Thursday 25 January 2018

ಸಾವಿರದೊಂದು ಗುರಿಯೆಡೆಗೆ: ತುಳುನಾಡ ದೈವಗಳು 419-420 ಮನದಲಾತ್ ಚಾಮುಂಡಿ ಮತ್ತು ಮುಕ್ರಿ ಪೋಕ್ಕೆರ್ ತೆಯ್ಯಂ© ಡಾ.ಲಕ್ಷ್ಮೀ ಜಿ ಪ್ರಸಾದ

ಚಿತ್ರ ಕೃಪೆ: ಅಂತರ್ಜಾಲ
 ಸಾವಿರದೊಂದು ಗುರಿಯೆಡೆಗೆ ತುಳುನಾಡ ದೈವಗಳು 419-20 ಚಾಮುಂಡಿ ಮತ್ತು ಮುಕ್ರಿ ಪೋಕ್ಕೆರ್ ತೆಯ್ಯಂ © ಡಾ.ಲಕ್ಷ್ಮೀ ಜಿ ಪ್ರಸಾದ
ಕಾಸರಗೋಡು ಸಮೀಪದ ವೆಲ್ಲಿಕುಂಡ್ತ್ ನಲ್ಲಿ ಮಲ್ಲೊಮ್ ಕೊಲ್ಲೊತ್ ತರವಾಡು ಕುಟುಂಬದವರು ಮುಕ್ರಿ ಪೋಕ್ಕೆರ್ ತೆಯ್ಯಂ ಮತ್ತು ಚಾಮುಂಡಿ ದೈವವನ್ನು ಆರಾಧನೆ ಮಾಡುತ್ತಾರೆ.ಹೆಸರೇ ಸೂಚಿಸುವಂತೆ ಮುಕ್ರಿ ಪೋಕ್ಕೆರ್ ಮುಸ್ಲಿಂ ಮೂಲದ ದೈವತ.
ಸ್ಥಳೀಯ ಐತಿಹ್ಯದ ಪ್ರಕಾರ ಈತ ಒಂದು ನಾಯರ್ ಕುಟುಂಬದ ರಕ್ಷಕನಾಗಿರುವ ವ್ಯಕ್ತಿ. ಈತ ಓರ್ವ ಮಂತ್ರವಾದಿ ಕೂಡ.ಆತನಿಗೂ ಆ ನಾಯರ್ ಕುಟುಂಬದ ಓರ್ವ ಯುವತಿಗೂ ಪ್ರೇಮ ಉಂಟಾಗುತ್ತದೆ.ಇದನ್ನು ತಿಳಿದ ನಾಯರ್ ಕುಟುಂಬದ ಹಿರಿಯ ಈತನಿಗೆ ಗುಂಡಿಕ್ಕುತ್ತಾನೆ.ಆದರೂ ಆತ ಸಾಯುವುದಿಲ್ಲ.ನಂತರ ಆತನನ್ನು ಕತ್ತಿಯಿಂದ ಹೊಡೆಯುತ್ತಾರೆ.ಆಗಲೂ ಆತ ಸಾಯುವುದಿಲ್ಲ.ಆಗ ಆತನೇ ತನ್ನ ಕುತ್ತಿಗೆಯಲ್ಲಿರುವ ತಾಯಿತವನ್ನು ತೆಗೆಯಲು ಹೇಳುತ್ತಾನೆ.ಆ ತಸಯಿತದ ಕಾರಣದಿಂದ ಆತನಿಗೆ ಸಾವು ಬರುವುದಿಲ್ಲ. ಆತನನ್ನು ನೋವಿನಿಂದ ಪಾರು ಮಾಡುವ ಸಲುವಾಗಿ ಆತನ ಕುತ್ತಿಗೆಯಿಂದ ಮಾಂತ್ರಿಕ ಶಕ್ತಿ ಇರುವ ತಾಯಿತವನ್ನು ಬೇರ್ಪಡಿಸುತ್ತಾರೆ. ಆತ ಮರಣವನ್ನಪ್ಪಿ ನಂತರ ದೈವತ್ವವನ್ನು ಪಡೆಯುತ್ತಾನೆ.
