೊರಗಿ ಒಳ ಸೇರಿದ ಹೊಟ್ಟೆಯನ್ನು ನೋಡಿಯೇ ಉದಾರತೆಯಿಂದ ಅನ್ನದಾನ ಮಾಡಿದ್ದಾರೆ. ಸೀರೆಯ ಜೀರ್ಣಾವಸ್ಥೆಯನ್ನು ನೋಡಿ ಸೀರೆಯ ಅಗತ್ಯತೆಯನ್ನು ಮನಗೊಂಡು ಕೇಳುವ ಮುಂಚೆಯೇ ವಸ್ತ್ರದಾನ ಮಾಡಿದ್ದಾರೆ. ಇತ್ಯಾದಿಯಾಗಿ ಪಂಜಿಕಲ್ಲು ಮಾಗಣೆಯ ಒಡೆಯನ ಉದಾರತೆಯನ್ನು ಒಂದೊಂದಾಗಿ ಹೊಗಳುತ್ತಾ ಕವಿತೆ ಸಾಗುತ್ತದೆ


13 ಬಲ್ಲೇರಿ ದಾದ ಬಲ್ಲೆದ ಮೇಲ್‍ದಾದ


ಬಲ್ಲೇರಿಯಲ್ಲಿ ಏನಿದೆ ಬಲ್ಲೆಯ ಮೇಲೆ ಏನು ಎಂದು ಕೇಳುತ್ತಾ ಬೇರೆ ಬೇರೆ ತರಕಾರಿಗಳ ಹೆಸರನ್ನು ಹೇಳುತ್ತಾ ಸಾಗುವ ಕವಿತೆಯರು ತುಳುವ ಪರಿಸರದಲ್ಲಿ ಬೆಳೆಯುವ ತರಕಾರಿಗಳ ಹೆಸರುಗಳನ್ನು ಹೇಳುತ್ತಾ ಕವಿತೆಯನ್ನು ಬೆಳೆಸಿದ್ದಾರೆ ಜನಪದ ಕವಿಗಳು


14 ಆಜಪ್ಪ ಮೂಜಿ ಮೂಡೇ


ಆರು ಅಪ್ಪ ಮೂರು ಮೂಡೆ ಹದಿನಾರು ಸುಕುನಪ್ಪವು ಈಶ್ವರ ದೇವರ ಪಾದಕ್ಕೆ ಕಾಣಿಕೆ ಎಂದು ಹೇಳಿ ಬೇರೆ ಬೇರೆ ತರಕಾರಿಗಳನ್ನು ಈಶ್ವರ ದೇವರಿಗೆ ಅರ್ಪಿಸುತ್ತಾ ಕವಿತೆಯನ್ನು ಬೆಳೆಸಿದ್ದಾರೆ. ಪ್ರಾಸಕ್ಕೆ ಅನುಗುಣವಾಗಿ ಪ್ರತಿ ತರಕಾರಿಯನ್ನು ಕರಿಯ ಬಿಳಿಯ ಎಂದುಹೇಳುತ್ತಾ ಈ ಕವಿತೆಯನ್ನು ಸುಶ್ರಾವ್ಯವಾಗಿ ಹಾಡುತ್ತಾರೆ. ಜನಪದ ಹಾಡುಗಾರ್ತಿಯರು ತರಕಾರಿಗಳ ಹೆಸರುಗಳನ್ನು ವಿಸ್ತರಿಸುತ್ತಾ ಹೋಗುವಲ್ಲಿ ಇವವ ಜಾಣ್ಮೆ ವ್ಯಕ್ತವಾಗುತ್ತದೆ


15 ಒಂಜಿ ಕುತ್ತಿ ಕಳಿಮಾರ್ಯಾಳೇ ಬೈದ್ಯೆದಿ


ಕಳ್ಳನ್ನು ಮಾರುವ ಬೈದ್ಯೆದಿ ಯಾವ ರೀತಿ ಸಿರಿವಂತಿಕೆಯನ್ನು ಪಡೆದಳು ಎಂದು ವಿವರಿಸುತ್ತಾ ಬೆಳೆಯುವ ಕವಿತೆ ಇದು. ಒಂದು ಕುತ್ತಿ ಕಳ್ಳನ್ನು ಮಾರಿ ಏಳು ಮಾಲಿಗೆಯ ಮನೆ, ಏಳು ಸವರನ್ ಚಿನ್ನದ ಸರ, ಏಳು ಜನ ಮಕ್ಕಳ ಜನ್ಮ, ಏಳು ಮಕ್ಕಳ ಲಾಲನೆ ಪಾಲನೆ, ಅವರ ಮದುವೆ ಹೀಗೆ ಒಂದೊಂದಾಗಿ ಅಭಿವೃದ್ಧಿಯನ್ನು ಪಡೆಯುತ್ತಾ ಬೈದ್ಯೆದಿ ಸಾಗುವುದನ್ನು ಈ ಕವಿತೆಯ ಮೂಲಕ ತುಳುವ ಜನಪದರು ಹಾಡಿ ವಿವರಿಸಿದ್ದಾರೆ.


16 ಬಲ್ಲೇಯೇ ಸ್ವಾಮಿ ಬಲ್ಲೇಯೇ


ಬನ್ನಿ ಸ್ವಾಮಿ ಬನ್ನಿರಿ ಗದ್ದೆಯ ಬದುವಿಗೊಮ್ಮೆ ಬನ್ನಿರಿ. ನಾವು ಹಾಡುವ ಕೇಳಿರಿ, ನೇಜಿ ನೆಡುವ ಚಂದವನ್ನು ಒಮ್ಮೆ ನೋಡಿರಿ ಎಂದು ಜನಪದ ಕವಯುತ್ರಿಯರು ಈ ಕವಿತೆಯ ಮೂಲಕ ಒಡೆಯನನ್ನು ಗದ್ದೆಗೆ ಆಹ್ವಾನಿಸುತ್ತಾರೆ. ಗದ್ದೆಯ ಬದುವಿಗೊಮ್ಮೆ ಬರಲಾಗುವುಲ್ಲವೇ? ನಮ್ಮ ಹಾಡನ್ನು ಕೇಳಲಿಕ್ಕಾಗುವುದಿಲ್ಲವೇ? ಎಂಬಲ್ಲಿ ಗದ್ದೆಯ ನಾಟಿಕಾರ್ಯವನ್ನು ನೋಡಲು ಬಾರದ ಯಜಮಾನವನ್ನು ಆಕ್ಷೇಪಿಸುತ್ತಾರೆ.


17ಮಿತ್ತಂಗಡಿ ಪೇಂಟೆ ತಿರ್ತಂಗಡಿ ಪೇಂಟೆ


ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆಗಳಿಗೆÂ ಬೊಲ್ಲೂರ ಬೊಂಬೆ ಎಂದು ಕರೆಯಲ್ಪಡುವ ಸುಂದರ ಯುವತಿ ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಕೊಳ್ಳಲು ಬರುತ್ತಾಳೆ. ಎಂದು ಹೇಳುವ ಕವಿತೆಯಿದು. ಮನೆಯಲ್ಲಿ ಅಡುಗೆಗೆ ಬೇಕಾದ ತರಕಾರಿ, ಬೆಲ್ಲ, ಉಪ್ಪು,ಹುಳಿ ಮೆಣಸು, ಉದ್ದು, ಹೆಸರು, ಮೆಂತ್ಯೆ, ಜೀರಿಗೆ ಮೊದಲಾದ ವಸ್ತುಗಳನ್ನು ಒಂದೊಂದಾಗಿ ಹೇಳುತ್ತಾ ಕವಿತೆಯನ್ನು ವಿಸ್ತರಿಸುತ್ತಾ ಹೋಗಿದ್ದಾರೆ




18 ಆಯರೆ ಗುಡ್ಡೆ ತಪ್ಪುದ ಕಟ್ಟ


ಸಾಲಿಯಾನ್ ಮತ್ತು ಕಂರ್ಬೆರನ್ನಲ್ ಬಳಿಯವರಿಗೆ ಸದಾ ವಿರಸ ಇರುತ್ತದೆ. ಈ ಎರಡು ಬಳಿಗಳ ನಡುವೆ ವಿವಾಹ ಕೂಡ ಅಪರೂಪ. ಈ ಎರಡು ಬಳಿಗಳ ನಡುವೆ ಸದಾ ವಿವಾದವಿರುತ್ತದೆ ಎಂದು ಪರಸ್ಪರ ವಿವಾಹ ಸಂಬಂಧ ಮಾಡುವುದಿಲ್ಲ. ಆದ್ದರಿಂದಲೇ ಆ ಕಡೆಯ ಗುಡ್ಡೆಯ ಸಪ್ಪಿನಕಟ್ಟ ಸಾಲಿಯಾನ್ ಬಳಿಯ ಜಾನುನಾಯ್ಕನಿಗೆ ಈ ಕಡೆಯ ಗುಡ್ಡೆಯ ಸಪ್ಪಿನಕಟ್ಟ ಕರ್ಬೇರನ್ನಲು ಬಳಿಯ ಮೈಂದ ಸೀತರಿಗನಿಗೆ ಎಂದು ಹೇಳುತ್ತಾ ಕವಿತೆ ಆರಂಭವಾಗಿ ಒಂದು ಬಾವಿಗೆ ಎರಡು ದಂಡೆ, ಒಂದು ತೊಟ್ಟಲಿನಲ್ಲಿ ಎರಡು ಶಿಶುಗಳು ಎಂದು ಹೇಳುತ್ತಾ ಈ ಎರಡು ಬಳಿಗಳ ನಡುವಿನ ವಿರಸವನನು ಸಂಕೇತಿಸುತ್ತಾ ಈ ಕವಿತೆ ವಿಸ್ತರಿಸುತ್ತಾ ಸಾಗುತ್ತದೆ.




19 ಜತ್ತಾನಂಗಡಿ ದೇಲಾಗೊಡು


ಜತ್ತಾನಂಗಡಿ ದೇವಾಲಯದಲ್ಲಿ ಹಿಂದೆ ಉಳಿಯಿತೆ ಅಣ್ಣನವರೆ ಮುಂದೆ ಉಳಿಯಿತೆ ಎಂದು ಕೇಳುತ್ತಾ ಮೆಣಸು, ಬೆಲ್ಲ, ಸಕ್ಕರೆ, ತೆಂಗು ಮೊದಲಾದ ವಸ್ತುಗಳನ್ನು ಹೆಸರಿಸುತ್ತಾ ಸಂಯೋಜಿಸಿರುವ ತುಳು ಜನಪದ ಕವಿತೆ ಇದು.






20 ಸಾರಬೀಬಿ ಸೀಮೆ ನೋಡಿ


ಮುಸ್ಲಿಂ ಮಹಿಳೆಯ ವೇಷಭೂಷಣಗಳನ್ನು ವಿವರಿಸುವ ಕವಿತೆಯಿದು. ಕನ್ನಡ-ತುಳು ಮಿಶ್ರಭಾಷೆಯಲ್ಲಿ ಈ ಕವಿತೆ ಸಾಗುತ್ತದೆ. ಮುಸ್ಲಿಂ ಮಹಿಳೆಯರು ತೊಡುವ ಪಟ್ಲಾಸು, ಬುರ್ಖಾ, ಅಲಿಕತ್ತು, ರುಮಾಲು ಮೊದಲಾದವುಗಳ ಉಲ್ಲೇಖ ಈ ಕವಿತೆಯಲ್ಲಿದೆ.


21 ಸಣ್ಣಲ್ಲ ಕಾಡುಡು ಬಣ್ಣಲ್ಲ ಬಲಿಕೆಡು


ಗಂಡು ಹೆಣ್ಣಿನ ನವಿರಾದ ಪ್ರೇಮದ ಚಿತ್ರಣ ಈ ಕವಿತೆಯಲ್ಲಿದೆ. ಹೆಣ್ಣು ಸ್ವಾಲಚ್ಚೆಮಿ(ಶುಭಲಕ್ಷ್ಮಿ)ಯನ್ನು ನೋಡಲು ಬಂದ ಗಂಡು ಜತ್ತೇಲಿಂಗನಲ್ಲಿ ``ದೊಡ್ಡದಾದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ ನೀನು ಹೇಗೆ ಇಳಿದು ಬಂದು’’ ಎಂದು ಸ್ವಾಲಚ್ಛೆಮಿ(ಶುಭಲಕ್ಷ್ಮಿ) ಪ್ರಶ್ನೆ ಮಾಡಿದಾಗ ನಿನ್ನ ಕಣ್ಣ ಸೆಳೆತಕ್ಕೆ ಒಲುಮೆಯ ಸೆಳೆತಕ್ಕೆ ಸಿಲುಕಿ ನಿನ್ನನ್ನು ನೆನೆದುಕೊಂಡು ಜೀವವನ್ನು ಲೆಕ್ಕಿಸದೆ ಇಳಿದು ಬಂದ ವಿಚಾರವನ್ನು ಜತ್ತೇಲಿಂಗ ಹೇಳುತ್ತಾನೆ. ಗಂಡು ಹೆಣ್ಣಿನ ನಡುವಿನ ಸಂಭಾಷಣೆಯ ರೂಪದಲ್ಲಿ ಈ ಕವಿತೆಯಿದೆ. ಸುಶ್ರಾವ್ಯವಾದ ರಾಗದಲ್ಲಿ ಈ ಕವಿತೆಯನ್ನು ಜನಪದ ಕವಯಿತ್ರಿಯರು ಹಾಡುತ್ತಾರೆ.




23 ಆಮಯೇಲೆ ಏಲೆ ಬರಡು


ಸಪ್ತದುರ್ಗಯರು  ಬೇರೆ ಬೇರೆ ಸ್ಥಳಗಳನ್ನು ನೆಲೆಸಿದರೆಂದು ಹೇಳುವ ಕವಿತೆಯದು. ಪೌರಣಿಕ ಕಲ್ಪನೆಯ ಪ್ರಕಾರ ಸಹಿಹಿತ್ತಲಿನಲ್ಲಿ ಭಗವತಿ, ಕಟೀಲಿನಲ್ಲಿ ಭ್ರಮರಾಂಬೆ, ಮೂಲ್ಕಿಯಲ್ಲಿ ದುರ್ಗೆ, ಪೆÇಳಲಿನಲ್ಲಿ ರಾಜರಾಜೇಶ್ವರಿ, ಮುಡ್ಕೂರಿನಲ್ಲಿ ಅನ್ನಪೂರ್ಣೇ, ಚಿತ್ರಾಪುರದಲ್ಲಿ ಜಲದುರ್ಗೆ ಕುಂಜಾರಿನಲ್ಲಿ ಕಾತ್ಯಾಯನಿಯಾಗಿ ಸಪ್ತದುರ್ಗೆಯರು ನೆಲೆನಿಲ್ಲುತ್ತಾರೆ. ಇದನ್ನು ತುಳು ಜನಪದ ಕವಿಗಳು ಹೀಗೆ ಕವಿತೆಯಾಗಿ ಕಟ್ಟಿದ್ದಾರೆ




22 ವೇಣೂರು ಪದವುಡೇ ಓ ಚಂದಕ್ಕ


ವೇಣೂರು ಅಜಿಲರ ಉದಾರತೆಯನ್ನು ಸಾರುವ ಕವಿತೆ ಇದೆ. ತುಳುವ ಜನಪದರು ವೇಣೂರ ಅಜಿಲರು ದಾನವನ್ನು ಕೇಳುವ ಮೊದಲೇ ಜನರ ಅಗತ್ಯವನ್ನು ನೋಡಿ ದಾನ ಮÁಡುತ್ತಿದ್ದರು ಎನ್ನುವುದನ್ನು ತುಳು ಜನಪದ ಹಾಡುಗಾರರು ಈ ಕವಿತೆಯನ್ನು ಹೇಳಿದ್ದಾರೆ.








23 ಆಯರೆ ಗುಡ್ಡೆ ತಪ್ಪುದ ಕಟ್ಟ


ಸಾಲಿಯಾನ್ ಮತ್ತು ಕಂರ್ಬೆರನ್ನಲ್ ಬಳಿಯವರಿಗೆ ಸದಾ ವಿರಸ ಇರುತ್ತದೆ. ಈ ಎರಡು ಬಳಿಗಳ ನಡುವೆ ವಿವಾಹ ಕೂಡ ಅಪರೂಪ. ಈ ಎರಡು ಬಳಿಗಳ ನಡುವೆ ಸದಾ ವಿವಾದವಿರುತ್ತದೆ ಎಂದು ಪರಸ್ಪರ ವಿವಾಹ ಸಂಬಂಧ ಮಾಡುವುದಿಲ್ಲ. ಆದ್ದರಿಂದಲೇ ಆ ಕಡೆಯ ಗುಡ್ಡೆಯ ಸಪ್ಪಿನಕಟ್ಟ ಸಾಲಿಯಾನ್ ಬಳಿಯ ಜಾನುನಾಯ್ಕನಿಗೆ ಈ ಕಡೆಯ ಗುಡ್ಡೆಯ ಸಪ್ಪಿನಕಟ್ಟ ಕರ್ಬೇರನ್ನಲು ಬಳಿಯ ಮೈಂದ ಸೀತರಿಗನಿಗೆ ಎಂದು ಹೇಳುತ್ತಾ ಕವಿತೆ ಆರಂಭವಾಗಿ ಒಂದು ಬಾವಿಗೆ ಎರಡು ದಂಡೆ, ಒಂದು ತೊಟ್ಟಲಿನಲ್ಲಿ ಎರಡು ಶಿಶುಗಳು ಎಂದು ಹೇಳುತ್ತಾ ಈ ಎರಡು ಬಳಿಗಳ ನಡುವಿನ ವಿರಸವನನು ಸಂಕೇತಿಸುತ್ತಾ ಈ ಕವಿತೆ ವಿಸ್ತರಿಸುತ್ತಾ ಸಾಗುತ್ತದೆ.




24ಸಣ್ಣ ತರೆತ್ತಾಳು ಲಿಂಬೆ ಮಿರೆತ್ತಾಳು


ಸುಂದರ ತೆಳುಕಾಯದ ಹೆಣ್ಣು ಮಗಳ ಸೌಂದರ್ಯ ಹಾಗೂ ಗುಣವನ್ನು ಹೊಗಳುವ ಕವಿತೆಯಿದು, ಗಂಗಮ್ಮ ಗೌರಮ್ಮನಂಥ ಹೆಣ್ಣು ಅವಳು ರಂಬೆಯಂಥ ಸುಂದರಿ, ಬೇರೆಯವರು ಇಣುಕಿ ನೋಡಿದಾಗ ಅಳುಕಿ ಹೆದರುವ ಹೆಣ್ಣು ಎಂದು ಓರ್ವ ಸುಂದರ ಹುಡುಗಿಯನ್ನು ಈ ಕವಿತೆಯನ್ನು ಮೂಲಕ ಜನಪದರು ವರ್ಣಿಸಿದ್ದಾರೆ


ಆಶಯ 


ತುಳು ಪಾಡ್ದನಗಳು ,ಕವಿತೆಗಳು ತುಳುವಿನಲ್ಲಿದ್ದರೆ ತುಳುವರಿಗೆ ಮಾತ್ರ ಅರ್ಥವಾಗುತ್ತದೆ .ಹೊರ ಜಗತ್ತಿಗೆ ತುಳು ಜಾನಪದ ,ಸಂಸ್ಕೃತಿಯ ಸೊಗಡನ್ನು ತಿಳಿಸ ಬೇಕಾದರೆ ಕನ್ನಡವನ್ನು ನಾವಿಂದು ಆಶ್ರಯಿಸ ಬೇಕಾದ್ದು ಅನಿವಾರ್ಯ ಮತ್ತು ಅದರಿಂದ ಕನ್ನಡಮ್ಮ ಮತ್ತು ತುಳು ಅಪ್ಪೆಯ ಸೇವೆ ಏಕ ಕಾಲಕ್ಕೆ ಆಗುತ್ತದೆ ,ತುಳು ಪಾಡ್ದನ ಮತ್ತು ಹಾಡುಗಳ ಸವಿಯನ್ನು ಎಲ್ಲರಿಗೂ ಉಣ ಬಡಿಸಲು ಸಾಧ್ಯವಾಗುತ್ತದೆ ಎಂಬ ಆಶಯ ನನ್ನದು .ಆದ್ದರಿಂದ ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ ಎಂಬ ಈ ಕೃತಿಯನ್ನು ಕನ್ನಡದಲ್ಲಿ ನಿಮ್ಮ ಮುಂದೆ ಇರಿಸಿದ್ದೇವೆ ನೀವು ಓದಿ ಪ್ರೋತ್ಸಾಹಿಸುವಿರಿ ಎಂಬ ನಿರೀಕ್ಷೆ ನಮ್ಮದು 


ಈ ಪಾಡ್ದನಗಳನ್ನು ,ಕವಿತೆಗಳನ್ನೂ ಪ್ರೀತಿಯಿಂದ ಹಾಡಿ ರೆಕಾರ್ಡ್ ಮಾಡಿ ಮುದ್ರಿಸಿ ತುಳು ಜಾನಪದದ ಸೊಬಗನ್ನು ಎಲ್ಲೆಡೆಗೆ ಹರಡಲು ಅವಕಾಶ ಮಾಡಿ ಕೊಟ್ಟ ಶ್ರೀಮತಿ ಶಾರದಾ ಜಿ ಬಂಗೇರರಿಗೆ ನಾನು ಋಣಿಯಾಗಿದ್ದೇನೆ 


ಈ ಕೃತಿಯನ್ನು ಪ್ರಕಟಿಸುತ್ತಿರುವ ಪ್ರಚೇತ ಬುಕ್ ಹೌಸ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು 


 


ಡಾ||ಲಕ್ಷ್ಮೀ ಜಿ ಪ್ರಸಾದ ,ಕನ್ನಡ ಉಪನ್ಯಾಸಕರು 


ಸರ್ಕಾರಿ ಪದವಿ ಪೂರ್ವ ಕಾಲೇಜು ,ಬೆಳ್ಳಾರೆ ,ಸುಳ್ಯ ತಾ,ದ ಕ ಜಿಲ್ಲೆ  


ಮೊ:  94480516684




















ಪರಿವಿಡಿ 


 ಶ್ರೀಮತಿ ಶಾರದಾ ಜಿ. ಬಂಗೇರರ ಪಾಡ್ದನUಳು  


 1.ಚಾಮುಂಡಿ ಪಾಡ್ದ£ 


2.ಚಂದಬಾರಿ ರಾಧೆ ಗೋಪಾಲ


 3. ಮಧುರಗೆ ಮದುಮಗಳು


4. ಜಾಯಿಲ ಬಂಗೇತಿ


5. ಕರಿಯ ಕನ್ಯಾ ಮದನು


 6 ನಾಗಸಿರಿ ಕನ್ಯಗೆ


7 . ಅಬ್ಬಿನ ಬಂಗಾರು


8. ಬಾಲೆ ರಂಗಮೆ


9 ಬಾಲೆ ಪದ್ಮಕ್ಕೆ


10 ಬಾಲೆ ಜೇವು ಮಾಣಿಗ


ಶ್ರೀಮತಿ ಶಾರದಾ ಜಿ. ಬಂಗೇರರÀ ಕವಿತೆಗಳು 




1 ಪುಕ್ಕೇದಿ


2 ರಾಮಚಂದಿರ ಮರಲ ನಿಮ್ರ್ಯಾರೇ


2 ಬಂಗರಾಳ್ವಾಗ


4ರಾದು


5 ಕಲ್ಜಿಗದ ಕಥೆಪಣ್ಣೆ ನಲಿಪು ತೂಕ ಮಾದಿರ


6 ಓ ಬೇಲೆ ಸೋಬಾನೆ ಪಂಡೋಂದು ಬಲ್ಲೆಯ


7 ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


 8 ಬಾರುಂಡು ಬಳ್ಳುಂಡು ಬಂಗಾಡಿಡೇ


9 ಪಕ್ಕಿಗುಲೋ ಪಕ್ಕಿಗುಲು ರಾಮಸ್ವಾಮಿ ಪಕ್ಕಿಗುಲು


10 ಬತ್ತುಂಡು ಮರ ಆಯಾಲೇ


11 ಪುದಾ ಪುದಾ ಓ ಪುದಾ ದೇವರೆ ಜಾಲ ಪುದಾ


12ಕೋಡೆಂಕ್ಳು ಬೈದಾಯೇ ಓ ಉಳ್ಳಾರೇ


13 ಬಲ್ಲೇರಿ ದಾದ ಬಲ್ಲೆದ ಮೇಲ್‍ದಾದ


14 ಆಜಪ್ಪ ಮೂಜಿ ಮೂಡೇ


15 ಒಂಜಿ ಕುತ್ತಿ ಕಳಿಮಾರ್ಯಾಳೇ ಬೈದ್ಯೆದಿ


16 ಬಲ್ಲೇಯೇ ಸ್ವಾಮಿ ಬಲ್ಲೇಯೇ


17ಮಿತ್ತಂಗಡಿ ಪೇಂಟೆ ತಿರ್ತಂಗಡಿ ಪೇಂಟೆ


18 ಆಯರೆ ಗುಡ್ಡೆ ತಪ್ಪುದ ಕಟ್ಟ


19 ಜತ್ತಾನಂಗಡಿ ದೇಲಾಗೊಡು


20 ಸಾರಬೀಬಿ ಸೀಮೆ ನೋಡಿ


21 ಸಣ್ಣಲ್ಲ ಕಾಡುಡು ಬಣ್ಣಲ್ಲ ಬಲಿಕೆಡು


23 ಆಮಯೇಲೆ ಏಲೆ ಬರಡು


22 ವೇಣೂರು ಪದವುಡೇ ಓ ಚಂದಕ್ಕ


23 ಆಯರೆ ಗುಡ್ಡೆ ತಪ್ಪುದ ಕಟ್ಟ


24ಸಣ್ಣ ತರೆತ್ತಾಳು ಲಿಂಬೆ ಮಿರೆತ್ತಾಳು


   ಟಿಪ್ಪಣಿಗಳು


   ಆಕರ ಗ್ರಂಥ ಸೂಚಿ










  ಶ್ರೀಮತಿ ಶಾರದಾ ಜಿ. ಬಂಗೇರರ ಪಾಡ್ದನUಳು 




1.ಚಾಮುಂಡಿ ಪಾಡ್ದನ


 




ಡೆನ್ನಾನಾ ಡೆನ್ನಾನಾ ಡೆನ್ನಾಡೆನ್ನಾನಾ


ಓಯೇ ಡೆನ್ನಾನ ಡೆನ್ನಾನ ಡೆನ್ನಾಡೆನ್ನಾನಾ


ಎಡ ಭಾಗದಲ್ಲಿದೆ ಎಡಮಲೆ


ಬಲ ಭಾಗದಲ್ಲಿದೆ ಬಲಮಲೆ


ಎಡ ಭಾಗದಲ್ಲಿದೆ ಎಡಮಲೆ


ಬಲ ಭಾಗದಲ್ಲಿದೆ ಬಲಮಲೆ


ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ


ಓ ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ


ಭೀಮುರಾಯರ ಮಣ್ಣಿನಲ್ಲಿ


ಬೆಳಗಿನ ಜಾವದಲ್ಲಿ ಎದ್ದರು


ಭೀಮುರಾಯರು ಭಟ್ಟರು ಒಡೆಯರು


ಕೈಕಾಲು ಮುಖ ತೊಳೆದು


ಭೀಮುರಾಯರು ಭಟ್ಟರು ಒಡೆಯರು


ಮಡಿತುಂಬು ಇಡುವ ಕೋಣೆಗೆ ಹೋದರು


ಭೀಮಗರಾಯರು ಭಟ್ಟರು ಒಡೆಯರು


ತುಂಡು ತೆಗೆದು ಸೊಂಟಕ್ಕೆ ಮಡಿಬಟ್ಟೆ


ಸುತ್ತಿಕೊಂಡರು ಭೀಮುರಾಯರು ಭಟ್ಟರು


ಸಂಪಿಗೆ ಸುರಗೆ ತೋಟದಲ್ಲಿ


ಭೀಮುರಾಯರ ಮಣ್ಣಿನಲ್ಲಿ


ಮುತ್ತು ತಾವರೆಯ ಕೆರೆಯಲ್ಲಿ


ಕೈಕಾಲು ಮುಖ ತೊಳೆದುಕೊಂಡು ಹೋಗುವರು


ಅವರು ಭೀಮುರಾಯರ ಭಟ್ಟರು ಒಡೆಯರು


ಬಿಳಿಯ ತಾವರೆಯ ಹೂವಾಗಿ


ನಲಿದುಕೊಂಡು ನಗಾಡಿಕೊಂಡು ಬರುವುದಲ್ಲಿ


ಬಿಳಿಯ ತಾವರೆಯ ಹೂವೊಂದು


ಆ ಹೊತ್ತಿಗೆ ಸೆರಗು ಒಡ್ಡಿದರು


ಆ ಹೊತ್ತಿಗೆ ಸೆರಗು ಒಡ್ಡಿದರು


ಅವರು ಭೀಮುರಾಯರು ಭಟ್ಟರು ಒಡೆಯರು


ನಲಿಯುತ್ತಾ ನಗುತ್ತಾ ಬರುವುದು


ಬಿಳಿಯ ತಾವರೆಯ ಹೂವೊಂದು


ಉಟ್ಟಮಡಿ ವಸ್ತ್ರ ಅಂಗವಸ್ತ್ರವನ್ನು ಒಡ್ಡಿದಾಗ


ಬಂದು ಬೀಳುವುದು ಬಿಳಿಯ ತಾವರೆಯ ಹೂವು


ಆರು ಎಸಳಿನಲ್ಲಿ ಮೂರು ಕುಸುಮದಲ್ಲಿ


ಬೆಳೆದು ಅರಳುವುದು ನೋಡಿದಾಗ


ಬಾರಿ ದೊಡ್ಡ ಸೋಜಿಗವೇ ಕಾಣಿಸುತ್ತದೆ


ಭೀಮುರಾಯರು ಬಂದರಂತೆ


ಹಿಡಿದುಕೊಂಡು ಅಂಗವಸ್ತ್ರವನ್ನು ಕೊಡುವರು


ಚಾವಡಿ ನಡುಮನೆಗೆ ಬಂದು


ದೇವರ ಗುಂಡದ ಹೊಸಿಲಿನಲ್ಲಿ


ಇಡುವಾಗ ಕಾಣಿಸುತ್ತದೆ


ಪೂರ್ವದಲ್ಲಿ ಸೂರ್ಯ


ಹುಟ್ಟಿದಂತೇ ಕಾಣುತ್ತದೆ


ಬಿಳಿಯ ತಾವರೆಯ ಹೂವಾಗಿ


ಒಳಗಿನ ಸುತ್ತಿಗೆ ಹೋಗುವರು


ಭೀಮುರಾಯರು ಭಟ್ಟರು ಒಡೆಯರು


ದೇವರ ತಲೆಯಲ್ಲಿ ಇರಿಸುವರು


ಭೀಮುರಾಯರು ಭಟ್ಟರು ಒಡೆಯರು


ಅಡ್ಡ ಜಾರಿ ಬೀಳುತ್ತದೆ.


ಬಿಳಿಯ ತಾವೆಯ ಹೂವು ಅದು


ಆರು ಎಸಲು ಮೂರು ಕುಸುಮ ಬೀಳುವಾಗ


ನಡುವಿನಲ್ಲಿ ಮಗು ಆಳುವ ಶಬ್ದ ಕೇಳುವುದು


ಆ ಕಡೆ ಈ ಕಡೆ ನೋಡುವರು ಭೀಮುರಾಯರು ಭಟ್ಟರು


ಗಿಂಡಿಯ ನೀರು ತಳಿಯುವಾಗ


ಒಂದು ಬಿಳಿಯ ತಾವರೆಯ ಹೂವಿನಲ್ಲಿ


ಒಂದು ಮಗು ಉಂಟಾಯಿುತ


ಕುಟುಂಬ ಸಂಸಾರ ಇಲ್ಲದ


ಮನೆಯಲ್ಲಿ ಮಗು ಆಳುವ ಧ್ವನಿ ಕೇಳುತ್ತದೆ


ಎಂದರು ಭೀಮುರಾಯರು ಭಟ್ಟರು ಒಡೆಯರು


ಏನು ಹೆಸರು ಇಡುವುದು ಎಂದು ಕೇಳುವಾಗ


ಹೇಳಿದರು ಅವರು ಆರು ಎಸಳು ಮೂರು ಕುಸುಮದಲ್ಲಿ


ಉದ್ಭವವಾದ ದೇವಿ ಅವರೇ


ಚಾಮುಂಡಿ ಎಂದು ಹೆಸರು ಇಟ್ಟರು.


*****










2.ಚಂದಬಾರಿ ರಾಧೆ ಗೋಪಾಲ


ಡೆನ್ನಾನ್ನಾ ಡೆನ್ನಾನ್ನಾ ಡೆನ್ನ ಡೆನ್ನ ಡೆನ್ನಾನ


ಓಯೋಯೇ ಗೋಪಾಲ ಗೋಪಾಲ ಡೆನ್ನಾನಾ


ಕುಟುಂಬ ಸಂಸಾರ ಇಲ್ಲವೆ ಗೋಪಾಲ


ಬಂಧು ಬಳಗವು ನನಗಿಲ್ಲವೆ ಗೋಪಾಲ


ಒಬ್ಬ ತಾಯಿಗೆ ಒಬ್ಬಳೆ ಮಗಳೆ ಗೋಪಾಲ


ಎಂದು ಇನ್ನು ಬೇಗ ಕೇಳಿದಳು ರಾಧೆ ಅವಳು


ಯಾರಮ್ಮ ರಾಧೆಯೇ ರಾಧೆ ಕೇಳಿದೆಯಾ


ನಿನ್ನ ಅಕ್ಕ ಎಂದರೆ ಇದ್ದಾಳೆ ರಾಧೆ


ಮೇಲಿನ ಮಿರಿ ಲೋಕದಲ್ಲಿ ಶ್ರೀಕೃಷ್ಣದೇವರನ್ನು


ಗಂಡನಾಗಿ ಪಡೆದಿದ್ದಾಳೆ ಎಂದು ಹೇಳಿದರು ಗೋಪಾಲ


ಯಾರಯ್ಯ ಗೋಪಾಲ ಗೋಪಾಲ ಕೇಳಿದಿರಾ


ನನ್ನ ಅಕ್ಕನನ್ನು ನೋಡಲು ಹೋಗಬೇಕು ಗೋಪಾಲ


ನನಗಾದರೂ ನೋಡಬೇಕು ನನ್ನ ಅಕ್ಕನ ಹತ್ತಿರ ಮಾತಾಡಬೇಕೆಂದು


ಹೇಳುವಳು ಇನ್ನು ಬೇಗ ರಾಧೆ ಅವಳು


ಡೆನ್ನಾನ್ನಾ ಡೆನ್ನಾನ್ನಾ ಡೆನ್ನ ಡೆನ್ನ ಡೆನ್ನಾನ


ಓಯೋಯೇ ಗೋಪಾಲ ಗೋಪಾಲ ಡೆನ್ನಾನಾ


ಏಳುರಾಧೆ ಕುಳಿತುಕೋ ರಾಧೆ


ನೀನಾದರೂ ಹೋಗಬೇಡ ರಾಧೆಯೇ ಕೇಳಿದೆಯಾ


ನಿನ್ನ ಅಕ್ಕನ ಗಂಡ ಇದ್ದಾರೆ


ಮೇಲಿನ ಮಿರಿ ಬಾರಿ ಲೋಕದಲ್ಲಿ ಶ್ರೀಕೃಷ್ಣ ದೇವರೆಮದು


ಹೇಳಿದರು ಗೋಪಾಲ ಇನ್ನು ಬೇಗ ಹೇಳಿದರು


ಅವನಾದರೂ ಇದ್ದಾನಂತೆ ರಾಧೆಯ ಕೇಳಿದೆಯಾ


ಅಂಗಡಿ ಅಂಗಡಿ ಹೋಗುತ್ತಾನಂತೆ ಹಣ್ಣಿನ ಸಿಪ್ಪೆ


ಹೆಕ್ಕಿಕೊಂಡು ಹಣ್ಣಿನ ಗೊನೆ ಕದ್ದು


ಪೆಟ್ಟುಕೊಂಡ ತಿನ್ನುತ್ತಾನೆಂದು ಹೇಳುತ್ತಾರೆ


ಹೋಗಬೇಡ ರಾಧೆಯೆ ಹೋಗಬೇಡ ರಾಧೆಯೆ


ಬೆಳಿಗ್ಗೆ ನೋಡಿದ್ದನ್ನು ರಾತ್ರಿಗೆ ಬಿಡನಂತೆ ರಾಧೆ


ಹೆಣ್ಣಿನ ಹುಚ್ಚನಂತೆ ಕೋಳಿ ಅಂಕದ ಗೀಳಿನವನಂತೆ


ಕಳ್ಳರ ಕಳ್ಳ ಕೃಷ್ಣ ಎಂದು ಹೇಳಿದರು ಗೋಪಾಲ


ಯಾರಯ್ಯ ಗೋಪಾಲ ನನ್ನ ಅಕ್ಕನನ್ನು ನೋಡಲು


ನೋಡಲು ಹೋಗಬೇಕು ಹೋಗಬೇಕು


ನಾನಾದರೂ ಹೋಗದೆ ಬಿಡಲಾರೆ ಎಂದಳು


ಕಣ್ಣುಗಳು ನನ್ನವು ಕುಣಿದುಕೊಂಡು


ಗೋಪಾಲ ಹೋಗೆಂದು ತಟ್ಟುತ್ತಿವೆ


ಅಕ್ಕನನ್ನು ನೋಡದೆಯೇ ಬಿಡಲಾರೆ ಎಂದಳು


ಕಣ್ಣಿನ ನಿದ್ರಗೆ ಮಲಗುವುದಿಲ್ಲ ರಾಧೆ ಅವಳು


ಮೈ ಕೊಳೆಗೆ ಸ್ನಾನ ಮಾಡುವುದಿಲ್ಲ ರಾಧೆ ಅವಳು


ಹೊಟ್ಟೆಯ ಹಸಿವೆಗೆ ಊಟ ಮಾಡುವುದಿಲ್ಲ ಅವಳು


ಯಾರಮ್ಮ ರಾಧೆಯೆ ರಾಧೆಯೆ ಕೇಳಿದೆಯಾ


ಹೋಗುವುದಾದರೆ ಹೋಗಬಹುದು ಜಾಗ್ರತೆಯಿಂದ


ಹೋಗಿ ಬರಬೇಕು ಎಂದು ಹೇಳಿದರು ಗೋಪಾಲ


ಇನ್ನು ಬೇಗ ಹೇಳಿದರು ಗೋಪಾಲ


ಆಗಬಹುದು ಗೋಪಾಲ ಗೋಪಾಲ ಹೇಳಿದಳು ರಾಧೆ


ದಡಕ್ಕನೆ ಎದ್ದಳು ದಿಡಕ್ಕನೆ ಕುಳಿತು


ತಲೆಯನ್ನು ಪೂಸಿ ಕಟ್ಟಿದಳು ರಾಧೆ ಅವಳು


ಒಳಗಿನ ಕೋಣೆಗೆ ಓಡೋಡಿಕೊಂಡು


ಹೋಗುವಳು ರಾಧೆ ಬಿಸಿನೀರು


ಕಾಯಿಸಿದಳು ರಾಧೆ ಅಡಿಗೆ ಮಾಡಿ


ಬಿಸಿ ನೀರು ಕಾಯಿಸಿ ಇಟ್ಟಳು


ಎಣ್ಣೆ ಹಾಕಿ ಪೂಸಿದಳು


ಬಿಸಿ ನೀರು ತಣ್ಣೀರು ಕೂಡಿಸಿ ಜಳಕ ಮಾಡಿದಳು ರಾಧೆ


ಶುದ್ಧ ಮುದ್ರಿಕೆ ಮಾಡಿದಳು ರಾಧೆ


ಸೀರೆಗಳಲ್ಲಿ ಒಳ್ಳೆಯ ಸೀರೆ ರೇಷ್ಮೆ ಸೀರೆ ಉಟ್ಟು


ಪೀತಾಂಬರದ ರವಿಕೆ ಹಾಕಿದಳು ರಾಧೆ


ಬೆಳ್ಳಿಯಲ್ಲಿ ಬೆಳ್ಳನೆ ಆದಳು ರಾಧೆ


ಬೆಳ್ಳಿಯಲ್ಲಿ ಬೆಳ್ಳಿ ಬಂಗಾರದಲ್ಲಿ ಸಿಂಗಾರ


ಮಾಡಿಕೊಂಡು ಒಳಗಿನಿಂದ ಬರುವಾಗ ಗೋಪಾಲ


ದಂಡಿಗೆಯ ಬೋಯಿಗಳನ್ನು ಕರೆಸಿದರು ಗೋಪಾಲ


ದಂಡಿಗೆಯನ್ನು ಕೆಳಗೆ ಇಳಿಸಿದರು ಗೋಪಾಲ


ದಂಡಿಗೆಯನ್ನು ಸಿಂಗಾರ ಇನ್ನು ಬೇಗ ಮಾಡುತ್ತಾರೆ ಗೋಪಾಲ


ಯಾರಮ್ಮ ರಾಧೆಯೆ ಕೇಳಿದೆಯ ರಾಧೆಯೆ


ಬೆಳಿಗ್ಗೆಹೋದ ದಂಡಿಗೆ ಸಂಜೆಗೆ ಬರಬೇಕು ಎಂದು


ಸಂಜೆ ಹೋದ ದಂಡಿಗೆ ಬೆಳಿಗ್ಗೆ ಬರಬೇಕು


ಎಂದು ಕಟ್ಟು ನಿಟ್ಟಿನ ಆಜ್ಞೆ ಮಾಡಿದರು ಗೋಪಾಲ


ಕೆಳಗಿನ ಸಿರಿ ಬಾರಿ ಲೋಕಕ್ಕೆ ಇಳಿದುಕೊಂಡು


ಮೇಲಿನ ಮಿರಿ ಬಾರಿ ಲೋಕದಿಂದ ಹೋಗುತ್ತದೆ


ರಾಧೆಯ ದಂಡಿಗೆಯನ್ನು ಹೊತ್ತುಕೊಂಡು ಹೋಗುವರು


ದಂಡಿಗೆಯ ಬೋಯಿಗಳು ಹೋಗುವಾಗ ಕೇಳಬೇಕು


ಕಂಬಳದ ಕಟ್ಟಹುಣಿಯಲ್ಲಿ ಹೋಗುವಾಗ ನೋಡುವರು


ದೇವರು ಶ್ರೀಕೃಷ್ಣ ದೇವರು


ಯಾರಮ್ಮ ಚಂದಬಾರಿ ಚಂದಬಾರಿ ಕೇಳಿದೆಯ


ಕಂಬಳದ ಕಟ್ಟಹುಣಿಯ ಪದ್ಮ ಕಟ್ಟೆಯನ್ನು


ನೋಡೆಂದು ಶ್ರೀಕೃಷ್ಣ ದೇವರು ಹೇಳಿದರು


ಓಡೋಡಿಕೊಂಡು ಬರುವಳು ಚಂದಬಾರಿ


ಯಾರಯ್ಯ ದೇವರೆ ಶ್ರೀಕೃಷ್ಣ ದೇವರೆ


ನನ್ನ ತಂಗಿಕೆಳಗಿನ ಸಿರಿಬಾರಿ ಲೋಕದಲ್ಲಿ


ಇದ್ದಾಳೆ ಅಲ್ಲಾದರೂ ಗೋಪಾಲ ಇದ್ದಾರೆ ರಾಧೆ ಎಂದು


ನನ್ನ ತಂಗಿ ಬರುವ ದಂಡಿಗೆಂದು ಹೇಳಿದಳು


ಚಂದಬಾರಿ ಇನ್ನು ಬೇಗ ಹೇಳಿದಳು


ಡೆನ್ನಾನ್ನಾ ಡೆನ್ನಾನ್ನಾ ಡೆನ್ನ ಡೆನ್ನ ಡೆನ್ನಾನ


ಓಯೋಯೇ ಗೋಪಾಲ ಗೋಪಾಲ ಡೆನ್ನಾನಾ


ಯಾರಯ್ಯ ದೇವರೆ ದೇವರೆ ಕೇಳಿರಿ


ನನ್ನ ಗಂಡ ನೀವಲ್ಲವೇ ದೇವರೆ


ರಾಧೆಯ ಅಕ್ಕನಾಗಿ ನಾನು ಚಂದಬಾರಿ ಇದ್ದೇನೆ


ನನ್ನ ತಂಗಿ ರಾಧೆ ದೇವರೆ


ಅವಳಾದರೂ ಬರಲಿ ಅವಳಿಗೆ ತಂಟೆ ಮಾಡಬೇಡಿ


ಅವಳನ್ನು ಮುತ್ತಿನ ಕೆರೆಗೆ ಕಳುಹಿಸಬೇಕು


ದಂಡಿಗೆಯ ಬೋಯಿಗಳಲ್ಲಿ ಕರೆದುಕೊಂಡು ಹೋಗಲು ಹೇಳಿದರು


ಚಂದಬಾರಿ


ಮುತ್ತಿನ ಕೆರೆಗೆ ಹೋಗುವಳವಳು ರಾಧೆ


ಕಾಲಿನ ಧೂಳು ತೊಳೆದಳು ರಾಧೆ


ಮುಖದ ಮುತ್ತಿನ ಬೆವರು ಒರಸಿ ಬರುವಾಗ ಕಾಣಿಸುತ್ತದೆ.


ಮುತ್ತಿನ ಕೆರೆಯಲ್ಲಿ ಬರುತ್ತದೆ ಒಂದು ತಾವರೆ ಹೂವು


ನಗಾಡಿಕೊಂಡು ಕುಣಿದುಕೊಂಡು ಬಂದು ರಾಧೆಯಮಡಲಿಗೆ


ಶ್ರೀಕೃಷ್ಣ ದೇವರು ಪ್ರತ್ಯಕ್ಷರಾದರು


ಯಾರಯ್ಯ ಕೃಷ್ಣ ಎಂದು ಹೇಳಿದರೆ ನೀನೆಯೆ


ಕಳ್ಳನಂತೆ ಕೃಷ್ಣ ಎಂದು ಕೇಳಿದ್ದೇನೆ ನಾನು


ಅಂಗಡಿ ಅಂಗಡಿ ಹೋಗುವ ಹಣ್ಣಿನ ಸಿಪ್ಪೆ ಹೆಕ್ಕುವ


ಹಣ್ಣಿನ ಗೊನೆಯ ತುದಿಯಲ್ಲಿ ಪೆಟ್ಟು ತಿನ್ನುವ


ಹಸುಗಳನ್ನು ಮೇಯಿಸಿಕೊಂಡು ಗುಡ್ಡದಲ್ಲಿ ಇರುವ


ಗೋವರ್ಧನ ಮಾಡಿಕೊಂಡು ಮಕ್ಕಳನ್ನು ಸೇರಿಸಿಕೊಂಡು


ಕುಟ್ಟಿದೊಣ್ಣೆ ಆಡಿಕೊಂಡು ಇರುವ ಕೃಷ್ಣ ಅಲ್ಲವೆ


ಕಳ್ಳರ ಕಳ್ಳ ನೀನಲ್ಲವೆ ಕೃಷ್ಣ ಎಂದು


 ಹೇಳಿದಳು ರಾಧೆ ಇನ್ನು ಬೇಗ ಹೇಳಿದಳು


ಅಷ್ಟು ಮಾತು ಕೇಳಿದರು ದೇವರು


ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಎದ್ದು


ಪದಿಮೂಜಿ(ಪದ್ಮ) ಕಟ್ಟೆಗೆ ಬಂದು ಕುಳಿತರು


ಯಾರಮ್ಮ ಚಂದಬಾರಿ ಚಂದಬಾರಿ ಕೇಳಿದೆಯ


ನಿನ್ನ ಮೋಹದ ತಂಗಿ ರಾಧೆ ಕೇಳಿದೆಯ


ಬಂದಳು ಬಂದಳು ರಾಧೆ ಕೇಳೆದೆಯ


ಯಾರಮ್ಮ ರಾಧೆಯ ರಾಧೆ ಕೇಳದೆಯ ಎಂದುಹೇಳಿ


ಕೈಯಲ್ಲಿ ಹಿಡಿದು ಇಳಿಸುತ್ತೇನೆಂದು


ಹೋಗುವಾಗ ಹೇಳುತ್ತಾಳವಳು


ಶ್ರೀಕೃಷ್ಣನ ಕಳ್ಳಕೃಷ್ಣ


ನನ್ನ ಕೈಯಲ್ಲಿ ಹಿಡಿಯಬೇಡ


ದೂರವೆ ನಿಂತುಕೋ ಎಂದು ಹೇಳಿದಳು ರಾಧೆ ಅವಳು


ಅಷ್ಟು ಹೊತ್ತಿಗೆ ಓಡೋಡಿಕೊಂಡು ಬರುತ್ತಾಳವಳು


ಒಳಗಿನ ಕೋಣೆಯಿಂದ ಅಕ್ಕ ಅವಳು ಚಂದಬಾರಿ


ಚಂದಬಾರಿ ಬಂದು ಯಾರಮ್ಮ ಮಗಳೆ ರಾಧೆಯೆ


ಕೈಯಲ್ಲಿ ಹಿಡಿದು ಚಾವಡಿ ನಡುವಿಗೆ ಬರುತ್ತಾಳೆ ಚಂದಬಾರಿ


ಯಾರಮ್ಮ  ಅಕ್ಕ ಅಕ್ಕಾ ಕೇಳಿದೆಯ


ನಿನ್ನ ಗಂಡ ಕಳ್ಳ ಕೃಷ್ಣ


ಎಲ್ಲಿಗೆ ಹೋಗಿದ್ದಾನೆ ಕೇಳಿದಳು ರಾಧೆ ಆಳು


ಯಾರಮ್ಮ ಮಗಳೆ ರಾಧೆ ರಾಧೆಯೆ ಕೇಳಿದೆಯ


ಜೀವನದಲ್ಲಿ (ರೂಪಿನಲ್ಲಿ) ಮನುಷ್ಯನಾದರೂ ರಾಧೆ ನನ್ನ ಗಂಡ


ದೇವರ ಅಂಶವೆಂದು ಚಂದ ಬಾರಿ ಹೇಳಿದಳು


ಬಾಯಾರಿಕೆ ಕಳೆದುಕೋ ಬೇಸರ ಕಳೆದುಕೊಳ್ಳು ಎಂದು


ಬಾಯಾರಿಗೆ ನೀರುಕೊಟ್ಟಳು ಚಂದಬಾರಿ


ಬಿಸಿನೀರು ಕಾಯಿಸಿದಳು ಚಂದಬಾರಿ


ಅಡುಗೆ ತಯಾರಿಸಿದಳು ಚಂದಬಾರಿ


ಬಿಸಿನೀರು ಸಿದ್ಧ ಮಾಡಿದಳು ಅಕ್ಕ


ಸ್ನಾನ ಮಾಡು ಮಗಳೆ ಎಂದು ಹೇಳಿದರು


ಊಟ ಸಮ್ಮಾನ ಮಾಡಿ ಹೋಗು ಮಗಳೆ ಎಂದರು


ಇಲ್ಲ ಅಕ್ಕ ನನ್ನ ಗಂಡ


ದೇವರು ಇದ್ದಾರೆ ನನ್ನ ಗಂಡ


ಗೋಪಾಲ ಹೇಳಿದ್ದಾರೆ ಎಂದು ಹೇಳಿದರು


ಬೆಳಿಗ್ಗೆ ಹೋದ ದಂಡಿಗೆ ಸಂಜೆಗೆ ಬರಬೇಕು


ಎಂದು ಕಟ್ಟಪ್ಪಣೆ ಮಾಡಿದ್ದಾರೆಂದು ರಾಧೆ ಹೇಳಿದಳು


ಯಾರಮ್ಮ ಅಕ್ಕಾ ಕೇಳಿದೆಯ


ಬಿಸಿ ನೀರು ಸ್ನಾನ ಎಲ್ಲ ಬೇಡ ಅಕ್ಕ


ಒಟ್ಟಿಗೆ ಅಕ್ಕ ಪಕ್ಕ ಕುಳಿತುಕೊಂಡು ಬಾಯಾರಿಕೆ ಬೇಸರ ಕಳೆದು


ಎರಡೆರಡು ಮಾತು ಮಾತನಾಡಿ ನಾನಾದರೂ ಹೋಗುವೆ


ಅಕ್ಕಾ ನಾಳೆಲ್ಲ ನಾಡಿದ್ದು ನೀನಾದರೂ


ಬಾ ಎಂದುಹೇಳಿದಳು ರಾಧೆ ಅವಳು


ಇವತ್ತಲ್ಲ ನಾಡಿದ್ದು ಬರುವ ಶುಕ್ರವಾರ


ನಾನಾದರೂ ಬರುವೆ ಎಂದು ಚಂದಬಾರಿ


ಇನ್ನು ಬೇಗ ತಂಗಿಗೆ ಮಾತು ಕೊಡುತ್ತಾರೆ


ಊಟ ಸಮ್ಮಾನ ಮಾಡಿದರು ರಾಧೆ ಮತ್ತು ಚಂದಬಾರಿ


ಅಕ್ಕ ಪಕ್ಕ ಕುಳಿತು ಮಾತನಾಡುವರು


ನಾವಾದರೋ ಕುಟುಂಬ ಸಂಸಾರ ಇಲ್ಲದ ಹೆಣ್ಣು ಮಕ್ಕಳು ಎಂದು


ಭಾರೀ ಬೇಸರ ಮಾಡುವ ಮಾತು ಆಡಿದಾಗ


ನಿನ್ನ ಮೈದುನ ಇದ್ದಾರೆ ಅಕ್ಕ ಕೇಳಿದೆಯಾ


ಗೋಪಾಲ ನನ್ನನ್ನು ಬೇಗ ಕಳುಹಿಸಿದರು


ಬೆಳಗ್ಗಿನಿಂದ ಸಂಜೆಗೆ ತಲುಪಬೇಕೆಂದು ಹೇಳಿದ್ದಾರೆ


ನೀನಾದರು ಬಾ ಅಕ್ಕ ನಾನೀಗ ಬರವೆನೆಂದು


ಭಾರೀ ಬೇಗ ಹೊರಡುವಳು ರಾಧೆ ಅವಳು


ಮೇಲಿನ ಮಿರಿ ಬಾರಿ ಲೋಕಕ್ಕೆ ಬರುವಾಗ


ಗೋಪಾಲ ಪದುಮೂಜಿ ಕಟ್ಟೆಯಲ್ಲಿ ಕುಳಿತು


ಕಾದುಕೊಂಡು ಇದ್ದಾರೆ ಗೋಪಾಲ ಅವರು


ಯಾರಮ್ಮ ರಾಧೆ ರಾಧೆಯೆ ಕೇಳಿದೆಯ


ಸಮಯಕ್ಕೆ ಸರಿಯಾಗಿ ಹೋಗಿ ಬಂದೆಯಲ್ಲ


ಎಂದು ಹೇಳಿದರು ಗೋಪಾಲ


ಯಾರಯ್ಯ ಮದುಮಗ ಮದುಮಗ ಕೇಳಿದಿರ


ನನ್ನ ಅಕ್ಕ ಇದ್ದಾಳೆ ಭಾರೀ ಸಮ್ಮಾನ


ಮಾಡಿ ಕೊಟ್ಟು ಕಳುಹಿಸಿದಳು


ಮದುಮಗ ಹೇಳಿದಳು ರಾಧೆ ಅವಳು


ಅಷ್ಟು ಮಾತು ಹೇಳಿದಳು ರಾಧೆ ಅವಳು


ಇಂದಲ್ಲ ನಾಡಿದ್ದು ನನ್ನ ಅಕ್ಕ ಬರುವಳಂತೆ


ಅಕ್ಕ ರಾತ್ರಿಗೆ ಬಂದು ಬೆಳಿಗ್ಗೆ ಹೋಗುತ್ತೇನೆಂದು ಹೇಳಿದ್ದಾಳೆ


ಮದುಮಗ ನನ್ನ ಅಕ್ಕ ಚಂದಬಾರಿ ಬರುತ್ತಾಳೆಂದು


ರಾಧೆ ಇನ್ನು ಬೇಗ ಸಮ್ಮಾನಕ್ಕೆ ಸಿದ್ಧತೆ ಮಾಡುತ್ತಾಳೆ.


ಯಾರಯ್ಯ ಮದುಮಗ ನನ್ನ ಅಕ್ಕ


ಚಂದಬಾರಿ ಇದು ಬರುವಳೇ ನಾಳೆ ಬರುವಳೇ ನಾಳೆ ಎಂದು ತಿಳಿಯದು


ಗಂಡನ ಹತ್ತಿರ ಒಂದು ಮಾತು ತೆಗೆದುಕೊಂಡು ಬರುವೆಯೆಂದು


ನಾಳೆಯಾದರೂ ಇನ್ನು ಬೇಗ ಬರುವೇಯೆಂದು ಹೇಳಿದ್ದಾಳೆ.


ಆ ದಿನ ಕಳೆಯಿತು ಇನ್ನೊಂದು ದಿನದಲ್ಲಿ


ಬೆಳಗ್ಗಿನ ಜಾವದಲ್ಲಿ ಎದ್ದಳು ರಾಧೆ ಅವಳು


ಊಟ ತಿಂಡಿ ತಯಾರುಮಾಡಿದಳು ರಾಧೆ ಅವಳು


ತೆಂಗಿನಕಾಯಿ ಸೇರಿಸಿ ಸಾವಿರ ಬಗೆ ವ್ಯಂಜನಗಳು


ಮೆಣಸು ಸೇರಿಸಿ ಮುನ್ನೂರು ವಿಧ ವ್ಯಂಜನಗಳು


ತಯಾರು ಮಾಡಿ ನನ್ನ ಅಕ್ಕ ಬರುವಳು ಮದುಮಗ


ಎಂದು ಇನ್ನು ಬೇಗ ಎಂದಳು ರಾಧೆ


ದಿನದ ಹೊತ್ತು ಮುಳುಗಿಕೊಂಡು ಬರವಾಗ


ಕಂಬಳದ ಕಟ್ಟಹುಣೆಯಲ್ಲಿ ನೋಡುವಾಗ ಕಾಣಿಸುತ್ತದೆ ರಾಧೆಗೆ


ನನ್ನ ಅಕ್ಕ ಬರುವ ದಾವಿಯನ್ನೇ


ಕಾದುಕೊಂಡು ಇರುವ ಹೊತ್ತಿನಲ್ಲಿ ಕೇಳಬೇಕೆ.....


ಸಾವಿರ ಸಾವಿರದೊಂದು ದನಕರುಗಳನ್ನು ಗೋವಳರನ್ನು ಸೇರಿಕೊಂಡು


ನಾನೊಂದು ಹೆಣ್ಣಿನ ವೇಷವನ್ನು ಹಾಕುವೆ ಮಕ್ಕಳ


ಚಂದ ಬಾರಿಯ ಒಂದು ಸೀರೆಯನ್ನುತೆಗೆದುಕೊಂಡು


ಉಟ್ಟುಕೊಂಡು ಅಲಂಕಾರ ಮಾಡಿಕೊಂಡು ಹೊರಡುವರು ಶ್ರೀಕೃಷ್ಣ


ಚಂದಬಾರಿಯಂತೆ ಕಾಣುತ್ತಿದೆಯೆ ಮಕ್ಕಳೆ ಕೇಳಿದರು


ಯಾರಯ್ಯ ದೇವರೆ ಚಂದಬಾರಿಯತೆ ಕಾಣಿಸುತ್ತದೆ


ಮೂಗಿಗೆ ಮೂಗುಬೊಟ್ಟು ಹಾಕದೆ


ಕೃಷ್ಣನ ಹಾಗೆ ಕಾಣಿಸುತ್ತದೆ ಎಂದರು ಗೋವಳರು


ಮೂಗಿಗೆ ಮೊಗುಬೊಟ್ಟು ಹಣೆಗೆ ಕುಂಕುಮದ ಬೊಟ್ಟು


ಇಟ್ಟು ಚಂದಬಾರಿಯರೂಪವನ್ನೇ ಧರಿಸಿದರು ದೇವರು


ಶ್ರೀಕೃಷ್ಣನು ದೇವರು


ದಂಡಿಗೆ ಬೋಯಿಗಳನ್ನು ಕರೆದು ದಂಡಿಗೆಯಲ್ಲಿ ಕುಳಿತು


ಕೆಳಗಿನ ಸಿರಿಬಾರಿ ಲೋಕಕ್ಕೆ ಬರುವಾಗ ಅಲ್ಲಿ


ಅಂಗಳದಲ್ಲಿ ಓಡೋಡಿಕೊಂಡು ಬರುವಳುರಾಧೆ


ಯಾರಮ್ಮ ಅಕ್ಕ ಅಕ್ಕ ಕೇಳಿದೆಯ


ಸಮಯಕ್ಕೆ ಸರಿಯಾಗಿ ಹೊರಟುಬಂದೆಯಲ್ಲ


ಇವತ್ತು ಕುಳಿತುಕೊಂಡು ನಾಳೆ ಹೋಗುವುದು ತಾನೆ


ಎಂದು ರಾಧೆಯು ಇನ್ನು ಬೇಗ ಕೇಳಿದಳು


ಅವರು ಕೃಷ್ಣ ಇಲ್ಲವೆ ಭಾವ ಇಲ್ಲವೆ


ಎಂದುಕೇಳಿದಳು ರಾಧೆ ಇನ್ನು ಬೇಗ ಕೇಳಿದಳು


ಅವರು ಇಲ್ಲ ತಂಗಿ ಕೇಳಿದೆಯ


ಇನ್ನು ಬೇಗ ಹೇಳಿದರು ಚಂದಬಾರಿ ರೂಪದ ಕೃಷ್ಣ


ಅವನು ಕಳ್ಳನಂತೆ ಕೃಷ್ಣನು ಕಳ್ಳನಂತೆ ಅಲ್ಲವೆ


ಹೆಣ್ಣಿನ ಹುಚ್ಚನಂತೆ ಕೋಳಿ ಅಂಕದ ಗೀಳಿನವನಂತೆ


ಬೆಳಿಗ್ಗೆ ನೋಡಿದ್ದನ್ನು ರಾತ್ರಿಗೆ ಬಿಡನಂತೆ


ಅವನು ಇಲ್ಲದಿದ್ದರೆ ತೊಂದರೆ ಇಲ್ಲ ಎಂದಳು


ಬಂದ ಹಾಗೆ ಬೈದಳು ರಾಧೆ ಅವಳು


ಯಾಕೆ ಬೈಯುತ್ತಿ ಮಗಳೆ ತಂಗಿ


ಕೇಳಿದರು ಚಂದಬಾರಿ ರೂಪದ ಕೃಷ್ಣ


ಅವನ ಸಂಗತಿ ಗೊತ್ತಿದ ನನಗೆ


ಅವನ ಸುದ್ದಿಯನ್ನು ನನ್ನಲ್ಲಿ ಹೇಳಬೇಡ ಹೇಳಿದಳು ರಾಧೆ


ಯಾರು ಮಗಳೆ ರಾಧೆ ರಾಧೆ ಕೇಳಿದೆಯ


ನನ್ನ ಗಂಡ ಕೃಷ್ಣನು ದೇವರು


ನೋಡಲು ಮಾನವರಂತೆ ಇದ್ದರೂ ರಾಧೆ


ಉದ್ಭವಿಸಿದ ದೇವರೆಂದು ಹೇಳಬೇಕೆಂದು ಹೇಳಿದರು


ಯಾರಮ್ಮ ಅಕ್ಕಾ ಅಕ್ಕ ಕೇಳಿದೆಯ


ಅವನ ಕಳ್ಳನ ಸುದ್ದಿ ನಮಗೆ ಬೇಡ


ಬಾ ಅಕ್ಕ ಕುಳಿತುಕೋ ಎಂದು


ತೂಗುವ ಉಯ್ಯಾಲೆಯಲ್ಲಿಕುಳಿತುಕೊಳ್ಳಿಸುವಳು


ಬಾಯಾರಿಕೆ ಕಳೆದುಕೋ ಬೇಸರ ಕಳೆದುಕೋ ಎಂದು


ಕೈಯಲ್ಲಿ ಹಿಡಿದು ಕರೆದುಕೊಂಡು ಹೋಗುವಳು ರಾಧೆ


ತೂಗುವ ಉಯ್ಯಾಲೆಯಲ್ಲಿ ಕುಳಿತು ಹೇಳುವಳು ರಾಧೆ


ನಾವು ಅಕ್ಕ ಪಕ್ಕ ಒಂದಾಗಿ ಕುಳಿತು ತೂಗಿಕೊಂಡಿದ್ದರೆ


ರಾತ್ರಿ ಬೆಳಗಾದರೂ ಕಾಣದು ಬೆಳಗು


ಕತ್ತಲಾದರೂ ತಿಳಿಯದು ಎಂದು ಹೇಳಿದಳು ರಾಧೆ


ಏಳು ರಾತ್ರಿ ಏಳು ಹಗಲು ಕೂಡ ಹೀಗೇನೇ


ಇರಬಹುದೆಂದು ಹೇಳುವಳು ರಾಧೆ ಅವಳು


ಇನ್ನು ಬೇಗ ಹೇಳುವಳುರಾಧೆ ಅವಳು


ಊಟ ಸಮ್ಮಾನ ಮಾಡಿದರು


ಬಿಸಿನೀರು  ತಣ್ಣೀರು ಕಾಯಿಸಿ ಸ್ನಾನ ಮಾಡು


ಅಕ್ಕ ಬೇರೆ ಸೀರೆಯನು ಉಡು


ಎಂದು ಹೇಳಿ ತಂದುಕೊಟ್ಟಳು ರಾಧೆ


ಇಲ್ಲ ಮಗ ನಾನು ಸ್ನಾನ ಮಾಡಿ ಬಂದದ್ದು


ನನ್ನಲ್ಲಿ ವಸ್ತ್ರ ಅಲಂಕಾರ ವಸ್ತುಗಳು ಇವೆ ರಾಧೆ


ನಾಳೆ ಸ್ನಾನ ಮಾಡಿ ಉಡಲು ಉಂಟು


ಎಂದು ಇನ್ನು ಬೇಗ ಹೇಳಿದರು ಚಂದಬಾರಿ ರೂಪದ ಕೃಷ್ಣ


ಅಷ್ಟು ಹೊತ್ತಿಗೆ ಊಟ ಸಮ್ಮಾನ ಆಯಿತು


ಕತ್ತಲೆ ಕವಿದುಕೊಂಡು ಬರುವಾಗ ಹೇಳುತ್ತಾಳೆ ರಾಧೆ


ಏಳು ಅಂತಸ್ತಿನ ಮಾಳಿಗೆಯ ಮೇಲೆ ಹೋಗುತ್ತಾರೆ


ಒಳಗಿನ ಕೋಣೆಯಲ್ಲಿ ಹಾಸಿಗೆ ಹಾಕಿ


ಮಲಗು ಅಕ್ಕ ನಾವಿಲ್ಲಿ ಮಲಗುವ ಎಂದು 


ಹೇಳಿ ಇನ್ನು ಬೇಗ ಮಲಗುವರು


ಯಾರಯ್ಯ ಅಕ್ಕಾ ನೀನಾದರೂ ಕೇಳಿದೆಯೆ


ನೀನೊಂದು ಕಥÉ ಹೇಳು ಅಕ್ಕ


ಒಂದು ಹಾಡನ್ನು ಹೇಳು ಎಂದು ಹೇಳಿದಳು ರಾಧೆ


ನನಗೆ ಕಥೆ ಎಲ್ಲ ತಿಳಿಯುವುದಿಲ್ಲ ತಂಗಿಯೆ


ನಾನು ಹೇಳಿದರೆ ದೇವರ ನಾಮವನ್ನು


ಚಂದಬಾರಿ ರೂಪದ ಶ್ರೀ ಕೃಷ್ಣ ದೇವರು ಹೇಳಿದರು


ದೇವರ ನಾಮವನ್ನೇ ಹೇಳೆಂದು ಹೇಳಿದಾಗ ಹೇಳುವರು


ಹೇಳುವುದಿಲ್ಲ ಅದನ್ನು ಹೇಳಿದರೆ ನಿನ್ನ ಭಾವನೆ


ಪ್ರತ್ಯಕ್ಷ ಆಗುತ್ತಾರೆಂದು ಹೇಳಿದರು


ಇನ್ನು ಬೇಗ ಹೇಳಿದರು ಚಂದಬಾರಿ ರೂಪದ ಕೃಷ್ಣ


ಅಷ್ಟುಹೊತ್ತಿಗೆ ಬಾಯಿಗೆ ಬಂದ ಹಾಗೆ


ಬೈದಳು ರಾಧೆ ಅವಳು ಒಂದಾದರೂ ಹೇಳೆಂದು


ಹೇಳಿದಾಗ ಪ್ರಾರಂಭ ಮಾಡಿದಾಗ


ಏಳು ರಾತ್ರಿ ಏಳು ಹಗಲಿನಲ್ಲಿ


ನಿಜರೂಪವನ್ನೇ ತಾಳಿದರು ದೇವರು


ಶ್ರೀಕೃಷ್ಣ ದೇವರು


ಏಳು ರಾತ್ರಿ ಏಳು ಹಗಲು ಅಲ್ಲಿಯೆ ಇದ್ದು


ಏಳು ಮಾಳಿಗೆಯ ಮೇಲೆ ಒಟ್ಟಿಗೆ


ಇದ್ದರು ರಾಧೆ ಮತ್ತು ಶ್ರೀಕೃಷ್ಣ ದೇವರು


ರಾತ್ರಿ ಹಗಲು ಹಗಲು ರಾತ್ರಿ ಕಳೆದರೂ

© ಡಾ.ಲಕ್ಷ್ಮೀ ಜಿ ಪ್ರಸಾದ್

ಮೇಲಿನ ಮಾಳಿಗೆಯಿಂದ ಇಳಿಯುವುದು ಕಾಣುವುದಿಲ್ಲ ಗೋಪಾಲನಿಗೆ


ಏನು ಬೆಳಗು ಆಗಿಲ್ಲ ಇಷ್ಟು ದಿನ ತನಕ


ಇಷ್ಟು ದೊಡ್ಡ ರಾತ್ರೆ ಇರಲಿಲ್ಲ ಇವತ್ತಿನ ದಿನದಂತೆ


ಇಷ್ಟು ದೊಡ್ಡ ರಾತ್ರೆ ಎಂದು ಹೇಳಿಕೊಂಡು


ಒಳಗೆ ಹೊರಗೆ ಹೋಗುವರು ಚಂದಬಾರಿ


ನನ್ನ ಮದುಮಗ ಇಲ್ಲ ಎಲ್ಲಿಗೆ


ಹೋಗಿದ್ದಾರೆಂದು ಮೇಲಿನ ಮಿರಿ ಲೋಕದಿಂದ


ಇಳಿದುಕೊಂಡು ಕೆಳಗೆ ಸಿರಿಬಾರಿ ಲೋಕಕ್ಕೆ ಬರುವಾಗ


ಏಳು ರಾತ್ರೆ ಏಳು ಹಗಲು


ಶ್ರೀಕೃಷ್ಣ ದೇವರು ಮತ್ತು ರಾಧೆ ಒಟ್ಟಿಗಿರುವುದನ್ನು ನೋಡುತ್ತಾಳೆ.


