Sunday 3 December 2023

ಯಮರಾಜನಿಗೊಂದು ಥ್ಯಾಂಕ್ಸ್ ಹೇಳಲಿಕ್ಕಿದೆ..ಯಾಕೆ ಗೊತ್ತೇ ? - ಡಾ.ಲಕ್ಷ್ಮೀ ಜಿ ಪ್ರಸಾದ್


ಯಮರಾಜನಿಗೊಂದು ತ್ಯಾಂಕ್ಸ್ ಹೇಳಲಿಕ್ಕಿದೆ..ಯಾಕೆ ಗೊತ್ತೇ ? 

 ಅದು 2015 ರ ನವೆಂಬರ್ ತಿಂಗಳಿನ ಒಂದು ದಿನ,ತಾರೀಖು ಮರೆತು ಹೋಗಿದೆ ನನಗೆ 


ಮಗ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಾಇದ್ದ.ಮಧ್ಯಾವಧಿ ರಜೆಯಲ್ಲಿ ಹಾಸ್ಟೆಲಿನಿಂದ ಮನೆಗೆ ಬಂದಿದ್ದ.


ಆಗ ನಾವು ಮೊದಲಿದ್ದ ಸಣ್ಣ ಮನೆಯಲ್ಲಿ ಇದ್ದೆವು


ಎರಡು ಬೆಡ್ ರೂಮಿನ ಸಣ್ಣ ಮನೆ.ಒಂದು ಬೆಡ್ ರೂಮ್ ನಮ್ಮ ಪುಸ್ತಕಗಳನ್ಮು ಇನ್ನಿತರ ವಸ್ತುಗಳನ್ನು ತುಂಬಿಡುವ ಜಾಗವಾಗಿತ್ತು.


ಇನ್ನೊಂದು ರೂಮು,ಹಾಲ್ ಮಾತ್ರ ಬಳಕೆಗೆ ಸಿಗುತ್ತಾ ಇತ್ತು


ಪ್ರಸಾದ್ ಮತ್ತು ಮಗ ಹಾಲಿನಲ್ಲಿ ಮಲಗಿ ನಡು ರಾತ್ರಿ ತನಕ ಪಟ್ಟಾಂಗ ಹೊಡೆಯುತ್ತಾ ಇದ್ದರು


ರಾತ್ರಿ ಹನ್ನೆರಡು ಕಳೆದಾಗ ಮಾತನಾಡಿದ್ದು ಸಾಕು..ಮಲಗಿ ಇನ್ನು..ಜೀವನ ಇಡೀ ಇದೆ ಮಾತನಾಡಲು ಎಂದು ಸ್ವಲ್ಪ ಗದರಿ ಹೇಳಿದೆ ಅದಕ್ಕೆ ಮೊದಲು ಮಲಗಿ ಮಲಗಿ ಇನ್ನು ಎಂದು ಹೇಳಿ ಹೇಳಿ  ಸಾಕಾಗಿತ್ತು.ಒಂದೆರಡು ಕ್ಷಣ ಮಾತು ನಿಲ್ಲಿಸ್ತಾ ಇದ್ದರು ನಂತರ ಪಿಸು ಮಾತು ಶುರುವಾಗಿ ಜೋರಾಗುತ್ತಾ ಇತ್ತು


ಹಾಗಾಗಿ ನಾ‌ನೂ ಸ್ವಲ್ಪ ಕೃತಕ ಕೋಪ ತರಿಸಿಕೊಂಡು ತುಸು ಗಟ್ಟಿಯಾಗಿಯೇ ಹೇಳಿದೆ.ಇಬ್ಬರೂ ಮಾತು ನಿಲ್ಲಿಸಿದರು


ನನಗೂ ನಿದ್ರೆ ಬಂತು.


ಕಣ್ಣಿಗೆ ನಿದ್ರೆ ಹಿಡಿದು ಹೆಚ್ಚು ಹೊತ್ತಾಗಿರಲಿಲ್ಲ.ಏನೋ ವಿಚಿತ್ರ ಸದ್ದು ಕೇಳಿಸಿ ಎಚ್ಚರಾಯಿತು.ಅಷ್ಟರಲ್ಲಿ ಮಗ ಲೈಟ್ ಹಾಕಿ ಅಮ್ಮ ಅಪ್ಪನಿಗೆ ಏನೋ ಆಗಿದೆ ಬಾಎಂದು ಕೂಗಿ ಕರೆದ.


