Wednesday 15 May 2013

ದೇವರ ದಾಸಿಮಯ್ಯನ ವಚನಗಳು -ಡಾ || ರಮೇಶ್ ಜಿ DIG OF POLICE(INTELLIGENCE) BANGALORE

           Vocaroo Voice Message click here                                     

                                         
ದೇವರ ದಾಸಿಮಯ್ಯನ ವಚನಗಳು -ಡಾ || ರಮೇಶ್ ಜಿ,DIG OF POLICE(INTELLIGENCE) BANGALORE

Friday 10 May 2013

ಭೂತಗಳ ಅದ್ಭುತ ಜಗತ್ತಿಗೆ ಪ್ರವೇಶ

                     

                   .  ಡಾಕ್ಟರೇಟ್ ಪದವಿಯ ಹಂಬಲ



     ಕೆಟ್ಟು ಪಟ್ಟಣ ಸೇರು ಎಂಬ ಹಾಗೆ ಸರಿಯಾದ ಉದ್ಯೋಗ ದೊರೆಯದೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ  ನಾವು ಕೂಡಾ ಉದ್ಯೋಗವನ್ನು ಹುಡುಕಿಗೊಂಡು  ಬಂದು ಬೆಂಗಳೂರಿಗೆ ಬಂದವರು . ೨೦೦೫  ರ ಆರಂಭದಲ್ಲಿ ನನ್ನ ಅಣ್ಣ ನ ಸಹಾಯದಿಂದ  ನನ್ನ ಪತಿ  ಗೋವಿಂದ ಪ್ರಸಾದರಿಗೆ ಬೆಂಗಳೂರಿನ  ಸಾಫ್ಟ್ ವೇರ್ ಕಂಪನಿ ಒಂದರಲ್ಲಿ ಉದ್ಯೋಗ ದೊರೆತ ಕಾರಣ ನಾವು ಮಂಗಳೂರಿನಿಂದ ಬೆಂಗಳೂರಿಗೆ ಬಂದೆವು.ಆಗ ನಾನು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜ್ ನಲ್ಲಿ ಅರೆಕಾಲಿಕ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ .ಅದಕ್ಕೆ ರಾಜಿನಾಮೆ ಕೊಡುವಾಗ ಮುಂದೆ ಬೆಂಗಳೂರಿನಲ್ಲಿ ನನಗೆ ಕೆಲಸ ಸಿಕ್ಕುತ್ತದೋ ಇಲ್ಲವೋ ಎಂಬ ಭಯ ನಂಗೆ ಕಾಡಿತ್ತು
ನಾವು ಬೆಂಗಳೂರಿಗೆ ಶಿಫ್ಟ್ ಆದ ಮಾರನೆ ದಿನ ಪತ್ರಿಕೆಯೊಂದರಲ್ಲಿ ಎ ಪಿ ಎಸ್ ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಗೆ ಆಹ್ವಾನಿಸಿ ದ್ದುದನ್ನು ನೋಡಿದೆ . ಗೋವಿಂದ ಪ್ರಸಾದ್ ಬೆಳಗ್ಗೆಯೇ ಎದ್ದು ತುಂಬಾ ಕೆಲಸ ಇದೆ ಅಂತ ಆಫೀಸ್ ಗೆ ಹೋಗಿದ್ದರು .ಆ ಕಾಲೇಜ್  ನಾವು ಇದ್ದ ವಿವೇಕಾನಂದ ನಗರದ ಹತ್ತಿರವೇ ಇದೆ ಎಂದು ನಮ್ಮ ನೆರೆಕರೆಯವರು ತಿಳಿಸಿದರು . ಇರಲಿ ನೋಡಿಯೇ ಬಿಡುವ ಎಂದು ಬೆಂಗಳೂರಿನ ಪರಿಚಯವೇ ಇಲ್ಲದ ನಾನು  ಮಗನೊಂದಿಗೆ ನನ್ನ ಸ್ಕೂಟರ್( ಸ್ಪಿರಿಟ್)  ಹತ್ತಿ  ಗಾಡಿ ಸ್ಟಾರ್ಟ್ ಮಾಡಿ ಅಲ್ಲಿಂದ ಮುಖ್ಯ ರಸ್ತೆಗೆ ತಂದು ಅಲ್ಲಿಂದ  ಅಲ್ಲಲ್ಲಿ ದಾರಿಹೋಕರಲ್ಲಿ ,ಅಂಗಡಿಯವರಲ್ಲಿ ಕೇಳಿಕೊಂಡು ಬಂದು ಆ ಕಾಲೇಜ್ ಗೆ ಹೇಗೋ ಬಂದೆ . ಆ ಹೊತ್ತಿಗಾಗುವಾಗ ಸಂದರ್ಶನ ಮುಗಿಯುವ ಹಂತಕ್ಕೆ ಬಂದಿತ್ತು . ಕೊನೆಯವಳಾಗಿ ಸಂದರ್ಶನ ಕೊಠಡಿಗೆ ಪ್ರವೇಶಿಸಿದೆ .ಆಗ ಅಲ್ಲಿದ್ದವರು ಯಾರನ್ನು ನನಗೆ ಪರಿಚಯ ಇರಲಿಲ್ಲಿಲ್ಲ .ಅನಂತರ ಅವರು ಯಾರೆಂದು ತಿಳಿಯಿತು . ಆಗ ಅಲ್ಲಿನ ಪ್ರಾಂಶುಪಾಲರಾಗಿದ್ದ ಡಾ||.ಕೆ . ಗೋಕುಲನಾಥರು  ಕನ್ನಡ ಉಪನ್ಯಾಸಕರು ಕೂಡ ಆಗಿದ್ದರು . ಛಂದಸ್ಸು  ಕಾವ್ಯ ಮೀಮಾಂಸೆ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿ  ಕೊನೆಯಲ್ಲಿ ನೀವು ಮೂರು ಎಂ ಎ ಪದವಿಗಳನ್ನು ಯಾಕೆ ಮಾಡಿದಿರಿ ?ಎಂದು ಕೇಳಿದರು .ಯಾಕೇಂತ ಹೇಳುವುದು ?! ನನ್ನ ಓದಿನ ಹುಚ್ಚನ್ನು !!
ನಾನು ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದೆ .ಆ ಒಂದೇ ಕಾರಣದಿಂದ ಎಲ್ಲರು ವಿಜ್ಞಾನ ತಗೊಳ್ತಾರೆ ಅಂತ ನಾನು ಕೂಡ ಅದನ್ನೇ ಆಯ್ಕೆ ಮಾಡಿಕೊಂಡೆ . ಪಿ ಯು ಸಿ  ಸೈನ್ಸ್ ತಗೊಂಡ ಕಾರಣಕ್ಕೆ ಬಿ ಎಸ್ ಸಿ  ಮಾಡಬೇಕಾಯ್ತು (ಎಂಜಿನೀರಿಂಗ್   ಮೆಡಿಕಲ್  ಓದುವಷ್ಟು ಒಳ್ಳೆ ಅಂಕಗಳನ್ನು ನಾನು ತೆಗೆದಿರಲಿಲ್ಲ !)ಬಿ ಎಸ್ ಸಿ ಓದುವಾಗ ಪ್ರಾಕ್ಟಿಕಲ್ ಮಾಡಿ ಒದ್ದಾಡುವಾಗ ನಂಗೆ ತಿಳಿಯಿತು ನಾನು ನಾನು ವಿಜ್ಞಾನಕ್ಕೆ ಸೂಕ್ತವಾದವಳಲ್ಲ . ಆರ್ಟ್ಸ್ ನನಗೆ ಸೂಕ್ತವಾದುದೆಂದು ಜ್ಞಾನೋದಯವಾಯಿತು .ನಾಟಕ ರಚನೆ ಅಭಿನಯ ಭಾಷಣ ಪ್ರಬಂಧ ಏಕಪಾತ್ರಾಭಿನಯ ಮೊದಲಾದವುಗಲ್ಲಿ ಅತೀವ ಆಸಕ್ತಿ ಹೊಂದಿದ್ದ ನನಗೆ ಸೈನ್ಸ್ ಸರಿಹೊಂದಲಾರದು ಅದಕ್ಕೆ ಆರ್ಟ್ಸ್ ಸರಿ ಎಂದು ನಿರ್ಧರಿಸಿದೆ .ವಿಜ್ಞಾನ ಪದವಿ ಪಡೆದಿದ್ದ ನಾನು ದ್ವಿತೀಯ ಭಾಷೆಯಾಗಿ ಸಂಸ್ಕೃತ ಓದಿದ್ದ ಕಾರಣ ನಾನು ಸಂಸ್ಕೃತದಲ್ಲಿ ಎಂ ಎ ಮಾಡಬೇಕಾಯಿತು . ಸಂಸ್ಕೃತ ಭಾಷೆ ಮೇಲೆ ವಿಶೇಷ ಆಸಕ್ತಿ ಕೂಡ ಇದ್ದ ಕಾರಣ  ಎಂ ಎ ಯಲ್ಲಿ ಮೊದಲ ರಾಂಕ್ ಅನ್ನು ಪಡೆದೆ . ಆದರೆ ತುಂಬಾ ಓದಬೇಕು ಎಂಬ ಆಸೆಯಿದ್ದ ನನಗೆ ಇದರಿಂದ ತೃಪ್ತಿಯಾಗಲಿಲ್ಲ  ಜೊತೆಗೆ  ಸಂಸ್ಕೃತಕ್ಕೆ  ಎಲ್ಲೂ ಕೂಡ ಸರಿಯಾದ ಉದ್ಯೋಗ ಅವಕಾಶ ಇರಲಿಲ್ಲ .ನಂಗೆ ಉಪನ್ಯಾಸಕಿಯಾಗಿ ಕೆಲಸ ಮಾಡಬೇಕೆಂಬ ಹಂಬಲ ತುಂಬಾ ಇತ್ತು .ಜೊತೆಗೆ ನಮ್ಮ ಆರ್ಥಿಕ ಪರಿಸ್ಥಿತಿ ಕೂಡಾ ಚೆನ್ನಾಗಿರಲಿಲ್ಲ ನಾನು ಕೂಡ ದುಡಿಯುವುದು ಅನಿವಾರ್ಯವಾಗಿತ್ತು . ಹಾಗಾಗಿ  ಅರೆಕಾಲಿಕ ಉಪನ್ಯಾಸಕಿ ಆಗಿದ್ದುಕೊಂಡೇ ಟ್ಯುಶನ್ ನೀಡಿಕೊಂಡು ಒಂದು ವೆರ್ಷದ ಮಗನನ್ನು ಸಂಭಾಳಿಸಿಕೊಂಡು ಹೇಗೋ  ಹಿಂದಿ ಎಂ ಎ ಮಾಡಿದೆ . ನಾನು ಸಂಸ್ಕೃತ ಎಂ ಎ ಓದುತ್ತಿರುವಾಗಲೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಹಿಂದಿ ಪರೀಕ್ಷೆಗಳಿಗೆ ಕಟ್ಟಿ ರಾಷ್ಟ್ರ ಭಾಷ ಪ್ರವೀಣ ಪಾಸು ಮಾಡಿದ್ದೆ.  ಹಾಗಾಗಿ ಹಿಂದಿ ಎಂ ಎ ಮಾಡುವುದು ಅಷ್ಟೇನೂ ನಂಗೆ ಕಷ್ಟವಾಗಲಿಲ್ಲ.  ಆದರೆ ಯಾಕೋ ಏನೋ ಹಿಂದಿ ಸಾಹಿತ್ಯದಲ್ಲಿ ಆಸಕ್ತಿ ಬರಲೇ ಇಲ್ಲ
ಆಸಕ್ತಿಯೇ ಇಲ್ಲದ ವಿಷಯವನ್ನು ವಿದ್ಯಾರ್ಥಿಗಳಿಗೆ ಪಾಠ  ಮಾಡುವುದು ಹೇಗೆ ? ಅವರಲ್ಲಿ  ಆಸಕ್ತಿ ಬೆಳೆಸುವದು ಹೇಗೆ?(ಈಗ ನನಗೆ ಹಿಂದಿ ಸಾಹಿತ್ಯದಲ್ಲಿ ಅಭಿರುಚಿ ಇದೆ  ಆಗ ಇರಲಿಲ್ಲ !) ಏನು ಮಾಡುವುದು  ಅಂತ ತಲೆ ಕೆಡಿಸುತ್ತಾ ಇರುವಾಗ ಕನ್ನಡ ಎಂ ಎ ಮಾಡಿದ್ರೆ ಹೇಗೆ ? ಅಂತ ಯೋಚನೆ ಹುಟ್ಟಿಕೊಂಡಿತು . ಹೇಗೂ ನನಗೆ  ಚಿಕ್ಕಂದಿನಿದಲೇ  ತುಂಬಾ  ಓದಬೇಕು ಎಂಬ ಹಂಬಲ  ಇತ್ತು ತಾನೇ. ಹಾಗಾಗಿ ಕನ್ನಡ ಎಂ  ಎ  ಓದುವುದು ನನಗೆ ಪ್ರಿಯವಾದ ವಿಚಾರವೇ ಆಗಿತ್ತು  ಆದರೆ.ಇವಳಿಗೆ ಸರಿ ಇಲ್ಲ ಅಂತ ಜನ ನಗಾಡಿದ್ರೆ ಅಂತ ಭಯ ."ನಗಾಡುದು ಯಾಕೆ? ನಗಾಡಿದ್ರೆ ನಗಾಡಲಿ ಈವತ್ತು ನಗಾಡಿದ ಜನರೇ ಗೆದ್ರೆ ಬೆನ್ನು ತಟ್ಟುತಾರೆ" ಎಂಬ ಅಮ್ಮನ ಧೈರ್ಯದ ನುಡಿ , ಪತಿ ಗೋವಿಂದ ಪ್ರಸಾದರ  ಬೆಂಬಲದೊಂದಿಗೆ  ಕನ್ನಡ ಎಂ ಎ ಗೆ ಕಟ್ಟಿದೆ . ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದೆ ಕೂಡ .ಜೊತೆಗೆ ಎಂ ಎ ಯಲ್ಲಿ ಜಾನಪದವನ್ನು ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿದ್ದು  ನನಗೆ ಜಾನಪದದೆಡೆಗೆ ತೀವ್ರವಾದ ಆಸಕ್ತಿ  ಬೆಳೆಯಲು ಕಾರಣವಾಯಿತು  ಜೊತೆಗೆ ಮೊದಲೇ ಕಥೆ ಕಾದಂಬರಿಗಳನ್ನು ತುಂಬಾ ಓದುತ್ತಿದ್ದ ನನಗೆ  ಕನ್ನಡ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಗಳು ತುಂಬಾ ಪ್ರಿಯವಾದವು .ಅವುಗಳ ಕುರಿತಾದ ಶಾಸ್ತ್ರೀಯ ಜ್ಞಾನ ಕೂಡ ದೊರೆಯಿತು . ಕನ್ನಡಕ್ಕೆ ವಿಪುಲ ಅವಕಾಶಗಳು ಕೂಡ ಇದ್ದವು ಈಗ ಕೂಡ ಇವೆ ! ಸರಿ! ಮುಂದೆ ಕನ್ನಡ ಉಪನ್ಯಾಸಕಿ ಆಗುವುದೆಂದು ನಿರ್ಧರಿಸಿದ್ದೆ .ಇದೆ ಸಮಯಕ್ಕೆ ಸರಿಯಾಗಿ ಆವು ಬೆಂಗಳೂರಿಗೆ ನಮ್ಮ ವಾಸ್ತವ್ಯ ಬದಲಾಯಿಸಿದ್ದೆವು .
ಈ ನನ್ನ ಕಥೆಯನ್ನು ಸಂಕ್ಷಿಪ್ತವಾಗಿ ಡಾ. ಕೆ . ಗೋಕುಲನಾಥರಿಗೆ ಹೇಳಿದೆ . ಆಗ ಅವರು ನೀವ್ಯಾಕೆ ಡಾಕ್ಟರೇಟ್ ಮಾಡಲಿಲ್ಲ? ಎಂದು ಕೇಳಿದರು . ಆಗ ನಾನು ಏನು ಉತ್ತರಿಸುವುದು ಅಂತ ಗೊತ್ತಾಗದೆ ಸುಮ್ಮನಾಗಿ ತಲೆತಗ್ಗಿಸಿದೆ . ಮುಂದೆ ಡಾಕ್ಟರೇಟ್ ಮಾಡುತ್ತೇನೆ ಎಂದು ಹೇಳುವ ಧೈರ್ಯ ಕೂಡ ನನಗಿರಲಿಲ್ಲ  ಆದರೂ ಎಂದಾದರು ನಾನು ಕೂಡಾ ಡಾಕ್ಟರೇಟ್ ಮಾಡಿ ಅವರಂತೆ ನನ್ನ ಹೆಸರಿನ ಮುಂದೆ ಡಾ ಎಂದು ಹಾಕಿಕೊಳ್ಳ ಬೇಕು  ಎಂಬ ಹಂಬಲ  ನಂಗೆ ಹುಟ್ಟಿಕೊಂಡಿತು
ಡಾಕ್ಟರೇಟ್ ಇಲ್ಲದ ಕಾರಣ ನನ್ನನ್ನು ಆಯ್ಕೆ ಮಾಡಿರಲಿಕ್ಕಿಲ್ಲ ಎಂದು ನಾನು ಭಾವಿಸಿದ್ದೆ .ಮತ್ತೆ ಒಂದೆರಡು ದಿವಸಗಳಲ್ಲಿ ಬೆಂಗಳೂರಿನ ಪ್ರತಿಷ್ಟಿತ  ಜೈನ್ ಕಾಲೇಜ್ ನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನ ಎದುರಿಸಿ ಆಯ್ಕೆಯಾದೆ .ಅಲ್ಲಿ ಉತ್ತಮ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳು ಇದ್ದವು  ಆ ಕನ್ನಡ ಎಂ ಎ ಓದುತ್ತಿರುವಾಗ ಕನ್ನಡ ಸಾಹಿತ್ಯ , ಕಾವ್ಯಮೀಮಾಂಸೆ ,ಜಾನಪದದಲ್ಲಿ  ನನಗೆ ಅತಿಯಾದ ಆಸಕ್ತಿ ಮೂಡಿತ್ತು . ಹಾಗಾಗಿ ಮುಂದೆ ಕನ್ನಡದಲ್ಲಿ ಮುಂದುವರಿಯುವುದು ಎಂದು ನಿರ್ಧರಿಸಿದ್ದೆ . ಆದ್ದರಿಂದ  ನನಗೆ  ಸಂಸ್ಕೃತಕ್ಕೆ ಆಯ್ಕೆ ಆದದ್ದು ಏನು ಕುಶಿ ತಂದಿರಲಿಲ್ಲ .ಒಂದುವಾರದ ಒಳಗೆ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಬೇಕಿತ್ತು .ಎ ಪಿ ಎಸ್ ಕಾಲೇಜ್ ನಲ್ಲಿ ಕನ್ನಡ  ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿದ್ದರೆ  ಚೆನ್ನಾಗಿರ್ತಿತ್ತು ಅಂದುಕೊಂಡೇ ಜೈನ್ ಕಾಲೇಜ್ ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗುವುದನ್ನು ಕೊನೆ ದಿನಕ್ಕೆ  ಮುಂದೂಡಿದೆ .ಇನ್ನೇನು ಮರು ದಿನ ಜೈನ್ ಕಾಲೇಜ್ನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಗೆ ಹಾಜರಾಗಿ ವರದಿ ಮಾಡಿಕೊಳ್ಳುವುದು ಎನ್ನುವಷ್ಟರಲ್ಲಿ ಡಾ. ಕೆ  ಗೋಕುಲ ನಾಥರು ಫೋನ್ ಮಾಡಿ ನಾನು ಅವರ ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ಬಗ್ಗೆ ತಿಳಿಸಿದರು .ಅಲ್ಲಿ ಜೈನ್ ಕಾಲೇಜ್ ನಷ್ಟು ವೇತನ ಹಾಗೂ ಇತರ ಸೌಲಭ್ಯಗಳು  ಇರಲಿಲ್ಲ  .ಆದರು ಕನ್ನಡವೇ ಬೇಕು ಎಂದು ನಾನು ಅಲ್ಲಿ ಮರು ದಿನವೇ ಕರ್ತವ್ಯಕ್ಕೆ  ಹಾಜರಾಗಿ ವರದಿ ಮಾಡಿಕೊಂಡೆ .  ಆ ಕ್ಷಣ  ಅಮೃತ ಘಳಿಗೆಯೇ  ಇರಬೇಕು ! ನನ್ನ ಜೀವನದ ದಿಕ್ಕು ಬದಲಾಯಿಸಿದ ಕ್ಷಣ ಅದು .ಆ ಕಾಲೇಜ್ ನಲ್ಲಿ ಅನೇಕ ಉಪನ್ಯಾಸಕರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು .ಆದ್ದರಿಂದ  ಡಾಕ್ಟರೇಟ್ ಪದವಿ ಪಡೆಯಬೇಕೆಂಬ ನನ್ನ ಹಂಬಲ ಗಟ್ಟಿಯಾಯಿತು

