Monday 9 October 2023

ಕರಾವಳಿಯ ಸಾವಿರದೊಂದು ದೈವಗಳು :ಪಾರ್ಥಂಪಾಡಿ( ಜಟಾಧಾರಿ) ದೈವ- ಡಾ.ಲಕ್ಷ್ಮೀ ಜಿ ಪ್ರಸಾದ್

 

ಚಿತ್ರ : ಅಂತರ್ಜಾಲ 
ಪಾರ್ಥಂಪಾಡಿ( ಜಟಾಧಾರಿ) ದೈವ- ಡಾ.ಲಕ್ಷ್ಮೀ ಜಿ ಪ್ರಸಾದ್ 

ಪಾರ್ಥಂಪಾಡಿ (ಜಟಾಧಾರಿ) ದೈವ ವಿಟ್ಲ ಅರಸರ ಅರಮನೆಯ ಪಟ್ಟದ ದೈವ. ಮೂಲತಃ ಓರ್ವ ವೀರ ಪುರುಷ .ಈತ ವಿಟ್ಲ ಅರಸರೊಬ್ಬರನ್ನು  ಬಂಧನದಿಂದ ಬಿಡಿಸಿ ಸ್ವತಂತ್ರಗೊಳಿಸಿದ ವೀರ ಎಂಬ ಐತಿಹ್ಯವನ್ನು ಹಿರಿಯರಾದ ಕುಂಡ ನಲಿಕೆಯವರು ತುಂಬಾ ಸಮಯದ ಹಿಂದೆ ತಿಳಿಸಿದ್ದರು

 ವಿಟ್ಲ ಅರಸರ ಚಾವಡಿಯ ಪಟ್ಟದ ದೈವದ ಮೂಲ ಹೆಸರು ಪಾರ್ಥಂಪಾಡಿ ದೈವ.ವಿಟ್ಲ ಅರಮನೆಯ ಚಾವಡಿಗೆ ಪಾರ್ಥಂಪಾಡಿ ಚಾವಡಿ ಎಂಬ ಹೆಸರಿದ್ದ ಬಗ್ವೆ ಇತಿಹಾಸದಲ್ಲಿ ಉಲ್ಲೇಖಗಳಿವೆ.ಇದನ್ನು ಜಟಾಧಾರಿ ಎಂದೂ ಕರೆಯುತ್ತಾರೆ 

ಯಾವ ವಿಟ್ಲದ ಅರಸರು ಬಂಧನಕ್ಕೊಳಗಾಗಿದ್ದರು ? ಯಾಕೆ ? ಅವರನ್ನು ಬಂಧನದಿಂದ ಬಿಡಿಸಿದ ವೀರ ಯಾರು ಎಂಬ ಬಗ್ಗೆ ಮಾಹಿತಿ ಹುಡುಕುತ್ತಾ ಇದ್ದಾಗ ಕೆಂಡ ಸಂಪಿಗೆಯಲ್ಲಿ ಡಾ.ಜನಾರ್ಧನ ಭಟ್ ಅವರು ಬರೆಯುತ್ತಿದ್ದ ಓಬೀರಾಯನ ಕಥೆಗಳು ಅಂಕಣದಲ್ಲಿ ಬೇಕಲ ರಾಮನಾಯಕರ ಒಂದು ಕಥೆ ಸಿಕ್ಕಿತು.ಇದು ಇತಿಹಾಸ ಆಧಾರಿತ ಕಥಾನಕವಾಗಿದೆ.

ಪುಣಚ ಗ್ರಾಮದ ದೊಡ್ಡ ಮನೆ ಈಶ್ವರಯ್ಯನವರು ಇಲ್ಲಿನ ಮೂಲ ಪುರುಷ.ಇವರು ಮೊದಲು ವಿಟ್ಲ ಅರಸರಬಗ್ಗೆ ಅತೀವ ಪ್ರೀತಿ ಗೌರವ ಉಳ್ಳವರಾಗಿದ್ದರು..ಇವರ ಬಗ್ಗೆ ಬೇಕಲ ರಾಮನಾಯಕರು "

