Monday 20 May 2013

ಗಿಳಿ ಬಾಗಿಲು(ಹವ್ಯಕ ಅಂಕಣ ) - ಎಂಗಳ ಭಾಷೆ ರಜ್ಜ ಬೇರೆ

                                

.ಮೊನ್ನೆ ಫೇಸ್ ಬುಕ್ಕಿಲಿ  ಎನ್ನ ಸಣ್ಣಾದಿಪ್ಪಗಣ ಗೆಳೆಯ(ನೆಂಟ್ರು ) ಸೂರ್ಯನಾರಾಯಣ  ತೆಂಕ ಬೈಲು (ಈಗ ಅವ  ದೇಲಂತ ಬೆಟ್ಟಿನ ದೊಡ್ಡ ಶಾಲೆ ಮಾಷ್ಟ್ರ ) ಹವ್ಯಕ ಭಾಷೆಲಿ ಬರೆ  ಓದುಲೆ  ಕೊಶಿ ಆವುತ್ತು ಹೇಳಿ ಸಲಹೆ ಕೊಟ್ಟ .ಸುಮಾರು ಸಮಯಂದ ಆನು ಹವ್ಯಕ ಭಾಷೇಲಿ ರಜ್ಜ ಏನಾರು ಎಂತಾದರು  ಬರೆಯಕ್ಕು ಹೇಳಿ  ಜಾನ್ಸಿಗೊಂಡು  ಇತ್ತಿದೆ.ಅದಕ್ಕೆ ಸೂರ್ಯ ನಾರಾಯಣನ ಮಾತು ಬಲ ಕೊಟ್ಟತ್ತು ಹಾಂಗಾಗಿ ಹವ್ಯಕ ಭಾಷೆಲಿ ಬರವಲೆ ಸುರು ಮಾಡಿದ್ದೆ 
  ಆನು ನಾಲ್ಕು  ವರ್ಷ  ಮೊದಲು ಬೆಳ್ಳಾರೆ ಗವರ್ಮೆಂಟು    ಕೋಲೇಜಿಲಿ   ಕನ್ನಡ ಲೆಕ್ಚರು ಕೆಲಸಕ್ಕೆ ಸೇರಿದ ಒಂದೆರಡು ದಿನಂಗಳಲ್ಲಿಯೇ ಅಲ್ಯನೋ(ಣ) ರ ಹವ್ಯಕ ಭಾಷೆಗೂ ಎಂಗಳ ಹವ್ಯಕ ಭಾಷೆಗೂ ತುಂಬಾ ವ್ಯತ್ಯಾಸ ಇದ್ದು ಹೇಳಿ ಎನಗೆ ಗೊಂತಾತು .ಅಲ್ಯನೋರ ಹವ್ಯಕ ಭಾಷೇಲಿ ಕನ್ನಡದ ಪದಂಗ ಜಾಸ್ತಿ ಇದ್ದು .ಅದರ ಮೂಡ್ಲಾಗಿ  (ಹವ್ಯಕ) ಭಾಷೆ ಹೇಳಿಹೇಳ್ತವು .ಅವು ಎನಗೆ ಹೇಳುದರ ಎನಿಗೆ ಹೇಳಿ ಹೇಳ್ತವು .ನಮ್ಮ ಉಂಡೆಯ ಅವು ಕಡುಬು  ಹೇಳಿ ಹೇಳ್ತವು .ಹೀಂಗೆ ತುಂಬಾ ಕಡೆ ಅವರ ಭಾಷೆ ನಮ್ಮ ಭಾಷೆಂದ ಬೇರೆ ತರ ಇದ್ದು.ಪಡ್ಲಾಗಿ ಭಾಷೆಲಿದೆ ರಜ್ಜ ಬೇರೆ ತರ ಇಪ್ಪ ಹವ್ಯಕ ಭಾಷೆಯ ಒಂದು ವಿಧ ಅಲ್ಲಿನ ಕೆಲವು ಕುಟುಂಬಗಳಲ್ಲಿ ಅಲ್ಲಿ ಇದ್ದು .ಹೋವುಕೆ ಬರುಕೆ ಇತ್ಯಾದಿ ಪದಂಗ ಅದರಲ್ಲಿ ಇದ್ದು .ಅದು ರಜ್ಜ  ಭೈರಂಗಳ ಕನ್ನಡ ಭಾಷೆಯ ಹಾಂಗೆ ಇದ್ದು .
ಉತ್ತರ ಕನ್ನಡದೋರ ಹವ್ಯಕ ಭಾಷೆಗೂ ಎಂಗಳ  ಭಾಷೆಗೂ ತುಂಬಾ ವ್ಯತ್ಯಾಸ ಇಪ್ಪದು ಎನಗೆ ಗೊಂತಿತ್ತು .ಬೆಳ್ಳಾರೆಗೆ ಹೋದ ಮೇಲೆ ಅಲ್ಯಣ ಮೂಡ್ಲಾಗಿ ಭಾಷೆ ಮತ್ತೆ ಅದರ ಇನ್ನೊಂದು ವಿಧ ಇಪ್ಪದು ಗೊಂತಾತು ಎನಗೆ .ಮತ್ತೆ ಕೊಡೆಯಾಲ ಕಾಸರಗೋಡು ವಿಟ್ಲ  ಪುತ್ತೂರು   ಮೊದಲಾದ ಜಾಗೆಗಳ ಹವ್ಯಕ ಭಾಷೆದೆ ಎಂಗಳ ಹವ್ಯಕ ಭಾಷೆ(ಕೋಳ್ಯೂರು ಸೀಮೆದು )ದೆ  ಒಂದೇ ರೀತಿ ಇಕ್ಕು ಹೇಳಿ  ಆನು  ಗ್ರೇಶಿತ್ತಿದೆ.ಆದರೆ ಒಪ್ಪಣ್ಣನ  ಒಪ್ಪಂಗೊ ಓದುತ್ತಾ ಇದ್ದಾಂಗೆ ಎಂಗಳ ಭಾಷೆಗೂ ಅಲ್ಲಿ ಇಪ್ಪ ಭಾಷೆಗೂ ತುಂಬ ವ್ಯತ್ಯಾಸ ಇಪ್ಪದರ ನೋಡಿ ಎಂಗಳ ಭಾಷೆ ರಜ್ಜ ಬೇರೆ ಹೇಳಿ ಗೊಂತಾತು ಎನಗೆ .ಅದರಲ್ಲಿ  ಒ ಕಾರದ ಬಳಕೆ ಹೆಚ್ಚು ಇದ್ದು .ಅಭಿನಂದನೆಗೊ ,ಒಪ್ಪಂಗೊ ಮಂತ್ರಂಗೊ ,ಗಾದೆಗೊ  ಇತ್ಯಾದಿ .ಎಂಗಳ ಭಾಷೆಲಿ ಇಂತ ಕಡೆ ಒ ಕಾರ ಇಲ್ಲೆ .ಅಭಿನಂದನೆಗ  ಗಾದೆಗ ,ಮಂತ್ರಗ ಹೇಳಿ ಇರ್ತು .        
ಮತ್ತೆ ಎಂಗಳ ಭಾಷೆಲಿ ಹೇತು  ,ಹೇದು ಹೇದರೆ  ಕೇಟವು  ಇಂತ ಪದಂಗ ಇಲ್ಲೆ ಇದರ ಬದಲು .ಹೇಳಿತ್ತು ,ಹೇಳಿ ,ಹೇಳಿದರೆ ಕೇಳಿದವು ಹೇಳಿ ಇದ್ದು 
ಆನು ಭಾಷಾ ತಜ್ಞೆ ಅಲ್ಲ . ಎನ್ನ ತಲೆಗೆ ಬಂದದರ ಇಲ್ಲಿ ಬರದ್ದೆ .ಇನ್ನು ಮುಂದಣ ದಿನಂಗಳಲ್ಲಿದೆ  ಎನಗೆ ಬರೆಯಕ್ಕು ಹೇಳಿ ಎನ್ಸಿದ್ದರ ಎಂಗಳ ಹವ್ಯಕ ಭಾಷೆಲಿ ಬರೆತ್ತೆ .ನಿಂಗ ಎಲ್ಲ ತಿಳುದೋರು ಹಂಸ ಕ್ಷೀರ ನ್ಯಾಯದ ಹಾಂಗೆ (ನೀರು ಸೇರ್ಸಿದ ಹಾಲಿನ ಹಂಸದ ಎದುರು ಮಡುಗಿದರೆ ಅದು ಹಾಲಿನ ಮಾತ್ರ ಕುಡುದು ನೀರಿನ ಹಾಂಗೆ ಬಿಡ್ತಡ !ಇದೊಂದು ಕವಿ ಸಮಯ ) ಒಳ್ಳೆದರ ಮಾತ್ರ ತೆಕ್ಕೊಂಡು ಬೆನ್ನು ಕಟ್ಟಕ್ಕು ಹೇಳಿ ಕೇಳಿಗೊಂಡಿದೆ
 ಇನ್ನೊಂದರಿ ಕಾಂಬ  ನಮಸ್ಕಾರ
- ಡಾ.ಲಕ್ಷ್ಮಿ ಜಿ ಪ್ರಸಾದ







Friday 17 May 2013

ನಾಡೋಜ ಜಿ ನಾಗರಾಜಪ್ಪ -ಅಧ್ಯಕ್ಷೀಯ ನುಡಿ ದೇವರ ದಾಸಿಮಯ್ಯ ವಿಚಾರ ಸಂಕಿರಣ

Vocaroo Voice Message

ನಾಡೋಜ ಜಿ ನಾಗರಾಜಪ್ಪ -ಅಧ್ಯಕ್ಷೀಯ ನುಡಿ ದೇವರ ದಾಸಿಮಯ್ಯ ವಿಚಾರ ಸಂಕಿರಣ

Wednesday 15 May 2013

Friday 10 May 2013

ಭೂತಗಳ ಅದ್ಭುತ ಜಗತ್ತಿಗೆ ಪ್ರವೇಶ

                     