 
               ಗರಿಗೆದರಿದ ಡಾಕ್ಟರೇಟ್  ಕನಸು 

 ನಾನು ಎ ಪಿ ಎಸ್ ಕಾಲೇಜ್ ಗೆ ಸೇರಿದ ಒಂದು ವಾರ ಆಗಿತ್ತು ಆ ದಿನದ  ಕೆಲಸ ಮುಗಿದು ಗ್ರಂಥಾಲಯದಲ್ಲಿ ಏನೋ ಪತ್ರಿಕೆ ಹಿಡಿದು ಓದುತ್ತಾ ಇರುವಾಗ ಅಟೆಂಡರ್  ಬಂದು ಪ್ರಿನ್ಸಿಪಾಲ್  ಕರೆಯುತ್ತಿದ್ದಾರೆ  ಎಂದು ಹೇಳಿದಾಗ ತಕ್ಷಣವೇ ಎದ್ದು ಗಾಬರಿಯಿಂದ ಪ್ರಿನ್ಸಿಪಾಲ ರ ಚೇಂಬರ್ ಗೆ ಹೋದೆ . ಅವರಿಗೆ ವಿಶ್ ಮಾಡಿ ನಿಂತೆ . ಪ್ರತಿಯಾಗಿ ವಿಶ್ ಮಾಡಿದ ಪ್ರಿನ್ಸಿಪಾಲ್ ನನ್ನನ್ನು ಕುಳಿತುಕೊಳ್ಳಲು ಹೇಳಿದರು . ಡಾ. ಕೆ ಗೋಕುಲನಾಥರು ಬಹಳ ಸಹೃದಯಿ  . ಸಹೋದ್ಯೋಗಿಗಳನ್ನು ಎಂದೂ ನಿಲ್ಲಿಸಿ ಮಾತನಾಡುತ್ತಿರಲಿಲ್ಲ . ಕಾಲೇಜ್  ಹೇಗೆ ಅನಿಸ್ತದೆ ?ವಿದ್ಯಾರ್ಥಿಗಳು  ಎಲ್ಲ ಹೊಂದಿಕೊಂಡಿದ್ದಾರೆಯೇ ? ಎಂದು ವಿಚಾರಿಸಿದರು . ನಂತರ ನೀವೇಕೆ ಡಾಕ್ಟರೇಟ್ ಮಾಡಲಿಲ್ಲ ? ನಾನು ಇಂಟರ್ವ್ಯೂ ನಲ್ಲಿ ಈ ಬಗ್ಗೆ ಕೇಳಿದಾಗ ನೀವೇನು ಹೇಳಲಿಲ್ಲ ಎಂದು ಕೇಳಿದರು . ಈಗ ಬಾಯ್ ಬಿಡುವುದು ಅನಿವಾರ್ಯವಾಯಿತು ನನಗೆ . " ಪಿ ಎಚ್ ಡಿ ಮಾಡಲು ನನ್ನಿಂದ ಸಾಧ್ಯವಿಲ್ಲ  ಸಂಶೋಧನಾ ಪ್ರಬಂಧ  ಬರೆಯುವಷ್ಟು ಜ್ಞಾನ ನನಗಿಲ್ಲ ಅದಕ್ಕೆ ತುಂಬಾ ಓದಿರಬೇಕು ತುಂಬಾ  ತಿಳಿದು ಕೊಂಡಿರ ಬೇಕು  ತುಂಬಾ  ಜ್ಞಾನ ಬೇಕಲ್ವಾ  ಸರ್ .? "ಎಂದು ಹಿಂಜರಿಯುತ್ತಾ ಹೇಳಿದೆ .
ನನ್ನಿಂದ ಡಾಕ್ಟರೇಟ್  ಪದವಿ ಪಡೆಯಲು ಬೇಕಾದ ಸಂಶೋಧನಾ ಪ್ರಬಂಧ ರಚನೆ ಅಸಾಧ್ಯ ಎಂದೇ ನಾನು ಭಾವಿಸಿದ್ದೆ  . ನನ್ನ ಈ ಭಯಕ್ಕೆ ಕಾರಣ ಕೂಡಾ ಇತ್ತು . ನಾನು ಉಜಿರೆಯಲ್ಲಿ ಬಿ ಎಸ್ ಸಿ ಓದುತ್ತಿರುವಾಗ ನಮ್ಮ ಕಾಲೇಜ್ ಗೆ ಪಿ ಎಚ್  ಡಿ ಪದವಿ ಪಡೆದಿದ್ದ ಮೇಡಂ ಒಬ್ಬರು ಸಂಸ್ಕೃತ ಉಪನ್ಯಾಸಕಿ ಆಗಿ ಬಂದಿದ್ದರು . ಹೊಸ ಮೇಡಂ ಹತ್ರ ಮಾತನಾಡಿ ಬರೋಣ ಅಂತ ನಾನು ನನ್ನ ಗೆಳತಿ ಗಾಯತ್ರಿ ಹಾಗೂ ಇನ್ನಿತರರು ಅವರ ಬಳಿಗೆ ಹೋದೆವು . ಬಹಳ ಒಳ್ಳೆಯ ಮೇಡಂ ಅವರು ಪಿಎಚ್  ಡಿ ಆಗಿದೆ ಅಂತ ಒಂಚೂರು ಗರ್ವ ಅವರಲ್ಲಿರಲಿಲ್ಲ . ನಮ್ಮ ಹತ್ತಿರ ಚೆನ್ನಾಗಿ ಮಾತಾಡಿದರು . ಆಗ ನಾವು "ಡಾಕ್ಟರೇಟ್  ಹೇಗೆ ಪಡೆಯೋದು ಅದಕ್ಕೆ ಏನು ಮಾಡ್ಬೇಕು ? ad ತುಂಬಾ ಕಷ್ಟ ಅಲ್ವಾ ? ನೀವು ಹೇಗೆ ಪಿ ಎಚ್ ಡಿ ಮಾಡಿದ್ರಿ ಇತ್ಯಾದಿಯಾಗಿ ನಾನಾ ಪ್ರಶ್ನೆಗಳನ್ನು  ಕೇಳಿದೆವು . ಆಗ ಅವರು "ಹೌದು ಪಿ ಎಚ್ ಡಿ ಮಾಡುವುದು ತುಂಬಾ ಕಷ್ಟದ  ವಿಚಾರ . ತುಂಬಾ ಪರಿಶ್ರಮ ಪಡಬೇಕು "ಎಂದು ಹೇಳಿದರು  . ಆಗ ನಾವು ಹಾಗಾದ್ರೆ ನೀವು ಅಷ್ಟು ಕಷ್ಟದ್ದನ್ನು ಹೇಗೆ ಮಾಡಿದ್ರಿ ?ಎಂದು ಪ್ರಶ್ನಿಸಿದೆವು . ಆಗ ಅವರು ನಾನು ದಿನಾ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಯೋಗ ಮಾಡ್ತೇನೆ ಧ್ಯಾನ ಮಾಡ್ತೇನೆ . ಆದ್ದರಿಂದ ನನಗೆ ಡಾಕ್ಟರೇಟ್  ಪದವಿ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು
. ಅಷ್ಟೆ ನನ್ನ ಎದೆ ಧಸಕ್ಕೆಂದಿತು!! ನನ್ನ ಜನ್ಮದಲ್ಲಿ ನನ್ನಿಂದ ಬೆಳಗ್ಗೆ ನಾಲ್ಕು ಗಂಟೆಗೆ ಏಳಲು ಸಾಧ್ಯವೇ ಇಲ್ಲ  .ಪರೀಕ್ಷೆಯ ಸಮಯದಲ್ಲಿ ಕೂಡ ನಾನು ಒಂದು ದಿನ ಕೂಡ ಬೆಳಿಗ್ಗೆ ಏಳು ಗಂಟೆ ಗಿಂತ ಮೊದಲು ಎದ್ದವಳಲ್ಲ  ! ನಾನು ರಾತ್ರಿ ೧-೨ ಗಂಟೆಯವರೆಗೆ ಕೂತು ಓದಿ ಬರೆದು ಮಾಡಬಲ್ಲೆ ಆದರೆ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವುದನ್ನು ನೆನೆಯಲು ಕೂಡ ಭಯಪಡುವ ಸ್ವಭಾವ ನನ್ನದು ! ಹಾಗಿರುವಾಗ ದಿನಾ  ಬೆಳಗ್ಗೆ ಎದ್ದು ಯೋಗ ಧ್ಯಾನ ಮಾಡಬೇಕು ಎಂದಾದರೆ !ಓ ದೇವರೇ  ನನ್ನಿಂದ ಡಾಕ್ಟರೇಟ್  ಮಾಡಲು ನನ್ನಿಂದ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ  ಅಂದೇ ನಾನು ಬಂದಿದ್ದೆ .
   ಆದರಿಂದಲೇ  ಡಾಕ್ಟರೇಟ್ ಮಾಡಲು ನನ್ನಿಂದ ಸಾಧ್ಯವಾಗಲಾರದು ಎಂದು  ಗೋಕುಲನಾಥರಲ್ಲಿ ಹೇಳಿದ್ದೆ . ನನ್ನ ಮೂರ್ಖತನ ನೋಡಿ ಅವರಿಗೆ ಸಿಟ್ಟು ಬಂದಿರಬೇಕು . ಬಾಯಲ್ಲಿ ಏನು ಹೇಳಲಿಲ್ಲ . ಆದರೆ ಅವರ ಮುಖ ಕೆಂಪಾದದ್ದು ನೋಡಿ ಅವರಿಗೆ ಕೋಪ ಬಂದಿದೆ ಅಂತ ನನಗೆ ಗೊತ್ತಾಯಿತು . ಮರು ದಿನ ನನ್ನನ್ನು ಕರೆದು ಏಳೆಂಟು ಪುಸ್ತಕಗಳನ್ನು ನೀಡಿ ಓದಿ ನೋಡಿ ಎಂದು ಹೇಳಿದರು . ಸರಿ ಎಂದು ಮನೆಗೆ ತಂದು ಓದಲು ಆರಂಭಿಸಿದೆ . ಆ ಎಲ್ಲ ಪುಸ್ತಕಗಳು ಪ್ರಕಟವಾದ ಪಿ ಎಚ್ ಡಿ ಸಂಶೋಧನಾ ಪ್ರಬಂಧ ಗಳಾಗಿದ್ದವು . ಒಂದರಿಂದೊಂದು ಚೆನ್ನಾಗಿದ್ದವು ಎರಡೇ ದಿವಸಗಳಲ್ಲಿ ಓದಿ ಪುಸ್ತಕಗಳನ್ನು ಹಿಂದೆ ಕೊಡಲು ಹೋದೆ ಅವರು ". ಈ ಪುಸ್ತಕಗಳನ್ನು ಓದಿ ಏನನ್ನಿಸಿತು . ಇಂತಹ ಒಂದು ಸಂಶೋಧನಾ ಪ್ರಬಂಧ ರಚನೆ ನಿಮ್ಮಿಂದ ಸಾಧ್ಯವಿಲ್ಲವೇ ?"ಎಂದು ಕೇಳಿದರು . ಆ ಪುಸ್ತಕಗಳನ್ನು ಓದಿದಾಗ ನನಗೂ ಸಂಶೋಧನಾ ನಿಬಂಧ ರಚಿಸಬಹುದು ಎಂಬ ಧೈರ್ಯ ಬಂದಿತ್ತು . ಹಾಗಾಗಿ  ನನ್ನಿಂದ ಸಾಧ್ಯ  ನಾನು ಡಾಕ್ಟರೇಟ್ ಮಾಡುತ್ತೇನೆ ಎಂದು ಆತ್ಮ ವಿಶ್ವಾಸದಿಂದ ನುಡಿದೆ .
ಮತ್ತೆ ಒಂದೆರಡು ತಿಂಗಳು ಕಳೆಯುವುದರೊಳಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ  ಸಂಶೋಧನಾ ಕೇಂದ್ರವಾಗಿರುವ ಬಿ ಎಂ ಶ್ರೀ ಪ್ರತಿಷ್ಟಾನ ಪಿ ಎಚ್ ಡಿ ಪದವಿ ಅಧ್ಯಯನ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತು . ನಾನು ಅರ್ಜಿ ಸಲ್ಲಿಸಿದೆ . ನಿಗದಿತ ದಿನದಂದು ಲಿಖಿತ ಪರೀಕ್ಷೆ ನಡೆಯಿತು . ಅದೇ ದಿನ ಸಂಜೆ  ಮೌಖಿಕ ಪರೀಕ್ಷೆ ಇತ್ತು  ಲಿಖಿತ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೆ . ಬೆಂಗಳೂರಿಗೆ ಹೊಸಾಬಳಾ ದ ನನಗೆ ಬಿ ಎಂ ಶ್ರೀ ಅಧ್ಯಯನ ಕೇಂದ್ರದ ಮುಖ್ಯಸ್ತರನ್ನಾಗಲಿ  ಅಧ್ಯಯನ ಕೇಂದ್ರದ ನಿರ್ದೇಶಕರಾದ ಮಲ್ಲೇಪುರಂ ವೆಂಕಟೇಶ್ (ಈಗ ಸಂಸ್ಕೃತ ವಿಶ್ವ  ವಿದ್ಯಾಲಯದ ಉಪ ಕುಲಪತಿಗಳಾಗಿದ್ದಾರೆ ) ಅವರನ್ನಾಗಲಿ ಪರಿಚಯ ಇರಲಿಲ್ಲ . ಹಾಗಾಗಿ ಮೌಖಿಕ ಪರೀಕ್ಷೆ ಏನಾಗುತ್ತೋ ಅನ್ನುವ ಭಯ ಕಾಡಿತು . ಆದರು ಇರಲಿ ನೋಡಿಯೇ ಬಿಡುವ ಏನಾಗುತ್ತೋ ಆಗಲಿ ಎಂದು  ಧವಗುಡುತ್ತಿರುವ  ಎದೆಯನ್ನು  ಸಮಸ್ತಿತಿಗೆ ತರಲು ಯತ್ನಿಸುತ್ತಾ  ಪರೀಕ್ಷಾ ಮಂಡಳಿಯ ಎದುರು ಹೋಗಿ ಕುಳಿತೆ . ಅಲ್ಲಿದ್ದ ಹಿರಿಯ ವಿದ್ವಾಂಸರು (ಅವರು  ಪ್ರೊ . ಡಿ ಲಿಂಗಯ್ಯ , ಪ್ರೊ ಬಸವಾರಾಧ್ಯ , ಡಾ|। ವೆಂಕಟಾಚಲ ಶಾಸ್ತ್ರೀ ,ಪ್ರೊ ಗೀತಾಚಾರ್ಯ , ಡಾ ॥ ಮಲ್ಲೇಪುರಂ ವೆಂಕಟೇಶ್  ಎಂದು ಆಮೇಲೆ ತಿಳಿಯಿತು ) ನನ್ನ ಗಾಬರಿ ನೋಡಿ "ಭಯ ಬೇಡ ನಿಮಗೆ ತಿಳಿದಿರುವುದನ್ನು ಹೇಳಿ ನಾವ್ಯಾರು ಸರ್ವಜ್ಞರಲ್ಲ  ಎಂದು ಹೇಳಿ ಧೈರ್ಯ ತುಂಬಿ ಅನೇಕ ಪ್ರಶ್ನೆಗಳನ್ನು ಕೇಳಿದರು ನಾನು ಸಮರ್ಪಕವಾಗಿ ಉತ್ತರಿಸಿದೆ . ನೀವು ಆಯ್ಕೆಯಾದರೆ ಯಾವ ವಿಷಯದಲ್ಲಿ ಪಿ ಎಚ್ ಡಿ ಮಾಡಲು ನಿರ್ಧರಿಸಿದ್ದೀರಿ ? ಎಂದು ಕೇಳಿದರು . ಈ ಪ್ರಶ್ನೆ ಯನ್ನು ನಾನು ಮೊದಲೇ ನಿರೀಕ್ಷಿಸಿದ್ದೆ .ಜಾನಪದ ಕುರಿತು ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ನಾನು ಅದಾಗಲೇ  ತುಳುನಾಡಿನ ದೈವಗಳ ಅಧಿದೈವವಾದ ನಾಗ ಬ್ರಹ್ಮ ದೈವದ ಮೇಲೆ ಅಧ್ಯಯನ ಮಾಡುವುದೆಂದು ನಿರ್ಧರಿಸಿದ್ದೆ . ಆದ್ದರಿಂದ ಅದನ್ನೇ ಅಲ್ಲಿ ಹೇಳಿದೆ ಆಗ ಭೂತಾರಾಧನೆ ಬಗ್ಗೆ ಈಗಗಾಗಲೇ ಚಿನ್ನಪ್ಪ ಗೌಡ ಮೊದಲಾದವರು ಅಧ್ಯಯನ ಮಾಡಿದ್ದಾರೆ ನೀವೇನು ಮಾಡುತ್ತೀರಿ ಅದರಲ್ಲಿ? ಎಂದು ಕೇಳಿದರು . ಆಗ ನಾನು ಡಾ॥ ಬಿ ಎ ವಿವೇಕ ರೈ  ಡಾ । ಅಮೃತ ಸೋಮೇಶ್ವರ ಮೊದಲಾದವರು ತುಳುವ ಬ್ರಹ್ಮ (ಬೆರ್ಮೆರ್) ದೈವದ ಕುರಿತು ಅಧ್ಯಯನವಾಗಬೇಕು ಎಂದು ಹೇಳಿರುವ ಬಗ್ಗೆ ಮತ್ತು  ನಾಗ ಬ್ರಹ್ಮ ನ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯತೆಯ ಬಗ್ಗೆ ಆಧಾರ ಸಹಿತ ವಾಗಿ ವಿವರಿಸಿದೆ . ನನ್ನ ವಿವರಣೆಯನ್ನು ಕೇಳಿದ ಆ ವಿದ್ವಾಂಸರ ಮುಖಗಳಲ್ಲಿ ಮೆಚ್ಚುಗೆಯ ನಗು ಮೂಡಿದ್ದು ಕಂಡು ನನಗೆ ತುಸು ನಿರಾಳ ಆಯಿತು . ಅಲ್ಲಿ ಮೂವರಿಗೆ ಡಾಕ್ಟರೇಟ್ ಮಾಡಲು ಅವಕಾಶ ಇತ್ತು  ಆ ಮೂವರಲ್ಲಿ ಒಬ್ಬಳಾಗಿ ನಾನು ಆಯ್ಕೆಯಾದೆ.   ಅಲ್ಲಿಂದ ನನ್ನ ಡಾಕ್ಟರೇಟ್  ಕನಸು ಗರಿಗೆದರಿ     ಆಕಾಶದೆತ್ತರಕೆ ಹಾರಿತು !
  ಆಕಾಶಕ್ಕೆ ಏರಿದ್ದು ಭೂಮಿಯ ವಾಸ್ತವಕ್ಕೆ ಇಳಿಯಲು ಹೆಚ್ಚು ದಿನ ಬೇಕಾಗಲಿಲ್ಲ . ಯಾಕೆಂದರೆ ನಾನು ಆಯ್ಕೆ ಮಾಡಿದ್ದು ಕ್ಷೇತ್ರ ಕಾರ್ಯ ಆಧಾರಿತ ಸಂಶೋಧನಾ ವಿಷಯವನ್ನು . ತುಳುನಾಡಿನ ಭೂತಗಳ ಆರಾಧನೆ ರಾತ್ರಿ ಹೊತ್ತಿನಲ್ಲಿ ನಡೆಯುತ್ತದೆ . ಅನೇಕೆ ವಿಧಿ ನಿಷೇಧಗಳು ಇಲ್ಲಿವೆ.  ಆದ್ದರಿಂದ ಈ ಭೂತಗಳ ಬಗೆಗೆ ಅಧ್ಯಯನ ಮಾಡುವುದು ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೆ ಕೂಡಾ ಕಷ್ಟ ಸಾಧ್ಯವಾದ ವಿಚಾರ . ಆದ್ದರಿಂದ ಇಂದಿಗೂ ತುಳುನಾಡಿನಲ್ಲಿ ಕ್ಷೇತ್ರ ಕಾರ್ಯ ಆಧಾರಿತ         ಭೂತಾರಾಧನ ಕ್ಷೇತ್ರದಲ್ಲಿ ಅಧ್ಯಯನ ಮಾಡಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ
ಅಂತು ಇಂತೂ ನಾನು ಅನಿರೀಕ್ಷಿತವಾಗಿ ಭೂತಗಳ ಅದ್ಭುತ ಜಗತ್ತಿಗೆ ಪ್ರವೇಶ ಪಡೆದಿದ್ದೆ