ಅಂದಿನ ಇಟ್ಟಲ ಹೆಗ್ಗಡೆಗೆ ಅವನಲ್ಲಿ ತುಂಬ ಸ್ನೇಹ ವಿಶ್ವಾಸ. ಗಂಡುಡೆಯುಟ್ಟು ದೊಡ್ಡ ಮುಂಡಾಸನವನ್ನು ಸುತ್ತಿ ಬಿಳಿಯ ಬಗಲು ಕಸೆಯ ನಿಲುವಂಗಿ, ಜರತಾರಿ ಅಂಗರೇಖು ತೊಟ್ಟು ಬಿಗಿದ ಪಟ್ಟಿದಟ್ಟಿಯಲ್ಲಿ ಬೆಳ್ಳಿ ಹಿಡಿಯ ನೀಳ್ಗತ್ತಿಯನ್ನು ಸಿಕ್ಕಿಸಿಕೊಂಡು ಐವತ್ತರ ಹರಯದ ಆ ವೀರನು ಓಲಗದಲ್ಲಿ ಸುಳಿದನೆಂದರೆ ಅವನ ಗಂಡುಗಾಡಿಯಿಂದ ಪಾರ್ಥಂಪಾಡಿ ಚಾವಡಿಯೆಲ್ಲ ಬೆಳಗುತ್ತಿತ್ತು.ಎಂದಿದ್ದಾರೆ.

© ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ,ಲೇ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684:

ಊರಿನ ಎಲ್ಲ ಕೂಟ ಸ್ಥಾನ ಪಂಚಾಯತಿಗಳಿಗೆಲ್ಲ ಅವನೇ ಅಗ್ರಣಿ. ಅವನ ಮಾತಿಗೆ ಇದಿರಿಲ್ಲ. ಸೀಮೆಯ ಸಾವಿರದೈನೂರು ಆಳಿಗೆ ಅವನಲ್ಲಿ ಅಂಥ ಆದರಾಭಿಮಾನ. ಜಾತ್ರೆ, ಸಮಾರಾಧನೆ, ಅಯನ, ಕಂಬಳಗಳಿಗೆ ಹಣ ಸೂರೆಗುಡುತ್ತಿದ್ದನು. ಅವನ ಆ ದೊಡ್ಡ ಮನೆಗೆ ಹಸಿವಿನಿಂದ ಹೋದವರು ಬರಿ ಹೊಟ್ಟೆಯಲ್ಲಿ ಬಂದುದಿಲ್ಲ. ಸಹಾಯ ಬೇಡಲು ಹೋದವರು ಬರಿಗೈಯಲ್ಲಿ ಮರಳಿದುದಿಲ್ಲ. ಇತಿಗಳಿಗೆಲ್ಲ ಅವನೇ ಮೊಕ್ತೇಸರ. ಶುಭ ಶೋಭನಗಳಿಗೆ ಅವನಿಗೆ ಓಲಗದ ಹೇಳಿಕೆ. ಮದುವೆ ಮುಂಜಿಗಳಲ್ಲಿ ಅವನ ಮನೆಗೆ ಮೊದಲು ಸೇಸೆಯ ಮರ್ಯಾದೆ. ಅವನು ಹೋದಲ್ಲೆಲ್ಲ ಅವನಿಗೆ ಮೂರು ಮಣೆಯ ಮನ್ನಣೆ – ಒಂದು ಅವನ ಖಡ್ಗಕ್ಕೆ. ಒಂದು ಮುಂಡಾಸು ಇರಿಸುವುದಕ್ಕೆ, ಒಂದು ಅವನ ಆಸನಕ್ಕೆ. ಎಲ್ಲಿ ಹೋದರೂ ಅವನ ಮಾತುಕತೆ ನಡೆಯುತ್ತಿತ್ತು. ನಡೆದು ನಡೆದು ಅದು ಇಕ್ಕೇರಿಯ ಹೊನ್ನಾಗಿತ್ತು." ಎಂದು ರಾಮನಸಯಕರು ಈಶ್ವರಯ್ಯನ ವ್ಯಕ್ತಿತ್ವವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ

ವಿಟ್ಲ ಅರಸರು ಇಕ್ಕೇರಿಯ ಸಾಮಂತರಾಗಿದ್ದ ಕಾಲವದು.ಆಗ ಇಕ್ಕೇರಿಯ ಅರಸರು ಈಶ್ವರಯ್ಯನ ಸೌರ್ಯ ಸಾಹಸ ಧೀಮಂತಿಕೆಯನ್ನು ನೋಡಿ ತಮ್ಮ ಸೇನೆಯ ದಳವಾಯಿಯನ್ನಾಗಿ ಮಾಡಿದರು© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಈ ಬಗ್ಗೆ ಬೇಕಲ ರಾಮನಾಯಕರು "