                   .  ಡಾಕ್ಟರೇಟ್ ಪದವಿಯ ಹಂಬಲ



     ಕೆಟ್ಟು ಪಟ್ಟಣ ಸೇರು ಎಂಬ ಹಾಗೆ ಸರಿಯಾದ ಉದ್ಯೋಗ ದೊರೆಯದೆ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದ  ನಾವು ಕೂಡಾ ಉದ್ಯೋಗವನ್ನು ಹುಡುಕಿಗೊಂಡು  ಬಂದು ಬೆಂಗಳೂರಿಗೆ ಬಂದವರು . ೨೦೦೫  ರ ಆರಂಭದಲ್ಲಿ ನನ್ನ ಅಣ್ಣ ನ ಸಹಾಯದಿಂದ  ನನ್ನ ಪತಿ  ಗೋವಿಂದ ಪ್ರಸಾದರಿಗೆ ಬೆಂಗಳೂರಿನ  ಸಾಫ್ಟ್ ವೇರ್ ಕಂಪನಿ ಒಂದರಲ್ಲಿ ಉದ್ಯೋಗ ದೊರೆತ ಕಾರಣ ನಾವು ಮಂಗಳೂರಿನಿಂದ ಬೆಂಗಳೂರಿಗೆ ಬಂದೆವು.ಆಗ ನಾನು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜ್ ನಲ್ಲಿ ಅರೆಕಾಲಿಕ ಸಂಸ್ಕೃತ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೆ .ಅದಕ್ಕೆ ರಾಜಿನಾಮೆ ಕೊಡುವಾಗ ಮುಂದೆ ಬೆಂಗಳೂರಿನಲ್ಲಿ ನನಗೆ ಕೆಲಸ ಸಿಕ್ಕುತ್ತದೋ ಇಲ್ಲವೋ ಎಂಬ ಭಯ ನಂಗೆ ಕಾಡಿತ್ತು
ನಾವು ಬೆಂಗಳೂರಿಗೆ ಶಿಫ್ಟ್ ಆದ ಮಾರನೆ ದಿನ ಪತ್ರಿಕೆಯೊಂದರಲ್ಲಿ ಎ ಪಿ ಎಸ್ ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ walk in interview ಗೆ ಆಹ್ವಾನಿಸಿ ದ್ದುದನ್ನು ನೋಡಿದೆ . ಗೋವಿಂದ ಪ್ರಸಾದ್ ಬೆಳಗ್ಗೆಯೇ ಎದ್ದು ತುಂಬಾ ಕೆಲಸ ಇದೆ ಅಂತ ಆಫೀಸ್ ಗೆ ಹೋಗಿದ್ದರು .ಆ ಕಾಲೇಜ್  ನಾವು ಇದ್ದ ವಿವೇಕಾನಂದ ನಗರದ ಹತ್ತಿರವೇ ಇದೆ ಎಂದು ನಮ್ಮ ನೆರೆಕರೆಯವರು ತಿಳಿಸಿದರು . ಇರಲಿ ನೋಡಿಯೇ ಬಿಡುವ ಎಂದು ಬೆಂಗಳೂರಿನ ಪರಿಚಯವೇ ಇಲ್ಲದ ನಾನು  ಮಗನೊಂದಿಗೆ ನನ್ನ ಸ್ಕೂಟರ್( ಸ್ಪಿರಿಟ್)  ಹತ್ತಿ  ಗಾಡಿ ಸ್ಟಾರ್ಟ್ ಮಾಡಿ ಅಲ್ಲಿಂದ ಮುಖ್ಯ ರಸ್ತೆಗೆ ತಂದು ಅಲ್ಲಿಂದ  ಅಲ್ಲಲ್ಲಿ ದಾರಿಹೋಕರಲ್ಲಿ ,ಅಂಗಡಿಯವರಲ್ಲಿ ಕೇಳಿಕೊಂಡು ಬಂದು ಆ ಕಾಲೇಜ್ ಗೆ ಹೇಗೋ ಬಂದೆ . ಆ ಹೊತ್ತಿಗಾಗುವಾಗ ಸಂದರ್ಶನ ಮುಗಿಯುವ ಹಂತಕ್ಕೆ ಬಂದಿತ್ತು . ಕೊನೆಯವಳಾಗಿ ಸಂದರ್ಶನ ಕೊಠಡಿಗೆ ಪ್ರವೇಶಿಸಿದೆ .ಆಗ ಅಲ್ಲಿದ್ದವರು ಯಾರನ್ನು ನನಗೆ ಪರಿಚಯ ಇರಲಿಲ್ಲಿಲ್ಲ .ಅನಂತರ ಅವರು ಯಾರೆಂದು ತಿಳಿಯಿತು . ಆಗ ಅಲ್ಲಿನ ಪ್ರಾಂಶುಪಾಲರಾಗಿದ್ದ ಡಾ||.ಕೆ . ಗೋಕುಲನಾಥರು  ಕನ್ನಡ ಉಪನ್ಯಾಸಕರು ಕೂಡ ಆಗಿದ್ದರು . ಛಂದಸ್ಸು  ಕಾವ್ಯ ಮೀಮಾಂಸೆ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಕೇಳಿ  ಕೊನೆಯಲ್ಲಿ ನೀವು ಮೂರು ಎಂ ಎ ಪದವಿಗಳನ್ನು ಯಾಕೆ ಮಾಡಿದಿರಿ ?ಎಂದು ಕೇಳಿದರು .ಯಾಕೇಂತ ಹೇಳುವುದು ?! ನನ್ನ ಓದಿನ ಹುಚ್ಚನ್ನು !!
ನಾನು ಹತ್ತನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದೆ .ಆ ಒಂದೇ ಕಾರಣದಿಂದ ಎಲ್ಲರು ವಿಜ್ಞಾನ ತಗೊಳ್ತಾರೆ ಅಂತ ನಾನು ಕೂಡ ಅದನ್ನೇ ಆಯ್ಕೆ ಮಾಡಿಕೊಂಡೆ . ಪಿ ಯು ಸಿ  ಸೈನ್ಸ್ ತಗೊಂಡ ಕಾರಣಕ್ಕೆ ಬಿ ಎಸ್ ಸಿ  ಮಾಡಬೇಕಾಯ್ತು (ಎಂಜಿನೀರಿಂಗ್   ಮೆಡಿಕಲ್  ಓದುವಷ್ಟು ಒಳ್ಳೆ ಅಂಕಗಳನ್ನು ನಾನು ತೆಗೆದಿರಲಿಲ್ಲ !)ಬಿ ಎಸ್ ಸಿ ಓದುವಾಗ ಪ್ರಾಕ್ಟಿಕಲ್ ಮಾಡಿ ಒದ್ದಾಡುವಾಗ ನಂಗೆ ತಿಳಿಯಿತು ನಾನು ನಾನು ವಿಜ್ಞಾನಕ್ಕೆ ಸೂಕ್ತವಾದವಳಲ್ಲ . ಆರ್ಟ್ಸ್ ನನಗೆ ಸೂಕ್ತವಾದುದೆಂದು ಜ್ಞಾನೋದಯವಾಯಿತು .ನಾಟಕ ರಚನೆ ಅಭಿನಯ ಭಾಷಣ ಪ್ರಬಂಧ ಏಕಪಾತ್ರಾಭಿನಯ ಮೊದಲಾದವುಗಲ್ಲಿ ಅತೀವ ಆಸಕ್ತಿ ಹೊಂದಿದ್ದ ನನಗೆ ಸೈನ್ಸ್ ಸರಿಹೊಂದಲಾರದು ಅದಕ್ಕೆ ಆರ್ಟ್ಸ್ ಸರಿ ಎಂದು ನಿರ್ಧರಿಸಿದೆ .ವಿಜ್ಞಾನ ಪದವಿ ಪಡೆದಿದ್ದ ನಾನು ದ್ವಿತೀಯ ಭಾಷೆಯಾಗಿ ಸಂಸ್ಕೃತ ಓದಿದ್ದ ಕಾರಣ ನಾನು ಸಂಸ್ಕೃತದಲ್ಲಿ ಎಂ ಎ ಮಾಡಬೇಕಾಯಿತು . ಸಂಸ್ಕೃತ ಭಾಷೆ ಮೇಲೆ ವಿಶೇಷ ಆಸಕ್ತಿ ಕೂಡ ಇದ್ದ ಕಾರಣ  ಎಂ ಎ ಯಲ್ಲಿ ಮೊದಲ ರಾಂಕ್ ಅನ್ನು ಪಡೆದೆ . ಆದರೆ ತುಂಬಾ ಓದಬೇಕು ಎಂಬ ಆಸೆಯಿದ್ದ ನನಗೆ ಇದರಿಂದ ತೃಪ್ತಿಯಾಗಲಿಲ್ಲ  ಜೊತೆಗೆ  ಸಂಸ್ಕೃತಕ್ಕೆ  ಎಲ್ಲೂ ಕೂಡ ಸರಿಯಾದ ಉದ್ಯೋಗ ಅವಕಾಶ ಇರಲಿಲ್ಲ .ನಂಗೆ ಉಪನ್ಯಾಸಕಿಯಾಗಿ ಕೆಲಸ ಮಾಡಬೇಕೆಂಬ ಹಂಬಲ ತುಂಬಾ ಇತ್ತು .ಜೊತೆಗೆ ನಮ್ಮ ಆರ್ಥಿಕ ಪರಿಸ್ಥಿತಿ ಕೂಡಾ ಚೆನ್ನಾಗಿರಲಿಲ್ಲ ನಾನು ಕೂಡ ದುಡಿಯುವುದು ಅನಿವಾರ್ಯವಾಗಿತ್ತು . ಹಾಗಾಗಿ  ಅರೆಕಾಲಿಕ ಉಪನ್ಯಾಸಕಿ ಆಗಿದ್ದುಕೊಂಡೇ ಟ್ಯುಶನ್ ನೀಡಿಕೊಂಡು ಒಂದು ವೆರ್ಷದ ಮಗನನ್ನು ಸಂಭಾಳಿಸಿಕೊಂಡು ಹೇಗೋ  ಹಿಂದಿ ಎಂ ಎ ಮಾಡಿದೆ . ನಾನು ಸಂಸ್ಕೃತ ಎಂ ಎ ಓದುತ್ತಿರುವಾಗಲೇ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯಲ್ಲಿ ಹಿಂದಿ ಪರೀಕ್ಷೆಗಳಿಗೆ ಕಟ್ಟಿ ರಾಷ್ಟ್ರ ಭಾಷ ಪ್ರವೀಣ ಪಾಸು ಮಾಡಿದ್ದೆ.  ಹಾಗಾಗಿ ಹಿಂದಿ ಎಂ ಎ ಮಾಡುವುದು ಅಷ್ಟೇನೂ ನಂಗೆ ಕಷ್ಟವಾಗಲಿಲ್ಲ.  ಆದರೆ ಯಾಕೋ ಏನೋ ಹಿಂದಿ ಸಾಹಿತ್ಯದಲ್ಲಿ ಆಸಕ್ತಿ ಬರಲೇ ಇಲ್ಲ