ನಾಯಿ ಮುಟ್ಟಿದ ಎಂಜಲು ಉಂಟು


ಮಡಿಗೆ ಉಂಟು ಗೋಪಾಲ


ನಿನಗೆ ಬೇಕಾ ನಾನು ಕೊಂಡೋಗಬೇಕಾ ಎಂದು


Éಹೇಳಿದರು ಶ್ರೀಕೃಷ್ಣ ದೇವರು


ಯಾರಯ್ಯ ಅಣ್ಣಾ ಅಣ್ಣಾನೆ ಕೃಷ್ಣ ಕೇಳಿದೆಯ


ನನಗೆ ಬೇಡ ಬೇಡ ತೆಗೆದುಕೊಂಡು


ಹೋಗೆಂದು ಹೇಳಿದರು ಗೋಪಾಲ


ಚಂದಬಾರಿ ರಾಧೆಯರನ್ನು ಕರೆದುಕೊಂಡೇ


ಮೇಲಿನ ಮಿರಿ ಲೋಕಕ್ಕೆ ಬೇಗನೆ ಬಂದರು


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನ


ಓಯೋಯೋ ಚಂದಬಾರಿ ರಾಧೆ ಮತ್ತು ಶ್ರೀಕೃಷ್ಣ ದೇವರು


ಒಟ್ಟಿಗೆ ಮೇಲಿನ ಮಿರಿಲೋಕದಲ್ಲಿ


ಸಂಸಾರ ಮಾಡಿಕೊಂಡು ಇರುತ್ತಾರೆ


ಡೆನ್ನಾನಾ ಡೆನ್ನಾನ ಡೆನ್ನ ಡೆನ್ನ ಡೆನ್ನ ಡೆನ್ನಾನಯೇ


ಓಯೋಯೇ ಚಂದಬಾರಿ ಗೋಪಾಲ ಡೆನ್ನಾನಯೇ




                      




                        




                   




                                3. ಮಧುರಗೆ ಮದುಮಗಳು


ಡೆನ್ನಾರ ಡೆನ್ನಾ ಡೆನ್ನಾನಾ ಓಯೇಯೇ ಡೆನ್ನಾನಾ


ಕೊಂಟಾಡದ ಬೀಡಿನಲ್ಲಿ ಇದ್ದಾರೆ


ಕೋಚಣ್ಣ ಆಳ್ವರು ಇದ್ದಾರೆ


ಅವರಿಗೆ ಮೋಹದ ಪ್ರೀತಿಯ ಮಡದಿ ಕುಂತ್ಯಮ್ಮ ದೈಯಾರು


ಡೆನ್ನಾ ಡೆನ್ನಾನಾ ಓಯೋಯೋ ಡೆನ್ನಾನ ಡೆನ್ನಾ ಡೆನ್ನಾ ಡೆನ್ನಾನಯೇ


ಅವರಿಗೆ ಹುಟ್ಟಿದ ಬೆಳೆಯುವ ಹೆಣ್ಣು ಮಕ್ಕಳು


ಏಳು ಜನ ಹೆಣ್ಣು ಮಕ್ಕಳು


ಚಿಕ್ಕ ಚಿಕ್ಕ ಹುಡುಗಿಯರನ್ನು ದೊಡ್ಡ ದೊಡ್ಡ ರಾಜ್ಯಕ್ಕೆ 


ಅರಸು ಬಲ್ಲಾಳರಿಗೆ ಕೊಟ್ಟಿದ್ದಾರೆ


ಎಲ್ಲರಿಂದ ಹಿರಿಯವಳು ಮಧುರೆಗೆ ಮದುಮಗಳು


ಉಳಿದುಕೊಂಡು ಉಳಿದು ಬರುವಾಗ


ಯಾರಮ್ಮ ಮದುಮಗಳೆ ಕೇಳಿದೆಯ


ಕೊಂತ್ಯಮ್ಮ ದೇವಿಯನ್ನು ಕರೆದರು


ನಮ್ಮ ಸೋದರಳಿಯ ಇದ್ದಾನೆ ಅವನಾದರೆ


ಕದಿರೆಯ ಬೀಡಿನಲ್ಲಿ ಬಂಗೇರ ಅರಸು


ಅವನಲ್ಲಿ ಒಂದು ಮಾತು ಕೇಳು 


 ಮಗಳನ್ನು ಮದುವೆ ಆಗುವನೋ


ಕೋಚಣ್ಣ ಆಳ್ವರು ಹೇಳಿದರು 


 ಆ ದಿನ ಹೋಗಿ ಮರುದಿನ ಬಂದಾಗ


ಬೆಳಗಿನ ಜಾವದಲ್ಲಿ ಏಳುವರು


 ಕುಂತ್ಯಮ್ಮ ಮಡದಿ ಹೇಳುವರು


ಯಾರಯ್ಯ ಒಡೆಯ ಯಾರಯ್ಯ ಮದುಮಗ


ನಾನು ಹೋಗುವೆ ನಾನು ಬಂಗೇರನ


ಹತ್ತಿರ ಬಂದು ಮಾತು ಕೇಳುವೆಂದು ಹೇಳಿದರು


ಬೇಗನೆ ಹೋಗಿ ಬೇಗ ಬಾ 


 ಎಂದು ಕೋಚಣ್ಣ ಆಳ್ವರು ಹೇಳಿದರು


ಯಾರಮ್ಮ ಮಧುರಗ ಮಧುರಗ ಕೇಳಿದೆಯಾ


ನಾನು ಒಂದು ದೇವಸ್ಥಾನಕ್ಕೆ ಹೋಗುವೆ


ಕದಿರೆಯ ದೇವಸ್ಥಾನಕ್ಕೆ ಹೋಗುವೆ


ಎಂದು ಕದಿರೆಯ ಬೀಡಿಗೆ ಹೋಗುವಾಗ


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ


ಯಾರದು ಕೆಲಸದವರೇ ಕರೆಯುವನು


ಅದು ಯಾರು ಬರುವುದೆಂದು ನೋಡಿ ಎಂದು


ಏಳೇಳು ಮಾಳಿಗೆಯ ಉಪ್ಪರಿಗೆಯಲ್ಲಿ ಕುಳಿತು


ಬಂಗೇರ ಅರಸು ನೋಡುತ್ತಾರೆ


 ಯಾರದು ಬರುವುದು ನನ್ನ ಅತ್ತೆ


ಸೋದರ ಮಾವನ ಮಡದಿ ಎಂದು ಹೇಳಿದನು


ಕವುಚಿ ಹಾಕಿದ ಕಲ್ಲಿನ ಮರಿಗೆಯನ್ನ


ಮೊಗಚಿ ಹಾಕಿ ತಂದರು 


 ಆಕಾಶದ ಏತ ಕೊಡಿಸಿದರು


ಪಾತಾಳದಿಂದ ಹನಿ ನೀರು ತೆಗೆಸಿದರು


ತಾಮ್ರದ ಸೌಟು ನೀರು ತರಿಸಿದರು


ಕದಿರೆಯ ಬಂಗೇರ ಅರಸುಗಳು


ಯಾರಯ್ಯ ಅತ್ತೆಯವರೇ ಅತ್ತೆಯವರೇ ಬಟ್ಟೆಯಲ್ಲಿ


ಮುಖದ ಬೆವರು ಒರಸಿರಿ ಎಂದು ಹೇಳಿದ


ಬಂಗೇರ ಅರಸುಗಳು ಹೇಳುವಾಗ


ಏನು ಬಂದಿರಿ ಅತ್ತೇಂದು ಕೇಳಿದರು


ಒಳ್ಳೆಯದಕ್ಕೆ ಬಂದಿರೋ ಕೆಟ್ಟದಕ್ಕೆ ಬಂದಿರೋ


ಬಂದವರು ಕುಳಿತುಕೊಳ್ಳಿ ಎಂದು ಹೇಳಿದರು


ಊಟ ಮಾಡಿ ಎಂದು ಹೇಳಿದರು 


 ಕದ್ರಿಯ ಬಂಗೇರ ಅರಸುಗಳು


ನಾನು ಬಂದ ಕಾರ್ಯವ ಹೇಳಿ 


 ನಾನು ಊಟ ಮಾಡುವೆಂದು


ಹೇಳಿದರು ಮದುಮಗಳು ಕುಂತ್ಯಮ್ಮ ದೈಯಾರು


ಯಾರಯ್ಯ ಬಂಗೇರ ಅರಸುಗಳು 


 ನಮ್ಮ ಪ್ರೀತಿಯ ಮೋಹದ ಮಗಳು


ಮಧುರಗೆ ಮದುಮಗಳು ಇನ್ನು ಇದ್ದಾಳೆ


ಬಂದ ಬಂದ ಸಂಬಂಧ ಕೂಡಿ ಬರುವುದಿಲ್ಲ


ಕಣ್‍ಕಟ್ಟಿನ ಹಾಗೇ ಆಗುತ್ತದೆ


ನೀನಾದರು ಅವಳನ್ನು ಮದುವೆ ಆಗಬೇಕು ಎಂದು


ಕುಂತ್ಯಮ್ಮ ದೇವಿ ಕೇಳುವಾಗ 


 ಯಾರಮ್ಮ ಅತ್ತೆಯೇ ಕೇಳಿರಿ


ಒಳ್ಳೆ ಒಳ್ಳೆ ಹೆಣ್ಣುಗಳನ್ನು ದೊಡ್ಡ ದೊಡ್ಡ ರಾಜ್ಯಕ್ಕೆ


ಅರಸು ಬಲ್ಲಾಳರಿಗೆ ಕೊಟ್ಟಿದ್ದೀರಿ 


 ಕೆಂಚು ಕೂದಲ ಮೇಳ್ಳೆಗಣ್ಣಿನ


ತಿರುಚಿನ ಕಾಲುಗಳ ದೊಡ್ಡ ಹೊಟ್ಟೆಯ ಹುಡುಗಿಯನ್ನು


ನನಗೆ ಇಟ್ಟು ಕಟ್ಟುವಿರಾ ಎಂದು ಕೇಳುವರು


ಕದಿರೆಯ ಬಂಗೇರ ಅರಸುಗಳು


ಇಲ್ಲ ಮಗ ಬಂಗೇರ ನೀನಗಾಗುವಂಥ ಹೆಣ್ಣು ಎಂದು


ಅಷ್ಟಾಗಿ ಕೇಳಿದರು ಕುಂತ್ಯಮ್ಮ ದೈಯಾರು


ಕಣ್ಣಿನಲ್ಲಿ ನೀರು ತಂದುಕೊಂಡರು


ಹಾಗಾದರೆ ಅಂಥ ಹೆಣ್ಣನು ಕಲ್ಲು ಕಟ್ಟಿ


ಹೊಂಡಕ್ಕೆ ಹಾಕಿ ಅತ್ತೆಯವರೇ 


 ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಬಂಧಿಸಿ


ಕತ್ತಲಿನ ರಾಜ್ಯಕ್ಕೆ ಬಿಡಿ ಎಂದು 

© ಡಾ.ಲಕ್ಷ್ಮೀ ಜಿ ಪ್ರಸಾದ್

 ಹೇಳಿದರು ಬಂಗೇರ ಅರಸುಗಳು


ಹೇಳಿದ ಮಾತನ್ನು ಕೇಳಿದರು ಕುಂತ್ಯಮ್ಮ


ಇಳಿದುಕೊಂಡು ಊರಿಗೆ ಬರುವರು


ಡೆನ್ನಾನ್ನಾ ಡೆನ್ನ ಡೆನ್ನಾನಾ ಮದುಮಗ


ಯಾರಯ್ಯ ಮದುಮಗ ಕೇಳಿರಿ 


 ನಾನು ಹೋದೆ ಕದಿರದ ಬೀಡಿಗೆ


ಬಂಗೇರ ಅರಸರ ಹತ್ತಿರ ಮಾತನಾಡಿದೆ


ಅವನು ಹೇಳಿದ ಮಾತು ಕೇಳಿದಾಗ


ಜೀವ ಇಟ್ಟುಕೊಂಡು ಬದುಕುವುದೇ ಬೇಡವೆನಿಸಿತು


ಒಳ್ಳೊಳ್ಳೆ ಹೆಣ್ಣುಗಳನ್ನು ದೊಡ್ಡ ದೊಡ್ಡ ರಾಜ್ಯಕ್ಕೆ


ಅರಸು ಬಲ್ಲಾಳರಿಗೆ ಕೊಟ್ಟಿದ್ದೀರಿ ಉಳಿದೊಂದು


ಅವಳನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲ ರಾಜ್ಯಕ್ಕೆ


ಬಿಡಿ ಎಂದು ಹೇಳಿದ ಬಂಗೇರ ಅರಸು


ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನಾನಾ


ಕೊಂಡಾಟಂದ ಬೀಡಿನಲ್ಲಿ ಇದ್ದಾರೆ ರಾಯರು


ಕೋಚಣ್ಣ ಆಳ್ವರು ಕುಂತ್ಯಮ್ಮ ದೈಯಾರು


ಅವರಿಗೆ ಹುಟ್ಟಿ ಬೆಳೆದ ಮಕ್ಕಳು 


 ಏಳು ಜನ ಹೆಣ್ಣು ಮಕ್ಕಳು


ಎಲ್ಲರಿಗಿಂತ ಹಿರಿಯವಳು ಮಧುರಗೆ ಮದುಮಗಳು


ಬೆಳೆದೊಂದು ಮಗಳನ್ನು ಏನು ಮಾಡುವುದೆಂದು


ಎಲ್ಲರು ಒಟ್ಟಿಗೆ ಸೇರಿ ಒಟ್ಟಿಗೆ ಕೇಳುವಾಗ


ನಮ್ಮ ದೊಡ್ಡಪ್ಪನ ಮಗನಿಗೆ ನೂಲಮದುವೆ1


ಇದೆಯೆಂದು ಹೇಳಿ ಸಿಂಗಾರ ಮಾಡಿರಿ ತಾಯಿ


ಹೇಳುವರು ಹೆಣ್ಣುಗಳು ಆರು ಜನ ಹೆಣ್ಣು ಮಕ್ಕಳು


ತಂಗಿಯರು ಹೇಳುವಾಗ 


 ಯಾರಯ್ಯ ತಾಯಿ ಯಾರಯ್ಯ ತಾಯಿ


ಕವುಚಿ ಮಲಗಿ ಉಸಿರು ಬಿಟ್ಟರೆ


ಒಂದು ಕೋಲು ಮಣ್ಣು ಅಡಿಗೆ ಹೋಗುತ್ತದೆ


ಮೊಗಚಿ ಮಲಗಿ ಉಸಿರು ಬಿಟ್ಟರೆ 


 ಮಾಡಿನ ಮುಳಿ ಹಾರುತ್ತದೆ. 