ನೋಡಿದರೆ ಪ್ರಸಾದ್ ಗೆ ಎಚ್ಚರವಿರಲಿಲ್ಲ.ಬಾಯಿಯಲ್ಲಿ ರಕ್ತ ಬಂದಿತ್ತು.ಎದೆಗೆ ಕಿವಿಗೊಟ್ಟರೆ ಹೃದಯ ಬಡಿತದ ಸದ್ದು ಕೇಳಲಿಲ್ಲ.ಉಸಿರಾಡುತ್ತಲೂ ಇರಲಿಲ್ಲ.ಮಗ ಕೂಡಲೇ ಎದೆ ಒತ್ತಿ ಸಿಪಿಆರ್ ಕೊಟ್ಟ ಜೊತೆಗೆ ಒಂದು ಬದಿಗೆ ಮಲಗಿಸಿದಾಗ ಬಾಯಿಯಿಮದ ರಕ್ತ ಎಲ್ಲ ಹೊರಗೆ ಬಂತು


ಮತ್ತೆ ಪುನಃ ಮಗ ಸಿಪಿ ಆರ್ ಜೊತೆಗೆ ಬಾಯಿ ಮೂಲಕ ಉಸಿರು ನೀಡಿದ.ನಾಲ್ಕೈದು ನಿಮಿಷ ಮಾಡುತ್ತಲೇ ಇದ್ದ.


ಈ ಹೊತ್ತಿನಲ್ಲಿ ಸಮೀಪ ಪಾರ್ಟಿಸ್ ಹಾಸ್ಪಿಟಲ್ ನ ಅಂಬುಲೆನ್ಸ್ ಗೆ ಕರೆ ಮಾಡಲು ಹೊರಟರೆ ನಂಬರೇ ಸಿಗುತ್ತಾ ಇಲ್ಲ


ಆತಂಕದ ಕ್ಷಣದಲ್ಲಿ ಕಣ್ಣು ಕತ್ತಲಾಗುದು ಮೈಂಡ್ ಬ್ಲಾಂಕ್ ಆಗುದೆಂದರೆ ಏನೆಂದು ಆಗಲೇ ಗೊತ್ತಾದದ್ದು ನನಗೆ


ನಂತರ ಅರವಿಂದನೆ 108 ಕ್ಕೆ ಕರೆ ಮಾಡು ಎಂದ.ಅವನು ನಿರಂತರ ಬಾಯಿ ಮೂಲಕ ಉಸಿರಾಟ ಮತ್ತು ಸಿಪಿಆರ್ ಕೊಡುತ್ತಲೇ ಇದ್ದ


ದುರದೃಷ್ಟಕ್ಕೆ ಕರೆಂಟ್ ಬೇರೆ ಹೋಯ್ತು..ಏನಾಗ್ತಿದೆ ಎಂದು ಕಾಣಲಾರದಾಯಿತು.ಅಂತೂ ಕತ್ತಲಲ್ಲಿ ಪರದಾಡಿ ಮೊಬೈಲ್ ಹುಡುಕಿ ತರುವಷ್ಟರಲ್ಲಿ ಪ್ರಸಾದ್ ದೊಡ್ಡದಾಗಿ ಸದ್ದು ಮಾಡಿ ಉಸಿರೆಳೆದುಕೊಂಡರು.ನಂತರ ಉಸಿರಾಡಲು ಶುರು ಮಾಡಿದರು‌.ಎದೆ ಕೂಡ ಅದಾಗಿಯೇ ಬಡಿಯಲು ಆರಂಭಿಸಿತು.


ಸ್ವಲ್ಪ ಹೊತ್ತಿಗೆ ಮನೆ ಎದುರಿನ ರಸ್ತೆಯಲ್ಲಿ ಬಂದ ಆಂಬುಲೆನ್ಸ್  ಮನೆ ದಾಟಿ ಮುಂದೆ ಹೋಯಿತು


ಅರವಿಂದ ಓಡಿ ಹೋಗಿ ಅದನ್ನು ಹಿಂದೆ ತರಲು ಹೋದ


ಪ್ರಸಾದರಿಗೆ ಎಚ್ಚರ ಬಂದ ಹಾಗೆ ಅನಿಸಿ ಅವರ ಮುಖಕ್ಕೆ ಮೊಬೈಲ್ ಲೈಟ್ ಹಾಕಿದೆ..ಪ್ಚೀ.ಎಂದು ತುಸು ರೇಗಿ ಇನ್ನೊಂದು ಬದಿಗೆ ಮುಖ ಮಾಡಿ ಮಲಗಿದರು.