ಆಸಕ್ತಿಯೇ ಇಲ್ಲದ ವಿಷಯವನ್ನು ವಿದ್ಯಾರ್ಥಿಗಳಿಗೆ ಪಾಠ  ಮಾಡುವುದು ಹೇಗೆ ? ಅವರಲ್ಲಿ  ಆಸಕ್ತಿ ಬೆಳೆಸುವದು ಹೇಗೆ?(ಈಗ ನನಗೆ ಹಿಂದಿ ಸಾಹಿತ್ಯದಲ್ಲಿ ಅಭಿರುಚಿ ಇದೆ  ಆಗ ಇರಲಿಲ್ಲ !) ಏನು ಮಾಡುವುದು  ಅಂತ ತಲೆ ಕೆಡಿಸುತ್ತಾ ಇರುವಾಗ ಕನ್ನಡ ಎಂ ಎ ಮಾಡಿದ್ರೆ ಹೇಗೆ ? ಅಂತ ಯೋಚನೆ ಹುಟ್ಟಿಕೊಂಡಿತು . ಹೇಗೂ ನನಗೆ  ಚಿಕ್ಕಂದಿನಿದಲೇ  ತುಂಬಾ  ಓದಬೇಕು ಎಂಬ ಹಂಬಲ  ಇತ್ತು ತಾನೇ. ಹಾಗಾಗಿ ಕನ್ನಡ ಎಂ  ಎ  ಓದುವುದು ನನಗೆ ಪ್ರಿಯವಾದ ವಿಚಾರವೇ ಆಗಿತ್ತು  ಆದರೆ.ಇವಳಿಗೆ ಸರಿ ಇಲ್ಲ ಅಂತ ಜನ ನಗಾಡಿದ್ರೆ ಅಂತ ಭಯ ."ನಗಾಡುದು ಯಾಕೆ? ನಗಾಡಿದ್ರೆ ನಗಾಡಲಿ ಈವತ್ತು ನಗಾಡಿದ ಜನರೇ ಗೆದ್ರೆ ಬೆನ್ನು ತಟ್ಟುತಾರೆ" ಎಂಬ ಅಮ್ಮನ ಧೈರ್ಯದ ನುಡಿ , ಪತಿ ಗೋವಿಂದ ಪ್ರಸಾದರ  ಬೆಂಬಲದೊಂದಿಗೆ  ಕನ್ನಡ ಎಂ ಎ ಗೆ ಕಟ್ಟಿದೆ . ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದೆ ಕೂಡ .ಜೊತೆಗೆ ಎಂ ಎ ಯಲ್ಲಿ ಜಾನಪದವನ್ನು ಐಚ್ಚಿಕ ವಿಷಯವಾಗಿ ಆಯ್ಕೆ ಮಾಡಿದ್ದು  ನನಗೆ ಜಾನಪದದೆಡೆಗೆ ತೀವ್ರವಾದ ಆಸಕ್ತಿ  ಬೆಳೆಯಲು ಕಾರಣವಾಯಿತು  ಜೊತೆಗೆ ಮೊದಲೇ ಕಥೆ ಕಾದಂಬರಿಗಳನ್ನು ತುಂಬಾ ಓದುತ್ತಿದ್ದ ನನಗೆ  ಕನ್ನಡ ಪ್ರಾಚೀನ ಹಾಗೂ ಆಧುನಿಕ ಸಾಹಿತ್ಯಗಳು ತುಂಬಾ ಪ್ರಿಯವಾದವು .ಅವುಗಳ ಕುರಿತಾದ ಶಾಸ್ತ್ರೀಯ ಜ್ಞಾನ ಕೂಡ ದೊರೆಯಿತು . ಕನ್ನಡಕ್ಕೆ ವಿಪುಲ ಅವಕಾಶಗಳು ಕೂಡ ಇದ್ದವು ಈಗ ಕೂಡ ಇವೆ ! ಸರಿ! ಮುಂದೆ ಕನ್ನಡ ಉಪನ್ಯಾಸಕಿ ಆಗುವುದೆಂದು ನಿರ್ಧರಿಸಿದ್ದೆ .ಇದೆ ಸಮಯಕ್ಕೆ ಸರಿಯಾಗಿ ಆವು ಬೆಂಗಳೂರಿಗೆ ನಮ್ಮ ವಾಸ್ತವ್ಯ ಬದಲಾಯಿಸಿದ್ದೆವು .
ಈ ನನ್ನ ಕಥೆಯನ್ನು ಸಂಕ್ಷಿಪ್ತವಾಗಿ ಡಾ. ಕೆ . ಗೋಕುಲನಾಥರಿಗೆ ಹೇಳಿದೆ . ಆಗ ಅವರು ನೀವ್ಯಾಕೆ ಡಾಕ್ಟರೇಟ್ ಮಾಡಲಿಲ್ಲ? ಎಂದು ಕೇಳಿದರು . ಆಗ ನಾನು ಏನು ಉತ್ತರಿಸುವುದು ಅಂತ ಗೊತ್ತಾಗದೆ ಸುಮ್ಮನಾಗಿ ತಲೆತಗ್ಗಿಸಿದೆ . ಮುಂದೆ ಡಾಕ್ಟರೇಟ್ ಮಾಡುತ್ತೇನೆ ಎಂದು ಹೇಳುವ ಧೈರ್ಯ ಕೂಡ ನನಗಿರಲಿಲ್ಲ  ಆದರೂ ಎಂದಾದರು ನಾನು ಕೂಡಾ ಡಾಕ್ಟರೇಟ್ ಮಾಡಿ ಅವರಂತೆ ನನ್ನ ಹೆಸರಿನ ಮುಂದೆ ಡಾ ಎಂದು ಹಾಕಿಕೊಳ್ಳ ಬೇಕು  ಎಂಬ ಹಂಬಲ  ನಂಗೆ ಹುಟ್ಟಿಕೊಂಡಿತು
ಡಾಕ್ಟರೇಟ್ ಇಲ್ಲದ ಕಾರಣ ನನ್ನನ್ನು ಆಯ್ಕೆ ಮಾಡಿರಲಿಕ್ಕಿಲ್ಲ ಎಂದು ನಾನು ಭಾವಿಸಿದ್ದೆ .ಮತ್ತೆ ಒಂದೆರಡು ದಿವಸಗಳಲ್ಲಿ ಬೆಂಗಳೂರಿನ ಪ್ರತಿಷ್ಟಿತ  ಜೈನ್ ಕಾಲೇಜ್ ನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಗೆ ಅರ್ಜಿ ಸಲ್ಲಿಸಿ ಸಂದರ್ಶನ ಎದುರಿಸಿ ಆಯ್ಕೆಯಾದೆ .ಅಲ್ಲಿ ಉತ್ತಮ ವೇತನ ಸೇರಿದಂತೆ ಎಲ್ಲ ಸೌಲಭ್ಯಗಳು ಇದ್ದವು  ಆ ಕನ್ನಡ ಎಂ ಎ ಓದುತ್ತಿರುವಾಗ ಕನ್ನಡ ಸಾಹಿತ್ಯ , ಕಾವ್ಯಮೀಮಾಂಸೆ ,ಜಾನಪದದಲ್ಲಿ  ನನಗೆ ಅತಿಯಾದ ಆಸಕ್ತಿ ಮೂಡಿತ್ತು . ಹಾಗಾಗಿ ಮುಂದೆ ಕನ್ನಡದಲ್ಲಿ ಮುಂದುವರಿಯುವುದು ಎಂದು ನಿರ್ಧರಿಸಿದ್ದೆ . ಆದ್ದರಿಂದ  ನನಗೆ  ಸಂಸ್ಕೃತಕ್ಕೆ ಆಯ್ಕೆ ಆದದ್ದು ಏನು ಕುಶಿ ತಂದಿರಲಿಲ್ಲ .ಒಂದುವಾರದ ಒಳಗೆ ಕರ್ತವ್ಯಕ್ಕೆ ಹಾಜರಾಗಿ ವರದಿ ಮಾಡಿಕೊಳ್ಳಬೇಕಿತ್ತು .ಎ ಪಿ ಎಸ್ ಕಾಲೇಜ್ ನಲ್ಲಿ ಕನ್ನಡ  ಉಪನ್ಯಾಸಕ ಹುದ್ದೆಗೆ ಆಯ್ಕೆಯಾಗಿದ್ದರೆ  ಚೆನ್ನಾಗಿರ್ತಿತ್ತು ಅಂದುಕೊಂಡೇ ಜೈನ್ ಕಾಲೇಜ್ ಗೆ ಹೋಗಿ ಕರ್ತವ್ಯಕ್ಕೆ ಹಾಜರಾಗುವುದನ್ನು ಕೊನೆ ದಿನಕ್ಕೆ  ಮುಂದೂಡಿದೆ .ಇನ್ನೇನು ಮರು ದಿನ ಜೈನ್ ಕಾಲೇಜ್ನಲ್ಲಿ ಸಂಸ್ಕೃತ ಉಪನ್ಯಾಸಕ ಹುದ್ದೆಗೆ ಹಾಜರಾಗಿ ವರದಿ ಮಾಡಿಕೊಳ್ಳುವುದು ಎನ್ನುವಷ್ಟರಲ್ಲಿ ಡಾ. ಕೆ  ಗೋಕುಲ ನಾಥರು ಫೋನ್ ಮಾಡಿ ನಾನು ಅವರ ಕಾಲೇಜ್ ನಲ್ಲಿ ಕನ್ನಡ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದ ಬಗ್ಗೆ ತಿಳಿಸಿದರು .ಅಲ್ಲಿ ಜೈನ್ ಕಾಲೇಜ್ ನಷ್ಟು ವೇತನ ಹಾಗೂ ಇತರ ಸೌಲಭ್ಯಗಳು  ಇರಲಿಲ್ಲ  .ಆದರು ಕನ್ನಡವೇ ಬೇಕು ಎಂದು ನಾನು ಅಲ್ಲಿ ಮರು ದಿನವೇ ಕರ್ತವ್ಯಕ್ಕೆ  ಹಾಜರಾಗಿ ವರದಿ ಮಾಡಿಕೊಂಡೆ .  ಆ ಕ್ಷಣ  ಅಮೃತ ಘಳಿಗೆಯೇ  ಇರಬೇಕು ! ನನ್ನ ಜೀವನದ ದಿಕ್ಕು ಬದಲಾಯಿಸಿದ ಕ್ಷಣ ಅದು .ಆ ಕಾಲೇಜ್ ನಲ್ಲಿ ಅನೇಕ ಉಪನ್ಯಾಸಕರು ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು .ಆದ್ದರಿಂದ  ಡಾಕ್ಟರೇಟ್ ಪದವಿ ಪಡೆಯಬೇಕೆಂಬ ನನ್ನ ಹಂಬಲ ಗಟ್ಟಿಯಾಯಿತು