ಕ್ರಿ.ಶ. 1715ರಲ್ಲಿ ಕೆಳದಿಯಲ್ಲಿ ಎರಡನೇ ಸೋಮಶೇಖರ ನಾಯಕನು ಪಟ್ಟವೇರಿ ಪರಮ ಪ್ರಸಿದ್ಧಿಯನ್ನು ಪಡೆದಿದ್ದನು. ನೆಗಳ್ತೆವೆತ್ತ ಶಿವಪ್ಪನಾಯಕನು ಚಂದ್ರಗಿರಿ, ಬೇರ, ಚಿತ್ತಾರಿ ಕೋಟೆಗಳನ್ನು ಬಲ್ಪಗೈಸಿ ನೀಲೇಶ್ವರದವರೆಗೆ ಗಡಿಯನ್ನೊತ್ತಿ ತೊಲಗದ ಕಂಬವನ್ನು ನಿಲ್ಲಿಸಿದ್ದರೂ ಆ ಪ್ರದೇಶದ ಹಿಡಿತವಿನ್ನೂ ಬೇರುಗೊಂಡಿರಲಿಲ್ಲ. ಎಡಬಲದ ಮಲೆಯಾಳಿಗಳು ಆಗಾಗ ಗುಲ್ಲೆಬ್ಬಿಸುತ್ತಿದ್ದರು. ಒಮ್ಮೆ ಕೋಲತ್ತರಸ ರವಿವರ್ಮರಾಜನು ಕುಹಕೋಪಾಯಗಳಿಂದ ಕುಂಬಳೆಯರಸನನ್ನು ಕೂಡಿಕೊಂಡು ನಾಯಿಮಾರ, ಮಾಪಿಳ್ಳೆ ಮೊದಲಾದ ಮಲೆಯಾಳಿ ಜನರ ಪಡೆಯೊಂದಿಗೆ ಬಲವೆತ್ತಿ ಬಂದು ಚಂದ್ರಗಿರಿ ಕೋಟೆಯನ್ನು ಲಗ್ಗೆಯಿಟ್ಟನು. ಪರಿಸರದ ಊರು ಕೇರಿಗಳನ್ನು ಕೊಳ್ಳೆಹೊಡೆದನು. ತಿರುಕಣ್ಣೂರು ತಿರೂರು ಕೋವಿಲಗಳನ್ನು ಸುಲಿದು ಊರಿಗೆ ಕಿಚ್ಚಿಟ್ಟನು. (ಹಾಗೆ ಸುಟ್ಟು ಕರಿಪುಡಿಯಾದ ಭಾಗವು ಈಗಲೂ ಕರಿಪೇಡಿಯೆಂದು ಕರೆಯಲ್ಪಡುತ್ತಿದೆ.) ಇದನ್ನು ಕಂಡು ಸೋಮಶೇಖರ ನಾಯಕನು ಕೆರಳಿ ಮಲೆತು ಮಾರ್ಮಲೆವ ಮಲೆಯಾಳಿಗಳನ್ನು ಹತ್ತಿಕ್ಕುವುದಕ್ಕಾಗಿ ಚಂದ್ರಗಿರಿ ಕೋಟೆಗೆ ಬಲ್ದಂಡನ್ನು ಕಳುಹಿಸಿದನು. ಆ ಕನ್ನಡ ಸೇನೆಯು ಮುನಿದೆತ್ತಿ ಬಂದು ಭೋಂಕನೆ ಬರಸಿಡಿಲಂತೆರಗಿ ಅರಿಪಡೆಯನ್ನು ತರಿದು ತೂರಿ ದೆಸೆಗೆಡಿಸಿತು. ಕೋಲತ್ತರಸನು ಕೈಯೂರಿ ಕೈದುವನಿಕ್ಕಿ ಕೈ ಮುಗಿದು ಮುತ್ತಿಗೆ ಕಿತ್ತು ಕಾಲ್ತೆಗೆದನು. ಕುಂಬಳೆಯರಸನು ಸೆರೆಸಿಕ್ಕಿ ವೇಣುಪುರ ಕೋಟೆಯಲ್ಲಿ ಬಂಧಿತನಾದನು. ಈ ಭೀಕರ ಯುದ್ಧದಲ್ಲಿ ಈಶ್ವರಯ್ಯನ ಪಟುತರ ಭುಜ ಬಲವು ಬೆಳಕಿಗೆ ಬಂತು.