Thursday 18 April 2013

ಹೀಗೊಂದು ಎಂ ಫಿಲ್ ಪುರಾಣ -ಡಾ.ಲಕ್ಷ್ಮೀ ಜಿ ಪ್ರಸಾದ

                             

                      
ಕೆಲ ತಿಂಗಳ ಮೊದಲು  ನಾನು ಬೆಳ್ಳಾರೆಗೆ ಹೋದಾಗ ಇಬ್ಬರು ಯುವಕರು ನನ್ನನ್ನು ಬೇಟಿ ಮಾಡಿ "ನಾವು ನಿಮ್ಮ ಮೇಲೆ ಎಂ ಫಿಲ್ ಮಾಡ್ತೇವೆ. ನಿಮ್ಮ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದರು !
ನನಗೆ ಒಂದು ಕ್ಷಣ ಗಡಿ ಬಿಡಿ ಆಯಿತು.ಸುಧಾರಿಸಿಕೊಂಡು "ಸರಿ ನನ್ನ ಬಗ್ಗೆ ಏನು ಯಾವ ತರಹ ಸಂಶೋಧನೆ ? ಕೇಳಿದೆ .ಒಬ್ಬಾತ ಮೇಡಂ "ನಾನು ನಿಮ್ಮ ಕೃತಿಗಳ ಬಗ್ಗೆ ಡಾ.ಲಕ್ಷ್ಮಿ ಜಿ ಪ್ರಸಾದರ ಕೃತಿಗಳು-ಒಂದು ಅಧ್ಯಯನ ಅಂತ ಮಾಡುತ್ತೇನೆ .ಇವನು ನಿಮ್ಮ ಬದುಕಿನ ಕುರಿತು ಮಾಡೋದು" ಅಂತ ಹೇಳಿದ. 
ಹ್ಹಾ !!
ನನ್ನ ಮೇಲೆ ಇಬ್ಬರು ಸಂಶೋಧನೆ ಮಾಡಿ ಎರಡು ಸಂಪ್ರಬಂಧ ರಚನೆಯೆ?! ಇವರು ನನ್ನನ್ನು ಬೇರೆ ಯಾರೋ ಅಂತ ತಪ್ಪು ತಿಳಿದಿರಬಹುದು ಅಂತ ಪುನಃ ವಿಚಾರಿಸಿದೆ .ಇಲ್ಲ ಅವರು ನನ್ನನ್ನೇ ಹುಡುಕಿಕೊಂಡು ಬಂದಿದ್ದರು .ಒಬ್ಬಾತ ಬೆಟ್ಟಂಪಾಡಿ ಇನ್ನೊಬ್ಬಾತ ಸವಣೂರು ಆಸುಪಾಸಿನಲ್ಲಿರುವ ಹುಡುಗ.


"ನನ್ನ ಮೇಲೆ ಸಂಶೋಧನೆ ಮಾಡ್ಲಿಕೆ ಏನಿದೆ? ನಾನಿನ್ನು ಬದುಕನ್ನು ನೋಡುತ್ತಿದ್ದೇನೆ ಅಷ್ಟೆ .ಇನ್ನು ನನ್ನ ಕೃತಿಯಲ್ಲಿರುವ ಅನೇಕ ವಿಚಾರಗಳ ಬಗ್ಗೆ ನನಗೆ ಅನೇಕ ಪ್ರಶ್ನೆಗಳು ಉಳಿದಿವೆ ಇನ್ನು ಅದರಲ್ಲಿ ನೀವೆಂತ ಮಾಡುವುದು ನನ್ನ ಮೇಲೆ? ನಿಮಗೆ ನಿಮ್ಮ ಪರಿಸರದ ಎರಡು ಸಂಶೋದನೆಗೆ ಯೋಗ್ಯವಾದ ವಿಚಾರಗಳನ್ನು ತಿಳಿಸುತ್ತೇನೆ ಅದರ ಮೇಲೆ ಮಾಡಿ" ಎಂದು ಹೇಳಿದೆ
 

ಅರೆ ಒಪ್ಪಿಗೆಯಿಂದ ತಲೆ ಆಡಿಸಿದರು.ಬೆಟ್ಟಂಪಾಡಿ ಸಮೀಪದ ಯುವಕನಲ್ಲಿ "ಪರತಿ ಮಂಗನೆ "ಪಾಡ್ದನದ ಕಥೆ ನಡೆದದ್ದು ಬೆಟ್ಟಂಪಾಡಿ (ಬೊಟ್ಟಿಪಾಡಿ ) ಬಲ್ಲಾಳನ ಬೀಡಿನಲ್ಲಿ .ಆ ಬೀಡಿನ ಕುರುಹು ಐತಿಹ್ಯ ,ಈ ಕಥೆ ನಡೆದಿರಬಹುದಾದ ಸ್ಥಳ ,ಇದೆ ಕಥಾನಕ ಹೊಂದಿರುವ ಪುಕ್ಕೆದಿ ಕವಿತೆ ಹಾಗೂ ಇತರ ಹಾಡುಗಳನ್ನು ತುಲನೆ ಮಾಡಿ ಬರೆಯಿರಿ.ನನ್ನಲ್ಲಿ ಪರತಿ ಮಂಗನೆ ಪಾಡ್ದನ ಮತ್ತು ಪುಕ್ಕೆದಿ ಕವಿತೆ ಇದೆ ಇದನ್ನು ಕೊಡ್ತೇನೆ .ಆ ಬಗ್ಗೆ ಅಧ್ಯಯನ ಮಾಡಿ ಎಂದು ಹೇಳಿದೆ
 

ಸವಣೂರು ಸಮೀಪದ ಹುಡುಗನಲ್ಲಿ ಸವಣೂರು ಪರಣೆಯ ಪ್ರಧಾನ ದೈವ "ಅಬ್ಬೆ ಜಲಾಯ "ದೈವದ ಬಗ್ಗೆ ನಾನು ಸ್ವಲ್ಪ ಅಧ್ಯಯನ ಮಾಡಿ ನನ್ನ ಪುಸ್ತಕದಲ್ಲಿ ಸ್ವಲ್ಪ ಬರೆದದ್ದು ಬಿಟ್ಟರೆ ಬೇರೆಲ್ಲಿಯೂ ಈ ದೈವದ ಅಧ್ಯಯನ ನಡೆದಿಲ್ಲ ಈ ದೈವದ ಹೆಸರು ಕೂಡ ದಾಖಲಾಗಿಲ್ಲ.ಈ ಬಗ್ಗೆ ನಾನು ಸಂಗ್ರಹಿಸಿದ ಮಾಹಿತಿ ಕೊಡ್ತೇನೆ .ಈ ದೈವದ ಬಗ್ಗೆ ಎಂ ಫಿಲ್ ಮಾಡಿ ಎಂದು ಹೇಳಿದೆ .ನಿಮ್ಮ ಮನೆ ಅಡ್ರೆಸ್ಸ್ ನನಗೆ ಮೆಸೇಜ್ ಮಾಡಿ .ನಾನು ಬೆಂಗಳೂರಿಗೆ ಹೋದನಂತರ ಕಳುಹಿಸಿ ಕೊಡ್ತೇನೆ ಮತ್ತು ನಿಮಗೆ ಬೇಕಾದ ಸಹಾಯ ಮಾಡ್ತೇನೆ ಅಂತ ಹೇಳಿ ನನ್ನ ಮೊಬೈಲ್ ನಂಬರ್ ಕೊಟ್ಟು ಅವರ ನಂಬರ್ ತಗೊಂಡು ಬಂದೆ. ಬಂದು ಅನೇಕ   ದಿವಸಗಳು  ಕಳೆದರು ಹುಡುಗರ ಮೆಸೇಜ್ ಇಲ್ಲ ಫೋನ್ ಇಲ್ಲ .
  