 
               ಗರಿಗೆದರಿದ ಡಾಕ್ಟರೇಟ್  ಕನಸು 

 ನಾನು ಎ ಪಿ ಎಸ್ ಕಾಲೇಜ್ ಗೆ ಸೇರಿದ ಒಂದು ವಾರ ಆಗಿತ್ತು ಆ ದಿನದ  ಕೆಲಸ ಮುಗಿದು ಗ್ರಂಥಾಲಯದಲ್ಲಿ ಏನೋ ಪತ್ರಿಕೆ ಹಿಡಿದು ಓದುತ್ತಾ ಇರುವಾಗ ಅಟೆಂಡರ್  ಬಂದು ಪ್ರಿನ್ಸಿಪಾಲ್  ಕರೆಯುತ್ತಿದ್ದಾರೆ  ಎಂದು ಹೇಳಿದಾಗ ತಕ್ಷಣವೇ ಎದ್ದು ಗಾಬರಿಯಿಂದ ಪ್ರಿನ್ಸಿಪಾಲ ರ ಚೇಂಬರ್ ಗೆ ಹೋದೆ . ಅವರಿಗೆ ವಿಶ್ ಮಾಡಿ ನಿಂತೆ . ಪ್ರತಿಯಾಗಿ ವಿಶ್ ಮಾಡಿದ ಪ್ರಿನ್ಸಿಪಾಲ್ ನನ್ನನ್ನು ಕುಳಿತುಕೊಳ್ಳಲು ಹೇಳಿದರು . ಡಾ. ಕೆ ಗೋಕುಲನಾಥರು ಬಹಳ ಸಹೃದಯಿ  . ಸಹೋದ್ಯೋಗಿಗಳನ್ನು ಎಂದೂ ನಿಲ್ಲಿಸಿ ಮಾತನಾಡುತ್ತಿರಲಿಲ್ಲ . ಕಾಲೇಜ್  ಹೇಗೆ ಅನಿಸ್ತದೆ ?ವಿದ್ಯಾರ್ಥಿಗಳು  ಎಲ್ಲ ಹೊಂದಿಕೊಂಡಿದ್ದಾರೆಯೇ ? ಎಂದು ವಿಚಾರಿಸಿದರು . ನಂತರ ನೀವೇಕೆ ಡಾಕ್ಟರೇಟ್ ಮಾಡಲಿಲ್ಲ ? ನಾನು ಇಂಟರ್ವ್ಯೂ ನಲ್ಲಿ ಈ ಬಗ್ಗೆ ಕೇಳಿದಾಗ ನೀವೇನು ಹೇಳಲಿಲ್ಲ ಎಂದು ಕೇಳಿದರು . ಈಗ ಬಾಯ್ ಬಿಡುವುದು ಅನಿವಾರ್ಯವಾಯಿತು ನನಗೆ . " ಪಿ ಎಚ್ ಡಿ ಮಾಡಲು ನನ್ನಿಂದ ಸಾಧ್ಯವಿಲ್ಲ  ಸಂಶೋಧನಾ ಪ್ರಬಂಧ  ಬರೆಯುವಷ್ಟು ಜ್ಞಾನ ನನಗಿಲ್ಲ ಅದಕ್ಕೆ ತುಂಬಾ ಓದಿರಬೇಕು ತುಂಬಾ  ತಿಳಿದು ಕೊಂಡಿರ ಬೇಕು  ತುಂಬಾ  ಜ್ಞಾನ ಬೇಕಲ್ವಾ  ಸರ್ .? "ಎಂದು ಹಿಂಜರಿಯುತ್ತಾ ಹೇಳಿದೆ .
ನನ್ನಿಂದ ಡಾಕ್ಟರೇಟ್  ಪದವಿ ಪಡೆಯಲು ಬೇಕಾದ ಸಂಶೋಧನಾ ಪ್ರಬಂಧ ರಚನೆ ಅಸಾಧ್ಯ ಎಂದೇ ನಾನು ಭಾವಿಸಿದ್ದೆ  . ನನ್ನ ಈ ಭಯಕ್ಕೆ ಕಾರಣ ಕೂಡಾ ಇತ್ತು . ನಾನು ಉಜಿರೆಯಲ್ಲಿ ಬಿ ಎಸ್ ಸಿ ಓದುತ್ತಿರುವಾಗ ನಮ್ಮ ಕಾಲೇಜ್ ಗೆ ಪಿ ಎಚ್  ಡಿ ಪದವಿ ಪಡೆದಿದ್ದ ಮೇಡಂ ಒಬ್ಬರು ಸಂಸ್ಕೃತ ಉಪನ್ಯಾಸಕಿ ಆಗಿ ಬಂದಿದ್ದರು . ಹೊಸ ಮೇಡಂ ಹತ್ರ ಮಾತನಾಡಿ ಬರೋಣ ಅಂತ ನಾನು ನನ್ನ ಗೆಳತಿ ಗಾಯತ್ರಿ ಹಾಗೂ ಇನ್ನಿತರರು ಅವರ ಬಳಿಗೆ ಹೋದೆವು . ಬಹಳ ಒಳ್ಳೆಯ ಮೇಡಂ ಅವರು ಪಿಎಚ್  ಡಿ ಆಗಿದೆ ಅಂತ ಒಂಚೂರು ಗರ್ವ ಅವರಲ್ಲಿರಲಿಲ್ಲ . ನಮ್ಮ ಹತ್ತಿರ ಚೆನ್ನಾಗಿ ಮಾತಾಡಿದರು . ಆಗ ನಾವು "ಡಾಕ್ಟರೇಟ್  ಹೇಗೆ ಪಡೆಯೋದು ಅದಕ್ಕೆ ಏನು ಮಾಡ್ಬೇಕು ? ad ತುಂಬಾ ಕಷ್ಟ ಅಲ್ವಾ ? ನೀವು ಹೇಗೆ ಪಿ ಎಚ್ ಡಿ ಮಾಡಿದ್ರಿ ಇತ್ಯಾದಿಯಾಗಿ ನಾನಾ ಪ್ರಶ್ನೆಗಳನ್ನು  ಕೇಳಿದೆವು . ಆಗ ಅವರು "ಹೌದು ಪಿ ಎಚ್ ಡಿ ಮಾಡುವುದು ತುಂಬಾ ಕಷ್ಟದ  ವಿಚಾರ . ತುಂಬಾ ಪರಿಶ್ರಮ ಪಡಬೇಕು "ಎಂದು ಹೇಳಿದರು  . ಆಗ ನಾವು ಹಾಗಾದ್ರೆ ನೀವು ಅಷ್ಟು ಕಷ್ಟದ್ದನ್ನು ಹೇಗೆ ಮಾಡಿದ್ರಿ ?ಎಂದು ಪ್ರಶ್ನಿಸಿದೆವು . ಆಗ ಅವರು ನಾನು ದಿನಾ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಯೋಗ ಮಾಡ್ತೇನೆ ಧ್ಯಾನ ಮಾಡ್ತೇನೆ . ಆದ್ದರಿಂದ ನನಗೆ ಡಾಕ್ಟರೇಟ್  ಪದವಿ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು
. ಅಷ್ಟೆ ನನ್ನ ಎದೆ ಧಸಕ್ಕೆಂದಿತು!! ನನ್ನ ಜನ್ಮದಲ್ಲಿ ನನ್ನಿಂದ ಬೆಳಗ್ಗೆ ನಾಲ್ಕು ಗಂಟೆಗೆ ಏಳಲು ಸಾಧ್ಯವೇ ಇಲ್ಲ  .ಪರೀಕ್ಷೆಯ ಸಮಯದಲ್ಲಿ ಕೂಡ ನಾನು ಒಂದು ದಿನ ಕೂಡ ಬೆಳಿಗ್ಗೆ ಏಳು ಗಂಟೆ ಗಿಂತ ಮೊದಲು ಎದ್ದವಳಲ್ಲ  ! ನಾನು ರಾತ್ರಿ ೧-೨ ಗಂಟೆಯವರೆಗೆ ಕೂತು ಓದಿ ಬರೆದು ಮಾಡಬಲ್ಲೆ ಆದರೆ ಬೆಳಿಗ್ಗೆ ನಾಲ್ಕು ಗಂಟೆಗೆ ಏಳುವುದನ್ನು ನೆನೆಯಲು ಕೂಡ ಭಯಪಡುವ ಸ್ವಭಾವ ನನ್ನದು ! ಹಾಗಿರುವಾಗ ದಿನಾ  ಬೆಳಗ್ಗೆ ಎದ್ದು ಯೋಗ ಧ್ಯಾನ ಮಾಡಬೇಕು ಎಂದಾದರೆ !ಓ ದೇವರೇ  ನನ್ನಿಂದ ಡಾಕ್ಟರೇಟ್  ಮಾಡಲು ನನ್ನಿಂದ ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ  ಅಂದೇ ನಾನು ಬಂದಿದ್ದೆ .
   ಆದರಿಂದಲೇ  ಡಾಕ್ಟರೇಟ್ ಮಾಡಲು ನನ್ನಿಂದ ಸಾಧ್ಯವಾಗಲಾರದು ಎಂದು  ಗೋಕುಲನಾಥರಲ್ಲಿ ಹೇಳಿದ್ದೆ . ನನ್ನ ಮೂರ್ಖತನ ನೋಡಿ ಅವರಿಗೆ ಸಿಟ್ಟು ಬಂದಿರಬೇಕು . ಬಾಯಲ್ಲಿ ಏನು ಹೇಳಲಿಲ್ಲ . ಆದರೆ ಅವರ ಮುಖ ಕೆಂಪಾದದ್ದು ನೋಡಿ ಅವರಿಗೆ ಕೋಪ ಬಂದಿದೆ ಅಂತ ನನಗೆ ಗೊತ್ತಾಯಿತು . ಮರು ದಿನ ನನ್ನನ್ನು ಕರೆದು ಏಳೆಂಟು ಪುಸ್ತಕಗಳನ್ನು ನೀಡಿ ಓದಿ ನೋಡಿ ಎಂದು ಹೇಳಿದರು . ಸರಿ ಎಂದು ಮನೆಗೆ ತಂದು ಓದಲು ಆರಂಭಿಸಿದೆ . ಆ ಎಲ್ಲ ಪುಸ್ತಕಗಳು ಪ್ರಕಟವಾದ ಪಿ ಎಚ್ ಡಿ ಸಂಶೋಧನಾ ಪ್ರಬಂಧ ಗಳಾಗಿದ್ದವು . ಒಂದರಿಂದೊಂದು ಚೆನ್ನಾಗಿದ್ದವು ಎರಡೇ ದಿವಸಗಳಲ್ಲಿ ಓದಿ ಪುಸ್ತಕಗಳನ್ನು ಹಿಂದೆ ಕೊಡಲು ಹೋದೆ ಅವರು ". ಈ ಪುಸ್ತಕಗಳನ್ನು ಓದಿ ಏನನ್ನಿಸಿತು . ಇಂತಹ ಒಂದು ಸಂಶೋಧನಾ ಪ್ರಬಂಧ ರಚನೆ ನಿಮ್ಮಿಂದ ಸಾಧ್ಯವಿಲ್ಲವೇ ?"ಎಂದು ಕೇಳಿದರು . ಆ ಪುಸ್ತಕಗಳನ್ನು ಓದಿದಾಗ ನನಗೂ ಸಂಶೋಧನಾ ನಿಬಂಧ ರಚಿಸಬಹುದು ಎಂಬ ಧೈರ್ಯ ಬಂದಿತ್ತು . ಹಾಗಾಗಿ  ನನ್ನಿಂದ ಸಾಧ್ಯ  ನಾನು ಡಾಕ್ಟರೇಟ್ ಮಾಡುತ್ತೇನೆ ಎಂದು ಆತ್ಮ ವಿಶ್ವಾಸದಿಂದ ನುಡಿದೆ .