ಆತನಿಗೆ ಗುಂಡಿಕ್ಕಿದ ನಾಯರ್ ಗೆ ಮತಿವಭ್ರಮಣೆಯಾಗುತ್ತದೆ.ಮನೆಯಲ್ಲಿ ನಾನಾವಿಧವಾದ ಉಪದ್ರಗಳು ಕಾಣಿಸಿಕೊಳ್ಳುತ್ತದೆ
ಆಗ ಅವರು ಜ್ಯೋತಿಷಿಗಳಲ್ಲಿ ಕೇಳಿದಾಗ ಆ ವ್ಯಕ್ತಿ ಮುಕ್ರಿ ಪೋಕ್ಕೆರ್ ದೈವವಾಗಿ ಉದಿಸಿರುವುದು ಕಂಡುಬರುತ್ತದೆ.ನಂತರ ಆತನಿಗೆ ಕೋಲ ಕೊಟ್ಟು ಆರಾಧನೆ ಮಾಡಿ ಸಂಪ್ರೀತಗೊಳಿಸುತ್ತಾರೆ.ಆತನನ್ನು ಪ್ರೀತಿಸಿದ ಯುವತಿಯನ್ನು ಮನೆಯಿಂದ ಹೊರಗೆ ಹಾಕಿರುತ್ತಾರೆ.ಆಕೆ ಕೂಡ ಮಾಯಕವಾಗಿ ಮುಕ್ರಿ ಪೋಕ್ಕೆರ್ ಜೊತೆಯಲ್ಲಿ ಸೇರಿಕೊಂಡು ದೈವವಾಗಿ ಆರಾಧನೆ ಪಡೆಯುತ್ತಾಳೆ.ಮುಕ್ರಿ ಪೋಕ್ಕೆರ್ ಜೊತೆಗೆ ಆರಾಧನೆ ಪಡೆಯುವ ಚಾಮುಂಡಿ ದೈವ ಈಕೆಯೇ ಎಂಬ ಅಭಿಪ್ರಾಯವಿದೆ.ಮಾಪ್ಪಿಳ್ಳೆ ತೆಯ್ಯಂ ಮತ್ತು ಮುಕ್ರಿ ಪೋಕ್ಕೆರ್ ದೈವ ಎರಡೂ ಒಂದೇ ಎಂಬ ಅಭಿಪ್ರಾಯವನ್ನು ಎನ್ ಕೃಷ್ಣನ್ ಮೊದಲಾದವರು ನೀಡಿದ್ದಾರೆ.
ಈ ದೈವ ಕೋಲದ ಸಂದರ್ಭದಲ್ಲಿ ಪ್ರಾರ್ಥನೆಗೆ ಕರೆ ಕೊಡುವ ( ಆಝಾನ್) ಸಂಪ್ರದಾಯವಿದೆ.ಈ ದೈವ ಬಿಳಿಯ ನಿಲುವಂಗಿ ಮತ್ತು ದಾರಿಯನ್ನು ತೊಟ್ಟು ಮಾನವ ಸಹಜ ಅಲಂಕಾರದಲ್ಲಿ ಇರುತ್ತದೆ.ತಲೆಗೆ ಮುಂಡಾಸು ಮತ್ತು ಮುಖದಲ್ಲಿ ಗಡ್ಡ ಇರುತ್ತದೆ.ಕಾಲಿಗೆ ಗಗ್ಗರ ಧಿರಿಸುತ್ತದೆ.
ಮಾಹಿತಿ ಮೂಲ-  ಹಿರಿಯರಾದ ಕುಂಞಿರಾಮನ್,ಎನ್ ಕೃಷ್ಣನ್  ಮತ್ತು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಹಿರಿಯರು ನೀಡಿದ ಮೌಖಿಕ ಮಾಹಿತಿ  ಹಾಗೂ folkstudioin ಬ್ಲಾಗ್ http://folkstudioin.blogspot.in/2013/11/mappila-theyyam-i-t-is-presence-of.html?m=1

No comments:

Post a Comment