ನಾನೇ ಅವರಿಗೆ ಫೋನ್ ಮಾಡಿದೆ "ನಾವು ನಿಮ್ಮ ಮೇಲೆ ಆದ್ರೆ ಮಾಡ್ತೇವೆ ಮೇಡಂ ಮತ್ತೆ ಭೂತದ್ದಕ್ಕೆಲ್ಲ ರಾತ್ರಿ ರೆಕಾರ್ಡ್ ಮಾಡ್ಬೇಕು ಮಾಹಿತಿ ಸಂಗ್ರಹಕ್ಕೆಲ್ಲ ತುಂಬಾ ಓಡಾಡಬೇಕು ಹಾಗಾಗಿ ನೀವು ಹೇಳಿ topics ಬೇಡ ಎಂಬ ಉತ್ತರ ಬಂತು !! ಈಗಿನ ಹುಡುಗರಿಗೆ ದೊಡ್ಡ ಪದವಿ ಬೇಕು ಆದ್ರೆ ತುಸು ಕಷ್ಟ ಪಡ್ಲಿಕ್ಕು ತಯಾರಿಲ್ಲ.

ತುಳುನಾಡಿನಲ್ಲಿ ಅನೇಕ ದೈವಗಳ ಬಗ್ಗೆ ಅಧ್ಯಯನ ನಡೆದಿಲ್ಲ ಅನೇಕ ಪಾಡ್ದನಗಳು ಕವಿತೆಗಳ ಸಂಗ್ರಹ ಕಾರ್ಯ ಆಗಿಲ್ಲ .ಈ ಬಗ್ಗೆ ಗಮನ ಹರಿಸಬೇಕಾದ ತುಳು ಅಕಾಡೆಮಿ ಮಾಡಬೇಕಾದ್ದನ್ನು ಮಾಡದೆ ಹೆಸರಿಗಾಗಿ ಏನೋ ಸನ್ಮಾನ ಅದು ಇದು ಮಾಡ್ತಾ ಇದೆ .
ಯುವಕರು ಪದವಿಗಾಗಿ ಕೂಡ ಸಾಕಷ್ಟು ಪರಿಶ್ರಮ ಬೇಡುವ ಇಂತ ವಿಚಾರಗಳ ಬಗ್ಗೆ ಅಧ್ಯಯನ ಮಾಡಲು ತಯಾರಿಲ್ಲ .ಯಾರಾದ್ರೂ ಒಬ್ಬ ವ್ಯಕ್ತಿ ಬಗ್ಗೆ ಒಂದಷ್ಟು ಫ್ಯಾನ್ ಅಡಿಯಲ್ಲಿ ಕೂತು ಬರೆಯುವುದು ಸುಲಭ ತಾನೇ .ಏನು ಮಾಡುವದು ಹೇಳಿ?!
                                             ಅಬ್ಬೆಜಲಾಯ ಮತ್ತು ಶಿರಾಡಿ ಭೂತ (ಫೋಟೋ)

                                                (ಒಂದು ವರ್ಷದ ಹಿಂದೆ ಬರೆದ ಲೇಖವಿದು )

Friday 12 April 2013

ಸುಬ್ಬಿ ಇಂಗ್ಲೀಷ್ ಕಲ್ತದು : ಮಹಿಳೆ(ಡಾ. ಲಕ್ಷ್ಮಿ ಜಿ ಪ್ರಸಾದ ) ಬರೆದ ಮೊದಲ ಹವಿಗನ್ನಡ ನಾಟಕ

                                 

ಸುಬ್ಬಿ ಇಂಗ್ಲೀಷ್ ಕಲ್ತದು  ಇದು ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ . ಇದನ್ನು ರಚಿಸಿದವರು ಯಾರು ಗೊತ್ತೇ ?! ಇಲ್ಲ ಅವರ  ಹೆಸರು ಯಾರಿಗೂ ಗೊತ್ತಿರುವ ಸಾಧ್ಯತೆ ಇಲ್ಲ  ಯಾಕೆಂದರೆ ಆ ನಾಟಕವನ್ನು ನಾನೇ ಬರೆದದ್ದು . ನಾನು ೭ ನೆಯ ತರಗತಿಯಲ್ಲಿದ್ದಾಗ ಮನೆಯಲ್ಲಿ ಮಕ್ಕಳ ಆಟಕ್ಕಾಗಿ ರಚಿಸಿದ ನಾಟಕ ಇದು .ನಾವು ಅಜ್ಜನಮನೆಯಲ್ಲಿ ೧ ಮಕ್ಕಳು ಸೇರಿ ಯಕ್ಷ ಗಾನ  ನಾಟಕ ಅದು ಇದು ಮಾಡಿ ಗಮ್ಮತ್ತು ಮಾಡು ತ್ತಿದ್ದೆವು. ನಮ್ಮ  ನೆರೆಕರೆಯವರೊಬ್ಬರು ನಮ್ಮ ಅಜ್ಜಿ ದೊಡ್ಡಮ್ಮನವರ ಹತ್ತಿರ ಅದು ಇದು ಮಾತಾಡುತ್ತ ಅವರ ಸಂಬಂಧಿಕರ ಮಗ    ಮಗ ಇಂಜಿನಿಯರ್  ಆಗಿದ್ದು   ಪ್ರಾಥಮಿಕ ಶಾಲೆ ಮಾತ್ರ ಓದಿದ್ದ ತನ್ನ ಅತ್ತೆಯ ಮಗಳನ್ನು ಮದುವೆಯಾದದ್ದು ಅವಳಿಗೆ ಇಂಗ್ಲಿಷ್ ಬಾರದೆ ಇವ  ಪೇಚಾಡುತ್ತಿದ್ದುದು  ಅದೇ ವಿಷಯದಲ್ಲಿ ಜಗಳ ಆಗುತ್ತಿದ್ದುದನ್ನು ಮಾತಿನ ಮಧ್ಯದಲ್ಲಿ  ಹೇಳಿದ್ದನ್ನು ಕೇಳಿಸಿಕೊಂಡಿದ್ದೆ ಇದಕ್ಕೆ ಎಲ್ಲೋ ಕೇಳಿದ  ಜೋಕೆ ಅನ್ನು ಸೇರಿಸಿ ಒಂದು  ನಾಟಕದ ರೂಪ ಕೊಟ್ಟಿದ್ದೆ .ಇದನ್ನು  ನಮ್ಮ ಮನೆ ಮಾತು ಹವ್ಯಕ ಭಾಷೆಯಲ್ಲಿ  ರಚಿಸಿದ್ದೆ . ಇದನ್ನು ನಾನು ೯ ನೆಯ ತರಗತಿ ಓದುತ್ತಿದ್ದಾಗ  ಶ್ರೀ ವಾಣಿ ವಿಜಯ ಪ್ರೌಢ ಶಾಲೆಯಲ್ಲಿ ಅಭಿನಯಿಸಿ ಪ್ರಥಮ ಬಹುಮಾನ ಪಡೆದಿದ್ದೆವು ಈ ನಾಟಕ ವನ್ನು ತುಸು ಪರಿವರ್ತನೆ ಮಾಡಿಕೊಂಡು ನನ್ನ ತಂಗಿ ರಾಜೇಶ್ವರಿ ಹಾಗು ಅವಳ ಸಹಪಾಟಿಗಳು  ಕನ್ನಡ ಭಾಷೆಯಲ್ಲಿ ಈ ನಾಟಕ ಅಭಿನಯಿಸಿ ಅಲ್ಲೂ ಬಹುಮಾನ ಪಡೆದಿದ್ದರು .
 ನಂತರ ಇದನ್ನು ನಾನು MA  ಓದುತ್ತಿರುವಾಗ ಹವ್ಯಕ ಭಾಷೆಯಲ್ಲಿಯೇ ಈ ನಾಟಕವನ್ನು  ಕಾಲೇಜ್ ವಾರ್ಷಿಕೋತ್ಸವದಂದು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದೆವು . ಇದಾದ ನಂತರ  ಮರು ವರ್ಷ ಅಂದರೆ ೧ ೯ ೯ ೬ ರಲ್ಲಿ ಮಂಗಳೂರು  ಹವ್ಯಕ ಮಹಾ ಸಭೆಯಲ್ಲಿ  ಹವ್ಯಕ ಮಹಿಳೆಯರಾದ ನಾವು (ಪುಷ್ಪ ಖಂಡಿಗೆ  ,ವಸಂತ ಲಕ್ಷ್ಮಿ ,ರಾಜೇಶ್ವರಿ  ರಾಜಿ ಬಾಲಕೃಷ್ಣ  ನಾನು(ಲಕ್ಷ್ಮಿ ಜಿ  ಪ್ರಸಾದ್ .. )ಈ  ನಾಟಕವನ್ನು ಹವ್ಯಕ ಭಾಷೆಯಲ್ಲಿ  ಅಭಿನಯಿಸಿ ಮೆಚ್ಚುಗೆ ಪಡೆದಿದ್ದೆವು  ಈ ಬಗ್ಗೆ ಹವ್ಯಕ  ವಾರ್ತೆ  ಪತ್ರಿಕೆಯಲ್ಲಿ "ಲಕ್ಷ್ಮಿ ಜಿ ಪ್ರಸಾದ್  ರಚಿಸಿ ನಿರ್ದೇಶಿಸಿರುವ  ಸುಬ್ಬಿ ಇಂಗ್ಲೀಷ್  ಕಲ್ತದು ಎಂಬ ಹವಿಗನ್ನಡ ನಾಟಕವನ್ನು ಹವ್ಯಕ ಸಭೆಯ ಸದಸ್ಯೆಯರು  ಅಭಿನಯಿಸಿದರು "ಎಂದು ವರದಿಯನ್ನು ಹಾಕಿದ್ದರು
ನಾನು ಚಿಕ್ಕಂದಿನಲ್ಲಿ (೧ ೯ ೮ ೪ )   ಮಕ್ಕಲಳಾಟಿಕೆಯಿಂದ  ರಚಿಸಿದ ನಾಟಕವೇ ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ .ನಾನು ಹವಿಗನ್ನಡದ  ಮೊದಲ ನಾಟಕಗಾರ್ತಿ  ಎಂಬುದು ನನಗೆ ೨ ೦ ೦ ೬ ನೇ ಇಸವಿ ತನಕ ಗೊತ್ತಿರಲಿಲ್ಲ . ೨ ೦ ೦ ೬  ರಲ್ಲಿ ಬೆಂಗಳೂರು ಹವ್ಯಕ  ಅದ್ಯಯನ ಕೇಂದ್ರದ  ನಾರಾಯಣ ಶಾನು ಭಾಗರು ಹೀಗೆ ಹಳೆಯ ಪತ್ರಿಕೆ ತಿರುವಿ ಹಾಕುತ್ತಿರುವಾಗ  ಹವ್ಯಕ ವಾರ್ತೆಯಲ್ಲಿ ವರದಿಯಾಗಿದ್ದ  ಸುಬ್ಬಿ ಇಂಗ್ಲೀಷ್ ಕಲ್ತದು ಎಂಬ ನಾಟಕ ಅವರ ಗಮನಕ್ಕೆ ಬಂದು  ಇದರ ಕರ್ತೃ ಲಕ್ಷ್ಮಿ ಜಿ ಪ್ರಸಾದ್ ಯಾರೆಂದು ಮಂಗಳೂರು ಹವ್ಯಕ ಸಭೆಯವರಲ್ಲಿ ಕೇಳಿದಾಗ ನಾವು ಬೆಂಗಳೂರಿಗೆ  ಬಂದು ನೆಲೆಸಿದ ವಿಚಾರ ಅಲ್ಲಿ ತಿಳಿಸಿದರು . ನಾನು ಎಲ್ಲಿದ್ದೇನೆ ಎಂದು ಪತ್ತೆ ಮಾಡುವ ಜವಾಬ್ಧಾರಿಯನ್ನು ಅವರು ರಾಜಗೋಪಾಲ ಕನ್ಯಾನ ಅವರಿಗೆ ವಹಿಸಿದರು
ಬಿ ಎಂ ಶ್ರೀ  ಪ್ರತಿಷ್ಠಾನದ  ಗೀತಾಚಾರ್ಯ  ಅವರಲ್ಲಿ  ಕೇಳಿದಾಗ "ನಮ್ಮಲ್ಲಿ ಲಕ್ಷ್ಮಿ ವಿ  ಅಂತ ಓರ್ವ ಸಂಶೋಧನಾ ವಿದ್ಯಾರ್ಥಿನಿ  ಇದ್ದಾರೆ  ಲಕ್ಷ್ಮಿ ಜಿ ಪ್ರಸಾದ್ ಅಂತ ಯಾರು ಇಲ್ಲ ಆದರು ಕೇಳಿ ನೋಡಿ ಅಂತ ನನ್ನ ಫೋನ್ ನಂಬರನ್ನು ರಾಜ ಗೋಪಾಲ ಕನ್ಯಾನ ಅವರಿಗೆ ಕೊಟ್ಟರು. ನನ್ನ ರೆಕಾರ್ಡ್ಸ್ ನಲ್ಲಿ ಲಕ್ಷ್ಮಿ ವಿ  ಎಂಬ ಹೆಸರು ಇದೆ . ನನ್ನ ಪೆನ್ ನೇಮ್  ಲಕ್ಷ್ಮಿ ಜಿ ಪ್ರಸಾದ್  ಎಂಬುದು  . ಮಂಗಳೂರು ಹವ್ಯಕ ಸಭೆಯವರಿಗೆ ನನಗೆ ಲಕ್ಷ್ಮಿ ವಿ ಎಂಬ ಹೆಸರಿರುವುದು  ಗೊತ್ತಿಲ್ಲ  . ಬೆಂಗಳೂರಿನಲ್ಲಿ ಯಾರಿಗೂ ನನಗೆ ಲಕ್ಷ್ಮಿ ಜಿ ಪ್ರಸಾದ್ ಎಂಬ ಹೆಸರಿರುವುದು ಗೊತ್ತಿಲ್ಲ ಇದರಿಂದಾಗಿ ನನ್ನನ್ನು  ಪತ್ತೆ ಹಚ್ಚುವುದು ಭಾರೀ ಕಷ್ಟ ಆಯಿತು ಎಂಬ ವಿಚಾರ ನನಗೆ ನಂತರ ತಿಳಿಯಿತು
. ಹೀಗೆ ನಮ್ಮ ಮನೆಗೆ ನನ್ನನ್ನು ಹುದುಕಿಗೊಂದು ಬಂದ  ರಾಜ ಗೋಪಾಲ ಕನ್ಯಾನ ಅವರು  ನನಗೆ ನೀವು ಬರೆದ ಸುಬ್ಬಿ ಕಲ್ತದು ಅನ್ನುವ ನಾಟಕವೇ  ಮಹಿಳೆ ಬರೆದಮೊದಲ  ಹವಿಗನ್ನಡ ನಾಟಕ . ಒಂದೋ ಹವಿಗನ್ನಡ ನಾಟಕ ಸಂಕಲನ ತರುತ್ತಿದ್ದೇವೆ . ನಿಮ್ಮ ನಾಟಕ ಕೊಡಿ ಎಂದು ನನ್ನ ಆ ನಾಟಕದ ಹಸ್ತಪ್ರತಿಯನ್ನು ತೆಗೆದುಕೊಂಡು ಹೋದರು ಅನಂತರ ಆ ನಾಟಕ ಪ್ರಕಟ ವಾಯಿತೆ ಎಂದು ಕೇಳ್ತಾನೆ ಇದ್ದೆ ಆಗುತ್ತಾ ಇದೆ ಎಂದು ಹೇಳಿದ್ದರು ಮತ್ತೊಮ್ಮೆ ಕೇಳುವಾಗ ನಾರಾಯಣ ಕಂಗಿಲ ಅವರಿಗೆ ವಹಿಸಿದ್ದೇವೆ ಎಂದು ಹೇಳಿ ಅವರ ಮೊಬೈಲ್  ಸಂಖ್ಯೆ ಕೊಟ್ಟರು . ನಾನು ಅವರಿಗೆ ಕೇಳಿದಾಗ ನಿಮ್ಮ ನಾಟಕ ಇದೆಯಾ ಅಂತ ಸಂಕಲನದಲ್ಲಿ ನೋಡಿ ಹೇಳ್ಬೇಕಷ್ಟೇ  ಅಂತ ಹೇಳಿದರು ೩ -೪  - ದಿವಸ ಬಿಟ್ಟು ನಿಮ್ಮ ನಾಟಕ ಸಂಕಲನದಲ್ಲಿ ಇದೆ ಪ್ರಕಟವಾಗುತ್ತಿದೆ ಎಂದು ನನ್ನ ಮೊಬೈಲ್ ಗೆ   ಮೆಸೇಜ್ ಮಾದಿದರು. (ಅದು ಇನ್ನು ನನ್ನ ಮೊಬೈಲ್ ನಲ್ಲಿ ಇದೆ )  ನಂತರ ಸುಮಾರು ದಿನ ಕಳೆದು  ಪುಟ ಜಾಸ್ತಿ ಆಗ್ತಿದೆ  ಆದ್ದರಿಂದ ಎಲ್ಲ ನಾಟಕಗಳನ್ನು ಪ್ರಕಟಿಸಲು ಆಗಲಿಲ್ಲ ನಿಮ್ಮ ನಾಟಕ ಸಂಕಲನದಿಂದ ಬಿಟ್ಟಿದ್ದೇವೆ ಎಂದು ತಿಳಿಸಿದರು  . ಇನ್ನೊಂದೆಡೆ  ನನ್ನ ಗೆಳತಿಯೊಬ್ಬರಿಗೆ  ಹೇಳಿ ನಾಟಕ ಬರೆಯಿಸಿ ಸಂಕಲನದಲ್ಲಿ ಹಾಕಿದ್ದಾರೆ .ನಾಲ್ಕು ಜನರ ಎರಡೆರಡು ನಾಟಕಗಳನ್ನು ಹಾಕಿದ್ದಾರೆ