ಮತ್ತೆ ಒಂದೆರಡು ತಿಂಗಳು ಕಳೆಯುವುದರೊಳಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ  ಸಂಶೋಧನಾ ಕೇಂದ್ರವಾಗಿರುವ ಬಿ ಎಂ ಶ್ರೀ ಪ್ರತಿಷ್ಟಾನ ಪಿ ಎಚ್ ಡಿ ಪದವಿ ಅಧ್ಯಯನ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿತು . ನಾನು ಅರ್ಜಿ ಸಲ್ಲಿಸಿದೆ . ನಿಗದಿತ ದಿನದಂದು ಲಿಖಿತ ಪರೀಕ್ಷೆ ನಡೆಯಿತು . ಅದೇ ದಿನ ಸಂಜೆ  ಮೌಖಿಕ ಪರೀಕ್ಷೆ ಇತ್ತು  ಲಿಖಿತ ಪರೀಕ್ಷೆಯಲ್ಲಿ ಚೆನ್ನಾಗಿ ಬರೆದಿದ್ದೆ . ಬೆಂಗಳೂರಿಗೆ ಹೊಸಾಬಳಾ ದ ನನಗೆ ಬಿ ಎಂ ಶ್ರೀ ಅಧ್ಯಯನ ಕೇಂದ್ರದ ಮುಖ್ಯಸ್ತರನ್ನಾಗಲಿ  ಅಧ್ಯಯನ ಕೇಂದ್ರದ ನಿರ್ದೇಶಕರಾದ ಮಲ್ಲೇಪುರಂ ವೆಂಕಟೇಶ್ (ಈಗ ಸಂಸ್ಕೃತ ವಿಶ್ವ  ವಿದ್ಯಾಲಯದ ಉಪ ಕುಲಪತಿಗಳಾಗಿದ್ದಾರೆ ) ಅವರನ್ನಾಗಲಿ ಪರಿಚಯ ಇರಲಿಲ್ಲ . ಹಾಗಾಗಿ ಮೌಖಿಕ ಪರೀಕ್ಷೆ ಏನಾಗುತ್ತೋ ಅನ್ನುವ ಭಯ ಕಾಡಿತು . ಆದರು ಇರಲಿ ನೋಡಿಯೇ ಬಿಡುವ ಏನಾಗುತ್ತೋ ಆಗಲಿ ಎಂದು  ಧವಗುಡುತ್ತಿರುವ  ಎದೆಯನ್ನು  ಸಮಸ್ತಿತಿಗೆ ತರಲು ಯತ್ನಿಸುತ್ತಾ  ಪರೀಕ್ಷಾ ಮಂಡಳಿಯ ಎದುರು ಹೋಗಿ ಕುಳಿತೆ . ಅಲ್ಲಿದ್ದ ಹಿರಿಯ ವಿದ್ವಾಂಸರು (ಅವರು  ಪ್ರೊ . ಡಿ ಲಿಂಗಯ್ಯ , ಪ್ರೊ ಬಸವಾರಾಧ್ಯ , ಡಾ|। ವೆಂಕಟಾಚಲ ಶಾಸ್ತ್ರೀ ,ಪ್ರೊ ಗೀತಾಚಾರ್ಯ , ಡಾ ॥ ಮಲ್ಲೇಪುರಂ ವೆಂಕಟೇಶ್  ಎಂದು ಆಮೇಲೆ ತಿಳಿಯಿತು ) ನನ್ನ ಗಾಬರಿ ನೋಡಿ "ಭಯ ಬೇಡ ನಿಮಗೆ ತಿಳಿದಿರುವುದನ್ನು ಹೇಳಿ ನಾವ್ಯಾರು ಸರ್ವಜ್ಞರಲ್ಲ  ಎಂದು ಹೇಳಿ ಧೈರ್ಯ ತುಂಬಿ ಅನೇಕ ಪ್ರಶ್ನೆಗಳನ್ನು ಕೇಳಿದರು ನಾನು ಸಮರ್ಪಕವಾಗಿ ಉತ್ತರಿಸಿದೆ . ನೀವು ಆಯ್ಕೆಯಾದರೆ ಯಾವ ವಿಷಯದಲ್ಲಿ ಪಿ ಎಚ್ ಡಿ ಮಾಡಲು ನಿರ್ಧರಿಸಿದ್ದೀರಿ ? ಎಂದು ಕೇಳಿದರು . ಈ ಪ್ರಶ್ನೆ ಯನ್ನು ನಾನು ಮೊದಲೇ ನಿರೀಕ್ಷಿಸಿದ್ದೆ .ಜಾನಪದ ಕುರಿತು ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದ ನಾನು ಅದಾಗಲೇ  ತುಳುನಾಡಿನ ದೈವಗಳ ಅಧಿದೈವವಾದ ನಾಗ ಬ್ರಹ್ಮ ದೈವದ ಮೇಲೆ ಅಧ್ಯಯನ ಮಾಡುವುದೆಂದು ನಿರ್ಧರಿಸಿದ್ದೆ . ಆದ್ದರಿಂದ ಅದನ್ನೇ ಅಲ್ಲಿ ಹೇಳಿದೆ ಆಗ ಭೂತಾರಾಧನೆ ಬಗ್ಗೆ ಈಗಗಾಗಲೇ ಚಿನ್ನಪ್ಪ ಗೌಡ ಮೊದಲಾದವರು ಅಧ್ಯಯನ ಮಾಡಿದ್ದಾರೆ ನೀವೇನು ಮಾಡುತ್ತೀರಿ ಅದರಲ್ಲಿ? ಎಂದು ಕೇಳಿದರು . ಆಗ ನಾನು ಡಾ॥ ಬಿ ಎ ವಿವೇಕ ರೈ  ಡಾ । ಅಮೃತ ಸೋಮೇಶ್ವರ ಮೊದಲಾದವರು ತುಳುವ ಬ್ರಹ್ಮ (ಬೆರ್ಮೆರ್) ದೈವದ ಕುರಿತು ಅಧ್ಯಯನವಾಗಬೇಕು ಎಂದು ಹೇಳಿರುವ ಬಗ್ಗೆ ಮತ್ತು  ನಾಗ ಬ್ರಹ್ಮ ನ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯತೆಯ ಬಗ್ಗೆ ಆಧಾರ ಸಹಿತ ವಾಗಿ ವಿವರಿಸಿದೆ . ನನ್ನ ವಿವರಣೆಯನ್ನು ಕೇಳಿದ ಆ ವಿದ್ವಾಂಸರ ಮುಖಗಳಲ್ಲಿ ಮೆಚ್ಚುಗೆಯ ನಗು ಮೂಡಿದ್ದು ಕಂಡು ನನಗೆ ತುಸು ನಿರಾಳ ಆಯಿತು . ಅಲ್ಲಿ ಮೂವರಿಗೆ ಡಾಕ್ಟರೇಟ್ ಮಾಡಲು ಅವಕಾಶ ಇತ್ತು  ಆ ಮೂವರಲ್ಲಿ ಒಬ್ಬಳಾಗಿ ನಾನು ಆಯ್ಕೆಯಾದೆ.   ಅಲ್ಲಿಂದ ನನ್ನ ಡಾಕ್ಟರೇಟ್  ಕನಸು ಗರಿಗೆದರಿ     ಆಕಾಶದೆತ್ತರಕೆ ಹಾರಿತು !
  ಆಕಾಶಕ್ಕೆ ಏರಿದ್ದು ಭೂಮಿಯ ವಾಸ್ತವಕ್ಕೆ ಇಳಿಯಲು ಹೆಚ್ಚು ದಿನ ಬೇಕಾಗಲಿಲ್ಲ . ಯಾಕೆಂದರೆ ನಾನು ಆಯ್ಕೆ ಮಾಡಿದ್ದು ಕ್ಷೇತ್ರ ಕಾರ್ಯ ಆಧಾರಿತ ಸಂಶೋಧನಾ ವಿಷಯವನ್ನು . ತುಳುನಾಡಿನ ಭೂತಗಳ ಆರಾಧನೆ ರಾತ್ರಿ ಹೊತ್ತಿನಲ್ಲಿ ನಡೆಯುತ್ತದೆ . ಅನೇಕೆ ವಿಧಿ ನಿಷೇಧಗಳು ಇಲ್ಲಿವೆ.  ಆದ್ದರಿಂದ ಈ ಭೂತಗಳ ಬಗೆಗೆ ಅಧ್ಯಯನ ಮಾಡುವುದು ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೆ ಕೂಡಾ ಕಷ್ಟ ಸಾಧ್ಯವಾದ ವಿಚಾರ . ಆದ್ದರಿಂದ ಇಂದಿಗೂ ತುಳುನಾಡಿನಲ್ಲಿ ಕ್ಷೇತ್ರ ಕಾರ್ಯ ಆಧಾರಿತ         ಭೂತಾರಾಧನ ಕ್ಷೇತ್ರದಲ್ಲಿ ಅಧ್ಯಯನ ಮಾಡಿದವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ
ಅಂತು ಇಂತೂ ನಾನು ಅನಿರೀಕ್ಷಿತವಾಗಿ ಭೂತಗಳ ಅದ್ಭುತ ಜಗತ್ತಿಗೆ ಪ್ರವೇಶ ಪಡೆದಿದ್ದೆ