ದೊಡ್ಡವಳಾದ ಹೆಣ್ಣನ್ನು ಮನೆಯಲ್ಲಿ


ಇಡಲು ಬಾರದೆಂದು ಹೇಳಿದರು 


 ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿ


ಕತ್ತಲೆ ಕಾಡಿಗೆ ಬಿಟ್ಟು ಬನ್ನಿ ಎಂದು ಹೇಳಿದರು


ಯಾರಯ್ಯ ತಾಯಿ ತಾಯಿ ಕೇಳಿರಿ 


 ತಂದೆಗೆ ಹೇಳಿರೆಂದು ಹೇಳಿದರು


ಆರು ಜನ ಹೆಣ್ಣು ಮಕ್ಕಳು ಕುಳಿತು


ಕೇಳುವರು ಮಧುರಗೆ ಮದುಮಗಳು


ಯಾರು ಮಗ ಮಧುರಗ ಯಾರಮ್ಮ ಮಧುರಗೆ


ನಮ್ಮ ದೊಡ್ಡಪ್ಪನ ಮಗನಿಗೆ ನೂಲ ಮದುವೆ


ಉಂಟು ಎಂದು ಹೇಳಿದರು 


 ಅಲ್ಲಿಗೆ ನಿನ್ನನ್ನು ಕರೆದುಕೊಂಡು ಹೋಗುವರು


ತಂದೆಯ ಒಟ್ಟಿಗೆ ಹೋಗು ಎಂದು 


 ಆರು ಜನ ತಂಗಿಯರು ತಾಯಿಯರು


ಒಟ್ಟಿಗೆ ಸೇರಿ ಹೇಳುವಾಗ 


 ಕಣ್ಣಿನಲ್ಲಿ ದುಃಖ ಪಡುವಳು ಮಗಳು


ಹೊಟ್ಟೆಯಲ್ಲಿ ಕಾವೇರಿ ಮಾಡುವಳು


ಆಯಿತೆಂದು ಹೇಳುವುದಿಲ್ಲ ಆಗದೆಂದು ಹೇಳುವುದಿಲ್ಲ


ಬಾಯಿತೆರೆದು ಹೇಳುವುದಿಲ್ಲ 


 ಕೊರಳು ಕೆಳಗೆ ಹಾಕಿ ಕಡುದುಃಖ


ಬಿಡುವಳು ಮಗಳು ಮಧುರಗೆ ಮದುಮಗಳು


ಯಾರು ಮಗಳೆ ಮದುಮಗಳೆ ಮಧುರಗ


ಎಂದರು ತಾಯಿ ಬೆಳ್ಳಿಯ ತಟ್ಟೆಗೆ 


 ಬಂಗಾರಿನ ಚಮಚ ಹಿಡಿದುಕೊಂಡು


ತಲೆಗು ಮೈಗೂ ಸ್ನಾನ ಮಾಡು ಮಗಳೆ


ತಲೆಗೆ ಎಣ್ಣೆ ಹಾಕಿಕೋ ಎಂದರು 


 ತಾಯಿ ಕುಂತ್ಯಮ್ಮ ಹೇಳಿದರು

© ಡಾ.ಲಕ್ಷ್ಮೀ ಜಿ ಪ್ರಸಾದ್

ಬಿಸಿನೀರು ಕಾಯಿಸಿದರು 


 ಬೇಗನೆ ಅಡಿಗೆ ಮಾಡಿದರು


ನೀರು ಕಾದು ಬಿಸಿಯಾಗಲು 


 ಮಧುರಗೆ ಮದುಮಗಳನ್ನು ಕರೆದರು


ಬಿಸಿನೀರು ಆಗಿದೆ ಅಡಿಗೆ ಆಗಿದೆ


ಎಂದು ಇನ್ನು ಬೇಗ ಎಂದು ಹೇಳಿದರು


ತಲೆಗೆ ಮೈಗೆ ಸ್ನಾನ ಮಾಡು ಮಗಳೆ ಮಧುರಗ


ಚಿನ್ನದಲ್ಲಿ ಸಿಂಗಾರ ಮಾಡುವೆಂದು ಹೇಳುವರು


ನನಗೆ ಯಾಕೆ ಸೀರೆ ರವಕೆ ತಾಯಿಯವರೆ


ಕತ್ತಲೆ ಕಾಡಿಗೆ ಹೋಗುವವಳಿಗೆ


ಎಂದು ಹೇಳುವಳು ಮಧುರಗೆ ಮದುಮಗಳು


ಹೇಳುವಾಗ ತಾಯಿ ಕುಂತ್ಯಮ್ಮ ಹೇಳುವರು


ಯಾರು ಮಗಳೆ ಮಧುರಗ ಯಾರು ಮಗ ಮಧುರಗ


ನಿನ್ನ ದೊಡ್ಡಪ್ಪನ ಮಗನ ಉಪನಯನ 


 ಇದೆ ಎಂದು ಹೇಳುವರು


ಅಲ್ಲಿಗೆ ನಿನ್ನನ್ನು ಕರೆದುಕೊಂಡು ಹೋಗುತ್ತಾರೆ


ಎಂದು ಹೇಳುವರು ಕುಂತ್ಯಮ್ಮ ದೈಯಾರು


ಬಿಸಿನೀರು ತಣ್ಣೀರು ಎರೆದರು ಅವರು 


 ಚಿನ್ನದ ಒಡವೆ ತಂದರು


ಚಿನ್ನದೊಡವೆ ಅವಳ ಕೊರಳಿಗೆ ಹಾಕಿದರು


ರೇಷ್ಮೆಗಿಂತ ಮೇಲಿನ ರೇಷ್ಮೆ ಸೀರೆಯನ್ನು ತಂದರು


ಉಡಿಸಿದರು ಇನ್ನು ಬೇಗ ಬರುವಾಗ


ಹೊಟ್ಟೆಗೆ ಉಣ್ಣುವುದಿಲ್ಲ ಬಾಯಿ ತೆರೆಯುವುದಿಲ್ಲ


ತಲೆ ಕೆಳಹಾಕಿ ಕಣ್ಣಿನಲ್ಲಿ ನೀರು ತುಂಬುತ್ತಾಳೆ


ಯಾರು ಮಗಳೆ ಯಾರು ಮಗಳೆ ಮಧುರಗ


ಹೊತ್ತು ಹೋಗುತ್ತದೆ ವೇಳೆ ಆಗುತ್ತದೆ


ಸಮಯಕ್ಕೆ ಹೋಗಬೇಕೆಂದು ಹೇಳುವರ


ತಂದೆ ಕೋಚಣ್ಣಾಳ್ವರು ಬರುವರು


ಕೋಚಣ್ಣಾಳ್ವರು ಇನ್ನು ಬೇಗ ಬಂದರು


ಬೇಗ ಅಲಂಕಾರ ಮಾಡಿ ಊಟ ಹಾಕು


ಕುಂತ್ಯಮ್ಮ ದೈಯಾರೆಂದು ಹೇಳಿದರು


ಅಲಂಕಾರ ಸಮ್ಮಾನ ಮಾಡಿದರು ಕುಂತ್ಯಮ್ಮ


ಚಿನ್ನದಲ್ಲಿ ಶ್ರೇಷ್ಠವಾದ ಚಿನ್ನದ ಒಡವೆ


ರೇಷ್ಮೆ ಸೀರೆಯಲ್ಲಿ ಒಳ್ಳೆಯ ಸೀರೆಯನ್ನು


ಉಡಿಸಿ ಕಳುಹಿಸಿದರು ಹೋಗು ಮಗ


ಈವತ್ತೊಂದು ದಿನ ಕುಳಿತು ನಾಳೆಯೆ ಬನ್ನಿ ಎಂದು


ತಾಯಿ ಕುಂತ್ಯಮ್ಮ ಹೇಳುವಾಗ


ಯಾರಮ್ಮ ತಾಯಿ ತಾಯಿಯವರೇ ಹೇಳುವಳು


ನನಗೆ ಯಾಕೆ ಸೀರೆ ರವಿಕೆ 


 ಕತ್ತಲೆ ಕಾಡಿಗೆ ಹೋಗುವವಳಿಗೆ


ನನಗೆ ಯಾಕೆ ಸುಳ್ಳು ಹೇಳುತ್ತೀರಿ ತಾಯಿಯವರೇ


ನಾನು ಕೂಡ ನಿನ್ನ ಮಗಳೆಯೆ? ಕೇಳುವಳು


ಅತ್ತುಕೊಂಡು ದುಃಖಿಸಿಕೊಂಡು ಹೊರಡುವಳು ಮಗಳು


ನಿಮ್ಮ ಹೆಣ್ಣು ಮಕ್ಕಳು ನನ್ನ ತಂಗಿಯರು ದೊಡ್ಡ ದೊಡ್ಡ


ಅರಸು ಬಲ್ಲಾಳರುಗಳು ಒಟ್ಟಿಗೆ ಸೇರುವ ಹೊತ್ತೊಂದು


ಬರುವುದು ಎಂದು ಹೇಳಿದಳು ಮಧುರಗೆ ಮದುಮಗಳು


ಕಣ್ಣಿನಲ್ಲಿ ಕಡುದುಃಖ ಮಾಡಿಕೊಂಡು ಹೊರಟಾಗ


ಹೋಗುವ ಮಗಳೆ ಮದುಮಗಳೆ ಬಾ ಎಂದು 


ಕರೆದುಕೊಂಡು ಹೋಗುವರು ತಂದೆ ಕೋಚಣ್ಣಾಳ್ವರು


ಕಾಡಿನ ನಡುವೆ ಹೋಗುವಾಗ ರಾತ್ರಿ ಕತ್ತಲು ಆಗುವಾಗ


ಯಾರಯ್ಯ ತಂದೆಯವರೇ ತಂದೆಯವರೇ


ನನಗೆ ಆಯಾಸ ಬಾಯಾರಿಕೆ ಆಗುತ್ತಿದೆ


ನಾವು ಸ್ವಲ್ಪ ಕುಳಿತುಕೊಳ್ಳುವ ಎಂದು ಹೇಳುವಾಗ


ಆಯಿತು ಮಗಳೆ ಎಂದು ಹೇಳಿ ಕಾಲು ನೀಡಿ 


ಕುಳಿತುಕೊಳ್ಳುವರು ತಂದೆ ಕೋಚಣ್ಣಾಳ್ವರು


ಸ್ವಲ್ಪ ಮಲಗಿ ನಿದ್ರೆ ಮಾಡುವೆ ಮತ್ತೆ


ಹೋಗುವ ಎಂದು ಹೇಳಿದರು ಮದುರೆಗ ಮದುಮ್ಮಗಳು


ಡೆನ್ನಾ ಡೆನ್ನಾ ಡೆನ್ನಾನಾ ಓಯೇಯೇ ಮದುಮಗ ಕೇಳಿರಿ


ಮಗಳನ್ನು ಎಲ್ಲಿಗೆ ಕರೆದುಕೊಂಡು ಹೋದಿರಿ


ಎಲ್ಲಿ ಬಿಟ್ಟು ಬಂದಿರಿ ಎಂದು ಮಡದಿ 


 ಕುಂತ್ಯಮ್ಮ ದೆಯ್ಯಾರು ಕೇಳುವಾಗ


ಕಣ್ಣಿನಲ್ಲಿ ಕಡು ದುಃಖ ಮಾಡಿದರು 


 ಹೊಟ್ಟೆಯಲ್ಲಿ ಕಾವೇರಿ ಸುರಿದರು


ಏಳು ಜನ ಹೆಣ್ಣು ಮಕ್ಕಳನ್ನು ಏಳು ಕೋಟಿ ಕೊಟ್ಟು


ಏಳು ಸಂಬಂಧ ಕಟ್ಟಬೇಕೆಂದು ಎಣಿಸಿದ್ದೆ ನಾನು


ಒಂದು ಮಗಳಿಗೆ ಸಂಬಂಧ ಕೂಡಿ ಬರಲಿಲ್ಲ ಹೇಳಿದರು


ಕುಂತ್ಯಮ್ಮ ದೈಯಾರು ಅಷ್ಟು ಮಾತು ಕೇಳಿದರು


ಓಡೋಡಿ ಹೋಗುವರು ಕುಂತ್ಯಮ್ಮ


ಯಾರಯ್ಯ ದೈವಗಳೆ ಯಾರಯ್ಯ ದೇವರೆ


ನನ್ನ ಒಂದು ಮಗಳಿಗೆ ಒಳ್ಳೆಯ ದಾರಿ ತೋರಿಸು


ಎಂದು ಹೇಳಿದರು ಕುಂತ್ಯಮ್ಮ ದೈಯಾರು


ದೊಡ್ಡ ಒಂದು ಮನೆಗೆ ಎತ್ತಿಸಿ ಅವಳನ್ನು


ರಕ್ಷಣೆ ಮಾಡಿ ಎಂದು ಕೇಳಿದರು  ಯಾರಮ್ಮ ಕುಂತ್ಯಮ್ಮ ಕೇಳಿದೆಯಾ


ಒಂದು ಕಾಡಿನಲ್ಲಿ ಹೋಗುವಾಗ ಅವಳಿಗೆ 


 ನಿದ್ರೆ ಬೇಗ ಬಂತು


ತಂದೆಯವರೆ ಮಲಗುವೆ ಎಂದು ಹೇಳಿದಳು ಮಗಳು


ಕಾಲು ನೀಡಿ ಮಲಗಿಸಿದೆ  


ಮೆಲ್ಲನೆ ಎದ್ದು ಕಣ್ಣಿಗೆ ಬಟ್ಟೆ ಕಟ್ಟಿ


ಬಿಟ್ಟು ಬಂದೆ ಎಂದು ಹೇಳಿದರು


ಡೆನ್ನ ಡೆನ್ನಾ ಡೆನ್ನಾನ್ನಾ ಓಯೇಯೆ ಡೆನ್ನಾನ್ನಾ


ಆ ಹೊತ್ತಿಗೆ ಮಗಳು ಮಧುರೆಗೆ 


 ಯಾರಯ್ಯ ತಂದೆಯವರೆ ಎಲ್ಲಿದ್ದೀರಿ


ಎಂದು ಹೇಳಿ ಎಚ್ಚರಾಗುವಾಗ ಅತ್ತುಕೊಂಡು


ಅತ್ತುಕೊಂಡು ಬೊಬ್ಬೆ ಹಾಕುವಾಗ


ತಾಳೆಯ ಮೂರ್ತೆ ಮಾಡುವ ಬೈದ್ಯಬ ರೂಪದಲ್ಲಿ


ಜುಮಾದಿ ದೈವವು ಬರುತ್ತದೆ


ಯಾರಮ್ಮ ಮದುಮಗಳೆ ಯಾರಮ್ಮ ಮದುಮಗಳೆ


ನಿನ್ನ ಮಾವ ನಾನೆಂದು ಹೇಳಿ 


 ನಿನ್ನ ಕಣ್ಣಿನ ಬಟ್ಟೆಯನ್ನು ಬಿಚ್ಚಿ


ನಿನ್ನನ್ನು ಕರೆದುಕೊಂಡು ಹೊಗುವೆ


ನನ್ನೊಂದು ಊರಿಗೆ ಮನೆಗೆ ಎಂದು ಹೇಳಿದರು3


ಕಣ್ಣಿನ ಬಟ್ಟೆ ಬಿಡಿಸಿರಿ ಮಾವ 


 ಕೈಯ ಬಂಧನ ಬಿಡಿಸಿರಿ ಎಂದು


ಮಧುರಗೆ ಹೇಳಿ ಅತ್ತುಕೊಂಡು 


 ಕೆಳಿದಾಗ ಬೇಸರ ಮಡುವಾಗ


ನಿನ್ನನ್ನು ನನ್ನೊಂದು ಕೊಟಡಿಗೆ 


ಕರೆದುಕೊಂಡು ಹೋಗುವೆಂದು


ಬಾರಮ್ಮ ಮದುಮಗಳೆ ಬಾ ಎಂದು 


ಕರೆದುಕೊಂಡುಹೋಗುತ್ತದೆ ತಾಳೆಯ


 ಮೂರ್ತದಾರನ ವೇಷದ ಜುಮಾದಿ ದೈವ


ಆ ಹೊತ್ತಿಗೆ ಕೊಂಡು ಹೋಗಿ ಅಲ್ಲಿ


ಚಾವಡಿಯಲ್ಲಿ ಕುಳ್ಳಿರಿಸಿ ಯಾರಯ್ಯ ಬಂಗೇರ ಅರಸುಗಳೆ


ನಿನಗಾಗುವಂಥ ಹೆಣ್ಣನ್ನು ಕರೆದುಕೊಂಡು ಬಂದಿದ್ದೇನೆ


ಚಾವಡಿ ನಡುವಿನಲ್ಲಿ ನೋಡಿರಿ ಎಂದಾಗ


ಓಡೋಡಿ ಬರುವರು ಬಂಗೇರರು 


 ಕದಿರೆಯ ಬಂಗೇರ ಅರಸುಗಳು


ಒಂದು ಕೈಯಲ್ಲಿ ಹಿಡಿದರು ಬಂಗೇರರು


ಕದಿರೆಯ ಬಂಗೇರ ಅರಸುಗಳು


ಇಂದು ಹಿಡಿದ ಕೈಯನ್ನು ಯಾವತ್ತಿಗೂ ಬಿಡಲಾರೆ


ಹೇಳುವರು ಒಳಗೆ ಕರೆದುಕೊಂಡು ಹೋಗುವರು


ಡೆನ್ನನಾ ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನಾನಯೇ


                                              * * *












4. ಜಾಯಿಲ ಬಂಗೇತಿ






ಡೆನ್ನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ


ಕನರಾಯ ಬೀಡಿನಲ್ಲಿ ಇದ್ದಾರೆ ಬಂಗೇರರು


ಕನರಾಯ ಬಂಗೇರರು ಇದ್ದಾರೆ 


 ಅವರ ಪ್ರೀತಿಯ ಮೋಹದ ಸೊಸೆ


ಜಾಯಿಲ ಬಂಗೇತಿ ಇದ್ದಾಳೆ 


 ಭೂಮಿಯಲ್ಲಿ ಹುಟ್ಟಿ ಮೂವತ್ತನೆ ದಿನದಲ್ಲಿ


ತಾಯಿಗೆ ಅಳಿವು ಬರುವುದು 


 ಎದೆ ಹಾಲು ಕುಡಿಯುವ ಹೊತ್ತಿನಲ್ಲಿ


ತಾಯಿಗೆ ಅಳಿವು ಬರುತ್ತದೆ 


 ತಂದೆಯ ಅನ್ನ ಉಣ್ಣುವ ಕಾಲದಲ್ಲಿ


ತಂದೆಗೆ ಅಳಿವು ಬರುತ್ತದೆ 


 ಮಾವ ಎಂದರೆ ಇದ್ದಾರೆ ಬಂಗೇರರು


ಕನರಾಯ ಬಂಗೇರರು ಇದ್ದಾರೆ 


 ತಂದೆ ಸತ್ತ ಶುದ್ಧ ಆಗಿ


ಬೀಡಿಗೆ ಕರೆದುಕೊಂಡು ಹೋದರು


ಬೀಡಿನಲ್ಲಿ ಅವರ ಮೋಹದ ಪ್ರೀತಿಯ ಮದುಮಗಳು


ಮುಂಡ್ಯಗ ಹೆಂಗಸು ಇದ್ದಾರೆ 


 ಬೆಕ್ಕು ಸತ್ತಿದೆ ಬೆಕ್ಕಿನ ಸಂಸಾರ


ಬಂದಿದೆ ಎಂದು ಹೇಳಿದಳು 


 ಮಗುವನ್ನು ಅತ್ತ ಇಡುವುದಿಲ್ಲ


ಇತ್ತಲೂ ಇಡುವುದಿಲ್ಲ ಪುಂಡ್ಯಗ ಹೆಂಗಸು


ಕಪಿಲೆ ಹಸುವನ್ನು ಕಟ್ಟಿದರು ಮಾವ


ಸಮ್ಮಾಲೆ ಕನರಾಯ ಬಂಗೇರರು


ಕಪಿಲೆ ಹಸುವಿನ ಹಾಲು ಬತ್ತಿಕೊಂಡು ಬರುವಾಗ


ಕಿರು ಬೆರಳಿಗೆ ಪಟ್ಟೆಯನ್ನು ಸುತ್ತಿ ಬಂಗೇರರು


ಕನರಾಯ ಬಂಗೇರರು ಇಟ್ಟುಕೊಂಡು ಕೊಟ್ಟರು


ಮಗು ಸಣ್ಣ ಹೋಗಿ ದೊಡ್ಡವಳು ಆಗುವಾಗ


ಆಗುವಳೆ ಮಗಳು ಜಾಯಿಲ ಬಂಗೇತಿ


ಯಾರಮ್ಮ ಮಗಳೆ ಜಾಯಿಲ ಬಂಗೇತಿ


ನೀನಾದರು ಬಾ ಎಂದು ಕರೆದರು ಬಂಗೇರರು


ಗೋಡೆಯನ್ನು ಹಿಡಿದು ಹೊಸ್ತಿಲು ದಾಟಿಕೊಂಡು


ಮಾವನ ಬೆನ್ನ ಹಿಂದೆ ಹೋಗುವಾಗ


ಚಕ ಚಕ ನಡೆದುಕೊಂಡು ಬಂಗೇರ ಬೆನ್ನಿಗೆ


ಗೋಡೆಯನ್ನು ಹಿಡಿದುಕೊಂಡು ಹೊಸ್ತಿಲು ದಾಟಿಕೊಂಡು


ಜಾಯಿಲ ಬಂಗೇತಿ ಹೋಗುವಾಗ


ಕಯಯ ಅಂದವನ್ನು ನೋಡುವರು ಬಂಗೇರರು


ಕೈಗೆ ಚಲಕಿಯನ್ನು ಮಾಡಿಸಿದರು


ನಡುವಿನ ಅಂದವನ್ನು ನೋಡಿದರು ಬಂಗೇರರು


ಬಂಗಾರಿನ ನೇವಳ ಇನ್ನು ಮಾಡಿಸಿದರು


ಚಿಕ್ಕವಳು ಹೋಗಿ ಆರು ಮೂರು ವರ್ಷದ


ಮಗಳು ಆಗಿಕೊಂಡು ಬರುವಾಗ


ಯಾರಮ್ಮ ಬಂಗೇತಿ ಜಾಯಿಲ ಬಂಗೇತಿ


ಗೆರಡೆ ಚಿಲ್ಲಿಯಲ್ಲಿ ಆಟುವಾಡುವುದು ಅಲ್ಲ ಮಗ


ಒಳಗಿನ ಹೊರಗಿನ ಕೆಲಸಗಳನ್ನು ಕಲಿಯಬೇಕು


ಮಾವ ಬಂಗೇರರು ಹೇಳುವರು 


 ಅಷ್ಟು ಮಾತು ಕೇಳುವಳು ಮಗಳು


ಗೆರಟೆಯನ್ನು ಆ ಕಡೆಗೆ ಬಿಸಾಡುವಳು


ಒಳಗಿನ ಸೂತ್ರಕ್ಕೆ ಹೋಗುವಳೆ ಮಗಳು


ಹಿಡಿಸೂಡಿ ಹಿಡಿವಳು ಚಾವಡಿ ನಡುವಿನಲ್ಲಿ


ಒಮ್ಮೆಗೆ ಇನ್ನು ಬೇಗ ಗುಡಿಸುವಳು


ಗಿಡ್ಡ ಹಿಡಿಸುಡಿ ಹಿಡಿವಳು ಅಂಗಳದ ತುದಿ ಗುಡಿಸಿದಳು


ಜಾಯಿಲ ಬಂಗೇತಿ ಇನ್ನು ಬೇಗ


ಆ ದಿನ ಹೋಗಿ ಬಂಗೇತಿಗೆ


ಮರುದಿನ ಇನ್ನೊಂದು ದಿನದಲ್ಲಿ ಬಂಗೇತಿ


ಬೆಳ್ಳಿಗೆ ಬೇಗನೆ ಏಳುವಳು ಮಗಳು


ಮಲಗಿದ ಚಾಪೆಯನ್ನು ಮಡಿಚಿದಳು ಮಗಳು


ತಲೆಯನ್ನು ಕೊಡವಿಕೊಂಡು ಕಟ್ಟುವಳು


ಡೆನ್ನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಯ


ಬೆಳಗಿನ ಕಾಲದಲ್ಲಿ ಏಳುವಳು ಮಗಳು


ಮಲಗಿದ ಚಾಪೆಯನ್ನು ಮಡಿಚಿದಳು ಮಗಳು


ಒಲಗಿನ ಸೂತ್ರಕ್ಕೆ ಹೋಗುವಳುಯಾ


ತಾಮ್ರದ ಸೌಟು ಹಿಡಿದಳು ಮಗಳು


ಒಲೆಯ ಬೂದಿಯನ್ನು ಗೋರುವಳು


ಒಲೆಯ ಬೂದಿಯನ್ನು ತೆಗೆದು ಮಗಳು


ಹಟ್ಟಿಯ ಕೋಣೆಗೆ ಹೋಗುವಳು


ಮುದ್ದಿನ ಕರುಗಳ ಹಸಿರು ಸೆಗಣಿಯನ್ನು


ತಂದಳು ಮಗಳು ಒಳಗಿನ ಸೂತ್ರಕ್ಕೆ


ಬರುವಳು ಮಗಳು ಜಾಯಿಲ ಬಂಗೇತಿ


ಉಗುರಿನಲ್ಲಿ ಸೆಗಣಿ ಚಿಮುಕಿಸಿದಳು ಮಗಳು


ಒಳಗೆ ಶುದ್ಧದ ಮುದ್ರಿಕೆ ಮಾಡಿದಳು 


 ಅಡುಗೆ ತಿಂಡಿ ಮಾಡಿದಳು


ಉಪ್ಪು ಸೇರಿಸಿ ಮೂರು ವಿಧ ಸಾಂಬಾರು


ತೆಂಗಿನ ಕಾಯಿ ಸೇರಿ ಸಾವಿರ ಬಗೆ ಸಾಂಬಾರು


ಅಡುಗೆ ತಿಂಡಿ ಕಲಿತಳು ಮಗಳು


ಮಗಳು ಜಾಯಿಲ ಬಂಗೇತಿ ಕಲಿತಳು 


 ಆ ದಿನ ಕಳೆದು ಮಗಳು


ಮರುದಿನ ಇನ್ನೊಂದು ದಿನದಲ್ಲಿ ಮಗಳು


ಬೆಳಗ್ಗಿನ ಜಾವದಲ್ಲಿ ಎದ್ದಳು ಮಗಳು


ತಾಮ್ರದ ಗಿಂಡಿಯನ್ನು ಹಿಡಿದುಕೊಂಡು ಮಗಳು


ಹಟ್ಟಯಿರುವಲ್ಲಿಗೆ ಹೋಗುವಳು 


 ಹಟ್ಟಯಿರುವಲ್ಲಿಗೆ ಹೋಗಿ ಮಗಳು


ಕರುವನ್ನು ಒಮ್ಮೆ ಕಟ್ಟಿ ಎರಡು ಬಾರಿ ಬಿಡುವಳು


ಎರಡು ಬಾರಿ ಬಿಟ್ಟು ಒಮ್ಮೆ ಕಟ್ಟುವಳು


ಒಂದು ಗಿಂಡಿ ಹಾಲನ್ನು ಕರೆದರು


ಎದ್ದ ಮಗಳು ಗಿಂಡಿಯ ಹಾಲನ್ನು


ಬೈಪಣೆಯಲ್ಲಿ ಇಡುವಳು ಹಟ್ಟಿಯಲ್ಲಿ


ಗೋಡೆಯನ್ನೆ ಚಿವುಟಿಕೊಂಡು ನಿಲ್ಲುವಳು ಮಗಳು


ಕಣ್ಣಿನಲ್ಲಿ ಕಡು ದುಃಖ ತೆಗೆಯುವಳು ಮಗಳು


ಹೊಟ್ಟೆಯಲ್ಲಿ ಕಾವೇರಿ ಮಾಡುವಳು ಮಗಳು


ಹಟ್ಟಿಯ ಹಿಂದೆ ನಿಂತು 


 ಕಾಲ್ಬೆರಳ ತುದಿಯಲ್ಲಿ ಮಣ್ಣನ್ನು ಕೆದರುವಾಗ


ಅತ್ತೆಯವರು ಹೆಂಗಸು ಬಂದು ಕೇಳುವರು


ಯಾರು ಮಗ ಜಾಯಿಲ ಬಂಗೇತಿ ಕೇಳಿದಿರ


ಯಾಕೆ ಹಾಲನ್ನು ತಂದು ಕೊಡಲಿಲ್ಲ ಎಂದು ಹೇಳಿ


ಹಟ್ಟಿಯ ಒಳಗೆ ಬಂದಾಗ ಅಲ್ಲಿ


ಜಾಯಿಲ ಬಂಗೇತಿ ಮದುಮಗಳು ಆಗಿದ್ದಾಳೆ


ಮದಿ ಮುಟ್ಟು ಆಗಿದ್ದಾಳೆಂದು ಗೊತ್ತಾಯಿತು ಅತ್ತೆಗೆ


ಯಾರಯ್ಯ ಮದುಮಗ ನಿಮ್ಮ ಸೊಸೆ


ಮಂಗಳವಾರ ಅಮವಾಸ್ಯೆಯ ಫಲದಲ್ಲಿ


ಮದುಮಗಳು ಆಗಿದ್ದಾಲೆ ಮದಿಮುಟ್ಟು ಹೋಗಿದ್ದಾಳೆ


ಅವಳನ್ನು ಈ ಒಂದು ಮನೆಯಲ್ಲಿ ಇಟ್ಟರೆ


ಹಾರೆ ಗುದ್ದಲಿ ಬೀಳುತ್ತದೆ ಮದುಮಗ


ನೆಕ್ಕಿ ಹರಿವೆ ಹುಟ್ಟಿ ಹೋಗುವುದು


ಹೇಳುವಳು ಅತ್ತೆ ಹೆಣ್ಣು ಹೆಂಗಸು ಹೇಳುವಾಗ


ತೂಗುವ ಉಯ್ಯಾಳೆಯಲ್ಲಿ ಕುಳಿತ್ತಿದ್ದಾರೆ ಮಾವ ಕಣ್ಣಿನಲ್ಲಿ ಕಡು ದುಃಖ


ಹೊಟ್ಟೆಯಲ್ಲಿ ಕಾವೇರಿ 


 ಮಾವ ದುಃಖಿಸಿದರು


ಏನು ಮಾಡುವುದೆಂದು ಹೇಳುವರು


ಹಟ್ಟಿಯಲ್ಲಿ ಮೂಲೆಯಲ್ಲಿ ನಿಂತು ಕೇಳುವಳು


ಮಂಗಳವಾರದಲ್ಲಿ ಅಮವಾಸ್ಯೆ ಫಲದಲ್ಲಿ


ಮದುಮಗಳು ಆದ ಹೆಣ್ಣನ್ನು ಮನೆಯಲ್ಲಿ


ಇಡಲು ಬಾರದೆಂದು ಶಾಸ್ತ್ರದಲ್ಲಿ ಹೇಳಿದೆಯೆಂದು


ಅತ್ತೆಯವರು ಹೇಳಿದ ಮಾತು 


 ಗಂಟಲಿನಲ್ಲಾಗುವ ಮೊದಲು ಅತ್ತೆಯವರು


ಪಾತ್ರೆ ಹಿಡಿಯುವ ಕೈ ಬಟ್ಟೆ ಹೆಕ್ಕಿದರು ಅತ್ತೆ


ಒಂದು ಕಟ್ಟು ಮಾಡಿ ತೆಗೆದುಕೊಂಡು


ಹೊಗೆ ಮಗಳಿಗೆ ಬಿಸಾಡುವರು


ಅದನ್ನು ತೆಗೆದುಕೊಂಡು ಕೇಳುವಳು ಮಗ


ಜಾಯಿಲ ಬಂಗೇತಿ ಕೇಳುವಳು  


ನನ್ನ ತಾಯಿಯವರ ಪಟ್ಟೆ ಸೀರೆ


ಹಳತು ಇದ್ದರೆ ಕೊಡಿ ಅತ್ತೆಯವರೆ 


 ಯಾರಯ್ಯ ಮಾವನವರೆ ಕೇಳಿರಿ


ನನ್ನ ಮುಖವನ್ನು ನೋಡಿ ಮಾವನವರೇ


ಮೂವತ್ತು ದಿನದ ಮಗಳನ್ನು ತಂದು


ಸಾಕಿ ಸಲಹಿ ದೊಡ್ಡಮಾಡಿದ ಮಾವ


ಇಂದಿಗೆ ನಾನಾದರೆ ನನಗೊಂದು ಮಾತು


ಹೇಳಿರಿ ಎಂದಳು ಮಗಳು 


 ಜಾಯಿಲ ಬಂಗೇತಿ ಹೇಳುವಾಗ


ತಲೆ ಎತ್ತಿ ನೋಡುವುದಿಲ್ಲ ಮಾವ

© ಡಾ.ಲಕ್ಷ್ಮೀ ಜಿ ಪ್ರಸಾದ್

ಹೊಟ್ಟೆಯಲ್ಲಿ ಕಾವೇರಿ ಕಣ್ಣಿನಲ್ಲಿ ಕಡೆ ದುಃಖ


ತೆಗೆದರು ಮಾವನವರು ಕೋಣೆಯಲ್ಲಿ 


 ಕವುಚಿ ಮಲಗಿ ಅಳುತ್ತಾರೆ


ಯಾರಯ್ಯ ಅತ್ತೆಯವರೇ ಕೇಳಿರಿ 


 ನಾನು ಹೋಗುವೆ ಕೆಟ್ಟವನಿಗೆ


ತೆಂಕು ರಾಜ್ಯ ಬಾಳುವವನಿಗೆ 


 ಬಡಗು ರಾಜ್ಯವಿದೆ ಬೇಡುವವನಿಗೆ


ಭಿಕ್ಷೆಯನ್ನು ಕೊಡುವ ಜನರು ಇದ್ದಾರೆ


ನಾನು ಹೋಗುವೆ ಅರಸು ಬಲ್ಲಾಳರ 


ಅಂಗಳವನ್ನು ಗುಡಿಸಿಕೊಂಡು


ನನ್ನೊಂದು ಹೊಟ್ಟೆಯನ್ನು ತುಂಬಿಸಿಕೊಂಡು


 ಇರುವೆನೆಂದು ಹೇಳುವಳು


ಮಗಳು ಜಾಯಿಲ ಬಂಗೇತಿ ಪಂಡಾಳುಯಾ


ಕನರಾಯ ಬೀಡಿನಿಂದ ಇಳಿದಳು ಮಗಳು


ಕಂಬಳದ ಕಟ್ಟ ಹುಣಿಯಲ್ಲಿ ಹೋಗುವಾಗ


ಕನರಾಯ ಬೀಡಿನಿಂದ ಇಳಿದ ಮಗಳು


ಜತುರಂದ ಬೀಡಿಗೆ ಹೋಗುವಾಗ ಕಾಣಿಸುತ್ತದೆ


ಜತುರಂದ ಬೈಲಿನ ಪದುಮೂಜಿ ಕಟ್ಟೆ


ಗೆಂದಾಳಿ ತೆಂಗಿನ ಬುಡದಲ್ಲಿ ಕುಳಿತಳು


ಬಾಯಾರಿಕೆ ತಡೆಯಲು ಆಗದೆ 


 ತಲೆಯನ್ನೆ ಕೆಳಗೆ ಹಾಕಿ ಕುಳಿತಿದ್ದಾಳೆ


ಜತುರಂದ ಬೀಡಿನ ಕಟ್ಟೆಯಲ್ಲಿ 


 ಜತುರಂದ ಬೀಡಿನ ಅರಸು ಬಲ್ಲಾಳರ


ಕೆಲಸದವರು ನೋಡುವಾಗ ಮೂಡುದಿಕ್ಕಿನಿಂದ


ಸೂರ್ಯನೆ ಉದಯಿಸಿದ ಹಾಗೆ ಕಾಣುತ್ತದೆ


ಒಂದು ದೇವರು ಉದಿಸಿ ಬಂದರು 


 ಯಾರಪ್ಪ ಬಂದದ್ದೆಂದು ಓಡೋಡಿ


ಹೋಗುವರು ಹೆಂಗಸರು ಜರುತಂದ ಬೀಡಿಗೆ


ಯಾರಮ್ಮ ತಾಯಿ ಜತುರಮ್ಮ ಕೇಳದಿರ


ನಮ್ಮ ಒಂದು ಕಟ್ಟೆಯಲ್ಲಿ ಒಂದು ಹೆಣ್ಣು ಮಗಳು


ಯಾರೆಂದು ಗೊತ್ತಿಲ್ಲ ತಲೆಗೆ ಮುಸುಕನ್ನೆ ಹಾಕಿ


ಪಟ್ಟೆಯನ್ನು ಸುತ್ತಿಕೊಂಡು ಹಸಿವು ಬಾಯಾರಿಕೆಯಲ್ಲಿ


ಬಳಲಿಕೊಂಡು ಇದ್ದಾಳೆ ಎಂದು ಹೇಳುವರು ಹೆಂಗಸರು


ಅರಮನೆಯ ಹೆಂಗಸರು ಹೇಳುವಾಗ


ಉಪ್ಪರಿಗೆಯ ಮೇಲೆ ಇದ್ದರು ಹೆಂಗಸು


ಇಳಿದುಕೊಂಡು ಕಂಬಳದ ಕಟ್ಟ ಹುಣಿಯಲ್ಲಿ ಬರುವಾಗ


ಗೆಂದಾಳಿಯ ತೆಂಗಿನ ಕಟ್ಟೆಯಲ್ಲಿ ಕುಳಿತು


ತಲೆಗೆ ಪಟ್ಟೆಯನ್ನು ಸುತ್ತಿದ ಹೆಂಗಸು


ಮೂಡುದಿಕ್ಕಿನ ಸೂರ್ಯ ಉದಯಿಸಿದಂತೆ ಕಾಣುತ್ತದೆ


ಯಾರಮ್ಮ ಬಂದದ್ದು ದೇವಲೋಕದ ಹೆಣ್ಣೇ ಎಂದು 


ದೇವತೆ ಭೂಮಿಗೆ ಬಂದಂತೆ ಆಗುತ್ತದೆ


ಓಡಿಕೊಂಡು ವೇಗವಾಗಿ ಬರುತ್ತಾರೆ


ಯಾರಮ್ಮ ಮಗಳೆ ಎಲ್ಲಿಂದ ಬಂದದ್ದು


ಎಲ್ಲಿಗೆ ಹೋಗುವವಳೆಂದು ಕೇಳುವರು ಹೆಂಗಸು


ಊರು ದುಂಡಗಿದೆ ನಾನು ಹೋಗುವೆ


ಬಿಸಿಲಿಗೆ ಬಾಯಾರಿಕೆ ಕಳೆಯಲು ಕುಳಿತೆ


ಹೇಳಿದಳು ಜಾಯಿಲ ಬಂಗೇತಿ ಹೇಳಿದಳು


ಬಾಳುವವನಿಗೆ ಬಡೆಕ್ಕಾಯಿ ರಾಜ್ಯವಿದೆ


ಅರಸು ಬಲ್ಲಾಳರ ಅಂಗಳ ಗುಡಿಸಿ


ಹೊಟ್ಟೆಯ ಹಸಿವನ್ನು ನೀಗುತ್ತ ಇರುವೆನೆಂದು ಹೇಳಿದಳು


ಮಗಳು ಜಾಯಿಲ ಬಂಗೇತಿ ಹೇಳುವಾಗ


ಎಲ್ಲಿಗೆ ಹೋಗುವೆಯಮ್ಮ ಹೆಣ್ಣು ನೀನು ಬಾ


ನಾನು ಒಂದು ಅರಮನೆ ಇದೆ ನನ್ನ ಹತ್ತಿರ


ನಾನು ಕರೆದರೆ ಬರುವಿಯಾ ಕೇಳಿದರು


ಜತುರಂದ ಹೆಂಗಸು ಕೇಳುವಾಗ


ಆಯಿತೆಂದು ಹೇಳಿದಾಗ ಕರೆದುಕೊಂಡು ಹೋಗುವರು


ತನ್ನ ಅರಮನೆ ಹೆಂಗಸರ ಹತ್ತಿರ ಹೇಳಿದರು


ಎಣ್ಣೆಯ ಪಾತ್ರೆ ಕೊಟ್ಟರು ಪೊಣ್ಜೋವು


ಬಿಸಿನೀರು ತಣ್ಣೀರು ಕಾಯಿಸಿ ಎಂದರು


ಅವಳನ್ನು ಸ್ನಾನ ಮಾಡಿಸಿ ಒಳಗೆ ಕರೆದುಕೊಂಡು


ಬನ್ನಿ ಎಂದು ಹೇಳಿದರು ಜತುರಂದ ಹೆಂಗಸು


ಅವರ ಮಗ ಇದ್ದಾನೆ ಕುಮಾರ 


 ಬೊಳ್ಳಿಲ್ಲ ಕುಮಾರ ಇದ್ದಾರೆ


ಕಲಿಯಲು ಶಾಲೆಗೆ ಹೋದವನು ಕುಮಾರ


ಊರು ಸುತ್ತಿ ಮನೆಗೆ ಬಂದಾಗ 


 ಏನೊಂದು ಕಲಿಗಾಲ ಕಾಣಿಸುತ್ತದೆ


ಅರಮನೆಯ ಹೆಂಗಸರ ಹತ್ತಿರ ಕೇಳಿದನೆ ಕುಮಾರ


ಕೆಲಸದ ಆಳುಗಳ ಹತ್ತಿರ ಕೇಳಿದ


ಯಾರಮ್ಮ ಬಂದದ್ದು ಕುಮಾರ ಕೇಳಿದಾಗ


ನನ್ನ ದೂರದ ಸಂಬಂಧಿ ಹೆಣ್ಣು ಮಗಳು


ನನ್ನ ತಮ್ಮನ ಮಗಳು ಎಂದು ಹೇಳಿದರು


ಜತುರಂದ ಹೆಂಗಸು ಕೇಳಿದಾಗ


ನನಗೊಮ್ಮೆ ನೋಡಬೇಕು ತಾಯಿಯವರೆ ಕೇಳಿ


ನನ್ನ ಹತ್ತಿರ ಒಮ್ಮೆ ಮಾತಾಡಬೇಕು ಹೇಳಿದನು


ಆ ದಿನ ಹೋಗುತ್ತದೆ ಮಗಳಿಗೆ


ಮರುದಿನ ಇನ್ನೊಂದು ದಿನದಲ್ಲಿ ಹುಡುಗಿ ಅವಳು


ಓಯೇಯೇ ಹೆಂಗಸೆ ನನಗೆ ಕೂಡ ಏನಾದರೊಂದು


ಕೆಲಸವನ್ನು ಕೊಡಿ ಎಂದು ಕೇಳುವಾಗ


ಯಾರಮ್ಮ ಬಂಗೇತಿ ಜಾಯಿಲ ಬಂಗೇತಿ


ನಿನಗಾದರೆ ಕೆಲಸವನ್ನು ನಾನು ಹೇಳುವುದಿಲ್ಲ


ಹೇಳಿದರು ಜತುರಂದ ಹೆಂಗಸು 


 ನನ್ನ ಮಗ ಇದ್ದಾನೆ ಮಗ ಕುಮಾರ


ಬೊಳ್ಳಿಲ್ಲ ಕುಮಾರ ಇದ್ದಾರೆಂದು ಹೇಳುವರು


ಅವನಿಗೊಂದು ದಿನವಾದರೂ ಮಾತಾಡಲು ಇದೆ ಎಂದು


ಜತುರಂದ ಹೆಂಗಸು ಹೇಳುವರು


ಡೆನ್ನ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ


ಕನರಾಯ ಬೂಡುಡ್ದು ಇಳಿದಳು ಮಗಳು 


 ಜಾಯಿಲ ಬಂಗೇತಿ ಹೋದವಳು


ಜತುರಂದ ಬೀಡಿನ ಬೊಳ್ಳಿಲ್ಲ ಕುಮಾರನನ್ನು


ಮದುವೆ ಆಗಿ ಭಾರಿ ಸಂತೋಷದಲ್ಲಿ


ಇರುವಳು ಮಗಳು ಜಾಯಿಲ ಬಂಗೇತಿ

© ಡಾ.ಲಕ್ಷ್ಮೀ ಜಿ ಪ್ರಸಾದ್













5. ಕರಿಯ ಕನ್ಯಾ ಮದನು




ಡೆನ್ನ ಡೆನ್ನ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ


ಏಳು ಜನ ಕಬೇರರು1 


 ಏಳು ಜನ ಕಬೇರರಿಗೆ


ಒಬ್ಬಳೇ ಅವಳು ತಂಗಿಯಂತಯೆ 


 ಕರಿಯ ಕನ್ಯಾ ಮದನು


ಯಾರಮ್ಮ ಮದನು ಯಾರು ಮಗ ಮದನು


ಒಂದೆರಡು ಬಂಗಾರವಲ್ಲ ಸಾವಿರ ಗಟ್ಟಲೆ ಬಂಗಾರ


ಬೇರೆ ಒಡವೆ ಬೇಕೆ ಏನು ಬೇಕೆಂದು ಕೇಳಿದರು


ತಂದೆ ತಾಯಿ ಇಲ್ಲದ ಮಗುವನ್ನು


ಬಾರಿ ಕೊಂಡಾಟದಿಂದ ಸಾಕಿದ್ದಾರೆ 


 ಏಳು ಜನ ಕಬೇರುರ


ಡೆನ್ನ ಡೆನ್ನ ಡೆನ್ನಾನಾ ಓಯೆ ಓಯೇ ಡೆನ್ನ ಡೆನ್ನ ಡೆನ್ನಾನಾ


ಏಳು ಜನ ಕಬೇರರು ಏಳು ಏಳು ವಿಧ


ಬಂಗಾರು ಹಾಕಿ ಮತ್ತೂ ಕೇಳುವರು 


 ಅಣ್ಣಂದಿರು ಏಳು ಜನ ಕಬೇರರು


ಏನೆಲ್ಲ ತಂದಿದ್ದೀರಿ ಅಣ್ಣ ನನಗೇನೂ ಆಸೆ ಇಲ್ಲ


ಚೊಚ್ಚಿಲ ಬಸುರಿ ಆದ ಕರಿಯ ಕನ್ಯಾ ಮದನು


ಅಣ್ಣಂದಿರನ್ನು ಕರೆದು ಹೇಳುವಳು 


 ತಲೆಗೂದಲಿಗೆ ಮುತ್ತು ಪೋಣಿಸಬೇಕು


ಎಂದು ಆಸೆ ಇದೆ ಎಂದು ಹೇಳುವಳಪ್ಪ 


 ಕರಿಯ ಕನ್ಯಾ ಮದನು


ಯಾರಪ್ಪ ಅಣ್ಣಂದಿರಿ ನಿನ್ನ ಅತ್ತಿಗೆಯಂದಿರು ಇದ್ದಾರಲ್ಲ


ಮಗಳೆ ಕೇಳು ಅವರ್ಹೇಗೆ ನೋಡುವರು ನಿನ್ನನ್ನು


ಅವರ್ಹೇಗೆ ನೋಡುವರು ನಿನ್ನನ್ನು ಹಾಗೆಯೇ ನೋಡು ಎಂದು


ಹೇಳಿ ಏಳು ಕಡಲಿನ ಹೊರಗೆ ಹೋಗುವರು


ಏಳು ಜನ ಕಬೇರರು 


 ಮುತ್ತನ್ನು ತಂದರು ಏಳು ಜನ ಕಬೇರರು


ಮುತ್ತನ್ನು ಪೋಣಿಸಿದರು ಏಳು ಜನ


ಒಂದು ತಲೆ ಕೂದಲಿಗೆ ಒಂದು ಮುತ್ತಿನಂತೆ


ಏಳು ಜನ ಪೋಣಿಸಿದಾಗ ತಲೆ ತುಂಬ ಮುತ್ತು ಆಯಿತು


ಬಯಕೆ ಸಮ್ಮಾನ ಆಗಿ ಹೊಳೆಯನ್ನು ದಾಟಿ


ಹೋಗಬೇಕು ಮಗಳನ್ನು ಕರೆದುಕೊಂಡು ಆ ಕಾಲದಲ್ಲಿ


ಒಂದು ಹೊಳೆಯನ್ನು ದಾಟಿ ಆದಾಗ 


 ಕದ್ರಿಗೆ ಬಂದು ಮುಟ್ಟುತ್ತದೆ


ಆ ಹೊತ್ತಿಗೆ ಯಾರಮ್ಮ ತಂಗಿ 


 ನೀರು ಬಾಯಾರಿಕೆಗೆ ಕುಡಿಯಮ್ಮ


ಹಸಿವಿಗೆ ಊಟ ಮಾಡಬೇಕು 


 ಏನು ನಾವು ಮಾಡುವುದೆಂದು ಹೇಳಿದರು


ಅಣ್ಣಂದಿರು ಏಳು ಜನ ಕಬೇರರು 


 ಆ ಹೊತ್ತಿಗೆ ಅತ್ತಿತ್ತ ನೋಡುವರು


ಒಬ್ಬ ಹೊಗಿ ಅಕ್ಕಿ ತರುತ್ತಾನೆ 


 ಒಬ್ಬ ಹೋಗಿ ಬೆಂಕಿ ತರುತ್ತಾನೆ


ಒಬ್ಬ ಹಓಗಿ ನೀರು ತರುತ್ತಾನೆ 


 ಏಳು ಜನ ಸೇರಿ ಏಳು ವಸ್ತು ತಂದರು


ಒಂದು ಗೋಳಿ ಮರದ ಬುಡದಲ್ಲಿ 


 ಒಂದು ಕಲ್ಲಿನ ಒಲೆಯನ್ನು ನೋಡಿ


ಮೂರು ಕಲ್ಲು ಜೋಡಿಸಿ ಇಟ್ಟು 


 ಒಂದು ಸೇರು ಅಕ್ಕಿ ಬೇಯಲು ಇಟ್ಟು


ಬೇಯಿಸಿ ಚಟ್ನಿಯನ್ನು ಅರೆದು 


 ನಾವು ಕದಿರೆಯ ನಾವು ಕೆರೆಗೆ ಹೋಗಿ


ಸ್ನಾನ ಮಾಡಿ ಬರುವೆವು ತಂಗಿ ಎಂದು


ಹೇಳಿದರಪ್ಪ ಕಬೇರರು ಏಳು ಜನ ಕಬೇರರು


ಆ ಹೊತ್ತಿಗೆ ನೀರಿಗೆ ಹೋಗಿ ಇನ್ನು


ಕದಿರೆಯ ಏಳು ಕೆರೆಯಲ್ಲಿ ಸ್ನಾನ ಮಾಡಿ


ಶುದ್ಧ ಮುದ್ರಿಕೆಯಾಗಿ ನಾವು ಊರಿಗೆ ಹೋಗೋಣ


ತಂಗಿಯ ಹೆರಿಗೆ ಸುಸೂತ್ರವಾಗಿ 


 ಸುಖವಾಗಿರಲೆಂದು ನೆನೆಸಿಕೊಂಡು


ಹಣ್ಣುಕಾಯಿ ಮಾಡಿಸಿ ಬರುವ ಎಂದು


ಹೋಗುವರಪ್ಪ ಕಬೇರರು ಏಳು ಜನ ಅಣ್ಣಂದಿರು


ಹೋಗುವಾಗ ಕಾಣುತ್ತದೆಯಲ್ಲಿ ತೆಂಗಿನ ತೆಪ್ಪಂಗಾಯ


ಅಡಕೆಯ ಜೂಜು ಗುಬ್ಬಿಗಳ ನಾಟಕ


ವೇಶ್ಯೆಯರ ಮೇಳ ಉಂಟಂತೆ ಅದನ್ನು ಹೀಗೆ ನೋಡುವಾಗ


ಗಂಡಸರು ಹೋಗುವ ಜಾಗವೆಂದು ಹೋಗುವರಪ್ಪಾ


ಅಣ್ಣಂದಿರು ಏಳು ಜನ ಕಬೇರರು 


 ಅಷ್ಟು ಮಾತು ಕೇಳುವರು ಅಣ್ಣಂದಿರು


ನಾವು ಗಂಡು ಗಂಡಸರಲ್ವ ಹೋಗುವ


ತಮ್ಮಂದಿರೆ ಎಂದು ತೆಂಗಿನ ಕಆಯಿ ತೆಪ್ಪಂಗಾಯಿ


ಅದರಲ್ಲಿಯೂ ಮೇಲಾದರು ಅಡಿಕೆಯ ಜೂಜಿಗೆ


ಹೋದರು ಅದರಲ್ಲಿಯೂ ಗೆಲುವನ್ನು ಪಡೆದರು


ವೇಶ್ಯೆಯರ ಮೇಳಕ್ಕೆ ಹೋದರು


ಅದರಲ್ಲಿಯೂ ಅವರದೇ ಮೇಲುಗೈ ಆಯಿತು


ಗುಬ್ಬಿಗಲ ನಾಟಕಕ್ಕೆ ಹೋದರು 


 ಅದರಲ್ಲಿಯೂ ಗೆಲುವನ್ನು ಪಡೆದರು


ಯಾರಯ್ಯ ಅವರು ಏಳುಜನ ಹುಡುಗರೆಂದು


ಕೇಳಿದರು ಬಂಗೇರರು ಕದಿರೆಯ ಬಂಗೇರರು


ಕೆಲಸದವರನ್ನು ಸಿಪಾಯಿಗಳನ್ನು ಕರೆಸಿದರು


ಅವರನ್ನು ಕೈಕಾಲು ಕಟ್ಟಿ ಹಾಕಿರಿ


ಅವರನ್ನು ಕೊಂಡು ಹೋಗಿ ನೀವು ಸೆರೆಮನೆಯಲ್ಲಿಡಿ


ಎಂದು ಹೇಳಿದರು ಕದಿರೆಯ ಬಂಗೇರರು


ಕೈ ಕಾಲನ್ನು ಕಟ್ಟಿ ಸಂಕೋಲೆ ಬಿಗಿದು


ತೆಗೆದುಕೊಂಡು ಹೊಗಿ ಅವರನ್ನು ಏಳು ಗುಮಡದ


ಒಳಗೆ ಹಾಕುವರು ಏಳುಜನ ಅಣ್ಣಂದಿರನ್ನು


ಕಾದು ಕಾದು ಕತ್ತಲೆ ಆಗುವಾಗ ಅಣ್ಣಂದಿರು


ಕಾಣಿಸುವುದಿಲ್ಲವೆಂದು ಬಹಳ ವೇಸರದಲ್ಲಿ


ಕೆರೆಯ ಬದಿಗೆ ಮಡಲಿನ ಬದಿಯಲ್ಲಿ


ಕದಿರೆಯ ದಾರಿಯಲ್ಲಿ ಬಂತು ನಿಂತಳು


ಯಾರಮ್ಮ ನೀವು ಕೇಳಿರಿ ಎಂದಾಗ 


 ಅಣ್ಣಂದಿರು ಏಳು ಜನ ಕಬೇರರು


ಎಲ್ಲಿಗೆ ಹೋಗುವರೆಂದು ಹೇಳಿದರೆ ಕೇಳುವಾಗ


ತೆಂಗಿನ ತೆಪ್ಪಂಗಾಯ ಅಡಿಕೆಯ ಜೂಜು


ಆಟವನ್ನು ಆಡಿದರು ಅದರಲ್ಲಿ ಎಲ್ಲ ಗೆದ್ದರೆಂದು


ಅವರನ್ನು ಸಂಕೋಲೆ ಬಿಗಿದು ಕತ್ತಲೆಯ


ಮನೆಗೆ ಹಾಕಿದ್ದಾರೆಂದು ಹೇಳುವರು ಹುಡುಗರು


ಅಷ್ಟು ಮಾತನ್ನು ಕೇಳುವಳು


ಅಯ್ಯಯ್ಯೋ ದೇವರೆ ಉಳೊ ಉಳೊ ದೇವರೆ


ಅಳುವಳು ಬಸುರಿ ಹೆಂಗಸು ನಾನು ಎಲ್ಲಿಗೆ


ಹೋಗುವುದೆಂದು ಬಹಳ ದೊಡ್ಡ ಬೇಸರದಲ್ಲಿ


ಬರುವಳು ಮಗಳು ಅವಳು ಕರಿಯ ಕನ್ಯಾ ಮದನು


ಡೆನ್ನಾನಾ ಡೆನ್ನಾನ ಬಂಗೇರೆ ನನ್ನ ಒಂದು ಅಣ್ಣನವರನ್ನು


ಬಿಡಿರಿ ಬಂಗೇರರೆ ನಿಮಗೆ 


 ಏನು ಬೇಕು ನಾವು ಕೊಡುವೆವು ಅಣ್ಣನವರೆಂದು


ಕೈ ಕಾಲು ಹಿಡಿಯುವಳು ಅಡ್ಡ ನೀಟ ಬಿದುದ


ಬಸುರಿ ಹೆಣ್ಣು ಅವಳು ಬೇಡಿಕೊಂಡಳು


ಕರಿಯ ಕನ್ಯಾ ಮದನು 


 ಆ ಹೊತ್ತಿಗೆ ಹೇಳುವರು


ಯಾರಯ್ಯ ಕೆಲಸದವರೆ ಅವಳು ಎಂಥದ್ದು


ಹಕ್ಕಿಯ ಹಾಗೆ ಚೊರೆ ಚೊರೆ ಹೇಳುವುದು


ಕೊರಳಿಗೆ ಕೈ ಹಾಕಿ ನೂಕಿರಿ ಎಂದು ಹೇಳಿದನು


ಅವನು ಕದಿರೆಯ ಬಂಗೇರ


ಅಷ್ಟೊಂದು ಮಾತನ್ನು ಕೇಳಿದಳು ಮಗಳು ಅವಳು


ಯಾರಯ್ಯ ಬಂಗೇರ ಬಿಡುವುದಾದರೆ ಬಿಡು


ಬಿಡದಿದ್ದರೆ ನನ್ನ ಹೊಟ್ಟೆಯಲ್ಲಿರುವ ಮಗುವಾದರು


ನಿನ್ನ ಏಳುಪ್ಪರಿಗೆ ಮನೆಯನ್ನು 


 ಬೀಳಿಸದೆ ಬಿಡಲಾರೆ ಎಂದು


ನನ್ನ ಅಣ್ಣಂದಿರನ್ನು ಬಿಡಿಸಿಕೊಂಡು ಬರುವ


ನನ್ನ ಮಗ ಬಂದು ಎಂದು ಹೇಳಿ


ಮಣ್ಣು ಮುಟ್ಟಿ ಆಣೆ ಕೊಡುವಳು ಮಗಳು


ಅವಳು ಕರಿಯ ಕನ್ಯಾ ಮದನು


ಇಳಿದುಕೊಂಡು ಬಂದು ಆನೆಕಲ್ಲು ಹತ್ತುವಾಗ


ಮೇಲೆ ಮೇಲೆ ನೋವು ಬಂದು ಅಯ್ಯಯ್ಯೋ


ದೇವರೆ ನನ್ನ ಅಣ್ಣನವರು


ಯಾರು ಇಲ್ಲ ಎಲ್ಲಿಗೆ ಹೋಗಲಿ ನಾನು ಎಂದು 


ಒಂದು ಮಡಿಕೆಯಲ್ಲಿ ಅನ್ನ ಬೇಯಿಸಿ


ಗೋಳಿಮರದ ಜಂತಿಗೆ ಕಟ್ಟಿ ಯಾವಾಗ


ನನ್ನ ಅಣ್ಣನವರು ಏಳು ಜನ ಸೇರಿ


ಎಂಟು ಆಗುತ್ತದೆ ನನ್ನ ಹೊಟ್ಟೆಯಲ್ಲಿರುವ ಮಗು ಸೇರಿ


ಒಂಬತ್ತು ಜನ ಸೇರಿ ಊಟ ಮಾಡುವ ಕಾಲದ ತನಕ


ಬಿಸಿಯಾಗಿಯೇ ಇರಬೇಕು ಎಂದು ಜಂತಿಗೆ ಕಟ್ಟಿ


ನಾರಾಯಣ ದೇವರಿಗೆ ಸೂರ್ಯಚಂದ್ರ ದೇವರಿಗೆ


ಆಣೆ ಕಟ್ಟಿ ಇಡುವಳು ಕರಿಯ ಕನ್ಯಾಮದನು


ಡೆನ್ನಾ ಡೆನ್ನಾ ಡೆನ್ನಾನಾಗೆ ಉಡು ಉಡೋ ನೋವು ಬಂದಿತು


ಮುಂಡಿ2ಯ ಬುಡದಲ್ಲಿ ಕುಳಿತು ಕೊಳ್ಳುವಳೆ ಮಗಳೆ


ಮೇಲೆ ಮೇಲೆ ನೋವು ಬಂದು ಗಂಡು ಮಗುವನ್ನು


ಹೆರಿಗೆಯ ನೋವಿನಲ್ಲಿ ಹೆರುವಳಪ್ಪಾ ಮಗಳು


ಒಂದು ತೆಕಲ್ಕಿಯ3 ಎಲೆ ಕೊಂಡು ತಂದು ಮಗುವನ್ನು


ಮಲಗಿಸಿ ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರೆಂದು ಹೇಳಿ


ಕಡಲಿನಲ್ಲಿ ಬಿಡುವಳಪ್ಪ ಕರಿಯ ಕನ್ಯಾಮದನು


ಸುತ್ತಿದ ಸೀರೆ ಹರಿದು ಹೋಗುತ್ತದೆ ತೆಕ್ಕಿಯೆಲೆ ಕಟ್ಟಿಕೊಂಡು


ಸೊಂಟದ ಸುತ್ತ ತೆಕ್ಕಿಯೆಲೆ ಕಟ್ಟಿಕೊಂಡು


ಮಾನವನ್ನು ಮುಚ್ಚಿಕೊಂಡು ಮುಂಡೇವಿನ4 ಪೊದರಿಯಲ್ಲಿ


ಕಾಲವನ್ನು ಕಳೆದುಕೊಂಡು ಇರುವಳು


ಮಗಳು ಕರಿಯ ಕನ್ಯಾಮದನು


ಏಳೇಳು ಹದಿನಾಲ್ಕು ವರ್ಷಗಳು ಹಾಗೆ ಕಾಲ ಕಳೆದು


ಕಾಡಿನಲ್ಲಿ ವಾಸವಾಗಿ ಇರಲು ಒಂದು 


ಕಾಡು ಮನುಷ್ಯ ಉಂಟೆಂದು ಊರು ತುಂಬ


ಸುದ್ದಿ ಆಗಿಕೊಂಡು ಇರುವ ಕಾಲದಲ್ಲಿ


ಮಗುವಿಗೆ ಇಪ್ಪತ್ತು ವರ್ಷ ಪ್ರಾಯ ತುಂಬಿ


ಬರುತ್ತದೆ ಕರಿಯ ಕನ್ಯಾಮದನುವಿನ ಮಗನಿಗೆ


ಊರಿನಲ್ಲಿ ದೊಡ್ಡ ಅರಸುವಿಗೆ ಏಳು ಉಪ್ಪರಿಗೆ


ಮೇಲೆ ಕುಳಿತುಕೊಳ್ಳುವ ಅರಸುವಿಗೆ ಮಕ್ಕಳು


ಇಲ್ಲದೆ ಇರುವ ಕಾಲದಲ್ಲಿ ಮೀನು ಹಿಡಿಯುವ


ಮೀನು ಹಿಡಿಯುವ ಮರಕ್ಕಾಲರ5 ಬಲೆಗೆ ಬಿದ್ದ


ಮಗುವನ್ನು ತೆಗೆದುಕೊಂಡು ಬಾರಿ ಚಂದದಲ್ಲಿ


ಸಾಕಿ ಅರಸುವಿನ ಮನೆಯಲ್ಲಿ ಬಿಡುವರು


ಮರಕ್ಕಾಲರು ಮೀನಿನ ಮರಕ್ಕಾಲರು


ಆ ಹೊತ್ತು ಆಗುವಾಗ ನಂದಾವರದ ಅರಸು


ಕೇಳುವಾಗ ಮಗುವಾದರೂ ದೊಡ್ಡವನಾಗಲು


ಅವನನ್ನು ಕರೆದುಕೊಂಡು ಕಾಡಿಗೆ ಹೋಗುತ್ತಾರೆ


ಕಾಡಿನಲ್ಲಿ ಬೇಟೆಯಾಡುವಾಗ ಒಂದು ಕಾಡು ಮನುಷ್ಯ


ಇದೆ ಎಂದು ಕಾಣಿಸುತ್ತದೆ ಕರಿಯ ಕನ್ಯಾಮದನು


ಅತ್ತಿತ್ತ ನೋಡುವಾಗ ಮಗನನ್ನು ನೋಡುವಾಗ


ಗಂಡನ ನೆನಪಾಗಿ ಸೂರ್ಯಚಂದ್ರ ದೇವರಂತೆ


ಬೆಳೆದ ಮಗ ಯಾರೆಂದು ನೆನೆಯುತ್ತಾಳೆ


ಮಗಳು ಅವಳು ಕರಿಯ ಕನ್ಯಾಮದನು


ಹಿಡಿದ ಬಿಲ್ಲು ಬಾಣವನ್ನು ಕೆಳಗೆ ಹಾಕು ಮಗ


ನಿನ್ನ ತಾಯಿ ಅವಳು ಎಂದು ಮೀನನ್ನು


ಹಿಡಿಯುವ ಮರಕ್ಕಾಲ ಹೇಳುವಾಗ 


 ಭಾರಿ ದೊಡ್ಡ ಆಶ್ಚರ್ಯದಲ್ಲಿ


ಓಡಿ ಬಂದು ಅಪ್ಪಿಕೊಂಡು ಬಂದು ಏನು ಆಯಿತು


ತಾಯಿಯವರೆಂದು ಕೇಳುವಳಪ್ಪ ಮಗ ಅಲ್ಲಿ


ಗಂಡು ಮಗು ಕೇಳುವಾಗ ನೀನು ಯಾರು ಅರಸು ಮಗ


ಇಲ್ಲಿಗೆ ಯಾಕೆ ಬಂದೆ ನಾನು ಯಾರು


ತಾಯಿ ಎಂದು ನಿನಗೆ ಹೇಗೆ ಗೊತ್ತಾಯಿತ್ತೆಂದು


ಕೇಳುವಳು ಕರಿಯ ಕನ್ಯಾಮದನು


ಇಲ್ಲಿ ತಾಯಿಯವರೆ ನೀವು ತೇಲಿ ಬಿಟ್ಟ ನನ್ನನ್ನು


ಮಗುವನ್ನು ತಂದವರು ನಿಮ್ಮನ್ನು ನೋಡಿದ ಜನರು ಹೇಳಿದ್ದಾರೆ


ನಿಮಗೆ ಈ ಕಷ್ಟ ಯಾರಿಂದ ಬಂತೆಂದು ಹೇಳಿರಿ ತಾಯಿ


ಒಂದು ಗಂಟೆ ಹೋಗುವುದರೊಳಗೆ ಏಳು ಗಂಟೆಯ


ಒಳಗೆ ನಾನು ನನ್ನ ಏಳು ಮಾವಂದಿರನ್ನು


ಬಿಡಿಸಿಗೊಂಡು ಬರುವೆನೆಂದು ಹೇಳುವನು


ಗಂಡು ಹುಡುಗ ಹೇಳಿದಾಗ 


 ಯಾರಪ್ಪ ಮಗನೆ ಕುಮಾರ ಈಗ


ಅಷ್ಟು ದೊಡ್ಡ ಅರಮನೆಯನ್ನು 


 ನೀನ್ಹೇಗೆ ಗೆಲ್ಲುವೆ ಎಂದು ಕೇಳಿದಾಗ


ನಾನು ನಿಮಗೆ ಹುಟ್ಟಿದ ಮಗ ಆದರೆ ನೀವು


ಹೆತ್ತ ಮಗ ಆದರೆ ಸೂರ್ಯಚಂದ್ರ ಆಣೆ ಇಟ್ಟು


ನನ್ನನ್ನು ನೀರಿಗೆ ಬಿಡುವಾಗ ನನಗೆ ಸತ್ಯದ


ಕಳೆ ಉಂಟಾಯಿತು ತಾಯಿಯವರೆ ಕದಿರೆಯ ಆನೆಯನ್ನು


ಹತ್ತುವ ಎಂದು ಹೇಳುವನು ಮಗ


ಯಾರಯ್ಯ ಬಂಗೇರ ಆವತ್ತಿನ ಕಾಲದಲ್ಲಿ


ನನ್ನ ಅಣ್ಣಂದಿರನ್ನು ಕತ್ತಲೆಯ ಮನೆಯಲ್ಲಿ


ಸಂಕೋಲೆಯಲ್ಲಿ ಸುತ್ತಿ ಕುಳ್ಳಿರಿಸಿದೆಯಲ್ಲ


ಈವತ್ತಾದರೂ ಬಿಡು ಎಂದು ಹೇಳುವಾಗ


ಹೋಗಿತ್ತೀಯಾ ಇಲ್ವ ನಿನ್ನನ್ನು ಕೈ ಕಾಲು ಕಟ್ಟಿ ಹಾಕಬೇಕೆ ಎಂದು


ಕೇಳುತ್ತಾನೆ ಅವನು ಕದಿರೆಯ ಬಂಗೇರ


ಆ ಹೊತ್ತು ಆಗುವಾಗ ಉಪ್ಪರಿಗೆಯನ್ನು ಹೊತ್ತಿಸಿ


ಮಾಳಿಗೆಯ ಮನೆಗೆ ಬರುವಾಗ 


 ಏಳು ಮಾಳಿಗೆ ಉರಿದು ಭಸ್ಮವಾಯಿತು


ಏಳು ಜನ ಮಾವಂದಿರನ್ನು ಬಿಡಿಸಿಕೊಂಡು ಬರುವನೆ ಮಗ


ಒಬ್ಬ ಮಗ ಕುಮಾರ ಕರಿಯ ಕನ್ಯಾ ಮದನುವಿನ


ಯಾರಮ್ಮಾ ಮದನು ಇದು ಯಾರು ಹುಡುಗನೆಂದು


ಕೇಳುವಾಗ ನಿಮ್ಮ ಅಳಿಯ ಅಣ್ಣಂದಿರೆ ಇಷ್ಟು ವರ್ಷ ಎಲ್ಲೋ


ಹುಟ್ಟಿ ಎಲ್ಲೋ ಬೆಳೆದು ರಾಜನ ಮಗ ಆಗಿದ್ದ


ಇವತ್ತು ಆಗುವಾಗ ನನ್ನ ಮಗ ಕುಮಾರ ಎಂದು ಗೊತ್ತಾಯಿತು


ಇನ್ನು ನಾವು ಹೋಗಿ ಅಂದು ಮಾಡಿದ ಊಟ ಮಾಡುವ


ಅದನ್ನು ಊಟ ಮಾಡಿ ಕಬೇರಂದ ಊರಿಗೆ


ಹೋಗುವ ಎಂದು ಹೇಳುವರಪ್ಪ ಕಬೇರರು


ಏಳು ಜನ ಕಬೇರರು ಕರಿಯ ಕನ್ಯಾ ಮದನು


6. ನಾಗಸಿರಿ ಕನ್ಯಗೆ


ಡೆನ್ನ ಡೆನ್ನ ಡೆನ್ನಾನಾ ಓಯೋ ಡೆನ್ನಾ ಡೆನ್ನಾನ


ಆಟಕ್ಕೆ ಹೋಗುವುದಿಲ್ಲ ರಾಜ 


 ಕೂಟಕ್ಕೂ ಹೋಗುವುದಿಲ್ಲ ರಾಜ


ನೇಮ ನಿರಿಗು ಹೋಗುವುದಿಲ್ಲವಂತೆ


ಸತ್ಯದ ಕನ್ಯಗೆಯನ್ನು ಮದುವೆ ಆಗಿ 


 ಸತ್ಯದಲ್ಲಿದ್ದಾರೆ ನಾಗ ಬಾರಿ ರಾಜ


ಅಷ್ಟು ಎಲ್ಲ ಸುದ್ದಿಯನ್ನಾದರೂ ಕೇಳಿದರವರು


ದೇವರವರು ಮೇಲಿನ ಮಿರಿ ಲೋಕದಲ್ಲಿ 


 ಶ್ರೀಕೃಷ್ಣ ದೇವರು


ಯಾರಯ್ಯ ಮಕ್ಕಳೆ ನೀವು 


 ದನಕರು ಮೇಯಿಸುವ ಮಕ್ಕಳೆ


ನೀವು ಕೂಡ ಸೇರಬೇಕು ಮಕ್ಕಳೆ 


 ನನ್ನ ತಮ್ಮ ಇದ್ದಾನೆ


ಕೆಳಗಿನ ಸಿರಿ ಬಾರಿ ಲೋಕದಲ್ಲಿ 


 ಹೋಗಬೇಕಪ್ಪ ಮಕ್ಕಳೆ ನೀವು


ರಾಜನ ಬಾಕಿಮಾರಿನಲ್ಲಿ 


 ನೂಲು ಹಾಕುವ ನೂಲಾಟ


ಚೆಂಡು ಹಾಕುವ ಚೆಂಡಾಟ 


 ಕುಟ್ಟಿ ದೊಣ್ಣೆ3 ಆಡಬೇಕೆಂದು


ಹೇಳಿದರಪ್ಪಾ ದೇವರವರು ಶ್ರೀಕೃಷ್ಣ ದೇವರು


ಯಾರಪ್ಪ ದೇವರೆ ನಾವಾದರೂ


ಇಷ್ಟ ಜನರು ಹೋಗುವುದಿಲ್ಲವೆಂದು ಹೇಳಿದವರವರು


ದನ ಮೇಯಿಸುವ ಮಕ್ಕಳು


ಸಾವಿರ ಸಾವಿರದೊಂದು ರಾಕ್ಷಸರನ್ನು


ನಿರ್ಮಾಣ ಮಾಡಿದವರವರು ಶ್ರೀಕೃಷ್ಣ ದೇವರು


ನಿಮ್ಮನ್ನು ಯಾಕಾಗಿ ನಿರ್ಮಿಸಿದೆ


ನಾನು ಎಂದು ಹೇಳುತ್ತೇನೆ ಮಕ್ಕಳೆ


ನೀವು ಕೇಳಿರಿ ಹೇಳಿದರವರು ಶ್ರೀಕೃಷ್ಣ ದೇವರು


ಕೆಳಗೆ ಸಿರಿ ಬಾರಿ ಲೋಕಕ್ಕೆ ಹೋಗಬೇಕಪ್ಪ


ರಾಜನ ಬಾಕಿಮಾರಿನಲ್ಲಿ ಚೆಂಡು ಹಾಕುವ ಚೆಂಡಾಟ

© ಡಾ.ಲಕ್ಷ್ಮೀ ಜಿ ಪ್ರಸಾದ್

ಕುಟ್ಟಿ ದೊಣ್ಣೆ ಆಟ ಆಡವಾಡಬೇಕಂತೆ


ನೂಲು ಹಾಕುವ ನೂಲಾಟ ಆಡಬೇಕೆಂದು


ಹೇಳಿದರವರು ದೇವರವರು ಶ್ರೀಕೃಷ್ಣ ದೇವರು


ಅಷ್ಟೊಂದು ಮಾತುಗಳನ್ನು ಕೇಳಿದವರವರು ಮಕ್ಕಳು


ಸಾವಿರ ಸಾವಿರದೊಂದು ರಾಕ್ಷಸರು


ಮೇಲಿನ ಮಿರಿ ಬಾರಿ ಲೋಕವನ್ನು ಬಿಟ್ಟರಪ್ಪ 


ಮಕ್ಕಳವರು ಕೆಳಗಿನ ಸಿರಿ ಬಾರಿ ಲೋಕಕ್ಕೆ ಬಂದು


ರಾಜನ ಬಾಕಿಮಾರಿ4ನಲ್ಲಿ ಚೆಂಡು ಹಾಕುವ


ಚೆಂಟಾಟವನ್ನು ಆಡುವರು


ಡೆನ್ನಾನಾ ಡೆನ್ನಾನಾಯೇ ಓಯೋಯೇ ಡೆನ್ನಾನಾ


ಕೆಳಗಿನ ಸಿರಿ ಬಾರಿ ಲೋಕದಲ್ಲಿ ರಾಜನ


ಬಾಕಿಮಾರಿನಲ್ಲಿ ನೂಲು ಹಾಕುವ ನೂಲಾಟವನ್ನು


ಕುಟ್ಟಿದೊಣ್ಣೆ ಆಟವಾಡಿಕೊಂಡು ಇರುವ ಒಂದು


ಹೊತ್ತಿನಲ್ಲಿ ಕೊಡ ಹಿಡಿದುಕೊಂಡು


ನೀರೆಗೆಂದು ಬರುತ್ತಾರವರು ನಾಗಸಿರಿ ಕನ್ಯಗೆ


ಆ ಹೊತ್ತಿಗೆ ಬಾವಿಯೆಡೆಗೆ ಬಂದಾರವರು


ಆಕಾಶದ ಏತಮರ ಕೊಟ್ಟರವರು ಕನ್ಯಗೆ


ಪಾತಾಳದ ಹನಿನೀರು ತೆಗೆದು 


 ಹಿಡಿದು ಕೊಡವನ್ನು ಸೊಂಟದಲ್ಲಿ


ಇಟ್ಟುಕೊಂಡು ಹೋಗುವಾಗ ಮಕ್ಕಲು ಹೀಗೆ ನೋಡಿದಾಗ


ಮೂಡುದಿಕ್ಕಿನಲ್ಲಿ ಸೂರ್ಯ ದೇವರು ಉದಿಸಿದ ಹಾಗೆ ಕಾಣಿಸುತ್ತದೆ


ಮೂರ್ಛೆ ತಪ್ಪಿ ಬೀಳುತ್ತಾರೆ 


 ಮಕ್ಕಳು ಸಾವಿರ ಸಾವಿರದೊಂದು ರಾಕ್ಷಸರು


ಕೊಡ ಹಿಡಿದುಕೊಂಡು ಓಡಿಕೊಂಡು


ಬರುತ್ತಾರವರು ದೇವಿ ಅವರು ನಾಗಸಿರಿ ಕನ್ಯಗೆ


ಅಯ್ಯಯ್ಯೋ ಪಾಪವೆ ಉಲೋ ಉಲೋ5 ದೋಷವೇ ಮಕ್ಕಳೆ


ಮೂರ್ಛೆ ತಪ್ಪಿದ ಮಕ್ಕಳನ್ನು ಎತ್ತಿ


ಎಬ್ಬಿಸಿ ಕುಳ್ಳಿರಿಸಿ ಮುಖಕ್ಕೆ ಸ್ವಲ್ಪ ನೀರು ಹಾಕಿ


ಉಪಚರಿಸುತ್ತಾರೆ ಕನ್ಯಗೆ ನಾಗಸಿರಿ ಕನ್ಯಗೆ 


 ದಡಕ್ಕನೆ ಎದ್ದರು ಮಕ್ಕಳು


ದಿಡಕ್ಕನೆ ಕುಳಿತುಕೊಂಡು ಹೇಳಿದರಪ್ಪ ಮಕ್ಕಳು


ಸಾವಿರ ಸಾವಿರದೊಂದು ಅಸುರರು


ಮೇಲಿನ ಸಿರಿ ಬಾರಿ ಲೋಕದಿಂದ ಬಂದೆವಮ್ಮಾ


ಕನ್ಯಗೆ ನಾವು ರಾಜನ ಬಾಕಿಮಾರಿನಲ್ಲಿ ಚೆಂಡು ಹಾಕುವ ಚೆಂಡಾಟ


ಆಡಲಿಕ್ಕೆ ಜಾಗ ಇದೆಯೆಂದು ಬಂದೆವು 


 ಎಂದು ಹೇಳಿದರು ಆ ಮಕ್ಕಳು


ಸಾವಿರ ಸಾವಿರದೊಂದು ಅಸುರರು


ನೀವು ಬಂದ ಊರಿನಲ್ಲಿ ಆಟ ಆಡಿ 


 ಹೋಗಿರಿ ನೀವು ನಿಮ್ಮ ದೇವರಲ್ಲಿ


ನೋಡಿದ್ದನ್ನು ನೋಡಿದೆವೆಂದು ಹೇಳಬೇಡಿ ಮಕ್ಕಳೆ ನೀವು


ಕೇಳಿದ್ದನ್ನು ಕೇಳಿದೆವೆಂದು ಹೇಳಬೇಡಿ ಮಕ್ಕಳೆ ನೀವು


ಬಾಯಾರಿಕೆ ಕಳೆಯಿರಿ ಮುಖದ ಮುತ್ತು ಬೆವರು


ತೊಳೆಯಿರೆಂದು ಹೇಳಿದರು ದೇವಿ ಅವರು ನಾಗಸಿರಿ ಕನ್ಯಗೆ


ಕೈಕಾಲು ಮುಖ ತೊಳೆದರು ಬಾಯಾರಿಕೆಗೆ ನೀರು ಕುಡಿಯುವ


ನಾವು ಹೊಗುತ್ತೇವೆ ಅಮ್ಮಾ ಎಂದು ಹೇಳಿ


ಮೇಲಿನ ಮಿರಿ ಲೋಕಕ್ಕೆ ಬರುತ್ತಾರವರು


ಸಾವಿರ ಸಾವಿರದೊಂದು ಅಸುರರು


ಯಾರಯ್ಯ ದೇವರೆ ಶ್ರೀ ಕೃಷ್ಣ ದೇವರನ್ನು


ಕರೆದು ಹೇಳಿದರು ಮಕ್ಕಳು 


 ಸಾವಿರ ಸಾವಿರದೊಂದು ಅಸುರರು


ಆಟಕ್ಕೆ ಹೋಗುವುದಿಲ್ಲ ಕೂಟಕ್ಕೆ ಹೋಗುವುದಿಲ್ಲ


ನೇಮ ನಿರಿಗೆ ಹೋಗುವುದಿಲ್ಲವೆಂದು ಹೇಳಿದಿರಲ್ಲ ದೇವರೆ


ಅವರಿಗೊಂದು ಕನ್ಯಗೆ ಎಂದು ಇದ್ದಾರೆ ದೇವರೆ ಕೇಳಿರಿ


ಮೂಡುದಿಕ್ಕಿನ ಸೂರ್ಯ ಹುಟ್ಟಿದಂತೆ ಕಾಣಿಸುತ್ತಾರೆ


ಅಷ್ಟು ಚಂದದ ಕನ್ಯಗೆಯನ್ನು ಮದುವೆ ಆಗಿ


ಸತ್ಯದಲ್ಲಿದ್ದಾರೆ ನಾಗ ಸಿರಿ ರಜ


ಡೆನ್ನ ಡೆನ್ನಾ ಡೆನ್ನಾನಾ ಓಯೋಯೋ ಡೆನ್ನಾನಾ


ಡೆನ್ನ ಡೆನ್ನ ಡೆನ್ನಾನಾ ಡೆನ್ನಾ ಡೆನ್ನಾ ಡೆನ್ನಾನಾಯೇ


ಗುಜ್ಜಿಯ ತಾಲೆ ಮರಕ್ಕೆ ಹತ್ತಿಸಿದರು


ಗೆಲ್ಲು ಕಡಿಸಿ ರಾತ್ರಿ ಹನಿಗೆ ಹಾಕಿಸಿದರು


ಹಗಲಿನ ತಿಳಿ ಬಿಸಿಲಿಗೆ ಬಾಡಿಸಿದರು ದೇವರವರು


ಒಕ್ಕಣೆ ಕೊಟ್ಟರು ಓಲೆ ಬರೆದರು


ಯಾರಯ್ಯ ತಮ್ಮ ನೀನು ನಾಳೆಯ ದಿನದಲ್ಲಿ


ನೀನಾದರೂ ಇಲ್ಲಿಗೆ ಬರಬೇಕು ನಮ್ಮದೊಂದು


ದೊಡ್ಡಮ್ಮನ ಮಗನಿಗೆ ನೂಲು ಹಾಕುವ


ನೂಲು ಮದುವೆ ಉಂಟು ಅದಕ್ಕಾದರೂ ಹೋಗುವ ನಾವು


ಹೇಳಿದರವರು ದೇವರು ಸಿರಿಕೃಷ್ಣ ದೇವರು


ಒಂದು ಮಾಣಿಯನ್ನು ಕರೆದು ಯಾರಯ್ಯ ಓಲೆಯ ಹುಡುಗ


ಓಲೆಯ ಒಕ್ಕಣೆಯನ್ನು ಕೈಯಲ್ಲಿ ಕೊಡಬೇಕು


ಕೆಳಗಿನ ಸಿರಿಬಾರಿ ಲೋಕಕ್ಕೆ ಹೋಗಬೇಕು


ಓಲೆಯನ್ನು ನಾಗ ಬಾರಿ ರಾಜನ ಕಯಯಲ್ಲಿ ಕೊಡಬೇಕು


ಹೇಳಿದರವರು ದೇವರು ಶ್ರೀಕೃಷ್ಣ ದೇವರು


ಆ ಹೊತ್ತಿಗೆ ಓಲೆಯ ಮಾಣಿ ಬಂದು


ಓಲೆಯನ್ನು ಹಿಡಿದುಕೊಂಡು ಮೇಲಿನ ಮಿರಿ ಬಾರಿ ಲೋಕದಿಂದ


ಇಳಿದನಪ್ಪ ಮಾಣಿ ಅವನು ಕೆಳಗಿನ ಸಿರಿ ಬಾರಿ ಲೋಕಕ್ಕೆ


ಇಳಿದು ಬಂದು ರಾಜನ ಕೈ ಕೊಟ್ಟು


ಸಮಯಕ್ಕೆ ಸರಿಯಾಗಿ ಹೋಗಬೇಕಂತೆ


ನೀವು ಮೇಲಿನ ಮಿರಿ ಬಾರಿ ಲೋಕಕ್ಕೆ


ಹೋಗಬೇಕೆಂದು ಹೇಳಿದರು ಶ್ರೀಕೃಷ್ಣ ದೇವರ ಮಾತನ್ನು


ಹೇಳಿದರವರು ಓಲೆಯದೊಂದು ಮಾಣಿ


ಅಷ್ಟು ಮಾತನ್ನು ಕೇಳಿದರಪ್ಪ ರಾಜ


ಪಟ್ಟೆವಸ್ತ್ರ ಉಟ್ಟುಕೊಂಡು ಯಾರಮ್ಮ ಕನ್ಯಗೆ


ನಾನಾದರೂ ಹೋಗಿ ಬರುವೆ ಮೇಲಿನ ಮಿರಿ ಬಾರಿ


ಲೋಕಕ್ಕೆ ಹೋಗಬೇಕೆನಗೆ ಅಣ್ಣನ ಹತ್ತಿರ ಮಾತನಾಡಿ ಬರುವೆ


ನಾನು ಎಂದು ಹೋಗುವರವರು ಓಲೆಯ ಒಕ್ಕಣೆ


ಓದಿ ಹೇಳಿದರವರು ನಾಗಬಾರಿ ರಾಜ


ಓಲೆಯ ಒಕ್ಕಣೆಗೆ ತಪ್ಪಿಸದೆ ಅಲಂಕಾರ ಮಾಡಿಕೊಂಡು


ಬರುತ್ತಾರವರು ನಾಗ ಬಾರಿ ರಾಜ


ಮೇಲಿನ ಮಿರಿ ಬಾರಿ ಲೋಕದಲ್ಲಿ ಕೃಷ್ಣ ದೇವರಲ್ಲಿ


ಹೇಳಿದರವರು ರಾಜ ನಾಗ ಬಾರಿ ರಾಜ


ಇವತ್ತೊಂದು ದಿನ ಕುಳಿತುಕೊಳ್ಳು ಮಗ ನೀನು


ನಾಳೆಯೆ ಬೆಳಗ್ಗಿನ ಹೊತ್ತಿನಲ್ಲಿ ಹೋಗುವ ನಾವು


ನಮ್ಮ ದೊಡ್ಡಮ್ಮನ ಮಗನ ಉಪನಯನಕ್ಕೆ

© ಡಾ.ಲಕ್ಷ್ಮೀ ಜಿ ಪ್ರಸಾದ್

ಬೆಳಿಗ್ಗೇನೇ ಎದ್ದು ಹೋಗುವ ನಾವು


ಈವತ್ತೊಂದು ದಿನ ಇಲ್ಲಿ ಕುಳಿತುಕೊಳ್ಳು ಎಂದು


ಒತ್ತಾಯ ಮಾಡುತ್ತಾರೆ ಸಿರಿಕೃಷ್ಣ ದೇವರು


ಪಟ್ಟೆ ವಸ್ತ್ರವನ್ನು ತೆಗೆ ಎಣ್ಣೆ ಹಚ್ಚಿಕೊಂಡು ಹೋಗು ನೀನು


ಬಿಸಿನೀರಿನ ಕೊಟ್ಟಿಗೆಯಲ್ಲಿ ತಣ್ಣೀರು ಕಾಯಿಸಿ ಶುದ್ಧ ಮುದ್ರಿಕೆ ಆಗು


ಹೇಳಿದರವರು ದೇವರವರು ಸಿರಿಕೃಷ್ಣ ದೇವರು


ಅಷ್ಟೊಂದು ಮಾತುಗಳನ್ನು ಕೇಳಿ ನಾಗ ಬಾರಿ ರಾಜನು


ಬಟ್ಟೆಯನ್ನು ಬದಲಿಸಿ ಇಡುತ್ತಾರಪ್ಪ ರಾಜನು


ಬಿಸಿನೀರ ಕೊಟ್ಟಿಗೆ ತಣ್ಣೀರು ಎಲ್ಲಿದೆಯೆಂದು ಹುಡುಕಿಕೊಂಡು


ಹೋಗುತ್ತಾರವರು ನಾಗಬಾರಿ ರಾಜನ


ಅವರು ಉಟ್ಟ ಪಟ್ಟೆ ವಸ್ತ್ರವನ್ನು ತೆಗೆದುಕೊಂಡರು ಕೃಷ್ಣ ದೇವರು


ಹಾಕಿಕೊಂಡು ನಾಗಬಾರಿ ರಾಜನ ರೂಪದಲ್ಲಿ ಹೋಗುತ್ತಾರವರು


ಕೆಳಗೆ ಸಿರಿ ಬಾರಿ ಲೋಕಕ್ಕೆ ಹೋಗುತ್ತಾರೆ ಶ್ರೀಕೃಷ್ಣ ದೇವರು


ಬಾಗಿಲು ತಟ್ಟಿ ಹೇಳಿದರವರು ಶ್ರೀಕೃಷ್ಣ ದೇವರು


ಯಾರಮ್ಮ ಕನ್ಯಗೆ ನಾಗಸಿರಿ ಕನ್ಯಗೆ ಬಾಗಿಲು ತೆಗೆಯೆಂದು


ನಾನು ಬಂದೆ ನಾನು ಬಂದೇಂದು ರಾಜನೆಂದು


ಹೇಳಿದರವರು ಶ್ರೀಕೃಷ್ಣ ದೇವರು


ನನ್ನ ರಾಜನಲ್ಲ ಅವರು ಬರುವ ಹೆಜ್ಜೆಯ ಸದ್ದು ನನಗೆ ಗೊತ್ತು


ಅವರು ಬರುವ ನೆರಳೆನಗೆ ಗೊತ್ತು ಅವರು ಬರುವಾಗ


ಹಟ್ಟಿಯಲ್ಲಿರುವ ಮುದ್ದು ಕರುಗಳು ಕರೆಯುತ್ತ ಬರುತ್ತವೆ ದೇವರೆ


ಹಟ್ಟಿಯಲ್ಲಿರುವ ದನಕರುಗಳು ಕರೆಯುತ್ತ ಬರುತ್ತವೆ


ಹಾರಿದ ಹಕ್ಕಿಗಳು ಕೂಡ ಇಳಿದು ಬರುತ್ತವೆ


ಎಂದು ಹೇಳಿದಳು ಕನ್ಯಗೆ ನಾಗಸಿರಿ ಕನ್ಯಗೆ


ಬಾಗಿಲಾದರೂ ತೆಗೆಯುತ್ತೀಯಾ? ತೆಗೆಯದಿದ್ದರೆ ಒಡೆದು


ಬರುವೆಂದು ಹೇಳಿದರವರು ಶ್ರೀಕೃಷ್ಣ ದೇವರು


ಯಾರಯ್ಯ ದೇವರೆ ಕೇಳಿದಿರ ಶ್ರೀಕೃಷ್ಣ ದೇವರಲ್ಲವೆ?


ಮಾಯದ ಕುಮಾರನಲ್ಲವೆ ಅಂಗಡಿ ಅಂಗಡಿ ಹೋಗಿ


ಬತ್ತ ಜೋಳ ಕುಟ್ಟಿ ಸಾವಿರ ಸಾವಿರದೊಂದು ಅಸುರರನ್ನು 


ಕಳುಹಿಸಿದ ನೀನಲ್ಲವೇ ಕೃಷ್ಣ? ಎಂದು ಹೇಳಿದಳು ಕನ್ಯಗೆ


ಬಾಗಿಲನ್ನೊಮ್ಮೆ ತೆಗೆ ಕನ್ಯಗೆ ಮಾತನಾಡಬೇಕು


ಬಾಗಿಲನ್ನು ತೆರೆಯದಿದ್ದರೆ ನಾನು ಒಳಗೆ ಬರುತ್ತೇನೆಂದು


ಹೇಳಿದರು ಶ್ರೀಕೃಷ್ಣ ದೇವರು


ನಾನಾದರೂ ಬಾಗಿಲು ತೆಗೆಯಲಾರೆ ಯಾರೆಂದು ಗೊತ್ತಾಯಿತೆನಗೆ


ನಿಮ್ಮದು ರಾಜನ ಸ್ವರ ಅಲ್ಲ ಅವರ ಬೆವರಿನ ವಾಸನೆ


ನನಗಾದರೂ ಗೊತ್ತೆಂದು ನೀವಾದರೂ ಬಂದವರು ಶ್ರೀಕೃಷ್ಣ ದೇವರೆಂದು


ಕೇಳಿದಳವಳು ಕನ್ಯಗೆ ನಾಗಸಿರಿ ಕನ್ಯಗೆ


ಯಾಕೆ ಹೀಗೆ ಮಾಡುವಿರಿ ದೇವರೆ? ಸತ್ಯದಲ್ಲಿ ಹುಟ್ಟಿ


ಸೂರ್ಯ ಚಂದ್ರರ ತಂಗಿಯಾದರೆ ಬೊಳ್ಳಿ ದೇವರ


ಪ್ರೀತಿಯ ತಂಗಿ ಬೊಳ್ಳಿಲ್ಲ ಕುಮಾರನ


ಕೊಂಡಾಟದ ಮಗಳಾದರೆ ಬಾಗಿಲು ನಾನು ತೆಗೆಯಲಾರೆ


ಎಂದು ಹೇಳಿದಳವಳು ಕನ್ಯಗೆ ನಾಗಸಿರಿ ಕನ್ಯಗೆ


ಅಷ್ಟೆಲ್ಲ ಮಾತನಾಡಬೇಡ ಹೇಳಿದರವರು ದೇವರು


ಕೇರೆ ಹಾವಿನ ರೂಪ ಧರಿಸಿ ಮಾಡಿನ ಎಡೆಯಲ್ಲಿ


ಹೋದರವರು ಶ್ರೀಕೃಷ್ಣ ದೇವರು


ಅಷ್ಟು ಹೊತ್ತು ಆದಾಗ ಕಾಗೆಯ ರೂಪ ಧರಿಸಿ


ಕಾಗೆಯಾಗಿ ಕುಕ್ಕಲೆಂದು ಬರುತ್ತಾಳವಳು


ಕನ್ಯಗೆ ನಾಗಸಿರಿ ಕನ್ಯಗೆ


ಕಾಗೆಯ ರೂಪವಾದಾಗ ಯಾರೇ ಕನ್ಯಗೆ


ನೀನು ಯಾಕೆ ಕಾಗೆ ಆಗುತ್ತಿ ಎಂದು ಹೇಳಿದರಪ್ಪ


ದೇವರವರು ಶ್ರೀಕೃಷ್ಣ ದೇವರು


ಉಣುಗಿನ ರೂಪವಾಗಿ ಕಪಿಲೆ ಹಸುವಿನ


ಕೆಚ್ಚೆಲಿನಲ್ಲಿ ಹೋಗಿ ಕುಳಿತುಕೊಳ್ಳುವರು ನಾಗಸಿರಿ ಕನ್ಯಗೆ


ಉಣುಗಿನ ರೂಪವಾಗಿ ಕಪಿಲೆ ಹಸುವಿನ ಕೆಚ್ಚಲಿನಲ್ಲಿ


ಕುಳಿತಾಗ ಶ್ರೀಕೃಷ್ಣ ದೇವರು ಕೋಳಿಯ ರೂಪವಾಗಿ


ಹೆಕ್ಕಿ ತಿನ್ನಲೆಂದು ಹೋಗುವರವರು 


 ಶ್ರೀಕೃಷ್ಣ ದೇವರು


ಅಷ್ಟು ಹೊತ್ತಿನಲ್ಲಿ ಗಿಡುಗನಾಗಿ ಕುಕ್ಕಲು


ಹೋಗುವರು ನಾಗಸಿರಿ ಕನ್ಯಗೆ


ಆತುಲನೆ ಪೊರ್ತುಗು ಡೆನ್ನ ಡೆನ್ನ ಡೆನ್ನಾನದೇ


ಓಯೋಯೇ ಡೆನ್ನ ಡೆನ್ನಾನ ಡೆನ್ನಾನಯೇ


ಯಾರೇ ಕನ್ಯಗೆ ನಾಗಸಿರಿ ಕನ್ಯಗೆ


ಇಷ್ಟೊಂದು ಆಟ ಆಡುವುದಾದರೆ ನಿನ್ನನ್ನಾದರೂ


ನೋಡಬೇಕೆನಗೆ ನೋಡಬೇಕು ಹೇಳಿದರು ಶ್ರೀಕೃಷ್ಣ ದೇವರು


ಮಡಿಯನ್ನು ತರುವ ಮಡ್ಯೋಳನನ್ನು ಕರೆದರು


ಶ್ರೀಕೃಷ್ಣ ದೇವರು 


 ಮಡಿ ಮಾಡಿ ಬರುವಾಗ ಬುಟ್ಟಿಯನ್ನು ಇಡುವಾಗ


ಹೇಳುತ್ತಾರೆ ಮಡಿವಾಳ ನೀನು ಕೈಗೆ ಕೊಡು ಬಟ್ಟೆಯನ್ನು


ಮೊಲೆಯನ್ನು ಹಿಡಿದುಕೋ ಎಂದು ಹೇಳಿದರು ಶ್ರೀಕೃಷ್ಣ ದೇವರು


ಅಷ್ಟೊಂದು ಮಾತನ್ನು ಕೇಳಿದನೆ ಮಡಿವಾಳ


ಮಡಿ ತರುವ ಮಡಿವಾಳ ಎಂದನು


ಯಾರಮ್ಮ ದೇವಿ ನೀವು ನಾಗಸಿರಿ ಕನ್ಯಗೆ


ಸತ್ಯದ ಮಗಳು ನೀವು ಸೂರ್ಯಚಂದ್ರರ ತಂಗಿ ನೀವು


ಬೊಳ್ಳಿ ದೇವರ ಬೆಳಕಿನ ಮಗಳು ನೀವು


ನಿಮಗೆ ನಾನು ಅನ್ಯಾಯ ಮಾಡುವುದಿಲ್ಲವೆಂದು ಮಣೆಯಲ್ಲಿ


ಇಟ್ಟು ಹೋಗುವನು ಮಡಿವಾಳ ಹುಡುಗ ಅವನು


ಅಷ್ಟು ಹೊತ್ತಿಗೆ ಹೇಳುತ್ತಾರೆ ಯಾರಯ್ಯ ಮಡಿವಾಳ


ಹುಡುಗ ನೀನೇನು ಮಾಡಿದೆ ಕೇಳಿದಾಗ ಮಡಿವಾಳ ಹುಡುಗ


ಹಾಗೆಯೇ ಮಾಡಿದ್ದೇನೆ ದೇವರೆಂದು ಹೇಳಿದನೇ


ಹುಡುಗ ಅವನು ಮಡಿವಾಳ ಹುಡುಗ


ಅಷ್ಟು ಮಾತನ್ನು ಕೇಳಿದರು ದೇವರವರು


ಮೇಲಿನ ಮಿರಿ ಬಾರಿ ಲೋಕಕ್ಕೆ ಹೋದರಪ್ಪ


ದೇವರವರು ಶ್ರೀಕೃಷ್ಣ ದೇವರು


ನೀನ್ಯಾಕೆ ಬರಲಿಲ್ಲ? ಹೋಗುವಾಗಲ್ಲಿ ಹೋದೆ ತಮ್ಮ


ಬರುವಾಗಲ್ಲೇ ಬಂದೆ ತಮ್ಮ ಕೆಳಗೆ ಅಲ್ಲಿ


ಸಿರಿಸ ಬಾರಿ ಲೋಕದಲ್ಲಿ ಅಲ್ಲಿ ನಾನು ಬರುವ ತನಕ


ನನ್ನ ರಾಜ್ಯವನ್ನು ನೋಡಿಕೋ ಎಂದು


ಹೋದೆನಲ್ಲನೇ ತಮ್ಮ ನಾನು ಬರುವವರೆಗೆ ಇರು ಎಂದು


ಹೇಳಿ ತಮ್ಮನ ಬಟ್ಟೆ ತೆಗೆದು 


 ಇಡುತ್ತಾರೆ ಶ್ರೀಕೃಷ್ಣ ದೇವರು


ಹೋಗುವಾಗ ಬರುವಾಗ ನಾನು ಒಂದು ಸುದ್ದಿ ಕೇಳಿದೆ


ನಿನ್ನ ಹೆಂಡತಿ ಇದ್ದಾಳೆ ನಾಗ ಸಿರಿ ಕನ್ಯೆಗೆ


ಹೋಗುವಾಗಲ್ಲಿ ಹೋದೆನೆ ತಮ್ಮ


ಬರುವಾಗ ನಾನು ಬರುವಾಗ ಮಡಿವಾಳ


ಹುಡುಗನನ್ನು ಹಿಡಿದುಕೊಂಡು ಇದ್ದಾಳೆಂದು


ಹೇಳಿದರವರು ಶ್ರೀಕೃಷ್ಣ ದೇವರು 


 ಅಷ್ಟು ಮಾತನ್ನು ಕೇಳಿದರು ರಾಜ


ಕೆಳಗಿನ ಸಿರಿ ಬಾರಿ ಲೋಕಕ್ಕೆಸ ಇಳಿದು

© ಡಾ.ಲಕ್ಷ್ಮೀ ಜಿ ಪ್ರಸಾದ್

ಬಂದರವರು ನಾಗ ಬಾರಿ ರಾಜ


ಯಾರೇ ಕನ್ಯಗೆ ನೀನು ಮಡಿವಾಳ ಹುಡುಗನನ್ನು


ಹಿಡಿದು ಆಟವಾಡಿಕೊಂಡು ಇದ್ದಿ ನೀನು ಎಂದು 


ಸುದ್ದಿಯನ್ನು ಕೇಳಿ ನಾನು ಬಂದೆ ಎಂದು


ಹೇಳಿದರವರು ನಾಗ ಬಾರಿ ರಾಜ 


 ಇದ್ದದ್ದನ್ನು ಇದ್ದ ಹಾಗೆ ಹೇಳಿ ನಾನು


ಯಾಕಾಗಿ ತಮ್ಮ ಅಣ್ಣನ ನಡುವೆ ಬಂದು


ದೂರು ಹೇಳುವುದೆಂದು ಹೇಳಿದಳವಳು ನಾಗ ಸಿರಿ ಕನ್ಯಗೆ


ಹೇಳಿದ ಮಾತನ್ನು ಕೇಳಿದ ಮಾತನ್ನು


ನಂಬಿರುವೆಯ ಮದುಮಗ ಕೇಳಿದಳವಳು 


 ಕನ್ಯಗೆ ನಾಗಸಿರಿ ಕನ್ಯಗೆ


ಅಷ್ಟುಸ ಹೊತ್ತಿಗೆ ಮೇಲಿನ ಸಿರಿ ಬಾರಿ ಲೋಕದಿಂದ


ಶ್ರೀಕೃಷ್ಣ ದೇವರನ್ನು ಬರಲೆಂದು 


 ಓಲೆ ಕಳುಹಿಸಿ ಅವರು ಬಂದು


ಸತ್ಯದ ಕನ್ಯಗೆಯು ಸತ್ಯ ಪ್ರಮಾಣಿಸಬೇಕೆಂದು


ಅಷ್ಟೊಂದು ಸತ್ಯದವಳಾಗಿದ್ದರೆ ಅವಳದೊಂದು ಪತಿವ್ರತಾ


ಧರ್ಮ ಇದ್ದರೆ ಏಳು ಕೈಯ ಕೊಪ್ಪರಿಗೆಯಲ್ಲಿ


ಎಣ್ಣೆ ಕುದಿದುಕೊಂಡು ಇರುವಾಗ ಅದರಲ್ಲಿ


ಒಂದು ಬಾರಿ ಇಳಿದು ಒಂದು ಬಾರಿ ಮುಳುಗಬೇಕೆಂದು


ಹೇಳಿದರವರು ದೇವರವರು ಶ್ರೀಕೃಷ್ಣ ದೇವರು


ಅಷ್ಟು ಹೊತ್ತಿಗೆ ಸಾಣೆಯ ಕಲ್ಲನ್ನು


ಏಳುರಾತ್ರಿ ಏಳು6 ಹಗಲು ಅಗ್ನಿಯಲ್ಲಿ ಹಾಕಿ


ಕೆಂಡವನ್ನು ಮಾಡಿ ಇಟ್ಟಿದ್ದಾರೆ ದೇವರು


ಸತ್ಯವನ್ನೇ ಹೇಳಬೇಕು ಅವಳು ಕನ್ಯಗೆ


ಇದು ಒಂದು ನೋಡಬೇಕು ಹೇಳಿದರು


ದೇವರವರು ಶ್ರೀಕೃಷ್ಣ ದೇವರು


ಕುದಿಯುವ ಎಣ್ಣೆಗೆ ಇಳಿಸುವರವರು ದೇವರು


ಒಂದರಲ್ಲಿ ಸ್ನಾನ ಮಾಡಿ ಬರುವಳು ಎರಡರಲ್ಲಿ ಇಳಿಯುವಳು


ಮೂರನೆಯ ಕೊಪ್ಪರಿಗೆ ಎಣ್ಣೆಯಲ್ಲಿ ಮಿಮದು ಬಂದು


ತಲೆಯನ್ನು ಕೊಡವಿ ಕಟ್ಟುವಾಗ ಒಂದು ಹನಿ


ಎಣ್ಣೆಯಾದರು ರಾಜನ ಪಾದಕ್ಕೆ ಬಿದುದ


ಪಾದಕ್ಕೆ ಬಿದ್ದ ಎಣ್ಣೆಯಿಂದ ಮುಡಿಯಷ್ಟು ದೊಡ್ಡ


ಹಪ್ಪಳಿಗೆ ಬಂದಾಗ ಅಯ್ಯಯ್ಯೋ ದೇವರೆ


ಉಲೋ ಉಲೋ ದೇವರೆ ಇಷ್ಟು ಬಿಸಿ ಎಣ್ಣೆಯಲ್ಲಿ


ಹೇಗೆ ಮಿಂದಳಪ್ಪಾ ಕನ್ಯಗೆ ಎಂದು ಕಣ್ಣಿನಲ್ಲಿ


ಕಡು ದುಃಖ ತೆಗೆಯುವರು ನಾಗ ಬಾರಿ ರಾಜ


ಯಾರಯ್ಯ ಅಣ್ಣ ನೀನಾದರೂ ನೋಡು ಸತ್ಯದ ಕನ್ಯಗೆ


ಏಳು ಕೊಪ್ಪರಿಗೆಯ ಎಣ್ಣೆಯಲ್ಲಿ ಮಿಂದು ತಲೆಕೊಡವಿ


ಕಟ್ಟುವಾಗ ಒಂದು ಬಿಂದು ಎಣ್ಣೆ ಬಿದ್ದು ಇಷ್ಟು ದೊಡ್ಡ


ಹಪ್ಪಳಿಕೆಯಾಗಿದೆ ಸತ್ಯದ ಕನ್ಯಗೆ ಅವಳು ಅಣ್ಣ


ಎಂದು ಹೇಳಿದರವರು ನಾಗಬಾರಿ ರಾಜ


ಅಷ್ಟು ಮಾತ್ರವಲ್ಲ ಏಳು ಹೆಡೆಯ ಸರ್ಪವನ್ನು


ತಂದು ಹಾಕಬೇಕು ಪೆಟ್ಟಿಗೆ ಒಳಗೆ


ಅದರ ಒಳಗೆ ಬೇರೆ ಬೇರೆ ಸರ್ಪಗಳನ್ನು


ಹಾಕಿ ಏಳು ಹೆಡೆಯ ಸರ್ಪವನ್ನು ಮೇಲೆ ಬಿಟ್ಟರವರು


ದೇವರವರು ಶ್ರೀಕೃಷ್ಣ ದೇವರು


ಸತ್ಯದಲ್ಲಿ ಹುಟ್ಟಿ ಕೀರ್ತಿಯಲ್ಲಿ ಬೆಳೆದ ಮಗಳಾದರೆ


ಸೂರ್ಯ ಚಂದ್ರರ ತಂಗಿಯಾದರೆ ಬೊಳ್ಳಿಲ್ಲ


ಕುಮಾರನ ಬೆಳಕಿನ ಮಗಳಾದರೆ ನಾನು


ಇದರಲ್ಲಿ ಇರುವ ಸರ್ಪ ನನ್ನನ್ನು ನೋಡಿಕೊಳ್ಳಲಿ ಎಂದು


ಪೆಟ್ಟಿಗೆಯ ಬಾಯಿ ತೆರೆದು ಕೈ ಹಾಕುವಳವಳು

© ಡಾ.ಲಕ್ಷ್ಮೀ ಜಿ ಪ್ರಸಾದ್

ಕನ್ಯಗೆ ನಾಗ ಸಿರಿ ಕನ್ಯಗೆ


ಅಷ್ಟು ಹೊತ್ತಿಗೆ ಏಳು ಹೆಡೆಯ ಸರ್ಪ ಬಂದು


ಕೈಯಲ್ಲಿ ಬಂದದು ಕಾಲಿನಲ್ಲಿ ಇಳಿಯುತ್ತದೆ


ಕಾಲಿನಲ್ಲಿ ಹತ್ತಿದ್ದು ಕೈಯಲ್ಲಿ ಇಳಿಯುತ್ತದೆ


ಬಲದೊಂದು ಕೈಯನ್ನು ತೋರಿಸಿ ಹೇಳಿದಳಪ್ಪ ಕನ್ಯಗೆ


ಹಾಗೆ ಯಾಕೆ ಹೋಗುವಿ ಕಾಳಿಂಗ


ಎಡದೊಂದು ಕೈಯನ್ನು ಹಿಡಿಯುವಂತೆ ಇದರ ಒಂದು


ಮಣಿಗಂಟಿಗೆ ಕುಟುಕಿ ಬಿಡು ಎಂದು


ಹೇಳಿದಳು ನಾಗಸಿರಿ ಕನ್ಯಗೆ


ಇಷ್ಟೆಲ್ಲ ಭೂಮಿ ಮೇಲೆ ಕಷ್ಟ ಕೋಟಲೆಗಳಲ್ಲಿ


ದಿನ ಯಾಕೆ ಕಳೆಯುವುದು ನಾನು ಸ್ವರ್ಗಕ್ಕೆ


ಹೋಗಿ ನಾನು ಮಾಯದ ಲೋಕಕ್ಕೆ ನನ್ನನ್ನು


ಮಾಯಕವಾದರೂ ಮಾಡು ಎಂದು ಹೇಳಿದರು


ದೇವಿ ಅವರು ನಾಗ ಸಿರಿ ಕನ್ಯಗೆ


ಕೆಳಗೆ ಹೊದ ಸರ್ಪವಾದರೂ ಮೇಲೆ ಬಂದು


ಕೈಯ ಮಣಿಗಂಟಿಗೆ ಕುಟುಕಿ ತನ್ನ ಕಾರ್ಯ ಮಾಡಿತದು


ಏಳು ಹೆಡೆಯ ಸರ್ಪವು / ಕೈ ಬಿಟ್ಟು ಕೈಲಾಸ ಸೇರಿದರು ಕನ್ಯಗೆ


ಮೈ ಬಿಟ್ಟು ವೈಕುಂಠ ಸೇರಿ ನಾಗ ಸಿರಿ ಕನ್ಯಗೆಂದು


ನಾಲ್ಕು ಊರು ಹೆಸರು ಪಡೆದು


ನಾಗ ಒಬ್ಬರು ಬೆರ್ಮೆರು ಏಳುಜನ ಸಿರಿಗಳು


ಒಟ್ಟಿಗೇ ಸೇರಿದರು ಅವರು ನಾಗ ಸಿರಿ ಕನ್ಯಗೆ


ಡೆನ್ನ ಡೆನ್ನಾ ಡೆನ್ನಾನಾ ಓಯೋಯೇ ಡೆನ್ನಾನಯೇ


7 . ಅಬ್ಬಿನ ಬಂಗಾರು


.