ಈ ಬಗ್ಗೆ ಕೇಳಿದರೆ ನಿಮ್ಮ ನಾಟಕದಲ್ಲಿ ಯಾವುದೇ ಸಾಹಿತ್ಯಿಕ ಮೌಲ್ಯ  ಇಲ್ಲ ಅದಕ್ಕೆ ಡ್ರಾಪ್ ಮಾಡಿದ್ದೇವೆ . ಎಂದು ಒಮ್ಮೆ   ಮತ್ತೊಮ್ಮೆ ಅದು ನಾವು ಆಯ್ಕೆ ಮಾಡಿದ್ದಲ್ಲ ಅದು ಪಬ್ಲಿಷೆರ್  ಮಾಡಿದ್ದು ಹೇಳುತ್ತಿದ್ದಾರೆ .ಪುಬ್ಲಿಷೆರಿಗೆ ನಾನು ಈ ಬಗ್ಗೆ ಕೇಳಿದಾಗ ಇಲ್ಲ ನಮಗೆ ಇದೆಲ್ಲ ಗೊತ್ತಿಲ್ಲ ನಮಗೆ ಕೊಟ್ಟಷ್ಟ ನ್ನು ನಾವು ಅದು ಇದ್ದ ಹಾಗೆಯೇ ಪ್ರಕಟಿಸಿದ್ದೇವೆ ಎಂದು ಹೇಳಿದ್ದಾರೆ  ನನ್ನ ನಾಟಕವನ್ನು ಯಾವ ವಿಮರ್ಶಕರಗೆ ತೋರಿಸಿ ಅಭಿಪ್ರಾಯ ಪಡೆದಿದ್ದಾರೆ  ಎಂದು ತಿಳಿದಿಲ್ಲ  ಇನ್ನು ನನಗೆ ತಿಳಿದಿರುವ ಮಟ್ಟಿಗೆ ನಾರಾಯಣ  ಕಂಗಿಲರಿಗೆ  ದೊಡ್ಡ ವಿಮರ್ಶಕರ ಸ್ಥಾನ ಏನು ಇಲ್ಲ. ಏನೇ ಆದರು ನನ್ನ ನಾಟಕಕ್ಕೆ ಮಹಿಳೆ ಬರೆದ  ಮೊದಲ ಹವಿಗನ್ನಡ ನಾಟಕ ಎಂಬ  ಚಾರಿತ್ರಿಕ  ಮೌಲ್ಯ  ಖಂಡಿತಾ ಇದೆ.  ಇಂಗ್ಲಿಷ್ ಭ್ರಮೆ ಬೇಡ ಕನ್ನಡ ಕಸ್ತೂರಿ  ಎಂಬ  ಅಮೂಲ್ಯ ಸಂದೇಶ ಅದರಲ್ಲಿದೆ . ಮುಖ ನೋಡಿ ಮಣೆ ಹಾಕುವ  ನಾರಾಯಣ ಕಂಗಿಲರಿಗೆ  ಇದನ್ನು ಗಮನಿಸುವ ಆಕಲು ಇರಲಿಲ್ಲ ಎಂಬುದು  ಮಾತ್ರ ಸತ್ಯ. ಒಟ್ಟಿನಲ್ಲಿ ಇವರ ರಾಜಕೀಯದಲ್ಲಿ  ಹವ್ಯಕ ನಾಟಕ ಸಂಕಲನದಲ್ಲಿ  ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು  ಸೇರಿಲ್ಲ . ಯಾವ ನಾಟಕದ  ಹಸ್ತಪ್ರತಿಗಾಗಿ  ನಾರಾಯಣ  ಶಾನುಭಾಗ  ಮತ್ತು ರಾಜಗೋಪಾಲ ಕನ್ಯಾನ  ಕಷ್ಟ ಪಟ್ಟು ಅಲ್ಲಿ ಇಲ್ಲಿ ಕೇಳಿ ಅಲೆದಾಡಿದ್ದರೋ ಅದು ಸಿಕ್ಕಿಯೂ  ಪ್ರಕಟವಾಗಲಿಲ್ಲ . !  

Tuesday 9 April 2013

ಬ್ಲಾಗ್ ಬರೆಯುವ ನನ್ನ ಕನಸು(MY DREAM OF WRITING BLOG) ಮುರಳೀಧರ ಉಪಾಧ್ಯರಿಗೆ ನಾನು ಸದಾ ಋಣಿ

                          ಬ್ಲಾಗ್  ಬರೆಯುವ ನನ್ನ ಕನಸು
ನನ್ನ ಮಗ ಅರವಿಂದ ಬಹಳ ವಾಚಾಳಿ . ವಯೋ ಸಹಜವಾಗಿ ಎಲ್ಲ ವಿಷಯಗಳ ಬಗ್ಗೆ ವಿಪರೀತ ಕುತೂಹಲ . ಕಂಪ್ಯೂಟರ್  ಬಗ್ಗೆ ಇಂಟರ್ನೆಟ್ ಬಗ್ಗೆಯೂ ಯಾವಾಗಲೂ ಹರಟುತ್ತಾ ಇರುತ್ತಾನೆ. ನನಗೋ  ಕಂಪ್ಯೂಟರ್ ,ಇಂಟರ್ನೆಟ್ ಕುರಿತು  ಒಂದಿನಿತೂ ಗೊತ್ತಿರಲಿಲ್ಲ . ಆದರೆ ಬ್ಲಾಗ್,ಫೇಸ್ ಬುಕ್ ,ಟ್ವಿಟ್ಟರ್ ,ಮೊದಲಾದವುಗಳ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದೆ. ಒಮ್ಮೊಮ್ಮೆ  ನನಗು ಬ್ಲಾಗ್ ಬರೆಯ ಬೇಕು ಅನಿಸುತ್ತಿತ್ತು . ಆ ಅನಿಸಿಕೆ ಹೆಚ್ಚು ದೂರ ಸಾಗುತ್ತಿರಲಿಲ್ಲ .ಯಾಕೆಂದರೆ  ನನ್ನ ಕಂಪ್ಯೂಟರ್ ಜ್ಞಾನ ದೊಡ್ಡ ಸೊನ್ನೆ . ಜ಼ೊತೆಗೆ ಇಂಗ್ಲಿಷ್ ಭಾಷೆ ಮೇಲೂ ತೀರ ಏನೂ  ದೊಡ್ಡ ಹಿಡಿತ ಇರಲಿಲ್ಲ. ಬ್ಲಾಗ್  ಫೇಸ್ ಬುಕ್ ಗಳಲ್ಲಿ ಕನ್ನಡ ಬಳಕೆ ಇದೆ ಅಂತ ಗೊತ್ತಿರಲಿಲ್ಲ .
ಕಳೆದ ವರ್ಷ ಸುಮಾರು ಈ ಸಮಯದಲ್ಲಿ ಮಗ ಹಠ ಹಿಡಿದು ನನ್ನ ಮೊಬೈಲ್ ಗೆ ಇಂಟರ್ನೆಟ್  ಸಂಪರ್ಕ ಹಾಕಿಸಿದ . ಯಾವಾಗಲು ಸಂಜೆ ಶಾಲೆಯಿಂದ ಬಂದ  ತಕ್ಷಣ ನನ್ನ ಮೊಬೈಲ್ ತಗೊಂಡು ಏನೋ ಡಬ್ಲ್ಯೂ ಡಬ್ಲ್ಯೂ ಯಫ಼್. ,ಜೋನ್ಸೀನ  ಕಾಳಿ  , ಕ್ರಿಕೆಟ್ ಅದು ಇದು ನೋಡಿ ನಂಗೆ ಹೇಳುತ್ತಿದ್ದ .ನಂಗೆ ಆಸಕ್ತಿ ಇಲ್ಲದಿದ್ದರೂ ಅವನ ಉತ್ಸಾಹಕ್ಕೆ ಭಂಗ ಬರಬಾರದಂತೆ  ಹೂಂಗುಟ್ಟುತಿದ್ದೆ. ಒಂದಿವಸ ನನ್ನ ಹತ್ರ" ಅಮ್ಮ ನೋಡು ಇಂಟರ್ನೆಟ್ ನಲ್ಲಿ ಇಲ್ಲದ  ವಿಚಾರವೇ ಇಲ್ಲ ಎಲ್ಲವು ಇದರಲ್ಲಿ ಸಿಗುತ್ತೆ "ಅಂತ ಹೇಳಿದ. ಯಾವಾಗಲು ಹೂಂಗುತ್ತಿ ಸುಮ್ಮನಾಗುತ್ತಿದ್ದ ನಾನು ಅವನನ್ನು ಸುಮ್ಮನೆ  ಕಿಚಾಯಿಸುವುದಕ್ಕಾಗಿ  "ನಾನು ಸಿಗುತ್ತೇನ ನಿನ್ನ   ಇಂಟರ್ನೆಟ್ ನಲ್ಲಿ ?"(ಸಿಗಲು ಅಸಾಧ್ಯವೆಂದು ತಿಳಿದಿದ್ದೂ ) ಕೇಳಿದೆ .ಒಂದು  ಕ್ಷಣ ವಿಚಲಿತನಾದ ಅವನು  ನಾನು ನೋಡುತ್ತೇನೆ ಎಂದು ಹೇಳಿ ಮೊಬೈಲ್ ತಗೊಂಡು ಏನೋ ಗುರುಟಲು ಆರಂಬಿಸಿದ . ನಾನು ಏನೋ ಸಂಜೆ ತಿಂಡಿ ತಯಾರು ಮಾಡುತ್ತಿದ್ದೆ . ಅಡುಗೆ ಕೋಣೆಗೆ ಓಡಿ ಬಂದ  ಮಗ ಅರವಿಂದ "ಅಮ್ಮಾ ಅಮ್ಮ  ನೋಡು ಇಲ್ಲಿ ನೋಡು ನೀನು ಇದರಲ್ಲಿ ಇದ್ದೀಯ "ಎಂದು ಏನೋ ಸಾಧಿಸಿದ ಗೆಲುವಿನ ಧ್ವನಿಯಲ್ಲಿ ಹೇಳಿದ . ಹೌದು !! ಅವನು ಹೇಳಿದ್ದು ನಿಜ . ಡಾ . ಲಕ್ಷ್ಮಿ ಜಿ ಪ್ರಸಾದ್ ಎಂದು ಗೂಗಲ್ ಸರ್ಚ್ ಗೆ ಹಾಕಿದಾಗ ಅದರಲ್ಲ್ಲಿ ಅಜ್ಜಿ ಭೂತ ಮತ್ತು ಕೂಜಿಲು -ಡಾ . ಲಕ್ಷ್ಮಿ ಜಿ ಪ್ರಸಾದ್  ಎಂದಿತ್ತು .   ಉಡುಪಿ ಗೋವಿಂದ  ಪೈ ಸಂಶೋಧನಾ ಕೇಂದ್ರ ಪ್ರಕಟಿಸುವ "  ತುಳುವ  " ಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ  ಲೇಖನವನ್ನು ತಮ್ಮ ಬ್ಲಾಗ್ ನಲ್ಲಿ ಹಾಕಿ  ನನ್ನ ಲೇಖನ ವನ್ನು ಇಂಟರ್ನೆಟ್ ಮೂಲಕವೂ  ಸಿಗುವಂತೆ  ಮಾಡಿದ್ದರು ಹಿರಿಯ ವಿಮರ್ಶಕರಾದ ಉಡುಪಿಯ  ಪೂರ್ಣ ಪ್ರಜ್ಞ ಕಾಲೇಜ್ ಉಪನ್ಯಾಸಕರಾದ  ಸಹೃದಯಿ  ಪ್ರೊ। ಮುರಳೀಧರ ಉಪಾಧ್ಯರು