Thursday 18 April 2013

ಹೀಗೊಂದು ಎಂ ಫಿಲ್ ಪುರಾಣ -ಡಾ.ಲಕ್ಷ್ಮೀ ಜಿ ಪ್ರಸಾದ

                             

                      
ಕೆಲ ತಿಂಗಳ ಮೊದಲು  ನಾನು ಬೆಳ್ಳಾರೆಗೆ ಹೋದಾಗ ಇಬ್ಬರು ಯುವಕರು ನನ್ನನ್ನು ಬೇಟಿ ಮಾಡಿ "ನಾವು ನಿಮ್ಮ ಮೇಲೆ ಎಂ ಫಿಲ್ ಮಾಡ್ತೇವೆ. ನಿಮ್ಮ ಬಗ್ಗೆ ಮಾಹಿತಿ ಕೊಡಿ ಅಂತ ಕೇಳಿದರು !
ನನಗೆ ಒಂದು ಕ್ಷಣ ಗಡಿ ಬಿಡಿ ಆಯಿತು.ಸುಧಾರಿಸಿಕೊಂಡು "ಸರಿ ನನ್ನ ಬಗ್ಗೆ ಏನು ಯಾವ ತರಹ ಸಂಶೋಧನೆ ? ಕೇಳಿದೆ .ಒಬ್ಬಾತ ಮೇಡಂ "ನಾನು ನಿಮ್ಮ ಕೃತಿಗಳ ಬಗ್ಗೆ ಡಾ.ಲಕ್ಷ್ಮಿ ಜಿ ಪ್ರಸಾದರ ಕೃತಿಗಳು-ಒಂದು ಅಧ್ಯಯನ ಅಂತ ಮಾಡುತ್ತೇನೆ .ಇವನು ನಿಮ್ಮ ಬದುಕಿನ ಕುರಿತು ಮಾಡೋದು" ಅಂತ ಹೇಳಿದ. 
ಹ್ಹಾ !!
ನನ್ನ ಮೇಲೆ ಇಬ್ಬರು ಸಂಶೋಧನೆ ಮಾಡಿ ಎರಡು ಸಂಪ್ರಬಂಧ ರಚನೆಯೆ?! ಇವರು ನನ್ನನ್ನು ಬೇರೆ ಯಾರೋ ಅಂತ ತಪ್ಪು ತಿಳಿದಿರಬಹುದು ಅಂತ ಪುನಃ ವಿಚಾರಿಸಿದೆ .ಇಲ್ಲ ಅವರು ನನ್ನನ್ನೇ ಹುಡುಕಿಕೊಂಡು ಬಂದಿದ್ದರು .ಒಬ್ಬಾತ ಬೆಟ್ಟಂಪಾಡಿ ಇನ್ನೊಬ್ಬಾತ ಸವಣೂರು ಆಸುಪಾಸಿನಲ್ಲಿರುವ ಹುಡುಗ.


"ನನ್ನ ಮೇಲೆ ಸಂಶೋಧನೆ ಮಾಡ್ಲಿಕೆ ಏನಿದೆ? ನಾನಿನ್ನು ಬದುಕನ್ನು ನೋಡುತ್ತಿದ್ದೇನೆ ಅಷ್ಟೆ .ಇನ್ನು ನನ್ನ ಕೃತಿಯಲ್ಲಿರುವ ಅನೇಕ ವಿಚಾರಗಳ ಬಗ್ಗೆ ನನಗೆ ಅನೇಕ ಪ್ರಶ್ನೆಗಳು ಉಳಿದಿವೆ ಇನ್ನು ಅದರಲ್ಲಿ ನೀವೆಂತ ಮಾಡುವುದು ನನ್ನ ಮೇಲೆ? ನಿಮಗೆ ನಿಮ್ಮ ಪರಿಸರದ ಎರಡು ಸಂಶೋದನೆಗೆ ಯೋಗ್ಯವಾದ ವಿಚಾರಗಳನ್ನು ತಿಳಿಸುತ್ತೇನೆ ಅದರ ಮೇಲೆ ಮಾಡಿ" ಎಂದು ಹೇಳಿದೆ
 

ಅರೆ ಒಪ್ಪಿಗೆಯಿಂದ ತಲೆ ಆಡಿಸಿದರು.ಬೆಟ್ಟಂಪಾಡಿ ಸಮೀಪದ ಯುವಕನಲ್ಲಿ "ಪರತಿ ಮಂಗನೆ "ಪಾಡ್ದನದ ಕಥೆ ನಡೆದದ್ದು ಬೆಟ್ಟಂಪಾಡಿ (ಬೊಟ್ಟಿಪಾಡಿ ) ಬಲ್ಲಾಳನ ಬೀಡಿನಲ್ಲಿ .ಆ ಬೀಡಿನ ಕುರುಹು ಐತಿಹ್ಯ ,ಈ ಕಥೆ ನಡೆದಿರಬಹುದಾದ ಸ್ಥಳ ,ಇದೆ ಕಥಾನಕ ಹೊಂದಿರುವ ಪುಕ್ಕೆದಿ ಕವಿತೆ ಹಾಗೂ ಇತರ ಹಾಡುಗಳನ್ನು ತುಲನೆ ಮಾಡಿ ಬರೆಯಿರಿ.ನನ್ನಲ್ಲಿ ಪರತಿ ಮಂಗನೆ ಪಾಡ್ದನ ಮತ್ತು ಪುಕ್ಕೆದಿ ಕವಿತೆ ಇದೆ ಇದನ್ನು ಕೊಡ್ತೇನೆ .ಆ ಬಗ್ಗೆ ಅಧ್ಯಯನ ಮಾಡಿ ಎಂದು ಹೇಳಿದೆ
 

ಸವಣೂರು ಸಮೀಪದ ಹುಡುಗನಲ್ಲಿ ಸವಣೂರು ಪರಣೆಯ ಪ್ರಧಾನ ದೈವ "ಅಬ್ಬೆ ಜಲಾಯ "ದೈವದ ಬಗ್ಗೆ ನಾನು ಸ್ವಲ್ಪ ಅಧ್ಯಯನ ಮಾಡಿ ನನ್ನ ಪುಸ್ತಕದಲ್ಲಿ ಸ್ವಲ್ಪ ಬರೆದದ್ದು ಬಿಟ್ಟರೆ ಬೇರೆಲ್ಲಿಯೂ ಈ ದೈವದ ಅಧ್ಯಯನ ನಡೆದಿಲ್ಲ ಈ ದೈವದ ಹೆಸರು ಕೂಡ ದಾಖಲಾಗಿಲ್ಲ.ಈ ಬಗ್ಗೆ ನಾನು ಸಂಗ್ರಹಿಸಿದ ಮಾಹಿತಿ ಕೊಡ್ತೇನೆ .ಈ ದೈವದ ಬಗ್ಗೆ ಎಂ ಫಿಲ್ ಮಾಡಿ ಎಂದು ಹೇಳಿದೆ .ನಿಮ್ಮ ಮನೆ ಅಡ್ರೆಸ್ಸ್ ನನಗೆ ಮೆಸೇಜ್ ಮಾಡಿ .ನಾನು ಬೆಂಗಳೂರಿಗೆ ಹೋದನಂತರ ಕಳುಹಿಸಿ ಕೊಡ್ತೇನೆ ಮತ್ತು ನಿಮಗೆ ಬೇಕಾದ ಸಹಾಯ ಮಾಡ್ತೇನೆ ಅಂತ ಹೇಳಿ ನನ್ನ ಮೊಬೈಲ್ ನಂಬರ್ ಕೊಟ್ಟು ಅವರ ನಂಬರ್ ತಗೊಂಡು ಬಂದೆ. ಬಂದು ಅನೇಕ   ದಿವಸಗಳು  ಕಳೆದರು ಹುಡುಗರ ಮೆಸೇಜ್ ಇಲ್ಲ ಫೋನ್ ಇಲ್ಲ .
  

ನಾನೇ ಅವರಿಗೆ ಫೋನ್ ಮಾಡಿದೆ "ನಾವು ನಿಮ್ಮ ಮೇಲೆ ಆದ್ರೆ ಮಾಡ್ತೇವೆ ಮೇಡಂ ಮತ್ತೆ ಭೂತದ್ದಕ್ಕೆಲ್ಲ ರಾತ್ರಿ ರೆಕಾರ್ಡ್ ಮಾಡ್ಬೇಕು ಮಾಹಿತಿ ಸಂಗ್ರಹಕ್ಕೆಲ್ಲ ತುಂಬಾ ಓಡಾಡಬೇಕು ಹಾಗಾಗಿ ನೀವು ಹೇಳಿ topics ಬೇಡ ಎಂಬ ಉತ್ತರ ಬಂತು !! ಈಗಿನ ಹುಡುಗರಿಗೆ ದೊಡ್ಡ ಪದವಿ ಬೇಕು ಆದ್ರೆ ತುಸು ಕಷ್ಟ ಪಡ್ಲಿಕ್ಕು ತಯಾರಿಲ್ಲ.