ಸೋಮಶೇಖರ ನಾಯಕನು ಮಲೆಯಾಳಿಗಳನ್ನು ಹಿಮ್ಮೆಟ್ಟಿಸಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತೆಂಕನಾಡ ಗಡಿಯನ್ನು ಇನ್ನೂ ಮುಂದೊತ್ತಬೇಕೆಂದು ಸೇನೆಯನ್ನಟ್ಟಿದನು. ಆ ಮಹಾಸೈನ್ಯವು ಚಿತ್ತಾರಿ ಕೋಟೆಯಲ್ಲಿ ಪಾಳೆಯ ಬಿಟ್ಟು (ನಡೆ) ತಳಿಗೋಂಟೆಯನ್ನು ನಡೆಸುತ್ತ ಜಂತ್ರದ ಒಡ್ಡವಣೆಯ ಚಳಕದಿಂದ ಒತ್ತೊತ್ತಿ ಮುಂದುವರಿಯುತ್ತ ಇದಿರಾಂತವರನ್ನು ತಳ್ತಿರಿಯುತ್ತ ಉರವಣೆಯಿಂದ ಕಾದಿ ಶತ್ರುಗಳನ್ನು ನೆಲೆಗೆಡಿಸಿ ಅಲವತ್ತನಾಡು ನೀಲೇಶ್ವರಗಳನ್ನು ಹಾಯ್ದು ಪೆರಂಪುಯ ನದಿಯ ವರೆಗೆ ನುಗ್ಗಿ – ಆ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. © ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಸೋಮಶೇಖರ ನಾಯಕನು ಕಾಂಞಂಗಾಡಿನಲ್ಲಿ ‘ಹೊಸದುರ್ಗ’ವನ್ನು ಕಟ್ಟಿಸಿ ಫೌಜನ್ನಿಟ್ಟು ಭದ್ರಪಡಿಸಿದನು. ಈ ಮಹಾ ಕಾಳಗದಲ್ಲಿ ಈಶ್ವರಯ್ಯನ ಪರಾಕ್ರಮಕ್ಕೆ ಕಲಶವಿಟ್ಟಿತು. ಅವನ ಅದಟು, ಆರ್ಪು, ಅಂಗವಣೆಗಳನ್ನು ಕಂಡು ಬಾರಕೂರು ಸೂರಪ್ಪಯ್ಯನೇ ಮೊದಲಾದ ಚಮೂಪತಿಗಳು ಶಹಭಾಸ್ ಎಂದರು. ಶತ್ರು ಸೈನ್ಯವು ಬೆರಗಾಯಿತು. ಸೋಮಶೇಖರ ನಾಯಕನು ಸ್ವತಹ ಅವನ ರಣವಿಕ್ರಮದ ಆಯತಿಕೆಯನ್ನು ಕೊಂಡಾಡಿ ಅವನನ್ನು ದಳವಾಯಿ ಪದವಿಗೇರಿಸಿ ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದನು." ಎಂದು ಬಣ್ಣಿಸಿದ್ದಾರೆ

ಆ ಸಮಯದಲ್ಲಿ ದೋರ್ದಂಡ ವಿದಾಯ ಶ್ರುತ ಪ್ರತಾಪ’ ಎಂಬ ಬಿರುದಿಗೆ ಪಾತ್ರರಾಗಿದ್ದ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಪ್ರಜಾನುರಾಗಿಯಾಗಿ ರಾಜ್ಯವನ್ನಾಳುತ್ತಿದ್ದನು

© ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ,ಲೇ ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684:

ಆಗ ಸರಿಯಾಗಿ ಮಳೆ ಬಾರದೆ ಬೆಳೆ ಬೆಳೆಯದೆ ಜನರ ಆದಾಯ ಕಡಿಮೆಯಾಯಿತು.ಪ್ರಜಾನುರಾಗಿಯಾದ ಅರಸ ಬಲವಂತವಾಗಿ ರಾಯ ಸಂಗ್ರಹಿಸಲಿಲ್ಲ.ಇದರಿಂದಾಗಿ ಬೊಕ್ಕಸ ಬರಿದಾಗಿ ಇಕ್ಕೇರಿಯ ಅರಸರಿಗೆ ಕಪ್ಪ ಕಾಣಿಕೆ ಸಲ್ಲಿಸಲು ಸಾಧ್ಯವಾಗಲಿಲ್ಲ.ಇದರಿಂದಾಗಿ ಇಕ್ಕೇರಿಯ ಅರಸರು ವಿಟ್ಲದ ಅರಸರನ್ನು ಬಂಧಿಸಿ ಸೆರೆಮನೆಗೆ ತಳ್ಳಿದರು.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದಳವಾಯಿ ಈಶ್ವರಯ್ಯನವರಿಗೆ ಸೆರೆಮನೆಯ ವಿಭಾಗದ ಜವಾಬ್ದಾರಿಯನ್ನು ಇಕ್ಕೆರಿಯ ಅರಸರು ವಹಿಸಿದ್ದರು.ಇಕ್ಕೇರಿಗೆ ನಿಷ್ಟರಾಗಿದ್ದ ವಿಟ್ಕ ಅರಸರು ಸೆರೆಮನೆಯಲ್ಲಿರುವುದು ತಿಳಿದು ಈಶ್ವರಯ್ಯನವರಿಗೆ ಬಹಳ ಸಂತಾಪವಾಯಿತು.ಪ್ರಧಾನಿ ನಿರ್ವಾಣ ಶೆಟ್ಟಿ ಅವರ ಸಹೋದರ ಗುರುವಪ್ಪನವರ ಜೊತೆ ಮಾತನಾಡಿದರು‌ಮಹಾರಾಜರಿಗೆ ಒಪ್ಪಿಸಲು ಸಾವಿರ ಹೊನ್ನಿನ ವ್ಯವಸ್ಥೆ ಮಾಡಿದರು ಉಳಿದ ಕಪ್ಒದ ಹಣವನ್ನು ಸಲ್ಲಿಸಲು ಕಾಲಾವಕಾಶ ಒದಗಿಸಿ ಅರಸರನ್ನು ಸ್ವತಂತ್ರರನ್ನಾಗಿ ಮಾಡಿದರು.ಕೊಡಬೇಕಾದ ಕಪ್ಪದ ಹಣದಲ್ಕಿ ಅರ್ಧದಷ್ಟು ರಿಯಾಯತಿ ನೀಡಿಸಿದರು.

ಹಾಗಾಗಿ ವಿಟ್ಲದ ಅರಸರು ದಳವಾಯಿ ಈಶ್ವರಯ್ಯನವರ ಬಗ್ಗೆ ಅಪಾರವಾದ ಗೌರವ ಅಭಿಮಾನಗಳನ್ನು ಹೊಂದಿದ್ದರು.ಹಾಗಾಗಿ ವಿಟ್ಲದ ಪಾರ್ಥಂಪಾಡಿ ಚಾವಡಿಯಲ್ಲಿ ಈಶ್ವರಯ್ಯನವರಿಗೆ ವಿಶೇಷವಾದ ಸ್ಥಾನ ಇತ್ತು‌

ತನ್ನನ್ನು ಸೆರೆಮನೆಯಿಂದ ಬಿಡಿಸಿ ಮತ್ತೆ ಅರಸೊತ್ತಿಗೆ ಸಿಗುವಂತೆ ಮಾಡಿ ಮಾನವನ್ನುಳಿಸಿದ ನಿರ್ವಾಣ ಶೆಟ್ಟಿಗೆ ತನ್ನ ಅಧೀನದ ಕಾಡುಮಠದಲ್ಲಿಯೂ, ದಳವಾಯಿ ಈಶ್ವರಯ್ಯನಿಗೆ ಪುಣಚೆ ಗ್ರಾಮದಲ್ಲಿಯೂ ಭೂಮಿಯನ್ನು ಉಂಬಳಿ ಬಿಟ್ಟರು

