Sunday 10 December 2023

ಭೂತಾರಾಧನೆಯ ಅಪೂರ್ವ ಸಂಶೋಧಕಿ : ಡಾ.ಲಕ್ಷ್ಮೀ ಜಿ ಪ್ರಸಾದ್ - ಸುಮನಾ ಉಪಾಧ್ಯಾಯ


 




ಭೂತಾರಾಧನೆ ತುಳುನಾಡು ಕರಾವಳಿ ಭಾಗದ ಒಂದು ಸೊಗಸಾದ ಸಂಸ್ಕೃತಿ. ಭೂತಾರಾಧನೆ ಇಲ್ಲಿನ ತುಳು ಭಾಷಿಕರ ಜನರ ಜೀವನದಲ್ಲಿ ಹಾಸುಹೊಕ್ಕಿದೆ.

ಆಧುನಿಕ ಜೀವನಶೈಲಿಯಲ್ಲಿ ಭೂತಾರಾಧನೆ ಬಗ್ಗೆ ಇಂದಿನ ಜನಾಂಗದವರಿಗೆ ತಿಳುವಳಿಕೆ ಕಡಿಮೆಯೇ.ಇಂದಿನ ಮಕ್ಕಳಿಗೆ ಭೂತಗಳ ವೇಷಗಳನ್ನು ನೋಡ ಸಿಗುವುದೇ ಅಪರೂಪ. 

ಇಂತಹ ಸ್ಥಿತಿಯೊಳಗೆ ತುಳುನಾಡಿನ ಸಂಸ್ಕೃತಿ, ಭೂತಾರಾಧನೆ ಬಗ್ಗೆ ಅಧ್ಯಯನ ಮಾಡಿ ಎಂ.ಫಿಲ್ ಹಾಗೂ ಎರಡು ಡಾಕ್ಟರೇಟ್ ಪದವಿಗಳನ್ನು ಪಡೆದ ಮೊದಲ ಮಹಿಳೆ ಮಾತ್ರವಲ್ಲ ವ್ಯಕ್ತಿ ಡಾ.ಲಕ್ಷ್ಮಿ ಜಿ ಪ್ರಸಾದ್ ಅವರು. ಅಧ್ಯಯನ ಮಾಡಿದ್ದಷ್ಟೇ ಅಲ್ಲದೆ ಇಂದಿನ ಡಿಜಿಟಲ್ ಮಾಧ್ಯಮ ಯುಗದಲ್ಲಿ ಎಲ್ಲರೂ ಇಂಟರ್ನೆಟ್ ಗೆ ಮಾಹಿತಿಗೆ ಮೊರೆಹೋಗುತ್ತಿರುವ ಸಂದರ್ಭದಲ್ಲಿ ಅದರ ಪರಿಚಯ, ಮಾಹಿತಿ ಇಂದಿನ ಯುವಜನರಿಗೂ ಸಿಗಲೆಂದು ಲಕ್ಷ್ಮಿಯವರು ಈ ಬಗ್ಗೆ ಅತ್ಯಪರೂಪದ ಬ್ಲಾಗನ್ನೇ ತಯಾರಿಸಿದ್ದಾರೆ. ಕರಾವಳಿ ಜಿಲ್ಲೆಯ ತುಳುನಾಡಿನ ಭೂತಗಳ ಇತಿಹಾಸ, ಹಿನ್ನೆಲೆ, ಆರಾಧನೆ ಸ್ವರೂಪ ಒಳಗೊಂಡ ವಿಚಾರ ನಿರಂತರ ಸಂಶೋಧನೆ ಮಾಡಿ, ಭೂತಾರಾಧನೆ ಮಾಹಿತಿ ಹಾಗೂ ಸಂಬಂಧಿಸಿದ ವಿಚಾರಗಳ 700ಕ್ಕಿಂತಲೂ ಹೆಚ್ಚು ಬರಹಗಳು ಈ ಬ್ಲಾಗ್ ನಲ್ಲಿವೆ. 

http://laxmipras.blogspot.com(ಭೂತಗಳ ಅದ್ಭುತ ಜಗತ್ತು-ಸಂಶೋಧನಾ ಬ್ಲಾಗ್) ನೊಳಗೆ ಸಂಪೂರ್ಣ ಮಾಹಿತಿ ಓದುಗರಿಗೆ ಸಿಗುತ್ತದೆ. ಈ ಬ್ಲಾಗ್ ಎಷ್ಟು ಜನಪ್ರಿಯವಾಗಿದೆಯೆಂದರೆ ದೇಶ-ವಿದೇಶಗಳ 3 ಲಕ್ಷಕ್ಕಿಂತಲೂ ಹೆಚ್ಚಿನ ಓದುಗರನ್ನು ಇದು ಹೊಂದಿದೆ. ಭೂತಾರಾಧನೆಯ ಕುರಿತು ಮಾಹಿತಿ, ಫೋಟೊ, ಜಾನಪದ, ಮಹಿಳೆಯರ ಬದುಕು, ನಾನಾ ಭಾಷೆಯ ಸಾಹಿತ್ಯಗಳ ಬರಹ ಈ ಬ್ಲಾಗ್‌ನಲ್ಲಿದೆ. ದೇಶ-ವಿದೇಶಗಳ ಅನೇಕ ಸಂಶೋಧಕರು, ಅಧ್ಯಯನಕಾರರು ಇದರಿಂದ ಮಾಹಿತಿ ಪಡೆದಿದ್ದಾರೆ. ಡಾ ಲಕ್ಷ್ಮಿ ಜಿ ಪ್ರಸಾದ್ ಅವರು ಸಾವಿರದ ಎಂಟು ನೂರು ದೈವಗಳ ಹೆಸರನ್ನು ಸಂಗ್ರಹ ಮಾಡಿದ್ದಾರೆ‌. 500 ಭೂತಗಳ ಕುರಿತಾಗಿ ಅಧ್ಯಯನ ಮಾಡಿ ಬರೆದಿದ್ದಾರೆ‌.ನೂರಕ್ಕೂ ಹೆಚ್ಚಿನ ಅಪರೂಪದ ಪಾಡ್ದನಗಳನ್ನು ಸಂಗ್ರಹಿಸಿದ್ದಾರೆ.