ಇಲ್ಲಿಂದ ನನ್ನ ಬ್ಲಾಗ್ ಬರೆಯುವ ಕನಸು ಗರಿ ಬಿಚ್ಚಿಕೊಂಡಿತು . ಮೊದಲಿಗೆ  ನುಡಿ ಹಾಗು ಬರಹದ ಮೂಲಕ   ಕನ್ನಡ ಬರೆಯುವುದು ಹೇಗೆ ಎಂದು ತಿಳಿದುಕೊಂಡೆ ಜ಼ೊತೆಗೆ ಮಗನ ಸಹಾಯದಿಂದ   ಮೊಬೈಲ್ ನಲ್ಲಿ  ಇಂಟರ್ನೆಟ್ ಮೂಲಕ ಬೇಕಾದ್ದನ್ನು ಹುಡುಕಲು  ಕಲಿತೆ. ಅದಕ್ಕೆ ಸರಿಯಾಗಿ ನನಗೆ ಬೆಂಗಳೂರಿಗೆ ನಿಯೋಜನೆ ಸಿಕ್ಕಿತು. ತುಂಬಾ ಸಮಯದಿಂದ ನನ್ನ ಪತಿ ಗೋವಿಂದ ಪ್ರಸಾದ್  ಮನೆಗೊಂದು  ಕಂಪ್ಯೂಟರ್ ತರುವ  ಎಂದು ಹೇಳುತ್ತಿದ್ದರು . ಬೇಡ ಎಂದು ನಾನು ಹೇಳುತ್ತಿದ್ದೆ . ಈಗ ನಾನಾಗಿಯೇ ಕಂಪ್ಯೂಟರ್ ತರುವ ಹೇಳಿದೆ . ನಾನು ಹೇಳಿದ ದಿವಸ ಸಂಜೆಯೇ ಮನೆಗೆ  ಲೆನೆವೋ ಕಂಪ್ಯೂಟರ್  ಅನ್ನು ತಂದೇ ಬಿಟ್ಟರು ನಾನೆಲ್ಲಿ ಇನ್ನು ಮನಸ್ಸು ಬದಲಾಯಿಸಿ ಬೇಡ ಅಂತ ಹೇಳಿ ಬಿಟ್ರೆ ಅಂತ !
ಸರಿ; ಅಂತು ಮೊನ್ನೆ ಜನವರಿ 2 4  ಕ್ಕೆ ಮನೆಗೆ ಕಂಪ್ಯೂಟರ್  ತಂದ ತಕ್ಷಣವೇ ಮಗನಲ್ಲಿ ನಂಗೆ ಬ್ಲಾಗ್ ಅಕೌಂಟ್  ತೆರೆದು ಕೊಡು ಎಂದು ಹೇಳಿದೆ . ತಂದೆ ಮಗ ಸೇರಿಕೊಂಡು ಏನೋ ಮಾಡಿಕೊಂಡು ಪೇಚಾಡಿ  ನನ್ನ ಹೆಸರಿನಲ್ಲಿ   ಬ್ಲಾಗ್ ತೆರೆದು ಕೊಟ್ಟರು . ಜೊತೆಗೆ ಕಂಪ್ಯೂಟರ್ ಆನ್  ಆಫ್  ಮಾಡುವುದನ್ನು ಗೂಗಲ್ ಸರ್ಚ್ ಮೂಲಕ ಬ್ಲಾಗ್ ನೋಡಲು  ಬ್ಲಾಗ್ ಗೆ ಪ್ರವೇಶಿಸಿ ಬರೆಯುವುದನ್ನು ಹೇಳಿಕೊಟ್ಟರು . ಮೊದಲಿಗೆ  ನನ್ನ ಕುರಿತಾದ ಸಂಕ್ಷಿಪ್ತ ಮಾಹಿತಿ ಹಾಕಿದೆ . ನಂತರ ನನ್ನಲ್ಲಿರುವ ಕೆಲವು ಅಪರೂಪದ ಭೂತಗಳ ಫೋಟೋ  ಹಾಕಿದೆ .ನೀರು ಇಂಗಿಸ ಬೇಕಾದ ಅನಿವಾರ್ಯತೆಯ ಕುರಿತು ನೆಲ ಜಲ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಲೇಖನ ಬರೆದೆ .ಸ್ತ್ರೀ  ಸಂವೇದನೆ ಕುರಿತು ಒಂದು ಲೇಖನ ಬರೆದು ಹಾಕಿದೆ . ಈ ನಡುವೆ ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೆಶಕರಾದ  ಹೆರಂಜೆ  ಕೃಷ್ಣ ಭಟ್ಟರನ್ನು ಸಂಪರ್ಕಿಸಿ ಮುರಳಿಧರ ಉಪಾಧ್ಯರ ಸಂಪರ್ಕ ಸಂಖ್ಯೆಯನ್ನು ಪಡೆದು  ಅವರನ್ನು ಸಂಪರ್ಕಿಸಿ ಬ್ಲಾಗ್ ಬರೆಯುವ  ನನ್ನ ಆಸಕ್ತಿಯ ಬಗ್ಗೆ ತಿಳಿಸಿದೆ ಅವರು ತುಂಬು ಮನಸಿನಿಂದ ಸೂಕ್ತ ಸಲಹೆ ನೀಡಿದರು . ಅಂತು ಇಂತೂ ಒಂದೆರಡು ಲೇಖನ ಬರೆದು  ಬ್ಲಾಗ್ ಗೆ ಹಾಕಿದ ನಂತರ ಕಂಪ್ಯೂಟರ್  ಬಳಸುವ ನನ್ನ ಅನೇಕ ಸ್ನೇಹಿತರಿಗೆ ಹಾಗು ನನ್ನ ಹಿತೈಷಿಗಳಾದ ಕೆಲವು ವಿದ್ವಾಂಸರಿಗೆ ಮೊಬೈಲ್ ಮೂಲಕ  ನಾನು ಬ್ಲಾಗ್ ಬರೆಯುತ್ತಿರುವುದನ್ನು ತಿಳಿಸಿ ಓದಿ ನೋಡಿ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಸಲಹೆ ನೀಡುವಂತೆ ವಿನಂತಿ ಮಾಡಿದೆ . ಎಲ್ಲೆರಿಂದ ನನಗೆ ತುಂಬು ಮನದ ಪ್ರೋತ್ಸಾಹ ಸಿಕ್ಕಿತು. ಮುರಳಿಧರ ಉಪಾಧ್ಯರಿಗು ಮೆಸೇಜ್ ಮಾಡಿದ್ದೆ .ಅದೇ ದಿವಸ ನನ್ನ ಬ್ಲಾಗನ್ನು ನೋಡಿ ಅವರು "ನಾನು ನಿಮ್ಮ ಬ್ಲಾಗ್ ನ ಹೊರ ಆವರಣವನ್ನು  ಚಂದ ಮಾಡಿ ಕೊಡಬಲ್ಲೆ .ನಿಮ್ಮ  ಇಮೇಲ್ ಅಡ್ರೆಸ್ ಮತ್ತು ಪಾಸ್ ವರ್ಡ್ ಕೊಡಿ . ನಂತರ ಪಾಸ್  ವರ್ಡ್ ಬದಲಾಯಿಸಿ "ಎಂದು ಮೆಸೇಜ್  ಮಾಡಿದರು.ಇಂತಹ ಸಹೃದಯತೆಯನ್ನು  ಡಾ . ಅಮೃತ ಸೋಮೆಶ್ವರರನ್ನು ಬಿಟ್ಟು  ಬೇರೆ  ಯಾರಲ್ಲೂ  ಆ ತನಕ ಕಂಡಿರಲಿಲ್ಲ ನಾನು. !
{  ಸಂಶೋಧನೆ ,ಸಾಹಿತ್ಯ ಕ್ಷೇತ್ರದಲ್ಲಿ  ಇನ್ನೂ ಅಂಬೆಗಾಲು ಇಡುತ್ತಿರುವ ನನ್ನ ಕುರಿತು ನೀವು ತೋರಿದ  ಪ್ರೀತಿ ಅಭಿಮಾನ ನನ್ನನ್ನು ನಿಬ್ಬೆರಗಾಗಿಸಿ ಮೂಕ ವಿಸ್ಮಿತಳನ್ನಾಗಿಸಿದೆ   ಸರ್ (ಮುರಳೀಧರ  ಉಪಾಧ್ಯ )! ನೀವು ನಿಜವಾಗಿಯೂ ಗ್ರೇಟ್  ಸರ್ !)  ಅವರು ಹೇಳಿದಂತೆ  ಇಮೇಲ್ ಅಡ್ರೆಸ್  ಮತ್ತು ಪಾಸು ವರ್ಡ್  ಮೆಸೇಜ್ ಮಾಡಿ ಆವರ  ಮೊಬೈಲ್ ಗೆ ಕಳುಹಿಸಿದೆ  ಫೆಬ್ರುವರಿ ೨  ರಂದು  ಮಧ್ಯಾಹ್ನ .ಅದೇ ದಿವಸ  ಸಂಜೆ ಅವರು ನನ್ನ ಬ್ಲಾಗ್ ಅನ್ನು ನೇರ್ಪು ಗೊಳಿಸಿ ಬೇರೆ ಬ್ಲಾಗ್ಗಳಿಗೆ ಲಿಂಕ್ ಕೊಟ್ಟು  ಫೀಡ್ ಜೆಟ್ ಅಳವಡಿಸಿ  ಒಂದು ಸುಂದರವಾದ  ಚೌಕಟ್ಟು ಅನ್ನು  ಹಾಕಿ ತುಂಬಾ ಆಕರ್ಷಕವಾಗಿಸಿ  ಕೊಟ್ಟು  ನನಗೆ  ಪಾಸ್ ವರ್ಡ್  ಚೇಂಜ್ ಮಾಡಿ ಎಂದು ಜತನದಿಂದ  ಮೆಸೇಜ್ ಮಾಡಿದರು . ನನ್ನ ಬ್ಲಾಗ್ ತೆರೆದು ನೋಡಿದೆ !!  ರೋಮಾಂಚನವಾಯಿತು ನನಗೆ  ಅಷ್ಟು  ಚಂದ  ಮಾಡಿ ಕೊಟ್ಟಿದ್ದರು.  ಅವರು .ಹೀಗೆ ನನ್ನ ಬ್ಲಾಗ್ ಬರೆಯುವ ಕನಸು ನನಸಾಗಿದೆ ಗೆಳೆಯರೆ !

  ನಾನು   ಬ್ಲಾಗ್ ತೆರದು  75   ದಿವಸಗಳು ಆದವು. ೪೮  ಬರಹಗಳನ್ನು  ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ . 2266  ವೀಕ್ಷಕರು ನನ್ನ ಬ್ಲಾಗನ್ನು ಇಣುಕಿ  ನೋಡಿದ್ದಾರೆ  ಅನೇಕರು  ಪ್ರೋತ್ಸಾಹಿಸಿದ್ದಾರೆ . ನನ್ನ ಬ್ಲಾಗನ್ನು  ಕನ್ನಡ ಬ್ಲಾಗ್ ಕೊಂಡಿಗೆ ಜೋಡಿಸಿದ್ದಲ್ಲದೆ  ನನ್ನ ಹೆಚ್ಚು ಕಡಿಮೆ ಎಲ್ಲ ಬರಹ (ಪೋಸ್ಟ್ )ಗಳನ್ನು ತಮ್ಮ  ಬ್ಲಾಗಿನಲ್ಲಿ  ಹಂಚಿಕೊಂಡು  ನನ್ನ ಬ್ಲಾಗ್ ಇಷ್ಟು ಬೇಗನೆ ಪ್ರಸಿದ್ಧಿಗೆ  ಬರುವಂತೆ  ಮಾಡಿದ್ದಾರೆ ಮುರಳೀಧರ ಉಪಾಧ್ಯರು .
ಮುರಳೀಧರ ಉಪಾಧ್ಯರಿಗೆ  ನಾನು ಸದಾ ಋಣಿ.  ಬೆಂಬಲ ನೀಡಿದ  ಓದಿ ಪ್ರೋತ್ಸಾಹಿಸಿದ ಎಲ್ಲರಿಗು ಧನ್ಯವಾದಗಳು



Tuesday 2 April 2013

¨ಬೆಳ್ಳಾರೆಯ (ಸುಳ್ಯ ತಾ ,ದ ಕ) ಸಾಂಸ್ಕೃತಿಕ ಅಧ್ಯಯನ( Bellare -A culturaral study) (c)ಡಾ.ಲಕ್ಷ್ಮೀ ಜಿ ಪ್ರಸಾದ

                                             


                         copy rights reserved
                   ಬೆಳ್ಳಾರೆ ಬೇಡಿನ ಮಾಸ್ತಿ ವಿಗ್ರಹ
  ಬೆಳ್ಳಾರೆ ಸುಳ್ಯ ತಾಲೂಕಿನ ವ್ಯಾಪ್ತಿಗೆ ಸೇರಿದ ಗ್ರಾಮ.ಹಿಂದೆ ಬೆಳ್ಳಾರೆ ಮಾಗಣೆಯಾಗಿದ್ದ ಬಗ್ಗೆ ಇತಿಹಾಸಜ್ಞರು ತಿಳಿಸಿದ್ದಾರೆ. ಬೆಳ್ಳಾರೆಯನ್ನು ಸಾಮಂತ ಬಲ್ಲಾಳ ಅರಸರು ಆಳುತ್ತಿದ್ದರು. ಇವರು ಬೆಳ್ಳಾರೆ, ಮುಂಡೂರು, ಸರ್ವೆ, ಕೆದಂಬಾಡಿ, ಕೆಯ್ಯೂರು, ಕಾಣಿಯೂರು, ಐವರ್ನಾಡು, ಪಾಲ್ತಾಡಿ,  ಪುಣ್ಚಪಾಡಿ, ಸವಣೂರು, ಚಾರ್ವಕ, ಪೆರುವಾಜೆ, ಕೆದಿಲ, ಬಾಳಿಲ, ಕಳಂಜ, ಮುಪ್ಪೇರ್ಯ, ಮುರುಳ್ಯ, ಕಾೈಮಣ, ಕುದ್ಮಾರು, ಮತ್ತು ಕೊಳ್ತಿಗೆ, ಎಂಬ ಇಪ್ಪತ್ತೊಂದು ಗ್ರಾಮಗಳನ್ನು  ಆಳುತ್ತಿದ್ದರು. ಬೆಳ್ಳಾರೆಯನ್ನು ಆಳಿದ ಸಾಮಂತರು ಯಾರ ಸಾಮಂತರಾಗಿದ್ದರು ಎಂಬ ಬಗ್ಗೆ ಇದಮಿತ್ಥಂ ಎಂಬ ಮಾಹಿತಿ ಸಿಗುವುದಿಲ್ಲ.

     1763ರಲ್ಲಿ ಹೈದರಾಲಿಯು ಬಿದನೂರನ್ನು ವಶಪಡಿಸಿಕೊಂಡಾಗ ತುಳುನಾಡು ಅವನ ವಶವಾಯಿತಾದರೂ,  ಕೊಡಗಿನ ಅರಸನೊಂದಿಗೆ ಒಪ್ಪಂದ ಮಾಡಿಕೊಂಡು ಪಂಜ ಮತ್ತು ಕೊಡಗಿನ  ಮಾಗಣೆಗಳನ್ನು ಕೊಡಗಿಗೆ ಬಿಟ್ಟು ಕೊಟ್ಟನು.  ಕ್ರಿ.ಶ ಆದಿ ಭಾಗದಲ್ಲಿ ಬನವಾಸಿಯ ಕದಂಬ ಚಂದ್ರವರ್ಮನು ಕೊಡಗನ್ನು ಆಳಿಕೊಂಡಿದ್ದನು. ನಂತರ ಕೊಡಗು ಅನೇಕ ವಂಶದವರ ಆಳ್ವಿಕೆಗೆ ಒಳಗಾಯಿತು. ಸುಮಾರು ಕ್ರಿ.ಶ 1600ರಲ್ಲಿ ಇಕ್ಕೇರಿ ನಾಯಕರ ವಂಶದ ಹಾಲೇರಿ ಕುಟುಂಬದ ವೀರರಾಜನು ಕೊಡಗನ್ನು ಆಳ್ವಿಕೆ ಮಾಡಿದ ಬಗ್ಗೆ ರಾಜೇಂದ್ರನಾಮೆಯಲ್ಲಿ ಉಲ್ಲೇಖವಿದೆ. ಕ್ರಿ.ಶ 1775ರಲ್ಲಿ ಅಮರ  ಸುಳ್ಯ  ಮತ್ತು ಬೆಳ್ಳಾರೆಗಳನ್ನು  ಹೈದರಾಲಿ ಪುನಃ ವಶಪಡಿಸಿಕೊಂಡನು. 1791ರಲ್ಲಿ ದೊಡ್ಡ ವೀರರಾಜೇಂದ್ರನು ವಶಪಡಿಸಿಕೊಂಡನು. 1792ರಲ್ಲಿ  ಟಿಪ್ಪು ಸುಲ್ತಾನನ ಮನವಿಯ ಮೇರೆಗೆ ಬೆಳ್ಳಾರೆ ಮತ್ತು ಪಂಜ ಮಾಗಣೆಗಳನ್ನು ದೊಡ್ಡ ವೀರರಾಜೇಂದ್ರನು ಟಿಪ್ಪು ಸುಲ್ತಾನನಿಗೆ ಬಿಟ್ಟು ಕೊಟ್ಟನು.
    
     1. ಬೆಳ್ಳಾರೆಯ ಕೋಟೆ ಮತ್ತು ಬ್ರಿಟಿಷರ ಖಜಾನೆ: ಟಿಪ್ಪುವಿನ ಮರಣಾನಂತರ ಬೆಳ್ಳಾರೆ ಮಾಗಣೆಯ 37 ಗ್ರಾಮಗಳನ್ನು ದೊಡ್ಡ ವೀರರಾಜೇಂದ್ರನ ವಶಕ್ಕೆ ಬ್ರಿಟಿಷರು ನೀಡಿದ್ದಾರೆ. ಕೊಡಗಿನ ಕೊನೆಯ ಅರಸ ಚಿಕ್ಕ ವೀರರಾಜೇಂದ್ರನನ್ನು  1834ರಲ್ಲಿ ಬ್ರಿಟಿಷರು  ಪದಚ್ಯುತಗೊಳಿಸಿ ಬೆಳ್ಳಾರೆ ಸೇರಿದಂತೆ, ಸುಳ್ಯ ,ಪಂಜ ಸೀಮೆಯ 110 ಗ್ರಾಮಗಳನ್ನು  ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗರಸರ ಕಾಲದಲ್ಲಿ ವಸ್ತುರೂಪದಲ್ಲಿ ಭೂ ಕಂದಾಯವನ್ನು ನಗದು ರೂಪಕ್ಕೆ ಬದಲಾಯಿಸಿದರು. ಇದರ ಪ್ರತಿಫಲವಾಗಿ ಒಂದು ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಅದನ್ನು ಬ್ರಿಟಿಷರು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರು. ಸುಳ್ಯದ ರೈತಾಪಿ ಜನರು ಕೆದಂಬಾಡಿ ರಾಮೇಗೌಡ,ಕೂಜುಕೋಡು ಮಲ್ಲಪ್ಪ ಗೌಡ ಮೊದಲಾದವರ ನೇತೃತ್ವದಲ್ಲಿ ಬ್ರಿಟಿಷರನ್ನು ಹೊಡೆದೋಡಿಸಲು ತೀರ್ಮಾನಿಸಿದರು .ಪುಟ್ಟ ಬಸಪ್ಪನೆಂಬ ಜಂಗಮನನ್ನು ಕಲ್ಯಾಣಸ್ವಾಮಿ ಎಂದು ಕರೆದು ಈತ ಕೊಡಗಿನ ಅರಸರ  ವಂಶದವನು ಎಂದು ಜನರನ್ನು ನಂಬಿಸಿದರು. ಮೊದಲಿಗೆ ಬೆಳ್ಳಾರೆಯ ಕೋಟೆಯ ಒಳಗಿದ್ದ ಬ್ರಿಟಿಷ್ ಖಜಾನೆಯನ್ನು ವಶಪಡಿಸಿಕೊಂಡರು.
       (c)ಡಾ.ಲಕ್ಷ್ಮೀ ಜಿ ಪ್ರಸಾದ
           
ಬೆಳ್ಳಾರೆ ಕೋಟೆಯಲ್ಲಿ ಕಲ್ಯಾಣಸ್ವಾಮಿಗೆ ಪಟ್ಟ ಕಟ್ಟಿದರು. ಬ್ರಿಟಿಷರಿಂದ ವಶಪಡಿಸಿಕೊಂಡ ಬೆಳ್ಳಾರೆಯ ಖಜಾನೆ ಮತ್ತು ಕೋಟೆ ಇಂದಿಗೂ ಇದೆ. ಬೆಳ್ಳಾರೆಯ  ಸರಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದ ಬದಿಯಲ್ಲಿ ಈ ಕೋಟೆ ಇದೆ.(ಚಿತ್ರ-1) ಈಗ ಬಂಗ್ಲೆ ಗುಡ್ಡೆ ಎಂದು ಕರೆಯಲ್ಪಡುವ ಕೋಟೆಯ ಮೇಲೆ ಇರುವ ಒಂದು ಕಟ್ಟಡವೇ ಆ ಖಜಾನೆ (ಚಿತ್ರ-2) ಈ ಕಟ್ಟಡದಲ್ಲಿ ಈಗ ವಿಲೇಜಾಫೀಸ್ ಇದೆ. ಕೋಟೆಯ ಸುತ್ತ ತೋಡಿದ ಕಂದಕದ ಕುರುಹು ಈಗ ಕೂಡ ಇದೆ.ಈ ಕೋಟೆಯನ್ನು ಕ್ರಿ.ಶ. 1601ರಲ್ಲಿ ಇಕ್ಕೇರಿಯ ಅರಸರು ಕಟ್ಟಿಸಿದ್ದಾರೆ.     
        