ಈ ಬಗ್ಗೆ ಶಾಸನವಿದ್ದು ಗಣಪತಿರಾವ್ ಐಗಳು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ ಗ್ರಂಥದಲ್ಲಿ ಹೀಗೆ ಬರೆದಿದ್ದಾರೆ© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ವಿಟ್ಲ ರಾಜ್ಯದ ಕಾಡುಮಠದ ವೀರಶೈವ ರಾದ ರಾಮಯ್ಯ ಶೆಟ್ರಲ್ಲಿರುವ ಶಾ. ಶ. 1641ನೇ (ಕ್ರಿ, ಶ. 1719)ನೆಯ ಶಾಸನದಲ್ಲಿ ವಿಟ್ಟಿ ದ ಡೊಂಬಹೆಗಡೆಯು ಇಕ್ಕೇರಿ ಆಸ್ಥಾನಕ್ಕೆ ಹೊಡ ತಕ್ಕ ಕಪ್ಪವನ್ನು ಕೊಡದೆ ಇದ್ದುದಕ್ಕಾಗಿ ಆ ಹೆಗಡೆಯನ್ನು ಸೆರೆಹಿಡಿದು ನಗರಕ್ಕೆ ಕೊಂಡುಹೋದಾಗ ನಗರ ಸಂಸ್ಥಾನದಲ್ಲಿ ಪ್ರಧಾನಿಯಾಗಿದ್ದ ಸಂಗಪ್ಪ ಶೆಟ್ಟಿಯ ಮಗ ನಿರ್ವಾಣ ಶೆಶ್ಚಿಯು ಆ ಹಣಕ್ಕೆ ಜಾಮೂನು ನಿಂತದ್ದ ಕ್ಕಾಗಿ ಅರಸೆನಾದ' ನರಸಿಂಹರಸೆ ಡೊಂಬಹೆಗಡೆಯು ಅದೇ ಮೋಜಿಗೆ ನಿರ್ವಾಣ ಶೆಟ್ಟಿಗೆ ಕೊಲ್ನಾಡು ಮತ್ತು ವಿಟ್ಲಿ ಗ್ರಾಮ ಗಳಲ್ಲಿ ಚಂದಪ್ಪಾಡಿ, ಕಾಡುಮರ, ನರ್ಕಳ ಈ ಮೂರು ಕಡೆ ಉಂಬಳಿ ಬಿಟ್ಟಿನೆಂದು ಕಾಣುತ್ತದೆ. ಆ ಆಸ್ತಿಯನ್ನು ಈಗಲೂ ಕಾಡುಮಠ ದವರು ಅನುಭವಿಸಿಕೊಂಡು ಬರುತ್ತಾರೆ. ಈ ಶಾಸನದಿಂದ ಕ್ರಿ. ಶ. 1719ರಲ್ಲಿ ನರಸಿಂಹ ಅರಸೆನಾದ ಡೊಂಬಹೆಗಡೆಯು ಆಳುತ್ತಿದ್ದನೆಂದು ಕಾಣುತ್ತದೆ.

" ಈಶ್ವರಯ್ಯನು ದಳವಾಯಿ ಪದವಿಯಿಂದ ನಿವೃತ್ತನಾದ ಮೇಲೆ ಈ ಮಾನ್ಯದ ಭೂಮಿಯಲ್ಲಿ ಮಹಿಷಿಮರ್ದಿನಿಯ ಪಾದತಲದಲ್ಲಿ ನೆಲೆಗೊಂಡನು" ಎಂದು ಬೇಕಲ ರಾಮನಾಯಕರು ಹೇಳಿದ್ದಾರೆ.© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ದೇವರ ಪದತಲದಲ್ಲಿ ನೆಲೆಗೊಂಡನು ಎಂಬಲ್ಲಿ ಈಶ್ವರಯ್ಯ ದೈವತ್ವ ಪಡೆದುದರ ಸೂಚನೆ ಇದೆ.ಪುಣಚ ಮಹಿಷ ಮರ್ಧಿನಿ ದೇವಾಲಯದ ಪ್ರಧಾನ ದೈವ ಜಟಾಧಾರಿ..ಜಟಾಧಾರಿ ದೈವದ ಪೂರ್ವದ ಹೆಸರು ಪಾರ್ಥಂಪಾಡಿ ದೈವ ಎಂದು.ಬಾಡೂರಿಗೆ ಬಂದ ನಂತರ ಪಾರ್ಥಂಪಾಡಿ ದೈವವನ್ನು ಜಟಾಧಾರಿ ಎಂದು ಕರೆದರು ಎಂದು ತಂತ್ರಿಗಳಾದ ಲಕ್ಷ್ಮೀನಾರಾಯಣ ಭಟ್ಟರು ಮಾಹಿತಿ ನೀಡಿದ್ದಾರೆ.