ಡೆನ್ನಾ ಡೆನ್ನಾ ಡೆನ್ನಾನ ಓಯೋಯೇ ಡೆನ್ನ ಡೆನ್ನಾನಾ


ತಾಲಾಡಿ ಸಾದಡಿ ಬೀಡಿನಲ್ಲಿ ಇದ್ದಾರೆ 


 ನಂದಾರರು ಕುಂದಯ ನಂದಾರರು


ಎದ್ದಾಡಿ ಎಣ್ಮೆದಡಿ ಬೀಡಿನಲ್ಲಿ ಇದ್ದಾಳೆ 


 ಬಂಗಾರು ಅಬ್ಬಿನ ಬಂಗಾರು


ಕಾದುಕೊಂಡು ಇದ್ದಾಳೆ ಅಬ್ಬಿನ ಬಂಗಾರು


ಎದ್ದಾಡಿ ಎಣ್ಮೆದಡಿ ಬೀಡಿನಲ್ಲಿ ಇದ್ದಾಳೆ 


 ಬಂಗಾರು ಅಬ್ಬಿನ ಬಂಗಾರು


ಬೆಳಗ್ಗೆಯೆ ಎದ್ದಳು ಬಂಗಾರು 


 ಮುದ್ದು ಕರುಗಳನ್ನು ಎಬ್ಬಿಕೊಂಡಳು


ಎಮ್ಮೆಯನ್ನು ಮೇಯಿಸಿಕೊಂಡು 


 ಇದ್ದಾಳೆ ಅಬ್ಬಿನ ಬಂಗಾರು


ಕುದುರೆಯಲ್ಲಿ ಕುಳಿತುಕೊಂಡು ಸವಾರಿ


ಬರುತ್ತಾ ಇದ್ದಾರೆ ಕುಂದಯ ನಂದಾರ


ಕುದುರೆಯಲ್ಲಿ ಕುಳಿತುಕೊಂಡು ಎಳ್ಳಿನ ಗದ್ದೆಯಲ್ಲಿ


ತುಳಿಸಿಕೊಂಡು ಹೋಗುವನೆ ನಂದಾರ ಕುಂದಯ ನಂದಾರ


ಯಾರಯ್ಯ ನಂದಾರ ಕುಂದಯ ನಂದಾರ


ನಿನ್ನ ತಂದೆ ತಾಯಿ ಹೇಳಿಕೊಟ್ಟ 


 ಬುದ್ಧಿಯೇನೋ ಕುಂದಯ ನಂದಾರ


ಎಳ್ಳನ್ನೆ ತುಳಿಸಿದೆಯಲ್ಲ


ಕುದುರೆಯನ್ನೇ ಓಡಿಸಿದೆಯೆಂದು ಹೇಳಿದಳು ಅಬ್ಬಿನ ಬಂಗಾರು


ಅಷ್ಟು ಪೊಗರಿನ ಹುಡುಗಿಯನ್ನು ನೋಡಬೇಕೆಂದು


ಹೇಳಿದ ಕುಂದಯ ನಂದಾರ 


 ಎಳ್ಳಿನ ಸಸಿಗೆ ಏಳು ತಲೆ ಆಗುವಾಗ


ಎಳ್ಳಿನ ಸಸಿಯಲ್ಲಿ ಎಣ್ಣೆ ಎಲ್ಲಿರುತ್ತದೆ ಅಬ್ಬಿನ ಬಂಗಾರು


ನಿನ್ನ ತಾಯಿ ಮದುಮಗಳು ಆದಾಗ ನೀನೆಲ್ಲಿದ್ದೆ ಕುಂದಯ


ನಂದಾರ ಎಂದು ಕೇಳಿದಳು


ಡೆನ್ನ ಡೆನ್ನಾ ಡೆನ್ನಾನಾ ಓಯೋಯೋ ಡೆನ್ನ ಡೆನ್ನಾನಾ


ಎಳ್ಳಿಗೆ ಏಳು ಎಲೆ ಆಗುವಾಗ


ಬೇರಿನಲ್ಲಿ ಎಣ್ಣೆ ಉಂಟು ಕುಂದಯ ನಂದಾರ


ನಿನ್ನ ತಾಯಿ ಮದುಮಗಳಾದಾಗ ನೀನೆಲ್ಲಿದ್ದೆ ನಂದಾರ


ಎಂದು ಕೇಳಿದಳು ಅಬ್ಬಿನ ಬಂಗಾರು


ಇಷ್ಟು ಕಲಿತ ಹೆಣ್ಣನ್ನು ನೋಡಬೇಕು ನೋಡಬೇಕೆಂದು


ಬಂದನು ಕುಂದಯ ನಂದಾರ 


 ಮನೆಗೆ ಬರುತ್ತಾನೆ ನಂದಾರ ಯಾರಯ್ಯ


ತಂದೆಯವರೆ ತಂದೆಯವರೆ ಕೇಳಿದಿರ 


 ಹೆಣ್ಣು ಹೆಂಗಸು ಇಲ್ಲದೊಂದು


ಮನೆಯಲ್ಲಿ ಯಾರ ಹತ್ತಿರ ಕೇಳಬಹುದೆಂದು


ಒಂದೊಮ್ಮೆ ಯೋಚಿಸುತ್ತಾನೆ 


 ಯಾರಯ್ಯ ತಂದೆಯವರೆ ಕೇಳಿರಿ


ನನ್ನದೊಂದು ಪ್ರಶ್ನೆಗೆ ಉತ್ತರ ಕೊಡಬೇಕೆಂದು


ಹೇಳಿದನು ಕುಂದಯ ನಂದಾರ


ನನ್ನ ತಾಯಿ ಮದುಮಗಳಾದಾಗ ನಾನು


ಎಲ್ಲಿದ್ದೆಂದು ಹೇಳಿರಿ ಎಂದು ಕೇಳಿದನು


ಬೀಡಿನಲ್ಲಿ ಇದ್ದ ಅಜ್ಜನನ್ನು ಕರೆದು ಕೇಳಿದರು


ಬಲ್ಲಾಳರು ನಂದಯ ಬಲ್ಲಾಳರು 


 ಯಾರಯ್ಯ ಅಜ್ಜನವರೇ ಕೇಳಿರಿ


ನನ್ನ ತಾಯಿ ಮದುಮಗಳಾಗುವಾಗ ನಾನು


ಎಲ್ಲಿದೆ ಎಂದು ಹೇಳಿರೆಂದು ಕೇಳಿದಾಗ


ನಿನ್ನ ತಂದೆಯ ಬಲದ ತೊಡೆಯಲ್ಲಿ ನಲಿದುಕೊಂಡು


ಹೊರಳಿಕೊಂಡು ಸುತ್ತುತ್ತಾ ಇದ್ದೆ ಎಂದು ಹೇಳಿದರು


ಅಷ್ಟು ಮಾತು ಕೇಳಿ ಎಳ್ಳಿನ 


 ಗದ್ದೆಗೆ ಮತ್ತೆ ಹೋಗುವಾಗ


ಯಾರಯ್ಯ ನಂದಾರ ಕುಂದಯ ನಂದಾರ


ನಾನು ಹೇಳಿದ ಮಾತು ಏನೆಂದು ಕೇಳಿದೆಯಲ್ಲ


ಎಳ್ಳಿನ ಎಣ್ಣೆ ಎಲ್ಲಿದೆಯೆಂದು ಕೇಳಿದೆಯಲ್ಲ


‘ಏಳು ಎಲೆ ಬಂದ ಎಳ್ಳಿನ ಸಸಿಯನ್ನು


ಕಿತ್ತಳು ಬಂಗಾರು ಅಬ್ಬಿನ ಬಂಗಾರು


ಮುರಿದು ತುಂಡರಿಸಿ ತೋರಿಸುವಳು


ಎಳ್ಳಿನ ಸಸಿಗೆ ಏಳು ಎಲೆ ಆಗುವಾಗ


ಬೇರಿನಲ್ಲಿ ಎಣ್ಣೆ ಇದೆ ಎಂದು ಹೇಳಿದಳು


ನನ್ನ ತಾಯಿ ಮದುಮಗಳಾಗುವಾಗ ನನ್ನ ತಂದೆಯ


ಬಲ ತೊಡೆಯಲ್ಲಿ ಇದ್ದೆ ಎಂದು ಹೇಳುವನು ನಂದಾರ


ಇಷ್ಟು ಸೊಕ್ಕಿನ ಹೆಣ್ಣನ್ನು ನೋಡಬೇಕೆಂದು


ಹೇಳಿದನು ಕುಂದಯ ನಂದಾರ


ಮನೆಗೆ ಹೋದನೆ ತನ್ನೊಂದು ಬೀಡಿಗೆ


ಹೋಗುವನೆ ನಂದಾರ ಕುಂದಯ ನಂದಾರ


ಮೈಯ ಕೊಳಕಿಗೆ ಸ್ನಾನ ಮಾಡುವುದಿಲ್ಲ ನಂದಾರ


ಹೊಟ್ಟೆಯಲ್ಲಿ ಹಸುವಿಗೆ ಉಣ್ಣುವುದಿಲ್ಲ ನಂದಾರ


ಕತ್ತಲೆ ಮನೆಗೆ ಹೋಗುವನೆ ಅದರೊಂದು ಕೋಣೆಯಲ್ಲಿ


ಕವುಚಿ ಮಲಗಿದೆ ಕುಂದಯ ನಂದಾರ


ತಂದೆಯವರು ಹುಡುಕಿಕೊಂಡು ಬರುವಾಗ


ಕವುಚಿ ಮುಖ ಕೆಳಗೆ ಹಾಕಿ ಮಲಗಿದನು ಕುಂದಯ ನಂದಾರ


ಏನು ಮಗ ನಂದಾರ ಏನು ಮಗ ಮಲಗಿದೆ


ಏನು ನೋಡಿ ಸೋತೆ ಮಗ ನಂದಾರ


ಕಟ್ಟದ ಪ್ರವಾಹವನ್ನು ನೋಡಿ ಸೋತೆಯ ಹೇಳೆಂದು


ಕಟ್ಟಿ ಹಾಕಿದ ಎಮ್ಮೆಗಳನ್ನು ನೋಡಿ ಸೋತೆಯ


ಒಳ್ಳೆಒಳ್ಳೆಯ ಕರುಗಳನ್ನು ನೋಡಿ ಸೋತೆಯ


ಎಂದು ಕೇಳಿದರು ಸಂದಾರ


ದೊಡ್ಡ ದೊಡ್ಡ ಅರಸು ಬಲ್ಲಾಳರನ್ನು ನೋಡಿ


ಸೋತೆಯ ನಂದಾರ ಕುಂದಯ ನಂದಾರ


ಸ್ವಲ್ಪವೂ ಅಲುಗಾಡುವುದಿಲ್ಲ ಬಾಯಿ ತೆರೆಯುವುದಿಲ್ಲ


ಅವನು ಕುಂದಯ ನಂದಾರ


ಒಳ್ಳೆ ಒಲ್ಳೆ ಹುಡುಗಿಯರನ್ನು ನೋಡಿ ಸೋತೆಯ


ನಂದಾರ ಕುಂದಯ ನಂದಾರ ಎಂದು


ಕೇಳಿದರು ಬಲ್ಲಾಖರು ನಂದರ ಬಲ್ಲಾಖರು ಕೇಳಿದಾಗ


ಎತ್ತಿ ತಲೆಯನ್ನು ಮಡಿಲಲ್ಲಿ ಇಟ್ಟು ಕೇಳಿದರು ಅವರು


ಯಾರು ಮಗ ನಂದಾರ ಕುಂದಯ ನಂದಾರ


ನಿನಗೆ ಯಾರು ಏನು ಹೇಳಿದರು


ಸುತ್ತ ಮುತ್ತಲಿನ ಗಂಡಸರು ಏನಾದರು ಹೇಳಿದರೆಂದು ಕೇಳಿದಾಗ


ನಾನೊಂದು ಹೆಣ್ಣನ್ನು ನೋಡಿ ಸೋತೆ


ಎಂದು ಹೇಳಿದನು ನಂದಾರ ಕುಂದಯ ನಂದಾರ


ಎದ್ದಾಡಿ ಎಣ್ಣೆಯ ಬೀಡಿನಲ್ಲಿ ಇದ್ದಾಳೆ 


 ಬಂಗಾರು ಅಬ್ಬಿನ ಬಂಗಾರು


ಅವಳನ್ನು ಮದುವೆ ಆಗಬೇಕೆಂದು 


 ಹೇಳಿದನೇ ಕುಂದಯ ನಂದಾರ


ಮೂಡಿದ ಸೂರ್ಯ ಅಸ್ತವಾಗುವುದರೊಳಗೆ ನಿನಗೆ


ಅವಳೊಂದಿಗೆ ಮದುವೆ ಮಾಡಿಸುವೆನೆಂದು ಹೇಳಿದರು


ಅಷ್ಟು ಮಾತ್ರ ಅಲ್ಲ ತಂದೆಯವರೆ


ಅವಳಿಗೊಂದು ಕಷ್ಟವನ್ನು ಕೊಡಬೇಕೆಂದು


ನಂದಾರ ಕುಂದಯ ನಂದಾರ ಹೇಳಿದಾಗ


ಅವಳ ತಂದೆಯವರನ್ನು ಕರೆದು ಒಂದು ಕುತ್ತಿ


ಕೋಣದ ಹಾಲನ್ನು ತರಬೇಕೆಂದು ಹೇಳಿರೆಂದು ಹೇಳಿದ


ಅಬ್ಬಿನ ಬಂಗಾರುವಿನ ತಂದೆಯವರನ್ನು ಕರೆದು


ಯಾರಯ್ಯ ಕೇಳಿದೆಯ ನಿನ್ನ ಮಗಳು


ಇದ್ದಾಳೆ ಬಂಗಾರು ಅಬ್ಬಿನ ಬಂಗಾರು


ಅವಳಲ್ಲಿ ಒಂದು ಮಾತು ಮಾತಾಡುವ ಮೊದಲು


ನನಗೊಂದು ಪಂಥ ಇದೆ


ಕೋಣದ ಒಂದು ಕುತ್ತಿ ಹಾಲು ನಾಳೆ ಮೂಡಿದ ಸೂರ್ಯ


ಮುಳುಗುವುದರೊಳಗೆ ತಾರೆಂದು ಹೇಳಿದನು


ಆ ಮಾತನ್ನು ಕೇಳಿ ಕವುಚಿ ಮಲಗಿ ಚಾಪೆಹಾಕಿ


ಮಲಗಿದರು ಅಬ್ಬಿನ ಬಂಗಾರುವಿನ ತಂದೆ


ಯಾರಯ್ಯ ತಂದೆಯವರೆ ಏನು ಮಾತು ಹೇಳಿದರೆಂದು


ಬಂಗಾರು ಅಬ್ಬಿನ ಬಂಗಾರು ಕೇಳಿದರು


ಮೂಡಿದ ಸೂರ್ಯ ಮುಳುಗುವುದರೊಳಗೆ ಕೋಣದ ಒಂದು ಕುತ್ತಿ


ಹಾಲು ತರಬೇಕೆಂದು ಹೇಳಿದರು


ಒಂದು ಕುತ್ತಿ ಹಾಲು ತರಬೇಕಂತೆ ಕೋಣದ ಹಾಲು


ಎಂದು ಅವರು ಹೇಳಿದಾಗ 


 ಅಷ್ಟು ಎಲ್ಲ ಮಾತುಕೇಳಿ ನೀವು ಯಾಕೆ


ಸೋತಿರಿ ತಂದೆಯವರೇ ಕೇಳಿದಿರ 


 ಇವತ್ತೊಂದು ರಾತ್ರಿಯೆ ಹೋಗಬೇಕು


ಬಂಗಾರು ಅಬ್ಬಿನ ಬಂಗಾರು ಹೇಳಿದಳು


ಒಂದು ಸೇರು ಅರಸಿನ ಹುಡಿ ತನ್ನಿರಿ


ಒಂದು ಸೇರು ಸುಣ್ಣ ತನ್ನಿರಿ ಎಂದಳು


ಆ ದಿನ ಹೋಗಿ ಮರುದಿನದಲ್ಲಿ ಬೆಳಗ್ಗೆ


ಎದ್ದು ಒಂದು ಕಟ್ಟು ಬಟ್ಟೆ ಹಿಡಿದು


ರಾಜನ ಅರಮನೆ ಎದುರು ತೊಳೆಯಲೆಂದು ಹೋಗುವಳು


ಅವಳು ಅಬ್ಬಿನ ಬಂಗಾರು 


 ನಿನ್ನೆ ಮನೆಯಲ್ಲಿ ಯಾರು ಹೆತ್ತಿದ್ದಾರೆ


ಎಂದು ಅವನು ಕೇಳಿದನು


ನನ್ನ ಮನೆಯಲ್ಲಿ ತಂದೆಯವರ ಹೆರಿಗೆಯಾಗಿ


ಹೆತ್ತಿದ್ದಾರೆ ಹೇಳಿದಳು ಬಂಗಾರು ಅಬ್ಬಿನ ಬಂಗಾರು


ಗಂಡು ಗಂಡಸು ಹೆರುವುದು ಉಂಟೆ


ಬಂಗಾರು ಎಂದು ಕರೆದು ಕೇಳಿದ ಕುಂದಯ ನಂದಾರ


ಕೋಣ ಕರು ಹಾಕುವುದೆ ಹಾಲು ಕೊಡುತ್ತದೆಯೆ


ಎಂದು ಕೇಳಿದಳು ಅಬ್ಬಿನ ಬಂಗಾರು


ಇಷ್ಟು ಕಲಿತ ಹೆಣ್ಣನ್ನು ನೋಡಬೇಕು ನೋಡಬೇಕೆಂದು


ಹೇಳಿದನು ನಂದಾರ ಕುಂದಯ ನಂದಾರ


ನಿನ್ನನ್ನು ಮದುವೆ ಆದರೆ ನೀನು ಏನು ಮಾಡುತ್ತಿ


ಎಂದು ಕೇಳಿದನು ಕುಮದಯ ನಂದಾರ


ಮದುವೆ ಆದರೆ ನನ್ನನ್ನು ಮೂರು ವರ್ಷ


ಹೋಗುವುದರೊಳಗೆ ಮೂರು ಮಕ್ಕಳನ್ನು ಹೆತ್ತು


ಕೊಡುವೆ ಎಂದು ಹೇಳುವಳು 


 ಬಂಗಾರ ಅಬ್ಬಿನ ಬಂಗಾರು


ಇಷ್ಟು ಸೊಕ್ಕಿನ ಹೆಣ್ಣನ್ನು ನೋಡಬೇಕು ನೋಡಿಯೇ ಬಿಡಬೇಕೆಂದು


ಆ ದಿನ ಕಳೆದು ಮರುದಿನ ಬಂದಾಗ


ಆ ಒಂದು ದಿನ ತಂದೆಯವರನ್ನು ಕರೆದುಕೊಂಡು


ಹೆಣ್ಣನ್ನು ಕೇಳಲೆಂದು ಬರುವರು


ಅವರು ಎದ್ದಾಡಿ ಎಣ್ಮೆದಡಿ ಬೀಡಿಗೆ ಮತ್ತು 


 ತಾಲಾಡಿ ಸಾದಡಿ ಬೀಡಿಗೆ


ಸೇತುವೆ ಹಾಕುವ3 ಎಂದು ಹೇಳುವರು


ಬಲ್ಲಾಳರು ತಾಲಾಡಿ ಸಾದಡಿ ಬಲ್ಲಾಳರು


ಆಯಿತೆಂದು ಹೇಳಿ ಮೂರೇ ಮೂರು ದಿನದಲ್ಲಿ


ಮದುವೆಯನ್ನು ಮಾಡಿಕೊಂಡು 


 ಹೆಣ್ಣನ್ನು ಕರೆದುಕೊಂಡು ಹೋಗುವನು


ನಂದಾರ ಕುಂದಯ ನಂದಾರ


ಡೆನ್ನಾನಾ ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನ


ಯಾರಯ್ಯ ತಂದೆಯವರೆ ಕೇಳಿರಿ ತಂದೆಯವರೆ


ಎಂದು ನಂದಾರ ಕುಂದಯ ನಂದಾರ


ಮೂರು ಮಾಳಿಗೆ ಅಡಿಯಲ್ಲಿ ನೆಲಮಾಳಿಗೆ


ಕಟ್ಟಬೇಕೆಂದು ಅವನು ಕೇಳುತ್ತಾನೆ


ನೆಲಮಾಳಿಗೆಯಲ್ಲಿ ಮೂರು ಕೋಣೆಯನ್ನು


ಕಟ್ಟಿಸಿದ್ದಾರೆ ಬಲ್ಲಾಳರು ನಂದಾರ ಬಲ್ಲಾಳರು


ಅದರಲ್ಲಿ ಅವಳಿಗೆ ಮೂರು ವರ್ಷಕ್ಕೆ ಸಾಲುವಷ್ಟು


ಸಾಮಾನು ಸಾಮಾಗ್ರಿಗಳನ್ನು ಕೊಡಬೇಕು ಹೊರಗಡೆ


ಹೋಗದೆ ಹಾಗೆ ನೋಡಿಕೊಳ್ಳಬೇಕು ಎಂದು ಹೇಳಿ


ಬೀಗ ಹಾಕಿ ನನಗೆ ಮೂರು ವರ್ಷದ


ದಂಡು ಕಂಡು ಬಂದಿದೆ ಹೋಗುವೆನೆಂದು ಹೇಳಿದನು


ನಂದಾರ ಕುಂದಯ ನಂದಾರ


ಡೆನ್ನಾನಾ ಡೆನ್ನಾನಾ ನಂದಾರ ಕುಂದಯ ನಂದಾರ


ನಾನು ಮೂರು ವರ್ಷದ ದಂಡಿನಲ್ಲಿ


ಹೋಗುವೆ ಬಂಗಾರು ಅಬ್ಬಿನ ಬಂಗಾರು


ನೀನು ಏನು ಮಾಡುವೆ ಎಂದು ಕೇಳಿದಾಗ


ನಾನು ಮೂರು ಮಕ್ಕಳನ್ನು ಹೆತ್ತು 


ಆಡಿಸಿಕೊಂಡು ಇರುವೆಯೆಂದು ಹೇಳುವಳು


ಅವಳು ಬಂಗಾರು ಅಬ್ಬಿನ ಬಂಗಾರು


ಅಷ್ಟು ಮಾತು ಕೇಳಿದನೆ ಬಂಗಾರುವನ್ನು


ನೆಲ ಮಾಳಿಗೆಯಲ್ಲಿ ಕುಳ್ಳಿರಿಸಿ


ಬಾಗಿಲನ್ನು ಮುಚ್ಚಿ ಬೀಗ ಹಾಕಿ ಹೋಗುತ್ತಾನೆ


ನಂದಾರ ಕುಂದಯ ನಂದಾರ 


 ದಂಡನು ಸಾಧಿಸಲು ಹೋದವನು


ಹೊರಗಿನ ರಾಜ್ಯಕ್ಕೆ ಹೋಗುತ್ತಾನೆ


ಹೋಗಿ ಆರು ಮೂರು ದಿನ ಆದಾಗ


ಒಂದು ಹೆಣ್ಣು ಪರಿಚಯವಾಗುತ್ತಾಳೆ


ಹೂ ಮಾರುವ ಬಾಯಿಯ ರೂಪದಲ್ಲಿ


ಹೋಗುವಳು ಬಂಗಾರು ಅಬ್ಬಿನ ಬಂಗಾರು


ಬಿಳಿ ಹೆಗ್ಗಣವನ್ನು ಕರೆಯುವಳು ಅಬ್ಬಿನ ಬಂಗಾರು


ಗುಹೆ ಕೊರೆದು ದಾರಿ ಮಾಡೆಂದು ಹೇಳುತ್ತಾಳೆ


ಸುರಂಗ ಮಾಡುತ್ತಾಳೆ ಅಬ್ಬಿನ ಬಂಗಾರು


ಹೆಗ್ಗಣ ಹೋಗುವ ದಾರಿಯಲ್ಲಿ ಹೋಗುತ್ತಾಳೆ


ಬಂಗಾರು ಅಬ್ಬಿನ ಬಂಗಾರು


ಹೊರಗೆ ಬಂದು ಊರಿಗೆ ಹೋಗಿ ಬಾರಮ್ಮನ


ರೂಪ ತಾಳುವಳು ಬಂಗಾರು ಅಬ್ಬಿನ ಬಂಗಾರು


ಹೂ ಮಾರುವ ಬಾಯಿಯಾಗಿ ಆಗಿ ಬಂಗಾರು ಹೋಗುವಾಗ


ರಾಜನು ಅದೊಂದು ಕುದುರೆಯನ್ನು ಕುಳಿತು ಸವಾರಿ


ಮಾಡಿಕೊಂಡು ಇರುತ್ತಾನೆ ಕುಂದಯ ನಂದಾರ


ಒನಪು ಒಯ್ಯಾರ ಮಾಡಿ ಸೆಳೆಯುವಳು


ಒಟ್ಟಿಗೆ ಇರುವ ಎಂದು ಬಂಗಾರು ಹೇಳುವಳು


ರಾತ್ರಿ ಹಗಲು ಎಂದು ಇಲ್ಲದೆ ಒಟ್ಟಿಗೆ ಇರುವವರು


ಮೂರು ವರ್ಷವಾದಾಗ ಒಂದು ಹೆಣ್ಣು ಎರಡು ಗಂಡು


ಮಕ್ಕಳನ್ನು ಹೆರುತ್ತಾಲೆ ಅಬ್ಬಿನ ಬಂಗಾರು


ಒಂದು ದಿನ ಬರುವಾಗ ಹೇಳುತ್ತಾಳೆ ನಿಮ್ಮ


ಮಗ ಅಳುತ್ತಾ ಇದೆ ಎಂದು ಹೇಳುತ್ತಾಳೆ


ಅದಕ್ಕೆ ಏನು ಕೊಡಬೇಕು ಏನು ಬೇಕೆಂದು ಕೇಳುವಾಗ


ಬೆಳ್ಳಿಯ ಸುಣ್ಣದ ಅಂಡೆಬೇಕಂತೆ ಎಂದಾಗ


ಸುಣ್ಣದ ಅಂಡೆ ಕೊಡುತ್ತಾನೆ ಕುಂದಯ ನಂದಾರ


ಮರುದಿನ ಕೇಳುತ್ತದೆ ಮಗುವಿಗೆ 


 ಚಿವುಟಿ ಅಳಿಸುತ್ತಾ ಇರುತ್ತಾಳೆ


ಏನು ಬೇಕಂತೆ ಎಂದು ಕೇಳಿದಾಗ


ಚಿನ್ನದ ನೇಗಿಲು ಬೇಕಂತೆ ಎಂದು ಹೇಳುತ್ತಾಳೆ


ಚಿನ್ನದ ನೇಗಿಲು ಕೊಡುತ್ತಾನೆ ಕುಂದಯ ನಂದಾರ


ಮರುದಿನ ಇನ್ನೊಂದು ದಿನದಲ್ಲಿ ಮತ್ತೆ


ಅಳುತ್ತದೆ ಇನ್ನೊಂದು ಮಗುವು


ಯಾತಕ್ಕಾಗಿ ಅಳುತ್ತಿದೆ ಮಗು ಎಂದು ಕೇಳುತ್ತಾನೆ


ನಂದಾರ ಕುಂದಯ ನಂದಾರ


ಬಂಗಾರಿನ ಬಳೆ ಮತ್ತು ಉಂಗುರ ತೆಗೆದು ಕೊಡಬೇಕೆಂದು


ಬಂಗಾರು ಕೇಳಿದಳು ಅಬ್ಬಿನ ಬಂಗಾರು


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ ಓಯೋಯೇ


ಕರೆದುಕೊಂಡು ಮೂವರು ಮಕ್ಕಳನ್ನು ಅದೇ


ಬಿಳಿ ಹೆಗ್ಗಣವನ್ನು ಕರೆದು ಅದೊಂದು ಸುರಂಗದಲ್ಲಿ


ಮಗುವನ್ನು ಹಿಡಿದುಕೊಂಡು ಬರುವಳು ಅಬ್ಬಿನ ಬಂಗಾರು


ನಂದಾರ ಬೀಡಿಗೆ ಬಂದು ಬಂಗಾರು


ಮಕ್ಕಳನ್ನು ಆಡಿಸಿಕೊಂಡು ಇರುತ್ತಾಲೆ ಅಬ್ಬಿನ ಬಂಗಾರು


ದಂಡಿಗೆ ಹೋದ ನಂದಾರ ದಂಡು ಸಾಧಿಸಿಕೊಂಡು


ಬರುತ್ತಾನೆ ಕುಂದಯ ನಂದಾರ


ಯಾರಯ್ಯ ತಂದೆಯವರೆ ನಿನ್ನ ಸೊಸೆ


ಎಲ್ಲಿದ್ದಾಳೆ ಏನು ಮಾಡುತ್ತಿದ್ದಾಳೆ ಅವಳು


ಎಂದು ಕೇಳುತ್ತಾನೆ ಕುಂದಯ ನಂದಾರ


ಯಾರಪ್ಪ ಮಗ ಕೇಳಿದೆಯ ನಾನು ಹೇಗೆ ನೋಡುವುದು


ನೆಲ ಮಾಳಿಗೆಯಲ್ಲಿ ಕೂಡಹಾಕಿ ನೀನಾನದರೂ ಬೀಗಹಾಕಿ


ಬೀಗದ ಕೈಯನ್ನು ಹಿಡಿದುಕೊಮಡು ಹೋಗಿದ್ದೀಯಲ್ಲ


ನನಗೆ ಏನೆಂದು ಹೇಗೆ ಗೊತ್ತಿರುತ್ತದೆ ಎಂದು ಹೇಳಿದರು ನಂದಾರರು


ಕೆಳಗೆ ಹೋದರು ನೆಲಮಾಳಿಗೆಯ ಬಾಗಿಲು ತೆರೆದಾಗ


ಮೂವರು ಮಕ್ಕಳನ್ನು ಆಡಿಸಿಕೊಂಡು ಇದ್ದಾಳೆ


ಬಂಗಾರು ಅಬ್ಬಿನ ಬಂಗಾರು


ಡೆನ್ನಾನಾ ಡೆನ್ನಾನ ಡೆನ್ನಾನಾ ಓಯೋಯೇ ಡೆನ್ನನ್ನ ಡೆನ್ನಾನಾ






* * *


8. ಬಾಲೆ ರಂಗಮೆ


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನೇಯೇ


ಬರ್ಪಾನೆಂದದ ಬೀಡಿನಲ್ಲಿ ಇದ್ದಾರೆ ಮಕ್ಕಳು


ಒಂದು ತಾಯಿಗೆ ಇಬ್ಬರು ಮಕ್ಕಳು


ಅಣ್ಣನೇ ಮೇದಾರ ತಂಗಿಯು ರಂಗಮೆ 


 ರಂಗಮೆ ಬಾಲೆ ರಂಗಮೆ


ತಾಯಿಯ ಹಾಲು ಕುಡಿಯುವ ಕಾಲಕ್ಕೆ


ತಾಯಿಗೆ ಅಳಿವು ಉಂಟಾಯಿತು 


 ತಂದೆಯ ಅನ್ನವನ್ನು ತಿನ್ನುವ ಕಾಲದಲ್ಲಿ


ತಂದೆಗೆ ಕೂಡ ಅಳಿವು ಉಂಟಾಯಿತು


ಯಾರಮ್ಮ ರಂಗಮೆ ಬಾಲೆ ರಂಗಮೆ 


 ಇಲ್ಲಿಗೆ ಬಾ ಮಗಳೆ ಎಂದರು


ಯಾರಮ್ಮ ತಂಗಿ ಬ  ಯಾರಮ್ಮ ತಂಗಿ ಬಾಲೆ ರಂಗಮೆ


ಹೊರಗಿನ ಒಳಗಿನ ಕೆಲಸ ಬೊಗಸೆ ಕಲಿಯಬೇಕು


ಚಿಕ್ಕವಳು ಹೋಗಿದ್ದಿ ಮಗಳೆ ರಂಗಮೆ


ನೀನಾದರೂ ದೊಡ್ಡವಳಾಗಿದ್ದಿ ಎಂದರು ಅವರು


ಯಾರಯ್ಯ ಅಣ್ಣನವರೇ ಕೇಳಿದಿರ 


 ನಿಮ್ಮ ಪ್ರೀತಿಯ ಮೋಹದ ತಂಗಿ


ರಂಗಮೆ ನಾನು ಎಂದು ಹೇಳಿದಳು ಆ


ನನಗೆ ಏನು ತಿಳಿಯುವುದಿಲ್ಲ ಎಂದು ಕೇಳಿದಾಗ


ಆಡವಾಡುವುದು ಅಲ್ಲ ಮಗಳೆ ರಂಗಮೆ ನೀನಾದರೂ


ಚಿಕ್ಕವಳು ಹೋಗಿ ದೊಡ್ಡವಳು ಆಗಿರುವೆ


ಬೆಳಿಗ್ಗೆ ಎದ್ದು ಒಲೆಯ ಬೂದಿ ಗೋರುವ


ಮಗಳು ಆಗಿರುವೆ ಎಂದು ಹೇಳಿದರು


ಯಾರು ಮಗಳೆ ರಂಗಮೆ ರಂಗಮೆ ಕೇಳಿದೆಯಾ


ಒಳಗಿನ ಹೊರಗಿನ ಕೆಲಸ ಬೊಗಸೆ ಕಲಿತು


ಒಳ್ಳೆಯ ಅರಸು ಬಲ್ಲಾಳರನ್ನು ಒಲಿಸಿ


ಮದುವೆ ಮಾಡಿಕೊಡಬೇಕೆಂಬ ಆಸೆಯನ್ನು


ಹೊಂದಿದ್ದೇನೆ ಎಂದು ಹೇಳಿದರು ಮೇದಾರ


ಯಾರಯ್ಯ ಅಣ್ಣನವರೆ ಅಣ್ಣನವರೆ ನನಗಾದರೂ


ಹೋಗಬೇಕು ಕದಿರೆಯ ಬೀಡಿಗೆ 


 ಮದುವೆ ಆಗುವ ಮೊದಲು


ನನಗೊಂದು ಅವಕಾಶ ಕೊಡಿರೆಂದು


ಹೇಳಿದಳು ಬಾಲೆ ರಂಗಮೆ ಹೇಳಿದಳು


ಕದಿರೆಯ ಬೀಡಿಗೆ ಹೋಗಬೇಕು ನನಗೆ


ಕದಿರೆಯ ಕೆರೆಯ ಸ್ನಾನ ಮಾಡಬೇಕೆಂದು ಹೇಳಿದಳು


ಅದರಿಂದಲೂ ಆ ಕಡೆ ಹೋಗಬೇಕು ನನಗೆ


ಎಲ್ಲೆಲ್ಲಿ ದೇವಸ್ಥಾನವೋ ಕೋಳ್ಯೂರಿಗೆ ಹೋಗಬೇಕು


ಮುಕಾಂಬೆ ದೇವಿಗೆ ಹೂವಿನ ಪೂಜೆ ಮಾಡಿ


ನಾನು ಹಿಂದೆ ಬರುವೆ ಎಂದು ಹೇಳಿದಳು ರಂಗಮೆ


ಬಾಲೆ ರಂಗಮೆ ಹೇಳಿದಳು 


 ಸುತ್ತ ಶುದ್ಧವಾದಳು ಮಗಳು


ಬಿಸಿನೀರು ತಣ್ಣೀರಿನಲ್ಲಿ ಸ್ನಾನ ಮಾಡಿದಳು


ಬೆಳ್ಳಿಯಲ್ಲಿ ಬಿಳಿ ಆದಳು ರಂಗಮೆ


ಬಂಗಾರದಲ್ಲಿ ಸಿಂಗಾರ ಆದಳು 


 ದಂಡಿಗೆಯಲ್ಲಿ ಕುಳ್ಳಿರಿಸಿ ಬಿಟ್ಟರು ಅಣ್ಣ


ತಂಗಿಯನ್ನು ಕುಳ್ಳಿರಿಸುವಾಗ


ಡೆನ್ನ ಡೆನ್ನ ಡೆನ್ನಾನಾ ಬಾಲೆ ಮೇದಾರ ಹೇಳಿದಳು


ಯಾರಯ್ಯ ಬೋವಿಗಳೆ ಯಾರಯ್ಯ ಬೋವಿಗಳೆ


ಇಲ್ಲಿ ಹೊತ್ತ ದಂಡಿಗೆಯನ್ನು ಕದ್ರಿಯಲ್ಲಿ ಇಳಿಸಬೇಕು


ಕದ್ರಿಯಲ್ಲಿ ಹೊತ್ತ ದಂಡಿಗೆ ಕೋಳ್ಯೂರಿಗೆ ಹೋಗಬೇಕು


ಅಲ್ಲಲ್ಲಿ ಮಾತ್ರ ಇಳುಗಬೇಕೆಂದು ಹೇಳಿದರು


ಅಷ್ಟು ಮಾತು ಕೇಳಿದಳು ಮಗಳು


ಆದೀತು ಅಣ್ಣನವರೆ ಚಂದದಲ್ಲಿ ಹೋಗಿ


ಬರುತ್ತೇವೆಂದು ಹೇಳಿ ಹೊರಡುವಳು ರಂಗಮೆ


ಒಂದೊಂದು ಗುಂಡಿ ಒಂದೊಂದು ಬೈಲು


ದಾಟಿಕೊಂಡು ಹೋಗುವಾಗ 


 ಕುದುರೆ ಮೇಲೆ ಕುಳಿತುಕೊಂಡು


ಭೈರರ ಅರಸ ನೋಡುವಾಗ 


 ಯಾರು ನೀವು? ಕಂಬಳದ ಕಟ್ಟಹುಣಿ


ಯಾಕೆ ಹೋಗುವುದೆಂದು ಕೇಳುವಾಗ


ಪೂರ್ವದಿಂದ ಸೂರ್ಯದೇವರು ಉದಿಸಿ ಬಂದ


ಆಕಾಸದಿಂದ ಬಿದ್ದ ದೇವಿಯೆ?


ಯಾರಪ್ಪ ಇನ್ನೊಂದು ದೇವಿಯಾ ದೈವವಾ?


ಯಾರಪ್ಪ ಕಾಣುವುದೆಂದು ಹೇಳಿದನು


ಇಷ್ಟೊಂದು ಚಂದದ ಹೆಣ್ಣನ್ನೇ ನೋಡಿಲ್ಲ


ಅವಳನ್ನಾದರೂ ನೋಡಬೇಕೆಂದು ಹೇಳಿದನು


ಓಡಿಕೊಂಡು ಹಾರಿಕೊಂಡು ಬರ್ಪಾನೆಂದ ಬೀಡಿನ


ಕಂಬಳ ಕಟ್ಟಹುಣಿ ದಾಟಿಕೊಂಡು ಇಳಿದು


ಹೋಗುವಾಗ ಒಂದು ಗುಡ್ಡೆ ಒಂದು


ಬಯಲು ದಾಟಿಕೊಂಡು ಹೋಗುವಾಗ ಸಿಕ್ಕುತ್ತದೆ


ಕದಿರೆಯ ಆನೆಯನ್ನು ಹತ್ತಿಕೊಂಡು ಹೋಗುವಾಗ


ಎದುರಿನಲ್ಲಿ ಬರುತ್ತಾನೆ ಬೈರವ ಅರಸು


ಕೈಯಲ್ಲಿ ಹಿಡಿದು ನಾನು ಕೂಡ ಬರುತ್ತೇನೆ


ದಂಡಿಗತೆಯ ಕೊಂಬಿಗೆ ಕೈಕೊಟ್ಟಾಗ


ಯಾರಯ್ಯ ಅರಸು ಭೈರವ ಅರಸು 


 ಎಲ್ಲಿಗೆ ಹೋಗುವ ದಂಡಿಗೆ ಎಂದು


ನಿನಗಾದರೂ ತಿಳಿದಿದೆಯಾ? ಎಂದು ಹೇಳಿದಳು


ನಾನು ಹೋಗುವ ದೇವಸ್ಥಾನಕ್ಕೆ ನೀನು ಬರಲಿಕ್ಕಿಲ್ಲ


ಹೋಗುವುದೊಂದು ದಾರಿಯಲ್ಲಿ ನಾನು ಹಿಂದೆ ಬರುವಾಗ


ಬಾ ಎಂದು ಹೇಳಿದಳು ಮದುಮಗಳು ರಂಗಮೆ


ಯಾರಮ್ಮ ರಂಗಮೆ ರಂಗಮೆ ಕೇಳಬೇಕು


ಜೀವ ಇದ್ದರೆ ನಿನ್ನೊಂದಿಗೆ ಇರಬೇಕು


ಸತ್ತರೂ ಕೂಡ ನಿನ್ನೊಂದಿಗೇ ಇರಬೇಕೆಂದು


ಆಸೆಯನ್ನು ಹೊಂದಿದ್ದೇನೆ ಎಂದನು


ಡೆನ್ನ ಡೆನ್ನ ಡೆನ್ನಾನಾ ಓಯೋಯೇ ಡೆನ್ನಾನಾ


ನಾನು ಈಗ ಹೋಗುವಾಗ ಹೋಗುತ್ತೇನೆ ಅರಸು


ಬರುವಾಗ ಬರುತ್ತೇನೆಂದು ಹೇಳಿದಳು


ಬಂದಾಗ ನಿನ್ನನ್ನು ಕರೆದುಕೊಂಡು ಹೋಗುವುದಿಲ್ಲ


ನನ್ನೊಂದು ಅಣ್ಣನಲ್ಲಿ ಕೇಳಿ ನೋಡು


ಪೊದು ಹಿಡಿಯುತ್ತಾನಾ? ಹೆಣ್ಣು ಕೊಡುತ್ತಾನಾ?


ಕೇಳು ಕರೆದು ಬಾ ಎಂದು ಹೇಳಿದಳು


ಅದು ಎಲ್ಲ ಬೇಡ ಒಟ್ಟಿಗೆ ಕುಳಿತು


ಹೇಳಿದ ಹರಕೆ ಸಂದಾಯ ಮಾಡೋಣವೆಂದು ಹೇಳುವನು


ಭೈರವ ಕೇರಿಯ ಭೈರವ ಅರಸುಗಳು


ಆ ಹೊತ್ತಿಗೆ ಹೇಳುತ್ತಾನೆ ಅರಸು


ಯಾರಮ್ಮ ರಂಗಮೆ ರಂಗಮೆ ನಿನ್ನನ್ನು


ಚಂದವನ್ನು ನೋಡಿದ್ದು ಸತ್ಯವಾದರೆ


ನನಗೆ ನೀನೇ ಬೇಕು ಎಂದು ಹೇಳಿದನು


ಭೈರರ ಕೇರಿಯ ಭೈರರಸು ಹೇಳುವಾಗ


ದೂರದಲ್ಲಿ ನಿಂತು ನೋಡುವರು ಅರಸುಗಳು


ಕದಿರೆಯ ಬೊಳ್ಳಿಲ್ಲ ಅರಸುಗಳು


ಯಾರಯ್ಯ ಆಳುಗಳೇ ಆಳುಗಳೇ ಕೇಳಿದಿರ


ಯಾರದೊಂದು ದಂಡಿಗೆ ಬರುವುದೆಂದು


ಕದಿರೆಯ ಅರಸುಗಳು ಕೇಳುವಾಗ


ಬರ್ಪಾನೆಂದ ಬೀಡಿನಿಂದ ಬಂದ ದಂಡಿಗೆ


ಕದಿರದ ಬೀಡಿಗೆ ಬರುತ್ತಾ ಇದೆ ಎಂದು ಹೇಳಿದಾಗ


ಅಲ್ಲಿಗೆ ಹೋಗಿ ಕದಿರೆಯಿಂದ 


 ಹೋದ ದಂಡಿಗೆ ಕೇಳಬೇಕು


ಕೋಳ್ಯೂರಿನ ದೇವಸ್ಥಾನಕ್ಕೆ ಹೋಗುತ್ತದೆ


ಕೋಳ್ಯೂರಿನ ಕುಂತ್ಯಮ್ಮ ದೇವಿಯ ಹರಿಕೆ ಸಲ್ಲಿಸಿ


ಬರಬೇಕೆಂದು ಹೋಗುವಾಗ 


 ಒಂದು ಗುಡ್ಡೆ ಒಂದು ಬೈಲನ್ನು


ದಾಟಿಕೊಂಡು ಇಳಿದುಕೊಂಡು ಹೋಗಿ ಮನೆಗೆ


ಹೋಗುವಾಗ ಹೋದ ದಂಡಿಗೆ ಬರುವಾಗ


ಬೇರೊಂದು ಹಾದಿಯಲ್ಲಿ ಹೋಗಿ ಎಂದು


ಹೋದ ದಾರಿಯಲ್ಲಿ ಬರುವುದು ಬೇಡ ಎಂದು


ಹೇಳಿದರು ಕದಿರೆಯ ಅರಸರು ಹೇಳಿದರು


ಕೋಳ್ಯೂರಿಗೆ ಹೋಗಿ ಎಂದು ಹೇಳಿದರು


ಕಳುಹಿಸಿದರು ಕದಿರೆಯ ಅರಸರು


ಕೋಳ್ಯೂರಿನ ದೇವಸ್ಥಾನದಲ್ಲಿ ಹೇಳಿದ ಹರಕೆಯನ್ನು


ಸಲ್ಲಿಸಿ ರಂಗಮೆ ಇಲ್ಲಿಯೇ ಬರುವಳೆಂದು


ಕಾದುಕೊಂಡು ಕುಳಿತುಕೊಳ್ಳುತ್ತಾನೆ ಭೈರವ ಅರಸ ಕುಳಿತಿದ್ದಾನೆ


ನಿನ್ನೆ ಹೋದ ದಂಡಿಗೆ ಇಂದಿನವರೆಗೆ ಬರಲಿಲ್ಲ


ಯಾಕಾಗಿ ಬರಲಿಲ್ಲವೆಂದು ಕಾದುಕುಳಿತಿದ್ದಾನೆ


ಭೈರರ ಕೇರಿಯ ಭೈರವ ಅರಸ


ದಂಡಿಗೆ ಮುಟ್ಟುತ್ತದೆ ಬರ್ಪಾನೆಂದ ಬೀಡಿಗೆ


ಯಾರಯ್ಯ ಅಣ್ಣನವರೆ ಅಣ್ಣನವರೆ ಕೇಳಿರಿ


ಭೈರವ ಕೇರಿಯಲ್ಲಿ ಹೋಗುವಾಗ ನನಗಾದರೂ


ಭೈರವ ಅರಸ ಕೀಟಲೆ ಮಾಡಿದ್ದಾನೆ


ದಂಡಿಗೆಯ ಕೊಂಬಿಗೆ ಕಯ ಹಾಕಿದ್ದಾನೆ


ಹಿಡಿಯಬೇಡ ಹಿಡಿಯಬೇಡ ಎಂದೆ ಅಣ್ಣನವರೆ


ನಾನು ಬರುತ್ತೇನೆಂದು ಹೇಳಿದೆ


ಹೋಗುವಾಗ ಬಿಡು ಬರುವಾಗ ಬರುತ್ತೇನೆ ಎಂದು ಹೇಳಿದೆ


ಹೋದಾಗ ಹೋದ ದಂಡಿಗೆ


ಹಿಂತಿರುಗುವಾಗ ಬೇರೆ ಒಂದು ದಾರಿಯಲ್ಲಿ ಬಂದಿತು


ಹೋಗುವಾಗ ಹಾಗೆ ಕುಳಿತುಕೊಂಡು ಬರುವಾಗ ಬನ್ನಿ ಎಂದು


ಭೈರವ ಅರಸು ಹೇಳಿದ್ದಾನೆ ಅಣ್ಣವರೇ 


 ಎಂದು ರಂಗಮೆ ಹೇಳಿದಳು


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನಾ


ಭೈರವ ಅರಸನ ಕೀಟಲೆಯನ್ನು ಪ್ರಶ್ನಿಸಲು


ನನಗೆ ಸಾಧ್ಯವಿಲ್ಲ ಶುದ್ಧ ಕಳ್ಳನಾತ 


 ಅವನ ಎದುರು ನಿಲ್ಲುವ ಸಾಮಥ್ರ್ಯ 


ನನಗಿಲ್ಲ ರಂಗಮೆ ಹೋಗಬೇಡ


ಹೋಗಬೇಡ ರಂಗಮೆ ಎಂದು ಹೇಳಿದೆ ನಾನು


ಹಠವನ್ನೇ ಹಿಡಿದು ಹೋದೆ ಎಂದು ಹೇಳಿದರು


ಯಾರು ಮಗಳೆ ರಂಗಮೆ ಬಂದ ಕಷ್ಟಕ್ಕೆ ನಾನು


ಒದಗಿ ಇರುವೆನೆಂದು ಹೇಳಿದರು ಅಣ್ಣನವರು


ಮೇದಾರ ಹಾಗೆ ಹೇಳಿದಾಗ 


 ಯಾರಯ್ಯ ಅಣ್ಣನವರೆ ಕೇಳಿರಿ


ಭೈರರ ಕೇರಿಯಿಂದ ಇಳಿದು ಹೋಗುವಾಗ


ಕದಿರೆಯ ಕಟ್ಟಹುಣೆಯಲ್ಲಿ ಹೋಗುವಾಗ ನೋಡಿದ್ದಾರೆ


ಕದಿರೆಯ ಅರಸುಗಳು ಹೇಳಿದರು


ಹೋದ ದಾರಿಯಲ್ಲಿ ಬರಬೇಡ ಮಗಳೆಂದು ಹೇಳಿದರು


ಕದಿರೆಯ ಅರಸುಗಳು ಹೇಳಿದರು


ಅವನು ಏನು ಮಾಡುತ್ತಾನೆ ಅವನನ್ನು ಏನು


ಮಾಡಬೇಕೆಂದು ನನಗೆ ಗೊತ್ತಿದೆ ಎಂದರು


ಅಷ್ಟು ಮಾತು ಕೇಳಿದರು ಅಣ್ಣ ಮೇದಾರರು


ಯಾರು ಮಗಳೆ ತಂಗಿ ಯಾರಮ್ಮ ಮಗಳೆ ರಂಗಮೆ


ನೀನು ಹಾಗೆ ಹೇಳಿದರೆ ಅವನು ಕೇಳುತ್ತಾನೆಯೇ?


ಓಲೆ ಬರೆದು ಕಳುಹಿಸಿ ಕೊಟ್ಟಿದ್ದಾನೆ ಭೈರವ


ಭೈರರ ಕೇರಿಗೆ ಹೇಗೆ ಹೋಗುವುದೆಂದು ಹೇಳುವಾಗ


ಅಣ್ಣ ಒಬ್ಬ ಮೇದಾರ ಹೇಳುವಾಗ


ಯಾರಯ್ಯ ಅಣ್ಣನವರೆ ಏನೊಂದು ಕಷ್ಟ ಕೊಟ್ಟರೂ


ನನ್ನನ್ನು ಪೊದು ಹಿಡಿದು ಕೊಡುವೆ ಎಂದು


ಹೇಳಬೇಡಿ ಅಣ್ಣನವರೇ ಎಂದು 


 ಹೇಳಿದಳು ಬಾಲೆ ರಂಗಮೆ ಹೇಳುವಾಗ


ಓಲೆ ಸಿಕ್ಕಿದ ತಕ್ಷಣ ಓಲೆ ಹಿಡಿದುಕೊಂಡು


ಭೈರರ ಕೇರಿಗೆ ಹೋಗುವಾಗ ಅಲ್ಲಿ 


 ಭೈರವ ಅರಸು ಒಂದು ಮುಳ್ಳಿನ


ಪಡಿಯನ್ನು ತೆಗೆಸಿದ್ದಾನೆ ತೆಂಗಿನ ಮರಕ್ಕೆ ಹತ್ತಿ


ಕುರುವಾಯಿ ತೆಗೆಸಿದ್ದಾನೆ ಹೆಣ್ಣು ಕೊಡುತ್ತೀಯಾ


ಪೊದು ಹಿಡಿಯುತ್ತೀಯಾ ಮೇದಾರ ಎಂದು ಕೇಳಿದಾಗ


ಹೆಣ್ಣು ಕೊಡಲು ಪೊದು ಹಿಡಿಯಲು 


 ನಾವು ಬಲ್ಲಾಳರು ನೀವು ಭೈರರು ಪೊದು ಹೇಗೆ ಹಿಡಿಯುವುದು? 


ಹೆಣ್ಣು ಹೇಗೆ ಕೊಡುವುದು?


ಸಾಧ್ಯ ಇಲ್ಲವೆಂದು ಹೇಳಿದರು ಮೇದಾರರು


ಅಷ್ಟು ಮಾತು ಕೇಳಿದನೆ ಭೈರವ


ಯಾರಯ್ಯ ಮೇದಾರ ಯಾರಯ್ಯ ಮೇದಾರ


ಏಳು ಮಾಳಿಗೆಯ ಮೇಲೆ ಕುಳ್ಳಿರಿಸುವೆ ರಂಗಮೆಯನ್ನು


ಗಿಳಿ ಸಾಕಿದ ಹಾಗೆ ಸಾಕುವೆನು ರಂಗಮೆಯನ್ನು


ಕಣ್ಣಿನಿಂದ ಒಂದು ಹನಿ ನೀರು ಬೀಳದಂತೆ


ಸಾಕುವೆನೆಂದು ಹೇಳಿದನು ಭೈರವ ಅರಸ ಹೇಳಿದನು


ಹೆಣ್ಣು ಕೊಡುವೆಯ? ಪೊದು ಹಿಡಿಯುವೆಯ? ಮೇದಾರ


ಎಂದು ಹೇಳಿದಾಗ ಹೇಳುತ್ತಾರೆ


ಹೆಣ್ಣು ಕೊಡಲಾರ ಸಂಬಂಧ ಹಿಡಿಯಲಾರೆ


ಸಂಬಂಧ ಹಿಡಿಯಲು ನೀನಾದರೂ ಭೈರವ


ಕೇರಿಯ ಭೈರವ ನಾನಾದರೂ ಕೊಡಲಾರೆ


ಅವಳ ಹತ್ತಿರ ಒಂದು ಮಾತು ಕೇಳಬೇಕು ಎನ್ನುತ್ತಾನೆ


ಹೆಣ್ಣು ನೋಡಲು ಸಂಬಂಧ ಹಿಡಿಯಲು


ನನ್ನದೊಂದು ಬೀಡಿಗೆ ಬರಬೇಕೆಂದು ಹೇಳಿದಾಗ


ಹೇಳಿದ ಮಾತು ಇಂದಲ್ಲ ಈ ವಾರವಲ್ಲ


ಬರುವ ವಾರದಲ್ಲಿ ಮದುವೆಯ ದಿಬ್ಬಣ ತೆಗೆದುಕೊಂಡು


ಬರುವೆನೆಂದು ಭೈರವರ ಅರಸು ಹೇಳುವಾಗ


ಅಷ್ಟೆಲ್ಲ ಮೇಲೆ ಹೋಗಬೇಡ ಅರಸು 


 ನನ್ನ ತಂಗಿ ಒಪ್ಪಿದಳೆಂದಾದರೂ


ಜಾತಿಯಲ್ಲಿ ನೀನು ಕೆಳಗೆ ನಾವು ಮೇಲು


ಜಾತಿಗಿಂತ ಕೆಳಗೆ ಹೆಣ್ಣು ಕೊಟ್ಟು 


 ಭೈರರ ಕೇರಿಗೆ ಬಲ್ಲಾಳರ ಹೆಣ್ಣನ್ನು


ಕೊಡುವುದು ಹೇಗೆಂದು ಹೇಳಿದರು


ಡೆನ್ನಾನಾ ಡೆನ್ನಾನಾ ಡೆನ್ನಾನಾ ಮೇದಾರ


ಜಾತಿಗೆ ನೀತಿಗೆ ಹೊತ್ತಲ್ಲ ಮೇದಾರ


ಹೆಣ್ಣು ಕೊಡುತ್ತೇನೆ ಹೆಣ್ಣು ಕೊಡುತ್ತೇನೆಂದು ಹೇಳು ಎಂದು


ಬೇಕು ಬೇಕಾದಂತೆ ಶಿಕ್ಷೆ ಕೊಟ್ಟನು 


 ಮುಳ್ಳಿನ ಮಂಚದಲ್ಲಿ ಮಲಗಿಸಿ ಮೇಲಿಗೆ


ಉರಿಯ ಮೂಡೆ ಹಾಕಿ ಮೂರುಸತ್ತು ಬಳೆದು


ಹೆಣ್ಣು ಕೊಡು ಮೇದಾರ ಸಂಬಂಧ ಹಿಡಿ ಮೇದಾರ ಎಂದಾಗ


ಹೆಣ್ಣು ನಾನು ಕೊಡಲಾರೆ ಸಂಬಂಧ ಹಿಡಿಯಲಾರೆಂದು


ಅಣ್ಣ ಒಬ್ಬ ಮೇದಾರರು ಹೇಳಿದರು


ಕೊಡುವ ಕಷ್ಟವನ್ನು ತಡೆಯಲಾಗದೆ ಹೇಳದರು


ಅವಳ ಹತ್ತಿರ ಒಂದು ಮಾತು ಕೇಳಿ ಒಪ್ಪಿಗೆ


ಪಡೆದು ಬರುವೆನೆಂದು ಹೇಳಿದರು ಮೇದಾರರು


ಅಷ್ಟು ಹೊತ್ತಿಗೆ ಭಾರೀ ಸಂತೋಷ


ಮದುವೆಯೆ ಆಗಬೇಕು ರಂಗಮೆ ಹೆಣ್ಣನ್ನು


ಮೇದಾರನ ತಂಗಿ ನನಗೆ ಆಗಬೇಕೆಂದು


ಊರೂರು ಪ್ರಚಾರ ಮಾಡುವನು 


 ಊರು ಕೇರಿಗೆ ಡಂಗುರ ಸಾರಿ


ಮೇದಾರನ ತಂಗಿಯನ್ನು ಮದುವೆ ಆಗುವುದೆಂದು


ಹೇಳಿದನು ಭೈರರ ಕೇರಿಯ ಅರಸು 


 ಮನೆಗೆ ಬಂದು ಕತ್ತಲೆ ಮನೆಯಲ್ಲಿ


ಮುಖ ಕೆಳಗೆ ಹಾಕಿ ಮಲಗಿದ್ದಾರೆ ಮೇದಾರರು 


 ಅಣ್ಣ ಒಬ್ಬ ಮೇದಾರ


ಯಾರಯ್ಯ ಅಣ್ಣನವರೇ ಅಣ್ಣನವರೇ ಎಲ್ಲಿಗೆ ಹೋದಿರಿ


ಹುಡುಕಿಕೊಂಡು ಬರುವಾಗ ಕತ್ತಲೆ ಕೋಣೆಯಲ್ಲಿ


ಮುಖ ಕೆಳಗೆ ಹಾಕಿ ಮಲಗಿದ್ದಾರೆ ಮೇದಾರರು


ಅಣ್ಣ ಒಬ್ಬ ಮೇದಾರ 


 ಯಾರಯ್ಯ ಅಣ್ಣನವರೆ ನಿಮಗೆ ಬಂದ ಕಷ್ಟ


ನನಗೆ ಬಂದ ಕಷ್ಟ ಬೇರೆ ಅಲ್ಲ


ಹೆಣ್ಣು ಕೊಡುತ್ತೇನೆ ಸಂಬಂಧ ಹಿಡಿಯುವೆಂದು


ಮಾತು ಹೇಳಿರಿ ಅಣ್ಣನವರೇ 


 ಎಂದು ಕಳುಹಿಸುತ್ತಾಳೆ ತಂಗಿ ರಂಗಮೆ


ಓಲೆಯ ಒಕ್ಕಣೆ ಬರೆದು ಕಳುಹಿಸುವರು


ಹೆಣ್ಣು ಕೊಡುತ್ತೇನೆ ಪೊದು ಹಿಡಿಯುತ್ತೇನೆ


ಬರುವ ವಾರದಲ್ಲಿ ದಿಬ್ಬಣ ತೆಗೆದುಕೊಂಡು


ಬರಬೇಕು ಎಂದರು ಬರ್ಪಾನೆಂದ ಬೀಡಿನಲ್ಲಿಯೇ


ಮದುವೆ ಎಂದರು ಅಣ್ಣ ಮೇದಾರ 


 ಅಷ್ಟು ಹೊತ್ತಿಗೆ...