ತುಳುನಾಡಿನಲ್ಲಿ ಅನೇಕ ದೈವಗಳ ಬಗ್ಗೆ ಅಧ್ಯಯನ ನಡೆದಿಲ್ಲ ಅನೇಕ ಪಾಡ್ದನಗಳು ಕವಿತೆಗಳ ಸಂಗ್ರಹ ಕಾರ್ಯ ಆಗಿಲ್ಲ .ಈ ಬಗ್ಗೆ ಗಮನ ಹರಿಸಬೇಕಾದ ತುಳು ಅಕಾಡೆಮಿ ಮಾಡಬೇಕಾದ್ದನ್ನು ಮಾಡದೆ ಹೆಸರಿಗಾಗಿ ಏನೋ ಸನ್ಮಾನ ಅದು ಇದು ಮಾಡ್ತಾ ಇದೆ .
ಯುವಕರು ಪದವಿಗಾಗಿ ಕೂಡ ಸಾಕಷ್ಟು ಪರಿಶ್ರಮ ಬೇಡುವ ಇಂತ ವಿಚಾರಗಳ ಬಗ್ಗೆ ಅಧ್ಯಯನ ಮಾಡಲು ತಯಾರಿಲ್ಲ .ಯಾರಾದ್ರೂ ಒಬ್ಬ ವ್ಯಕ್ತಿ ಬಗ್ಗೆ ಒಂದಷ್ಟು ಫ್ಯಾನ್ ಅಡಿಯಲ್ಲಿ ಕೂತು ಬರೆಯುವುದು ಸುಲಭ ತಾನೇ .ಏನು ಮಾಡುವದು ಹೇಳಿ?!
                                             ಅಬ್ಬೆಜಲಾಯ ಮತ್ತು ಶಿರಾಡಿ ಭೂತ (ಫೋಟೋ)

                                                (ಒಂದು ವರ್ಷದ ಹಿಂದೆ ಬರೆದ ಲೇಖವಿದು )

Friday 12 April 2013

ಸುಬ್ಬಿ ಇಂಗ್ಲೀಷ್ ಕಲ್ತದು : ಮಹಿಳೆ(ಡಾ. ಲಕ್ಷ್ಮಿ ಜಿ ಪ್ರಸಾದ ) ಬರೆದ ಮೊದಲ ಹವಿಗನ್ನಡ ನಾಟಕ

                                 

ಸುಬ್ಬಿ ಇಂಗ್ಲೀಷ್ ಕಲ್ತದು  ಇದು ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ . ಇದನ್ನು ರಚಿಸಿದವರು ಯಾರು ಗೊತ್ತೇ ?! ಇಲ್ಲ ಅವರ  ಹೆಸರು ಯಾರಿಗೂ ಗೊತ್ತಿರುವ ಸಾಧ್ಯತೆ ಇಲ್ಲ  ಯಾಕೆಂದರೆ ಆ ನಾಟಕವನ್ನು ನಾನೇ ಬರೆದದ್ದು . ನಾನು ೭ ನೆಯ ತರಗತಿಯಲ್ಲಿದ್ದಾಗ ಮನೆಯಲ್ಲಿ ಮಕ್ಕಳ ಆಟಕ್ಕಾಗಿ ರಚಿಸಿದ ನಾಟಕ ಇದು .ನಾವು ಅಜ್ಜನಮನೆಯಲ್ಲಿ ೧ ಮಕ್ಕಳು ಸೇರಿ ಯಕ್ಷ ಗಾನ  ನಾಟಕ ಅದು ಇದು ಮಾಡಿ ಗಮ್ಮತ್ತು ಮಾಡು ತ್ತಿದ್ದೆವು. ನಮ್ಮ  ನೆರೆಕರೆಯವರೊಬ್ಬರು ನಮ್ಮ ಅಜ್ಜಿ ದೊಡ್ಡಮ್ಮನವರ ಹತ್ತಿರ ಅದು ಇದು ಮಾತಾಡುತ್ತ ಅವರ ಸಂಬಂಧಿಕರ ಮಗ    ಮಗ ಇಂಜಿನಿಯರ್  ಆಗಿದ್ದು   ಪ್ರಾಥಮಿಕ ಶಾಲೆ ಮಾತ್ರ ಓದಿದ್ದ ತನ್ನ ಅತ್ತೆಯ ಮಗಳನ್ನು ಮದುವೆಯಾದದ್ದು ಅವಳಿಗೆ ಇಂಗ್ಲಿಷ್ ಬಾರದೆ ಇವ  ಪೇಚಾಡುತ್ತಿದ್ದುದು  ಅದೇ ವಿಷಯದಲ್ಲಿ ಜಗಳ ಆಗುತ್ತಿದ್ದುದನ್ನು ಮಾತಿನ ಮಧ್ಯದಲ್ಲಿ  ಹೇಳಿದ್ದನ್ನು ಕೇಳಿಸಿಕೊಂಡಿದ್ದೆ ಇದಕ್ಕೆ ಎಲ್ಲೋ ಕೇಳಿದ  ಜೋಕೆ ಅನ್ನು ಸೇರಿಸಿ ಒಂದು  ನಾಟಕದ ರೂಪ ಕೊಟ್ಟಿದ್ದೆ .ಇದನ್ನು  ನಮ್ಮ ಮನೆ ಮಾತು ಹವ್ಯಕ ಭಾಷೆಯಲ್ಲಿ  ರಚಿಸಿದ್ದೆ . ಇದನ್ನು ನಾನು ೯ ನೆಯ ತರಗತಿ ಓದುತ್ತಿದ್ದಾಗ  ಶ್ರೀ ವಾಣಿ ವಿಜಯ ಪ್ರೌಢ ಶಾಲೆಯಲ್ಲಿ ಅಭಿನಯಿಸಿ ಪ್ರಥಮ ಬಹುಮಾನ ಪಡೆದಿದ್ದೆವು ಈ ನಾಟಕ ವನ್ನು ತುಸು ಪರಿವರ್ತನೆ ಮಾಡಿಕೊಂಡು ನನ್ನ ತಂಗಿ ರಾಜೇಶ್ವರಿ ಹಾಗು ಅವಳ ಸಹಪಾಟಿಗಳು  ಕನ್ನಡ ಭಾಷೆಯಲ್ಲಿ ಈ ನಾಟಕ ಅಭಿನಯಿಸಿ ಅಲ್ಲೂ ಬಹುಮಾನ ಪಡೆದಿದ್ದರು .
 ನಂತರ ಇದನ್ನು ನಾನು MA  ಓದುತ್ತಿರುವಾಗ ಹವ್ಯಕ ಭಾಷೆಯಲ್ಲಿಯೇ ಈ ನಾಟಕವನ್ನು  ಕಾಲೇಜ್ ವಾರ್ಷಿಕೋತ್ಸವದಂದು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದೆವು . ಇದಾದ ನಂತರ  ಮರು ವರ್ಷ ಅಂದರೆ ೧ ೯ ೯ ೬ ರಲ್ಲಿ ಮಂಗಳೂರು  ಹವ್ಯಕ ಮಹಾ ಸಭೆಯಲ್ಲಿ  ಹವ್ಯಕ ಮಹಿಳೆಯರಾದ ನಾವು (ಪುಷ್ಪ ಖಂಡಿಗೆ  ,ವಸಂತ ಲಕ್ಷ್ಮಿ ,ರಾಜೇಶ್ವರಿ  ರಾಜಿ ಬಾಲಕೃಷ್ಣ  ನಾನು(ಲಕ್ಷ್ಮಿ ಜಿ  ಪ್ರಸಾದ್ .. )ಈ  ನಾಟಕವನ್ನು ಹವ್ಯಕ ಭಾಷೆಯಲ್ಲಿ  ಅಭಿನಯಿಸಿ ಮೆಚ್ಚುಗೆ ಪಡೆದಿದ್ದೆವು  ಈ ಬಗ್ಗೆ ಹವ್ಯಕ  ವಾರ್ತೆ  ಪತ್ರಿಕೆಯಲ್ಲಿ "ಲಕ್ಷ್ಮಿ ಜಿ ಪ್ರಸಾದ್  ರಚಿಸಿ ನಿರ್ದೇಶಿಸಿರುವ  ಸುಬ್ಬಿ ಇಂಗ್ಲೀಷ್  ಕಲ್ತದು ಎಂಬ ಹವಿಗನ್ನಡ ನಾಟಕವನ್ನು ಹವ್ಯಕ ಸಭೆಯ ಸದಸ್ಯೆಯರು  ಅಭಿನಯಿಸಿದರು "ಎಂದು ವರದಿಯನ್ನು ಹಾಕಿದ್ದರು
ನಾನು ಚಿಕ್ಕಂದಿನಲ್ಲಿ (೧ ೯ ೮ ೪ )   ಮಕ್ಕಲಳಾಟಿಕೆಯಿಂದ  ರಚಿಸಿದ ನಾಟಕವೇ ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ .ನಾನು ಹವಿಗನ್ನಡದ  ಮೊದಲ ನಾಟಕಗಾರ್ತಿ  ಎಂಬುದು ನನಗೆ ೨ ೦ ೦ ೬ ನೇ ಇಸವಿ ತನಕ ಗೊತ್ತಿರಲಿಲ್ಲ . ೨ ೦ ೦ ೬  ರಲ್ಲಿ ಬೆಂಗಳೂರು ಹವ್ಯಕ  ಅದ್ಯಯನ ಕೇಂದ್ರದ  ನಾರಾಯಣ ಶಾನು ಭಾಗರು ಹೀಗೆ ಹಳೆಯ ಪತ್ರಿಕೆ ತಿರುವಿ ಹಾಕುತ್ತಿರುವಾಗ  ಹವ್ಯಕ ವಾರ್ತೆಯಲ್ಲಿ ವರದಿಯಾಗಿದ್ದ  ಸುಬ್ಬಿ ಇಂಗ್ಲೀಷ್ ಕಲ್ತದು ಎಂಬ ನಾಟಕ ಅವರ ಗಮನಕ್ಕೆ ಬಂದು  ಇದರ ಕರ್ತೃ ಲಕ್ಷ್ಮಿ ಜಿ ಪ್ರಸಾದ್ ಯಾರೆಂದು ಮಂಗಳೂರು ಹವ್ಯಕ ಸಭೆಯವರಲ್ಲಿ ಕೇಳಿದಾಗ ನಾವು ಬೆಂಗಳೂರಿಗೆ  ಬಂದು ನೆಲೆಸಿದ ವಿಚಾರ ಅಲ್ಲಿ ತಿಳಿಸಿದರು . ನಾನು ಎಲ್ಲಿದ್ದೇನೆ ಎಂದು ಪತ್ತೆ ಮಾಡುವ ಜವಾಬ್ಧಾರಿಯನ್ನು ಅವರು ರಾಜಗೋಪಾಲ ಕನ್ಯಾನ ಅವರಿಗೆ ವಹಿಸಿದರು
ಬಿ ಎಂ ಶ್ರೀ  ಪ್ರತಿಷ್ಠಾನದ  ಗೀತಾಚಾರ್ಯ  ಅವರಲ್ಲಿ  ಕೇಳಿದಾಗ "ನಮ್ಮಲ್ಲಿ ಲಕ್ಷ್ಮಿ ವಿ  ಅಂತ ಓರ್ವ ಸಂಶೋಧನಾ ವಿದ್ಯಾರ್ಥಿನಿ  ಇದ್ದಾರೆ  ಲಕ್ಷ್ಮಿ ಜಿ ಪ್ರಸಾದ್ ಅಂತ ಯಾರು ಇಲ್ಲ ಆದರು ಕೇಳಿ ನೋಡಿ ಅಂತ ನನ್ನ ಫೋನ್ ನಂಬರನ್ನು ರಾಜ ಗೋಪಾಲ ಕನ್ಯಾನ ಅವರಿಗೆ ಕೊಟ್ಟರು. ನನ್ನ ರೆಕಾರ್ಡ್ಸ್ ನಲ್ಲಿ ಲಕ್ಷ್ಮಿ ವಿ  ಎಂಬ ಹೆಸರು ಇದೆ . ನನ್ನ ಪೆನ್ ನೇಮ್  ಲಕ್ಷ್ಮಿ ಜಿ ಪ್ರಸಾದ್  ಎಂಬುದು  . ಮಂಗಳೂರು ಹವ್ಯಕ ಸಭೆಯವರಿಗೆ ನನಗೆ ಲಕ್ಷ್ಮಿ ವಿ ಎಂಬ ಹೆಸರಿರುವುದು  ಗೊತ್ತಿಲ್ಲ  . ಬೆಂಗಳೂರಿನಲ್ಲಿ ಯಾರಿಗೂ ನನಗೆ ಲಕ್ಷ್ಮಿ ಜಿ ಪ್ರಸಾದ್ ಎಂಬ ಹೆಸರಿರುವುದು ಗೊತ್ತಿಲ್ಲ ಇದರಿಂದಾಗಿ ನನ್ನನ್ನು  ಪತ್ತೆ ಹಚ್ಚುವುದು ಭಾರೀ ಕಷ್ಟ ಆಯಿತು ಎಂಬ ವಿಚಾರ ನನಗೆ ನಂತರ ತಿಳಿಯಿತು
. ಹೀಗೆ ನಮ್ಮ ಮನೆಗೆ ನನ್ನನ್ನು ಹುದುಕಿಗೊಂದು ಬಂದ  ರಾಜ ಗೋಪಾಲ ಕನ್ಯಾನ ಅವರು  ನನಗೆ ನೀವು ಬರೆದ ಸುಬ್ಬಿ ಕಲ್ತದು ಅನ್ನುವ ನಾಟಕವೇ  ಮಹಿಳೆ ಬರೆದಮೊದಲ  ಹವಿಗನ್ನಡ ನಾಟಕ . ಒಂದೋ ಹವಿಗನ್ನಡ ನಾಟಕ ಸಂಕಲನ ತರುತ್ತಿದ್ದೇವೆ . ನಿಮ್ಮ ನಾಟಕ ಕೊಡಿ ಎಂದು ನನ್ನ ಆ ನಾಟಕದ ಹಸ್ತಪ್ರತಿಯನ್ನು ತೆಗೆದುಕೊಂಡು ಹೋದರು ಅನಂತರ ಆ ನಾಟಕ ಪ್ರಕಟ ವಾಯಿತೆ ಎಂದು ಕೇಳ್ತಾನೆ ಇದ್ದೆ ಆಗುತ್ತಾ ಇದೆ ಎಂದು ಹೇಳಿದ್ದರು ಮತ್ತೊಮ್ಮೆ ಕೇಳುವಾಗ ನಾರಾಯಣ ಕಂಗಿಲ ಅವರಿಗೆ ವಹಿಸಿದ್ದೇವೆ ಎಂದು ಹೇಳಿ ಅವರ ಮೊಬೈಲ್  ಸಂಖ್ಯೆ ಕೊಟ್ಟರು . ನಾನು ಅವರಿಗೆ ಕೇಳಿದಾಗ ನಿಮ್ಮ ನಾಟಕ ಇದೆಯಾ ಅಂತ ಸಂಕಲನದಲ್ಲಿ ನೋಡಿ ಹೇಳ್ಬೇಕಷ್ಟೇ  ಅಂತ ಹೇಳಿದರು ೩ -೪  - ದಿವಸ ಬಿಟ್ಟು ನಿಮ್ಮ ನಾಟಕ ಸಂಕಲನದಲ್ಲಿ ಇದೆ ಪ್ರಕಟವಾಗುತ್ತಿದೆ ಎಂದು ನನ್ನ ಮೊಬೈಲ್ ಗೆ   ಮೆಸೇಜ್ ಮಾದಿದರು. (ಅದು ಇನ್ನು ನನ್ನ ಮೊಬೈಲ್ ನಲ್ಲಿ ಇದೆ )  ನಂತರ ಸುಮಾರು ದಿನ ಕಳೆದು  ಪುಟ ಜಾಸ್ತಿ ಆಗ್ತಿದೆ  ಆದ್ದರಿಂದ ಎಲ್ಲ ನಾಟಕಗಳನ್ನು ಪ್ರಕಟಿಸಲು ಆಗಲಿಲ್ಲ ನಿಮ್ಮ ನಾಟಕ ಸಂಕಲನದಿಂದ ಬಿಟ್ಟಿದ್ದೇವೆ ಎಂದು ತಿಳಿಸಿದರು  . ಇನ್ನೊಂದೆಡೆ  ನನ್ನ ಗೆಳತಿಯೊಬ್ಬರಿಗೆ  ಹೇಳಿ ನಾಟಕ ಬರೆಯಿಸಿ ಸಂಕಲನದಲ್ಲಿ ಹಾಕಿದ್ದಾರೆ .ನಾಲ್ಕು ಜನರ ಎರಡೆರಡು ನಾಟಕಗಳನ್ನು ಹಾಕಿದ್ದಾರೆ