ಅವರಿಗೆ ಎಚ್ಚರ ಬಂದದ್ದು ಕನ್ಫರ್ಮ್ ಆಯಿತು


ಅಷ್ಟರಲ್ಲಿ ಅಂಬುಲೆನ್ಸ್ ನಿಂದ ಸಿಸ್ಟರ್ ಬಂದು ಪರಿಕ್ಷಿಸಿದರು.ಏನಾಯಿತು ಕೇಳಿದರೆ ಪ್ರಸಾದ್ ಉತ್ತರಿಸಲಿಲ್ಲ.ತಿರುಗಿ ಮಲಗಿದರು.


ನಂತರ ಅವರಿಗೆ ವಿಷಯ ತಿಳಿಸಿ ಮತ್ತೆ ಪುನಃ ಹಾಗೆ ಆದರೆ ಕಷ್ಟ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿ ಬರುವ ಎಂದು ಹೇಳಿದೆವು


ಅವರೇ ಬಂದು ಅಂಬುಲೆನ್ಸ್ಏರಿದರು.ನಾನು ಸಿಕ್ಕಿದ ಡ್ರೆಸ್ ಹಾಕಿಕೊಂಡು ಮಗನ ಜೊತೆ ಹೋದೆ


ಎಮರ್ಜೆನ್ಸ್ ಕೇರ್ ಗೆ ಹೋಗಿ ವಿಷಯ ತಿಳಿಸಿದೆವು


ಪ್ರಸಾದರಿಗೆ ಏನಾಗಿತ್ತು ಎಂದು ಗೊತ್ತಾಗಿರಲಿಲ್ಲ


ಈಗ ನೋಡುವಾಗ ಯಾವುದೇ ಸಮಸ್ಯೆ ಕಾಣ್ತಿಲ್ಲ ಸಿಟಿ ಸ್ಕಾನ್ ಇನ್ನಿತರ ಟೆಸ್ಟ್ ಮಾಡಿ ನೊಡ್ತೇವೆ ಎಂದು ಅಬ್ಸರ್ ವೇಷನ್ ಗಾಗಿ ಐಸಿಯುಗೆ ಶಿಪ್ಟ್ ಮಾಡಿದರು


ನಾನು ಮಗ ಹೊರಗೆ ಕಾಯ್ತಾ ಇದ್ದೆವು


ಅರ್ಧ ಒಂದು ಗಂಟೆಯ ನಂತರ ವೈದ್ಯರು ಕರೆದು ಸಿಟಿ ಸ್ಕಾನಿಂಗ್ ನಾರ್ಮಲ್ ಇದೆ‌.ನಾಳೆ ಹೃದಯ ತಜ್ಞರು ನರ ರೋಗ ತಜ್ಞರು ಬಂದು ನೋಡ್ತಾರೆ ಎಂದರು.ಅಲ್ಲಿಯೇ ಕಾಯುವ ಲಾಂಜ್ ನಲ್ಲಿ ಒಂದು ಸಣ್ಣ ಕಾಟ್ ನಲ್ಲಿ ನಾನು‌ ಮಗ ಕೈಕಾಲು ಮುದುರಿಕೊಂಡು ಮಲಗಿದೆವು


ಆತಂಕ ಕಡಿಮೆಯಾಗಿ ಸಣ್ಣಕೆ ಕಣ್ಣಿಗೆ ನಿದ್ರೆ ಹತ್ತಿತ್ತು.


ಅಷ್ಟರಲ್ಲಿ ಗಾರ್ಡ್ ಬಂದು ಎಬ್ಬಿಸಿದರು.

ಏನು ಎಂದು ಕೇಳಿದೆ.ತಾಯಿ ಮಗನಾ ಕೇಳಿದರು ನಮ್ಮಿಬ್ಬರನ್ನು ನೋಡುತ್ತಾ ..ಹೌದೆಂದೆ...ಸರಿ ಸರಿ ಮಲಗಿ ಎಂದು ಹೊರಗೆ ಹೋದರು.ಮಗ ಪಿಯುಸಿ ಓದುತ್ತಿದ್ದರೂ ಭರ್ತಿಯಾಗಿ ಬೆಳದಿದ್ದು 24 -25 ರ ಯುವಕನಂತೆ ಕಾಣುತ್ತಿದ್ದ.ನನ್ನ ಕಾಲ ಬುಡದಲ್ಲಿ ಮುದುರಿ‌ ಮಲಗಿದ್ದದು ನೋಡಿ  ಗಾರ್ಡ್ ಗೆ ಏನೋ ಗೊಂದಲವಾಗಿ ಎಬ್ಬಿಸಿದ್ದಿರಬೇಕು


ಅಷ್ಟರಲ್ಲಿ ಬೆಳಕಾಯಿತು


ಪ್ರಸಾದ್ ಅಫೀಸಿಗೆ ಸುದ್ದಿ ತಿಳಿಸಿದೆ ಅವರ ಬಾಸ್ ಆಫೀಸಿನ ಇಬ್ಬರು ಸ್ಟಾಫನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟರು


ಬೇರೆ ಬೇರೆ ತಜ್ಣ ವೈದ್ಯರುಗಳೆಲ್ಲ ಬಂದು ನಾನಾವಿಧ ಪರೀಕ್ಷೆಗಳನ್ನು ಮಾಡಿದರು.