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನಾಯೇ


ಮದುವೆಯ ಸಿಂಗಾರ ಮಾಡಿದರು ರಂಗಮೆಗೆ


ಏಳು ಉಪ್ಪರಿಗೆಯ ಮೇಲೆ 


 ಒಂದು ಕೋಣೆಯಲ್ಲಿ ಸಿಂಗಾರ ಮಾಡಿ


ಕನ್ನಡಿಯ ಎದುರು ಕುಳ್ಳಿರಿಸುತ್ತಾರೆ 


 ಮಗಳನ್ನು ತಂಗಿ ಒಬ್ಬಳು ರಂಗಮೆ


ತಲೆ ಎತ್ತಿ ನೋಡುವಾಗ ಕಾಣುತ್ತದೆ


ಬರ್ಪಾನೆಂದ ಬೀಡಿನ ಕಂಬಳದ ಕಟ್ಟಹುಣಿಯಲ್ಲಿ


ಕೆಂಪು ಕೆಂಪು ಸೀಯಾಳ ದಿಬ್ಬಣ ಬರುತ್ತದೆ


ದಂಡಿಗೆಯಲ್ಲಿ ಬರುತ್ತಾನೆ ಭೈರರ ಕೇರಿಯ ಭೈರವರಸು


ಊಟ ಸಮ್ಮಾನ ಮಾಡಿದರು ಭೈರರು


ಮದುಮಗನ ಶೃಂಗಾರ ಮಾಡಿದರು ಭೈರರು


ಮದುಮಗಳನ್ನು ಕರೆದುಕೊಂಡು ಬಾ ಮೇದಾರ


ಎಂದು ಬೀಡಿನ ಕೆಲಸದ ಹೆಂಗಸರನ್ನು


ಮೇಲುಪ್ಪರಿಗೆಗೆ ಕಳುಹಿಸುವಾಗ ರಂಗಮೆ


ಹೊಟ್ಟೆನೋವು ಅಣ್ಣನವರೆ 


ನನ್ನ ಜೀವವೇ ಹೋಗುತ್ತದೆ ಅಣ್ಣನವರೆ


ಇದರಲ್ಲಿ ನಾನು ಬದುಕುವುದಿಲ್ಲ ಅಯ್ಯಯ್ಯೋ ಅಣ್ಣ


ಇದರಲ್ಲಿ ನಾನು ಬಾಳುವುದಿಲ್ಲ ಅಣ್ಣನವರೆ ಎಂದಳು


ತಂಗಿ ಮದುಮಗಳು ರಂಗಮೆ 


 ಅಷ್ಟು ಮಾತು ಕೇಳಿಕೊಂಡು ಮೇದಾರ


ಮೇಲುಪ್ಪರಿಗೆಯಿಂದ ಇಳಿದು ಬಮದು 


 ಬಾಲೆ ನನ್ನ ತಂಗಿ ಇವತ್ತಲ್ಲದಿದ್ದರೆ


ನಾಳೆಯಾದರೂ ಭೈರವರಸುವಿಗೆ ಹೆಂಡತಿ ಆಗುತ್ತಾಳೆ


ಅವಳಿಗೆ ಎದ್ದು ನಿಲ್ಲುವ ಶಕ್ತಿ ಇಲ್ಲ 


 ಎಂದು ಹೇಳುತ್ತಾರೆ ಅಣ್ಣ ಮೇದಾರ




ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನಾನಾ ಅಣ್ಣ ಮೇದಾರ


ಹೇಳಿದ ಮಾತು ಕೇಳಿದನು ಭೈರರು


ಬಾಗಿಲು ಹಾಕಿ ಹೋಗುವಾಗ ಹೇಳುತ್ತಾರೆ


ಇವತ್ತಲ್ಲ ನಾಳೆ ಎಂದರೆ ನಿಮಗಾಗುವುದಿಲ್ಲವಂತೆ


ದಂಡಿಗೆಯ ಕೊಂಬಿಗೆ ಧಾರೆ ಎರೆದು


ಬಂದ ದಿಬ್ಬಣ ಹೋಗಲಿ ಎಂದಳು 


 ತಂಗಿ ರಂಗಮೆ


ಅಣ್ಣ ಬಂದು ಹೇಳಿದ ಮಾತು 


ಕೇಳಿದನು ಭೈರರ ಕೇರಿಯ ಅರಸ


ಅಷ್ಟು ಭರವಸೆ ಇದ್ದರೆ ನನಗೆ 


ದಿಬ್ಬಣ ಹೋಗುವ ಮೊದಲು


ದಂಡಿಗೆಯ ಕೊಂಬಿಗೆ ಧಾರೆ ಎರೆದು 


 ಭೈರರ ಕೇರಿಗೆ ಹೊರಡುವಾಗ


ಹೆಣ್ಣನ್ನು ಕಳುಹಿಸುವ ದಿನದಂದು


ನಾವು ಬರುತ್ತೇವೆಂದು ಹೇಳಿದನು ಅರಸು


ಭೈರರ ಅರಸು ಹೇಳುವಾಗ 


 ನಿಮಗೆ ಮಾಣಿಯನ್ನು ನಾವು ಕಳುಹಿಸುತ್ತೇವೆ


ಭೈರರ ಅರಸುಗಳೆ ನಿಮಗೆ 


 ಈಗ ಹೋಗಿ ನಾಳೆಯೇ ಬನ್ನಿ ಎಂದು


ಅಣ್ಣ ಮೇದಾರ ಹೇಳಿದಾಗ 


 ಅಷ್ಟೊಂದು ಮಾತು ಕೇಳಿದನೆ ಭೈರವರಸ


ಊಟ ಔತಣ ಮಾಡಿ ಬಂದ 


 ದಿಬ್ಬಣವನ್ನು ತೆಗೆದುಕೊಂಡು ಹೋಗುತ್ತಾನೆ


ಆ ದಿನದ ಹೊತ್ತು ಹೋಗುತ್ತದೆ ಅರಸನಿಗೆ


ಮರುದಿನ ಇನ್ನೊಂದು ದಿನದಲ್ಲಿ ಅರಸ


ಬೆಳಗಿನ ಜಾವದಲ್ಲಿ ಎದ್ದು ನೋಡುವಾಗ


ಓಲೆಯ ಮಾಣಿ ಬರುತ್ತಾನೆ 


 ನನ್ನ ತಂಗಿ ಇದ್ದಾಳೆ ರಂಗಮೆ


ಮದುಮಗಳು ಆಗಿದ್ದಾಳೆ ಮುಟ್ಟು ಆಗಿದ್ದಾಳೆ


ನೀವಾದರೂ ಬರಬೇಕೆಂದು ಹೇಳಿ ಒಂದು


ಓಲೆಯ ಒಕ್ಕಣೆ ನೋಡುವನೇ ಭೈರವರಸ


ಮುಡಿ ಮುಡಿ ಅವಲಕ್ಕಿ ಕೆಂದಾಳಿ ಸೀಯಾಳ


ಬನ್ನಂಗಾಯಿ ಕಡಿದುಕೊಂಡು ಬರುವಾಗ


ಬರ್ಪಾನೆಂದ ಬೀಡಿನಲ್ಲಿ ಬಾರಿ ದೊಡ್ಡ ಹೊಗೆ


ದೂರದಿಂದ ಬರುವಾಗ ಕಾಣುತ್ತದೆ


ಯಾರಯ್ಯ ಬೋವಿಗಳೆ ಯಾರಯ್ಯ ಆಳುಗಳೇ


ಬರ್ಪಾನೆಂದ ಬೀಡಿನಲ್ಲಿ ಏನು 


 ಕಷ್ಟವೆಂದು ಹೇಳಿದನೇ ಅರಸ ಭೈರವರಸ


ಮನೆಗೆ ಹತ್ತಿರ ಹತ್ತಿರ ಹೋಗುವಾಗ ಕಾಣಿಸುತ್ತದೆ


ಬೆಂಕಿಯಾದರು ಕೊಟ್ಟಿದ್ದಾರೆ ಅರಿಯು ಮುರಿಯ ಅತ್ತುಕೊಂಡು


ಸುತ್ತಮುತ್ತ ನಿಂತಿದ್ದಾರೆ ದೊಡ್ಡ ಒಂದು ಕಷ್ಟವಂತೆ


ಮದುವೆ ಆಗಬೇಕೆಂದು ಹೇಳಿದಳು ಮಗಳು


ಉರಿದು ಸುಟ್ಟು ಬೂದಿ ಆಗಿದ್ದಾಳೆ ಮಗಳು


ಹೊಟ್ಟೆನೋವು ಆಗಿ ಕೈ ಬಿಟ್ಟು ಕೈಲಾಸಕ್ಕೆ


ಹೋಗಿದ್ದಾಳೆಂದು ಕೆಲಸದವರು ಹೇಳುವಾಗ


ಮೂಟೆ ಮೂಟೆ ಅವಲಕ್ಕಿಯನ್ನು ಕಾಷ್ಠಕ್ಕೆ ಹಾಕಿ


ಕೆಂಪು ಕೆಂಪು ಸೀಯಾಳ ಆಚೀಚೆ ಬಿಸಾಡಿ


ಇದೊಂದು ಜನ್ಮದಲ್ಲಿ ಗಂಡ ಹೆಂಡತಿ


ಆಗದಿದ್ದರೆ ಪರವಾಗಿಲ್ಲ ಇನ್ನೊಂದು ಜನ್ಮದಲ್ಲಿ


ಗಂಡ ಹೆಂಡತಿ ಆಗಿ ಒಟ್ಟಿಗೆ ಇರುವ ಎಂದು


ಕಾಷ್ಠಕ್ಕೆ ಹಾರಿದನು ಭೈರವ ಅರಸ


ಡೆನ್ನಾ ಡೆನ್ನಾ ಡೆನ್ನಾನಾ ಓಯೋಯೇ ಡೆನ್ನಾನಾ ಡೆನ್ನಾನಾಯೇ


ಯಾರಯ್ಯ ಭೈರವರಸ ನನ್ನೊಟ್ಟಿಗೆ ಸಾಯಬೇಕೆಂದು ಇದ್ದೆ


ಹೆಣ್ಣು ನಾಯಿಯೊಟ್ಟಿಗೆ ಸತ್ತೆಯಲ್ಲ ಭೈರವ ಅರಸ ಎಂದು ಹೇಳಿ


ಯಾರಯ್ಯ ಅಣ್ಣನವರೆ ನನ್ನನ್ನು ಕದಿರೆಯ ಅರಸನಿಗೆ


ಮದುವೆ ಮಾಡಿಕೊಡಿ ಅಣ್ಣನವರೇ


ನನ್ನನ್ನು ಮದುವೆ ಆಗುತ್ತೇನೆಂದು ಹೇಳಿದ್ದಾರೆಂದು


ಹೇಳಿದಳವಳು ಮದುಮಗಳು ರಂಗಮೆ


ಓಲೆಯನ್ನೇ ಬರೆದು ಮಾಣಿಯನ್ನು ಕಳುಹಿಸಿದರು ಮೇದಾರರು


ದಂಡಿಗೆಯಲ್ಲಿಯೇ ದಿಬ್ಬಣ ತಂದು ಬಂದರು ಕದಿರೆಯ ಅರಸರು


ಭಾರೀ ಶೃಂಗಾರ ಮಾಡಿ ಮದುವೆಯನ್ನು ಮಾಡಿ


ತಂಗಿಯನ್ನು ಕೊಟ್ಟರು ಅಣ್ಣ ಮೇದಾರರು


ದಂಡಿಗೆಯನ್ನು ಸಿಂಗಾರ ಮಾಡಿ ಕದಿರೆಯ ಅರಸನೊಂದಿಗೆ


ಕಳುಹಿಸಿಕೊಟ್ಟರು ಅಣ್ಣ ಒಬ್ಬ ಮೇದಾರರು


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ 


ಓಯೋಯೇ ಡೆನ್ನಾನಾ ಡೆನ್ನಾನಯೇ






9. ಬಾಲೆ ಪದ್ಮಕ್ಕೆ


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನ ಡೆನ್ನಾಯೇ


ಕನರಾಯ ಬೀಡಿನಲ್ಲಿ ಇದ್ದಾರೆ ಬಂಗೇರ


ಕನರಾಯ ಕರ್ತುಗಳು ಬಂಗೇರ 


 ಅವರ ಪ್ರೀತಿಯ ಮೋಹದ ಮಡದಿ 


ಬಾಲೆ ಪದ್ಮಕ್ಕ ಇದ್ದಾಳೆ


ಡೆನ್ನಾನಾ ಡೆನ್ನ ಡೆನ್ನಾನಾ ಓಯೇಯೇ ಡೆನ್ನ ಡೆನ್ನಾನಾ ಡೆನ್ನಾಯೇ


ಬೆಳಗಿನ ಜಾವದಲ್ಲಿ ಎದ್ದರು ಬಂಗೇರರು


ಹಾರೆ ಇಡುವ ಕೊಠಡಿಗೆ ಹೋಗಿ 


 ಹಾರೆ ತೆಗೆದು ಹೆಗಲಿಗೆ ಇಟರ 


ಬಟ್ಟೆ ಒಡುವ ಕೋಣೆಗೆ ಹೋದರು


ಬಟ್ಟೆ ತೆಗೆದು ಸೊಂಟಕ್ಕೆ ಸುತ್ತಿಕೊಂಡರು


ಬೆಟ್ಟಿನಲ್ಲಿ ಹೋದ ಬಂಗೇರರು ಇನ್ನು ಬೇಗ


ಸಂಗ್ರಹವಾದ ನೀರನ್ನು ಬಿಡಿಸಿಕೊಂಡು ಕಟ್ಟಿಕೊಂಡು


ಕಂಬಳದ ಕಟ್ಟಹುಣಿಯಲ್ಲಿ ಬರುವಾಗ


ಕಂಬಳದ ಕಟ್ಟಹುಣಿ ದಾಟಿಕೊಂಡು ಬಂದು


ಕೆಂದಾಳಿ ತೆಂಗಿನ ಹದಿಮೂರು ಕಟ್ಟೆಯಲ್ಲಿ 


ಕುಳಿತರು ಕನರಾಯ ಕರ್ತುಗಳು ಬಂಗೇರರು


ಯಾರಮ್ಮ ತಾಯಿಯವರೇ ಕೇಳಿರಿ 


ಏಳೇಳು ಹದಿನಾಲ್ಕು ವರ್ಷದ ದಂಡು


ಕಂಡು ಬರುತ್ತದೆ ಹೇಳುವರು


ನಾನು ಹೋಗುವೆ ತಾಯಿಯವರೇ ಕೇಳಿರಿ


ದಂಡಿಗೆ ನಾನು ಹೋಗುವೆಂದು ಹೇಳಿದರು


ಸಮಯದಲ್ಲಿ ಅಡಿಗೆ ಕಾಲದಲ್ಲಿ ಆಗಬೇಕು


ಕಾಲದ ಬಿಸಿನೀರು ಸಕಾಲದಲ್ಲಿ ಆಗಬೇಕು


ಹೇಳಿದರು ಕನರಾಯ ಕರ್ತುಗಳು ಬಂಗೇರರು


ಯಾರಯ್ಯ ಕರ್ತುಗಳೆ ಬಂಗೇರ ಕೇಳಿದೆಯ


ನೀನು ಹಾಗೆ ಹೋದರೆ ನಿನ್ನ ಮಡದಿ


ನನ್ನ ಪ್ರೀತಿಯ ಮೋಹದ ಸೊಸೆ 


 ಬಾಲೆ ಪದ್ಮಕ್ಕೆ ತಿಂಗಳು ಮಾಸಿ


ಏಳೆಂಟು ಒಂಬತ್ತು ತಿಂಗಳು ತಪ್ಪಿದೆ


ಅತ್ತೆಯವರು ಹೆಣ್ಣು ಹೆಂಗಸು ಹೇಳಿದರು


ಅಷ್ಟು ಮಾತು ಕೇಳಿದಳು ಮಗಳು


ನಗಾಡಿಕೊಂಡು ನೋಡುವಳು ಪದ್ಮಕ್ಕ


ಬಂಗೇರರ ಮುಖವನ್ನೆ ನೋಡಿ ಬಂಗೇರರ


ಓ ಅಲ್ಲಿ ಮುಗುಳು ನಗು ನಗುತ್ತಾಳೆ


ಯಾರಮ್ಮ ತಾಯಿಯವರೇ ನಿಮ್ಮ ಸೊಸೆ


ಮುಗುಳು ನಗುವನ್ನು ನಗುವಳು ತಾಯಿಯವರೆ


ಒಳ್ಳೇದಕ್ಕೆ ನಗುವಳೊ ಹಾಳಿಗೆ ನಕ್ಕಾಳೋ


ಕೇಳಿರಿ ತಾಯಿಯವರೆಂದು ಹೇಳಿದರು ಬಂಗೇರರು


ಕನರಾಯ ಕರ್ತುಗಳು ಬಂಗೇರರು


ಅದನ್ನಾದರು ಕೇಳಿರಿ ಕೇಳಿರಿ ತಾಯಿಯವರೆಂದು


ನಾನು ಯಾಕೆ ಕೇಳಬೇಕು ಬಂಗೇರ ಕೇಳು


ನೀನಾದರೂ ಹೇಳು ನೀವು ಮಾತಾಡಿಕೊಳ್ಳಿ


ಎಂದು ಹೇಳಿದರು ತಾಯಿಯವರು


ಅಷ್ಟು ಮಾತು ಕೇಳುವಳು ಮದುಮಗಳು


ಬಾಗಿಲ ಸಂಧಿಯಲ್ಲಿ ನಿಂತು ಮಗಳು


ಕಿವಿಕೊಟ್ಟು ಕೇಳುವಳು ಕಣ್ಣಿನಲ್ಲಿ ಕಡುದುಃಖ


ಬಿಡುವಳು ಮಗಳು ಬಾಲೆ ಪದ್ಮಕ್ಕೆ


ನಾನು ಹೋಗುವ ರಾಜ್ಯಕ್ಕೆ ನೀನಾದರೂ ಬರಲಿಕ್ಕಿಲ್ಲ


ಏಳೇಳು ಹದಿನಾಲ್ಕು ವರ್ಷದ ದಂಡನ್ನು


ಸಾಧಿಸಿ ಬರುವೆಂದು ಹೇಳಿದರು ಬಂಗೇರರು


ಕನರಾಯ ಕರ್ತುಗಳು ಬಂಗೇರರು


ನೀವಾದರೂ ಹೋಗುವ ರಾಜ್ಯಕ್ಕೆ ನಾನು ಕೂಡ


ಬರುವೆಂದು ಹೇಳುವಳು  ಬಾಲೆ ಪದ್ಮಕ್ಕೆ


ಏಳೇಳು ಹದಿನಾಲ್ಕು ವರ್ಷದ ದಂಡನ್ನು


ಸಾಧಿಸಿ ಬರುವುದಕ್ಕೆಂದು ಹೋಗುವುದು ಹೇಳಿದರು


ತಿಂಗಳು ತಪ್ಪಿ ಒಂಬತ್ತು ತಿಂಗಳು


ಬಸುರಿ ನೀನಲ್ವ ಎಂದು ಕೇಳಿದರು


ಕನರಾಯ ಕರ್ತುಗಳು ಬಂಗೇರರು


ಯಾರಮ್ಮ ತಾಯಿಯವರೇ ತಾಯಿಯವರೇ


ಯಾರಯ್ಯ ಬಂಗೇರ ಏನೆಂದು ಕೇಳಿದರು


ತಾಯಿಯವರು ಹೆಣ್ಣು ಹೆಂಗಸು ಕೇಳುವಾಗ


ಯಾರಮ್ಮ ಅತ್ತೆಯವರೇ ನೋಡಿದವರು ಅತ್ತೆಯವರು


ಬದುಕು ಭಾಗ್ಯದ ಸೌಖ್ಯದ ಸೀಮೆಯ


ಸೊತ್ತನ್ನು ಸೌಲಭ್ಯವನ್ನು ಮಾತನಾಡುವುದು ಅಲ್ಲ


ಅವರು ಹೋಗುವ ರಾಜ್ಯದ ಸೊತ್ತಿನ ಸೌಲಭ್ಯಗಳನ್ನು


ಕೇಳುವುದು ಎಂದಳು ಬಾಲೆ ಪದ್ಮಕ್ಕೆ


ಅವರು ಹೋಗುವ ರಾಜ್ಯಕ್ಕೆ ನನಗೆ ಹೋಗಬೇಕು


ನಾನಾದರೂ ಹೋಗದೆ ಕುಳಿತುಕೊಳ್ಳಲಿಕ್ಕಿಲ್ಲ ಅತ್ತೆಯವರೇ


ಎಂದು ಹೇಳುವಳು ಮದುಮಗಳು ಬಾಲೆ ಪದ್ಮಕ್ಕ


ಮೈಯ ಕೊಳೆಗೆ ಸ್ನಾನ ಮಾಡಲಿಲ್ಲ ಮದುಮಗಳು


ಹೊಟ್ಟೆಯ ಹಸಿವಿಗೆ ಉಣ್ಣಲಿಲ್ಲ


ಏಳು ಮಗಳೆ ಸ್ನಾನ ಮಾಡೆಂದು ಹೇಳುವಾಗ


ಹೊಟ್ಟೆಯ ಹಸಿವಿಗೆ ಊಟ ಮಾಡೆಂದು ಹೇಳಿದರು


ಗಂಡ ಗಂಸಡು ಹೇಳಿದಾಗ


ಊಟ ಸಮ್ಮಾನ ಆನಂತರ ಮದುಮಗ


ನೀವು ಹೋಗುವ ರಾಜ್ಯಕ್ಕೆ ನಾನು ಬರುವೆ ಎಂದು


ಹೇಳಿದರು ಹೆಣ್ಣ ಹೆಂಗಸು ಬಾಲೆ ಪದ್ಮಕ್ಕೆ


ಬಾ ಮದುಮಗಳೆ ಸ್ನಾನ ಮಾಡು ಮದುಮಗಳೆ


ಎಂದು ಗಂಡ ಬಂಗೇರರು ಹೇಳುವಾಗ


ದಡಕ್ಕನೆ ಎದ್ದು ದಿಡಕ್ಕನೆ ಕುಳಿತು


ತಲೆಯನ್ನು ಕೊಡವಿಕೊಂಡು ಬರುವಳು ಮದುಮಗಳು


ಓಡೋಡಿಕೊಂಡು ಹೋಗುವಳು ಮಗಳು


ಬೆನ್ನಿನ ಕೊಳಕಿಗೆ ಸ್ನಾನ ಮಾಡುವಳು ಮಗಳು


ಹೊಟ್ಟೆಯ ಹಸಿವಿಗೆ ಊಟ ಮಾಡುವಳು


ಅಡಿಗೆ ತಯಾರಿ ಆಗಿದೆ ಎನ್ನುವಳು


ನಾನು ಕೂಡ ಹೊರಡಲಿಯಾ ಎಂದು ಕೇಳಿದಳು ಮಗಳು


ದಂಡಿಗೆ2 ಸಿಂಗಾರ ಮಾಡಿರಿ ಬೋಯಿಗಳೆಂದು


ಬೋಯಿಗಳನ್ನು ಇನ್ನೂ ಬೇಗ ಕರೆಸಿದರು


ಬೆಳ್ಳಿಯಲ್ಲಿ ಅಲಂಕಾರ ಆದಳು ಮಗಳು


ಬಂಗಾರಿನಲ್ಲಿ ಸಿಂಗಾರ ಆದಳು ಮಗಳು


ಡೆನ್ನಾನಾ ಡೆನ್ನಾನ ಡೆನ್ನ ಡೆನ್ನ ಡೆನ್ನಾನಾ


ಯಾರಮ್ಮ ತಾಯಿಯವರೇ ಒಳ್ಳೆಯದಾಗುವಷ್ಟು ಒಳ್ಳೆಯದು


ಹಾಳಿನಷ್ಟು ಹಾಳು ಇರಬಹುದು ದೇವರ ವರವಿದೆ


ದೈವಗಳ ನೆಲೆ ಇದೆ ಹೋಗುವೆ ತಾಯಿಯವರೆ


ಎಂದು ಹೇಳುವರು ಕನರಾಯ ಕರ್ತುಗಳು ಬಂಗೇರರು


ಯಾರು ಮಗ ಬಂಗೇರ ಎರಡು ಜನ ಹೋಗುವಿರಿ


ಮೂರು ಜನ ಸುಖವಾಗಿ ಬನ್ನಿ ಎಂದು ಹೇಳಿ


ಚಾವಡಿ ನಡುವಿನ ಅಂಕಣಕ್ಕೆ ಬರುವರು


ತಾಯಿಯವರು ಹೆಂಗಸು ಬರುವರು


ದೈವದ ಗುಡಿಯ ಬಾಗಿಲು ತೆರೆದರು 


 ಬತ್ತಿ ಉರಿಸಿ ದೀಪ ಇಟ್ಟರು


ಎರಡು ತಲೆ ಹೋಗುವರು ಮೂರು ತಲೆ


ಬರಲಿ ಎಂದು ಜಮಾದಿ ದೈವಕ್ಕೆ ಕೈಯನ್ನು ಮುಗಿದು


ಅಡ್ಡ ಬಿದ್ದು ನಮಸ್ಕರಿಸುವರು ತಾಯಿಯವರು


ಡೆನ್ನ ಡೆನ್ನಾನಾ ಡೆನ್ನ ಡೆನ್ನ ತಾಯಿಯವರೇ ನಾವು ಹೋಗಿ


ಬರುವೆವು ತಾಯಿಯವರೇ ಎಂದು ಕಾಲು ಹಿಡಿದು


ಹೊರಡುವರು ಬಂಗೇರರು ಕನರಾಯ ಬಂಗೇರರು


ಎರಡು ಜನ ಹೋಗಿ ಮೂರು ಜನ ಬನ್ನಿ ಎಂದು


ಹೇಳಿ ಕಳುಹಿಸುವರು ತಾಯಿಯವರು


ದಂಡಿಗೆಯಲ್ಲಿ ಸಿಂಗಾರ ಆಗಿ ಮದುಮಗಳನ್ನು


ಎತ್ತಿ ಇನ್ನು ಬೇಗ ಕುಳ್ಳಿರಿಸಿದರು ಬಂಗೇರರು


ದಂಡಿಗೆಯನ್ನು ಹೊತ್ತುಕೊಂಡು ಹೋಗುವರು ಬೋಯಿಗಳು


ಒಂದು ಗುಡ್ಡೆಯನ್ನು ಒಂದು ಬಯಲನ್ನು


ದಾಟಿಕೊಂಡು ಹೋಗುವರು ಕನರಾಯ ಬಂಗೇರರು


ದೊಡ್ಡದೊಂದು ಕಾಡಿನ ಒಳಗೆ ಹೋಗುವಾಗ


ಹೊಟ್ಟೆ ನೋವು ಎಂದಳು ಬಾಲೆ ಪದ್ಮಕ್ಕೆ


ಹುಡು ಪುಡಿ ಆಗುತ್ತದೆ ದಂಡಿಗೆ ಹುಡು ಪುಡಿ


ಆಗುವಂತೆ ಆಗುತ್ತದೆ ಏನು ಮದುಮಗಳೆ


ಏನು ಆಗುತ್ತದೆ ಎಂದು ಕೇಳಿದರು


ಹೊಟ್ಟೆ ನೋವು ಮೂಡುವುದು ಮುತ್ತಿನ ಬೆವರು


ಇಳಿದು ಬಂದಾಗ ಹೇಳುವರು ಬಂಗೇರರು


ದಂಡಿಗೆ ಇಳಿಸಿರೆಂದು ಹೇಳಿದರು


ತಾಳೆ ಮರದಷ್ಟು ಎತ್ತರಕ್ಕೆ ಹೊಗೆ ಎಲ್ಲಿ


ಹೋಗುತ್ತದೆ ನೋಡಿ ಎಂದು ಹೇಳಿದರು


ಮರಕ್ಕೆ ಹತ್ತಿ ನೋಡುವರು ಬೋಯಿಗಳು


ಕಾಡಿನ ನಡುವಿನಲ್ಲಿ ವನದೇಶದಲ್ಲಿ ದೊಡ್ಡದೊಂದು


ಅರಮನೆ ಕಾಣುತ್ತದೆ ಅಲ್ಲಿ 


 ತಾಳೆಯಷ್ಟು ಎತ್ತರಕ್ಕೆ ದೂರದಲ್ಲಿ


ಹೊಗೆ ಕಾಣಿಸುತ್ತದೆ ಎಂದು ಹೇಳಿದರು


ಅಲ್ಲಿಗೆ ಹೋಗುವ ಎಂದು ಹೋಗುವರು ಬಂಗೇರರು


ಯಾರಮ್ಮ ಹೆಣ್ಣು ಮಗಳೆ ಯಾರಮ್ಮ ಇದ್ದೀರಿ


ಒಬ್ಬಳು ಬಸುರಿ ಹೆಣ್ಣಿಗೆ 


 ರಕ್ಷಣೆ ಕೊಡುವಿರಾ ಎಂದು ಕೇಳುವರು


ಕನರಾಯ ಕರ್ತುಗಳು ಬಂಗೇರರು


ಅಷ್ಟು ಮಾತು ಕೇಳುವರು ಆ ಹೆಣ್ಣು ಮಗಳು


ಪ್ರಸವದ ನೋವಿಗೆ ಹೆರುವಳು ಮದುಮಗಳು


ಅವಳಿ ಮಕ್ಕಳಿಗೆ ಜನ್ಮ ಕೊಡುವಳು 


 ಬಾಲೆ ಪದ್ಮಕ್ಕೆ ಕೇಳಿದಿರಾ


ಅಲ್ಲಿಂದ ಎದ್ದುಕೊಂಡು ದಂಡು ಸಾಗಿಸಿಕೊಂಡು


ಹೋಗುವರು ಕನರಾಯ ಕರ್ತುಗಳು ಬಂಗೇರರು






ಏಳೇಳು ಹದಿನಾಲ್ಕು ವರ್ಷದ ದಂಡನ್ನು


ಸಾಧಿಸಿ ಹಿಂದೆ ತಿರುಗಿ ಊರಿಗೆ


ಬರುವಾಗ ಬಂಗೇರರು ಹೆಂಡತಿಯನ್ನು ಮಕ್ಕಳನ್ನು


ಕರೆದುಕೊಂಡು ಹೋಗುವೆ ಎಂದು ಬರುವಾಗ


ಬಾಲೆ ಪದ್ಮಕ್ಕ ಹೆರಿಗೆ ಆಗಿ 


 ಹೆರಿಗೆ ಆಗಿ ಏಳು ವರ್ಷದ ಮಕ್ಕಳು


ಆದಾಗ ತಾಯಿಗೆ ಅಳಿವು 


 ಬಂತೆಂದು ಹೇಳಿದರು ಹೆಣ್ಣು ಮಗಳು


ಬಾಲೆ ಪದ್ಮಕ್ಕ ಜೀವ ಬಿಟ್ಟು ಕೈಲಸ ಸೇರಿದರು


ಅವರ ಸಂಸ್ಕಾರ ಮಾಡುವ ಹೊತ್ತಿನಲ್ಲಿ


ತಲೆಯ ಮುಡಿ ಮತ್ತು ಮೊಲೆಯಕಟ್ಟು


ಹಾಗೇನೇ ಉಳಿದಿದೆ ಹೇಳಿದರು


ಮೂರು ರಾತ್ರಿ ಮೂರು ಹಗಲು ಸುಟ್ಟರು


ಉರಿದು ಬೂದಿಯಾಗಲಿಲ್ಲ ತಂದಿಟ್ಟಿದ್ದೇವೆಂದು ಹೇಳಿದರು


ದಂಡಿಗೆಯಲ್ಲಿ ತಂದಿಟ್ಟರು  ಮಕ್ಕಳನ್ನು ಕರೆದುಕೊಂಡು ಬರುವರು


ಕನರಾಯ ಬೀಡಿಗೆ ಬರುವಾಗ ಅಲ್ಲಿ


ತಾಯಿಯವರು ಹೆಂಗಸರು ತೋರಣ ಕಟ್ಟಿ


ಆರತಿ ಓಕುಳಿ ಹಿಡಿದು ಕಾಯುತ್ತಾರೆ


ನನ್ನ ಮೋಹದ ಪ್ರೀತಿಯ ಸೊಸೆ


ಮಗನು ಬಂದರು ಮಕ್ಕಳು ಬಂದರೆಂದು


ದಂಡಿಗೆ ನೋಡುವಾಗ 


 ನನ್ನ ಸೊಸೆ ಎಲ್ಲಿಗೆ ಹೋಗಿದ್ದಾಳೆ


ಎಂದು ಕೇಳುವಾಗ ಕನರಾಯ ಬಂಗೇರರು


ಏಳೇಳು ವರ್ಷದ ಮಕ್ಕಳು ಆದಾಗ


ತಾಯಿಗೆ ತೆಂಗಿನ ಮಡಲು ಬಿದ್ದು 


ಕೈಬಿಟ್ಟು ಕೈಲಾಸ ಸೇರಿದ್ದಾಳೆ 


 ಅವಳ ಮೊಲೆಕಟ್ಟು ತಲೆಮುಡಿ


ಉರಿಯದೆ ಉಳಿದಿದೆ ತಾಯಿಯವರೆ


ಎಂದು ತಾಯಿಯ ಕೈಗೆ ಕೊಟ್ಟರು


ಡೆನ್ನಾನ ಡೆನ್ನಾ ಡೆನ್ನ ಡೆನ್ನಾನಾ ಓಯೋಯೋ ಡೆನ್ನಾನಾ


ಕನರಾಯ ಬೀಡಿನಲ್ಲಿ ಕರ್ತುಗಳು ಬಂಗೇರರು










10. ಬಾಲೆ ಜೇವು ಮಾಣಿಗ




ಚೆನ್ನೆಯನ್ನು ಆಡೋಣವೇ ಮಾನಿಗ 


 ಎಕ್ಕಾಡಿ ಆಡೋಣವೇ ಮಾನಿಗ


ಚೆನ್ನೆಯನ್ನೇ ಆಡುವುದಾದರೆ ಬಲ್ಲಾಳರೆ 


 ಬುದ್ಧಿಗೆ ಒಳ್ಳೆಯದು


ಎಕ್ಕಾಡಿ ಆಡಿದರೆ ಬಲ್ಲಾಲರೆ 


ಸುಮ್ಮಗೆ ಎಂದು ಹೇಳಿದಳು


ಬಾಲೆ ಜೇವು ಮಾನಿಗ 


 ಮರದ ಮಣೆ ಉಂಟು ಮಾನಿಗ


ಹೊಂಗಾರೆಯ ಕಾಯಿ ಉಂಟು


ತೆಗೆದುಕೊಂಡು ಬಾ ಮಾನಿಗ ಎಂದು


ಹೇಳಿದರು ಪರಿಮಾಳ ಬಲ್ಲಾಳರು ಏ... ಏ..






ಯಾರಯ್ಯ ಬಲ್ಲಾಳರೆ ಪರಿಮಾಳ ಬಲ್ಲಾಲರೆ


ಮರದ ಮಣೆಯಲ್ಲಿ ಹೊಂಗಾರೆ ಕಾಯಿಯಲ್ಲಿ


ನಾನಾದರೂ ಆಡಲಾರೆ ಎಂದು ಹೇಳಿದರು 


 ಮಗಳು ಜೇವು ಮಾನಿಗ


ಬೆಳ್ಳಿಯ ಮಣೆ ಉಂಡು ಬಲ್ಲಾಳರೇ


ಬಂಗಾರಿನ ಹರಳು ಉಂಟು ಬಲ್ಲಾಳರೇ


ತೆಗೆದುಕೊಮಡು ಬರಲೇ ಎಂದು ಕೇಳಿದರು 


 ಮಗಳು ಜೇವು ಮನಿಗ


ತೆಗೆದುಕೊಂಡು ಬಾ ಎಂದು ಪರಿಮಾಳ ಹೇಳಿದರು


ಓಡಿಕೊಂಡು ಹಾರಿಕೊಂಡು ಹೋಗುವಳೆ 


 ಮಗಳು ಜೇವು ಮಾನಿಗ


ಕಲ್ಲಿನ ಪೆಟ್ಟಿಗೆಯ ಬೀಗವನ್ನು ತೆರೆದಳು ಮಾನಿಗ


ಬೆಳ್ಳಿಯ ಮಣೆಯನ್ನು ತೆಗೆದಳು 


 ಬಂಗಾರಿನ ಹರಳು ಹಿಡಿದಳು




ಮಗಳು ಜೇವು ಮಾನಿಗ


ಓಡಿಕೊಂಡು ಓಡಿಕೊಂಡು ಬರುವಾಗ


ಮೇಲಿನ ಹೊಸಿಲು ತಾಗುತ್ತದೆ ಹಲ್ಲಿಯ ನುಡಿ ಆಯಿತು


ಮಾನಿಗಳಿಗೆ ಮಗಳು ಜೇವು ಮಾನಿಗಳಿಗೆ ಏ... ಏ...


ಚಾವಡಿ ನಡುವಿಗೆ ಬಂದಳೇ ಮಾನಿಗ 


 ಮಗಳು ಜೇವು ಮಾನಿಗ


ಯಾರಯ್ಯ ಬಲ್ಲಾಳರೆ ಪರಿಮಾಳ ಬಲ್ಲಾಳರೆ


ಮೇಲಿನ ಹೊಸಿಲು ತಾಗಿತು ಬಲ್ಲಾಳರೆ


ಕೆಳಗಿನ ಹೊಸಿಲು ತಾಗಿತು ಬಲ್ಲಾಳರೆ 


 ಹಲ್ಲಿಯ ನುಡಿ ಅಗಿದೆ


ಬಲ್ಲಾಳರೆಂದು ಹೇಳಿದಳು ಮಾನಿಗ 


 ಬಾಲೆ ಜೇವು ಮಾನಿಗ


ಮೇಲಿನ ಹೊಸಿಲು ತಾಗುವುದಕ್ಕೆ ಮಾನಿಗ ಬಗ್ಗಿ ನಡೆಯಬೇಕು


ಕೆಳ ಹೊಸಿಲು ತಾಗುವುದಕ್ಕೆ ಕಾಲು ಎತ್ತಿ ನಡೆಯಬೇಕು


ಎಂದು ಹೇಳಿದರು ಪರಿಮಾಳ ಬಲ್ಲಾಳರೇ... ಏ...ಏ...




ಡೆನ್ನಾನ ಡೆನ್ನಾನ ಡೆನ್ನಾನ ಓಯೋಯೇ ಡೆನ್ನಾನ


ಡೆನ್ನಾನ ಡೆನ್ನಾನ ಡೆನ್ನಾನ ಓಯೋಯೇ ಡೆನ್ನಾನಯೇ


ಡೆನ್ನಾನ ಡೆನ್ನಾನ ಬಲ್ಲಾಳ ಪೆರುಮಾಳ ಬಲ್ಲಾಳರು


ಯಾರೇ ಮಾನಿಗ ಮಾನಿಗ ಬಾರೆ ಓ ಮಾನಿಗ


ಬಾಯಾರಿಕೆಗೆ ನೀರು ತೆಗೆದುಕೊಂಡು ಬಾ ಎಂದರು


ಬಾಯಾರಿಕೆ ಆಗುತ್ತದೆಂದು ಹೇಳಿದರು ಪೆರುಮಾಳ ಬಲ್ಲಾಳರು


ಒಂದು ಗಿಂಡೆ ನೀರಾದರೂ ತೆಗೆದುಕೊಂಡು ಬಾ ಮಾನಿಗ


ಬಾರೆ ಓ ಮಾನಿಗ 


 ಒಳಗಿನ ಆವರಣಕ್ಕೆ ಹೋಗುವಳು


ಬೆಳ್ಳಿಯ ಗಿಂಡೆ ಹಿಡಿಯುವಳು


ಒಂದು ಗಿಂಡೆ ನೀರು ತೆಗೆದುಕೊಂಡು ಬರುವಳು


ಗಿಂಡಿಯ ನೀರನ್ನು ತೆಗೆದುಕೊಂಡು ಚಾವಡಿಗೆ ಬರುವಾಗ


ಆಟವನ್ನು ತಪ್ಪಿಸಿದ್ದಾರೆ ತುದಿಯನ್ನು ತಿರುಗಿಸಿದ್ದಾರೆ




ಡೆನ್ನಾನ ಡೆನ್ನಾನ ಬಲ್ಲಾಳ ಯಾರಯ್ಯ ಬಲ್ಲಾಳ


ಆಟವನ್ನು ತಪ್ಪಿಸಿದಿರಿ ಬಲ್ಲಾಳ ತುದಿಯನ್ನು ತಿರುಗಿಸಿದ್ದೀರಿ


ಚೆನ್ನೆಯ ಆಟ ತಪ್ಪಿಸಿದಿರಿ ಚೆನ್ನೆ ನಾನು ಆಟವಾಡಲಾರೆ


ಎಂದು ಹೇಳಿದಳು ಮಾನಿಗ ಬಾಲೆದಿ ಓ ಮಾನಿಗ




ಡೆನ್ನಾನ ಡೆನ್ನಾನ ಡೆನ್ನಾನ ಓಯೋಯೆ ಡೆನ್ನಾನ


ಬಾರೇ ಓ ಮಾನಿಗ


ನಾನಾದರೂ ಆಡಲಾರೆ ನಾನು ಆಡಲಾರೆ ಹೇಳಿದಳು


ಬಾಲೆ ಜೇವು ಮಾನಿಗ ಬೆಳ್ಳಿಯ ಮಣೆಯನ್ನು


ತೆಗೆಯುವಳು ಕೆಳಗೆ ಇಡುವಳು


ಹಠವನ್ನೇ ಮಾಡುವಳು ಮಾನಿಗ ಛಲ ಮಾಡುವಳು


ಹೇಳುವುದನ್ನು ಕೇಳಲಿಲ್ಲ ಮಾನಿಗ ಬಾಲೆ ಜೇವು ಮಾನಿಗ


ಡೆನ್ನಾನ ಡೆನ್ನಾನ ಡೆನ್ನಾನಯೇ ಓಯೋಯೇ ಡೆನ್ನಾನ


ಅತ್ತಿತ್ತ ನೋಡಿದರು ಬಲ್ಲಾಳರು ಕೋಪದಿಂದ


ಚೆನ್ನೆಯ ಮಣೆ ತೆಗೆದು ಒಂದು ಪೆಣ್ಣು ಹಾಕಿದರು


ಚೆನ್ನೆಯ ಮಣೆಯಲ್ಲಿ ಕೆನ್ನೆಗೆ ಒಂದು ಪೆಟ್ಟು ಹಾಕಿದರು


ಕೈ ಬಿಟ್ಟು ಕೈಲಾಸ ಸೇರಿದಳು ಮಾನಿಗ


ವೈ ಬಿಟ್ಟು ವೈಕುಂಠ ಸೇರಿದಳು ಮಾನಿಗ


ಡೆನ್ನ ಡೆನ್ನ ಡೆನ್ನಾನ ಓಯೋಯೇ ಡೆನ್ನಾನ


    




















೨ ಶ್ರೀಮತಿ ಶಾರದಾ ಜಿ. ಬಂಗೇರರÀ ಕವಿತೆಗಳು 






1.ಪುಕ್ಕೇದಿ


 




ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮೇಲಿನ ಕೇರಿ ಕೋಡಂಗನಿಗೆ ಕೋಡಂಗ


ಲೇಲ ಲೇಲೆ ಲೇಲೇ ಲಾ ಲಾ ಪುಕ್ಕೇದಿಗ


ಕೆಳಗಿನ ಕೇರಿಪುಕ್ಕೇದಿಗೆ ಕೋಡಂಗ


ಬೆಳಗ್ಗಿನ ಜಾವ ಎದ್ದನೇ ಕೋಡಂಗ


ಹಾಕಿ ಗುದ್ದಲಿ ಹಿಡಿದುಕೊಂಡನೇ ಕೋಡಂಗ


ಒಡೆಯನ ಮನೆಗೆ ಹೋದನೇ ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಬೆಳಗ್ಗಿನ ಜಾವದಲ್ಲಿ ಎದ್ದುಕೊಂಡಾಳೇ ಪುಕ್ಕೇದಿ


ಕುಡ್ಪುಕರಗಟೇ (?) ಹಿಡಿದುಕೊಂಡಾಳೇ ಪುಕ್ಕೇದಿ


ಒಡೆಯನ ಮನೆ ಹೋದಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಕೋಡಂಗ


ಮುದ್ದುಕರುಗಳನ್ನು ಸೇರಿಸಿಕೊಂಡಳೇ ಪುಕ್ಕೇದಿ


ಹಟ್ಟಿಯೊಳಗೆ ಹೋದಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮುದ್ದುಕರುಗಳನ್ನು ಸೇರಿಸಿಕೊಂಡಳೇ ಪುಕ್ಕೇದಿ


ಹಟ್ಟಿಯೊಳಗೆ ಹೋದಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಬೆಳಗ್ಗಿನ ಜಾವದಲ್ಲಿ ಎದ್ದುಕೊಂಡಾಳೇ ಪುಕ್ಕೇದಿ


ಮುದ್ದು ಕರುಗಳನ್ನು ಮೇಯಿಸುವಳೇ ಪುಕ್ಕೇದಿ


ಸೆಗಣಿ ಹಿಡಿದುಕೊಂಡಾಳೇ ಪುಕ್ಕೇದಿ


ಅಂಗಳವನ್ನು ಗುಡಿಸಿದಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಸೆಗಣಿಹಾಕಿ ಸಾರಿಸಿಕೊಂಡಾಳೇ ಪುಕ್ಕೇದಿ


ಮೇಲು ಹೊದಿಕೆ ಹಾಕಿಕೊಂಡಾಳೇ ಪುಕ್ಕೇದಿ


ಅಕ್ಕಚ್ಚನ್ನು ಕಲಿಸಿಕೊಂಡಾಳೇ ಪುಕ್ಕೇದಿ


ಮುದ್ದು ಕರುಗಳಿಗೆ ಕೊಟ್ಟುಕೊಂಡಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಸಿರಿ ಗಿಂಡಿ ಹಿಡಿದುಕೊಂಡಾಳೇ ಪುಕ್ಕೇದಿ


ಕಪಿಲೇ ಹಸು ಕಟ್ಟಿದಾಳೇ ಪುಕ್ಕೇದಿ


ಸೊರಸೊರ ಹಾಲು ಹಿಡಿದುಕೊಂಡಾಳೇ ಪುಕ್ಕೇದಿ


ಗಿಂಡಿ ಹಾಲು ಹಿಡಿದುಕೊಂಡಾಳೇ ಪುಕ್ಕೇದಿ


ಒಡೆಯನಲ್ಲಿಗೆ ಹೋದಾಳೇ ಪುಕ್ಕೇದಿ


ಕಾಫಿ ತಿಂಡಿ ಮಾಡಿಕೊಂಡಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ 


ಒಡೆಯ ಕೂಡ ಬಂದರು ಪುಕ್ಕೇದಿ


ಯಾರೇ ಪುಕ್ಕೇದಿ ಹೇಳಿದರು


ಒಳಗೆ ಹೊರಗೆ ಹೋಗಬೇಕು ಪುಕ್ಕೇದಿ


ಜಾತಿಯಲ್ಲಿ ನಾನು ಕೆಳಗೆ ಆಗಿದ್ದೇನೆ ಬಲ್ಲಾಳರೆ


ನಾನು ಒಳಗೆ ಬರುವುದಿಲ್ಲ ಹೇಳಿದಳು




ಯಾರೇ ಪುಕ್ಕೆದಿಯೇ ಕೇಳಿದೆಯ


ಒಳಗೆ ಹೊರಗೆ ಹೋಗಬೇಕಮ್ಮ 


ಅಡಿಗೆ ಎಲ್ಲ ಮಾಡಿಕೊ ಪುಕೇದಿ




ಒಡೆಯನ ಮನೆ ಹೋಗಿಕೊಂಡಾಳೇ ಪುಕ್ಕೇದಿ


ಶುದ್ಧ ಮುದ್ರಿಕೆ ಮಾಡಿಕೊಂಡಳೇ ಪುಕ್ಕೇದಿ


ಮನೆಗೆ ಹೊರಡುವ ಪುಕ್ಕೇದಿಯೇ ಪುಕ್ಕೇದಿಯನ್ನು




ಯಾರೇ ಇವಳೇ ಪುಕ್ಕೇದಿಯೇ ಪುಕ್ಕೇದಿ


ಇಲ್ಲಿಗೊಮ್ಮೆ ಬಾ ಎಂದು ಹೇಳಿದ ಬಲ್ಲಾಳರು


ಲೇಲ ಲೇಲೆ ಲೇಲೇ ಲಾ ಕೋಡಂಗ


ನನಗೊಬ್ಬ ಕೋಡಂಗ ಇದ್ದಾನೆ ಬಲ್ಲಾಳರೆ


ಹೋಗಬೇಕು ಮನೆಗೆ ನನಗೆ ಎಂದಳು ಪುಕ್ಕೇದಿ


ಒಂದು ಮುಷ್ಠಿ ಮದ್ದು ಕೊಡುವೆನು ಪುಕ್ಕೇದಿ


ದಟ್ಟ ಪುಷ್ಪ ಬೆಳೆದ ಕೆಸುವು ತೆಗೆದುಕೋ ಪುಕ್ಕೇದಿ


ಸಾಂಬಾರು ಮಾಡಿ ಇಟ್ಟುಬಿಡು ಎಂದರು ಬಲ್ಲಾಳರು© ಡಾ‌ ಲಕ್ಷ್ಮೀ ಜಿ ಪ್ರಸಾದ್



ಅಷ್ಟು ಮಾತು ಕೇಳಿದಳು ಪುಕ್ಕೇದಿ


ಅಂಗಳದ ಕೆಳಗೆ ಇಳಿದುಕೊಂಡಳು ಪುಕ್ಕೇದಿ


ಕೆಳಗಿನ ಗದ್ದೆಗೆ ಹೋದಳು ಪುಕ್ಕೇದಿ


ಕೆಸುವು ಕೊಯ್ದುಕೊಂಡಳು ಪುಕ್ಕೇದಿ




ಮನೆಗೆ ಬಂದಳು ಪುಕ್ಕೇದಿ


ಅವಸರವಸರದಿಂದ ಕೊಯ್ದಳು ಪುಕ್ಕೇದಿ


ಹುಳಿಹಾಕಿ ಸಾಂಬಾರು ಮಾಡಿದಳು ಪುಕ್ಕೇದಿ


ಒಂದು ಹಾಕಿ ಮಾಡುವಾಗ ಪುಕ್ಕೇದಿ


ಏನೇನೇ ಪುಕ್ಕೇದಿ ಹೇಳಿದನು


ಲೇಲ ಲೇಲೆ ಲೇಲೇ ಲಾ ಕೋಡಂಗ


ಯಾರಯ್ಯ ಕೋಡಂಗಾನ ಕೋಡಂಗ


ಸಾಂಬಾರೆಲ್ಲ ಮಾಡಿದ್ದೇನೆ ಕೋಡಂಗ


ಒಳಗಿನ ಸುತ್ತಿಗೆ ಹೋಗುವಳು ಪುಕ್ಕೇದಿ


ಒಂದು ಪಾತ್ರೆ ಸಾಂಬಾರು ಹಾಕಿದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಊಟವನ್ನು ಮಾಡುವಿಯಂತೆ ಕೋಡಂಗ


ಕೆಸುವಿನ ಸಾಂಬಾರನ್ನು ಕೊಡುತ್ತಾಳವಳು


ಅವಸರವಸರದಿಂದ ತಿಂದುಕೊಂಡಳು ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಸ್ವಲ್ಪ ಸ್ವಲ್ಪ ಸಂಕಟವಾಗುತ್ತದೆ ಪುಕ್ಕೇದಿ


ಒಂದು ಮುದ್ದೆ ಹುಳಿ ಹಾಕಿದ್ದೇನೆ ಕೋಡಂಗ


ಅಡ್ಡ ನೀಟ ಬಿದ್ದುಕೊಂಡನು ಕೋಡಂಗ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಕೈಬಿಟ್ಟು ಕೈಲಾಸ ಸೇರಿಕೊಂಡನು ಕೋಡಂಗ


ದೇಹಬಿಟ್ಟು ವೈಕುಂಠ ಸೇರಿಕೊಂಡನು ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಅರಸನ ಮನೆ ಹೋದಳು ಪುಕ್ಕೇದಿ


ಯಾರಯ್ಯ ಒಡೆಯ ಬಲ್ಲಾಳರೇ


ಒಂದು ಜೀವ ಹೋಗಿದೆ ಬಲ್ಲಾಳರೇ


ಕೈಬಿಟ್ಟು ಕೈಲಾಸ ಸೇರಿಕೊಂಡನು


ದೇಹಬಿಟ್ಟು ವೈಕುಂಠ ಸೇರಿದನು


ನನ್ನ ಕೋಡಂಗ ತಪ್ಪಿ ಹೋದನು ಬಲ್ಲಾಳರೆ




ಹೋದರೆ ಹೋಗಲಿ ಪುಕ್ಕೇದಿಯೇ


ನಾನು ನಿನ್ನನ್ನು ಇಟ್ಟುಕೊಳ್ಳುತ್ತೇನೆ ಎಂದರು ಬಲ್ಲಾಳರು




ಶುದ್ಧ ಮುದ್ರಿಕೆ ಮಾಡಿಕೋ ಪುಕ್ಕೇದಿ


ಚಿನ್ನದೊಡವೆ ಇಟ್ಟುಕೋ ಎಂದರು ಬಲ್ಲಾಳರು




ಆ ಕಡೆಯ ಮಾವಿನ ಮರ ಕಡಿಸಿದರು


ಈ ಕಡೆಯ ಹಲಸಿನ ಮರ ಕಡಿಸಿದರು


ಆಸನದಿಂದ ಕೊಡಿಯಲ್ಲಿ ಕೋಡಂಗನಿಗೆ


ಮಸಣಕ್ಕೆ ಜಾಗ ಮಾಡಿದರು




ಸ್ನಾನ ಮಾಡಿಸಿ ತಂದರು ಕೋಡಂಗನನ್ನು


ಕಾಷ್ಯಕ್ಕೆ ಇಡುವಾಗ ಒಡೆಯರು


ಏನೇ ಪುಕ್ಕೇದಿ ನಿನಗೆ ಯಾರು ಇಲ್ಲ


ಒನ್ನ ಬೇಡ ನಾನು ಇದ್ದೇನೆಂದು ಹೇಳಿದರು ಬಲ್ಲಾಳರು


ಒಳಗೆ ಕರೆದರು ಬಲ್ಲಾಳರು




ಒಳಗೆ ಬರುವುದಿಲ್ಲ ಬಲ್ಲಾಳರೆ


ನಾನು ಕೆಳಗಿನ ಜಾತಿ ಎಂದು ಹೇಳಿದಳು ಪುಕ್ಕೇದಿ


ಜಾತಿಗಾದರು ಜನಿವಾರ ಪುಕ್ಕೇದಿ


ನೀನು ಬಾ ಎಂದರು ಬಲ್ಲಾಳರು




ಕೈಯಲ್ಲಿ ಹಿಡಿದುಕೊಂಡಾಗ ಹೇಳಿದಳು


ಹೀಗೆ ಬರಲಾರೆ ಎಂದಳು ಪುಕ್ಕೇದಿ


ರೇಷ್ಮೆ ಸೀರೆ ಕೊಡಿ ಎಂದಳು ಪುಕ್ಕೇದಿ


ಕೈಗೆ ಬಳೆ ಕೊಡಿ ಎಂದಳು ಪುಕ್ಕೇದಿ


ಹಣೆಗೆ ಬೊಟ್ಟು  ಇಟ್ಟುಕೊಂಡಳು ಪುಕ್ಕೇದಿ




ಇನ್ನೇನುಬೇಕು ಕೇಳಿದ ಬಲ್ಲಾಳ


ನಿಮ್ಮ ಹೆಂಡತಿಯ ತಾಳಿ ಕೂಡಿ ಬಲ್ಲಾಳರೆ


ನಾನು ಹೊಸಿಲು ದಾಟಬೇಕಾದರೆ ಎಂದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ತಾಳಿಯನ್ನು ಕೂಡ ತಂದನು ಬಲ್ಲಾಳ


ಪುಕ್ಕೇದಿ ಕೈಗೆ ಕೊಟ್ಟಾಗ ಹೇಳುವಳು


ಇನ್ನು ಒಂದಾಗಬೇಕಾದರೆ ಬಲ್ಲಾಳ


ಕೈಕೈ ಹಿಡಿದು ಮೂರು ಸುತ್ತು ಕಾಷ್ಠಕ್ಕೆ


ಮೂರು ಬಾರಿ ಸುತ್ತು ಬರುವ ಎಂದು ಹೇಳಿದಳು


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮೂರು ಸುತ್ತು ಬಲಿ ಬಂದಳು ಪುಕ್ಕೇದಿ


ಕಾಷ್ಯಕ್ಕೆ ಹಾರಿದಳು ಪುಕ್ಕೇದಿ


ಕೈಬಿಟ್ಟು ಕೈಲಾಸ ಸೇರಿದಳು ಪುಕ್ಕೇದಿ


ದೇಹ ಬಿಟ್ಟು ವೈಕುಂಠ ಸೇರಿದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ




2 ರಾಮಚಂದಿರ ಮರಲ ನಿಮ್ರ್ಯಾರೇ




ರಾಮಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ಬೆಣ್ಣೆ ಮಾರುವ ಗೊಲ್ಲರ ಹುಡುಗಿಯರು


ಓ ಬೆಣ್ಣೆ ಮಾರಿಕೊಂಡು ಹೋಗುವಾಗ


ದಾರಿಯಲ್ಲಿ ಅಡ್ಡಕಟ್ಟಿದರು.