                    
    2. ಬೆಳ್ಳಾರೆಯ ಮಾಸ್ತಿ ಕಟ್ಟೆ ಮತ್ತು ಮಾಸ್ತಿ ವಿಗ್ರಹಗಳು   ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಮಾಸ್ತಿ ಕಟ್ಟೆ ಎಂಬ ಪ್ರದೇಶ ಇದೆ. ಬೆಳ್ಳಾರೆ ಪುತ್ತೂರು ಮುಖ್ಯ ರಸ್ತೆಯ ಬಲಭಾಗದಲ್ಲಿ ತುಸುದೂರ ಒಳಗೆ ಹೋಗಿ ಸ್ವಲ್ಪ ಎತ್ತರದ ಗುಡ್ಡೆ ಪ್ರದೇಶದಲ್ಲಿ ಮಾಸ್ತಿ ಕಟ್ಟೆ ಎಂಬ ಹೆಸರಿನ ಕಟ್ಟೆ ಇತ್ತು. ಇಲ್ಲಿ ನಾಲ್ಕು ಶಿಲಾ ಸ್ತಂಭಗಳನ್ನು ನಾಲ್ಕು ದಿಕ್ಕಿಗೆ ನೆಡಲಾಗಿದ್ದು, ಕೆಳಗೆ ಶಿಲೆಯನ್ನು ಹಾಸಲಾಗಿತ್ತು. ಇಲ್ಲಿ ಒಂದು ಸ್ತ್ರೀಯ ಚಿತ್ರ, ಅವಳ ಎತ್ತಿದ ಕೈಯ ಚಿತ್ರ ಹಾಗೂ ಅರ್ಧ ಚಂದ್ರನ ಚಿತ್ರವನ್ನು ಕೆತ್ತಿರುವ ಶಿಲೆ ಇತ್ತು. ಎಂದು ಇದನ್ನು ನೋಡಿರುವ ಪುಷ್ಪರಾಜರು ಹೇಳುತ್ತಾರೆ. ಅವರು ಹೇಳಿರುವ ಪ್ರಕಾರದ ಶಿಲ್ಪವು ಮಹಾಸತಿಗಲ್ಲಿನಲ್ಲಿ ಇರುತ್ತದೆ. ಆದ್ದರಿಂದ ಇಲ್ಲೊಂದುಮಹಾಸತಿಕಲ್ಲು ಇತ್ತೆಂದು ತಿಳಿದು ಬರುತ್ತದೆ. ಕಟ್ಟೆ ಕೂಡಾ ಇರುವುದರಿಂದ ಇದನ್ನು ಮಹಾಸತಿ  ಕಟ್ಟೆ ಎಂದು ಕರೆದಿರಬೇಕು. ಕಾಲಾಂತರದಲ್ಲಿ ಇದು  ಮಾಸ್ತಿ ಕಟ್ಟೆ ಎಂದಾಗಿದೆ,ಈಗ ಈ  ಪ್ರದೇಶದವನ್ನು ಸಮತಟ್ಟಾಗಿಸಿದ್ದು, ಇಲ್ಲಿ ಮಹಾಸತಿ  ಕಟ್ಟೆ  ಇದ್ದ ಕುರುಹುಗಳು ಅಳಿಸಿ ಹೋಗಿದೆ. 3-4 ವರ್ಷಗಳ ಹಿಂದಿನ ತನಕ ಮಹಾಸತಿ ಕಟ್ಟೆ ಇತ್ತು, ಸುಮಾರು 20-25  ವರ್ಷಗಳ ಮೊದಲು ಇಲ್ಲಿ ಮಹಾಸತಿ ಕಲ್ಲು ಇದ್ದುದನ್ನು ನೋಡಿದವರಿದ್ದಾರೆ, ಈ ಕಲ್ಲು ಈಗ ಎಲ್ಲೋ ಕಳೆದು ಹೋಗಿದೆ.ಆದರೆ ಬೆಳ್ಳಾರೆ ಬೀಡಿನ ಪಟ್ಟದ ಚಾವಡಿಯಲ್ಲಿರುವ ಅಡ್ಯಂತಾಯ ದೈವದ ಗುಡಿಯಲ್ಲಿ ಎರಡು ಮಾಸ್ತಿ ವಿಗ್ರಹಗಳು ಇವೆ  ತುಳುನಾಡಿನಲ್ಲಿ ಸತಿ ಸಹಗಮನ ಪದ್ಧತಿ ಅಷ್ಟಾಗಿ ಪ್ರಚಲಿತವಿರಲಿಲ್ಲ,ಆದ್ದರಿಂದ ಸಹಗಮನ  ಮಾಡಿದವರ ಸಂಖ್ಯೆ ತೀರಾ ಕಡಿಮೆ ಇದೆ. ಉಡುಪಿ , ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 6-7 ಮಹಾಸತಿ ಕಲ್ಲು/ಕಟ್ಟೆಗಳು ಇವೆ. ಬೆಳ್ಳಾರೆಯಲ್ಲಿ  ಮಹಾಸತಿ ಕಲ್ಲು ಹಾಗೂ ಕಟ್ಟೆ ಇದ್ದಿದ್ದರೂ ಕೂಡಾ ಇಲ್ಲಿ  ಸತಿ ಸಹಗಮನ  ಮಾಡಿದವರು ಯಾರು? ಯಾವ ಕಾಲದಲ್ಲಿ? ಇತ್ಯಾದಿ ವಿಚಾರಗಳ ಬಗ್ಗೆ ಏನೂ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ.

                      
                                          
    3. ಬೆಳ್ಳಾರೆಯ ಬೀಡು ಮತ್ತು ಪಟ್ಟದ ಚಾವಡಿ: ಬೆಳ್ಳಾರೆಯನ್ನು ಜೈನ ಪಾಳೆಯಗಾರರು ಆಳಿದ್ದಕ್ಕೆ ಕುರುಹಾಗಿ  ಬೆಳ್ಳಾರೆಯ ಕೋಟೆಯ ಹಿಂಭಾಗದಲ್ಲಿ ಬೀಡಿನ ಅವಶೇಷ ಈಗಲೂ ಇದೆ. ( ಚಿತ್ರ-3) ಬಲ್ಲಾಳರ ಬೀಡಿನ ಅವಶೇಷದ ವಾಯುವ್ಯ ಭಾಗದಲ್ಲಿ ಬೆಳ್ಳಾರೆಯ ಪ್ರಧಾನ ದೈವ ಅಡ್ಯಂತಾಯ ಭೂತದ ಚಾವಡಿ ಇದೆ.  ಭೂತದ ನೇಮದ ಸಂದರ್ಭದಲ್ಲಿ ಇದು ಪಟ್ಟದ ಚಾವಡಿ ಎಂದು ಕರೆಸಿಕೊಂಡು (ಚಿತ್ರ-4)  ಭೂತದ ನುಡಿಯಾಗುತ್ತದೆ. ಇದರಿಂದಾಗಿ ಜೈನ ಪಾಳೆಯಗಾರರಾದ ಬಲ್ಲಾಳರಸರ ಪಟ್ಟಾಭಿಷೇಕ ಇಲ್ಲಿಯೇ ಆಗುತ್ತಿತ್ತೆಂದು ತಿಳಿದು ಬರುತ್ತದೆ. ಅಡ್ಯಂತಾಯ ಭೂತದ ಚಾವಡಿಯ ಗುಡಿಯಲ್ಲಿ ಕಂಚಿನಿಂದ ನಿರ್ಮಿಸಲ್ಪಟ್ಟ ಎರಡು  ಸ್ತ್ರೀ ರೂಪದ ಮೂರ್ತಿಗಳು ಇವೆ ಕೈಯಲ್ಲಿ ಕನ್ನಡಿ ಹಿಡಿದ ಕಾರಣ ಹಾಗು ಮೂರ್ತಿಯ ಲಕ್ಷ್ಮ್ಣಗಳನ್ನೂ ಗಮನಿಸಿದಾಗ ಮಾಸ್ತಿ ವಿಗ್ರಹಗಳು ಎಂದು ಹೇಳ ಬಹುದು ಇದರ ಜೊತೆ "ಎರಡು ಜಲಪಾತ್ರೆಗಳ ರೀತಿಯ ಕಲಶಗಳು ಇದ್ದು ಇವು ಮಾಸ್ತಿ ಹೋಗುವ ಮುನ್ನ ಗಂಗಮ್ಮನ ಪೂಜೆಗೆ ಸತಿಯರು ಬಳಸಿದ ಜಲಪಾತ್ರೆಗಳು ಇವಾಗಿರ ಬಹುದೆಂದೂ ,ಈ ಸ್ತ್ರೀ ವಿಗ್ರಹಗಳು ಮಾಸ್ತಿ ವಿಗ್ರಹಗಳೆಂದು" ಹಂಪಿ ವಿಶ್ವ ವಿದ್ಯಾಲಯದ ನಿವೃತ್ತ ಪ್ರಾಧ್ಯ್ಯಪಕರೂ ಹಿರಿಯ ವಿದ್ವಾಂಸರೂ ಆದ ದೇವರ ಕೊಂದ ರೆಡ್ಡಿ ಯವರು ಅಭಿಪ್ರಾಯ ಪಟ್ಟಿದ್ದಾರೆ    ಈ ಬಗ್ಗೆ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ಸಿಗಬಹುದು.

                   
               

   4. ಆನೆ ಕಟ್ಟುವ ಕಲ್ಲು: ಪಟ್ಟದ ಚಾವಡಿಯ ತೆಂಕು ಭಾಗದಲ್ಲಿ ಬೀಡಿನರಮನೆ ಇತ್ತು,ಇದರ ಬಳಿಯೂ ಜೈನ ಬಸದಿ ಕೂಡ ಇತ್ತು.ಕೆಲವರ್ಷಗಳ ಹಿಂದಿನ ತನಕ ಈ ಬಸದಿಯ ಅವಶೇಷ ಕಾಣಿಸುತ್ತಿತ್ತು ಈಗ ನೆಲಸಮವಾಗಿ ಕುರುಹುಗಳು ಅಳಿಸಿ ಹೋಗಿವೆ, ಸಮೀಪದಲ್ಲಿ ಆನೆಗಳನ್ನು ಕಟ್ಟಿ ಹಾಕುವ ಕಲ್ಲುಗಳು ಇದ್ದವು.ಅಂಥಹ ಒಂದು ಆನೆ ಕಟ್ಟುವ ಕಲ್ಲನ್ನು ಈಗ ಕೂಡ ಕಾಣಬಹುದು
  
          
            
   5. ಬಂಡಿ ಮಜಲು:  ಹಿಂದೆ ಬೆಳ್ಳಾರೆ ಪಟ್ಟಣವಾಗಿತ್ತು. ಸರಕು ಸಾಗಾಟ ಎತ್ತಿನ ಬಂಡಿಗಳ ತಂಗುದಾಣ ಆಗಿದ್ದ ಪ್ರದೇಶವನ್ನು ಬಂಡಿ ಮಜಲು ಎಂದು ಕರೆಯುತ್ತಿದ್ದರು, ಬಂಡಿ ಮಜಲು ಎಂಬ ಈ ವಿಶಾಲವಾದ ಬಯಲು ಪ್ರದೇಶ ಬೆಳ್ಳಾರೆ  ಪೇಟೆಯಿಂದ ತುಸು ದೂರದಲ್ಲಿ ಈಗ ಕೂಡ ಇದೆ,

   6. ದೈವತ್ವವನ್ನು ಪಡೆದ  ಬೆಳ್ಳಾರೆಯ  ರಾಜಕುಮಾರ-ನೈದಾಲಪಾಂಡಿ ಭೂತ: ಸಂಪಾಜೆಯಿಂದ ಏಳೆಂಟು ಕಿಲೋಮೀಟರ್ ಒಳಭಾಗದ ಕಾಡಿನಲ್ಲಿ ಅರೆಕಲ್ಲು ಎನ್ನುವ ಸ್ಥಳವಿದೆ. ಇಲ್ಲಿ ಒಂದು ಅಯ್ಯಪ್ಪ ಮತ್ತು ಶಿವನ ಗುಡಿಗಳು ಇವೆ.ಇಲ್ಲಿ ಪೂಜಾ ಕಾಂiÀರ್iಗಳನ್ನು ಕೊಡಗಿನ ಗಾಳಿಬೀಡಿನ ಪಾಂಡೀರ ರಾಜ ವಂಶದವರು ಬಂದು ನಡೆಸುತ್ತಾರೆ. ಇಲ್ಲಿ ಏಳು ವರ್ಷಗಳಿಗೊಮ್ಮೆ "ನೈದಾಲ ಪಾಂಡಿ"* ಎಂಬ ಭೂತಕ್ಕೆ ನೇಮ ನೀಡಿ ಆರಾಧನೆ ಸಲ್ಲಿಸುತ್ತಾರೆ.

ತುಳುನಾಡಿನ ಭೂತ ಪದಕ್ಕೆ ಕನ್ನಡದ ಭೂತ ಅಥವಾ ದೆವ್ವ ಎಂಬ ಅರ್ಥವಿಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಣ ಶಿಷ್ಟ ರಕ್ಷಕ ಶಕ್ತಿಗಳು. ಇವು ತುಳುವರ ಆರಾಧ್ಯ ದೈವಗಳು.ಸಂಸ್ಕೃತದ  ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಬೂತೊ ಎಂದಾಗಿ ಸಂಸ್ಕೃತೀಕರಣಗೊಂಡು ಭೂತ ಎಂದಾಗಿರುವ ಸಾಧ್ಯತೆ ಇದೆ. ತುಳುನಾಡಿನ ಭೂತಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದು  ಅಸಹಜ ಮರಣವನ್ನಪ್ಪಿದ ಸಾಂಸ್ಕೃತಿಕ  ವೀರರೇ ಆಗಿದ್ದಾರೆ. ಈ ಹಿಂದೆ ಇದ್ದವರು ಎಂಬರ್ಥದಲ್ಲಿ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ. ಇತಿಹಾಸ, ರಾಜಕೀಯ, ಸಂಸ್ಕøತಿ, ಸಾಮಾಜಿಕ, ಜಾನಪದ ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು ಹಾಕಿಕೊಂಡಿದೆ. ಅಂತೆಯೇ ದುರಂತ ಮತ್ತು ದೈವತ್ವವನ್ನು ಪಡೆದ ಬೆಳ್ಳಾರೆಯ ರಾಜಕುಮಾರ ನೈದಾಲ ಪಾಂಡಿಯ ಕುರಿತಾದ ಐತಿಹ್ಯ ಮತ್ತು ಆರಾಧನೆಯಲ್ಲಿ ಇತಿಹಾಸದ ತುಣುಕುಗಳು ಅಡಗಿವೆ.
               