ಪಾರ್ಥಂಪಾಡಿ ಚಾವಡಿಯಲ್ಲಿ ಬಹುಮಾನ್ಯರಾಗಿಧದ ಈಶ್ವರಯ್ಯನವರೇ ದೈವತ್ವ ಪಡೆದು ಪಾರ್ಥಂಪಾಡಿ ದೈವ ಎಂಬ ಹೆಸರಿನಲ್ಲಿ ಆರಾದಿಸಲ್ಪಟ್ಟಿರಯವ ಸಾಧ್ಯತೆ ಇದೆ.

ವಿಟ್ಲದ ಪಟ್ಟದ ದೈವ ಈಗ ಜಟಾಧಾರಿ ಎಂದು ಕರೆಯಲ್ಪಡುತ್ತಿರುವ ಪಾರ್ಥಂಪಾಡಿ ದೈವವಾಗಿದೆ.

ಅರಸರ ಮಾನ ಉಳಿಸಿದ ಕಳೆದು ಹೋದ ಅರಸೊತ್ತಿಗೆ ಮರಳಿ ಸಿಗುವಂತೆ ಮಾಡಿದ ವೀರ ಪಟ್ಡದ ಚಾವಡಿ ದೈವವಾಗಿ ಆರಾಧನೆ ಪಡೆಯುವದ್ದರಲ್ಲಿ ಅಚ್ಚರಿಯ ವಿಚಾರವೇನೂ ಇಲ್ಲ© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

ಕುಂಬಳೆ ಅರಸರ ಸೇನಾನಿಯಾಗಿದ್ದ ಬೀರಣ್ಣಾಳ್ವ ಎಂಬ ವೀರ ದೈವತ್ವ ಪಡೆದು ಕುಂಳೆ ಅರಮನೆಯ ಪಟ್ಡದ ದೈವವಾಗಿ ಆರಾಧಿಸಲ್ಪಡುತ್ತಿದ್ದಾನೆ..ಅಂತೆಯೇ ವಿಟ್ಲದ ಅರಮನೆಯ ಪಾರ್ಥಂಪಾಡಿ ಚಾವಡಿಯಲ್ಲಿ ದಳವಾಯಿ ಈಶ್ವರಯ್ಯನವರೇದೈವತ್ವ ಪಡೆದು ಪಾರ್ಥಂಪಾಡಿ ದೈವವಾಗಿ ಮುಂದೆ ಜಟಾಧಾರಿ ಎಂಬ ಹೆಸರಿನಲ್ಲಿ ಶಿವಾಂಸ ಸಂಭೂತನಾಗಿ ಆರಾಧಿಸಲಪಡುತ್ತಿರಬಹುದು.

ಜಟಾಧಾರಿ ದೈವದ ದೊಡ್ಡದಾದ ಮೀಸೆ ಇ ದೈವ ಮೂಲತಃ ಓರ್ವ ವೀರ ದಳವಾಯಿಯಾಗಿರುವುದನ್ನು ದ್ಯೋತಿಸುತ್ತದೆ.

ಈ ಬಗ್ಗೆ ಇದು ಹೀಗೆಯೇ ಇದಮಿತ್ಥಂ ಎಂದು ಹೇಳಲು ಸಾಧ್ಯವಿಲ್ಲ‌,ಈ ಬಗ್ಗೆ ಹೆಚ್ವಿನ ಅಧ್ಯಯನ ನಡೆದರೆ ಸ್ಪಷ್ಟ ಮಾಹಿತಿ ಸಿಗಬಹುದು.

© ಡಾ.ಲಕ್ಷ್ಮೀ ಜಿ ಪ್ರಸಾದ್ ,ಕರಾವಳಿಯ ಸಾವಿರದೊಂದು ದೈವಗಳು ಮೊಬೈಲ್ 9480516684 

No comments:

Post a Comment