ಅಯ್ಯೊ ಸ್ವಾಮಿ ಬೆಣ್ಣೆಯ ಬುಟ್ಟಿ ಎಳೆದು ಹಾಕಿದರು


ಓ ಗೋಪ್ಯಮ್ಮ ನಿಮ್ಮ ಮಗ ತಂಟೆ ಮಾಡುತ್ತಾನೆ


ಎಂದು ಹೇಳಿದರುಗೊಲ್ಲರ ಹುಡುಗಿಯರು




ರಾಮಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ನೀರಿಗೆಂದು ಹೋಗುವಳುವಳು ಮೋಹಿನಿ ಮಗಳು


ದಾರಿಗೆ ಅಡ್ಡ ನಿಂತು ಕೊಡವನ್ನು ಎಳೆದರು


ಕೊಡವನ್ನೆಳೆದು ಒಡೆದು ಹಾಕಿದರು


ಅಯ್ಯೊ ಸ್ವಾಮಿ ಕೊಡವನ್ನು ಒಡೆದು ಹಾಕಿದರು


ಅಯ್ಯೊ ಸ್ವಾಮಿ ಉಟ್ಟ ಸೀರೆ ಹರಿದು ಹಾಕಿದರು


ಉಟ್ಟ ಸೀರೆ ಹರಿದು ಹಾಕಿದರು


ಅಯ್ಯೊ ಸ್ವಾಮಿ ಹಾಕಿದ ರವಿಕೆ ಬಿಚ್ಚಿ ಹಾಕಿದರು 


ಕೈಯ ಬಳೆ ಒಡೆದು ಹಾಕಿದರು


ಅಯ್ಯೊ ಸ್ವಾಮಿ ಎಂದು ಹೇಳಿದಳು ಮೋಹಿನಿ ಮಗಳು




ಮಣ್ಣಿನ ಕೊಡ ಒಡೆದು ಹೋಯಿತೇನೇ


ಓ ಮೋಹಿನಿ ಮಗಳೇತಾಮ್ರದ ಕೊಡ ತರಿಸಿಕೊಡುವೆನು




ಉಟ್ಟು ಸೀರೆ ಹರಿದುಹೋಯ್ತೇನೇ


ಓ ಮೋಹಿನಿ ಮಗಳೇಹೊಸ ರವಿಕೆ ಹೊಲಿಸಿ ಕೊಡುವೆ




ಕೈಯ ಬಳಿ ಒಡೆದು ಹೋಯ್ತೇನೇ


ಓ ಮೋಹಿನಿ ಮಗಳೇ


ಚಿನ್ನದ ಬಳೆ ಮಾಡಿಸಿ ಕೊಡುವೆನು


ಹೇಳಿದವರು ಅಯ್ಯೊ ಸ್ವಾಮಿನಿಯೇ




ರಾಮ ಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ಬೆಣ್ಣೆ ಮಾರುವ ಗೊಲ್ಲರ ಹುಡುಗಿಯರು


ಬೆಣ್ಣೆ ಮಾರಿ ಬರುವಾಗಲ್ಲಿ


ಯಾರಮ್ಮ ಗೋಪ್ಯಮ್ಮ


ದಾರಿಯಲ್ಲಿ ನಿಂತಿದ್ದಾರೆ ಅಯ್ಯೊ ಸ್ವಾಮಿ


ಬುಟ್ಟಿ ತೆÉಗೆದು ಸೊಂಟ ಹಿಡಿದರು


ಬೆಣ್ಣೆಮಾರುವ ಗೊಲ್ಲರ ಹುಡುಗಿಯರು


ಹಾರಿಕೊಂಡು ಓಡಿಕೊಂಡು ಮನೆಗೆ ಬಂದರು


ಯಾರಮ್ಮಾ ಗೋಪ್ಯಮ್ಮಾ ಯಾರಮ್ಮಾ ಗೋಪ್ಯಮ್ಮಾ


ನಿಮ್ಮ ಮಗ ದಾರಿಯಲ್ಲಿ ನಿಂತು ಬುಟ್ಟ್ಟಿ ಹಿಡಿದರು


ನಾವು ಓಡಿಕೊಂಡು ಬಂದೆವೆಂದು


ಹೇಳಿದರು ಗೊಲ್ಲರ ಹುಡುಗಿಯರು




ನನ್ನ ಕೃಷ್ಣ ಬಾಲಕೃಷ್ಣನು


ತೊಟ್ಟಿಲಿನಲ್ಲಿ ಆಡುತ್ತಿದ್ದಾನೆ ಬಟ್ಟಿಲಿನಲ್ಲಿ ಆಡುತ್ತಿದ್ದಾನೆ


ಚೆಂಡಿನಲ್ಲಿ ಆಡುತ್ತಾನೆ ಬಾಲಕೃಷ್ಣನೆಂದು


ಹೋಗಿ ಎಂದು ಜೋರು ಮಾಡಿದರು




ತೊಟ್ಟಿಲ ಹತ್ತಿರಹೋಗಿ ಇಣುಕಿ ನೋಡುವಾಗ


ನಗಾಡಿಕೊಂಡು ಇದ್ದಾರೆ ಬಾಲಕೃಷ್ಣನು


ರಾಮ ಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತಿನೊಂದು ಕೆರೆಯ ನಿರ್ಮಿಸಿದರು




3.ಬಂಗರಾಳ್ವಾಗ


ನೀರುಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದುಹೋಗುವಾಗ ದಾರಿ ಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿ ದೇರೆ ಮುಂಡೋರಿ


ದಾರಿ ಬಿಡಲು ತಡಮೆ ಸರಿಸಲು


ನನಗೊಂದು ಮಾತುಹೇಳಬೇಕೆಂದನು ದೇರೆ ಮುಂಡೋರಿ


ನೀರು ತೆಗೆದುಕೊಂಡು ಬರುವಾಗ ದಾರಿಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ಬೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿಸು


ನಿನಗೊಂದು ಮಾತು ನಾಳೆ ಹೇಳುವೆ ಎಂದು ಅವಳು ಹೇಳಿದಳು


ದಾರಿಬಿಟ್ಟು ತಡಮೆ ಸರಿಸಿ ನಿಂತನು ದೇರೆ ಮುಂಡೋರಿ


ಆ ದಿನ ಹೋಯಿತಪ್ಪ ಬಂಗರಾಳ್ವಾಗನಿಗೆ




ಮರುದಿನ ಬಂದಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಾಗ ನಿನ್ನೆ ಹೇಳಿದ


ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ


ಎಂದು ಹೇಳವನು ದೇರೆ ಮುಂಡೋರಿ




ದಾರಿ ಬಿಡದಿದ್ದರೆ ತಡಮೆ ಸರಿಸದಿದ್ದರೆ


ನಾನು ಈಗ ಬೊಬ್ಬೆ ಹಾಕುವೆ ಎಂದು ಅವಳು ಹೇಳಿದಳು


ಬೊಬ್ಬೆ ಹಾಕಿ ಕರೆಯುವರು ಒಂದು ಮಾಡುವರು




ನಿನ್ನನ್ನು ಬಿಟ್ಟು ಬೇರೆ ನನಗೆ ಸಿಗುವುದಿಲ್ಲ


ಕೈಯಲ್ಲಿ ಹಿಡಿದು ಬಳೆ ಒಡೆಯುತ್ತಾನೆ ದೇರೆ ಮುಂಡೋರಿ


ಹಿಡಿದು ನಾಲ್ಕು ಏಟು ಇಕ್ಕುತ್ತಾರವರು ದೇರ ಮುಂಡೋರಿ




ಹಾದಿ ಬಿಟ್ಟು ತಡಮೆ ಸರಿಸಿದ ದೇರೆ ಮುಂಡೋರಿ


ನೀರು ತೆಗೆದುಕೊಂಡು ಹೋದಳವಳು ಬಂಗರಾಳ್ವಾಗ




ರಾತ್ರಿಯ ಹೊತ್ತಿನಲ್ಲಿ ಸ್ನಾನಕ್ಕೆ ಹೋಗುವಾಗ


ದಾರಿಗಡ್ಡ ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ


ದಾರಿಬಿಡು ತಡಮ್ಮೆ ಸರಿಸು ಎಂದಳು




ಹಿಡಿದ ಕೊಡವನ್ನು ಎತ್ತಿ ಒಂದು ಏಟು ಹಾಕುತ್ತಾಳೆ


ಓಡಿಕೊಂಡು ಹೋದನಾತ ದೇರೆ ಮುಂಡೋರಿ




ಅಷ್ಟು ಹೊತ್ತಿಗೆ ಹೇಳುತ್ತಾಳವಳು ಬಂಗರಾಳ್ವಾಗ


ಊರಿಗೆ ಬಂದ ಮಾರಿ ಆ ಕಡೆ ಹೋಯಿತು


ಎಂದು ಹೇಳಿದಳು ಬಂಗರಾಳ್ವಾಗ








4. ರಾದು




ನಾವು ಹೋಗುತ್ತೇವೆ ಅತ್ತೆ ಸೊಸೆ ಬರುವಳು


ಕಪ್ಪುರೂಪದಲ್ಲಿ ಒಳ್ಳೆ ಹೆಣ್ಣು ಬಟ್ಟೆಯ ಗಂಟು ಕೊಡಿರಿ ಅತ್ತೆ


ಕುಟುಂಬದ ಮನೆಗೆ ಹೋಗುವೆ ನಾನು


ಹಾಗೆ ಯಾಕೆ ಹೇಳುತ್ತಿ ಮಗಳು ಆ ರಾದು ಎಂದು ಕೇಳುವಳು ಅತ್ತೆ


ನಿಮ್ಮ ಮೊಮ್ಮಗ ಅಚ್ಯುತನಿಗೆ ಆಡಲೆಂದು


ಎರಡು ಬುಗರಿ ತೆಗೆದುಕೊಂಡು ಬರುವಾಗ ಅತ್ತೆ


ಒಕ್ಕಲು ಇಲ್ಲದ ಮನೆಯಲ್ಲಿ ಅತ್ತೆಯವರೆ


ನಡತೆಗೆಟ್ಟ ಸರಸದಿಂದ ಇದ್ದರು


ವೀಳ ಎಲೆ ಅಡಿಕೆ ತಿನ್ನುತ್ತಿದ್ದರು ಅತ್ತೆಯವರೆ


ನಾನು ಅಲ್ಲಿಗೆ ಹೋದೆ  ಅತ್ತೆ


ನೋಡುವಾಗ ಅತ್ತೆಯವರ ಕೈ ಸುಸ್ತಾಗುವಷ್ಟು ತುಳಿದರು ಅತ್ತೆ © ಡಾ.ಲಕ್ಷ್ಮೀ ಜಿ ಪ್ರಸಾದ್ 


ಅದÀಕ್ಕಾಗಿಯೇ ನಾನು ಹೋಗುವೆ ಹೋಗುವೆ ಅತ್ತೆ


ಎಂದು ಹೇಳಿದಳು ರಾದು


ಹಾಗೆ ಹೋದರÉ ರಾದುಹೋಗಿ ಇಂದು ಹೋದ ರಾದು ಮಗಳೇ


ಇನ್ನು ಯಾವಾಗ ಬರುವಿ ಮಗಳ ಎಂದು ಕೇಳಿದರು ಅತ್ತೆಯವರು


ನಿಮ್ಮ ಮಗ ಸತ್ತಾಗೊಂದು ಸಾವಿಗೆ ಬರದಿದ್ದರೆ ಇರುವ ಬೊಜ್ಜಕ್ಕೆ 


ಬರುವೆ ಎಂದು ಕಣ್ಣನೀರು ಸುರಿಸಿದಳು ಇಳಿದು ಹೋದಳು ರಾದು


*****


 5. ಕಲ್ಜಿಗದ ಕಥೆಪಣ್ಣೆ ನಲಿಪು ತೂಕ ಮಾದಿರ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವಹಾಗೆ ಹೇಳುವೆನು ಕೇಳು ಮಾದಿರ


ಇನ್ನು ನಮ್ಮ ಜೀವನವು ಹೇಗೆ ಸಾಗುತ್ತದೆ ಮಾದಿರ


ಲೇಲೆ ಲೇಲೆ ಲೇಲೇ ಲಾ




ಕಳ್ಳು ಗಂಗಸರ ಸತ್ತುಹೋಯಿತು ಮಾದಿರ


ಇನ್ನು ನಮ್ಮ ಜೀವನವು ಹೇಗೆ ಸಾಗುತ್ತದೆ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಕಳ್ಳು ಗಂಗಸರ ಎಲ್ಲಿ ಹೋಯಿತು ಮಾದಿರ 


ಇನ್ನುಮುಂದೆ ನಮ್ಮ ಜೀವನ ಹೇಗೆ ಸಾಗುತ್ತದೆ ಮಾದಿರ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಕಾಂಪ್ರೇಶನ್ನು ತಿನ್ನುವಾಗ ಎದೆಯದು ಕರಟೆ ಹೋಯಿತು


ಇನ್ನು ಮುಂದೆ ನಮ್ಮ ಜೀವನ ಹೇಗೆ ಸಾಗುತ್ತದೆ ಮಾದಿರ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ದೊಡ್ಡವನ ದೊಡ್ಡಸ್ತಿಕೆ ಎಲ್ಲಿ ಹೋಯ್ತು ಮಾದಿರ


ಇನ್ನು ಮುಂದೆ ನಮ್ಮ ಜೀವನವು ಹೇಗೆ ಸಾಗುತ್ತದೆ, ಮಾದಿರ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಗಾಂಧಿ  ಪಟ ಹಾರಿ ಹೋಯ್ತು ಮಾದಿರ


ಇನ್ನು ಮುಂದೆ ನಮ್ಮ ಜೀವನವು ಹೇಗೆ ಸಾಗುತ್ತದೆ, ಮಾದಿರ


ಲೇಲೆ ಲೇಲೆ ಲೇಲೇಲಾ


ಬೆನ್ನಿನ ಮೂಳೆ ಮುರಿದು ಹೋಯ್ತು ಮಾದಿರಿ


ಇನ್ನು ಮುಂದೆ ನಮ್ಮ ಜೀವನವು ಹೇಗೆ ಸಾಗುತ್ತದೆ. ಮಾದಿರ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಇನ್ನು ಮುಂದೆ ನಮ್ಮ ಜೀವನವು ಹೇಗೆ ಸಾಗುತ್ತದೆ, ಮಾದಿರ


ಲೇಲೆ ಲೇಲೆ ಲೇಲೇಲಾ


*****


6.  ಓ ಬೇಲೆ ಸೋಬಾನೆ ಪಂಡೋಂದು ಬಲ್ಲೆಯ


ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


 


ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ಓ ಬೇಲೆ ತಲೆಯನ್ನು ಬಾಚಿ ಕಟ್ಟಿಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ತಲೆ ತುಂಬ ಮಲ್ಲಿಗೆ ಜಾಜಿ ಮುಡಿಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಜಡೆ ಕಟ್ಟಿ ಜಲ್ಲಿ ಹಾಕಿಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಕುಂಕುಮದ ಬೊಟ್ಟು ಇಟ್ಟುಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಕಿವಿಗೊಂದು ಓಲೆಯನ್ನು ಹಾಕಿಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಮೂಗಿಗೆ ಮೂಗುತ್ತಿ ಹಾಕಿಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಕೈ ತುಂಬ ಗಾಜಿನ ಬಳೆಗಳನ್ನು ಹಾಕಿಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಕೊರಳಿಗೆ ಕೊರಳಿನ ಆಭರಣ ಹಾಕಿಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ


ಕಾಲಿಗೆ ಬೆಳ್ಳಿ ಉಂಗುರ ತೊಟ್ಟುಕೊಂಡು ಬನ್ನಿರಿ




ಓ ಬೇಲೆ ಸೋಬಾನೆ ಹೇಳಿಕೊಂಡು ಬನ್ನಿರಿ


ವಿಟ್ಲದ ಅರಸನ ಮದುವೆಗೆ ಬನ್ನಿರಿ






7. ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಪಯ್ಯು ಹುಟ್ಟಿದ ರಾಜ್ಯ ಎಲ್ಲೆಂದು ಹೇಳುವಾಗ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ತೆಂಕು ರಾಜ್ಯದಲ್ಲಿ ಪಯ್ಯು ಹುಟ್ಟಿದ ಊರಂತೆ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಪಯ್ಯು ಹುಟ್ಟಿದ ಜಾಗವೆಲ್ಲೆಂದು ಕೇಳುವಾಗ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ತೆಂಕು ರಾಜ್ಯದಲ್ಲಿ ಸಿರಿ ಇರುವ ಗುಡ್ಡದಲ್ಲಿ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಆನೆಕಲ್ಲಿನ ಅಟ್ಟದಲ್ಲಿ ಕುದುರೆ ಕಲ್ಲ ಎದುರುಗಡೆ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ದಂಬೆಕಲ್ಲಿನ ನೀಟದಲ್ಲಿ ಪಯ್ಯು ಹುಟ್ಟಿದ ಊರಾಯಿತು


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ತಾಯಿಗೆ ಹುಟ್ಟಿದ ಮೇಲೆ ಅಳಿವು ಅಂತ್ಯ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಪಯ್ಯುಹುಟ್ಟಿದ ಊರು ಯಾವುದೆಂದು ಕೇಳಬೇಕು


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಮಾವ ಎಂದರೆ ಇದ್ದಾರೆ ಪಯ್ಯು


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಮಾವ ಐಗಳು ಇದ್ದಾರೆ ಪಯ್ಯು


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಕೈಯದೊಂದು ಚಂದವನ್ನು ನೋಡಿರಬೇಕು ಮಾವ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಕೈಗೆ ಚಲಕಿಯನ್ನು ಮಾಡಿಸಿದ್ದಾರೆ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಕಾಲಿನ ಚಂದವನ್ನು ನೋಡಿರಬೇಕು ಮಾವ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಕಾಲಿಗೆ ಬೆಳ್ಳಿಯ ಗೆಜ್ಜೆ ಮಾಡಿಸಿದ್ದಾರೆ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು© ಡಾಲಕ್ಷ್ಮೀ ಜಿ ಪ್ರಸಾದ್



ಸೊಂಟದ ಚಂದವನ್ನು ನೋಡಿರಬೇಕು ಮಾವ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಸೊಂಟಕ್ಕೆ ಬೆಳ್ಳಿಯ ಸರಪಳಿ ಮಾಡಿಸಿದ್ದಾರೆ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು




ಕೊರಳಿನ ಚಂದವನ್ನು ನೋಡಿರಬೇಕು ಮಾವ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಕೊರಳಿಗೆ ಬಂಗಾರಿನ ಸರವನ್ನು ಮಾಡಿಸಿದ್ದಾರೆ


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


ಓ ಬೇಲೆ ಓ ಬೇಲೆ ಓ ಬೇಲೆ ಬೇಲೆ ಪಯ್ಯು


*****


8. ಬಾರುಂಡು ಬಳುಂಡು ಬಂಗಾಡಿಡೇ




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ಬಳೆ ಇದೆ ಬಂಗಾರಿನದು


ನೇರಿಂಗಿಗೆ ಹೋಗುವಾಗ ಇಡಲೇಬೇಕು.




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ಬೆಂಡೋಲೆ ಇದೆ ಬಂಗಾರಿನದ್ದು


ನೇರೆಂಗಿಗೆ ಹೋಗುವಾಗ ಇಡಲೇಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ರವಿಕೆ ಇದೆ ರೇಷ್ಮೆಯದ್ದು


ನೇರೆಂಗಿಗೆ ಹೋಗುವಾಗ ಧರಿಸಲೇಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ಸೀರೆ ಇದೆ ಪೀತಾಂಬರ


ನೇರೆಂಗಿಗೆ ಹೋಗುವಾಗ ಉಡಲೇಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ಮೂಗುತಿ ಉಂಟು ಬಂಗಾರಿನದು


ನೇರೆಂಗಿಗೆ ಹೋಗುವಾಗ ಇಡಲೇಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ಪಟ್ಟಿ ಇದೆ ಬಂಗಾರಿನದು


ನೇರೆಂಗಿಗೆ ಹೋಗುವಾಗ ಇಡಲೇಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ಸರ ಇದೆ ಬಂಗಾರಿನದು


ನೇರೆಂಗಿಗೆ ಹೋಗುವಾಗ ಧರಿಸಲೇಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ಮೂಗುತ್ತಿ ಇಧೆ ಬಂಗಾರಿನದು


ನೇರೆಂಗಿಗೆ ಹೋಗುವಾಗ ಇಡÀಲೇಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


ನನ್ನಲ್ಲೊಂದು ವಂಕಿ ಇದೆ ಇದೆ ಬಂಗಾರಿನದು


ನೇರೆಂಗಿಗೆ ಹೋಗುವಾಗ ಧರಿಸಬೇಕು




ಬತ್ತ ಇದೆ ಬಳ್ಳಿ ಇದೆ ಬಂಗಾಡಿಯಲ್ಲಿ


ನೀರಿದೆ ನೆರಳಿದೆ ನೇರೆಂಗಿಯಲ್ಲಿ


*****


9.ಪಕ್ಕಿಗುಲೋ ಪಕ್ಕಿಗುಲು ರಾಮಸ್ವಾಮಿ ಪಕ್ಕಿಗುಲು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಸೌತೆಯ ಹೂವನ್ನು ನೋಡಿದವು ಪಕ್ಷಿಗಳು


 ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಮುಳ್ಳು ಸೌತೆಯ ಹೂವನ್ನು ನೋಡಿದವು ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಅಲಸಂಡೆ ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಚೇನಿಕಾಯಿ ಹೂವನ್ನು ನೋಡಿದವು ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಕುಂಬಳದ ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಬೇಂಡೆಯ ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ತೊಂಡೆಯ ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಬದನೆಯ  ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


ಕುಂಕುಮ ಬಣ್ಣದ ಪಕ್ಷಿಗಳು


ಸೊರೆಕ್ಕಾಯಿ ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಹೀರೆಕಾಯಿಯ ಹೂವನ್ನು ನೋಡಿದವು. ಪಕ್ಷಿಗಳು 


 ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಪಡುವಲಕಾಯಿಯ ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು © ಡಾ.ಲಕ್ಷ್ಮೀ ಜಿ ಪ್ರಸಾದ್


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


ಹಾಗಲಕಾಯಿಯ ಹೂವನ್ನು ನೋಡಿದವು. ಪಕ್ಷಿಗಳು


ಅದಕ್ಕೊಂದು ರಾಗ ಹಾಕಿದವು


ಪಕ್ಷಿಗಳೂ ಪಕ್ಷಿಗಳು 


 ರಾಮಸ್ವಾಮಿ ಪಕ್ಷಿಗಳು


ಆಲ ಮೇಲಂದದ ಕಟ್ಟೆಯಲ್ಲಿವೆ 


 ಕುಂಕುಮ ಬಣ್ಣದ ಪಕ್ಷಿಗಳು


*****


   ೧೦.ಬತ್ತುಂಡು ಮರ ಆಯಾಲೇ




ಬಂತು ಮರ ಆಯಾಲೇ


ಬಂತು ಮರ ಆಯಾಲೆ


ಎಳೆಯಿರಿ ಯುವಕರೆ ಓ


ತಾಳೆಯ ಮರ ಆಯಾಲೇ


ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


ಎಳೆಯಿರಿ ಯುವಕರೆ ಓ


ಮಾವಿನ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಸರೊಳಿಯ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ




ಕುಂಟಾಲದ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ




ನೇರಳೆಯ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ




ಹೊಂಗಾರೆಯ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


ಎಳೆಯಿರಿ ಯುವಕರೆ ಓ




ಹಲಸಿನ ಮರ ಆಯಾಲೇ


 ಎಳೆಯಿರಿ ಯುವಕರೆ ಓ © ಡಾ.ಲಕ್ಷ್ಮೀ ಜಿ ಪ್ರಸಾದ್


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ




ದಡ್ಡಾಲದ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


 


ಬಣ್ಣಿನ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ




ಸಾಗುವಾನಿಯ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬೇಂಗದ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


ಎಳೆಯಿರಿ ಯುವಕರೆ ಓ


ಉಪ್ಪಳಿಗನ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಈಚಲ ಮರ ಆಯಾಲೇ


ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬೇವಿನ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಹೊನ್ನೆಯ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಕಲ್ಮಾರಿನ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಗಾಳಿಯ ಮರ ಆಯಾಲೇ


 ಎಳೆಯಿರಿ ಯುವಕರೆ ಓ


ಬಂತು ಮರ ಆಯಾಲೇ


ಎಳೆಯಿರಿ ಯುವಕರೆ ಓ


ತಾಳೆಯ ಮರ ಆಯಾಲೇ


 ಎಳೆಯಿರಿ ಯುವಕರೆ ಓ




ಬಂತು ಮರ ಆಯಾಲೇ


ಎಳೆಯಿರಿ ಯುವಕರೆ ಓ  


*****








 11. ಪುದಾ ಪುದಾ ಓ ಪುದಾ ದೇವರೆ ಜಾಲ ಪುದಾ


ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿಪದೊಳಿಡೇ


ಅಲಂಕೃತವಾಗುವಳೇ ಪುದ  ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಅಲಂಕೃತಳಾಗುವಳೇ ಪುದ ಕನ್ನಡಿ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಮೂಗುತಿ ಇಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಕುತ್ತಿಗೆಗೆ ಕಿಲೆಪಂಜಿ ಇಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಕೈ ಕಡಗ ಇಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಕಾಲಿಗೆ ಗೆಜ್ಜೆ ಇಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಮುಖಕ್ಕೆ ಕುಂಕುಮ ಇಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಕಣ್ಣಿ ಕಾಡಿಗೆ ಹಾಕುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಸೀರೆ ಉಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ರವಿಕೆ ತೊಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ತಲೆ ಬಾಚುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಹೂವು ಇಡುವಳೇ ಪುದ ಚಂದ ನೋಡುವಳು




ಪುದಾ ಪುದಾ ಓ ಪುದಾ ದೇವರ ಅಂಗಳದ ಪುದ


ತೆಂಕು ದಿಕ್ಕಿನಲ್ಲಿ ಪುದ ಸಿರಿ ಪದೊಳಿಗೆಯಲ್ಲಿ


ಅಲಂಕೃತಳಾಗುವಳೇ ಪುದ ಚಂದ ನೋಡುವಳು


*****


12. ಕೋಡೆಂಕ್ಳು ಬೈದಾಯೇ ಓ ಉಳಾರೇ


ನಿನ್ನೆ ನಾವು ಬಂದಿದ್ದೇವೆ ಓ ಒಡೆಯರೆ


ಪಂಜಿಕಲ್ಲು ಮಾಗಣೆಗೆ


ತಲೆಯನ್ನೇದರೂ ನೋಡಿರಬೇಕು ಒಡೆಯರು


ಎಣ್ಣೆದಾನ ಮಾಡಿದ್ದಾರೆ.




ನಿನ್ನೆ ನಾವು ಬಂದಿದ್ದೇವೆ ಓ ಒಡೆಯರೆ


ಪಂಜಿಕಲ್ಲು ಮಾಗಣೆಗೆ


ಬಟ್ಟೆಯನ್ನೇನಾದರೂ ನೋಡಿರಬೇಕು ಒಡೆಯರು


ವಸ್ತ್ರದಾನ ಮಾಡಿದ್ದಾರೆ.




ನಿನ್ನೆ ನಾವು ಬಂದಿದ್ದೇವೆ ಓ ಒಡೆಯರೆ


ಪಂಜಿಕಲ್ಲು ಮಾಗಣೆಗೆ


ಕೈಯನ್ನೇನಾದರೂ ನೋಡಿರಬೇಕು ಒಡೆಯರು


ಬಳೆದಾನ ಮಾಡಿದ್ದಾರೆ.




ನಿನ್ನೆ ನಾವು ಬಂದಿದ್ದೇವೆ ಓ ಒಡೆಯರೆ


ಪಂಜಿಕಲ್ಲು ಮಾಗಣೆಗೆ


ಮುಖವನ್ನು ನೋಡಿರಬೇಕು ಒಡೆಯರು


ಕುಂಕುಮದಾನ ಮಾಡಿದ್ದಾರೆ.




ನಿನ್ನೆ ನಾವು ಬಂದಿದ್ದೇವೆ ಓ ಒಡೆಯರೆ


ಪಂಜಿಕಲ್ಲು ಮಾಗಣೆಗೆ


ಕಣ್ಣನ್ನು ನೋಡಿರಬೇಕು ಒಡೆಯರು


ಕಾಡಿಗೆ ದಾನ ಮಾಡಿದ್ದಾರೆ.




ನಿನ್ನೆ ನಾವು ಬಂದಿದ್ದೇವೆ ಓ ಒಡೆಯರೆ


ಪಂಜಿಕಲ್ಲು ಮಾಗಣೆಗೆ


ಕೊರಳೇನಾದರೂ ನೋಡಿರಬೇಕು ಒಡೆಯರು


ಆಭರಣ ಮಾಡಿದ್ದಾರೆ.




ಕಾಲನ್ನು ನೋಡಿರಬೇಕು ಒಡೆಯರು


ಕಾಲ ಗೆಜ್ಜೆನಾದ ಮಾಡಿದ್ದಾರೆ


ಬೆರಳನ್ನು ನೋಡಿರಬೇಕು ಒಡೆಯರು


ಉಂಗುರ ದಾನ ಮಾಡಿದ್ದಾರೆ


ನಿನ್ನೆ ನಾವು ಬಂದಿದ್ದೇವೆ ಓ ಒಡೆಯರೆ


ಪಂಜಿಕಲ್ಲು ಮಾಗಣೆಗೆ


*****




13.ಬಲ್ಲೇರಿ ದಾದ ಬಲ್ಲೆದ ಮೇಲ್‍ದಾದ


ಬಲ್ಲೇರಿ ಏನು ಬಲ್ಲೆಯ ಮೇಲೆ ಏನು


ದರ ಬರ ಏನು ಬಲ್ಲೇರಿ ಏನು




ಸೌತೆಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಹೀರೆಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಕುಂಬಳಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಚೀನಿಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಮುಳ್ಳು ಸೌತೆ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಪಡವಲಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ತೊಂಡೆಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು


ಹಾಗಲಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ದಾರ್ಲೆ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಅಲಸಂಡೆ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಬದನೆಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು


ಬೆಂಡೆ ಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು




ಸೊರೆಕಾಯಿ ಏನು ಬಲ್ಲೇರಿ ಏನು


ಬಲ್ಲೇರಿ ಏನು  ಬಲ್ಲೆಯ ಮೇಲೆ ಏನು 


ದರ ಬರ ಏನು ಬಲ್ಲೇರಿ ಏನು


*****


14. ಆಜಪ್ಪ ಮೂಜಿ ಮೂಡೇ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ


ಈಶ್ವರ ದೇವರಿಗೆ ಪಾದ ಕಾಣಿಕೆ




ಕಪ್ಪು ಚೀನಿಕಾಯಿ ಬಿಳಿಯ ಚೀನೀಕಾಯಿ© ಡಾ.ಲಕ್ಷ್ಮೀ ಜಿ ಪ್ರಸಾದ್


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಕುಂಬಳ ಬಿಳಿಯ ಕುಂಬಳ


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಅಲಸಂಡೆ ಬಿಳಿಯ ಅಲಸಂಡೆ


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಬೆಂಡೆಕಾಯಿ ಬಿಳಿಯ ಬೆಂಡೆಕಾಯಿ


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕರಿಯ ಬದನೆ  ಬಿಳಿಯ ಬದನೆ


ಈಶ್ವರ ದೇವರಿಗೆ ಪಾದ ಕಾಣಿP


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಹರಿವೆÀ ಬಿಳಿಯ ಹರಿವೆ


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಕೆಸುವು ಬಿಳಿಯ ಕೆಸವು


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಪಡುವಲ ಬಿಳಿಯ ಪಡುವಲ


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಹೀರೆಕಾಯಿ ಬಿಳಿಯ ಹೀರೆಕಾಯಿ


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ




ಕಪ್ಪು ಸೌತೆ ಬಿಳಿಯ ಸೌತೆ


ಈಶ್ವರ ದೇವರಿಗೆ ಪಾದ ಕಾಣಿಕೆ


ಆರು ಅಪ್ಪ ಮೂರು ಮೂಡೇ


ಹದಿನಾರು ಸುಕ್ರುಂಡೆ


ಈಶ್ವರ ದೇವರಿಗೆ ಪಾದ ಕಾಣಿಕೆ


*****


15. ಒಂಜಿ ಕುತ್ತಿ ಕಳಿಮಾರ್ಯಾಳೇ ಬೈದ್ಯೆದಿ




ಒಂಜಿ ಕುತ್ತಿ ಕಳ್ಳು ಮಾರಿದಳೇ ಬೈದ್ಯೆದಿ


ಪಾವೂರ ಪಣೆ ಚಪ್ಪರ ಹಾಕಿಸಿದಳು




ಒಂದು ಕುತ್ತಿ ಕಳ್ಳು ಮಾರಿದಳೇ ಬೈದ್ಯೆದಿ


ಏಳು ಮಾಳಿಗೆಯ ಮನೆ ಕಟ್ಟಿಸಿದಳು




ಒಂದು ಕುತ್ತಿ ಕಳಿ ಮಾರಿದಳೇ ಬೈದ್ಯೆದಿ


ಏಳು ದೇವಸ್ಥಾನ ಸುತ್ತಿದಳು




ಒಂದು ಕುತ್ತಿ ಕಳಿ ಮಾರಿದಳೇ ಬೈದ್ಯೆದಿ


ಏಳು ಜನ ಮಕ್ಕಳಿಗೆ ಜನ್ಮ ಕೊಟ್ಟಳು




ಒಂದು ಕುತ್ತಿ ಕಳಿ ಮಾರಿದಳೇ ಬೈದ್ಯೆದಿ


ಏಳು ಪಲ್ಲಕ್ಕಿಯನ್ನು ಕಳುಹಿಸಿದಳು




ಒಂದು ಕುತ್ತಿ ಕಳಿ ಮಾರಿದಳೇ ಬೈದ್ಯೆದಿ


ಏಳು ಜನ ಮಕ್ಕಳನ್ನು ಕಳುಹಿಸಿದಳು.


ಒಂದು ಕುತ್ತಿ ಕಳಿ ಮಾರಿದಳೇ ಬೈದ್ಯೆದಿ


*****


16. ಬಲ್ಲೇಯೇ ಸ್ವಾಮಿ ಬಲ್ಲೇಯೇ


ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬರುವುದಕ್ಕಾಗುವುದಿಲ್ಲವೇ




ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ಏಳು ಜನ ಹೆಂಗಸರನ್ನು ನೋಡುವುದಕ್ಕಾಗುವುದಿಲ್ಲವೇ




ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯಲ್ಲಿ ಹೇಳುವ ಪದವನ್ನೊಮ್ಮೆ ಕೇಳಲಿಕ್ಕಾಗುವುದಿಲ್ಲವೇ


ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ಓ ಬೇಲೆ ಸ್ವರವನ್ನು ಕೇಳಲಿಕ್ಕಾಗುವುದಿಲ್ಲವೇ




ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ಸೋಬಾನೆಯ ಸ್ವರವನ್ನು ಕೇಳಲಿಕ್ಕಾಗುವುದಿಲ್ಲವೇ




ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ನೇಜಿನೆಟ್ಟ ಚಂದವನ್ನೊಮ್ಮೆ ನೋಡಲಿಕ್ಕಾಗುವುದಿಲ್ಲವೆ




ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ವೇದಿಕೆಯ ಮೇಲೊಮ್ಮೆ ಬರಲಿಕ್ಕಾಗುವುದಿಲ್ಲವೇ




ಬನ್ನಿರಿ ಸ್ವಾಮಿ ಬನ್ನಿರಿ


ಗದ್ದೆಯ ಹುಣಿಗೊಮ್ಮೆ ಬನ್ನಿರಿ


ಬನ್ನಿರಿ ಸ್ವಾಮಿ ಬನ್ನಿರಿ


ಹಾಕಿದ ಚಪ್ಪರ ನೋಡಲಿಕ್ಕಾಗುವುದಿಲ್ಲವೇ






17. ಮಿತ್ತಂಗಡಿ ಪೇಂಟೆ ತಿರ್ತಂಗಡಿ ಪೇಂಟೆ


.


ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಪೇಟೆ ನೋಡಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


 ತರಕಾರಿಗೆಂದು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಬೆಲ್ಲ ತರಲು ಬರುವಳವಳು ಬೊಲ್ಲೂರ ಬೊಂಬೆ

© ಡಾ ಲಕ್ಷ್ಮೀ ಜಿ ಪ್ರಸಾದ್



ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


 ಮೆಣಸು ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಉಪ್ಪು ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


 ಕೊತ್ತಂಬರಿ ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಸಾಸಿವೆ ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಹುಳಿ ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಎಣ್ಣೆ ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


 ಉದ್ದು ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


 ಮೆಂತ್ಯೆ ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಜೀರಿಗೆ ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಇಂಗು ತರಲು ಬರುವಳವಳು ಬೊಲ್ಲೂರ ಬೊಂಬೆ




ಮೇಲಿನಂಗಡಿ ಪೇಟೆ ಕೆಳಗಿನಂಗಡಿ ಪೇಟೆ


ಹೆಸರು ತರಲು ಬರುವಳವಳು ಬೊಲ್ಲೂರ ಬೊಂಬೆ


*****


 ೧೮.ಆಯರೆ ಗುಡ್ಡೆ ತಪ್ಪುದ ಕಟ್ಟ




ಆ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಜಾನು ನಾಯ್ಕನಿಗೇ ಯಂ


ಈ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಮೈಂದ ಸೀತರಿಗನಿಗೆ




ಪಶ್ಚಿಮ ಮನೆಯ ಮುತ್ತಿನ ದೀಪ


ಜಾನು ನಾಯ್ಕನಿಗೇ ಯಂ


ಮೂಡು ಮನೆಯ ಕಕ್ಕೆ ದೀಪ


ಮೈಂದ ಸೀತರಿಗನಿಗೆ




ಆ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಜಾನು ನಾಯ್ಕನಿಗೇ ಯಂ


ಈ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಮೈಂದ ಸೀತರಿಗನಿಗೆ


ಒಂದು ಬಾವಿಗೆ ಎರಡು ದಂಡೆ


ಹಾಕಬೇಕಾದರೇ ಯಂ


ಸಾಲಿಯ ಬನ್ನಾಲ ಯಂ ಕಂರ್ಬೇರನ್ನಾಲಾ




ಆ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಜಾನು ನಾಯ್ಕನಿಗೇ ಯಂ


ಈ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಮೈಂದ ಸೀತರಿಗನಿಗೆ


ಒಂದು ತೊಟ್ಟಿಲು ಎರಡು ಶಿಶುಗಳು


ಮಲಗಿಸಬೇಕಾದರೆ ಯಂ


ಸಾಲಿಯ ಬನ್ನಾಲಾಯಂ ಕಂರ್ಪೇರನ್ನಾಲಾ




ಆ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಜಾನು ನಾಯ್ಕನಿಗೇ ಯಂ


ಈ ಕಡೆ ಗುಡ್ಡೆಯ ಸಪ್ಪಿನ ಕಟ್ಟ © ಡಾ.ಲಕ್ಷ್ಮೀ ಜಿ ಪ್ರಸಾದ್


ಮೈಂದ ಸೀತರಿಗನಿಗೆ


ಒಂದು ಪಾತ್ರೆಗೆ ಎರಡು ಸೌಟುಗಳು


ಹಾಕಬೇಕಾದರೆ ಯಂ


ಸಾಲಿಯ ಬನ್ನಾಲಾ ಯಂ ಕಂರ್ಬೆರನ್ನಲಾ




ಆ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಜಾನು ನಾಯ್ಕನಿಗೇ ಯಂ


ಈ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಮೈಂದ ಸೀತರಿಗನಿಗೆ


ಮೂಗುತ್ತಿಯಲ್ಲಿ ಕುಟುಕಲು


ಕಂಕಣದಲ್ಲಿ ಕುಟುಕಲು


ಸಾಲಿಯ ಬನ್ನಾಲಾ ಯಂ ಕಂರ್ಬೆರನ್ನಲಾ




ಆ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಜಾನು ನಾಯ್ಕನಿಗೇ ಯಂ


ಈ ಕಡೆ ಗುಡ್ಡೆಯ ಸಪ್ಪಿನ ಕಟ್ಟ


ಮೈಂದ ಸೀತರಿಗನಿಗೆ




ದೂರುಗೀರು ಹೋಗಿದೆಯಲ್ಲಿ


ಕಕ್ಕೆ ದೀಪಕ್ಕೆ


ಮೈಂದ ಸೀತರಿಗನಿಗೆ


ಸಾಲಿಯ ಬನ್ನಾಲಾ ಯಂ ಕಂರ್ಬೆರನ್ನಲಾ


*****


 19.ಜತ್ತಾನಂಗಡಿ ದೇಲಾಗೊಡು




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಮೆಣಸಿನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಬೆಲ್ಲದಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಸಕ್ಕರೆಯಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಉಪ್ಪಿನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಹುಳಿಯ ಅಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ತೆಂಗಿನಂಗಡಿ ದೇಲಗದಲ್ಲಿ © ಡಾ.ಲಕ್ಷ್ಮೀ ಜಿ‌ ಪ್ರಸಾದ್ 


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ನೀರುಳ್ಳಿಯಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ


ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಬೆಳ್ಳಳ್ಳಿಯಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಕೊತ್ತಂಬರಿ ಅಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜೀರಿಗೆ ಅಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಮೆಂತ್ಯದಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಸಾಸಿವೆಯಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಕಡ್ಲೆಯಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ




ಜತ್ತಾನಂಗಡಿ ದೇಲಗದಲ್ಲಿ


ಮುಂದೆ ಉಳಿಯಿತಣ್ಣನವರೇ ಹಿಂದೆ ಉಳಿಯಿತೇ


*****


ದೇಲಗ=ದೇವಾಲಯ














20. ಸಾg Àಬೀಬಿ ಸೀಮೆ ನೋಡಿ






ಸಾರ ಬೀಬಿ ಸೀಮೆ ನೋಡಿ

© ಡಾ.ಲಕ್ಷ್ಮೀ ಜಿ ಪ್ರಸಾದ್



ಸಾರ ಬೀಬಿ ಸೀಮೆ ನೋಡಿ


ತಲೆಯನ್ನು ಬಾಚಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಸೀರೆ ಉಟ್ಟು ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಆಲಿಕತ್ತು ಹಾಕಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಕುಪ್ಪಸ ಹಾಕಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ರುಮಾರು ಕಟ್ಟಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಪಟ್ಲಾಸ್ ಕಟ್ಟಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಸೊಂಟ ಪಟ್ಟಿ ಹಾಕಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಕೈಗೆ ಬಳೆ ಇಟ್ಟು ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಕಾಲಿಗೆ ಜೈನು ಹಾಕಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಕುತ್ತಿಗೆಗೆ ಕಿಲೆಪಂಜಿ  ಹಾಕಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಮುಂದಲೆ ಇಟ್ಟು ಹಾಕಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಬುರ್ಖಾ ಹಾಕಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಜೋಡು ಹಾಕಿ ತಿರುಗಿ ನೋಡಿ




ಸಾರ ಬೀಬಿ ಸೀಮೆ ನೋಡಿ


ಸಾರ ಬೀಬಿ ಸೀಮೆ ನೋಡಿ


*****








೨೧. ಸಣ್ಣಲ್ಲ ಕಾಡುಡು ಬಣ್ಣಲ್ಲ ಬಲಿಕೆಡು


ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ


ನೀನು ಹೇಗೆ ಇಳಿದೆ ಜತ್ತೇಲಿಂಗ




ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ


ನೀನು ಹೇಗೆ ಇಳಿದೆ ಜತ್ತೇಲಿಂಗ


ಕಣ್ಣಿನೊಂದು ನಲವಿಗೆ ನಿನ್ನೊಂದು ಒಲವಿಗೆ


ನಿನ್ನನ್ನು ನೆನೆದುಕೊಂಡು ನಾನು ಹೀಗೆ 


ಇಳಿದೆ ಸ್ವಾಲಚ್ಚಿಮಿಯೇ




ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ


ನೀನು ಹೇಗೆ ಇಳಿದೆ ಜತ್ತೇಲಿಂಗ


ವೀಳ್ಯದೆಲೆ ತಿಂದೆ ಬಳ್ಳಿಗೆ ಉಗಿದೆ


ಆಯುಷ್ಯವನ್ನೇ ಲೆಕ್ಕಿಸಲಿಲ್ಲ ಸ್ವಾಲಚ್ಚಿಮಿಯೆ




ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ


ನೀನು ಹೇಗೆ ಇಳಿದೆ ಜತ್ತೇಲಿಂಗ


ಮರುಳಿರುವ ಮಕ್ಕಳು ತಿನ್ನುವ


ಉಗಿಯುವುದನ್ನು ಲೆಕ್ಕಿಸಲಿಲ್ಲ ಜತ್ತೇಲಿಂಗ




ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ


ನೀನು ಹೇಗೆ ಇಳಿದೆ ಜತ್ತೇಲಿಂಗ


ಮನಸ್ಸಿನ ಒಲುಮೆಗೆ ಕೈಯೊಂದು ತುಡಿತಕ್ಕೆ


ನಿನ್ನನ್ನೊಂದು ನೋಡಲೆಂದು ನಾನ್ಹೀಗೆ


ಇಳಿದೆ ಸ್ವಾಲಚ್ಚಿಮಿಯೆ




ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ


ನೀನು ಹೇಗೆ ಇಳಿದೆ ಜತ್ತೇಲಿಂಗ


ಹಣ್ಣನ್ನು ತಿಂದು ಸಿಪ್ಪೆಯನ್ನು ಬಿಸಾಡಿದೆ


ಆಯಸ್ಸನ್ನು ಲೆಕ್ಕಿಸಲಿಲ್ಲ ಸ್ವಾಲಚ್ಚಿಮಿಯೇ




ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ


ನೀನು ಹೇಗೆ ಇಳಿದೆ ಜತ್ತೇಲಿಂಗ


ತನ್ನೊಂದು ಒಲವಿಗೆ ನಿನ್ನೊಂದು ನಲವಿಗೆ


ನಿನ್ನನ್ನು ನೆನೆದುಕೊಂಡು ನಾನ್ಹೀಗೆ


ಇಳಿದೆ ಸ್ವಾಲಚ್ಚಿಮಿಯೆ




ಸಣ್ಣದಲ್ಲದ ಕಾಡಿನಲ್ಲಿ ದಟ್ಟವಾದ ಬಲ್ಲೆಯಲ್ಲಿ© ಡಾ.ಲಕ್ಷ್ಮೀ ಜಿ ಪ್ರಸಾದ್


ನೀನ್ಹೇಗೆ ಇಳಿದೆ ಜತ್ತೇಲಿಂಗ


*****




 22. ವೇಣೂರು ಪದವುಡೇ ಓ ಚಂದಕ್ಕ


Éವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ತಲೆಯನ್ನು ನೋಡಿರಬೇಕು ಓ ಚಂದಕ್ಕ


ಎಣ್ಣೆದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಜಡೆಯನ್ನೇನಾದರೂ ನೋಡಿರಬೇಕು ಓ ಚಂದಕ್ಕ


ಹೂವಿನ ದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಮೂಗನ್ನು ನೋಡಿರಬೇಕು ಓ ಚಂದಕ್ಕ


ಮೂಗುತ್ತಿ ದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಕಿವಿಯನ್ನು ನೋಡಿರಬೇಕು ಓ ಚಂದಕ್ಕ


ಬೆಂಡೋಲೆ ದಾನ ನೀಡಿದ್ದಾರೆ © ಡಾ.ಲಕ್ಷ್ಮೀ ಜಿ ಪ್ರಸಾದ್




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಮುಖವನ್ನು ನೋಡಿರಬೇಕು ಓ ಚಂದಕ್ಕ


ಮುಂದಾಲೆ ದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಕೊರಳನ್ನು ನೋಡಿರಬೇಕು ಓ ಚಂದಕ್ಕ


ಕಿಲೆ ಪಂಜಿ ದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಕೈಯನ್ನು ನೋಡಿರಬೇಕು ಓ ಚಂದಕ್ಕ


ಬಳೆದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಬೆರಳು ನೋಡಿರಬೇಕು ಓ ಚಂದಕ್ಕ


ಉಂಗುರ ದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಕಾಲನ್ನು ನೋಡಿರಬೇಕು ಓ ಚಂದಕ್ಕ


ಕಾಲಗೆಜ್ಜೆ ದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ಸೀರೆಯನ್ನ ನೋಡಿರಬೇಕು ಓ ಚಂದಕ್ಕ


ವಸ್ತ್ರದಾನ ನೀಡಿದ್ದಾರೆ




ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


ವೇಣೂರ  ಪದವಿನಲ್ಲಿ ಓ ಚಂದಕ್ಕ


ಅಜಿಲರು ಇದ್ದಾರೇನೋ


*****






23. ಆಮಯೇಲೆ ಏಲೆ ಬರಡು


.


ಆಮಯೇಲೆ ಏಲೆ ಬರಲಿ


ಆಮಯೇಲೆ ಏಲೆ ಬರಲಿ


ಆಮಯೇಲೆ ಏಳು ಕಡಲು


ಆಮಯೇಲೆ ಏಲೆ ಬರಲಿ


ಆಮಯೇಲೆ ನೀರಿನ ಕಡಲು


ಆಮಯೇಲೆ ಏಲೆ ಬರಲಿ


ಆಮಯೇಲೆ ಹಾಲಿನ ಕಡಲು


ಆಮಯೇಲೆ ಏಲೆ ಬರಲಿ


ಆಮಯೇಲೆ ಬೆಳ್ಳಿ ಕಡಲು


ಆಮಯೇಲೆ ಏಲೆ ಬರಲಿ


ಆಮಯೇಲೆ ಚಿನ್ನದ ಕಡಲು


ಆಮಯೇಲೆ ಏಲೆ ಬರಲಿ


ಆಮಯೇಲೆ ಉಪ್ಪು ಕಡಲು


ಆಮಯೇಲೆ ಏಲೆ ಬರಲಿ © ಡಾ‌ ಲಕ್ಷ್ಮೀ ಜಿ‌ ಪ್ರಸಾದ್


ಆಮಯೇಲೆ ಮುತ್ತಿನ ಕಡಲು


ಆಮಯೇಲೆ ಏಲೆ ಬರಲಿ


ಆಮಯೇಲೆ ಹಾವಸೆಯ ಕಡಲು


ಆಮಯೇಲೆ ಏಲೆ ಬರಲಿ


ಆಮಯೇಲೆ ಕಡಲಿನ ನಡುವಿನಲ್ಲಿ


ಆಮಯೇಲೆ ಏಲೆ ಬರಲಿ


ಆಮಯೇಲೆ ಏಳು ಜನ ಸಿರಿಗಳು


ಆಮಯೇಲೆ ಏಲೆ ಬರಲಿ


ಆಮಯೇಲೆ ಉದಿಪನ ಆದೆರು


ಆಮಯೇಲೆ ಏಲೆ ಬರಲಿ


ಆಮಯೇಲೆ ನಮಗಾದರೂ ಇಳಿಯಬೇಕು


ಆಮಯೇಲೆ ಏಲೆ ಬರಲಿ


ಆಮಯೇಲೆ ತುಳುನಾಡು ನೋಡಬೇಕು


ಆಮಯೇಲೆ ಏಲೆ ಬರಲಿ


ಆಮಯೇಲೆ ತುಳುಭಾಷೆ ಕಲಿಯಬೇಕು


ಆಮಯೇಲೆ ಏಲೆ ಬರಲಿ


ಆಮಯೇಲೆ ತುಳುಭಾಷೆ ಕಲಿಯಬೇಕು


ಆಮಯೇಲೆ ಏಲೆ ಬರಲಿ


ಆಮಯೇಲೆ ತುಳುನಾಡಿನಲ್ಲಿ ಮರೆಯಬೇಕು


ಆಮಯೇಲೆ ಏಲೆ ಬರಲಿ


ಆಮಯೇಲೆ ತುಳುನಾಡಿನಲ್ಲಿ ನೆಲೆಯಾಗಬೇಕು


ಆಮಯೇಲೆ ಏಲೆ ಬರಲಿ


ಆಮಯೇಲೆ ಸಸಿಹಿತ್ತಿಲಿನಲ್ಲಿ ಬರುವರು


ಆಮಯೇಲೆ ಏಲೆ ಬರಲಿ


ಆಮಯೇಲೆ ಭಗವತಿ ಆದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಸಸಿಹಿತ್ತಿನಲ್ಲಿ ನೆಲೆಯಾದರೂ


ಆಮಯೇಲೆ ಏಲೆ ಬರಲಿ


ಆಮಯೇಲೆ ಕಟೀಲಿಗೆ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಭ್ರಮರಾಂಬೆ ಆದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಕಟೀಲಿನಲ್ಲಿ ನೆಲೆಯಾದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಮುಂಡ್ಕೂರಿಗೆ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಅನ್ನಪೂರ್ಣೇ ಆದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಕುಂಜಾರಿಗೆÉ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಕಾತ್ಯಾಯಿನಿ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಪೆÇಳಲಿಗೆ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ರಾಜರಾಜೇಶ್ವರಿ ಆದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಚಿತ್ರಾಪುರಕೆ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಜಲದುರ್ಗಾ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ಮೂಲಿಕಾಪುರಕೆ ಬಂದರು


ಆಮಯೇಲೆ ಏಲೆ ಬರಲಿ


ಆಮಯೇಲೆ ದುರ್ಗೆ ಆದರು


ಆಮಯೇಲೆ ಏಲೆ ಬರಲಿ


ಆಮಯೇಲೆ ತುಳುನಾಡಿನಲ್ಲಿ ನೆಲೆಯಾದರು


  ಆಮಯೇಲೆ ಏಲೆ ಬರಲಿ






 24.ಸಣ್ಣ ತರೆತ್ತಾಳು ಲಿಂಬೆ ಮಿರೆತ್ತಾಳು

© ಡಾ.ಲಕ್ಷ್ಮೀ ಜಿ ಪ್ರಸಾದ್

ಚಿಕ್ಕ ತಲೆಯವಳು ಲಿಂಬೆಯಂಥ ಮೊಲೆಯವಳು


ಸೊಣಂತೂರಿನಲ್ಲಿದ್ದ ರೊಕ್ಕಿ ರಂಬೆಯಂತೆ ಅಲ್ಲವಳು


ಉದರೋ ಉದುರು ಗಂಗಮ್ಮ


ಗೌರಮ್ಮ ಹೇಳುವಂಥ ಹೆಣ್ಣಲ್ಲವೇ ಅವಳು


ಚಿಕ್ಕ ತಲೆಯವಳು ಲಿಂಬೆಯಂಥ ಮೊಲೆಯವಳು


ಸೊಣಂತೂರಿನಲ್ಲಿದ್ದ ರೊಕ್ಕಿ ರಂಬೆಯಂಥವಳು


ಅರಮನೆಯ ಮಕ್ಕಳು ಇಣುಕಿ ನೋಡುವಾಗ


ಅಳುಕಿ ಬೀಳುವ ಹೆಣ್ಣಲ್ಲವೇ ಅವಳು


ಚಿಕ್ಕ ತಲೆಯವಳು ಲಿಂಬೆಯಂಥ ಮೊಲೆಯವಳು


ಸೊಣಂತೂರಿನಲ್ಲಿದ್ದ ರೊಕ್ಕಿ ರಂಬೆಯಂತೆ ಅಲ್ಲವಳು 


ಕೊರಪೂಳಿನಂಥ ಹೆಣ್ಣಿಗೆ ಸರಪೆÇಳಿ ಗೆಜ್ಜೆ


ಇಟ್ಟುಕೊಂಡು ಇರುವ ಹೆಣ್ಣಲ್ಲವೇ ಅವಳು


ಚಿಕ್ಕ ತಲೆಯವಳು ಲಿಂಬೆಯಂಥ ಮೊಲೆಯವಳು


ಸೊಣಂತೂರಿನಲ್ಲಿದ್ದ ರೊಕ್ಕಿ ರಂಬೆಯಂತೆ ಅಲ್ಲವಳು 


ಅವಳು ನಿತ್ಯ ಹೋಗುತ್ತರುವ


ಅರಸನ ಮನೆಯಲ್ಲಿ ಮಕ್ಕಳಿಗೆ


ಕೆಲಸದ ಮಕ್ಕಳು ಇಣುಕಿ


ನೋಡುವಾಗ ಅಳುಕಿ ಬೀಳುವ ಹೆಣ್ಣಲ್ಲವೇ ಅವಳು


ಚಿಕ್ಕ ತಲೆಯವಳು ಲಿಂಬೆಯಂಥ ಮೊಲೆಯವಳು


ಸೊಣಂತೂರಿನಲ್ಲಿದ್ದ ರೊಕ್ಕಿ ರಂಬೆಯಂತೆ ಅಲ್ಲವಳು


 ಉದರೋ ಉದರು ಗಂಗಮ್ಮ


ಗೌರಮ್ಮ ಹÉೀಳುವಂಥ ಹೆಣ್ಣಲ್ಲವೇ ಅವಳು

© ಡಾ.ಲಕ್ಷ್ಮೀ ಜಿ ಪ್ರಸಾದ್











               ಟಿಪ್ಪಣಿಗಳು




3. ಮಧುರಗೆ ಮದುಮಗಳು


ಟಿಪ್ಪಣಿ :


1. ನೂಲ ಮದುವೆ - ಸಾಮಾನ್ಯವಾಗಿ ಬ್ರಾಹ್ಮಣರಲ್ಲಿ ಪ್ರಚಲಿತವಿರುವ ಉಪನಯನ ಸಂಸ್ಕಾರ.


2. ಬೈದ್ಯ - ತಾಳೆ ಹಾಗೂ ತೆಂಗಿನಿಂದ ಮೂರ್ತೆ ಮಾಡುವ (ಕಳ್ಳು ತಯಾರಿಸುವ) ವೃತ್ತಿಯುಳ್ಳ ಬಿಲ್ಲವರನ್ನು ಬೈದ್ಯರೆಂದು ಕರೆಯುತ್ತಾರೆ. ಬೈದ್ಯರು ಗಿಡಮೂಲಿಕೆಗಳ ಔಷಧವನ್ನು ಕೊಡುತ್ತಿದ್ದ ಬಗ್ಗೆ ಕೋಟಿ ಚೆನ್ನಯ ಪಾಡ್ದನದಲ್ಲಿ ಉಲ್ಲೇಖವಿದೆ.


3. ಕಾಡಿಗೆ ಬಂದ ಕರುಣಾಳು ಬೈದ್ಯನೋರ್ವ ಮಧುರಗೆಗೆ ಸಹಾಯ ಮಾಡಿದ್ದು ಮುಂದೆ ದೈವದ ಮಹಿಮೆಯನ್ನು ಸಾರುವ ಕಥಾನಕ ಸೇರಿರುವ ಸಾಧ್ಯತೆ ಇದೆ.


4. ಜಾಯಿಲ ಬಂಗೇತಿ


ಟಿಪ್ಪಣಿ :


1. ನನ ಬೇಗ ಎಂಬುದಕ್ಕೆ ನನ = ಇನ್ನು + ಬೇಗ ಎಂಬ ಅರ್ಥವಿದೆಯಾದರೂ ಪಾಡ್ದನಗಳಲ್ಲಿ ಈ ಶಬ್ದಕ್ಕೆ ನಿರ್ದಿಷ್ಟಾದ ಅರ್ಥವಿಲ್ಲ ಎಂದು ಡಾ|| ಅಮೃತ ಸೋಮೇಶ್ವರರು ಅಭಿಪ್ರಾಯಪಟ್ಟಿದ್ದಾರೆ.


2. ತುಳುನಾಡ ಹೆಣ್ಣು ಮಕ್ಕಳ ಕಾರ್ಯ ವೈಖರಿಯನ್ನು ಇಲ್ಲಿ ಗಮನಿಸಬಹುದು.


3. ದುಃಖವನ್ನು ಅಭಿವ್ಯಕ್ತಿಸುವ ಶಬ್ದಗಳು.






5. ಕರಿಯ ಕನ್ಯಾ ಮದನು




ಟಿಪ್ಪಣಿ :


1. ಕಬೇರರು : ಕಬ್ಬೀರರು, ಮೀನು ಹಿಡಿಯುವವರಲ್ಲಿ ಒಂದು ವರ್ಗ.


2. ಮುಂಡಿ : ಗೆಡ್ಡೆ-ಗೆಣಸು ಜಾರಿಗೆ ಸೇರಿದ, ಅಗಲವಾದ ಎಲೆಯುಳ್ಳ ಒಂದು ಸಸ್ಯ.


3. ತೆಕ್ಕಿಯ ಎಲೆ : ಸಾಗುವಾನಿ ಮರದ ಎಲೆ.


4. ಮುಂಡೇವು : ಒಂದು ಜಾತಿಯ ಪೊದರು ಹುಲ್ಲು. ಚಾಪೆ ಹೆಣೆಯಲು ಉಪಯೋಗಿಸುತ್ತಾರೆ.


5. ಮರಕ್ಕಾಲರು : ಬೆಸ್ತರು, ಮೀನು ಹಿಡಿಯುವ ಒಂದು ಜನಾಂಗ.




6. ನಾಗಸಿರಿ ಕನ್ಯಗೆ


ಟಿಪ್ಪಣಿ :


1. ಡ್ರೆಸ್ಸು-ಬಟ್ಟೆ : ಪಾಡ್ದನಗಳಲ್ಲಿ ಇತರ ಭಾಷೆಯ ಬಳಕೆಯ ಪಾಡ್ದನಗಾರರ ಮೇಲೆ ಆಧುನಿಕತೆಯ ಪ್ರಭಾವದಿಂದ ಉಂಟಾಗಿದೆ.


2. ಇಂಥಹ ಹೀನ ಕೃತ್ಯವನ್ನು ಮಾಡುವವನು ಶ್ರೀಕೃಷ್ಣ ದೇವರು ಹೌದೋ ಅಲ್ಲವೋ ಎಂಬ ಸಂಶಯ ಈ ಮಾತಿನಲ್ಲಿ ಇಣುಕಿದೆ.


3. ಕುಟ್ಟಿದೊಣ್ಣೆ : ಚಿನ್ನಿದಾಂಡು ಆಟ.


4. ಬಾಕಿಲ್ + ತಿಮಾರು (ಬಾಗಿಲು + ಗದ್ದೆ) : ಅರಮನೆ ಎದುರಿನಲ್ಲಿರುವ ಗದ್ದೆ.


5. ಉಲೊ ಉಲೋ : ದುಃಖವನ್ನು ಅಭಿವ್ಯಕ್ತಿಸುವ ಪದ.


6. ಏಳು, ನೂರ ಒಂದು, ಸಾವಿರದೊಂದು ಮೊದಲಾದ ಸಂಖ್ಯೆಗಳ ಬಳಕೆ ತುಳು ಪಾಡ್ದನಗಳಲ್ಲಿ ಹೆಚ್ಚಾಗಿ ಕಂಡುಬರುವ ಆಶಯಗಳಾಗಿವೆ.






7 . ಅಬ್ಬಿನ ಬಂಗಾರು




ಟಿಪ್ಪಣಿ :


1. ಹುಡುಕ್ಕೊನುದು ನಾಡೊನುದು : ಹುಡುಕಿಕೊಂಡು - ಕನ್ನಡ - ತುಳು ದ್ವಿರುಕ್ತಿ.


2. ಆಧುನಿಕತೆಯ ಪ್ರಭಾವದಿಂದ ರೂಮು, ಡ್ರೆಸ್ಸು, ಸಾಬೂನು ಮೊದಲಾದ ಅನ್ಯದೇಶ್ಯ ಪದಗಳು ಪಾಡ್ದನಗಳಲ್ಲಿ ಬಳಕೆಯಾಗುತ್ತವೆ.


3. ಮದುವೆಯ ಸಂಬಂಧ ಕಟ್ಟುವುದನ್ನು ಪಾಪು (ಸೇತುವೆ) ಹಾಕುವುದು ಎನ್ನುತ್ತಾರೆ.






8. ಬಾಲೆ ರಂಗಮೆ


 © ಡಾ.ಲಕ್ಷ್ಮೀ ಜಿ ಪ್ರಸಾದ್


ಟಿಪ್ಪಣಿ :


1. ಕೋಳ್ಯೂರಿನಲ್ಲಿ ಶಂರನಾರಾಯಣ ದೇವಾಲಯವಿದೆ. ಕೊಲ್ಲೂರು ಮತ್ತು ಕೋಳ್ಯೂರು ಶಬ್ದಗಳ ಸಾಮ್ಯತೆಯಿಂದಾಗಿ ಮೂಕಾಂಬಿದೇವಿಯ ಪ್ರಸ್ತಾಪ ಬಂದಿದೆ.


2. ಕನ್ನಡ - ತುಳು ದ್ವಿರುಕ್ತಿ. 


3    ಕನ್ನಡ - ತುಳು ದ್ವಿರುಕ್ತಿ


4. ಇಂಥಹ ಪುನರುಕ್ತಿಗಳು ಪಾಡ್ದನಗಳಲ್ಲಿ ಸಹಜವಾಗಿ ಇರುತ್ತವೆ.


5. ಪಾಡ್ದನಗಾರ್ತಿ ಬಳಕೆಯಲ್ಲಿರುವ ಆಂಗ್ಲಪದವನ್ನು ಬಳಸಿದ್ದಾರೆ.


 


9. ಬಾಲೆ ಪದ್ಮಕ್ಕೆ

© ಡಾ.ಲಕ್ಷ್ಮೀ ಜಿ ಪ್ರಸಾದ್

 ಟಿಪ್ಪಣಿ :


1. ಪತಿವ್ರತಾ ಧರ್ಮವನ್ನು ಪಾಲಿಸಿದ ಮುತ್ತೈದೆ ಸತ್ತರೆ, ಅವಳ ಗಂಡನಲ್ಲದೆ ಬೇರೆಯವರು ಕಾಷ್ಠಕ್ಕೆ ಬೆಂಕಿ ಇಟ್ಟರೆ ಅವಳ ತಲೆಕೂದಲಿನ ಕಟ್ಟು (ಮುಡಿ) ಮತ್ತು ಎದೆಕಟ್ಟು (ಮೊಲೆ) ಉರಿಯುವುದಿಲ್ಲ ಎಂಬ ನಂಬಿಕೆಯನ್ನು ಇಲ್ಲಿ ಕಾಣಬಹುದು.


2. ದಂಡು : ಯುದ್ಧ.


3. ದಂಡಿಗೆ : ಪಲ್ಲಕ್ಕಿ.


 














                    ಆಕರ ಗ್ರಂಥ ಸೂಚಿ










ಲೇಖಕರ/ಸಂಗ್ರಾಹಕರ ಹೆಸರು ಪುಸ್ತಕದ ಹೆಸರು, ಪ್ರಕಾಶನ


1 ಅಭಯ್ ಕುಮಾರ್ ಕೆ., 1997 . ಮುಗೇರರು - ಜನಾಂಗ ಜಾನಪದ


ಅಧ್ಯಯನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು


ಹಂಪಿ, ವಿದ್ಯಾರಣ್ಯ


2 ಅಮೃತ ಸೋಮೇಶ್ವರ, 1997 . ತುಳು ಪಾಡ್ದನ ಸಂಪುಟ


ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ


ಹಂಪಿ, ವಿದ್ಯಾರಣ್ಯ


3 ಉಪಾಧ್ಯಾಯ ಯು. ಪಿ. . ತುಳು ನಿಘಂಟು


ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ


ಎಂ.ಜಿ.ಎಂ. ಕಾಲೇಜು, ಉಡುಪಿ


4 ಕೆ. ಕಮಲಾಕ್ಷ (ಸಂ) . ಎಣ್ಮೂರುಗುತ್ತುದ ಬಾಲೆ ದೈಯಕ್ಕು


ಪಾಡ್ದನ, ಅರ್ದಲ,


ತುಳುವೆರೆ ಆಯನೊ ಕೂಟ, 


 5 ಚಿನ್ನಪ್ಪಗೌಡ, 1990   ಭೂತಾರಾಧನೆ - ಜಾನಪದೀಯ


ಅಧ್ಯಯನ (ಪಿಎಚ್.ಡಿ. ಸಪ್ರಬಂಧ) 


ಮದಿಪು ಪ್ರಕಾಶನ, ಮಂಗಳಗಂಗೋತ್ರಿ,


ಕೊಣಾಜೆ, ಮಂಗಳೂರು


6 ಜಿ. ಶಂ. ಪರಮಶಿವಯ್ಯ . ಜನಪದ ಖಂಡ ಕಾವ್ಯಗಳು


7ನಾವಡ ಎ.ವಿ., 1993 . ಜಾನಪದ ಸಮಾಲೋಚನೆ


ಪ್ರಾದೇಶಿಕ ಜಾನಪದ ಕಲೆಗಳ 


ಅಧ್ಯಯನ ಕೇಂದ್ರ, ಉಡುಪಿ.


8ನಾವಡ ಎ.ವಿ., 1984 ವಿವಕ್ಷೆ 


ಕರ್ನಾಟಕ ಸಂಘ, ಪುತ್ತೂರು.


9ಬಾಬು ಅಮೀನ್ ಬನ್ನಂಜೆ ತುಳುನಾಡ ಗರೋಡಿಗಳ


1990 ಸಾಂಸ್ಕøತಿಕ ಅಧ್ಯಯನ,


ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕøತಿಕ


ಅಧ್ಯಯನ ಪ್ರತಿಷ್ಠಾನ, ಉಡುಪಿ


10 ರಮೇಶ್ ಕೆ.ವಿ., 1969 . ತುಳುನಾಡಿನ ಇತಿಹಾಸ


ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ


ಎಂ.ಜಿ.ಎಂ. ಕಾಲೇಜು, ಉಡುಪಿ


11 ರೂಪಕಲಾ ಆಳ್ವ, 1992 . ನಾಟಿ (ಪಾಡ್ದನ, ಕವಿತೆ, ವಿವೇಚನೆ)


ಸಂದೇಶ ಪ್ರತಿಷ್ಠಾನ, ಬಜ್ಬೋಡಿ,


ಮಂಗಳೂರು


12 ಪೂವಪ್ಪ ಕಣಿಯೂರು, 2009 ಮೌಖಿಕ ಸಂಕಥನ


ತರಂಗಿಣಿ ಪ್ರಕಾಶನ, ಸುಳ್ಯ, ದ.ಕ.


13 ಡಾ|| ಲಕ್ಷ್ಮೀ ಜಿ ಪ್ರಸಾದ 2008 ದೈವಿಕ ಕಂಬಳ ಕೋಣ


ಹರೀಶ್ ಎಂಟರ್‍ಪ್ರೈಸಸ್, ಬೆಂಗಳೂರು


14 ಡಾ|| ಲಕ್ಷ್ಮೀ ಜಿ ಪ್ರಸಾದ 2010 ಪಾಡ್ದನ ಸಂಪುಟ


ಮಾತೃಶ್ರೀ ಪ್ರಕಾಶನ, ಬೆಂಗಳೂರು


15 ಡಾ|| ಲಕ್ಷ್ಮೀ ಜಿ ಪ್ರಸಾದ 2010 ತುಳು ಪಾಡ್ದನಗಳಲ್ಲಿ ಸ್ತ್ರೀ


ಮಾತೃಶ್ರೀ ಪ್ರಕಾಶನ, ಬೆಂಗಳೂರು


16 ಡಾ|| ಲಕ್ಷ್ಮೀ ಜಿ ಪ್ರಸಾದ 2010 . ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು


ಮಾತೃಶ್ರೀ ಪ್ರಕಾಶನ, ಬೆಂಗಳೂರು


17 ಡಾ|| ಲಕ್ಷ್ಮೀ ಜಿ ಪ್ರಸಾದ 2010 ತುಂಡು ಭೂತಗಳು-ಒಂದು ಅಧ್ಯಯನ


ಮಾತೃಶ್ರೀ ಪ್ರಕಾಶನ, ಬೆಂಗಳೂರು


19 ಡಾ|| ಲಕ್ಷ್ಮೀ ಜಿ ಪ್ರಸಾದ 2011 . ಚಂದಬಾರಿ ರಾಧೆಗೋಪಾಲ ಮತ್ತು ಇತರ ಅಪೂರ್ವ ಪಾಡ್ದನಗಳು


ಮಾತೃಶ್ರೀ ಪ್ರಕಾಶನ, ಬೆಂಗಳೂರು


19 ಡಾ|| ಲಕ್ಷ್ಮೀ ಜಿ ಪ್ರಸಾದ 2011 . ಕಂಬಳ ಕೋರಿ ನೇಮ


ಮಾತೃಶ್ರೀ ಪ್ರಕಾಶನ, ಬೆಂಗಳೂರು


20 ಡಾ|| ಲಕ್ಷ್ಮೀ ಜಿ ಪ್ರಸಾದ 2011 . ತುಳುಜನಪದ ಕವಿತೆಗಳು


ಮಾತೃಶ್ರೀ ಪ್ರಕಾಶನ, ಬೆಂಗಳೂರು


21 ಡಾ|| ಲಕ್ಷ್ಮೀ ಜಿ ಪ್ರಸಾದ 2012 ಬೆಳಕಿನೆಡೆಗೆ... 