ಈ ಬಗ್ಗೆ ಕೇಳಿದರೆ ನಿಮ್ಮ ನಾಟಕದಲ್ಲಿ ಯಾವುದೇ ಸಾಹಿತ್ಯಿಕ ಮೌಲ್ಯ  ಇಲ್ಲ ಅದಕ್ಕೆ ಡ್ರಾಪ್ ಮಾಡಿದ್ದೇವೆ . ಎಂದು ಒಮ್ಮೆ   ಮತ್ತೊಮ್ಮೆ ಅದು ನಾವು ಆಯ್ಕೆ ಮಾಡಿದ್ದಲ್ಲ ಅದು ಪಬ್ಲಿಷೆರ್  ಮಾಡಿದ್ದು ಹೇಳುತ್ತಿದ್ದಾರೆ .ಪುಬ್ಲಿಷೆರಿಗೆ ನಾನು ಈ ಬಗ್ಗೆ ಕೇಳಿದಾಗ ಇಲ್ಲ ನಮಗೆ ಇದೆಲ್ಲ ಗೊತ್ತಿಲ್ಲ ನಮಗೆ ಕೊಟ್ಟಷ್ಟ ನ್ನು ನಾವು ಅದು ಇದ್ದ ಹಾಗೆಯೇ ಪ್ರಕಟಿಸಿದ್ದೇವೆ ಎಂದು ಹೇಳಿದ್ದಾರೆ  ನನ್ನ ನಾಟಕವನ್ನು ಯಾವ ವಿಮರ್ಶಕರಗೆ ತೋರಿಸಿ ಅಭಿಪ್ರಾಯ ಪಡೆದಿದ್ದಾರೆ  ಎಂದು ತಿಳಿದಿಲ್ಲ  ಇನ್ನು ನನಗೆ ತಿಳಿದಿರುವ ಮಟ್ಟಿಗೆ ನಾರಾಯಣ  ಕಂಗಿಲರಿಗೆ  ದೊಡ್ಡ ವಿಮರ್ಶಕರ ಸ್ಥಾನ ಏನು ಇಲ್ಲ. ಏನೇ ಆದರು ನನ್ನ ನಾಟಕಕ್ಕೆ ಮಹಿಳೆ ಬರೆದ  ಮೊದಲ ಹವಿಗನ್ನಡ ನಾಟಕ ಎಂಬ  ಚಾರಿತ್ರಿಕ  ಮೌಲ್ಯ  ಖಂಡಿತಾ ಇದೆ.  ಇಂಗ್ಲಿಷ್ ಭ್ರಮೆ ಬೇಡ ಕನ್ನಡ ಕಸ್ತೂರಿ  ಎಂಬ  ಅಮೂಲ್ಯ ಸಂದೇಶ ಅದರಲ್ಲಿದೆ . ಮುಖ ನೋಡಿ ಮಣೆ ಹಾಕುವ  ನಾರಾಯಣ ಕಂಗಿಲರಿಗೆ  ಇದನ್ನು ಗಮನಿಸುವ ಆಕಲು ಇರಲಿಲ್ಲ ಎಂಬುದು  ಮಾತ್ರ ಸತ್ಯ. ಒಟ್ಟಿನಲ್ಲಿ ಇವರ ರಾಜಕೀಯದಲ್ಲಿ  ಹವ್ಯಕ ನಾಟಕ ಸಂಕಲನದಲ್ಲಿ  ಮಹಿಳೆ ಬರೆದ ಮೊದಲ ಹವಿಗನ್ನಡ ನಾಟಕ ಸುಬ್ಬಿ ಇಂಗ್ಲಿಷ್ ಕಲ್ತದು  ಸೇರಿಲ್ಲ . ಯಾವ ನಾಟಕದ  ಹಸ್ತಪ್ರತಿಗಾಗಿ  ನಾರಾಯಣ  ಶಾನುಭಾಗ  ಮತ್ತು ರಾಜಗೋಪಾಲ ಕನ್ಯಾನ  ಕಷ್ಟ ಪಟ್ಟು ಅಲ್ಲಿ ಇಲ್ಲಿ ಕೇಳಿ ಅಲೆದಾಡಿದ್ದರೋ ಅದು ಸಿಕ್ಕಿಯೂ  ಪ್ರಕಟವಾಗಲಿಲ್ಲ . !