                                                     
     
 ಇದರಲ್ಲಿ ಮೊದಲನೆಯ ಪಾತ್ರಿಯಾಗಿ ಪೂಮಲೆ ಕುಡಿಯರು ಎರಡನೆಯ ಪಾತ್ರಿಗಳಾಗಿ ಪಾಂಡಿ ಮನೆಯವರು  ಭಾಗವಹಿಸುತ್ತಾರೆ.  ನೈದಾಲಪಾಂಡಿ ಭೂತವನ್ನು ಪೂಮಲೆ ಕುಡಿಯ ಜನಾಂಗದ ಭೂತ ಪಾತ್ರಿಗಳಲ್ಲಿ ಹಿರಿಯರೊಬ್ಬರಿಗೆ ಹೇಳಿ ಕಟ್ಟಿಸುತ್ತಾರೆ. ನೈದಾಲಪಾಂಡಿ ಭೂತ ಕಟ್ಟಿದವರು ತುಸುಕಾಲದಲ್ಲಿಯೇ ಮರಣವನ್ನಪ್ಪುತ್ತಾರೆ ಎಂಬ ನಂಬಿಕೆ ಪ್ರಚಲಿತವಿರುವುದರಿಂದ ವಯಸ್ಸಾದ ವೃದ್ಧರೇ  ನೈದಾಲ ಪಾಂಡಿ ಭೂತವನ್ನು ಕಟ್ಟುತ್ತಾರೆ.
್ರ
      ನೈದಾಲಪಾಂಡಿ ಭೂತಕ್ಕೂ ಬೆಳ್ಳಾರೆಗೂ ಅವಿನಾಭಾವ ಸಂಬಂಧವಿದೆ.  ಪಾಂಡಿ ಮನೆಯ ಹಿರಿಯರು ಈ ಬಗ್ಗೆ ಮಾಹಿತಿ ನೀಡಿರುತ್ತಾರೆ.  ಬೆಳ್ಳಾರೆಯನ್ನು ಓರ್ವ ತುಂಡರಸ ಆಳಿಕೊಂಡಿದ್ದನು. ಅವನು ಪಾಂಡು ರೋಗಿಯಾಗಿದ್ದನು.  ಅವನ ನಂತರ ಅವನ ಮಗ ಬೆಳ್ಳಾರೆಯನ್ನು ಆಳಿಕೊಂಡಿದ್ದನು.  ಇವನನ್ನು ಶತ್ರುಗಳು ಆಕ್ರಮಿಸಿದಾಗ ಬೆಳ್ಳಾರೆಯಿಂದ ತಪ್ಪಿಸಿಕೊಂಡು ಹೋಗಿ, ಪೂಮಲೆ ಕಾಡಿಗೆ ಹೋಗಿ ಪೂಮಲೆ ಕುಡಿಯರ ಮನೆಯೊಂದರಲ್ಲಿ ಆಶ್ರಯ ಪಡೆಯುತ್ತಾನೆ.  ಅಲ್ಲಿಗೆ ಕೊಡಗರಸರ ತಂಗಿ ಬಂದಾಗ ಬೆಳ್ಳಾರೆಯ ರಾಜ ಕುಮಾರ ಮತ್ತು ಅವಳ ಪರಿಚಯವಾಗಿ ಅದು ಪ್ರೇಮಕ್ಕೆ  ತಿರುಗುತ್ತದೆ.  ನಂತರ ಅವರು ಮದುವೆಯಾಗಿ ಕೊಡಗಿನಲ್ಲಿ ಇರುತ್ತಾರೆ.  ಇದು ಬೆಳ್ಳಾರೆಯ ರಾಜನ ಶತ್ರುಗಳಿಗೆ ತಿಳಿದು ಕೊಡಗಿಗೆ ಹೋಗಿ ಅವನ ಮೇಲೆ ಆಕ್ರಮಣ ಮಾಡುತ್ತಾರೆ.  ಆಗ ಶತ್ರುಗಳ ಎದುರಿನಿಂದಲೇ ತಪ್ಪಿಸಿಕೊಂಡು  ಹೋಗಿ ಅರೆಕಲ್ಲಿಗೆ ಬಂದು ಶಿವನಲ್ಲಿ ಐಕ್ಯನಾಗುತ್ತಾನೆ.  ನಂತರ ದೈವತ್ವಕ್ಕೇರಿ ನೈದಾಲ ಪಾಂಡಿ ಎಂಬ ಹೆಸರಿನ ಭೂತವಾಗಿ ಆರಾಧನೆ ಪಡೆಯುತ್ತಾನೆ.

      ನೈದಾಲಪಾಂಡಿ ಭೂತಕ್ಕೆ ಅರಸು ದೈವಕ್ಕೆ ಕಟ್ಟುವಂತೆ ದೊಡ್ಡದಾದ ಮೀಸೆ, ತಲೆಗೆ ಪಗಡಿ ರೂಪದ ಕಿರೀಟದಂತೆ ಇರುವ ಮುಡಿ ಕಟ್ಟುತ್ತಾರೆ (ಚಿತ್ರ-8). ಬೆಳ್ಳಾರೆಯ ತುಂಡರಸ ಪಾಂಡುರೋಗಿಯಾಗಿದ್ದರಿಂದ ಅವನ ಮಗನನ್ನು 'ಪಾಂಡಿ' ಎಂದು ಕರೆಯುತ್ತಿದ್ದರು.  ಈತ ಪೂಮಲೆಯಲ್ಲಿ ಉಳಿದುಕೊಂಡ ಪ್ರದೇಶದ ಹೆಸರು ನೈದಾಲ್ ಎಂದು.  ಎರಡು ವಂಶಗಳನ್ನು ನೆಯ್ದ ಅಂದರೆ ಬೆಸೆದ ಕಾರಣ ಆತನನ್ನು ನೈದಾಲ ಪಾಂಡಿ ಎಂದು ಕರೆಯುತ್ತಾರೆ ಎಂಬ ಐತಿಹ್ಯವೂ ಇದೆ.  ನೈದಾಲಿನ ಪಾಂಡಿ ಎಂಬರ್ಥದಲ್ಲಿ ನೈದಾಲ ಪಾಂಡಿ ಎಂಬ ಹೆಸರು ಬಂದಿದೆ ಎಂದು ನೈದಾಲ ಪಾಂಡಿಯ ವಂಶದ ಹಿರಿಯರು ಹೇಳುತ್ತಾರೆ.  ನೈದಾಲ ಪಾಂಡಿ ಭೂತದ ನೇಮದ ಸಂದರ್ಭದಲ್ಲಿ ಒಂದು ಹಾಡನ್ನು ಹಾಡುತ್ತಾರೆ.  ಅದರಲ್ಲಿ ನೈದಾಲಪಾಂಡಿಯನ್ನು ಅಜ್ಜಯ್ಯ ಎಂದೂ, ಕಾಸರಗೋಡು ಕಾಳೆಯ್ಯ ಎಂದೂ ಕರೆದಿದ್ದಾರೆ.  ಗಾಳಿ ಬೀಡಿನಲ್ಲಿರುವ ನೈದಾಲಪಾಂಡಿಯ ವಂಶದ ಹಿರಿಯರು ನೈದಾಲಪಾಂಡಿಯ ಮೊದಲ ಹೆಸರು ಕಾಳೆಯ್ಯ ಎಂದೂ, ಮದುವೆಯಾದ ಮೇಲೆ ಆತ ಲಿಂಗಾಯತ ಧರ್ಮಕ್ಕೆ ಮತಾಂತರ ಮಾಡಿದನೆಂದೂ ಹೇಳಿದ್ದಾರೆ.  ನೈದಾಲ ಪಾಂಡಿಯ ಕಥಾನಕ ಸುಮಾರು 130 ರಿಂದ 180 ವರ್ಷಗಳ ಹಿಂದೆ ನಡೆದ ಘಟನೆಯಾಗಿz

 
     ದೈವತ್ವಕ್ಕೇರಿದ ಬೆಳ್ಳಾರೆಯ ಈ ತುಂಡರಸ ಯಾರು? ಈತನನ್ನು ಆಕ್ರಮಿಸಿದ ಶತ್ರುಗಳು ಯಾರು? ಯಾವ ಕಾಲ ಇತ್ಯಾದಿ ವಿಷಯಗಳ ಬಗ್ಗೆ ವಿವರ ಸರಿಯಾಗಿ ಸಿಗುತ್ತಿಲ್ಲ. ಹೈದರಾಲಿಯ ಸಹಾಯದಿಂದ ಲಿಂಗಯ್ಯ(ಲಿಂಗರಾಜ?) ಕೊಡಗನ್ನು ಆಳುತ್ತಿದ್ದ ಹಾಲೇರಿ ವಂಶದ ದೇವಯ್ಯ(ದೇವಪ್ಪ?)ನನ್ನು ಸೋಲಿಸಿದನು. ವೈರಿ ಸೇನೆಯೆದುರು ನಿಲ್ಲಲಾರದೆ ದೇವಯ್ಯನು ಓಡಿ ಹೋಗಿ ಕಾಡುಗಳಲ್ಲಿ ತಲೆಮರೆಸಿಕೊಂಡನು ಎಂದು ಕರ್ನಾಟಕ ಚರಿತ್ರೆ ಸಂಪುಟದಲ್ಲಿ ಹೇಳಿದೆ.  ಅದೇ ರೀತಿ ಚಿಕ್ಕ ವೀರ ರಾಜನ ತಂಗಿ ದೇವಮ್ಮಾಜಿಯ ಗಂಡ ಚೆನ್ನ ಬಸವ ಕೊಡವನಾಗಿದ್ದು, ಮದುವೆ ಸಂದರ್ಭದಲ್ಲಿ ಲಿಂಗಾಯತನಾದವನು.  ಚೆನ್ನ ಬಸವನು ಬ್ರಿಟಿಷರ  ಪರವಾಗಿದ್ದ ಬಗ್ಗೆ ಮಾಹಿತಿ ಸಿಗುತ್ತದೆ.  ಅಮರ, ಸುಳ್ಯ ಕ್ರಾಂತಿಯ ಸಂದರ್ಭದಲ್ಲಿ ಪುಟ್ಟ ಬಸಪ್ಪ ಎಂಬಾತನನ್ನು ಪೂಮಲೆ ಕಾಡಿನಲ್ಲಿ ಕೆಲ ಕಾಲ ಇರಿಸಿ ಆತನನ್ನು ಕಲ್ಯಾಣಸ್ವಾಮಿ ಎಂದು ಜನರನ್ನು ನಂಬಿಸಿ ಬೆಳ್ಳಾರೆಯ ಕೋಟೆಯಲ್ಲಿ ಪಟ್ಟಾಭಿಷೇಕ ಮಾಡಿದ ಬಗ್ಗೆ ಮಾಹಿತಿ ಸಿಗುತ್ತದೆ.  ಹೈದರಾಲಿಯ ಸಹಾಯ ಪಡೆದು ಆಕ್ರಮಿಸಿದ ಲಿಂಗರಾಜನನ್ನು ಎದುರಿಸಲಾರದೆ ಕಾಡಿಗೆ ಓಡಿ ಹೋದ ದೇವಯ್ಯನಿಗೂ ಚೆನ್ನ ಬಸವನಿಗೂ ಯಾವುದಾದರೂ ಸಂಬಂಧವಿದೆಯೇ? ಎಂಬ ಬಗ್ಗೆ ಏನೂ ತಿಳಿದು ಬರುವುದಿಲ್ಲ.  ಆದರೆ ಚೆನ್ನ ಬಸವನಂತೆ ನೈದಾಲಪಾಂಡಿ ಕೂಡ ಮೂಲತಃ ಕೊಡವನಾಗಿದ್ದು,ಅನಂತರ ಲಿಂಗಾಯತನಾಗಿ ಪರಿವರ್ತಿತನಾಗಿದ್ದಾನೆ. ನೈದಾಲ ಪಾಂಡಿ ಕೂಡಾ ಚೆನ್ನ ಬಸವನಂತೆ ಕೊಡಗರಸರ ಮನೆಗೆ ಸೇರಿದ ಹುಡುಗಿಯನ್ನು ಮದುವೆಯಾಗಿದ್ದಾನೆ. ಆದ್ದರಿಂದ ಚೆನ್ನ ಬಸವನೇ ನೈದಾಲಪಾಂಡಿ ಎಂಬ ಹೆಸರಿನಲ್ಲಿ ಆರಾಧಿಸಲ್ಪಟ್ಟಿರುವ  ಸಾಧ್ಯತೆ ಇದೆ. ಪಂಜದಲ್ಲಿರುವ ಪಾಂಡಿಗದ್ದೆ, ಕೋಟೆಮುಂಡುಗಾರು ಬಳಿಯಲ್ಲಿರುವ ಪಾಂಡಿಪಾಲು, ಸಂಪಾಜೆಯ ಪಾಂಡಿಮನೆ ಎಂಬ ಪ್ರದೇಶಗಳು ನೈದಾಲ ಪಾಂಡಿ ರಾಜಕುಮಾರನಿಗೆ ಸಂಬಂಧಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಸಮಗ್ರ ಅಧ್ಯಯನವಾಗಬೇಕಾಗಿದೆ.

 ಟಿಪ್ಪಣಿ:-
* ತುಳುನಾಡಿನ ಭೂತ ಪದಕ್ಕೆ ಕನ್ನಡದ ಭೂತ ಅಥವಾ ದೆವ್ವ ಎಂಬ ಅರ್ಥವಿಲ್ಲ. ತುಳುನಾಡಿನ ಭೂತಗಳು ದುಷ್ಟ ಶಿಕ್ಷಣ ಶಿಷ್ಟ ರಕ್ಷಕ ಶಕ್ತಿಗಳು. ಇವು ತುಳುವರ ಆರಾಧ್ಯ ದೈವಗಳು.ಸಂಸ್ಕೃತದ  ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಬೂತೊ ಎಂದಾಗಿ ಸಂಸ್ಕೃತೀಕರಣಗೊಂಡು ಭೂತ ಎಂದಾಗಿರುವ ಸಾಧ್ಯತೆ ಇದೆ. ತುಳುನಾಡಿನ ಭೂತಗಳಲ್ಲಿ ಹೆಚ್ಚಿನವರು ಮಾನವ ಮೂಲವನ್ನು ಹೊಂದಿದ್ದು  ಅಸಹಜ ಮರಣವನ್ನಪ್ಪಿದ ಸಾಂಸ್ಕೃತಿಕ  ವೀರರೇ ಆಗಿದ್ದಾರೆ. ಈ ಹಿಂದೆ ಇದ್ದವರು ಎಂಬರ್ಥದಲ್ಲಿ ಭೂತ ಪದ ಬಳಕೆಗೆ ಬಂದಿರುವ ಸಾಧ್ಯತೆ ಇದೆ. ಇತಿಹಾಸ, ರಾಜಕೀಯ, ಸಂಸ್ಕøತಿ, ಸಾಮಾಜಿಕ, ಜಾನಪದ ಸೇರಿದಂತೆ ಎಲ್ಲ ವಿಚಾರಗಳು ಕೂಡ ತುಳುನಾಡಿನಲ್ಲಿ ದುರಂತ ಮತ್ತು ದೈವತ್ವದೊಂದಿಗೆ ತಳುಕು ಹಾಕಿಕೊಂಡಿದೆ. ಅಂತೆಯೇ ದುರಂತ ಮತ್ತು ದೈವತ್ವವನ್ನು ಪಡೆದ ಬೆಳ್ಳಾರೆಯ ರಾಜಕುಮಾರ ನೈದಾಲ ಪಾಂಡಿಯ ಕುರಿತಾದ ಐತಿಹ್ಯ ಮತ್ತು ಆರಾಧನೆಯಲ್ಲಿ ಇತಿಹಾಸದ ತುಣುಕುಗಳು ಅಡಗಿವೆ.

   ಆಧಾರಗ್ರಂಥಗಳು:
       1.ಕಾನಕುಡೇಲು ಗಣಪತಿ ಭಟ್ಟ    -  ಪಂಜ ಸೀಮಾ ದರ್ಶನ
       2.ಎನ್.ಎಸ್ ದೇವಿಪ್ರಸಾದ      -   ಅಮರಸುಳ್ಯದ ಸ್ವಾತಂತ್ರ್ಯ ಹೋರಾಟ
       3.ಡಾ|| ಲಕ್ಷ್ಮೀ ಜಿ. ಪ್ರಸಾದ      -  ತುಳುನಾಡಿನ ಅಪೂರ್ವ ಭೂತಗಳು




     ಡಾ|| ಲಕ್ಷ್ಮೀ ಜಿ. ಪ್ರಸಾದ,
     ಕನ್ನಡ ಭಾಷಾ ಉಪನ್ಯಾಸಕರು,
     ಸ.ಪ.ಪೂ. ಕಾಲೇಜು, ಬೆಳ್ಳಾರೆ,
     ಸುಳ್ಯ (ತಾ), ದ.ಕ. ಜಿಲ್ಲೆ 574212

                                                                   
                                                          ಆನೆ ಕಟ್ಟುವ ಕಲ್ಲು
                                                                            ಬೆಳ್ಳಾರೆಯ  ಕೋಟೆ
                         
                        ಬೆಳ್ಳಾರೆ ಬೇಡಿನ ಪಟ್ಟದ ಚಾವಡಿ

 
                    ನೈದಾಲ ಪಾಂಡಿ ಭೂತ
                                ನೈದಾಲ ಪಾಂಡಿ ಪಾತ್ರಿ