ಸಂಶೋಧನಾ ಲೇಖನಗಳು


ಮಾತೃಶ್ರೀ ಪ್ರಕಾಶನ, ಬೆಂಗಳೂರು


22 ಲೀಲಾಭಟ್, 1987 . ಭೂತನಾಗರ ನಡುವೆ (ಅಧ್ಯಯನ


ಪ್ರವಾಸ) ಪ್ರಕೃತಿ ಪ್ರಕಾಶನ


ಕೋಟೆಕಾರು


23 ವಾದಿರಾಜ ಭಟ್ ಕನರಾಡಿ, ಪಾಡ್ದನಗಳು (ಅಧ್ಯಯನಾತ್ಮಕ


1974 ಸಂಗ್ರಹ) 


ಯುಗಪುರುಷ ಪ್ರಕಟಣಾಲಯ


ಕಿನ್ನಿಗೋಳಿ, ದ.ಕ.


24 ವಿವೇಕ ರೈ, ಬಿ.ಎ., 1985 ತುಳು ಜನಪದ ಸಾಹಿತ್ಯ


ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು


25 ವೆಂಕಟರಾಜ ಪುಣಿಚಿತ್ತಾಯ, 1998  . ತುಳು ನಡೆ-ನುಡಿ


26 ಶೀನಪ್ಪ ಹೆಗ್ಗಡೆ ಎನ್.ಎಸ್. ಕಿಲ್ಲೆ ಪ್ರಾಚೀನ ತುಳುನಾಡು


1954 ಇಂದಿರಾ ಕಿಲ್ಲೆ, ಮಂಗಳೂರು


27 ಸುಶೀಲಾ ಪಿ.ಉಪಾಧ್ಯಾಯ,   ದಕ್ಷಿಣ ಭಾರತ ಜಾನಪದ 


1998 ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, 


ಎಂ.ಜಿ.ಎಂ. ಕಾಲೇಜು, ಉಡುಪಿ


28 ಸುಶೀಲಾ ಪಿ.ಉಪಾಧ್ಯಾಯ,   ಜನಪದ  ಆರಾಧನೆ ಮತ್ತು ರಂಗಕಲೆ


1998 ಪ್ರಾದೇಶಿಕ ಜಾನಪದ ರಂಗ


ಅಧ್ಯಯನ ಕೇಂದ್ರ, ಉಡುಪಿ


29  ಃuಡಿಟಿeಟಟ ಂ.ಅ. 1894-1897 . ಖಿhe ಆeviಟ Woಡಿshiಠಿ oಜಿ ಣhe ಖಿuಟvಚಿs


Iಟಿಜ. ಂಟಿಣiquಚಿಡಿಥಿ ಗಿo. ಘಿಘಿIII, ಘಿಘಿIಗಿ,  ಘಿಘಿಗಿ,  ಘಿಘಿಗಿI.


30  Uಠಿಚಿಜhಥಿಚಿಥಿಚಿ U.P. 1980.      ಈoಟಞ ಇಠಿiಛಿs oಜಿ ಖಿuಟuಟಿಚಿಜu


ಖegioಟಿಚಿಟ ಖesouಡಿಛಿes ಅeಟಿಣಡಿe ಜಿoಡಿ ಈoಟಞ


Peಡಿಜಿoಡಿmiಟಿg ಂಡಿಣs, ಒ.ಉ.ಒ. ಅoಟಟege, Uಜuಠಿi.


31  Uಠಿಚಿಜhಥಿಚಿಥಿಚಿ U.P., & . ಃhuಣಚಿ Woಡಿshiಠಿ ಂsಠಿeಛಿಣs oಜಿ ಂ 


Susheeಟಚಿ P. Uಠಿಚಿಜhಥಿಚಿಥಿಚಿ, ಖeಣuಚಿಟisಣiಛಿ ಖಿheಚಿಣಡಿe, 


1984 ಖ.ಖ.ಅ. Uಜuಠಿi.


 32 Uಠಿಚಿಜhಥಿಚಿಥಿಚಿ U.P. 19962.     ಅosಣಚಿಟ ಏಚಿಡಿಟಿಚಿಣಚಿಞಚಿ


ಉoviಟಿಜಚಿ Pಚಿi Sಚಿmshoಜhಚಿಟಿಚಿ ಏeಟಿಜಡಿಚಿ, ಒ.ಉ.ಒ. ಅoಟಟege, Uಜuಠಿi.


* * * * * 














ತುಳು ಜನಪದ ಕವಿತೆಗಳು

 ಶ್ರೀಮತಿ ಶಾರದಾ ಜಿ. ಬಂಗೇರರು ಹಾಡಿದ ತುಳು ಜನಪದ  ಕವಿತೆಗಳು 






1.ಪುಕ್ಕೇದಿ


 




ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮೇಲಿನ ಕೇರಿ ಕೋಡಂಗನಿಗೆ ಕೋಡಂಗ


ಲೇಲ ಲೇಲೆ ಲೇಲೇ ಲಾ ಲಾ ಪುಕ್ಕೇದಿಗ


ಕೆಳಗಿನ ಕೇರಿಪುಕ್ಕೇದಿಗೆ ಕೋಡಂಗ


ಬೆಳಗ್ಗಿನ ಜಾವ ಎದ್ದನೇ ಕೋಡಂಗ


ಹಾಕಿ ಗುದ್ದಲಿ ಹಿಡಿದುಕೊಂಡನೇ ಕೋಡಂಗ


ಒಡೆಯನ ಮನೆಗೆ ಹೋದನೇ ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಬೆಳಗ್ಗಿನ ಜಾವದಲ್ಲಿ ಎದ್ದುಕೊಂಡಾಳೇ ಪುಕ್ಕೇದಿ


ಕುಡ್ಪುಕರಗಟೇ (?) ಹಿಡಿದುಕೊಂಡಾಳೇ ಪುಕ್ಕೇದಿ


ಒಡೆಯನ ಮನೆ ಹೋದಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಕೋಡಂಗ


ಮುದ್ದುಕರುಗಳನ್ನು ಸೇರಿಸಿಕೊಂಡಳೇ ಪುಕ್ಕೇದಿ


ಹಟ್ಟಿಯೊಳಗೆ ಹೋದಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮುದ್ದುಕರುಗಳನ್ನು ಸೇರಿಸಿಕೊಂಡಳೇ ಪುಕ್ಕೇದಿ


ಹಟ್ಟಿಯೊಳಗೆ ಹೋದಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಬೆಳಗ್ಗಿನ ಜಾವದಲ್ಲಿ ಎದ್ದುಕೊಂಡಾಳೇ ಪುಕ್ಕೇದಿ


ಮುದ್ದು ಕರುಗಳನ್ನು ಮೇಯಿಸುವಳೇ ಪುಕ್ಕೇದಿ


ಸೆಗಣಿ ಹಿಡಿದುಕೊಂಡಾಳೇ ಪುಕ್ಕೇದಿ


ಅಂಗಳವನ್ನು ಗುಡಿಸಿದಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಸೆಗಣಿಹಾಕಿ ಸಾರಿಸಿಕೊಂಡಾಳೇ ಪುಕ್ಕೇದಿ


ಮೇಲು ಹೊದಿಕೆ ಹಾಕಿಕೊಂಡಾಳೇ ಪುಕ್ಕೇದಿ


ಅಕ್ಕಚ್ಚನ್ನು ಕಲಿಸಿಕೊಂಡಾಳೇ ಪುಕ್ಕೇದಿ


ಮುದ್ದು ಕರುಗಳಿಗೆ ಕೊಟ್ಟುಕೊಂಡಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಸಿರಿ ಗಿಂಡಿ ಹಿಡಿದುಕೊಂಡಾಳೇ ಪುಕ್ಕೇದಿ


ಕಪಿಲೇ ಹಸು ಕಟ್ಟಿದಾಳೇ ಪುಕ್ಕೇದಿ


ಸೊರಸೊರ ಹಾಲು ಹಿಡಿದುಕೊಂಡಾಳೇ ಪುಕ್ಕೇದಿ


ಗಿಂಡಿ ಹಾಲು ಹಿಡಿದುಕೊಂಡಾಳೇ ಪುಕ್ಕೇದಿ


ಒಡೆಯನಲ್ಲಿಗೆ ಹೋದಾಳೇ ಪುಕ್ಕೇದಿ


ಕಾಫಿ ತಿಂಡಿ ಮಾಡಿಕೊಂಡಾಳೇ ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ 


ಒಡೆಯ ಕೂಡ ಬಂದರು ಪುಕ್ಕೇದಿ


ಯಾರೇ ಪುಕ್ಕೇದಿ ಹೇಳಿದರು


ಒಳಗೆ ಹೊರಗೆ ಹೋಗಬೇಕು ಪುಕ್ಕೇದಿ


ಜಾತಿಯಲ್ಲಿ ನಾನು ಕೆಳಗೆ ಆಗಿದ್ದೇನೆ ಬಲ್ಲಾಳರೆ


ನಾನು ಒಳಗೆ ಬರುವುದಿಲ್ಲ ಹೇಳಿದಳು




ಯಾರೇ ಪುಕ್ಕೆದಿಯೇ ಕೇಳಿದೆಯ


ಒಳಗೆ ಹೊರಗೆ ಹೋಗಬೇಕಮ್ಮ 


ಅಡಿಗೆ ಎಲ್ಲ ಮಾಡಿಕೊ ಪುಕೇದಿ




ಒಡೆಯನ ಮನೆ ಹೋಗಿಕೊಂಡಾಳೇ ಪುಕ್ಕೇದಿ


ಶುದ್ಧ ಮುದ್ರಿಕೆ ಮಾಡಿಕೊಂಡಳೇ ಪುಕ್ಕೇದಿ


ಮನೆಗೆ ಹೊರಡುವ ಪುಕ್ಕೇದಿಯೇ ಪುಕ್ಕೇದಿಯನ್ನು




ಯಾರೇ ಇವಳೇ ಪುಕ್ಕೇದಿಯೇ ಪುಕ್ಕೇದಿ


ಇಲ್ಲಿಗೊಮ್ಮೆ ಬಾ ಎಂದು ಹೇಳಿದ ಬಲ್ಲಾಳರು


ಲೇಲ ಲೇಲೆ ಲೇಲೇ ಲಾ ಕೋಡಂಗ


ನನಗೊಬ್ಬ ಕೋಡಂಗ ಇದ್ದಾನೆ ಬಲ್ಲಾಳರೆ


ಹೋಗಬೇಕು ಮನೆಗೆ ನನಗೆ ಎಂದಳು ಪುಕ್ಕೇದಿ


ಒಂದು ಮುಷ್ಠಿ ಮದ್ದು ಕೊಡುವೆನು ಪುಕ್ಕೇದಿ


ದಟ್ಟ ಪುಷ್ಪ ಬೆಳೆದ ಕೆಸುವು ತೆಗೆದುಕೋ ಪುಕ್ಕೇದಿ


ಸಾಂಬಾರು ಮಾಡಿ ಇಟ್ಟುಬಿಡು ಎಂದರು ಬಲ್ಲಾಳರು




ಅಷ್ಟು ಮಾತು ಕೇಳಿದಳು ಪುಕ್ಕೇದಿ


ಅಂಗಳದ ಕೆಳಗೆ ಇಳಿದುಕೊಂಡಳು ಪುಕ್ಕೇದಿ


ಕೆಳಗಿನ ಗದ್ದೆಗೆ ಹೋದಳು ಪುಕ್ಕೇದಿ


ಕೆಸುವು ಕೊಯ್ದುಕೊಂಡಳು ಪುಕ್ಕೇದಿ




ಮನೆಗೆ ಬಂದಳು ಪುಕ್ಕೇದಿ


ಅವಸರವಸರದಿಂದ ಕೊಯ್ದಳು ಪುಕ್ಕೇದಿ


ಹುಳಿಹಾಕಿ ಸಾಂಬಾರು ಮಾಡಿದಳು ಪುಕ್ಕೇದಿ


ಒಂದು ಹಾಕಿ ಮಾಡುವಾಗ ಪುಕ್ಕೇದಿ


ಏನೇನೇ ಪುಕ್ಕೇದಿ ಹೇಳಿದನು


ಲೇಲ ಲೇಲೆ ಲೇಲೇ ಲಾ ಕೋಡಂಗ


ಯಾರಯ್ಯ ಕೋಡಂಗಾನ ಕೋಡಂಗ


ಸಾಂಬಾರೆಲ್ಲ ಮಾಡಿದ್ದೇನೆ ಕೋಡಂಗ


ಒಳಗಿನ ಸುತ್ತಿಗೆ ಹೋಗುವಳು ಪುಕ್ಕೇದಿ


ಒಂದು ಪಾತ್ರೆ ಸಾಂಬಾರು ಹಾಕಿದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಊಟವನ್ನು ಮಾಡುವಿಯಂತೆ ಕೋಡಂಗ


ಕೆಸುವಿನ ಸಾಂಬಾರನ್ನು ಕೊಡುತ್ತಾಳವಳು


ಅವಸರವಸರದಿಂದ ತಿಂದುಕೊಂಡಳು ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಸ್ವಲ್ಪ ಸ್ವಲ್ಪ ಸಂಕಟವಾಗುತ್ತದೆ ಪುಕ್ಕೇದಿ


ಒಂದು ಮುದ್ದೆ ಹುಳಿ ಹಾಕಿದ್ದೇನೆ ಕೋಡಂಗ


ಅಡ್ಡ ನೀಟ ಬಿದ್ದುಕೊಂಡನು ಕೋಡಂಗ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಕೈಬಿಟ್ಟು ಕೈಲಾಸ ಸೇರಿಕೊಂಡನು ಕೋಡಂಗ


ದೇಹಬಿಟ್ಟು ವೈಕುಂಠ ಸೇರಿಕೊಂಡನು ಕೋಡಂಗ


ಲೇಲ ಲೇಲೆ ಲೇಲೇ ಲಾ ಕೋಡಂಗ


ಅರಸನ ಮನೆ ಹೋದಳು ಪುಕ್ಕೇದಿ


ಯಾರಯ್ಯ ಒಡೆಯ ಬಲ್ಲಾಳರೇ


ಒಂದು ಜೀವ ಹೋಗಿದೆ ಬಲ್ಲಾಳರೇ


ಕೈಬಿಟ್ಟು ಕೈಲಾಸ ಸೇರಿಕೊಂಡನು


ದೇಹಬಿಟ್ಟು ವೈಕುಂಠ ಸೇರಿದನು


ನನ್ನ ಕೋಡಂಗ ತಪ್ಪಿ ಹೋದನು ಬಲ್ಲಾಳರೆ




ಹೋದರೆ ಹೋಗಲಿ ಪುಕ್ಕೇದಿಯೇ


ನಾನು ನಿನ್ನನ್ನು ಇಟ್ಟುಕೊಳ್ಳುತ್ತೇನೆ ಎಂದರು ಬಲ್ಲಾಳರು




ಶುದ್ಧ ಮುದ್ರಿಕೆ ಮಾಡಿಕೋ ಪುಕ್ಕೇದಿ


ಚಿನ್ನದೊಡವೆ ಇಟ್ಟುಕೋ ಎಂದರು ಬಲ್ಲಾಳರು




ಆ ಕಡೆಯ ಮಾವಿನ ಮರ ಕಡಿಸಿದರು


ಈ ಕಡೆಯ ಹಲಸಿನ ಮರ ಕಡಿಸಿದರು


ಆಸನದಿಂದ ಕೊಡಿಯಲ್ಲಿ ಕೋಡಂಗನಿಗೆ


ಮಸಣಕ್ಕೆ ಜಾಗ ಮಾಡಿದರು




ಸ್ನಾನ ಮಾಡಿಸಿ ತಂದರು ಕೋಡಂಗನನ್ನು


ಕಾಷ್ಯಕ್ಕೆ ಇಡುವಾಗ ಒಡೆಯರು


ಏನೇ ಪುಕ್ಕೇದಿ ನಿನಗೆ ಯಾರು ಇಲ್ಲ


ಒನ್ನ ಬೇಡ ನಾನು ಇದ್ದೇನೆಂದು ಹೇಳಿದರು ಬಲ್ಲಾಳರು


ಒಳಗೆ ಕರೆದರು ಬಲ್ಲಾಳರು




ಒಳಗೆ ಬರುವುದಿಲ್ಲ ಬಲ್ಲಾಳರೆ


ನಾನು ಕೆಳಗಿನ ಜಾತಿ ಎಂದು ಹೇಳಿದಳು ಪುಕ್ಕೇದಿ


ಜಾತಿಗಾದರು ಜನಿವಾರ ಪುಕ್ಕೇದಿ


ನೀನು ಬಾ ಎಂದರು ಬಲ್ಲಾಳರು




ಕೈಯಲ್ಲಿ ಹಿಡಿದುಕೊಂಡಾಗ ಹೇಳಿದಳು


ಹೀಗೆ ಬರಲಾರೆ ಎಂದಳು ಪುಕ್ಕೇದಿ


ರೇಷ್ಮೆ ಸೀರೆ ಕೊಡಿ ಎಂದಳು ಪುಕ್ಕೇದಿ


ಕೈಗೆ ಬಳೆ ಕೊಡಿ ಎಂದಳು ಪುಕ್ಕೇದಿ


ಹಣೆಗೆ ಬೊಟ್ಟು  ಇಟ್ಟುಕೊಂಡಳು ಪುಕ್ಕೇದಿ




ಇನ್ನೇನುಬೇಕು ಕೇಳಿದ ಬಲ್ಲಾಳ


ನಿಮ್ಮ ಹೆಂಡತಿಯ ತಾಳಿ ಕೂಡಿ ಬಲ್ಲಾಳರೆ


ನಾನು ಹೊಸಿಲು ದಾಟಬೇಕಾದರೆ ಎಂದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ತಾಳಿಯನ್ನು ಕೂಡ ತಂದನು ಬಲ್ಲಾಳ


ಪುಕ್ಕೇದಿ ಕೈಗೆ ಕೊಟ್ಟಾಗ ಹೇಳುವಳು


ಇನ್ನು ಒಂದಾಗಬೇಕಾದರೆ ಬಲ್ಲಾಳ


ಕೈಕೈ ಹಿಡಿದು ಮೂರು ಸುತ್ತು ಕಾಷ್ಠಕ್ಕೆ


ಮೂರು ಬಾರಿ ಸುತ್ತು ಬರುವ ಎಂದು ಹೇಳಿದಳು


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ


ಮೂರು ಸುತ್ತು ಬಲಿ ಬಂದಳು ಪುಕ್ಕೇದಿ


ಕಾಷ್ಯಕ್ಕೆ ಹಾರಿದಳು ಪುಕ್ಕೇದಿ


ಕೈಬಿಟ್ಟು ಕೈಲಾಸ ಸೇರಿದಳು ಪುಕ್ಕೇದಿ


ದೇಹ ಬಿಟ್ಟು ವೈಕುಂಠ ಸೇರಿದಳು ಪುಕ್ಕೇದಿ


ಲೇಲ ಲೇಲೆ ಲೇಲೇ ಲಾ ಪುಕ್ಕೇದಿ




2 ರಾಮಚಂದಿರ ಮರಲ ನಿಮ್ರ್ಯಾರೇ




ರಾಮಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ಬೆಣ್ಣೆ ಮಾರುವ ಗೊಲ್ಲರ ಹುಡುಗಿಯರು


ಓ ಬೆಣ್ಣೆ ಮಾರಿಕೊಂಡು ಹೋಗುವಾಗ


ದಾರಿಯಲ್ಲಿ ಅಡ್ಡಕಟ್ಟಿದರು.


ಅಯ್ಯೊ ಸ್ವಾಮಿ ಬೆಣ್ಣೆಯ ಬುಟ್ಟಿ ಎಳೆದು ಹಾಕಿದರು


ಓ ಗೋಪ್ಯಮ್ಮ ನಿಮ್ಮ ಮಗ ತಂಟೆ ಮಾಡುತ್ತಾನೆ


ಎಂದು ಹೇಳಿದರುಗೊಲ್ಲರ ಹುಡುಗಿಯರು




ರಾಮಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ನೀರಿಗೆಂದು ಹೋಗುವಳುವಳು ಮೋಹಿನಿ ಮಗಳು


ದಾರಿಗೆ ಅಡ್ಡ ನಿಂತು ಕೊಡವನ್ನು ಎಳೆದರು


ಕೊಡವನ್ನೆಳೆದು ಒಡೆದು ಹಾಕಿದರು


ಅಯ್ಯೊ ಸ್ವಾಮಿ ಕೊಡವನ್ನು ಒಡೆದು ಹಾಕಿದರು


ಅಯ್ಯೊ ಸ್ವಾಮಿ ಉಟ್ಟ ಸೀರೆ ಹರಿದು ಹಾಕಿದರು


ಉಟ್ಟ ಸೀರೆ ಹರಿದು ಹಾಕಿದರು


ಅಯ್ಯೊ ಸ್ವಾಮಿ ಹಾಕಿದ ರವಿಕೆ ಬಿಚ್ಚಿ ಹಾಕಿದರು 


ಕೈಯ ಬಳೆ ಒಡೆದು ಹಾಕಿದರು


ಅಯ್ಯೊ ಸ್ವಾಮಿ ಎಂದು ಹೇಳಿದಳು ಮೋಹಿನಿ ಮಗಳು




ಮಣ್ಣಿನ ಕೊಡ ಒಡೆದು ಹೋಯಿತೇನೇ


ಓ ಮೋಹಿನಿ ಮಗಳೇತಾಮ್ರದ ಕೊಡ ತರಿಸಿಕೊಡುವೆನು




ಉಟ್ಟು ಸೀರೆ ಹರಿದುಹೋಯ್ತೇನೇ


ಓ ಮೋಹಿನಿ ಮಗಳೇಹೊಸ ರವಿಕೆ ಹೊಲಿಸಿ ಕೊಡುವೆ




ಕೈಯ ಬಳಿ ಒಡೆದು ಹೋಯ್ತೇನೇ


ಓ ಮೋಹಿನಿ ಮಗಳೇ


ಚಿನ್ನದ ಬಳೆ ಮಾಡಿಸಿ ಕೊಡುವೆನು


ಹೇಳಿದವರು ಅಯ್ಯೊ ಸ್ವಾಮಿನಿಯೇ




ರಾಮ ಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತ್ತಿನೊಂದು ಕೆರೆಯ ನಿರ್ಮಿಸಿದರು


ಬೆಣ್ಣೆ ಮಾರುವ ಗೊಲ್ಲರ ಹುಡುಗಿಯರು


ಬೆಣ್ಣೆ ಮಾರಿ ಬರುವಾಗಲ್ಲಿ


ಯಾರಮ್ಮ ಗೋಪ್ಯಮ್ಮ


ದಾರಿಯಲ್ಲಿ ನಿಂತಿದ್ದಾರೆ ಅಯ್ಯೊ ಸ್ವಾಮಿ


ಬುಟ್ಟಿ ತೆÉಗೆದು ಸೊಂಟ ಹಿಡಿದರು


ಬೆಣ್ಣೆಮಾರುವ ಗೊಲ್ಲರ ಹುಡುಗಿಯರು


ಹಾರಿಕೊಂಡು ಓಡಿಕೊಂಡು ಮನೆಗೆ ಬಂದರು


ಯಾರಮ್ಮಾ ಗೋಪ್ಯಮ್ಮಾ ಯಾರಮ್ಮಾ ಗೋಪ್ಯಮ್ಮಾ


ನಿಮ್ಮ ಮಗ ದಾರಿಯಲ್ಲಿ ನಿಂತು ಬುಟ್ಟ್ಟಿ ಹಿಡಿದರು


ನಾವು ಓಡಿಕೊಂಡು ಬಂದೆವೆಂದು


ಹೇಳಿದರು ಗೊಲ್ಲರ ಹುಡುಗಿಯರು




ನನ್ನ ಕೃಷ್ಣ ಬಾಲಕೃಷ್ಣನು


ತೊಟ್ಟಿಲಿನಲ್ಲಿ ಆಡುತ್ತಿದ್ದಾನೆ ಬಟ್ಟಿಲಿನಲ್ಲಿ ಆಡುತ್ತಿದ್ದಾನೆ


ಚೆಂಡಿನಲ್ಲಿ ಆಡುತ್ತಾನೆ ಬಾಲಕೃಷ್ಣನೆಂದು


ಹೋಗಿ ಎಂದು ಜೋರು ಮಾಡಿದರು




ತೊಟ್ಟಿಲ ಹತ್ತಿರಹೋಗಿ ಇಣುಕಿ ನೋಡುವಾಗ


ನಗಾಡಿಕೊಂಡು ಇದ್ದಾರೆ ಬಾಲಕೃಷ್ಣನು


ರಾಮ ಚಂದಿರ ಮರವ ನಿರ್ಮಿಸಿದರು


ಅಯ್ಯೊ ಸ್ವಾಮಿ ಮುತಿನೊಂದು ಕೆರೆಯ ನಿರ್ಮಿಸಿದರು




3.ಬಂಗರಾಳ್ವಾಗ


ನೀರುಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಳವಳು ಬಂಗರಾಳ್ವಾಗ


ನೀರಿಗೆಂದುಹೋಗುವಾಗ ದಾರಿ ಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿ ದೇರೆ ಮುಂಡೋರಿ


ದಾರಿ ಬಿಡಲು ತಡಮೆ ಸರಿಸಲು


ನನಗೊಂದು ಮಾತುಹೇಳಬೇಕೆಂದನು ದೇರೆ ಮುಂಡೋರಿ


ನೀರು ತೆಗೆದುಕೊಂಡು ಬರುವಾಗ ದಾರಿಗಡ್ಡ


ತಡಮೆಯಲ್ಲಿ ನಿಂತಿದ್ದಾನೆ ಬೇರೆ ಮುಂಡೋರಿ




ದಾರಿ ಬಿಡು ತಡಮೆ ಸರಿಸು


ನಿನಗೊಂದು ಮಾತು ನಾಳೆ ಹೇಳುವೆ ಎಂದು ಅವಳು ಹೇಳಿದಳು


ದಾರಿಬಿಟ್ಟು ತಡಮೆ ಸರಿಸಿ ನಿಂತನು ದೇರೆ ಮುಂಡೋರಿ


ಆ ದಿನ ಹೋಯಿತಪ್ಪ ಬಂಗರಾಳ್ವಾಗನಿಗೆ




ಮರುದಿನ ಬಂದಳವಳು ಬಂಗರಾಳ್ವಾಗ


ನೀರಿಗೆಂದು ಹೋಗುವಾಗ ನಿನ್ನೆ ಹೇಳಿದ


ಮಾತಿಗೆ ಉತ್ತರ ಕೊಡು ಬಂಗರಾಳ್ವಾಗ


ಎಂದು ಹೇಳವನು ದೇರೆ ಮುಂಡೋರಿ




ದಾರಿ ಬಿಡದಿದ್ದರೆ ತಡಮೆ ಸರಿಸದಿದ್ದರೆ


ನಾನು ಈಗ ಬೊಬ್ಬೆ ಹಾಕುವೆ ಎಂದು ಅವಳು ಹೇಳಿದಳು


ಬೊಬ್ಬೆ ಹಾಕಿ ಕರೆಯುವರು ಒಂದು ಮಾಡುವರು




ನಿನ್ನನ್ನು ಬಿಟ್ಟು ಬೇರೆ ನನಗೆ ಸಿಗುವುದಿಲ್ಲ


ಕೈಯಲ್ಲಿ ಹಿಡಿದು ಬಳೆ ಒಡೆಯುತ್ತಾನೆ ದೇರೆ ಮುಂಡೋರಿ


ಹಿಡಿದು ನಾಲ್ಕು ಏಟು ಇಕ್ಕುತ್ತಾರವರು ದೇರ ಮುಂಡೋರಿ




ಹಾದಿ ಬಿಟ್ಟು ತಡಮೆ ಸರಿಸಿದ ದೇರೆ ಮುಂಡೋರಿ


ನೀರು ತೆಗೆದುಕೊಂಡು ಹೋದಳವಳು ಬಂಗರಾಳ್ವಾಗ




ರಾತ್ರಿಯ ಹೊತ್ತಿನಲ್ಲಿ ಸ್ನಾನಕ್ಕೆ ಹೋಗುವಾಗ


ದಾರಿಗಡ್ಡ ತಡಮೆಯಲ್ಲಿ ನಿಂತಿದ್ದಾನೆ ದೇರೆ ಮುಂಡೋರಿ


ದಾರಿಬಿಡು ತಡಮ್ಮೆ ಸರಿಸು ಎಂದಳು




ಹಿಡಿದ ಕೊಡವನ್ನು ಎತ್ತಿ ಒಂದು ಏಟು ಹಾಕುತ್ತಾಳೆ


ಓಡಿಕೊಂಡು ಹೋದನಾತ ದೇರೆ ಮುಂಡೋರಿ




ಅಷ್ಟು ಹೊತ್ತಿಗೆ ಹೇಳುತ್ತಾಳವಳು ಬಂಗರಾಳ್ವಾಗ


ಊರಿಗೆ ಬಂದ ಮಾರಿ ಆ ಕಡೆ ಹೋಯಿತು


ಎಂದು ಹೇಳಿದಳು ಬಂಗರಾಳ್ವಾಗ








4. ರಾದು




ನಾವು ಹೋಗುತ್ತೇವೆ ಅತ್ತೆ ಸೊಸೆ ಬರುವಳು


ಕಪ್ಪುರೂಪದಲ್ಲಿ ಒಳ್ಳೆ ಹೆಣ್ಣು ಬಟ್ಟೆಯ ಗಂಟು ಕೊಡಿರಿ ಅತ್ತೆ


ಕುಟುಂಬದ ಮನೆಗೆ ಹೋಗುವೆ ನಾನು


ಹಾಗೆ ಯಾಕೆ ಹೇಳುತ್ತಿ ಮಗಳು ಆ ರಾದು ಎಂದು ಕೇಳುವಳು ಅತ್ತೆ


ನಿಮ್ಮ ಮೊಮ್ಮಗ ಅಚ್ಯುತನಿಗೆ ಆಡಲೆಂದು


ಎರಡು ಬುಗರಿ ತೆಗೆದುಕೊಂಡು ಬರುವಾಗ ಅತ್ತೆ


ಒಕ್ಕಲು ಇಲ್ಲದ ಮನೆಯಲ್ಲಿ ಅತ್ತೆಯವರೆ


ನಡತೆಗೆಟ್ಟ ಸರಸದಿಂದ ಇದ್ದರು


ವೀಳ ಎಲೆ ಅಡಿಕೆ ತಿನ್ನುತ್ತಿದ್ದರು ಅತ್ತೆಯವರೆ


ನಾನು ಅಲ್ಲಿಗೆ ಹೋದೆ  ಅತ್ತೆ


ನೋಡುವಾಗ ಅತ್ತೆಯವರ ಕೈ ಸುಸ್ತಾಗುವಷ್ಟು ತುಳಿದರು ಅತ್ತೆ


ಅದÀಕ್ಕಾಗಿಯೇ ನಾನು ಹೋಗುವೆ ಹೋಗುವೆ ಅತ್ತೆ


ಎಂದು ಹೇಳಿದಳು ರಾದು


ಹಾಗೆ ಹೋದರÉ ರಾದುಹೋಗಿ ಇಂದು ಹೋದ ರಾದು ಮಗಳೇ


ಇನ್ನು ಯಾವಾಗ ಬರುವಿ ಮಗಳ ಎಂದು ಕೇಳಿದರು ಅತ್ತೆಯವರು


ನಿಮ್ಮ ಮಗ ಸತ್ತಾಗೊಂದು ಸಾವಿಗೆ ಬರದಿದ್ದರೆ ಇರುವ ಬೊಜ್ಜಕ್ಕೆ 


ಬರುವೆ ಎಂದು ಕಣ್ಣನೀರು ಸುರಿಸಿದಳು ಇಳಿದು ಹೋದಳು ರಾದು


*****


 5. ಕಲ್ಜಿಗದ ಕಥೆಪಣ್ಣೆ ನಲಿಪು ತೂಕ ಮಾದಿರ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವಹಾಗೆ ಹೇಳುವೆನು ಕೇಳು ಮಾದಿರ


ಇನ್ನು ನಮ್ಮ ಜೀವನವು ಹೇಗೆ ಸಾಗುತ್ತದೆ ಮಾದಿರ


ಲೇಲೆ ಲೇಲೆ ಲೇಲೇ ಲಾ




ಕಳ್ಳು ಗಂಗಸರ ಸತ್ತುಹೋಯಿತು ಮಾದಿರ


ಇನ್ನು ನಮ್ಮ ಜೀವನವು ಹೇಗೆ ಸಾಗುತ್ತದೆ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಲೇಲೆ ಲೇಲೆ ಲೇಲೇಲಾ




ಕಲಿಯುಗದ ಕಥೆ ಹೇಳುವೆ ಕುಣಿ ನೋಡುವ ಮಾದಿರ


ಇರುವುದನ್ನು ಇರುವ ಹಾಗೆ ಹೇಳುವೆನು ಕೇಳು ಮಾದಿರ


ಕಳ್ಳು ಗಂಗಸರ ಎಲ್ಲಿ ಹೋಯಿತು ಮಾದಿರ 


ಇನ್ನುಮು



9

ಪಾಡ್ದನದ ಕಥೆಗಳು : ಬಾಲೆ ಪದ್ಮಕ್ಕೆ - ಡಾ.ಲಕ್ಷ್ಮೀ ಜಿ ಪ್ರಸಾದ್

 


ಬಾಲೆ ಪದ್ಮಕ್ಕೆ


ಕನರಾಯ ಬೀಡಿನ ಬಂಗೇರರ ಮಡದಿ ಬಾಲೆ ಪದ್ಮಕ್ಕೆ ಚೊಚ್ಚಲ ಬಸುರಿಯಾಗಿದ್ದಾಗ ಬಂಗೇರರಿಗೆ ಕಾಳಗವೊಮದು ಒದಗಿ ಬರುತ್ತದೆ. ಅವನು ದಂಡಿಗೆ ಹೋಗಲು ಹೊರಟು ನಿಂತಾಗ ತಾನು ಕೂಡ ಬರುತ್ತೇನೆ ಎಂದು ಹಠಮಾಡಿ ಅವನ ಜೊತೆಗೆ ದಂಡಿಗೆ ಮಡದಿ ಬಾಲೆ ಪದ್ಮಕ್ಕೆ ಬರುತ್ತಾಳೆ. ಅವರು ಹೊರಡುವಾಗ ಕನರಾಯ ಬಂಗೇರರ ತಾಯಿ ದೈವಗಳಲ್ಲಿ “ಇಬ್ಬರು ಹೋಗಿ ಮೂವರಾಗಿ ಬರುವಂತೆ ಅನುಗ್ರಹಿಸುವಂತೆ” ಬೇಡುತ್ತಾರೆ.© ಡಾ.ಲಕ್ಷ್ಮೀ ಜಿ‌ ಪ್ರಸಾದ್ 


ಮುಂದೆ ದಾರಿ ಮಧ್ಯದಲ್ಲಿ ಬಾಲೆ ಪದ್ಮಕ್ಕೆಗೆ ಪ್ರಸವ ವೇದನೆ ಕಾಣಿಸಿಕೊಳ್ಳುತ್ತದೆ. ಕಾಡಿನ ನಡುವೆ ಇರುವ ಅರಮನೆಯ ಒಡತಿ ಅವಳನ್ನು ಆರೈಕೆ ಮಾಡುತ್ತಾಳೆ. ಬಾಲೆ ಪದ್ಮಕ್ಕೆ ಅವಳಿ ಗಂಡು ಮಕ್ಕಳಿಗೆ ಜನ್ಮವೀಯುತ್ತಾಳೆ. ಕನರಾಯ ಬಂಗೇರ ಹೆಂಡತಿ ಮತ್ತು ಮಕ್ಕಳನ್ನು ಅಲ್ಲಿಯೇ ಬಿಟ್ಟು ಕಾಳಗಕ್ಕೆ ಹೋಗುತ್ತಾನೆ. ಏಳೆಂಟು ವರ್ಷ ಕಳದು ಯುದ್ಧವನ್ನು ಗೆದ್ದು ಹಿಂದೆ ಬರುವಾಗ ಮಡದಿ ಮಕ್ಕಳನ್ನು ಕರೆತರಲು ಹೋಗುತ್ತಾರೆ. ಅವರ ಮಡದಿ ಮಕ್ಕಳಿಗೆ ಏಳು ವರ್ಷವಾದಾಗ ತೆಂಗಿನ ಗರಿ ತಲೆಗೆ ಬಿದ್ದು ಮರಣವನ್ನಪ್ಪಿರುತ್ತಾರೆ. ಇಬ್ಬರು ಮಕ್ಕಳೊಂದಿಗೆ ಕನರಾಯ ಬಂಗೇರರು ಬೀಡಿಗೆ ಬರುತ್ತಾರೆ.


ಅವರ ತಾಯಿ ದೈವದಲ್ಲಿ ಅರಿಕೆ ಮಾಡಿದ್ದಂತೆ ಇಬ್ಬರು ಹೋಗಿ ಮೂವರಾಗಿ ಬಂದಿರುತ್ತಾರೆ. ಮಡದಿ ಬಾಲೆ ಪದ್ಮಕ್ಕೆ ಅವಳಿ ಮಕ್ಕಳನ್ನು ಹೆತ್ತ ಕಾರಣ ಕನರಾಯ ಬಂಗೇರ ಸೇರಿ ಅವರು ನಾಲ್ವರಾಗುತ್ತಾರೆ. ಆದರೆ ದೈವದ ಎದುರು ಅರಿಕೆ ಮಾಡಿದ್ದು ‘ಇಬ್ಬರು ಹೋಗಿ ಮೂವರು ಬರಲೆಂದು’, ಆದ್ದರಿಂದ ಬಾಲೆ ಪದ್ಮಕ್ಕೆ ಸಾಯುತ್ತಾಳೆ ಎಂಬ ಆಶಯ ಇಲ್ಲಿದೆ.© ಡಾ.ಲಕ್ಷ್ಮೀ


ಬಾಲೆ ಪದ್ಮಕ್ಕೆ


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ ಓಯೇಯೇ ಡೆನ್ನ ಡೆನ್ನಾಯೇ


ಕನರಾಯ ಬೀಡಿನಲ್ಲಿ ಇದ್ದಾರೆ ಬಂಗೇರ


ಕನರಾಯ ಕರ್ತುಗಳು ಬಂಗೇರ 


 ಅವರ ಪ್ರೀತಿಯ ಮೋಹದ ಮಡದಿ 


ಬಾಲೆ ಪದ್ಮಕ್ಕ ಇದ್ದಾಳೆ


ಡೆನ್ನಾನಾ ಡೆನ್ನ ಡೆನ್ನಾನಾ ಓಯೇಯೇ ಡೆನ್ನ ಡೆನ್ನಾನಾ ಡೆನ್ನಾಯೇ


ಬೆಳಗಿನ ಜಾವದಲ್ಲಿ ಎದ್ದರು ಬಂಗೇರರು


ಹಾರೆ ಇಡುವ ಕೊಠಡಿಗೆ ಹೋಗಿ 


 ಹಾರೆ ತೆಗೆದು ಹೆಗಲಿಗೆ ಇಟರ 


ಬಟ್ಟೆ ಒಡುವ ಕೋಣೆಗೆ ಹೋದರು


ಬಟ್ಟೆ ತೆಗೆದು ಸೊಂಟಕ್ಕೆ ಸುತ್ತಿಕೊಂಡರು


ಬೆಟ್ಟಿನಲ್ಲಿ ಹೋದ ಬಂಗೇರರು ಇನ್ನು ಬೇಗ


ಸಂಗ್ರಹವಾದ ನೀರನ್ನು ಬಿಡಿಸಿಕೊಂಡು ಕಟ್ಟಿಕೊಂಡು


ಕಂಬಳದ ಕಟ್ಟಹುಣಿಯಲ್ಲಿ ಬರುವಾಗ


ಕಂಬಳದ ಕಟ್ಟಹುಣಿ ದಾಟಿಕೊಂಡು ಬಂದು


ಕೆಂದಾಳಿ ತೆಂಗಿನ ಹದಿಮೂರು ಕಟ್ಟೆಯಲ್ಲಿ 


ಕುಳಿತರು ಕನರಾಯ ಕರ್ತುಗಳು ಬಂಗೇರರು


ಯಾರಮ್ಮ ತಾಯಿಯವರೇ ಕೇಳಿರಿ 


ಏಳೇಳು ಹದಿನಾಲ್ಕು ವರ್ಷದ ದಂಡು


ಕಂಡು ಬರುತ್ತದೆ ಹೇಳುವರು


ನಾನು ಹೋಗುವೆ ತಾಯಿಯವರೇ ಕೇಳಿರಿ


ದಂಡಿಗೆ ನಾನು ಹೋಗುವೆಂದು ಹೇಳಿದರು


ಸಮಯದಲ್ಲಿ ಅಡಿಗೆ ಕಾಲದಲ್ಲಿ ಆಗಬೇಕು


ಕಾಲದ ಬಿಸಿನೀರು ಸಕಾಲದಲ್ಲಿ ಆಗಬೇಕು


ಹೇಳಿದರು ಕನರಾಯ ಕರ್ತುಗಳು ಬಂಗೇರರು


ಯಾರಯ್ಯ ಕರ್ತುಗಳೆ ಬಂಗೇರ ಕೇಳಿದೆಯ


ನೀನು ಹಾಗೆ ಹೋದರೆ ನಿನ್ನ ಮಡದಿ


ನನ್ನ ಪ್ರೀತಿಯ ಮೋಹದ ಸೊಸೆ 


 ಬಾಲೆ ಪದ್ಮಕ್ಕೆ ತಿಂಗಳು ಮಾಸಿ


ಏಳೆಂಟು ಒಂಬತ್ತು ತಿಂಗಳು ತಪ್ಪಿದೆ


ಅತ್ತೆಯವರು ಹೆಣ್ಣು ಹೆಂಗಸು ಹೇಳಿದರು


ಅಷ್ಟು ಮಾತು ಕೇಳಿದಳು ಮಗಳು


ನಗಾಡಿಕೊಂಡು ನೋಡುವಳು ಪದ್ಮಕ್ಕ


ಬಂಗೇರರ ಮುಖವನ್ನೆ ನೋಡಿ ಬಂಗೇರರ


ಓ ಅಲ್ಲಿ ಮುಗುಳು ನಗು ನಗುತ್ತಾಳೆ


ಯಾರಮ್ಮ ತಾಯಿಯವರೇ ನಿಮ್ಮ ಸೊಸೆ


ಮುಗುಳು ನಗುವನ್ನು ನಗುವಳು ತಾಯಿಯವರೆ


ಒಳ್ಳೇದಕ್ಕೆ ನಗುವಳೊ ಹಾಳಿಗೆ ನಕ್ಕಾಳೋ


ಕೇಳಿರಿ ತಾಯಿಯವರೆಂದು ಹೇಳಿದರು ಬಂಗೇರರು


ಕನರಾಯ ಕರ್ತುಗಳು ಬಂಗೇರರು


ಅದನ್ನಾದರು ಕೇಳಿರಿ ಕೇಳಿರಿ ತಾಯಿಯವರೆಂದು


ನಾನು ಯಾಕೆ ಕೇಳಬೇಕು ಬಂಗೇರ ಕೇಳು


ನೀನಾದರೂ ಹೇಳು ನೀವು ಮಾತಾಡಿಕೊಳ್ಳಿ


ಎಂದು ಹೇಳಿದರು ತಾಯಿಯವರು


ಅಷ್ಟು ಮಾತು ಕೇಳುವಳು ಮದುಮಗಳು


ಬಾಗಿಲ ಸಂಧಿಯಲ್ಲಿ ನಿಂತು ಮಗಳು


ಕಿವಿಕೊಟ್ಟು ಕೇಳುವಳು ಕಣ್ಣಿನಲ್ಲಿ ಕಡುದುಃಖ


ಬಿಡುವಳು ಮಗಳು ಬಾಲೆ ಪದ್ಮಕ್ಕೆ


ನಾನು ಹೋಗುವ ರಾಜ್ಯಕ್ಕೆ ನೀನಾದರೂ ಬರಲಿಕ್ಕಿಲ್ಲ


ಏಳೇಳು ಹದಿನಾಲ್ಕು ವರ್ಷದ ದಂಡನ್ನು


ಸಾಧಿಸಿ ಬರುವೆಂದು ಹೇಳಿದರು ಬಂಗೇರರು


ಕನರಾಯ ಕರ್ತುಗಳು ಬಂಗೇರರು


ನೀವಾದರೂ ಹೋಗುವ ರಾಜ್ಯಕ್ಕೆ ನಾನು ಕೂಡ


ಬರುವೆಂದು ಹೇಳುವಳು  ಬಾಲೆ ಪದ್ಮಕ್ಕೆ


ಏಳೇಳು ಹದಿನಾಲ್ಕು ವರ್ಷದ ದಂಡನ್ನು


ಸಾಧಿಸಿ ಬರುವುದಕ್ಕೆಂದು ಹೋಗುವುದು ಹೇಳಿದರು


ತಿಂಗಳು ತಪ್ಪಿ ಒಂಬತ್ತು ತಿಂಗಳು


ಬಸುರಿ ನೀನಲ್ವ ಎಂದು ಕೇಳಿದರು


ಕನರಾಯ ಕರ್ತುಗಳು ಬಂಗೇರರು


ಯಾರಮ್ಮ ತಾಯಿಯವರೇ ತಾಯಿಯವರೇ


ಯಾರಯ್ಯ ಬಂಗೇರ ಏನೆಂದು ಕೇಳಿದರು


ತಾಯಿಯವರು ಹೆಣ್ಣು ಹೆಂಗಸು ಕೇಳುವಾಗ


ಯಾರಮ್ಮ ಅತ್ತೆಯವರೇ ನೋಡಿದವರು ಅತ್ತೆಯವರು


ಬದುಕು ಭಾಗ್ಯದ ಸೌಖ್ಯದ ಸೀಮೆಯ


ಸೊತ್ತನ್ನು ಸೌಲಭ್ಯವನ್ನು ಮಾತನಾಡುವುದು ಅಲ್ಲ


ಅವರು ಹೋಗುವ ರಾಜ್ಯದ ಸೊತ್ತಿನ ಸೌಲಭ್ಯಗಳನ್ನು


ಕೇಳುವುದು ಎಂದಳು ಬಾಲೆ ಪದ್ಮಕ್ಕೆ


ಅವರು ಹೋಗುವ ರಾಜ್ಯಕ್ಕೆ ನನಗೆ ಹೋಗಬೇಕು


ನಾನಾದರೂ ಹೋಗದೆ ಕುಳಿತುಕೊಳ್ಳಲಿಕ್ಕಿಲ್ಲ ಅತ್ತೆಯವರೇ


ಎಂದು ಹೇಳುವಳು ಮದುಮಗಳು ಬಾಲೆ ಪದ್ಮಕ್ಕ


ಮೈಯ ಕೊಳೆಗೆ ಸ್ನಾನ ಮಾಡಲಿಲ್ಲ ಮದುಮಗಳು


ಹೊಟ್ಟೆಯ ಹಸಿವಿಗೆ ಉಣ್ಣಲಿಲ್ಲ


ಏಳು ಮಗಳೆ ಸ್ನಾನ ಮಾಡೆಂದು ಹೇಳುವಾಗ


ಹೊಟ್ಟೆಯ ಹಸಿವಿಗೆ ಊಟ ಮಾಡೆಂದು ಹೇಳಿದರು


ಗಂಡ ಗಂಸಡು ಹೇಳಿದಾಗ


ಊಟ ಸಮ್ಮಾನ ಆನಂತರ ಮದುಮಗ


ನೀವು ಹೋಗುವ ರಾಜ್ಯಕ್ಕೆ ನಾನು ಬರುವೆ ಎಂದು


ಹೇಳಿದರು ಹೆಣ್ಣ ಹೆಂಗಸು ಬಾಲೆ ಪದ್ಮಕ್ಕೆ


ಬಾ ಮದುಮಗಳೆ ಸ್ನಾನ ಮಾಡು ಮದುಮಗಳೆ


ಎಂದು ಗಂಡ ಬಂಗೇರರು ಹೇಳುವಾಗ


ದಡಕ್ಕನೆ ಎದ್ದು ದಿಡಕ್ಕನೆ ಕುಳಿತು


ತಲೆಯನ್ನು ಕೊಡವಿಕೊಂಡು ಬರುವಳು ಮದುಮಗಳು


ಓಡೋಡಿಕೊಂಡು ಹೋಗುವಳು ಮಗಳು


ಬೆನ್ನಿನ ಕೊಳಕಿಗೆ ಸ್ನಾನ ಮಾಡುವಳು ಮಗಳು


ಹೊಟ್ಟೆಯ ಹಸಿವಿಗೆ ಊಟ ಮಾಡುವಳು


ಅಡಿಗೆ ತಯಾರಿ ಆಗಿದೆ ಎನ್ನುವಳು


ನಾನು ಕೂಡ ಹೊರಡಲಿಯಾ ಎಂದು ಕೇಳಿದಳು ಮಗಳು


ದಂಡಿಗೆ2 ಸಿಂಗಾರ ಮಾಡಿರಿ ಬೋಯಿಗಳೆಂದು


ಬೋಯಿಗಳನ್ನು ಇನ್ನೂ ಬೇಗ ಕರೆಸಿದರು


ಬೆಳ್ಳಿಯಲ್ಲಿ ಅಲಂಕಾರ ಆದಳು ಮಗಳು


ಬಂಗಾರಿನಲ್ಲಿ ಸಿಂಗಾರ ಆದಳು ಮಗಳು


ಡೆನ್ನಾನಾ ಡೆನ್ನಾನ ಡೆನ್ನ ಡೆನ್ನ ಡೆನ್ನಾನಾ


ಯಾರಮ್ಮ ತಾಯಿಯವರೇ ಒಳ್ಳೆಯದಾಗುವಷ್ಟು ಒಳ್ಳೆಯದು


ಹಾಳಿನಷ್ಟು ಹಾಳು ಇರಬಹುದು ದೇವರ ವರವಿದೆ


ದೈವಗಳ ನೆಲೆ ಇದೆ ಹೋಗುವೆ ತಾಯಿಯವರೆ


ಎಂದು ಹೇಳುವರು ಕನರಾಯ ಕರ್ತುಗಳು ಬಂಗೇರರು


ಯಾರು ಮಗ ಬಂಗೇರ ಎರಡು ಜನ ಹೋಗುವಿರಿ


ಮೂರು ಜನ ಸುಖವಾಗಿ ಬನ್ನಿ ಎಂದು ಹೇಳಿ


ಚಾವಡಿ ನಡುವಿನ ಅಂಕಣಕ್ಕೆ ಬರುವರು


ತಾಯಿಯವರು ಹೆಂಗಸು ಬರುವರು


ದೈವದ ಗುಡಿಯ ಬಾಗಿಲು ತೆರೆದರು 


 ಬತ್ತಿ ಉರಿಸಿ ದೀಪ ಇಟ್ಟರು


ಎರಡು ತಲೆ ಹೋಗುವರು ಮೂರು ತಲೆ


ಬರಲಿ ಎಂದು ಜಮಾದಿ ದೈವಕ್ಕೆ ಕೈಯನ್ನು ಮುಗಿದು


ಅಡ್ಡ ಬಿದ್ದು ನಮಸ್ಕರಿಸುವರು ತಾಯಿಯವರು


ಡೆನ್ನ ಡೆನ್ನಾನಾ ಡೆನ್ನ ಡೆನ್ನ ತಾಯಿಯವರೇ ನಾವು ಹೋಗಿ


ಬರುವೆವು ತಾಯಿಯವರೇ ಎಂದು ಕಾಲು ಹಿಡಿದು


ಹೊರಡುವರು ಬಂಗೇರರು ಕನರಾಯ ಬಂಗೇರರು


ಎರಡು ಜನ ಹೋಗಿ ಮೂರು ಜನ ಬನ್ನಿ ಎಂದು


ಹೇಳಿ ಕಳುಹಿಸುವರು ತಾಯಿಯವರು


ದಂಡಿಗೆಯಲ್ಲಿ ಸಿಂಗಾರ ಆಗಿ ಮದುಮಗಳನ್ನು


ಎತ್ತಿ ಇನ್ನು ಬೇಗ ಕುಳ್ಳಿರಿಸಿದರು ಬಂಗೇರರು


ದಂಡಿಗೆಯನ್ನು ಹೊತ್ತುಕೊಂಡು ಹೋಗುವರು ಬೋಯಿಗಳು


ಒಂದು ಗುಡ್ಡೆಯನ್ನು ಒಂದು ಬಯಲನ್ನು


ದಾಟಿಕೊಂಡು ಹೋಗುವರು ಕನರಾಯ ಬಂಗೇರರು


ದೊಡ್ಡದೊಂದು ಕಾಡಿನ ಒಳಗೆ ಹೋಗುವಾಗ


ಹೊಟ್ಟೆ ನೋವು ಎಂದಳು ಬಾಲೆ ಪದ್ಮಕ್ಕೆ


ಹುಡು ಪುಡಿ ಆಗುತ್ತದೆ ದಂಡಿಗೆ ಹುಡು ಪುಡಿ


ಆಗುವಂತೆ ಆಗುತ್ತದೆ ಏನು ಮದುಮಗಳೆ


ಏನು ಆಗುತ್ತದೆ ಎಂದು ಕೇಳಿದರು


ಹೊಟ್ಟೆ ನೋವು ಮೂಡುವುದು ಮುತ್ತಿನ ಬೆವರು


ಇಳಿದು ಬಂದಾಗ ಹೇಳುವರು ಬಂಗೇರರು


ದಂಡಿಗೆ ಇಳಿಸಿರೆಂದು ಹೇಳಿದರು


ತಾಳೆ ಮರದಷ್ಟು ಎತ್ತರಕ್ಕೆ ಹೊಗೆ ಎಲ್ಲಿ


ಹೋಗುತ್ತದೆ ನೋಡಿ ಎಂದು ಹೇಳಿದರು


ಮರಕ್ಕೆ ಹತ್ತಿ ನೋಡುವರು ಬೋಯಿಗಳು


ಕಾಡಿನ ನಡುವಿನಲ್ಲಿ ವನದೇಶದಲ್ಲಿ ದೊಡ್ಡದೊಂದು


ಅರಮನೆ ಕಾಣುತ್ತದೆ ಅಲ್ಲಿ 


 ತಾಳೆಯಷ್ಟು ಎತ್ತರಕ್ಕೆ ದೂರದಲ್ಲಿ


ಹೊಗೆ ಕಾಣಿಸುತ್ತದೆ ಎಂದು ಹೇಳಿದರು


ಅಲ್ಲಿಗೆ ಹೋಗುವ ಎಂದು ಹೋಗುವರು ಬಂಗೇರರು


ಯಾರಮ್ಮ ಹೆಣ್ಣು ಮಗಳೆ ಯಾರಮ್ಮ ಇದ್ದೀರಿ


ಒಬ್ಬಳು ಬಸುರಿ ಹೆಣ್ಣಿಗೆ 


 ರಕ್ಷಣೆ ಕೊಡುವಿರಾ ಎಂದು ಕೇಳುವರು


ಕನರಾಯ ಕರ್ತುಗಳು ಬಂಗೇರರು


ಅಷ್ಟು ಮಾತು ಕೇಳುವರು ಆ ಹೆಣ್ಣು ಮಗಳು


ಪ್ರಸವದ ನೋವಿಗೆ ಹೆರುವಳು ಮದುಮಗಳು


ಅವಳಿ ಮಕ್ಕಳಿಗೆ ಜನ್ಮ ಕೊಡುವಳು 


 ಬಾಲೆ ಪದ್ಮಕ್ಕೆ ಕೇಳಿದಿರಾ


ಅಲ್ಲಿಂದ ಎದ್ದುಕೊಂಡು ದಂಡು ಸಾಗಿಸಿಕೊಂಡು


ಹೋಗುವರು ಕನರಾಯ ಕರ್ತುಗಳು ಬಂಗೇರರು






ಏಳೇಳು ಹದಿನಾಲ್ಕು ವರ್ಷದ ದಂಡನ್ನು


ಸಾಧಿಸಿ ಹಿಂದೆ ತಿರುಗಿ ಊರಿಗೆ


ಬರುವಾಗ ಬಂಗೇರರು ಹೆಂಡತಿಯನ್ನು ಮಕ್ಕಳನ್ನು


ಕರೆದುಕೊಂಡು ಹೋಗುವೆ ಎಂದು ಬರುವಾಗ


ಬಾಲೆ ಪದ್ಮಕ್ಕ ಹೆರಿಗೆ ಆಗಿ 


 ಹೆರಿಗೆ ಆಗಿ ಏಳು ವರ್ಷದ ಮಕ್ಕಳು


ಆದಾಗ ತಾಯಿಗೆ ಅಳಿವು 


 ಬಂತೆಂದು ಹೇಳಿದರು ಹೆಣ್ಣು ಮಗಳು


ಬಾಲೆ ಪದ್ಮಕ್ಕ ಜೀವ ಬಿಟ್ಟು ಕೈಲಸ ಸೇರಿದರು


ಅವರ ಸಂಸ್ಕಾರ ಮಾಡುವ ಹೊತ್ತಿನಲ್ಲಿ


ತಲೆಯ ಮುಡಿ ಮತ್ತು ಮೊಲೆಯಕಟ್ಟು


ಹಾಗೇನೇ ಉಳಿದಿದೆ ಹೇಳಿದರು


ಮೂರು ರಾತ್ರಿ ಮೂರು ಹಗಲು ಸುಟ್ಟರು


ಉರಿದು ಬೂದಿಯಾಗಲಿಲ್ಲ ತಂದಿಟ್ಟಿದ್ದೇವೆಂದು ಹೇಳಿದರು


ದಂಡಿಗೆಯಲ್ಲಿ ತಂದಿಟ್ಟರು  ಮಕ್ಕಳನ್ನು ಕರೆದುಕೊಂಡು ಬರುವರು


ಕನರಾಯ ಬೀಡಿಗೆ ಬರುವಾಗ ಅಲ್ಲಿ


ತಾಯಿಯವರು ಹೆಂಗಸರು ತೋರಣ ಕಟ್ಟಿ


ಆರತಿ ಓಕುಳಿ ಹಿಡಿದು ಕಾಯುತ್ತಾರೆ


ನನ್ನ ಮೋಹದ ಪ್ರೀತಿಯ ಸೊಸೆ


ಮಗನು ಬಂದರು ಮಕ್ಕಳು ಬಂದರೆಂದು


ದಂಡಿಗೆ ನೋಡುವಾಗ 


 ನನ್ನ ಸೊಸೆ ಎಲ್ಲಿಗೆ ಹೋಗಿದ್ದಾಳೆ


ಎಂದು ಕೇಳುವಾಗ ಕನರಾಯ ಬಂಗೇರರು


ಏಳೇಳು ವರ್ಷದ ಮಕ್ಕಳು ಆದಾಗ


ತಾಯಿಗೆ ತೆಂಗಿನ ಮಡಲು ಬಿದ್ದು 


ಕೈಬಿಟ್ಟು ಕೈಲಾಸ ಸೇರಿದ್ದಾಳೆ 


 ಅವಳ ಮೊಲೆಕಟ್ಟು ತಲೆಮುಡಿ


ಉರಿಯದೆ ಉಳಿದಿದೆ ತಾಯಿಯವರೆ


ಎಂದು ತಾಯಿಯ ಕೈಗೆ ಕೊಟ್ಟರು


ಡೆನ್ನಾನ ಡೆನ್ನಾ ಡೆನ್ನ ಡೆನ್ನಾನಾ ಓಯೋಯೋ ಡೆನ್ನಾನಾ


ಕನರಾಯ ಬೀಡಿನಲ್ಲಿ ಕರ್ತುಗಳು ಬಂಗೇರರು


ಆಧಾರ: ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ- ಡಾ.ಲಕ್ಷ್ಮೀ ಜಿ ಪ್ರಸಾದ್ 









ಪಾಡ್ದನದ ಕಥೆಗಳು‌ ಬಾಲೆ ಜೇವು ಮಾಣಿಗ

 . 


 





ಬಾಲೆ ಜೇವು ಮಾಣಿಗ




ಚೆನ್ನೆಯನ್ನು ಆಡೋಣವೇ ಮಾನಿಗ 


 ಎಕ್ಕಾಡಿ ಆಡೋಣವೇ ಮಾನಿಗ


ಚೆನ್ನೆಯನ್ನೇ ಆಡುವುದಾದರೆ ಬಲ್ಲಾಳರೆ 


 ಬುದ್ಧಿಗೆ ಒಳ್ಳೆಯದು


ಎಕ್ಕಾಡಿ ಆಡಿದರೆ ಬಲ್ಲಾಲರೆ 


ಸುಮ್ಮಗೆ ಎಂದು ಹೇಳಿದಳು


ಬಾಲೆ ಜೇವು ಮಾನಿಗ 


 ಮರದ ಮಣೆ ಉಂಟು ಮಾನಿಗ


ಹೊಂಗಾರೆಯ ಕಾಯಿ ಉಂಟು


ತೆಗೆದುಕೊಂಡು ಬಾ ಮಾನಿಗ ಎಂದು


ಹೇಳಿದರು ಪರಿಮಾಳ ಬಲ್ಲಾಳರು ಏ... ಏ..






ಯಾರಯ್ಯ ಬಲ್ಲಾಳರೆ ಪರಿಮಾಳ ಬಲ್ಲಾಲರೆ


ಮರದ ಮಣೆಯಲ್ಲಿ ಹೊಂಗಾರೆ ಕಾಯಿಯಲ್ಲಿ


ನಾನಾದರೂ ಆಡಲಾರೆ ಎಂದು ಹೇಳಿದರು 


 ಮಗಳು ಜೇವು ಮಾನಿಗ


ಬೆಳ್ಳಿಯ ಮಣೆ ಉಂಡು ಬಲ್ಲಾಳರೇ


ಬಂಗಾರಿನ ಹರಳು ಉಂಟು ಬಲ್ಲಾಳರೇ


ತೆಗೆದುಕೊಮಡು ಬರಲೇ ಎಂದು ಕೇಳಿದರು 


 ಮಗಳು ಜೇವು ಮನಿಗ


ತೆಗೆದುಕೊಂಡು ಬಾ ಎಂದು ಪರಿಮಾಳ ಹೇಳಿದರು


ಓಡಿಕೊಂಡು ಹಾರಿಕೊಂಡು ಹೋಗುವಳೆ 


 ಮಗಳು ಜೇವು ಮಾನಿಗ


ಕಲ್ಲಿನ ಪೆಟ್ಟಿಗೆಯ ಬೀಗವನ್ನು ತೆರೆದಳು ಮಾನಿಗ


ಬೆಳ್ಳಿಯ ಮಣೆಯನ್ನು ತೆಗೆದಳು 


 ಬಂಗಾರಿನ ಹರಳು ಹಿಡಿದಳು




ಮಗಳು ಜೇವು ಮಾನಿಗ


ಓಡಿಕೊಂಡು ಓಡಿಕೊಂಡು ಬರುವಾಗ


ಮೇಲಿನ ಹೊಸಿಲು ತಾಗುತ್ತದೆ ಹಲ್ಲಿಯ ನುಡಿ ಆಯಿತು


ಮಾನಿಗಳಿಗೆ ಮಗಳು ಜೇವು ಮಾನಿಗಳಿಗೆ ಏ... ಏ...


ಚಾವಡಿ ನಡುವಿಗೆ ಬಂದಳೇ ಮಾನಿಗ 


 ಮಗಳು ಜೇವು ಮಾನಿಗ


ಯಾರಯ್ಯ ಬಲ್ಲಾಳರೆ ಪರಿಮಾಳ ಬಲ್ಲಾಳರೆ


ಮೇಲಿನ ಹೊಸಿಲು ತಾಗಿತು ಬಲ್ಲಾಳರೆ


ಕೆಳಗಿನ ಹೊಸಿಲು ತಾಗಿತು ಬಲ್ಲಾಳರೆ 


 ಹಲ್ಲಿಯ ನುಡಿ ಅಗಿದೆ


ಬಲ್ಲಾಳರೆಂದು ಹೇಳಿದಳು ಮಾನಿಗ 


 ಬಾಲೆ ಜೇವು ಮಾನಿಗ


ಮೇಲಿನ ಹೊಸಿಲು ತಾಗುವುದಕ್ಕೆ ಮಾನಿಗ ಬಗ್ಗಿ ನಡೆಯಬೇಕು


ಕೆಳ ಹೊಸಿಲು ತಾಗುವುದಕ್ಕೆ ಕಾಲು ಎತ್ತಿ ನಡೆಯಬೇಕು


ಎಂದು ಹೇಳಿದರು ಪರಿಮಾಳ ಬಲ್ಲಾಳರೇ... ಏ...ಏ...