ADVERTISEMENT

ಇವರು ಮೂಲತಃ ಕಾಸರಗೋಡಿನ ಕೋಳ್ಯೂರಿನವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ 20ಕ್ಕೂ ಅಧಿಕ ಪುಸ್ತಕಗಳು, 200ಕ್ಕೂ ಅಧಿಕ ಶೈಕ್ಷಣಿಕ,ವೈಚಾರಿಕ, ಸಂಶೋಧನಾತ್ಮಕ ಬರಹಗಳು ನಾಡಿನ ಪತ್ರಿಕೆಗಳಲ್ಲಿ, ಪುಸ್ತಕಗಳಾಗಿ ಪ್ರಕಟಗೊಂಡಿವೆ. 


ಡಾ. ಲಕ್ಷ್ಮೀ ಜಿ.ಪ್ರಸಾದ್‌ ಕನ್ನಡ, ಸಂಸ್ಕೃತಿ ಮತ್ತು ಹಿಂದಿ ಎಂಎ ಪದವಿ ಪಡೆದಿದ್ದಾರೆ. ತುಳುನಾಡಿನ ನಾಗಬ್ರಹ್ಮ ಮತ್ತು ಕಂಬಳ -ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನೆ ಮಹಾಪ್ರಬಂಧ ರಚಿಸಿ ಹಂಪಿ ಕನ್ನಡ ವಿವಿಯಲ್ಲಿ ಡಾಕ್ಟರೇಟ್‌ ಗಳಿಸಿದ್ದಾರೆ. ಪಾಡ್ದನಗಳಲ್ಲಿ ತುಳುವ ಸಂಸ್ಕೃತಿಯ ಅಭಿವ್ಯಕ್ತಿ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ದ್ರಾವಿಡ ವಿವಿಯಿಂದ 2ನೇ ಡಾಕ್ಟರೇಟ್‌ ಗಳಿಸಿದ್ದಾರೆ. 150 ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ರಾಜ್ಯ, ಪ್ರಾದೇಶಿಕ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ಹಲವಾರು ರಾಜ್ಯ, ರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.


ಇಂದಿನ ಕಾಲಘಟ್ಟಕ್ಕೆ ಭೂತಾರಾಧನೆ ಅದರ ಕಲಿಕೆ ಹೇಗೆ ಪ್ರಸ್ತುತ ಎಂಬುದಕ್ಕೆ ಡಾ ಲಕ್ಷ್ಮಿ ಪ್ರಸಾದ್ ಹೀಗೆ ಹೇಳುತ್ತಾರೆ:
ಕುಮಾರವ್ಯಾಸನ ಗದುಗಿನ ಭಾರತ, ರಾಮಾಯಣ, ಮಹಾಭಾರತ, ಹಳೆಗನ್ನಡ ಹೇಗೆ ಇಂದಿಗೂ ಪ್ರಸ್ತುತವೋ, ಇಂದಿನ ಜನಾಂಗದವರು ಕಲಿಯಬೇಕೆನ್ನುತ್ತಾರೋ ಭೂತಾರಾಧನೆ ಕೂಡ ತುಳು ಸಂಸ್ಕೃತಿಯ ಪರಂಪರೆ ಇಂದಿಗೂ ಪ್ರಸ್ತುತ. ಅದು ತುಳು ಸಂಸ್ಕೃತಿಯ ಮೆಟ್ಟಿಲು, ಅದೊಂದು ತುಳುನಾಡಿನ ಶಕ್ತಿ, ಅದನ್ನು ಅರಿತು ದಾಟಿಕೊಂಡೇ ಮುಂದೆ ಹೋಗಬೇಕಾಗುತ್ತದೆ. ''ನೀರಿನಲ್ಲಿ ಮೀನು ಈಜುವುದು, ಹಕ್ಕಿ ಹಾರುವುದು''ಎಷ್ಟು ಸಹಜವೋ ತುಳುನಾಡಿನ ಭೂತಾರಾಧನೆ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇ ಸಹಜ ಎನ್ನುತ್ತಾರೆ.

ಡಾ ಲಕ್ಷ್ಮಿ ಪ್ರಸಾದ್ ಅವರು ಭೂತಾರಾಧನೆ ಬಗ್ಗೆ ವಿವರವಾಗಿ ಹೇಳಿರುವ ವಿಡಿಯೊ:

ಡಾ ಲಕ್ಷ್ಮಿ ಜಿ ಪ್ರಸಾದ್ ಅವರ ಮೊಬೈಲ್ ಸಂಖ್ಯೆ: 9480516684

ಲೇಖನ: ಸುಮನಾ ಉಪಾಧ್ಯಾಯ 

No comments:

Post a Comment