ಎಲ್ಲವೂ ನಾರ್ಮಲ್.ಎರಡು ದಿನಗಳಲ್ಲಿ‌ಮನೆಗೆ ಬಂದೆವು.


ಆ ದಿನ ಆದದ್ದೇನು ಎಂದು ವೈದ್ಯರಿಗೂ ಗೊತ್ತಾಗಿರಲಿಲ್ಲ.


ಅದೇ ಮೊದಲು‌ ಮತ್ತು ಕೊನೆ..ಮತ್ತೆ ಆಗಲಿಲ್ಲ


ಆದರೆ ಒಂದು ಕಾಕತಾಳೀಯ ವಿಚಾರ ನಡೆದಿತ್ತು


ಈ ಘಟನೆ ನಡೆದ ಮರುದಿನ ಪ್ರಸಾದರದೇ ವಯಸ್ಸಿನ ದೊಡ್ಡ ಮಾವನವರ ಮಗ ಮೈದುನ ಅಶೋಕ ಭಟ್ ಪಂಜಿಗದ್ದೆ  ಆಕ್ಸಿಡೆಂಟಿನಲ್ಲಿ ತೀರಿ ಹೋಗಿದ್ದ 


ಯಮರಾಯ ಗೊಂದಲವಾಗಿ ನಮ್ಮನೆಗೆ ಬಂದು ಇವನಲ್ಲ ಎಂದರಿತು ಹಿಂದೆ ಹೋಗಿ ಮೈದುನನ ಆಯುಷ್ಯ ಮುಗಿದಿದೆ ಎಂದವನ ಪ್ರಾಣವನ್ನು ಹಿಡಿದುಕೊಂಡು ಹೋದನೇ ?


ಅದೇನೇ ಇರಲಿ‌‌.ನಮ್ಮನ್ನು ಬಿಟ್ಟು ಹೋದ ಯಮರಾಜನಿಗೆ ನಮನ..


ಮುಂದೆ ಎಂದಾದರೂ ಬರುವನಲ್ಲ..ಆಗವನಿಗೆ ಒಂದು ತ್ಯಾಂಕ್ಸ್ ಹೇಳಲಿಕ್ಕಿದೆ.ಅಕಾಲದಲ್ಲಿ ಕೊಂಡೊಯ್ಯದೆ ಬದುಕಲು ಬಿಟ್ಟದ್ದಕ್ಕಾಗಿ


ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ಎಲ್ಲರೂ ಸಾಯಲೇ ಬೇಕು.ಅದು ವಿಧಿ ನಿಯಮ ಅದನ್ನು ಮೀರಲು ಸಾಧ್ಯವಿಲ್ಲ.ಅದರೆ ಮಕ್ಕಳು ಮರಿಗಳ ಜವಾಬ್ದಾರಿ ಕಳೆದಕೊಳ್ಳುವ ತನಕ ಬದುಕುದೂ ಕೂಡ ನಮ್ಮ ಕರ್ತವ್ಯ.


ಅದಕ್ಕಾಗಿ ಕಾಲ‌ಕಾಲಕ್ಕೆ ವೈದ್ಯರ ಬಳಿಗೆ ಹೋಗಿ ಪರೀಕ್ಷಿಸಿಕೊಳ್ಳಬೇಕು.ಅಗತ್ಯವಿದ್ದರೆ ತಜ್ಣ ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳಬೇಕು


ನಿಯತವಾದ ವ್ಯಾಯಾಮ ಹಿತ ಮಿತವಾದ ಆಹಾರ ಸ್ವೀಕರಿಸಬೇಕು


ಎಲ್ಲವನ್ನು  ಮಾಡಿದರೂ ಕೆಲವೊಮ್ಮೆ ಉಹಿಸದೇ ಇದ್ದದ್ದು ಘಟಿಸಿಹೋಗುತ್ತದೆ.ಆಗ ಉಳಿದವರು ಯಾರೂ ಈ ಭೂಮಿಯಲ್ಲಿ ಶಾಶ್ವತರಲ್ಲ. ಬದುಕನ್ನು ಧೈರ್ಯವಾಗಿ ಎದುರಿಸಬೇಕು 

No comments:

Post a Comment