ಡೆನ್ನಾನ ಡೆನ್ನಾನ ಡೆನ್ನಾನ ಓಯೋಯೇ ಡೆನ್ನಾನ


ಡೆನ್ನಾನ ಡೆನ್ನಾನ ಡೆನ್ನಾನ ಓಯೋಯೇ ಡೆನ್ನಾನಯೇ


ಡೆನ್ನಾನ ಡೆನ್ನಾನ ಬಲ್ಲಾಳ ಪೆರುಮಾಳ ಬಲ್ಲಾಳರು


ಯಾರೇ ಮಾನಿಗ ಮಾನಿಗ ಬಾರೆ ಓ ಮಾನಿಗ


ಬಾಯಾರಿಕೆಗೆ ನೀರು ತೆಗೆದುಕೊಂಡು ಬಾ ಎಂದರು


ಬಾಯಾರಿಕೆ ಆಗುತ್ತದೆಂದು ಹೇಳಿದರು ಪೆರುಮಾಳ ಬಲ್ಲಾಳರು


ಒಂದು ಗಿಂಡೆ ನೀರಾದರೂ ತೆಗೆದುಕೊಂಡು ಬಾ ಮಾನಿಗ


ಬಾರೆ ಓ ಮಾನಿಗ 


 ಒಳಗಿನ ಆವರಣಕ್ಕೆ ಹೋಗುವಳು


ಬೆಳ್ಳಿಯ ಗಿಂಡೆ ಹಿಡಿಯುವಳು


ಒಂದು ಗಿಂಡೆ ನೀರು ತೆಗೆದುಕೊಂಡು ಬರುವಳು


ಗಿಂಡಿಯ ನೀರನ್ನು ತೆಗೆದುಕೊಂಡು ಚಾವಡಿಗೆ ಬರುವಾಗ


ಆಟವನ್ನು ತಪ್ಪಿಸಿದ್ದಾರೆ ತುದಿಯನ್ನು ತಿರುಗಿಸಿದ್ದಾರೆ




ಡೆನ್ನಾನ ಡೆನ್ನಾನ ಬಲ್ಲಾಳ ಯಾರಯ್ಯ ಬಲ್ಲಾಳ


ಆಟವನ್ನು ತಪ್ಪಿಸಿದಿರಿ ಬಲ್ಲಾಳ ತುದಿಯನ್ನು ತಿರುಗಿಸಿದ್ದೀರಿ


ಚೆನ್ನೆಯ ಆಟ ತಪ್ಪಿಸಿದಿರಿ ಚೆನ್ನೆ ನಾನು ಆಟವಾಡಲಾರೆ


ಎಂದು ಹೇಳಿದಳು ಮಾನಿಗ ಬಾಲೆದಿ ಓ ಮಾನಿಗ




ಡೆನ್ನಾನ ಡೆನ್ನಾನ ಡೆನ್ನಾನ ಓಯೋಯೆ ಡೆನ್ನಾನ


ಬಾರೇ ಓ ಮಾನಿಗ


ನಾನಾದರೂ ಆಡಲಾರೆ ನಾನು ಆಡಲಾರೆ ಹೇಳಿದಳು


ಬಾಲೆ ಜೇವು ಮಾನಿಗ ಬೆಳ್ಳಿಯ ಮಣೆಯನ್ನು


ತೆಗೆಯುವಳು ಕೆಳಗೆ ಇಡುವಳು


ಹಠವನ್ನೇ ಮಾಡುವಳು ಮಾನಿಗ ಛಲ ಮಾಡುವಳು


ಹೇಳುವುದನ್ನು ಕೇಳಲಿಲ್ಲ ಮಾನಿಗ ಬಾಲೆ ಜೇವು ಮಾನಿಗ


ಡೆನ್ನಾನ ಡೆನ್ನಾನ ಡೆನ್ನಾನಯೇ ಓಯೋಯೇ ಡೆನ್ನಾನ


ಅತ್ತಿತ್ತ ನೋಡಿದರು ಬಲ್ಲಾಳರು ಕೋಪದಿಂದ


ಚೆನ್ನೆಯ ಮಣೆ ತೆಗೆದು ಒಂದು ಪೆಣ್ಣು ಹಾಕಿದರು


ಚೆನ್ನೆಯ ಮಣೆಯಲ್ಲಿ ಕೆನ್ನೆಗೆ ಒಂದು ಪೆಟ್ಟು ಹಾಕಿದರು


ಕೈ ಬಿಟ್ಟು ಕೈಲಾಸ ಸೇರಿದಳು ಮಾನಿಗ


ವೈ ಬಿಟ್ಟು ವೈಕುಂಠ ಸೇರಿದಳು ಮಾನಿಗ


ಡೆನ್ನ ಡೆನ್ನ ಡೆನ್ನಾನ ಓಯೋಯೇ ಡೆನ್ನಾನ


    


















ಪಾಡ್ದನದ ಕಥೆಗಳು : ಬಾಲೆ ರಂಗಮೆ

 ಬಾಲೆ  ರಂಗಮೆ


ಮೇದಾರನ ತಂಗಿ ರಂಗಮೆ. ಕದ್ರಿ ಕೋಳ್ಯೂರು ದೇವಾಲಯಗಳಿಗೆ ಹರಿಕೆ ಸಲ್ಲಿಸಲು ರಂಗಮೆ ಹೋಗುವಾಗ ದಾರಿಯಲ್ಲಿ ಸಿಕ್ಕ ಬೈರರ ಕೇರಿಯ ಭೈರವರಸ ಆಕೆಯನ್ನು ಮೋಹಿಸಿ ಮದುವೆಯಾಗು ಎಂದು ಪೀಡಿಸುತ್ತಾನೆ. ಆಗ ಹರಿಕೆ ಕೊಟ್ಟು ಹಿಂದೆ ಬರುವಾಗ ನಾನು ಇದೇ ದಾರಿಯಲ್ಲಿ ಬರುತ್ತೇನೆ, ಮದುವೆಯಾಗುವುದಾದರೆ ನನ್ನ ಅಣ್ಣನಲ್ಲಿ ಬಂದು ಕೇಳು ಎಂದು ಹೇಳಿ ತಪ್ಪಿಸಿಕೊಳ್ಳುತ್ತಾಳೆ. ಮುಂದೆ ಭೇಟಿಯಾಗುವ ಕದ್ರಿಯ ಅರಸ ಹೇಳಿದಂತೆ ಹಿಂದೆ ಬರುವಾಗ ಬೇರೆ ದಾರಿಯಲ್ಲಿ ಬರುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್ 


ಅವಳು ಬರುವುದನ್ನು ಕಾದು ಕುಳಿತ ಭೈರವರಸ ಅವಳು ಬಾರದಿದ್ದಾಗ, ಅವಳ ಅಣ್ಣನನ್ನು ಬರ ಹೇಳಿ ‘ರಂಗಮೆಯನ್ನು ಮದುವೆ ಮಾಡಿಕೊಡು’ ಎಂದು ಹೇಳುತ್ತಾನೆ. ಮೇದಾರ ಅದಕ್ಕೆ “ಕೆಳಜಾತಿಯ ಭೈರವ ಕೇರಿಯ ಭೈರವರಸನಿಗೆ ಹೆಣ್ಣು ಕೊಡಲಾರೆ” ಎಂದುತ್ತರಿಸುತ್ತಾನೆ. ಆಗ ಮುಳ್ಳಿನ ಮಂಚಕ್ಕೆ ಕಟ್ಟಿ, ಉರಿ ಮೂಡೆ ಹಾಕಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ಹಿಂಸೆ ತಾಳಲಾರದೆ ತಂಗಿಯನ್ನು ಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ರಂಗಮೆ ಭೈರವರಸನ ಕೈಯಿಂದ ಪಾರಾಗಲು ಉಪಾಯವೊಂದನ್ನು ಹೂಡುತ್ತಾಳೆ. ಭೈರವರಸನ ದಿಬ್ಬಣ ಬಂದಾಗ ‘ತನಗೆ ತೀವ್ರ ಹೊಟ್ಟೆನೋವು ಮಾಳಿಗೆಯಿಂದ ಕೆಳಗೆ ಇಳಿದು ಬರಲಾರೆ ಆದ್ದರಿಂದ ದಂಡಿಗೆಯ ಕೊಂಬಿಗೆ ಧಾರೆ ಎರೆಯಿರಿ’ ಎಂದು ಹೇಳುತ್ತಾಳೆ. ಅಂತೆಯೇ ದಂಡಿಗೆಯ ಕೊಂಬಿಗೆ ಧಾರೆ ಎರೆದು ಮದುವೆಯ ಶಾಸ್ತ್ರ ಮುಗಿಸುತ್ತಾರೆ. ದಿಬ್ಬಣದೊಂದಿಗೆ ಹಿಂದಿರುಗುತ್ತಾರೆ. ಮರುದಿನವೇ ತಂಗಿಯನ್ನು ಕರೆದೊಯ್ಯುವಂತೆ ಮೇದಾರ ಭೈರವರಸನಿಗೆ ಓಲೆ ಕಳುಹಿಸುತ್ತಾನೆ. ಮಡದಿಯನ್ನು ಕರೆದೊಯ್ಯಲೆಂದು ಬಂದಾಗ ಅಲ್ಲೊಂದು ಕಾಷ್ಠ ಉರಿಯುತ್ತಾ ಇರುತ್ತದೆ. ‘ರಂಗಮೆ ಹೊಟ್ಟೆ ನೋವಿನಿಂದ ಸತ್ತಿದ್ದಾಳೆ’ ಎಂದು ಅಲ್ಲಿದ್ದ ಜನರು ಹೇಳುತ್ತಾರೆ. ಆಗ ರಂಗಮೆಯ ಮೇಲಿನ ವ್ಯಾಮೋಹದಿಂದ ಬುದ್ಧಿಶೂನ್ಯನಾದ ಭೈರವರಸ ಅದೇ ಚಿತೆಗೆ ಹಾರಿ ಸಾಯುತ್ತಾನೆ. ರಂಗಮೆ ಸತ್ತಿರುವುದಿಲ್ಲ. ಹೆಣ್ಣುನಾಯಿಯ ಶವವನ್ನಿಟ್ಟು ಕಾಷ್ಠ ಉರಿಸಿರುತ್ತಾರೆ. ಭೈರವರಸ ಸತ್ತ ನಂತರ ರಂಗಮೆ ಕದ್ರಿಯ ಅರಸನನ್ನು ಮದುವೆಯಾಗುತ್ತಾಳೆ.© ಡಾ.ಲಕ್ಷ್ಮೀ ಜಿ ಪ್ರಸಾದ್


ಹೆಣ್ಣು ಮಕ್ಕಳಿಗೆ, ಅವರ ಮನೆವರಿಗೆ ಇಷ್ಟವಿಲ್ಲದಿದ್ದರೂ ಕೂಡ ಬಲಿಷ್ಟರು, ಅರಸರುಗಳು ಬಲಾತ್ಕಾರವಾಗಿ ಕೊಂಡೊಯ್ದು ಮದುವೆಯಾಗುತ್ತಿದ್ದುದರ ಕುರಿತು ಈ ಪಾಡ್ದನವು ತಿಳಿಸುತ್ತದೆ. ಇಲ್ಲಿ ರಂಗಮೆಯ ಜಾಣ್ಮೆಯಿಂದಾಗಿ ಭೈರವರಸ ಸತ್ತು ಹೋಗುತ್ತಾನೆ. ರಂಗಮೆ ತಾನಿಷ್ಟ ಪಟ್ಟ ಕದ್ರಿಯ ಅರಸನನ್ನು ವಿವಾಹವಾಗುತ್ತಾಳೆ. 

ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಡಾ. ಕಮಲಾಕ್ಷ ಅವರು ಸಂಗ್ರಹಿಸಿದ್ದು, ಅದರಲ್ಲಿ ಕಥಾನಯಕಿಯನ್ನು ದೈಯಕ್ಕು ಎಂದು ಹೇಳಿದ್ದು, ಈಕೆ ಎಣ್ಮೂರು ಗುತ್ತಿನ ದಾರಾಮು ಪೊಣ್ಣೋವಿನ ಮಗಳೆಂದು ಹೇಳಲಾಗಿದೆ. ಬಂಟ್ವಾಳ ಪೇಟೆಗೆ ಹೋಗಿಬರುವಾಗ ಬೈಲೂರ ಬಂಗ ತೊಂದರೆ ಕೊಡುತ್ತಾನೆ. ದೈಯಕ್ಕುವನ್ನು ಮದುವೆ ಮಾಡಿ ಕೊಡು ಎಂದು ದಾರಾಮುವಿನಲ್ಲಿ ಕೇಳುತ್ತಾನೆ. ಆಗ ದಾರಾಮು “ಆಸ್ತಿಯಲ್ಲಿ ನೀನು ಮೇಲಿದ್ದರೂ ಜಾತಿಯಲ್ಲಿ ನೀನು ಕೀಳು ನೀನು ಭೈರ, ಆದ್ದರಿಂದ ಹೆಣ್ಣು ಕೊಡಲಾರೆ” ಎನ್ನುತ್ತಾಳೆ. ಆಗ ಆಕೆಯನ್ನು ನಾನಾ ವಿಧವಾಗಿ ಹಿಂಸಿಸುತ್ತಾನೆ ಭೈರವರಸ. ಕೊನೆಗೆ ದೈಯಕ್ಕು ಅವನಿಗೆ ಯುದ್ಧಾಹ್ವಾನ ನೀಡುತ್ತಾಳೆ. ಸ್ವತಃ ಕತ್ತಿ ಹಿಡಿದು ಯುದ್ಧ ಮಾಡಿ ಆತನನ್ನು ಕೊಲ್ಲುತ್ತಾಳೆ ದೈಯಕ್ಕು.© ಡಾ.ಲಕ್ಷ್ಮೀ ಜಿ ಪ್ರಸಾದ್ ‌


ಇದೇ ಆಶಯವಿರುವ ಇನ್ನೊಂದು ಪಾಡ್ದನವನ್ನು ಶ್ರೀ ರಾಮನಾಯ್ಕ ಸಂಗ್ರಹಿಸಿದ್ದಾರೆ. ಈ ಪಾಡ್ದನದಲ್ಲಿ ದೈಯಕ್ಕು ಮಗಳಿಗೆ ಮದುವೆಯಾಗೆಂದು ಕಾಡುವವನು ಚಿಪ್ಪೋಲಿ ಬಂಗ. ಅವಳ ಸೋದರ ಮಾವನನ್ನು ಕಟ್ಟಿ ಹಾಕಿ ಕೊಡಬಾರದ ಕಷ್ಟ ಕೊಡುತ್ತಾನೆ. ಮಾವನ ಕಷ್ಟ ನೋಡಲಾರದೆ ಮದುವೆಗೆ ಒಪ್ಪಿಗೆಕೊಡುತ್ತಾಲೆ ದೈಯಕ್ಕು ಮಗಳು. ಮದುವೆಯ ಸಂದರ್ಭದಲ್ಲಿ ಧಾರೆ ಆಗುವ ಹೊತ್ತಿಗೆ ತಾನು ತಂದಿದ್ದ ಕತ್ತಿಯಿಂದ ಚಿಪ್ಪೋಲಿ ಬಂಗನ ಕೈಯನ್ನು ದೈಯಕ್ಕು ಮಗಳು ಕತ್ತರಿಸುತ್ತಾಳೆ.


ಈ ಮೂರು ಕೂಡ ಒಂದೇ ಆಶಯವನ್ನು ಹೊಂದಿದ್ದು ಒಂದೇ ಪಾಡ್ದನದ ಭಿನ್ನ ಭಿನ್ನ ಪಾಠಗಳಂತೆ ಕಾಣಿಸುತ್ತವೆ. ಮದುವೆಯಾಗೆಂದು ಕಾಡಿ ಬಲಾತ್ಕರಿಸಿದ ರಾಜನೊಬ್ಬನನ್ನು ಹೆಣ್ಣು ಮಗಳೊಬ್ಬಳು ಎದುರಿಸಿ ಉಪಾಯವಾಗಿ ಆತನನ್ನು ಕೊಂದ ಘಟನೆ ಎಲ್ಲೋ ನಡೆದಿದ್ದು, ಅದನ್ನು ಕೇಂದ್ರವಾಗಿಸಿ ಈ ಪಾಡ್ದನಗಳು ಕಟ್ಟಲ್ಪಟ್ಟಿವೆ. ಬೀರುಕಲ್ಕುಡನ ಕೈಕಾಲುಗಳನ್ನು ಕಡಿಸಿದ ಭೈರವರಸನ ಕ್ರೌರ್ಯ ತುಳುನಾಡಿನಲ್ಲಿ ಜನರಿಗೆ ತಿಳಿದಿರುವ ವಿಚಾರವೇ ಆಗಿದೆ. ಆದ್ದರಿಂದಲೇ ಏನೋ ಕಾಟ ಕೊಟ್ಟು ಸಾವಿಗೀಡಾದ ವ್ಯಕ್ತಿಯನ್ನು ಈ ಪಾಡ್ದಗಳಲ್ಲಿ ಭೈರವರಸ ಎಂದೇ ಹೇಳಲಾಗಿದೆ. ಬೀರು ಕಲ್ಕುಡನಿಗೆ ಕಾರ್ಕಳದ ಭೈರವರಸ ಮಾಡಿದ ಅನ್ಯಾಯವನ್ನು ತುಳುವ ಜನಪದರು ಎಂದಿಗೂ ಕ್ಷಮಿಸುವುದಿಲ್ಲ. ಆದ್ದರಿಂದಲೇ ಪಾಡ್ದನಗಾರರು ಪಾಡ್ದನಗಳಲ್ಲಿ ಕೆಟ್ಟ ವ್ಯಕ್ತಿಯೊಂದಿಗೆ ಭೈರವರಸವನ್ನು ಸಮೀಕರಿಸಿದ್ದಾರೆ ಎಂದು ಡಾ|| ಅಮೃತ ಸೋಮೇಶ್ವರ ಅಭಿಪ್ರಾಯ ಪಟ್ಟಿದ್ದಾರೆ. ಪ್ರಸ್ತುತ ಪಾಡ್ದನದಲ್ಲಿ ಭೈರವರಸ ಸ್ತ್ರೀ ಲೋಲುಪನಂತೆ, ಕ್ರೂರಿಯಂತೆ ಚಿತ್ರಿಸಲ್ಪಟ್ಟಿದ್ದಾನೆ. ಅವನನ್ನು ಉಪಾಯದಿಂದ ಸಾಯುವಂತೆ ಮಾಡುವ ರಂಗಮೆ ಮೆಚ್ಚುಗೆಗೆ ಪಾತ್ರವಾಗುತ್ತಾಳೆ.

ಆಧಾರ : ಶಾರದಾ ಜಿ ಬಂಗೇರರ ಮೌಖಿಕ ಸಾಹಿತ್ಯ - ಡಾ..ಲಕ್ಷ್ಮೀ ಜಿ ಪ್ರಸಾದ್ 


ಬಾಲೆ ರಂಗಮೆ


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನೇಯೇ


ಬರ್ಪಾನೆಂದದ ಬೀಡಿನಲ್ಲಿ ಇದ್ದಾರೆ ಮಕ್ಕಳು


ಒಂದು ತಾಯಿಗೆ ಇಬ್ಬರು ಮಕ್ಕಳು


ಅಣ್ಣನೇ ಮೇದಾರ ತಂಗಿಯು ರಂಗಮೆ 


 ರಂಗಮೆ ಬಾಲೆ ರಂಗಮೆ


ತಾಯಿಯ ಹಾಲು ಕುಡಿಯುವ ಕಾಲಕ್ಕೆ


ತಾಯಿಗೆ ಅಳಿವು ಉಂಟಾಯಿತು 


 ತಂದೆಯ ಅನ್ನವನ್ನು ತಿನ್ನುವ ಕಾಲದಲ್ಲಿ


ತಂದೆಗೆ ಕೂಡ ಅಳಿವು ಉಂಟಾಯಿತು


ಯಾರಮ್ಮ ರಂಗಮೆ ಬಾಲೆ ರಂಗಮೆ 


 ಇಲ್ಲಿಗೆ ಬಾ ಮಗಳೆ ಎಂದರು


ಯಾರಮ್ಮ ತಂಗಿ ಬ  ಯಾರಮ್ಮ ತಂಗಿ ಬಾಲೆ ರಂಗಮೆ


ಹೊರಗಿನ ಒಳಗಿನ ಕೆಲಸ ಬೊಗಸೆ ಕಲಿಯಬೇಕು


ಚಿಕ್ಕವಳು ಹೋಗಿದ್ದಿ ಮಗಳೆ ರಂಗಮೆ


ನೀನಾದರೂ ದೊಡ್ಡವಳಾಗಿದ್ದಿ ಎಂದರು ಅವರು


ಯಾರಯ್ಯ ಅಣ್ಣನವರೇ ಕೇಳಿದಿರ 


 ನಿಮ್ಮ ಪ್ರೀತಿಯ ಮೋಹದ ತಂಗಿ


ರಂಗಮೆ ನಾನು ಎಂದು ಹೇಳಿದಳು ಆ


ನನಗೆ ಏನು ತಿಳಿಯುವುದಿಲ್ಲ ಎಂದು ಕೇಳಿದಾಗ


ಆಡವಾಡುವುದು ಅಲ್ಲ ಮಗಳೆ ರಂಗಮೆ ನೀನಾದರೂ


ಚಿಕ್ಕವಳು ಹೋಗಿ ದೊಡ್ಡವಳು ಆಗಿರುವೆ


ಬೆಳಿಗ್ಗೆ ಎದ್ದು ಒಲೆಯ ಬೂದಿ ಗೋರುವ


ಮಗಳು ಆಗಿರುವೆ ಎಂದು ಹೇಳಿದರು


ಯಾರು ಮಗಳೆ ರಂಗಮೆ ರಂಗಮೆ ಕೇಳಿದೆಯಾ


ಒಳಗಿನ ಹೊರಗಿನ ಕೆಲಸ ಬೊಗಸೆ ಕಲಿತು


ಒಳ್ಳೆಯ ಅರಸು ಬಲ್ಲಾಳರನ್ನು ಒಲಿಸಿ


ಮದುವೆ ಮಾಡಿಕೊಡಬೇಕೆಂಬ ಆಸೆಯನ್ನು


ಹೊಂದಿದ್ದೇನೆ ಎಂದು ಹೇಳಿದರು ಮೇದಾರ


ಯಾರಯ್ಯ ಅಣ್ಣನವರೆ ಅಣ್ಣನವರೆ ನನಗಾದರೂ


ಹೋಗಬೇಕು ಕದಿರೆಯ ಬೀಡಿಗೆ 


 ಮದುವೆ ಆಗುವ ಮೊದಲು


ನನಗೊಂದು ಅವಕಾಶ ಕೊಡಿರೆಂದು


ಹೇಳಿದಳು ಬಾಲೆ ರಂಗಮೆ ಹೇಳಿದಳು


ಕದಿರೆಯ ಬೀಡಿಗೆ ಹೋಗಬೇಕು ನನಗೆ


ಕದಿರೆಯ ಕೆರೆಯ ಸ್ನಾನ ಮಾಡಬೇಕೆಂದು ಹೇಳಿದಳು


ಅದರಿಂದಲೂ ಆ ಕಡೆ ಹೋಗಬೇಕು ನನಗೆ


ಎಲ್ಲೆಲ್ಲಿ ದೇವಸ್ಥಾನವೋ ಕೋಳ್ಯೂರಿಗೆ ಹೋಗಬೇಕು


ಮುಕಾಂಬೆ ದೇವಿಗೆ ಹೂವಿನ ಪೂಜೆ ಮಾಡಿ


ನಾನು ಹಿಂದೆ ಬರುವೆ ಎಂದು ಹೇಳಿದಳು ರಂಗಮೆ


ಬಾಲೆ ರಂಗಮೆ ಹೇಳಿದಳು 


 ಸುತ್ತ ಶುದ್ಧವಾದಳು ಮಗಳು


ಬಿಸಿನೀರು ತಣ್ಣೀರಿನಲ್ಲಿ ಸ್ನಾನ ಮಾಡಿದಳು


ಬೆಳ್ಳಿಯಲ್ಲಿ ಬಿಳಿ ಆದಳು ರಂಗಮೆ


ಬಂಗಾರದಲ್ಲಿ ಸಿಂಗಾರ ಆದಳು 


 ದಂಡಿಗೆಯಲ್ಲಿ ಕುಳ್ಳಿರಿಸಿ ಬಿಟ್ಟರು ಅಣ್ಣ


ತಂಗಿಯನ್ನು ಕುಳ್ಳಿರಿಸುವಾಗ


ಡೆನ್ನ ಡೆನ್ನ ಡೆನ್ನಾನಾ ಬಾಲೆ ಮೇದಾರ ಹೇಳಿದಳು


ಯಾರಯ್ಯ ಬೋವಿಗಳೆ ಯಾರಯ್ಯ ಬೋವಿಗಳೆ


ಇಲ್ಲಿ ಹೊತ್ತ ದಂಡಿಗೆಯನ್ನು ಕದ್ರಿಯಲ್ಲಿ ಇಳಿಸಬೇಕು


ಕದ್ರಿಯಲ್ಲಿ ಹೊತ್ತ ದಂಡಿಗೆ ಕೋಳ್ಯೂರಿಗೆ ಹೋಗಬೇಕು


ಅಲ್ಲಲ್ಲಿ ಮಾತ್ರ ಇಳುಗಬೇಕೆಂದು ಹೇಳಿದರು


ಅಷ್ಟು ಮಾತು ಕೇಳಿದಳು ಮಗಳು


ಆದೀತು ಅಣ್ಣನವರೆ ಚಂದದಲ್ಲಿ ಹೋಗಿ


ಬರುತ್ತೇವೆಂದು ಹೇಳಿ ಹೊರಡುವಳು ರಂಗಮೆ


ಒಂದೊಂದು ಗುಂಡಿ ಒಂದೊಂದು ಬೈಲು


ದಾಟಿಕೊಂಡು ಹೋಗುವಾಗ 


 ಕುದುರೆ ಮೇಲೆ ಕುಳಿತುಕೊಂಡು


ಭೈರರ ಅರಸ ನೋಡುವಾಗ 


 ಯಾರು ನೀವು? ಕಂಬಳದ ಕಟ್ಟಹುಣಿ


ಯಾಕೆ ಹೋಗುವುದೆಂದು ಕೇಳುವಾಗ


ಪೂರ್ವದಿಂದ ಸೂರ್ಯದೇವರು ಉದಿಸಿ ಬಂದ


ಆಕಾಸದಿಂದ ಬಿದ್ದ ದೇವಿಯೆ?


ಯಾರಪ್ಪ ಇನ್ನೊಂದು ದೇವಿಯಾ ದೈವವಾ?


ಯಾರಪ್ಪ ಕಾಣುವುದೆಂದು ಹೇಳಿದನು


ಇಷ್ಟೊಂದು ಚಂದದ ಹೆಣ್ಣನ್ನೇ ನೋಡಿಲ್ಲ


ಅವಳನ್ನಾದರೂ ನೋಡಬೇಕೆಂದು ಹೇಳಿದನು


ಓಡಿಕೊಂಡು ಹಾರಿಕೊಂಡು ಬರ್ಪಾನೆಂದ ಬೀಡಿನ


ಕಂಬಳ ಕಟ್ಟಹುಣಿ ದಾಟಿಕೊಂಡು ಇಳಿದು


ಹೋಗುವಾಗ ಒಂದು ಗುಡ್ಡೆ ಒಂದು


ಬಯಲು ದಾಟಿಕೊಂಡು ಹೋಗುವಾಗ ಸಿಕ್ಕುತ್ತದೆ


ಕದಿರೆಯ ಆನೆಯನ್ನು ಹತ್ತಿಕೊಂಡು ಹೋಗುವಾಗ


ಎದುರಿನಲ್ಲಿ ಬರುತ್ತಾನೆ ಬೈರವ ಅರಸು


ಕೈಯಲ್ಲಿ ಹಿಡಿದು ನಾನು ಕೂಡ ಬರುತ್ತೇನೆ


ದಂಡಿಗತೆಯ ಕೊಂಬಿಗೆ ಕೈಕೊಟ್ಟಾಗ


ಯಾರಯ್ಯ ಅರಸು ಭೈರವ ಅರಸು 


 ಎಲ್ಲಿಗೆ ಹೋಗುವ ದಂಡಿಗೆ ಎಂದು


ನಿನಗಾದರೂ ತಿಳಿದಿದೆಯಾ? ಎಂದು ಹೇಳಿದಳು


ನಾನು ಹೋಗುವ ದೇವಸ್ಥಾನಕ್ಕೆ ನೀನು ಬರಲಿಕ್ಕಿಲ್ಲ


ಹೋಗುವುದೊಂದು ದಾರಿಯಲ್ಲಿ ನಾನು ಹಿಂದೆ ಬರುವಾಗ


ಬಾ ಎಂದು ಹೇಳಿದಳು ಮದುಮಗಳು ರಂಗಮೆ


ಯಾರಮ್ಮ ರಂಗಮೆ ರಂಗಮೆ ಕೇಳಬೇಕು


ಜೀವ ಇದ್ದರೆ ನಿನ್ನೊಂದಿಗೆ ಇರಬೇಕು


ಸತ್ತರೂ ಕೂಡ ನಿನ್ನೊಂದಿಗೇ ಇರಬೇಕೆಂದು


ಆಸೆಯನ್ನು ಹೊಂದಿದ್ದೇನೆ ಎಂದನು


ಡೆನ್ನ ಡೆನ್ನ ಡೆನ್ನಾನಾ ಓಯೋಯೇ ಡೆನ್ನಾನಾ


ನಾನು ಈಗ ಹೋಗುವಾಗ ಹೋಗುತ್ತೇನೆ ಅರಸು


ಬರುವಾಗ ಬರುತ್ತೇನೆಂದು ಹೇಳಿದಳು


ಬಂದಾಗ ನಿನ್ನನ್ನು ಕರೆದುಕೊಂಡು ಹೋಗುವುದಿಲ್ಲ


ನನ್ನೊಂದು ಅಣ್ಣನಲ್ಲಿ ಕೇಳಿ ನೋಡು


ಪೊದು ಹಿಡಿಯುತ್ತಾನಾ? ಹೆಣ್ಣು ಕೊಡುತ್ತಾನಾ?


ಕೇಳು ಕರೆದು ಬಾ ಎಂದು ಹೇಳಿದಳು


ಅದು ಎಲ್ಲ ಬೇಡ ಒಟ್ಟಿಗೆ ಕುಳಿತು


ಹೇಳಿದ ಹರಕೆ ಸಂದಾಯ ಮಾಡೋಣವೆಂದು ಹೇಳುವನು


ಭೈರವ ಕೇರಿಯ ಭೈರವ ಅರಸುಗಳು


ಆ ಹೊತ್ತಿಗೆ ಹೇಳುತ್ತಾನೆ ಅರಸು


ಯಾರಮ್ಮ ರಂಗಮೆ ರಂಗಮೆ ನಿನ್ನನ್ನು


ಚಂದವನ್ನು ನೋಡಿದ್ದು ಸತ್ಯವಾದರೆ


ನನಗೆ ನೀನೇ ಬೇಕು ಎಂದು ಹೇಳಿದನು


ಭೈರರ ಕೇರಿಯ ಭೈರರಸು ಹೇಳುವಾಗ


ದೂರದಲ್ಲಿ ನಿಂತು ನೋಡುವರು ಅರಸುಗಳು


ಕದಿರೆಯ ಬೊಳ್ಳಿಲ್ಲ ಅರಸುಗಳು


ಯಾರಯ್ಯ ಆಳುಗಳೇ ಆಳುಗಳೇ ಕೇಳಿದಿರ


ಯಾರದೊಂದು ದಂಡಿಗೆ ಬರುವುದೆಂದು


ಕದಿರೆಯ ಅರಸುಗಳು ಕೇಳುವಾಗ


ಬರ್ಪಾನೆಂದ ಬೀಡಿನಿಂದ ಬಂದ ದಂಡಿಗೆ


ಕದಿರದ ಬೀಡಿಗೆ ಬರುತ್ತಾ ಇದೆ ಎಂದು ಹೇಳಿದಾಗ


ಅಲ್ಲಿಗೆ ಹೋಗಿ ಕದಿರೆಯಿಂದ 


 ಹೋದ ದಂಡಿಗೆ ಕೇಳಬೇಕು


ಕೋಳ್ಯೂರಿನ ದೇವಸ್ಥಾನಕ್ಕೆ ಹೋಗುತ್ತದೆ


ಕೋಳ್ಯೂರಿನ ಕುಂತ್ಯಮ್ಮ ದೇವಿಯ ಹರಿಕೆ ಸಲ್ಲಿಸಿ


ಬರಬೇಕೆಂದು ಹೋಗುವಾಗ 


 ಒಂದು ಗುಡ್ಡೆ ಒಂದು ಬೈಲನ್ನು


ದಾಟಿಕೊಂಡು ಇಳಿದುಕೊಂಡು ಹೋಗಿ ಮನೆಗೆ


ಹೋಗುವಾಗ ಹೋದ ದಂಡಿಗೆ ಬರುವಾಗ


ಬೇರೊಂದು ಹಾದಿಯಲ್ಲಿ ಹೋಗಿ ಎಂದು


ಹೋದ ದಾರಿಯಲ್ಲಿ ಬರುವುದು ಬೇಡ ಎಂದು


ಹೇಳಿದರು ಕದಿರೆಯ ಅರಸರು ಹೇಳಿದರು


ಕೋಳ್ಯೂರಿಗೆ ಹೋಗಿ ಎಂದು ಹೇಳಿದರು


ಕಳುಹಿಸಿದರು ಕದಿರೆಯ ಅರಸರು


ಕೋಳ್ಯೂರಿನ ದೇವಸ್ಥಾನದಲ್ಲಿ ಹೇಳಿದ ಹರಕೆಯನ್ನು


ಸಲ್ಲಿಸಿ ರಂಗಮೆ ಇಲ್ಲಿಯೇ ಬರುವಳೆಂದು


ಕಾದುಕೊಂಡು ಕುಳಿತುಕೊಳ್ಳುತ್ತಾನೆ ಭೈರವ ಅರಸ ಕುಳಿತಿದ್ದಾನೆ


ನಿನ್ನೆ ಹೋದ ದಂಡಿಗೆ ಇಂದಿನವರೆಗೆ ಬರಲಿಲ್ಲ


ಯಾಕಾಗಿ ಬರಲಿಲ್ಲವೆಂದು ಕಾದುಕುಳಿತಿದ್ದಾನೆ


ಭೈರರ ಕೇರಿಯ ಭೈರವ ಅರಸ


ದಂಡಿಗೆ ಮುಟ್ಟುತ್ತದೆ ಬರ್ಪಾನೆಂದ ಬೀಡಿಗೆ


ಯಾರಯ್ಯ ಅಣ್ಣನವರೆ ಅಣ್ಣನವರೆ ಕೇಳಿರಿ


ಭೈರವ ಕೇರಿಯಲ್ಲಿ ಹೋಗುವಾಗ ನನಗಾದರೂ


ಭೈರವ ಅರಸ ಕೀಟಲೆ ಮಾಡಿದ್ದಾನೆ


ದಂಡಿಗೆಯ ಕೊಂಬಿಗೆ ಕಯ ಹಾಕಿದ್ದಾನೆ


ಹಿಡಿಯಬೇಡ ಹಿಡಿಯಬೇಡ ಎಂದೆ ಅಣ್ಣನವರೆ


ನಾನು ಬರುತ್ತೇನೆಂದು ಹೇಳಿದೆ


ಹೋಗುವಾಗ ಬಿಡು ಬರುವಾಗ ಬರುತ್ತೇನೆ ಎಂದು ಹೇಳಿದೆ


ಹೋದಾಗ ಹೋದ ದಂಡಿಗೆ


ಹಿಂತಿರುಗುವಾಗ ಬೇರೆ ಒಂದು ದಾರಿಯಲ್ಲಿ ಬಂದಿತು


ಹೋಗುವಾಗ ಹಾಗೆ ಕುಳಿತುಕೊಂಡು ಬರುವಾಗ ಬನ್ನಿ ಎಂದು


ಭೈರವ ಅರಸು ಹೇಳಿದ್ದಾನೆ ಅಣ್ಣವರೇ 


 ಎಂದು ರಂಗಮೆ ಹೇಳಿದಳು


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನಾ


ಭೈರವ ಅರಸನ ಕೀಟಲೆಯನ್ನು ಪ್ರಶ್ನಿಸಲು


ನನಗೆ ಸಾಧ್ಯವಿಲ್ಲ ಶುದ್ಧ ಕಳ್ಳನಾತ 


 ಅವನ ಎದುರು ನಿಲ್ಲುವ ಸಾಮಥ್ರ್ಯ 


ನನಗಿಲ್ಲ ರಂಗಮೆ ಹೋಗಬೇಡ


ಹೋಗಬೇಡ ರಂಗಮೆ ಎಂದು ಹೇಳಿದೆ ನಾನು


ಹಠವನ್ನೇ ಹಿಡಿದು ಹೋದೆ ಎಂದು ಹೇಳಿದರು


ಯಾರು ಮಗಳೆ ರಂಗಮೆ ಬಂದ ಕಷ್ಟಕ್ಕೆ ನಾನು


ಒದಗಿ ಇರುವೆನೆಂದು ಹೇಳಿದರು ಅಣ್ಣನವರು


ಮೇದಾರ ಹಾಗೆ ಹೇಳಿದಾಗ 


 ಯಾರಯ್ಯ ಅಣ್ಣನವರೆ ಕೇಳಿರಿ


ಭೈರರ ಕೇರಿಯಿಂದ ಇಳಿದು ಹೋಗುವಾಗ


ಕದಿರೆಯ ಕಟ್ಟಹುಣೆಯಲ್ಲಿ ಹೋಗುವಾಗ ನೋಡಿದ್ದಾರೆ


ಕದಿರೆಯ ಅರಸುಗಳು ಹೇಳಿದರು


ಹೋದ ದಾರಿಯಲ್ಲಿ ಬರಬೇಡ ಮಗಳೆಂದು ಹೇಳಿದರು


ಕದಿರೆಯ ಅರಸುಗಳು ಹೇಳಿದರು


ಅವನು ಏನು ಮಾಡುತ್ತಾನೆ ಅವನನ್ನು ಏನು


ಮಾಡಬೇಕೆಂದು ನನಗೆ ಗೊತ್ತಿದೆ ಎಂದರು


ಅಷ್ಟು ಮಾತು ಕೇಳಿದರು ಅಣ್ಣ ಮೇದಾರರು


ಯಾರು ಮಗಳೆ ತಂಗಿ ಯಾರಮ್ಮ ಮಗಳೆ ರಂಗಮೆ


ನೀನು ಹಾಗೆ ಹೇಳಿದರೆ ಅವನು ಕೇಳುತ್ತಾನೆಯೇ?


ಓಲೆ ಬರೆದು ಕಳುಹಿಸಿ ಕೊಟ್ಟಿದ್ದಾನೆ ಭೈರವ


ಭೈರರ ಕೇರಿಗೆ ಹೇಗೆ ಹೋಗುವುದೆಂದು ಹೇಳುವಾಗ


ಅಣ್ಣ ಒಬ್ಬ ಮೇದಾರ ಹೇಳುವಾಗ


ಯಾರಯ್ಯ ಅಣ್ಣನವರೆ ಏನೊಂದು ಕಷ್ಟ ಕೊಟ್ಟರೂ


ನನ್ನನ್ನು ಪೊದು ಹಿಡಿದು ಕೊಡುವೆ ಎಂದು


ಹೇಳಬೇಡಿ ಅಣ್ಣನವರೇ ಎಂದು 


 ಹೇಳಿದಳು ಬಾಲೆ ರಂಗಮೆ ಹೇಳುವಾಗ


ಓಲೆ ಸಿಕ್ಕಿದ ತಕ್ಷಣ ಓಲೆ ಹಿಡಿದುಕೊಂಡು


ಭೈರರ ಕೇರಿಗೆ ಹೋಗುವಾಗ ಅಲ್ಲಿ 


 ಭೈರವ ಅರಸು ಒಂದು ಮುಳ್ಳಿನ


ಪಡಿಯನ್ನು ತೆಗೆಸಿದ್ದಾನೆ ತೆಂಗಿನ ಮರಕ್ಕೆ ಹತ್ತಿ


ಕುರುವಾಯಿ ತೆಗೆಸಿದ್ದಾನೆ ಹೆಣ್ಣು ಕೊಡುತ್ತೀಯಾ


ಪೊದು ಹಿಡಿಯುತ್ತೀಯಾ ಮೇದಾರ ಎಂದು ಕೇಳಿದಾಗ


ಹೆಣ್ಣು ಕೊಡಲು ಪೊದು ಹಿಡಿಯಲು 


 ನಾವು ಬಲ್ಲಾಳರು ನೀವು ಭೈರರು ಪೊದು ಹೇಗೆ ಹಿಡಿಯುವುದು? 


ಹೆಣ್ಣು ಹೇಗೆ ಕೊಡುವುದು?


ಸಾಧ್ಯ ಇಲ್ಲವೆಂದು ಹೇಳಿದರು ಮೇದಾರರು


ಅಷ್ಟು ಮಾತು ಕೇಳಿದನೆ ಭೈರವ


ಯಾರಯ್ಯ ಮೇದಾರ ಯಾರಯ್ಯ ಮೇದಾರ


ಏಳು ಮಾಳಿಗೆಯ ಮೇಲೆ ಕುಳ್ಳಿರಿಸುವೆ ರಂಗಮೆಯನ್ನು


ಗಿಳಿ ಸಾಕಿದ ಹಾಗೆ ಸಾಕುವೆನು ರಂಗಮೆಯನ್ನು


ಕಣ್ಣಿನಿಂದ ಒಂದು ಹನಿ ನೀರು ಬೀಳದಂತೆ


ಸಾಕುವೆನೆಂದು ಹೇಳಿದನು ಭೈರವ ಅರಸ ಹೇಳಿದನು


ಹೆಣ್ಣು ಕೊಡುವೆಯ? ಪೊದು ಹಿಡಿಯುವೆಯ? ಮೇದಾರ


ಎಂದು ಹೇಳಿದಾಗ ಹೇಳುತ್ತಾರೆ


ಹೆಣ್ಣು ಕೊಡಲಾರ ಸಂಬಂಧ ಹಿಡಿಯಲಾರೆ


ಸಂಬಂಧ ಹಿಡಿಯಲು ನೀನಾದರೂ ಭೈರವ


ಕೇರಿಯ ಭೈರವ ನಾನಾದರೂ ಕೊಡಲಾರೆ


ಅವಳ ಹತ್ತಿರ ಒಂದು ಮಾತು ಕೇಳಬೇಕು ಎನ್ನುತ್ತಾನೆ


ಹೆಣ್ಣು ನೋಡಲು ಸಂಬಂಧ ಹಿಡಿಯಲು


ನನ್ನದೊಂದು ಬೀಡಿಗೆ ಬರಬೇಕೆಂದು ಹೇಳಿದಾಗ


ಹೇಳಿದ ಮಾತು ಇಂದಲ್ಲ ಈ ವಾರವಲ್ಲ


ಬರುವ ವಾರದಲ್ಲಿ ಮದುವೆಯ ದಿಬ್ಬಣ ತೆಗೆದುಕೊಂಡು


ಬರುವೆನೆಂದು ಭೈರವರ ಅರಸು ಹೇಳುವಾಗ


ಅಷ್ಟೆಲ್ಲ ಮೇಲೆ ಹೋಗಬೇಡ ಅರಸು 


 ನನ್ನ ತಂಗಿ ಒಪ್ಪಿದಳೆಂದಾದರೂ


ಜಾತಿಯಲ್ಲಿ ನೀನು ಕೆಳಗೆ ನಾವು ಮೇಲು


ಜಾತಿಗಿಂತ ಕೆಳಗೆ ಹೆಣ್ಣು ಕೊಟ್ಟು 


 ಭೈರರ ಕೇರಿಗೆ ಬಲ್ಲಾಳರ ಹೆಣ್ಣನ್ನು


ಕೊಡುವುದು ಹೇಗೆಂದು ಹೇಳಿದರು


ಡೆನ್ನಾನಾ ಡೆನ್ನಾನಾ ಡೆನ್ನಾನಾ ಮೇದಾರ


ಜಾತಿಗೆ ನೀತಿಗೆ ಹೊತ್ತಲ್ಲ ಮೇದಾರ


ಹೆಣ್ಣು ಕೊಡುತ್ತೇನೆ ಹೆಣ್ಣು ಕೊಡುತ್ತೇನೆಂದು ಹೇಳು ಎಂದು


ಬೇಕು ಬೇಕಾದಂತೆ ಶಿಕ್ಷೆ ಕೊಟ್ಟನು 


 ಮುಳ್ಳಿನ ಮಂಚದಲ್ಲಿ ಮಲಗಿಸಿ ಮೇಲಿಗೆ


ಉರಿಯ ಮೂಡೆ ಹಾಕಿ ಮೂರುಸತ್ತು ಬಳೆದು


ಹೆಣ್ಣು ಕೊಡು ಮೇದಾರ ಸಂಬಂಧ ಹಿಡಿ ಮೇದಾರ ಎಂದಾಗ


ಹೆಣ್ಣು ನಾನು ಕೊಡಲಾರೆ ಸಂಬಂಧ ಹಿಡಿಯಲಾರೆಂದು


ಅಣ್ಣ ಒಬ್ಬ ಮೇದಾರರು ಹೇಳಿದರು


ಕೊಡುವ ಕಷ್ಟವನ್ನು ತಡೆಯಲಾಗದೆ ಹೇಳದರು


ಅವಳ ಹತ್ತಿರ ಒಂದು ಮಾತು ಕೇಳಿ ಒಪ್ಪಿಗೆ


ಪಡೆದು ಬರುವೆನೆಂದು ಹೇಳಿದರು ಮೇದಾರರು


ಅಷ್ಟು ಹೊತ್ತಿಗೆ ಭಾರೀ ಸಂತೋಷ


ಮದುವೆಯೆ ಆಗಬೇಕು ರಂಗಮೆ ಹೆಣ್ಣನ್ನು


ಮೇದಾರನ ತಂಗಿ ನನಗೆ ಆಗಬೇಕೆಂದು


ಊರೂರು ಪ್ರಚಾರ ಮಾಡುವನು 


 ಊರು ಕೇರಿಗೆ ಡಂಗುರ ಸಾರಿ


ಮೇದಾರನ ತಂಗಿಯನ್ನು ಮದುವೆ ಆಗುವುದೆಂದು


ಹೇಳಿದನು ಭೈರರ ಕೇರಿಯ ಅರಸು 


 ಮನೆಗೆ ಬಂದು ಕತ್ತಲೆ ಮನೆಯಲ್ಲಿ


ಮುಖ ಕೆಳಗೆ ಹಾಕಿ ಮಲಗಿದ್ದಾರೆ ಮೇದಾರರು 


 ಅಣ್ಣ ಒಬ್ಬ ಮೇದಾರ


ಯಾರಯ್ಯ ಅಣ್ಣನವರೇ ಅಣ್ಣನವರೇ ಎಲ್ಲಿಗೆ ಹೋದಿರಿ


ಹುಡುಕಿಕೊಂಡು ಬರುವಾಗ ಕತ್ತಲೆ ಕೋಣೆಯಲ್ಲಿ


ಮುಖ ಕೆಳಗೆ ಹಾಕಿ ಮಲಗಿದ್ದಾರೆ ಮೇದಾರರು


ಅಣ್ಣ ಒಬ್ಬ ಮೇದಾರ 


 ಯಾರಯ್ಯ ಅಣ್ಣನವರೆ ನಿಮಗೆ ಬಂದ ಕಷ್ಟ


ನನಗೆ ಬಂದ ಕಷ್ಟ ಬೇರೆ ಅಲ್ಲ


ಹೆಣ್ಣು ಕೊಡುತ್ತೇನೆ ಸಂಬಂಧ ಹಿಡಿಯುವೆಂದು


ಮಾತು ಹೇಳಿರಿ ಅಣ್ಣನವರೇ 


 ಎಂದು ಕಳುಹಿಸುತ್ತಾಳೆ ತಂಗಿ ರಂಗಮೆ


ಓಲೆಯ ಒಕ್ಕಣೆ ಬರೆದು ಕಳುಹಿಸುವರು


ಹೆಣ್ಣು ಕೊಡುತ್ತೇನೆ ಪೊದು ಹಿಡಿಯುತ್ತೇನೆ


ಬರುವ ವಾರದಲ್ಲಿ ದಿಬ್ಬಣ ತೆಗೆದುಕೊಂಡು


ಬರಬೇಕು ಎಂದರು ಬರ್ಪಾನೆಂದ ಬೀಡಿನಲ್ಲಿಯೇ


ಮದುವೆ ಎಂದರು ಅಣ್ಣ ಮೇದಾರ 


 ಅಷ್ಟು ಹೊತ್ತಿಗೆ...


ಡೆನ್ನಾನಾ ಡೆನ್ನಾನಾ ಓಯೋಯೇ ಡೆನ್ನಾನಾಯೇ


ಮದುವೆಯ ಸಿಂಗಾರ ಮಾಡಿದರು ರಂಗಮೆಗೆ


ಏಳು ಉಪ್ಪರಿಗೆಯ ಮೇಲೆ 


 ಒಂದು ಕೋಣೆಯಲ್ಲಿ ಸಿಂಗಾರ ಮಾಡಿ


ಕನ್ನಡಿಯ ಎದುರು ಕುಳ್ಳಿರಿಸುತ್ತಾರೆ 


 ಮಗಳನ್ನು ತಂಗಿ ಒಬ್ಬಳು ರಂಗಮೆ


ತಲೆ ಎತ್ತಿ ನೋಡುವಾಗ ಕಾಣುತ್ತದೆ


ಬರ್ಪಾನೆಂದ ಬೀಡಿನ ಕಂಬಳದ ಕಟ್ಟಹುಣಿಯಲ್ಲಿ


ಕೆಂಪು ಕೆಂಪು ಸೀಯಾಳ ದಿಬ್ಬಣ ಬರುತ್ತದೆ


ದಂಡಿಗೆಯಲ್ಲಿ ಬರುತ್ತಾನೆ ಭೈರರ ಕೇರಿಯ ಭೈರವರಸು


ಊಟ ಸಮ್ಮಾನ ಮಾಡಿದರು ಭೈರರು


ಮದುಮಗನ ಶೃಂಗಾರ ಮಾಡಿದರು ಭೈರರು


ಮದುಮಗಳನ್ನು ಕರೆದುಕೊಂಡು ಬಾ ಮೇದಾರ


ಎಂದು ಬೀಡಿನ ಕೆಲಸದ ಹೆಂಗಸರನ್ನು


ಮೇಲುಪ್ಪರಿಗೆಗೆ ಕಳುಹಿಸುವಾಗ ರಂಗಮೆ


ಹೊಟ್ಟೆನೋವು ಅಣ್ಣನವರೆ 


ನನ್ನ ಜೀವವೇ ಹೋಗುತ್ತದೆ ಅಣ್ಣನವರೆ


ಇದರಲ್ಲಿ ನಾನು ಬದುಕುವುದಿಲ್ಲ ಅಯ್ಯಯ್ಯೋ ಅಣ್ಣ


ಇದರಲ್ಲಿ ನಾನು ಬಾಳುವುದಿಲ್ಲ ಅಣ್ಣನವರೆ ಎಂದಳು


ತಂಗಿ ಮದುಮಗಳು ರಂಗಮೆ 


 ಅಷ್ಟು ಮಾತು ಕೇಳಿಕೊಂಡು ಮೇದಾರ


ಮೇಲುಪ್ಪರಿಗೆಯಿಂದ ಇಳಿದು ಬಮದು 


 ಬಾಲೆ ನನ್ನ ತಂಗಿ ಇವತ್ತಲ್ಲದಿದ್ದರೆ


ನಾಳೆಯಾದರೂ ಭೈರವರಸುವಿಗೆ ಹೆಂಡತಿ ಆಗುತ್ತಾಳೆ


ಅವಳಿಗೆ ಎದ್ದು ನಿಲ್ಲುವ ಶಕ್ತಿ ಇಲ್ಲ 


 ಎಂದು ಹೇಳುತ್ತಾರೆ ಅಣ್ಣ ಮೇದಾರ




ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನಾನಾ ಅಣ್ಣ ಮೇದಾರ


ಹೇಳಿದ ಮಾತು ಕೇಳಿದನು ಭೈರರು


ಬಾಗಿಲು ಹಾಕಿ ಹೋಗುವಾಗ ಹೇಳುತ್ತಾರೆ


ಇವತ್ತಲ್ಲ ನಾಳೆ ಎಂದರೆ ನಿಮಗಾಗುವುದಿಲ್ಲವಂತೆ


ದಂಡಿಗೆಯ ಕೊಂಬಿಗೆ ಧಾರೆ ಎರೆದು


ಬಂದ ದಿಬ್ಬಣ ಹೋಗಲಿ ಎಂದಳು 


 ತಂಗಿ ರಂಗಮೆ


ಅಣ್ಣ ಬಂದು ಹೇಳಿದ ಮಾತು 


ಕೇಳಿದನು ಭೈರರ ಕೇರಿಯ ಅರಸ


ಅಷ್ಟು ಭರವಸೆ ಇದ್ದರೆ ನನಗೆ 


ದಿಬ್ಬಣ ಹೋಗುವ ಮೊದಲು


ದಂಡಿಗೆಯ ಕೊಂಬಿಗೆ ಧಾರೆ ಎರೆದು 


 ಭೈರರ ಕೇರಿಗೆ ಹೊರಡುವಾಗ


ಹೆಣ್ಣನ್ನು ಕಳುಹಿಸುವ ದಿನದಂದು


ನಾವು ಬರುತ್ತೇವೆಂದು ಹೇಳಿದನು ಅರಸು


ಭೈರರ ಅರಸು ಹೇಳುವಾಗ 


 ನಿಮಗೆ ಮಾಣಿಯನ್ನು ನಾವು ಕಳುಹಿಸುತ್ತೇವೆ


ಭೈರರ ಅರಸುಗಳೆ ನಿಮಗೆ 


 ಈಗ ಹೋಗಿ ನಾಳೆಯೇ ಬನ್ನಿ ಎಂದು


ಅಣ್ಣ ಮೇದಾರ ಹೇಳಿದಾಗ 


 ಅಷ್ಟೊಂದು ಮಾತು ಕೇಳಿದನೆ ಭೈರವರಸ


ಊಟ ಔತಣ ಮಾಡಿ ಬಂದ 


 ದಿಬ್ಬಣವನ್ನು ತೆಗೆದುಕೊಂಡು ಹೋಗುತ್ತಾನೆ


ಆ ದಿನದ ಹೊತ್ತು ಹೋಗುತ್ತದೆ ಅರಸನಿಗೆ


ಮರುದಿನ ಇನ್ನೊಂದು ದಿನದಲ್ಲಿ ಅರಸ


ಬೆಳಗಿನ ಜಾವದಲ್ಲಿ ಎದ್ದು ನೋಡುವಾಗ


ಓಲೆಯ ಮಾಣಿ ಬರುತ್ತಾನೆ 


 ನನ್ನ ತಂಗಿ ಇದ್ದಾಳೆ ರಂಗಮೆ


ಮದುಮಗಳು ಆಗಿದ್ದಾಳೆ ಮುಟ್ಟು ಆಗಿದ್ದಾಳೆ


ನೀವಾದರೂ ಬರಬೇಕೆಂದು ಹೇಳಿ ಒಂದು


ಓಲೆಯ ಒಕ್ಕಣೆ ನೋಡುವನೇ ಭೈರವರಸ


ಮುಡಿ ಮುಡಿ ಅವಲಕ್ಕಿ ಕೆಂದಾಳಿ ಸೀಯಾಳ


ಬನ್ನಂಗಾಯಿ ಕಡಿದುಕೊಂಡು ಬರುವಾಗ


ಬರ್ಪಾನೆಂದ ಬೀಡಿನಲ್ಲಿ ಬಾರಿ ದೊಡ್ಡ ಹೊಗೆ


ದೂರದಿಂದ ಬರುವಾಗ ಕಾಣುತ್ತದೆ


ಯಾರಯ್ಯ ಬೋವಿಗಳೆ ಯಾರಯ್ಯ ಆಳುಗಳೇ


ಬರ್ಪಾನೆಂದ ಬೀಡಿನಲ್ಲಿ ಏನು 


 ಕಷ್ಟವೆಂದು ಹೇಳಿದನೇ ಅರಸ ಭೈರವರಸ


ಮನೆಗೆ ಹತ್ತಿರ ಹತ್ತಿರ ಹೋಗುವಾಗ ಕಾಣಿಸುತ್ತದೆ


ಬೆಂಕಿಯಾದರು ಕೊಟ್ಟಿದ್ದಾರೆ ಅರಿಯು ಮುರಿಯ ಅತ್ತುಕೊಂಡು


ಸುತ್ತಮುತ್ತ ನಿಂತಿದ್ದಾರೆ ದೊಡ್ಡ ಒಂದು ಕಷ್ಟವಂತೆ


ಮದುವೆ ಆಗಬೇಕೆಂದು ಹೇಳಿದಳು ಮಗಳು


ಉರಿದು ಸುಟ್ಟು ಬೂದಿ ಆಗಿದ್ದಾಳೆ ಮಗಳು


ಹೊಟ್ಟೆನೋವು ಆಗಿ ಕೈ ಬಿಟ್ಟು ಕೈಲಾಸಕ್ಕೆ


ಹೋಗಿದ್ದಾಳೆಂದು ಕೆಲಸದವರು ಹೇಳುವಾಗ


ಮೂಟೆ ಮೂಟೆ ಅವಲಕ್ಕಿಯನ್ನು ಕಾಷ್ಠಕ್ಕೆ ಹಾಕಿ


ಕೆಂಪು ಕೆಂಪು ಸೀಯಾಳ ಆಚೀಚೆ ಬಿಸಾಡಿ


ಇದೊಂದು ಜನ್ಮದಲ್ಲಿ ಗಂಡ ಹೆಂಡತಿ


ಆಗದಿದ್ದರೆ ಪರವಾಗಿಲ್ಲ ಇನ್ನೊಂದು ಜನ್ಮದಲ್ಲಿ


ಗಂಡ ಹೆಂಡತಿ ಆಗಿ ಒಟ್ಟಿಗೆ ಇರುವ ಎಂದು


ಕಾಷ್ಠಕ್ಕೆ ಹಾರಿದನು ಭೈರವ ಅರಸ


ಡೆನ್ನಾ ಡೆನ್ನಾ ಡೆನ್ನಾನಾ ಓಯೋಯೇ ಡೆನ್ನಾನಾ ಡೆನ್ನಾನಾಯೇ


ಯಾರಯ್ಯ ಭೈರವರಸ ನನ್ನೊಟ್ಟಿಗೆ ಸಾಯಬೇಕೆಂದು ಇದ್ದೆ


ಹೆಣ್ಣು ನಾಯಿಯೊಟ್ಟಿಗೆ ಸತ್ತೆಯಲ್ಲ ಭೈರವ ಅರಸ ಎಂದು ಹೇಳಿ


ಯಾರಯ್ಯ ಅಣ್ಣನವರೆ ನನ್ನನ್ನು ಕದಿರೆಯ ಅರಸನಿಗೆ


ಮದುವೆ ಮಾಡಿಕೊಡಿ ಅಣ್ಣನವರೇ


ನನ್ನನ್ನು ಮದುವೆ ಆಗುತ್ತೇನೆಂದು ಹೇಳಿದ್ದಾರೆಂದು


ಹೇಳಿದಳವಳು ಮದುಮಗಳು ರಂಗಮೆ


ಓಲೆಯನ್ನೇ ಬರೆದು ಮಾಣಿಯನ್ನು ಕಳುಹಿಸಿದರು ಮೇದಾರರು


ದಂಡಿಗೆಯಲ್ಲಿಯೇ ದಿಬ್ಬಣ ತಂದು ಬಂದರು ಕದಿರೆಯ ಅರಸರು


ಭಾರೀ ಶೃಂಗಾರ ಮಾಡಿ ಮದುವೆಯನ್ನು ಮಾಡಿ


ತಂಗಿಯನ್ನು ಕೊಟ್ಟರು ಅಣ್ಣ ಮೇದಾರರು


ದಂಡಿಗೆಯನ್ನು ಸಿಂಗಾರ ಮಾಡಿ ಕದಿರೆಯ ಅರಸನೊಂದಿಗೆ


ಕಳುಹಿಸಿಕೊಟ್ಟರು ಅಣ್ಣ ಒಬ್ಬ ಮೇದಾರರು


ಡೆನ್ನಾನಾ ಡೆನ್ನಾನಾ ಡೆನ್ನ ಡೆನ್ನ ಡೆನ್ನಾನಾ 


ಓಯೋಯೇ ಡೆನ್ನಾನಾ ಡೆನ್ನಾನಯೇ







ಪಾಡ್ದನದ ಕಥೆಗಳು

 ರೂಪದ ಶ್ರೀಕೃಷ್ಣ.ಶ್ರೀಕೃಷ್ಣನ ನಾಮಸ್ಮರಣೆ ಮಾಡುತ್ತಾನೆ. ಕೂಡಲೇ ತನ್ನ ನಿಜ ರೂಪವನ್ನು ತೋರುತ್ತಾನೆ. ಆ ಬಳಿಕ ಏಳು ರಾತ್ರಿ ಏಳು ಹಗಲು ರಾಧೆ ಮತ್ತು ಕೃಷ್ಣ ಜೊತೆಯಾಗಿ ಇರುತ್ತಾರೆ. ಇತ್ತ ಚಂದಬಾರಿ ತನ್ನ ಪತಿ ಶ್ರೀಕೃಷ್ಣ ಎಲ್ಲಿಗೆ ಹೋದನೆಂದು ಹುಡುಕುತ್ತಾ ರಾಧೆಯ ಮನೆಗೆ ಬರುತ್ತಾಳೆ. ಗೋಪಾಲನೂ ಮೇಲು ಮಾಳಿಗೆಯಲ್ಲಿ ಅಕ್ಕ ತಂಗಿ ಏಳು ರಾತ್ರಿ ಏಳು ಹಗಲು ಏನು ಮಾಡುತ್ತಿದ್ದಾರೆ ಎಂದು ಸಂಶಯ ತಾಳುತ್ತಾನೆ.©ಡಾ. ಲಕ್ಷ್ಮೀ ಜಿ ಪ್ರಸಾದ್ 


ಆಗರಾಧೆ ಮತ್ತು ಶ್ರೀಕೃಷ್ಣ ದೇವರು ಮಾಳಿಗೆ ಇಳಿದು ಬರುತ್ತಾರೆ. ಗೋಪಾಲನಲ್ಲಿ ಶ್ರೀಕೃಷ್ಣ ದೇವರು ರಾಧೆ ಎಂಜಲಾಗಿದ್ದಾಳೆ. ಅವಳು ನಿನಗೆ ಬೇಕೆ? ನಾನು ಕೊಂಡು ಹೋಗಲೇ? ಎಂದು ಕೇಳುತ್ತಾನೆ. ಗೋಪಾಲ, ರಾಧೆ ತನಗೆ ಬೇಡ, ನೀನೇ ಕರಕೊಂಡು ಹೋಗು ಎನ್ನುತ್ತಾನೆ.

©ಡಾ. ಲಕ್ಷ್ಮೀ ಜಿ ಪ್ರಸಾದ್ 

ಮುಂದೆ ಚಂದಬಾರಿ ಹಾಗೂ ರಾಧೆಯರನ್ನು ಕರೆದುಕೊಂಡು ಶ್ರೀಕೃಷ್ಣ ಮೇಲಿನ ಮಿರಿಲೋಕಕ್ಕೆ ಬರುತ್ತಾನೆ. ಅಲ್ಲಿ ರಾಧೆ, ಚಂದಬಾರಿ ಹಾಗೂ ಶ್ರೀಕೃಷ್ಣ ಸಂಸಾರ ನಡೆಸುತ್ತಾ ಇರುತ್ತಾರೆ. ಎಂದುಶ್ರೀಮತಿ ಶಾರದಾ ಜಿ. ಬಂಗೇರ ಅವರು ಹೇಳಿದ ಚಂದಬಾರಿ ರಾಧೆ ಸಿರಿಕೃಷ್ಣ ಪಾಡ್ದನದಲ್ಲಿ ಹೇಳಿದೆ.


ಇದೇ ರೀತಿನಾಗಸಿರಿ ಕನ್ನಗೆ ಪಾಡ್ದನದಲ್ಲಿ ಕೂಡ ಶ್ರೀಕೃಷ್ಣನನ್ನು ಸ್ತ್ರೀಲೋಲುಪನಂತೆ ಚಿತ್ರಿಸಲಾಗಿದೆ. ತುಳು ಜನಪದ ಸಾಹಿತ್ಯವಾದ ಪಾಡ್ದನಗಳಲ್ಲಿ ಶ್ರೀಕೃಷ್ಣನ ಪರಿಕಲ್ಪನೆ ವಿಶಿಷ್ಟವಾಗಿ ಮೂಡಿ ಬಂದಿದೆ. ದಾಸವರೇಣ್ಯರ ನಿಂದಾಸ್ತುತಿಗಳಂತೆ ಇವು ಕೂಡ ತುಳು ಜನಪದರ ನಿಂದಾಸ್ತುತಿಗಳೇ ಇರಬಹುದು.

©ಡಾ. ಲಕ್ಷ್ಮೀ ಜಿ ಪ್ರಸಾದ್ 

ಆಧಾರ : ಚಂದ ಬಾರಿ ರಾಧೆ ಗೋಪಾಲ ಪಾಡ್ದನ, ಹೇಳಿದವರು ಶಾರದಾ ಜಿ ಬಂಗೇರ